Showing posts with label ಧರ್ಮ. Show all posts
Showing posts with label ಧರ್ಮ. Show all posts

Wednesday, October 02, 2013

ಬ್ರಾಹ್ಮಣ ಮೌಲ್ಯಗಳಿಗೆ ಹಿಂತಿರುಗಿದ ವೀರಶೈವ !

ವೀರಶೈವ-ಲಿಂಗಾಯತ ಬಗ್ಗೆ ಜೆ.ಪಿ. ಶೌಟನ್ ಅವರ ಅಧ್ಯಯನ 
( ಅನು : ಟಿ.ಆರ್. ಚಂದ್ರಶೇಖರ)

‘15ನೆಯ ಶತಮಾನದ ವೀರಶೈವದ ಬಗ್ಗೆ ತಿಳಿದುಕೊಳ್ಳಲು ತೋಂಟದ ಸಿದ್ಧಲಿಂಗೇಶ್ವರರ ವಚನಗಳು ಮುಖ್ಯ ಆಕರಗಳಾಗಿವೆ. ಈ ಆಕರದಲ್ಲೂ ಸಹ ವೀರಶೈವದ ಪ್ರಾರಂಭದ ಘಟ್ಟದಲ್ಲಿ ಪ್ರಧಾನವಾಗಿದ್ದ ಸಾಮಾಜಿಕ ವಿಚಾರಗಳಿಗೆ ಇಲ್ಲಿ ಕನಿಷ್ಟ ಗಮನವೂ ದೊರೆತಿಲ್ಲ. ಜಾತಿಗೆ ಸಂಬಂಧಿಸಿದಂತೆ ಸಿದ್ಧಲಿಂಗೇಶ್ವರರು ಸಾಂಪ್ರದಾಯಿಕ ಮಡಿ ಮೈಲಿಗೆ ವಿಚಾರಗಳಿಗೆ ಮೊರೆ ಹೋದಂತೆ ಕಾಣುತ್ತದೆ. ಜಾತಿ ತಾರತಮ್ಯದ ವಿವರವಾದ ವಿಶ್ಲೇಷಣೆಯಿರುವ ಇವರ ಏಕಮೇವ ವಚನವೊಂದರಲ್ಲಿ ಬಸವ ಮತ್ತು ಅವನ ಸಮಕಾಲೀನರು ಪ್ರಚುರಪಡಿಸಿದ್ದ ಸಮಾನತೆ ವಿಚಾರಕ್ಕೆ ಇಲ್ಲಿ ಅವಕಾಶವನ್ನೇ ನೀಡಿಲ್ಲ. ಜಾತಿಗೆ ಸಂಬಂಧಿಸಿದಂತೆ ಹಳೆಯ ಸಂಪ್ರದಾಯವಾದಿ ಬ್ರಾಹ್ಮಣ ಮೌಲ್ಯಗಳಿಗೆ ಹಿಂತಿರುಗಿದ ವೀರಶೈವವನ್ನು ರೂಪಿಸಿದವರೇ ಸಿದ್ಧಲಿಂಗೇಶ್ವರ.

ಬೊಂಬಾಯಿ ಶ್ರೇಷ್ಟ ನ್ಯಾಯಾಲಯವು 1879 ರಲ್ಲಿ ಒಂದು ತೀರ್ಪಿನಲ್ಲಿ ಲಿಂಗಾಯತರು ಶೂದ್ರರು ಎಂದು ಘೋಷಿಸಿತು. ಇದು ಲಿಂಗಾಯಿತರ ಪ್ರತಿಭಟನೆಗೆ ಕಾರಣವಾಯಿತು.

ಮೈಸೂರು ರಾಜ್ಯದಲ್ಲಿ ‘1891 ರ ಜನಗಣತಿ ಸಂದರ್ಭದಲ್ಲಿ ಲಿಂಗಾಯತರನ್ನು ಹಿಂದೂ ವರ್ಣ ವ್ಯವಸ್ಥೆಯ ನಾಲ್ಕನೇ ಸ್ಥಾನದ ಶೂದ್ರ ವರ್ಗವೆಂದು ವರ್ಗೀಕರಿಸಲು ಕ್ರಮ ಕೈಗೊಂಡಾಗ ತೀವ್ರವಾಗಿ ಪ್ರತಿಭಟನೆ ಉಂಟಾಯಿತು. ಲಿಂಗಾಯತರ ಅನೇಕ ಪ್ರಭಾವಿ ಗುಂಪುಗಳು ಕನಿಷ್ಟ ಪಕ್ಷ ತಮ್ಮನ್ನು ಲಿಂಗಾಯತ ಬ್ರಾಹ್ಮಣರೆಂದು ಪರಿಗಣಿಸಬೇಕೆಂದು ಒತ್ತಾಯಿಸಿತು. ... ... ... ... ... ... ... ...  ಶೂದ್ರರೆಂಬ ವರ್ಗೀಕರಣದಿಂದ ಉಂಟಾಗುವ ಅವಮಾನದಿಂದ ರಕ್ಷಣೆ ಕೋರಿ ನಿಯೋಗವೊಂದು ಮಹಾರಾಜರನ್ನು ಭೇಟಿ ಮಾಡಿತು. ರಾಜ ಸಂಸ್ಥಾನದ ಸರ್ಕಾರವು ಇವರ ಮನದ ಅಳಲನ್ನು ಭಾಗಶಃ ಒಪ್ಪಿಕೊಂಡು ಶೂದ್ರ ಸ್ಥಾನಮಾನವನ್ನು ಅಪ್ರಧಾನಗೊಳಿಸಿ ಅವರವರ ಒಳಪಂಗಡಗಳ ಹೆಸರುಗಳಿಂದಲೇ ವರ್ಗೀಕರಿಸುವ ಕ್ರಮ ಕೈಗೊಂಡಿತು. ಆದರೆ ‘ಲಿಂಗಾಯತ ಬ್ರಾಹ್ಮಣ’ ಎಂಬುದನ್ನು ಕೇವಲ ಖಾಸಗಿಯಾಗಿ ಬಳಸಲು ಅನುಮತಿ ನೀಡಿತು.

1901 ರ ಜನಗಣತಿ ಸಂದರ್ಭದಲ್ಲಿ ಅನೇಕ ಲಿಂಗಾಯತ ಕ್ರಿಯಾ ಸಮಿತಿಗಳು ಹುಟ್ಟಿಕೊಂಡವು. ಲಿಂಗಾಯತ ಸಮುದಾಯವನ್ನು ಸಾಂಪ್ರದಾಯಿಕ ಹಿಂದೂ ವರ್ಣ ವ್ಯವಸ್ಥೆಗೆ ಸಮಾನಾಂತರವಾಗಿ ವೀರಶೈವ ಬ್ರಾಹ್ಮಣ, ವೀರಶೈವ ಕ್ಷತ್ರಿಯ, ವೀರಶೈವ ವೈಶ್ಯ ಹಾಗೂ ವೀರಶೈವ ಶೂದ್ರರೆಂಬ ಹೊಸ ವರ್ಗೀಕರಣ ಯೋಜನೆಯೊಂದನ್ನು ಸರ್ಕಾರಕ್ಕೆ ಸಲ್ಲಿಸಿತು. ... ... ... ... ... ... ... ... ... ... ... ... ... ... ... ... ... ... ಈ ಬಗೆಯ ಮೂಲಭೂತ ಬದಲಾವಣೆ ಒಳಗೊಂಡ ಬೇಡಿಕೆಯನ್ನು ಒಪ್ಪಿಕೊಳ್ಳುವ ಮನಸ್ಸು ಆಡಳಿತ ವ್ಯವಸ್ಥೆಗಿರಲಿಲ್ಲ.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ತಮ್ಮ ಸಮುದಾಯಕ್ಕೆ ವೈಭವದ ಸ್ಥಾನವನ್ನು ಒದಗಿಸುವ ಸಲುವಾಗಿ ಮತ್ತು ವೈದಿಕ ಸಂಸ್ಕøತ ಪಂಥದ ಜೊತೆಗಿನ ವೀರಶೈವದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಲಿಂಗಾಯತರು ಪ್ರಯತ್ನಿಸುತ್ತಿದ್ದರು. ಈ ಪ್ರಕ್ರಿಯೆಯಲ್ಲಿ 12ನೆಯ ಶತಮಾನದ ಕ್ರಾಂತಿಕಾರಿ ವಿಚಾರಕ್ಕೆ ಮತ್ತು ಬಸವನಿಗೆ ಯಾವುದೇ ಸ್ಥಾನ – ಮಹತ್ವ ನೀಡಲಿಲ್ಲ.

ವರ್ಣ ರಚನೆಗೆ ಪ್ರತಿಯಾಗಿ ಲಿಂಗಾಯತ ಸಮುದಾಯವನ್ನು ಒಂದು ಕಡೆಯಲ್ಲಿ ವೀರಶೈವ ಬ್ರಾಹ್ಮಣ ಮತ್ತು ಇನ್ನೊಂದು ಕಡೆ ವೀರಶೈವ ಶೂದ್ರ ಎಂಬ ಅನುಕ್ರಮ ಸ್ಥಾಪಿಸುವ ಪ್ರಯತ್ನಗಳ ಕಾಲ ಮುಗಿಯಿತು. ಲಿಂಗಾಯತ ಸಮುದಾಯವು ಹೆಚ್ಚು ಸಂವೃತಗೊಂಡಿದೆ ಎಂಬುದಕ್ಕೆ ಅಧಿಕೃತ ಆಧಾರಗಳಿವೆ. ವ್ಯಕ್ತಿಗತ ಮತಾಂತರ ಸಂಭವಿಸಬಹುದಾದರೂ ಸಹ ಜಾತಿಗಳೇ ಲಿಂಗಾಯತವಾಗಿ ಮತಾಂತರ ಹೊಂದುವ ಪರಿ ಇಂದು ಪೂರ್ಣವಾಗಿ ನಿಂತು ಹೋಗಿದೆ.

ಲಿಂಗಾಯತ ಸಮುದಾಯವು ಜಾತಿಯ ಎಲ್ಲ ಲಕ್ಷಣಗಳನ್ನೂ ಪ್ರದರ್ಶಿಸುತ್ತಿದೆ. ನಿಯಮದ ಪ್ರಕಾರ ಇಂದಿಗೂ ಅನ್ಯ ಜಾತಿಗಳ ಜೊತೆ ಆಹಾರ ಸ್ವೀಕಾರ ನಿಷಿದ್ಧ. ಆದರೆ ಇದು ಆಚರಣೆಯಲ್ಲಿ ಅಷ್ಟು ಕಟ್ಟುನಿಟ್ಟಾಗಿಲ್ಲ. ವಿವಾಹಗಳಲ್ಲಿ ತಮ್ಮದೇ ಜಾತಿಯೊಳಗೆ ಗಂಡು-ಹೆಣ್ಣುಗಳನ್ನು ಆರಿಸಲಾಗುತ್ತದೆ. ಉಳಿದೆಲ್ಲಾ ಜಾತಿಗಳಿಗಿಂತ ಲಿಂಗಾಯತರಲ್ಲಿ ಜಾತಿ ಮನೋಭಾವ ಅತಿಯಾಗಿದೆ ಎಂಬ ಹೆಗ್ಗಳಿಕೆಯೂ ಆ ಜಾತಿಗಿದೆ.

19ನೆಯ ಶತಮಾನದಲ್ಲಿ ಲಿಂಗಾಯತ ಸಮುದಾಯದಲ್ಲಿ ಕಂಡುಬಂದ ಛಿದ್ರೀಕರಣವು ಈಗ ಗತಕಾಲಕ್ಕೆ ಸೇರಿದ ಸಂಗತಿಯಾಗಿ ಬಿಟ್ಟಿತು. ಆದರೆ ಹುಟ್ಟಿನೊಂದಿಗೆ ಬಂದ ತರತಮಭಾವ ಇಂದಿಗೂ ಮುಂದುವರಿದಿದೆ. ಹೆಚ್ಚು ಕಡಿಮೆ ಲಿಂಗಾಯತ ಜಾತಿಯಲ್ಲಿ ಜನಿಸಿದವರನ್ನೆಲ್ಲಾ ಸಮಾಜವು ಲಿಂಗಾಯತ ಎಂದು ಪರಿಗಣಿಸುತ್ತಿದೆ. ಕರ್ನಾಟಕದಲ್ಲಿ ಅದೊಂದು ಸಂವೃತ ಸಮುದಾಯವಾಗಿ ಕಂಡು ಬಂದಿದೆ. ಹೀಗೆ ಜಾತಿಭೇದವನ್ನು ತಿರಸ್ಕರಿಸಿದ ಚಳುವಳಿಯೊಂದು ಅಂತಿಮ ಘಟ್ಟದಲ್ಲಿ ತಾನೇ ಒಂದು ಜಾತಿಯಾಗಿ ಬಿಟ್ಟಿತು.

Tuesday, July 30, 2013

ಧರ್ಮಗಳ ಗೊಂದಲ ನಿವಾರಣೆ


ಮೂಲ ಮರಾಠಿ : ಡಾ. ವಿನೋದ ಗಾಯಕವಾಡ                            
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
------------------------------------------------------------------------------------
ಒಂದೊಮ್ಮೆ ಆ ಬಾಲಯೋಗಿ ಪ್ರಸನ್ನಚಿತ್ತನಾಗಿ ಕುಳಿತಿರುವಾಗ ಜನರೆಲ್ಲ ಆತನ ಸುತ್ತ ನೆರೆಯುತ್ತಿದ್ದರು. ಸಹಜವಾಗಿಯೇ ಮಾತುಕತೆ-ಚರ್ಚೆ ಸುರುವಾಗುತ್ತಿದ್ದವು. ಆತ ಕೂಡ ತುಂಬ ಉತ್ಸಾಹದಿಂದಲೇ ಉತ್ತರ ನೀಡುತ್ತಿದ್ದ. ಜನರ ಪ್ರಶ್ನೆಗಳು ಮುಗಿಯುವುದೇ ಇಲ್ಲವೇನೋ ಎನಿಸುತ್ತಿತ್ತು. ಇದು ಆತನ ಅರಿವಿಗೂ ಬಂತು. ಆದರೂ ಉತ್ತರ ನೀಡಲು ಆತ ಬೇಸರಿಸುತ್ತಿರಲಿಲ್ಲ. ಕೇಳಿದವರಿಗೆ ಸಮಾಧಾನವಾಗುತ್ತಿರವುದನ್ನು ಕಂಡು ಆತ ಮತ್ತಷ್ಟು ಖುಷಿಗೊಳ್ಳುತ್ತಿದ್ದ.
“ಬೇಟಾss...”
ಮುಸ್ಲಿಂ ಮುದುಕನೊಬ್ಬ ತುಂಬ ವಿನಯದಿಂದಲೇ ತನ್ನ ಬಿಳಿಗಡ್ಡದ ಮೇಲೆ ಕೈಯಾಡಿಸುತ್ತ ಕರೆದ.
“ಜೀ, ಚಾಚಾ ...”
“ಒಂದ್ ಸವಾಲ್ ಕೇಳ್ಲಿ ?”
“ಜೀ”
“ನಾರಾಜ್ ಆಗ್ಬಾರ್ದ ಮತ್ತ ...”
“ಇಲ್ಲ ... ನಾ ನಾರಾಜ್ ಆಗೂದಿಲ್ಲ ಚಾಚಾ. ನಿಮಗ ಗೊತ್ತೇತಿ ...”
“ಖರೇ, ತುಮ್ ಕೌನ್ ಹೋ ?”
“ಇದಕ್ಕ ನಾ ಒಂದ್ಸಲಾ ಉತ್ತರಾ ಕೊಟ್ಟೇನಿ ಚಾಚಾ. ಮೈ ತೋ ಖುದಾ ಕಾ ಬಂದಾ ಹ್ಞುಂ...” ಆಕಾಶದತ್ತ ಕೈ ಎತ್ತಿ ಆ ಯೋಗಿ ಹೇಳಿದ.
“ಅದೂ ಖರೆ...” ಗಡಬಡಿಸಿದ ಮುದುಕ ತಪ್ಪೊಪ್ಪಿಕೊಂಡ. ಆತನಿಗೆ ಮುಂದೆ ಕೇಳುವ ಧೈರ್ಯವಾಗುತ್ತಿರಲಿಲ್ಲ. ಆತ ಧೈರ್ಯವನ್ನೆಲ್ಲ ಒಟ್ಟುಗೂಡಿಸತೊಡಗಿದ್ದ.
“ಮತ್ತ ...?” ಆ ಬಾಲಯೋಗಿ ನಗುತ್ತಲೇ ಕೇಳಿದ.
“ತುಮ್ ಕೌನಸೇ ಧರ್ಮ ಕೇ ಹೋ ? ಹಿಂದೂ ಯಾ ... ಮುಸ್ಲಿಂ ? ಚಾಚಾ ಬಿಡಿ ಬಿಡಿಯಾಗಿಯೇ ಕೇಳಿಯೇ ಬಿಟ್ಟ !
ಸೇರಿದವರೆಲ್ಲ ಸ್ತಬ್ದರಾದರು.
“ಚಾಚಾss...” ಆ ಬಾಲಯೋಗಿ ಆ ಮುದುಕನ್ನೇ ತೀಕ್ಷ್ಣವಾಗಿ ದಿಟ್ಟಿಸುತ್ತ ಕರೆದ.
“ಜೀss ...”
“ನಾ ನಿಮಗ ಯಾರ ಅನ್ನಿಸ್ತೇನಿ ? ಹಿಂದೂ ಅನ್ನಿಸ್ತೀನೋ ಇಲ್ಲ ಮುಸ್ಲಿಂ ಕಾಣ್ಸತೀನೋ ?”
“ಆ್ಞಂss ... ಅss... ...”
“ಬೋಲೋ ...”
“ನನಗಂತೂ ಮುಸಲಮಾನ ಅನ್ನಿಸ್ತಿ. ... ಹಮಾರೇ ಹೀ ಮಜಹಬ್ ಕೆ ಲಗ್ತೇ ಹೋ ... ಇಸ್ಲಾಂ ಕೇ ಬಂದೇ ಲಗ್ತೇ ಹೋ”
“ನಿಮಗ ಹಂಗ ಅನ್ನಿಸಿದ್ರ ನಾ ಖರೇನ ಮುಸಲ್ಮಾನ ಅದೇನಿ !”
“ಯಾ ಖುದಾss, ತೇರಿ ರಹಮತ್ ಐಸಿ ಹೀ ರಹೇ” ಆ ಮುದುಕ ಆಕಾಶದ ಕಡೆ ನೋಡುತ್ತ ತುಂಬ ಖುಷಿಯಿಂದ ಹೇಳಿದ. ಆತನ ಮುಖ ಮೊರದಗಲವಾಗಿತ್ತು.
ಆ ಗುಂಪಿನಲ್ಲಿದ್ದ ಹಿಂದೂಗಳಿಗೆ ಏನೋ ಅಸ್ವಸ್ಥತೆ ಆವರಿಸಿತು ! ಅವರು ಪರಸ್ಪರ ಮುಖ ಮುಖ ನೋಡಿಕೊಳ್ಳತೊಡಗಿದರು.
“ಸದಾಶಿವss, ನಿನ್ನ ಒಂದ್ಮಾತ ಕೇಳ್ಲಿ ?”
“ಕೇಳ ಬಾಳಾ ...” ಸದಾಶಿವ ವಿನಮ್ರತೆಯಿಂದಲೇ ಎದ್ದು ನಿಂತು ಕೈ ಮುಗಿದು ಹೇಳಿದ.
“ಕುಂಡ್ರು ... ಕುಂಡ್ರು ... ನನಗ ಹೇಳ ಈಗ, ನಿನಗ ನಾ ಯಾರ ಅನ್ನಿಸ್ತೇನಿ ?”
ಸದಾಶಿವ ಕೆಳಗೆ ಕುಳಿತುಕೊಳ್ಳುತ್ತ ಹೇಳಿದ, “ಅಗ್ದೀ ದೇವ್ರ ಆಣೀ ಮಾಡಿ ಹೇಳ್ತ್ಯಾನು ... ನೀ ನಮಗ ಹಿಂದೂನss ಅನ್ನಿಸ್ತಿ. ...ಅಲ್ಲ, ಖರೇ ಅಂದ್ರೂ ನೀ ಹಿಂದೂssನ ಅದಿ... ನಡು ನಡುವ ಮುಸಲರ ಭಾಷಾ ಮಾತಾಡಿದ್ರ ಯ್ಯಾನಾತು ? ಈ ಚಾಚಾಗ ಯ್ಯಾನ ಅನ್ನಿಸಿದ್ರೂ ಅದರಿಂದ ಯ್ಯಾನೂ ಫರಕ್ ಬೀಳೂದಿಲ್ಲ ! ನೀ ಹಿಂದೂನss ಅದಿ”
ಸದಾಶಿವನ ಉತ್ತರದಿಂದ ಹಿಂದೂಗಳಿಗೆ ತುಂಬ ಖುಷಿಯಾಯಿತು. ಯಾಕೆಂದರೆ ಆತ ಅವರ ಮನಸ್ಸಿನೊಳಗೆ ಇದ್ದುದ್ದನ್ನೇ ಹೇಳಿದ್ದ. ಆದರೆ ಮುಸ್ಲಿಂರು ಒಂದಿಷ್ಟು ಬೇಸರಿಸಿಕೊಂಡರು.
ಆ ಯೋಗಿ ಮಾತ್ರ ನಗುತ್ತಲೇ ಇದ್ದ.
ಆತನ ಮುಖದ ಮೇಲಿನ ಕಾಂತಿ ಚಿಮ್ಮುತ್ತಲೇ ಇತ್ತು.
ಆಗ ವಾಮನ ತಾತ್ಯಾ ಕೈ ಮುಗಿದು ಹೇಳಿದ, “ಮಹಾರಾಜ್, ನಿಮ್ಮ ಈ ಉತ್ತರದಿಂದ ನಮಗ ಸಮಾಧಾನ ಆಗಿಲಿಲ್ಲ. ನಾವೆಲ್ಲ ಸೇರಿ, ನೀವು ಯಾರ ಅದೇರಿ ಅನ್ನೋದಕ್ಕ ಏನ ಮಹತ್ವ ಅದ ? ನೀವ್ ಯಾರ ಅದೇರಿ ಅದನ್ನ ನೀವss ನಿಮ್ಮ ಬಾಯಿಂದ ಹೇಳ್ರಿ. ಅಂದ್ರ ನಮಗ ಸಮಾಧಾನ ಆಗ್ತದ”
“ಹ್ಞಾಂ ... ಹ್ಞಾಂ ... ನೀವss ಹೇಳ್ರಿ ನೀವss ಹೇಳ್ರಿ”
“ಅಗ್ದೀ ಬರೋಬ್ಬರಿ...”
“ಸಹೀ ಹೈ ... ಸಹೀ ಹೈ”
ಇದss ಸರಿ. ಕೃಪಾ ಮಾಡಿ ನೀವss ಹೇಳ್ರಿ... ತುಮ್ ಕೌನ್ ಹೋ ? ಹಿಂದೂ ಯಾ ಮುಸ್ಲಿಂ ?
ಆ ಯೋಗಿ ಇನ್ನೂ ನಗುತ್ತಲೇ ಇದ್ದ.
ಆತ ಕೈ ಮೇಲೆತ್ತಿ ಎಲ್ಲರನ್ನೂ ಶಾಂತವಾಗಿಸಿ ಹೇಳಿದ, “ಒಂದ್ ವೇಳೆ ನಾ ಮುಸಲಮಾನ್ರಿಗಿ ಮುಸಲಮಾನ ಅನ್ನಿಸಿದರ, ಹಿಂದೂಗೋಳ್ಗಿ ಹಿಂದೂ ಅನ್ನಿಸಿದ್ರ ಆಕ್ಷೇಪ ಮಾಡುವಂಥದ್ದ ಏನೇತಿ ? ನಾ ಹಿಂದೂನೂ ಹೌದು ... ಮತ್ತ ಮುಸಲಮಾನನೂ ಹೌದು. ಪ್ರಶ್ನೆಯೇ ಇಲ್ಲಿ ಉದ್ಭವಿಸೋದಿಲ್ಲ. ಅಲ್ಲೇನ ಚಾಚಾ ? ಏನಪಾ ಸದಾಶಿವಾ ?”
ಆತನ ಈ ಮಾತು ಯಾರಿಗೂ ತಿಳಿಯಲಿಲ್ಲ. ಆತನ ಹೇಳಿಕೆಯಿಂದ ಎಲ್ಲರಿಗೂ ಸಮಾಧಾನವಾಗುವ ಬದಲು ಮತ್ತಷ್ಟು ಬೆಚೈನಿ ಉಂಟಾಯಿತು.
ಚಾಚಾ ಎದ್ದು ನಿಂತು ಕೇಳಿದ, “ಬೇಟಾ, ನಮಗ ಸಮಾಧಾನ ಆಗದಿಲ್ಲ. ಖರೇ ಏನೇತಿ ಅದನ್ನ ನೀನ ನಿನ್ನ ಬಾಯಿಂದನss ಹೇಳ. ಹಂಗೇನಾರ ನೀ ಹಿಂದೂ ಅಂದ್ರೂ ನಮಗ್ಯಾನ ಫರಕ್ ಬೀಳೂದುಲ್ಲ. ನೀ ಮುಸಲರಾಂವ ಅಂದ್ರೂ ಹಿಂದೂಗೋಳಿಗೂ ಯ್ಯಾನ ಫರಕ್ ಬೀಳೂದುಲ್ಲ. ನಿನ್ನ ಮ್ಯಾಲ ನಮ್ಮೆಲ್ಲರ ಭಕ್ತಿ ಈಗ ಹೆಂಗ ಏತಿ ಹಂಗss ಇರ್ತೇತಿ...”
“ಹಂಗೇನಾರ ಇತ್ತಂದ್ರ ಮತ್ತ ಯಾಕ ಪ್ರಶ್ನಾ ಮಾಡಿದ್ರಿ ? ನಾ ಹಿಂದೂ ಅಥವಾ ಮುಸಲ್ಮಾನ ಆಗೋದ್ರಿಂದ ಜರ್ ಯಾರಿಗೂ ಫರಕ್ ಬೀಳೂದಿಲ್ಲ ಅಂದ್ರ ನೀವ್ಯಾಕ ಅದರಾಗ ಬೀಳಾಕತ್ತೇರಿ ?”
“ಹಂಗೇನಿಲ್ಲ ... ಒಂದ್ಸಲಾ ನಿನ್ನ ಬಾಯಿಂದ ನಾವ್ ಕೇಳ್ಬೇಕಾಗೇತಿ...”
ಸದಾಶಿವ ನುಡಿದ.
“ಆತು, ಆತರಲೇಪಾ ... ಈ ಪ್ರಶ್ನಾ ಭಾಳ ಗಹನ ಏತಿ. ನಿಮ್ಮ ದೃಷ್ಟಿಕೋನದಿಂದ ಅದ್ ಭಾಳ ಮೌಲ್ಯದ್ದ ಅನ್ನಿಸ್ತೇತಿ ! ನನ್ನ ದೃಷ್ಟಿಯೊಳಗ ಇದೆಲ್ಲ ಅರ್ಥ ಇಲ್ಲದ್ದು ! ಆದರ ಒಮ್ಮೀ ಮನುಷ್ಯಾನ ಕಡಿ ಹೆಂಗ ನೋಡ್ಬೇಕ ಅನ್ನೋದನ್ನ ನೀವೆಲ್ಲಾರೂ ಕಲಿಯಾಕss ಬೇಕ. ಈ ಪ್ರಶ್ನೆಕ ನಾ ಉತ್ತರ ಕೊಡೂದಿಲ್ಲ. ನನ್ನ ಅವ್ವನ ಇದಕ್ಕ ಉತ್ತರ ಕೊಡ್ತಾಳು ... !” ಇಷ್ಟು ಹೇಳಿದ ಆ ಯೋಗಿ ತನ್ನನ್ನೇ ನಿಟ್ಟಿಸುತ್ತ ಕುಳಿತ್ತಿದ್ದ ಬಾಯಜಾಬಾಯಿಯತ್ತ ತಿರುಗಿ ಕರೆದ, “ಆಯೀss...”
ಆಕೆ ಎಚ್ಚೆತ್ತುಕೊಂಡಳು.
“ಏನೋ ಬಾಳಾ ...?”
“ನೀ ಈ ಎಲ್ಲಾ ಚರ್ಚಾ ಕೇಳಾಕತ್ತಿಯಲ್ಲ ?” ಆತನ ಗೂಢಧ್ವನಿ ಆಕೆಯ ಕಿವಿಯಲ್ಲಿ ಹೊಕ್ಕಾಗ ಆಕೆ ಮೈಯಲ್ಲಿ ವಿಚಿತ್ರವಾದ ಒಂದು ಚೇತನ ಸಂಚಲನವಾದಂತಾಯಿತು.
“ಹ್ಞಾಂ, ಹೌದಪಾ... ಕೇಳ್ಲಿಕ್ಕತ್ತೇನಿ. ಆದರ ಬಾಳಾ, ಅದರಾಗ ನನಗೇನೂ ತಿಳಿಲಿಲ್ಲ !”
“ಆಯೀ, ನೀನ ಹೇಳ ... ನಾ ಯಾರ ಅದೇನಿ ? ಹಿಂದೂನೋ ಮುಸಲ್ಮಾನೋ ?”
“ಬಾಳಾ, ನನಗ ಅದೇನೂ ತಿಳಿಯೂ ಮಾತಲ್ಲ ತಗಿ. ಮತ್ತ ನನಗ ಅದರ ಗರಜೂ ಇಲ್ಲ ! ನೀ ನನ್ನ ಮಗಾ ಅದೀ ; ನಾ ನಿನ್ನ ಅವ್ವ ಅದೇನಿ ಅನ್ನೋದ ಮಾತ್ರ ನನಗ ಗೊತ್ತದ ಅಷ್ಟ ! ನೀ ಹಿಂದೂ ಆಗಿರು, ಮುಸ್ಲಿಂ ಆಗಿರು ನನಗೇನ ಫರಕ್ ಬೀಳೂದಿಲ್ಲ”
“ಕೇಳ್ರಿ, ಇದು ... ಇದು ನಿಮ್ಮ ಪ್ರಶ್ನಾಕ ಸರಿಯಾದ ಉತ್ತರ ! ನನ್ನ ಈ ಅವ್ವ ನನ್ನ ಕಡೀ ಧರ್ಮದ ದೃಷ್ಟಿಯಿಂದ ನೋಡೂದಿಲ್ಲ. ಅಂಗಡ್ಯಾಂವ ಬೆಲ್ಲಾ ಕೊಡಬೇಕಾರ ಕಾಗದಾ ಸುತ್ತಿ ಕೊಡ್ತಾನಲಾ ... ಹಂಗ ಮನುಷ್ಯನನ್ನ ಧರ್ಮದ ಕಾಗದದಾಗ ಗುಂಡಾಳ್ಸಾಕತ್ತೇರಿ ನೀವು ! ಅರೇ, ಬೆಲ್ಲಾ ಮಹತ್ವದ್ದೋ, ಕಾಗದಾ ಮಹತ್ವದ್ದೋ ? ನಿಮ್ಮ ಎಲ್ಲಾ ಚರ್ಚಾ ಆ ಕಾಗದದ ಸುತ್ತss ಗಿರಕಿ ಹೊಡಿಯಾಕತ್ತೇತಿ. ಯಾವುದರ ರುಚಿ ನೋಡಬೇಕಾಗೇತ್ಯೋ ಅದನ್ನss ಬಿಟ್ಟೇರಿ ! ಯಾವುದನ್ನ ಉಪಯೋಗ ಮಾಡಬೇಕೋ ಅದನ್ನ ಉಪಯೋಗ ಮಾಡವಲ್ಲರಿ ! ನಿಮಗ ಬೇಕಾದ ಬೆಲ್ಲಾ ನೀವ್ ತಿನ್ನಾವ್ರಾದ್ರೂ ಯಾವಾಗ ? ಒಳಗಿನ ಬೆಲ್ಲಾ ತಗದರ ಕಾಗದಾ ಕಚರಾದಾಗ ಸೇರ್ತೇತಿ ಹೌದಿಲ್ಲೋ ? ಹೂವಿನೊಳಗಿನ ಸುಗಂಧ ಭಾಳ ಮುಖ್ಯ ; ಯಾಕಂದ್ರ ಹೂವು ಒಂದss ಒಂದ ದಿನಾ ತಾಜಾ ಇರ್ತೇತಿ. ಮರುದಿನಾ ಅದ ಹಾಳ ಆಗ್ತೇತಿ ! ಅದರೊಳಗಿನ ಸುಗಂಧ ಮಾತ್ರ ಶಾಶ್ವತ ಆಗಿರ್ತೇತಿ. ಕಂಠಕ್ಕಿಂತ ಅದರೊಳಗಿಂದ ಜಿಗಿಯೋ ಧ್ವನಿ ಮಹತ್ವದ್ದು ! ಕಣ್ಣಿಗಿಂತ ಅದರೊಳಗ ಇರೂ ತೇಜಸ್ಸ ಮಹತ್ವದ್ದು ! ಆ ತೇಜಸ್ಸಿನಿಂದಾನ ಈ ಜಗಾ ಕಾಣ್ತೇತಿ ಹೌದಿಲ್ಲೋ ? ಈ ದೇಹ ಯಾವ ಧರ್ಮದ ಅವ್ವ-ಅಪ್ಪನ ಹೊಟ್ಟಿಯೊಳಗ ಹುಟ್ಟೇತಿ ಅನ್ನೋದು ಮಹತ್ವದ್ದಲ್ಲ ; ಈ ದೇಹದೊಳಗಿರೋ ಅವಿನಾಶಿ ತತ್ವಕ್ಕ, ಶಾಶ್ವತ ಆತ್ಮಕ್ಕ ಮಹತ್ವ ಏತಿ ! ನೀವು ಶಾಣ್ಯಾ ಮಂದಿ ಇದ್ದೇರಿ. ಹಿಂಗಾಗಿ ಧರ್ಮದ ಬಗ್ಗೀ ಚರ್ಚಾ ಮಾಡ್ತೇರಿ... ಆದರ ನನ್ನ ಆಯೀ ನಿಮಗಿಂತ ಶಾಣ್ಯಾ ಅದಾಳು ... ಆಕೀ ಧರ್ಮಕ್ಕಿಂತ ಮನುಷ್ಯಾನ ಕಡೀ ನೋಡ್ತಾಳು ; ಮನುಷ್ಯಾನ ಒಳಗಿರೋ ದೈವತ್ವದ ಕಡೀ ನೋಡ್ತಾಳು... ನೀವೂ ಸುದ್ದಾ ಇದ ದೃಷ್ಟಿ ಇಟ್ಕೊಳ್ರಿ ... ಅಂದ್ರ ನಿಮ್ಮ ಜೀವನಾ ಸಾರ್ಥಕ ಆಗ್ತೇತಿ ...”

*****

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.