Showing posts with label ಸಮಾಜ. Show all posts
Showing posts with label ಸಮಾಜ. Show all posts

Wednesday, February 27, 2013

ಮನುಷ್ಯರನ್ನು ಮನುಷ್ಯರಂತೆ ಕಾಣೋಣ !


                                                          -ಸರೋವರ್ ಬೆಂಕೀಕೆರೆ. 


ಭೂಮಿಯಲ್ಲಿ ಎಷ್ಟೋ ಜೀವಿಗಳು ಬದುಕಿವೆ, ಎಲ್ಲ ಪ್ರಾಣಿ ಪಕ್ಷಿಗಳು ಜಾತಿ, ಮತ, ಧರ್ಮ ಎನ್ನದೆ ಸಂತೋಷದಿಂದ ಬದುಕುತ್ತಿವೆ, ಮೊನ್ನೆ ಪತ್ರಿಕೆಯಲ್ಲಿ ಕಂಡೆ ಹಸುವು ತನ್ನ ಕರು ಅಲ್ಲದ, ತನ್ನ ಜಾತಿಗೆ ಸೇರದ ಕೊಳಚೆಯಲ್ಲಿ ವಾಸಿಸುವ ಹಂದಿಮರಿಯೊಂದಕ್ಕೆ ಹಾಲುಣಿಸಿ ಮಾನವೀಯತೆ ಮೆರೆಯಿತೆಂದು ! ನನ್ನಲ್ಲಿ ಪ್ರಶ್ನೆ ಹಾಕಿಕೊಂಡೆ ಮಾನವೀಯತೆ ಹಾಗೆಂದರೆ ? ಓಹ್ ಮಾನವ ಧರ್ಮ !..... ಮಾನವ ಧರ್ಮ ಏನು ? ಹಸುವನ್ನು ದೇವರು ಎನ್ನುವ, ಹಸುವನ್ನು ಪೂಜೆ ಮಾಡುವ ಮಾನವ ಅದರ ಜಾತ್ಯತೀತ ಮನಸ್ಸನ್ನು ಅರಿಯದೆ, ಬಾಯಿ ಮಾತಲ್ಲಿ ದೇವರು ಎಂದು ಸ್ವತಃ ಜಾತಿಯನ್ನು ಕಟ್ಟುತ್ತಾನೆ, ದೇವಸ್ಥಾನದಲ್ಲೆ ಪಂಕ್ತಿ ಭೇದ ಮಾಡುತ್ತಾನೆ, ಮನುಷ್ಯನನ್ನೆ ಅನ್ಯ ಜಾತಿಯ ಪ್ರಾಣಿಯಂತೆ ಕಾಣುತ್ತಾನೆ, ಕೊಲೆ, ಅತ್ಯಾಚಾರ, ಭ್ರಷ್ಟಾಚಾರ, ಹೀಗೆ……, ಹಾಗಾದರೆ ಇದೇನಾ ಮಾನವೀಯತೆ ಆ ಹಸುವು ಹಂದಿ ಮರಿಗೆ ಹಾಲುಣಿಸಿ ಮೇರೆದ ಮಾನವೀಯತೆ ಅಂದರೆ ಇದೇನಾ?

ಮತ್ತೆ ಅದೇ ಪತ್ರಿಕೆಗಳಲ್ಲಿ ಲೇಖನಗಳು ಓದಿದೆ ; ಡೆಲ್ಲಿಯಲ್ಲಿ ಹುಡುಗಿಯ ಮೇಲೆ ಅತ್ಯಾಚಾರವೆಸಗಿ ಪ್ರಾಣಿಯಂತೆ ವರ್ತಿಸಿದ್ದಾರೆ  ಎಂದು ! ಆದರೆ ವಿಚಿತ್ರ ನೋಡಿ, ಪ್ರಾಣಿ ಮಾನವೀಯತೆ ಮೆರೆಯುತ್ತದೆ ಮತ್ತು ಮನುಷ್ಯ ಪ್ರಾಣಿಯಂತೆ ವರ್ತಿಸುತ್ತಾನಂತೆ ? ನಿಜಕ್ಕೂ ಈ ಮಾನವೀಯತೆ ಅನ್ನುವ ಪದವೇ ಬದಲಾಗಬೇಕು ಎಂದು ನನ್ನಲ್ಲಿ ಅನಿಸುತ್ತಿದೆ.

ಹೀಗೆ ನನಗೊಂದು ಚಿಕ್ಕ ಕಥೆ ನೆನಪಾಗುತ್ತದೆ, ಒಂದು ಹೆಣ್ಣು ನಾಯಿ ಮಧ್ಯ ರಾತ್ರಿ ಹಾದಿಯಲ್ಲಿ ಹೋಗುವಾಗ 5 ಗಂಡು ನಾಯಿ ಆ ಹೆಣ್ಣು ನಾಯಿಯನ್ನು ಬೆನ್ನ ಹತ್ತಿದವು, ಹೆಣ್ಣು  ನಾಯಿ ಭಯದಲ್ಲಿ ಓಡಲು ಶುರು ಮಾಡಿತ್ತು, ನಂತರ ಆ 5 ಗಂಡು ನಾಯಿ ಎದುರಿಗೆ  ಬಂದು ಹೇಳಿದವು, “ಹೆದರಬೇಡ ನಾವು ನಾಯಿಗಳು ಮನುಷ್ಯರಲ್ಲ!” ಇದನ್ನು ಓದಿದ ನನಗೆ ನಗು ಬರುವ ಬದಲು, ಮೊದಲ ಬಾರಿಗೆ ಅಯ್ಯೋ ನಾನು ಕೂಡ ಮನುಷ್ಯನಲ್ಲವೆ ಎಂದು ಚಡಪಡಿಸಿದೆ, ಪ್ರಾಣಿ ಪಕ್ಷಿಗಳು ಎಂದು ಕೊಲೆ ಮಾಡುವುದಿಲ್ಲ, ಅತ್ಯಚಾರದ ದೂರು ಕೂಡ ಎದುರಿಸಿಲ್ಲ. ನಾನು ಪ್ರಾಣಿ ಆಗಿದ್ದರೆ ?
ಇದನ್ನೆಲ್ಲ ನೆನೆಯಲು ಒಂದು ಕಾರಣವಿದೆ, ನಮ್ಮ ಕಾಲೇಜಿನಲ್ಲಿ ನನ್ನ ನೆಚ್ಚಿನ ಶಿಕ್ಷಕರು ಇದ್ದರು, ಅವರು ನನ್ನನ್ನು ಯಾವಾಗಲೂ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು ನನಗೂ ಅವರೆಂದರೆ ತುಂಬಾ ಗೌರವ, ಅವರ ಮನೆ ನಮ್ಮ ಹಾಸ್ಟಲ್  ಹತ್ತಿರ ಇದ್ದರಿಂದ, ಅವರ ಮನೆಗೆ ಮನೆ ಪಾಠಕ್ಕೆಂದು ಕರೆದಿದ್ದರು. ನಾನು ಮನೆ ಪಾಠಕ್ಕೆಂದು ದಿನವೂ ಹೋಗುತ್ತಿದ್ದೆ, ಒಂದು ದಿನ ಅವರ ಮನೆ  ಮುಂದೆ ಕೆಲವು ಮಕ್ಕಳು ಆಟವಾಡುತ್ತಿದ್ದರು, ಅವರಲ್ಲಿ ನಮ್ಮ ಶಿಕ್ಷಕರ ಅಕ್ಕನ ಮಗೂ ಕೂಡ ಆಡುತ್ತಿತ್ತು, ಆ ಮಗುವೊಂದು ಬಿಟ್ಟು, ಉಳಿದ ಮಕ್ಕಳು ಅಲ್ಲೆ ಗಾರೆ ಕೆಲಸ ಮಾಡುವವರ ಮಕ್ಕಳಾಗಿದ್ದರು, ಅವರು ಯಾರೂ ಶಾಲೆಗೆ ಹೋಗದವರಾಗಿದ್ದರು. ನಮ್ಮ ಶಿಕ್ಷಕರ ಮನೆಯಿಂದ ಕೂಗು ಬಂದಿತು, 'ಏ ಸೋನು ( ನಮ್ಮ ಶಿಕ್ಷಕರ ಅಕ್ಕನ ಮಗು), ನೀನು ಅವರೊಡನೆ ಆಡಬಾರದು. ಬಾ ಇಲ್ಲಿ' ಎಂದು ಆ ಮಗುವನ್ನು ಕರೆದುಕೊಂಡು ಹೋದರು. ಆಡುತ್ತಿದ್ದ ಸೋನುವಿನ ಗಮನ ಆ ಮಕ್ಕಳ ಕಡೆಗೆ  ಇತ್ತು. ಚಿಕ್ಕ ಗುಡಿಸಲಿನ ಮುಂದೆ ಆಡುತ್ತಿದ್ದ ಮಕ್ಕಳ ಕಣ್ಣು ಆ ದೊಡ್ಡ ಮನೆಯ ಕಡೆಯೇ ಹರಿದಿತ್ತು.

ಸ್ವಲ್ಪ ಹೊತ್ತಿಗೆ ನನಗೆ ಪಾಠ ಶುರುವಾಗಿದ್ದರಿಂದ ನಾನು ಮನೆಯೊಳಗೆ ಹೋದೆ, ಪಾಠ ಮುಗಿಸಿಕೊಂಡು ಹೊರಗೆ ಬಂದೆ, ಮನೆಯ ಬಾಗಿಲಲ್ಲಿ ಆ ಗುಡಿಸಲಿನ ಮಕ್ಕಳು ಕೂತು ಪಿಳಿ ಪಿಳಿ ಕಣ್ಣು ಬಿಡುತ್ತಾ ಟಿ.ವಿ ನೋಡುತ್ತಿದ್ದರು, ನಾನು ಮನೆಗೆ ಹೊಸಬನಾಗಿದ್ದರಿಂದ ನನ್ನ ಗೆಳೆಯನಿಗೆ ಕೇಳಿದೆ, 'ಇವರು ಹೊರಗೆ ಏಕೆ  ಕೂತಿದ್ದಾರೆ ?' ನನ್ನ ಸ್ನೇಹಿತ ಹೇಳಿದ, 'ಅವರು ಕೆಳ ಜಾತಿಯವರಲ್ಲವೆ ಅದಕ್ಕೆ' ಎಂದ ! ನಾನು  ಒಳಗೆ ಇಣುಕಿದೆ, ನಾಯಿ ಮರಿ ಮನೆಯಲ್ಲೇ ಆಡುತ್ತಿತ್ತು, ಆದರೆ ಮನುಷ್ಯರ ಜಾತಿಯಲ್ಲೇ ಹುಟ್ಟಿದ ಕೆಳ ವರ್ಗದ ಮಕ್ಕಳು ಮಾತ್ರ ಚಪ್ಪಲಿ ಬಿಡುವ ಸ್ಥಳದಲ್ಲಿ ಕೂತಿದ್ದರು. ಇದರಿಂದ ನನಗೆ ತಿಳಿದಿದ್ದು ನಾಯಿಗೆ ಕೂಡ ಮನೆಯಲ್ಲಿ ಪ್ರವೇಶವಿದೆ ; ಆದರೆ ಕೆಳ ಜಾತೀಯ ಮನುಷ್ಯರಿಗಿಲ್ಲ.!

ನನಗೆ ಒಳ ಒಳಗೆ ಭಯ ಶುರುವಾಗಿತ್ತು, ನಾನು ಕೂಡ ಕೆಳ ಜಾತಿಯವನು, ಮಾಂಸ ತಿನ್ನುವ ಕುಲದವನು ಎಂದು ತಿಳಿದರೆ ನನಗೂ ಮನೆಯ ಒಳಗೆ ಪ್ರವೇಶವಿಲ್ಲ! ನಂತರ ನನಗೆ ನಾನೇ ಸಮಾಧಾನಿಸಿಕೊಂಡು, ಚಿಂತಿಸಿದೆ...... ನಾನು ಯಾರಲ್ಲಿಗೆ ಪಾಠ ಕಲಿಯಲು ಬರುತ್ತಿರುವೆ? (ನಿಜ ಹೇಳಬೇಕೆಂದರೆ ಆ ಶಿಕ್ಷಕರು ತುಂಬಾ ಚೆನ್ನಾಗಿಯೆ ಪಾಠ ಮಾಡುತ್ತಿದ್ದರು) ಇವರು ನಿಜವಾಗಿಯೂ ಗುರುಗಳೇ ? ಇವರಲ್ಲಿ ನಾನು ಕಲಿತು ಜೀವನ ರೂಪಿಸಿಕೊಳ್ಳಲು ಸಾಧ್ಯವೆ ? ಹಾಗಾದರೆ ನನ್ನ ಪಾಠಗಳು ಯಾವವು? ನಾನು ಓದುತ್ತಿರುವುದು ಏನನ್ನು ? ಮಾನವೀಯತೆ ಇಲ್ಲದ ಈ ಶಿಕ್ಷಕರು ನನಗೇನು ಹೇಳಿಕೊಟ್ಟಾರು ? ನನ್ನ ಶಿಕ್ಷಕ ಹಾಗೂ ಮಾನವೀಯತೆಯ ಪಾಠ ಹೇಳಿ ಕೂಡದ ನನ್ನ ಶಿಕ್ಷಣದ ಮೇಲೆ ಇಲ್ಲದ ಕೋಪ ಹುಟ್ಟಿತು.

ಹಾಗಾದರೆ ಇದೇ ಕೆಳ ಜಾತಿಯ ಮಕ್ಕಳ ಜೊತೆ ಆಟವಾಡುತ್ತಿದ್ದ ಸೋನು ಮುಂದೆ ಹೇಗಿರುತ್ತಾಳೆ ? ಅವಳ ಮಾನವೀಯತೆ ? ಆ ಮಗುವು ನಮ್ಮ ಶಿಕ್ಷಕರ ಮನೆಯ ವಾತಾವರಣದಲ್ಲಿ ಬೆಳೆಯುತ್ತಿದೆ. ಮುಂದೊಂದು ದಿನ ಅವಳ ಮನೆಯಲ್ಲಿ ಕೆಳ ಜಾತಿಯವರಿಗೆ ಪ್ರವೇಶ ಇಲ್ಲ ಎಂದಾಯಿತು.
 ಇದೆಲ್ಲ ಮಾನವ ಧರ್ಮ, ಮಾನವೀಯತೆ ಎಂದಾದರೆ, ಪ್ರಾಣಿಗಳು ಇಂತಹ ಮಾನವೀಯತೆ ತೋರದಿರಲಿ, ಮಾನವ ಧರ್ಮಕ್ಕಿಂತ ಪ್ರಾಣಿಧರ್ಮವೆ ಮೇಲು ಅಲ್ಲವೆ!.

ಉದ್ಯೋಗ, ಸಂಬಳಕ್ಕೇಂದೇ  ಇರುವ ಇಂತಹ ಡಿಪ್ಲೋಮ, ಇಂಜನಿಯರಿಂಗ್, ಪದವಿಗಳಿಗಿಂತ ಪ್ರಾಣಿಗಳಿಂದ ಸಿಗುವ ಪಾಠ ಎಷ್ಟು ಉತ್ತಮವಲ್ಲವೆ, ಇಂತಹ ವೃತ್ತಿಪರ ಶಿಕ್ಷಣದ ಜೊತೆಗೆ ಜಾತ್ಯಾತೀತತೆ, ಸೌಹಾರ್ದತೆ, ಪ್ರೀತಿಯನ್ನು ಕಲಿಸುವ ಪ್ರಾಣಿಯತೆಯ! (ಮಾನವೀಯತೆಯ ಮೌಲ್ಯಗಳು) ಪಠ್ಯವು ಸೇರಿಸಬೇಕೆಂದು ಅನ್ನಿಸುತ್ತಿದೆ.

ಮನುಷ್ಯರನ್ನು ಮನುಷ್ಯರಂತೆ ಕಾಣೋಣ !   
                       

                          

Thursday, November 22, 2012

ಪತ್ರಕರ್ತ `ಸಾಕ್ಷಿ'ಯಾಗಬೇಕೆ, `ರಕ್ಷಕ'ನಾಗಬೇಕೆ?

                                   - ದಿನೇಶ ಮೀನಮಟ್ಟು 
ಆತ್ಮಹತ್ಯೆ ಮಾಡಿಕೊಳ್ಳುವಂತಹ ಅಪರಾಧವನ್ನು ಅವನೇನು ಮಾಡಿರಲಿಲ್ಲ. ವೃತ್ತಿಯಲ್ಲಿ ಆತ ಒಬ್ಬ ಪತ್ರಿಕಾ ಛಾಯಾಗ್ರಾಹಕನಾಗಿದ್ದ. ಜಗತ್ತಿನ ಅತಿದೊಡ್ಡ ಪತ್ರಿಕೆಗಳು ಆತನ ಪೋಟೋಗಳನ್ನು ಪ್ರಕಟಿಸಲು ತುದಿಗಾಲಲ್ಲಿ ನಿಂತಿದ್ದವು. ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಒಲಿದು ಬಂದಿತ್ತು.

ಎಲ್ಲಕ್ಕಿಂತಲೂ ಮುಖ್ಯವಾಗಿ ಆತನ ವಯಸ್ಸು ಕೇವಲ ಮೂವತ್ತಮೂರು ಆಗಿತ್ತು. ಆ ವಯಸ್ಸಿಗೆ ಸಿಕ್ಕ ಯಶಸ್ಸು, ಮನ್ನಣೆಯನ್ನು ಗಮನಿಸಿದರೆ ವೃತ್ತಿಯಲ್ಲಿ ಆತನ ಭವಿಷ್ಯ ಉಜ್ವಲವಾಗಿತ್ತು ಎನ್ನುವುದಕ್ಕೆ ಅನುಮಾನವೇ ಇರಲಿಲ್ಲ. ಹೀಗಿದ್ದರೂ ಬದುಕುವ ಆಸೆಯನ್ನೇ ಕಳೆದುಕೊಂಡ ಆತ ಆತ್ಮಹತ್ಯೆ ಮಾಡಿಕೊಂಡ. ಆತನ ಹೆಸರು ಕೆವಿನ್ ಕಾರ್ಟರ್.

ಇಷ್ಟು ಹೇಳಿದರೆ ಬಹಳಷ್ಟು ಮಂದಿಗೆ ಗುರುತು ಹತ್ತಲಾರದು. ಆತ ಜಗತ್ತಿಗೆ ಪರಿಚಯವಾಗಿದ್ದೇ ಒಂದು ಫೋಟೊದ ಮೂಲಕ. ದಕ್ಷಿಣ ಆಫ್ರಿಕಾದವನಾಗಿದ್ದ ಕಾರ್ಟರ್ ಬರಗಾಲ ಮತ್ತು ಬಂಡುಕೋರರ ಹಿಂಸಾಚಾರದಿಂದ ನಲುಗಿಹೋಗಿದ್ದ ಸೂಡಾನ್‌ಗೆ ಹೋಗಿದ್ದಾಗ ಅಲ್ಲೊಂದು ಹೃದಯವಿದ್ರಾವಕ ದೃಶ್ಯವನ್ನು ಕಾಣುತ್ತಾನೆ. ತಕ್ಷಣ ಆತನೊಳಗಿದ್ದ ಕಸಬುದಾರ ಛಾಯಾಗ್ರಾಹಕ ಜಾಗೃತನಾಗುತ್ತಾನೆ.

ಹಸಿವಿನಿಂದಾಗಿ ಮೂಳೆಚಕ್ಕಳವಾಗಿ ಹೋಗಿದ್ದ ಮಗುವೊಂದು ಸಂತ್ರಸ್ತರ ಶಿಬಿರದಲ್ಲಿರುವ ಗಂಜಿ ಕೇಂದ್ರದ ಕಡೆ ತೆವಳುತ್ತಾ ಹೋಗುತ್ತಿರುವುದು ಮತ್ತು ಅದರ ಹಿಂದೆಯೇ ಒಂದು ರಣಹದ್ದು ಆ ಮಗುವಿನ ಮೇಲೆ ಎರಗಿಬೀಳಲು ಕಾಯುತ್ತಿರುವ ದೃಶ್ಯ ಅದು.

ಸದ್ದು ಮಾಡಿದರೆ ಹದ್ದು ಹಾರಿಹೋಗುತ್ತೇನೋ ಎಂಬ ಭಯದಿಂದ ಕಾರ್ಟರ್ ಕೂಡಾ ತೆವಳುತ್ತಾ ಸಾಧ್ಯ ಇರುವಷ್ಟು  ಹತ್ತಿರ ಹೋಗಿ ಫೋಟೊ ತೆಗೆಯುತ್ತಾನೆ. ಅದಕ್ಕಿಂತ ಮೊದಲು ಹದ್ದು ರೆಕ್ಕೆ ಬಿಚ್ಚಬಹುದೇನೋ ಎಂಬ ನಿರೀಕ್ಷೆಯಿಂದ ಆತ 20 ನಿಮಿಷ ಕಾದಿದ್ದನಂತೆ.

ಆ ಫೋಟೊ ಮೊದಲು `ದಿ ನೂಯಾರ್ಕ್ ಟೈಮ್ಸ` ಮತ್ತು `ದಿ ಮೇಲ್ ಆ್ಯಂಡ್ ಗಾರ್ಡಿಯನ್` ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಅದರ ನಂತರ  ಹಲವಾರು ಪತ್ರಿಕೆಗಳು ಅದನ್ನು ಮರುಮುದ್ರಿಸಿದ್ದವು. ಜಗತ್ತಿನಾದ್ಯಂತ ಓದುಗರು ಅದಕ್ಕೆ ಪ್ರತಿಕ್ರಿಯಿಸಿದ್ದರು.  ಬರಗಾಲ ಮತ್ತು ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿದ್ದ ಸೂಡಾನ್ ಸರ್ಕಾರಕ್ಕೆ ವಿಶ್ವದ ಎಲ್ಲ ಕಡೆಗಳಿಂದಲೂ ನೆರವು ಹರಿದುಬಂದಿತ್ತು.

ಆದರೆ ಬಹಳಷ್ಟು ಓದುಗರು ನೋವು, ದುಃಖ, ಆಕ್ರೋಶಗಳಿಂದ ಪ್ರತಿಕ್ರಿಯಿಸಿದ್ದರು. ಕೆಲವರು ಛಾಯಾಗ್ರಾಹಕನ ಅಸಂವೇದನಾಶೀಲತೆಯನ್ನು ಟೀಕಿಸಿದ್ದರು. `..ಒಬ್ಬ ಛಾಯಾಗ್ರಾಹಕ ಕೇವಲ ಒಂದು ಫೋಟೊ ಸಂಪಾದನೆಯನ್ನಷ್ಟೇ ನೋಡದೆ, ಮೊದಲು ಹದ್ದನ್ನು ಅಲ್ಲಿಂದ ಓಡಿಸಿ ಮಗುವನ್ನು ರಕ್ಷಿಸಬೇಕಿತ್ತು. ವೃತ್ತಿ ಏನೇ ಇರಲಿ ಆತ ಮೊದಲು ಮನುಷ್ಯನಾಗಬೇಕು..` ಎಂದೆಲ್ಲ ಜನ ಪ್ರತಿಕ್ರಿಯಿಸಿದ್ದರು.

ಕೆಲವು ಪತ್ರಿಕೆಗಳು ಕಾರ್ಟರ್ ಕೂಡಾ ಒಬ್ಬ ರಣಹದ್ದು ಎಂದು ಬಣ್ಣಿಸಿ `ಎರಡು ಹದ್ದುಗಳ ನಡುವೆ ಮಗು ಇತ್ತು` ಎಂದು ಬರೆದಿದ್ದವು. ಕೊನೆಗೆ `ನೂಯಾರ್ಕ್ ಟೈಮ್ಸ`ನ ಸಂಪಾದಕರು ವಿವರಣೆ ಕೊಡಬೇಕಾಯಿತು.

ಸತ್ಯಸಂಗತಿ ಏನೆಂದರೆ ಫೋಟೊ ತೆಗೆದ ಕೂಡಲೇ ಕಾರ್ಟರ್ ಹದ್ದನ್ನು ಅಲ್ಲಿಂದ ಓಡಿಸಿ ಆ ಹೆಣ್ಣುಮಗುವನ್ನು ತಕ್ಷಣದ ಅಪಾಯದಿಂದ ಪಾರು ಮಾಡಿದ್ದ. ಅದರ ನಂತರ ಮಗುವಿನ ಗತಿಯೇನಾಯಿತು ಎನ್ನುವುದು ಆತನಿಗೂ ತಿಳಿದಿರಲಿಲ್ಲ. ಬರಗಾಲಪೀಡಿತ ಸೂಡಾನ್‌ನಲ್ಲಿ ಮುಕ್ತಪತ್ರಿಕಾ ಸ್ವಾತಂತ್ರ್ಯ ಇರಲಿಲ್ಲ.

ಅಲ್ಲಿದ್ದ ಬರಪೀಡಿತ ಮನುಷ್ಯರ ಫೋಟೊ ತೆಗೆಯುವುದು ಅಲ್ಲಿನ ಪ್ರಭುತ್ವಕ್ಕೆ ಇಷ್ಟದ ಕೆಲಸವೂ ಆಗಿರಲಿಲ್ಲ. ಬರಪೀಡಿತ ವ್ಯಕ್ತಿಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸಾಧ್ಯತೆ ಇರುವುದರಿಂದ ಅವರನ್ನು ಮುಟ್ಟುವುದಕ್ಕೆ ನಿರ್ಬಂಧ ಕೂಡಾ ಇತ್ತು. ಒಂದು ಫೋಟೊವನ್ನಷ್ಟೇ ನೋಡಿ ಕಾರ್ಟರ್ ಮನುಷ್ಯನೇ ಅಲ್ಲ ಎಂದು ತೀರ್ಮಾನಿಸಿದ ಅಮಾಯಕ ಜನರಿಗೆ ಈ ಎಲ್ಲ ವಿವರಗಳು ಗೊತ್ತಿರುವ ಸಾಧ್ಯತೆಗಳು ಕಡಿಮೆ. ಇದು ಎಲ್ಲ  ಕಾಲದ ಸತ್ಯ.

`ಆ ಬಾಲಕಿಯ ಫೋಟೊ ತೆಗೆದ ನಂತರ ಕಾರ್ಟರ್ ಮನಸ್ಸು ಕಲಕಿಹೋಗಿತ್ತು. ಆತ ಸಮೀಪದ ಮರವೊಂದರ ನೆರಳಲ್ಲಿ ಕೂತು ಸಿಗರೇಟ್ ಸೇದುತ್ತಾ ದೇವರ ಹತ್ತಿರ ಮಾತನಾಡಿದ್ದ. ಅವನು ಎಷ್ಟೊಂದು ದುಃಖಿತನಾಗಿದ್ದನೆಂದರೆ `ನನಗೆ ನನ್ನ ಮಗಳನ್ನು ಆಲಿಂಗಿಸಬೇಕೆನಿಸುತ್ತದೆ` ಎಂದು ಬಡಬಡಿಸುತ್ತಿದ್ದ` ಎಂದು ಆ ಸಮಯದಲ್ಲಿ ಕಾರ್ಟರ್ ಜತೆಯಲ್ಲಿದ್ದ ಸ್ನೇಹಿತ ಸಿಲ್ವಾ ನಂತರದ ದಿನಗಳಲ್ಲಿ ಬರೆದಿದ್ದ.

ಈ ವಿವಾದಗಳ ನಂತರವೂ ಆ ಚಿತ್ರಕ್ಕಾಗಿ ಕೆವಿನ್ ಕಾರ್ಟರ್  ಪ್ರತಿಷ್ಠಿತ `ಪುಲಿಟ್ಜರ್` ಪ್ರಶಸ್ತಿ ಪಡೆಯುತ್ತಾನೆ. ರಾಯಿಟರ್ ಸುದ್ದಿ ಸಂಸ್ಥೆಯಲ್ಲಿ ಆಕರ್ಷಕ ಸಂಬಳದ ಉದ್ಯೋಗ ಪಡೆಯುತ್ತಾನೆ. ಆದರೆ ಆತ ಎಂದೂ ಸಂತೋಷವಾಗಿರಲಿಲ್ಲ.

ಕೆವಿನ್ ಕಾರ್ಟರ್‌ನ ಬದುಕನ್ನು ಸಾವು ಕೊನೆಗೊಳಿಸಿದರೂ, ಆ ಸಾವಿನಿಂದ ಹುಟ್ಟಿಕೊಂಡ ಅನೇಕ ಪ್ರಶ್ನೆಗಳು ಇಂದು ಕೂಡಾ ಮಾಧ್ಯಮಕ್ಷೇತ್ರದ ಮುಂದೆ ಇವೆ. `ಒಬ್ಬ ಪತ್ರಕರ್ತ ಸಾಕ್ಷಿಯಾಗಬೇಕೇ, ಇಲ್ಲವೇ ರಕ್ಷಕನಾಗಬೇಕೇ?` ಎನ್ನುವುದು ಮೊದಲ ಪ್ರಶ್ನೆ. 

ಮಂಗಳೂರಿನ `ಸ್ಟೇಹೋಂ` ಮೇಲೆ ದಾಳಿ ನಡೆಸಿ ಅಲ್ಲಿದ್ದ ಯುವಕ - ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದ ದುಷ್ಕರ್ಮಿಗಳ ಕೃತ್ಯವನ್ನು ವರದಿ ಮಾಡಿದ್ದ ಸುದ್ದಿವಾಹಿನಿಯ ವರದಿಗಾರ ನವೀನ್ ಸೂರಿಂಜೆಯ ಬಂಧನ ಕೆವಿನ್ ಕಾರ್ಟರ್ ಬಿಟ್ಟುಹೋಗಿರುವ ಪ್ರಶ್ನೆಗಳನ್ನು ಮತ್ತೆ ಕೇಳುವಂತೆ ಮಾಡಿದೆ.

ಅಂತರರಾಷ್ಟ್ರೀಯ ಖ್ಯಾತಿಯ ಪತ್ರಿಕಾಛಾಯಾಗ್ರಾಹಕ ರಘು ರಾಯ್ ಇತ್ತೀಚಿನ ಇಂತಹ ವಿವಾದಗಳ ಬಗ್ಗೆ ಪ್ರತಿಕ್ರಿಯಿಸುತ್ತಾ `ಶೂಟ್ ಮಾಡಿ ಚಿತ್ರ ಪಡೆಯುವುದು ಅದರ ಮೂಲಕ ಘಟನೆಗೆ ಸಾಕ್ಷ್ಯ ಒದಗಿಸುವುದು ಅಷ್ಟೇ ಒಬ್ಬ ಕ್ಯಾಮೆರಾಮೆನ್ ಕೆಲಸ` ಎಂದಿದ್ದರು. ಎಲ್ಲರೂ ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ.

ಇದಕ್ಕೆ ರೋಚಕತೆಯ ಬೆನ್ನುಹತ್ತಿ ದಾರಿ ತಪ್ಪುತ್ತಿರುವ ಕೆಲವು ಸುದ್ದಿವಾಹಿನಿಗಳು ಮುಖ್ಯ ಕಾರಣ. `ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಇಂತಹ ಮಾಧ್ಯಮಗಳಿಗೆ ಮೂಗುದಾರ ಹಾಕಬೇಕು` ಎಂದು ಜನ ಬಹಿರಂಗವಾಗಿಯೇ ಮಾತನಾಡತೊಡಗಿದ್ದಾರೆ. ವೃತ್ತಿನಿಷ್ಠ ಮಾಧ್ಯಮಗಳನ್ನು ಎಂದೂ ಬಯಸದ ಪ್ರಭುತ್ವ, ಹಾದಿ ತಪ್ಪಿರುವ ಕೆಲವು ಸುದ್ದಿವಾಹಿನಿಗಳನ್ನು ಉಲ್ಲೇಖಿಸಿ ಒಟ್ಟು ಪತ್ರಿಕಾ ಸ್ವಾತಂತ್ರ್ಯವನ್ನೇ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ.

ಅದು  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದಿಂದ ಕರ್ನಾಟಕದ ಬಿಜೆಪಿ ಸರ್ಕಾರದವರೆಗೆ ಎಲ್ಲೆಡೆ ವ್ಯವಸ್ಥಿತವಾಗಿ ಪ್ರಾರಂಭವಾಗಿದೆ. ಆದುದರಿಂದ `ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ` ಮತ್ತು `ಪತ್ರಿಕಾ ಸ್ವಾತಂತ್ರ್ಯದ ಹರಣ`ವನ್ನು ಪ್ರತ್ಯೇಕವಾಗಿ ಇಟ್ಟುಕೊಂಡು ಚರ್ಚೆ ನಡೆಸಬೇಕಾಗಿದೆ. ಇವೆರಡನ್ನೂ ಸಾಮಾನ್ಯೀಕರಿಸುವುದರಿಂದ ಅಪಾಯ ಪತ್ರಕರ್ತರಿಗೆ ಮಾತ್ರ ಅಲ್ಲ, ಪ್ರಜಾಪ್ರಭುತ್ವಕ್ಕೂ ಇದೆ.

ಪತ್ರಕರ್ತರು, ಪತ್ರಿಕಾಛಾಯಾಗ್ರಾಹಕರು ಮತ್ತು ಕ್ಯಾಮೆರಾಮೆನ್‌ಗಳು `ಸಾಕ್ಷಿಗಳಾಗಬೇಕೆ, ರಕ್ಷಕರಾಗಬೇಕೆ?` ಎನ್ನುವುದು ಇತ್ತೀಚಿನವರೆಗೆ ಕೇವಲ ನೈತಿಕ ಪ್ರಶ್ನೆಯಾಗಿತ್ತು. ಆದುದರಿಂದ ರಕ್ಷಕರಾಗದೆ ಸಾಕ್ಷಿಗಳಾಗಲಷ್ಟೇ ಹೊರಟವರನ್ನು ಪೊಲೀಸರು ಬಂಧಿಸುತ್ತಿರಲಿಲ್ಲ.

ಈಗಲೂ ಇದನ್ನು ನೈತಿಕ ಪ್ರಶ್ನೆಯಾಗಿಯೇ ಇಟ್ಟುಕೊಂಡು ಚರ್ಚೆ ನಡೆಯಲಿ, ನಡೆಯಲೇಬೇಕು. ಆದರೆ ಪೊಲೀಸರು ಈಗ ಇದನ್ನು ಕಾನೂನಿನ ಪ್ರಶ್ನೆಯನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. `ಪತ್ರಕರ್ತರಿಗೆ `ಸಾಕ್ಷಿದಾರನ ಕರ್ತವ್ಯ`ವಷ್ಟೇ ಮುಖ್ಯ ಅಲ್ಲ, ಆತನಿಗೆ `ರಕ್ಷಕನ ಜವಾಬ್ದಾರಿ`ಯೂ ಇರಬೇಕು, ಪತ್ರಕರ್ತನೊಬ್ಬ ರಕ್ಷಕನಾಗದೆ ಕೇವಲ ಸಾಕ್ಷಿಯಾದರೆ ಆತ ಅಪರಾಧಿ` ಎಂದು ಪೊಲೀಸರು ಹೇಳುತ್ತಿದ್ದಾರೆ. 

ತನ್ನ ವರದಿ ಇಲ್ಲವೇ ಚಿತ್ರವನ್ನು ಸಾಕ್ಷಿಯಾಗಿ ಒದಗಿಸುವ ಮೂಲಕವೇ ಪತ್ರಕರ್ತ ರಕ್ಷಕನಾಗುತ್ತಾನೆ ಎಂಬುದನ್ನು ಪೊಲೀಸರು ಮರೆತಿದ್ದಾರೆ. ನವೀನ್ ಮತ್ತು ಗೆಳೆಯರು `ಹೋಂಸ್ಟೇ` ದಾಳಿಯನ್ನು ಮಾಧ್ಯಮಗಳ ಮೂಲಕ ಬಯಲುಗೊಳಿಸದೆ ಇದ್ದಿದ್ದರೆ ಅಲ್ಲಿನ ಕೋಮುವಾದಿಗಳ ಅಟ್ಟಹಾಸ ಮತ್ತು ಪೊಲೀಸರ ನಿಷ್ಕ್ರಿಯತೆ ಖಂಡಿತ ಬಯಲಾಗುತ್ತಿರಲಿಲ್ಲ. ಈ ದುಷ್ಕೃತ್ಯವನ್ನು ಸಾಕ್ಷಿಸಮೇತ ಬಯಲುಗೊಳಿಸುವ ಮೂಲಕ ನವೀನ್ ಮತ್ತು ಗೆಳೆಯರು ಮುಂದೆ ಇನ್ನಷ್ಟು ಯುವಕ-ಯುವತಿಯರು ಈ ರೀತಿಯ ದಾಳಿಗೊಳಗಾಗದಂತೆ ರಕ್ಷಿಸಿದ್ದಾರೆ.

`ಒಬ್ಬ ವೃತ್ತಿನಿಷ್ಠ, ಸಂವೇದನಾಶೀಲ ಮತ್ತು ಪ್ರಾಮಾಣಿಕನಾದ ಪತ್ರಕರ್ತ ಇಲ್ಲವೇ ಪತ್ರಿಕಾಛಾಯಾಗ್ರಾಹಕ ಯಾವ ದೇಶ ಇಲ್ಲವೇ ಕಾಲದಲ್ಲಿ  ಸಂತೋಷ-ನೆಮ್ಮದಿಯಿಂದ ಬದುಕಲು ಸಾಧ್ಯವೇ?` ಎನ್ನುವ ಎರಡನೆ ಪ್ರಶ್ನೆಯನ್ನು ಕೂಡಾ ಕೆವಿನ್ ಕಾರ್ಟರ್ ಬಿಟ್ಟುಹೋಗಿದ್ದಾನೆ. ಆತನ ಆತ್ಮಹತ್ಯೆಗೆ ಸೂಡಾನ್ ಬಾಲಕಿಯ ಫೋಟೊವೊಂದೇ ಕಾರಣ ಅಲ್ಲ.

ವರ್ಣದ್ವೇಷ ಅದರ ಉತ್ತುಂಗದಲ್ಲಿರುವ ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ವರ್ಗದ ಬಿಳಿಯರ ಕುಟುಂಬದಲ್ಲಿ ಹುಟ್ಟಿದ್ದ ಕಾರ್ಟರ್ ಬಾಲ್ಯದಿಂದಲೇ ಕಪ್ಪುಜನಾಂಗದವರ ಮೇಲೆ ಬಿಳಿಯರು ನಡೆಸುತ್ತಿದ್ದ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದವ. ಅವಕಾಶ ಸಿಕ್ಕಿದಾಗಲೆಲ್ಲ ಅದರ ವಿರುದ್ಧ ಪ್ರತಿಭಟನೆ ನಡೆಸಿದವ. `ದಿ ಬ್ಯಾಂಗ್ ಬ್ಯಾಂಗ್ ಕ್ಲಬ್` ಎಂದು ಕರೆಯಲಾಗುತ್ತಿದ್ದ ನಾಲ್ಕು ಬಿಳಿಯ ಪತ್ರಿಕಾಛಾಯಾಗ್ರಾಹಕರ ಸಂಘಟನೆಯಲ್ಲಿ ಕಾರ್ಟರ್ ಒಬ್ಬನಾಗಿದ್ದ.

ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ದುಷ್ಕರ್ಮಿಗಳು ಕಪ್ಪುಜನಾಂಗಕ್ಕೆ ಸೇರಿದ ವ್ಯಕ್ತಿಗಳ ಕುತ್ತಿಗೆಗೆ ಟಯರ್‌ಗಳನ್ನು ತೂಗುಹಾಕಿ ಬೆಂಕಿಹಚ್ಚಿ ಸಾಯಿಸುವುದು ಸಾಮಾನ್ಯವಾಗಿತ್ತು. ಇದಕ್ಕೆ `ನೆಕ್ಲೆಸಿಂಗ್` ಎಂದು ಕರೆಯುತ್ತಿದ್ದರು. ಇಂತಹ ಮೊದಲ ಘಟನೆಯ ಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಣೆಗೆ ಕೊಟ್ಟವ ಕಾರ್ಟರ್. ಈ ರೀತಿಯ ಹಲವಾರು ಅಮಾನುಷ ಘಟನೆಗಳ ಚಿತ್ರಗಳನ್ನು ಕಾರ್ಟರ್ ತೆಗೆದಿದ್ದ. ವೃತ್ತಿಜೀವನದಲ್ಲಿ ಎದುರಿಸಿದ ಇಂತಹ ಘಟನೆಗಳಿಂದ ಆತ ನೊಂದುಹೋಗಿದ್ದ.

 ಅಷ್ಟೊತ್ತಿಗೆ ಆತನ ಜೀವದ ಗೆಳೆಯ ಮತ್ತು `ದಿ ಬ್ಯಾಂಗ್‌ಬ್ಯಾಂಗ್ ಕ್ಲಬ್`ನ ಸದಸ್ಯ ಕೆನ್ ಊಸ್ಟರ್‌ಬ್ರೋಕ್ ಫೋಟೊ ತೆಗೆಯುತ್ತಿದ್ದಾಗಲೇ ಪೊಲೀಸರ ಗುಂಡಿಗೆ ಬಲಿಯಾಗುತ್ತಾನೆ. ಸಾವಿನ ಸಮಯದಲ್ಲಿ ಗೆಳೆಯನ ಸಮೀಪವೇ ಕಾರ್ಟರ್ ಇದ್ದ. ಆತನ ಮನೋಕ್ಲೇಶಕ್ಕೆ ಈ ಘಟನೆ ಕೂಡಾ ಕಾರಣ. ನಂತರದ ದಿನಗಳಲ್ಲಿ ಕುಡಿತದ ದಾಸನಾಗಿ ಹೋಗಿದ್ದ, ಮಾದಕ ವ್ಯಸನಿಯೂ ಆಗಿದ್ದ.

ಕೊನೆಕೊನೆಗೆ ತಾನು ತೆಗೆದ ಚಿತ್ರಗಳೆಲ್ಲವೂ ಎದ್ದುಬಂದು ಆತನನ್ನು ಕಾಡತೊಡಗಿ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡುಬಿಟ್ಟಿದ್ದವು.  ಸಾಯುವ ಮೊದಲು ಬರೆದಿಟ್ಟಿದ ಪತ್ರ ಕೂಡಾ ಇದನ್ನೇ ಹೇಳುತ್ತಿದೆ:  `....ಹತ್ಯೆಗಳು... ಹೆಣಗಳು.. ಕೋಪ, ನೋವು... ಹಸಿವು ಮತ್ತು ಗಾಯದಿಂದ ನರಳುತ್ತಿರುವ ಮಕ್ಕಳು... ಹಿಂಸಾವಿನೋದಿ ಹುಚ್ಚು ಪೊಲೀಸರು... -ಈ ಎಲ್ಲ ನೆನಪುಗಳು ನನ್ನನ್ನು ಕಾಡುತ್ತಿವೆ. ನಾನು ನನ್ನ ಗೆಳೆಯ ಕೆನ್‌ನನ್ನು ಭೇಟಿಯಾಗಲು ಹೋಗುತ್ತಿದ್ದೇನೆ, ಆದೃಷ್ಟಶಾಲಿಯಾಗಿದ್ದರೆ ಆತನ ಭೇಟಿಯಾಗಬಹುದು....` ಎಂದು ಕಾರ್ಟರ್ ಆ ಪತ್ರದಲ್ಲಿ ಬರೆದಿದ್ದ.

 ಪತ್ರಕರ್ತರು ಸಂವೇದನಾಶೀಲರಾಗಿರಕೆಂದು ಸಮಾಜ ಬಯಸುತ್ತದೆ, ಸರ್ಕಾರವೂ ಅದನ್ನೇ ಹೇಳುತ್ತಿದೆ. ಆದರೆ ರಾಕ್ಷಸ ರೂಪ ಪಡೆಯುತ್ತಿರುವ ಸರ್ಕಾರ ಮತ್ತು ಸಂವೇದನೆಯನ್ನೇ ಕಳೆದುಕೊಳ್ಳುತ್ತಿರುವ ಸಮಾಜದ ಮಧ್ಯೆ ಪತ್ರಕರ್ತ ಸಂವೇದನಾಶೀಲನಾಗಿ ಉಳಿಯಲು ಹೇಗೆ ಸಾಧ್ಯ? ಬಹಳಷ್ಟು ಸಂದರ್ಭಗಳಲ್ಲಿ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ಹೊರಟ ಪತ್ರಕರ್ತ ಹತಾಶನಾಗುತ್ತಾನೆ, ಸಿನಿಕನಾಗುತ್ತಾನೆ, ದುರ್ಬಲ ಮನಸ್ಸಿನವನಾಗಿದ್ದರೆ ಕೊನೆಗೆ ಕೆವಿನ್ ಕಾರ್ಟರ್‌ನಂತೆ ಆತ್ಮಹತ್ಯೆ ಮಾಡಿಕೊಳ್ಳಬಹುದು.

ಮತ್ತೆ ಮೊದಲಿನ ಪ್ರಶ್ನೆಗೆ ಬರುವುದಾದರೆ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಅಪರಾಧ ಮಾಡಿದ್ದ? ಇದನ್ನೇ ಇನ್ನು ಸ್ವಲ್ಪ ಬದಲಾಯಿಸಿ ಕೇಳುವುದಾದರೆ ನವೀನ್ ಸೂರಿಂಜೆ ಎಂಬ ಪತ್ರಕರ್ತ ಬಂಧನಕ್ಕೊಳಗಾಗುವಂತಹ ಯಾವ ಅಪರಾಧ ಮಾಡಿದ್ದ? ಅಪರಾಧ ಮಾಡದೆ ಇದ್ದಿದ್ದರೆ ಬಂಧಿತ ಪತ್ರಕರ್ತನ ವೃದ್ದ ತಂದೆ-ತಾಯಿಯ ನೋವು ನಮ್ಮದು ಕೂಡಾ ಎಂದು ಸಮಾಜಕ್ಕೆ ಯಾಕೆ ಅನಿಸುವುದಿಲ್ಲ?

ಕೃಪೆ : ಪ್ರಜಾವಾಣಿ

Saturday, September 15, 2012

ಗಾಂಧಿ-ಅಂಬೇಡ್ಕರ್ ಮತ್ತು ಪುಣೆ ಒಪ್ಪಂದ



-ಅನಿಲ ಹೊಸಮನಿ

ಸಾಮಾಜಿಕ ಸಮಾನತೆಯ ಆಂದೋಲನದ ಜೊತೆ ಜೊತೆಗೆ ದೇಶದ ರಾಜಕಾರಣದಲ್ಲಿ ಭಾಗವಹಿಸುವುದರ ಅಗತ್ಯತೆ ಡಾ.ಅಂಬೇಡ್ಕರರಿಗೆ ಮನವರಿಕೆಯಾಗಿತ್ತು. ಅಧಿಕಾರ ಪ್ರಾಪ್ತಿ ಮಾಡಿಕೊಳ್ಳದೆ ಗುರಿ ಸಾಧನೆ ಯಾಗದೆಂಬುದು ಅವರ ಅರಿವಿಗೆ ಬಂದಿತ್ತು. ಮಹಾಡ್ ಸತ್ಯಾಗ್ರಹ, ಮನುಸ್ಮತಿ ದಹನ, ಕಾಳಾರಾಮ ಮಂದಿರ ಪ್ರವೇಶ ಚಳವಳಿಗಳಿಂದ ಅಸ್ಪಶ್ಯರಲ್ಲಿ ಅಭೂತಪೂರ್ವ ಸಂಘಟನೆ ಮತ್ತು ಜಾಗೃತಿ ಮೂಡಿತ್ತು. ಆದರೆ ಇಷ್ಟರಿಂದಲೇ ಅವರಿಗೆ ಸಮಾಧಾನವಿರಲಿಲ್ಲ. ಅದಕ್ಕಾಗಿಯೇ ಅವರು ಅಖಿಲ ಭಾರತ ಬಹಿಷ್ಕೃತ ವರ್ಗಗಳ ಸಮಾವೇಶವನ್ನು ಆಯೋಜಿಸುವ ನಿರ್ಧಾರ ಮಾಡಿದರು. 1930ರ ಅಗಸ್ಟ್ 9 ಮತ್ತು 10ರಂದು ನಾಗಪುರದಲ್ಲಿ ಸಂಘಟಿಸಲಾದ ಪ್ರಥಮ ರಾಷ್ಟ್ರಮಟ್ಟದ ಅಧಿವೇಶನದ ಅಧ್ಯಕ್ಷತೆಯನ್ನು ಡಾ.ಅಂಬೇಡ್ಕರ್ ವಹಿಸಿದ್ದರು.
ವಿದರ್ಭ ಮತ್ತು ದೇಶದ ವಿವಿಧ ಭಾಗಗಳಿಂದ ಬಹುಸಂಖ್ಯೆಯ ಪ್ರತಿನಿಧಿಗಳು ಈ ಅಧಿವೇಶನದಲ್ಲಿ ಭಾಗವಹಿಸಿದ್ದರು. ಅಸ್ಪಶ್ಯರ ರಾಜಕೀಯ ಹಕ್ಕುಗಳನ್ನು ಪಡೆದು ಕೊಳ್ಳುವುದಕ್ಕೋಸ್ಕರ ಈ ಅಧಿವೇಶನದಲ್ಲಿ ಗಂಭೀರ ಚರ್ಚೆ ನಡೆಯಿತು. ಅಧ್ಯಕ್ಷ ಸ್ಥಾನದಿಂದ ಡಾ.ಅಂಬೇಡ್ಕರ್ ಮಾಡಿದ ಭಾಷಣ ಅಲ್ಲಿದ್ದ ಪ್ರತಿಯೊಬ್ಬರ ಮೇಲೂ ಗಾಢ ಪ್ರಭಾವ ಬೀರಿತು. ಅವರು ಹೇಳಿದರು- ನಮಗೆ ರಾಜಕೀಯ ಸ್ವಾತಂತ್ರವೂ ಬೇಕು, ಸಾಮಾಜಿಕ ಸಮಾನತೆ ಕೂಡ ಬೇಕು. ಸ್ವತಂತ್ರ ಭಾರತಕ್ಕೆ ಹೊಸ ರಾಜ್ಯ ಘಟನೆ ರೂಪಿಸು ವಾಗ ಅದರಲ್ಲಿ ನಮ್ಮ ಹಕ್ಕುಗಳು ನಮೂದಾಗಬೇಕು.
ಅಲ್ಪಸಂಖ್ಯಾತ ಮತ್ತು ದುರ್ಬಲರ ನಿರ್ಲಕ್ಷ ಮಾಡುವುದನ್ನು ನಾವು ಸಹಿಸುವುದಿಲ್ಲ. ಜನಸಂಖ್ಯೆಯ ಆಧಾರದ ಮೇಲೆ ನಮಗೆ ಪ್ರತ್ಯೇಕ ಪ್ರತಿನಿಧಿತ್ವ ಬೇಕು. ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಆಸ್ಪದ ನೀಡುವ ಸ್ವತಂತ್ರ ಮತದಾರ ಕ್ಷೇತ್ರಗಳು ಬೇಕು. ಅಂಥ ವ್ಯವಸ್ಥೆ ಹೊಸ ಸಂವಿಧಾನದಲ್ಲಿ ಇರಬೇಕು. ಅನೇಕ ವಿಷಯಗಳಲ್ಲಿ ಬ್ರಿಟಿಷ್ ಸರಕಾರವು ಅಸಹಾಯಕವಾಗಿದೆ ಮತ್ತು ಸವರ್ಣ ಹಿಂದೂ ಗಳು ಕೂಡ ನಮ್ಮನ್ನು ಬೆಂಬಲಿಸುವುದಿಲ್ಲ. ಇಂಥ ಕಠಿಣ ಪರಿಸ್ಥಿತಿಯಲ್ಲಿ ನಾವು ಸ್ವತಂತ್ರ ವಾಗಿ ನಮ್ಮ ಸಂಘಟನಾ ಶಕ್ತಿಯನ್ನು ಹೆಚ್ಚಿಸಬೇಕು. ನಮ್ಮ ಸ್ವತಂತ್ರ ಅಸ್ತಿತ್ವವನ್ನು ಭಾರತಕ್ಕೆ ತೋರಿಸಿಕೊಡಬೇಕು ಮತ್ತು ಇಂಗ್ಲಿಷ್ ಸರಕಾರವೂ ನಮ್ಮ ಸ್ವತಂತ್ರ ಅಸ್ತಿತ್ವವನ್ನು ಮಾನ್ಯ ಮಾಡಬೇಕು.

ಇನ್ನೂ ಒಂದು ಮಹತ್ವದ ವಿಚಾರವನ್ನು ಡಾ.ಅಂಬೇಡ್ಕರ್ ಈ ಅಧಿವೇಶನದಲ್ಲಿ ಮಂಡಿಸಿದರು. ಅದೆಂದರೆ, 1) ಅಸ್ಪಶ್ಯರಿಗಾಗಿ ಮೀಸಲು ಮತಕ್ಷೇತ್ರಗಳು, 2) ಅಸ್ಪಶ್ಯರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ. ಸರ್ವ ಸಾಮಾನ್ಯವಾಗಿ ಮೀಸಲು ಕ್ಷೇತ್ರಗಳಿರಲೆಂಬುದು ಬಹಳಷ್ಟು ಜನರ ಅಭಿಪ್ರಾಯವಾಗಿತ್ತು. ಆದರೆ ಅನೇಕರು ಸಂಯುಕ್ತ ಮತದಾರ ಕ್ಷೇತ್ರಗಳಿರ ಬೇಕು ಎಂಬ ವಿಚಾರ ವ್ಯಕ್ತಪಡಿಸಿದರು. ಆದರೆ ಡಾ.ಅಂಬೇಡ್ಕರ್‌ರು ಆ ವಿಚಾರವನ್ನು ವಿರೋಧಿ ಸಿದರು. ಸಂಯುಕ್ತ ಮತದಾರ ಕ್ಷೇತ್ರಗಳಲ್ಲಿ ಸವರ್ಣ ಹಿಂದೂಗಳು ತಮ್ಮ ಗುಲಾಮ ಅಭ್ಯರ್ಥಿಯನ್ನು ಅಸ್ಪಶ್ಯರ ಮೇಲೆ ಹೇರುವ ರೆಂಬ ಭಯ ಅವರಿಗಿತ್ತು. ಮೀಸಲು ಮತಕ್ಷೇತ್ರ ಗಳು ಡಾ.ಅಂಬೇಡ್ಕರರು ಅತ್ಯಂತ ವಿಚಾರ ಪೂರ್ವಕವಾಗಿ ಮಂಡಿಸಿದ ವಿಷಯವಾಗಿತ್ತು.
ಮುಸಲ್ಮಾನರಿಗಾಗಿ ಪ್ರತ್ಯೇಕ ಮತದಾರ ಕ್ಷೇತ್ರಗಳನ್ನು ಕೊಡುವುದಾದರೆ ಅಸ್ಪಶ್ಯರಿಗೆ ಏಕೆ ಬೇಡ? ಇದು ಅವರ ನೇರ ಪ್ರಶ್ನೆಯಾಗಿತ್ತು. ಕುಡಿಯುವ ನೀರಿನ ಸಮಸ್ಯೆ, ಮಂದಿರ ಪ್ರವೇಶದಂತಹ ಸಾಮಾನ್ಯ ಸವಲತ್ತುಗಳನ್ನು ನೀಡುವುದಕ್ಕೆ ಹಿಂದೂ ಸನಾತನಿಗಳು ಹಿಂಜರಿಯುತ್ತಿರುವಾಗ, ಅಸ್ಪಶ್ಯರ ಹಿತರಕ್ಷಣೆ ಗಾಗಿ ಪ್ರತ್ಯೇಕ ಮತದಾರ ಕ್ಷೇತ್ರಗಳನ್ನೇಕೆ ಕೇಳಬಾರದು? ಸಮಾಜವನ್ನು ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸಬೇಕಾದರೆ, ಅದರ ಪ್ರತಿನಿಧಿಗಳು ಆಡಳಿತದಲ್ಲಿ ಇರುವುದು ಅಗತ್ಯ ವಿದೆ ಮತ್ತು ಅಸ್ಪಶ್ಯರು ತಮ್ಮ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುವಂತಿರಬೇಕು ಎಂಬುದು ಡಾ.ಅಂಬೇಡ್ಕರರ ಅಭಿಪ್ರಾಯ ವಾಗಿತ್ತು. ರಾಜಕೀಯ ಹಕ್ಕುಗಳ ಮಂಡನೆಯ ನಂತರ ಅಧಿವೇಶನ ಮುಕ್ತಾಯಗೊಂಡಿತು.
1930ರ ಸೆಪ್ಟಂಬರ್ ತಿಂಗಳಲ್ಲಿ ಇಂಗ್ಲಿಷ್ ಸರಕಾರವು ದುಂಡು ಮೇಜಿನ ಪರಿಷತ್ತಿಗೆ ಡಾ.ಅಂಬೇಡ್ಕರರನ್ನು ಆಮಂತ್ರಿಸಿತು. ಈ ಮುಖೇನ ಸರಕಾರವು ಡಾ.ಅಂಬೇಡ್ಕರ್ ಭಾರತದ ಅಸ್ಪಶ್ಯರ ಪ್ರತಿನಿಧಿಯೆಂದು ಮನ್ನಿಸಿತ್ತು. ಬ್ಯಾ.ಜಿನ್ನಾ, ಸಪ್ರು, ಜಯಕರ ಮತ್ತಿತರ ಗಣ್ಯರೊಂದಿಗೆ ಡಾ.ಅಂಬೇಡ್ಕರ್ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸುತ್ತಿದ್ದುದು ಮಹತ್ವದ ಸಂಗತಿಯಾ ಗಿತ್ತು. ಭಾರತದ ಹೊಸ ಸಂವಿಧಾನ ರಚಿಸು ವುದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುವ ನಿಟ್ಟಿನಲ್ಲಿ 12, ನವೆಂಬರ್ 1930ರಂದು ಲಂಡನ್‌ನಲ್ಲಿ ದುಂಡು ಮೇಜಿನ ಪರಿಷತ್ತು ನಡೆಯಲಿತ್ತು. ಇಂಗ್ಲೆಂಡಿನ ಅರಸು 5ನೆ ಜಾರ್ಜ್ ಈ ಪರಿಷತ್‌ನ ಉದ್ಘಾಟನೆ ನೆರವೇರಿಸಲಿದ್ದರು.

ನಾಗಪುರ ಅಧಿವೇಶನವು ಡಾ.ಅಂಬೇಡ್ಕರರ ವ್ಯಕ್ತಿತ್ವವನ್ನು ಹೆಚ್ಚಿಸಿತ್ತು. ಅದುವರೆಗೆ ಮಹಾ ರಾಷ್ಟ್ರದ ದಲಿತ ನೇತಾರರಾಗಿದ್ದ ಡಾ. ಅಂಬೇಡ್ಕರ್ ಈಗ ಇಡೀ ಭಾರತದ ದಲಿತರಿಗೆ ನಾಯಕರಾಗಿ ಮಾರ್ಪಟ್ಟರೆಂಬುದರಲ್ಲಿ ಎರಡು ಮಾತಿಲ್ಲ. ರಾಜಕೀಯ ಹಕ್ಕುಗಳು ದೊರೆತ ಮಾತ್ರಕ್ಕೆ ಮಂತ್ರದಂಡ ತಿರುಗಿಸಿದಂತೆ ಬದಲಾವಣೆ ಆಗಲಾರದು ಎಂಬ ಅಭಿಪ್ರಾಯ ಅವರದಾಗಿತ್ತು. ಹಾಗೆಂದೇ ತಮ್ಮ ಅಭಿವೃದ್ಧಿಗೆ ಅಸ್ಪಶ್ಯರೇ ಸ್ವತಃ ಕಂಕಣಬದ್ಧರಾಗಬೇಕೆನ್ನುವುದು ಅವರ ನಂಬುಗೆಯಾಗಿತ್ತು. ಮೊಟ್ಟಮೊದಲಿಗೆ ಎಲ್ಲ ಅಸ್ಪಶ್ಯರು ವಿದ್ಯೆ ಪಡೆಯಬೇಕು, ತಮ್ಮ ಜೀವನಕ್ರಮ ಬದಲಿಸಿಕೊಳ್ಳಬೇಕು ಮತ್ತು ನಿರ್ಭಯರಾಗಬೇಕು. ಭಾರತದ ರಾಜಕಾರಣ ದಲ್ಲಿ ಅಸ್ಪಶ್ಯ ಸಮಾಜವು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಡಾ.ಅಂಬೇಡ್ಕರರು ತಮ್ಮ ವಿಚಾರಗಳನ್ನು ಮಂಡಿಸಿದರು. ಅವರ ಈ ವಿಚಾರ ಸರಣಿ ಜನಸಮುದಾಯದ ಮೇಲೆ ಗಾಢ ಪರಿಣಾಮ ಬೀರಿತು. ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಸ್ವಾತಂತ್ರ ಚಳವಳಿ ವಿಸ್ತೃತವಾಗತೊಡಗಿತ್ತು. ಅಸ್ಪಶ್ಯ ಸಮಾಜದ ಆಸೆ-ಆಕಾಂಕ್ಷೆಗಳ ಕುರಿತ ಡಾ.ಅಂಬೇಡ್ಕರ್ ಬೇಡಿಕೆಗಳನ್ನು ಒಪ್ಪಿಕೊಂಡು, ಈ ಸಮುದಾಯಗಳನ್ನೂ ರಾಷ್ಟ್ರೀಯ ಮುಕ್ತಿ ಆಂದೋಲನದಲ್ಲಿ ಭಾಗಿಯಾಗುವಂತೆ ಮಾಡುವ ವಿಚಾರಗಳೂ ಕೇಳಿಬಂದವು. ಆದರೆ ಸ್ವಾತಂತ್ರಾನಂತರ ಕಾರ್ಮಿಕರ, ರೈತರ, ಅಸ್ಪಶ್ಯರ ಸ್ಥಾನವೇನು? ಎಂಬ ಪ್ರಶ್ನೆಗೆ ಮಹಾತ್ಮಾ ಗಾಂಧಿ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಲಿಲ್ಲ. ಸ್ವರಾಜ್ಯ ಪ್ರಾಪ್ತಿಯ ನಂತರ ಅಸ್ಪಶ್ಯರ ಸಮಸ್ಯೆಯ ಬಗ್ಗೆ ಯೋಚಿಸುವ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ತೆಗೆದುಕೊಂಡರು. ಇದಕ್ಕೆ ಕಾಂಗ್ರೆಸ್‌ನ ನೇತೃತ್ವ ಉಚ್ಚವರ್ಣೀಯರ ಮತ್ತು ಉಚ್ಚ ವರ್ಗಗಳ ಕೈಯಲ್ಲಿತ್ತೆಂಬುದೇ ಕಾರಣವಲ್ಲದೆ ಬೇರೇನಲ್ಲ.
4ನೆ ಅಕ್ಟೋಬರ್ 1930ರಂದು ಡಾ.ಅಂಬೇಡ್ಕರ್‌ರು ಮುಂಬೈ ಬಂದರಿನಿಂದ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ವಿದೇಶ ಪ್ರವಾಸ ಅವರಿಗೆ ಹೊಸದೇನೂ ಆಗಿರಲಿಲ್ಲ. ಅಮೇರಿಕ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಅವರು ಅನೇಕ ವರ್ಷಗಳವರೆಗೆ ಇದ್ದು, ತಮ್ಮ ಉನ್ನತ ಶಿಕ್ಷಣ ಪೂರೈಸಿದ್ದರು. ಹೆಸರಾಂತ ಪ್ರಾಧ್ಯಾಪಕರ ಮಾರ್ಗ ದರ್ಶನದ ಲಾಭವನ್ನು ಅವರು ಪಡೆದಿದ್ದರು. ಹೆಸರಾಂತ ವಿಶ್ವ ವಿದ್ಯಾಲಯದ ಪದವಿಗಳನ್ನು ಅವರು ತಮ್ಮ ಹೆಸರಿನ ಮುಂದೆ ಜೋಡಿಸಿಕೊಂಡಿದ್ದರು. ನಿಧಾನವಾಗಿ ಭಾರತದ ನಾಯಕರು ಲಂಡನ್ ತಲುಪತೊಡಗಿದ್ದರು.

ಮದ್ರಾಸ್‌ನ ರಾವ್ ಬಹುದ್ದೂರ್ ಕೂಡ ಅಂಬೇಡ್ಕರ್ ಜೊತೆಗಿದ್ದರು. ಮುಂಚೆಯೇ ನಿರ್ಧರಿಸಿದಂತೆ ನವೆಂಬರ್ 12, 1930ರಂದು ಇಂಗ್ಲೆಂಡ್ ದೊರೆ ದುಂಡು ಮೇಜು ಪರಿಷತ್ತನ್ನು ಉದ್ಘಾಟಿಸಿದರು. ಈ ದುಂಡು ಮೇಜಿನ ಪರಿಷತ್ತಿನಲ್ಲಿ ಡಾ.ಅಂಬೇಡ್ಕರ್ ಮಾಡಿದ ಭಾಷಣ ಅಭೂತಪೂರ್ವ. ಭಾರತದಲ್ಲಿ 4 ಕೋಟಿ 20 ಲಕ್ಷ ಅಸ್ಪಶ್ಯರಿದ್ದಾರೆ. ಈ ಸಂಖ್ಯೆಯು ಇಂಗ್ಲೆಂಡ್ ಅಥವಾ ಫ್ರಾನ್ಸ್ ಜನಸಂಖ್ಯೆಗಿಂತ ಜಾಸ್ತಿ. ಈ ಪೀಡಿತ ಮತ್ತು ಶೋಷಿತ ಜನರ ಪರವಾಗಿ ನಾನು ಮಾತನಾಡುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು. ಅಸ್ಪಶ್ಯತೆ ಎಂದರೇನೆಂಬುದೇ ಜಗತ್ತಿನ ಅನ್ಯ ದೇಶಗಳಿಗೆ ತಿಳಿಯದು. ಯಾಕೆಂದರೆ ಇಂಥ ಅಮಾನುಷ ಆಚರಣೆ ಜಗತ್ತಿನ ಯಾವ ಭಾಗ ದಲ್ಲೂ ಇಲ್ಲ. ಇಂಗ್ಲೆಂಡ್ ಮತ್ತು ಅಮೇರಿಕ ಗಳಲ್ಲಿ ನಿಗ್ರೋ ಗುಲಾಮರ ಮಾರಾಟ-ಖರೀದಿ ಬಹಳ ಹಿಂದೆ ಆಚರಣೆಯಲ್ಲಿತ್ತು. ನಂತರ ಕಾನೂನು ಮೂಲಕ ಈ ಗುಲಾಮಗಿರಿ ಅಂತ್ಯಕಂಡಿತು. ಅಲ್ಲಿ ಗುಲಾಮಗಿರಿಯಿತ್ತೇ ವಿನಃ ಅಸ್ಪಶ್ಯತೆಯಿರಲಿಲ್ಲ.
ಗುಲಾಮರ ಸ್ಪರ್ಶ ಮಾಡುವುದಕ್ಕೆ ಯಾವುದೇ ಅಭ್ಯಂತರವಿರಲಿಲ್ಲ. ಆದರೆ ಭಾರತದ ಪರಿಸ್ಥಿತಿ ಬೇರೆಯೇ ಇದೆ ಎಂಬುದರ ಪರಿಚಯ ಮಾಡಿಕೊಟ್ಟರು. ಭಾರತೀಯ ಸೈನ್ಯದಲ್ಲಿ ಅಸ್ಪಶ್ಯರಿಗೆ ಪ್ರವೇಶವಿಲ್ಲ. ಪೊಲೀಸ್ ಖಾತೆಯಲ್ಲಿ ಮತ್ತು ಸರಕಾರಿ ನೌಕರಿಗಳು ಅವರಿಗೆ ಸಿಗುತ್ತಿಲ್ಲ. ಮಾನವೀಯ ಮರ್ಯಾದೆ ಪಡೆಯುವುದಕ್ಕೋಸ್ಕರ ಭಾರತದ ಐದನೇ ಒಂದು ಭಾಗದಷ್ಟು ಜನರು ಹೋರಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ದೇವಾಲಯಗಳಲ್ಲಿ ಅವರಿಗೆ ಪ್ರವೇಶ ನಿಷೇಧಿಸಲಾಗಿದೆ. ಗಾಂಧಿ ಮತ್ತು ಅಂಬೇಡ್ಕರ್‌ರವರ ಈ ವೈಚಾರಿಕ ಸಂಘರ್ಷವು ವಿಕೋಪಕ್ಕೆ ತಿರುಗಿತು. ಗಾಂಧಿಯಾದರೋ ಈ ಸಂಬಂಧ ತಮ್ಮ ಪ್ರಾಣತ್ಯಾಗ ಮಾಡಲೂ ಸಿದ್ಧರಾಗಿ ದ್ದರು.
ಗಾಂಧೀಜಿ ಪ್ರಾಣ ಉಳಿಸುವಂತೆ ಅಂಬೇಡ್ಕರ್‌ರ ಮೇಲೆ ಒತ್ತಡಗಳು ಬರಲಾರಂಭಿಸಿದವು. ಉಪವಾಸ ಸತ್ಯಾಗ್ರಹ ಒಂದೊಂದೇ ದಿನ ಹೆಚ್ಚುತ್ತಾ ಹೋದಂತೆ ಗಾಂಧೀಜಿ ಆರೋಗ್ಯ ಹದಗೆಡಲಾರಂಭಿಸಿತು. ಇಡೀ ದೇಶವೇ ಚಿಂತೆಯಲ್ಲಿ ಮುಳುಗಿತು. ಕೊನೆಗೆ ಡಾ.ಅಂಬೇಡ್ಕರರು ಗಾಂಧಿಯನ್ನು ಭೇಟಿ ಮಾಡಿದರು. ಪರಸ್ಪರ ಮಾತುಕತೆಯ ನಂತರ ಪ್ರತ್ಯೇಕ ಮತದಾರ ಕ್ಷೇತ್ರಗಳನ್ನು ಬಿಟ್ಟುಕೊಡಲು ಡಾ.ಅಂಬೇಡ್ಕರ್ ಒಪ್ಪಿ ಕೊಂಡರು. ಗಾಂಧೀಜಿ ಉಪವಾಸ ಕೊನೆಗೊಳಿಸಿದರು. ಈ ಒಪ್ಪಂದವೇ ಪುಣೆ ಒಪ್ಪಂದ ಎಂದು ಜನಜನಿತವಾಯಿತು. ಒಬ್ಬ ಅಸ್ಪಶ್ಯ ಗಾಂಧೀಜಿಯ ಪ್ರಾಣ ಉಳಿಸಿದರೆ, ಒಬ್ಬ ಬ್ರಾಹ್ಮಣ ಕೈಯಲ್ಲಿ ಪಿಸ್ತೂಲು ಹಿಡಿದು ಹತ್ಯೆ ಮಾಡಿದನು.

Tuesday, August 14, 2012

ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ

                                ದಿನೇಶ ಅಮೀನಮಟ್ಟು
ಮಳೆ ನಿಂತರೂ ಒಂದಷ್ಟು ಹೊತ್ತು ಮಳೆಹನಿ ನಿಲ್ಲುವುದಿಲ್ಲ. ಅಣ್ಣಾ ತಂಡವನ್ನು ಬರ್ಖಾಸ್ತುಗೊಳಿಸಲಾಗಿದ್ದರೂ ಅದು ಪ್ರಾರಂಭಿಸಿದ್ದ ಚಳವಳಿ ಬಗ್ಗೆ ಚರ್ಚೆ-ವಿಶ್ಲೇಷಣೆಗಳು ನಿಂತಿಲ್ಲ, ಇದು ಇನ್ನಷ್ಟು ಕಾಲ ಮುಂದುವರಿಯಲಿದೆ.

ಮಿಂಚಿಮರೆಯಾಗಿ ಹೋದ ಈ ಚಳವಳಿಯ ಗರ್ಭಪಾತಕ್ಕೆ ಕಾರಣರಾದ ಖಳನಾಯಕರು ಯಾರು ಎನ್ನುವುದನ್ನು ಗುರುತಿಸುವ ಕೆಲಸ ಈಗ ಪ್ರಾರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಎಲ್ಲರೂ ಅಣ್ಣಾತಂಡದ ಪ್ರಮುಖ ಸದಸ್ಯರಾದ ಅರವಿಂದ್ ಕೇಜ್ರಿವಾಲ್, ಕಿರಣ್‌ಬೇಡಿ ಮತ್ತು ಪ್ರಶಾಂತ್ ಭೂಷಣ್ ಮೇಲೆ ಎರಗಿಬಿದ್ದಿದ್ದಾರೆ.


`ಸೃಷ್ಟಿ, ಪಾಲನೆ ಮತ್ತು ಲಯ`ದ ಮೂರೂ ಕೆಲಸಗಳನ್ನು ಈ ತ್ರಿಮೂರ್ತಿಗಳೇ ಮಾಡಿದ್ದು ಎಂದು ಅಣ್ಣಾಬೆಂಬಲಿಗರು ಆರೋಪಿಸತೊಡಗಿದ್ದಾರೆ. ಚಳವಳಿ ಹಾದಿ ತಪ್ಪಲು ಕಾರಣವಾದ ಇವರ ಪಾತ್ರ  ಕ್ಷಮಿಸಿ ಬಿಡುವಂತಹದ್ದು ಖಂಡಿತ ಅಲ್ಲ.


ಆದರೆ ಇವರಷ್ಟೇ ಖಳನಾಯಕರೇ? ಹಾಗೆಂದು ತೀರಾ ಸರಳವಾಗಿ ತೀರ್ಮಾನಿಸಿಬಿಟ್ಟರೆ ಈ ಚಳವಳಿಯ ಸೋಲು-ಗೆಲುವುಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಾರದು.

ಈ ತ್ರಿಮೂರ್ತಿಗಳಷ್ಟೇ ಖಳರು ಅಲ್ಲದೆ ಇದ್ದರೆ ಬೇರೆ ಯಾರು ? ಕೆಲವರು ಅಣ್ಣಾಹಜಾರೆಯವರನ್ನೇ ಹೆಸರಿಸುತ್ತಾರೆ. ಸ್ವಲ್ಪ ಮಟ್ಟಿಗೆ ಇದು ನಿಜ ಕೂಡಾ. ಹಜಾರೆ ಅವರು ಸಜ್ಜನ, ಪ್ರಾಮಾಣಿಕ, ನಿಸ್ವಾರ್ಥಿ, ಸರಳಜೀವಿ ಎನ್ನುವುದರ ಬಗ್ಗೆ ಬಹಳ ಮಂದಿಗೆ ಅನುಮಾನ ಇಲ್ಲ.


ಆದರೆ ಈ ಗುಣಗಳಿಂದಷ್ಟೇ ನಾಯಕನಾಗಲು ಸಾಧ್ಯವೇ ಎನ್ನುವುದು ಪ್ರಶ್ನೆ. ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ನಂತರದಲ್ಲಿ ನಡೆದ ಎರಡು ಪ್ರಮುಖ ಚಳವಳಿಗಳನ್ನು ಮುನ್ನಡೆಸಿದ್ದ ಗಾಂಧೀಜಿ ಮತ್ತು ಜಯಪ್ರಕಾಶ್ ನಾರಾಯಣ್ ಕೇವಲ ಸಜ್ಜನರು ಮತ್ತು ಪ್ರಾಮಾಣಿಕರಾಗಿರಲಿಲ್ಲ.


ಅವರು ಬುದ್ದಿವಂತರೂ ಆಗಿದ್ದರು.  ವಿಸ್ತಾರವಾದ ಓದು, ರಾಷ್ಟ್ರ-ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಅರಿವು, ಪ್ರವಾಸ ಮತ್ತು ಜನರ ಜತೆಗಿನ ಒಡನಾಟ ಅವರಿಗೆ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುವ ತೀಕ್ಷ್ಣಗ್ರಹಣಶಕ್ತಿಯನ್ನು ತಂದು ಕೊಟ್ಟಿತ್ತು.  ಒಂದು ಅನ್ನದ ಅಗುಳನ್ನು ಮುಟ್ಟಿಯೇ ಪಾತ್ರೆಯಲ್ಲಿದ್ದ ಅನ್ನ ಬೆಂದಿದೆಯೇ ಇಲ್ಲವೇ ಎನ್ನುವುದನ್ನು ಹೇಳುವಷ್ಟು ಸಮಾಜದ ನಾಡಿಮಿಡಿತವನ್ನ್ನು ಬಲ್ಲವರಾಗಿದ್ದರು.

ಜನಪ್ರಿಯತೆಯಲ್ಲಿ ತೇಲಿಹೋಗದೆ ಅದನ್ನು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಳ್ಳುವ ನಿರ್ವಹಣಾ ಶಕ್ತಿ ಮತ್ತು ಸಂಯಮ ಅವರಲ್ಲಿತ್ತು. ಜಾತಿ,ಧರ್ಮ,ಪ್ರದೇಶಗಳಲ್ಲಿ ಒಳಗಿಂದೊಳಗೆ ಒಡೆದುಹೋಗಿರುವ ದೇಶದಲ್ಲಿ ಒಂದು ಸಾಮೂಹಿಕ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗಲು ಇಂತಹ ಸಾಮರ್ಥ್ಯಬೇಕಾಗುತ್ತದೆ. ಈ ಗುಣಗಳು ಅಣ್ಣಾಹಜಾರೆಯವರಲ್ಲಿ ಇದ್ದಿದ್ದರೆ ಭ್ರಷ್ಟಾಚಾರ ವಿರೋಧಿ ಚಳವಳಿ ನಡುಹಾದಿಯಲ್ಲಿಯೇ ಅಪಘಾತಕ್ಕೆ ಈಡಾಗುತ್ತಿರಲಿಲ್ಲ.

ಅಣ್ಣಾಚಳವಳಿ ಹಾದಿ ತಪ್ಪಲು ಮಾಧ್ಯಮರಂಗ ವಹಿಸಿದ ಖಳನಾಯಕನ ಪಾತ್ರವೇ ಕಾರಣ ಎನ್ನುವವರೂ ಇದ್ದಾರೆ. ಈ ಆರೋಪವನ್ನು ಮಾಡುವ ಅಣ್ಣಾತಂಡದ ಸದಸ್ಯರು ಮತ್ತು  ಬೆಂಬಲಿಗರು  ಕೊನೆದಿನಗಳಲ್ಲಿ ಮಾಧ್ಯಮಗಳ ನಿರ್ಲಕ್ಷ್ಯ ಮತ್ತು ಟೀಕೆಗಳನ್ನು ಉದಹರಿಸುತ್ತಿದ್ದಾರೆ.


ಇದು ಮಾಧ್ಯಮಗಳನ್ನು ಅರ್ಥಮಾಡಿಕೊಳ್ಳಲಾಗದ ಅವರ ಅಜ್ಞಾನವನ್ನಷ್ಟೇ ತೋರಿಸುತ್ತದೆ. ಕೊನೆದಿನಗಳ ನಿರ್ಲಕ್ಷ್ಯಗಿಂತಲೂ  ಅಣ್ಣಾಚಳವಳಿಗೆ ಹೆಚ್ಚು ಹಾನಿ ಉಂಟು ಮಾಡಿದ್ದು ಪ್ರಾರಂಭದ ದಿನಗಳ ಅತಿಪ್ರಚಾರ.


ಕಣ್ಣುಕಟ್ಟಿನ ಪ್ರಚಾರ ವೈಖರಿ ಮೂಲಕ ಉಪವಾಸ ಶಿಬಿರದ ಮುಂದೆ ಸೇರಿದ್ದ ಸಾವಿರ ಜನರನ್ನು  ಲಕ್ಷವಾಗಿ, ಲಕ್ಷ ಜನರನ್ನು ಕೋಟಿಯಾಗಿ ಮಾಧ್ಯಮಗಳು ಬಿಂಬಿಸಿದ್ದನ್ನು ನಿಜವೆಂದೇ ನಂಬಿದ ಅಣ್ಣಾತಂಡದ ಸದಸ್ಯರು ದೇಶದ 120 ಕೋಟಿ ಜನ ತಮ್ಮ ಬೆನ್ನಹಿಂದೆ ಇದ್ದಾರೆ ಎಂದು ಭ್ರಮಿಸಿಬಿಟ್ಟರು.

 
ಮೂರೂಹೊತ್ತು ಟಿವಿ ಪರದೆಗಳಲ್ಲಿ, ಪತ್ರಿಕೆಗಳ ಪುಟಗಳಲ್ಲಿ ಕಾಣಿಸುವ ತಮ್ಮ ಮುಖಗಳನ್ನು ಪ್ರೀತಿಸುತ್ತಾ ಆತ್ಮರತಿಗೆ ಜಾರಿಬಿಟ್ಟರು. ಮಾಧ್ಯಮರಂಗ ವಾಣಿಜ್ಯೀಕರಣಗೊಂಡ ಬದಲಾದ ಪರಿಸ್ಥಿತಿಯಲ್ಲಿ ಮುಖ್ಯವಾಗಿ ಟಿವಿ ಚಾನೆಲ್‌ಗಳು ಹುಟ್ಟು-ಸಾವುಗಳೆರಡನ್ನು ಸಂಭ್ರಮದಿಂದ ಆಚರಿಸುತ್ತದೆ.

ಈ ಭರದಲ್ಲಿ ಸರಿ-ತಪ್ಪು ಇಲ್ಲವೆ ಒಳ್ಳೆಯದು-ಕೆಟ್ಟದನ್ನು ಗುರುತಿಸುವ ನ್ಯಾಯಪ್ರಜ್ಞೆ ಜನಪ್ರಿಯತೆಯ ಪ್ರವಾಹದಲ್ಲಿ ಕೊಚ್ಚಿಕೊಂಡುಹೋಗುತ್ತದೆ. ಮಾಧ್ಯಮಗಳಿಂದ ಪ್ರಚಾರ ಬಯಸುವವರಿಗೆ ಇದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲದೆ ಇದ್ದರೆ ಅಣ್ಣಾತಂಡಕ್ಕಾದ ಗತಿಯೇ ಆಗುತ್ತದೆ.

ಮಾಧ್ಯಮಗಳ ಪ್ರಚಾರದ ಊರುಗೋಲಿನ ಬಲದಿಂದ ಎದ್ದುನಿಂತದ್ದು, ಆ ಊರುಗೋಲನ್ನು ಕಿತ್ತುಕೊಂಡ ಕೂಡಲೇ ಕುಸಿದುಬೀಳುತ್ತದೆ. ಹಾಗೆಯೇ ಆಯಿತು.

ಇವರೆಲ್ಲರ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ ಅಣ್ಣಾಚಳವಳಿಯ ವೈಫಲ್ಯದಲ್ಲಿ ಖಳನಾಯಕರ ಪಾತ್ರವಹಿಸಿದ್ದ ಬಹುಮುಖ್ಯವಾದ ಸಮುದಾಯವನ್ನು ಎಲ್ಲರೂ ಮರೆತುಬಿಟ್ಟಿದ್ದಾರೆ. ಅದು ಚಳವಳಿಗೆ ಸೇರುತ್ತಿದ್ದ ಜನ. ಜಯಪ್ರಕಾಶ್ ನಾರಾಯಣ್ ನೇತೃತ್ವದ `ಸಂಪೂರ್ಣ ಕ್ರಾಂತಿ`ಯ ನಂತರದ ದಿನಗಳಲ್ಲಿ ಒಂದು ಚಳವಳಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಎಂದೂ ಭಾಗವಹಿಸಿರಲಿಲ್ಲ.

`ನಾನೇ ಅಣ್ಣಾ` ಎಂದು ತಲೆಪಟ್ಟಿ ಕಟ್ಟಿಕೊಂಡು, ಎದೆಮೇಲೆ ಬರೆಸಿಕೊಂಡು, ಹಗಲುಹೊತ್ತಿನಲ್ಲಿ ಘೋಷಣೆ ಕೂಗುತ್ತಾ, ರಾತ್ರಿಹೊತ್ತು ಕ್ಯಾಂಡಲ್ ಹಚ್ಚುತ್ತಾ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಕ್ರೀಯಾಶೀಲರಾಗಿ `ಅರಬ್ ವಸಂತ` ಇನ್ನೇನು ಭಾರತದಲ್ಲಿ ಪ್ರಾರಂಭವಾಗಿಯೇ ಬಿಟ್ಟಿತೆನ್ನುವ ಭ್ರಮಾಲೋಕವನ್ನು ಸೃಷ್ಟಿಸುತ್ತಿದ್ದವರು ಚಳವಳಿಯಲ್ಲಿ ಭಾಗವಹಿಸಿದ್ದ ಜನ.

ಅಣ್ಣಾಹಜಾರೆ ಅವರ ಮೊದಲೆರಡು ಉಪವಾಸಗಳ ಕಾಲದಲ್ಲಿ ಸಕ್ರಿಯವಾಗಿದ್ದ ಈ ಜನಸಮೂಹ ನಂತರದ ಎರಡು ಉಪವಾಸಗಳ ಕಾಲಕ್ಕೆ ಆಸಕ್ತಿಯನ್ನು ಕಳೆದುಕೊಂಡುಬಿಟ್ಟಿತು.

ಹಿಂದಿನಷ್ಟು ಜನ ಸೇರುತ್ತಿಲ್ಲ ಎಂದು ಗೊತ್ತಾದ ಕೂಡಲೇ ಆಡಳಿತಾರೂಢ ಪಕ್ಷ ಚಳವಳಿಗಾರರನ್ನು ಕರೆಸಿ ಮಾತನಾಡಲು ಕೂಡಾ ಹೋಗದೆ ಸುಮ್ಮನಾಯಿತು, ಜನ ಕಡಿಮೆ ಸೇರುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಮಾಧ್ಯಮಗಳು ಕೂಡಾ ಹಿಂದೆ ಸರಿದುಬಿಟ್ಟವು. ಅಣ್ಣಾತಂಡ ಯುದ್ಧಮುಗಿಯವ ಮೊದಲೇ ಶಸ್ತ್ರತ್ಯಾಗ ಮಾಡಲು ಮುಖ್ಯ ಕಾರಣ ತಮ್ಮ ಹಿಂದೆ ಲಕ್ಷಲಕ್ಷ ಸಂಖ್ಯೆಯಲ್ಲಿದ್ದೇವೆ ಎಂಬ ನಂಬಿಕೆ ಹುಟ್ಟಿಸಿದ್ದ ಜನ ದೂರವಾಗಿದ್ದು.

ಈ ಜನ ಹೀಗೆ ಯಾಕೆ ವರ್ತಿಸಿದರು ಎನ್ನುವುದನ್ನು ವಿಶ್ಲೇಷಿಸುವ ಮೊದಲು ಇವರು ಯಾರು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ನಡೆಯುವ ಚಳವಳಿಗಳನ್ನು ಒಂದು ನಿರ್ದಿಷ್ಟವಾದ ಆವರಣದೊಳಗೆ ಸೇರಿಸುವುದು ಕಷ್ಟವಾದರೂ ಸ್ಥೂಲವಾಗಿ ಇವುಗಳನ್ನು ರಾಜಕೀಯ ಮತ್ತು ರಾಜಕೀಯೇತರ  ಎಂದು ಗುರುತಿಸಬಹುದು.

ಈ ವ್ಯಾಖ್ಯಾನ ಕೂಡಾ ಚಳವಳಿಗಳ ಸ್ಪಷ್ಟ ಚಿತ್ರವನ್ನು ನೀಡುವುದಿಲ್ಲ. ರಾಜಕೀಯ ಉದ್ದೇಶದ ಚಳವಳಿಗಳ ಬಗ್ಗೆ ಯಾವುದೇ ಗೊಂದಲ ಇಲ್ಲ. ಉದಾಹರಣೆಗೆ ಕಾಂಗ್ರೆಸ್,ಬಿಜೆಪಿ, ಕಮ್ಯುನಿಸ್ಟ್ ಇತ್ಯಾದಿ ಪಕ್ಷಗಳು ನಡೆಸುವ ಚಳವಳಿಗಳು.

ಇಲ್ಲಿ ಎಲ್ಲವೂ ಪಾರದರ್ಶಕ. ಸಮಸ್ಯೆ ರಾಜಕೀಯೇತರ ಚಳವಳಿಗಳದ್ದು. ನಿರ್ದಿಷ್ಟವಾದ ರಾಜಕೀಯ ಸಿದ್ಧಾಂತವನ್ನು ಹೊಂದಿಯೂ ಚುನಾವಣಾ ರಾಜಕೀಯದಿಂದ ದೂರವಾಗಿರುವ ರಾಜಕೀಯೇತರ ಚಳವಳಿಗಳಿವೆ.

ಇದೇ ರೀತಿ  ರಾಜಕೀಯೇತರ ಚಳವಳಿಗಳಾಗಿ ಪ್ರಾರಂಭಗೊಂಡು ಕ್ರಮೇಣ ನೇರ ಚುನಾವಣೆಯಲ್ಲಿ ಪಾಲ್ಗೊಂಡ ಚಳವಳಿಗಳೂ ಇವೆ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕವೂ ಸೇರಿದಂತೆ ದೇಶದ ಬೇರೆಬೇರೆ ಭಾಗಗಳಲ್ಲಿನ ರೈತ ಮತ್ತು ದಲಿತ ಚಳವಳಿಗಳು. ರಾಜಕೀಯ ಚಳವಳಿಗಳಲ್ಲಿ ಭಾಗವಹಿಸಿದವರು ಒಂದು ಪಕ್ಷದ ಸಿದ್ಧಾಂತಕ್ಕೆ ಬದ್ದರಾಗಿರುವವರು.

ರಾಜಕೀಯೇತರ ಚಳವಳಿಗೆ ವಿಶಾಲವಾದ ಹರಹು ಇರುತ್ತದೆ. ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಇಲ್ಲವೆ ಭೂಮಿ ಕಳೆದುಕೊಂಡವರು, ಮನೆ ಕಳೆದುಕೊಂಡವರು,ಅನ್ಯಾಯಕ್ಕೀಡಾದವರು...

ಹೀಗೆ ಬೇರೆಬೇರೆ ಜನವರ್ಗವನ್ನು ನಿರ್ದಿಷ್ಟವಾಗಿ ಗುರಿಯಾಗಿಟ್ಟುಕೊಂಡು ಈ ಚಳವಳಿಗಳು ನಡೆಯುತ್ತಿರುತ್ತವೆ. ಈ ಎರಡೂ ಬಗೆಯ ಚಳವಳಿಗಳಿಗೆ ಸ್ಪಷ್ಟವಾದ ಐಡೆಂಟಿಟಿ ಇರುತ್ತದೆ. ಇದರಿಂದಾಗಿ ಚಳವಳಿಯ ನಾಯಕರಿಗೆ ಕೂಡಾ ತಮ್ಮ ಉದ್ದೇಶ ಮತ್ತು ಸಾಗುವ ದಾರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ.

 ಆದರೆ ಬಹಳ ದೊಡ್ಡ ಕ್ಯಾನ್‌ವಾಸ್ ಇಟ್ಟುಕೊಂಡು ಪ್ರಾರಂಭವಾದ ಅಣ್ಣಾಚಳವಳಿಗೆ ಒಂದು ನಿರ್ದಿಷ್ಟ ಐಡೆಂಟಿಟಿ ಇರಲಿಲ್ಲ. ಇದು ಈ ಚಳವಳಿಯ ಶಕ್ತಿಯೂ ಹೌದು, ದೌರ್ಬಲ್ಯ ಕೂಡಾ. ಯಾವುದೇ ರಾಜಕೀಯ ಪಕ್ಷದ ಜತೆಗೆ ಗುರುತಿಸಿಕೊಳ್ಳದವರು ಮಾತ್ರವಲ್ಲ, ಗುರುತಿಸಿಕೊಂಡವರು ಕೂಡಾ ಎದೆಮೇಲಿದ್ದ ಪಕ್ಷದ ಬ್ಯಾಡ್ಜ್‌ಗಳನ್ನು ಕಿಸೆಯಲ್ಲಿಟ್ಟುಕೊಂಡು ಅಣ್ಣಾಬ್ಯಾಡ್ಜ್ ಧರಿಸಿ ಉಪವಾಸ ಕೂತಿದ್ದರು.

ಭ್ರಷ್ಟಾಚಾರ ಎನ್ನುವುದು ಈ ದೇಶದ ಬಡವನಿಂದ ಹಿಡಿದು ಶ್ರಿಮಂತರವರೆಗೆ, ಅಶಿಕ್ಷಿತರಿಂದ ಹಿಡಿದು ಶಿಕ್ಷಿತರವರೆಗೆ ಎಲ್ಲರನ್ನೂ ಆವರಿಸಿರುವ ಸಮಸ್ಯೆಯಾಗಿರುವ ಕಾರಣ ನಮ್ಮ ಗುರಿ ದೇಶದ 120 ಕೋಟಿ ಜನ ಎಂದು ಅಣ್ಣಾತಂಡ ತಿಳಿದುಕೊಂಡುಬಿಟ್ಟಿತು.

ತಂಡದ ಸದಸ್ಯರು ಎಲ್ಲರನ್ನೂ ಬನ್ನಿಬನ್ನಿ ಎಂದು ಕೈಬೀಸಿ ಕರೆಯಲಾರಂಭಿಸಿದರು. ಹೀಗೆ ಬಂದವರಲ್ಲಿ ಬಹುಸಂಖ್ಯಾತರು ಮಧ್ಯಮವರ್ಗಕ್ಕೆ ಸೇರಿರುವ ನಗರ ಕೇಂದ್ರಿತ, ಉದ್ಯೋಗಸ್ಥ, ಸದಾ ಸುರಕ್ಷತೆಯ ಕಕ್ಷೆಯೊಳಗೆ ಇರಬೇಕೆಂದು ಬಯಸುವ ಮತ್ತು ಯಾವುದೇ ಚಳವಳಿಯಲ್ಲಿ ಭಾಗವವಹಿಸಿ ಕಷ್ಟ-ನಷ್ಟ ಅನುಭವಿಸದವರು.

ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಹುಟ್ಟಿದ ಮತ್ತು ಆರ್ಥಿಕ ಉದಾರೀಕರಣದ ಯುಗದಲ್ಲಿ ಕಣ್ಣುಬಿಟ್ಟ 25-35 ವಯಸ್ಸಿನ ಆಜುಬಾಜಿನ ಈ ಯುವವರ್ಗ  ಲಾಭ-ನಷ್ಟದ ಲೆಕ್ಕಾಚಾರ ಇಟ್ಟುಕೊಂಡೇ ಮುಂದೆ ಹೆಜ್ಜೆ ಇಡುವವರು. `ಸೋಡಾಗ್ಯಾಸ್` ರೀತಿ ಒಮ್ಮೆಲೇ ಚಿಮ್ಮಿದ ಈ `ಯುವಬೆಂಬಲವನ್ನು ಅಣ್ಣಾತಂಡ ನಂಬಿತು. ನಂಬಿಕೆ ಕೈಕೊಟ್ಟಿತು.

 ಈ ಮಧ್ಯಮ ವರ್ಗ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಯಾವುದೇ ದೇಶದಲ್ಲಿ ರಾಜಕೀಯ ಇಲ್ಲವೆ ಸಾಮಾಜಿಕ ಬದಲಾವಣೆಯಲ್ಲಿ ಭಾಗವಹಿಸಿಲ್ಲ. ಇದನ್ನು ಹೇಳಿದಾಗ ಕೆಲವರು ಅರಬ್‌ರಾಷ್ಟ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಉದಾಹರಣೆ ಕೊಡಬಹುದು. ಅಲ್ಲಿನ ಮಧ್ಯಮವರ್ಗದಿಂದಲೇ ಚಳವಳಿ ಪ್ರಾರಂಭವಾದರೂ ಅದು ಅನ್ಯಾಯಕ್ಕೀಡಾದ ಎಲ್ಲ ವರ್ಗಗಳನ್ನು ಜತೆಯಲ್ಲಿ ಕಟ್ಟಿಕೊಂಡು ಬೆಳೆಯುತ್ತಾಹೋಯಿತು.

ಆ ದೇಶಗಳಲ್ಲಿ ಸರ್ವಾಧಿಕಾರದಿಂದ ನಲುಗಿಹೋದ ಸಾಮಾನ್ಯ ಜನ ಅದರಲ್ಲಿ ಭಾಗವಹಿಸಿದ್ದರು. ಪ್ರಾಣವೊಂದನ್ನು ಬಿಟ್ಟು ಕಳೆದುಕೊಳ್ಳಲು ಬೇರೆ ಏನೂ ಇಲ್ಲದವರು ಅವರು. ಇಲ್ಲಿ ಹಾಗಾಗಲಿಲ್ಲ. ಅಣ್ಣಾಚಳವಳಿ ಎತ್ತಿದ ಭ್ರಷ್ಟಾಚಾರದ ವಿಷಯ ಎಲ್ಲರಿಗೆ ಸಂಬಂಧಿಸಿದ್ದೇ ಆಗಿದ್ದರೂ ಅದರ ತೀವ್ರತೆಯ ಅನುಭವ ಬೇರೆಬೇರೆ ವರ್ಗದ ಜನರಿಗೆ ಬೇರೆಬೇರೆ ರೀತಿಯದಾಗಿದೆ.

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವ ರೈತ, ಹೆಚ್ಚು ಸಂಬಳ ಸಿಗುತ್ತಿಲ್ಲ ಎನ್ನುವ ಕಾರ್ಮಿಕ, ಲಿಂಗತಾರತಮ್ಯ  ನಡೆಯುತ್ತಿದೆ ಎನ್ನುವ ಮಹಿಳೆ, ಜಾತಿತಾರತಮ್ಯದಿಂದಾಗಿ ದೌರ್ಜನ್ಯ ನಡೆಯುತ್ತಿದೆ ಎನ್ನುವ ದಲಿತರು, ಉದ್ಯೋಗ ಸಿಗುತ್ತಿಲ್ಲ ಎನ್ನುವ ಯುವಕರು..ಹೀಗೆ ಸಮಸ್ಯೆಗಳು ಹತ್ತಾರು.

ಇವರ ಕಷ್ಟಗಳ ಪಟ್ಟಿಯಲ್ಲಿ ಭ್ರಷ್ಟಾಚಾರ  ಇದ್ದರೂ ಅದು ಮೊದಲ ಸ್ಥಾನದಲ್ಲಿ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆ ಇವರ ಕಷ್ಟಪರಿಹಾರಕ್ಕೆ ನೆರವಾಗಲೂಬಹುದು. ಆದರೆ ಇದನ್ನು ಯಾರೂ ಅವರಿಗೆ ಮನವರಿಕೆ ಮಾಡಿಕೊಟ್ಟಿಲ್ಲ.

ಆದುದರಿಂದ ಅವರಲ್ಲಿ ಹೆಚ್ಚಿನ ಮಂದಿ ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ದೂರವೇ ಉಳಿದುಬಿಟ್ಟರು. ಅವರನ್ನು ಹತ್ತಿರಕ್ಕೆ ಕರೆದುಕೊಂಡು ಬರುವ ಪ್ರಯತ್ನವನ್ನೂ ಯಾರೂ ಮಾಡಲಿಲ್ಲ. ಈ ಕಾರಣದಿಂದಾಗಿಯೇ ಜನಲೋಕಪಾಲರ ನೇಮಕಕ್ಕಾಗಿ ನಡೆದ ಹೋರಾಟ ನಿಜವಾದ ಅರ್ಥದಲ್ಲಿ ಜನಚಳವಳಿ ಆಗಲೇ ಇಲ್ಲ.

ಅಣ್ಣಾಚಳವಳಿ ವಿಫಲಗೊಂಡ ಮಾತ್ರಕ್ಕೆ ಮುಂದಿನ ಎಲ್ಲ ದಾರಿಗಳು ಮುಚ್ಚಿಹೋಗಿವೆ ಎಂದರ್ಥ ಅಲ್ಲ. ರಾಷ್ಟ್ರೀಯ ಪಕ್ಷಗಳು ನಿಧಾನವಾಗಿ ಮರೆಗೆ ಸರಿದು ಪ್ರಾದೇಶಿಕ ಪಕ್ಷಗಳು ವಿಜೃಂಭಿಸುತ್ತಿರುವ ಈಗಿನ ರಾಜಕಾರಣದಿಂದಲೂ ಚಳವಳಿಗಾರರೂ ಕಲಿಯಬೇಕಾದ ಪಾಠ ಇದೆ.

ಬಹುಶಃ ರಾಷ್ಟ್ರಮಟ್ಟದ ಒಂದು ಚಳವಳಿಯನ್ನು ಇನ್ನುಮುಂದೆ ನಡೆಸಿಕೊಂಡು ಹೋಗುವುದು ಸಾಧ್ಯ ಇಲ್ಲವೇನೋ? ಇದರಿಂದ ನಿರಾಶರಾಗಬೇಕಾಗಿಲ್ಲ, ಈಗಲೂ ದೇಶದ ನಾನಾಭಾಗಗಳಲ್ಲಿ ನೀರು, ಭೂಮಿ, ಉದ್ಯೊಗ, ಶಿಕ್ಷಣ, ಆರೋಗ್ಯ, ಆತ್ಮಗೌರವ... ಹೀಗೆ ನಾನಾ ಉದ್ದೇಶದ ಚಳವಳಿಗಳು ತಮ್ಮ ಮಿತಿಯಲ್ಲಿ ನಡೆಯುತ್ತಿರುತ್ತವೆ.

ಪ್ರಜಾಪ್ರಭುತ್ವವನ್ನು ಜೀವಂತವಾಗಿ ಮತ್ತು ಆರೋಗ್ಯಪೂರ್ಣವಾಗಿ ಇಟ್ಟಿರುವ ಈ ಸಣ್ಣಸಣ್ಣ ಚಳವಳಿಗಳೇ ಭವಿಷ್ಯದ ಭರವಸೆಗಳು. ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ.
 
ಕೃಪೆ : ಪ್ರಜಾವಾಣಿ

Tuesday, July 31, 2012

ಮಂಗಳೂರ ಹಿಂಸೆಯಲ್ಲಿ ನಮ್ಮ ಪಾಲುದಾರಿಕೆ…



                                                                  -ಬಿ. ಶ್ರೀಪಾದ್ ಭಟ್ 

ಮಂಗಳೂರಿನಲ್ಲಿ ಅಟ್ಟಹಾಸ ಮೆರೆದ ‘ನೈತಿಕ ಪೊಲೀಸರು’

ನಿನ್ನೆ ಮಂಗಳೂರಿನಲ್ಲಿ ಹಿಂದೂ ಸಂಘಟನೆಯ ಹುಡುಗರು ಹೆಣ್ಣುಮಕ್ಕಳ ಮೇಲೆ ನಡೆಸಿದ ಹಲ್ಲೆ ಅಮಾನವೀಯವಾದದ್ದು ಹಾಗೂ ಅತ್ಯಂತ ಕ್ರೌರ್ಯವಾದದ್ದು. ಆದರೆ ಇದು ಹೊಸದಾಗಿ ನಡೆಯುತ್ತಿದೆ ಎಂದು ನಾವು ಗಾಬರಿಗೊಂಡರೆ ಅದು ನಮ್ಮ ಆತ್ಮವಂಚನೆಯಷ್ಟೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಇದು ದೇಶಾದ್ಯಾಂತ ನೂರಾರು ಬಾರಿ ನಡೆದಿದೆ. ಈ ಮತೀಯವಾದಿ ಆರೆಸ್ಸೆಸ್ ಸಂಘಟನೆ “ಗರ್ವ್ ಸೆ ಕಹೋ ಹಂ ಹಿಂದೂ ಹೈ” ಎನ್ನುವ ಘೋಷಣೆಯನ್ನು ಹುಟ್ಟು ಹಾಕಿದಾಗಲೇ ಈ ಹಲ್ಲೆಯ ಕ್ರೌರ್ಯದ ಬೀಜಗಳು ಮೊಳಕೆಯೊಡೆದದ್ದು.. ನಂತರ “ಏಕ್ ಧಕ್ಕ ಔರ್ ದೋ” ಎನ್ನುವ ಫ್ಯಾಸಿಸ್ಟ್ ಮನಸ್ಥಿತಿ ಚಲನಶೀಲಗೊಂಡಾಗ ಈ ಕ್ರೌರ್ಯದ ಅನೇಕ ಮುಖಗಳು ಅನಾವರಣಗೊಂಡವು. ಈ ಬಗೆಯ ಕ್ರೌರ್ಯಕ್ಕೆ ನೀರೆರೆದು ಪೋಷಿಸಿದ ಅಡ್ವಾನಿ ಹಾಗೂ ಮತ್ತೊಬ್ಬ ಫ್ಯಾಸಿಸ್ಟ್ ನರೇಂದ್ರ ಮೋದಿ ಇಂದು ಭವಿಷ್ಯದ ಪ್ರಧಾನಿ ಪಟ್ಟದ ಸ್ಪರ್ಧೆಗಳು. ಇವರನ್ನು ಹಾಗೂ ಇವರ ಫ್ಯಾಸಿಸ್ಟ್ ಮಾತೃ ಪಕ್ಷ ಆರೆಸ್ಸೆಸ್ ಅನ್ನು ಸಹಿಸಿಕೊಂಡ ಘೋರವಾದ ತಪ್ಪಿಗೆ ಸಮಾಜ ಈ ಬಗೆಯ ಹಲ್ಲೆಗಳನ್ನು ಕಾಲಕಾಲಕ್ಕೆ ಎದುರುನೋಡಬಹುದು. ಇವರ ಹಿಂದುತ್ವದ ಕ್ರೌರ್ಯದ ಹುಸಿಚಿಂತನೆಗೆ ದೇಶವೊಂದರ, ರಾಜ್ಯವೊಂದರ ಸಾಂಸ್ಕೃತಿಕ ಸಮಾಜ ಹಾಗೂ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ವ್ಯವಸ್ಥೆ ತೆರಬೇಕಾದ ಬೆಲೆ ಅಪಾರವಾದದ್ದು. ಚಿಂತಕ ಗ್ರಾಮ್ಷಿ ಹೇಳಿದ ಹಾಗೆ “ನಾವು ಮೇಲ್ನೋಟಕ್ಕೆ ವೇದಾಂತಿಗಳಾಗಿಯೂ,ಸಿದ್ಧಾಂತವಾದಿಗಳಾಗಿ ಕಾಣಿಸಿಕೊಳ್ಳುತ್ತೇವೆ. ಆದರೆ ಈ ಮುಗ್ಧ ವೇದಾಂತಗಳೇ ನಮ್ಮಲ್ಲಿ ನಮಗೆ ಗೊತ್ತಿಲ್ಲದ ಹಾಗೆ ನಮ್ಮೊಳಗೆ ಫ್ಯಾಸಿಸ್ಟ್ ಸಂಸೃತಿಯನ್ನು ಹುಟ್ಟಿಹಾಕುತ್ತವೆ”. ಈ ಮಾತುಗಳು ನಾಗರಿಕ ಸಮಾಜದಲ್ಲಿ ಅತ್ಯಂತ ಕ್ರೌರ್ಯದಿಂದ ಅಸಹಾಯಕ ಹೆಣ್ಣುಮಕ್ಕಳ ಮೇಲೆ ಅನಾಗರಿಕವಾಗಿ ಹಲ್ಲೆ ನಡೆಸಿದ ಆ ಘಾತುಕ ಹುಡುಗರಿಗೂ ಅನ್ವಯಿಸುತ್ತದೆ, ಈ ಅಮಾನವೀಯ,ಅನಾಗರೀಕ ಹಲ್ಲೆಯನ್ನು ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಜನಸಾಮಾನ್ಯರಿಗೂ ಅನ್ವಯಿಸುತ್ತದೆ, ನಮ್ಮ ಕಾಲಘಟ್ಟದಲ್ಲಿ ಈ ತರಹದ ಅನಾಗರಿಕ ಘಟನೆಗಳು ನಡೆದಾಗಲೆಲ್ಲ ಅಸಹಾಯಕತೆಯಿಂದ ಪತ್ರಿಕಾ ಹೇಳಿಕೆಗಳ ಮೂಲಕ, ಲೇಖನಗಳ ಮೂಲಕ ಖಂಡಿಸುವ ನಮಗೂ ಅನ್ವಯಿಸುತ್ತದೆ.
ಈ ಫ಼್ಯಾಸಿಸ್ಟ್ ಧೋರಣೆಗಳಿಂದ ಮುಕ್ತಿಗಾಗಿ ರಾಜಕೀಯ ಚಿಂತಕ ’ಗ್ರಾಮ್ಷಿ’ ಯು “ಸಾಂಸ್ಕೃತಿಕ ಯಜಮಾನ್ಯ”ವನ್ನು ಪ್ರತಿಪಾದಿಸುತ್ತಾನೆ (Cultural hegemony). ಈ ಸಾಂಸ್ಕೃತಿಕ ಯಜಮಾನ್ಯದಲ್ಲಿ ಗ್ರಾಮ್ಷಿಯು ದುಡಿಯುವ ವರ್ಗಗಳು ಕೇವಲ ಆರ್ಥಿಕ ಬೆಳವಣಿಗೆಯ ಮುಖಾಂತರವಾಗಲೀ, ಕೇವಲ ರಾಜಕೀಯ ಅಧಿಕಾರದ ಮುಖಾಂತರವಾಗಲೀ ಒಂದು ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ, ಬದಲಾಗಿ ಈ ದುಡಿಯುವ ಜನತೆ ಸಾಂಸ್ಕೃತಿಕವಾಗಿ ಬುದ್ಧಿಜೀವಿಗಳಾಗಿಯೂ ರೂಪಗೊಂಡಾಗ ಆಗ ವ್ಯವಸ್ಥೆಯಲ್ಲಿ ಸಮತೋಲನ, ಸಹನೆ ಒಡಮೂಡುತ್ತದೆ ಎಂದು ಚಿಂತಿಸುತ್ತಾನೆ. ಇಲ್ಲದೇ ಹೋದಲ್ಲಿ ಪಟ್ಟಭದ್ರ ಹಿತಾಸಕ್ತಿಯುಳ್ಳ ಪ್ರಭುತ್ವವು ತನ್ನದೇ ಆದ ಬೂರ್ಜ್ವಾ ಯಜಮಾನಿಕೆಯನ್ನು ಸಂಸ್ಕೃತಿಯ ಹೆಸರಿನಲ್ಲಿ ಸಮಾಜದ ಮೇಲೆ ಹೇರುತ್ತದೆ ಎಂದು ಗ್ರಾಮ್ಷಿಯ ಖಚಿತವಾದ ಅಭಿಪ್ರಾಯ.
ಇಂದು ದೇಶದಲ್ಲಿ, ನಿನ್ನೆ ಹಾಗೂ ನಿರಂತರವಾಗಿ ಕೆಲವು ವರ್ಷಗಳಿಂದ ಮಂಗಳೂರು ಹಾಗು ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ನಡೆದ ಹಲ್ಲೆಯ ಹಿಂದಿನ ಕ್ರೌರ್ಯದ ಮನಸ್ಥಿತಿಯನ್ನು ಈ ಸಾಂಸ್ಕೃತಿಕ ಯಜಮಾನ್ಯದ ಪರಿಭಾಷೆಯಲ್ಲಿ ಅರ್ಥೈಸಬೇಕು. ನಾವೆಲ್ಲ ನಮ್ಮ ನೆಲದ ಮಾನವೀಯ ಸಂಸ್ಕೃತಿಯನ್ನು, ಜೀವಪರವಾದ ಅವೈದಿಕ ಸಂಸ್ಕೃತಿಯ ಯಜಮಾನ್ಯವನ್ನು ವ್ಯವಸ್ಥೆಯೊಳಗೆ ಚಲನಶೀಲವಾಗಿ, ನಿರಂತರವಾಗಿ ನೆಲೆಗೊಳ್ಳಲು ಪ್ರಯತ್ನಿಸಿಲ್ಲದ ತಪ್ಪಿಗಾಗಿ ಇಂದು ಸಂಘಪರಿವಾರದ ವಿಕೃತಿ ಚಿಂತನೆಯನ್ನು ಮೈಗೂಡಿಸಿಕೊಂಡ ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ನಿರಂತರವಾದ ಹಲ್ಲೆ ಇಂದು ನಮ್ಮ ಕಣ್ಣೆದುರಿಗೆ ನಡೆಯುತ್ತಿದೆ. ಇಲ್ಲಿ ಆಧುನಿಕ ಬುದ್ಧಿಜೀವಿಗಳು ಕೇವಲ ಮಾತುಗಾರರಾಗದೆ ಬಹಿರಂಗವಾಗಿ ಸಾಮಾನ್ಯ ಜನತೆಯೊಂದಿಗೆ ಬೆರೆತು ಅವರನ್ನು ಬುದ್ಧಿಜೀವಿಗಳನ್ನಾಗಿ ರೂಪಿಸುವಲ್ಲಿ ಸೋತಂತಹ ಜಾಗದಲ್ಲಿ ಸಂಘಪರಿವಾರದ ವಿಕೃತಿ ಚಿಂತನೆಗಳು ಆ ಖಾಲಿಯಾದ ಜಾಗವನ್ನು ಆಕ್ರಮಿಸಿಕೊಳ್ಳುತ್ತವೆ ಹಾಗೂ ತಮ್ಮ ಯಜಮಾನಿಕೆಯನ್ನು ಪ್ರತಿಷ್ಠಾಪಿಸುತ್ತವೆ. ಇಂದು ಅಸಹಾಯಕ ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡಿದ ಆ ಅನಾಗರಿಕ ಯುವಕರು, ಹಿಂದೂ ಸಂಘಟನೆಗಳು ಮತ್ತು ಜನಸಾಮಾನ್ಯರು ಆ ದುಷ್ಕೃತ್ಯವನ್ನು ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ಪದೇ ಪದೇ ಸಮರ್ಥಿಸಿಕೊಳ್ಳುತ್ತಿರುವುದಕ್ಕೆ ಕಾರಣ ನಮ್ಮೆಲ್ಲರ ಸಾಂಸ್ಕೃತಿಕ ನಿಷ್ಕ್ರಿಯತೆ ಮತ್ತು ಸಿನಿಕತೆ. ನಾವೆಲ್ಲ ಸಾಂಸ್ಕೃತಿಕವಾಗಿ ನಿಷ್ಕ್ರಿಯಗೊಂಡಾಗ ಸಂಘಪರಿವಾರ ಪ್ರೇರಿತ ಬಲು ಸುಲಭವಾಗಿ ಸರಳೀಕೃತಗೊಂಡ ದೇವರುಗಳನ್ನು, ನಂಬಿಕೆಗಳನ್ನು ಒಳಗೊಂಡ ಏಕರೂಪಿ ಕಲ್ಪಿತ ಹಿಂದೂ ಸಂಸ್ಕೃತಿ ಬಂದು ನೆಲೆಯೂರುತ್ತದೆ. ಇಂತಹ ವ್ಯವಸ್ಥೆಯಲ್ಲಿ ಒಂದು ಬಗೆಯ ಒಪ್ಪಿತ ಗುಲಾಮಿಗಿರಿ ನೆಲೆಗೊಳ್ಳುತ್ತದೆ. ಈ ಗುಲಾಮಿಗಿರಿ ಧರ್ಮವನ್ನು ಸಾರ್ವಜನಿಕವಾಗಿ ಚರ್ಚಿಯನ್ನು ಆರಂಭಿಸಲು ಪ್ರೇರೇಪಿಸುತ್ತದೆ. ಈ ಬಗೆಯ ಪಟ್ಟಭದ್ರ ನೆಲೆಯಲ್ಲಿ ಚರ್ಚೆಗೊಂಡ ಧಾರ್ಮಿಕತೆಯು ಕಡೆಗೆ ಸನಾತನ ಧರ್ಮಗಳ ಸಂಕೇತಗಳಾಗಿ ರೂಪಗೊಂಡು ಕ್ರಮೇಣವಾಗಿ ಜೀವವಿರೋಧಿ ಸಂಕೇತಗಾಗಿ ಬಿಡುತ್ತವೆ. ಆಗಲೇ ಗ್ರಾಮ್ಷಿ ಹೇಳಿದ ಹಾಗೆ ನಮ್ಮ ಕಾಲ ಬುಡದಲ್ಲಿ ನೆಲ ಕುಸಿಯುತ್ತಿದ್ದರೂ ನಾವು ಅದನ್ನು ಅರಿಯಲಾರದಷ್ಟು ಮೈಮರೆತಿರುತ್ತೇವೆ. ಆಗ ಈ ಜೀವ ವಿರೋಧಿ ಕ್ಷುಲ್ಲಕತನದ ಧಾರ್ಮಿಕತೆಯು ಕ್ರಮೇಣವಾಗಿ ಇಡೀ ಸಮಾಜವನ್ನು ವ್ಯಾಪಕವಾಗಿ ಆಕ್ರಮಿಸಿಕೊಂಡುಬಿಡುತ್ತದೆ. ಇದರ ಸಾಕ್ಷಿಯಾಗಿ ಮಂಗಳೂರಿನಲ್ಲಿ ನಡೆದ ಹಲ್ಲೆಯನ್ನು ಜನತೆಯು ಸಮರ್ಥಿಸಿಕೊಳ್ಳುವಂತಹ ಅನಾಗರಿಕ ಮಾನವವಿರೋಧಿ ವ್ಯವಸ್ಥೆ ಸೃಷ್ಟಿಗೊಂಡಿರುವುದು. ಇಲ್ಲಿ ’ದಯವೇ ಧರ್ಮದ ಮೂಲವಯ್ಯ’ ಎಂದು ಹೇಳಿದ ವಚನಕಾರರ ಜೀವಪರ ಮಾತುಗಳು ನಾಮಾವಶೇಷಗೊಳ್ಳುತ್ತವೆ. ಆಗ ಸಮಾಜದಲ್ಲಿ ಪ್ರಗತಿಪರರಾಗುವ ಹಂಬಲ ಮತ್ತು ತುಡಿತ ಕ್ರಮೇಣವಾಗಿ ಕಣ್ಮರೆಯಾಗುತ್ತದೆ.
ಇಂದು ಈ ಬಿಜೆಪಿ ಪಕ್ಷದ ಫ್ಯಾಸಿಸ್ಟ್ ಧೋರಣೆಗೆ, ಅದರ ದಿಕ್ಕು ತಪ್ಪಿದ ಭ್ರಷ್ಟ ಆಡಳಿತಕ್ಕೆ ವ್ಯಾಪಕವಾಗಿ ಖಂಡನೆಗಳು ವ್ಯಕ್ತವಾಗುತ್ತಿದೆ. ಆದರೆ ಈ ಅಸಹನೆ ಒಂದು ಜನಪರ ಚಳುವಳಿಯಾಗಿ ರೂಪಿತವಾಗುತ್ತಿಲ್ಲ. ಇದರ ದುರ್ಲಾಭವನ್ನು ಆಡಳಿತ ಪಕ್ಷಗಳು ಮತ್ತು ಸಮಾಜದ ಲುಂಪೆನ್ ಗುಂಪುಗಳು ಸರಿಯಾಗಿಯೇ ದುರುಪಯೋಗಪಡಿಸಿಕೊಳ್ಳುತ್ತವೆ. ನಾಗರಿಕ ಸಮಾಜದ ಈ ನಿಷ್ಕ್ರಿಯತೆಯ ಫಲವಾಗಿಯೇ ಮಂಗಳೂರಿನಲ್ಲಿ ಇಂತಹ ಅನಾಗರಿಕ ಕೃತ್ಯ ನಡೆದರೂ ಇಲ್ಲಿನ ಸೋ ಕಾಲ್ಡ್ ಸಂಭಾವಿತ ಮುಖ್ಯಮಂತ್ರಿ ನಗುತ್ತಲೇ ಸಮಾಧಾನದಿಂದ ಉತ್ತರಿಸುತ್ತಾರೆ. ಇಲ್ಲಿನ ಭ್ರಷ್ಟ ಗೃಹಮಂತ್ರಿಗಳು ಇದೇನು ಅಂತಹ ದೊಡ್ಡ ವಿಷಯವೇ ಎಂಬಂತೆ ಜಾರಿಕೊಳ್ಳುತ್ತಾರೆ. ಈ ಅಧಪತನಕ್ಕೆ ನಾವೆಲ್ಲ ನಮ್ಮೊಳಗಿನ ಭಯವನ್ನು, ಹಿಂಜರಿಕೆಯನ್ನು ಮತ್ತು ಸಿನಿಕತನವನ್ನು ಕಿತ್ತೊಗೆಯುವ ಮೂಲಕ ಉತ್ತರಿಸಬೇಕಾಗಿದೆ. ಇಲ್ಲಿ ಗಾಂಧಿ ಹೇಳಿದಂತೆ ಅಹಿಂಸೆಯೆಂದರೆ, ಮಾನವೀಯತೆಯೆಂದರೆ ಹಿಂಸಾಕೃತ್ಯಗಳಲ್ಲಿ ತೊಡಗದಿರುವುದಷ್ಟೇ ಅಲ್ಲ, ಈ ಹಿಂಸೆಯನ್ನು ವಿರೋಧಿಸುವುದು ಸಹ ಅಹಿಂಸೆಯಾಗುತ್ತದೆ. ಇಲ್ಲದಿದ್ದರೆ ಈ ಮೌನವು ಆ ದುಷ್ಕೃತ್ಯದಲ್ಲಿ ಪಾಲ್ಗೊಳ್ಳುವಿಕೆಯ ಲಕ್ಷಣವೂ ಆಗುತ್ತದೆ. ಇಂತಹ ಸಂದರ್ಭದಲ್ಲಿ ನಿರ್ಲಿಪ್ತತೆ ಎಂದರೆ ಮೂಕ ಸಾಕ್ಷಿಗಳು ಮಾತ್ರವಲ್ಲ, ಈ ಹಿಂಸೆಯಲ್ಲಿ ಪಾಲುದಾರರೂ ಸಹ.

ಕೃಪೆ : ವರ್ತಮಾನ : (ಫೋಟೋ : ವಿಜಯ ಕರ್ನಾಟಕ)

Saturday, July 21, 2012

ಜಾತಿಸೂತಕ ಆತಂಕಗಳು !


ಡಾ. ಸಿದ್ರಾಮ ಕಾರಣಿಕ
ಭಾರತೀಯ ಸಮಾಜದಲ್ಲಿ ಸನಾತನಾವಾದಿ ಬೇರುಗಳು ಸಡಿಲುಗೊಳ್ಳುವಂತೆ ಘರ್ಜಿಸಿದವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು. ಅವರ ವೈಚಾರಿಕ ಸಿದ್ಧಾಂತಗಳು, , ವಸ್ತುನಿಷ್ಟ ವಿಮರ್ಶೆಗಳು, ವೈಜ್ಞಾನಿಕ ವ್ಯಾಖ್ಯಾನಗಳು ಭಾರತ ದೇಶದ ವೈದಿಕ ಸಂಪ್ರದಾಯವನ್ನು ಅಲುಗಾಡಿಸಿದ್ದು ನಿಜ. ಆದರೆ ವರ್ತಮಾನದಲ್ಲಿ ನಿಂತುಕೊಂಡು ಇಂದಿನ ವ್ಯವಸ್ಥೆಯನ್ನು ಅವಲೋಕಿಸಿದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯದ ಸಾರ್ಥಕತೆಗೆ ಅಡ್ಡಗಾಲಾಗಿ ನಿಂತ ದೊಡ್ಡ ಪಡೆಯೊಂದು ರೂಪ ಬದಲಾಯಿಸುತ್ತ ಮುಂದುವರಿಯುತ್ತಿರುವ ವಾಸ್ತವ ಕಣ್ಣಿಗೆ ರಾಚುತ್ತದೆ.
ಜಾತಿಯನ್ನು ಮೂಲವಾಗಿಟ್ಟುಕೊಂಡು ಸದಾ ಸಂಶಯ ಮತ್ತು ಅಪನಂಬಿಕೆಗಳ ಮೂಲಕ ದಲಿತರನ್ನು ಇಂದಿಗೂ ವ್ಯವಸ್ಥಿತವಾಗಿ ತುಳಿಯುವ ಹುನ್ನಾರಗಳು ನಿರಾಂತಕವಾಗಿ ನಿರಂತರವಾಗಿ ನಡೆಯುತ್ತಿರುವುದು ಈ ದೇಶದ ಸನಾತನಿ ಸಂಪ್ರದಾಯದ ಶೋಕಿಯಾಗುತ್ತಿದೆಯೇನೋ ಎನ್ನುವಷ್ಟರ ಮಟ್ಟಿಗೆ ಆತಂಕಕಾರಿಯಾಗಿದೆ. ಮನುಷ್ಯನನ್ನು, ಮನುಷ್ಯನನ್ನಾಗಿ ಪರಿಗಣಿಸದ ಧರ್ಮಗಳಿಗೆ ಜೋತು ಬಿದ್ದ ಮಂದಿಯು ಹೊಸ ಹೊಸ ಪರಿಕ್ರಮಗಳ ಮೂಲಕ ಜಾತಿ ವ್ಯವಸ್ಥೆಯನ್ನು ಚಾಲ್ತಿಯಲ್ಲಿ ಇಟ್ಟಿರುವುದು ವಾಸ್ತವದ ವರ್ತಮಾನ ಎಂಬುದರಲ್ಲಿ ಎರಡು ಮಾತಿಲ್ಲ. ಯಾವ ಬದಲಾವಣೆಗಳಿಗೂ ಆಸ್ಪದ ಇರಬಾರದು ಎಂಬ ಆಸಕ್ತಿಯನ್ನೇ ಇಟ್ಟುಕೊಂಡು ವರ್ತಿಸುವುದನ್ನು ಕಂಡುಂಡು ವಿವೇಚಿಸಿದಾಗ ವಿಷಾದ ತುಂಬಿಕೊಳ್ಳುತ್ತಲೇ ಆವೇಶದ ವಿಚಾರಗಳೂ ಮನದಲ್ಲಿ ಮೂಡುತ್ತವೆ.
ಪಾಶ್ಚಾತ್ಯರ ಪ್ರಭಾವ ಮತ್ತು ಸಂಪರ್ಕದಿಂದಾಗಿ ಭಾರತೀಯ ಸಮಾಜದಲ್ಲಿ ತುಂಬ ಕ್ರಾಂತಿಕಾರಿ ಎನಿಸುವಷ್ಟರಮಟ್ಟಿಗಿನ ಬದಲಾವಣೆಗಳೇನೋ ಆಗಿವೆ ನಿಜ. ಆದರೆ ಭಾರತೀಯ ಮನಸ್ಸುಗಳು ಮಾತ್ರ ಬದಲಾಗಿಲ್ಲ. ತೋರಿಕೆಯ ಹೂಟಗಳು ಹಲವು ಒಳಗೊಳಗೇ ಜಾತಿಯನ್ನು ಬಲವಾಗಿ ಹಿಡಿದುಕೊಂಡು ಹಠ ಹಿಡಿದಂತೆ ಕುಳಿತುಕೊಂಡಿರುವುದು ಸುಳ್ಳಲ್ಲ. ‘ಜಾತಿಯಿಂದ ಹಿಂದೂಗಳ ನೀತಿ ಶೋಚನೀಯ ಅವಸ್ಥೆಗೆ ಮುಟ್ಟಿದೆ. ಜಾತಿ ಸಾರ್ವಜನಿಕ ಭಾವನೆಯನ್ನು ನಾಶಗೊಳಿಸಿದೆ ; ಹೃದಯ ವೈಶಾಲ್ಯತೆಯನ್ನು ಹಾಳು ಮಾಡಿದೆ ; ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ  ಮಾಡಿದೆ. ಹಿಂದುವಿನ ಸಮಾಜ  ಹಾಗೂ ಹೊಣೆಗಾರಿಕೆ ಅವರ ಜಾತಿಗೆ ಸೀಮಿತವಾದವು. ಅವನ ನಿಷ್ಠೆ ಜಾತಿಗೆ ಪರಿಮಿತವಾಗಿದೆ’ (ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು : ಸಂಪುಟ-5 : ಪು-) ಎನ್ನುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತುಗಳು ಇಂದಿಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರಗಳು ಇಂದಿಗೂ ಯಾಕೆ ಮತ್ತೇ ಮತ್ತೇ ಪ್ರಸ್ತುತವಾಗುತ್ತವೆ ಎಂದರೆ ಪರಿಸ್ಥಿತಿಗಳು ಹಾಗಿವೆ. ಜಾತಿಯೆಂಬುದು ಒಂದು ಸೂತಕ ಎಂದು ಭಾವಿಸಿರುವ ಬಹಳಷ್ಟು ಮಂದಿ, ಆ ಜಾತಿಯೇ ಬಹಳಷ್ಟು ಅವಘಡಗಳನ್ನು ಸೃಷ್ಟಿಸಿದೆ ಎಂಬುದನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ.
ಶಿಕ್ಷಣದ ಹಕ್ಕು ದೊರೆತಾಗ ದಲಿತರು ಒಂದಿಷ್ಟು ಅತ್ತ ವಾಲಿಕೊಂಡು ಒಂದಿಷ್ಟು ಕಲಿತು, ಉದ್ಯೋಗ ಮಾಡುತ್ತ ಒಳ್ಳೆಯ ಬದುಕನ್ನು ತಮ್ಮದಾಗಿಸಿಕೊಳ್ಳಲು ದಾಪುಗಾಲು ಇಡುತ್ತಿರುವುದು ಮತ್ತು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಂಪಾದಿಸುತ್ತಿರುವುದನ್ನು ಗಮನಿಸಿದಾಗ ಭಾರತೀಯ ಸಮಾಜವು ನಿಜವಾಗಿಯೂ ಬದಲಾಗಿಯೇ ಬಿಟ್ಟಿತು ಎಂದು ಭ್ರಮಿಸಿದವರೂ ಸಂಭ್ರಮಿಸಿದವರೂ ಇದ್ದಾರೆ. ಆದರೆ ವಾಸ್ತವ ಹಾಗಿಲ್ಲ ಎಂದರೆ ಅಚ್ಚರಿಯಾದೀತು ! ದಲಿತನೊಬ್ಬ ಶಿಕ್ಷಣ ಪಡೆದುಕೊಂಡು ಉನ್ನತ ಹಂತ ತಲುಪಿದರೂ ವೈದಿಕಶಾಹಿ ಹೇರಿದ ಜಾತಿ ಸೂತಕ ಆತನನ್ನು ಬಿಡಲಾರದು. ಈ ದೇಶದಲ್ಲಿ ಮೇಲ್ಜಾತಿಯವರೆನಿಸಿಕೊಂಡವರು ಆತನೊಡನೆ ಗೌರವಪೂರ್ವಕವಾಗಿ ಸಂಪರ್ಕ ಸಾಧಿಸುತ್ತಾರೆ ಎಂಬುದು ನಿಜವಾಗಿದ್ದರೂ ಅವರ ಮನದ ಮೂಲೆಯಲ್ಲಿ ಜಾತಿ ಮನೆ ಮಾಡಿ ಕುಳಿತ್ತಿರುತ್ತದೆ. ಹೊರಗೆ ಏನೆಲ್ಲ ಮಾಡಿದರೂ ದಲಿತನೊಬ್ಬ ತಮ್ಮ ಮನೆಗೆ ಬಂದಾಗ ಮೇಲ್ಜಾತಿಯವರೆನಿಸಿಕೊಂಡವರ ಚಟುವಟಿಕೆಗಳು ಆಚರಣೆಗಳ ಹೆಸರಿನಲ್ಲಿ ‘ದೂರ’ ಇಡುವ ವರ್ತನೆಗಳಲ್ಲಿ ವ್ಯಕ್ತವಾಗುತ್ತವೆ. ಮನಸ್ಸುಗಳು ಇಂದಿಗೂ ಬದಲಾಗಿಲ್ಲ ಎನ್ನುವುದು ಈ ಕಾರಣಕ್ಕಾಗಿಯೇ.
ಇದು ಶಿಕ್ಷಣ ಪಡೆದ, ಉದ್ಯೋಗದಲ್ಲಿರುವ, ಆರ್ಥಿಕವಾಗಿ ಸಬಲರಾಗಿರುವ, ಒಳ್ಳೆಯ ಬದುಕನ್ನು ತಮ್ಮದಾಗಿಸಿಕೊಂಡಿರುವ ದಲಿತರನ್ನು ನಡೆಯಿಸಿಕೊಳ್ಳುವ ಪರಿಯಾದರೆ ಅಕ್ಷರದ ಅರಿವಿಲ್ಲದ, ಆರ್ಥಿಕವಾಗಿ ತೀರ ಕೆಳಮಟ್ಟದಲ್ಲಿರುವ ದಲಿತರು ಈ ದೇಶದಲ್ಲಿ ಬಹುಸಂಖ್ಯಾತರಾಗಿದ್ದು, ಇವರ ಬದುಕು ಇಂದಿಗೂ ಬದಲಾವಣೆಯಾಗಿಲ್ಲ. ಮೇಲ್ಜಾತಿಯವರೆನಿಸಿಕೊಂಡವರ ಶೋಷಣೆಗೆ ಇವರು ನಿರಂತರವಾಗಿ ಬಲಿಯಾಗುತ್ತಲೇ ಇದ್ದಾರೆ. ಇನ್ನೂ ಕೆಲವು ಕಡೆ ಅಸ್ಪೃಶ್ಯತೆ ತುಂಬ ಘೋರವಾಗಿಯೇ ಆಚರಣೆಯಲ್ಲಿದೆ. ಕುಡಿಯುವ ನೀರು, ತಿನ್ನುವ ಅನ್ನ, ಪೂಜಿಸುವ ದೈವಗಳ ಸಂದರ್ಭದಲ್ಲಿ ಇನ್ನೂ ಮೇಲು-ಕೀಳುತನ, ಮಡಿ-ಮೈಲಿಗೆಗಳು ಕಾಣಿಸಿಕೊಳ್ಳುತ್ತಲೇ ಇವೆ. ದಿನವೂ ದಿನಪತ್ರಿಕೆ ಓದುವವರಿಗೆ, ಟ.ವಿ. ನೋಡುಗರಿಗೆ ಈ ಸುದ್ದಿಗಳ ಮಾಹಿತಿ ಇದ್ದೇ ಇದೆ ; ಇದಕ್ಕೆ ಬೇರೊಂದು ಉದಾಹರಣೆ ನೀಡುವ ಅವಶ್ಯಕತೆಯಿಲ್ಲ. ದಲಿತರನ್ನು ಬಹಿಷ್ಕಾರ ಹಾಕುವುದು, ಸಾರ್ವಜನಿಕವಾಗಿ ಅವಮಾನಿಸುವುದು, ಗುಂಡಾಗಿರಿ ಮಾಡಿ ಹಲ್ಲೆ ಮಾಡುವುದು, ನಿರ್ದಾಕ್ಷಣ್ಯವಾಗಿ ದಲಿತರ ಮಾರಣಹೋಮ ನಡೆಸುವುದು, ದಲಿತ ಮಹಿಳೆಯರನ್ನು ಬೆತ್ತಲೆ ಮಾಡುವುದು ಇಲ್ಲವೆ ಅತ್ಯಾಚಾರ ಮಾಡುವುದು ಇನ್ನೂ ನಿರಂತರವಾಗಿವೆ ಎಂದರೆ ಪ್ರಜಾಪ್ರಭುತ್ವದ ಈ ದೇಶದ ಪ್ರಜೆಗಳಿಗೆ ನಾಚಿಕೆಯಾಗಬೇಕು !
ಇವೆಲ್ಲವುಗಳ ನಡುವೆ ಮಾನಸಿಕ ಗುಲಾಮಗಿರಿಯನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವ ದಲಿತರೂ ಇದ್ದಾರೆ. ಅವರು ಕಲಿತವರಿರಬಹುದು, ಸ್ಥಿತಿವಂತರಿರಬಹುದು ಅಥವಾ ಏನೇನೂ ಇಲ್ಲದವರೂ ಆಗಿರಬಹುದು. ಈ ಮಾನಸಿಕ ಗುಲಾಮಗಿರಿಗೆ ಈಡಾಗಿರುವ ದಲಿತರು ಸಾಮಾಜಿಕ ಬದಲಾವಣೆಯನ್ನು ಬಯಸುವ ಸಂದರ್ಭದಲ್ಲಿ ತುಂಬ ಅಪಾಯಕಾರಿ. ತಮ್ಮದೇ ತಪ್ಪು ಎಂಬ ತಲಾಂತರದ ಕರ್ಮ ಸಿದ್ಧಾಂತಕ್ಕೆ ಬಲಿಯಾಗಿರುವ ಇಂಥ ದಲಿತರನ್ನು ಎಚ್ಚರಗೊಳಿಸಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿದೆ. ಯಾಕೆಂದರೆ ಮೇಲ್ಜಾತಿಯವರೆನಿಸಿಕೊಂಡವರೊಂದಿಗೆ ಗುರುತಿಸಿಕೊಳ್ಳುವ ಬಲಿತ ದಲಿತರೂ ಭೂಮಿತತ್ವವನ್ನು ಮರೆಯುತ್ತಾರೆ ಮತ್ತು ತಾವು ದಲಿತರೆಂದು ಹೇಳಿಕೊಳ್ಳಲು ಸಹ ಸಂಕೋಚಪಡುತ್ತಾರೆ. ಕನಿಷ್ಟ ದಲಿತರನ್ನು ಆದಷ್ಟು ದೂರ ಇಡುವ ಪ್ರಯತ್ನವನ್ನೂ ಬಲಿತ ದಲಿತರು ಮಾಡುತ್ತಾರೆ. ಬಲಿತ ದಲಿತರ ಈ ಗುಪ್ತ ಗುಲಾಮಗಿರಿಯಿಂದಲೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ದೂರೀಕರಿಸುವ ಪ್ರಯತ್ನಗಳೂ ಸಾಕಷ್ಟು ನಡೆದಿವೆ ಮತ್ತು ನಡೆಯುತ್ತಿವೆ.
ಹೀಗಾಗಿಯೇ ಈ ದೇಶದಲ್ಲಿ ದಲಿತರು ಇನ್ನೂ ಶೋಷಣೆಯ ಅನುಭೋಗಿಗಳೇ ಆಗಿದ್ದಾರೆ. ತಿದ್ದಿಕೊಳ್ಳದಿದ್ದರೆ ಆ ಶೋಷಣೆ ಮುಂದುವರಿಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಮೇಲ್ಜಾತಿಯವರೆನಿಸಿಕೊಂಡವರು ದಲಿತರಲ್ಲಿ ಬಹಿಷ್ಕಾರದ ಭಯವನ್ನು ಬಿತ್ತುತ್ತಾರೆ ಮಾತ್ರವಲ್ಲ ಭಂಡತನಕ್ಕಿಳಿದು ಮೇಲ್ಮೆಯನ್ನು ಸಾಧಿಸಿಕೊಳ್ಳುತ್ತಾರೆ.
ಇದೆಲ್ಲವುಗಳ ಜೊತೆಗೆ ಇತ್ತೀಚೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿಶ್ರಮ ಮತ್ತು ಪರಾಕ್ರಮವನ್ನೂ ಸಾಧನೆ-ಸಿದ್ಧಿಯನ್ನೂ ಅಲ್ಲಗೆಳೆಯುವ ಹುನ್ನಾರಗಳು ವ್ಯವಸ್ಥಿತವಾಗಿ ನಡೆಯುತ್ತಿರುವುದು ಆಘಾತಕಾರಿ ಬೆಳವಣಿಗೆಯೇ ಆಗಿದೆ. ಇದಕ್ಕೆ ಕೇವಲ ದಲಿತೇತರರು ಮಾತ್ರವಲ್ಲ ಬಲಿತ ದಲಿತರೂ ಕಾರಣಕರ್ತರು ಎನ್ನುವುದು ಇನ್ನಷ್ಟು ಆತಂಕಕಾರಿಯಾದ ಸಂಗತಿಯೇ ಆಗಿದೆ. ಯಾರೋ ಒಬ್ಬರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದವರಲ್ಲಿ ಒಬ್ಬರೇ ಹೊರತು ಇಡೀ ಸಂವಿಧಾನ ರಚನೆಯನ್ನು ಅವರು ಮಾಡಿಲ್ಲ ಎಂಬುದನ್ನು ಮಾಧ್ಯಮಗಳಲ್ಲಿ ಹರಿಯಬಿಟ್ಟು ತಮ್ಮ ಉರಿಯನ್ನು ತಣ್ಣಗಾಗಿಸಿಕೊಳ್ಳುವಲ್ಲಿ ತೃಪ್ತಿಪಟ್ಟುಕೊಂಡರೆ, ಇನ್ನೂ ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ರಾಷ್ಟ್ರವಿರೋಧಿ ಎನಿಸುವ ಕಾರ್ಯ ಮಾಡಿದ್ದಾರೆ ಎಂಬ ಪುಕಾರು ಎಬ್ಬಿಸುತ್ತಿದ್ದಾರೆ. ಮತ್ತೂ ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೋರಾಟ 1930 ಆಸುಪಾಸಿನಲ್ಲಿ ಆರಂಭವಾಯಿತು ಎಂದು ಘೋಷಿಸಿ ಬೇರೆಯವರ ತಲೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ !
ಇವೆಲ್ಲವುಗಳಿಗಿಂತಲೂ ಹೇಯವಾದ ನಡುವಳಿಕೆ ಎಂದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಇಂದಿಗೂ ತಮ್ಮ ಶುದ್ಧ ವೈರಿ ಎಂದು ಭಾವಿಸುವ ಗುಂಪೊಂದು ಡಾ. ಬಾಬಾಸಾಹೇಬರ ಅಂಬೇಡ್ಕರ್ ಅವರ ವಿಚಾರಗಳನ್ನು ತಿರುಚುತ್ತ, ಅವರ ಮೂರ್ತಿಗಳನ್ನು, ಸ್ಮಾರಕಗಳನ್ನು ಭಗ್ನಗೊಳಿಸುವಲ್ಲಿ ‘ಆತ್ಮ’ ತೃಪ್ತಿಯನ್ನು ಅನುಭವಿಸುತ್ತ ವಿಜ್ರಂಭಿಸುವ ಸ್ವರತಿಗೆ ಮುಂದಾಗುತ್ತಿರುವುದು ! ಇನ್ನೂ ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ‘ಹೊಲೆಯ’ ಎಂಬುದನ್ನಷ್ಟೇ ಪರಿಗಣಿಸಿ, ಅವರ ಇಡೀ ಸಾಧನೆಯನ್ನು ಒಂದು ಜಾತಿಗೆ ಸೀಮಿತಗೊಳಿಸಿ ‘ಸಂಘಟನೆ’ ಮಾಡಿಕೊಂಡು ಹುಯಿಲೆಬ್ಬಿಸುತ್ತ ದಲಿತ ಶಕ್ತಿಯನ್ನು ಹಾಳು ಮಾಡುವಲ್ಲಿ ಸಾಫಲ್ಯ ಸಾಧಿಸುವ ಹಠಮಾರಿತನದಲ್ಲಿ ಅಂಡಲೆಯುತ್ತಿದ್ದಾರೆ !
ಇಂಥವುಗಳೆಲ್ಲ ಯಾಕೆ ನಡೆಯುತ್ತಿವೆ ಎಂದರೆ ಅದು ನಮ್ಮಲ್ಲಿ ಇರುವ ಅರಿವಿನ ಅಭಾವ ಎನ್ನಬೇಕಾಗುತ್ತದೆ. ಅರಿವಿನ ಅಭಾವದಿಂದ ಉದ್ಭವಿಸಿದ ಅಸಹನೆಯೇ ಇಷ್ಟಕ್ಕೆಲ್ಲ ಕಾರಣ ಎನ್ನದೆ ಬೇರೆ ಮಾರ್ಗವಿಲ್ಲ. ಜೊತೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂಘರ್ಷ-ಸಮನ್ವಯ ಸಿದ್ಧಾಂತ, ಸಾಂಘಿಕ ಬದುಕಿನ ಸದಾಶಯಗಳ ಫಲಾನುಭವಿಗಳಾಗಿರುವ ಬಹಳಷ್ಟು ಮಂದಿ ಬಲಿತ ದಲಿತರು ಉಂಡ ತಾಟಿನಲ್ಲೇ ಹೇಸಿಗೆ ಮಾಡಿಕೊಂಡು ಉಳ್ಳಾಡುತ್ತಿರುವುದು ಕೂಡ ಇಂತಹ ಅವಘಡಗಳಿಗೆ ಕೆಂಪು ಹಾಸಿಗೆ ಹಾಸಿದಂತಾಗಿದೆ !
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ದಲಿತರ ಪರವಾಗಿ ಮಾತ್ರ ಹೋರಾಟ ಮಾಡಲಿಲ್ಲ. ದಲಿತ ಅಸ್ಮಿತೆಯ ಹೋರಾಟದೊಂದಿಗೆ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆ ಪರವಾಗಿಯೂ ಬಹುದೊಡ್ಡ ಚಳುವಳಿಯನ್ನು ಹುಟ್ಟು ಹಾಕಿದವರು. ಈ ದೇಶದ ಪ್ರತಿಯೊಬ್ಬ ಹಿಂದುಳಿದ, ಅಲ್ಪಸಂಖ್ಯಾತರ ಪರವಾಗಿಯೂ ಹೋರಾಟ ಮಾಡಿ ಯಶಸ್ಸು ಗಳಿಸಿದವರು. ಜೊತೆಗೆ ಮಹಾತ್ಮ ಫುಲೆಯವರು ಆರಂಭಿಸಿದ ರೈತರ ಪರವಾದ ಉಗ್ರ ಹೋರಾಟವನ್ನೂ ಮಾಡಿ ನ್ಯಾಯ ದೊರಕಿಸಿ ಕೊಡುವ ಕೈಂಕರ್ಯ ತೊಟ್ಟವರು. ಇವೆಲ್ಲವುಗಳನ್ನೂ ಮರೆ ಮಾಚಿ ಸುಳ್ಳು ಸುದ್ದಿಯನ್ನು ಹರಡುತ್ತಿರುವ ಕೆಲವು ಮನೋವಿಕಲ್ಪಕ್ಕೆ ಒಳಗಾದ ಜನರ ಚಟುವಟಿಕೆಗಳು ತೀರ ಅಕ್ಷಮ್ಯ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಾಡಿದ ಸಾಧನೆ-ಸಿದ್ಧಿಗಳ ಅರಿವನ್ನು ಅಥವಾ ಕನಿಷ್ಟ ಪರಿಚಯವನ್ನಾದರೂ ಕಿಲುಬುಗಟ್ಟಿರುವ ಇಡೀ ಭಾರತೀಯ ಸಮಾಜಕ್ಕೆ ತಿಳಿಯಪಡಿಸುವ ಜವಾಬ್ದಾರಿಯನ್ನು ಪ್ರಜ್ಞಾವಂತರಾದವರೆಲ್ಲರೂ ಹೊತ್ತುಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಅರ್ಥವಾಯಿತು ಅಂದುಕೊಂಡಿದ್ದೇನೆ !

Sunday, March 04, 2012

ಅಂಬೇಡ್ಕರ್ ಎಂಬ ಕರಗದ ಬಂಡೆ !



  ರಘೋತ್ತಮ ಹೊ. ಬ


ಹುಶಃ ಹೀಗೆಂದರೆ ಯಾರಾದರೂ ನಗಾಡಬಹುದು. ಏನು? ಅಂಬೇಡ್ಕರರನ್ನು ಹೀಗೆಲ್ಲಾ ಹೋಲಿಸಬಹುದೇ? ಅಥವಾ ಅವರ ಸಿದ್ಧಾಂತವನ್ನು ಹೇಗೆಂದರೆ ಹಾಗೆ ಹೇಳಬಹುದೇ ಎಂದು ಯಾರಾದರೂ ಕೇಳಬಹುದು. ಆಕ್ಷೇಪ ವ್ಯಕ್ತಪಡಿಸಬಹುದು. ಆದರೆ? ಅವರ ಇತಿಹಾಸವನ್ನು, ಅವರ ಜೀವನದ ಒಂದೊಂದು ಘಟನೆಗಳನ್ನು, ಆ ಘಟನೆಗಳ ಒಂದೊಂದು ಕ್ಷಣವನ್ನು ಅವಲೋಕಿಸಿದರೆ ಹೌದಾ! ಎಂದು ಚಕಿತರಾಗಿ ನೋಡುತ್ತಿದ್ದರೆ! ಅವರೊಂದು ವಿಸ್ಮಯದ ಕರಗದ ಬಂಡೆ ಎಂಬುದು ತಿಳಿಯುತ್ತದೆ. ಈ ದೇಶದ ವಿವಿಧ ವಾದಗಳು ಎಂಬ ನದಿಗಳ ದಿಕ್ಕನ್ನೇ ಬದಲಿಸಿದ ಬಂಡೆ ಎಂಬುದು ಅರ್ಥವಾಗುತ್ತದೆ. ಅಂದಹಾಗೆ ಅಂಬೇಡ್ಕರ್‌ರವರಿಗೆ ಇದರ ಅರಿವು ಇರಲಿಲ್ಲವೇ? ಅಂದರೆ ನಾನು ಮಾಡುತ್ತಿರುವುದೆಲ್ಲ ಈ ದೇಶದ ಸ್ಥಾಪಿತ ವ್ಯವಸ್ಥೆಗೆ ವಿರುದ್ಧವಾದುದು, ಈ ದೇಶದ ಪಟ್ಟಭದ್ರಶಾಹಿಗೆ ವಿರುದ್ಧವಾದುದು. ಎಂಬುದರ ಅರಿವಿರಲಿಲ್ಲವೇ? ಖಂಡಿತ ಇತ್ತು.
ಅದನ್ನು ಅಂದರೆ ತಮ್ಮ ಈ ತಮ್ಮತನವನ್ನು ಬಿಟ್ಟುಕೊಡದ ನಡೆಯನ್ನು ಗಮನಿಸಿಯೇ ಅವರು I am like a rock which does not melt but turns the course of the river” ಎಂದಿರುವುದು. ಹೌದು, ಅಂಬೇಡ್ಕರ್ ಈ ದೇಶದ ‘‘ನದಿಗಳ’’ ದಿಕ್ಕುಗಳನ್ನೇ ಬದಲಿಸಿದ ಸರದಾರ, ಏಕಾಂಗಿ ವೀರ. ಅವರು ಆ ವಾಕ್ಯವನ್ನು ಅಂದರೆ ‘‘ನಾನೊಂದು ಕಲ್ಲು ಬಂಡೆಯಂತೆ ಕರಗುವುದಿಲ್ಲ! ಆದರೆ ನದಿಯ ದಿಕ್ಕನ್ನೇ ಬದಲಿಸುವವನು’’ ಎಂದಿರುವುದು ಅವರ ವ್ಯಕ್ತಿತ್ವವನ್ನು ಅವರು ಗಟ್ಟಿಯಾಗಿ ಕಾಪಾಡಿಕೊಂಡದ್ದಕ್ಕೆ ಅವರ ನಿಲುವನ್ನು ಅವರು ಬದಲಿಸದ್ದಕ್ಕೆ.
ಅಂದಹಾಗೆ ಅಂಬೇಡ್ಕರ್‌ರವರು ಈ ಮಾತನ್ನು ಹೇಳಿದ್ದು ಅವರು ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಿದ್ದೂ ಆ ಪಕ್ಷದ ಸದಸ್ಯರಾಗದೇ ಹಾಗೆ ಉಳಿದುಕೊಂಡದ್ದಕ್ಕೆ. ಆದರೆ ‘‘ನದಿಯ ದಿಕ್ಕನ್ನೇ ಬದಲಿಸಿದೆ’’ ಎಂಬ ಅವರ ಬಾಯಿಯಿಂದ ಹೊರಟ ಆ ಮಾತು? ಭಾರತದ ಇತಿಹಾಸದಲ್ಲೇ ಅವರು ಆಡಿದ ಪ್ರಮುಖ ಪಾತ್ರದ ಬಗ್ಗೆ, ಹಾಗೆ ಆಡಿಯೂ ಬೇರೆ ಪಾತ್ರಗಳ ಆಟಾ ಟೋಪದಲ್ಲಿಯೂ ಅವರು ಕಳೆದುಹೋಗದೇ ಉಳಿದುಕೊಂಡ ಬಗೆ, ಹಾಗೆ ಉಳಿದು ತನ್ನ ಜನರನ್ನು ಅಂತಹ ಇತಿಹಾಸದ ಮುಂಚೂಣಿಗೆ ತಂದ ರೀತಿಯನ್ನು ಬಿಂಬಿಸಿದಂತಿತ್ತು.
ಯಾರಿಗೆ ಗೊತ್ತಿತ್ತು? ದಲಿತರಲ್ಲಿಯೂ ಅಂಬೇಡ್ಕರ್‌ರಂತಹ ಕ್ರಾಂತಿಕಾರಿ ಹುಟ್ಟುತ್ತಾರೆಂದು? ಹುಟ್ಟಿ ಈ ದೇಶವನ್ನು ಅಲ್ಲೋಲ ಕಲ್ಲೋಲ ಮಾಡುತ್ತಾರೆಂದು? ಯಾವ ಜಡ್ಡು ಗಟ್ಟಿದ ಅಂತಹ ವ್ಯವಸ್ಥೆಯನ್ನೆ ಬುಡಮೇಲು ಗೊಳಿಸುತ್ತಾರೆಂದು? ಆದರೆ ಅಂತಹದೊಂದು ಭಾರತದ ಇತಿಹಾಸದಲ್ಲಿ 1891ರಿಂದ 1956ರ ನಡುವೆ ನಡೆದು ಹೋಗಿದೆ. ಹುಟ್ಟಿನಿಂದ ಹಿಡಿದು ಮರಣದವರೆಗೆ ಅಂಬೇಡ್ಕರ್ ಬದುಕಿದ ಬಗೆ ರೋಚಕ, ವಿಸ್ಮಯಕಾರಿ, ಕುತೂಹಲಭರಿತ. ಇದಕ್ಕಿಂತ ಹೆಚ್ಚಾಗಿ 65 ವರ್ಷಗಳ ತಮ್ಮ ತುಂಬು ಜೀವನದಲ್ಲಿ ಅವರು ಹಿಂದೂವಾದ, ಕಮ್ಯುನಿಸ್ಟ್ ವಾದ, ಸಮಾಜವಾದ, ಗಾಂಧಿವಾದ ಇತ್ಯಾದಿ ನದಿಗಳಲ್ಲಿ ಕರಗಲೇ ಇಲ್ಲ. ಬದಲಿಗೆ ಅಂತಹ ನದಿಗಳು ಅಂಬೇಡ್ಕರ್‌ರನ್ನು ಕೊಚ್ಚಿ ಕೊಂಡು ಹೋಗಲು, ಕರಗಿಸಲು ಪ್ರಯತ್ನಿಸಿದವಾದರೂ ಅವುಗಳಿಗೆ ಅದುಸಾಧ್ಯವಾಗಲೇಇಲ್ಲ
ಯಾಕೆಂದರೆ ಅವರೇ ಹೇಳಿಕೊಂಡಿರುವ ಹಾಗೆ ಅವರು ಕರಗದ ಬಂಡೆ! ಬೇಕಿದ್ದರೆ ‘ನದಿ’ ಆ ‘ಬಂಡೆ’ಯನ್ನು ನೋಡಿ ಕೋಪದಿಂದ ಮತ್ತಷ್ಟು ಉಕ್ಕಿ ಹರಿದಿರಬಹುದೇ ಹೊರತು ಅದನ್ನು ಮುಳುಗಿಸಲು ಅವುಗಳ ಕೈಯಲ್ಲಿ ಸಾಧ್ಯವಾಗಲಿಲ್ಲ. ಹಾಗಿದ್ದರೆ ಆ ನದಿಗಳು ಆಡಿರುವ ಪಾತ್ರ? ಮೊಟ್ಟಮೊದಲಿಗೆ ನಾವು ‘ಹಿಂದೂ ನದಿ’ಯ ಬಗ್ಗೆ ಹೇಳಲೇ ಬೇಕು. ‘ಹಿಂದೂ’ ಬಹುಶಃ ಅಂತಹ ‘ನದಿ’ಯೇ ಇಲ್ಲ ಎಂದು ಅಂಬೇಡ್ಕರರು ಒಂದೆಡೆ ಹೇಳುತ್ತಾರೆ. ಯಾಕೆಂದರೆ ಅವರು ಹೇಳಿರುವುದು There is no Hinduism ಎಂದು.
ಹಾಗೆ ಹೇಳುವ ಮೂಲಕ ಅವರು ‘ಅದು’ ತಮ್ಮ ಹತ್ತಿರ ಸುಳಿಯದ ಹಾಗೆ ತಮ್ಮ ಸುತ್ತಲಿನ ಇತರೆ ಬಂಡೆಗಳನ್ನು ಸೋಕದ ಹಾಗೆ ಬದುಕಿದ್ದಾರೆ. ಅದೂ ಎಂತಹ ಬದುಕು? ಅಂತಹ ಬದುಕನ್ನು ಅಂಬೇಡ್ಕರರು ಆ ಕಾಲದಲ್ಲಿ ಬದುಕಿದ್ದರೆ? ಎಂಬುದೇ ಒಂದು ರೋಚಕ, ವಿಸ್ಮಯಕಾರಿ ಸಂಶೋಧನೆಗೆ ಸರಕಾಗುತ್ತದೆ. ಬಹುಶಃ ಅಂಬೇಡ್ಕರ್‌ರ ಬದುಕಿನ ಅಂತಹ ಒಂದು ಸಮಗ್ರ ಸಂಶೋಧನೆ ಏನಾ ದರೂ ನಡೆದು ಅದು ಬರಹದ ರೂಪದಲ್ಲಿ ದಾಖಲಾದರೆ ಹಿಂದೂ ಧರ್ಮ ಈ ಕಾಲಕ್ಕೆ ರಿಪೇರಿ ಆಗಲು ಖಂಡಿತ ಸಾಧ್ಯವಿಲ್ಲ! ಅಷ್ಟೊಂದು ಪ್ರಬಲ ಪ್ರತಿರೋಧವನ್ನು ಒಡ್ಡಿದ್ದಾರೆ ಅಂಬೇಡ್ಕರ್‌ರವರು! ಏಕೆಂದರೆ 1929ರ ಆ ಕಾಲದಲ್ಲೇ ಹಿಂದೂ ಧರ್ಮದ ಆಧಾರ ಸ್ತಂಭವಾದ ಮನುಸ್ಮೃತಿಯನ್ನು ಸುಟ್ಟವರು ಅಂಬೇಡ್ಕರ್‌ರವರು.
1935ರಲ್ಲಿ ‘‘ಹಿಂದೂವಾಗಿ ಹುಟ್ಟಿದರೂ ಹಿಂದೂವಾಗಿ ಸಾಯಲಾರೆ’’ ಎಂದು ಗುಡುಗಿದರು ಮತ್ತು ಅವರು ಹಾಗೇ ಸಾಧಿಸಿ ತೋರಿಸಿದರು ಕೂಡ! ಇವಿಷ್ಟೇ ಸಾಕು ಅಂಬೇಡ್ಕರ್‌ರನ್ನು ‘ಹಿಂದೂ’ ಎಂಬ ‘ನದಿ’ ಏಕೆ ಸೋಕಲಾಗಲಿಲ್ಲ. ಅಥವಾ ಆ ‘ಅದ್ಭುತ ಅಗ್ನಿ ಪರ್ವತ’ವನ್ನು ನೋಡಿ ಅದು ಏಕೆ ತನ್ನ ದಿಕ್ಕನ್ನೇ ಬದಲಿಸಿಕೊಂಡಿತು ಎಂಬುದಕ್ಕೆ. ಅಂದಹಾಗೆ ‘ಹಿಂದೂ ಧರ್ಮದ ಒಗಟುಗಳು’, ‘ಕ್ರಾಂತಿ ಮತ್ತು ಪ್ರತಿ ಕ್ರಾಂತಿ’, ‘ಶೂದ್ರರು ಯಾರು?’ ‘ಜಾತಿ ನಿರ್ಮೂಲನೆ’ ಇತ್ಯಾದಿ ಕೃತಿಗಳೆಂಬ ಸಿಡಿತಲೆಗಳು ಆ ‘ಅಗ್ನಿಪರ್ವತ’ದಿಂದ ಅರ್ಥಾತ್ ಬೆಂಕಿಯ ಬಂಡೆಯಿಂದ ಹೊರ ಬಿದ್ದಿವೆ. ಆದರೆ ಅವಷ್ಟೆ ಅಲ್ಲ. ಅವರ ಜೀವನದ ಪ್ರತಿಯೊಂದು ಕ್ಷಣವು ಹಿಂದೂ ಧರ್ಮದ ವಿರುದ್ಧ ನಿತ್ಯ ಸೆಣಸಿದ ಅಮೃತ ಘಳಿಗೆಗಳಂತೆ ಇವೆ. ಅಂತಹ ಅಮೃತ ಘಳಿಗೆಗಳಿಂದಲೇ ಬಾಬಾ ಸಾಹೇಬ್ ಎಂಬ ಅಮೃತ ಶಿಲೆ ಹುಟ್ಟಿರುವುದು ಎಂದರೆ ಅತಿಶಯೋಕ್ತಿಯೇನಲ್ಲ.
ಅಂಬೇಡ್ಕರ್‌ರನ್ನು ಮುಳುಗಿಸಲಾಗದೇ, ಕರಗಿಸಲಾಗದೇ ತನ್ನ ದಿಕ್ಕನ್ನೇ ಬದಲಿಸಿದ ಮತ್ತೊಂದು ನದಿಯೆಂದರೆ ಅದು ಗಾಂಧಿವಾದ. ಗಾಂಧಿವಾದ ಬಹುಶಃ ಅಂಬೇಡ್ಕರ್‌ರು ಹೇಳುವ ಹಾಗೆ ಅದು ಆ ಕಾಲದಲ್ಲೇ ಅಸ್ತಿತ್ವದಲ್ಲಿದ್ದ ವಾದ. ಅವರನ್ನು ಅಂದರೆ ಗಾಂಧೀಜಿಯ ವರನ್ನು ಇಂದ್ರ, ಚಂದ್ರ ಎಂದು ಹೊಗಳಿ ಅವರಿಂದಾಗಿಯೇ ಈ ದೇಶ ಸ್ವಾತಂತ್ರ್ಯ ಪಡೆಯಿತು ಎಂದು ವರ್ಣಿಸುವ ವಾದ ಅದು. ಅಂತಹ ವರ್ಣನೆಯನ್ನು ತೆಗಳಲು ಹೋಗುತ್ತಿಲ್ಲ. ಆದರೆ ಅಂತಹ ವಾದ ಅಂಬೇಡ್ಕರ್‌ರನ್ನು ಮುಳುಗಿಸಲಾಗಲಿಲ್ಲ, ಅಲು ಗಾಡಿಸಲು ಸಾಧ್ಯವಾಗಲಿಲ್ಲ. ಎಂಬುದನ್ನಷ್ಟೆ ಇಲ್ಲಿ ಹೇಳಲು ಬಯಸುತ್ತಿರುವುದು. ಹೌದು ಗಾಂಧಿವಾದ ಅಂಬೇಡ್ಕರ್‌ರ ವಿರುದ್ಧ ಹಿಂದೂ ವಾದದಷ್ಟೆ ಪ್ರಬಲವಾಗಿ ಅಪ್ಪಳಿಸಿದ ವಾದ.
ಒಂದರ್ಥದಲ್ಲಿ ಅವರನ್ನು ಅವರ ಜೀವನದಲ್ಲಿ ನಿರಂತರವಾಗಿ ಕಾಡಿದ ವಾದ. ಅದರ ಪ್ರವಾಹ ಮತ್ತು ಪ್ರಭಾವ ಅದೆಷ್ಟು ತೀಕ್ಷ್ಣವೆಂದರೆ ಬಹುಶಃ ಕೆಲವು ದಲಿತರು ಈಗಲೂ ಗಾಂಧಿವಾದವೆಂಬ ಆ ವಾದವನ್ನು ಅರ್ಥ ಮಾಡಿಕೊಳ್ಳಲಾಗದೇ ಒದ್ದಾಡುತ್ತಿ ದ್ದಾರೆ. ಅಷ್ಟೊಂದು ವೇಗದ್ದು, ಘಾತುಕಕಾರಿ ಯಾದದ್ದು ಗಾಂಧಿವಾದವೆಂಬ ಆ ವಾದ. ಆದರೆ ಅದೃಷ್ಟವಶಾತ್ ಅಂಬೇಡ್ಕರ್ ಅದಕ್ಕೆ ಕೊಚ್ಚಿ ಹೋಗಲಿಲ್ಲ. ಬದಲಿಗೆ ಅದರ ವಿರುದ್ಧ ಸಿಡಿದು ನಿಂತರು. ಯಾವ ಪರಿ ಎಂದರೆ ಸ್ವತಃ ಗಾಂಧೀಜಿಯೇ ತಮ್ಮ ಪ್ರಾಣಕ್ಕಾಗಿ ಅಂಬೇಡ್ಕರ್‌ರ ಬಳಿ ಭಿಕ್ಷೆ ಬೇಡುವಷ್ಟರ ಮಟ್ಟಿಗೆ! ಪ್ರಾಯಶಃ ಆ ಒಂದು ದಿನ ಅಂಬೇಡ್ಕರ್ ನಕಾರ ಸೂಚಿಸಿ ದ್ದರೆ ಗಾಂಧಿ ಇರುತ್ತಿರಲಿಲ್ಲ.
ಆದರೆ? ಅಂದರೆ ಪೂನಾ ಒಪ್ಪಂದದ ಆ ಸಂದರ್ಭದಲ್ಲಿ ಗಾಂಧೀಜೀಯವರ ಪ್ರಾಣ ಪಕ್ಷಿ ಹಾರಿ ಹೋಗಿ ದ್ದರೆ ಗಾಂಧಿವಾದ ಅಂಬೇಡ್ಕರ್‌ರನ್ನು ಮತ್ತು ಅವರ ಜನರನ್ನು ಕೊಚ್ಚಿಕೊಂಡು ಹೋಗಿರುತ್ತಿತ್ತು. ಇತಿಹಾಸದಲ್ಲಿ ಅಂಬೇಡ್ಕರ್‌ರ ಸಣ್ಣ ಕುರುಹು ಸಹ ಇರುತ್ತಿರಲಿಲ್ಲ. ಆದರೆ ಪೂನಾ ಒಪ್ಪಂದದ ಆ ಸಂಕಷ್ಟದ ಸಂದರ್ಭದಲ್ಲಿ ಅಂಬೇಡ್ಕರ್‌ರು ಗಾಂಧೀಜಿಯವರನ್ನು ಬದುಕಿಸಿದರು! ಆದರೆ ಗಾಂಧಿವಾದವನ್ನು ಸಾಯಿಸಿದರು!! ಗಾಂಧೀಜಿಯ ಬಗ್ಗೆ ಇಂದು ಯಾರು ಎಷ್ಟೇ ಮಾತನಾಡಲಿ. ಆದರೆ ಪೂನಾ ಒಪ್ಪಂದದ ಪ್ರಶ್ನೆ ಬಂದಾಗ ಅವರ ಬಾಯಿ ಬಂದ್ ಆಗುತ್ತದೆ. ಅರ್ಥಾತ್ ಗಾಂಧಿ ವಾದಕ್ಕೆ full stop ಬೀಳುತ್ತದೆ.
ಗಾಂಧಿವಾದವನ್ನು ಹೇಳಲಾಗದೇ, ಸಮರ್ಥಿಸಲಾಗದೇ ಅಂತಹವರ ವಾದ ಅಕ್ಷರಶಃ ಸಾಯುತ್ತದೆ. ಯಾಕೆಂದರೆ ಗಾಂಧೀಜಿಯನ್ನು ಮತ್ತವರ ಸಿದ್ದಾಂತಗಳನ್ನು ಇಂದ್ರ, ಚಂದ್ರ ಎಂದು ಹೊಗಳಿ ಹಾಗಿದ್ದರೆ ಅವರು ಯಾಕೆ ಆ ಬಡಪಾಯಿ ದಲಿತರ ವಿರುದ್ಧ ಅಮರಣಾಂತ ಉಪವಾಸ ಸತ್ಯಾಗ್ರಹವೆಂಬ ತಮ್ಮ ಕತ್ತಿ ಝಳಪಿಸಿದರು? ಎಂದು ಕೇಳಿದರೆ ಯಾರು ತಾನೇ ಉತ್ತರಿಸಲು ಸಾಧ್ಯ? ಉತ್ತರಿಸುವುದಿರಲಿ, ಹೌದಲ್ಲವಾ, ಗಾಂಧೀಜೀ ಹಾಗೆ ಏಕೆ ಮಾಡಿದರು? ಎಂದು ತಡವರಿಸುತ್ತಾರೆ. ತನ್ಮೂಲಕ ಆ ವಾದವನ್ನು ಹಳ್ಳ ಹಿಡಿಸುತ್ತಾರೆ.
ಒಂದರ್ಥದಲ್ಲಿ ಅಂಬೇಡ್ಕರ್ ಪೂನಾ ಒಪ್ಪಂದದಲ್ಲಿ ಸೋತು ಗೆದ್ದಿದ್ದಾರೆ. ಗಾಂಧೀಜಿ ಗೆದ್ದು ಸೋತಿದ್ದಾರೆ! ಅವರು ಸೋತಿದ್ದಾರೆ ಎಂದರೆ ಅಂಬೇಡ್ಕರ್‌ವಾದ ಗಾಂಧಿವಾದ ಎಂಬ ವಾದವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ ಎಂದರ್ಥ. ಅಥವಾ ಅದು ಮುಂದೆ ಚಲಿಸಿದೆ ಎಂದರೆ ಅಂಬೇಡ್ಕರ್ ಅದರಲ್ಲಿ ಅಂದರೆ ಗಾಂಧಿವಾದದಲ್ಲಿ ಮುಳುಗಲಿಲ್ಲ, ಕರಗಲೂ ಇಲ್ಲ. ಬೃಹತ್ ಬಂಡೆಯ ಹಾಗೆ ನಿಂತುಕೊಂಡರು ಎಂದು ಅರ್ಥ. ಅಕಸ್ಮಾತ್ ಹಾಗೆ ನಿಲ್ಲದೆ ಕೊಚ್ಚಿಕೊಂಡು ಹೋದರು ಎನ್ನುವುದಾದರೆ ಕಡೇ ಪಕ್ಷ ಗಾಂಧಿವಾದವನ್ನು ಹೊತ್ತುಕೊಂಡು ಸಾಗುತ್ತಿರುವ ಕಾಂಗ್ರೆಸ್‌ನಲ್ಲಾದರೂ ಅವರು ಸೇರಬೇಕಿತ್ತು ತಾನೇ?
ಊಹೂಂ ಅಂಬೇಡ್ಕರ್‌ರವರು ಗಾಂಧೀಜಿಯಿಂದ ಎಷ್ಟು ದೂರ ಇದ್ದರೋ ಅಷ್ಟೆ ದೂರ ಕಾಂಗ್ರೆಸ್‌ನಿಂದಲೂ ಸಹ ಇದ್ದರು. ಯಾವುದೇ ಕಾರಣಕ್ಕೂ ಆ ಪಕ್ಷದ ಸದಸ್ಯರಾಗಲಿಲ್ಲ. ಸದಸ್ಯರಿರಲಿ ಅದರ ಸಿದ್ಧಾಂತದತ್ತ ಸಹ ಕಣ್ಣೆತ್ತಿ ನೋಡಲಿಲ್ಲ. ಈ ನಿಟ್ಟಿನಲ್ಲಿ ತನ್ನ ಸಮುದಾಯವು ಸಹ ತನ್ನದೇ ಹಾದಿಯಲಿ ಸಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಬಾಬಾ ಸಾಹೇಬರು ಗಾಂಧಿ ಮತ್ತು ಕಾಂಗ್ರೆಸ್ಸನ್ನು ಕುರಿತು “what Congress and Gandhi have done to untouchables? ಎಂಬ ಬೃಹತ್ ಗ್ರಂಥವನ್ನೇ ಬರೆದರು!
ಹಾಗೆ ಬರೆದು ಅದನ್ನು ತನ್ನವರಿಗೆ ‘‘ತಾನು ಹೇಗೆ ಗಾಂಧಿವಾದದಲ್ಲಿ ಕರಗಲಿಲ್ಲ’’ ಎಂಬುದನ್ನು ವಿವರಿಸಿ ಸಾಕ್ಷಿಯಾಗಿ ಇಟ್ಟು ಹೋದರು! ಸಮಾಜವಾದ ಅಥವಾ ಕಮ್ಯುನಿಸ್ಟ್‌ವಾದ ಬಹುಶಃ ಅಂಬೇಡ್ಕರ್‌ರನ್ನು ಮುಳುಗಿಸಲು ಬಂದ ಮತ್ತೊಂದು ವಾದ. ಕಾರ್ಲ್‌ಮಾರ್ಕ್ಸ್, ಲೆನಿನ್, ಮಾವೋ ಇತ್ಯಾದಿಗಳು ಇದರ ಪ್ರತಿಪಾದಕರಿರಬಹುದು. ಆದರೆ ಭಾರತದಲ್ಲಿ ಇದರ ಹೊಣೆ ಹೊತ್ತವರು ಬ್ರಾಹ್ಮಣರು! ಅಕ್ಷರಶಃ ಮಾರ್ಕ್ಸ್‌ವಾದ ದುಡಿಯುವ ವರ್ಗಗಳ ಬಡವರ ಪರ ಇತ್ತಾದರೂ ಅದು ಭಾರತದ ಕೆಳ ಜಾತಿಗಳ ಪರ ಇರಲಿಲ್ಲ! ಯಾಕೆಂದರೆ ಮಾರ್ಕ್ಸ್‌ಗೆ ಜಾತಿ ಗೊತ್ತಿರಲಿಲ್ಲವಲ್ಲ! ಹಾಗಂತ ಆತ ‘ಸಮಾಜವಾದ’ ಎಂಬ ಆ ಅಡುಗೆ ಮಾಡಿದ್ದು ಕೂಡ ಜಾತಿಪೀಡಿತ ಭಾರತಕ್ಕಲ್ಲ. ಪಾಶ್ಚಿಮಾತ್ಯ ಮತ್ತಿತರ ರಾಷ್ಟ್ರಗಳಿಗಷ್ಟೆ.
ಈ ನಿಟ್ಟಿನಲ್ಲಿ ಅದು ಭಾರತಕ್ಕೆ ಕಾಲಿಟ್ಟಿತ್ತಾದರೂ ಅಂಬೇಡ್ಕರ್ ಅದರ ಪ್ರಭಾವಕ್ಕೆ ಒಳಗಾಗಲಿಲ್ಲ. ಯಾಕೆಂದರೆ ಅವರಿಗೆ ಗೊತ್ತಿತ್ತು. ಜಾತಿ ತಾರತಮ್ಯಕ್ಕೆ ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲ ಎಂಬುದು. ಒಟ್ಟಿನಲ್ಲಿ ದಲಿತರ ಸಮಸ್ಯೆಗಳಿಗೆ ಮೇಲ್ನೋಟಕ್ಕೆ ಮಾರ್ಕ್ಸ್‌ವಾದದಲ್ಲಿ ಉತ್ತರ ಸಿಗುತ್ತದೆ ಎಂದೆನಿಸಿದರೂ ವಾಸ್ತವದಲ್ಲಿ ಅದು ಹಿಂದೂಗಳ ಕೈಗೆ ವರ್ಗ ಹೋರಾಟದ ಹೆಸರಿನಲ್ಲಿ ಸಿಗುವ ಮತ್ತೊಂದು ಶೋಷಣೆಯ ಅಸ್ತ್ರವೆಂಬುದು ಅಂಬೇಡ್ಕರ್‌ರಿಗೆ ಚೆನ್ನಾಗಿ ತಿಳಿದಿತ್ತು. ಆ ಕಾರಣಕ್ಕೆ ಅವರು ಮಾರ್ಕ್ಸ್‌ವಾದ ಅಥವಾ ಸಮಾಜವಾದದ ಪ್ರವಾಹಕ್ಕೆ ಕೊಚ್ಚಿ ಹೋಗಲಿಲ್ಲ. ಬದಲಿಗೆ ಅದಕ್ಕೂ ಕೂಡ ‘‘ಬುದ್ಧ ಅಥವಾ ಕಾರ್ಲ್ಸ್‌ಮಾರ್ಕ್ಸ್’’ ಕೃತಿಯ ಮೂಲಕ ಒಂದು ಸವಾಲೆಸೆದರು.
ತನ್ಮೂಲಕ ದಲಿತರು ಮಾರ್ಕ್ಸ್‌ವಾದ ಬಲೆಯೊಳಗೆ ಬೀಳದ ಹಾಗೆ ನೋಡಿಕೊಂಡರು. ಅಂಬೇಡ್ಕರ್‌ರನ್ನು ಹಾದುಹೋದ ಮತ್ತೊಂದು ವಾದ ಹಿಂಸಾವಾದ. ಅದನ್ನು ಫ್ಯಾಸಿಸಂ ಎಂದಾದರೂ ಎನ್ನಿ, ನಕ್ಸಲಿಸಂ ಎಂದಾದರೂ ಎನ್ನಿ ಅಥವಾ ಇನ್ಯಾವುದೇ ಹೆಸರಿನಿಂದಾದರೂ ಕರೆಯಿರಿ. ಒಟ್ಟಿನಲ್ಲಿ ಹಿಂಸೆಯ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ವಾದಿಸುವ ವಾದವದು. ‘‘ಬಂದೂಕಿನ ನಳಿಕೆಯ ಮೂಲಕ ಅಧಿಕಾರ’’ ಎಂಬ ಸಿದ್ಧಾಂತವದು. ನಿಜ, ದಲಿತರ ಎಲ್ಲಾ ಸಮಸ್ಯೆಗಳಿಗೂ ಇದರಲ್ಲಿ ಪರಿಹಾರವಿದೆ. ಹಿಂದೂಗಳ ದೌರ್ಜನ್ಯಕ್ಕೆ ದಬ್ಬಾಳಿಕೆಗೆ ಹಿಂಸೆಯೇ ಉತ್ತರ ಎಂದೆನಿಸುತ್ತದೆ. ಆದರೆ? ಒಮ್ಮೆ ದಲಿತರು ಬಂದೂಕು ಹಿಡಿದರೆ ಹಿಂದೂಗಳು ಸುಮ್ಮನಿರುತ್ತಾರೆಯೇ? ಅವರು Government Police ಮೂಲಕ ದಲಿತರ ಅಂತಹ ಬಂದೂಕನ್ನು ಬಂದ್ ಮಾಡಿಸುತ್ತಾರಷ್ಟೆ.
ಸಾಲದಕ್ಕೆ ದಲಿತರನ್ನೇನೂ ಬರೀ ಹಿಂಸೆಯ ಮೂಲಕವೇ ಈ ಸ್ಥಿತಿಗೆ ತಂದಿದ್ದಲ್ಲವಲ್ಲ. ಬದಲಿಗೆ ‘ಶಾಸ್ತ್ರ’ಗಳ ಮೂಲಕ, ಆ ‘ಶಾಸ್ತ್ರಗಳನ್ನು ಅದರ ವಿಧಿಗಳನ್ನು ಹೇಳುವುದರ ಮೂಲಕ, ಅವರನ್ನು ಅಕ್ಷರ, ಆಯುಧ ಇತ್ಯಾದಿ ಬದುಕಿನ ಆವಶ್ಯಕ ಅಂಶಗಳಿಂದ ದೂರವಿರಿಸಿ ನಿಷೇಧ ಹೇರಿದ್ದರಿಂದಷ್ಟೆ ಅಸ್ಪಶ್ಯತೆ ಬೆಳೆದಿದ್ದು. ಹೀಗಿರುವಾಗ ಅಂಬೇಡ್ಕರ್‌ರು ಅಂತಹ ಶಾಸ್ತ್ರಗಳನ್ನು, ಆ ಶಾಸ್ತ್ರಗಳನ್ನು ಬರೆಯುವ ಶಾಸನ ಸಭೆಗಳ ಸ್ಥಾನಗಳತ್ತ ಕಣ್ಣಿಟ್ಟರೆ ಹೊರತು ಸುಮ್ಮನೆ ಬಂದೂಕು ಹಿಡಿದು ಬೀದಿಯಲ್ಲಿ ನಿಂತು ರಕ್ತ ಚೆಲ್ಲುವುದರತ್ತಲ್ಲ. ಅಂತಿಮವಾಗಿ ಇದು“Budha and his Dhamma” ಕೃತಿಯ ಮೂಲಕ ಬಾಣ ಬಿಟ್ಟ ಅವರು ‘‘ದಲಿತರ ಸಮಸ್ಯೆಗಳಿಗೆ ಅಹಿಂಸಾವಾದಿ ಬುದ್ಧನಲ್ಲಿ ಪರಿಹಾರವಿದೆ’’ ಎಂದು ತಿಳಿಸಿ ಹಿಂಸಾವಾದದಲ್ಲಿ ತಾವು ಮುಳುಗುವುದನ್ನು ಅಥವಾ ಕರಗಿ ಹೋಗುವುದನ್ನು ತಪ್ಪಿಸಿಕೊಂಡರು.
ಒಟ್ಟಾರೆ ಹಿಂಸಾವಾದಕ್ಕೂ ಮೇಲೆ ಹೇಳಿದ ಉಳಿದ ವಾದಗಳಿಗೆ ಆದ ಗತಿಯನ್ನೇ ಕಾಣಿಸಿದರು! ಹಾಗಿದ್ದರೆ ಅಂಬೇಡ್ಕರ್ ಅದೆಂತಹ ವಾದಿ? ಅವರು ಅಪ್ಪಟ ಪ್ರಜಾಪ್ರಭುತ್ವವಾದಿ. ಪ್ರಜಾಪ್ರಭುತ್ವದ ಮಾರ್ಗದಿಂದಷ್ಟೆ ಅವರು ನ್ಯಾಯ ಪಡೆಯಬಹುದೆಂದರಿತ್ತಿದ್ದವರು. ಅದಕ್ಕಾಗಿ ಅವರು ತಮ್ಮ ಜೀವನದುದ್ದಕ್ಕೂ ಗೆಲ್ಲಲಿ ಸೋಲಲಿ ರಾಜಕೀಯವನ್ನೇ ಮಾಡುತ್ತಾ ಬಂದರು. "Political power is the master key through which you can unlock all doors of progress” ಎಂದು ತನ್ನ ಜನರಿಗೆ ನಿರಂತರ ಪಾಠ ಹೇಳುತ್ತಾ ಬಂದರು. ಮತ್ತು ಹಾಗೆಯೇ ಅಂತಹ ಪಾಠವನ್ನು ಇಡೀ ದೇಶಕ್ಕೆ ಹೇಳುವ ಅವಕಾಶ ಪಡೆದು ‘‘ಸಂವಿಧಾನ ಶಿಲ್ಪಿ’’ ಎನಿಸಿಕೊಂಡರು.
ಒಮ್ಮೆ ಅವರು ಸಂವಿಧಾನ ಶಿಲ್ಪಿ ಎನಿಸಿಕೊಂಡ ಮೇಲೆ, ಮೇಲೆ ಹೇಳಿದ ಹಿಂದೂವಾದ, ಗಾಂಧಿವಾದ, ಸಮಾಜವಾದ, ಹಿಂಸಾವಾದ ಇತ್ಯಾದಿ ವಾದಗಳು ಅವರ ಬಳಿ ಸುಳಿಯಲು ಸಾಧ್ಯವೇ? ಅವರು ಅದರಲ್ಲಿ ಕರಗಿ ಹೋಗಲು ಸಾಧ್ಯವೇ? ಖಂಡಿತ ಅಸಾಧ್ಯ. ಬದಲಿಗೆ ಅಂಬೇಡ್ಕರ್‌ರು ಹಾಗೆ ಬಂದ ಎಲ್ಲ ನದಿಗಳ ದಿಕ್ಕನ್ನೇ ಬದಲಿಸಿ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡರು. ಸ್ವಂತಿಕೆ ಎಂದ ಮೇಲೆ ಅವರ ಹೆಸರು ಆ ಸ್ವಂತಿಕೆಯ ವಾದಕ್ಕೆ ಬರಲೇ ಬೇಕಲ್ಲವೇ? ಹೌದು, ಅಂಬೇಡ್ಕರ್‌ರವರು ತಮ್ಮದೇ ಹೆಸರಿನ ಅಂಬೇಡ್ಕರ್‌ವಾದ ವಾದರು. ಈ ಜಗತ್ತಿಗೆ ತಾನೇ ಒಂದು ವಿಭಿನ್ನ ಮಾದರಿ ಎಂದು ತೋರಿಸಿಕೊಟ್ಟರು. ಆ ಮೂಲಕ ತಾನೇಕೆ ಕರಗದೇ ಆ ಎಲ್ಲಾ ನದಿಗಳ ದಿಕ್ಕನ್ನೇ ಬದಲಿಸಿ ತನ್ನ ಸ್ವಂತಿಕೆಯನ್ನು ಕಾಪಾಡಿಕೊಂಡೆ ಎಂದು ಇಡೀ ಜಗತ್ತಿಗೆ ಸಾರಿ ಹೇಳಿದರು.
                                                                                    

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.