Showing posts with label ಸಾಹಿತ್ಯ. Show all posts
Showing posts with label ಸಾಹಿತ್ಯ. Show all posts

Wednesday, December 04, 2013

ಬರಹಗಾರನ ಸ್ವಾಭಿಮಾನಕ್ಕೆ ಪೆಟ್ಟು !

ಡಾ. ಸಿದ್ರಾಮ ಕಾರಣಿಕ
ನಾನು ಪುಸ್ತಕಗಳನ್ನು ರಚಿಸುವಾಗ ಅಥವಾ ಅನುವಾದಿಸುವಾಗ ಮೊದಲು ಕಚ್ಚಾ ಬರವಣಿಗೆ ಮಾಡುತ್ತೇನೆ. ಮೊದಲ ಬರವಣಿಗೆಗೆ ನಾನು ಕೆಲವು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತೇನೆ. ಒಂದು ಪುಟಕ್ಕೆ ಇಂತಿಷ್ಟು ಎಂದು ಹಣವನ್ನೂ ನೀಡುತ್ತೇನೆ. ಆನಂತರ ಏಕಾಂತದಲ್ಲಿ ನಾನು ಪಕ್ಕಾ ಬರವಣಿಗೆಗೆ ತೊಡಗುತ್ತೇನೆ. ಆನಂತರ ಡಿ.ಟಿ.ಪಿ, ತಿದ್ದುಪಡಿ ಎಲ್ಲ ಮಾಡುತ್ತೇನೆ. ಸಾಯಿ ಕಾದಂಬರಿಯನ್ನು ಅನುವಾದ ಮಾಡುವಂತೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮರಾಠಿ ಪ್ರಾಧ್ಯಾಪಕರಾದ ಡಾ. ವಿನೋದ ಗಾಯಕವಾಡರು ಬಹಳಷ್ಟು ಸಲ ಒತ್ತಾಯಿಸಿದಾಗ ಕೂಡ ನಾನು ಅವರಿಗೂ ಇದನ್ನು ಹೇಳಿದ್ದೆ. ಎಂಟುನೂರು ಪುಟಗಳ ಬರವಣಿಗೆಗೆ ಎಂಟು ಸಾವಿರ ಕೊಡಬೇಕಾಗುತ್ತದೆ ಎಂದೆ. ಅವರು ಒಟ್ಟು ಹತ್ತು ಸಾವಿರು ರುಪಾಯಿ ನೀಡಿದರು. ಎರಡು ಸಾವಿರು ಹೆಚ್ಚಾಯಿತು ; ಕೃತಿ ಪ್ರಕಟವಾದ ಮೇಲೆ ಸಂಭಾವನೆ (ರಾಯಲ್ಟಿ) ಬಂದಾಗ ಅದನ್ನು ಮರಳಿಸುತ್ತೇನೆ ಎಂದು ನಾನು ಅವರಿಗೆ ಎರಡ್ಮೂರು ಸಲ ಹೇಳಿದ್ದೆ. ಆದರೆ ಸಂಭಾವನೆ ಬಿಡಿ ; ನಾನೇ ಅನುವಾದಿಸಿದ ನನ್ನದೇ ಕೃತಿಯನ್ನೂ ನಾನು ಮೇಲಿಂದ ಮೇಲೆ ನಾನು ಕೇಳಿದಾಗಲೂ ಪ್ರಕಾಶಕರು ಕೇವಲ ಒಂದೇ ಪ್ರತಿ ಕಳುಹಿಸಿ ಇಡೀ ಬರಹಗಾರನ ಸ್ವಾಭಿಮಾನಕ್ಕೆ ಪೆಟ್ಟು ನೀಡಿದರು. ಚರ್ಚೆಯ ಮೂಲಕ ಬಗೆ ಹರಿಸಿಕೊಳ್ಳಬೇಕು ಎಂದುಕೊಂಡಾಗಲೂ ಮೂಲ ಲೇಖಕರು ಮತ್ತು ಪ್ರಕಾಶಕರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ನ್ಯಾಯಾಲಯದ ಮೂಲಕ ನ್ಯಾಯ ಕೇಳಲೇಬೇಕಾಗುತ್ತದೆ. ಧಾರವಾಡದ ಹೈಕೋರ್ಟಿನಲ್ಲಿ ಕೇಸು ದಾಖಲು ಮಾಡುವ ವಿಚಾರದಲ್ಲಿರುವೆ. ತಿಳಿದವರು, ನ್ಯಾಯವಾದಿಗಳು ಬಗ್ಗೆ ನನಗೆ ಸಲಹೆ ನೀಡಬೇಕು ಎಂದು ಮೂಲಕ ಕೇಳಿಕೊಳ್ಳುತ್ತಿರುವೆ.

Tuesday, July 30, 2013

ಧರ್ಮಗಳ ಗೊಂದಲ ನಿವಾರಣೆ


ಮೂಲ ಮರಾಠಿ : ಡಾ. ವಿನೋದ ಗಾಯಕವಾಡ                            
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
------------------------------------------------------------------------------------
ಒಂದೊಮ್ಮೆ ಆ ಬಾಲಯೋಗಿ ಪ್ರಸನ್ನಚಿತ್ತನಾಗಿ ಕುಳಿತಿರುವಾಗ ಜನರೆಲ್ಲ ಆತನ ಸುತ್ತ ನೆರೆಯುತ್ತಿದ್ದರು. ಸಹಜವಾಗಿಯೇ ಮಾತುಕತೆ-ಚರ್ಚೆ ಸುರುವಾಗುತ್ತಿದ್ದವು. ಆತ ಕೂಡ ತುಂಬ ಉತ್ಸಾಹದಿಂದಲೇ ಉತ್ತರ ನೀಡುತ್ತಿದ್ದ. ಜನರ ಪ್ರಶ್ನೆಗಳು ಮುಗಿಯುವುದೇ ಇಲ್ಲವೇನೋ ಎನಿಸುತ್ತಿತ್ತು. ಇದು ಆತನ ಅರಿವಿಗೂ ಬಂತು. ಆದರೂ ಉತ್ತರ ನೀಡಲು ಆತ ಬೇಸರಿಸುತ್ತಿರಲಿಲ್ಲ. ಕೇಳಿದವರಿಗೆ ಸಮಾಧಾನವಾಗುತ್ತಿರವುದನ್ನು ಕಂಡು ಆತ ಮತ್ತಷ್ಟು ಖುಷಿಗೊಳ್ಳುತ್ತಿದ್ದ.
“ಬೇಟಾss...”
ಮುಸ್ಲಿಂ ಮುದುಕನೊಬ್ಬ ತುಂಬ ವಿನಯದಿಂದಲೇ ತನ್ನ ಬಿಳಿಗಡ್ಡದ ಮೇಲೆ ಕೈಯಾಡಿಸುತ್ತ ಕರೆದ.
“ಜೀ, ಚಾಚಾ ...”
“ಒಂದ್ ಸವಾಲ್ ಕೇಳ್ಲಿ ?”
“ಜೀ”
“ನಾರಾಜ್ ಆಗ್ಬಾರ್ದ ಮತ್ತ ...”
“ಇಲ್ಲ ... ನಾ ನಾರಾಜ್ ಆಗೂದಿಲ್ಲ ಚಾಚಾ. ನಿಮಗ ಗೊತ್ತೇತಿ ...”
“ಖರೇ, ತುಮ್ ಕೌನ್ ಹೋ ?”
“ಇದಕ್ಕ ನಾ ಒಂದ್ಸಲಾ ಉತ್ತರಾ ಕೊಟ್ಟೇನಿ ಚಾಚಾ. ಮೈ ತೋ ಖುದಾ ಕಾ ಬಂದಾ ಹ್ಞುಂ...” ಆಕಾಶದತ್ತ ಕೈ ಎತ್ತಿ ಆ ಯೋಗಿ ಹೇಳಿದ.
“ಅದೂ ಖರೆ...” ಗಡಬಡಿಸಿದ ಮುದುಕ ತಪ್ಪೊಪ್ಪಿಕೊಂಡ. ಆತನಿಗೆ ಮುಂದೆ ಕೇಳುವ ಧೈರ್ಯವಾಗುತ್ತಿರಲಿಲ್ಲ. ಆತ ಧೈರ್ಯವನ್ನೆಲ್ಲ ಒಟ್ಟುಗೂಡಿಸತೊಡಗಿದ್ದ.
“ಮತ್ತ ...?” ಆ ಬಾಲಯೋಗಿ ನಗುತ್ತಲೇ ಕೇಳಿದ.
“ತುಮ್ ಕೌನಸೇ ಧರ್ಮ ಕೇ ಹೋ ? ಹಿಂದೂ ಯಾ ... ಮುಸ್ಲಿಂ ? ಚಾಚಾ ಬಿಡಿ ಬಿಡಿಯಾಗಿಯೇ ಕೇಳಿಯೇ ಬಿಟ್ಟ !
ಸೇರಿದವರೆಲ್ಲ ಸ್ತಬ್ದರಾದರು.
“ಚಾಚಾss...” ಆ ಬಾಲಯೋಗಿ ಆ ಮುದುಕನ್ನೇ ತೀಕ್ಷ್ಣವಾಗಿ ದಿಟ್ಟಿಸುತ್ತ ಕರೆದ.
“ಜೀss ...”
“ನಾ ನಿಮಗ ಯಾರ ಅನ್ನಿಸ್ತೇನಿ ? ಹಿಂದೂ ಅನ್ನಿಸ್ತೀನೋ ಇಲ್ಲ ಮುಸ್ಲಿಂ ಕಾಣ್ಸತೀನೋ ?”
“ಆ್ಞಂss ... ಅss... ...”
“ಬೋಲೋ ...”
“ನನಗಂತೂ ಮುಸಲಮಾನ ಅನ್ನಿಸ್ತಿ. ... ಹಮಾರೇ ಹೀ ಮಜಹಬ್ ಕೆ ಲಗ್ತೇ ಹೋ ... ಇಸ್ಲಾಂ ಕೇ ಬಂದೇ ಲಗ್ತೇ ಹೋ”
“ನಿಮಗ ಹಂಗ ಅನ್ನಿಸಿದ್ರ ನಾ ಖರೇನ ಮುಸಲ್ಮಾನ ಅದೇನಿ !”
“ಯಾ ಖುದಾss, ತೇರಿ ರಹಮತ್ ಐಸಿ ಹೀ ರಹೇ” ಆ ಮುದುಕ ಆಕಾಶದ ಕಡೆ ನೋಡುತ್ತ ತುಂಬ ಖುಷಿಯಿಂದ ಹೇಳಿದ. ಆತನ ಮುಖ ಮೊರದಗಲವಾಗಿತ್ತು.
ಆ ಗುಂಪಿನಲ್ಲಿದ್ದ ಹಿಂದೂಗಳಿಗೆ ಏನೋ ಅಸ್ವಸ್ಥತೆ ಆವರಿಸಿತು ! ಅವರು ಪರಸ್ಪರ ಮುಖ ಮುಖ ನೋಡಿಕೊಳ್ಳತೊಡಗಿದರು.
“ಸದಾಶಿವss, ನಿನ್ನ ಒಂದ್ಮಾತ ಕೇಳ್ಲಿ ?”
“ಕೇಳ ಬಾಳಾ ...” ಸದಾಶಿವ ವಿನಮ್ರತೆಯಿಂದಲೇ ಎದ್ದು ನಿಂತು ಕೈ ಮುಗಿದು ಹೇಳಿದ.
“ಕುಂಡ್ರು ... ಕುಂಡ್ರು ... ನನಗ ಹೇಳ ಈಗ, ನಿನಗ ನಾ ಯಾರ ಅನ್ನಿಸ್ತೇನಿ ?”
ಸದಾಶಿವ ಕೆಳಗೆ ಕುಳಿತುಕೊಳ್ಳುತ್ತ ಹೇಳಿದ, “ಅಗ್ದೀ ದೇವ್ರ ಆಣೀ ಮಾಡಿ ಹೇಳ್ತ್ಯಾನು ... ನೀ ನಮಗ ಹಿಂದೂನss ಅನ್ನಿಸ್ತಿ. ...ಅಲ್ಲ, ಖರೇ ಅಂದ್ರೂ ನೀ ಹಿಂದೂssನ ಅದಿ... ನಡು ನಡುವ ಮುಸಲರ ಭಾಷಾ ಮಾತಾಡಿದ್ರ ಯ್ಯಾನಾತು ? ಈ ಚಾಚಾಗ ಯ್ಯಾನ ಅನ್ನಿಸಿದ್ರೂ ಅದರಿಂದ ಯ್ಯಾನೂ ಫರಕ್ ಬೀಳೂದಿಲ್ಲ ! ನೀ ಹಿಂದೂನss ಅದಿ”
ಸದಾಶಿವನ ಉತ್ತರದಿಂದ ಹಿಂದೂಗಳಿಗೆ ತುಂಬ ಖುಷಿಯಾಯಿತು. ಯಾಕೆಂದರೆ ಆತ ಅವರ ಮನಸ್ಸಿನೊಳಗೆ ಇದ್ದುದ್ದನ್ನೇ ಹೇಳಿದ್ದ. ಆದರೆ ಮುಸ್ಲಿಂರು ಒಂದಿಷ್ಟು ಬೇಸರಿಸಿಕೊಂಡರು.
ಆ ಯೋಗಿ ಮಾತ್ರ ನಗುತ್ತಲೇ ಇದ್ದ.
ಆತನ ಮುಖದ ಮೇಲಿನ ಕಾಂತಿ ಚಿಮ್ಮುತ್ತಲೇ ಇತ್ತು.
ಆಗ ವಾಮನ ತಾತ್ಯಾ ಕೈ ಮುಗಿದು ಹೇಳಿದ, “ಮಹಾರಾಜ್, ನಿಮ್ಮ ಈ ಉತ್ತರದಿಂದ ನಮಗ ಸಮಾಧಾನ ಆಗಿಲಿಲ್ಲ. ನಾವೆಲ್ಲ ಸೇರಿ, ನೀವು ಯಾರ ಅದೇರಿ ಅನ್ನೋದಕ್ಕ ಏನ ಮಹತ್ವ ಅದ ? ನೀವ್ ಯಾರ ಅದೇರಿ ಅದನ್ನ ನೀವss ನಿಮ್ಮ ಬಾಯಿಂದ ಹೇಳ್ರಿ. ಅಂದ್ರ ನಮಗ ಸಮಾಧಾನ ಆಗ್ತದ”
“ಹ್ಞಾಂ ... ಹ್ಞಾಂ ... ನೀವss ಹೇಳ್ರಿ ನೀವss ಹೇಳ್ರಿ”
“ಅಗ್ದೀ ಬರೋಬ್ಬರಿ...”
“ಸಹೀ ಹೈ ... ಸಹೀ ಹೈ”
ಇದss ಸರಿ. ಕೃಪಾ ಮಾಡಿ ನೀವss ಹೇಳ್ರಿ... ತುಮ್ ಕೌನ್ ಹೋ ? ಹಿಂದೂ ಯಾ ಮುಸ್ಲಿಂ ?
ಆ ಯೋಗಿ ಇನ್ನೂ ನಗುತ್ತಲೇ ಇದ್ದ.
ಆತ ಕೈ ಮೇಲೆತ್ತಿ ಎಲ್ಲರನ್ನೂ ಶಾಂತವಾಗಿಸಿ ಹೇಳಿದ, “ಒಂದ್ ವೇಳೆ ನಾ ಮುಸಲಮಾನ್ರಿಗಿ ಮುಸಲಮಾನ ಅನ್ನಿಸಿದರ, ಹಿಂದೂಗೋಳ್ಗಿ ಹಿಂದೂ ಅನ್ನಿಸಿದ್ರ ಆಕ್ಷೇಪ ಮಾಡುವಂಥದ್ದ ಏನೇತಿ ? ನಾ ಹಿಂದೂನೂ ಹೌದು ... ಮತ್ತ ಮುಸಲಮಾನನೂ ಹೌದು. ಪ್ರಶ್ನೆಯೇ ಇಲ್ಲಿ ಉದ್ಭವಿಸೋದಿಲ್ಲ. ಅಲ್ಲೇನ ಚಾಚಾ ? ಏನಪಾ ಸದಾಶಿವಾ ?”
ಆತನ ಈ ಮಾತು ಯಾರಿಗೂ ತಿಳಿಯಲಿಲ್ಲ. ಆತನ ಹೇಳಿಕೆಯಿಂದ ಎಲ್ಲರಿಗೂ ಸಮಾಧಾನವಾಗುವ ಬದಲು ಮತ್ತಷ್ಟು ಬೆಚೈನಿ ಉಂಟಾಯಿತು.
ಚಾಚಾ ಎದ್ದು ನಿಂತು ಕೇಳಿದ, “ಬೇಟಾ, ನಮಗ ಸಮಾಧಾನ ಆಗದಿಲ್ಲ. ಖರೇ ಏನೇತಿ ಅದನ್ನ ನೀನ ನಿನ್ನ ಬಾಯಿಂದನss ಹೇಳ. ಹಂಗೇನಾರ ನೀ ಹಿಂದೂ ಅಂದ್ರೂ ನಮಗ್ಯಾನ ಫರಕ್ ಬೀಳೂದುಲ್ಲ. ನೀ ಮುಸಲರಾಂವ ಅಂದ್ರೂ ಹಿಂದೂಗೋಳಿಗೂ ಯ್ಯಾನ ಫರಕ್ ಬೀಳೂದುಲ್ಲ. ನಿನ್ನ ಮ್ಯಾಲ ನಮ್ಮೆಲ್ಲರ ಭಕ್ತಿ ಈಗ ಹೆಂಗ ಏತಿ ಹಂಗss ಇರ್ತೇತಿ...”
“ಹಂಗೇನಾರ ಇತ್ತಂದ್ರ ಮತ್ತ ಯಾಕ ಪ್ರಶ್ನಾ ಮಾಡಿದ್ರಿ ? ನಾ ಹಿಂದೂ ಅಥವಾ ಮುಸಲ್ಮಾನ ಆಗೋದ್ರಿಂದ ಜರ್ ಯಾರಿಗೂ ಫರಕ್ ಬೀಳೂದಿಲ್ಲ ಅಂದ್ರ ನೀವ್ಯಾಕ ಅದರಾಗ ಬೀಳಾಕತ್ತೇರಿ ?”
“ಹಂಗೇನಿಲ್ಲ ... ಒಂದ್ಸಲಾ ನಿನ್ನ ಬಾಯಿಂದ ನಾವ್ ಕೇಳ್ಬೇಕಾಗೇತಿ...”
ಸದಾಶಿವ ನುಡಿದ.
“ಆತು, ಆತರಲೇಪಾ ... ಈ ಪ್ರಶ್ನಾ ಭಾಳ ಗಹನ ಏತಿ. ನಿಮ್ಮ ದೃಷ್ಟಿಕೋನದಿಂದ ಅದ್ ಭಾಳ ಮೌಲ್ಯದ್ದ ಅನ್ನಿಸ್ತೇತಿ ! ನನ್ನ ದೃಷ್ಟಿಯೊಳಗ ಇದೆಲ್ಲ ಅರ್ಥ ಇಲ್ಲದ್ದು ! ಆದರ ಒಮ್ಮೀ ಮನುಷ್ಯಾನ ಕಡಿ ಹೆಂಗ ನೋಡ್ಬೇಕ ಅನ್ನೋದನ್ನ ನೀವೆಲ್ಲಾರೂ ಕಲಿಯಾಕss ಬೇಕ. ಈ ಪ್ರಶ್ನೆಕ ನಾ ಉತ್ತರ ಕೊಡೂದಿಲ್ಲ. ನನ್ನ ಅವ್ವನ ಇದಕ್ಕ ಉತ್ತರ ಕೊಡ್ತಾಳು ... !” ಇಷ್ಟು ಹೇಳಿದ ಆ ಯೋಗಿ ತನ್ನನ್ನೇ ನಿಟ್ಟಿಸುತ್ತ ಕುಳಿತ್ತಿದ್ದ ಬಾಯಜಾಬಾಯಿಯತ್ತ ತಿರುಗಿ ಕರೆದ, “ಆಯೀss...”
ಆಕೆ ಎಚ್ಚೆತ್ತುಕೊಂಡಳು.
“ಏನೋ ಬಾಳಾ ...?”
“ನೀ ಈ ಎಲ್ಲಾ ಚರ್ಚಾ ಕೇಳಾಕತ್ತಿಯಲ್ಲ ?” ಆತನ ಗೂಢಧ್ವನಿ ಆಕೆಯ ಕಿವಿಯಲ್ಲಿ ಹೊಕ್ಕಾಗ ಆಕೆ ಮೈಯಲ್ಲಿ ವಿಚಿತ್ರವಾದ ಒಂದು ಚೇತನ ಸಂಚಲನವಾದಂತಾಯಿತು.
“ಹ್ಞಾಂ, ಹೌದಪಾ... ಕೇಳ್ಲಿಕ್ಕತ್ತೇನಿ. ಆದರ ಬಾಳಾ, ಅದರಾಗ ನನಗೇನೂ ತಿಳಿಲಿಲ್ಲ !”
“ಆಯೀ, ನೀನ ಹೇಳ ... ನಾ ಯಾರ ಅದೇನಿ ? ಹಿಂದೂನೋ ಮುಸಲ್ಮಾನೋ ?”
“ಬಾಳಾ, ನನಗ ಅದೇನೂ ತಿಳಿಯೂ ಮಾತಲ್ಲ ತಗಿ. ಮತ್ತ ನನಗ ಅದರ ಗರಜೂ ಇಲ್ಲ ! ನೀ ನನ್ನ ಮಗಾ ಅದೀ ; ನಾ ನಿನ್ನ ಅವ್ವ ಅದೇನಿ ಅನ್ನೋದ ಮಾತ್ರ ನನಗ ಗೊತ್ತದ ಅಷ್ಟ ! ನೀ ಹಿಂದೂ ಆಗಿರು, ಮುಸ್ಲಿಂ ಆಗಿರು ನನಗೇನ ಫರಕ್ ಬೀಳೂದಿಲ್ಲ”
“ಕೇಳ್ರಿ, ಇದು ... ಇದು ನಿಮ್ಮ ಪ್ರಶ್ನಾಕ ಸರಿಯಾದ ಉತ್ತರ ! ನನ್ನ ಈ ಅವ್ವ ನನ್ನ ಕಡೀ ಧರ್ಮದ ದೃಷ್ಟಿಯಿಂದ ನೋಡೂದಿಲ್ಲ. ಅಂಗಡ್ಯಾಂವ ಬೆಲ್ಲಾ ಕೊಡಬೇಕಾರ ಕಾಗದಾ ಸುತ್ತಿ ಕೊಡ್ತಾನಲಾ ... ಹಂಗ ಮನುಷ್ಯನನ್ನ ಧರ್ಮದ ಕಾಗದದಾಗ ಗುಂಡಾಳ್ಸಾಕತ್ತೇರಿ ನೀವು ! ಅರೇ, ಬೆಲ್ಲಾ ಮಹತ್ವದ್ದೋ, ಕಾಗದಾ ಮಹತ್ವದ್ದೋ ? ನಿಮ್ಮ ಎಲ್ಲಾ ಚರ್ಚಾ ಆ ಕಾಗದದ ಸುತ್ತss ಗಿರಕಿ ಹೊಡಿಯಾಕತ್ತೇತಿ. ಯಾವುದರ ರುಚಿ ನೋಡಬೇಕಾಗೇತ್ಯೋ ಅದನ್ನss ಬಿಟ್ಟೇರಿ ! ಯಾವುದನ್ನ ಉಪಯೋಗ ಮಾಡಬೇಕೋ ಅದನ್ನ ಉಪಯೋಗ ಮಾಡವಲ್ಲರಿ ! ನಿಮಗ ಬೇಕಾದ ಬೆಲ್ಲಾ ನೀವ್ ತಿನ್ನಾವ್ರಾದ್ರೂ ಯಾವಾಗ ? ಒಳಗಿನ ಬೆಲ್ಲಾ ತಗದರ ಕಾಗದಾ ಕಚರಾದಾಗ ಸೇರ್ತೇತಿ ಹೌದಿಲ್ಲೋ ? ಹೂವಿನೊಳಗಿನ ಸುಗಂಧ ಭಾಳ ಮುಖ್ಯ ; ಯಾಕಂದ್ರ ಹೂವು ಒಂದss ಒಂದ ದಿನಾ ತಾಜಾ ಇರ್ತೇತಿ. ಮರುದಿನಾ ಅದ ಹಾಳ ಆಗ್ತೇತಿ ! ಅದರೊಳಗಿನ ಸುಗಂಧ ಮಾತ್ರ ಶಾಶ್ವತ ಆಗಿರ್ತೇತಿ. ಕಂಠಕ್ಕಿಂತ ಅದರೊಳಗಿಂದ ಜಿಗಿಯೋ ಧ್ವನಿ ಮಹತ್ವದ್ದು ! ಕಣ್ಣಿಗಿಂತ ಅದರೊಳಗ ಇರೂ ತೇಜಸ್ಸ ಮಹತ್ವದ್ದು ! ಆ ತೇಜಸ್ಸಿನಿಂದಾನ ಈ ಜಗಾ ಕಾಣ್ತೇತಿ ಹೌದಿಲ್ಲೋ ? ಈ ದೇಹ ಯಾವ ಧರ್ಮದ ಅವ್ವ-ಅಪ್ಪನ ಹೊಟ್ಟಿಯೊಳಗ ಹುಟ್ಟೇತಿ ಅನ್ನೋದು ಮಹತ್ವದ್ದಲ್ಲ ; ಈ ದೇಹದೊಳಗಿರೋ ಅವಿನಾಶಿ ತತ್ವಕ್ಕ, ಶಾಶ್ವತ ಆತ್ಮಕ್ಕ ಮಹತ್ವ ಏತಿ ! ನೀವು ಶಾಣ್ಯಾ ಮಂದಿ ಇದ್ದೇರಿ. ಹಿಂಗಾಗಿ ಧರ್ಮದ ಬಗ್ಗೀ ಚರ್ಚಾ ಮಾಡ್ತೇರಿ... ಆದರ ನನ್ನ ಆಯೀ ನಿಮಗಿಂತ ಶಾಣ್ಯಾ ಅದಾಳು ... ಆಕೀ ಧರ್ಮಕ್ಕಿಂತ ಮನುಷ್ಯಾನ ಕಡೀ ನೋಡ್ತಾಳು ; ಮನುಷ್ಯಾನ ಒಳಗಿರೋ ದೈವತ್ವದ ಕಡೀ ನೋಡ್ತಾಳು... ನೀವೂ ಸುದ್ದಾ ಇದ ದೃಷ್ಟಿ ಇಟ್ಕೊಳ್ರಿ ... ಅಂದ್ರ ನಿಮ್ಮ ಜೀವನಾ ಸಾರ್ಥಕ ಆಗ್ತೇತಿ ...”

*****

Friday, March 15, 2013

ಕರ್ನಾಟಕ ಜನಸಾಹಿತ್ಯ ಸಮಾವೇಶ ಆಹ್ವಾನ ಪತ್ರಿಕೆ







ಕರ್ನಾಟಕ ಜನಸಾಹಿತ್ಯ ಸಮಾವೇಶ
ಮಾರ್ಚ್ ೨೩ ಮತ್ತು ೨೪, ೨೦೧೩.
ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

ಮಾ.೨೩. ಬೆ. ೧೦.೩೦-೧೧.೩೦:

೧. ಆಶಯ ನುಡಿ

ಪ್ರಸ್ತಾವನೆ : ಡಾ. ಎಂ ಡಿ ಒಕ್ಕುಂದ
ಆಶಯ ಮಾತು :
ಲಕ್ಷ್ಮಣ  ಗಾಯಕವಾಡ, ಮರಾಠಿ ದಲಿತ ಲೇಖಕರು
ಬಾನು ಮುಷ್ತಾಕ್,
ಸಂಯೋಜನೆ: ಡಾ. ಸಂಜೀವ ಕುಲಕರ್ಣಿ


೨. ವರ್ತಮಾನದ ಬಿಕ್ಕಟ್ಟು; ವಿವಿಧ ನೋಟಗಳು ೧೧.೩೦-೨.೦೦

ದು. ಸರಸ್ವತಿ
ಡಾ. ನಾಗೇಶ ಹೆಗಡೆ
ಡಾ. ಬಂಜಗೆರೆ ಜಯಪ್ರಕಾಶ
ಡಾ. ಎಸ್.ಬಿ.ಜೋಗುರ
ಸ್ಪಂದನ : ಡಾ. ಮುಜಾಫರ್ ಅಸ್ಸಾದಿ
ಸಂಯೋಜನೆ : ಡಾ. ಜಗದೀಶ ಕೊಪ್ಪ


೩. ಸಮಾಜ ಮತ್ತು  ನನ್ನ ಬರಹ   ಮ. ೩.೦೦ - ೫.೦೦
ಸರ್ಜಾಶಂಕರ್ ಹರಳಿಮಠ
ಬಿ.ಪೀರ್‌ಬಾಷಾ
ವೀರಣ್ಣ ಮಡಿವಾಳರ
ಡಾ. ಅನಸೂಯಾ ಕಾಂಬಳೆ
ವಸಂತ ಬನ್ನಾಡಿ
ಜ್ಯೋತಿ ಚೇಳಾಯರು
ಡಾ. ಮಲ್ಲಿಕಾರ್ಜುನ ಮೇಟಿ
ಟಿ ಕೆ ದಯಾನಂದ
ಬಾಲ ಗುರುಮೂರ್ತಿ
ರಮೇಶ ಅರೋಲಿ


ಸ್ಪಂದನ : ಡಾ. ಕುಂ. ವೀರಭದ್ರಪ್ಪ
ಸಂಯೋಜನೆ : ಡಾ. ಕಾ. ವೆಂ. ಶ್ರೀನಿವಾಸಮೂರ್ತಿ


೪. ಕವಿಗೋಷ್ಠಿ  ಸಂಜೆ ೫.೩೦ - ೮.೦೦

ಸುಬ್ಬು ಹೊಲೆಯಾರ್
ವಿ. ಎಂ. ಮಂಜುನಾಥ
ವಿ. ಆರ್. ಕಾರ್ಪೆಂಟರ್
ಡಾ. ಅರುಣ ಜೋಳದ ಕೂಡ್ಲಿಗಿ
ಪ್ರವರ ಕೊಟ್ಟೂರ
ಶರೀಫ್ ಹಸಮಕಲ್
ಸ್ಮಿತಾ ಮಾಕಳ್ಳಿ
ಸೈಫ್ ಜಾನ್ಸೆ ಕೊಟ್ಟೂರು
ಸೀಮಾ ಸಮತಳ
ಕಾವ್ಯ. ಪಿ. ಕೆ
ಗಂಗಪ್ಪ ತಳವಾರ
ಬಸವರಾಜ ಹಳ್ಳಿ
ಹೃದಯಶಿವ
ಸತ್ಯಮಂಗ ಮಹಾದೇವ
ವಿ. ಹರಿನಾಥ ಬಾಬು
ಗಣೇಶ್ ಹೊಸ್ಮನೆ
ಭವ್ಯ. ಎಚ್. ಸಿ
ಕಾವ್ಯಶ್ರೀ
ಟಿ. ಎಸ್. ಗೊರವರ
ಚೈತ್ರ ಬೇವಿನಗಿಡದ
ಕುಂಸಿ ಉಮೇಶ
ಅಬ್ಬಾಸ ಮೇಲಿನಮನಿ
ಮಂಜುನಾಥ ಡೊಳ್ಳಿನ
ಬಿ. ಶ್ರೀನಿವಾಸ
ಶ್ರೀದೇವಿ ಕಳಸದ
ಬಸವರಾಜ ಹೂಗಾರ
ಕೆ. ಅಕ್ಷತಾ
ಮಂಜುಳಾ ಮಾದರ
ಶಿವಕುಮಾರ ಕಂಪ್ಲಿ
ದೊಡ್ಡನಿಂಗಪ್ಪ ಆಲೂರ್
ಡಿ. ಕೆ. ರಮೇಶ್
ಕುಮಾರ್. ಎಸ್
ಕಲ್ಲೇಶ್ ಕುಂಬಾರ
ಚನ್ನಪ್ಪ ಅಂಗಡಿ
ಅಪ್ಪಗೆರೆ ಸೋಮಶೇಖರ್
ನಾಗರಾಜ ಹರಪನಹಳ್ಳಿ
ರೇಣುಕಾ ಹೆಳವರ
ಡಾ. ಟಿ ಎಂ ಉಷಾರಾಣಿ

ಸ್ಪಂದನ : ಡಾ. ಎಸ್. ಜಿ. ಸಿದ್ಧರಾಮಯ್ಯ

ಸಂಯೋಜನೆ: ಅಶೋಕ್ ಶೆಟ್ಟರ

ರಾತ್ರಿ ೮.೦೦ ಸಾಂಸ್ಕೃತಿಕ ಕಾರ್ಯಕ್ರಮ
ಚಾಲನೆ - ಜನಾರ್ದನ್ (ಜನ್ನಿ)
ಕೇಸರಿ ಹರವೂ ನಿರ್ದೇಶನದ
’ನಗರ ಮತ್ತು ನದೀ ಕಣಿವೆ’ ಸಾಕ್ಷ್ಯಚಿತ್ರ ಪ್ರದರ್ಶನ

ಮಾರ್ಚ್ ೨೪, ಬೆಳಿಗ್ಗೆ ೯.೩೦ - ೧೦.೩೦

೫. ಹೊಸತಲೆಮಾರಿನ ಸಾಹಿತ್ಯ
ಕಾವ್ಯ

ತಾರಿಣಿ ಶುಭದಾಯಿನಿ
ಡಾ. ಎಚ್.ಎಸ್.ಅನುಪಮಾ

ಸ್ಪಂದನ - ಕೆ. ಪಿ. ಸುರೇಶ್ಸಂಯೋಜನೆ : ಜಗದೀಶ ಮಂಗಳೂರಮಠ

ಕತೆ:   ೧೦.೩೦ - ೧೧.೩೦.

ಮಂಜುನಾಥ್ ಲತಾ
ಮಹಾಂತೇಶ್ ನವಲಕಲ್

ಸ್ಪಂದನ:  ಎಸ್. ಗಂಗಾಧರಯ್ಯ
ಸಂಯೋಜನೆ : ಸುನಂದಾ ಕಡಮೆ

ಸಮಾಜ ವಿಜ್ಞಾನ ಬರೆಹ ಮತ್ತು ಸಂಸ್ಕೃತಿ ಚಿಂತನೆ: ೧೧.೩೦ - ೧೨.೩೦
ದೇವು ಪತ್ತಾರ
ಡಾ. ರಂಗನಾಥ ಕಂಟನಕುಂಟೆ

ಸ್ಪಂದನ: ಕೆ.ಫಣಿರಾಜ್ಸಂಯೋಜನೆ : ಡಾ. ಸಿದ್ರಾಮ ಕಾರಣಿಕ

೬ ಹೊಸ ತಲೆಮಾರು : ನಮ್ಮ ಗ್ರಹಿಕೆ ೧೨.೩೦-೨.೩೦
ಜಿ ಪಿ ಬಸವರಾಜು
ಡಾ. ನಟರಾಜ್ ಬೂದಾಳು
ಡಾ ಬಿ. ಎನ್. ಸುಮಿತ್ರಾಬಾಯಿ
ಡಾ. ಸಬಿಹಾ ಭೂಮಿಗೌಡ
ಕೆ. ನೀಲಾ

ಸಂಯೋಜನೆ: ಶಂಕರ ಹಲಗತ್ತಿ

೭ ಹೊಸ ಸಾಹಿತ್ಯ ಚಳುವಳಿಯ ಸಾಧ್ಯತೆ: ಮ. ೩.೩೦ - ೫.೩೦
ಡಾ. ಸಿದ್ಧನಗೌಡ ಪಾಟೀಲ್
ಡಾ. ವಿನಯಾ
ಡಾ. ಬಿ. ಎಂ ಪುಟ್ಟಯ್ಯ
ಡಾ. ರಹಮತ್ ತರೀಕೆರೆ

ಸಂಯೋಜನೆ: ಡಾ. ಕೆ ಆರ್ ದುರ್ಗಾದಾಸ

ಚಿತ್ರಕಲಾ ಪ್ರದರ್ಶನ

ನಮ್ಮೊಂದಿಗೆ:
ಹಸನ್‌ನಯೀಂ ಸುರಕೋಡ,   ಡಾ. ಎಚ್.ಟಿ. ಪೋತೆ,  ಡಾ.ಎಚ್ ನಾಗವೇಣಿ,  ರಾಮಚಂದ್ರ ಕುಲಕರ್ಣಿ,  ಹನಮಂತ ಹಾಲಗೇರಿ,  ಶಶಿಧರ ಹೆಮ್ಮಾಡಿ,  ಚಂದ್ರಕಾಂತ ಪೋಕಳೆ,  ಡಾ. ಶ್ರೀಶೈಲ್ ಹುದ್ದಾರ,  ಡಾ. ಸುಮಾ ಎಂಬಾರ್, ಸಂವರ್ಥ ಸಾಹಿಲ್,  ಡಾ. ಎಂ.ವಿ. ವಸು, ಕೆ.ಪಿ. ನಟರಾಜ, ಕೆ. ವೆಂಕಟೇಶ್, ನಾಮದೇವ ಕಾಗದಗಾರ, ಲಕ್ಷ್ಮೀಕಾಂತ ಮಿರಜಕರ, ದಾದಾಪೀರ್ ನವಲೇಹಾಳ್, ರಮೇಶ ಗಬ್ಬೂರ, ಡಾ. ಜಾಜಿ ದೇವೇಂದ್ರಪ್ಪ, ಬಿ.ಎಸ್.ಸೊಪ್ಪಿನ್, ಬಿ.ಆಯ್. ಇಳಿಗೇರ, ಮಹಾಂತೇಶ ಮಸ್ಕಿ, ಶ್ರೀದೇವಿ ಕೆರೆಮನೆ , ವೀರೇಶ ಸೌದ್ರಿ, ಶಿವಕುಮಾರ ಕಣಸೋಗಿ, ಎನ್, ಚಂದ್ರಶೇಖರ್, ಜಗನ್ನಾಥ ಮಾಸ್ತಿ, ವೈ.ಗ.ಜಗದೀಶ್, ಎಂ. ಎಫ್.ನದಾಪ, ಡಾ. ಸುನಂದಮ್ಮ, ಡಾ. ಸಬಿತಾ ಬನ್ನಾಡಿ, ಮಹಾಲಿಂಗಪ್ಪ ಅಲಬಾಳ್, ಸಿ.ಜಿ. ಹಿರೇಮಠ, ಸುರೇಶ ತಾಂಡೇಲ, ಮಾಧವಿ ಭಂಡಾರಿ, ಡಾ. ನಟರಾಜ ಹುಳಿಯಾರ್, ಸರಜೂ ಕಾಟಕರ, ಸತೀಶ ಕುಲಕರ್ಣಿ, ಡಿ.ಎಸ್.ಚೌಗಲೆ, ಭೀಮನಗೌಡ ಇಟಗಿ, ವಿಠ್ಠಪ್ಪ ಗೊರಂಟ್ಲಿ, ಡಾ. ಎ.ಎಸ್. ಪ್ರಭಾಕರ್, ಡಾ. ಎಚ್.ಡಿ. ಪ್ರಶಾಂತ್, ಡಾ. ರಾಜಪ್ಪ ದಳವಾಯಿ, ಶ್ರೀಪಾದ ಭಟ್, ಡಾ. ಗವಿಸಿದ್ದ ಪಾಟೀಲ, ಗವಿಸಿದ್ದ ಹೊಸಮನಿ, ಜಿ.ಎನ್.ಮೋಹನ್, ಬಸವರಾಜ ಕೆಂಚರಡ್ಡಿ, ಎಸ್.ಜಿ.ಚಿಕ್ಕನರಗುಂದ, ಜೆ. ಪಿ. ಶೆಟ್ಟಿ, ಸುಭಾಸ ರಾಜಮಾನೆ, ಡಾ. ವಿಠ್ಠಲ ಭಂಡಾರಿ, ಡಾ. ಮೀನಾಕ್ಷಿ ಬಾಳಿ, ಲಿಂಗಾರಡ್ಡಿ ಶೇರಿ, ಪ್ರಭು ಖಾನಾಪುರೆ, ಕಾಶೀನಾಥ ಅಂಬಲಗೆ, ಡಾ.ಎಚ್.ಬಿ.ಕೋಲ್ಕಾರ, ಲಕ್ಷ್ಮಣ ಕಾಪಸೆ, ಡಾ. ಮೈನುದ್ದೀನ ರೇವಡಿಗಾರ, ಡಾ. ಪ್ರಕಾಶ ಖಾಡೆ, ಶಿವಸುಂದರ, ಸತೀಶ್ ಶಿಲೆ, ವೀರಣ್ಣ ಮಂಟಾಳಕರ್, ಡಾ. ದಸ್ತಗೀರ್‌ಸಾಬ್ ದಿನ್ನಿ, ಮೇಟಿ ಕೊಟ್ರಪ್ಪ, ಹುಸೇನ್ ಪಾಶಾ, ಬಸವರಾಜ ಶೀಲವಂತರ್, ರಮೇಶ ನಾಯಕ, ಎಂ. ಚಂದ್ರಪ್ಪ, ಡಾ. ಆಂಜನಪ್ಪ, ವಿರುಪಾಕ್ಷಪ್ಪ ಪಡಿಗೋದಿ, ಸದಾನಂದ ಮೋದಿ, ಪ್ರಮೋದ ತುರ್ವಿಹಾಳ, ಡಾ. ವೈ.ಎಂ.ಭಜಂತ್ರಿ, ಡಾ. ಎಲ್.ಆರ್ ಅಂಗಡಿ, ಡಾ. ವೈ ಬಿ ಹಿಮ್ಮಡಿ, ಪಾರ್ವತೇಶ್, ಮುಂತಾದ ಹಿರಿಯರು ಮತ್ತು ಕಿರಿಯರು
ಬನ್ನಿ, ಗೆಳೆಯರ ಜತೆಗೆ..

Saturday, March 09, 2013

ಕತೀ ಬರಿಯೂ ಮೊದಲ .... !

ಡಾ. ಸಿದ್ರಾಮ ಕಾರಣಿಕ

ಪೆನ್ನು-ಹಾಳೆ ಎರಡೂ ಮುಂದ ಅದಾವು. ಮಂದಿಯ ಮಾತುಗಳೂ ತಲೆಯೊಳಗ ಗುಂಯ್ಞ ಅನ್ನಾಕತ್ತಾವು. ಒಮ್ಮೊಮ್ಮೆ ಬರೀಬೇಕಾಗಿರೋದು ಏನ ಅನ್ನೋದ ಮರ್ತ ಹೋದಾಂಗ ಅನ್ನಿಸಾಕತ್ತೀತು. ನಡು ನಡುವ ನೆನಪುಗೋಳು ಹದ್ದು ಬಂದು ತಲಿ ಮ್ಯಾಲ ಕುಂತ ಕಿರುಚಿ, ಕುಕ್ಕಾಕತ್ತಿತ್ತು ! ಕತೀ ಬರೀಬೇಕು ಅನ್ನಿಸಿತು. ಹಂಗಾರ ಹೆಂಥಾ ಕತಿ ಬರಿಯೂದು ... ? ಮುಂದ ಇತ್ತಲ್ಲ ಗರಿಗರಿ ಮಡಿಕಿ ಹಾಕಿದ  ಪತ್ರಿಕೆ. ಹೆಣ್ಮಕ್ಕಳ ಮ್ಯಾಲ ಅತ್ಯಾಚಾರ ... ದಿನಕ್ಕೊಂದು ಹಿಂತಾವು ನಡಿಯಾಕ ಹತ್ತ್ಯಾವು. ಅವುನ್ನ ದಿನ್ನಾ ಓದುತ್ತ ಓದುತ್ತ ಇರುವಾಗ ಟೀವ್ಯಾಗ ಹಂಥದ್ದ ಘಟನಾ ಮರಕಳಿಸಿದ ಬಗ್ಗಿ ಸುದ್ದಿ ಬಿತ್ತರ ಆಗ್ತೇತಿ. ಇದನ್ನ ಇಟ್ಟುಕೊಂಡ ಕತಿ ಬರದರ ಹ್ಯಾಂಗ್ ? ಜ್ವಲಂತ ವಿಷಯಾನೂ ಆಗ್ತೇತಿ. ಅವಾರ್ಡ್ ಬಂದ್ರೂ ಬರಬೋದಲಾ ? ಹಂಗಾರ ಎಲ್ಲಿಂದ ಸುರು ಮಾಡ್ಲಿ ? ಹುಡುಗ-ಹುಡುಗಿ, ಕಾಲೇಜು, ಪ್ರೇಮ, ವೈರ ಹೊಡೆದಾಟ, ಅತ್ಯಾಚಾರ, ಕೊಲೆ ... ? ಇದೆಲ್ಲ ಹಳಸಲು ಸಿನೇಮಾ ಕತಿ ಹಾಂಗ ಅನ್ನಿಸ್ತೇತ್ಯಲಾ !  ಬ್ಯಾಡಾ, ಹೀಂಗ ಬರೀಬಾರದ್ ನಾ.... ಮತ್ತೇ ? ಅಪ್ಪ-ಅವ್ವ, ವಾತ್ಸಲ್ಯ ವಂಚಿತ ವಿದ್ಯಾರ್ಥಿ, ಕಾಲೇಜು, ಪ್ರೇಮ, ಹೊಸ ಬದುಕಿನ ಆಸೆ ಆನಂತರ ... ... ... ನಂಬಿಕೀ ದ್ರೋಹ ! ಇದೂ ಚರ್ವಿತ ಚರ್ವಣನ ಅನ್ನಿಸೂದಿಲ್ಲ !
ಹಂಗಾರ ಬರಿಯೂದಾದ್ರೂ ಏನ ಮತ್ತ ? ಈ ಕತೆ ಬರಿಯೋ ಗೋಜಲ ಬ್ಯಾಡಂತ ಬಿಟ್ಟ ಬಿಡ್ಲಿ.
ಆಕೀನೂ ಹೀಂಗ ಹೇಳಿದ್ಳಲಾ ? ‘ನಮ್ಮ ಬದುಕ ಕತಿ ಆಗಬಾರ್ದು. ದೋಖಾ ಅಂತ ಅಲ್ಲಾ. ಮನಿಯೊಳಗಿನ ಪರಿಸ್ಥಿತೀನ ಹಂಗ ಏತಿ. ನಂದ ಹೆಂಗಾರ ನಡಿತೇತಿ. ನೀ ಮೊದಲ ಬದುಕ ಕಟ್ಕೋ’ ಎಷ್ಟು ಸಹಜವಾಗಿ ಹೇಳಿದ್ದಳಲ್ಲ ಆಕೆ ! ಆಕೆಯ ತಪ್ಪಾದರೂ ಏನು ... ನಾನೇ ಒಂದಿಷ್ಟು ಎಡಬಿಡಂಗಿ ಥರಾ ವರ್ತಿಸಿಬಿಟ್ಟಿದ್ದೀನಲ್ಲ ! ಹೋಗ್ಲಿ...  ಆ ಸುದ್ದಿ ಈಗ್ಯಾಕ ? ಒಂದ ಕತೀ ಬರಿಬೇಕ ಅಷ್ಟ. ನಾ ಸಣ್ಣಾಂವ ಇದ್ದಾಗ ಸಾಲೀಗಿ ಹೋಗ್ತೇನ ಅಂತ ಹಟಾ ಹಿಡದ ಗೆದ್ದದ್ದು, ಹೆಂಗೋ ಏನೋ ಮಾಡಿಕೊಂಡು ಕಾಲೇಜು ಮೆಟ್ಟಿಲು ತುಳದದ್ದು... ... ಛೇ ! ಇಲ್ಲಿ ನಾ ಆತ್ಮ ಚರಿತ್ರಾ ಬರ್ಯಾಕತ್ತೇನೇನು ?
ಬ್ಯಾಡ ಬಿಡು ; ಈ ಬರಿಯೋದ ಅಂದ್ರ... ಯಾಕೋ ತ್ರಾಸಿನ ಕೆಲಸ !
ಯಾಕಂದ್ರ ನಾವ್ ಬರಿದದ್ದ ನೋಡಾವ್ರು ಇರ್ತಾರೇನೋ ಖರೆ ; ಮೆಚ್ಕೊಳ್ಳಾವ್ರೂ ಇರ್ತಾರು. ಆದ್ರ ಬರಿಯೂ ಬರಹದಾಗೂ ರಾಜಕೀ ಮಾಡಿ ಮ್ಯಾಲ-ಕೆಳಗ ಮಾಡ್ತಾರಲ್ಲ ...
ಅದಕ್ಕ ...
ಬರಿಯೋದ ಬ್ಯಾಡ ಅನ್ನಿಸ್ತೇತಿ !
ನೀವ್ ಏನಂತೀರಿ ?

Sunday, March 03, 2013

ಮಾಯವಾದ ಮಂತ್ರಿಸಿದ ನಿಂಬೆ !


- ಮಿ.ವೆಂ.ಶ್ರೀನಿವಾಸ
ಸಾಯಂಕಾಲ ೬ ಗಂಟೆ ಸಮಯ. ನಾನು ಮತ್ತು ನನ್ನ ಹೆಂಡತಿ ವಾಕಿಂಗ್‌ಗೆ ಹೂರಟಿದ್ದೆವು. ದಿನವೂ ಸಂಜೆ ನಾವಿಬ್ಬರೂ ವಾಕಿಂಗ್‌ಗೆ ಹೋಗಿ ಬರುವಾಗ ತರಕಾರಿ ಮತ್ತು ಮನೆಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಬರುವುದು ರೂಢಿ. ಸರ್ಕಲ್ ಹತ್ತಿರ ಬಂದಾಗ ರಸ್ತೆ ಬದಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಒಂದು ಬೋರ್ಡ್ ಕಡೆ ಗಮನ ಹರಿಯಿತು. ದಿನಾ ನೋಡುತ್ತಿದ್ದ ಬೊರ್ಡ್ ಅದು. ಅವತ್ತು ಅದರ ಕಡೆ ಗಮನ ಹರಿದು ಅಲ್ಲಿ ಓದುತ್ತಾ ನಿಂತೆ. ಅದು ಜ್ಯೋತಿಷಿಯೊಬ್ಬನ ಮನೆ ಮುಂದೆ ಇದ್ದ ಅವನ ಪ್ರಚಾರದ ಬೋರ್ಡ್. "ಶ್ರೀ ಕಾಳಿಕಾಂಬಾ ಜ್ಯೋತಿಷ್ಯಾಲಯ. ನಿಮ್ಮ ಎಲ್ಲ ಸಮಸ್ಯಗಳಿಗೆ ನಮ್ಮಿಂದ ಪರಿಹಾರ ಪಡೆಯಿರಿ. ಕೌಟುಂಬಿಕ ಸಮಸ್ಯೆ, ಪ್ರೇಮ ವ್ಯವಹಾರ, ಕೋರ್ಟ್ ಕಚೇರಿ ವ್ಯವಹಾರ, ಉದ್ಯೋಗ ಮತ್ತಿತರ ಸಮಸ್ಯೆಗಳಿಗೆ ತೃಪ್ತಿಕರ ಸಮಾಧಾನ ಕಂಡುಕೊಳ್ಳಿ. ಜ್ಯೋತಿಷಿ ಪಂ.ಶಂಕರ ಭಟ್." ನಾನು ಅದನ್ನು ಓದಿ ಸಣ್ಣಗೆ ನಗುತ್ತಾ ನನ್ನ ಶ್ರೀಮತಿಯತ್ತ ನೋಡಿದೆ. ಅವಳು "ನಡೀರಿ, ಸುಮ್ಮನೆ. ಲೇಟಾಗಿದೆ. ಏನಕ್ಕೆ ಇದು?" ಎಂದಳು. "ಸುಮ್ಮನೆ. ಏನು ಹೇಳ್ತಾನೋ, ನೋಡೋಣ." ಅಂದೆ. ಆ ದಿನಗಳಲ್ಲಿ ನನಗೆ ಜ್ಯೊತಿಷ್ಯದ ಬಗ್ಗೆ ಆಸಕ್ತಿಯುಂಟಾಗಿ, ಜ್ಯೊತಿಷ್ಯ ಕುರಿತ ಹಲವಾರು ಪುಸ್ತಕಗಳನ್ನು ಓದಿ ತಿಳಿದುಕೊಳ್ಳುತಿದ್ದೆ. ಕೆಲವಾರು ಸಂದೇಹಗಳು ನನ್ನನ್ನು ಕಾಡುತ್ತಿದ್ದವು. ಆದರೆ ಫಲಜ್ಯೋತಿಷ್ಯದ ಬಗ್ಗೆ ನನ್ನ ನಂಬಿಕೆ ಕುಸಿಯತೊಡಗಿತ್ತು. ಈಗೀಗ ನನಗೆ ಅದು ಒಂದು ರೀತಿಯಲ್ಲಿ ಕೆಲವರ ಉದರಂಭರಣಕ್ಕೆ ಎಂದು ಅನ್ನಿಸತೊಡಗಿತ್ತು. ನನ್ನ ಬಲವಂತದಿಂದ ನನ್ನ ಶ್ರೀಮತಿಯು ನನ್ನ ಜೊತೆ ಆ ಜ್ಯೋತಿಷ್ಯಾಲಯಕ್ಕೆ ಬಂದಳು.

ಜ್ಯೋತಿಷ್ಯಾಲಯದ ಒಳಗೆ ಪ್ರವೇಶ ಮಾಡಿದಾಗ, ಒಳಗಡೆ ಒಂದು ರೀತಿಯ ಭಯವನ್ನು ಉಂಟುಮಾಡುವ ವಾತಾವರಣ ಇದ್ದಂತೆ ಅನ್ನಿಸಿತು. ನಾವು ಒಳಗೆ ಬಂದ ಬಾಗಿಲಿನ ಎದುರಿನ ಗೋಡೆಯ ಮೇಲೆ ಶಕ್ತಿಸ್ವರೂಪಣಿ ಪಾರ್ವತಿಯ ವಿವಿಧ ಫೋಟೋಗಳು. ಕೆಲವು ಅಪರೂಪದ ಚಿತ್ರಗಳು - ಕಾಮಾಖ್ಯ, ಮಹಿಷಾಸುರಮರ್ಧಿನಿ, ಸಂತೋಷಿ ಮಾ, ಶಿವ ಪಾರ್ವತಿ, .ಕಾಳಿಕಾದೇವಿ. ಅವುಗಳಲ್ಲಿ ಕಾಳಿಕಾದೇವಿಯ ಚಿತ್ರವೇ ಎಲ್ಲಕ್ಕಿಂತ ದೊಡ್ಡದಾಗಿ ಮಧ್ಯದಲ್ಲಿ ಇತ್ತು. ಆ ಚಿತ್ರದಲ್ಲಿ ಕಾಳಿಕಾದೇವಿಗೆ ನಾಲ್ಕು ಕೈಗಳು - ಒಂದು ಎಡ ಕೈಯಲ್ಲಿ ರಾಕ್ಷಸ ಚಂಡನ ತಲೆ, ಇನ್ನೊಂದು ಎಡಗೈಯಲ್ಲಿ ಒಂದು ಪಾತ್ರೆ. ಚಂಡನ ರುಂಡದಿಂದ ಸುರಿಯುತ್ತಿರುವ ರಕ್ತ ಈ ಪಾತ್ರೆಗೆ ಬೀಳುತ್ತಿದೆ. ಬಲಗೈವೊಂದರಲ್ಲಿ ಕೊಂಕಿದ ಖಡ್ಗ, ಇನೊಂದು ಬಲಗೈಯಲ್ಲಿ ತ್ರಿಶೂಲ. ರುಂಡಗಳ ನೀಳವಾದ ಮಾಲೆಯನ್ನು ಧರಿಸಿದ್ದಾಳೆ. ಸೊಂಟದ ಸುತ್ತ ಕತ್ತರಿಸಲ್ಪಟ್ಟ ರಾಕ್ಷಸರ ಕೈಗಳಿಂದ ಮಾಡಿದ ಡಾಬು! ಅವಳ ಬಲಗಾಲು ಕೆಳಗೆ ಬಿದ್ದಿರುವ ಶಿವನ ಎದೆಯ ಮೇಲೆ. ಕೋಪದಿಂದ ಕೂಡಿದ ಮುಖ. ಅವಳು ನಾಲಿಗೆಯನ್ನು ಹೊರಚಾಚಿದ್ದಾಳೆ. ನೋಡಲು ಭಯ ಹುಟ್ಟಿಸುವಂತಿತ್ತು. ಪ್ರತಿ ಚಿತ್ರಕ್ಕೂ ಕೆಂಪು ಹೂವಿನ ಹಾರ. ದೇವಿಯ ಮುಖಕ್ಕೆ ಅರಿಸಿನ ಕುಂಕಮದ ದಪ್ಪನೆಯ ಬೊಟ್ಟುಗಳು. ಎಲ್ಲಾ ಚಿತ್ರಗಳಿಗೂ ವಿಭೂತಿಯ ಗೆರೆಗಳು. ಕೆಳಗೆ ಆ ಗೋಡೆಯ ಉದ್ದಕ್ಕೂ ಎರಡು ಅಡಿ ಅಗಲದ  ಒಂದು ವೇದಿಕೆ. ಅದರ ಮೇಲೆ ಪಾರ್ವತಿ ಮತ್ತು ಗಣೇಶನ ಪ್ರತಿಮೆಗಳಿದ್ದವು. ಅವುಗಳ ಸುತ್ತಾ ಹೂವು ಚೆಲ್ಲಿತ್ತು. ಕೆಂಪು ಬಣ್ಣದ ಹೂವುಗಳೇ ಜಾಸ್ತಿ. ಗುಲಾಬಿ, ಕನಕಾಂಬರ, ಕಣಗಲೆ, ಸೇವಂತಿ ಹೂವುಗಳೂ ಇದ್ದವು. ಪಾರ್ವತಿಯ ಪ್ರತಿಮೆಯ ಹತ್ತಿರ ಸುತ್ತಾ ಕುಂಕುಮ ಚೆಲ್ಲಿತ್ತು. ಬಹುಶಃ ಕುಂಕುಮಾರ್ಚನೆ ಮಾಡಿದ್ದಿರಬೇಕು. ಪ್ರತಿಮೆಗಳ ಎರಡೂ ಕಡೆ ದೀಪದ ಕಂಬಗಳು, ಐದು ಬತ್ತಿಯವು. ಎರಡೂ ದೀಪಗಳ ಒಂದೊಂದು ಬತ್ತಿಯನ್ನು ಹೊತ್ತಿಸಿದ್ದರು. ಎರಡೂ ಕಡೆ ದೀಪದ ಪಕ್ಕ ಸ್ಟೀಲ್ ಲೋಟದಲ್ಲಿ ಊದುಬತ್ತಿ ಹೊತ್ತಿಸಿತ್ತು. ಊದುಬತ್ತಿಯ ಹೊಗೆ ಜೋರಾಗಿಯೇ ಬರುತ್ತಿತ್ತು; ಆರತಿ ತಟ್ಟೆ, ಸಾಮ್ರಾಣಿ ತಟ್ಟೆ ಮತ್ತಿತರ ಪೂಜಾ ಸಾಮಗ್ರಿಗಳಿದ್ದವು. ವೇದಿಕೆಯ ಮುಂದೆ ನೆಲದಲ್ಲಿ ಎನಾಮಲ್ ಬಣ್ಣದಲ್ಲಿ ಕಪ್ಪು, ಬಿಳಿ, ಕಿತ್ತಳೆ, ಹಸಿರು ಮತ್ತು ಹಳದಿ ಬಣ್ಣಗಳನ್ನು ಬಳಸಿ ಬರೆದ ಕಾಳಿಯಂತ್ರದ ಚಿತ್ತಾರವಿತ್ತು. ಇದರ ಮಧ್ಯೆ ಒಂದು ಕಳಶ. ಒಳಗೆ ಮಾವಿನ ಸೊಪ್ಪಿನ ಒಂದು ಸಣ್ಣ ಗೊಂಚಲು. ಕಳಶಕ್ಕೆ ಅರಿಸಿನ ಕುಂಕುಮಗಳಿಂದ ಪೂಜಿಸಿದ್ದರು.

ರಸ್ತೆ ಕಡೆಗಿದ್ದ ಗೋಡೆಯ ಮೂಲೆಗೆ ಗೋಡೆಗೆ ಲಗತ್ತಿಸಿದಂತೆ ಒಂದು ಮೇಜು. ಮೇಜಿನ ಒಂದು ಕಡೆ ಜ್ಯೋತಿಷಿಗೆ ಒಂದು ಕುರ್ಚಿ. ಇದರಲ್ಲಿ ಕುಳಿತ ಜ್ಯೋತಿಷಿಗೆ ಎದುರಿನ ರಸ್ತೆ ಕಾಣುವಂತಿತ್ತು. ಮೇಜಿನ ಮೇಲೆ ಒಂದಷ್ಟು ಕವಡೆಗಳು. ಒಂದು ಹಲಗೆ, ಕೆಲವು ಬಳಪಗಳು ಸಹ ಇದ್ದವು. ಹಾಗೂ ಕೆಲವು ಪುಸ್ತಕಗಳಿದ್ದವು. ಬಹುಶಃ ಜ್ಯೋತಿಷ್ಯ ಮತ್ತು ದೇವರ ಕುರಿತ ಪುಸ್ತಕಗಳಿದ್ದಿರಬಹುದು. ಎದುರು ಬದಿಯಲ್ಲಿ ನಾಲ್ಕು ಕುರ್ಚಿಗಳು. ಈ ನಾಲ್ಕು ಕುರ್ಚಿಗಳು ರಸ್ತೆ ಬದಿಯ ಗೋಡೆಗೆ ಹತ್ತಿಕೊಂಡಂತೆ ಇದ್ದವು. ನಾವು ಒಳ ಬಂದ ಬಾಗಿಲನ್ನು ಬಿಟ್ಟು ಉಳಿದ ಜಾಗವನ್ನು ಪೂರ್ತಿ ಅಕ್ರಮಿಸಿಕೊಂಡಿದ್ದವು. ಈ ಕುರ್ಚಿಗಳು ಬಂದವರು ಕುಳಿತುಕೊಳ್ಳಲು. ಈ ಕುರ್ಚಿಗಳಲ್ಲಿ ಕುಳಿತವರಿಗೆ ಫೋಟಗಳಿದ್ದ ಗೋಡೆ ಎದುರಿಗೆ ಕಾಣುತ್ತಿತ್ತು. ಪೂಜೆಗೆ ಇಟ್ಟಿದ್ದ ವಿಗ್ರಹಗಳು, ಕಳಶ, ಕಾಳಿಯಂತ್ರ ಎಲ್ಲಾ ಕಾಣುತ್ತಿದ್ದವು !

ರಸ್ತೆಗೆ ಮುಖಮಾಡಿದ ಕುರ್ಚಿಯಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದ. ಅವನ ತೋಳುಗಳು, ಹೊಟ್ಟೆ ಮತ್ತು ಹಣೆಯ ಮೇಲೆಲ್ಲಾ ವಿಭೂತಿಯ ಪಟ್ಟೆಗಳಿದ್ದವು. ಹಣೆಯ ಮಧ್ಯೆ ಒಂದು ದೊಡ್ಡ ಕೆಂಪು ಕುಂಕುಮದ ಬೊಟ್ಟಿತ್ತು. ಎರಡೂ ಕೈಗಳ ನಾಲ್ಕೂ ಬೆರಳುಗಳಿಗೂ ಉಂಗುರಗಳು. ವಿವಿಧ ಹರಳುಗಳಿದ್ದ ಎಂಟು ಉಂಗುರಗಳು. ಬಲಗೈಗೆ ಒಂದು ಚಿನ್ನದ ಕಡಗ. ಕುತ್ತಿಗೆಯಲ್ಲಿ ಎರಡು ದಪ್ಪ ಚೈನ್ ಸರಗಳು. ಈತನೇ ಹೊರಗೆ ಇದ್ದ ಬೋರ್ಡಿನಲ್ಲಿ ಹೇಳಿರುವ ಜ್ಯೋತಿಷಿ ಪಂ. ಶಂಕರ ಭಟ್ ಇರಬೇಕು ಅನ್ನಿಸಿತು. ಶ್ರೀಮಂತ ಜ್ಯೋತಿಷಿ ಎನ್ನಿಸಿತು. ವ್ಯಾಪಾರ ಚೆನ್ನಾಗಿರಬಹುದು ಎನ್ನಿಸಿತು. ನಾವು ಆತನಿಗೆ ನಮಸ್ಕರಿಸಿದೆವು. ಆತ ಮರುನಮಸ್ಕಾರ ಮಾಡಿ, "ಬನ್ನಿ. ಕುಳಿತುಕೊಳ್ಳಿ" ಎಂದು ತನ್ನ ಎದುರಿಗೆ ಇದ್ದ ಕುರ್ಚಿಗಳತ್ತ ಕೈ ತೋರಿಸಿದ. ನಾವು ಕುಳಿತ ನಂತರ ಅವನು "ಏನು ವಿಷಯ? ನಿಮ್ಮ ಸಮಸ್ಯೆ ಏನು?" ಎಂದು ಕೇಳಿದ. ನಾನು ಗೋಡೆಯ ಮೇಲಿದ್ದ ಫೋಟೋಗಳನ್ನು ಮತ್ತೊಮ್ಮೆ ನಿಧಾನವಾಗಿ ನೋಡಿ ನಂತರ ಆತನತ್ತ ತಿರುಗಿ "ನಿಮ್ಮ ಸಲಹೆ ಬೇಕಾಗಿತ್ತು. ನನ್ನ ಒಂದು ಕೆಲಸ ಆಗಬೇಕಿದೆ. ಅದು ಆಗುವುದೋ ಇಲ್ಲವೋ ಎಂದು ಚಿಂತೆ. ಅದಕ್ಕೆ ನಿಮ್ಮ ಸಲಹೆ ಪಡೆಯೋಣ ಅಂತ ಬಂದೆ" ಎಂದೆ. "ಏನು ನಿಮ್ಮ ಸಮಸ್ಯೆ ಹೇಳಿ", ಎಂದು ಆತ ಕೇಳಿದ. "ಅದು" ಎಂದು ಹೇಳಲು ಅನುಮಾನಿಸುವಂತೆ ಮಾಡಿದೆ. "ಹೇಳಿ ಏನು ಸಮಸ್ಯೆ? ಯಾವ ಸಂಕೋಚವೂ ಬೇಡ. ಇಲ್ಲಿ ಸಂಪೂರ್ಣ ಗೌಪ್ಯತೆ ಕಾಪಾಡುತ್ತೇವೆ" ಅಂತ ಆಶ್ವಾಸನೆ ಕೊಟ್ಟ. ಆಗ ನಾನು "ಕೊರ್ಟ್‌ನಲ್ಲಿ ಒಂದು ಕೇಸಿದೆ. ಬಿಸಿನೆಸ್ ವಿಚಾರವಾಗಿ. ನನ್ನ ಪರವಾಗಿ ಆಗುತ್ತೋ ಇಲ್ಲವೋ ಅಂತ" ಎಂದು ಹೇಳಿದೆ. ನಾನು ಹೇಳುತ್ತಿದ್ದ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಇದ್ದ ಆತ ಪೂಜಾಸ್ಥಳದಲ್ಲಿದ್ದ ಒಂದು ನಿಂಬೆಹಣ್ಣನ್ನು ಎತ್ತಿಕೊಂಡು ಬಂದು ಮೇಜಿನ ಮೇಲಿಟ್ಟ. ಮೇಜಿನ ಡ್ರಾಯರ್ ತೆಗೆದು ಒಳಗಿನಿಂದ ಹಸಿದಾರದ ಉಂಡೆ ತೆಗೆದುಕೊಂಡ. ಹಸಿದಾರವು ಅರಿಸಿದ ನೀರಿನಲ್ಲಿ ಅದ್ದಿ ಅದ್ದಿ ತೆಗೆದ ಹಾಗೆ ಹಳದಿ ಬಣ್ಣವಾಗಿತ್ತು. ಆ ಅರಿಸಿನ ಬಣ್ಣದ ದಾರವನ್ನು ನಿಂಬೆಹಣ್ಣಿನ ಮೇಲೆಲ್ಲಾ ಸುತ್ತತೊಡಗಿದ. "ಸಾಕಷ್ಟು ಹಣ ಬರಬಹುದು ಅಂತ ಕಾಣುತ್ತೆ." ಅಂತ ಆತ ಕೇಳಿದ. "ಹೌದು, ಹತ್ತು ಲಕ್ಷದ ವ್ಯವಹಾರ" ಎಂದು ನಾನು ಹೇಳಿದೆ. "ಯಾವಾಗಿನಿಂದ ಈ ಕೇಸ್ ಕೋರ್ಟಿನಲ್ಲಿದೆ?" ಎಂದು ಕೇಳುತ್ತಾ ನಿಂಬೆ ಹಣ್ಣಿನ ಮೇಲೆಲ್ಲಾ ಅರಿಸಿದ ದಾರ ಸುತ್ತುವ ಕೆಲಸ ಮುಂದುವರೆಸಿದ್ದ. ದಾರ ಸುತ್ತುವ ದಿಕ್ಕನ್ನು ಅಗಾಗ ಬದಲಿಸುತ್ತ ನಿಂಬೆ ಹಣ್ಣು ಮೇಲೆ ಪೂರ್ತಿ ದಾರ ಬರುವಂತೆ ದಾರ ಸುತ್ತುತ್ತಾ ಮಾತನಾಡುತಿದ್ದ. "ಸುಮಾರು ಹತ್ತು ವರ್ಷಗಳಿಂದ" ಎಂದೆ. "ಊಂ.." ಎನ್ನುತ್ತಾ ಇದ್ದ ಆತ ದಾರ ಸುತ್ತಿದ ಕೆಲಸ ಮುಗಿಸಿ ನಿಂಬೆ ಹಣ್ಣನ್ನು ಮೇಜಿನ ಮೇಲೆ ತನ್ನ ಹತ್ತಿರ ಇರಿಸಿಕೊಂಡ. "ಯಾರಿಂದ ಹಣ ಬರಬೇಕಿದೆ?" ಎಂದ. "ಅದು ಬೇಡ. ನಿಮಗೆ ನನ್ನ ಸಮಸ್ಯೆ ಬಗೆ ಹರಿಸಲು ಸಾಧ್ಯವೋ ಇಲ್ಲವೋ ತಿಳಿಸಿ" ಎಂದೆ. "ಆಯ್ತು. ಸಮಸ್ಯೆ ಪರಿಹರಿಸೋಣ." ಎಂದು ಹೇಳುತ್ತಾ ದಾರ ಸುತ್ತಿದ ಆ ನಿಂಬೆ ಹಣ್ಣನು ಮೇಜಿನ ಡ್ರಾಯರ್ ಒಳಗೆ ಇಟ್ಟ, ನಂತರ ಮೇಜಿನ ಮೇಲಿದ್ದ ಪಂಚಾಗ ತೆಗೆದುಕೊಂಡ. ನಿಮ್ಮ ಹುಟ್ಟಿದ್ದ ದಿನ, ಜಾಗ, ಸಮಯ ಹೇಳ್ತೀರಾ?" ಎಂದ. ನಾನು "ತಗೊಳ್ಳಿ ನನ್ನ ಜಾತಕ ಇಲ್ಲಿದೆ." ಎಂದು ಹೇಳಿ ನನ್ನ ಜೋಬಿನಿಂದ ಜಾತಕ ತೆಗೆದುಕೊಟ್ಟೆ. "ಜಾತಕ ಇರೋದು ಬಹಳ ಅನುಕೂಲ ಆಯ್ತು." ಎನ್ನುತ್ತಾ ಜಾತಕವನ್ನು ಪರಿಶೀಲಿಸತೊಡಗಿದ. ಸ್ವಲ್ಪ ಸಮಯ ಜಾತಕ ನೋಡಿ ನಂತರ ಪಂಚಾಗ ತೆಗೆದುಕೊಂಡು ಅವತ್ತಿನ ಪುಟ ತೆಗೆದು ನೋಡಿದ. "ಗೋಚಾರದಲ್ಲಿ ಅಶುಭ ಗ್ರಹಗಳಿಂದ ನಿಮಗೆ ತೊಂದರೆ ಇದೆ. ಈಗ ಒಂದು ನಿಂಬೆ ಹಣ್ಣನ್ನು ಮಂತ್ರಿಸಿ ಕೊಡುತ್ತೇನೆ. ನಾನೀಗ ಹೇಳುವ ಹಾಗೆ ಮಾಡಿ. ಈಗ ನೇರವಾಗಿ ಮನೆಗೆ ಹೋಗಿ, ಕೈಕಾಲು ಮುಖ ತೊಳೆದುಕೊಂಡು ಪೂಜಾರೂಂನಲ್ಲಿ ಒಂದು ಕಳಶವನ್ನಿಟ್ಟು ಅದಕ್ಕೆ ನೀರನ್ನು ತುಂಬಿ. ಅದರ ಒಳಗೆ ನಾನು ಮಂತ್ರಿಸಿ ಕೊಡುವ ನಿಂಬೆ ಹಣ್ಣನ್ನು ಮುಳುಗಿಸಿ. ಅರಿಸಿ, ಕುಂಕುಮ ಮತ್ತು ಹೂವುಗಳಿಂದ ಕಳಶದ ನೀರನ್ನು ಪೂಜಿಸಿ. ಊದುಬತ್ತಿ ಮತ್ತು ಕರ್ಪೂರದಾರತಿಯಿಂದ ಪೂಜೆ ಮಾಡಿ. ನಿಮ್ಮ ಮನೆದೇವರ ಪೂಜೆಯನ್ನೂ ಮಾಡಿ. ಪೂಜೆ ಎಲ್ಲಾ ಮುಗಿದ ಮೇಲೆ ಪೂಜಾರೂಂಗೆ ಬೀಗವನ್ನು ಹಾಕಿ. ನಾಳೆ ಸಂಜೆ ಇಲ್ಲಿಗೆ ಬರುವ ಒಂದು ಗಂಟೆ ಮೊದಲು ಪೂಜಾರೂಂ ಬೀಗ ತೆಗೆದು ಬಾಗಿಲು ತೆಗೆಯಿರಿ. ಕಳಶದ ಪೂಜೆಯನ್ನು ಮಾಡಿ, ನಂತರ ನಿಮ್ಮ ಮನೆದೇವರ ಪೂಜೆಯನ್ನೂ ಮಾಡಿ. ಪೂಜೆಯಾದ ಮೇಲೆ ಕಳಶದಲ್ಲಿಟ್ಟಿದ್ದ ನಿಂಬೆಯ ಹಣ್ಣನ್ನು ಹೊರ ತೆಗೆದು ಚೆನ್ನಾಗಿ ಒರೆಸಿ ಶುಭ್ರವಾದ ಕೆಂಪು ಬಟ್ಟೆಯಲ್ಲಿ ಸುತ್ತಿಕೊಂಡು ಮಡಿಯಿಂದ ಇಲ್ಲಿಗೆ ತೆಗೆದುಕೊಂಡು ಬನ್ನಿ. ನೀವು ತರುವ ನಿಂಬೆ ಹಣ್ಣನ್ನಿಟ್ಟು ನಾನು ದೇವಿ ಪೂಜೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕೇಳುತ್ತೇನೆ. ದೇವಿ ಏನು ಸೂಚಿಸುವಳೋ ನೋಡೋಣ. ಎಲ್ಲೂ ನೂ ಲೋಪವಾಗದಂತೆ ಎಚ್ಚರವಹಿಸಿ" ಎಂದ. "ಆಗಬಹುದು" ಎಂದೆ. ಜ್ಯೋತಿಷಿ ಮೇಜಿನ ಡ್ರಾಯರ್ ಹೊರಕ್ಕೆಳೆದು ಹಳದಿಯ ಹಸಿದಾರ ಸುತ್ತಿದ್ದ ನಿಂಬೆ ಹಣ್ಣನ್ನು ತೆಗೆದುಕೊಂಡು ಪೂಜೆಯ ಸ್ಥಳಕ್ಕೆ ಹೋಗಿ ಅರಿಸಿ ಕುಂಕುಮ ಸ್ವಲ್ಪ ಸಿಂಪಡಿಸಿ ಊದುಬತ್ತಿಯ ಹೊಗೆಯಲ್ಲಿ ಕ್ಷಣ ಹೊತ್ತು ಹಿಡಿದ. ಪಾರ್ವತಿಯ ಪ್ರತಿಮೆಗೆ ಮತ್ತು ಕಾಳಿಕಾದೇವಿಯ ಫೋಟೋಗೆ ತೋರಿಸಿ ನಂತರ ನಿಂಬೆಯ ಹಣ್ಣನ್ನು ಮುಷ್ಠಿಯಲ್ಲಿ ಹಿಡಿದು ಮೂಗಿನ ಮೇಲೆ, ಹುಬ್ಬಿನ ಮಧ್ಯ ಒತ್ತಿಕೊಂಡು ಕಣ್ಣು ಮುಚ್ಚಿ ಯಾವುದೋ ಮಂತ್ರವನ್ನು ಹೇಳಿಕೊಂಡ. ನಂತರ ಮಂತ್ರಿಸಿದ ಆ ನಿಂಬೆ ಹಣ್ಣನ್ನು ನನ್ನ ಬಲಗೈಗೆ ಕೊಟ್ಟ. "ಈಗ ನೂರು ರೂಪಾಯಿ ದಕ್ಷಿಣೆ ಕೊಡಿ. ನಾಳೆ ದೇವಿಯ ಸೂಚನೆ ನೋಡಿ ಖರ್ಚು ಎಷ್ತಾಗುತ್ತೆ ಅಂತ ಗೊತ್ತಾಗುತ್ತೆ" ಎಂದು ಹೇಳಿದ. "ಸರಿ ಆಗಲಿ" ಎಂದು ಹೇಳಿ ಅವನಿಗೆ ನೂರು ರೂಪಾಯಿ ದಕ್ಷಿಣೆ ಕೊಟ್ಟೆ. ನಾನು ಮತ್ತು ನನ್ನ ಹೆಂಡತಿ ಮನೆಯ ಕಡೆಗೆ ಹೊರೆಟೆವು.

ಮನೆಗೆ ಹೋಗುತ್ತಾ ನನ್ನ ಹೆಂಡತಿ ಕೇಳಿದಳು, "ಯಾವುದ್ ರೀ, ಕೇಸು; ನನಗೆ ಗೊತ್ತಿಲ್ಲದ್ದು?" "ಯಾವ್ ಕೇಸೂ ಇಲ್ಲ. ಸುಮ್ನೆ ಹೇಳ್ದೆ." ಎಂದು ನಾನಂದೆ. "ನೀವ್ ಒಬ್ಬರು. ಮಂತ್ರಿಸಿದ ನಿಂಬೆಹಣ್ಣು ಬೇರೆ ಕೊಟ್ಟಿದಾನೆ." ಎಂದಳು ನನ್ನ ಶ್ರೀಮತಿ. "ಏನ್ ಮಾಡ್ ಬೇಕ್ ಅಂತ ಹೇಳಿದಾನಲ್ಲ. ನಿಂಗೆ ಇಷ್ಟ ಇದ್ರೆ ಮಾಡು." ಎಂದೆ. ನನ್ನ ಶ್ರೀಮತಿಗೆ ಪೂಜೆ ಪುನಸ್ಕಾರಗಳಲ್ಲಿ ಬಹಳ ಶ್ರದ್ಧೆ. ಮನೆಗೆ ಹೋದ ಮೇಲೆ, ಅವಳು ಸ್ನಾನ ಮಾಡಿ ಬಂದು ಕಳಶವನ್ನಿಟ್ಟು, ಅದರಲ್ಲಿ ನಿಂಬೆ ಹಣ್ಣನ್ನು ಮುಳುಗಿಸಿದಳು. ಕಳಶದ ನೀರಿಗೆ ಅರಿಸಿ ಕುಂಕುಮ ಹಾಕಿದಳು. ಹೂವನ್ನೂ ಹಾಕಿದಳು. ಊದುಬತ್ತಿ ಮತ್ತು ಕರ್ಪೂರದಾರತಿಯಿಂದ ಪೂಜೆ ಮಾಡಿದಳು. ಆ ಜ್ಯೋತಿಷಿ ಹೇಳಿದ ಹಾಗೆ ಪೂಜೆಯನ್ನು ಮಾಡಿದ ನಂತರ ಪೂಜಾರೂಂನ ಬಾಗಿಲಿಗೆ ಬೀಗ ಹಾಕಿದಳು. ಮಾರನೆಯ ದಿನ ಮಧ್ಯಾಹ್ನ ಊಟವಾದ ನಂತರ ಸ್ವಲ್ಪ ಮಲಗಿದ್ದೆ. ನನ್ನ ಶ್ರೀಮತಿ "ಏನ್ ರೀ, ಬನ್ನಿ ಇಲ್ಲಿ ಬೇಗ" ಎಂದು ಜೋರಾಗಿ ಕರೆದಳು. ಧ್ವನಿಯಲ್ಲಿ ಭಯವಿದ್ದಂತೆ ಅನ್ನಿಸಿತು. "ಏನು? ಬಂದೆ" ಅನ್ನುತ್ತಾ ನಾನು ಬೆಡ್‌ರೂಂನಿಂದ ಬಂದೆ. ನನ್ನ ಹೆಂಡತಿ ಪೂಜಾರೂಂನಲ್ಲಿದ್ದಳು. "ಏನಾಯಿತು?" ಎಂದೆ. "ನೋಡೀಂದ್ರೆ,. ಮಂತ್ರಿಸಿದ ನಿಂಬೆ ಹಣ್ಣು ಇಲ್ಲ. ಮಾಯವಾಗಿದೆ." ಎಂದಳು. ಅವಳ ಕೈಯಲ್ಲಿ ಅರಿಸಿದ ದಾರ ಗೋಜಲಾಗಿ ಉಂಡೆಯಂತೆ ಅವಳ ಕೈಯಲ್ಲಿತ್ತು. ಅವಳ ಕೈ ಅರಿಸಿ ಕುಂಕುಮದ ಓಕಳಿ ನೀರಿನಲ್ಲಿ ಅದ್ದಿದಂತಿತ್ತು. ಆಗ ನನಗರ್ಥವಾಯಿತು: ಅವಳು ಆ ಜ್ಯೋತಿಷಿ ಹೇಳಿದಂತೆ ಪೂಜಾರೂಂನ್ ಬಾಗಿಲು ತೆಗೆದು ಕಳಶಕ್ಕೆ ಪೂಜೆ ಮಾಡಿದ್ದಾಳೆ. ಕೆಂಪು ಬಟ್ಟೆಯೊಂದನ್ನು ಸಿದ್ಧವಾಗಿಟ್ಟುಕೊಂಡು ಕಳಶದ ನೀರಿನಿಂದ ಮಂತ್ರಿಸಿದ ನಿಂಬೆ ಹಣ್ಣನ್ನು ಹೊರಗೆ ತೆಗೆಯಲು ಹೋಗಿದ್ದಾಳೆ. ಅಲ್ಲಿ ಮಂತ್ರಿಸಿದ ನಿಂಬೆಹಣ್ಣು ಇಲ್ಲ! ಕೇವಲ ಅದರ ಮೇಲೆ ಸುತ್ತಿದ್ದ ದಾರದ ಗೋಜಲು ಮಾತ್ರ ಅವಳ ಕೈಯಲ್ಲಿದೆ. "ಅಷ್ಟೇ ತಾನೆ. ಬಿಡು." ಎಂದು ನಾನೆಂದಾಗ ಅವಳು "ಏನು, ಅಷ್ಟೇ ತಾನೆ?! ಒಳ್ಳೇ ಫಜೀತಿ ತಂದಿಟ್ರಿ. ಏನೋ ಮಾಟ ಮಾಡಿದ್ದಾನೆ? ಗ್ರಹಚಾರ. ಏನಾಗುತ್ತೋ ? ಬನ್ನಿ ಅವನ ಹತ್ತಿರ ಹೋಗೋಣ" ಎಂದಳು. "ಏನೂ ಬೇಡ. ಏನಾಗಿದೆ ಅಂತ ಯೋಚಿಸೋಣ", ಎಂದು ನಾನಂದೆ. ನನ್ನ ಹೆಂಡತಿ ಮಾತ್ರ ಬೇಜಾರು ಮತ್ತು ಆತಂಕದಿಂದ ಚಡಪಡಿಸುತ್ತಿದ್ದಳು.

ಮಾರನೆಯ ದಿನ ಬೆಳಿಗ್ಗೆ ನನ್ನ ಶ್ರೀಮತಿ ತನ್ನ ವಾರಗಿತ್ತಿ ಅಂದರೆ ನನ್ನ ತಮ್ಮನ ಹೆಂಡತಿಯ ಹತ್ತಿರ ಆ ಜ್ಯೋತಿಷಿಯ ಬಗ್ಗೆ ವಿಚಾರಿಸುತ್ತಿದ್ದಳು. ನನ್ನ ತಮ್ಮನಿಗೆ ಜ್ಯೋತಿಷಿಗಳ ಬಳಿ ಭವಿಷ್ಯ ಕೇಳುವ ಚಟ. ನನ್ನ ನಾದಿನಿ ಹೇಳಿದಳು "ಓ, ಹೌದಾ? ಆ ಜ್ಯೋತಿಷೀನೇ ಇವರ ಕೊಲೀಗ್ ಒಬ್ಬರಿಗೆ ಹೀಗೇ ಮಾಡಿದ್ದನಂತೆ..." ಅವರು ಅವನ ಹತ್ತಿರ ಜ್ಯೋತಿಷ್ಯ ಕೇಳಲು ಹೋಗಿದ್ದಾಗ ಇದೇ ರೀತಿ ನಿಂಬೇ ಹಣ್ಣನ್ನು ಮಂತ್ರಿಸಿ ಕೊಟ್ಟಿದ್ದನಂತೆ. ನಿಂಬೇಹಣ್ಣು ಮಾಯವಾದಾಗ ಅವರು ಹೆದರಿ ಅವನ ಹತ್ತಿರ ಹೋದಾಗ ಅವನು "ಏನೋ ಅಪಚಾರವಾಗಿದೆ. ದೇವಿ ನಿಮ್ಮ ಮೇಲೆ ಮುನಿಸಿಕೊಂಡಿದ್ದಾಳೆ. ನಿಮಗೆ ಕಷ್ಟ ಕಾದಿದೆ." ಎಂದೆಲ್ಲಾ ಹೆದರಿಸಿದನಂತೆ. ಆಗಲಂತೂ ಅವರಿಗೆ ತುಂಬಾ ಭಯವಾಯಿತಂತೆ. "ಈಗ ಏನು ಮಾಡೋದು?" ಎಂದು ಅವನನ್ನು ಕೇಳಿದರಂತೆ. ದೇವಿಯನ್ನು ಶಾಂತಗೊಳಿಸಲು ಯಾವುದೋ ಹೋಮ, ಪೂಜೆ ಮಾಡಬೇಕು ಎಂದೆಲ್ಲಾ ಹೇಳಿ ಸುಮಾರು ಎಂಟು ಹತ್ತು ಸಾವಿರ ಖರ್ಚು ಮಾಡಿಸಿದನಂತೆ. "ಅದೇ, ನಮ್ಮ ಅಪಾರ್ಟ್‌ಮೆಂಟ್ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಇದ್ದರಲ್ಲಾ ರವಿ, ಅವರಿಗೂ ಹೀಗೆ ಮಾಡಿದ್ದು ಅವನು" ಎಂದು ಹೇಳಿದಳು ನನ್ನ ನಾದಿನಿ. ನನ್ನ ತಮ್ಮ, ಅವನ ಹೆಂಡತಿ ಮತ್ತು ಮಗ ಮನೆಗೆ ಬಂದಿದ್ದರು. ಸಂಕ್ರಾಂತಿ ಹಬ್ಬಕ್ಕೆ ಇಬ್ಬರೂ ಸೇರಿ ಸಕ್ಕರೆ ಅಚ್ಚು ಮಾಡಿಕ್ಕೊಳ್ಳುತ್ತಿದ್ದರು. ಹಾಲ್‌ನಲ್ಲಿ ಕುಳಿತಿದ್ದ ನನಗೆ ನನ್ನ ಶ್ರೀಮತಿ ಮತ್ತು ನನ್ನ  ನಾದಿನಿ ಮಾತನಾಡುವುದು ಕೇಳಿಸುತ್ತಿತ್ತು. "ಏನೋ ಅದು ಕೃಷ್ಣ?" ಅಂತ ನನ್ನ ಪಕ್ಕದಲಲ್ಲಿ ಕುಳಿತಿದ್ದ ನನ್ನ ತಮ್ಮನನ್ನು ಕೇಳಿದೆ. "ರವಿ ಅವರಿಗೆ ಸುಮ್ಮನೆ ಖರ್ಚು ಮಾಡಿಸಿದ ಆ ಢೋಂಗಿ ಜ್ಯೋತಿಷಿ. ರವಿ ಅವನ್ ಹತ್ತಿರ ಯಾವ ಪ್ರಶ್ನೆ ಕೇಳಿದ್ದರೋ ಅದಕ್ಕೆ ಅವನಿಂದ ಪರಿಹಾರನೂ ಸಿಗಲಿಲ್ಲ.", ಎಂದು ಹೇಳಿದ ನನ್ನ ತಮ್ಮ. "ಭವಿಷ್ಯ ಕೇಳೋಕೇ ಹೋಗಬಾರದು", ಎಂದು ನಾನು ಹೇಳಿದೆ. ಇದನ್ನು ಕೇಳಿಸಿಕೊಂಡ ನನ್ನ ಶ್ರೀಮತಿ ಅಡುಗೆಮನೆಯಿಂದ ಹಾಲ್‍ಗೆ ಬಂದು "ಆಹಾ, ಏನ್ ಮಾತಾಡ್ತೀರಿ? ನಿನ್ನೆ ನೀವು ಏಕೆ ಹೋಗಿದ್ದು?" ಎಂದು ನನ್ನನ್ನು ಮೂದಲಿಸಿದಳು. "ನಾನೇನೂ ಯಾವುದೇ ಪರಿಹಾರಕ್ಕೆ ಅವನ ಹತ್ತಿರ ಹೋಗಿರಲ್ಲಿಲ್ಲ. ಸುಮ್ಮನೆ ಕುತೂಹಲಕ್ಕೆ. ಅದು ನಿನಗೂ ಗೊತ್ತು." ಎಂದೆ. "ಏನೋ? ಈಗ ನೋಡಿ ಏನಾಗಿದೆ?" ಎಂದು ಕೇಳಿದಳು ನನ್ನ ಶ್ರೀಮತಿ.

ಅಷ್ಟರಲ್ಲಿ ನನ್ನ ತಮ್ಮನ ಮಗ ಮೂರು ವರ್ಷದ ಅಭಿಷೇಕ್ ಅಳುತ್ತಾ ಅವನ ಅಮ್ಮನ ಹತ್ತಿರ ಬಂದ. "ಏನಾಯಿತೋ?" ಎಂದು ಅವನನ್ನು ನನ್ನ ನಾದಿನಿ ಕೇಳಿದಳು. "ಅಮ್ಮ ನೀನು ಕೊಟ್ಟ ಆನೆ ನೀರಲ್ಲಿ ಬಿದ್ ಹೋಯ್ತು. ತೆಕ್ಕೊಡು ಬಾ." ಅಂದ. ಆನೆ ಆಕಾರದ ಸಕ್ಕರೆ ಅಚ್ಚು ಡೈನಿಂಗ್ ಟೇಬಲ್ ಮೇಲಿದ್ದ ನೀರಿನ ಮಗ್‌ನಲ್ಲಿ ಬಿದ್ದುಬಿಟ್ಟಿತ್ತು. "ಇರು ಒಂದ್ ನಿಮಿಷ. ಪಾಕ ಆರಿ ಹೋಗುತ್ತೆ. ಅಚ್ಚಲ್ಲಿ ಹಾಕಿ ಬಂದು ತೆಕೋಡ್ತೀನಿ" ಎಂದು ಅಡಿಗೆ ಮನೆಗೆ ಹೋದಳು ನನ್ನ ನಾದಿನಿ ತನ್ನ ಅತ್ತಿಗೆ ಜೊತೆ. ಸ್ವಲ್ಪ ಸಮಯದ ನಂತರ ಬಂದು ನೀರಿನಲ್ಲಿ ಬಿದ್ದಿದ್ದ ಸಕ್ಕರೆ ಅಚ್ಚನ್ನು ತೆಗೆದು ಮಗನಿಗೆ ಕೊಟ್ಟಳು. ಅವನು ಅಳಲು ಶುರು ಮಾಡಿದ. "ಏನೋ ಯ್ತು?" ಎಂದು ನಾನು ಅವನನ್ನು ಕೇಳಿದೆ. ಅವನು ಅಳುತ್ತಾ "ನೋಡಿ ದೊಡ್ಡಪ್ಪ, ಆನೆ ಕಾಲು ಇಲ್ವೇ ಇಲ್ಲ." ಎಂದ. "ಎಲ್ಲಿ ಕೊಡು ಇಲ್ಲಿ" ಎಂದು ಅವನ ಹತ್ತಿರ ಇದ್ದ ಸಕ್ಕರೆ ಅಚ್ಚನ್ನು ಇಸಕೊಂಡೆ. ನೋಡಿದರೆ ಸಕ್ಕರೆ ಅಚ್ಚು ನೀರಿನಲ್ಲಿ ಐದು ಹತ್ತು ನಿಮಿಷ ಮುಳುಗಿದ್ದರಿಂದ ಸ್ವಲ್ಪ ಕರಗಿತ್ತು. ಆನೆಯ ಕಾಲುಗಳು, ಸೊಂಡಿಲು ಹಾಗೂ ಸುತ್ತಾ ಅಂಚೆಲ್ಲಾ ನೀರಿನಲ್ಲಿ ಕರಗಿದ್ದವು. ಆ ಸಕ್ಕರೆ ಅಚ್ಚನ್ನು ನೋಡುತ್ತಿದ್ದಂತೆ ನನಗೆ ಹೊಳೆಯಿತು ಆ ಜ್ಯೋತಿಷಿ ಏನು ಮಾಡಿದ್ದಾನೆ ಎಂದು. "ಲೇ ಪದ್ಮ, ಬಾರೇ ಇಲ್ಲಿ. ನೀನೂ ಬಾಮ್ಮ ಲಕ್ಷ್ಮಿ" ಎಂದು ಅಡಿಗೆ ಮನೆಯಲ್ಲಿದ್ದ ನನ್ನ ಹೆಂಡತಿ ಮತ್ತು ನನ್ನ ತಮ್ಮನ ಹೆಂಡತಿ ಇಬ್ಬರನ್ನೂ ಕರೆದೆ. ಅವರಿಬ್ಬರೂ ಹಾಲ್‌ಗೆ ಬಂದು ದೀವಾನ ಮೇಲೆ ಕುಳಿತುಕೊಳ್ಳೂತ್ತಾ "ಏನು?" ಎಂದರು. "ಆ ಜ್ಯೋತಿಷಿ ಏನ್ ಟ್ರಿಕ್ ಮಾಡ್ತಿದ್ದಾನೆ ಅಂತ ಗೊತ್ತಾಗಿ ಹೋಯಿತು." ಎಂದೆ. "ಇಲ್ಲಿ ನೋಡಿ ಸಕ್ಕರೆ ಅಚ್ಚು ಐದ್ ಹತ್ ನಿಮಿಷ ನೀರಲ್ಲಿ ಇದ್ದಿದ್ದಕ್ಕೆ ಎಷ್ಟ್ ಕರಗಿ ಹೋಗಿದೆ. ಅವನು ನಮಗೆ ನಿಂಬೆ ಹಣ್ಣಿನಂತೆ ಗುಂಡಗಿದ್ದ ಸಕ್ಕರೆ ಅಥವಾ ಬತ್ತಾಸು ಉಂಡೆಗೆ ದಾರ ಸುತ್ತಿ ಕೊಟ್ಟಿದ್ದ. ಅದಕ್ಕೇ ಅದು ನೀರಿನಲ್ಲಿ ರಾತ್ರಿಯೆಲ್ಲಾ ಇಟ್ಟಿದ್ದರಿಂದ ಕರಗಿ ಹೋಗಿದೆ. ಅಷ್ಟೇ." ಎಂದೆ. "ಅದು ಹೇಗ್ರೀ? ನಮ್ಮ ಎದುರಿನಲ್ಲೇ ನಿಂಬೇ ಹಣ್ಣಿಗೇ ದಾರ ಸುತ್ತುತ್ತಿದ್ನಲ್ಲಾ" ಎಂದಳು ನನ್ನ ಶ್ರೀಮತಿ. "ನೆನಪಿಸ್ಕೋ. ನಿನ್ನೆ ಅವನು ಏನ್ ಮಾಡ್ದ. ನಿಂಬೆಹಣ್ಣಿಗೆ ನಮ್ಮ ಎದುರಿನಲ್ಲೇ ದಾರ ಏನೋ ಸುತ್ತಿದ. ಆ ನಿಂಬೇ ಹಣ್ಣನ್ನ ಮೇಜಿನ ಮೇಲೆ ಇಟ್ಟಿದ್ದ. ಅದು ಸರಿ. ಆದರೆ ಪಂಚಾಂಗ ತೆಗೆಯೋದಿಕ್ಕೆ ಮೇಜಿನ ಮೇಲೆ ಜಾಗ ಬೇಕೂಂತ ನಿಂಬೆಹಣ್ಣು ಮೇಜಿನ ಡ್ರಾಯರ್ ಒಳಗೆ ಇಟ್ಟ ಅಲ್ವ? ನೆನಪಿಸ್ಕೋ?" ಎಂದು ನಾನು ಹೇಳಿದಾಗ "ಹೌದು." ಎಂದಳು ನನ್ನ ಶ್ರೀಮತಿ. "ಕೊನೇಲ್ಲಿ ಕೊಡುವಾಗ ಮೇಜಿನ ಡ್ರಾಯರ್ ಇಂದ ತೆಗೆದು ಕೊಟ್ಟಿದ್ದು ಆ ನಿಂಬೇ ಹಣ್ಣಲ್ಲ. ಅವನು ಮೊದಲೇ ಮಾಡಿಟ್ಟಿದ್ದ ಸಕ್ಕರೆ ಉಂಡೆ! ಅಲ್ಲೇ ಅವನು ಕರಾಮತ್ತು ಮಾಡಿದ್ದು. ನಿಂಬೆ ಹಣ್ಣನ್ನ ಹಾಗೇ ಕೊಡಬಹುದಿತ್ತು. ದಾರದಲ್ಲಿ ಸುತ್ತಿಕೊಟ್ಟಿದೇಕೆ ? ಮೋಸಮಾಡುವ ಉದ್ದೇಶವಿಲ್ಲದಿದ್ದರೆ ನಿಂಬೇಹಣ್ಣನ್ನು ಹಾಗೇ ಕೊಡಬಹುದಿತ್ತು.  ಯೋಚನೆ ಮಾಡಿ." ಎಂದು ನಾನಂದೆ. ಎಲ್ಲರೂ"ಹೌದ್ ಅಲ್ವಾ!" ಎಂದು ಆಶ್ಚರ್ಯಪಟ್ಟರು. "ಅದಕ್ಕೇ ನಾನು ಯಾವಾಗಲೂ ಹೇಳೋದು 'ನೋಡಿದ್ದೂ ಸುಳ್ಳಾಗಬಹುದು. ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು' ಅಂತ" ಎಂದು ಹೇಳಿದೆ.

Saturday, February 16, 2013

ಕನಕದಾಸರ ಹರಿಭಕ್ತಸಾರ : ವೈಚಾರಿಕ ವಿವೇಚನೆ


                      ಡಾ. ಸಿದ್ರಾಮ ಕಾರಣಿಕ
ದಾಸ ಸಾಹಿತ್ಯದ ಇತಿಹಾಸದಲ್ಲಿ ಅಖಂಡ ಪ್ರತಿಭೆಯ ಕವಿತಾಶಕ್ತಿ ಹೊಂದಿದ ಪ್ರಮುಖರು ಎಂದರೆ ಕನಕದಾಸರು. ದಾಸ ಸಾಹಿತ್ಯದ ಕೀರ್ತನೆಗಳ ಜೊತೆಗೆ ಕೀರ್ತನೇತರ ಹೃದಯಸ್ಪರ್ಷಿ ಸಾಹಿತ್ಯ ಸಂಪತ್ತನ್ನು ಸೃಷ್ಟಿಸಿ ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾದುದು ; ಅನುಪಮವಾದುದು.  ಒಂದು ಕಾಲದಲ್ಲಿ ಊರೊಂದರ ಒಡೆಯನಾಗಿ, ನಾಯಕನಾಗಿ ಬಾಳಿ ಜನಮನ್ನಣೆ ಗಳಿಸಿದ ಕನಕದಾಸರು ದೈಹಿಕ ಬಲಕ್ಕಿಂತ ಆಧ್ಯಾತ್ಮಿಕ ಬಲವೇ ಮಿಗಿಲೆಂದು ಭಾವಿಸಿ ದೈವದ ಹುಡುಕಾಟದಲ್ಲಿ ದಾಸರಾದದ್ದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.
ಸುಮಾರು 1550 ರಲ್ಲಿದ್ದ ಕನಕದಾಸರ ಬಗ್ಗೆ ಹಲವಾರು ದಂತಕತೆಗಳು, ಪವಾಡ ಕತೆಗಳು ಜನಮಾನಸದಲ್ಲಿ ಹುಟ್ಟಿಕೊಂಡಿವೆ.  ಆ ಎಲ್ಲ ಮೂಲಗಳ ಜೊತೆಗೆ ಅವರ ಸಾಹಿತ್ಯದಲ್ಲಿ ದೊರೆತ ಕೆಲವು ಅಂಶಗಳನ್ನು ಇಟ್ಟುಕೊಂಡು ಅವಿಭಾಜಿತ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಾಡ ಗ್ರಾಮದಲ್ಲಿ ಕನಕದಾಸರು ಜನಿಸಿದರು ಎಂಬುದನ್ನು ಸಂಶೋಧಕರು ಸಾದರಪಡಿಸಿದ್ದಾರೆ. ಕನಕದಾಸರ ಮೂಲ ಹೆಸರು ತಿಮ್ಮಪ್ಪ (ತಿಮ್ಮಪ್ಪಗೌಡ). ತಂದೆ, ಬೀರಗೌಡ (ಬೀರಪ್ಪ), ತಾಯಿ ಬಚ್ಚಮ್ಮ. ತಂದೆ ಬೀರಪ್ಪ ಊರಗೌಡನೂ ವಿಜಯನಗರ ಅರಸರ ಪಾಳೆಯಗಾರನೂ ಆಗಿದ್ದ ಎಂಬುದನ್ನು ಇತಿಹಾಸಕಾರರು ತಿಳಿಸುತ್ತಾರೆ. ಕನಕದಾಸರು ಬಾಲಕನಾಗಿರುವಾಗಲೇ ತಂದೆ-ತಾಯಿಯರನ್ನು ಕಳೆದುಕೊಂಡು ತಬ್ಬಲಿಯಾದರು ಎಂದು ಹೇಳಲಾಗುತ್ತದೆ.
ಕನಕದಾಸರು ಪುರಾಣ-ಶಾಸ್ತ್ರಗಳ ಜೊತೆಗೆ ಯುದ್ಧಕೌಶಲವನ್ನೂ ಕಲೆತ್ತಿದ್ದರು. ಅವರಿಗೆ ಮದುವೆಯಾಗಿ ಒಂದು ಗಂಡುಮಗುವೂ ಇತ್ತೆಂದು ಕೆಲವು ವಿದ್ವಾಂಸರು ತಿಳಿಸಿದ್ದಾರೆ.  ಹೊಲ ಊಳುವಾಗ ಸಿಕ್ಕ ಏಳು ಕೊಪ್ಪರಿಗೆ ಚಿನ್ನವನ್ನು ಜನೋಪಯೋಗಿ ಕಾರ್ಯಗಳಿಗೆ ಸದ್ವಿನಿಯೋಗ ಮಾಡಿದ ಕಾರಣ ತಿಮ್ಮಪ್ಪ ನಾಯಕ ಕನಕಪ್ಪ, ಕನಕನಾಯಕ ಎಂಬ ಹೆಸರಿಗೆ ಭಾಜನರಾದರು. ತಂದೆ-ತಾಯಿ, ಹೆಂಡತಿ-ಮಗ ಎಲ್ಲರೂ ತೀರಿಕೊಂಡ ನಂತರದಲ್ಲಿ ವೈರಾಗ್ಯದತ್ತ ವಾಲಿದ ಕನಕದಾಸರು ರಕ್ಕಸತಂಗಡಿ ಕಾಳಗದ ದುಷ್ಪರಿಣಾಮವನ್ನು ಕಣ್ಣಾರೆ ಕಂಡು ಸಂಪೂರ್ಣವಾಗಿ ವೈರಾಗ್ಯ ಹೊಂದಿದರು. ತಮ್ಮ ಕೀರ್ತನೆಗಳ ಮೂಲಕ ನಾಡನ್ನು ಸುತ್ತಿ ಜನಜಾಗರವನ್ನು ಮಾಡುತ್ತ ಕಾಗಿನೆಲೆಯ ಕೇಶವ ದೇವಾಲಯದ ಸಮೀಪ ಬದುಕನ್ನು ಕಳೆದರು ಅಲ್ಲಿ ಕನಕದಾಸರ ಸಮಾಧಿ ಇದೆ. ಕನಕದಾಸರ ಮನೆತನದವರು ಇಂದಿಗೂ ಅಲ್ಲಿ ನೆಲೆಸಿದ್ದಾರೆ.
ಕನಕದಾಸರು, ದಾಸಶ್ರೇಷ್ಟರಾಗಿ ಕೀರ್ತನೆಗಳಲ್ಲದೇ ಮುಂಡಿಗೆಗಳನ್ನೂ ರಚಿಸಿದ್ದಾರೆ. ನಳ ಚರಿತ್ರೆ, ರಾಮಧ್ಯಾನ ಚರಿತೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಎಂಬ ಕೃತಿಗಳನ್ನೂ ರಚಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಕೀರ್ತನೆಗಳ ಜೊತೆಗೆ ಕೀರ್ತನೇತರ ಸಾಹಿತ್ಯ ಕೃತಿಗಳಿಂದ ಗಮನ ಸೆಳೆಯುತ್ತಾರೆ. ಅವರ ಸಾಹಿತ್ಯಾಸಕ್ತಿ ಕೇವಲ ಬರೆಯಬೇಕು ಎಂಬುದಷ್ಟೇ ಆಗಿರಲಿಲ್ಲ ; ತಾವು ಬರೆದ ಸಾಹಿತ್ಯದಿಂದ ಜನ ಜಾಗೃತಿಯಾಗಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದರು. ಸಾಮಾಜಿಕ ಪ್ರಜ್ಞೆಯ ವಿಕಸನಕ್ಕೆ ಬೇಕಾದ ಮಾರ್ಗಗಳು ಅವರ ಸಾಹಿತ್ಯದಲ್ಲಿ ತುಂಬ ವೈಚಾರಿಕ ಪ್ರಬುದ್ಧತೆಯಿಂದ ಕಾಣಿಸಿಕೊಳ್ಳುತ್ತವೆ. ಪ್ರತಿಯೊಂದು ಕೃತಿಯಲ್ಲಿಯೂ ಕನಕದಾಸರು ಕವಿತ್ವ-ಕಲ್ಪನೆಗಳ ಜೊತೆಗೆ ವಾಸ್ತವ ನಿಲುವುಗಳನ್ನು ಪ್ರಕಟಿಸಿರುವುದು ಕಂಡು ಬರುತ್ತದೆ. ಅವರ ಭಕ್ತಿಯಿಂದ ಭಜಿಸಿದ ‘ಹರಿಭಕ್ತಿಸಾರ’ ಕೂಡ ಆ ವೈಚಾರಿಕ ಮತ್ತು ವಾಸ್ತವದ ನೆಲೆಯಲ್ಲಿಯೇ ಮೂಡಿರುವುದು ಗಮನೀಯ.
ಹರಿಭಕ್ತಿಸಾರವು ಭಾಮಿನಿ ಷಟ್ಪದಿಯಲ್ಲಿದ್ದು 111 ಪದ್ಯಗಳನ್ನು ಒಳಗೊಂಡಿದೆ. ಇದನ್ನು ಶತಕ ಗ್ರಂಥ ಎಂದೂ ಕರೆಯಲಾಗಿದೆ. ಶತಕ ಸಾಹಿತ್ಯವನ್ನು ಮುಖ್ಯವಾಗಿ ಯಾವುದಾದರೂ ಒಂದು ತತ್ವವನ್ನೋ ನೀತಿಯನ್ನೋ ಹೇಳುವುದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಇಲ್ಲಿ ನಿರ್ದಿಷ್ಟವಾದ ಕಥಾವಸ್ತು ಇಲ್ಲದಿದ್ದರೂ ಕವಿಯ ಮನೋಧರ್ಮದ ಸ್ವಾತಂತ್ರ್ಯ ಇರುತ್ತದೆ.
ಹರಿಭಕ್ತಿಸಾರದಲ್ಲಿ ಕನಕದಾಸರು ಭಕ್ತಿ, ಜ್ಞಾನ, ವೈರಾಗ್ಯ, ನೀತಿ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿದ್ದು, ಪ್ರತಿ ಪದ್ಯವೂ ‘ರಕ್ಷಿಸು ನಮ್ಮನನವರತ’ ಎಂಬುದಾಗಿ ಕೊನೆಗೊಳ್ಳುತ್ತದೆ. ತಮಗೊದಗಿದ ಎಲ್ಲ ಸಮಸ್ಯೆಗಳನ್ನು ಬದಿಗೊತ್ತಿ, ಹರಿಭಕ್ತಿಯ ಹಿರಿಮೆ-ಗರಿಮೆಗಳನ್ನು, ಆತ್ಮನ ಅನಿತ್ಯಾಭಾವ ಮತ್ತು ಅನನ್ಯವಾದ ಶರಣಾಗತಿಯನ್ನು ಇಲ್ಲಿಯ ಪದ್ಯಗಳಲ್ಲಿ ಅಳವಟ್ಟಿವೆ. ಸಾಮಾನ್ಯವಾದ ನಿಯಮದಂತೆ ಹರಿಯ ಸ್ತ್ರೋತ್ರ, ರಚನೆಯ ಉದ್ದೇಶ, ಹರಿಯ ಅವತಾರಗಳ ಕಲ್ಪನೆ, ಮನುಷ್ಯನ ನಿಸ್ಸಹಾಯಕತೆ ಮತ್ತು ಕೃತಿವಾಚಕರಿಗೆ, ಶ್ರವಣರಿಗೆ ಸಿಗುವ ಫಲಶೃತಿಗಳನ್ನು ಇಲ್ಲಿಯೂ ನಿರೂಪಿಸಲಾಗಿದೆ. ಹಾಗೆ ನಿರೂಪಿಸುತ್ತಲೇ ವ್ಯಂಗ್ಯ, ಅಣಕಗಳನ್ನೂ ಮಾಡುವ ಮೂಲಕ ವೈಚಾರಿಕ ದೃಷ್ಟಿಕೋನಕ್ಕೆ ಇಲ್ಲಿ ಎಡೆ ದೊರೆತಿದೆ.
ಹರಿಭಕ್ತಿಸಾರದ ಮೊದಲ ಹದಿನೇಳು ಪದ್ಯಗಳು ಹರಿಯ ನೆಲೆ-ನಿಲುವುಗಳನ್ನು ಹೇಳಲಾಗಿದ್ದು, ಕೊನೆಯ ಪದ್ಯವೊಂದನ್ನು ಬಿಟ್ಟರೆ ಉಳಿದೆಲ್ಲವೂ ಸಂಸ್ಕøತಭೂಯಿಷ್ಟವಾಗಿವೆ. ಇದು ಕನಕದಾಸರ ಸಂಸ್ಕøತ ಪಾಂಡಿತ್ಯವನ್ನೂ ತೋರಿಸುತ್ತದೆ. ಆನಂತರದಲ್ಲಿ ಸುರಪುರದ ಉಲ್ಲೇಖ ಕೂಡ ಬರುತ್ತದೆ.  ಇದರ ಆಧಾರದ ಮೇಲೆಯೇ ಈ ಕೃತಿ ಕನಕದಾಸರದು ಎಂದು ಸಾಬೀತಾಯಿತು. ಸುರಪುರವನ್ನು ಬಿಟ್ಟರೆ ಎಲ್ಲಿಯೂ ತಮ್ಮ ಹೆಸರನ್ನು, ವೈಯಕ್ತಿಕ ವಿಷಯಗಳನ್ನು ಕನಕದಾಸರು ಹೇಳಿಕೊಂಡಿಲ್ಲ.  ಈ ಸುರಪುರವೇ ವರಪುರ, ಬೇಲೂರು ಎಂದುಕೊಂಡ ವಿದ್ವಾಂಸರು ಕನಕದಾಸರು ಬೇಲೂರಿನಲ್ಲಿಯೇ ಈ ಕೃತಿಯನ್ನು ರಚಿಸಿರಬೇಕು ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಬೇರೆ ಕಡೆ ಇದ್ದ ಕನಕದಾಸರು ಸುರಪುರ ಚೆನ್ನಿಗರಾಯನ ಪ್ರಭಾವದಿಂದ ಈ ಉಲ್ಲೇಖವನ್ನು  ಮಾಡಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ ಎಂಬ ಮತ್ತೊಂದು ವಾದವೂ ಇದೆ.
ದಶಾವತಾರಗಳನ್ನು ಹೇಳುತ್ತಲೇ ಕೃಷ್ಣಾವತಾರವನ್ನು ಹೇಳಿ, ಭಾರ್ಗವರಾಮ (ಪರಶುರಾಮ), ಹಲಧರರಾಮ (ಬಲರಾಮ) ಮತ್ತು ದಶರಥರಾಮನಾಗಿ ಹರಿಯ ಅವತಾರವಾಗಿದೆ ಎಂದು ಹೇಳಿರುವುದು ಸಮಂಜಸವೆನಿಸುವುದಿಲ್ಲ. ಇಲ್ಲಿ ಬರುವ ಹಲಧರರಾಮ ದಶಾವತಾರಗಳಲ್ಲಿ ಬರುವುದಿಲ್ಲ. ಹಾಗೆಯೇ ಕೃಷ್ಣವತಾರದಲ್ಲಿ ಕೃಷ್ಣ ಮಾಡಿದ ಕಾರ್ಯಗಳನ್ನು ತಿಳಿದುಕೊಳ್ಳದೇ ಆತನನ್ನು ಭಜಿಸಲರಿಯದ ವಿಷಯಸುಖಿಗಳ ಬಿಟ್ಟು ರಕ್ಷಿಸು ನಮ್ಮನನವರತ ಎಂದಿರುವುದು ಕೂಡ ಸರಿಯೆನಿಸುವುದಿಲ್ಲ. ಎಲ್ಲವನ್ನೂ ಕ್ಷಮಿಸುವನು ಹರಿ ಎಂದು ಒಂದು ಕಡೆ ತಿಳಿಸುವ ಕನಕದಾಸರು ಇಲ್ಲಿ ‘ಕೆಲವರನ್ನು ಬಿಟ್ಟು’ ಎಂದದ್ದು ದ್ವಂದ್ವ ನಿಲುವನ್ನು ಸೂಚಿಸುತ್ತದೆ.
18 ರಿಂದ 23ನೇ ರವರೆಗಿನ ಪದ್ಯಗಳಲ್ಲಿ ಹರಿಭಕ್ತಿಸಾರವನ್ನು ರಚಿಸುವ ಉದ್ದೇಶಕ್ಕೆ ಹರಿಯೇ ಮಾರ್ಗದರ್ಶಕನಾಗಬೇಕು ಎಂಬ ಬೇಡಿಕೆಯಿದೆ. ‘ನೀನೆನಗೆ ತಿಳುಹು ಮತಿಯನು ಎನ್ನ ಜಿಹ್ವೆಗೆ ಮೊಳಗುವಂದಂ ನಿನ್ನ ನಾಮಾವಳಿ’ ಎಂಬ ಬೇಡಿಕೆಯೊಂದಿಗೆ ‘ವೇದಶಾಸ್ತ್ರ ಪುರಾಣ ಪುಣ್ಯದ ಹಾದಿಯನು ನಾನರಿಯೆ ತರ್ಕದ ವಾದದಲಿ ಗುರು ಹಿರಿಯರರಿಯದ ಮೂಢಮತಿ’ ತಾನು ಎಂಬುದಾಗಿ ಹೇಳಿಕೊಂಡಿದ್ದಾರೆ. ಆದರೆ ಮುಂದಿನ ಪದ್ಯದಲ್ಲಿ ‘ಬಸಿರೊಳಗೆ ಬ್ರಹ್ಮಾಂಡಕೋಟಿಯ ಪಸರಿಸಿದ ಪರಮಾತ್ಮಂ ನೀನೆಂದುಸಿರುತಿವೆ ವೇದಗಳು’ ಎಂಬುದನ್ನು ದಾಖಲಿಸಿದ್ದಾರೆ ! ವೇದಗಳು ಗೊತ್ತಿಲ್ಲ ಎಂದು ಒಂದು ಕಡೆ ಹೇಳಿದ್ದರೆ, ವೇದಗಳು ಹೀಗೆ ಉಸಿರುತ್ತಿವೆಯಲ್ಲ ಎಂದು ಅಚ್ಚರಿ ಪಡುವುದು ಸಮಂಜಸವೆನಿಸಲಾರದು.
24 ರಿಂದ 46ನೇ ಪದ್ಯಗಳವರೆಗೆ ಪುರಾಣ ಕತೆಗಳಲ್ಲಿ ನಿರೂಪಿತವಾದ ಹರಿಯ ಮಹಿಮೆಯನ್ನು ಕೊಂಡಾಡಲಾಗಿದೆ. ಆದರೆ ಇಲ್ಲಿಂದ ಮುಂದೆ ಕನಕದಾಸರ ಲೇಖನಿ ಮೊನಚು ಪಡೆಯುತ್ತದೆ. ವಾಸ್ತವದ ವಿಚಾರಗಳನ್ನು ಸಾಧ್ಯವಾದಷ್ಟುಮಟ್ಟಿಗೆ ಅವರು ನಿರೂಪಿಸಲು ಮುಂದಾಗಿದ್ದಾರೆ. ಈರೇಳು ಲೀಕದ ಹೆಬ್ಬೆಳೆಸು ಬೆಳೆವಂತೆ ಕಾರಣಿಕನಾದ ಮನ್ಮಥ ಮತ್ತು ಅದನ್ನು ಬರೆಯುತ್ತ ಹೋಗುವ ಕರಣಿಕ ಬ್ರಹ್ಮ ಹರಿಯ ಮಕ್ಕಳು, ಲಕ್ಷ್ಮಿ ಕುಲಸತಿಯಾದರೆ, ಶಾರದೆ ಸೊಸೆ. ಗಿರಿಜೆ ಸಹೋದರಿ, ಶಂಕರ ಮೈದುನ, ಸುರರೆಲ್ಲ ಕಿಂಕರರು, ಮಾಯೆಯೇ ದಾಸಿ - ಹೀಗೆ ಸಂಬಂಧಗಳ ಪರಿಚಯವನ್ನು ನೀಡುತ್ತಲೇ ‘ಉದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲ್ಲಿ ಭಾಗವತರಾದವರ ಸಲಹುವನಾಗಿ ಸಂಚರಿಸುವುದು’ ಎಂದು ತಿಳಿಸಿದ್ದು, ಹರಿಯು ತನ್ನ ಭಕ್ತರು ಅಥವಾ ತನ್ನನ್ನು ಸ್ತುತಿಸುವವರ ಹೊಟ್ಟೆ ಹೊರೆದುಕೊಳ್ಳಲು ಅಡ್ಡಾಡಿಕೊಂಡಿದ್ದಾನೆ ; ಹೊರತು ಆತನಿಗೆ ನಿರ್ದಿಷ್ಟವಾದ ಯಾವುದೇ ಕೆಲಸವಿಲ್ಲ ಎಂಬ ಧ್ವನಿ ಇರುವುದನ್ನು ಗಮನಿಸಬೇಕು.
‘ಹಗೆಯರಿಗೆ ವರವೀವರಿಬ್ಬರು
ತೆಗೆಯಲರಿಯರು ಕೊಟ್ಟ ವರಗಳ
ತೆಗೆದು ಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ’
ಎನ್ನುವಲ್ಲಿ ಶಿವ ಮತ್ತು ಬ್ರಹ್ಮ ಇಬ್ಬರೂ ¨ವರಗಳನ್ನು ನೀಡಲು ಮಾತ್ರ ಶಕ್ತರು. ವಿನಃ ಕೊಟ್ಟ ವರವು ಕಂಟಕವಾದಲ್ಲಿ ಅದನ್ನು ನಿವಾರಿಸಲು ಅರಿಯರು. ಆ ಶಕ್ತಿ ಹರಿಗೆ ಮಾತ್ರ ಉಂಟು ಎಂಬ ವ್ಯಾಖ್ಯಾನವಿದೆ. ಇದು ಶೈವ ಮತ್ತು ಬ್ರಹ್ಮ ಸಂಸ್ಕøತಿಯ ವಿರೋಧಿಯಾಗಿ ಬೆಳೆದ ಭಕ್ತಿಯುಗದ ವೈಷ್ಣವ ನಿಲುವನ್ನು ತೋರುತ್ತದೆ. ಹರಿಯನ್ನು ಇಲ್ಲಿ ಶಿವ-ಬ್ರಹ್ಮರಿಗಿಂತ ಮಿಗಿಲು ಎಂದು ಸಾರಲಾಗಿದೆ. ಧರ್ಮದ ಹೆಗ್ಗಳಿಕೆಯನ್ನು ಹೇಳಿಕೊಳ್ಳುವ ಪರಂಪರೆ ಕನಕದಾಸರನ್ನೂ ಬಿಡದಿರುವುದು ವಿಚಿತ್ರವೆನಿಸುತ್ತದೆ.
ಹರಿಯು ನಾನಾ ಅವತಾರಗಳಲ್ಲಿ ದುಷ್ಟ ಸಂಹಾರ ಮಾಡಿದ್ದನ್ನೂ ಶಿಷ್ಟ ರಕ್ಷಣೆ ಮಾಡಿದ್ದನ್ನೂ ನಿರೂಪಿಸುವ ಕನಕದಾಸರು ಮಹಾಭಾರತದಲ್ಲಿ ಕೃಷ್ಣನಾಗಿ ಮಾಡಿದ ಕುಟೀಲತನವನ್ನೂ ಹೇಳಿದ್ದಾರೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಕುಲನಾಶಕನಾಗಿ, ಕರ್ಣನ ಜನ್ಮವೃತ್ತಾಂತ ತಿಳಿದಿದ್ದರೂ ಮುಂದಿಟ್ಟುಕೊಂಡು ಕೊಲ್ಲಿಸಿ, ‘ಕೊಲ್ಲ ಬಗೆದವನಾಗಿ ನೀ ಹಗೆಯಲ್ಲಿ ಸಖ್ಯ ಬೆಳೆಸಲದು ಹಿತವಲ್ಲ’ ಎಂದು ವಿಡಂಬಿಸಿ ಕನಕದಾಸರು ಅಚ್ಚರಿ ಮೂಡಿಸುತ್ತಾರೆ.
‘ಮಗನ ಕೊಂದವನಾಳುವಂತಾ
ಸುಗಣೆಯರು ಹದಿನಾರು ಸಾವಿರ
ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ
ಬಗೆ ಬಗೆಯ ರತಿಕಲೆಗಳಲಿ ಕೂ
ರುಗುರು ನಾಟಿಸಿ ಮೆರೆದು ನೀನೀ
ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ’
ನರಕಾಸುರನನ್ನು ಕೊಂದು ಆತನ ಹದಿನಾರು ಸಾವಿರು ಹೆಂಡಿತಿಯರಿಗೆ ವಿಟನಾಗಿ ಮೆರೆದ ಎಂದು ಇಲ್ಲಿ ಹೇಳಿರುವುದು ಭಕ್ತಿ ಸ್ತುತಿಯ ಪರಾಕಾಷ್ಠತೆ ಎಂದು ಕೆಲವರು ಹೇಳಬಹುದು. ಆದರೆ ವೈಚಾರಿಕ ಬದ್ಧತೆಯುಳ್ಳ ಕನಕದಾಸರು ಇಲ್ಲಿ ಹರಿಯನ್ನು ವ್ಯಂಗ್ಯ ಮಾಡಿರುವಂತೆ ತೋರುತ್ತದೆ.
ಹರಿಯ ಅನುಗ್ರಹವೊಂದಿದ್ದರೆ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸುವ ಕನಕದಾಸರು ರಾಮಾಯಣದಲ್ಲಿ ರಾವಣನನ್ನು ಕೊಂದದ್ದು, ವಿಭೀಷಣನನ್ನು ಮಿತ್ರನಾಗಿಸಿಕೊಂಡಿದ್ದು, ಹನುಮಂತನನ್ನು ಮಗನೆಂದು ಸ್ವೀಕರಿಸಿದ್ದನ್ನು ಉಲ್ಲೇಖಿಸುತ್ತಾರೆ. ಇಡೀ ಜೀವಮಾನದಲ್ಲೆಲ್ಲ ಪಾಪಗಳನ್ನೇ ಮಾಡುತ್ತ ಬಂದ ಅಜಾಮಿಳ ಎಂಬಾತ ಸಾಯುವಾಗ ತನ್ನ ಮಗ ನಾರಾಯಣನ ಹೆಸರನ್ನೂ ಕರೆದರೂ ಹರಿ ಆತನಿಗೆ ಸದ್ಗತಿ ನೀಡಿದ ಎನ್ನುವ ಮೂಲಕ ತನ್ನ ದೈವ ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ಎಂಬುದನ್ನು ಪರಗಣಿಸುತ್ತಾರೆ. ಇದಲ್ಲದೇ, ಹೆತ್ತ ಮಗಳನ್ನು ಮದುವೆಯಾದ ಬ್ರಹ್ಮ, ಗುರುಪತ್ನಿಯ ಮೇಲ;ಎ ಕಣ್ಣು ಹಾಕಿದ ಚಂದ್ರ, ಮಾವನಿಗೆ ಕೃತಘ್ನನಾದ ಕಾಮ, ಮುನಿವರ್ಯನ ಮಡದಿಯನ್ನು ಕೆಡಿಸಿದ ಇಂದ್ರ ಮೊದಲಾದವರು ಜಗಮೀರಿದ ಹಾದರ ಮಾಡಿದರೂ ಹರಿ ಅವರಿಗೆ ಕೈವಲ್ಯ ನೀಡಿದ್ದು ಕನಕದಾಸರಿಗೆ ಅಚ್ಚರಿಯನ್ನುಂಟು ಮಾಡಿದರೂ ಅಂಥವರನ್ನೆಲ್ಲ ಎತ್ತಿ ಹಿಡಿದ ಹರಿ ನಮ್ಮನ್ನೂ ರಕ್ಷಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ. ಇಲ್ಲಿ ಗಮನೀಯವಾದ ಅಂಶವೆಂದರೆ ದೇವತೆಗಳು ಮಾಡಿದ ಹಾದರವನ್ನು ಯಾವುದೇ ಭಿಡೆಯಿಲ್ಲದೇ ಹೇಳಿದ ಪರಿ.
47 ರಿಂದ 101ನೇ ಪದ್ಯಗಳವರೆಗೆ ಮನುಷ್ಯನ ನಿಸ್ಸಹಾಯಕತೆ, ಮನುಷ್ಯ ತಾಯಿಯ ಹೊಟ್ಟೆಯಲ್ಲಿ ಮಾಂಸ-ರಕ್ತಗಳ ಮಧ್ಯ ಇದ್ದು ಇದ್ದು ಹೊರಕ್ಕೆ ಬಂದ ಸ್ಥಿತಿ, ದೇಹದ ನಶ್ವರತೆ, ಭಗವಂತನ ಕರುಣೆ, ಹರಿಯ ಶಕ್ತಿ ಮೊದಲಾದವುಗಳನ್ನೆಲ್ಲ ಹೇಳುತ್ತ ಮನುಷ್ಯನಾದವನು ಬಹಿರ್ ಆಚರಣೆಗೆ ಹೆಚ್ಚು ಮಹತ್ವ ನೀಡದೇ ಭಗವಂತನಲ್ಲಿ ಮನಸ್ಸನ್ನು ಕೇಂದ್ರೀಕರಿಸುವ ಅಗತ್ಯವಿದೆ ಎಂದು ಹೇಳುತ್ತಾರೆ.
‘ಇಲ್ಲಿಹನು ಅಲ್ಲಿಲ್ಲವೆಂಬೀ
ಸೊಲ್ಲು ಸಲ್ಲದು ಹೊರಗೊಳಗೆ ನೀ
ನಲ್ಲದಿಲ್ಲನ್ಯತ್ರವೆಂಬುದನೆಲ್ಲ ಕೆಲಕೆಲರು
ಬಲ್ಲರಿಳೆಯೊಳು ಭಾಗವತರಾ
ದೆಲ್ಲರಿಗೆ ವಂದಿಸದ ಕುಜನರಿ
ಗಿಲ್ಲ ಸದ್ಗತಿ ನೋಡು ... ...’
ಇಲ್ಲಿ ದೈವದ ನೆಲೆಗಳನ್ನು ಮೊದಲಿಗೆ ಹೇಳಿದ್ದು, ಆನಂತರದಲ್ಲಿ ಭಾಗವತರಿಗೆ ವಂದಿಸದಿದ್ದರೆ ಸದ್ಗತಿಯಿಲ್ಲ ಎಂಬ ಮಾತನ್ನು ಹೇಳಿದ್ದು ವಿಚಿತ್ರವೆನಿಸುತ್ತದೆ. ಯಾಕೆಂದರೆ ಎಂಥ ನೀಚ ಕೆಲಸ ಮಾಡಿದವರಿಗೂ ಹರಿ ಸದ್ಗತಿ ನೀಡುತ್ತಾನೆ ಎಂದು ಈ ಮೊದಲು ತಿಳಿಸಿರುವ ಕನಕದಾಸರು ಇಲ್ಲಿ ಅದಕ್ಕೆ ತದ್ವಿರುದ್ಧವಾದ ಹೇಳಿಕೆಯನ್ನು ದಾಖಲಿಸಿದ್ದಾರೆ ಎನ್ನಬೇಕಾಗುತ್ತದೆ ! ವಿರೋಧ ಮತ್ತು ಶರಣಾಗತಿ ಈ ಎರಡೂ ಪ್ರಕಾರದ ವಿಚಾರಗಳ ದ್ವಂದ್ವ ಇಡೀ ಕೃತಿಯಲ್ಲಿ ಕಂಡುಬರುವ ಅಂಶವಾಗಿದೆ.
‘ದೀನ ನಾನು, ಸಮಸ್ತ ಲೋಕಕೆ ದಾನಿ ನೀನು, ವಿಚಾರಿಸಲು ಮತಿಹೀನ ನಾನು’ ಕನಕದಾಸರು,
‘ತರಳತನದಲಿ ಕೆಲವು ದಿನದುರು
ಭರದ ಗರ್ವದಿ ಕೆಲವು ದಿನ ಮೈ
ಮರೆತು ನಿಮ್ಮಡಿಗೆರಗದಾದೆನು ವಿಷಯಕೇಳಿಯಲಿ
ನರಕಭಾಜಕನಾಗಿ ಕಾಮಾ
ತುರದಿ ಪರಧನ ಪರಸತಿಗೆ ಮನ
ಹರಿದ ಪಾಪವ ಕಳೆದು ರಕ್ಷಿಸು ...’
ಎಂಬಲ್ಲಿ ಹರೆಯದಲ್ಲಿ ವಿಷಯಕೇಳಿ, ಪರಸತಿಗೆ ಮನ ಹರಿದ ಪಾಪ, ಪರಧನದ ಆಸೆಬುರುಕತನ ಇವುಗಳಿಂದ ಆವೃತ್ತನಾಗಿ ಹರಿಯನ್ನು ಮರೆತುದ್ದಕ್ಕೆ ಪಶ್ಚಾತ್ತಾಪಪಡುತ್ತಿರುವಂತೆ ಕನಕದಾಸರು ಕಾಣಿಸುತ್ತಾರೆ. ಈ ಪದ್ಯವನ್ನು ಮೂಲ ಆಕರವನ್ನಾಗಿ ಇಟ್ಟುಕೊಂಡು ಅಧ್ಯಯನ ಮಾಡಿದರೆ ಕನಕದಾಸರ ಬದುಕಿನ ಮೇಲೆ ಹೊಸ ಬೆಳಕು ಚೆಲ್ಲಬಹುದು. ದಾಸರಾಗುವುದಕ್ಕಿಂತ ಮುಂಚಿನ ಕನಕದಾಸರ ಗುಣಾವಗುಣಗಳ ಉಲ್ಲೇಖ ಇಲ್ಲಿ ದೊರೆಯಬಲ್ಲದು. ‘ಮರೆದನಭ್ಯುದಯದಲಿ’ ಎನ್ನುವ ಮೂಲಕ ತಮ್ಮ ಪಶ್ಚಾತ್ತಾಪದ ಉರಿಯನ್ನು ತನ್ನ ದೈವದ ಮುಂದೆ ಬಿತ್ತರಿಸಿ ತನ್ನನ್ನು ಉದ್ದರಿಸಬೇಕು ಎಂದು ಆರ್ತಸ್ವರದಲ್ಲಿ ಅಂಗಲಾಚಿಸಿರುವುದು ಕೂಡ ಇದೇ ಎಳೆಯನ್ನು ತೋರುತ್ತದೆ. ಯಾವುದನ್ನೇ ಮುಚ್ಚಿಡದೆ ತಮ್ಮ ನಿಜವೃತ್ತಾಂತವನ್ನು ಹೇಳಿಕೊಂಡ ಕನಕದಾಸರು ದೈವಿಕತೆ ಮತ್ತು ವಾಸ್ತವಿಕತೆ ಮಹತ್ವ ನೀಡಿದ ಕವಿಯಾಗಿದ್ದಾರೆ.
ಭೂಮಿಯಲ್ಲಿ ನಳ, ಹರಿಶ್ಚಂದ್ರ, ಪುರುಕುತು, ಪ್ರರೂರವಸ, ಸಗರ ಮತ್ತು ಕಾರ್ತವೀರ್ಯ ಎಂಬ ಪ್ರಸಿದ್ಧ ಚಕ್ರವರ್ತಿಗಳಲ್ಲದೆ ಹಿಂದೆ ಎಷ್ಟೋ ಜನರಿದ್ದರೂ ಅವರನ್ನೆಲ್ಲ ಬಿಟ್ಟು ಭೂಮಿ, ಹರಿಯ ಬೆನ್ನು ಹತ್ತಿದ್ದಾಳೆ ಎಂದು ತಿಳಿಸುವ ಕನಕದಾಸರು ವೈಜ್ಞಾನಿಕವಾದ ವಿಚಾರವನ್ನು ಪ್ರತಿಪಾದನೆಗೆ ಯತ್ನಿಸಿದ್ದಾರೆ. ಭೂಮಿ, ಅಗ್ನಿ, ನೀರು, ವಾಯು, ಆಕಾಶಗಳೆಂಬ ಪಂಚಭೂತಗಳಿಂದ ಒಡಗೂಡಿರುವ ದೇಹವು ಪೂರ್ವಸಂಚಿತ ಫಲ ಎನ್ನುವುದು ಸರಿಯಲ್ಲ ಎಂಬುದು ಕನಕದಾಸರ ವಾದವಾಗಿದೆ. ಪಂಚಭೂತಗಳಿಂದ ಕೂಡಿ ಜನ್ಮ ತಳೆಯುವ ದೇಹದ ಹುಟ್ಟಿಗೆ ಹಿಂದಿನ ಜನ್ಮದ ಫಲ ಕಾರಣವಲ್ಲ ಎನ್ನುವ ಮೂಲಕ ವೈದಿಕ ಧರ್ಮದ ಕರ್ಮಸಿದ್ಧಾಂತವನ್ನು ಅಲ್ಲಗಳೆಯುತ್ತಾರೆ. ಆದರೆ ಹರಿಯನ್ನು ಸ್ತುತಿಸುವಾಗ ಮಾತ್ರ ಮತ್ತೇ ಮತ್ತೇ ಕರ್ಮದ ಪಾಪವ ತೊಳೆದು ಪಾವನ ಮಾಡು ಎಂದು ಅಂಗಲಾಚುತ್ತಾರೆ ! ಯಾಕೆಂದರೆ ‘ಎತ್ತಿದೆನು ನಾನಾ ಶರೀರವ’ ಎನ್ನುವಲ್ಲಿ ಪುನರ್‍ಜನ್ಮದ ಸಿದ್ಧಾಂತದಲ್ಲಿ ಅವರು ನಂಬಿಕೆ ಇಟ್ಟಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರ ಇನ್ನೂ ತಮ್ಮನ್ನು ಕಾಡುತ್ತಿರುವವು ಎಂದು ಹೇಳುವಲ್ಲಿ ದಾಸರಾದರೂ ವಿಷಯಸುಖದೆಡೆಗೆ ಒಮ್ಮೊಮ್ಮೆ ಮನಸ್ಸು ಮುಖ ಮಾಡುವುದನ್ನು ಬಿಚ್ಚಿಟ್ಟಿದ್ದಾರೆ. ಯಾಕೆಂದರೆ ಕನಕದಾಸರು ಮೊದಲು ಮದುವೆಯಾಗಿ ಮಕ್ಕಳೊಂದಿಗೆ ಬಾಳಿದವರು. ‘ನಿನ್ನಡಿಯ ಭಜಿಸದೆ ದುರುಳನಾದೆನು ಮಡದಿ ಮಕ್ಕಳ ಮೋಹದಲಿ ಸಿಲುಕುತಡಿಗೆ’ ಎನ್ನುವಲ್ಲಿ ಈ ಬಗ್ಗೆ ಸಾಕ್ಷ್ಯ ದೊರೆಯುತ್ತದೆ. ಸತ್ವ. ರಜಸ್ಸು, ತಮಸ್ಸು ಎಂಬ ಮೂರು ಗುಣಗಳು ಹರಿ, ಬ್ರಹ್ಮ, ಹರ ಎಂಬ ಮೂರ್ತಿ ಧರಿಸಿ ಸ್ಥಿತಿ, ಸೃಷ್ಟಿ, ಸಂಚಾರ ಕಾರ್ಯವನ್ನು ಮಾಡುತ್ತವೆ. ಪ್ರಳಯ ಕಾಲದಲ್ಲಿ ಈ ಮೂರೂ ಗುಣಗಳು ಭಗವಂತನಲ್ಲಿ ಲೀನವಾಗುತ್ತವೆ ಎಂದು ತಿಳಿಸುವ ಕನಕದಾಸರು ‘ನೀರ ಮೇಲನ ಗುಳ್ಳೆ, ಬಿದ್ದು ಹೋಗುವ ಕಾಯದ ಪಾಶದಲ್ಲಿ ಬದ್ಧನಾಗಬಾರದು’ ಎಂಬುದಾಗಿ ಜೀವನದ ನಶ್ವರತೆಯನ್ನು ಸಾರಿ, ಸಂಸಾರ ಬಂಧನದಲ್ಲಿ ಸಿಲುಕದೆ, ಜನ್ಮದಿಂದ ಜನ್ಮಕ್ಕೆ ಜಿಗಿಯುವ ದೇಹಕ್ಕೆ ಊರು, ಮನೆ, ಮೋಹ ಇರಬಾರದು ಎಂಬುದನ್ನು ಬೋಧಿಸುತ್ತಾರೆ. ತಾಯಿಯ ಗರ್ಭದಿಂದ (ಜರಾಯುಜ), ಮೊಟ್ಟೆಯಿಂದ (ಅಂಡಜ), ಬೆವರಿನಿಂದ (ಸ್ವೇದಜ) ಮತ್ತು ಸಸ್ಯಗಳಿಂದ (ಉಧ್ಭಿಜ್ಯ) ಎಂಬ ನಾಲ್ಕು ಪ್ರಕಾರಗಳಲ್ಲಿ ಹುಟ್ಟುವ ಚೌಷಷ್ಠ (ಅರವತ್ತ್ನಾಲ್ಕು) ಜೀವಿಗಳು ಹರಿಯ ಪ್ರೇರಣೆಯಿಂದಲೇ ಹಲವು ರೀತಿಯ ಒಳಭೇದಗಳಿಂದ ತೊಗಲು ಬೊಂಬೆಗಳಂತೆ ವರ್ತಿಸುತ್ತವೆ. ಇಲ್ಲಿ ಹರಿಯೇ ಸೂತ್ರಧಾರ ಎನ್ನುವುದನ್ನು ಕನಕದಾಸರು ಹರಿಯ ಶ್ರೇಷ್ಟತ್ವವನ್ನು ಮನಗಾಣಿಸಲು ಪ್ರಯತ್ನಿಸಿದ್ದಾರೆ.
ಮೃತ್ಯು ತನ್ನ ಬೆನ್ನ ಹಿಂದೆಯೇ ಇರುತ್ತದೆ. ಜೊತೆಗೆ ಸತ್ತ ಮೇಲೆ ಯಾರೂ ಜೊತೆಗೆ ಬರುವುದಿಲ್ಲ ಎಂಬ ದೇಹದ ನಶ್ವರತೆಯನ್ನು ಪ್ರತಿಪಾದಿಸುವ ಕನಕದಾಸರು ಜನನ-ಮರಣದ ನಿಜ ಅರ್ಥವನ್ನು ತಿಳಿದು ಬದುಕಬೇಕು ಎಂದಿರುವುದಲ್ಲದೆ ‘ಹುಟ್ಟು ಸಾವಿನ ಮಧ್ಯ ತಾ ನಿಪುಣನೆಂಬುವದು ನಗೆಗೀಡು’ ಎಂಬ ಸತ್ಯವನ್ನು ಹೇಳುತ್ತಾರೆ.
ಬದುಕನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು ಎನ್ನುತ್ತದೆ ಸಾಮಾಜಿಕ ತಾರತಮ್ಯಗಳನ್ನು ಕಟುವಾಗಿ ಟೀಕಿಸುತ್ತಾರೆ.
‘ತೊಲಗುವರು ಕಡೆಕಡೆಗೆ ತಾ ಹೊಲೆ
ಹೊಲೆಯೆನುತ ಕಳವಳಿಸಿ ಮೂತ್ರದ
ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು
ಆಲದೊಳಗೆ ಮುಳುಗಿದರೆ ತೊಲಗದು
ಹೊಲಗೆಲಸವೀ ದೇಹದೊಳು ನೀ
ನೆಲೆಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ’
ಎನ್ನುವಲ್ಲಿ ಹೊಲೆಯೆಂದು ಪಂಚೆಯನ್ನೆತ್ತಿಕೊಂಡು ಪಕ್ಕಕ್ಕೆ ನೆಗೆಯುವ, ಮಡಿ ಮಡಿಯೆಂದು ಅಡಿಗಡಿಗೆ ಹಾರುವ ಮಂದಿಯ ಬಗ್ಗೆ ಮಾರ್ಮಿಕವಾದ ಮಾತಿದೆ. ಯಾರೂ ಮೇಲಲ್ಲ ; ಯಾರೂ ಕೀಳಲ್ಲ. ಹೊಲೆ ಹೊಲೆ ಎಂದು ಹಾರುವವರು ಕೀಳಾದ ಕಾರ್ಯ ಮಾಡಿ ಮೂಗನ್ನು ಹಿಡಿದು ನೀರಲ್ಲಿ ಮುಳುಗು ಹಾಕಿದಾಕ್ಷಣ ಮಾಡಿದ ಹೊಲೆಗೆಲಸ ಹೋಗಿ ಬಿಡುವುದಿಲ್ಲ. ಹುಟ್ಟಿನ ಹೊಲೆತನಕ್ಕಿಂತ ಉತ್ತಮರು ಎಂದುಕೊಂಡು ಹೊಲಸು ಕೆಲಸ ಮಾಡುವುದು ಕೆಟ್ಟದ್ದು ; ಹೇಯವಾದದ್ದು ಎಂದು ಕನಕದಾಸರು ತಿಳಿ ಹೇಳಿದ್ದಾರೆ. ತಾರತಮ್ಯ ನೀತಿಯನ್ನು ಖಂಡಿಸುವ ಕನಕದಾಸರು, ಪಾಂಡಿತ್ಯದಿಂದ ಪಾಪವನ್ನು ಕಳೆಯಲಾಗದು ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ. ಅಹಂಕಾರಿಗಳು, ಸರಿಯಾದ ನಡೆಯನ್ನು ಹೊಂದದವರು ‘ವೇದ ಪುರಾಣ ಶಾಸ್ತ್ರಗಳೋದಿ ಫಲವೇನು ?’ ಎಂದು ಪ್ರಶ್ನಿಸುತ್ತಾರೆ.
ಮಡಿ ಮಡಿ ಎಂದುಕೊಂಡು ನಿತ್ಯವೂ ದೇಹವನ್ನು ತೊಳೆದುಕೊಳ್ಳುವವರು ಮತ್ತು ಎಂಜಲು ಸಲ್ಲುವುದಿಲ್ಲ ಎಂದು ವ್ಯಾಖ್ಯಾನ ಮಾಡುವವರಿಗೂ ಕನಕದಾಸರು ವಾಸ್ತವವನ್ನು ಮನಗಾಣಿಸಿದ್ದಾರೆ. ಎಂಜಲು ಎಂಬುವವರ ನುಡಿಯೇ ಎಂಜಲು ಎನ್ನುವ ಅವರು, ನೀರು, ಅದರೊಳಗಿನ ಪ್ರಾಣಿಗಳ ಎಂಜಲು, ಹಾಲು ಕವರುವಿನ ಎಂಜಲು ! ವಿಚಾರ ಮಾಡಿದರೆ ಎಂಜಲಲ್ಲದ್ದು ಯಾವುದೂ ಇಲ್ಲ ; ನಮಗಾಗಿಯೇ ಮಾತ್ರ ಸೃಷ್ಟಿಯಾದದ್ದು ಯಾವುದೂ ಇಲ್ಲ ಎಂದು ತಿಳಿಸಿದ್ದಾರೆ. ವೈದಿಕ ಸಾಮಾಜಿಕ ವಾತಾವರಣದಿಂದ ನಿರಂತರ ನೋವು ಉಂಡ ಅವರು ಇಂಥ ಡಂಭಾಚಾರಗಳನ್ನು ಕಂಡು ಸಿಡಿದೇಳುತ್ತಾರೆ ; ಪ್ರತಿಭಟಿಸುತ್ತಾರೆ ಮತ್ತು ಖಂಡಿಸುತ್ತಾರೆ. ತಮ್ಮ ದೈವದ ಮೂಲಕ ಹೊಸ ಬದುಕನ್ನು ಹಾರೈಸುತ್ತಾರೆ.
102 ರಿಂದ 108ನೇ ಪದ್ಯಗಳವರೆಗೆ ಕನಕದಾಸರು ಹರಿಭಕ್ತಿಸಾರವನ್ನು ಕೇಳಿದವರಿಗೆ ಆಗುವ ಫಲಶೃತಿಯನ್ನು ವಿವರಿಸಿದ್ದಾರೆ. ಪ್ರತಿ ಪುರಾಣ ಕಾವ್ಯಗಳ ಕೊನೆಯಲ್ಲಿ ಬರುವ ಫಲಶೃತಿ ಸಂಪ್ರದಾಯದ ಛಾಪು ಕನಕದಾಸರಲ್ಲೂ ಕಂಡುಬರುತ್ತದೆ. ಇಂಥಲ್ಲಿ ತಮ್ಮ ದೈವವನ್ನು ಪಾರಮ್ಯಕ್ಕೇರಿಸುವ ಗುರಿ ಮಾತ್ರ ಇರುತ್ತದೆ. ಮುಂದಿನ 109 ರಿಂದ 111ನೇ ಪದ್ಯಗಳಲ್ಲಿ ಮಂಗಲವನ್ನು ಹಾಡಲಾಗಿದೆ. ಇಲ್ಲಿ ಕೂಡ ಹರಿನಾಮಸ್ಮರಣೆಯೇ ಪ್ರಮುಖವಾಗಿದೆ. ಕೆಲ ವಿದ್ವಾಂಸರು ಈ ಮೂರು ಪದ್ಯಗಳನ್ನು ಬಿಟ್ಟು 108ನೇ ಪದ್ಯಗಳವರೆಗೆ ಮಾತ್ರ ಕೃತಿಯನ್ನು ಪರಿಗಣಿಸಿದ್ದಾರೆ.
ಒಟ್ಟಿನಲ್ಲಿ ಹರಿಭಕ್ತಿಸಾರವು ಅಂದಿನ ಭಕ್ತಿಪಂಥದವರಲ್ಲಿದ್ದ ಭಕ್ತಭಾವ, ಇಷ್ಟದೈವದ ಹೊಗಳಿಕೆ ಮತ್ತು ಹಿರಿಮೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿದೆ. ನಡು ನಡುವೆ ಕನಕದಾಸರ ವೈಚಾರಿಕವಾದ ಭಾವವೂ ಅಲ್ಲಲ್ಲಿ ಹಣಕಿ ಹಾಕಿದೆ. ಮುಖ್ಯ ಉದ್ದೇಶ ಭಕ್ತಿಯೇ ಆಗಿದ್ದರೂ ಸಾಮಾಜಿಕ ಕಳಕಳಿ ಕೂಡ ವ್ಯಕ್ತವಾಗಿದೆ. ಭ್ರಮೆ ಮತ್ತು ವಾಸ್ತವತೆಯ ಎರಡೂ ಮಗ್ಗುಲಗಳನ್ನು ನೋಡಿ ಅದನ್ನು ಮೀರಿ ಬೆಳೆಯಬಲ್ಲವರಾಗಿದ್ದರೂ ಆ ಕಾಲದ ಮಿತಿಯಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ.


*****

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.