Showing posts with label Poem. Show all posts
Showing posts with label Poem. Show all posts

Friday, December 13, 2013

ಸುಂದರವಾದ ಕನ್ಯೆ ಬೇಕಾಗಿದ್ದಾಳೆ... !

ಡಾ. ಸಿದ್ರಾಮ ಕಾರಣಿಕ

ಸುಂದರವಾದ ಕನ್ಯೆ ಬೇಕಾಗಿದ್ದಾಳೆ
ದಯವಿಟ್ಟು ಕ್ಷಮಿಸಿ
ಸುಂದರತೆಯ ಬಗೆಗೆ ನನಗೆ 
ವ್ಯಾಖ್ಯಾನ ಬರೋದಿಲ್ಲ !
ಬಣ್ಣದ ಬಗೆಗೆ ತಕರಾರು ಇಲ್ಲ
ಉದ್ದ-ಗಿಡ್ಡ, ದಪ್ಪ-ತೆಳು 
ಯಾವ ಸಮಸ್ಯೆಯೂ ಇಲ್ಲ
ಮನಸ್ಸನ್ನು ಅರ್ಥ ಮಾಡಿಕೊಳ್ಳೋಳು
'ಅರ್ಥ'ದ ಗೊಡವೆಗೆ ಬೀಳದವಳು
ಹೇಗಿದ್ದರೂ ನಡೇದೀತು ;
ದಯವಿಟ್ಟು ಗಮನಿಸಿ
ಕನ್ಯೆ ಬೇಕಾಗಿದ್ದಾಳೆ
ಮುದ್ಧಣನಿಗೆ ಮನೋರಮೆಯಂತವಳು ಬೇಕಾಗಿದ್ದಾಳೆ !
ರಾಗಮನಂತೆ ನಾನು ತೊಡ ಸಂಧಿ, 
ಮೊಲೆ, ಮೂಗು ನೋಡುಗನಲ್ಲ !
ಅನಂತಮೂರ್ತಿಯಂತೆ ಸಿಕ್ಕಾಗ ಸೀರುಂಡೆ ಎನ್ನೋನಲ್ಲ !
ಬೇಂದ್ರೆಯ ಗೆಣೆಯ ಆಗಲಾಗದು ;
ಕುವೆಂಪು ಬರೆದ ನಾಯಿ ಕೂಡ ಅಲ್ಲ !
ಕಣವಿಯ ರೇಲು, ನಮಾಜು 
ಸಮಜೋತಿಯಲ್ಲ ನನಗೆ !
ನಗಬೇಕು ; ನಗಿಸುತ್ತ ಇರಬೇಕು
ಅಂದ್ರೆ ಧಾರವಾಡ ಬಸ್ಟ್ಯಾಂಡಿನ ಬದಿಯವಳೂ ಅಲ್ಲ
ಬೇಕಾಗಿದ್ದಾಳೆ ನನ್ನೊಂದಿಗೆ ಸಂಗಾತ ಬಯಸೋಳು ;
ಮತ್ತಿನಲ್ಲೂ ಗತ್ತುಗಾರಿಕೆ ತೋರುವಂಥವಳು !
ಯಾರಾದರೂ ಇದ್ದೀರಾ ? ಯಾರಿಗಾದರೂ ಗೊತ್ತಾ ?
ಹುಡುಕಿ ಕೊಡಿ ; ನನ್ನ ಗೆಳೆಯನಿಗೆ ಇನ್ನೂ ಮದುವೆಯಾಗಿಲ್ಲ !

Monday, November 04, 2013

ಬಿಳಿ ಕಾಗದ ಇದು ಬರೀ ಕಾಗದ ... !

ಬಿಳಿ ಕಾಗದ ಇದು ಬರೀ ಕಾಗದ
ಮೂಡಿಸು ನೀನು ಬಣ್ಣದ ಚಿತ್ತಾರ
ಒಲವು ಚೆಲವು ಕಾಣಲೇ ಇಲ್ಲ
ಸೆಲೆಯ ಜಲವು ಚಿಮ್ಮಲೇ ಇಲ್ಲ
ಹೊತ್ತಿದ ಜ್ವಾಲೆ ನಂದಲೇ ಇಲ್ಲ
ಬತ್ತಿದ ಬಾವಿ ತುಂಬಲೇ ಇಲ್ಲ //1//

ಬಿಕ್ಕಿದ ದುಃಖ ಬಯಲಿಗೆ ಇಲ್ಲ
ಕುಕ್ಕುವ ಕಣ್ಣೊಳು ಕಾಂತಿಯು ಇಲ್ಲ
ಮಿಕ್ಕಿದ ಮಾತು ಅರಳಲೇ ಇಲ್ಲ
ದಕ್ಕಿದ ಬೀಜ ಚಿಗುರಲೇ ಇಲ್ಲ ! //2//


ನಾನು ಸುಮಾರು 1998 ರಲ್ಲಿ ಬರೆದ ಪದ್ಯ (ನನ್ನ ಮೋಡ ಕಟ್ಟೇತಿ ಕವನ ಸಂಕಲನದಲ್ಲಿ ಇದೆ) ನೆನಪಾಯಿತು. ಈ ಹಾಡಿಗೆ ನಾನೇ ಸ್ವರ ಸಂಯೋಜನೆ ಮಾಡಿ, ಖಂಜರಿ ಹಿಡಿದು ತಾಳ ಹಾಕಿ ಹಾಡುತ್ತಿದ್ದೆ ! ಮಿತ್ರ ಮಂಡಲಿಗಾಗಿ ದಾಖಲಿಸಿದ್ದೇನೆ. ಓದಿಕೊಳ್ಳಿ ; ಇಲ್ಲವೆ ಹಾಡಿಕೊಳ್ಳಿ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.