Showing posts with label ಇತಿಹಾಸ. Show all posts
Showing posts with label ಇತಿಹಾಸ. Show all posts

Thursday, October 17, 2013

'ಇಂಗಳೆ ಮಾರ್ಗ' ಸಿನೇಮಾ ಮಾಡುವ ಮುನ್ನ.....

ಡಾ. ಸಿದ್ರಾಮ ಕಾರಣಿಕ
ದೇವರಾಯ ಇಂಗಳೆಯವರ ಬಗ್ಗೆ 'ಇಂಗಳೆ ಮಾರ್ಗ' ಎನ್ನುವ ಕನ್ನಡ ಸಿನೇಮಾವೊಂದು ರೂಪುಗೊಳ್ಳುತ್ತಿರುವುದು ಖುಷಿಯ ಸಂಗತಿ. ಅಂಥ ಪ್ರಯತ್ನ ಮಾಡುತ್ತಿರುವವರು ನಿಜಕ್ಕೂ ಶ್ಲಾಘನೀಯರು. 
ಆದರೆ ವಾಸ್ತವ ಇತಿಹಾಸವನ್ನು ಮರೆಮಾಚಿ, ಸುಳ್ಳನ್ನು ತುಂಬಿ ಬಿಡುವ ಮಂದಿ ಬಹಳ ಇದ್ದಾರೆ ಎಂಬುದನ್ನು ಚಿತ್ರದ ನಿರ್ದೇಶಕರು ತಿಳಿಯುವುದು ಉತ್ತಮ ಎಂಬುದು ನನ್ನ ಅನಿಸಿಕೆ ಮಾತ್ರವಲ್ಲ ; ದಲಿತನೊಬ್ಬನ ಇತಿಹಾಸವನ್ನು ತಿರುಚುವ ಕೆಲಸ ಆಗಬಾರದು ಎಂಬ ಕಾಳಜಿಯಾಗಿದೆ. ಬಹುಶಃ ನಿರ್ದೇಶಕರು ಇನ್ನೂ ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. ಅದು ಸಿನೇಮಾಗೆ ರೋಚಕತೆಯನ್ನೂ ಇತಿಹಾಸದ ದುರಂತವನ್ನೂ ಕಟ್ಟಿಕೊಡಲು ಸಾಧ್ಯವಾಗುತ್ತದೆ. ಚೇಳು ಕಡಿಸಿಕೊಂಡವನಿಗೆ ಮಾತ್ರ ಅದರ ಉರಿ ಗೊತ್ತಿರುತ್ತದೆ ಎಂಬ ವಿಚಾರವೂ ಮನಸ್ಸಿನಲ್ಲಿರಲಿ.

ಡಾ. ಬಾಬಾಸಾಹೇಬ ಅಂಬೇಡ್ಕರರ ವಿಚಾರಧಾರೆಯನ್ನೇ ಬುಡಮೇಲಾಗಿಸುವ ಪ್ರಸಂಗಗಳು ಮೇಲಿಂದ ಮೇಲೆ ಜರಗುತ್ತಿವೆ. ನಿಜವಾದ ದಲಿತರು (ಅಲ್ಪಸಂಖ್ಯಾತರನ್ನೂ ಒಳಗೊಂಡಂತೆ ಹಿಂದುಳಿದವರು, ಅಸ್ಪೃಶ್ಯರು, ಇತ್ಯಾದಿ ಜನಾಂಗ) ಧ್ವನಿ ಎತ್ತಬೇಕಾದ ಅವಶ್ಯಕತೆ ಇದೆ ಎನ್ನುವುದಕ್ಕಿಂತ ಅನಿವಾರ್ಯತೆ ಇದೆ. ದಲಿತರಲ್ಲದವರು ದಲಿತರ ಹೆಸರು ಹೇಳಿಕೊಂಡು, ಕೆಲವು ದಲಿತರನ್ನು ಒಳಗು ಮಾಡಿಕೊಂಡು ಬೆಳೆದದ್ದು ಸಾಕು. ಈಗಲೂ ನಾವು ಬಾಯಿ ಬಿಡದಿದ್ದರೆ ನಮಗೆ ಉಳಿಗಾಲವಿಲ್ಲ. ಪೇಶ್ವಾಯಿ ಹುಳಗಳಿಗೆ ನಾವು ಪಾಠ ಕಲಿಸಲೇಬೇಕು. ವೇದಿಕೆಯೊಂದು ಸಿದ್ಧವಾಗಬೇಕಾದ ತುರ್ತು ಮ್ಮ ಮುಂದೆ ಇದೆ. ಆಗ ನಾನು ಮತ್ತು ನನ್ನಂತೆಯೇ ಇರುವವರು ವಾಸ್ತವದ ಬಗ್ಗೆ ಹೇಳಲು ಮುಂದಾಗುತ್ತಾರೆ. ನಾನಂತೂ ದೇವರಾಯ ಇಂಗಳೆಯವರ ಮೂರು ಪೆಟ್ಟಿಗೆಗಳ ರಹಸ್ಯವನ್ನೂ ಬಿಚ್ಚಿಡುತ್ತೇನೆ. (ಇದನ್ನು ಸುಮಾರು ಎರಡು ವರ್ಷಗಳ ಹಿಂದೆಯೇ ಗುಲ್ಬರ್ಗ ವಿಶ್ವವಿದ್ಯಾಲಯದ ವೇದಿಕೆಯ ಮೇಲೆ ನಿಂತು ಸಾರಿದ್ದೇನೆ) ಬಲಿತ ದಲಿತರನ್ನೂ ದರಿದ್ರ ದಲಿತರನ್ನೂ ಬಿಟ್ಟು ಬೇರೆ ವಿಚಾರ ಮಾಡಬೇಕಿದೆ. ಅಂಬೇಡ್ಕರ್ ಬಿಟ್ಟು ಹೋದ ರಥವನ್ನು ಹಿಂದಕ್ಕೆ ಒಯ್ಯುವವರ ನಡ ಮುರಿಯಬೇಕಿದೆ.

Friday, September 06, 2013

ನಾನು ಅಸ್ಪ್ರಶ್ಯತೆ ಎಂಬ ಪೆಡಂಬೂತಕ್ಕೆ ಒಳಗಾದವನು !

Nagaraj Hettur

ನನ್ನ ಸಾಕಷ್ಟು (ಫೆಸ್ ಬುಕ್ ) ಗೆಳೆಯರು ಆಗಾಗ ಕೇಳುತ್ತಿರುತ್ತಾರೆ.... ನೀವೇಕೆ ಯಾವಾಗಲೂ ಹಿಂದೂ ವಿರೋಧಿಯಂತೆ ವರ್ತಿಸುತ್ತೀರಲ್ಲಾ...? ಅದರ ವಿರುದ್ಧವೇ ಮಾತನಾಡುತ್ತೀರಲ್ಲಾ...? ಹಿಂದೂ ಧರ್ಮದ ಬಗ್ಗೆ ಪ್ರಶ್ನಿಸಿದಂತೆ ಮುಸ್ಲಿಂ ಧರ್ಮದ ಬಗ್ಗೆಯಾಗಲೀ ಅಥವಾ ಕ್ರಿಶ್ಚಿಯನ್ ಬಗ್ಗೆಯಾಗಲೀ ಮಾತನಾಡಿ ನೋಡೋಣ ಎನ್ನುತ್ತಾರೆ. 
ಅದಕ್ಕೆ ನನ್ನು ಉತ್ತರ ಇಷ್ಟು...!
ನೋಡಿ ನಾನು ಹಿಂದೂ ಧರ್ಮದಲಿದ್ದವನು. ಅದರಲ್ಲು ಹಿಂದೂ ಧರ್ಮ ಒಪ್ಪಿಕೊಂಡ ಅಸ್ಪ್ರಶ್ಯತೆ ಎಂಬ ಪೆಡಂಬೂತಕ್ಕೆ ಒಳಗಾದವನು. ಅದರಿಂದ ನೊಂದವನು, ಬೆಂದವನು ಇನ್ನೂ ಕೂಡ ಅನುಭವಿಸುತ್ತಿರುವವನು, ನಮ್ಮದೇ ಊರುಗಳಲ್ಲಿ, ಹಳ್ಳಿಗಳಲ್ಲಿ ನಗರಗಳಲ್ಲಿ ಇದೇ ಹಿಂದೂ ಧರ್ಮದ ಕಟ್ಟಕಡೆಯ ಎನಿಸಿಕೊಂಡ ದಲಿತ ಅಥವಾ ಅಸ್ಪೃಶ್ಯ ಎನಿಸಿಕೊಂಡವರು ಒಂದೊಂದು ಥರದಲ್ಲಿ ಸಾಮಾಜಿಕ ಅಸಮಾನತೆ, ಕಿರುಕುಳ, ನೋವನ್ನು ಈ ಧರ್ಮದಿಂದ ಲಕ್ಷಾಂತರ ಜನರು ಇಂದಿಗೂ ಅನುಭವಿಸುತ್ತಿದ್ದಾರೆ. ಆ ನೋವು, ಅಸ್ಪೃಶ್ಯತೆಯ ಅನುಭವಕ್ಕೆ ಉಳಿದ ಯಾವ ನೋವು ಸಾಟಿಯಾಗಲಾರದು.
ಅದಕ್ಕೆ ಕಾರಣ ಈ ಧರ್ಮ ಮತ್ತು ಅದರಲ್ಲಿನ ವರ್ಣ ವ್ಯವಸ್ಥೆ. ಅದನ್ನು ಅನುಭವಿಸಿದವರಿಗೇ ಗೊತ್ತು ಅದರ ಕಠೋರತೆ. ಮನಷ್ಯತ್ವವನ್ನು ಒಪ್ಪಿಕೊಳ್ಳದಿದ್ದರೆ ಅದು ಒಂದು ಧರ್ಮ ಎನಿಸಿಕೊಳ್ಳುತ್ತದೆಯೇ...?

ಹಾಗೆಯೇ ಜಾತಿ ವಿನಾಶದ ಬಗ್ಗೆ ಮಾತನಾಡುವವರು ಇನ್ನೊಂದು ಧರ್ಮದ ಬಗ್ಗೆ ಅವರನ್ನು ದ್ವೇಷಿಸಿ ನೋಡಿ ಎನ್ನುವ ಬದಲು ಮೊದಲು ನಮ್ಮ ಧರ್ಮದಲ್ಲಿನ ಹುಳುಕುಗಳ ಬಗ್ಗೆ ಮೊದಲು ಸರಿಪಡಿಸಿಕೊಳ್ಳಲಿ... ಅಂದ ಹಾಗೆ ಕೆಲವರು ಸೋಕಾಲ್ಡ್ ಜಾತಿ ವಿರೋಧಿಗಳು ಹೇಳುತ್ತಿರುತ್ತಾರೆ. ಈಗ ಜಾತಿ ವ್ಯವಸ್ಥೆ ಇಲ್ಲ ನೀವು ಅದನ್ನು ಮರೆತು ಹೊರಬನ್ನಿ ಎನ್ನುತ್ತಾರೆ. ವಿಪರ್ಯಾಸ ಎಂದರೆ ಆ ಮಹಾನುಭವರು ದಲಿತರನ್ನು ಹೊರಬನ್ನಿ ಎನ್ನುತ್ತಾರೆಯೇ ಹೊರತು ತಾವು ಮೇಲ್ಜಾತಿಯಿಂದ ಹೊರಬಂದು ಯಾವತ್ತೂ ದಲಿತನಾಗಲು ಇಷ್ಟಪಡುವುದಿಲ್ಲ... ಇಂಥಹವರು ಜಾತಿಯ ವಿರುದ್ಧ ಹೋರಾಡುತ್ತಾರೆ....! ಹಿಂದೂ ಧರ್ಮದಲ್ಲಿನ ಅಸ್ಪ್ರಶ್ಯತೆ ಮತ್ತು ಜಾತಿಯತೆ ಇಡೀ ಸಮಾಜಕ್ಕೆ ಅಂಟಿದ ರೋಗ. ಹಾಗಾಗಿ ಅದನ್ನು ಆ ಧರ್ಮದಲಿದ್ದು ಅನುಭವಿಸುವರು ತಾನೇ ಅದರ ವಿರುದ್ಧ ಮಾತನಾಡಬೇಕು... ಗೊತ್ತಿಲ್ಲದ ಬೇರೆಯ ಧರ್ಮದ ಬಗ್ಗೆ ಮಾತನಾಡಿ ಫಲವೇನು ಅಲ್ಲವೇ...?

Saturday, September 08, 2012

ಸಮಾಜ ಒಡೆಯುವ ಹುನ್ನಾರ

 * ಡಾ. ಸಿದ್ರಾಮ ಕಾರಣಿಕ
ಏಜಾಜ್ ಆಶ್ರಫ್ ಅವರು ತುಂಬ ಓದಿಕೊಂಡಿರಬಹುದು. ಹಲವಾರು ವಿಷಯಗಳನ್ನು ತಿಳಿದುಕೊಂಡಿರಬಹುದು. ಆದರೆ ಭಾರತೀಯ ಮನೋಸ್ಥಿತಿಗಳ ನಿಜವಾದ ಅರಿವು ಇಟ್ಟುಕೊಳ್ಳದೇ ಲೇಖನಿಯನ್ನು ಆಡಿಸುವ, ಹಾದಿ ತಪ್ಪಿಸುವ ವಿಚಾರವನ್ನು ಇಟ್ಟುಕೊಂಡಿರುವುದಂತೂ ಸ್ಪಷ್ಟ ! ವಿಜಯ ಕರ್ನಾಟಕ ದಿನಪತ್ರಿಕೆಯ ಶುಕ್ರವಾರ ದಿನಾಂಕ : 31-08-2012 ರಂದು ಪತ್ರಕರ್ತ ಏಜಾಜ್ ಆಶ್ರಫ್ ಅವರು ವಿ.ಪಿ.ಸಿಂಗ್ ಮತ್ತು ಮಹಾನ್ ಭಾರತೀಯರು' ಎಂಬ ಶೀರ್ಷಿಕೆಯಲ್ಲಿ ಬರೆದ ಲೇಖನವು ತುಂಬ ಮಾರ್ಮಿಕವಾಗಿ ಮೂಡಿ ಬಂದಿದೆ. ಆದರೆ ವಿಷಯವನ್ನು ವಿಶ್ಲೇಷಣೆ ಮಾಡುವಾಗ ಬರಹಗಾರ ಯಾವುದನ್ನೋ ಮನಸ್ಸಿನಲ್ಲಿ ಗುಪ್ತವಾಗಿಟ್ಟುಕೊಂಡು, ತಲೆ ಕೆಡಿಸಿಕೊಂಡು ಲಂಗು-ಲಗಾಮಿಲ್ಲದೆ ತಮ್ಮ ವಿಚಾರ ಲಹರಿಯನ್ನು ಹರಿಯ ಬಿಟ್ಟಿದ್ದಾರೆ.

ಸಿಎನ್‌ಎನ್-ಐಬಿಎನ್, ಹಿಸ್ಟರಿ ಟಿವಿ 18, ಔಟ್‌ಲುಕ್ ಕೈಗೊಂಡ ಮಹಾತ್ಮಾ ಗಾಂಧಿಯ ನಂತರ ಅತಿಮಾನ್ಯ ಭಾರತೀಯ' ಎಂಬ ಹುಡುಕಾಟದಲ್ಲಿ ಮೊಟ್ಟ ಮೊದಲು ಹೆಸರು ಇರುವುದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರದು. ಹಾಗೇ ನೋಡಿದರೆ, ಗಾಂಧಿಗಿಂತ ಒಂದು ಕೈ ಮೇಲಾಗಿಯೇ ಸಾಧನೆ ಮಾಡಿದವರು ಅಂಬೇಡ್ಕರ್. ಸ್ವತಂತ್ರ ಭಾರತದ ಅತಿಮಾನ್ಯ ಭಾರತೀಯ' ಎಂದು ಹೆಸರು ನೀಡಿ ಹುಡುಕಾಟ ನಡೆಸಿದ್ದರೂ ಅಂಬೇಡ್ಕರ್ ಅವರೇ ಮೊದಲಿಗರಾಗಿ ಇರುತ್ತಿದ್ದರು. ಆದರೆ ತಿಳಿಯಲಾರದವರು ಮಾಡಿದ ಅಥವಾ ತಿಳಿದೂ ತಿಳಿದು ಮಾಡಿದ ಮಹಾನ್ ಶೋಧ ಇದು ಎಂದು ಭಾವಿಸಿಕೊಂಡಿರುವ ಏಜಾಜ್ ಆಶ್ರಫ್ ಅವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನೇ ಗುರಿಯಾಗಿಸಿಕೊಂಡು ಈ ಲೇಖನ ಬರೆದಿರುವಂತೆ ತೋರುತ್ತದೆ. ಇಲ್ಲಿ ಅವರೇ ಹೇಳುವ ಹಾಗೆ ಸಾಧಾರಣವಾಗಿ ರಾಜಕೀಯ ಪೂರ್ವಾಗ್ರಹಗಳು ಕಾಣಿಸುತ್ತವೆ !'

ಇಡೀ ಲೇಖನದಲ್ಲಿ ವಿ.ಪಿ. ಸಿಂಗ್ ಅವರನ್ನು ನೆನಪಿಸಿಕೊಳ್ಳುತ್ತಲೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಪ್ರತ್ಯೇಕಿಸುವ ಕೆಲಸವನ್ನು ಲೇಖನದಲ್ಲಿ ಮಾಡಲಾಗಿದೆ. 'ನೂರು ಗಣ್ಯ ವ್ಯಕ್ತಿಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮೊದಲಿಗರಾದರು. ಗಣ್ಯ ವ್ಯಕ್ತಿಗಳನ್ನು ಜಾತಿ ಮಸೂರದಲ್ಲಿ ನೋಡದಿದ್ದರೂ ಸಹ ಅಂಬೇಡ್ಕರ್ ಜನಪ್ರಿಯ ಅನುಮೋದನೆಯನ್ನು ಶ್ಲಾಘಿಸಿ ಸಮರ್ಥಿಸಿಕೊಳ್ಳಬಹುದು' ಎಂದು ಆರಂಭದಲ್ಲಿ ಹೇಳುವ ಲೇಖಕರು, ಆನಂತರದಲ್ಲಿ ಸಮಕಾಲೀನ ರಾಷ್ಟ್ರೀಯ ಸಂದರ್ಭದಲ್ಲಿ ಯಾವುದೇ ಪ್ರಮಾಣದಲ್ಲಾಗಲೀ, ಅಂಬೇಡ್ಕರ್‌ರಿಗೆ ಭಾರತ ರತ್ನ' ಪ್ರಶಸ್ತಿಯನ್ನು ಮರಣೋತ್ತರವಾಗಿ ಕೊಡುವ ಮೂಲಕ ಅವರನ್ನು ದಲಿತರ ದೇವತೆಯನ್ನಾಗಿ ಮಾಡಿದ ವಿಪಿ ಸಿಂಗ್ ಅವರ ಹೆಸರನ್ನು ಸಿಎನ್‌ಎನ್ ಐಬಿಎನ್ ಸಿದ್ಧಪಡಿಸಿದ ನೂರು ಜನರ ಪಟ್ಟಿಯಲ್ಲಿ ಸೇರಿಸದೇ ಇರುವುದು ದೊಡ್ಡ ವಿಪರ್ಯಾಸ' ಎನ್ನುತ್ತಾರೆ. ಅಷ್ಟೇ ಅಲ್ಲ ಇಂದು ನಾವು ವಿಪಿ ಸಿಂಗ್ ಅವರನ್ನು ರಾಜಕೀಯವಾಗಿ ಒಪ್ಪಿಕೊಳ್ಳುವುದಕ್ಕಿಂತ ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳುವುದು ಅನುಕೂಲಕರವಿರಬಹುದೇ ?' ಎಂಬುದಾಗಿ ಪ್ರಶ್ನೆ ಎಸೆದಿದ್ದಾರೆ !

ಏಜಾಜ್ ಆಶ್ರಫ್ ಅವರ ಒಟ್ಟು ಲೇಖನದಲ್ಲಿ ವಿಪಿ ಸಿಂಗ್ ಅವರನ್ನು ಮರೆತ ಬಗ್ಗೆ ಖೇದವಿದೆ. ಸಿಂಗ್ ಅವರ ಕಾರ್ಯ ವೈಖರಿಯನ್ನು ಸಾಧ್ಯಂತವಾಗಿ ಅವರು ಬಿಡಿಸಿ ಇಟ್ಟಿದ್ದಾರೆ. ಯಾವುದೇ ಸಂದರ್ಭದಲ್ಲಿ ವಿಪಿ ಸಿಂಗ್ ಅವರನ್ನು ನಾವು ವಿರೋಧಿಸಲು ಕಾರಣಗಳೇ ಇಲ್ಲ. ರಾಜಕೀಯದಲ್ಲಿ ಇಡೀ ದೇಶ ಮೆಚ್ಚುವ ಕೆಲಸ ಮಾಡಿದವರು ಸಿಂಗ್. ಅವರ ಬಗ್ಗೆ ಗೌರವವಿದೆ. ಆದರೆ ಏಜಾಜ್ ಅವರಂಥವರು ಪರೋಕ್ಷವಾಗಿ ಆ ಭೇದಗಳನ್ನು ಹುಟ್ಟು ಹಾಕುವಂತಿದೆ. ಅವರು ಇನ್ನುಳಿದ ಯಾರ ಹೆಸರನ್ನಾದರೂ ತೆಗೆದುಕೊಂಡು ಚರ್ಚೆ ಮಾಡಬಹುದಿತ್ತು. ಸಮಾಜವನ್ನು ಸೂಕ್ಷ್ಮವಾಗಿ ಒಡೆಯುವ ಹುನ್ನಾರ ಏಜಾಜ್ ಅವರ ಮನದಲ್ಲಿ ಮನೆ ಮಾಡಿರುವುದು ಮೇಲುನೋಟಕ್ಕೆ ಕಂಡುಬರುವ ಸತ್ಯ.

ವಿಪಿ ಸಿಂಗ್ ಅವರ ಆಡಳಿತಾವಧಿಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ' ದೊರೆತದ್ದು, ಕೆ.ಆರ್. ನಾರಾಯಣನ್ ಅವರು ರಾಷ್ಟ್ರಪತಿಯಾದುದ್ದನ್ನು ತಳಕು ಹಾಕಿ ನೋಡಿರುವ ಕ್ರಮವಂತೂ ಏಜಾಜ್ ಅವರ ಕೆಳಮಟ್ಟದ ವಿಚಾರ ಸರಣಿಯೇ ಆಗಿದೆ ಎಂಬುದನ್ನು ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ.

ಗುಪ್ತ ಗುಲಾಮಗಿರಿಯಲ್ಲಿ ಇನ್ನೂ ಇರಬೇಕೆಂಬ ಮಾತು ಅವರ ಇಡೀ ಲೇಖನ ಪ್ರತಿನಿಸುತ್ತದೆ. ಪರಿಪೂರ್ಣವಾಗಿ ಅಂಬೇಡ್ಕರ್ ಅವರನ್ನು ಅರಿತುಕೊಳ್ಳದೇ ಮನಸ್ಸಿಗೆ ಬಂದುದನ್ನು ಗೀಚುವ ಮೂಲಕ ಒಂದೀಡಿ ಸಮಾಜದ ದಿಕ್ಕೂ ತಪ್ಪಿಸುವ ಏಜಾಜ್ ಅವರ ಪರಿಕ್ರಮ ನಿಜಕ್ಕೂ ವಿಪರ್ಯಾಸ !

Tuesday, September 04, 2012

ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ !

-ಡಾ. ಮೂಡ್ನಾಕೂಡು ಚಿನ್ನಸ್ವಾಮಿ


 ”ಜಾತಿಯ ಗೋಡೆಯನ್ನು ಕೆಡವಿ”
‘ಜಾತಿಯ ಗೋಡೆಯನ್ನು ಕೆಡವಿ’ ಎಂಬ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ನವಿ ಪಿಳ್ಳೆ  ಹೊರಡಿಸಿರುವ ಪತ್ರ ಕಠಿಣ ಶಬ್ದಗಳಿಂದ ಕೂಡಿದ್ದು ಹಲವಾರು ದೇಶಗಳಲ್ಲಿ ಸಂಚಲನ ಮೂಡಿಸಿದೆ.  ಜಾತಿಪದ್ಧತಿಯಿಂದುಂಟಾಗುವ  ಮಾನವ ಹಕ್ಕು ಉಲ್ಲಂಘನೆಯನ್ನು  ಅವರು ಗುಲಾಮಗಿರಿ ಹಾಗೂ ಅಪಾರ್ಥೀಡ್‍ಗಳಿಗೆ ಹೋಲಿಸಿದ್ದಾರೆ. ಮಾನವ ಜನಾಂಗದ ಆ ಎರಡು ಕಪ್ಪುಚುಕ್ಕೆಗಳನ್ನು ಹೋಗಲಾಡಿಸಿದಂತೆಯೇ ಜಾತಿಪದ್ಧತಿಯನ್ನು ಸಹ ನಿರ್ಮೂಲನ ಗೊಳಿಸಬೇಕು ಎಂದು ಕರೆ ನೀಡಿದ್ದಾರೆ.  ಅದಕ್ಕಾಗಿ ಎಲ್ಲ ದೇಶಗಳ ಸಹಕಾರವನ್ನು ಅವರು ಬಯಸುತ್ತಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 260 ಮಿಲಿಯನ್ ಜನರು ಪ್ರಪಂಚದಾದ್ಯಂತ ಜಾತಿ ಪದ್ಧತಿಯ ದೌರ್ಜನ್ಯಗಳಿಂದ ಬಳಲುತ್ತಿದ್ದಾರೆ.  ಭಾರತ ಪ್ರಮುಖವಾಗಿ ಕಾಣಿಸಿಕೊಂಡರೂ ನೇಪಾಳ, ಬಾಂಗ್ಲಾ ದೇಶ, ಪಾಕಿಸ್ತಾನ, ದಕ್ಷಿಣ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಭಾರತೀಯ ವಸಾಹತು ಸ್ಥಳಗಳಲ್ಲಿ ಜಾತಿಭೇದ ನೀತಿ ಇನ್ನೂ ಚಲಾವಣೆಯಲ್ಲಿದೆ ಎಂದು ನವಿ ಪಿಳ್ಳೆ ಬರೆಯುತ್ತಾರೆ.
ಹುಬ್ಬಳ್ಳಿಯ ಕೆಲವು ಗೆಳೆಯರು ‘ಮಾನವ ಹಕ್ಕು ಪ್ರತಿಪಾದನಾ ಸಂಸ್ಥೆ’ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ.  ಏಪ್ರಿಲ್ 2008 ರಲ್ಲಿ ನಡೆದ ಅದರ ಉದ್ಛಾಟನಾ ಸಮಾರಂಭದಲ್ಲಿ ನಾನು ಒಂದು ಮಾತು ಹೇಳಿದ್ದೆ.  ‘ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತೆಯ ಆಚರಣೆಯನ್ನು ಅಪರಾಧವೆಂದು ಪರಗಣಿಸಲಾಗಿದೆ.  ಆದರೆ ವಾಸ್ತವದಲ್ಲಿ ಹಳ್ಳಿ, ಪಟ್ಟಣವೆನ್ನದೆ ಅದಿನ್ನೂ ಜೀವಂತವಾಗಿದೆ.  ಅದರ ಮಾತೃಗರ್ಭವಾದ ಜಾತಿ ಪದ್ಧತಿ ಅಳಿಯದ ಹೊರತು ಅಸ್ಪೃಶ್ಯತೆ ನಾಶವಾಗುವುದಿಲ್ಲ. ಆದ್ದರಿಂದ ಜಾತಿ ಪದ್ದತಿಯ ಆಚರಣೆಯನ್ನು ಸಂವಿಧಾನದಲ್ಲಿ ಅಪರಾಧವೆಂದು ಪರಿಗಣಿಸಿ ತಿದ್ದುಪಡಿ ತರಬೇಕು. ಆಗ ಅದರ ಪಾಪದ ಪಿಂಡವಾದ ಅಸ್ಪೃಶ್ಯತೆ ನಿವಾರಣೆಗೆ ಪ್ರಯತ್ನಿಸಬಹುದು’ ಎಂದು. ಆ ಸಂದರ್ಭದಲ್ಲಿ ಉಪಸ್ಥಿತರಾಗಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀ ಎಸ್.ಆರ್.ನಾಯಕ್ ರವರು ಆ ಮಾತನ್ನು  ಅನುಮೋದಿಸಿದ್ದರು ಮತ್ತು ನಂತರ ಬೆಂಗಳೂರಿನಲ್ಲಿ ನಡೆದ ಇನ್ನೊಂದು ಸಭೆಯಲ್ಲಿ ಜಾತಿ ಪದ್ದತಿ ಆಚರಣೆಯನ್ನು ಸಂವಿಧಾನ ಮೂಲಕ ಅಳಿಸಿಹಾಕಬೇಕು ಎಂಬ ಕರೆಯನ್ನು ಸಹ ಕೊಟ್ಟಿದ್ದರು.  ಇದರ ನೆನಪು ಈ ಸಂದರ್ಭದಲ್ಲಿ ಪ್ರಸ್ತುತವೆಂದು ಉಲ್ಲೇಖಿಸುತ್ತಿದ್ದೇನೆ.
ಜಾತಿಯಾಧಾರಿತ ತಾರತಮ್ಯ – ಮಾನವ ಹಕ್ಕು ಉಲ್ಲಂಘನೆ:
ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಷತ್  ಜಿನೀವಾದಲ್ಲಿ ನಡೆದ ಸಭೆಯಲ್ಲಿ ಜಾತಿಯಾಧಾರಿತ ತಾರತಮ್ಯವನ್ನು  ಮಾನವ ಹಕ್ಕುಗಳ ಉಲ್ಲಂಘನೆಯೆಂದು ಪರಿಗಣಿಸಿ ಠರಾವು ಪಾಸುಮಾಡಿದೆ. ಅದಕ್ಕೆ ನೇಪಾಳ ಬೆಂಬಲ ನೀಡಿದೆ. ನೇಪಾಳ ದೇಶವು ನೀಡಿದ ಬೆಂಬಲವು ಮಹತ್ವದ್ದು ಎಂಬುದು ವಿಶೇಷ. ಯಾಕೆಂದರೆ ಇತ್ತೀಚಿನವರೆಗೂ ವಿಶ್ವದ ಏಕೈಕ ಹಿಂದೂ ರಾಷ್ಟ್ರ್ರವಾಗಿದ್ದ ನೇಪಾಳದಲ್ಲಿ ಭಾರತದಲ್ಲಿರುವಂತೆಯೆ ಹಿಂದೂಗಳು ಬಹುಸಂಖ್ಯಾತರು ಮತ್ತು ಅಲ್ಲಿಯೂ ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳು ಬೇರು ಬಿಟ್ಟು ಸಮಾಜವನ್ನು ಕುರೂಪಗೊಳಿಸಿವೆ.  ವಿಪರ್ಯಾಸವೆಂದರೆ ಭಾರತ ಈ ಠರಾವನ್ನು ವಿರೋಧಿಸುತ್ತಿದೆ.  ಜಾತಿಪದ್ಧತಿ ಎಂಬುದು ಹಿಂದೂ ಧರ್ಮದಲ್ಲಿ ಕುಟುಂಬ ವ್ಯವಸ್ಥೆಯಾಗಿದ್ದು ಅದು ದೇಶದ ಆಂತರಿಕ ವಿಚಾರವೆಂದೂ, ಅದರ ನೇತ್ಯಾತ್ಮಕ ಅಂಶಗಳಾದ ಅಸ್ಪೃಶ್ಯತೆ, ಇತ್ಯಾದಿಯನ್ನು ಸಂವಿಧಾನದ ಮೂಲಕ ಹೋಗಲಾಡಿಸಿಕೊಂಡಿದೆಯೆಂದು ವಾದಿಸುತ್ತಾ ಬಂದಿದೆ.
ಭಾರತ ಯಾಕೆ ಈ ನೀತಿ ಅನುಸರಿಸುತ್ತಿದೆ ಎಂಬುದು ಅರ್ಥವಾಗದ ವಿಷಯ. ಜಾತಿ ವೃತ್ತಿ ಸಂಬಂಧಿತವಲ್ಲ ಎಂಬುದು, ಆನುವಂಶಿಕವಲ್ಲ ಎಂಬುದು ಭ್ರಮಾತ್ಮಕವಾದುದು.  ಈ ನಿಲುವು ನೈತಿಕವಾದುದಲ್ಲ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ.  ಇಂಥ ಧೋರಣೆಯಿಂದ ಭಾರತ ಸಾಧಿಸ ಬೇಕಾಗಿರುವುದಾದರೂ ಏನನ್ನು.? ದೇಶದೊಳಗಿನ ಇಂಥ ಗಂಭೀರ ಸಮಸ್ಯೆಯೊಂದರ ಬಗ್ಗೆ ತನ್ನ ಅಂತರರಾಷ್ಟ್ರೀಯ ನಿಲುವು ಸತ್ಯಕ್ಕೆ ನಿಷ್ಠವಾಗಿರಬೇಕಾದ ಅನಿವಾರ್ಯತೆಯನ್ನು ಮರೆತು ಭಾರತ ವರ್ತಿಸುತ್ತಿದೆಯೆ? ಅದರ ಪರಿಣಾಮಗಳನ್ನು ಯೋಚಿಸಿದೆಯೆ?  ವಿಶ್ವಸಂಸ್ಥೆಯು ಜನಾಂಗೀಯ ಭೇದ ವಿನಾಶ ಸಮಿತಿಯೊಂದನ್ನು (Committee on Elimination of Racial Discrimination – CERD) ರಚಿಸಿದೆ.  ಅದು ಎಲ್ಲಾ ವಿಧದ ಜನಾಂಗೀಯ ಭೇದಗಳ ವಿನಾಶದ ಕುರಿತು 1968 ರಲ್ಲಿ  ಏರ್ಪಟ್ಟ ಅಂತರರಾಷ್ಟ್ರೀಯ ಒಡಂಬಡಿಕೆಗೆ ಅನುಗುಣವಾಗಿ ರಚನೆಯಾಗಿದೆ.  ಆ ಒಡಂಬಡಿಕೆಗೆ ಭಾರತವೂ ಸಹಿ ಮಾಡಿದೆ.  ಆ ಒಡಂಬಡಿಕೆಯ ಪ್ರಕಾರ  ವಿಶ್ವಸಂಸ್ಥೆಯು ಜನಾಂಗ, ವರ್ಣ, ಅನುವಂಶೀಯ ಅಥವಾ ಕುಲಸಂಬಂಧೀ ಭೇದಗಳ ವಿರುದ್ಧ ರಕ್ಷಣೆಯ ಭರವಸೆಯನ್ನು ತನ್ನ ಸದಸ್ಯ ರಾಷ್ಟ್ರೀಯ ಪ್ರಜೆಗಳಿಗೆ ನೀಡುತ್ತದೆ.  1996 ರಲ್ಲಿ  ಜನಾಂಗೀಯ ಭೇದ ವಿನಾಶ ಸಮಿತಿಯು ದಲಿತರ ವಿರುದ್ಧ ನಡೆಸಲಾಗುವ ಭೇದವನ್ನು ಸಹ ಅನುವಂಶೀಯ ಆಧಾರದ ಭೇದ ನಿಷೇಧದ ಅಡಿಯಲ್ಲಿ ಪರಿಗಣಿಸಬಹುದು ಎಂದು ತೀರ್ಮಾನಿಸಿದೆ. ಒಬ್ಬ ಸಹಿದಾರನಾಗಿ ಭಾರತ ಒಡಂಬಡಿಕೆಯಲ್ಲಿ ಭೇದ ನೀತಿಗೊಳಪಡುವವರ ರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮಗಳನ್ನು ಕಾಲಕಾಲಕ್ಕೆ ವರದಿಗಳ ಮೂಲಕ ನೀಡಬೇಕಾಗಿರುತ್ತದೆ.  ಅದನ್ನು ಸಮಿತಿಯು ಪರಿಶೀಲನಾ ಸಭೆಗಳಲ್ಲಿ ಪರಾಂಬರಿಸಿ ರಚನಾತ್ಮಕ ವಾಗ್ವಾದಗಳನ್ನು ನಡೆಸುತ್ತದೆ ಮತ್ತು ಸುಧಾರಣಾ ಸಲಹೆಗಳನ್ನು ನೀಡುತ್ತದೆ.
ಇಂತಹ ಒಂದು ಠರಾವನ್ನು 1996 ರಿಂದಲೂ ಭಾರತ ವಿರೋಧಿಸುತ್ತಾ ಬಂದಿದೆ.  ಭಾರತವು ಹತ್ತು ವರ್ಷಗಳ ನಂತರ ಫೆಬ್ರವರಿ 2007 ರಲ್ಲಿ ಈ ಠರಾವಿಗೆ ಉತ್ತರ ನೀಡಿದೆ.  ವಿಚಿತ್ರವೆಂದರೆ, ಅದರಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಒಂದು ಚಕಾರವೂ ಇಲ್ಲ. ಪ್ರತಿ ಘಂಟೆಗೆ ಇಬ್ಬರು ದಲಿತರನ್ನು ಥಳಿಸಲಾಗುತ್ತದೆ. ಮೂವರು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಪಡುತ್ತಾರೆ.  ಇಬ್ಬರು ದಲಿತರು ಕೊಲ್ಲಲ್ಪಡುತ್ತಾರೆ  ಎರಡು ದಲಿತರ ಮನೆಗಳನ್ನು ಸುಡಲಾಗುತ್ತದೆ, ಎಂಬ ಅಂಕಿಅಂಶಗಳು ಅಧಿಕೃತವಾಗಿ ಲಭ್ಯವಿವೆ.  ಸಫಾಯಿ ಕರ್ಮಚಾರಿ ಆಂದೋಲನವು ಮೇ 2009 ರಲ್ಲಿ ದೆಹಲಿಯೊಂದರಲ್ಲೇ 1085 ಬರಿಗೈ ಜಾಡಮಾಲಿಗಳು ಇರುವರೆಂಬ ವಸ್ತುಸ್ಥಿತಿಯನ್ನು  ಮಾಹಿತಿ ಹಕ್ಕುಗಳ ಕಾಯಿದೆ ಅಡಿಯಲ್ಲಿ ಪಡೆದು ಸರ್ವೊಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತು.  ಸರ್ಕಾರದ ಕಡತಗಳಲ್ಲೆ ಕಂಡು ಬರುವ ಇಂಥ ಬರ್ಬರ ಸತ್ಯಗಳನ್ನು  ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹೇಗೆ ಅಲ್ಲಗಳೆಯಲಾಗಿದೆ ಎಂಬುದು ಸೋಜಿಗವೂ, ವಿಷಾದನೀಯವೂ ಆಗಿದೆ.
ಕೇವಲ ವಿಶ್ವಸಂಸ್ಥೆಯಷ್ಟೆ ಅಲ್ಲ, ಭಾರತದ ಜಾತಿಯಾಧಾರಿತ ಭೇದವನ್ನು ಖಂಡಿಸಿ ಯೂರೋಪು ಒಕ್ಕೂಟವೂ ಠರಾವು ಪಾಸು ಮಾಡಿದೆ.  ಯೂರೋಪು ಸಂಸದೀಯ ಮಾನವ ಹಕ್ಕು 2000, 2002, 2003 ಮತ್ತು 2005ರ ವರದಿಗಳಲ್ಲಿ ಜಾತಿಭೇದದ ಕುರಿತು, ದಲಿತರ ಸ್ಥಿತಿಗತಿ ಕುರಿತು ಉಲ್ಲೇಖಗಳಿವೆ.  ಈ ವರದಿಗಳು ವ್ಯಾಪಕವಾಗಿ ವಿತರಿಸಲ್ಪಡುತ್ತವೆ.  ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಷ್ಟೆ ಅಲ್ಲದೆ ಯೂರೋಪು ಸದಸ್ಯ ರಾಷ್ಟ್ರಗಳು, ಐಎಲ್ಓ, ಯುನಿಸೆಫ್,  ಮುಂತಾದ ಸಂಸ್ಥೆಗಳನ್ನು ವರದಿ ತಲುಪುತ್ತದೆ.  ಆದರೂ ದೇಶದಾದ್ಯಂತ ಎಗ್ಗಿಲ್ಲದೆ ನಡೆಯುತ್ತಿರುವ ದಲಿತರ ದಮನವನ್ನು  ಮರೆಮಾಚಲು ಭಾರತ ಪ್ರಯತ್ನಿಸುತ್ತಲೇ ಇದೆ.
ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ :
ಉತ್ತರ ಭಾರತದ ಹಳ್ಳಿಗಳಲ್ಲಿ ಕೆಲವು ಅಂತರ್ಜಾತೀಯ  ವಿವಾಹಗಳು ಇಂದಿಗೂ ಕೊಲೆಯಲ್ಲಿ ಪರ್ಯವಸಾನವಾಗುತ್ತವೆ. ಅಸಮಾನತೆಯೆ ತತ್ವವಾಗಿರುವ ಜಾತಿ ಪದ್ಧತಿ ಮತ್ತು ಸಮಾನತೆ ಹಾಗೂ ಭ್ರಾತೃತ್ವವನ್ನು ಬೋಧಿಸುವ  ಪ್ರಜಾಪ್ರಭುತ್ವ ಪರಸ್ಪರ ಎಣ್ಣೆ ಸೀಗೆಕಾಯಿ ಸಂಬಂಧ ಹೊಂದಿದ ವಿರೋಧೀ ಭಾವಗಳು. ಆದ್ದರಿಂದ ಭಾರತದ ಆತ್ಮ ಅಲಿಖಿತ ಸಂವಿಧಾನವಾಗಿರುವ ಜಾತಿಪದ್ದತಿಯೆಂದರೆ ತಪ್ಪಾಗಲಾರದು. ದುರದೃಷ್ಟವಶಾತ್ ಭಾರತದ ಒಳಗಡೆ ಚರ್ಚೆಗೊಳಗಾಗುವ ವಿಷಯ ಜಾತಿಪದ್ಧತಿ ಒಡಲುಗೊಂಡಿರುವ ಅಸ್ಪೃಶ್ಯತೆಯನ್ನು ಕುರಿತು ಮಾತ್ರ. ಇದು ಮಾನವತೆಗೆ ಅಂಟಿಕೊಂಡ ದೊಡ್ಡ ಕಳಂಕ ಎಂದು ವರ್ಣಿಸಿ ಎಲ್ಲ ಜಾತಿಯವರು ಖಂಡಿಸಲು ಇಚ್ಛಿಸುತ್ತಾರೆ. ಆದರೆ ಹುಟ್ಟುತ್ತಲೇ ಮೇಲು ಕೀಳನ್ನು ನಿರ್ಧರಿಸಿ ಬಿಡುವ ಜಾತಿಯೆ ಮಾನವತೆಗೆ ದೊಡ್ಡ ಕಳಂಕ ಎಂದು ಖಂಡಿಸಲು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ವರ್ಣಾಶ್ರಮಕ್ಕೆ ಸಿಕ್ಕ ಗಾಂಧೀಜಿಯವರ ಬೆಂಬಲ ಜಾತಿಪದ್ಧತಿಗೂ ಪರೋಕ್ಷವಾಗಿ ಸಿಕ್ಕಿತೆಂಬ ನಂಬಿಕೆ. ಜಾತಿ ಪದ್ಧತಿಯ ಎಲ್ಲಾ ಅವಘಡಗಳನ್ನು ಭಾರತ ದಿನನಿತ್ಯ ಅನುಭವಿಸುತ್ತಲೇ ಸಾಮಾಜಿಕವಾಗಿ, ರಾಜಕೀಯವಾಗಿ ಕುಬ್ಜವಾಗಿದೆ. ದೇಶ ಆರ್ಥಿಕವಾಗಿ ಬಲಿಷ್ಠವಾಗಿದೆ ಎಂದು ಯಾವ ಸಮಾಜವಾದಿಯೂ ಹೇಳಲಾರ. ಅಂಬೇಡ್ಕರರನ್ನು ಹೊರತುಪಡಿಸಿ ಜಾತಿ ಪದ್ಧತಿಯ ಅನಿಷ್ಟಗಳನ್ನು ತಳ ಸ್ಪರ್ಶಿಯಾಗಿ ಅಭ್ಯಸಿಸಿದವರು ರಾಮಮನೋಹರ ಲೋಹಿಯಾ. ಜಾತಿ ಪದ್ಧತಿಯಿಂದ ಆಡಳಿತ ರಂಗ ಕಲುಷಿತಗೊಳ್ಳುತ್ತಿದೆ ಎಂಬ ಒಳ ನೋಟವಿದ್ದ ಲೋಹಿಯಾ ‘ಶೂದ್ರ ದ್ವಿಜರ ನಡುವೆ ಮದುವೆಯಾಗುವುದು ಆಡಳಿತ ರಂಗ, ಸಶಸ್ತ್ರ ಪಡೆಗಳ ನೇಮಕಾತಿಗೆ ಉಳಿದವುಗಳೊಂದಿಗೆ ಒಂದು ಅರ್ಹತೆಯೆಂದೂ, ಜೊತೆಗೂಡಿ ಊಟ ಮಾಡಲು ನಿರಾಕರಿಸುವುದನ್ನು ಒಂದು ಅನರ್ಹತೆಯೆಂದೂ ಕಟ್ಟಳೆಯಾದ ದಿನವೇ ಜಾತಿ ವಿರುದ್ಧ ಪ್ರಾಮಾಣಿಕ ಹೋರಾಟ ಪ್ರಾರಂಭವಾಗುತ್ತದೆ. ಆ ದಿನ ಇನ್ನೂ ಬರಬೇಕಿದೆ’ ಎನ್ನುತ್ತಾರೆ.
ಜಾತಿ ಶ್ರಮವನ್ನು ಮಾತ್ರ ವಿಭಜಿಸುವುದಿಲ್ಲ ಶ್ರಮಿಕರನ್ನೂ ವಿಭಜಿಸುತ್ತದೆ ಎಂದು ಡಾ.ಅಂಬೇಡ್ಕರ್ ಹೇಳುತ್ತಾರೆ. ಇದು ಅಕ್ಷರಷಹಃ ಸತ್ಯ. ವಿಭಜಿತ ಜಾತಿಗಳು ತಮ್ಮದೇ ಗೋಡೆಗಳನ್ನು ನಿರ್ಮಿಸಿಕೊಂಡು ಕೂಪ ಮಂಡೂಕಗಳಾಗಿವೆ. ಹಳ್ಳಿಗಳಲ್ಲಿ ಇನ್ನೂ ಒಂದು ಜಾತಿಯ ಜೀವನ ಪದ್ಧತಿ ಇನ್ನೊಂದು ಜಾತಿಗೆ ಅಪರಿಚಿತವಾಗಿದೆ. ಸಮಾಜ ನಿರ್ಮಾಣ ಸಮರೂಪವಾಗಿರಲು ಇದು ಅಡಚಣೆಯಾಗುತ್ತದೆ. ಕೊಡು ಕೊಳ್ಳುವಿಕೆ ಇಲ್ಲದೆ ಸಂಸ್ಕೃತಿ ಬೆಳೆಯಲಾರದು. ಕುರುಬ ಜಾತಿಯ ಮಿತ್ರರೊಬ್ಬರು ‘ನಾವು ಸ್ಪೃಶ್ಯ ದಲಿತರು’ ಎಂದು ಹೇಳುತ್ತಿದ್ದುದು ನೆನಪಿಗೆ ಬರುತ್ತದೆ. ಊರಿನ ಜಾತ್ರೆಯಲ್ಲಿ ಪಲ್ಲಕ್ಕಿ ಹೊರಲು ಇವರು ಬೇಕಾಗಿದ್ದರಂತೆ. ಡೊಳ್ಳು ಬಾರಿಸಲು, ವಾದ್ಯ ಊದಲು, ಪಂಜು ಹಿಡಿಯಲು, ಹಲಗೆ ಬಡಿಯಲು ಒಂದೊಂದು ಜಾತಿಗಳಿವೆ.   ದೇಗುಲ, ಮಠ ಯಾವುದೇ ಆದರೂ ಕೈ ಸೇವೆಗಳ ಅಗತ್ಯವಿರುವುದರಿಂದ ಸ್ಪೃಶ್ಯ ಕೆಳ ಜಾತಿಗಳ ಅವಶ್ಯಕತೆಯಿದೆ. ಶೋಷಣೆಯೇ ಜಾತಿ ಪದ್ಧತಿಯ ಜೀವಾಳ. ಸಾಮಾಜಿಕ ಅಸಮಾನತೆಯಿಂದ ಅವಮಾನವನ್ನೂ ಆರ್ಥಿಕ ಅಸಮಾನತೆಯಿಂದ ಹಸಿವನ್ನೂ ಕೆಳಜಾತಿಗಳು ಅನುಭವಿಸುತ್ತಿವೆ.
ಪ್ರತಿಯೊಂದು ಜಾತಿಗೂ ಒಂದು ಅಘೋಷಿತ ಸಾರ್ವಜನಿಕ ನಡವಳಿಕೆಯಿದೆ. ಅದು ಅನೀತಿಯದಾಗಿದೆ. ಜಾತಿಯೆ ಅನೀತಿಯ ಕಟ್ಟಳೆಯಾಗಿರುವಾಗ ಅದರ ಪರಿಣಾಮಗಳು ಅನೀತಿಯುತವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ರಾಷ್ಟ್ರಾಧ್ಯಕ್ಷರೊಬ್ಬರು ಕಾಶಿಯಲ್ಲಿ ಸಾರ್ವಜನಿಕವಾಗಿ 200 ಜನ ಬ್ರಾಹ್ಮಣರ ಪಾದಗಳನ್ನು ತೊಳೆದರು. ಅದನ್ನು ಲೋಹಿಯಾ ಚಿತ್ತಭ್ರಮೆ, ಅಸಭ್ಯತನ ಎಂದು ಬಹುವಾಗಿ ಖಂಡಿಸಿದರು, ಆದರೆ ನೆಹರೂ ಅದನ್ನು ಸಮರ್ಥಿಸಿಕೊಂಡರು, ಇನ್ನೊಬ್ಬ ರಾಷ್ಟ್ರಪತಿಗಳು ತಿರುಪತಿಯಲ್ಲಿ ತಲೆಬೋಳಿಸಿಕೊಂಡರು. ಈಗ ಮಂತ್ರಿಗಳು ತಮ್ಮ ಚೇಂಬರಿನೊಳಗೆ ಹೋಮ, ಹವನ ಮಾಡಿಸುತ್ತಾರೆ. ಕೆಳಜಾತಿಗಳು ಮಾರಮ್ಮನಿಗೆ ಕೊಡುವ ಕೋಣನ ಬಲಿಗೆ ಅವರದೇ ಆದ ಸಮರ್ಥನೆಗಳಿರುತ್ತವೆ. ಇವೆಲ್ಲವೂ ಸಂವಿಧಾನದ ಜಾತ್ಯತೀತ ನಿಲುವಿಗೆ ಒಗ್ಗುವುದಿಲ್ಲವಾದರೂ ಧರ್ಮದ ಕವಚ ತೊಟ್ಟುಕೊಳ್ಳುವುದರಿಂದ ಅಧಿಕಾರಸ್ಥರು ಖಂಡಿಸಲಾರರು. ಇಂದಿಗೂ ಸಹ ಆಡಳಿತದ ಎಲ್ಲ ರಂಗಗಳಲ್ಲಿಯೂ ಇಂಥ ಅಪಸರಣಗಳನ್ನು (aberrations) ನೋಡಬಹುದು. ಒಂದು ಕಛೇರಿಯಲ್ಲಿ ಶುಕ್ರವಾರದ ಪೂಜೆಯನ್ನು ಮಾಡುವ  ನೌಕರ ಬ್ರಾಹ್ಮಣನೇ ಯಾಕಾಗಬೇಕು? ಇಂಥ ಅಲಿಖಿತ ಕಟ್ಟಳೆಗಳನ್ನು ವಿಸ್ತರಿಸಿಕೊಂಡು ಹೋಗಲು ಲೇಖನದ ಮಿತಿಯೊಳಗೆ ಸಾಧ್ಯವಾಗಲಾರದು. ನನ್ನ ಜಾತಿಯವರು ಹೆಚ್ಚು ಸಮಾನರು ಎಂಬುದೇ ಜಾತಿಪದ್ಧತಿಯ ಧೋರಣೆ. ಇಲ್ಲದಿದ್ದರೆ ಒಬ್ಬ ಕುಲಪತಿ ತನ್ನ ಆಧಿಕಾರಾವಧಿಯಲ್ಲಿ ತನ್ನ ಜಾತಿಯ ಸಿಬ್ಬಂದಿಯನ್ನೆ ಹೆಚ್ಚು ನೇಮಕ ಮಾಡುವುದು, ಒಬ್ಬ ಪ್ರಾಧ್ಯಾಪಕ ತನ್ನ ಜಾತಿಯ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡುವುದು ಸಾಧ್ಯವಾಗುವುದಿಲ್ಲ. ಜಾತಿ, ಭ್ರಷ್ಟಾಚಾರಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂಬುದನ್ನು ಈ ದೇಶ ಅರಿತುಕೊಳ್ಳಬೇಕಾಗಿದೆ. ಒಬ್ಬ ಕಡು ಭ್ರಷ್ಟನೂ ಸಹ ಕಡತ ತನ್ನ ಜಾತಿಯವನಿಗೆ ಸಂಬಂಧಿಸಿದ್ದರೆ ಅದನ್ನು ಸ್ವಲ್ಪ ಅನುಕಂಪದಿಂದಲೇ ನೋಡುತ್ತಾನೆ. ಪಕ್ಷಪಾತ ನೀತಿಗೆ ಬಲಿಷ್ಠ, ದುರ್ಬಲ ಜಾತಿ ಎಂಬುವುದಿಲ್ಲ. ಕುರ್ಚಿ ದಕ್ಕಿದಾಗ ಬಲಿಷ್ಠ ದುರ್ಬಲನ ವಿರುದ್ಧವೂ, ದುರ್ಬಲ ಬಲಿಷ್ಠನ ವಿರದ್ಧವೂ ಸೇಡು ತೀರಿಸಿಕೊಳ್ಳುತ್ತಿರುತ್ತಾನೆ.
ರಾಜಕೀಯ ವ್ಯವಸ್ಥೆಯಲ್ಲಿ ‘ನನ್ನ ಜಾತಿಯವನು ಗೆಲ್ಲಲಿ’ ಎಂಬ ವಾಂಛೆ ಬಲಿಷ್ಠ ಜಾತಿಗಳ ಒಗ್ಗೂಡುವಿಕೆಗೆ ಕಾರಣವಾಗಿದೆ. ಅದೊಂದು ಸಾಂಕೇತಿಕ ಒಗ್ಗೂಡುವಿಕೆ ಅಷ್ಟೆ. ಆ ಕಾರಣದಿಂದಾಗಿ ಆ ಜಾತಿಯ ಎಲ್ಲರೂ ಫಲಾನುಭವಿಗಳಾಗಲು ಸಾಧ್ಯವಿಲ್ಲ ಅಥವಾ ಕನಿಷ್ಠ ಪ್ರತಿಫಲ ಪಡೆಯಲು (ರುಸುವತ್ತು ಹೊರತು) ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೂ ಪ್ರತಿಭೆ (ಮೆರಿಟ್) ಯನ್ನು ಮೆಟ್ಟಿ ಜಾತಿ ಸಮೂಹ  ತನ್ನ ನಾಯಕನನ್ನು ಆರಿಸುತ್ತದೆ. ಶತಮಾನಗಳಿಂದ ಅವಕಾಶ ವಂಚಿತ ಜಾತಿಗಳಿಗೆ ಕಾನೂನಿನ ಮೂಲಕ ನೀಡಿರುವ ಮೀಸಲಾತಿಯನ್ನು ಮೆರಿಟ್‍ನ ನೆಪವೊಡ್ಡುತ್ತಾ ವಿರೋಧಿಸುವ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪಂಡಿತರು ಜಾತಿಪದ್ಧತಿಯಿಂದ ನಿರಂತರವಾಗಿ ಹತವಾಗುತ್ತಿರುವ ಪ್ರತಿಭೆಯ ಬಗ್ಗೆ ಮಾತಾಡುವುದಿಲ್ಲ, ಜಾಣ  ಮೌನವಹಿಸುತ್ತಾರೆ.  ಪ್ರಾಯಶಃ ಇಂದು ಎಲ್ಲ ಪಕ್ಷಗಳು ವಂಶಾಡಳಿತಕ್ಕೆ ಜೋತು ಬಿದ್ದಿರುವುದು ಜಾತಿಪದ್ಧತಿಯಲ್ಲಿ ಪೂರ್ವಗ್ರಹವಿಲ್ಲದ(ದೆ) ಒಬ್ಬ ನಿಜ ನಾಯಕನನ್ನು ಆರಿಸಲು ಸಾಧ್ಯವಾಗದಿರುವ ಕಾರಣದಿಂದ ಎಂದು ಕಾಣುತ್ತದೆ.
ಇಂಥ ವ್ಯವಸ್ಥೆಯಲ್ಲಿ ಬಹು ಸಂಖ್ಯಾತರಾಗಿರುವ ಅಸಂಘಟಿತ ಸಣ್ಣ ಜಾತಿಗಳಿಗೆ ಆಗುತ್ತಿರುವ ಅನ್ಯಾಯ ಹೇಳತೀರದು. ಜಾತಿ ಲೆಕ್ಕಾಚಾರದಂತೆಯೆ ರಾಜಕೀಯ ನೇತೃತ್ವ ಪಡೆಯುತ್ತಿರುವ ಈ ದೇಶದಲ್ಲಿ ಅವರು ಹೆಚ್ಚೆಂದರೆ ಕೆಳಮಧ್ಯಮ ವರ್ಗದಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಸ್ವಾತಂತ್ರ್ಯಾನಂತರದ 62 ವರ್ಷಗಳಲ್ಲಿ ದಲಿತ, ಹಿಂದುಳಿದ ಜಾತಿಗಳು ಬಂಡವಾಳ ಶಾಹಿಗಳ ಪಟ್ಟಿಯಲ್ಲಿ ಹೆಸರು ದಾಖಲಿಸಲು ಸಾಧ್ಯವಾಗದಿರುವುದಕ್ಕೆ ಕಾರಣ ಜಾತಿ ಪದ್ಧತಿಯೆಂಬ  ದುರಂತ ವ್ಯವಸ್ಥೆ. ಈ ಭಸ್ಮಾಸುರ ಸ್ವರೂಪೀ ಜಾತಿಯ ಸೃಷ್ಟಿಗೆ ಕಾರಣವಾದ ‘ವೈದಿಕತೆ’ ಇಂದು ಎಷ್ಟು ಅಸಹಾಯಕವಾಗಿದೆ ಎಂದರೆ ತನ್ನನ್ನು ಓಲೈಸಿ ಬಂದ ಕಾರಣಗಳಿಗೆ ಬೇಡಿದ ವರವನ್ನು ದಯಪಾಲಿಸಿ ತಾನೇ ಪೇಚಿಗೆ ಸಿಕ್ಕಿ ಪರದಾಡುವ ಪರಶಿವನಂತಾಗಿದೆ.
ಕೇವಲ ಆಂತರಿಕ ಸಮಸ್ಯೆಗಳೆ? :
ಭಾರತ ಸರ್ಕಾರವು ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳನ್ನು  ಕೇವಲ ಆಂತರಿಕ ಸಮಸ್ಯಗಳೆಂದು ತಿಳಿದರೆ ಸಾಲದು.  ಈ ಸಮಸ್ಯೆಗಳು ಜನರ ಮನದಾಳದಲ್ಲಿ ಸ್ಥಾಪಿತವಾಗಿರುವುದು ಶತಶತಮಾನಗಳಿಂದ ಸ್ವಾರ್ಥ ಹಿತಾಸಕ್ತಿಗಳು ಭಿತ್ತಿದ ಮೌಢ್ಯದಿಂದ  ಮತ್ತು ಅದು ಗಟ್ಟಿಗೊಳ್ಳುತ್ತಿರುವುದು ಧಾರ್ಮಿಕ ಒತ್ತಾಸೆಯಿಂದ.  ಇದು ದೇಶಕ್ಕೂ ಮತ್ತು ಧರ್ಮಕ್ಕೂ ಒಂದು ಕಳಂಕವಾಗಿರುವುದು ಸತ್ಯ. ಆದ್ದರಿಂದ ಅದನ್ನು ತೊಳೆದುಕೊಳ್ಳುವುದಕ್ಕೆ ದೇಶವು ಮತ್ತು ಧರ್ಮವು ಕಟು ಬದ್ಧವಾಗಬೇಕು.  ಅದಕ್ಕಾಗಿ ವಿಶ್ವಸಂಸ್ಥೆಯಂಥ ಹೊರಗಿನ ಸ್ವಾಯತ್ತ ಸಂಸ್ಥೆಗಳ ಸಹಾಯ ಪಡೆಯುವುದಕ್ಕೆ ಹಿಂಜರಿಯಬಾರದು.  ರೋಗಿಯೊಬ್ಬನು ವೈದ್ಯನ ಮುಂದೆ ತನ್ನ ರೋಗನ್ನು ಹೇಳಿಕೊಳ್ಳಲೇಬೇಕು. ಆಗಲೇ ಚಿಕಿತ್ಸೆ ಸಾಧ್ಯ ಹಾಗೂ ಸುಲಭ.  ಸಂಕೋಚಪಟ್ಟುಕೊಂಡರೆ ರೋಗವು ಉಲ್ಬಣಿಸುತ್ತದೆ, ರೋಗಿಯನ್ನೆ ತಿನ್ನುತ್ತದೆ.  ವಿಶ್ವಸಂಸ್ಥೆ ಇರುವುದೇ ಜಾಗತಿಕ ನೆಲೆಯಲ್ಲಿ ಸಮಸ್ಯೆಗಳನ್ನು  ಎತ್ತಿಕೊಂಡು ನೊಂದ ದೇಶಗಳಿಗೆ ಸಹಾಯ ಹಸ್ತ ಚಾಚುವುದು.  ಮಾನವನ ಮೂಲಭೂತ ಹಕ್ಕುಗಳ ವಿಷಯದಲ್ಲಿ ಭಾರತದಲ್ಲಾಗುತ್ತಿರುವ ಕುಲಸಂಬಂಧೀ (ethnic) ಒಳ ಹಿಂಸೆಗಳು ಅಪಾರ ಮತ್ತು ಅನನ್ಯ. ವಂಶ ಪಾರಂಪರ್ಯವಾಗಿ ಕೆಲವು ಕೆಳಜಾತಿಗಳು  ಮಾಡುತ್ತಿರುವ ಕೆಲಸಗಳು ಖಂಡನೀಯವು ಮತ್ತು ಅಮಾನವೀಯವೂ ಆಗಿವೆ.
ದೇಶದಾದ್ಯಂತ ಇಂದಿಗೂ ಬರಿಗೈಯಲ್ಲಿ ಕಕ್ಕಸು ತೊಳೆಯುವ, ತಲೆಯ ಮೇಲೆ ಮಲ ಹೊರುವವರ ಸಂಖ್ಯೆ 3.40 ಲಕ್ಷಕ್ಕೂ ಅಧಿಕವಾಗಿದೆ ಎಂದು ಹೇಳಲಾಗಿದೆ.  ದೇಶದ ರಾಜಧಾನಿಯೂ ಸೇರಿದಂತೆ ಮುಂದುವರೆದ ಅನೇಕ ರಾಜ್ಯಗಳಲ್ಲಿ ಈ ಪದ್ಧತಿ ಇನ್ನೂ ಜಾರಿಯಲ್ಲಿದೆ. ಸತ್ತ ದನವನ್ನು  ಸುಲಿಯುವುದಕ್ಕೆ, ಚರ್ಮ  ಹದ ಮಾಡುವುದಕ್ಕೆ, ಚಪ್ಪಲಿ ಹೊಲಿಯುವುದಕ್ಕೆ ಒಂದೊಂದು ಜಾತಿಗಳಿರುವುದು ಅವು ಇನ್ನೂ ಅನೂಚಾನವಾಗಿ ಮುಂದುವರೆದಿರುವುದು ಗುಟ್ಟಿನ ವಿಷಯಗಳಲ್ಲ.  ಇಂಡಿಯಾದ ಸಂಸತ್ತು ಮತ್ತು ವಿಧಾನ ಸಭೆಗಳು ಕಣ್ಣುಮುಚ್ಚಿ ಬಿಡುವುದರೊಳಗೆ ಮಾನವ ಹಕ್ಕುಗಳನ್ನು ಕುರಿತ ಮಸೂದೆಗಳನ್ನು ಮಂಡಿಸಿ ಪಾಸುಮಾಡಿ ಕಾನೂನು ಹೊರಡಿಸುತ್ತವೆ.  ಆದರೆ ಅವು ಜಾರಿಯಾಗುವ ಸಾಧ್ಯತೆಗಳು ಕಡಿಮೆ.  ಮಾಹಿತಿ ತಂತ್ರಜ್ಞಾನದ ಮೂಲಕ ಅತಿ ಶೀಘ್ರವಾಗಿ ಅಂಗೈ ಪರದೆಯಲ್ಲಿ ಮೂಡುವ ಸತ್ಯ ದರ್ಶನಗಳನ್ನು ಅಲ್ಲಗಳೆಯಲು ಇನ್ನೂ ಸಾಧ್ಯವಿಲ್ಲ.  ಆದ್ದರಿಂದ ಸಂಕೋಚಗಳನ್ನು, ಮುಜುಗರಗಳನ್ನು ಬದಿಗಿಟ್ಟು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಗಳಿಂದ ನಲುಗುತ್ತಿರುವ ಭಾರತ ಠರಾವನ್ನು ಬೆಂಲಿಸುವ ಜಾಣ್ಮೆ ತೋರಬೇಕು. ನೇಪಾಳದಂತಹ ನೆರೆರಾಜ್ಯ ಸಮಿತಿಯ ಠರಾವನ್ನು ಬೆಂಬಲಿಸಿರುವುದು ಭಾರತಕ್ಕೆ ನುಂಗಲಾರದ ತುತ್ತಾಗಿದೆ. ಬೆಂಬಲ ನೀಡದಿರುವುದಕ್ಕೆ ಕಾರಣ ರಹಿತವಾಗಿರುವ ಭಾರತ ವಿಶ್ವದ ಇತರ ರಾಷ್ಟ್ರಗಳ ಎದುರು ತಲೆ ತಗ್ಗಿಸುವಂತಾಗುತ್ತದೆ.  ಆದ್ದರಿಂದ ಈಗ ಒತ್ತಡ ಹೆಚ್ಚಾಗಿದೆ.  ಜಾತಿ ಪದ್ಧದತಿಯ ಮೂಲ ಹಿಂದೂ ಧರ್ಮವೇ ಎಂಬುದು ಕಹಿಯಾದರೂ ಸತ್ಯ.  ಒಂದು ಜಾತಿ ಇನ್ನೊಂದು ಜಾತಿಯ ಮೇಲೆ ಅಥವಾ ಕೆಳಗೆ ಇರುವುದರಿಂದ ಭೇದ ನೀತಿಯನ್ನು ಅಲ್ಲಗಳೆಯಲು ಸಾಧ್ಯವಾಗುವುದಿಲ್ಲ. ವಿಶ್ವಸಂಸ್ಥೆಯು  ಜನಾಂಗೀಯ ಭೇದ ವಿನಾಶ ಸಮಿತಿಯನ್ನು ರಚಿಸಿರುವ ಉದ್ದೇಶವೇ ತಾರತಮ್ಯ ನೀತಿಯನ್ನು ಗುರುತಿಸಿ ನಿರ್ಮೂಲನ ಮಾಡುವ  ಕಾರಣವಾಗಿರುವುದರಿಂದ ಇದನ್ನು ಕೈಬಿಡಲು ಅಥವಾ ಮರೆಮಾಚಲು ಸಹ ಸಮಿತಿಗೆ ಸಾಧ್ಯವಾಗುವುದಿಲ್ಲ.
ಸಮಾನತೆ ಇಲ್ಲದೆಡೆಯಲ್ಲಿ ಸಮಾನ ಅವಕಾಶಗಳು ಇರಲಾರವು.  ಹುಟ್ಟಿನ ಮೂಲದ ಆಧಾರದ ಮೇಲೆ ಸಮಾನ ಅವಕಾಶಗಳಿಂದ ವಂಚಿತರಾದವರು ಮಾನವ ಹಕ್ಕುಗಳ ವಂಚಿತರು ಅಷ್ಟೇ ಅಲ್ಲ, ದೌರ್ಜನ್ಯಕ್ಕೆ ಒಳಗಾದವರೂ ಆಗಿರುತ್ತಾರೆ.  ಆದ್ದರಿಂದ ವಿಶ್ವಸಂಸ್ಥೆಯ ನಿಲುವನ್ನು ಒಪ್ಪಲೇ ಬೇಕಾಗುತ್ತದೆ.  ಜಾತಿಭೇದ ನೀತಿಯನ್ನು ಖಂಡಿಸಲೇಬೇಕಾಗುತ್ತದೆ.  ಇದನ್ನು ಭಾರತ ಅರಿಯಬೇಕಾಗಿದೆ. 2001 ರಲ್ಲಿ ದರ್ಬಾನ್‍ನಲ್ಲಿ ನಡೆದ ಜನಾಂಗೀಯ ಮತ್ತು ಇತರ ಭೇದ ನೀತಿ ಕುರಿತ ವಿಶ್ವ ಸಮ್ಮೇಳನದಲ್ಲಿ  ಶ್ರುತಪಡಿಸಿದ  ಡರ್ಬಾನ್  ಪ್ರಕಟಣೆಯ ಕಾರ್ಯಸೂಚಿಯಲ್ಲಿದು ಸ್ಪಷ್ಟವಾಗಿದೆ. 2001 ರ ಡರ್ಬಾನ್  ಸಮ್ಮೇಳನದಲ್ಲಿ ಜಾತಿ ತಾರತಮ್ಯವನ್ನು ಚರ್ಚೆಗೆ ತರಲು ಸಾಧ್ಯವಾಗಲಿಲ್ಲ.  ಆದರೂ ಅದು  ದಲಿತರು ನಡೆಸಿದ ಸಂಘಟಿತ ಒತ್ತಡ ತಂತ್ರದಿಂದ  ಅನುವಂಶೀಯ ವೃತ್ತಿ ತಾರತಮ್ಯ ಎಂಬ ಹೆಸರಿನಲ್ಲಿ ತುಸು ಚರ್ಚೆಗೊಳಾಯಿತು. ಈಗ ಚರ್ಚೆ ಗೆತ್ತುಕೊಂಡಿರುವುದು ಅದರ ಅನುಸರಣಾ ವರದಿ.
ಶೌಚಾಲಯದ ಮುರುಕು ಗೋಡೆಯ ಇಟ್ಟಿಗೆಯ ಚೂರು:
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿರುವ ನವಿ ಪಿಳ್ಳೆ, ತಮಿಳು ಮೂಲದ ದಕ್ಷಿಣ ಆಫ್ರಿಕಾದವರು. ಅವರಿಗೆ ಜಾತಿಪದ್ಧತಿಯ ಉಪದ್ರವಗಳು ಮತ್ತು ದಕ್ಷಿಣ ಏಷಿಯಾ ದೇಶಗಳ ಸಾಮಾಜಿಕ ನೀತಿ ಚೆನ್ನಾಗಿ ತಿಳಿದಿದೆ. ಅವರು ಠರಾವಿಗೆ ಬೆಂಬಲ ನೀಡಿದ  ನೇಪಾಳದ ವಿದೇಶಾಂಗ ಸಚಿವರನ್ನು ಅಭಿನಂದಿಸಿ ಇದು ಜಾತಿಪದ್ಧತಿಯ ಸಮಸ್ಯೆಗಳನ್ನು ಸ್ವತಃ  ಹೊತ್ತಿರುವ ದೇಶ ಇಟ್ಟ ಮಹತ್ವದ ಹೆಜ್ಜೆ, ಇದನ್ನು ಇತರರು ಪಾಲಿಸಬೇಕು ಎಂದು ಹೇಳಿದ್ದಾರೆ.
ಮಾನವ ಹಕ್ಕುಗಳ ಅಂತಃ ಸತ್ವವೆಂದರೆ ಮನುಷ್ಯ ಮನುಷ್ಯನ ನಡುವೆ ಸಮಾನತೆ ಮತ್ತು  ಸಮಾನ ಅವಕಾಶಗಳು ಇರುವಂತೆ ನೋಡಿಕೊಳ್ಳುವುದು. ಜಾತಿಪದ್ಧತಿ ಈ ಮೂಲ ಹಕ್ಕುಗಳನ್ನೆ ನಿರಾಕರಿಸುತ್ತದೆ. ಆದ್ದರಿಂದ ಅದು ಮಾನವ ಹಕ್ಕಿನ ಉಲ್ಲಂಘನೆಯ ಪರಿಧಿಯೊಳಗೆ ಬರುತ್ತದೆ. ವಿಶ್ವಸಂಸ್ಥೆಯ ಜನಾಂಗೀಯ ಭೇದ ವಿನಾಶ ಸಮಿತಿ ತೆಗೆದುಕೊಂಡಿರುವ ನಿಲುವು ಸರಿಯಾಗಿದೆ. ಮಾನವ ಹಕ್ಕುಗಳ ಹೈ ಕಮಿಷನರ್ ನವಿ ಪಿಳ್ಳೆ ‘ಜಾತಿ ಎಂಬ ನಾಚಿಕೆಗೇಡು ಪರಿಕಲ್ಪನೆಯನ್ನು ನಾಶ ಮಾಡುವ ಕಾಲ ಕೂಡಿಬಂದಿದೆ’ ಎಂದು ಆವೇಶ ಭರಿತರಾಗಿ ಹೇಳುತ್ತಾರೆ. ಇದಕ್ಕೆ ಕಾರಣ ಜಾತಿಯಿಂದ ನೊಂದ ಕೆಲವು ಜನರು ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಮುರಿದು ಬಿದ್ದ ಶೌಚಾಲಯದ ಗೋಡೆಯ ಇಟ್ಟಿಗೆಯ ಚೂರೊಂದನ್ನು ಕೊಟ್ಟರಂತೆ.  ಆ ಇಟ್ಟಿಗೆ ಚೂರು ಬರಿಗೈಯಲ್ಲಿ ಕಕ್ಕಸು ತೊಳೆಯುವ ಕೆಳಜಾತಿ ಜನರ ಜಾಗತಿಕ ಹೋರಾಟದ ಸಂಕೇತವಾಗಿ ಅವರಿಗೆ ಕಂಡಿತಂತೆ.  ಇದು ಆ ಜನ ತಾವು ಬಯಸಿ ಮಾಡುತ್ತಿರುವುದಲ್ಲ.  ಕೆಳಜಾತಿಯ ಹುಟ್ಟಿನ ಕಾರಣದಿಂದ ಮಾಡುತ್ತಿರುವುದು. ಅದನ್ನು ತಮ್ಮ  ಪೂರ್ವಜರಿಂದ ಬಳುವಳಿಯಾಗಿ  ಪಡೆದದ್ದು, ಈ ಕಾರಣಕ್ಕಾಗಿಯೆ ಜೀವನ ಪರ್ಯಂತ ‘ಮೈಲಿಗೆ’ ಅನುಭವಿಸುತ್ತಿರುವುದು ಮತ್ತು ಹೊರಗೆ ಹಾಕಲ್ಪಟ್ಟು  ಮುಟ್ಟಿಸಿಕೊಳ್ಳಬಾರದವರಾಗಿರುವುದು.
ಕಾಂಗ್ರೆಸ್‍ನ ಯುವ ನೇತಾರ ಚುನಾವಣೆಗಳ ಗೆಲುವಿನ ಶಿಲ್ಪಿ ಎಂದೇ ಖ್ಯಾತರಾಗಿರುವ  ರಾಹುಲ್ ಗಾಂಧಿ ಇತ್ತೀಚೆಗೆ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.  ಅಕ್ಟೋಬರ್ 2, ಗಾಂಧಿ ಜಯಂತಿಯಂದು ಉತ್ತರ ಪ್ರದೇಶದಲ್ಲಿ ಇಡೀ ಪಕ್ಷದ ಜನ ಪ್ರತಿನಿಧಿಗಳಿಗೆ ರಾಜ್ಯಾದಾದ್ಯಂತ ಹಳ್ಳಿಗಳ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡಲು  ಕರೆ ನೀಡಿದ್ದರು. ಅದು ವಿಫಲವಾಯಿತೆಂಬುದು ಬೇರೆ ಮಾತು.  ಆದರೆ ಅವರ ಉದ್ದೇಶ ಮತ್ತು ದಲಿತರ ಬಗೆಗೆ ತೋರುತ್ತಿರುವ ಕಳಕಳಿ ಅವರ ವೈರಿಗಳ ಪ್ರಶಂಸೆಯನ್ನು ಗಳಿಸುತ್ತಿದೆ. ಅವರೊಮ್ಮೆ ಭಾರತಕ್ಕೆ ಹಲವು ಸಲ ಭೇಡಿ ನೀಡಿದ್ದ ಇಂಗ್ಲೆಂಡಿನ ಪತ್ರಕರ್ತ ಮಿತ್ರರೊಬ್ಬರನ್ನು ಉತ್ತರ ಪ್ರದೇಶದ ಹಳ್ಳಿಯೊಂದಕ್ಕೆ ಕರೆದೊಯ್ದು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಆ ಮಿತ್ರರು ಈ ಭಾರತದ ಪರಿಚಯವೇ ನನಗಿರಲಿಲ್ಲ ಎಂದು ಉದ್ಗರಿಸಿದ್ದರು! ಈ ಹೊತ್ತಿನಲ್ಲಿ ರಾಹುಲ್ ಗಾಂಧಿಯವರಿಗೆ ದಲಿತೋದ್ಧಾರದ ನೈಜ ಕಳಕಳಿ ಇದ್ದಲ್ಲಿ ವಿಶ್ವಸಂಸ್ಥೆಯ ಠರಾವನ್ನು ಬೆಂಬಲಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು. ಈ ಸಂಸ್ಕೃತಿಯ ಕುರೂಪತೆಯನ್ನು ತೊಡೆದು ಹಾಕಲು ರಾಜಕೀಯ ಬೆರೆಸದೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಜಾತಿ ಎನ್ನುವುದು ಕೇವಲ ದಲಿತರ ಸಮಸ್ಯೆಯಾಗಿ ಉಳಿದರೆ ಜಾತಿ ನಾಶವಾಗಲಾರದು. 1936 ರಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌‌‌‌‌‌‌ರವರು ಲಾಹೋರ್‌‌‌‌‌‌‌ನಲ್ಲಿ  ‘ಜಾತ್ ಪಾತ್ ತೋಡಕ್ ಸಮಿತಿ’ ಏರ್ಪಡಿಸಿದ್ದ ಸಭೆಗಾಗಿ ಸಿದ್ಧಪಡಿಸಿದ  ಜಾತಿ ವಿನಾಶ ಕುರಿತ ಐತಿಹಾಸಿಕ ಭಾಷಣ ಹಿಂದೂ ಮುಖಂಡರುಗಳನ್ನು ತಲ್ಲಣಗೊಳಿಸಿತು. ಅದು ದಲಿತೇತರ ಹಿಂದುಗಳನ್ನು  ಕುರಿತು ಬರೆದ ಭಾಷಣ.  ಗಾಂಧೀಜಿಯವರು ಸಹ ಜಾತಿ ಭೇದವನ್ನು ಅಳಿಸಲು ಮೇಲುಜಾತಿಯ ಮನಸ್ಸುಗಳ ಬದಲಾವಣೆಯನ್ನು ಬಯಸಿದ್ದರು.  ಆದ್ದರಿಂದ, ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಂದ ಹಿಡಿದು ಭಂಗಿ ಜನರವರೆಗೆ ಎಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಜಾತಿ ಭೇದ ಮತ್ತು ಅಸ್ಪೃಶ್ಯತೆಯ ನಾಶ ಸಾಧ್ಯವಾಗಬಹುದು.

ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ : ವರ್ತಮಾನ

Wednesday, August 29, 2012

बाबासाहेब आणि भारतीय संविधान

 
 
डॉ. संदीप नंदेश्वर, नागपूर ९२२६७३४०९१
बाबासाहेब संविधान अमलात येण्याच्या आधीच भारतीय घटनेचे शिल्पकार बनले होते.

महावीर सांगलीकर हा बाळबोध भट आजकाल भारतीय संविधान आणि बाबासाहेबांच्या योगदानावर बरळतो आहे...त्याला उत्तर द्यावे इतकी त्याची लायकी नाही... पण आज संविधानाच्या संबंधाने काही प्रश्न उपस्थित होतात म्हणून संविधानाविषयी निर्माण झालेला संभ्रम दूर व्हायला हवा....

भारतीय संविधानाची निर्मिती प्रक्रिया १९०९ च्या मोर्ले-मिंटो सुधारणा कायद्यापासून सुरु झाली आहे. आणि शेवट हा २६ नोव्हेंबर १९४९ ला संविधान सभेच्या संविधान स्वीकारापर्यंत ती चालली आहे. या मध्यंतरीच्या काळात १९१९ चा montague - Chemsford सुधारणा कायदा महत्वाचा आहे. ज्या कायद्याने भारतीयांना मर्यादित राजकीय, आर्थिक, सामाजिक स्वातंत्र्य बहाल केले. हा १९१९ चा कायदा बनण्याआधी साउथबुरो कमिशन १९१८ समोर डॉ. बाबासाहेबांनी निवेदन देऊन साक्ष दिली होती. त्यात ज्या मागण्या प्रामुख्याने बाबासाहेबांनी केल्या होत्या त्या १९१९ च्या montague - Chemsford सुधारणा कायदात समाविष्ट करण्यात आल्या होत्या. बाबासाहेब वगळता तिथे या देशातील कुठल्याही अन्य व्यक्ती वा संघटनांचा समावेश का झाला नाही. फक्त डॉ. बाबासाहेब आंबेडकर यांनाच या देशाच्या स्वातंत्र्याची आणि या देशातल्या जनतेच्या हिताची काळजी होती हेच दिसून येते.

त्यानंतर १९२७ ला सायमन कमिशन इथल्या परिस्थितीचा अभ्यास करायला भारतात आले. त्या कमिशन ला महात्मा गांधीच्या नेतृत्वातील कॉंग्रेस ने विरोध केला. आणि Go Back सायमन चा नारा लावला. कॉंग्रेस ने कुठलेही सहकार्य या कमिशन ला केले नाही. परंतु बाबासाहेबांनी या कमिशन ला सुद्धा आपल्या मागण्यांचे निवेदन सदर केले. त्या निवेदनात इथल्या अस्पृश्यांच्या कल्याणासाठी इंग्रज सरकारने काय केले पाहिजे यासोबतच भारतातील संविधान निर्मितीसाठी आणि राजकीय प्रांतिक विधीमंडळाची मांडणी व रचना कशी असावी याविषयी सुद्धा मार्गदर्शन केले होते. तेव्हा कॉंग्रेस काय; गांधी काय; तर या देशातले इतर अन्य महा-(पुरुष), संस्था-संघटना निष्काम कर्मयोगाच्या समाधी अवस्थेत बसल्या होत्या.

१९२७ च्या सायमन कमिशन ने केलेल्या शिफारशीनुसारच इंग्रज संसदेने गोलमेज परिषद बोलावली. त्यात प्रामुख्याने बाबासाहेबांना पुनःच्या आमंत्रित करण्यात आले. या पहिल्या गोलमेज परिषदेला गांधीप्रणीत कॉंग्रेस ने बहिष्कार घातला. परंतु बाबासाहेबांनी गोलमेज परिषदेत हजेरी देत इंग्रज सरकारला या देशाला कश्याप्रकारच्या कायद्याची गरज आहे. हे पटवून दिले. भारतातील प्रांतिक आणि केंद्रीय विधीमंडळांची रचना कशी असावी हे सुद्धा पटवून दिले. हे गांधी आणि कॉंग्रेस ला माहित झाल्याने गांधी व कॉंग्रेस चे महत्व टिकून राहावे म्हणून गांधी दुस-या गोलमेज परिषदेला हजार झाले. तिथेही गांधी आणि बाबासाहेब यांच्यात भारतीय सामाजिक परिस्थिती लक्षात घेता आवश्यक असणा-या तरतुदी संबंधाने मोठ्या प्रमाणात खडाजंगी झाली. शेवटी गोलमेज परिषदेने बाबासाहेबांच्या बाजूने ठराव घेतला. गांधींना त्यात सपशेल अपयश पचवावे लागले आणि बाबासाहेबांपुढे घुताने टेकावे लागले. (कृपया पुणे कराराच्या संबधाचा जो विषय आहे त्यावर मी बोलत नाही. तो विषय वगळता अन्य ठरावावर मी बोलत आहे) याच गोलमेज परिषदेने घेतलेल्या ठरावांचा जाहीरनामा प्रसिद्ध करण्यात आला. आणि त्याचेच रुपांतर पुढे १९३५ च्या कायद्यात झाले. म्हणजेच याही कायद्यात बाबासाहेबांचे योगदान मोठे आहे.

पुढे भारतीय संविधान निर्मितीच्या प्रक्रियेला इंग्रज सरकारकडून प्रयत्न करण्यात आले. त्यासाठी त्यांनी विविध आयोगांना भारतात पाठविले. त्यातलेच पहिले १९४२ ला परत सायमन कमिशन भारतात आले. तेव्हाही गांधीप्रणीत कॉंग्रेस ने त्याला विरोध केला. परंतु बाबासाहेबांनी मात्र सहकार्य केले. आपल्या मागण्यांचे निवेदन देत राहिले. त्यानंतर पुन्हा संविधान निर्मितीच्या संबंधाने निर्णय घेण्यासाठी क्रिप्स मिशन (त्रीमंत्री योजना म्हणून प्रसिद्ध) भारतात आले. तेव्हा थोडीशी कॉंग्रेस ची भूमिका मवाळ झाली होती. कारण प्रत्येक वेळेस बाबासाहेब आपल्या मागण्या इंग्रजांकडून मान्य करवून घेत होते. परत १९४६ ला माउंटबेटन च्या नेतृत्वात एक आयोग भारतात आले. जो संविधान सभेच्या निर्मितीसाठी शेवटचा आयोग ठरला. या सर्व इतिहासात बाबासाहेबांचे मोठे योगदान राहिले आहे. कॉंग्रेस किंवा गांधी किंवा अन्य कुणापेक्षा पेक्षा जास्त योगदान संविधान निर्मितीच्या पूर्वइतिहासात डॉ. बाबासाहेब आंबेडकरांचे राहिलेले आहे.

माउंटबेटन ने दिलेल्या अंतिम सूचनेवरून संविधान सभेच्या निवडणुका सुरु झाल्या. बाबासाहेब पश्चिम बंगाल प्रांतातून संविधान सभेवर निवडून आले. (तेव्हाही कॉंग्रेस ने बाबासाहेब संविधान सभेवर निवडून येऊ नये म्हणून प्रयत्नांची पराकाष्टा केली होती. कारण पूर्वइतिहास त्यांना माहित असल्याने...कॉंग्रेस चे काहीही चालले नसते म्हणून) ९ डिसेंबर १९४६ ला संविधान सभेची पहिली बैठक बोलाविण्यात आली. आणि भारतीय संविधानाचे प्रारूप कसे असावे यावर दीर्घ चर्चा झाली. या चर्चेत प्रत्येकच सदस्याला मते मांडण्याची संधी देण्यात आली. बाबासाहेबांना आपली मते मांडण्यासाठी वाट पहावी लागत होती.

अखेर १३ डिसेंबर १९४६ ला बाबासाहेबांना संविधान सभेसमोर संविधानाच्या प्रारुपावर मत मांडण्यासाठी अचानक आमंत्रित करण्यात आले. (अचानक यासाठी कि अनेक सदस्य बाकी असल्याने बाबासाहेबांना याची कल्पनाच नव्हती कि त्यांना या दिवशी आपली मते मांडवी लागतील म्हणून...) बाबासाहेबांनी सुरवातीलाच याचा उल्लेख केला कि "माझा नंबर आज लागेल याची मला कल्पना नव्हती. तशी पूर्वसूचना मला मिळाली असती तर मी पूर्वतयारीनिशी माझे मत मांडले असते. पण तरीही मी माझे मत मांडणार आहे..." बाबासाहेबांचे ते संविधान सभेतील पहिले भाषण सुरु झाले. संपूर्ण सभागृह अवाक होऊन अतिशय एकाग्रचित्त झाले होते.

बाबासाहेब एकावर एक मुद्दे आपल्या बुद्धिचातुर्याने संविधान सभेसमोर मांडत होते. सभागृहातील एकही सदस्य त्या बाबासाहेबाच्या भाषणाच्या वेळी उठला नाही कि जागचा हलला सुद्धा नाही. बाबासाहेबांच्या मुखातून जणू काही भविष्याचे संविधानाच बाहेर पडत होते. ज्यात संपूर्ण मानवजातीच्या कल्याणाची एक आचारसंहिताच लिहिली जात होती. बाबासाहेबांचे भाषण झाल्यावर सभागृह टाळ्यांच्या गळगळाटांने निनादून उठले. संपूर्ण सभागृहातील सदस्यांनी बाबासाहेबांच्या विद्वत्तेपुढे मानच झुकविली. बाबासाहेबांचे विरोधकही त्या भाषणाने इतके प्रभावी झाले कि त्यांच्या तोंडून कौतुकाचे शब्दही फुटत नव्हते.

अश्यातच भारत आणि पाकिस्थानाची फाळणी होण्याचे संकेत होते. ती झाली. बाबासाहेबांचा मतदार संघ पाकिस्तानात गेला. त्यामुळे संविधान सभेतील त्यांचे सदस्यत्व धोक्यात येणार होते. अश्या परिस्थितीत बाबासाहेबांचे समर्थक आणि संविधान सभेतील अन्य सभासद ज्यांनी बाबासाहेबांचे १३ डिसेंबर १९४६ चे भाषण ऐकले होते त्यांचा कॉंग्रेस वर दबाव निर्माण झाला. कॉंगेस ला पण बाबासाहेबांना संविधान सभेतील कामकाजापासून अलिप्त ठेवता येत नव्हते. कारण इतकी प्रचंड विद्वत्ता आणि कल्याणाचा जाहीरनामा संपूर्ण कॉंग्रेस मध्ये कुणाकडेही नव्हते. भारताचे संविधान बाबासाहेबंशिवाय बनणे अशक्यप्राय होते हे कॉंग्रेस चांगल्याने जाणून होती. म्हणून शेवटी बी जी खेरांना पत्र लिहून जयकरांचे मुंबई प्रांतातील संविधान सभेतील सदस्यत्व अन्य कारणाने रद्द करण्यात आले. आणि त्या टिकाणी बाबासाहेबांना संविधान सभेवर निवडून आणण्यात आले. कॉंग्रेस, संविधान सभा, भारत देश या सर्वांचीच ती गरज होती. बाबासाहेब संविधान सभेवर निवडून जाने सर्वांच्याच हिताचे होते. त्यानंतर बाबासाहेबांनी संविधानाच्या मसुदा समितीच्या अध्यक्षपदावरून केलेली कामगिरी आणि त्यांची संविधान सभेतील सर्व कलमांवर केलेली भाषणे म्हणजे या देशाचे भवितव्यच होते.

संविधान निर्मितीचा हा पूर्ण इतिहास आपण लक्षात घेतला तर बाबासाहेब संविधान अमलात येण्याच्या आधीच भारतीय घटनेचे शिल्पकार बनले होते. परंतु काही बांडगुळे ठराविक अंतराने बाबासाहेब आणी भारतीय संविधानावर चिखलफेक करतात. ती मोडून काढण्यासाठी हा इतिहास आम्ही लक्षात घेतला पाहिजे. या देशात संविधान किती माणसांपर्यंत पोहचला आहे ? हे पाहायचे असेल तर अलीकडच्या काळात अनेक उदाहरणे डोळ्यासमोर येत आहेत. इथली माणसे INDIAN PINAL CODE, HINDU LAW, COMPANY LAW, FAMILY LAW, CONTRACT LAW etc. अश्या अनेक कायद्यांची भेसळ भारतीय संविधानाशी करतात. उदा. "कसाबला लवकर फाशी होत नाही कारण संविधान जबाबदार आहे." "भ्रष्टाचार्यांना रोकता येत नाही. कारण संविधान जबाबदार आहे." सर्व प्रश्नांसाठी वेगळे कायदे असतांना ही बाळबोध माणसे सरसकट भारतीय संविधानाला आणि बाबासाहेबांना जबाबदार ठरवितात. हे किती हास्यास्पद आहे. आणि या देशातल्या अश्या बाळबोध माणसांमध्ये किती संविधानिक जागृती झाली आहे हे आपल्या लक्षात येईल.

बाबासाहेब आणि भारतीय संविधान यावर बोटे ठेवून उलटसुलट इतिहास मांडणा-या, वाचना-या, लिहिणा-या, सांगणा-या बाल्बोधांनी हा इतिहास वाचवा आणि नंतरच चर्चा करावी.


Tuesday, August 14, 2012

ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ

                                ದಿನೇಶ ಅಮೀನಮಟ್ಟು
ಮಳೆ ನಿಂತರೂ ಒಂದಷ್ಟು ಹೊತ್ತು ಮಳೆಹನಿ ನಿಲ್ಲುವುದಿಲ್ಲ. ಅಣ್ಣಾ ತಂಡವನ್ನು ಬರ್ಖಾಸ್ತುಗೊಳಿಸಲಾಗಿದ್ದರೂ ಅದು ಪ್ರಾರಂಭಿಸಿದ್ದ ಚಳವಳಿ ಬಗ್ಗೆ ಚರ್ಚೆ-ವಿಶ್ಲೇಷಣೆಗಳು ನಿಂತಿಲ್ಲ, ಇದು ಇನ್ನಷ್ಟು ಕಾಲ ಮುಂದುವರಿಯಲಿದೆ.

ಮಿಂಚಿಮರೆಯಾಗಿ ಹೋದ ಈ ಚಳವಳಿಯ ಗರ್ಭಪಾತಕ್ಕೆ ಕಾರಣರಾದ ಖಳನಾಯಕರು ಯಾರು ಎನ್ನುವುದನ್ನು ಗುರುತಿಸುವ ಕೆಲಸ ಈಗ ಪ್ರಾರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಎಲ್ಲರೂ ಅಣ್ಣಾತಂಡದ ಪ್ರಮುಖ ಸದಸ್ಯರಾದ ಅರವಿಂದ್ ಕೇಜ್ರಿವಾಲ್, ಕಿರಣ್‌ಬೇಡಿ ಮತ್ತು ಪ್ರಶಾಂತ್ ಭೂಷಣ್ ಮೇಲೆ ಎರಗಿಬಿದ್ದಿದ್ದಾರೆ.


`ಸೃಷ್ಟಿ, ಪಾಲನೆ ಮತ್ತು ಲಯ`ದ ಮೂರೂ ಕೆಲಸಗಳನ್ನು ಈ ತ್ರಿಮೂರ್ತಿಗಳೇ ಮಾಡಿದ್ದು ಎಂದು ಅಣ್ಣಾಬೆಂಬಲಿಗರು ಆರೋಪಿಸತೊಡಗಿದ್ದಾರೆ. ಚಳವಳಿ ಹಾದಿ ತಪ್ಪಲು ಕಾರಣವಾದ ಇವರ ಪಾತ್ರ  ಕ್ಷಮಿಸಿ ಬಿಡುವಂತಹದ್ದು ಖಂಡಿತ ಅಲ್ಲ.


ಆದರೆ ಇವರಷ್ಟೇ ಖಳನಾಯಕರೇ? ಹಾಗೆಂದು ತೀರಾ ಸರಳವಾಗಿ ತೀರ್ಮಾನಿಸಿಬಿಟ್ಟರೆ ಈ ಚಳವಳಿಯ ಸೋಲು-ಗೆಲುವುಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಾರದು.

ಈ ತ್ರಿಮೂರ್ತಿಗಳಷ್ಟೇ ಖಳರು ಅಲ್ಲದೆ ಇದ್ದರೆ ಬೇರೆ ಯಾರು ? ಕೆಲವರು ಅಣ್ಣಾಹಜಾರೆಯವರನ್ನೇ ಹೆಸರಿಸುತ್ತಾರೆ. ಸ್ವಲ್ಪ ಮಟ್ಟಿಗೆ ಇದು ನಿಜ ಕೂಡಾ. ಹಜಾರೆ ಅವರು ಸಜ್ಜನ, ಪ್ರಾಮಾಣಿಕ, ನಿಸ್ವಾರ್ಥಿ, ಸರಳಜೀವಿ ಎನ್ನುವುದರ ಬಗ್ಗೆ ಬಹಳ ಮಂದಿಗೆ ಅನುಮಾನ ಇಲ್ಲ.


ಆದರೆ ಈ ಗುಣಗಳಿಂದಷ್ಟೇ ನಾಯಕನಾಗಲು ಸಾಧ್ಯವೇ ಎನ್ನುವುದು ಪ್ರಶ್ನೆ. ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ನಂತರದಲ್ಲಿ ನಡೆದ ಎರಡು ಪ್ರಮುಖ ಚಳವಳಿಗಳನ್ನು ಮುನ್ನಡೆಸಿದ್ದ ಗಾಂಧೀಜಿ ಮತ್ತು ಜಯಪ್ರಕಾಶ್ ನಾರಾಯಣ್ ಕೇವಲ ಸಜ್ಜನರು ಮತ್ತು ಪ್ರಾಮಾಣಿಕರಾಗಿರಲಿಲ್ಲ.


ಅವರು ಬುದ್ದಿವಂತರೂ ಆಗಿದ್ದರು.  ವಿಸ್ತಾರವಾದ ಓದು, ರಾಷ್ಟ್ರ-ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಅರಿವು, ಪ್ರವಾಸ ಮತ್ತು ಜನರ ಜತೆಗಿನ ಒಡನಾಟ ಅವರಿಗೆ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುವ ತೀಕ್ಷ್ಣಗ್ರಹಣಶಕ್ತಿಯನ್ನು ತಂದು ಕೊಟ್ಟಿತ್ತು.  ಒಂದು ಅನ್ನದ ಅಗುಳನ್ನು ಮುಟ್ಟಿಯೇ ಪಾತ್ರೆಯಲ್ಲಿದ್ದ ಅನ್ನ ಬೆಂದಿದೆಯೇ ಇಲ್ಲವೇ ಎನ್ನುವುದನ್ನು ಹೇಳುವಷ್ಟು ಸಮಾಜದ ನಾಡಿಮಿಡಿತವನ್ನ್ನು ಬಲ್ಲವರಾಗಿದ್ದರು.

ಜನಪ್ರಿಯತೆಯಲ್ಲಿ ತೇಲಿಹೋಗದೆ ಅದನ್ನು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಳ್ಳುವ ನಿರ್ವಹಣಾ ಶಕ್ತಿ ಮತ್ತು ಸಂಯಮ ಅವರಲ್ಲಿತ್ತು. ಜಾತಿ,ಧರ್ಮ,ಪ್ರದೇಶಗಳಲ್ಲಿ ಒಳಗಿಂದೊಳಗೆ ಒಡೆದುಹೋಗಿರುವ ದೇಶದಲ್ಲಿ ಒಂದು ಸಾಮೂಹಿಕ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗಲು ಇಂತಹ ಸಾಮರ್ಥ್ಯಬೇಕಾಗುತ್ತದೆ. ಈ ಗುಣಗಳು ಅಣ್ಣಾಹಜಾರೆಯವರಲ್ಲಿ ಇದ್ದಿದ್ದರೆ ಭ್ರಷ್ಟಾಚಾರ ವಿರೋಧಿ ಚಳವಳಿ ನಡುಹಾದಿಯಲ್ಲಿಯೇ ಅಪಘಾತಕ್ಕೆ ಈಡಾಗುತ್ತಿರಲಿಲ್ಲ.

ಅಣ್ಣಾಚಳವಳಿ ಹಾದಿ ತಪ್ಪಲು ಮಾಧ್ಯಮರಂಗ ವಹಿಸಿದ ಖಳನಾಯಕನ ಪಾತ್ರವೇ ಕಾರಣ ಎನ್ನುವವರೂ ಇದ್ದಾರೆ. ಈ ಆರೋಪವನ್ನು ಮಾಡುವ ಅಣ್ಣಾತಂಡದ ಸದಸ್ಯರು ಮತ್ತು  ಬೆಂಬಲಿಗರು  ಕೊನೆದಿನಗಳಲ್ಲಿ ಮಾಧ್ಯಮಗಳ ನಿರ್ಲಕ್ಷ್ಯ ಮತ್ತು ಟೀಕೆಗಳನ್ನು ಉದಹರಿಸುತ್ತಿದ್ದಾರೆ.


ಇದು ಮಾಧ್ಯಮಗಳನ್ನು ಅರ್ಥಮಾಡಿಕೊಳ್ಳಲಾಗದ ಅವರ ಅಜ್ಞಾನವನ್ನಷ್ಟೇ ತೋರಿಸುತ್ತದೆ. ಕೊನೆದಿನಗಳ ನಿರ್ಲಕ್ಷ್ಯಗಿಂತಲೂ  ಅಣ್ಣಾಚಳವಳಿಗೆ ಹೆಚ್ಚು ಹಾನಿ ಉಂಟು ಮಾಡಿದ್ದು ಪ್ರಾರಂಭದ ದಿನಗಳ ಅತಿಪ್ರಚಾರ.


ಕಣ್ಣುಕಟ್ಟಿನ ಪ್ರಚಾರ ವೈಖರಿ ಮೂಲಕ ಉಪವಾಸ ಶಿಬಿರದ ಮುಂದೆ ಸೇರಿದ್ದ ಸಾವಿರ ಜನರನ್ನು  ಲಕ್ಷವಾಗಿ, ಲಕ್ಷ ಜನರನ್ನು ಕೋಟಿಯಾಗಿ ಮಾಧ್ಯಮಗಳು ಬಿಂಬಿಸಿದ್ದನ್ನು ನಿಜವೆಂದೇ ನಂಬಿದ ಅಣ್ಣಾತಂಡದ ಸದಸ್ಯರು ದೇಶದ 120 ಕೋಟಿ ಜನ ತಮ್ಮ ಬೆನ್ನಹಿಂದೆ ಇದ್ದಾರೆ ಎಂದು ಭ್ರಮಿಸಿಬಿಟ್ಟರು.

 
ಮೂರೂಹೊತ್ತು ಟಿವಿ ಪರದೆಗಳಲ್ಲಿ, ಪತ್ರಿಕೆಗಳ ಪುಟಗಳಲ್ಲಿ ಕಾಣಿಸುವ ತಮ್ಮ ಮುಖಗಳನ್ನು ಪ್ರೀತಿಸುತ್ತಾ ಆತ್ಮರತಿಗೆ ಜಾರಿಬಿಟ್ಟರು. ಮಾಧ್ಯಮರಂಗ ವಾಣಿಜ್ಯೀಕರಣಗೊಂಡ ಬದಲಾದ ಪರಿಸ್ಥಿತಿಯಲ್ಲಿ ಮುಖ್ಯವಾಗಿ ಟಿವಿ ಚಾನೆಲ್‌ಗಳು ಹುಟ್ಟು-ಸಾವುಗಳೆರಡನ್ನು ಸಂಭ್ರಮದಿಂದ ಆಚರಿಸುತ್ತದೆ.

ಈ ಭರದಲ್ಲಿ ಸರಿ-ತಪ್ಪು ಇಲ್ಲವೆ ಒಳ್ಳೆಯದು-ಕೆಟ್ಟದನ್ನು ಗುರುತಿಸುವ ನ್ಯಾಯಪ್ರಜ್ಞೆ ಜನಪ್ರಿಯತೆಯ ಪ್ರವಾಹದಲ್ಲಿ ಕೊಚ್ಚಿಕೊಂಡುಹೋಗುತ್ತದೆ. ಮಾಧ್ಯಮಗಳಿಂದ ಪ್ರಚಾರ ಬಯಸುವವರಿಗೆ ಇದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲದೆ ಇದ್ದರೆ ಅಣ್ಣಾತಂಡಕ್ಕಾದ ಗತಿಯೇ ಆಗುತ್ತದೆ.

ಮಾಧ್ಯಮಗಳ ಪ್ರಚಾರದ ಊರುಗೋಲಿನ ಬಲದಿಂದ ಎದ್ದುನಿಂತದ್ದು, ಆ ಊರುಗೋಲನ್ನು ಕಿತ್ತುಕೊಂಡ ಕೂಡಲೇ ಕುಸಿದುಬೀಳುತ್ತದೆ. ಹಾಗೆಯೇ ಆಯಿತು.

ಇವರೆಲ್ಲರ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ ಅಣ್ಣಾಚಳವಳಿಯ ವೈಫಲ್ಯದಲ್ಲಿ ಖಳನಾಯಕರ ಪಾತ್ರವಹಿಸಿದ್ದ ಬಹುಮುಖ್ಯವಾದ ಸಮುದಾಯವನ್ನು ಎಲ್ಲರೂ ಮರೆತುಬಿಟ್ಟಿದ್ದಾರೆ. ಅದು ಚಳವಳಿಗೆ ಸೇರುತ್ತಿದ್ದ ಜನ. ಜಯಪ್ರಕಾಶ್ ನಾರಾಯಣ್ ನೇತೃತ್ವದ `ಸಂಪೂರ್ಣ ಕ್ರಾಂತಿ`ಯ ನಂತರದ ದಿನಗಳಲ್ಲಿ ಒಂದು ಚಳವಳಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಎಂದೂ ಭಾಗವಹಿಸಿರಲಿಲ್ಲ.

`ನಾನೇ ಅಣ್ಣಾ` ಎಂದು ತಲೆಪಟ್ಟಿ ಕಟ್ಟಿಕೊಂಡು, ಎದೆಮೇಲೆ ಬರೆಸಿಕೊಂಡು, ಹಗಲುಹೊತ್ತಿನಲ್ಲಿ ಘೋಷಣೆ ಕೂಗುತ್ತಾ, ರಾತ್ರಿಹೊತ್ತು ಕ್ಯಾಂಡಲ್ ಹಚ್ಚುತ್ತಾ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಕ್ರೀಯಾಶೀಲರಾಗಿ `ಅರಬ್ ವಸಂತ` ಇನ್ನೇನು ಭಾರತದಲ್ಲಿ ಪ್ರಾರಂಭವಾಗಿಯೇ ಬಿಟ್ಟಿತೆನ್ನುವ ಭ್ರಮಾಲೋಕವನ್ನು ಸೃಷ್ಟಿಸುತ್ತಿದ್ದವರು ಚಳವಳಿಯಲ್ಲಿ ಭಾಗವಹಿಸಿದ್ದ ಜನ.

ಅಣ್ಣಾಹಜಾರೆ ಅವರ ಮೊದಲೆರಡು ಉಪವಾಸಗಳ ಕಾಲದಲ್ಲಿ ಸಕ್ರಿಯವಾಗಿದ್ದ ಈ ಜನಸಮೂಹ ನಂತರದ ಎರಡು ಉಪವಾಸಗಳ ಕಾಲಕ್ಕೆ ಆಸಕ್ತಿಯನ್ನು ಕಳೆದುಕೊಂಡುಬಿಟ್ಟಿತು.

ಹಿಂದಿನಷ್ಟು ಜನ ಸೇರುತ್ತಿಲ್ಲ ಎಂದು ಗೊತ್ತಾದ ಕೂಡಲೇ ಆಡಳಿತಾರೂಢ ಪಕ್ಷ ಚಳವಳಿಗಾರರನ್ನು ಕರೆಸಿ ಮಾತನಾಡಲು ಕೂಡಾ ಹೋಗದೆ ಸುಮ್ಮನಾಯಿತು, ಜನ ಕಡಿಮೆ ಸೇರುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಮಾಧ್ಯಮಗಳು ಕೂಡಾ ಹಿಂದೆ ಸರಿದುಬಿಟ್ಟವು. ಅಣ್ಣಾತಂಡ ಯುದ್ಧಮುಗಿಯವ ಮೊದಲೇ ಶಸ್ತ್ರತ್ಯಾಗ ಮಾಡಲು ಮುಖ್ಯ ಕಾರಣ ತಮ್ಮ ಹಿಂದೆ ಲಕ್ಷಲಕ್ಷ ಸಂಖ್ಯೆಯಲ್ಲಿದ್ದೇವೆ ಎಂಬ ನಂಬಿಕೆ ಹುಟ್ಟಿಸಿದ್ದ ಜನ ದೂರವಾಗಿದ್ದು.

ಈ ಜನ ಹೀಗೆ ಯಾಕೆ ವರ್ತಿಸಿದರು ಎನ್ನುವುದನ್ನು ವಿಶ್ಲೇಷಿಸುವ ಮೊದಲು ಇವರು ಯಾರು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ನಡೆಯುವ ಚಳವಳಿಗಳನ್ನು ಒಂದು ನಿರ್ದಿಷ್ಟವಾದ ಆವರಣದೊಳಗೆ ಸೇರಿಸುವುದು ಕಷ್ಟವಾದರೂ ಸ್ಥೂಲವಾಗಿ ಇವುಗಳನ್ನು ರಾಜಕೀಯ ಮತ್ತು ರಾಜಕೀಯೇತರ  ಎಂದು ಗುರುತಿಸಬಹುದು.

ಈ ವ್ಯಾಖ್ಯಾನ ಕೂಡಾ ಚಳವಳಿಗಳ ಸ್ಪಷ್ಟ ಚಿತ್ರವನ್ನು ನೀಡುವುದಿಲ್ಲ. ರಾಜಕೀಯ ಉದ್ದೇಶದ ಚಳವಳಿಗಳ ಬಗ್ಗೆ ಯಾವುದೇ ಗೊಂದಲ ಇಲ್ಲ. ಉದಾಹರಣೆಗೆ ಕಾಂಗ್ರೆಸ್,ಬಿಜೆಪಿ, ಕಮ್ಯುನಿಸ್ಟ್ ಇತ್ಯಾದಿ ಪಕ್ಷಗಳು ನಡೆಸುವ ಚಳವಳಿಗಳು.

ಇಲ್ಲಿ ಎಲ್ಲವೂ ಪಾರದರ್ಶಕ. ಸಮಸ್ಯೆ ರಾಜಕೀಯೇತರ ಚಳವಳಿಗಳದ್ದು. ನಿರ್ದಿಷ್ಟವಾದ ರಾಜಕೀಯ ಸಿದ್ಧಾಂತವನ್ನು ಹೊಂದಿಯೂ ಚುನಾವಣಾ ರಾಜಕೀಯದಿಂದ ದೂರವಾಗಿರುವ ರಾಜಕೀಯೇತರ ಚಳವಳಿಗಳಿವೆ.

ಇದೇ ರೀತಿ  ರಾಜಕೀಯೇತರ ಚಳವಳಿಗಳಾಗಿ ಪ್ರಾರಂಭಗೊಂಡು ಕ್ರಮೇಣ ನೇರ ಚುನಾವಣೆಯಲ್ಲಿ ಪಾಲ್ಗೊಂಡ ಚಳವಳಿಗಳೂ ಇವೆ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕವೂ ಸೇರಿದಂತೆ ದೇಶದ ಬೇರೆಬೇರೆ ಭಾಗಗಳಲ್ಲಿನ ರೈತ ಮತ್ತು ದಲಿತ ಚಳವಳಿಗಳು. ರಾಜಕೀಯ ಚಳವಳಿಗಳಲ್ಲಿ ಭಾಗವಹಿಸಿದವರು ಒಂದು ಪಕ್ಷದ ಸಿದ್ಧಾಂತಕ್ಕೆ ಬದ್ದರಾಗಿರುವವರು.

ರಾಜಕೀಯೇತರ ಚಳವಳಿಗೆ ವಿಶಾಲವಾದ ಹರಹು ಇರುತ್ತದೆ. ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಇಲ್ಲವೆ ಭೂಮಿ ಕಳೆದುಕೊಂಡವರು, ಮನೆ ಕಳೆದುಕೊಂಡವರು,ಅನ್ಯಾಯಕ್ಕೀಡಾದವರು...

ಹೀಗೆ ಬೇರೆಬೇರೆ ಜನವರ್ಗವನ್ನು ನಿರ್ದಿಷ್ಟವಾಗಿ ಗುರಿಯಾಗಿಟ್ಟುಕೊಂಡು ಈ ಚಳವಳಿಗಳು ನಡೆಯುತ್ತಿರುತ್ತವೆ. ಈ ಎರಡೂ ಬಗೆಯ ಚಳವಳಿಗಳಿಗೆ ಸ್ಪಷ್ಟವಾದ ಐಡೆಂಟಿಟಿ ಇರುತ್ತದೆ. ಇದರಿಂದಾಗಿ ಚಳವಳಿಯ ನಾಯಕರಿಗೆ ಕೂಡಾ ತಮ್ಮ ಉದ್ದೇಶ ಮತ್ತು ಸಾಗುವ ದಾರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ.

 ಆದರೆ ಬಹಳ ದೊಡ್ಡ ಕ್ಯಾನ್‌ವಾಸ್ ಇಟ್ಟುಕೊಂಡು ಪ್ರಾರಂಭವಾದ ಅಣ್ಣಾಚಳವಳಿಗೆ ಒಂದು ನಿರ್ದಿಷ್ಟ ಐಡೆಂಟಿಟಿ ಇರಲಿಲ್ಲ. ಇದು ಈ ಚಳವಳಿಯ ಶಕ್ತಿಯೂ ಹೌದು, ದೌರ್ಬಲ್ಯ ಕೂಡಾ. ಯಾವುದೇ ರಾಜಕೀಯ ಪಕ್ಷದ ಜತೆಗೆ ಗುರುತಿಸಿಕೊಳ್ಳದವರು ಮಾತ್ರವಲ್ಲ, ಗುರುತಿಸಿಕೊಂಡವರು ಕೂಡಾ ಎದೆಮೇಲಿದ್ದ ಪಕ್ಷದ ಬ್ಯಾಡ್ಜ್‌ಗಳನ್ನು ಕಿಸೆಯಲ್ಲಿಟ್ಟುಕೊಂಡು ಅಣ್ಣಾಬ್ಯಾಡ್ಜ್ ಧರಿಸಿ ಉಪವಾಸ ಕೂತಿದ್ದರು.

ಭ್ರಷ್ಟಾಚಾರ ಎನ್ನುವುದು ಈ ದೇಶದ ಬಡವನಿಂದ ಹಿಡಿದು ಶ್ರಿಮಂತರವರೆಗೆ, ಅಶಿಕ್ಷಿತರಿಂದ ಹಿಡಿದು ಶಿಕ್ಷಿತರವರೆಗೆ ಎಲ್ಲರನ್ನೂ ಆವರಿಸಿರುವ ಸಮಸ್ಯೆಯಾಗಿರುವ ಕಾರಣ ನಮ್ಮ ಗುರಿ ದೇಶದ 120 ಕೋಟಿ ಜನ ಎಂದು ಅಣ್ಣಾತಂಡ ತಿಳಿದುಕೊಂಡುಬಿಟ್ಟಿತು.

ತಂಡದ ಸದಸ್ಯರು ಎಲ್ಲರನ್ನೂ ಬನ್ನಿಬನ್ನಿ ಎಂದು ಕೈಬೀಸಿ ಕರೆಯಲಾರಂಭಿಸಿದರು. ಹೀಗೆ ಬಂದವರಲ್ಲಿ ಬಹುಸಂಖ್ಯಾತರು ಮಧ್ಯಮವರ್ಗಕ್ಕೆ ಸೇರಿರುವ ನಗರ ಕೇಂದ್ರಿತ, ಉದ್ಯೋಗಸ್ಥ, ಸದಾ ಸುರಕ್ಷತೆಯ ಕಕ್ಷೆಯೊಳಗೆ ಇರಬೇಕೆಂದು ಬಯಸುವ ಮತ್ತು ಯಾವುದೇ ಚಳವಳಿಯಲ್ಲಿ ಭಾಗವವಹಿಸಿ ಕಷ್ಟ-ನಷ್ಟ ಅನುಭವಿಸದವರು.

ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಹುಟ್ಟಿದ ಮತ್ತು ಆರ್ಥಿಕ ಉದಾರೀಕರಣದ ಯುಗದಲ್ಲಿ ಕಣ್ಣುಬಿಟ್ಟ 25-35 ವಯಸ್ಸಿನ ಆಜುಬಾಜಿನ ಈ ಯುವವರ್ಗ  ಲಾಭ-ನಷ್ಟದ ಲೆಕ್ಕಾಚಾರ ಇಟ್ಟುಕೊಂಡೇ ಮುಂದೆ ಹೆಜ್ಜೆ ಇಡುವವರು. `ಸೋಡಾಗ್ಯಾಸ್` ರೀತಿ ಒಮ್ಮೆಲೇ ಚಿಮ್ಮಿದ ಈ `ಯುವಬೆಂಬಲವನ್ನು ಅಣ್ಣಾತಂಡ ನಂಬಿತು. ನಂಬಿಕೆ ಕೈಕೊಟ್ಟಿತು.

 ಈ ಮಧ್ಯಮ ವರ್ಗ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಯಾವುದೇ ದೇಶದಲ್ಲಿ ರಾಜಕೀಯ ಇಲ್ಲವೆ ಸಾಮಾಜಿಕ ಬದಲಾವಣೆಯಲ್ಲಿ ಭಾಗವಹಿಸಿಲ್ಲ. ಇದನ್ನು ಹೇಳಿದಾಗ ಕೆಲವರು ಅರಬ್‌ರಾಷ್ಟ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಉದಾಹರಣೆ ಕೊಡಬಹುದು. ಅಲ್ಲಿನ ಮಧ್ಯಮವರ್ಗದಿಂದಲೇ ಚಳವಳಿ ಪ್ರಾರಂಭವಾದರೂ ಅದು ಅನ್ಯಾಯಕ್ಕೀಡಾದ ಎಲ್ಲ ವರ್ಗಗಳನ್ನು ಜತೆಯಲ್ಲಿ ಕಟ್ಟಿಕೊಂಡು ಬೆಳೆಯುತ್ತಾಹೋಯಿತು.

ಆ ದೇಶಗಳಲ್ಲಿ ಸರ್ವಾಧಿಕಾರದಿಂದ ನಲುಗಿಹೋದ ಸಾಮಾನ್ಯ ಜನ ಅದರಲ್ಲಿ ಭಾಗವಹಿಸಿದ್ದರು. ಪ್ರಾಣವೊಂದನ್ನು ಬಿಟ್ಟು ಕಳೆದುಕೊಳ್ಳಲು ಬೇರೆ ಏನೂ ಇಲ್ಲದವರು ಅವರು. ಇಲ್ಲಿ ಹಾಗಾಗಲಿಲ್ಲ. ಅಣ್ಣಾಚಳವಳಿ ಎತ್ತಿದ ಭ್ರಷ್ಟಾಚಾರದ ವಿಷಯ ಎಲ್ಲರಿಗೆ ಸಂಬಂಧಿಸಿದ್ದೇ ಆಗಿದ್ದರೂ ಅದರ ತೀವ್ರತೆಯ ಅನುಭವ ಬೇರೆಬೇರೆ ವರ್ಗದ ಜನರಿಗೆ ಬೇರೆಬೇರೆ ರೀತಿಯದಾಗಿದೆ.

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವ ರೈತ, ಹೆಚ್ಚು ಸಂಬಳ ಸಿಗುತ್ತಿಲ್ಲ ಎನ್ನುವ ಕಾರ್ಮಿಕ, ಲಿಂಗತಾರತಮ್ಯ  ನಡೆಯುತ್ತಿದೆ ಎನ್ನುವ ಮಹಿಳೆ, ಜಾತಿತಾರತಮ್ಯದಿಂದಾಗಿ ದೌರ್ಜನ್ಯ ನಡೆಯುತ್ತಿದೆ ಎನ್ನುವ ದಲಿತರು, ಉದ್ಯೋಗ ಸಿಗುತ್ತಿಲ್ಲ ಎನ್ನುವ ಯುವಕರು..ಹೀಗೆ ಸಮಸ್ಯೆಗಳು ಹತ್ತಾರು.

ಇವರ ಕಷ್ಟಗಳ ಪಟ್ಟಿಯಲ್ಲಿ ಭ್ರಷ್ಟಾಚಾರ  ಇದ್ದರೂ ಅದು ಮೊದಲ ಸ್ಥಾನದಲ್ಲಿ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆ ಇವರ ಕಷ್ಟಪರಿಹಾರಕ್ಕೆ ನೆರವಾಗಲೂಬಹುದು. ಆದರೆ ಇದನ್ನು ಯಾರೂ ಅವರಿಗೆ ಮನವರಿಕೆ ಮಾಡಿಕೊಟ್ಟಿಲ್ಲ.

ಆದುದರಿಂದ ಅವರಲ್ಲಿ ಹೆಚ್ಚಿನ ಮಂದಿ ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ದೂರವೇ ಉಳಿದುಬಿಟ್ಟರು. ಅವರನ್ನು ಹತ್ತಿರಕ್ಕೆ ಕರೆದುಕೊಂಡು ಬರುವ ಪ್ರಯತ್ನವನ್ನೂ ಯಾರೂ ಮಾಡಲಿಲ್ಲ. ಈ ಕಾರಣದಿಂದಾಗಿಯೇ ಜನಲೋಕಪಾಲರ ನೇಮಕಕ್ಕಾಗಿ ನಡೆದ ಹೋರಾಟ ನಿಜವಾದ ಅರ್ಥದಲ್ಲಿ ಜನಚಳವಳಿ ಆಗಲೇ ಇಲ್ಲ.

ಅಣ್ಣಾಚಳವಳಿ ವಿಫಲಗೊಂಡ ಮಾತ್ರಕ್ಕೆ ಮುಂದಿನ ಎಲ್ಲ ದಾರಿಗಳು ಮುಚ್ಚಿಹೋಗಿವೆ ಎಂದರ್ಥ ಅಲ್ಲ. ರಾಷ್ಟ್ರೀಯ ಪಕ್ಷಗಳು ನಿಧಾನವಾಗಿ ಮರೆಗೆ ಸರಿದು ಪ್ರಾದೇಶಿಕ ಪಕ್ಷಗಳು ವಿಜೃಂಭಿಸುತ್ತಿರುವ ಈಗಿನ ರಾಜಕಾರಣದಿಂದಲೂ ಚಳವಳಿಗಾರರೂ ಕಲಿಯಬೇಕಾದ ಪಾಠ ಇದೆ.

ಬಹುಶಃ ರಾಷ್ಟ್ರಮಟ್ಟದ ಒಂದು ಚಳವಳಿಯನ್ನು ಇನ್ನುಮುಂದೆ ನಡೆಸಿಕೊಂಡು ಹೋಗುವುದು ಸಾಧ್ಯ ಇಲ್ಲವೇನೋ? ಇದರಿಂದ ನಿರಾಶರಾಗಬೇಕಾಗಿಲ್ಲ, ಈಗಲೂ ದೇಶದ ನಾನಾಭಾಗಗಳಲ್ಲಿ ನೀರು, ಭೂಮಿ, ಉದ್ಯೊಗ, ಶಿಕ್ಷಣ, ಆರೋಗ್ಯ, ಆತ್ಮಗೌರವ... ಹೀಗೆ ನಾನಾ ಉದ್ದೇಶದ ಚಳವಳಿಗಳು ತಮ್ಮ ಮಿತಿಯಲ್ಲಿ ನಡೆಯುತ್ತಿರುತ್ತವೆ.

ಪ್ರಜಾಪ್ರಭುತ್ವವನ್ನು ಜೀವಂತವಾಗಿ ಮತ್ತು ಆರೋಗ್ಯಪೂರ್ಣವಾಗಿ ಇಟ್ಟಿರುವ ಈ ಸಣ್ಣಸಣ್ಣ ಚಳವಳಿಗಳೇ ಭವಿಷ್ಯದ ಭರವಸೆಗಳು. ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ.
 
ಕೃಪೆ : ಪ್ರಜಾವಾಣಿ

Sunday, February 05, 2012

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ಭವ್ಯ ಇತಿಹಾಸ

                                  -ರಘೋತ್ತಮ ಹೂ.ಬ. ಚಾಮರಾಜನಗರ 


ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ. ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲ್ಲಿ ಹುಟ್ಟಿದರು. ಬಾಲ್ಯ ದಿಂದಲೇ ಅಸ್ಪಶತೆಯ ನೋವನ್ನು ಅನುಭವಿಸಿ ದರು. ತಮ್ಮ ತಂದೆಯನ್ನು ನೋಡಲು ಗಾಡಿಯಲ್ಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು.
ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರ್ ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ’ ಎನಿಸಿ ಕೊಂಡರು. ಅಸ್ಪಶರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದ ಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೇ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ ‘ಮಹಾನ್ ಇತಿಹಾಸವನ್ನು’ ಮುಚ್ಚಲಾಗುತ್ತಿದೆ!
ಹಾಗಿದ್ದರೆ ಅಂಬೇಡ್ಕರ್‌ರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೇರಿಕದ ಅಧ್ಯಕ್ಷ ಜಾರ್ಜ್‌ಬುಷ್ ‘ಗಾಂಧಿ, ಠಾಗೋರ್ ಮತ್ತು ನೆಹರೂ’ರವರನ್ನು ನವ ಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕಬ್ಜರನ್ನಾಗಿ ಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರ ವಾಗಿ ನಡೆಯುತ್ತಿರುವಾಗ ಬುಷ್‌ರಂತಹವರು ಇದಕ್ಕಿಂತ ಹೆಚ್ಚಿಗೆ ಇನ್ನೇನನ್ನು ತಾನೆ ಹೇಳಿ ಯಾರು? ಈ ಹಿನ್ನೆಲೆಯಲ್ಲಿ ಹೊರಜಗತ್ತಿಗೆ ಅಂಬೇಡ್ಕರ್‌ರ ನೈಜ ಸಾಧನೆಗಳನ್ನು ಬಿಚ್ಚಿ ಹೇಳಬೇಕಾಗಿದೆ. ಇತಿಹಾಸದಲ್ಲಿ ಅವರನ್ನು ಮರೆಮಾಚಲು ನಡೆಯುತ್ತಿರುವ ದುಷ್ಟ ಪ್ರಯತ್ನವನ್ನು ತಡೆಯಬೇಕಾಗಿದೆ.
ಹಾಗಿದ್ದರೆ ಅಸ್ಪಶರ ಉದ್ಧಾರವನ್ನು ಸಂವಿ ಧಾನ ರಚನೆಯನ್ನು ಹೊರತುಪಡಿಸಿ ಅಂಬ್ಕೇಡರ್‌ರ ಇನ್ನೇನೇನು ಸಾಧನೆಗಳಿವೆ? ಪಟ್ಟಿ ಮಾಡುತ್ತಾ ಹೋದರೆ ‘ಬಾಬಾ ಸಾಹೇಬ’ರ ವ್ಯಕ್ತಿತ್ವ ಗಾಂಧಿ ಎಂಬ ‘ಮಹಾತ್ಮ’ರನ್ನೂ, ಠಾಗೋರ್ ಎಂಬ ‘ಗುರುದೇವ’ರನ್ನೂ, ನೆಹರೂ ಎಂಬ ‘ಚಾಚಾ’ ರನ್ನೂ ಮೀರಿ ಬೆಳೆಯುತ್ತದೆ. ಏಕೆಂದರೆ ಈ ದೇಶದಲ್ಲಿ ಪ್ರಪ್ರಥಮವಾಗಿ ರೈತರ ಪರ ದನಿ ಎತ್ತಿದ್ದು ಅಂಬೇಡ್ಕರ್.
ಈ ದೇಶದ ಮಹಿಳೆಯ ರಿಗೆ ‘ಹಿಂದೂ ಸಂಹಿತೆ ಮಸೂದೆಯ ಮೂಲಕ ನ್ಯಾಯ ದೊರಕಿಸಿಕೊಡಲು ಹೋರಾಡಿದ್ದು ಅಂಬೇಡ್ಕರ್. ಅಚ್ಚರಿಯ ವಿಷಯವೆಂದರೆ ಈ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್.ಬಿ.ಐ) ಸ್ಥಾಪಿಸಲು ಕಾರಣರಾ ದದ್ದು ಕೂಡ ಅಂಬೇಡ್ಕರ್‌ರೆ.
ಹಿಂದೂ ಸಾಮಾಜಿಕ ಸುಧಾರಣೆಗೆ ಯತ್ನಿಸಿದ್ದು, ಪಾಕಿಸ್ತಾನ ವಿಷಯ, ಕಾರ್ಮಿಕ ನೀತಿ, ವಿದ್ಯುತ್ ಮತ್ತು ನೀರಾವರಿ ನೀತಿ, ದಾಮೋದರ ಕಣಿವೆ ಯೋಜನೆ, ಹಿರಾಕುಡ್ ಯೋಜನೆ, ಸೋನ್ ಕಣಿವೆ ಯೋಜನೆ, ಎರಡನೆ ಮಹಾಯುದ್ಧದ ನಂತರ ದೇಶದ ಆರ್ಥಿಕ ನೀತಿ ರೂಪಿಸಿದ್ದು. ಅಬ್ಬಬ್ಬಾ ಪಟ್ಟಿ ಮಾಡುತ್ತಾ ಹೋದರೆ ಅಂಬೇಡ್ಕರ್‌ರು ಇದಕ್ಕೆಲ್ಲ ಕಾರಣರಾ ಎಂದೆನಿಸುತ್ತದೆ. ವಾಸ್ತವವೆಂದರೆ ಇವು ಅವರ ಮುಚ್ಚಿಟ್ಟ ಇತಿಹಾಸದ ಕೆಲವು ತುಣುಕುಗಳು ಅಷ್ಟೇ!
ಉದಾಹರಣೆಗೆ ಹೇಳುವುದಾದರೆ 1945ರಲ್ಲಿ ಎರಡನೆ ಮಹಾಯುದ್ಧದ ನಂತರ ಈ ದೇಶದ ಕೃಷಿ, ಕೈಗಾರಿಕೆ, ಆರ್ಥಿಕ ಸ್ಥಿತಿ, ಪುನರ್ವಸತಿ ಮತ್ತು ಸೈನಿಕರ ಕಲ್ಯಾಣಕ್ಕಾಗಿ ‘ಪುನರುಜ್ಜೀವನ ಸಮಿತಿ ಸಭೆ’ ಬ್ರಿಟಿಷ್ ಗವರ್ನರ್ ಜನರಲ್‌ರಿಂದ ರಚಿಸಲ್ಪಟ್ಟಿತು. ಅಂಬೇ ಡ್ಕರ್ ಆ ಸಮಿತಿಯ ಸದಸ್ಯರಾಗಿದ್ದರು ಮತ್ತು ಅವರಿಗೆ ‘ನೀರಾವರಿ ಮತ್ತು ವಿದ್ಯುಚ್ಛಕ್ತಿ ನೀತಿ ನಿರೂ ಪಣಾ ಸಮಿತಿ’ಯ ಜವಾಬ್ದಾರಿಯನ್ನು ವಹಿಸಲಾಯಿತು.
ಆಸಕ್ತಿದಾಯಕ ವಿಷಯವೇನೆಂದರೆ ಆ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಅದ್ಭುತವಾದ ಸಾಧನೆ ಮಾಡಿದ್ದಾರೆ. 1942ರಿಂದ 1946ರ ವರೆಗೆ ಗವರ್ನರ್ ಜನರಲ್‌ರವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ಯಾಬಿನೆಟ್ ಮಂತ್ರಿಯ ಸ್ಥಾನ ಪಡೆದಿದ್ದ ಅವರಿಗೆ ಕಾರ್ಮಿಕ, ನೀರಾವರಿ ಮತ್ತು ವಿದ್ಯುಚ್ಛಕ್ತಿ ಇಲಾಖೆಗಳನ್ನು ವಹಿಸಲಾಗಿತ್ತು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅಂಬೇಡ್ಕರ್‌ರವರು ಮಾಡಿದ ಸಾಧನೆ ಬಹುತೇಕ ಜನರಿಗೆ ಗೊತ್ತಿಲ್ಲ!
ಅಥವಾ ಗೊತ್ತಾಗಲು ಬಿಟ್ಟಿಲ್ಲ. ಕುತೂಹಲಕಾರಿ ವಿಷಯವೆಂದರೆ ಈ ಅವಧಿಯಲ್ಲಿಯೇ ಅವರು ಪ್ರಸಿದ್ಧ ದಾಮೋದರ್ ಕಣಿವೆ ಯೋಜನೆ, ಹಿರಾ ಕುಡ್ ಯೋಜನೆ ಮತ್ತು ಸೋನ್ ಕಣಿವೆ ಯೋಜನೆ ಜಾರಿಗೊಳಿಸಿದ್ದು ಮತ್ತು ಇಂತಹ ಬೃಹತ್ ನೀರಾವರಿ ಯೋಜನೆ, ವಿದ್ಯುತ್ ಯೋಜನೆಗಳನ್ನು ಗಮನ ದಲ್ಲಿಟ್ಟುಕೊಂಡು ಅವರು 1944ರಲ್ಲೆ ‘ಕೇಂದ್ರೀಯ ಜಲವಿದ್ಯುತ್ ಮತ್ತು ನೀರಾವರಿ ಆಯೋಗ’ವನ್ನು ಸ್ಥಾಪಿಸಿದ್ದು.
ಇವತ್ತು ನಮ್ಮ ಮನೆಗಳೇನಾದರೂ ಬೆಳಗುತ್ತಿದ್ದರೆ, ನಮ್ಮ ಹೊಲಗಳೇನಾದರೂ ಹಸುರಿನಿಂದ ಕಂಗೊಳಿಸುತ್ತಿದ್ದರೆ ಅದು ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಮಾಡಿದ ಅದ್ಭುತ ಸಾಧನೆಯ ಫಲವಲ್ಲದೆ ಬೇರೇನೂ ಅಲ್ಲ. ದುರಂತ ವೆಂದರೆ ಇಂತಹ ಅದ್ಭುತ ಸಾಧನೆಯನ್ನು ಮುಚ್ಚಿಡಲಾಗಿದೆಯಲ್ಲ ಎಂಬುದು.
ಅಂಬೇಡ್ಕರ್‌ರ ಮತ್ತೊಂದು ಸಾಧನೆಯನ್ನು ಹೇಳಲೇಬೇಕು. ಅದು ಭಾರತೀಯ ರಿಸರ್ವ್ (ಆರ್‌ಬಿಐ)ಗೆ ಸಂಬಂಧಿಸಿದ್ದು. ತಮ್ಮ ‘ಆರ್ಥಿಕ ಯೋಜನೆ, ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಪಾತ್ರ’ ಎಂಬ ಕೃತಿಯಲ್ಲಿ ಖ್ಯಾತ ಚಿಂತಕ ಸುಖದೇವ್ ಥೊರಟ್‌ರವರು ಇದನ್ನು ದಾಖಲಿಸುತ್ತಾರೆ. ”ಆರ್‌ಬಿಐ ಸ್ಥಾಪನೆಗೆ ಬ್ರಿಟಿಷ್ ಮಹಾರಾಣಿಯವರಿಂದ ನೇಮಿಸಲ್ಪಟ್ಟಿದ್ದ ‘ಹಿಲ್ಟನ್ ಯಂಗ್ ಆಯೋಗ’ದ ಮುಂದೆ ಅಂಬೇಡ್ಕರ್ ರವರು ಆರ್‌ಬಿಐನ ಮಾರ್ಗದರ್ಶಿ ಸೂತ್ರ, ಕಾರ್ಯಶೈಲಿ ಮತ್ತು ದೂರದೃಷ್ಟಿಯನ್ನು ಮಂಡಿಸುತ್ತಾರೆ.
ತನ್ಮೂಲಕ ಆರ್.ಬಿ.ಐ.ನ ಸ್ಥಾಪನೆಗೆ ಕಾರಣರಾಗುತ್ತಾರೆ’ ಎನ್ನುತ್ತಾರೆ ಸುಖದೇವ್ ಥೊರಟ್. ಕುತೂಹಲಕಾರಿ ಅಂಶವೆಂದರೆ ‘ಹಿಲ್ಟನ್ ಯಂಗ್’ ಆಯೋಗದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಅಂಬೇಡ್ಕರ್ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ಗಾಗಿ ‘ಡಿ.ಎಸ್‌ಸಿ’ ಪದವಿ ಪಡೆಯಲು ರಚಿಸಿದ್ದ ‘ರೂಪಾಯಿಯ ಸಮಸ್ಯೆ, ಅದರ ಮೂಲ ಮತ್ತು ಪರಿಹಾರ’ ಎಂಬ ಕೃತಿಯಿತ್ತು.
ದೇಶದ ಹಣಕಾಸು ವ್ಯವಸ್ಥೆ ಪಟ್ಟಭದ್ರರ ಕೈಗೆ ಜಾರುತ್ತಿದ್ದುದನ್ನು ಗಮನಿಸಿ ಅಂಬೇಡ್ಕರ್‌ರು ಆರ್.ಬಿ.ಐ.ನ ಅಗತ್ಯತೆ ಮತ್ತು ಅದರ ಭವಿಷ್ಯದ ಮಾರ್ಗಸೂಚಿಯ ಬಗ್ಗೆ ಆಯೋಗದ ಮುಂದೆ ಸಮಗ್ರವಾದ ವಾದ ಮಂಡಿಸುತ್ತಾರೆ. ತನ್ಮೂಲಕ 1934ರಲ್ಲಿ ಅದರ ಸ್ಥಾಪನೆಗೆ ಕಾರಣರಾಗುತ್ತಾರೆ. ಮತ್ತೆ ಕೇಳು ತ್ತಿರುವ ಪ್ರಶ್ನೆಯೇನೆಂದರೆ ಇಂತಹ ಅದ್ಭುತ ಇತಿಹಾಸ ಎಷ್ಟು ಜನರಿಗೆ ಗೊತ್ತು ಎಂಬುದು?
ಮತ್ತೊಂದು ವಿಷಯ ಇಲ್ಲಿ ಹೇಳಲೇಬೇಕಾಗಿದೆ. ಇತ್ತೀಚೆಗೆ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ತನ್ನ 150ನೆ ವರ್ಷಾಚರಣೆಯನ್ನು ನೆರವೇರಿಸಿಕೊಂಡಿತು. ಅದು ರಾಷ್ಟ್ರಗೀತೆಯ ಕರ್ತೃ ರವೀಂದ್ರನಾಥ್ ಠಾಗೋರ್‌ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಿತು. ಪ್ರಶ್ನೆಯೇನೆಂದರೆ ಈ ದೇಶದ ಕರೆನ್ಸಿಯ ಬಗ್ಗೆ ಹಣಕಾಸು, ಅರ್ಥಶಾಸ್ತ್ರದ ಬಗ್ಗೆ ಠಾಗೋರ್‌ರ ಕೊಡುಗೆಯಾದರೂ ಏನು? ಎಂಬುದು.
ಖಂಡಿತ ಏನೂ ಇಲ್ಲ. ಎಸ್.ಬಿ.ಐ. ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣಕರ್ತರಾದ, ಹಲವಾರು ಕೃತಿಗಳನ್ನು ರಚಿಸಿ ಈ ದೇಶದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿರುವ, ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್‌ರಿಂದ ‘ಅಂಬೇಡ್ಕರ್ ನನ್ನ ಅರ್ಥಶಾಸ್ತ್ರದ ಗುರು’ ಎಂದು ಕರೆಸಿಕೊಂಡಿರುವ ಬಾಬಾಸಾಹೇಬ್ ಡಾ. ಅಂಬೇಡ್ಕರ್‌ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಬೇಕಿತ್ತು!
ದುರಂತ ವೆಂದರೆ ಅಸ್ಪಶತೆಯ ಸೋಂಕು ತಗುಲಿಸಿಕೊಂಡ ಈ ದೇಶದ ಸ್ಥಾಪಿತ ಹಿಸಾಕ್ತಿಗಳಿಗೆ ಅಂಬೇಡ್ಕರ್‌ರ ಈ ಸಾಧನೆಗಳು ಕಾಣುತ್ತಿಲ್ಲ. ಇನ್ನು ಅವರು ಬ್ರಾಂಡ್ ಅಂಬಾಸಿಡರ್ ಆಗಲು ಹೇಗೆ ಸಾಧ್ಯ? ಅವರನ್ನು ಕೇವಲ ಒಂದು ಸಮುದಾಯದ ‘ಬ್ರಾಂಡ್’ ಆಗಿ ಬಿಂಬಿಸಲಾಗುತ್ತಿದೆ ಅಷ್ಟೆ!
ಇನ್ನು ಈ ನಡುವೆ ಅಂತರಾಜ್ಯ ಸಮಸ್ಯೆ ಗಳ ಬಗ್ಗೆ ಅಂಬೇಡ್ಕರ್‌ರ ಅನಿಸಿಕೆಗಳನ್ನು ದಾಖಲಿಸಲೇಬೇಕು. ಯಾಕೆಂದರೆ 1955ರಲ್ಲೇ ಅಂಬೇಡ್ಕರ್ ತಮ್ಮ ‘ಭಾಷಾವಾರು ಪ್ರಾಂತ್ಯ ಗಳ ಬಗೆಗಿನ ಆಲೋಚನೆಗಳು’ ಎಂಬ ಕೃತಿಯಲ್ಲಿ ಮಧ್ಯಪ್ರದೇಶವನ್ನು ಉತ್ತರ ಮತ್ತು ದಕ್ಷಿಣ ರಾಜ್ಯಗಳಾಗಿ ವಿಂಗಡಿಸಲು ಮತ್ತು ಬಿಹಾರವನ್ನು ಎರಡು ರಾಜ್ಯವಾಗಿ ವಿಂಗಡಿಸಲು ಸಲಹೆ ನೀಡು ತ್ತಾರೆ.
ಅಚ್ಚರಿಯ ವಿಷಯವೇನೆಂದರೆ ಅವರು ಸಲಹೆ ನೀಡಿದ 45 ವರ್ಷಗಳ ನಂತರ ಅದು ಜಾರಿಯಾ ದದ್ದು. ಯಾಕೆಂದರೆ 2000ದಲ್ಲಿ ಮಧ್ಯಪ್ರದೇಶದಿಂದ ಛತ್ತೀಸ್‌ಗಢ ಮತ್ತು ಬಿಹಾರದಿಂದ ಜಾರ್ಖಂಡ್ ಅನ್ನು ವಿಭಜನೆಗೊಳಿಸಿ ಪ್ರತ್ಯೇಕ ರಾಜ್ಯಗಳೆಂದು ಘೋಷಿಸಲಾಯಿತು. ತನ್ಮೂಲಕ ಅಂಬೇಡ್ಕರ್‌ರ ದೂರದೃಷ್ಟಿಗೆ ಮನ್ನಣೆ ನೀಡಲಾಯಿತು. (ಅಂದಹಾಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ ಹೊಗೇನಕಲ್ ವಿವಾದಕ್ಕೆ ಅಂಬೇಡ್ಕರ್‌ರಲ್ಲಿ ಪರಿಹಾರವಿದೆಯೆಂದರೆ ಅತಿಶಯೋಕ್ತಿಯೆನಿಸದು. ಅದಕ್ಕಾಗಿ ಅಂಬೇಡ್ಕರ್ ಕೃತಿಗಳ ಮೊರೆ ಹೋಗಬೇಕಷ್ಟೆ.)
ಅಂಬೇಡ್ಕರ್‌ರನ್ನು ಮುಚ್ಚಿಡುವ, ಅವರ ಸಾಧನೆಗಳೆಲ್ಲವನ್ನು ಇಡೀ ಜಗತ್ತಿಗೆ ಹೇಳದಿರುವುದರ ಹಿಂದಿರುವ ಹುನ್ನಾರವಾದರೂ ಏನು? ಖಂಡಿತ ಒಂದು ಬೃಹತ್ ಸಮುದಾಯವನ್ನು, ಅದರ ಭವ್ಯ ಇತಿಹಾಸವನ್ನು ಅದರಿಂದ ಮರೆಮಾಚಿ ಮಾನಸಿಕ ಗುಲಾಮಗಿರಿಗೆ ತಳ್ಳುವ ವ್ಯವಸ್ಥಿತ ಸಂಚಿದು. ಈ ನಿಟ್ಟಿನಲ್ಲಿ ಶೋಷಿತ ಸಮುದಾಯ ಅಂತಹ ವ್ಯವಸ್ಥಿತ ಸಂಚಿಗೆ ಬಲಿಯಾಗಬಾರದು.
‘ನಮಗೇಕೆ ಇದನ್ನು ಹೇಳಲಿಲ್ಲ’ ಎಂದು ಮುಂದಿನ ಪೀಳಿಗೆ ಕೇಳುವಂತಾಗಬಾರದು. ಆದಕಾರಣ ಶೋಷಿತ ಸಮುದಾಯ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ಅಂಬೇಡ್ಕರ್‌ರ ಭವ್ಯ ಇತಿಹಾಸವನ್ನು, ಪ್ರತಿಯೊಂದು ಸಾಧನೆಯನ್ನು ಇಡೀ ಜಗತ್ತಿಗೆ ಸಾರಿ ಹೇಳಲು ಟೊಂಕಕಟ್ಟಿ ನಿಲ್ಲಬೇಕಿದೆ.

ಕೃಪೆ : varthabharathi

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.