Showing posts with label ಸಾಹಿತ್ಯ ಸ್ಪರ್ಧೆ. Show all posts
Showing posts with label ಸಾಹಿತ್ಯ ಸ್ಪರ್ಧೆ. Show all posts

Wednesday, July 10, 2013

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013 : ಕತೆಗಳಿಗೆ ಆಹ್ವಾನ

katha sprade 2013
ಸ್ನೇಹಿತರೇ,
ಕಳೆದ ವರ್ಷದಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. ಈ ಕಥಾ ಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಹೇಳುವುದಾದರೆ: 2008ರಲ್ಲಿ ಮೊದಲ ಗಾಂಧಿ ಜಯಂತಿ ಕಥಾಸ್ಪರ್ಧೆಯನ್ನು ನಡೆಸಿದ್ದು. ಎರಡನೆಯದು 2009ರಲ್ಲಿ. ಎರಡೂ “ವಿಕ್ರಾಂತ ಕರ್ನಾಟಕ” ವಾರಪತ್ರಿಕೆ ನಡೆಸಿದ್ದು; ಪ್ರಾಯೋಜಿಸಿದ್ದು ನಾನು. ನಂತರ ವಿಕ್ರಾಂತ ಕರ್ನಾಟಕ ನಿಂತು ಹೋದ ಮೇಲೆ ಹಲವಾರು ಕಾರಣಗಳಿಂದಾಗಿ ನನಗೆ ಅದನ್ನು ಮುಂದುವರೆಸಲು ಆಗಿರಲಿಲ್ಲ. ಕಳೆದ ವರ್ಷ ವರ್ತಮಾನದ ಅಡಿಯಲ್ಲಿ ಅದನ್ನು ಮತ್ತೆ ಆರಂಭಿಸಲಾಯಿತು. (ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 ರ ಬಹುಮಾನಿತ ಕತೆಗಳ ವಿವರ ಇಲ್ಲಿದೆ.) ಈ ವರ್ಷದ ಕಥಾ ಸ್ಪರ್ಧೆಗೆ ಕತೆಗಳನ್ನು ಆಹ್ವಾನಿಸುವ ಸಮಯ ಇದು.
ಅಂದ ಹಾಗೆ ಈ ಸ್ಪರ್ಧೆಗೆ ಕಳೆದ ಬಾರಿ ಕೆಲವರು ಗಾಂಧಿಯ ಜೀವನಕ್ಕೆ ಸಂಬಂಧಿಸಿದ ಕತೆಗಳನ್ನು ಕಳುಹಿಸಿದ್ದರು. ಇದು ಗಾಂಧಿಯ ಕುರಿತಾದ ಕತೆಗಳ ಕಥಾ ಸ್ಪರ್ಧೆಯಲ್ಲ. ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಮಹಾತ್ಮ ಗಾಂಧಿಗೆ ಗೌರವಪೂರ್ವಕವಾಗಿ ಮತ್ತು ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧ” ಎಂದು ಹೆಸರಿಡಲಾಗಿದೆ.
ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:
- ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು.
- ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.
ಬಹುಮಾನಗಳ ವಿವರ:
- ಮೊದಲ ಬಹುಮಾನ: ರೂ. 6000
- ಎರಡನೆ ಬಹುಮಾನ: ರೂ. 4000
- ಮೂರನೆಯ ಬಹುಮಾನ: ರೂ. 3000
- ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000
ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:
ಆಗಸ್ಟ್ 31, 2013
ಸೆಪ್ಟೆಂಬರ್ ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.
ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:
editor@vartamaana.com
ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.
ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

Saturday, March 09, 2013

ಕತೀ ಬರಿಯೂ ಮೊದಲ .... !

ಡಾ. ಸಿದ್ರಾಮ ಕಾರಣಿಕ

ಪೆನ್ನು-ಹಾಳೆ ಎರಡೂ ಮುಂದ ಅದಾವು. ಮಂದಿಯ ಮಾತುಗಳೂ ತಲೆಯೊಳಗ ಗುಂಯ್ಞ ಅನ್ನಾಕತ್ತಾವು. ಒಮ್ಮೊಮ್ಮೆ ಬರೀಬೇಕಾಗಿರೋದು ಏನ ಅನ್ನೋದ ಮರ್ತ ಹೋದಾಂಗ ಅನ್ನಿಸಾಕತ್ತೀತು. ನಡು ನಡುವ ನೆನಪುಗೋಳು ಹದ್ದು ಬಂದು ತಲಿ ಮ್ಯಾಲ ಕುಂತ ಕಿರುಚಿ, ಕುಕ್ಕಾಕತ್ತಿತ್ತು ! ಕತೀ ಬರೀಬೇಕು ಅನ್ನಿಸಿತು. ಹಂಗಾರ ಹೆಂಥಾ ಕತಿ ಬರಿಯೂದು ... ? ಮುಂದ ಇತ್ತಲ್ಲ ಗರಿಗರಿ ಮಡಿಕಿ ಹಾಕಿದ  ಪತ್ರಿಕೆ. ಹೆಣ್ಮಕ್ಕಳ ಮ್ಯಾಲ ಅತ್ಯಾಚಾರ ... ದಿನಕ್ಕೊಂದು ಹಿಂತಾವು ನಡಿಯಾಕ ಹತ್ತ್ಯಾವು. ಅವುನ್ನ ದಿನ್ನಾ ಓದುತ್ತ ಓದುತ್ತ ಇರುವಾಗ ಟೀವ್ಯಾಗ ಹಂಥದ್ದ ಘಟನಾ ಮರಕಳಿಸಿದ ಬಗ್ಗಿ ಸುದ್ದಿ ಬಿತ್ತರ ಆಗ್ತೇತಿ. ಇದನ್ನ ಇಟ್ಟುಕೊಂಡ ಕತಿ ಬರದರ ಹ್ಯಾಂಗ್ ? ಜ್ವಲಂತ ವಿಷಯಾನೂ ಆಗ್ತೇತಿ. ಅವಾರ್ಡ್ ಬಂದ್ರೂ ಬರಬೋದಲಾ ? ಹಂಗಾರ ಎಲ್ಲಿಂದ ಸುರು ಮಾಡ್ಲಿ ? ಹುಡುಗ-ಹುಡುಗಿ, ಕಾಲೇಜು, ಪ್ರೇಮ, ವೈರ ಹೊಡೆದಾಟ, ಅತ್ಯಾಚಾರ, ಕೊಲೆ ... ? ಇದೆಲ್ಲ ಹಳಸಲು ಸಿನೇಮಾ ಕತಿ ಹಾಂಗ ಅನ್ನಿಸ್ತೇತ್ಯಲಾ !  ಬ್ಯಾಡಾ, ಹೀಂಗ ಬರೀಬಾರದ್ ನಾ.... ಮತ್ತೇ ? ಅಪ್ಪ-ಅವ್ವ, ವಾತ್ಸಲ್ಯ ವಂಚಿತ ವಿದ್ಯಾರ್ಥಿ, ಕಾಲೇಜು, ಪ್ರೇಮ, ಹೊಸ ಬದುಕಿನ ಆಸೆ ಆನಂತರ ... ... ... ನಂಬಿಕೀ ದ್ರೋಹ ! ಇದೂ ಚರ್ವಿತ ಚರ್ವಣನ ಅನ್ನಿಸೂದಿಲ್ಲ !
ಹಂಗಾರ ಬರಿಯೂದಾದ್ರೂ ಏನ ಮತ್ತ ? ಈ ಕತೆ ಬರಿಯೋ ಗೋಜಲ ಬ್ಯಾಡಂತ ಬಿಟ್ಟ ಬಿಡ್ಲಿ.
ಆಕೀನೂ ಹೀಂಗ ಹೇಳಿದ್ಳಲಾ ? ‘ನಮ್ಮ ಬದುಕ ಕತಿ ಆಗಬಾರ್ದು. ದೋಖಾ ಅಂತ ಅಲ್ಲಾ. ಮನಿಯೊಳಗಿನ ಪರಿಸ್ಥಿತೀನ ಹಂಗ ಏತಿ. ನಂದ ಹೆಂಗಾರ ನಡಿತೇತಿ. ನೀ ಮೊದಲ ಬದುಕ ಕಟ್ಕೋ’ ಎಷ್ಟು ಸಹಜವಾಗಿ ಹೇಳಿದ್ದಳಲ್ಲ ಆಕೆ ! ಆಕೆಯ ತಪ್ಪಾದರೂ ಏನು ... ನಾನೇ ಒಂದಿಷ್ಟು ಎಡಬಿಡಂಗಿ ಥರಾ ವರ್ತಿಸಿಬಿಟ್ಟಿದ್ದೀನಲ್ಲ ! ಹೋಗ್ಲಿ...  ಆ ಸುದ್ದಿ ಈಗ್ಯಾಕ ? ಒಂದ ಕತೀ ಬರಿಬೇಕ ಅಷ್ಟ. ನಾ ಸಣ್ಣಾಂವ ಇದ್ದಾಗ ಸಾಲೀಗಿ ಹೋಗ್ತೇನ ಅಂತ ಹಟಾ ಹಿಡದ ಗೆದ್ದದ್ದು, ಹೆಂಗೋ ಏನೋ ಮಾಡಿಕೊಂಡು ಕಾಲೇಜು ಮೆಟ್ಟಿಲು ತುಳದದ್ದು... ... ಛೇ ! ಇಲ್ಲಿ ನಾ ಆತ್ಮ ಚರಿತ್ರಾ ಬರ್ಯಾಕತ್ತೇನೇನು ?
ಬ್ಯಾಡ ಬಿಡು ; ಈ ಬರಿಯೋದ ಅಂದ್ರ... ಯಾಕೋ ತ್ರಾಸಿನ ಕೆಲಸ !
ಯಾಕಂದ್ರ ನಾವ್ ಬರಿದದ್ದ ನೋಡಾವ್ರು ಇರ್ತಾರೇನೋ ಖರೆ ; ಮೆಚ್ಕೊಳ್ಳಾವ್ರೂ ಇರ್ತಾರು. ಆದ್ರ ಬರಿಯೂ ಬರಹದಾಗೂ ರಾಜಕೀ ಮಾಡಿ ಮ್ಯಾಲ-ಕೆಳಗ ಮಾಡ್ತಾರಲ್ಲ ...
ಅದಕ್ಕ ...
ಬರಿಯೋದ ಬ್ಯಾಡ ಅನ್ನಿಸ್ತೇತಿ !
ನೀವ್ ಏನಂತೀರಿ ?

Friday, July 20, 2012

ಗಾಂಧಿ ಜಯಂತಿ ಕಥಾಸ್ಪರ್ಧೆ – 2012


 
 
 

ಸ್ನೇಹಿತರೆ,
ರವಿ ಕೃಷ್ಣಾರೆಡ್ಡಿಯವರು 2008ರಲ್ಲಿ ಮೊದಲ ಗಾಂಧಿ ಜಯಂತಿ ಕಥಾಸ್ಪರ್ಧೆಯನ್ನು ನಡೆಸಿದ್ದು. ಎರಡನೆಯದು 2009ರಲ್ಲಿ. ಎರಡೂ “ವಿಕ್ರಾಂತ ಕರ್ನಾಟಕ” ವಾರಪತ್ರಿಕೆ ನಡೆಸಿದ್ದು; ಪ್ರಾಯೋಜಿಸಿದ್ದು ಅವರು ನಂತರ ವಿಕ್ರಾಂತ ಕರ್ನಾಟಕ ನಿಂತು ಹೋದ ಮೇಲೆ ಹಲವಾರು ಕಾರಣಗಳಿಂದಾಗಿ ಅವರಿಗೆ ಅದನ್ನು ಮುಂದುವರೆಸಲು ಆಗಿರಲಿಲ್ಲ. ಈಗ ವರ್ತಮಾನದ ಅಡಿಯಲ್ಲಿ ಅದನ್ನು ಮುಂದುವರೆಸಬೇಕೆಂದು ತೀರ್ಮಾನಿಸಿದ್ದಾರೆ. ಬಹುಶ: ಈ ವರ್ಷದಿಂದ ಇದನ್ನು ಪ್ರತಿ ವರ್ಷ ತಪ್ಪದೆ ನಡೆಸುವ ಯೋಜನೆ ಅವರದು.
ಗಾಂಧಿ ಜಯಂತಿ ಕಥಾಸ್ಪರ್ಧೆಯ ಆರಂಭದಲ್ಲಿ ಈ ಸ್ಪರ್ಧೆಯ ಉದ್ದೇಶ ಮತ್ತು ಕತೆಗಳು ಯಾವುದರ ಹಿನ್ನೆಲೆಯಲ್ಲಿ ರೂಪುಗೊಂಡಿರಬೇಕು ಎಂದು ಕೆಲವು ಟಿಪ್ಪಣಿ ಇದ್ದವು. ಆದರೆ ಈ ಬಾರಿ ಅಂತಹ ನಿಬಂಧನೆಗಳು ಏನೂ ಇಲ್ಲ. ಉತ್ತಮ ಕತೆಗಳನ್ನು ಬರೆಯಿರಿ ಮತ್ತು ಕಳುಹಿಸಿ ಎಂದು ಅವರು ಕೋರಿದ್ದಾರೆ.

ಬಹುಮಾನಗಳ ವಿವರ:
ಮೊದಲ ಬಹುಮಾನ: ರೂ. 6000
ಎರಡನೆ ಬಹುಮಾನ: ರೂ. 4000
ಮೂರನೆಯ ಬಹುಮಾನ: ರೂ. 3000
ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000
ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ: ಆಗಸ್ಟ್ 31, 2012
ಸೆಪ್ಟೆಂಬರ್ ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಒಂದು ಪುಟ್ಟ ಸಭೆ ಮಾಡಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.
ಮಾಮೂಲಿನಂತೆ ಎಲ್ಲಾ ಕಥಾಸ್ಪರ್ಧೆಗಳ ನಿಬಂಧನೆಗಳು ಇಲ್ಲಿಯೂ ಅನ್ವಯಿಸುತ್ತವೆ: ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು; ಕನಿಷ್ಟ 1500 ಪದಗಳದ್ದಾಗಿರಬೇಕು.

ಕೆಲವು ತಾಂತ್ರಿಕ ಮತ್ತು ಅನುಕೂಲದ ಕಾರಣಕ್ಕಾಗಿ ದಯವಿಟ್ಟು ನಿಮ್ಮ ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಿ. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್  ವಿಳಾಸ: editor@vartamaana.com

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.