- ಭೂಮಿ ಬಾನು
ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ಮಡೆಸ್ನಾನ ಕುರಿತು ಬೆಂಗಳೂರಿನಲ್ಲಿ ಭಾನುವಾರ ನಡೆದ ಸಂವಾದ ಒಂದು ಬಹುಮುಖ್ಯ ಸಮಾರಂಭ. ಮಡೆಸ್ನಾನ ಅಷ್ಟೇ ಅಲ್ಲದೆ, ಅನೇಕ ವಿಚಾರಗಳು ಅಲ್ಲಿ ಚರ್ಚೆಗೆ ಬಂದವು. ಯಾವ ಪ್ರಶ್ನೆಗಳಿಗೂ ಸೂಕ್ತ ಪರಿಹಾರಗಳು ಸಿಗದಿದ್ದರೂ, ಚರ್ಚೆಗೆ ವೇದಿಕೆ ಸಿದ್ಧಗೊಂಡಿತ್ತು ಎನ್ನುವುದೇ ಸಮಾಧಾನದ ಸಂಗತಿ.
ಪೇಜಾವರ ಶ್ರೀಗಳು ತಮ್ಮ ಕೆಲ ಕಾರ್ಯಕ್ರಮಗಳಿಂದ (ದಲಿತರ ಕೇರಿಯಲ್ಲಿ ಪಾದಯಾತ್ರೆ, ದಲಿತ ಸ್ವಾಮಿಯೊಂದಿಗೆ ಭೋಜನ) ತಾವು ಸಮುದಾಯಗಳ ಮಧ್ಯೆ ಸಾಮರಸ್ಯ ಬಯಸುತ್ತೇವೆ ಎಂದು ತೋರಿದ್ದರೂ, ಅದರ ಹಿಂದೆ ‘ಹಿಂದೂ ಧರ್ಮ’ ಎಂಬ ದೊಡ್ಡ ಬ್ಯಾನರ್ ನ ಅಸ್ಥಿತ್ವವನ್ನು ಗಟ್ಟಿಗೊಳಿಸುವುದೇ ಹೊರತು ಬೇರೆ ಉದ್ದೇಶ ಇದ್ದಂತೆ ಕಾಣುವುದಿಲ್ಲ.
ಮಡೆಸ್ನಾನ ಕುರಿತ ಚರ್ಚೆಯಲ್ಲಿ ಪೇಜಾವರ ಶ್ರೀಯ ಒಳಗಡೆ ಎಂಥ ಕಠೋರ ಕೋಮುವಾದಿ ಅಡಗಿದ್ದಾನೆ ಎನ್ನುವುದು ಗೊತ್ತಾಯಿತು. ಮುಸಲ್ಮಾನ ಬಾಂಧವರು ರಂಜಾನ್ ವೇಳೆ ಉಪವಾಸ ಅಂತ್ಯ ಮಾಡುವಾಗ ಕುಟುಂಬ ವರ್ಗ, ಸ್ನೇಹಿತರೆಲ್ಲಾ ಸೇರಿ ಒಂದೇ ಅರಿವಾಣ (ತಟ್ಟೆ) ದಲ್ಲಿ ಊಟಮಾಡುವ ಶ್ರೇಷ್ಠ ನಡೆಯನ್ನು (gesture) ಮಡೆಸ್ನಾನದಂತಹ ಅನಿಷ್ಟ ಪದ್ಧತಿಗೆ ಹೋಲಿಸುತ್ತಾರೆ.
ವೀರಭದ್ರ ಚನ್ನಮಲ್ಲ ಸ್ವಾಮಿಯವರು ಇಂತಹದೊಂದು ಚರ್ಚೆ ಆಯೋಜನೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಪಾತ್ರ ಶ್ಲಾಘನೀಯ. ಅಂತೆಯೇ ಸಾಣೇಹಳ್ಳಿ ಪಂಡಿತಾರಾಧ್ಯರು ಮತ್ತಿತರ ಸ್ವಾಮೀಜಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಇವರೆಲ್ಲಾ ಸೇರಿ ಮಡೆಸ್ನಾನ ನಿಷೇಧಕ್ಕೆ ಒಕ್ಕೊರಲಿನ ಒತ್ತಾಯ ಮಾಡಿದ್ದಾರೆ. ಆದರೆ, ನೆನಪಿಡಲೇಬೇಕಾದ ಬಹುಮುಖ್ಯ ಸಂಗತಿ ಎಂದರೆ, ಶೂದ್ರ ಸಮುದಾಯಗಳನ್ನು ಪ್ರತಿನಿಧಿಸುವ ಬಹುಮುಖ್ಯ ಮತ್ತು ಪ್ರಭಾವಶಾಲಿ ಮಠಗಳನ್ನು ಪ್ರತಿನಿಧಿಸುವವರ ಅನುಪಸ್ಥಿತಿ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಭಗವದ್ಗೀತೆ ಅಭಿಯಾನಕ್ಕೆ ಚಾಲನೆ ಕೊಡುವವರನ್ನ, ಆರ್.ಎಸ್.ಎಸ್ ಬೈಠಕ್ ಗಳಲ್ಲಿ ಕುಂತು ಬರುವವರನ್ನು ಇಂತಹದೊಂದು ಸಂವಾದಕ್ಕೆ ಕರೆಯುವುದರಲ್ಲಿ ಯಾವ ಅರ್ಥವೂ ಇಲ್ಲ ಎನ್ನುವ ನಿರ್ಧಾರಕ್ಕೆ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಬಂದಿದ್ದರೆ ತಪ್ಪೇನಿಲ್ಲ.
ಚನ್ನಮಲ್ಲ ಸ್ವಾಮೀಜಿಯವರು ಪೇಜಾವರರ ಮುಂದೆ ಕೆಲವು ಬೇಡಿಕೆಗಳನ್ನಿಟ್ಟರು. ಪಂಕ್ತಿಬೇಧವನ್ನು ನಿಲ್ಲಿಸಿ, ಶೂದ್ರ, ದಲಿತ ಸಮುದಾಯ ಪ್ರತಿನಿಧಿಸುವ ಗುರುಗಳಿಗೆ ವರ್ಷಕ್ಕೆ ಒಮ್ಮೆಯಾದರೂ ಉಡುಪಿ ಕೃಷ್ಣನನ್ನು ಪೂಜಿಸುವ ಅವಕಾಶ ಕಲ್ಪಿಸಿ ಎಂದು ಮನವಿ ಇಟ್ಟರು. ಪೇಜಾವರರಿಂದ ಇದಾವುದರ ಬಗ್ಗೆಯೂ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಅವರಿಂದ ಅದನ್ನು ನಿರೀಕ್ಷಿಸುವುದೂ ತಪ್ಪು. ಮುಖ್ಯವಾಗಿ ಅವರೊಬ್ಬ ಸಂಪ್ರದಾಯನಿಷ್ಠ, ಜಾತಿವ್ಯವಸ್ಥೆ ನಿಷ್ಠ, ಅತಿಯಾದ ಕೋಮುಭಾವನೆಗಳನ್ನು ತುಂಬಿಕೊಂಡಿರುವ ಸ್ವಾಮೀಜಿ.
ಈ ನಿಟ್ಟಿನಲ್ಲಿ ಯೋಚನೆ ಆರಂಭವಾದಾಗ, ಜಾಗೃತಿಯಾದಾಗ, ಸಹಪಂಕ್ತಿ ಭೋಜನಕ್ಕೆ, ಗರ್ಭಗುಡಿ ಪ್ರವೇಶಕ್ಕೆ, ಬೇಡಿಕೆ ಇಡುವ ಚಾಳಿ ಬಿಟ್ಟುಹೋಗುತ್ತದೆ. ಆಗ ಸಮಾಜದಲ್ಲಿ ನಿಜ ಅಲ್ಪಸಂಖ್ಯಾತರು ಯಾರು ಎಂಬುದು ಅರಿವಾಗುತ್ತದೆ. ಹಾಗಾದಾಗ, ಮಡೆಸ್ನಾನದಂತಹ ಅನಿಷ್ಟ ಪದ್ಧತಿಗಳು ತಾನೇತಾನಾಗಿ ನಿಂತುಹೋಗುತ್ತವೆ.
ಕೃಪೆ : ವರ್ತಮಾನ
No comments:
Post a Comment