Showing posts with label ಮುಸ್ಲಿಂ. Show all posts
Showing posts with label ಮುಸ್ಲಿಂ. Show all posts

Friday, January 04, 2013

ಮೋದಿಗೆ ಉತ್ತರ ಉವೈಸಿಯಲ್ಲ ...


ಬಶೀರ್ ಬಿ.ಎಂ.
ವಾರ್ತಾಭಾರತಿ ದಿನಪತ್ರಿಕೆಯ ಶುಕ್ರವಾರದ ಸಂಚಿಕೆಯ ಸಂಪಾದಕೀಯ
ಖಾಲಿ ಮಡಕೆಯೊಳಗೆ ಒಂದು ಸಣ್ಣ ಕಲ್ಲು ಹಾಕಿದರೂ ಅದು ಭಾರೀ ಸದ್ದು ಮಾಡುತ್ತದೆ. ರಾಜಕಾರಣಿಗಳಿಗೆ ಇದು ಚೆನ್ನಾಗಿ ಅನ್ವಯಿಸುತ್ತದೆ. ಉದ್ವಿಗ್ನಕಾರಿ, ಪ್ರಚೋದನ ಕಾರಿ ಭಾಷಣ ಮಾಡುವವರನ್ನೆಲ್ಲ ನಾವು ಈ ಖಾಲಿ ಮಡಕೆಗಳಿಗೆ ಹೋಲಿಸಬಹುದಾಗಿದೆ. ಇಂತಹ ಖಾಲಿಗಳೇ ಈ ದೇಶವನ್ನು ಅವನತಿಯೆಡೆಗೆ ನಡೆಸುತ್ತಾ ಬಂದಿದ್ದಾರೆ. ಪ್ರವೀಣ್ ತೊಗಾಡಿಯಾರಿಂದ ಹಿಡಿದು, ವರುಣ್ ಗಾಂಧಿಯವರ ವರೆಗೆ, ಇಂತಹ ಪ್ರಚೋದನಾಕಾರಿ ಭಾಷಣಗಳಿಂದ ಈ ದೇಶಕ್ಕಾದ ನಷ್ಟ ಅಷ್ಟಿಷ್ಟಲ್ಲ. ಇವರ ಭಾಷಣದಲ್ಲಿ ಅದೇನೋ ಇದೆ ಜನ ಹುಚ್ಚೆದ್ದು ಚಪ್ಪಾಳೆ ತಟ್ಟುತ್ತಾರೆ. ಅಮರೇರಿದವರಂತೆ ವರ್ತಿಸು ತ್ತಾರೆ. ಆದರೆ ಏರಿದ ಅಮಲು ಇಳಿದಾಗ, ಎಲ್ಲವೂ ಮುಗಿದಿರುತ್ತದೆ. ಇಂತಹ ಪ್ರಚೋದನಕಾರಿ ಭಾಷಣಗಳ ಮೂಲಕವೇ ದೇಶದಲ್ಲಿ ಹೆಚ್ಚಿನ ಕೋಮುಗಲಭೆಗಳು ಸಂಭವಿಸಿವೆ. ಗುಜರಾತ್ ಗಲಭೆಗೆ ಮುನ್ನ, ಪ್ರವೀಣ್ ತೊಗಾಡಿಯಾ ಮಾಡಿದ ಭಾಷಣ ಅಲ್ಲಿನ ಜನರನ್ನು ಹುಚ್ಚರನ್ನಾಗಿ ಮಾಡಿತು. ಮುಂದೆ ಅದು ಭಾರೀ ಕೋಮುಗಲಭೆಗಳಿಗೆ ಕಾರಣವಾಯಿತು. ಮುಂಬಯಿ ಗಲಭೆಯಿಂದ ಹಿಡಿದು ಸುರತ್ಕಲ್ ಗಲಭೆಗಳವರೆಗೆ ನಾವು ಅವಲೋಕಿಸುತ್ತಾ ಬಂದರೆ, ಖಾಲಿ ಮಡಕೆಗಳ ಪ್ರಚೋದನಕಾರಿ ಭಾಷಣಗಳೇ ಜನರನ್ನು ಹಾದಿ ತಪ್ಪಿಸಿದವು. ಹಿಂಸೆಗಳಿಗೆ ಕಾರಣವಾದವು. ರಾಜದಲ್ಲಿ ಪ್ರಮೋದ್ ಮುತಾಲಿಕ್, ಜಗದೀಶ್ ಕಾರಂತರಂತಹವರು ನಾಯಕರಾದುದು, ಇಂತಹ ವಿಷಪೂರಿತ ಭಾಷಣಗಳನ್ನು ಕಕ್ಕುವ ಮೂಲಕ. ಯಾವುದೇ ಮಾರಕ ಆಯುಧಗಳಿಗಿಂತ, ಯಾವುದೇ ಮಾದಕ ದ್ರವ್ಯಗಳಿಗಿಂತ ಹೆಚ್ಚು ಅಪಾಯಕಾರಿ ಈ ಭಾಷಣಗಳು.

ಇದೀಗ ಹೈದರಾಬಾದ್‌ನಲ್ಲಿ ಶಾಸಕನೊಬ್ಬ ಇಂತಹದೇ ಭಾಷಣವನ್ನು ಮಾಡುವ ಮೂಲಕ, ತನ್ನನ್ನು ತಾನು ಮುಸ್ಲಿಮರ ನಾಯಕನಾಗಿ ಬಿಂಬಿಸಲು ಹೊರಟಿದ್ದಾನೆ. ಆತನ ಹೆಸರು ಅಕ್ಬರುದ್ದೀನ್ ಉವೈಸಿ. ಅಖಿಲ ಭಾರತ ಮಜ್ಸಿಸ್ ಎ ಇತ್ತೆಹಾದ್ ಮುಸ್ಲಿಮೀನ್(ಎಂಐಎಂ) ವರಿಷ್ಠ ಅಸಾಸುದ್ದೀನ್ ಉವೈಸಿಯವರ ಸೋದರ ಈತ. ಮೋದಿಯವರನ್ನು ಕಟುವಾಗಿ ಟೀಕಿಸುವ ನೆಪದಲ್ಲಿ, ಈತ ಪರೋಕ್ಷವಾಗಿ ತನ್ನ ಭಾಷಣದಲ್ಲಿ ಎರಡು ಸಮುದಾಯಗಳ ನಡುವೆ ಬಿರುಕು ಮೂಡಿಸುವಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ಆಡಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಪೊಲೀಸರಿಗೆ ಕೆಲವು ನಿಮಿಷ ಬಿಡುವು ಕೊಟ್ಟರೆ, ಈತ ಅದೇನೋ ಮಾಡಿ ತೋರಿಸುತಾರಂತೆ. ಈತ ಕಕ್ಕಿದ ವಿಷಕಾರಿ ಭಾಷಣ ಇದೀಗ ಯೂಟ್ಯೂಬ್‌ನಲ್ಲಿ, ಫೇಸ್‌ಬುಕ್‌ನಲ್ಲಿ ರಾರಾಜಿಸುತ್ತಿದೆ. ಈತನ ಭಾಷಣವನ್ನು ಮುಂದಿಟ್ಟುಕೊಂಡು, ಸಂಘ ಪರಿವಾರದ ಕೆಲವು ವಿಷಪೂರಿತ ಹಾವುಗಳು ಹೆಡೆ ಬಿಚ್ಚಲು ಮುಂದಾಗಿವೆೆ. ಈತನಿಗೆ ಭಾಷಣ ಮಾಡಿ ಮುಗಿಸಲು ಕೆಲವು ನಿಮಿಷಗಳು ಸಾಕಾಗಿರಬಹುದು. ಆದರೆ ಉಳಿಸಿ ಹೋದ ಪರಿಣಾಮವನ್ನು ಈ ದೇಶದ ಅಲ್ಪಸಂಖ್ಯಾತರು ವರ್ಷವಿಡೀ ಅನುಭವಿಸ ಬೇಕಾಗುತ್ತದೆ.

ಈ ದೇಶದಲ್ಲಿ ಮುಸ್ಲಿಮ್ ನಾಯಕರಿಗೆ ಮಾತನಾಡಲು ಬೇಕಾದಷ್ಟು ಮುಸ್ಲಿಮರ ಸಮಸ್ಯೆಗಳಿವೆ. ಶಿಕ್ಷಣ, ಬಡತನ, ಅನಾರೋಗ್ಯ ಸೇರಿದಂತೆ ಮುಸ್ಲಿಮರ ಅಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳು ಒಂದೋ ಎರಡೋ. ಭಾರತೀಯ ಮುಸ್ಲಿಮರನ್ನು ಸಾಚಾರ್ ಸಮಿತಿ ಆಧುನಿಕ ದಿನಗಳ ನವ ದಲಿತರು ಎಂದು ಕರೆದಿದೆ. ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕ ವಾಗಿ ಮೇಲೆತ್ತಲು ಮುಸ್ಲಿಮ್ ನಾಯಕರ ಪಾತ್ರ ಬಹುದೊಡ್ಡದಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ಎಂಬ ಖಾತೆಯಲ್ಲಿ ಎಂಎಲ್‌ಎ, ಎಂಪಿಗಳಾದ ನಾಯಕರು ಬೀದಿಗಿಳಿದು ಹೋರಾಟ ಮಾಡಿದ್ದಿದ್ದರೆ, ತಮ್ಮ ಸಮುದಾಯದ ಏಳಿಗೆಗಾಗಿ ತನು ಮನ ಧನವನ್ನು ಮೀಸಲಿಟ್ಟು ಕೆಲಸ ಮಾಡಿದ್ದರೆ ದೇಶದ ಮುಸ್ಲಿಮರ ಸ್ಥಿತಿ ಈ ರೀತಿ ದಯನೀಯವಾಗುತ್ತಿರಲಿಲ್ಲ. ಮೋದಿಯ ವರಂಥವರು ಬಾಲ ಬಿಚ್ಚುವುದಕ್ಕೂ ಧೈರ್ಯ ಮಾಡುತ್ತಿರಲಿಲ್ಲ. ಆದರೆ ಇಂದು ಮುಸ್ಲಿಮ್ ನಾಯಕರೇ ಮುಸ್ಲಿಮರ ಬೆನ್ನಿಗೆ ಚೂರಿ ಹಾಕುತ್ತಿರುವುದರಿಂದ, ಅವರ ಸ್ಥಿತಿ ಹೃದಯವಿದ್ರಾವಕವಾಗಿದೆ. ಉವೈಸಿ ಸಾರ್ವಜನಿಕವಾಗಿ ಮೋದಿಯವ ರನ್ನು ಟೀಕಿಸುವ ಮೊದಲು, ತಾನು ಮುಸ್ಲಿಮರಿಗಾಗಿ, ಮುಸ್ಲಿಮರ ಅಭಿವೃದ್ಧಿಗಾಗಿ ಏನನ್ನು ಮಾಡಿದ್ದೇನೆ ಎನ್ನುವುದನ್ನು ಹೇಳಬೇಕಾಗಿತ್ತು. ಇತರ ಜಾತಿ, ಧರ್ಮಗಳ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟುವುದರಿಂದ, ಮುಸ್ಲಿಮರಿಗೆ ಯಾವುದೇ ಪ್ರಯೋಜನ ವಾಗುವುದಿಲ್ಲ. ಅದರಿಂದ ಅವರು ಇನ್ನಷ್ಟು ಅನ್ಯಾಯಕ್ಕೊಳಗಾಗಬೇಕಾಗುತ್ತದೆ. ಉವೈಸಿಯ ಉದ್ವಿಗ್ನಕಾರಿ ಭಾಷಣವು ಪರೋಕ್ಷವಾಗಿ ಮೋದಿ, ಪ್ರಮೋದ್ ಮುತಾಲಿಕ್, ಪ್ರವೀಣ್ ತೊಗಾಡಿಯಾಗಳನ್ನು ಸಮರ್ಥಿಸಿ ದಂತಾಗುತ್ತದೆ. ಒಂದು ರೀತಿಯಲ್ಲಿ ಉವೈಸಿ ಭಾಷಣದಿಂದ ಸಂಘಪರಿವಾರದ ಮಂದಿ ಸಂತೋಷದಿಂದ ಕುಣಿದಾಡಿದ್ದಾರೆ. ಈ ಭಾಷಣದೆಡೆಗೆ ಬೊಟ್ಟು ಮಾಡಿ, ಕೋಮುವಾದವನ್ನು ಹರಡಲು ಇವರಿಗೆ ಪರವಾನಿಗೆ ಸಿಕ್ಕಿದಂತಾಗಿದೆ. ಮುಸ್ಲಿಮರ ಕುರಿತಂತೆ ಯಾವುದೇ ಅಭಿವೃದ್ಧಿಯ ಮುನ್ನೋಟವಿಲ್ಲದ ಉವೈಸಿಯಂತಹವರು, ಮುಸ್ಲಿಮ್ ಸಮುದಾಯದ ನಡುವೆ ಆತ್ಮವಿಶ್ವಾಸ ತುಂಬುವ ಬದಲು ಅವರನ್ನು ಇನ್ನಷ್ಟು ಅನ್ಯಾಯದೆಡೆಗೆ ತಳ್ಳಿದ್ದಾರೆ. ಅಕ್ಬರುದ್ದೀನ್ ಉವೈಸಿ ಒಬ್ಬ ವಿಧಾನಸಭಾ ಶಾಸಕ. ಅವರಿಗೆ ಅವರದೇ ಜವಾಬ್ದಾರಿಗಳಿವೆ. ಹೊಣೆಗಾರಿಕೆಗಳಿವೆ. ಆದರೆ ಅದನ್ನು ಮರೆತು, ಜನರನ್ನು ಆಕರ್ಷಿಸಲು ಸಾರ್ವಜನಿಕವಾಗಿ ಉದ್ವಿಗ್ನಕಾರಿ ಮಾತನಾಡಿದುದು ಅಕ್ಷಮ್ಯ ಅಪರಾಧ. ಅವರ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.

ಮೋದಿಯವ ರಂತಹ ಕೋಮುವಾದಿನಾಯಕರಿಗೆ ಪ್ರತಿ ಕೋಮುವಾದ ಉತ್ತರವಲ್ಲ. ಬದಲಿಗೆ, ಈ ದೇಶದ ಜಾತ್ಯತೀತತೆಯನ್ನು ಗಟ್ಟಿ ಮಾಡಿಕೊಂಡು, ಹಿಂದೂ, ಮುಸ್ಲಿಮ್ ಕ್ರೈಸ್ತರನ್ನು ಒಟ್ಟುಗೂಡಿಸುವುದೇ ಮೋದಿಯ ವರಿಗೆ ಈ ದೇಶ, ಸಂವಿಧಾನ ನೀಡುವ ಪ್ರತಿ ಉತ್ತರ. ಹಾಗಾದಲ್ಲಿ ಈ ದೇಶ ಎಂದೆಂದೂ ಅಖಂಡವಾಗಿ ಉಳಿದೀತು. ಅಭಿವೃದ್ಧಿಯತ್ತ ಮುನ್ನಡೆದೀತು.

 

Monday, August 13, 2012

ದ್ವಿಜರಲ್ಲ ಇವರು ದಲಿತರು, ಎರಡೆರಡು ಸಲ ಸಾಯುವವರು !


 ಡಿ. ಉಮಾಪತಿ
 
 
ದ್ವಿಜರಲ್ಲ ಇವರು ದಲಿತರು, ಎರಡೆರಡು ಸಲ ಸಾಯುವವರು!
ಭಾರತದ ಉಚ್ಚ ಕುಲದವರು ಎರಡೆರಡು ಸಲ ಹುಟ್ಟುತ್ತಾರಂತೆ. ಒಮ್ಮೆ ತಾಯಿಯ ಬಸಿರಿನಿಂದ ಜನಿಸಿದಾಗ. ಮತ್ತೊಮ್ಮೆ ಉಪನಯನದ ವೇಳೆ ಬ್ರಹ್ಮೋಪದೇಶ ಪಡೆದು ಉಪವೀತ ಧರಿಸಿದಾಗ. ಎರಡು ಸಾರಿ ಸಾಯುವ ಕುಲಗಳೂ ಇವೆ. ಕೀಳು ಕುಲಗಳ ದಲಿತರು ವಿಶೇಷವಾಗಿ ಪಾಕಿಸ್ತಾನದ ದಲಿತರು ಎರಡೆರಡು ಬಾರಿ ಸಾಯುತ್ತಾರೆ. ಒಮ್ಮೆ ತಾಯಿಯ ಬಸಿರಿನಿಂದ ಹೊರಬಿದ್ದಾಗ. ಇನ್ನೊಮ್ಮೆ ಕಡೆಯುಸಿರೆಳೆದು ಮಣ್ಣಲ್ಲಿ ಮಣ್ಣಾದಾಗ.

ಪಾಕಿಸ್ತಾನದಿಂದ ಇಂಡಿಯಾಗೆ ಹೊರಟಿದ್ದ 130 ಹಿಂದೂಗಳನ್ನು ಪಾಕಿಸ್ತಾನಿ ಅಧಿಕಾರಿಗಳು ಉಭಯ ದೇಶಗಳ ವಾಘಾ ಗಡಿಯಲ್ಲಿ ತಡೆದು ನಿಲ್ಲಿಸಿರುವ ವರದಿಗಳಿಗೆ ವ್ಯಾಪಕ ಪ್ರಚಾರ ದೊರೆತಿದೆ. ಈ ಹಿಂದೂಗಳನ್ನು ಭಾರತಕ್ಕೆ ಹೋಗಲು ಬಿಡುವುದಿಲ್ಲ ಎಂದು ಸಿಡುಕಿರುವ ಆ ದೇಶದ ಒಳಾಡಳಿತ ಮಂತ್ರಿ ರೆಹ್ಮಾನ್ ಮಲ್ಲಿಕ್. ಹಿಂದೂಗಳ ಈ ವಲಸೆಯ ಕತೆಗಳು ಪಾಕಿಸ್ತಾನದ ಹೆಸರಿಗೆ ಮಸಿ ಬಳಿಯುವ ಹುನ್ನಾರಗಳು ಎಂದು ಗಳುಹಿದ್ದಾರೆ.

ಆದರೆ ಪಾಕಿಸ್ತಾನೀ ಮಾನವ ಹಕ್ಕುಗಳ ಆಯೋಗದ ನಿಲವು ಸತ್ಯಾಂಶವನ್ನು ಧ್ವನಿಸುವಂತಿದೆ. ಸಿಂಧ್ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಿಂದ ಧಾರ್ಮಿಕ ಅಲ್ಪಸಂಖ್ಯಾತರ ಮುಂದುವರೆದ ವಲಸೆ ಕಳವಳಕಾರಿ ಎಂದು ಬಣ್ಣಿಸಿರುವ ಆಯೋಗ ಈ ಕುರಿತು ತೀವ್ರ ಆಕ್ರೋಶ ಪ್ರಕಟಿಸಿದೆ.

ವಲಸೆ ಹೋಗುವಂತೆ ಸ್ಥಳೀಯ ಪಟ್ಟಭದ್ರ ಹಿತಗಳು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಬಲಪ್ರಯೋಗ ಮಾಡುತ್ತಿವೆ. ಈ ಪಟ್ಟಭದ್ರರ ಪೈಕಿ ಕೆಲವರು ಧಾರ್ಮಿಕ ಕಟ್ಟರ್‌ಪಂಥೀಯರು. ಉಳಿದವರು ಅಲ್ಪಸಂಖ್ಯಾತರ ಆಸ್ತಿಪಾಸ್ತಿ ಕಬಳಿಸುವ ಪಿತೂರಿಕೋರರು. ಅಲ್ಪಸಂಖ್ಯಾತ ನಾಗರಿಕರನ್ನು ಹಿಂಸೆ, ಬಲಾತ್ಕಾರ, ತಾರತಮ್ಯ ಹಾಗೂ ತರುಣಿಯರ ಬಲವಂತದ ಮತಾಂತರದ ಅಸಹ್ಯಕರ ಅತ್ಯಾಚಾರಗಳನ್ನು ತಡೆಯುವಲ್ಲಿ ಪಾಕಿಸ್ತಾನಿ ಸರ್ಕಾರ ವಿಫಲ ಆಗಿದೆ. ಈ ವೈಫಲ್ಯದ ಪ್ರತಿಬಿಂಬವೇ ಮುಸ್ಲಿಮೀತರ ನಾಗರಿಕರ ವಲಸೆ ಎಂಬುದು ಪಾಕಿಸ್ತಾನೀ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಝೋಹ್ರಾ ಯೂಸೂಫ್ ಅವರು ಶುಕ್ರವಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ.

ಇತ್ತೀಚೆಗೆ ಹಿಂದೂ ಯುವಕನೊಬ್ಬ ಇಸ್ಲಾಮ್ ಧರ್ಮಕ್ಕೆ ಮತಾಂತರ ಹೊಂದುವ ಧಾರ್ಮಿಕ ವಿಧಿ ವಿಧಾನಗಳನ್ನು ಟೆಲಿವಿಷನ್ ಚಾನೆಲ್ಲೊಂದರ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ತೋರಿಸಿದ್ದು ಅತಿ ಹೇಯ ಮತ್ತು ಅಸಮರ್ಥನೀಯ ಎಂದೂ ಝೋಹ್ರಾ ಹೇಳಿದ್ದಾರೆ.

ಇಂತಹ ಪ್ರಕರಣ ಅಥವಾ ಪ್ರಕರಣಗಳಲ್ಲಿ ಮಾತುಗಳು, ಪದಗಳು, ವಾಕ್ಯಗಳ ನಡುವೆ ಹುದುಗಿರುವ ಕ್ರೂರ ವಾಸ್ತವವೊಂದು ಉಂಟು. ಪಾಕಿಸ್ತಾನೀ ಹಿಂದೂ ಜನಸಂಖ್ಯೆಯ ಅಧಿಕತ ಅಂಕಿ ಅಂಶಗಳು ಲಭ್ಯವಿಲ್ಲ. ಒಂದು ಅಂದಾಜಿನ ಪ್ರಕಾರ ಈ ಸಂಖ್ಯೆ 40ರಿಂದ 60 ಲಕ್ಷದಷ್ಟು. ನಲವತ್ತೇ ಇರಲಿ, ಅರವತ್ತೇ ಆಗಲಿ, ಈ ಜನಸಂಖ್ಯೆಯ ಪೈಕಿ ದಲಿತರ ಪ್ರಮಾಣ ಶೇ.75ರಷ್ಟು. ಹಿಂದೂಗಳು ದಲಿತರನ್ನು ಹಿಂದೂಗಳಂತೆ ನಡೆಸಿಕೊಳ್ಳುತ್ತಿಲ್ಲ. ಆದರೂ ಒಟ್ಟಾರೆ ಲೆಕ್ಕದ ಪ್ರಶ್ನೆ ಬಂದಾಗ ದಲಿತರನ್ನು ಹಿಂದೂಗಳ ಲೆಕ್ಕದಲ್ಲೇ ಸೇರಿಸಿ ಹೇಳಲಾಗುತ್ತದೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಮಾತಾಡಿದಾಗಲೆಲ್ಲ ಕ್ರೈಸ್ತರು, ಅಹ್ಮದೀಯರು ಹಾಗೂ ಹಿಂದೂಗಳ ಪ್ರಸ್ತಾಪ ಆಗುತ್ತದೆ. ಆದರೆ ಈ ಅಲ್ಪಸಂಖ್ಯಾತರೊಳಗಡೆಯೇ ಅಲ್ಪಸಂಖ್ಯಾತರಿದ್ದಾರೆ. ಅವರು ಸಿಂಧ್ ಮತ್ತು ದಕ್ಷಿಣ ಪಂಜಾಬಿನ ಕೆಳಜಾತಿಯ ಹಿಂದೂಗಳು. ಇವರ ಸಂಖ್ಯೆ ಇಪ್ಪತ್ತು ಲಕ್ಷದಿಂದ ನಲವತ್ತು ಲಕ್ಷದವರೆಗೆ ಇದ್ದೀತು. ಸವರ್ಣೀಯ ಹಿಂದೂಗಳಿಗೆ ಇವರ ಕುರಿತು ಯಾವ ಕಾಳಜಿಯೂ ಇಲ್ಲ ಎನ್ನುತ್ತಾರೆ ಪಾಕಿಸ್ತಾನದ ನೀತಿ ನಿರ್ಧಾರಗಳ ವಿಮರ್ಶಕ ಸಿದ್ದೀಕ್ ಹುಮಾಯೂನ್.

ಪಾಕಿಸ್ತಾನದ ದಲಿತರ ಕತೆ ಪಾಕಿಸ್ತಾನದಷ್ಟೇ ಹಳೆಯದು. ಜೋಗೇಂದ್ರನಾಥ ಮಂಡಲ್ ಎಂಬ ದಲಿತ ನಾಯಕರನ್ನು ಮುಹಮ್ಮದ್ ಆಲಿ ಜಿನ್ನಾ ಪಾಕಿಸ್ತಾನದ ಪ್ರಥಮ ಕಾನೂನು ಮತ್ತು ಕಾರ್ಮಿಕ ಮಂತ್ರಿಯನ್ನಾಗಿ ಮಾಡಿದ್ದರು. ಅದೇ ಕಡೆ, ಆ ದೇಶದಲ್ಲಿ ದಲಿತರೊಬ್ಬರು ಅಂತಹ ಉನ್ನತ ಸ್ಥಾನಕ್ಕೆ ಮತ್ತೆಂದೂ ಏರಗೊಡಲಿಲ್ಲ. ಜಿನ್ನಾ ಸಾವಿನ ನಂತರ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಯಿತು. ಪೂರ್ವ ಬಂಗಾಳದಲ್ಲಿ (ಈಗಿನ ಬಾಂಗ್ಲಾ ದೇಶ) 1950 ಸುಮಾರಿನಲ್ಲಿ ಸಾವಿರಾರು ಮಂದಿ ದಲಿತರ ನರಮೇಧ ಮತ್ತು ಭಾರತಕ್ಕೆ ನಿರಾಶ್ರಿತರ ವಲಸೆಯ ಅಲೆಯನ್ನು ಕಂಡು ಹತಾಶರಾದರು ಮಂಡಲ್. 1953ರಲ್ಲಿ ಭಾರತಕ್ಕೆ ಓಡಿ ಬಂದು ಅಂದಿನ ಪಾಕ್ ಪ್ರಧಾನಿ ಲಿಯಾಕತ್ ಆಲಿ ಖಾನ್‌ಗೆ ತಮ್ಮ ರಾಜೀನಾಮೆ ಪತ್ರ ಕಳಿಸಿಕೊಟ್ಟರು. ಭಾರತಕ್ಕೆ ವಲಸೆ ಹೋಗುವ ಸುಲಭದ ದಾರಿಯನ್ನು ಸವರ್ಣೀಯರನೇಕರು ಆರಿಸಿಕೊಂಡರು. ಆದರೆ ನಿರ್ಗತಿಕ ಕೆಳಜಾತಿಗಳಿಗೆ ಅಲ್ಲಿಯೇ ಉಳಿಯದೆ ಗತ್ಯಂತರ ಇರಲಿಲ್ಲ.

1998ರಲ್ಲಿ ದಲಿತರ ಪಾಲಿನ ಶೇ.6ರಷ್ಟು ಸರ್ಕಾರಿ ಉದ್ಯೋಗ ಮೀಸಲಾತಿಯನ್ನು ಅಲ್ಪಸಂಖ್ಯಾತರ ಕೋಟಾ ಎಂದು ಬದಲಾಯಿಸಲಾಯಿತು. ಪಾಕಿಸ್ತಾನದ ಸಂಸತ್ತಿನ ಅಂದಿನ ಇಬ್ಬರು ದಲಿತ ಸದಸ್ಯರಾದ ಕ್ರಿಶನ್ ಭೀಲ್ ಮತ್ತು ಡಾ.ಮೇಘ್ವಾರ್ ಈ ಅನ್ಯಾಯಕ್ಕೆ ಅಸಹಾಯಕ ಸಾಕ್ಷಿಗಳಾದರು. ತೀಕ್ಷ್ಣಸ್ವರೂಪದ ಬಲಿಷ್ಠ ಅಲ್ಪಸಂಖ್ಯಾತ ಸಂಸದರನ್ನು ಅವರು ಎದುರಿಸದೆ ಹೋದರು. ಈ ಬೆಳವಣಿಗೆಯಿಂದಾಗಿ ಕಾನೂನಿನ ಪ್ರಕಾರ ಪಾಕಿಸ್ತಾನದ ಅಲ್ಪಸಂಖ್ಯಾತರ ಭಾಗವಾಗಿ ಕರಗಿ ಹೋದರು ದಲಿತರು. ಆದರೆ ಅಲ್ಪಸಂಖ್ಯಾತರು ದಲಿತರನ್ನು ತಮ್ಮವರು ಎಂದು ಒಪ್ಪಿಕೊಳ್ಳದೆ ಹೊರಗೇ ಇರಿಸಿದರು. ಇಬ್ಬಗೆಯ ತಾರತಮ್ಯವನ್ನು ಎದುರಿಸುವ ಇವರು ಪಾಕಿಸ್ತಾನಿ ಸಮಾಜದ ಪಾಲಿಗೆ ಅಲ್ಪಸಂಖ್ಯಾತರಾದರೆ, ಸವರ್ಣೀಯ ಹಿಂದೂ ಅಲ್ಪಸಂಖ್ಯಾತರ ಪಾಲಿಗೆ ಕೀಳು ಜಾತಿಗಳ ದಲಿತರು ಎನ್ನುತ್ತಾರೆ ಸಿದ್ದೀಕ್.

''ಹಮೇ ಭೀ ಜೀನೇ ದೋ: ಪಾಕಿಸ್ತಾನ್ ಮೇಂ ಅಛೂತ್ ಲೋಗೋಂಕೇ ಸೂರತೇಹಾಲ್'' ಪಾಕಿಸ್ತಾನಿ ದಲಿತರ ದುರ್ದೆಸೆಯ ಮೇಲೆ ಬೆಳಕು ಚೆಲ್ಲುತ್ತದೆ. ಅಲ್ಲಿನ ಕೆಳಜಾತಿಗಳ ಜನರ ನಡುವೆ ಕೆಲಸ ಮಾಡುತ್ತಿರುವ ಪಿರ್ಭು ಲಾಲ್ ಸಾತ್ಯಾನಿ ಎಂಬುವರು ಈ ಪುಸ್ತಕದ ಲೇಖಕರು. ಉರ್ದುವಿನಲ್ಲಿರುವ ಈ ಪುಸ್ತಕದ ಪ್ರಕಾಶಕ ಸಂಸ್ಥೆ ಪಾಕಿಸ್ತಾನದ ಲಾಹೋರಿನ ಎ.ಎಸ್.ಆರ್.ರಿಸೋರ್ಸ್ ಸೆಂಟರ್.

ದೇಶ ವಿಭಜನೆಯ ಸಂದರ್ಭದಲ್ಲಿ ಈಗಿನ ಪಾಕಿಸ್ತಾನ ಸೀಮೆಯಲ್ಲಿ ನೆಲೆಸಿದ್ದ ಬಹುತೇಕ ಹಿಂದುಗಳು ಭಾರತಕ್ಕೆ ವಲಸೆ ಹೋದರು. ಪಾಕಿಸ್ತಾನದಲ್ಲಿ ಉಳಿದ ಬಹುಸಂಖ್ಯಾತರು ದಲಿತರೇ ಆಗಿದ್ದರು. ವಿಭಜನೆಯ ನಂತರವೂ ಹಿಂದೂಗಳ ಭಾರತ ವಲಸೆ ನಿರಂತರ. 1965, 1971ರ ಭಾರತ- ಪಾಕ್ ಯುದ್ಧಗಳು, 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಹಾಗೂ ಭಾರತದ ನಾನಾ ಭಾಗಗಳಲ್ಲಿ ಮುಸ್ಲಿಮರ ನರಮೇಧದ ನಂತರ ಗಣನೀಯ ಸಂಖ್ಯೆಯ ಪಾಕಿಸ್ತಾನಿ ಹಿಂದೂಗಳು ಭಾರತ ವಲಸೆ ಕೈಗೊಂಡರು. ವಲಸೆಗಾರರ ಪೈಕಿ ಬಹುತೇಕರು ಹಿಂದೂ ಸವರ್ಣೀಯರು. ದೈನಂದಿನ ಹೊಟ್ಟೆ ಬಟ್ಟೆಯ ಪಾಡಿನಲ್ಲೇ ಮೂಗಿನ ಮಟ್ಟ ಮುಳುಗಿದ್ದ ದಲಿತರಿಗೆ ವಲಸೆ ಹೋಗುವಷ್ಟು ಚೈತನ್ಯ ಇರಲಿಲ್ಲ.

ಪಾಕಿಸ್ತಾನೀ ದಲಿತರ ಪೈಕಿ ಮುಕ್ಕಾಲು ಪ್ರಮಾಣ ಭೂರಹಿತ ಕಷಿ ಕಾರ್ಮಿಕರು ಮತ್ತು, ಕಸ ಗುಡಿಸುವವರು. ಕೈಗೆ ಬೀಳುವ ಕೂಲಿ ಜುಜುಬಿ ಮೊತ್ತದ್ದು. ಮೇಲ್ಜಾತಿ ಹಿಂದೂಗಳು ಮತ್ತು ಮುಸಲ್ಮಾನ ಜಮೀನುದಾರರು ಇವರಿಂದ ಬಲವಂತದ ಬಿಟ್ಟಿ ಚಾಕರಿ ಮಾಡಿಸಿಕೊಳ್ಳತ್ತಾರೆ. ಭೂಮಾಲೀಕರು ಮತ್ತು ಲೇವಾದೇವಿಗಾರರ ಸಾಲ ತೀರಿಸಲು ಜೀತದಾಳುಗಳಾಗಿ ಬದುಕು ಸವೆಸುವವರೂ ಉಂಟು. ಪ್ರತಿಭಟಿಸಿದರೆ ಇವರ ಮೇಲೆ ಸುಳ್ಳು ಕೇಸು ದಾಖಲಾಗುವುದೇ ದಿಟ. ಇವರ ದನಕರುಗಳನ್ನು ಪಾತ್ರೆ ಪಡಗಗಳನ್ನೂ ಕಿತ್ತುಕೊಂಡು ಕಿರುಕುಳ ಕೊಡುವ ಸ್ಥಳೀಯ ಸರ್ಕಾರಿ ಸಿಬ್ಬಂದಿ. ದಲಿತರು ಗುಡಿಸಿಲು ಹಾಕುವ ಜಾಗವನ್ನು ಗ್ರಾಮೀಣ ಸಿಂಧ್‌ನ ಭೂ ಮಾಫಿಯಾ ಕಬ್ಜಾ ಮಾಡುತ್ತದೆ. ಸತ್ತವರ ದಹನ ಸಂಸ್ಕಾರದ ಜಾಗಗಳೂ ಸ್ಥಳೀಯ ಮುಸ್ಲಿಮರ ಪಾಲು.

ಶಾಲೆಗಳಲ್ಲಿ ದಲಿತ ಮಕ್ಕಳು ತಾರತಮ್ಯದ ಅವಹೇಳನವನ್ನು ನಿತ್ಯ ಭರಿಸುತ್ತಾರೆ. ಮುಸ್ಲಿಂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ದಟ್ಟ ದರಿದ್ರರಾಗಿದ್ದರೂ ದಲಿತರ ಮಕ್ಕಳಿಗೆ ವಿದ್ಯಾರ್ಥಿವೇತನ ದೊರೆಯದು. ವಿದ್ಯಾರ್ಥಿ ವೇತನದ ಹಣ ಝಕಾತ್ ನಿಧಿಯಿಂದ ಬರುತ್ತದೆ. ಝಕಾತ್ ನಿಧಿಯನ್ನು ಮಸ್ಲಿಮೀತರರು ಬಳಸುವಂತಿಲ್ಲ. ಬಡತನದ ಕಾರಣ ದಲಿತರ ಮಕ್ಕಳು ಉನ್ನತ ಶಿಕ್ಷಣ ವಂಚಿತರು. ಅಪಹರಿಸಿ, ಮಾನಭಂಗ ಮಾಡಿ ಇಸ್ಲಾಮ್‌ಗೆ ಮತಾಂತರ ಮಾಡುತ್ತಾರೆಂಬ ಭಯದಿಂದ ದಲಿತರು ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ.

ಬಹುಪಾಲು ದಲಿತರಿಗೆ ರಾಷ್ಟ್ರೀಯ ಗುರುತಿನ ಚೀಟಿ ನೀಡಿಲ್ಲ. ಹೀಗಾಗಿ ಸರ್ಕಾರಿ ಅಭಿವದ್ಧಿ ಯೋಜನೆಗಳಿಗೂ ಅವರು ಅಸ್ಪಶ್ಯರು. ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಲಾಗುವ ಸರ್ಕಾರಿ ಸೌಲಭ್ಯಗಳೆಲ್ಲ ಸಂಘಟಿತರೂ ಬಲಿಷ್ಠರೂ ಆದ ಕ್ರೈಸ್ತರು ಮತ್ತು ಹಿಂದೂ ಮೇಲ್ಜಾತಿಗಳ ಮಂದಿಯ ಪಾಲು. ಬಡತನ, ನಿರಕ್ಷರತೆ ಕಾಡಿರುವ ಇವರಿಗೆ ರಾಜಕೀಯ ನಾಯಕತ್ವ ಇಲ್ಲ. ಇನ್ನು ದಲಿತ ಚಳವಳಿಗಳ ಸೊಲ್ಲು ದೂರವೇ ಉಳಿಯಿತು. ಮುಸಲ್ಮಾನರು ಮತ್ತು ಹಿಂದೂ ಮೇಲ್ಜಾತಿಗಳು ಸೂಚಿಸಿದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಮತ ಹಾಕದೆ ಹೋದರೆ ದೈಹಿಕ ಹಲ್ಲೆ ನಿಶ್ಚಿತ. ಜೊತೆಗೆ ಮನೆ ಮಠವನ್ನೂ ಖಾಲಿ ಮಾಡಬೇಕು.

ಪಾಕಿಸ್ತಾನದಲ್ಲೂ ದಲಿತರು ಸವರ್ಣೀಯ ಹಿಂದೂಗಳ ದೇವಸ್ಥಾನಗಳನ್ನು ಪ್ರವೇಶಿಸುವಂತಿಲ್ಲ. ಅವರನ್ನು ತುಳಿಯಲು ಸ್ಥಳೀಯ ಮುಸ್ಲಿಮ್ ಊಳಿಗಮಾನ್ಯ ಒಡೆಯರ ಜೊತೆಗೆ ಹಿಂದೂ ಸವರ್ಣೀಯರು ಖುಷಿಯಾಗಿ ಕೈ ಜೋಡಿಸುವವರು. ಭಾರತದ ಹಳ್ಳಿಗಾಡುಗಳಲ್ಲಿ ನಡೆಯುವಂತೆ ಪಾಕಿಸ್ತಾನದಲ್ಲೂ ಮುಸ್ಲಿಮರು ಇಲ್ಲವೇ ಸವರ್ಣೀಯ ಹಿಂದೂಗಳ ಹೊಟೆಲುಗಳಲ್ಲಿ ಪ್ರತ್ಯೇಕ ತಟ್ಟೆ ಲೋಟ ಬಳಸಬೇಕು. ತಿಂದು ಕುಡಿದ ನಂತರ ಅವುಗಳನ್ನು ತೊಳೆದಿಡಬೇಕು. ಜಡ್ಡು ಜಾಪತ್ತಾದರೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಅವರನ್ನು ಮುಟ್ಟಿ ಪರೀಕ್ಷೆ ಮಾಡುವುದಿಲ್ಲ. ಸಾರ್ವಜನಿಕ ಬಳಕೆಗೆ ಇಟ್ಟಿರುವ ಯಾವ ವಸ್ತುಗಳನ್ನೂ ಇವರು ಮುಟ್ಟುವಂತಿಲ್ಲ. ದಲಿತ ಮಹಿಳೆಯರು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಇಲ್ಲವೇ ಮತಾಂತರದ ಸರಕುಗಳು. ರೋಸಿ ಹೋದ ಹಲವು ದಲಿತರು ಸ್ವಇಚ್ಛೆಯಿಂದ ಇಸ್ಲಾಮ್ ಇಲ್ಲವೇ ಕ್ರೈಸ್ತ ಧರ್ಮೀಯರಾಗಿ ಪರಿವರ್ತನೆ ಹೊಂದಿರುವುದಾಗಿ ಹೇಳುತ್ತದೆ ಸಾತ್ಯಾನಿ ಪುಸ್ತಕ.

ಅತ್ತ ಮುಸಲ್ಮಾನರು ಇತ್ತ ತಮ್ಮವರೇ ಆಗಬೇಕಿದ್ದ ಹಿಂದೂ ಸವರ್ಣೀಯರು. . . ಇಬ್ಬರೂ ಜೀವಂತ ಕಿತ್ತು ತಿಂದು ಹಿಂಸಿಸುವ ಈ ದಲಿತರು ಹುಟ್ಟುವುದು ಒಂದೇ ಬಾರಿಯಾದರೂ ಸಾಯುವುದು ಎರಡೆರಡು ಬಾರಿ ಇಲ್ಲವೇ ಲೆಕ್ಕವಿಲ್ಲದಷ್ಟು ಬಾರಿ ಎಂದರೆ ತಪ್ಪಾದೀತೇ?
 
ಕೃಪೆ : ವಿಜಯ ಕರ್ನಾಟಕ 

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.