Showing posts with label ಲಾಭಕೋರ ಸಾಹಿತಿಗಳು. Show all posts
Showing posts with label ಲಾಭಕೋರ ಸಾಹಿತಿಗಳು. Show all posts

Saturday, January 26, 2013

ಸಾಹಿತ್ಯ ಸಂಭ್ರಮಕ್ಕೆ ತಕ್ಷಣ ಪ್ರತಿಕ್ರಿಯಾತ್ಮಕ ವಿರೋಧ ಬೇಕು !

ಡಾ. ಸಿದ್ರಾಮ ಕಾರಣಿಕ

'ಸಾಹಿತ್ಯ ಸಂಭ್ರಮ ಹುಟ್ಟು ಹಾಕಿರುವ ಪ್ರಶ್ನೆಗಳು' ಎಂಬ ಎಂ.ಡಿ. ಒಕ್ಕುಂದ ಅವರ ಲೇಖನ (ವಿ.ಕ-25-01-2013) ಸಕಾಲಿಕವಾಗಿದೆ. ವ್ಯಾಪಾರೀ ಮನೋಭಾವವನ್ನಿಟ್ಟುಕೊಂಡು ಸಾಹಿತ್ಯವನ್ನು, ಸಾಹಿತ್ಯ ಚರ್ಚೆಯನ್ನು ಮಾಡಲು ಮುಂದಾಗಿದ್ದ ಸಾಹಿತ್ಯ ಸಂಭ್ರಮದ ಟ್ರಸ್ಟು, ಪ್ರಜ್ಞಾವಂತರ ಭಾರೀ ಪ್ರತಿಭಟನೆ ಮತ್ತು ವಿರೋಧದ ಕಾರಣವಾಗಿ ನಿಯಮಾವಳಿಗಳನ್ನು ಸಡಿಲಿಸಿಕೊಂಡಿರುವುದು ಸ್ವಾಗತಾರ್ಹವಾದರೂ ಅದರ ನಡೆಯಲ್ಲಿ ಯಾವುದೇ ಬದಲಾವಣೆಯಾಗಲಾರದು ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

'ಸಾಹಿತ್ಯಿಕ ವಾತಾವರಣ ಕಾಣೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಯತ್ನ ನಡೆಯುತ್ತಿದೆ. ಸಾಹಿತ್ಯದ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಾಧ್ಯವಿಲ್ಲದೇ ಇರಬಹುದು. ಆದರೆ ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಲಾಗಿದೆ' ಎನ್ನುವ ಟ್ರಸ್ಟಿನ ಗೌರವಾಧ್ಯಕ್ಷ ಡಾ. ಎಂ. ಎಂ. ಕಲಬುರ್ಗಿಯವರು ಹೇಳಿದ್ದು ಮತ್ತು ಟ್ರಸ್ಟಿನ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ್ ಅವರು ಹೇಳಿರುವ 'ಕನ್ನಡದ ಮಟ್ಟಿಗೆ ಇದು ಹೊಸ ಪ್ರಯೋಗ. ಚಳುವಳಿಗಳು ಇಲ್ಲದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಗಳನ್ನು ಚರ್ಚಿಸಲು ಕಾರ್ಯಕ್ರಮ ಸಹಕಾರಿಯಾಗಲಿದೆ' ಎನ್ನುವ ಮಾತುಗಳು ಕಾರ್ಯಕ್ರಮದ ಹೊಸ ಸಾಧ್ಯತೆಗಳ ಬಗ್ಗೆ ತಿಳಿಸುವ ಪರಿಯಲ್ಲಿದ್ದರೂ ಆ ಮಾತುಗಳ ಹಿಂದೆ ಚಳುವಳಿಗಳ ಮೂಲಕ ಹುಟ್ಟಿಕೊಂಡ ಸಾಹಿತ್ಯದ ಬಗ್ಗೆ ಅವರಿಗಿರುವ ನಿಷ್ಕಾಳಜಿಯನ್ನು ವ್ಯಕ್ತಿಸುತ್ತವೆ. ಗೋಷ್ಟಿಗಳಲ್ಲಿ ಇರುವ ವಿಷಯಗಳು ಅಂಥ ಹೊಸ ಕಲ್ಪನೆಗಳನ್ನೇನೂ ಹುಟ್ಟು ಹಾಕುವುದಿಲ್ಲ. ಕತೆ ಹುಟ್ಟುವ ರೀತಿ, ಕತೆ ಹೇಳುವ ಕಲೆ, ಆತ್ಮಕತೆಗಳ ಓದು, ಪ್ರಶಸ್ತಿಗಳ ಹಾವಳಿ ಪ್ರಾಚೀನ ಕಾವ್ಯವಾಚನ, ಅಂತರ್ ಜಾಲ ಕನ್ನಡ, ಕನ್ನಡ ವಿಮರ್ಶೆ, ಕನ್ನಡ ಸಾಹಿತ್ಯ ಮತ್ತು ಕಾರ್ಪೊರೇಟ್ ಜಗತ್ತು ಮೊದಲಾದವುಗಳ ಬಗ್ಗೆ ಮೇಲಿಂದ ಮೇಲೆ ಚರ್ಚೆಗಳು ನಡೆಯುತ್ತಲೇ ಇವೆ. 'ಹಾಗಿರಬಾರದು; ಹೀಗೆ ಇರಬೇಕು; ಹೀಗೆಯೇ ಇರಬೇಕು' ಎಂಬುದರತ್ತಲೇ ಹೆಚ್ಚಿನ ಒತ್ತು ನೀಡುವ ಇದು ಸಂಭ್ರಮವಾದರೂ ಹೇಗಾದೀತು ? ತಮ್ಮ ಬದ್ಧತೆಗಳನ್ನೇ ಎಲ್ಲರೂ ಅನುಸರಿಸಬೇಕು ಎಂಬ ಯಜಮಾನಿಕೆಯ ಗತ್ತುಗಾರಿಕೆ ಇಲ್ಲಿ ಕಂಡು ಬರುತ್ತದೆ. ನಮ್ಮ ನಾಡಿನ ಗಮನ ಸೆಳೆಯುವ ಬರಹಗಾರರು, ವಿದ್ವಾಂಸರು, ಸಂಶೋಧಕರು, ವಿಮರ್ಶಕರು ಎಂದುಕೊಂಡಿದ್ದ ಮಂದಿಯೇ ಇಂಥ ಯಜಮಾನಿಕೆ ನಡೆಸಲು ಮುಂದಾಗಿರುವುದು ತುಂಬ ವಿಪರ್ಯಾಸ ಎನ್ನುವುದಕ್ಕಿಂತ ನಂಬಿಕೆಯನ್ನೇ ಬುಡಮೇಲಾಗಿಸುವ ಮನೋಭಾವ ಎನ್ನಬಹುದೇನೋ ! ಇಂದು ನಡೆದ ಕಾರ್ಯಕ್ರಮವನ್ನು ಕಂಡಾಗ ಈ ವಿಚಾರ ಸ್ಪಷ್ಟವಾಗಿ ಗೋಚರವಾಗುತ್ತದೆ. ಸಭಾ ಭವನದ ಹೊರಗೆ ನಾಲ್ಕೈದು ಸೆಕ್ಯೂರಿಟಿ ಗಾರ್ಡುಗಳು, ಒಳಗೆ ಇನ್ನೊಂದಿಷ್ಟು ಸೆಕ್ಯುರಿಟಿ ಗಾರ್ಡುಗಳು ಟಿಪ್‌ಟಾಪ್ ಆಗಿ ನಿಂತಿದ್ದರು. ಒಳಗೆ ಮಾತನಾಡಿದರೆಲ್ಲಿ ಹೊರ ಹಾಕುತ್ತಾರೋ ಎಂದುಕೊಂಡು ಉಸಿರಾಡಿಸಲೂ ಕಷ್ಟಪಡುತ್ತಿದ್ದ ಕನ್ನಡ ಸಾಹಿತ್ಯಾಭಿಮಾನಿಗಳು, ಹೊರಗಡೆ ಇನ್ನೂ ಪುಸ್ತಕಗಳ ಕಟ್ಟನ್ನೇ ಬಿಚ್ಚಿಡುತ್ತಿದ್ದ ನಾಲ್ಕೈದು ಪುಸ್ತಕ ವ್ಯಾಪಾರಿಗಳು, ಗಂಟು ಹಾಕಿಕೊಂಡಂತಿದ್ದ ಮುಖಗಳು ತುಂಬ ನಿರಾಸೆಯನ್ನುಂಟು ಮಾಡಿದವು. ಐನೂರು ಕೊಟ್ಟು ಬಂದವರು ಯಾವ ಸಾರ್ಥಕತೆ ಪಡೆಯುತ್ತಾರೋ ಗೊತ್ತಿಲ್ಲ. ಆದರೆ ಸಂಭ್ರಮಕ್ಕೆ ಆಗಮಿಸಿರುವ ದೊಡ್ಡ ದೊಡ್ಡ ಸಾಹಿತಿಗಳ ಜೊತೆಗೆ ಒಂದು ಫೋಟೋವನ್ನಾದರೂ ತೆಗೆಸಿಕೊಳ್ಳಬೇಕು ಎಂಬ ಅವರ ಹಂಬಲ ಮಾತ್ರ ಈಡೇರಬಹುದೇನೋ !

ಇಂತಹ ಸಾಂಸ್ಕೃತಿಕ ದಿವಾಳಿತನಕ್ಕೆ ಎಡೆ ಮಾಡಿಕೊಟ್ಟಿರುವ ಈ 'ಸಂಭ್ರಮ' ವನ್ನು ವಿರೋಧಿಸಿ ಧಾರವಾಡದ ಪ್ರಗತಿಪರ ಬರಹಗಾರರ ಹಾಗೂ ಸಂಘಟನೆಗಳ ವೇದಿಕೆ 'ಜನತೆಯತ್ತ ಸಾಹಿತ್ಯ' ಹೆಸರಿನಲ್ಲಿ ಪರ್ಯಾಯ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದ್ದರೂ ಅದನ್ನು 'ಸಂಭ್ರಮ ಸಂಘಟಕರ' ಮಾತು ಕೇಳಿ ಮುಂದೆ ಹಾಕಿದ್ದಾದರೂ ಯಾಕೆ ಎಂದು ತಿಳಿಯುತ್ತಿಲ್ಲ. ರಾಜಿಯಾಗುವ ಮನೋಧರ್ಮ ಇನ್ನೂ ಬದಲಾಗಿಲ್ಲ ಎಂದರೆ ಧಾರವಾಡದಲ್ಲಿ ಇನ್ನು ಮುಂದೆ 'ಸಂಭ್ರಮ' ಮಾದರಿಯ ಕಾರ್ಯಕ್ರಮಗಳು ಯಾರ ಮುಲಾಜಿಗೂ ಕಾಯದೆ ಕಾರ್ಯಪ್ರವತ್ತರಾಗಬಲ್ಲವು ! 'ಸಂಭ್ರಮ' ಆರಂಭದ ದಿನವೇ ಒಂದು ಸಣ್ಣ ಪ್ರತಿಭಟನೆಯನ್ನೋ ಪರ್ಯಾಯವಾಗಿ ಒಂದು ಸಣ್ಣ ಕಾರ್ಯಕ್ರಮವನ್ನೋ ಅದು ಬೀದಿಯಲ್ಲಾದರೂ ಸರಿ ಮಾಡಿದ್ದರೆ ಪ್ರತಿಭಟನೆಗೆ ಒಂದು ಅರ್ಥ ಬರುತ್ತಿತ್ತು. ಮಾರ್ಚಿನಲ್ಲಿ 'ಸಂಭ್ರಮ' ವನ್ನು ವಿರೋಧಿಸಿ ಮಾಡುವ ಕಾರ್ಯಕ್ರಮ ಪರ್ಯಾಯ ಎನಿಸಿಕೊಳ್ಳಲಾರದು. ಎಂ.ಡಿ. ಒಕ್ಕುಂದ ಅವರು ಹೇಳುವಂತೆ 'ಕರ್ನಾಟಕದ ಚರಿತ್ರೆಯಲ್ಲಿ ಸಾಹಿತ್ಯ ಮತ್ತು ಕಲೆಗಳನ್ನು ಆಸ್ಥಾನೀಕರಿಸುವ, ಅಗ್ರಹಾರೀಕರಿಸುವ ಪ್ರಯತ್ನಗಳು ನಡೆದಾಗಲೆಲ್ಲ ತೀವ್ರವಾದ ಪ್ರತಿಭಟನೆಗಳು ಸಜನಶೀಲವಾದ ಪರ‌್ಯಾಯಗಳು ರೂಪ ತಾಳಿವೆ' ಎಂಬುದೇ ನಿಜವಾದರೆ ಇನ್ನೂ ಕಾಲ ಮಿಂಚಿಲ್ಲ; ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ಎದುರಿನಲ್ಲೇ ನಡೆಯುತ್ತಿರುವ ವೈಚಾರಿಕ ಬದ್ಧತೆಯಿಲ್ಲದ 'ಸಂಭ್ರಮ' ದ ಕೊನೆಯ ದಿನವಾದರೂ ಪರ್ಯಾಯ ಮಾದರಿಯಲ್ಲಿ ವಿಶ್ವವಿದ್ಯಾಲಯ ವೃತ್ತದಲ್ಲಿ ಅಥವಾ ಇನ್ನೆಲ್ಲಿಯಾದರೂ ಒಂದು ಕಾರ್ಯಕ್ರಮ ಮಾಡಬೇಕು. ಈ ನಿಟ್ಟಿನಲ್ಲಿ ಧಾರವಾಡದ ಪ್ರಜ್ಞಾವಂತ ಗೆಳೆಯರು ಪ್ರಯತ್ನಿಸುತ್ತಾರೆ ಎಂಬ ನಂಬಿಕೆ ನನ್ನದು.
 
ಕೃಪೆ: ವಿಜಯ ಕರ್ನಾಟಕ

Monday, January 21, 2013

ಸಾಹಿತ್ಯ ಸಂಭ್ರಮಕ್ಕೆ ಆತ್ಮೀಯ ಸ್ವಾಗತ !


ಡಾ. ಸಿದ್ರಾಮ ಕಾರಣಿಕ               

            ಜನೇವರಿ ೨೫, ೨೬, ೨೭ ರಂದು ಧಾರವಾಡದಲ್ಲಿ 'ಸಾಹಿತ್ಯ ಸಂಭ್ರಮ' ಜರುಗಲಿದೆ. ಸಂಘಟಕರು ವಿರೋಧಿ ಬಣದವರನ್ನು ಸಮಝಾಯಿಸಿ (ಬಗ್ಗು ಬಡಿದು) ಒಲಿಸಿಕೊಂಡಿದ್ದಾರೆ. ಸಾಹಿತ್ಯ ಎನ್ನುವುದನ್ನು ವ್ಯಾಪಾರವನ್ನಾಗಿಯೇ ನೋಡುವ ಕೆಲವು ಜನರು ರಾಜಿಯಾಗಿರುವುದರಲ್ಲಿ ಲಾಭದ ಉದ್ದೇಶವನ್ನು ಅಲ್ಲಗಳೆಯಲಾಗದು. ಹೋರಾಟ, ಕ್ರಾಂತಿ, ಪ್ರತಿಭಟನೆ ಮೊದಲಾದವುಗಳೆಲ್ಲ ಅರ್ಥ ಕಳೆದುಕೊಂಡಿರುವುದು ಇಂಥ ಲಾಭಕೋರ ಪ್ರಜ್ಞಾವಂತರಿಂದಲೇ ಎಂದರೆ ತಪ್ಪಾಗಲಾರದು ! ಧಾರವಾಡ ಇನ್ನಾದರೂ ಬದಲಾದೀತೆ ಎಂಬ ನನ್ನಂಥವರ ಪ್ರಶ್ನೆಗೆ ಇಲ್ಲಿ ಉತ್ತರ ಇರುವುದಿಲ್ಲ ; ಉತ್ತರಿಸುವ ವ್ಯವಧಾನವಾಗಲಿ ; ನಿರ್ಭೀತಿಯಾಗಲಿ ಸೋ ಕಾಲ್ಡ್ ಪ್ರತಿಭಟನಾಕಾರರಲ್ಲಿ ಇಲ್ಲವೇನೋ ಎನಿಸುತ್ತಿದೆ !
 
           ಈಗ ನನ್ನ ಅಭಿಪ್ರಾಯವೆಂದರೆ ಕೇವಲ ಧಾರವಾಡ ಮಾತ್ರವಲ್ಲ ಹೊರ ಊರಿನ ಹಲವಾರು ಗೆಳೆಯರು ಈ 'ಸಂಭ್ರಮ'ದಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕವನ್ನು ಕೊಟ್ಟು ಬರಲು ತಯಾರಾಗಿದ್ದಾರೆ. ನಾನು ಹಾದಿ ಕಾಯ್ದೆ ; ಪ್ರತಿಭಟಿಸುವವರು 'ಪರ್ಯಾಯ' ಮಾಡಬಹುದು ಎಂದು ! ನೋ ಚಾನ್ಸ್ ! ಹೀಗಾಗಿ ನಾನೇ ಹೇಳುತ್ತಿದ್ದೇನೆ. ಇಷ್ಟವಿದ್ದವರು ಯಾವುದೇ ಸಂಹಿತೆ, ನಿಬಂಧನೆ, ಸಂವೇದನೆ, ಪ್ರಜ್ಞೆ, ಮನಸಾಕ್ಷಿ ಎನ್ನುವುದನ್ನು ಮರೆತು ಈ 'ಸಂಭ್ರಮ'ದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.

         ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಆಗಮಿಸುವ ಎಲ್ಲರಿಗೂ ಆತ್ಮೀಯ ಸ್ವಾಗತ ಕೋರುತ್ತಿದ್ದೇನೆ ! 

Friday, January 18, 2013

ಧಾರವಾಡ ಸಾಹಿತ್ಯ ಸಂಭ್ರಮ : ಅಧ್ಯಕ್ಷರಿಗೊಂದು ಅಶೋಕ ಶೆಟ್ಟರ್ ಬಹಿರಂಗ ಪತ್ರ

 ಡಾ. ಗಿರಡ್ಡಿ ಗೋವಿಂದರಾಜ
ಅಧ್ಯಕ್ಷರು, ಧಾರವಾಡ ಸಾಹಿತ್ಯ ಸಂಭ್ರಮ (ರಿ)
ಇವರಿಗೆ


ಡಿಯರ್ ಸರ್,

ಇದೇ (ಜನವರಿ, ೨೦೧೩) ೨೫, ೨೬, ೨೭ ರಂದು ತಾವು ಆಯೋಜಿಸಿರುವ ಮೂರು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ವಿಶೇಷ ಆಮಂತ್ರಿತನಾಗಿ ನಾನು ಪಾಲ್ಗೊಳ್ಳಬೇಕೆಂದು ಕೋರಿ ತಾವು ಕಳಿಸಿದ ಮುದ್ರಿತ ಓಲೆ ತಲುಪಿದೆ. ಮೊದಲಿಗೆ ತಮ್ಮ ಆತ್ಮೀಯ ಆಹ್ವಾನಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸದರಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನಾನು ಇಚ್ಛಿಸುವದಿಲ್ಲ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ ಪಡೆದಿರುವ ಈ ಮತ್ತು ಇಂಥ ಯಾವುದೇ ಸಾಹಿತ್ಯಿಕ ಸಾಂಸ್ಕೃತಿಕ ಸಮಾವೇಶಗಳು ಸಾರ್ವಜನಿಕ ಡೊಮೈನ್ ನಲ್ಲಿ ಇರುವಂಥವಾದ್ದರಿಂದ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ್ದರ ಬಗ್ಗೆ ನನಗೆ ವಿಷಾದವೇಕಿಲ್ಲ ಎಂಬುದನ್ನು ಸಾರ್ವಜನಿಕವಾಗಿಯೇ ಹೇಳಬಹುದೆನ್ನಿಸುತ್ತದೆ.

ತಾವು ತಮ್ಮ ಪತ್ರದಲ್ಲಿ ಸರಿಯಾಗಿಯೇ ಹೇಳಿರುವಂತೆ ಧಾರವಾಡ ನಗರ ಅನೇಕ ಜನ ಸಾಹಿತಿ-ಕಲಾವಿದರ ನೆಲೆ. ಇಂದಿಗೂ ತನ್ನ ಹಿರಿಯ ಪರಂಪರೆಯನ್ನು ಕ್ರಿಯಾಶೀಲವಾಗಿ ಮುಂದುವರಿಸಿಕೊಂಡು ಬಂದಿರುವ ಊರು. ಧಾರವಾಡದ ಈ ಪರಂಪರೆಯ ವಾರಸುದಾರಿಕೆ ಯಾವೊಬ್ಬ ವ್ಯಕ್ತಿ, ಮನೆತನ, ಗುಂಪು, ಜಾತಿ, ಪಂಥಕ್ಕೆ ಸೇರಿದ್ದಲ್ಲ. ವಾಸ್ತವವಾಗಿ ಅದು ಬರಿದೇ ಧಾರವಾಡಕ್ಕೆ ಸೀಮಿತವಾದದ್ದೂ ಅಲ್ಲ. ಧಾರವಾಡ ನೆಲದಿಂದ ಹೊಮ್ಮಿದ ಸಾಹಿತ್ಯ, ಸಂಗೀತ, ವಿಮರ್ಶೆ, ಚಿತ್ರಕಲೆ, ರಂಗಪ್ರಯೋಗಗಳೇ ಮೊದಲಾದ ಸಮೃದ್ಧಿಯನ್ನು, ಅದರ ಜೊತೆಜೊತೆಗೇ ಇಲ್ಲಿಯ ಸ್ನೇಹ, ಪ್ರೀತಿ, ಸಂಘರ್ಷ, ಪ್ರತಿಭಟನೆ, ಹೊಸತನದ ಹುಡುಕಾಟಗಳ ವಿಶಿಷ್ಟ ಪರಂಪರೆಯ ಕುರಿತು ಹೆಮ್ಮೆ-ಮೆಚ್ಚುಗೆಗಳನ್ನು ಇಟ್ಟುಕೊಂಡವರು ಧಾರವಾಡದ ಹೊರಗೂ ಇದ್ದಾರೆ. ಜೈಪುರದ ಸಾಹಿತ್ಯಹಬ್ಬದಿಂದ ಪ್ರೇರಿತರಾಗಿ ತಾವು “ಇನ್ನೊಂದು ಹೊಸ ಪ್ರಯೋಗ” ವೆಂದು ವ್ಯಾಖ್ಯಾನಿಸಿಕೊಂಡಿರುವ ಸಾಹಿತ್ಯ ಸಂಭ್ರಮದ ಒಟ್ಟಾರೆ ಸ್ವರೂಪ, ಧಾಟಿ-ಧೋರಣೆ ಮತ್ತು ವಿಶೇಷವಾಗಿ ಅದರ ನಿಯಮ ನಿಬಂಧನೆಗಳು ಅಂಥ ಹಲವಾರು ಜನರನ್ನು ನಿರಾಶೆಗೊಳಿಸಿವೆ. ಧಾರವಾಡದಂಥ ಅನೌಪಚಾರಿಕವೂ ಆತ್ಮೀಯವೂ ಆದ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳ ಪರಂಪರೆಗೆ ವ್ಯತಿರಿಕ್ತವಾದ ವಿಲಕ್ಷಣ ನಿಯಮಾವಳಿಗಳನ್ನು ಓದಿ ನಿರಾಶೆಗೊಂಡವರಲ್ಲಿ ನಾನೂ ಒಬ್ಬ. ಕಾರ್ಪೊರೇಟ್ ಜಗತ್ತು ಮತ್ತು ಕನ್ನಡ ಸಾಹಿತ್ಯ ಎಂಬ ಒಂದು ಗೋಷ್ಠಿಯನ್ನೂ ಒಳಗೊಂಡಿರುವ ಈ ಸಮಾವೇಶ ವಾಸ್ತವವಾಗಿ ಕನ್ನಡ ಸಾಹಿತ್ಯ ಸೃಜನೆ-ವಿಮರ್ಶೆಗಳ ಲೋಕದ ಕಾರ್ಪೊರೇಟೀಕರಣದಂತೇ ಭಾಸವಾಗುತ್ತಿದೆ. ಇದನ್ನು ಕನ್ನಡದ ಮನಸು ಸೈರಿಸಿಕೊಳ್ಳುತ್ತದೆಂದು ನನಗನಿಸುವುದಿಲ್ಲ.

ಸಾಹಿತಿ ಸಾಹಿತಿಗಳ ನಡುವೆ ಮತ್ತು ಲೇಖಕ ಓದುಗರ ನಡುವೆ ಆತ್ಮೀಯ ಸಂಬಂಧವನ್ನು ಬೆಳೆಸುವ ಉದ್ದೇಶವೂ ಈ ಸಂಭ್ರಮಕ್ಕಿದೆ ಎಂದು ನೀವು ಹೇಳಿದ್ದೀರಿ. ಸರಿಯೇ. ಆದರೆ ಸಂಘಟಕರು ಮತ್ತು ಸಾವಿರದೈನೂರು ರೂಪಾಯಿ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಂಡ ಪ್ರತಿನಿಧಿಗಳ ನಡುವೆಯೂ ಒಂದು ಆತ್ಮೀಯ ಸಂಬಂಧ ಇರಬೇಕೆಂಬುದು ತಮಗೆ ತೋಚಿಲ್ಲವೆಂಬುದಕ್ಕೆ ನಿಯಮ ನಿಬಂಧನೆಗಳ ಒಕ್ಕಣೆಯೇ ಸಾಕ್ಷಿ. “ಮೊದಲಿಗೇ ಅಲ್ಲಮ ಪ್ರಭುವಿಗೆ ಶರಣಾರ್ಥಿ, ಕೂಡಿ ಕುಂತ ಜನಕೆಲ್ಲ ನಮ್ಮ ನಮನ ಎಂದು ಕಂಬಾರರ ಒಂದು ಹಾಡಿನಲ್ಲಿ ಬರುವಂತೆ ರಂಗದ ಮೇಲೆ ದೇವಾಧಿದೇವತೆಗಳ ಪಾತ್ರವಹಿಸುವವರೂ ಮೊದಲಿಗೆ ದೈವಕ್ಕೆ ಅಂದರೆ ಎದುರಿಗೆ ಕುಳಿತ ಪ್ರೇಕ್ಷಕ ಗಣಕ್ಕೆ ಕೈ ಮುಗಿದು ಆಟ ಪ್ರಾರಂಭಿಸುವ ಜಾನಪದೀಯ ಪರಂಪರೆ ನಮ್ಮದು. ಜೈಪುರ ಲಿಟರರಿ ಫೆಸ್ಟಿವಲ್ ನಂಥವುಗಳಲ್ಲಿ ಅಂಥ ನಿಯಮ ನಿಬಂಧನೆಗಳು ಇರಲು ಕಾರಣವಾದ ಹಿನ್ನೆಲೆಗಳಿವೆ. ಧಾರವಾಡದಲ್ಲಿ ತಾವು ಹಲವಾರು ದಶಕಗಳಿಂದ ಇದ್ದೀರಿ. ಸಾವಿರಾರು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದೀರಿ. ಎಷ್ಟು ಕಾರ್ಯಕ್ರಮಗಳಲ್ಲಿ ಅನುಚಿತವಾಗಿ ಅಸಭ್ಯವಾಗಿ ವರ್ತನೆಯನ್ನು ಕಂಡಿದ್ದೀರಿ ? ಅವಮಾನಕರ, ಅಪಕೀರ್ತಿಗೊಳಿಸುವ, ಹಕ್ಕುಚ್ಯುತಿಗೊಳಿಸುವ, ಅಸಭ್ಯ, ಕಾನೂನುಬಾಹಿರ ವಿಷಯಗಳನ್ನು, ಮಾಹಿತಿಗಳನ್ನು ಕರಪತ್ರಗಳ ಮೂಲಕ ಹಂಚಿದ್ದನ್ನು ನೋಡಿದ್ದೀರಿ ? ಪ್ರಚಾರ ಸಾಮಗ್ರಿಯನ್ನು ಕಾರ್ಯಕ್ರಮದ ಸ್ಥಳ,ಪ್ರದೇಶ,ಸಭಾಂಗಣದಲ್ಲಿ ತಂದದ್ದನ್ನು ಅನುಭವಿಸಿದ್ದೀರಿ? ಕಾರ್ಯಕ್ರಮದ ಸ್ಥಳದಲ್ಲಿ ಆಸ್ತಿ-ಪಾಸ್ತಿಗಳಿಗೆ ಯಾರಾದರೂ ಧಕ್ಕೆ ಉಂಟು ಮಾಡಿದ ಎಷ್ಟು ಉದಾಹರಣೆಗಳು ಧಾರವಾಡದಂಥ ಒಂದು ಸಭ್ಯರ ಊರ ಪರಂಪರೆಯಲ್ಲಿವೆ ? ಕಾರ್ಯಕ್ರಮದ ಸ್ಥಳದಲ್ಲಿ ಮದ್ಯ-ಮಾದಕವಸ್ತುಗಳನ್ನು ತಂದು ಸೇವಿಸುವಂಥ ಅರಾಜಕರೆ ಧಾರವಾಡದ ಮಂದಿ ? ಕಾರ್ಯಕ್ರಮದ ಪ್ರವೇಶಸ್ಥಳ/ಸಭಾಂಗಣದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ತರಬಾರದೆಂಬ ನಿಬಂಧನೆಯಂತೂ ಇವೆಲ್ಲವುಗಳ ಕಳಶ. ಇಂಥದೇನೂ ಎಂದೂ ಇಲ್ಲದ ಧಾರವಾಡದಲ್ಲಿ ಯಾಕಾಗಿ ಇಂಥ ಡಿಫೆನ್ಸಿವ್ ಕವಚದ ಅಗತ್ಯ ತಮಗೆ ಕಂಡಿತು ? ಏಕೆ ಇಂಥ ಹಾಸ್ಯಾಸ್ಪದ ಒಕ್ಕಣೆಯಿಂದ ಧಾರವಾಡವನ್ನು ಅವಮಾನಿಸಿದ್ದೀರಿ ?

ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆದು ಕಡ್ಡಾಯವಾಗಿ ಕೊರಳಲ್ಲಿ ಧರಿಸಲು ನಿರ್ಬಂಧಿತರಾದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಷಣಕಾರರಲ್ಲ, ಅವರಿಗೆ ರಾತ್ರಿ ಭೋಜನ ವ್ಯವಸ್ಥೆ ಇರುವುದಿಲ್ಲ ; ಅದನ್ನು ಅವರು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು, ಪರ ಊರಿನ ಪ್ರತಿನಿಧಿಗಳು ತಾವು ನಿಗದಿಗೊಳಿಸಿದ ಹೊಟೆಲ್ ಗಳ ಲಿಸ್ಟ್ ನಲ್ಲಿರುವ ಹೊಟೆಲ್ ಗಳ ವ್ಯವಸ್ಥಾಪಕರನ್ನು ಕಂಡು ತಮ್ಮ ವಸತಿ ವ್ಯವಸ್ಥೆಯನ್ನೂ ತಾವೇ ಮಾಡಿಕೊಳ್ಳಬೇಕು, ಪ್ರತಿನಿಧಿಗಳಿಗೆ ವಾಹನ ಸೌಕರ್ಯ ಇರುವದಿಲ್ಲ ; ತಮ್ಮ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು ..... ! ಹೇಳಿ, ಇಂಥ ವರಸೆಯ ಸ್ವಾಗತ ಎಂಥ ಆತ್ಮೀಯತೆಯನ್ನು ಮೂಡಿಸಬಲ್ಲದು?

ಸಾಹಿತ್ಯದಲ್ಲಿ ಸಂಭ್ರಮದ ಒಂದು ಆಯಾಮ ಇದ್ದೇ ಇದೆ. ಆದರೆ ಸಂಭ್ರಮಿಸಲು ತಕ್ಕುದಾದ ಮನಸ್ಥಿತಿಯೂ ಸನ್ನಿವೇಶವೂ ಇರಬೇಕಾಗುತ್ತದೆ. ನಮ್ಮ ಇಂದಿನ ಸನ್ನಿವೇಶದಲ್ಲಿ ತಾವು ಸಂಭ್ರಮಿಸಬಯಸುತ್ತಿದ್ದೀರಿ. ತಮ್ಮ ಸಂಭ್ರಮಕ್ಕೆ ಶುಭವಾಗಲಿ
ಅಶೋಕ ಶೆಟ್ಟರ್
 ಧಾರವಾಡ
 ೧೬ ಜನವರಿ ೨೦೧೩

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.