Showing posts with label ವಿಮರ್ಶೆ. Show all posts
Showing posts with label ವಿಮರ್ಶೆ. Show all posts

Saturday, March 09, 2013

ಕತೀ ಬರಿಯೂ ಮೊದಲ .... !

ಡಾ. ಸಿದ್ರಾಮ ಕಾರಣಿಕ

ಪೆನ್ನು-ಹಾಳೆ ಎರಡೂ ಮುಂದ ಅದಾವು. ಮಂದಿಯ ಮಾತುಗಳೂ ತಲೆಯೊಳಗ ಗುಂಯ್ಞ ಅನ್ನಾಕತ್ತಾವು. ಒಮ್ಮೊಮ್ಮೆ ಬರೀಬೇಕಾಗಿರೋದು ಏನ ಅನ್ನೋದ ಮರ್ತ ಹೋದಾಂಗ ಅನ್ನಿಸಾಕತ್ತೀತು. ನಡು ನಡುವ ನೆನಪುಗೋಳು ಹದ್ದು ಬಂದು ತಲಿ ಮ್ಯಾಲ ಕುಂತ ಕಿರುಚಿ, ಕುಕ್ಕಾಕತ್ತಿತ್ತು ! ಕತೀ ಬರೀಬೇಕು ಅನ್ನಿಸಿತು. ಹಂಗಾರ ಹೆಂಥಾ ಕತಿ ಬರಿಯೂದು ... ? ಮುಂದ ಇತ್ತಲ್ಲ ಗರಿಗರಿ ಮಡಿಕಿ ಹಾಕಿದ  ಪತ್ರಿಕೆ. ಹೆಣ್ಮಕ್ಕಳ ಮ್ಯಾಲ ಅತ್ಯಾಚಾರ ... ದಿನಕ್ಕೊಂದು ಹಿಂತಾವು ನಡಿಯಾಕ ಹತ್ತ್ಯಾವು. ಅವುನ್ನ ದಿನ್ನಾ ಓದುತ್ತ ಓದುತ್ತ ಇರುವಾಗ ಟೀವ್ಯಾಗ ಹಂಥದ್ದ ಘಟನಾ ಮರಕಳಿಸಿದ ಬಗ್ಗಿ ಸುದ್ದಿ ಬಿತ್ತರ ಆಗ್ತೇತಿ. ಇದನ್ನ ಇಟ್ಟುಕೊಂಡ ಕತಿ ಬರದರ ಹ್ಯಾಂಗ್ ? ಜ್ವಲಂತ ವಿಷಯಾನೂ ಆಗ್ತೇತಿ. ಅವಾರ್ಡ್ ಬಂದ್ರೂ ಬರಬೋದಲಾ ? ಹಂಗಾರ ಎಲ್ಲಿಂದ ಸುರು ಮಾಡ್ಲಿ ? ಹುಡುಗ-ಹುಡುಗಿ, ಕಾಲೇಜು, ಪ್ರೇಮ, ವೈರ ಹೊಡೆದಾಟ, ಅತ್ಯಾಚಾರ, ಕೊಲೆ ... ? ಇದೆಲ್ಲ ಹಳಸಲು ಸಿನೇಮಾ ಕತಿ ಹಾಂಗ ಅನ್ನಿಸ್ತೇತ್ಯಲಾ !  ಬ್ಯಾಡಾ, ಹೀಂಗ ಬರೀಬಾರದ್ ನಾ.... ಮತ್ತೇ ? ಅಪ್ಪ-ಅವ್ವ, ವಾತ್ಸಲ್ಯ ವಂಚಿತ ವಿದ್ಯಾರ್ಥಿ, ಕಾಲೇಜು, ಪ್ರೇಮ, ಹೊಸ ಬದುಕಿನ ಆಸೆ ಆನಂತರ ... ... ... ನಂಬಿಕೀ ದ್ರೋಹ ! ಇದೂ ಚರ್ವಿತ ಚರ್ವಣನ ಅನ್ನಿಸೂದಿಲ್ಲ !
ಹಂಗಾರ ಬರಿಯೂದಾದ್ರೂ ಏನ ಮತ್ತ ? ಈ ಕತೆ ಬರಿಯೋ ಗೋಜಲ ಬ್ಯಾಡಂತ ಬಿಟ್ಟ ಬಿಡ್ಲಿ.
ಆಕೀನೂ ಹೀಂಗ ಹೇಳಿದ್ಳಲಾ ? ‘ನಮ್ಮ ಬದುಕ ಕತಿ ಆಗಬಾರ್ದು. ದೋಖಾ ಅಂತ ಅಲ್ಲಾ. ಮನಿಯೊಳಗಿನ ಪರಿಸ್ಥಿತೀನ ಹಂಗ ಏತಿ. ನಂದ ಹೆಂಗಾರ ನಡಿತೇತಿ. ನೀ ಮೊದಲ ಬದುಕ ಕಟ್ಕೋ’ ಎಷ್ಟು ಸಹಜವಾಗಿ ಹೇಳಿದ್ದಳಲ್ಲ ಆಕೆ ! ಆಕೆಯ ತಪ್ಪಾದರೂ ಏನು ... ನಾನೇ ಒಂದಿಷ್ಟು ಎಡಬಿಡಂಗಿ ಥರಾ ವರ್ತಿಸಿಬಿಟ್ಟಿದ್ದೀನಲ್ಲ ! ಹೋಗ್ಲಿ...  ಆ ಸುದ್ದಿ ಈಗ್ಯಾಕ ? ಒಂದ ಕತೀ ಬರಿಬೇಕ ಅಷ್ಟ. ನಾ ಸಣ್ಣಾಂವ ಇದ್ದಾಗ ಸಾಲೀಗಿ ಹೋಗ್ತೇನ ಅಂತ ಹಟಾ ಹಿಡದ ಗೆದ್ದದ್ದು, ಹೆಂಗೋ ಏನೋ ಮಾಡಿಕೊಂಡು ಕಾಲೇಜು ಮೆಟ್ಟಿಲು ತುಳದದ್ದು... ... ಛೇ ! ಇಲ್ಲಿ ನಾ ಆತ್ಮ ಚರಿತ್ರಾ ಬರ್ಯಾಕತ್ತೇನೇನು ?
ಬ್ಯಾಡ ಬಿಡು ; ಈ ಬರಿಯೋದ ಅಂದ್ರ... ಯಾಕೋ ತ್ರಾಸಿನ ಕೆಲಸ !
ಯಾಕಂದ್ರ ನಾವ್ ಬರಿದದ್ದ ನೋಡಾವ್ರು ಇರ್ತಾರೇನೋ ಖರೆ ; ಮೆಚ್ಕೊಳ್ಳಾವ್ರೂ ಇರ್ತಾರು. ಆದ್ರ ಬರಿಯೂ ಬರಹದಾಗೂ ರಾಜಕೀ ಮಾಡಿ ಮ್ಯಾಲ-ಕೆಳಗ ಮಾಡ್ತಾರಲ್ಲ ...
ಅದಕ್ಕ ...
ಬರಿಯೋದ ಬ್ಯಾಡ ಅನ್ನಿಸ್ತೇತಿ !
ನೀವ್ ಏನಂತೀರಿ ?

Saturday, February 16, 2013

ಕನಕದಾಸರ ಹರಿಭಕ್ತಸಾರ : ವೈಚಾರಿಕ ವಿವೇಚನೆ


                      ಡಾ. ಸಿದ್ರಾಮ ಕಾರಣಿಕ
ದಾಸ ಸಾಹಿತ್ಯದ ಇತಿಹಾಸದಲ್ಲಿ ಅಖಂಡ ಪ್ರತಿಭೆಯ ಕವಿತಾಶಕ್ತಿ ಹೊಂದಿದ ಪ್ರಮುಖರು ಎಂದರೆ ಕನಕದಾಸರು. ದಾಸ ಸಾಹಿತ್ಯದ ಕೀರ್ತನೆಗಳ ಜೊತೆಗೆ ಕೀರ್ತನೇತರ ಹೃದಯಸ್ಪರ್ಷಿ ಸಾಹಿತ್ಯ ಸಂಪತ್ತನ್ನು ಸೃಷ್ಟಿಸಿ ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾದುದು ; ಅನುಪಮವಾದುದು.  ಒಂದು ಕಾಲದಲ್ಲಿ ಊರೊಂದರ ಒಡೆಯನಾಗಿ, ನಾಯಕನಾಗಿ ಬಾಳಿ ಜನಮನ್ನಣೆ ಗಳಿಸಿದ ಕನಕದಾಸರು ದೈಹಿಕ ಬಲಕ್ಕಿಂತ ಆಧ್ಯಾತ್ಮಿಕ ಬಲವೇ ಮಿಗಿಲೆಂದು ಭಾವಿಸಿ ದೈವದ ಹುಡುಕಾಟದಲ್ಲಿ ದಾಸರಾದದ್ದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.
ಸುಮಾರು 1550 ರಲ್ಲಿದ್ದ ಕನಕದಾಸರ ಬಗ್ಗೆ ಹಲವಾರು ದಂತಕತೆಗಳು, ಪವಾಡ ಕತೆಗಳು ಜನಮಾನಸದಲ್ಲಿ ಹುಟ್ಟಿಕೊಂಡಿವೆ.  ಆ ಎಲ್ಲ ಮೂಲಗಳ ಜೊತೆಗೆ ಅವರ ಸಾಹಿತ್ಯದಲ್ಲಿ ದೊರೆತ ಕೆಲವು ಅಂಶಗಳನ್ನು ಇಟ್ಟುಕೊಂಡು ಅವಿಭಾಜಿತ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಾಡ ಗ್ರಾಮದಲ್ಲಿ ಕನಕದಾಸರು ಜನಿಸಿದರು ಎಂಬುದನ್ನು ಸಂಶೋಧಕರು ಸಾದರಪಡಿಸಿದ್ದಾರೆ. ಕನಕದಾಸರ ಮೂಲ ಹೆಸರು ತಿಮ್ಮಪ್ಪ (ತಿಮ್ಮಪ್ಪಗೌಡ). ತಂದೆ, ಬೀರಗೌಡ (ಬೀರಪ್ಪ), ತಾಯಿ ಬಚ್ಚಮ್ಮ. ತಂದೆ ಬೀರಪ್ಪ ಊರಗೌಡನೂ ವಿಜಯನಗರ ಅರಸರ ಪಾಳೆಯಗಾರನೂ ಆಗಿದ್ದ ಎಂಬುದನ್ನು ಇತಿಹಾಸಕಾರರು ತಿಳಿಸುತ್ತಾರೆ. ಕನಕದಾಸರು ಬಾಲಕನಾಗಿರುವಾಗಲೇ ತಂದೆ-ತಾಯಿಯರನ್ನು ಕಳೆದುಕೊಂಡು ತಬ್ಬಲಿಯಾದರು ಎಂದು ಹೇಳಲಾಗುತ್ತದೆ.
ಕನಕದಾಸರು ಪುರಾಣ-ಶಾಸ್ತ್ರಗಳ ಜೊತೆಗೆ ಯುದ್ಧಕೌಶಲವನ್ನೂ ಕಲೆತ್ತಿದ್ದರು. ಅವರಿಗೆ ಮದುವೆಯಾಗಿ ಒಂದು ಗಂಡುಮಗುವೂ ಇತ್ತೆಂದು ಕೆಲವು ವಿದ್ವಾಂಸರು ತಿಳಿಸಿದ್ದಾರೆ.  ಹೊಲ ಊಳುವಾಗ ಸಿಕ್ಕ ಏಳು ಕೊಪ್ಪರಿಗೆ ಚಿನ್ನವನ್ನು ಜನೋಪಯೋಗಿ ಕಾರ್ಯಗಳಿಗೆ ಸದ್ವಿನಿಯೋಗ ಮಾಡಿದ ಕಾರಣ ತಿಮ್ಮಪ್ಪ ನಾಯಕ ಕನಕಪ್ಪ, ಕನಕನಾಯಕ ಎಂಬ ಹೆಸರಿಗೆ ಭಾಜನರಾದರು. ತಂದೆ-ತಾಯಿ, ಹೆಂಡತಿ-ಮಗ ಎಲ್ಲರೂ ತೀರಿಕೊಂಡ ನಂತರದಲ್ಲಿ ವೈರಾಗ್ಯದತ್ತ ವಾಲಿದ ಕನಕದಾಸರು ರಕ್ಕಸತಂಗಡಿ ಕಾಳಗದ ದುಷ್ಪರಿಣಾಮವನ್ನು ಕಣ್ಣಾರೆ ಕಂಡು ಸಂಪೂರ್ಣವಾಗಿ ವೈರಾಗ್ಯ ಹೊಂದಿದರು. ತಮ್ಮ ಕೀರ್ತನೆಗಳ ಮೂಲಕ ನಾಡನ್ನು ಸುತ್ತಿ ಜನಜಾಗರವನ್ನು ಮಾಡುತ್ತ ಕಾಗಿನೆಲೆಯ ಕೇಶವ ದೇವಾಲಯದ ಸಮೀಪ ಬದುಕನ್ನು ಕಳೆದರು ಅಲ್ಲಿ ಕನಕದಾಸರ ಸಮಾಧಿ ಇದೆ. ಕನಕದಾಸರ ಮನೆತನದವರು ಇಂದಿಗೂ ಅಲ್ಲಿ ನೆಲೆಸಿದ್ದಾರೆ.
ಕನಕದಾಸರು, ದಾಸಶ್ರೇಷ್ಟರಾಗಿ ಕೀರ್ತನೆಗಳಲ್ಲದೇ ಮುಂಡಿಗೆಗಳನ್ನೂ ರಚಿಸಿದ್ದಾರೆ. ನಳ ಚರಿತ್ರೆ, ರಾಮಧ್ಯಾನ ಚರಿತೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಎಂಬ ಕೃತಿಗಳನ್ನೂ ರಚಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಕೀರ್ತನೆಗಳ ಜೊತೆಗೆ ಕೀರ್ತನೇತರ ಸಾಹಿತ್ಯ ಕೃತಿಗಳಿಂದ ಗಮನ ಸೆಳೆಯುತ್ತಾರೆ. ಅವರ ಸಾಹಿತ್ಯಾಸಕ್ತಿ ಕೇವಲ ಬರೆಯಬೇಕು ಎಂಬುದಷ್ಟೇ ಆಗಿರಲಿಲ್ಲ ; ತಾವು ಬರೆದ ಸಾಹಿತ್ಯದಿಂದ ಜನ ಜಾಗೃತಿಯಾಗಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದರು. ಸಾಮಾಜಿಕ ಪ್ರಜ್ಞೆಯ ವಿಕಸನಕ್ಕೆ ಬೇಕಾದ ಮಾರ್ಗಗಳು ಅವರ ಸಾಹಿತ್ಯದಲ್ಲಿ ತುಂಬ ವೈಚಾರಿಕ ಪ್ರಬುದ್ಧತೆಯಿಂದ ಕಾಣಿಸಿಕೊಳ್ಳುತ್ತವೆ. ಪ್ರತಿಯೊಂದು ಕೃತಿಯಲ್ಲಿಯೂ ಕನಕದಾಸರು ಕವಿತ್ವ-ಕಲ್ಪನೆಗಳ ಜೊತೆಗೆ ವಾಸ್ತವ ನಿಲುವುಗಳನ್ನು ಪ್ರಕಟಿಸಿರುವುದು ಕಂಡು ಬರುತ್ತದೆ. ಅವರ ಭಕ್ತಿಯಿಂದ ಭಜಿಸಿದ ‘ಹರಿಭಕ್ತಿಸಾರ’ ಕೂಡ ಆ ವೈಚಾರಿಕ ಮತ್ತು ವಾಸ್ತವದ ನೆಲೆಯಲ್ಲಿಯೇ ಮೂಡಿರುವುದು ಗಮನೀಯ.
ಹರಿಭಕ್ತಿಸಾರವು ಭಾಮಿನಿ ಷಟ್ಪದಿಯಲ್ಲಿದ್ದು 111 ಪದ್ಯಗಳನ್ನು ಒಳಗೊಂಡಿದೆ. ಇದನ್ನು ಶತಕ ಗ್ರಂಥ ಎಂದೂ ಕರೆಯಲಾಗಿದೆ. ಶತಕ ಸಾಹಿತ್ಯವನ್ನು ಮುಖ್ಯವಾಗಿ ಯಾವುದಾದರೂ ಒಂದು ತತ್ವವನ್ನೋ ನೀತಿಯನ್ನೋ ಹೇಳುವುದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಇಲ್ಲಿ ನಿರ್ದಿಷ್ಟವಾದ ಕಥಾವಸ್ತು ಇಲ್ಲದಿದ್ದರೂ ಕವಿಯ ಮನೋಧರ್ಮದ ಸ್ವಾತಂತ್ರ್ಯ ಇರುತ್ತದೆ.
ಹರಿಭಕ್ತಿಸಾರದಲ್ಲಿ ಕನಕದಾಸರು ಭಕ್ತಿ, ಜ್ಞಾನ, ವೈರಾಗ್ಯ, ನೀತಿ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿದ್ದು, ಪ್ರತಿ ಪದ್ಯವೂ ‘ರಕ್ಷಿಸು ನಮ್ಮನನವರತ’ ಎಂಬುದಾಗಿ ಕೊನೆಗೊಳ್ಳುತ್ತದೆ. ತಮಗೊದಗಿದ ಎಲ್ಲ ಸಮಸ್ಯೆಗಳನ್ನು ಬದಿಗೊತ್ತಿ, ಹರಿಭಕ್ತಿಯ ಹಿರಿಮೆ-ಗರಿಮೆಗಳನ್ನು, ಆತ್ಮನ ಅನಿತ್ಯಾಭಾವ ಮತ್ತು ಅನನ್ಯವಾದ ಶರಣಾಗತಿಯನ್ನು ಇಲ್ಲಿಯ ಪದ್ಯಗಳಲ್ಲಿ ಅಳವಟ್ಟಿವೆ. ಸಾಮಾನ್ಯವಾದ ನಿಯಮದಂತೆ ಹರಿಯ ಸ್ತ್ರೋತ್ರ, ರಚನೆಯ ಉದ್ದೇಶ, ಹರಿಯ ಅವತಾರಗಳ ಕಲ್ಪನೆ, ಮನುಷ್ಯನ ನಿಸ್ಸಹಾಯಕತೆ ಮತ್ತು ಕೃತಿವಾಚಕರಿಗೆ, ಶ್ರವಣರಿಗೆ ಸಿಗುವ ಫಲಶೃತಿಗಳನ್ನು ಇಲ್ಲಿಯೂ ನಿರೂಪಿಸಲಾಗಿದೆ. ಹಾಗೆ ನಿರೂಪಿಸುತ್ತಲೇ ವ್ಯಂಗ್ಯ, ಅಣಕಗಳನ್ನೂ ಮಾಡುವ ಮೂಲಕ ವೈಚಾರಿಕ ದೃಷ್ಟಿಕೋನಕ್ಕೆ ಇಲ್ಲಿ ಎಡೆ ದೊರೆತಿದೆ.
ಹರಿಭಕ್ತಿಸಾರದ ಮೊದಲ ಹದಿನೇಳು ಪದ್ಯಗಳು ಹರಿಯ ನೆಲೆ-ನಿಲುವುಗಳನ್ನು ಹೇಳಲಾಗಿದ್ದು, ಕೊನೆಯ ಪದ್ಯವೊಂದನ್ನು ಬಿಟ್ಟರೆ ಉಳಿದೆಲ್ಲವೂ ಸಂಸ್ಕøತಭೂಯಿಷ್ಟವಾಗಿವೆ. ಇದು ಕನಕದಾಸರ ಸಂಸ್ಕøತ ಪಾಂಡಿತ್ಯವನ್ನೂ ತೋರಿಸುತ್ತದೆ. ಆನಂತರದಲ್ಲಿ ಸುರಪುರದ ಉಲ್ಲೇಖ ಕೂಡ ಬರುತ್ತದೆ.  ಇದರ ಆಧಾರದ ಮೇಲೆಯೇ ಈ ಕೃತಿ ಕನಕದಾಸರದು ಎಂದು ಸಾಬೀತಾಯಿತು. ಸುರಪುರವನ್ನು ಬಿಟ್ಟರೆ ಎಲ್ಲಿಯೂ ತಮ್ಮ ಹೆಸರನ್ನು, ವೈಯಕ್ತಿಕ ವಿಷಯಗಳನ್ನು ಕನಕದಾಸರು ಹೇಳಿಕೊಂಡಿಲ್ಲ.  ಈ ಸುರಪುರವೇ ವರಪುರ, ಬೇಲೂರು ಎಂದುಕೊಂಡ ವಿದ್ವಾಂಸರು ಕನಕದಾಸರು ಬೇಲೂರಿನಲ್ಲಿಯೇ ಈ ಕೃತಿಯನ್ನು ರಚಿಸಿರಬೇಕು ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಬೇರೆ ಕಡೆ ಇದ್ದ ಕನಕದಾಸರು ಸುರಪುರ ಚೆನ್ನಿಗರಾಯನ ಪ್ರಭಾವದಿಂದ ಈ ಉಲ್ಲೇಖವನ್ನು  ಮಾಡಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ ಎಂಬ ಮತ್ತೊಂದು ವಾದವೂ ಇದೆ.
ದಶಾವತಾರಗಳನ್ನು ಹೇಳುತ್ತಲೇ ಕೃಷ್ಣಾವತಾರವನ್ನು ಹೇಳಿ, ಭಾರ್ಗವರಾಮ (ಪರಶುರಾಮ), ಹಲಧರರಾಮ (ಬಲರಾಮ) ಮತ್ತು ದಶರಥರಾಮನಾಗಿ ಹರಿಯ ಅವತಾರವಾಗಿದೆ ಎಂದು ಹೇಳಿರುವುದು ಸಮಂಜಸವೆನಿಸುವುದಿಲ್ಲ. ಇಲ್ಲಿ ಬರುವ ಹಲಧರರಾಮ ದಶಾವತಾರಗಳಲ್ಲಿ ಬರುವುದಿಲ್ಲ. ಹಾಗೆಯೇ ಕೃಷ್ಣವತಾರದಲ್ಲಿ ಕೃಷ್ಣ ಮಾಡಿದ ಕಾರ್ಯಗಳನ್ನು ತಿಳಿದುಕೊಳ್ಳದೇ ಆತನನ್ನು ಭಜಿಸಲರಿಯದ ವಿಷಯಸುಖಿಗಳ ಬಿಟ್ಟು ರಕ್ಷಿಸು ನಮ್ಮನನವರತ ಎಂದಿರುವುದು ಕೂಡ ಸರಿಯೆನಿಸುವುದಿಲ್ಲ. ಎಲ್ಲವನ್ನೂ ಕ್ಷಮಿಸುವನು ಹರಿ ಎಂದು ಒಂದು ಕಡೆ ತಿಳಿಸುವ ಕನಕದಾಸರು ಇಲ್ಲಿ ‘ಕೆಲವರನ್ನು ಬಿಟ್ಟು’ ಎಂದದ್ದು ದ್ವಂದ್ವ ನಿಲುವನ್ನು ಸೂಚಿಸುತ್ತದೆ.
18 ರಿಂದ 23ನೇ ರವರೆಗಿನ ಪದ್ಯಗಳಲ್ಲಿ ಹರಿಭಕ್ತಿಸಾರವನ್ನು ರಚಿಸುವ ಉದ್ದೇಶಕ್ಕೆ ಹರಿಯೇ ಮಾರ್ಗದರ್ಶಕನಾಗಬೇಕು ಎಂಬ ಬೇಡಿಕೆಯಿದೆ. ‘ನೀನೆನಗೆ ತಿಳುಹು ಮತಿಯನು ಎನ್ನ ಜಿಹ್ವೆಗೆ ಮೊಳಗುವಂದಂ ನಿನ್ನ ನಾಮಾವಳಿ’ ಎಂಬ ಬೇಡಿಕೆಯೊಂದಿಗೆ ‘ವೇದಶಾಸ್ತ್ರ ಪುರಾಣ ಪುಣ್ಯದ ಹಾದಿಯನು ನಾನರಿಯೆ ತರ್ಕದ ವಾದದಲಿ ಗುರು ಹಿರಿಯರರಿಯದ ಮೂಢಮತಿ’ ತಾನು ಎಂಬುದಾಗಿ ಹೇಳಿಕೊಂಡಿದ್ದಾರೆ. ಆದರೆ ಮುಂದಿನ ಪದ್ಯದಲ್ಲಿ ‘ಬಸಿರೊಳಗೆ ಬ್ರಹ್ಮಾಂಡಕೋಟಿಯ ಪಸರಿಸಿದ ಪರಮಾತ್ಮಂ ನೀನೆಂದುಸಿರುತಿವೆ ವೇದಗಳು’ ಎಂಬುದನ್ನು ದಾಖಲಿಸಿದ್ದಾರೆ ! ವೇದಗಳು ಗೊತ್ತಿಲ್ಲ ಎಂದು ಒಂದು ಕಡೆ ಹೇಳಿದ್ದರೆ, ವೇದಗಳು ಹೀಗೆ ಉಸಿರುತ್ತಿವೆಯಲ್ಲ ಎಂದು ಅಚ್ಚರಿ ಪಡುವುದು ಸಮಂಜಸವೆನಿಸಲಾರದು.
24 ರಿಂದ 46ನೇ ಪದ್ಯಗಳವರೆಗೆ ಪುರಾಣ ಕತೆಗಳಲ್ಲಿ ನಿರೂಪಿತವಾದ ಹರಿಯ ಮಹಿಮೆಯನ್ನು ಕೊಂಡಾಡಲಾಗಿದೆ. ಆದರೆ ಇಲ್ಲಿಂದ ಮುಂದೆ ಕನಕದಾಸರ ಲೇಖನಿ ಮೊನಚು ಪಡೆಯುತ್ತದೆ. ವಾಸ್ತವದ ವಿಚಾರಗಳನ್ನು ಸಾಧ್ಯವಾದಷ್ಟುಮಟ್ಟಿಗೆ ಅವರು ನಿರೂಪಿಸಲು ಮುಂದಾಗಿದ್ದಾರೆ. ಈರೇಳು ಲೀಕದ ಹೆಬ್ಬೆಳೆಸು ಬೆಳೆವಂತೆ ಕಾರಣಿಕನಾದ ಮನ್ಮಥ ಮತ್ತು ಅದನ್ನು ಬರೆಯುತ್ತ ಹೋಗುವ ಕರಣಿಕ ಬ್ರಹ್ಮ ಹರಿಯ ಮಕ್ಕಳು, ಲಕ್ಷ್ಮಿ ಕುಲಸತಿಯಾದರೆ, ಶಾರದೆ ಸೊಸೆ. ಗಿರಿಜೆ ಸಹೋದರಿ, ಶಂಕರ ಮೈದುನ, ಸುರರೆಲ್ಲ ಕಿಂಕರರು, ಮಾಯೆಯೇ ದಾಸಿ - ಹೀಗೆ ಸಂಬಂಧಗಳ ಪರಿಚಯವನ್ನು ನೀಡುತ್ತಲೇ ‘ಉದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲ್ಲಿ ಭಾಗವತರಾದವರ ಸಲಹುವನಾಗಿ ಸಂಚರಿಸುವುದು’ ಎಂದು ತಿಳಿಸಿದ್ದು, ಹರಿಯು ತನ್ನ ಭಕ್ತರು ಅಥವಾ ತನ್ನನ್ನು ಸ್ತುತಿಸುವವರ ಹೊಟ್ಟೆ ಹೊರೆದುಕೊಳ್ಳಲು ಅಡ್ಡಾಡಿಕೊಂಡಿದ್ದಾನೆ ; ಹೊರತು ಆತನಿಗೆ ನಿರ್ದಿಷ್ಟವಾದ ಯಾವುದೇ ಕೆಲಸವಿಲ್ಲ ಎಂಬ ಧ್ವನಿ ಇರುವುದನ್ನು ಗಮನಿಸಬೇಕು.
‘ಹಗೆಯರಿಗೆ ವರವೀವರಿಬ್ಬರು
ತೆಗೆಯಲರಿಯರು ಕೊಟ್ಟ ವರಗಳ
ತೆಗೆದು ಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ’
ಎನ್ನುವಲ್ಲಿ ಶಿವ ಮತ್ತು ಬ್ರಹ್ಮ ಇಬ್ಬರೂ ¨ವರಗಳನ್ನು ನೀಡಲು ಮಾತ್ರ ಶಕ್ತರು. ವಿನಃ ಕೊಟ್ಟ ವರವು ಕಂಟಕವಾದಲ್ಲಿ ಅದನ್ನು ನಿವಾರಿಸಲು ಅರಿಯರು. ಆ ಶಕ್ತಿ ಹರಿಗೆ ಮಾತ್ರ ಉಂಟು ಎಂಬ ವ್ಯಾಖ್ಯಾನವಿದೆ. ಇದು ಶೈವ ಮತ್ತು ಬ್ರಹ್ಮ ಸಂಸ್ಕøತಿಯ ವಿರೋಧಿಯಾಗಿ ಬೆಳೆದ ಭಕ್ತಿಯುಗದ ವೈಷ್ಣವ ನಿಲುವನ್ನು ತೋರುತ್ತದೆ. ಹರಿಯನ್ನು ಇಲ್ಲಿ ಶಿವ-ಬ್ರಹ್ಮರಿಗಿಂತ ಮಿಗಿಲು ಎಂದು ಸಾರಲಾಗಿದೆ. ಧರ್ಮದ ಹೆಗ್ಗಳಿಕೆಯನ್ನು ಹೇಳಿಕೊಳ್ಳುವ ಪರಂಪರೆ ಕನಕದಾಸರನ್ನೂ ಬಿಡದಿರುವುದು ವಿಚಿತ್ರವೆನಿಸುತ್ತದೆ.
ಹರಿಯು ನಾನಾ ಅವತಾರಗಳಲ್ಲಿ ದುಷ್ಟ ಸಂಹಾರ ಮಾಡಿದ್ದನ್ನೂ ಶಿಷ್ಟ ರಕ್ಷಣೆ ಮಾಡಿದ್ದನ್ನೂ ನಿರೂಪಿಸುವ ಕನಕದಾಸರು ಮಹಾಭಾರತದಲ್ಲಿ ಕೃಷ್ಣನಾಗಿ ಮಾಡಿದ ಕುಟೀಲತನವನ್ನೂ ಹೇಳಿದ್ದಾರೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಕುಲನಾಶಕನಾಗಿ, ಕರ್ಣನ ಜನ್ಮವೃತ್ತಾಂತ ತಿಳಿದಿದ್ದರೂ ಮುಂದಿಟ್ಟುಕೊಂಡು ಕೊಲ್ಲಿಸಿ, ‘ಕೊಲ್ಲ ಬಗೆದವನಾಗಿ ನೀ ಹಗೆಯಲ್ಲಿ ಸಖ್ಯ ಬೆಳೆಸಲದು ಹಿತವಲ್ಲ’ ಎಂದು ವಿಡಂಬಿಸಿ ಕನಕದಾಸರು ಅಚ್ಚರಿ ಮೂಡಿಸುತ್ತಾರೆ.
‘ಮಗನ ಕೊಂದವನಾಳುವಂತಾ
ಸುಗಣೆಯರು ಹದಿನಾರು ಸಾವಿರ
ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ
ಬಗೆ ಬಗೆಯ ರತಿಕಲೆಗಳಲಿ ಕೂ
ರುಗುರು ನಾಟಿಸಿ ಮೆರೆದು ನೀನೀ
ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ’
ನರಕಾಸುರನನ್ನು ಕೊಂದು ಆತನ ಹದಿನಾರು ಸಾವಿರು ಹೆಂಡಿತಿಯರಿಗೆ ವಿಟನಾಗಿ ಮೆರೆದ ಎಂದು ಇಲ್ಲಿ ಹೇಳಿರುವುದು ಭಕ್ತಿ ಸ್ತುತಿಯ ಪರಾಕಾಷ್ಠತೆ ಎಂದು ಕೆಲವರು ಹೇಳಬಹುದು. ಆದರೆ ವೈಚಾರಿಕ ಬದ್ಧತೆಯುಳ್ಳ ಕನಕದಾಸರು ಇಲ್ಲಿ ಹರಿಯನ್ನು ವ್ಯಂಗ್ಯ ಮಾಡಿರುವಂತೆ ತೋರುತ್ತದೆ.
ಹರಿಯ ಅನುಗ್ರಹವೊಂದಿದ್ದರೆ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸುವ ಕನಕದಾಸರು ರಾಮಾಯಣದಲ್ಲಿ ರಾವಣನನ್ನು ಕೊಂದದ್ದು, ವಿಭೀಷಣನನ್ನು ಮಿತ್ರನಾಗಿಸಿಕೊಂಡಿದ್ದು, ಹನುಮಂತನನ್ನು ಮಗನೆಂದು ಸ್ವೀಕರಿಸಿದ್ದನ್ನು ಉಲ್ಲೇಖಿಸುತ್ತಾರೆ. ಇಡೀ ಜೀವಮಾನದಲ್ಲೆಲ್ಲ ಪಾಪಗಳನ್ನೇ ಮಾಡುತ್ತ ಬಂದ ಅಜಾಮಿಳ ಎಂಬಾತ ಸಾಯುವಾಗ ತನ್ನ ಮಗ ನಾರಾಯಣನ ಹೆಸರನ್ನೂ ಕರೆದರೂ ಹರಿ ಆತನಿಗೆ ಸದ್ಗತಿ ನೀಡಿದ ಎನ್ನುವ ಮೂಲಕ ತನ್ನ ದೈವ ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ಎಂಬುದನ್ನು ಪರಗಣಿಸುತ್ತಾರೆ. ಇದಲ್ಲದೇ, ಹೆತ್ತ ಮಗಳನ್ನು ಮದುವೆಯಾದ ಬ್ರಹ್ಮ, ಗುರುಪತ್ನಿಯ ಮೇಲ;ಎ ಕಣ್ಣು ಹಾಕಿದ ಚಂದ್ರ, ಮಾವನಿಗೆ ಕೃತಘ್ನನಾದ ಕಾಮ, ಮುನಿವರ್ಯನ ಮಡದಿಯನ್ನು ಕೆಡಿಸಿದ ಇಂದ್ರ ಮೊದಲಾದವರು ಜಗಮೀರಿದ ಹಾದರ ಮಾಡಿದರೂ ಹರಿ ಅವರಿಗೆ ಕೈವಲ್ಯ ನೀಡಿದ್ದು ಕನಕದಾಸರಿಗೆ ಅಚ್ಚರಿಯನ್ನುಂಟು ಮಾಡಿದರೂ ಅಂಥವರನ್ನೆಲ್ಲ ಎತ್ತಿ ಹಿಡಿದ ಹರಿ ನಮ್ಮನ್ನೂ ರಕ್ಷಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ. ಇಲ್ಲಿ ಗಮನೀಯವಾದ ಅಂಶವೆಂದರೆ ದೇವತೆಗಳು ಮಾಡಿದ ಹಾದರವನ್ನು ಯಾವುದೇ ಭಿಡೆಯಿಲ್ಲದೇ ಹೇಳಿದ ಪರಿ.
47 ರಿಂದ 101ನೇ ಪದ್ಯಗಳವರೆಗೆ ಮನುಷ್ಯನ ನಿಸ್ಸಹಾಯಕತೆ, ಮನುಷ್ಯ ತಾಯಿಯ ಹೊಟ್ಟೆಯಲ್ಲಿ ಮಾಂಸ-ರಕ್ತಗಳ ಮಧ್ಯ ಇದ್ದು ಇದ್ದು ಹೊರಕ್ಕೆ ಬಂದ ಸ್ಥಿತಿ, ದೇಹದ ನಶ್ವರತೆ, ಭಗವಂತನ ಕರುಣೆ, ಹರಿಯ ಶಕ್ತಿ ಮೊದಲಾದವುಗಳನ್ನೆಲ್ಲ ಹೇಳುತ್ತ ಮನುಷ್ಯನಾದವನು ಬಹಿರ್ ಆಚರಣೆಗೆ ಹೆಚ್ಚು ಮಹತ್ವ ನೀಡದೇ ಭಗವಂತನಲ್ಲಿ ಮನಸ್ಸನ್ನು ಕೇಂದ್ರೀಕರಿಸುವ ಅಗತ್ಯವಿದೆ ಎಂದು ಹೇಳುತ್ತಾರೆ.
‘ಇಲ್ಲಿಹನು ಅಲ್ಲಿಲ್ಲವೆಂಬೀ
ಸೊಲ್ಲು ಸಲ್ಲದು ಹೊರಗೊಳಗೆ ನೀ
ನಲ್ಲದಿಲ್ಲನ್ಯತ್ರವೆಂಬುದನೆಲ್ಲ ಕೆಲಕೆಲರು
ಬಲ್ಲರಿಳೆಯೊಳು ಭಾಗವತರಾ
ದೆಲ್ಲರಿಗೆ ವಂದಿಸದ ಕುಜನರಿ
ಗಿಲ್ಲ ಸದ್ಗತಿ ನೋಡು ... ...’
ಇಲ್ಲಿ ದೈವದ ನೆಲೆಗಳನ್ನು ಮೊದಲಿಗೆ ಹೇಳಿದ್ದು, ಆನಂತರದಲ್ಲಿ ಭಾಗವತರಿಗೆ ವಂದಿಸದಿದ್ದರೆ ಸದ್ಗತಿಯಿಲ್ಲ ಎಂಬ ಮಾತನ್ನು ಹೇಳಿದ್ದು ವಿಚಿತ್ರವೆನಿಸುತ್ತದೆ. ಯಾಕೆಂದರೆ ಎಂಥ ನೀಚ ಕೆಲಸ ಮಾಡಿದವರಿಗೂ ಹರಿ ಸದ್ಗತಿ ನೀಡುತ್ತಾನೆ ಎಂದು ಈ ಮೊದಲು ತಿಳಿಸಿರುವ ಕನಕದಾಸರು ಇಲ್ಲಿ ಅದಕ್ಕೆ ತದ್ವಿರುದ್ಧವಾದ ಹೇಳಿಕೆಯನ್ನು ದಾಖಲಿಸಿದ್ದಾರೆ ಎನ್ನಬೇಕಾಗುತ್ತದೆ ! ವಿರೋಧ ಮತ್ತು ಶರಣಾಗತಿ ಈ ಎರಡೂ ಪ್ರಕಾರದ ವಿಚಾರಗಳ ದ್ವಂದ್ವ ಇಡೀ ಕೃತಿಯಲ್ಲಿ ಕಂಡುಬರುವ ಅಂಶವಾಗಿದೆ.
‘ದೀನ ನಾನು, ಸಮಸ್ತ ಲೋಕಕೆ ದಾನಿ ನೀನು, ವಿಚಾರಿಸಲು ಮತಿಹೀನ ನಾನು’ ಕನಕದಾಸರು,
‘ತರಳತನದಲಿ ಕೆಲವು ದಿನದುರು
ಭರದ ಗರ್ವದಿ ಕೆಲವು ದಿನ ಮೈ
ಮರೆತು ನಿಮ್ಮಡಿಗೆರಗದಾದೆನು ವಿಷಯಕೇಳಿಯಲಿ
ನರಕಭಾಜಕನಾಗಿ ಕಾಮಾ
ತುರದಿ ಪರಧನ ಪರಸತಿಗೆ ಮನ
ಹರಿದ ಪಾಪವ ಕಳೆದು ರಕ್ಷಿಸು ...’
ಎಂಬಲ್ಲಿ ಹರೆಯದಲ್ಲಿ ವಿಷಯಕೇಳಿ, ಪರಸತಿಗೆ ಮನ ಹರಿದ ಪಾಪ, ಪರಧನದ ಆಸೆಬುರುಕತನ ಇವುಗಳಿಂದ ಆವೃತ್ತನಾಗಿ ಹರಿಯನ್ನು ಮರೆತುದ್ದಕ್ಕೆ ಪಶ್ಚಾತ್ತಾಪಪಡುತ್ತಿರುವಂತೆ ಕನಕದಾಸರು ಕಾಣಿಸುತ್ತಾರೆ. ಈ ಪದ್ಯವನ್ನು ಮೂಲ ಆಕರವನ್ನಾಗಿ ಇಟ್ಟುಕೊಂಡು ಅಧ್ಯಯನ ಮಾಡಿದರೆ ಕನಕದಾಸರ ಬದುಕಿನ ಮೇಲೆ ಹೊಸ ಬೆಳಕು ಚೆಲ್ಲಬಹುದು. ದಾಸರಾಗುವುದಕ್ಕಿಂತ ಮುಂಚಿನ ಕನಕದಾಸರ ಗುಣಾವಗುಣಗಳ ಉಲ್ಲೇಖ ಇಲ್ಲಿ ದೊರೆಯಬಲ್ಲದು. ‘ಮರೆದನಭ್ಯುದಯದಲಿ’ ಎನ್ನುವ ಮೂಲಕ ತಮ್ಮ ಪಶ್ಚಾತ್ತಾಪದ ಉರಿಯನ್ನು ತನ್ನ ದೈವದ ಮುಂದೆ ಬಿತ್ತರಿಸಿ ತನ್ನನ್ನು ಉದ್ದರಿಸಬೇಕು ಎಂದು ಆರ್ತಸ್ವರದಲ್ಲಿ ಅಂಗಲಾಚಿಸಿರುವುದು ಕೂಡ ಇದೇ ಎಳೆಯನ್ನು ತೋರುತ್ತದೆ. ಯಾವುದನ್ನೇ ಮುಚ್ಚಿಡದೆ ತಮ್ಮ ನಿಜವೃತ್ತಾಂತವನ್ನು ಹೇಳಿಕೊಂಡ ಕನಕದಾಸರು ದೈವಿಕತೆ ಮತ್ತು ವಾಸ್ತವಿಕತೆ ಮಹತ್ವ ನೀಡಿದ ಕವಿಯಾಗಿದ್ದಾರೆ.
ಭೂಮಿಯಲ್ಲಿ ನಳ, ಹರಿಶ್ಚಂದ್ರ, ಪುರುಕುತು, ಪ್ರರೂರವಸ, ಸಗರ ಮತ್ತು ಕಾರ್ತವೀರ್ಯ ಎಂಬ ಪ್ರಸಿದ್ಧ ಚಕ್ರವರ್ತಿಗಳಲ್ಲದೆ ಹಿಂದೆ ಎಷ್ಟೋ ಜನರಿದ್ದರೂ ಅವರನ್ನೆಲ್ಲ ಬಿಟ್ಟು ಭೂಮಿ, ಹರಿಯ ಬೆನ್ನು ಹತ್ತಿದ್ದಾಳೆ ಎಂದು ತಿಳಿಸುವ ಕನಕದಾಸರು ವೈಜ್ಞಾನಿಕವಾದ ವಿಚಾರವನ್ನು ಪ್ರತಿಪಾದನೆಗೆ ಯತ್ನಿಸಿದ್ದಾರೆ. ಭೂಮಿ, ಅಗ್ನಿ, ನೀರು, ವಾಯು, ಆಕಾಶಗಳೆಂಬ ಪಂಚಭೂತಗಳಿಂದ ಒಡಗೂಡಿರುವ ದೇಹವು ಪೂರ್ವಸಂಚಿತ ಫಲ ಎನ್ನುವುದು ಸರಿಯಲ್ಲ ಎಂಬುದು ಕನಕದಾಸರ ವಾದವಾಗಿದೆ. ಪಂಚಭೂತಗಳಿಂದ ಕೂಡಿ ಜನ್ಮ ತಳೆಯುವ ದೇಹದ ಹುಟ್ಟಿಗೆ ಹಿಂದಿನ ಜನ್ಮದ ಫಲ ಕಾರಣವಲ್ಲ ಎನ್ನುವ ಮೂಲಕ ವೈದಿಕ ಧರ್ಮದ ಕರ್ಮಸಿದ್ಧಾಂತವನ್ನು ಅಲ್ಲಗಳೆಯುತ್ತಾರೆ. ಆದರೆ ಹರಿಯನ್ನು ಸ್ತುತಿಸುವಾಗ ಮಾತ್ರ ಮತ್ತೇ ಮತ್ತೇ ಕರ್ಮದ ಪಾಪವ ತೊಳೆದು ಪಾವನ ಮಾಡು ಎಂದು ಅಂಗಲಾಚುತ್ತಾರೆ ! ಯಾಕೆಂದರೆ ‘ಎತ್ತಿದೆನು ನಾನಾ ಶರೀರವ’ ಎನ್ನುವಲ್ಲಿ ಪುನರ್‍ಜನ್ಮದ ಸಿದ್ಧಾಂತದಲ್ಲಿ ಅವರು ನಂಬಿಕೆ ಇಟ್ಟಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರ ಇನ್ನೂ ತಮ್ಮನ್ನು ಕಾಡುತ್ತಿರುವವು ಎಂದು ಹೇಳುವಲ್ಲಿ ದಾಸರಾದರೂ ವಿಷಯಸುಖದೆಡೆಗೆ ಒಮ್ಮೊಮ್ಮೆ ಮನಸ್ಸು ಮುಖ ಮಾಡುವುದನ್ನು ಬಿಚ್ಚಿಟ್ಟಿದ್ದಾರೆ. ಯಾಕೆಂದರೆ ಕನಕದಾಸರು ಮೊದಲು ಮದುವೆಯಾಗಿ ಮಕ್ಕಳೊಂದಿಗೆ ಬಾಳಿದವರು. ‘ನಿನ್ನಡಿಯ ಭಜಿಸದೆ ದುರುಳನಾದೆನು ಮಡದಿ ಮಕ್ಕಳ ಮೋಹದಲಿ ಸಿಲುಕುತಡಿಗೆ’ ಎನ್ನುವಲ್ಲಿ ಈ ಬಗ್ಗೆ ಸಾಕ್ಷ್ಯ ದೊರೆಯುತ್ತದೆ. ಸತ್ವ. ರಜಸ್ಸು, ತಮಸ್ಸು ಎಂಬ ಮೂರು ಗುಣಗಳು ಹರಿ, ಬ್ರಹ್ಮ, ಹರ ಎಂಬ ಮೂರ್ತಿ ಧರಿಸಿ ಸ್ಥಿತಿ, ಸೃಷ್ಟಿ, ಸಂಚಾರ ಕಾರ್ಯವನ್ನು ಮಾಡುತ್ತವೆ. ಪ್ರಳಯ ಕಾಲದಲ್ಲಿ ಈ ಮೂರೂ ಗುಣಗಳು ಭಗವಂತನಲ್ಲಿ ಲೀನವಾಗುತ್ತವೆ ಎಂದು ತಿಳಿಸುವ ಕನಕದಾಸರು ‘ನೀರ ಮೇಲನ ಗುಳ್ಳೆ, ಬಿದ್ದು ಹೋಗುವ ಕಾಯದ ಪಾಶದಲ್ಲಿ ಬದ್ಧನಾಗಬಾರದು’ ಎಂಬುದಾಗಿ ಜೀವನದ ನಶ್ವರತೆಯನ್ನು ಸಾರಿ, ಸಂಸಾರ ಬಂಧನದಲ್ಲಿ ಸಿಲುಕದೆ, ಜನ್ಮದಿಂದ ಜನ್ಮಕ್ಕೆ ಜಿಗಿಯುವ ದೇಹಕ್ಕೆ ಊರು, ಮನೆ, ಮೋಹ ಇರಬಾರದು ಎಂಬುದನ್ನು ಬೋಧಿಸುತ್ತಾರೆ. ತಾಯಿಯ ಗರ್ಭದಿಂದ (ಜರಾಯುಜ), ಮೊಟ್ಟೆಯಿಂದ (ಅಂಡಜ), ಬೆವರಿನಿಂದ (ಸ್ವೇದಜ) ಮತ್ತು ಸಸ್ಯಗಳಿಂದ (ಉಧ್ಭಿಜ್ಯ) ಎಂಬ ನಾಲ್ಕು ಪ್ರಕಾರಗಳಲ್ಲಿ ಹುಟ್ಟುವ ಚೌಷಷ್ಠ (ಅರವತ್ತ್ನಾಲ್ಕು) ಜೀವಿಗಳು ಹರಿಯ ಪ್ರೇರಣೆಯಿಂದಲೇ ಹಲವು ರೀತಿಯ ಒಳಭೇದಗಳಿಂದ ತೊಗಲು ಬೊಂಬೆಗಳಂತೆ ವರ್ತಿಸುತ್ತವೆ. ಇಲ್ಲಿ ಹರಿಯೇ ಸೂತ್ರಧಾರ ಎನ್ನುವುದನ್ನು ಕನಕದಾಸರು ಹರಿಯ ಶ್ರೇಷ್ಟತ್ವವನ್ನು ಮನಗಾಣಿಸಲು ಪ್ರಯತ್ನಿಸಿದ್ದಾರೆ.
ಮೃತ್ಯು ತನ್ನ ಬೆನ್ನ ಹಿಂದೆಯೇ ಇರುತ್ತದೆ. ಜೊತೆಗೆ ಸತ್ತ ಮೇಲೆ ಯಾರೂ ಜೊತೆಗೆ ಬರುವುದಿಲ್ಲ ಎಂಬ ದೇಹದ ನಶ್ವರತೆಯನ್ನು ಪ್ರತಿಪಾದಿಸುವ ಕನಕದಾಸರು ಜನನ-ಮರಣದ ನಿಜ ಅರ್ಥವನ್ನು ತಿಳಿದು ಬದುಕಬೇಕು ಎಂದಿರುವುದಲ್ಲದೆ ‘ಹುಟ್ಟು ಸಾವಿನ ಮಧ್ಯ ತಾ ನಿಪುಣನೆಂಬುವದು ನಗೆಗೀಡು’ ಎಂಬ ಸತ್ಯವನ್ನು ಹೇಳುತ್ತಾರೆ.
ಬದುಕನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು ಎನ್ನುತ್ತದೆ ಸಾಮಾಜಿಕ ತಾರತಮ್ಯಗಳನ್ನು ಕಟುವಾಗಿ ಟೀಕಿಸುತ್ತಾರೆ.
‘ತೊಲಗುವರು ಕಡೆಕಡೆಗೆ ತಾ ಹೊಲೆ
ಹೊಲೆಯೆನುತ ಕಳವಳಿಸಿ ಮೂತ್ರದ
ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು
ಆಲದೊಳಗೆ ಮುಳುಗಿದರೆ ತೊಲಗದು
ಹೊಲಗೆಲಸವೀ ದೇಹದೊಳು ನೀ
ನೆಲೆಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ’
ಎನ್ನುವಲ್ಲಿ ಹೊಲೆಯೆಂದು ಪಂಚೆಯನ್ನೆತ್ತಿಕೊಂಡು ಪಕ್ಕಕ್ಕೆ ನೆಗೆಯುವ, ಮಡಿ ಮಡಿಯೆಂದು ಅಡಿಗಡಿಗೆ ಹಾರುವ ಮಂದಿಯ ಬಗ್ಗೆ ಮಾರ್ಮಿಕವಾದ ಮಾತಿದೆ. ಯಾರೂ ಮೇಲಲ್ಲ ; ಯಾರೂ ಕೀಳಲ್ಲ. ಹೊಲೆ ಹೊಲೆ ಎಂದು ಹಾರುವವರು ಕೀಳಾದ ಕಾರ್ಯ ಮಾಡಿ ಮೂಗನ್ನು ಹಿಡಿದು ನೀರಲ್ಲಿ ಮುಳುಗು ಹಾಕಿದಾಕ್ಷಣ ಮಾಡಿದ ಹೊಲೆಗೆಲಸ ಹೋಗಿ ಬಿಡುವುದಿಲ್ಲ. ಹುಟ್ಟಿನ ಹೊಲೆತನಕ್ಕಿಂತ ಉತ್ತಮರು ಎಂದುಕೊಂಡು ಹೊಲಸು ಕೆಲಸ ಮಾಡುವುದು ಕೆಟ್ಟದ್ದು ; ಹೇಯವಾದದ್ದು ಎಂದು ಕನಕದಾಸರು ತಿಳಿ ಹೇಳಿದ್ದಾರೆ. ತಾರತಮ್ಯ ನೀತಿಯನ್ನು ಖಂಡಿಸುವ ಕನಕದಾಸರು, ಪಾಂಡಿತ್ಯದಿಂದ ಪಾಪವನ್ನು ಕಳೆಯಲಾಗದು ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ. ಅಹಂಕಾರಿಗಳು, ಸರಿಯಾದ ನಡೆಯನ್ನು ಹೊಂದದವರು ‘ವೇದ ಪುರಾಣ ಶಾಸ್ತ್ರಗಳೋದಿ ಫಲವೇನು ?’ ಎಂದು ಪ್ರಶ್ನಿಸುತ್ತಾರೆ.
ಮಡಿ ಮಡಿ ಎಂದುಕೊಂಡು ನಿತ್ಯವೂ ದೇಹವನ್ನು ತೊಳೆದುಕೊಳ್ಳುವವರು ಮತ್ತು ಎಂಜಲು ಸಲ್ಲುವುದಿಲ್ಲ ಎಂದು ವ್ಯಾಖ್ಯಾನ ಮಾಡುವವರಿಗೂ ಕನಕದಾಸರು ವಾಸ್ತವವನ್ನು ಮನಗಾಣಿಸಿದ್ದಾರೆ. ಎಂಜಲು ಎಂಬುವವರ ನುಡಿಯೇ ಎಂಜಲು ಎನ್ನುವ ಅವರು, ನೀರು, ಅದರೊಳಗಿನ ಪ್ರಾಣಿಗಳ ಎಂಜಲು, ಹಾಲು ಕವರುವಿನ ಎಂಜಲು ! ವಿಚಾರ ಮಾಡಿದರೆ ಎಂಜಲಲ್ಲದ್ದು ಯಾವುದೂ ಇಲ್ಲ ; ನಮಗಾಗಿಯೇ ಮಾತ್ರ ಸೃಷ್ಟಿಯಾದದ್ದು ಯಾವುದೂ ಇಲ್ಲ ಎಂದು ತಿಳಿಸಿದ್ದಾರೆ. ವೈದಿಕ ಸಾಮಾಜಿಕ ವಾತಾವರಣದಿಂದ ನಿರಂತರ ನೋವು ಉಂಡ ಅವರು ಇಂಥ ಡಂಭಾಚಾರಗಳನ್ನು ಕಂಡು ಸಿಡಿದೇಳುತ್ತಾರೆ ; ಪ್ರತಿಭಟಿಸುತ್ತಾರೆ ಮತ್ತು ಖಂಡಿಸುತ್ತಾರೆ. ತಮ್ಮ ದೈವದ ಮೂಲಕ ಹೊಸ ಬದುಕನ್ನು ಹಾರೈಸುತ್ತಾರೆ.
102 ರಿಂದ 108ನೇ ಪದ್ಯಗಳವರೆಗೆ ಕನಕದಾಸರು ಹರಿಭಕ್ತಿಸಾರವನ್ನು ಕೇಳಿದವರಿಗೆ ಆಗುವ ಫಲಶೃತಿಯನ್ನು ವಿವರಿಸಿದ್ದಾರೆ. ಪ್ರತಿ ಪುರಾಣ ಕಾವ್ಯಗಳ ಕೊನೆಯಲ್ಲಿ ಬರುವ ಫಲಶೃತಿ ಸಂಪ್ರದಾಯದ ಛಾಪು ಕನಕದಾಸರಲ್ಲೂ ಕಂಡುಬರುತ್ತದೆ. ಇಂಥಲ್ಲಿ ತಮ್ಮ ದೈವವನ್ನು ಪಾರಮ್ಯಕ್ಕೇರಿಸುವ ಗುರಿ ಮಾತ್ರ ಇರುತ್ತದೆ. ಮುಂದಿನ 109 ರಿಂದ 111ನೇ ಪದ್ಯಗಳಲ್ಲಿ ಮಂಗಲವನ್ನು ಹಾಡಲಾಗಿದೆ. ಇಲ್ಲಿ ಕೂಡ ಹರಿನಾಮಸ್ಮರಣೆಯೇ ಪ್ರಮುಖವಾಗಿದೆ. ಕೆಲ ವಿದ್ವಾಂಸರು ಈ ಮೂರು ಪದ್ಯಗಳನ್ನು ಬಿಟ್ಟು 108ನೇ ಪದ್ಯಗಳವರೆಗೆ ಮಾತ್ರ ಕೃತಿಯನ್ನು ಪರಿಗಣಿಸಿದ್ದಾರೆ.
ಒಟ್ಟಿನಲ್ಲಿ ಹರಿಭಕ್ತಿಸಾರವು ಅಂದಿನ ಭಕ್ತಿಪಂಥದವರಲ್ಲಿದ್ದ ಭಕ್ತಭಾವ, ಇಷ್ಟದೈವದ ಹೊಗಳಿಕೆ ಮತ್ತು ಹಿರಿಮೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿದೆ. ನಡು ನಡುವೆ ಕನಕದಾಸರ ವೈಚಾರಿಕವಾದ ಭಾವವೂ ಅಲ್ಲಲ್ಲಿ ಹಣಕಿ ಹಾಕಿದೆ. ಮುಖ್ಯ ಉದ್ದೇಶ ಭಕ್ತಿಯೇ ಆಗಿದ್ದರೂ ಸಾಮಾಜಿಕ ಕಳಕಳಿ ಕೂಡ ವ್ಯಕ್ತವಾಗಿದೆ. ಭ್ರಮೆ ಮತ್ತು ವಾಸ್ತವತೆಯ ಎರಡೂ ಮಗ್ಗುಲಗಳನ್ನು ನೋಡಿ ಅದನ್ನು ಮೀರಿ ಬೆಳೆಯಬಲ್ಲವರಾಗಿದ್ದರೂ ಆ ಕಾಲದ ಮಿತಿಯಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ.


*****

Wednesday, January 09, 2013

ರಾಘವಾಂಕನ ಹರಿಶ್ಚಂದ್ರ : ಒಂದು ಮರು ವಿವೇಚನೆ

                                                ಡಾ. ಸಿದ್ರಾಮ ಕಾರಣಿಕ
                       
   ಭಾರತೀಯ ಪುರಾಣ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬನಾದ ಹರಿಶ್ಚಂದ್ರ, ಸತ್ಯ ಹರಿಶ್ಚಂದ್ರನೆಂದೇ ಖ್ಯಾತಿ. ಕಾವ್ಯ ನಾಟಕಗಳಲ್ಲಿ ಆತ ಕಾಣಿಸಿಕೊಂಡು ಹಲವರಿಗೆ ಆದರ್ಶಪ್ರಾಯ. ಇಡೀ ಸಾಹಿತ್ಯದಲ್ಲಿ ಇದೊಂದು ವಿಸ್ಮಯ ಕೂಡ. ಹರಿಶ್ಚಂದ್ರನನ್ನು ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲಿಗೆ ಗುರುತಿಸಿದವನು ಕವಿ ರಾಘವಾಂಕ. ಕವಿಯ ಕಾವ್ಯದ ರೂಪ ಅತ್ಯಂತ ಮನಾಕರ್ಷಕವಾದುದು. ಕಾವ್ಯ ಕಟ್ಟುವ ಕಲೆ ರಾಘವಾಂಕನಿಗೆ ಜನ್ಮಜಾತ ಕರಗತ ಎನ್ನುವಷ್ಟರಮಟ್ಟಿಗೆ ಕಾವ್ಯದ ಹಿರಿಮೆ ಇದೆ. ಆದರೆ ಇದೆ ಮಾತನ್ನು ಕಾವ್ಯದ ವಸ್ತುವಿನ ಬಗ್ಗೆ ಹೇಳುವಂತಿಲ್ಲ. ಹರಿಶ್ಚಂದ್ರ ಕಾವ್ಯ ಬರೆಯುವುದರ ಉದ್ದೇಶ ಹರನ ಮಹಿಮೆಯನ್ನೂ ಆತನನ್ನು ನಂಬಿದವರಿಗೆ ಆತ ತೋರುವ ಕರುಣೆಯನ್ನೂ ವಿವರಿಸುವುದೇ ಆಗಿದೆ. ಹರಿಶ್ಚಂದ್ರನ ಕತೆ ಇಲ್ಲಿ ನೆಪ ಮಾತ್ರ. ಹೀಗಾಗಿ ಈ ಕಾವ್ಯದ ವಸ್ತು ಸೂತ್ರಬದ್ಧತೆಯನ್ನು ಕಳೆದುಕೊಂಡಿದೆ. ಇಲ್ಲಿ ಹರಿಶ್ಚಂದ್ರನ ಪಾತ್ರ ಮೇಲ್ಜಾತಿಯವನೆನ್ನಿಸಿಕೊಂಡ ಅರಸನೊಬ್ಬನ ಮಡಿವಂತಿಕೆಯನ್ನು ಮಾತ್ರ ಪ್ರತಿನಿಧಿಸುತ್ತದೆ. ಚಾತುರ್ವರ್ಣದ ಅಂಧಶೃದ್ಧೆಯಲ್ಲಿ ಕನಲುವ ಚಿತ್ರ ಇಲ್ಲಿದೆ. ಬಾಲಸಾಹಿತ್ಯದಲ್ಲಿ ಬಂದ ಕತೆಯನ್ನೇ ಓದಿಕೊಂಡು ಬಂದಿರುವವರಿಗೆ ಇದು ಒಲ್ಲದ ಸತ್ಯವೇ ! ರಾಘವಾಂಕನ ಹರಿಶ್ಚಂದ್ರ ಕಾವ್ಯ ಹರಿಶ್ಚಂದ್ರನ ಮಾನಸಿಕ ತೊಳಲಾಟವನ್ನು ಚಿತ್ರಿಸುವಲ್ಲಿ ಸಫಲತೆ ಕಂಡಿದೆ ಮತ್ತು ಮೊಗೆದಷ್ಟು ಹೊಸ ಹೊಸ ಅರ್ಥಗಳನ್ನು ಅನಾವರಣ ಮಾಡುತ್ತ ಸಾಗುತ್ತದೆ.
    ರಾಘವಾಂಕನ ಹರಿಶ್ಚಂದ್ರ, ವಿಶ್ವಾಮಿತ್ರ ಮತ್ತು ವಸಿಷ್ಠ ಎಂಬ ಎರಡು ಕೋಣಗಳ ನಡುವೆ ಸಿಕ್ಕಿಕೊಂಡ ಗಿಡ ಎಂಬ ಮಾತು ಸತ್ಯವಾದರೂ ವಸ್ತುಸ್ಥಿತಿ ಅರಿತ ಮೇಲಾದರೂ ಆ ಎರಡೂ ಕೋಣಗಳಿಂದ ಸಮದೂರ ಕಾಪಾಡಿಕೊಳ್ಳಲು ಸಾಧ್ಯವಿತ್ತು. ಆದರೆ ಆತ ಚಂಚಲ ವೃತ್ತಿಯಿಂದ ಚಲನೆಯನ್ನು ಕಳೆದುಕೊಳ್ಳುತ್ತಾನೆ. ಮನಃಶಾಸ್ತ್ರೀಯ ದೃಷ್ಟಯಿಂದ ಇಂಥ ವರ್ತನೆಯನ್ನು ಮಾನಸಿಕ ವಿಕಲ್ಪತೆ ಎಂದು ಕರೆಯಲಾಗುತ್ತದೆ. ಇದೊಂದು ರೀತಿಯ ಫೋಬಿಯಾ !
1. ಸತ್ಯ ಮತ್ತು ಹರಿಶ್ಚಂದ್ರ : ಸತ್ಯ ಎಂಬುದು ಶಿವ ಎಂಬರ್ಥವೂ ಇದೆ. ಇದಕ್ಕೆ ಮಂಗಳಕಾರಿ ಎಂಬ ಅನ್ಯೋಕ್ತಿಯೂ ಇದೆ. ರಾಘವಾಂಕನ ಹರಿಶ್ಚಂದ್ರ ಎಲ್ಲಿಯೂ ಈ ಸತ್ಯತನ ತೋರಿದ ಉಲ್ಲೇಖಗಳು ಸಿಗುವುದಿಲ್ಲ. ಸಾಂಪ್ರದಾಯಿಕ ನಂಬಿಕೆಗಳು ಮಾತ್ರ ಆತನನ್ನು ಸತ್ಯವಂತನೆಂದೇ ಪರಿಗಣಿಸುತ್ತವೆ. ಕೊಟ್ಟ ಮಾತಿಗೆ ತಪ್ಪಿ ನಡೆಯುವ ಆತನ ವರ್ತನೆ ಯಾವ ಸತ್ಯವನ್ನು ಅಥವಾ ಎಂಥ ಸತ್ಯವನ್ನು ಒಳಗೊಂಡಿದೆ ಎನ್ನವುದೇ ನಿಗೂಢ !
    ಹರಿಶ್ಚಂದ್ರ ದಿಟದ ವ್ಯಕ್ತಿಯಲ್ಲ ಎಂಬುದಕ್ಕೆ ವರುಣನಿಗೆ ಮಾತು ತಪ್ಪಿ ಜಲೋದರ ರೋಗಕ್ಕೆ  ಈಡಾದ ಪ್ರಕರಣವೇ ಸಾಕ್ಷಿ. ರಾಘವಾಂಕ ಇದನ್ನು ಚಿತ್ರಿಸಲು ಹೋಗದೇ ವಿಶ್ವಾಮಿತ್ರನ ಮೂಲಕ ಈ ಕತೆಯನ್ನು ಆಡಿಸಿದ್ದಾನೆ.
        ಹಿರಿದು ಹುಸಿಗಬುಧಿಪತಿ ಮುನಿದು ಮಾಡಿದ ಜಳೋ            
        ದರವ ಭಾವಿಸದೆ ಕಂಗೆಟ್ಟ ಜಾಡ್ಯಂ ಮಹಾ                
       ಧ್ವರಕೆ ಪಶುವಂ ಮಗನ ಮಾಡಲಾರದೆ ಮೋಹದಿಂದಜೀಗರ್ತ ಮುನಿಯ        
        ವರಸುತ ಶುನಶ್ಯೇಪನಂ ತಂದು ಯಾಗವಿಧಿ                
        ಗರಿದು ಬೇಳಲ್ಕೆ ಮನದಂದ ಪಾತಕನು ಭೂ               
      ವರನನೇತಕ್ಕೆ ಹೇಸದೆ ಹೊಗಳ್ವೆಯೆಂದು ವಾಸಿಷ್ಠನಂ ಕೆಡೆನುಡಿದನು (2-19)
   
           ಇದು ವಿಶ್ವಾಮಿತ್ರ ಹುಟ್ಟಿಸಿಕೊಂಡು ಹೇಳಿದ್ದಲ್ಲ. ಆತ ಸತ್ಯದ ಅನಾವರಣ ಮಾಡಿದ್ದಾನೆ. ಹೀಗಾಗಿಯೇ ಈ ಮಾತಿಗೆ  ವಸಿಷ್ಠ ಯಾವುದೇ ನಿರಾಕರಣೆ ತೋರದೆ ತೇಲಿಸಿ ಮಾತನಾಡುತ್ತಾನೆ. ಮಗನಿಲ್ಲದೆ ಮುಕ್ತಿಯಿಲ್ಲ ಎಂಬ ನಂಬಿಕೆಯಿಂದಾಗಿ ವರುಣನ ವರದಿಂದ ಮಗನನ್ನು ಪಡೆದು ಮಾತಿಗೆ ತಪ್ಪುತ್ತಾನೆ. ಮಾಯದಬಲೆಯರನ್ನು ಹೊಡೆದೋಡಿಸಿದ ಮೇಲೆ ಕೆಂಡ ಕಾರುತ್ತ ಬರುವ ವಿಶ್ವಾಮಿತ್ರನ ಜತೆಯಲ್ಲಿಯ ಸಂವಾದ ಕೂಡ ಹರಿಶ್ಚಂದ್ರ ನುಡಿದಂತೆ ನಡೆಯುವ ವ್ಯಕ್ತಿಯಲ್ಲ ಎಂಬುದಕ್ಕೆ ಸಾಕ್ಷ್ಯವನ್ನು ಒದಗಿಸುತ್ತದೆ.
        ಎಡೆವಿಡದೆ ಬೇಡಿ ಕಾಡುವಿರಾದಡಿನ್ನು ಕೇಳ್                
        ಕಡೆಗೆನ್ನ ಸರ್ವ ರಾಜ್ಯವನಾದಡಂ ನಿಮಗೆ                
        ಕೊಡಹಡೆವೆನೈಸಲ್ಲದೀಯೊಂದು ತೇಜಮಂ ಕೊಡೆ..... (8-32)
    ಎನ್ನುತ್ತಾನೆ. ಸರ್ವರಾಜ್ಯವನ್ನು ಧಾರೆ ಎರೆದು ಕೊಡುವುದಾಗಿ ಹೇಳುವ ಆತ, ಆನಂತರದಲ್ಲಿ ತಾನು ಹಾಗೇ ಹೇಳಿಯೇ ಇಲ್ಲ ಎಂದು ವಾದಿಸುವುದು ಸತ್ಯವಂತನ ಲಕ್ಷಣ ಹೇಗಾದೀತು ? ‘ನಾನಿತ್ತುದೇನಯ?’ ಎಂದು ಮರಳಿ ಪ್ರಶ್ನಿಸುವ ಮೂಲಕ ಜಾರಿಕೊಳ್ಳುತ್ತಾನೆ. ಹೀಗಾಗಿ ಹರಿಶ್ಚಂದ್ರ ಚಂಚಲ ಮನಸ್ಸಿನವನು ಎನ್ನದೇ ಅನ್ಯ ಮಾರ್ಗವಿಲ್ಲ. ‘ಹರಿಶ್ಚಂದ್ರಭೂನಾಥ ನೊಳಗಸತ್ಯವನು ಕಾಣಿಸಲು ಬಲ್ಲರು ಧಾತ್ರಿಯೊಳು ಮುನ್ನ ಹುಟ್ಟಿದವರಿಲ್ಲಿನ್ನು ಹುಟ್ಟುವರ ಕಾಣೆ’ (2-20) ಎಂಬ ವಸಿಷ್ಠನ ಮಾತು ಇಲ್ಲಿ ಅರ್ಥ ಕಳೆದುಕೊಳ್ಳುತ್ತದೆ ಹಾಗೆಯೇ ಹಲವು ವಿಧದಿಂದ ರಾಜ್ಯವನ್ನು ಉಳಿಸಿಕೊಳ್ಳಲು ದೀನನಾಗಿ ವಿಶ್ವಾಮಿತ್ರನಲ್ಲಿ ಮೊರೆಯಿಡುವ ಹರಿಶ್ಚಂದ್ರನ ಪಾತ್ರ ಇಲ್ಲಿ ತನ್ನ ಔಚಿತ್ಯವನ್ನು ಕಳೆದುಕೊಳ್ಳುತ್ತದೆ. ವಿಶ್ವಾಮಿತ್ರನಂತಹ ಚಾಣಾಕ್ಷಮತಿ ಇಲ್ಲದೇ ಬೇರೆ ಪಾತ್ರ ಯಾವುದಾದರೂ ಅಲ್ಲಿದ್ದಿದ್ದರೆ ಹರಿಶ್ಚಂದ್ರ ತನ್ನ ಮಾತಿನ ಮೋಡಿಯಿಂದ ಮರುಳ ಮಾಡಿ ರಾಜ್ಯ ಉಳಿಸಿಕೊಳ್ಳುತ್ತಿದ್ದ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
    ಕಾಶಿ ನಗರದಲ್ಲಿ ಕೂಡ ಆತನ ವರ್ತನೆ  ಬದಲಾಗುವುದಿಲ್ಲ. ದಕ್ಷಿಣೆಯ ಹಣಕ್ಕಾಗಿ ಚಂದ್ರಮತಿ ಮತ್ತು ಲೋಹಿತಾಶ್ವನನ್ನು ಮಾರುವ ಹರಿಶ್ಚಂದ್ರ ತನ್ನನ್ನೂ ಮಾರಾಟ ಮಾಡಿಕೊಳ್ಳಲು, ಗ್ರಾಹಕರನ್ನು ಕೂಗಿ ಕರೆಯುತ್ತಾನೆ. ಆದರೆ ಕೊಳ್ಳಲು ಬರುವ ವೀರಬಾಹುಕ ಕೇವಲ ಕೆಳಜಾತಿಯವ ಎಂಬ ಕಾರಣಕ್ಕಾಗಿಯೇ ತನ್ನನ್ನು ಮಾರಿಕೊಳ್ಳಲು ನಿರಾಕರಿಸುತ್ತಾನಲ್ಲದೇ ಕೊಳ್ಳಲು ಬಂದವನ ಮೇಲೆ ಕನಲಿ ಹರಿಹಾಯುವುದು ಆತನ ಮಾತಿಗೆ ತಪ್ಪುವ ಗುಣವನ್ನು ಮತ್ತೊಮ್ಮೆ ಪ್ರತಿನಿಧಿಸುತ್ತದೆ. ಹೀಗಾಗಿಯೇ ವೀರಬಾಹುಕ, ಹರಿಶ್ಚಂದ್ರನನ್ನು ‘ಹುಸಿಯಹೊಲೆಹೊರೆಕಾರ’ ಎಂದೇ ಸಂಬೋಧಿಸುವುದು ಉಚಿತವಾಗಿಯೇ ಇದೆ. ವ್ಯಾಪಾರದ ಸಂದರ್ಭದಲ್ಲಿ ಜಾತಿ, ಕುಲ, ಅಥವಾ ಇನ್ನಿತರ ಯಾವುದೇ ತೆರನಾದ ಭೇದಗಳನ್ನು ಪರಿಗಣಿಸಬಾರದು. ಗ್ರಾಹಕನಾದವ ವ್ಯಾಪಾರಿ ಹೇಳಿದ ದರ ಕೊಡಲು ಸಿದ್ಧನಾದರೆ ಯಾವುದೇ ತಕರಾರೂ ಇಲ್ಲದೇ ವ್ಯಾಪಾರ ಮಾಡಬೇಕಾಗುತ್ತದೆ. ಆದರೆ ಹರಿಶ್ಚಂದ್ರ ಇದಕ್ಕೆ ವ್ಯತಿರಿಕ್ತನಾಗಿ ವರ್ತಿಸುವ ಮೂಲಕ ತನ್ನ ಮಾತಿಗೆ ತಪ್ಪುವ ಗುಣವನ್ನು ಪ್ರದರ್ಶಿಸುತ್ತಾನೆ.
2. ವರ್ಣಧರ್ಮ ಮತ್ತು ಹರಿಶ್ಚಂದ್ರ : ರಾಘವಾಂಕನ ಹರಿಶ್ಚಂದ್ರ ವರ್ಣಧರ್ಮದ ಚೌಕಟ್ಟಿಗೆ ಒಳಗಾದವನು. ಅಷ್ಟೇ ಅಲ್ಲ, ಆ ತೆರನಾಗಿಯೇ ಎಲ್ಲರೂ ಬದುಕಬೇಕು ಎಂಬ ಕಠೋರ ಉಕ್ತಿ ಆತನದಾಗಿತ್ತು. ಇದು ಮೊಟ್ಟಮೊದಲ ಬಾರಿಗೆ ಅತ್ಯಂತ ಮಾರ್ಮಿಕವಾಗಿ ಮೂಡಿ ಬಂದದ್ದು ಮಾಯದಬಲೆಯರ ಪ್ರಸಂಗದಲ್ಲಿ. ಮೇಲು-ಕೀಳು ಜಾತಿ ಎಂಬ ವರ್ಗೀಕರಣದ ಮಡಿವಂತಿಕೆ ಹರಿಶ್ಚಂದ್ರನಲ್ಲಿದೆ. ಒಂದು ನಾಡಿನ ಒಬ್ಬ ಅರಸನಾಗಿ ಎಲ್ಲರನ್ನು ಸಮಾನಭಾವದಿಂದ ಕಾಣಬೇಕೆಂಬ ತತ್ವ ಇಲ್ಲಿ ಅರ್ಥ ಕಳೆದುಕೊಳ್ಳುತ್ತದೆ. ಕೊನೆಯಲ್ಲಿ ಬರುವ ವೀರಬಾಹುಕನ ಪ್ರಸಂಗದಲ್ಲೂ ಹರಿಶ್ಚಂದ್ರನ ಈ ಮಡಿವಂತಿಕೆಯ ವರ್ತನೆ ಪುನರಾವರ್ತಿತವಾಗುತ್ತದೆ.
    ಹೊಲತಿಯರು, ಅನಾಮಿಕೆಯರು, ಮಾಯದಬಲೆಯರು ಎಂಬ ಹೆಸರುಗಳಿಂದ ಕಾವ್ಯದಲ್ಲಿ  ಕಾಣಿಸಿಕೊಳ್ಳುವ ಈ ಯುವತಿಯರು ವಿಶ್ವಾಮಿತ್ರನ ಸೃಷ್ಟಿ. ಹಾಗೆಂದ ಕೂಡಲೇ ಅವರೇನು ಮಾಯಾ-ಮಂತ್ರಗಳಿಂದ ಜನ್ಮ ತಳೆದವರಲ್ಲ. ಯಾವುದೇ ಒಂದು ಹೆಣ್ಣಿನಲ್ಲಿ ವಿಶ್ವಾಮಿತ್ರನಿಗೆ ಹುಟ್ಟಿರಬಹುದಾದ ಮಕ್ಕಳೇ ಅವರಾಗಿದ್ದಾರೆ ಎಂಬುದನ್ನು ವಾಸ್ತವದ ಅರಿವಿರುವವರೆಲ್ಲರಿಗೂ ಸ್ಪಷ್ಟವಾಗಿರುವ ಅಂಶ. ‘ಶಾಪದಿಂದಾದ ದುಷ್ಕುಲಂ ಸತ್ಕುಲಜ ಭೂಪ ನಿನ್ನಯ ಸಂಗದಿಂ ಶುದ್ಧವಪ್ಪುದೆಂಬಾಪೇಕ್ಷೆಯಿಂ’ ಬಂದೆವು ಎನ್ನುವ ಉಲ್ಲೇಖ ಇದನ್ನೇ ಸಾರುತ್ತದೆ. ಇಂಥ ಮಾಯದಬಲೆಯರನ್ನು ಹರಿಶ್ಚಂದ್ರ ಅಪಮಾನಗೊಳಿಸಿ, ಹೊಡೆದೊಡಿಸುವ ಕ್ರಿಯೆ ರಾಜನ ಮುಂಗೋಪಿತನಕ್ಕೆ ಸಾಕ್ಷಿಯಾಗುತ್ತದೆ ಮತ್ತು ಆತನ ಜಾತಿ ಬಗೆಗಿನ ವರ್ತನೆಯನ್ನು ಅನಾವರಣಗೊಳಿಸುತ್ತದೆ.
    ಹರಿಶ್ಚಂದ್ರ ಕಾಡಿನಲ್ಲಿ ಬೇಸತ್ತು, ದಣಿದು ವಿಶ್ರಾಂತಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಮಾಯದಬಲೆಯರು ಅಲ್ಲಿಗೆ ಬಂದ ತಮ್ಮ ಮಧುರ ಗಾಯನದಿಂದ ಆತನ ಬೇಸರ ನೀಗುವಂತೆ ಮಾಡುತ್ತಾರೆ. ಇದರಿಂದ ಸಂತುಷ್ಟಗೊಂಡ ಹರಿಶ್ಚಂದ್ರ ಆಭರಣಗಳ ಕಾಣಿಕೆ ನೀಡಿದಾಗ ಅದನ್ನು ಸ್ವೀಕರಿಸಲೊಲ್ಲದ ಆ ಮಾನನಿಯರು ‘ಬಿರುಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಮುತ್ತಿನ ಸತ್ತಿಗೆಯನ್ನು ಬಯಸುತ್ತಾರೆ. ಮುತ್ತಿನ ಸತ್ತಿಗೆ ರವಿಕುಲದ ಪ್ರತೀಕ. ಅದನ್ನು ಕೊಡಲಾಗದು ಎನ್ನುವ ಹರಿಶ್ಚಂದ್ರ ಅದಕ್ಕೆ ಹಲವಾರು ಕಾರಣಗಳನ್ನು ನೀಡುತ್ತಾನೆ. ಆಗ ಆ ಅನಾಮಿಕೆಯರು ಅದರ ಬದಲಾಗಿ ‘ವಲ್ಲಭನಾಗಿ ಚಿತ್ತದುಮ್ಮಳಿಕೆಯಂ ಕಳೆ’ ಎನ್ನುವ ಮೂಲಕ ಆತನ ರಾಣಿಯರಾಗುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಆದರೆ ಹರಿಶ್ಚಂದ್ರ ಅವರು ಕೀಳು ಕುಲದವರು ಎಂಬ ಒಂದೇ ಕಾರಣದಿಂದ ಅವರನ್ನು ತಿರಸ್ಕರಿಸುತ್ತಾನೆ. ಅವರು ಹಾಗೇ ಕೇಳಿದ್ದೇ ತಪ್ಪೆಂದು ವಾದಿಸುತ್ತಾನೆ. ‘ನಿಮಗೋಸಿಗೆನ್ನ ಕುಲಮಂ ಕೆಡಿಪೆನೆ’ ಎಂಬುದಾಗಿ ಪ್ರಶ್ನೆ ಎಸೆಯುತ್ತಾನೆ.
    ವರ್ಣಧರ್ಮದಲ್ಲಿ ಕೀಳು ಜಾತಿಯ ಹೆಣ್ಣುಗಳನ್ನು ಮದುವೆಯಾಗಲು ಯಾವುದೇ ತಕರಾರು ಇಲ್ಲ. ಆದರೆ ಹರಿಶ್ಚಂದ್ರ ವರ್ತಿಸುವ ರೀತಿ ತೀರ ವಿಚಿತ್ರವಾಗಿದೆ. ವೈದಿಕ ಧರ್ಮದ ನಿಯಮಾವಳಿಗಳಿಂದ ಕೂಡಿದ ಮನುಸ್ಮೃತಿಯೇ ಈ ಅನುಲೋಮ ವಿವಾಹಕ್ಕೆ ಮಾನ್ಯತೆ ನೀಡಿದೆ. ಆದರೆ ಕುಲದ ನೆಪವೊಡ್ಡಿ ಹರಿಶ್ಚಂದ್ರ ಆ ಅನಾಮಿಕೆಯರನ್ನು ತಿರಸ್ಕರಿಸುವ ಪರಿ ಬೇರೆ ಏನನ್ನೋ ಸೂಚಿಸುವಂತಿದೆ.
    ಜನಸಾಮಾನ್ಯರಲ್ಲಿ ಬೀಡು ಬಿಟ್ಟಿರುವ ಕಂದಾಚಾರಗಳ ಪ್ರತಿರೂಪ ಹರಿಶ್ಚಂದ್ರ ಎನ್ನಲಡ್ಡಿಯಿಲ್ಲ. ಆತನ ವರ್ತನೆಯೇ ಜಟೀಲ. ಕೀಳು ಕುಲದವರು ಅಸ್ಪೃಶ್ಯರೆಂದೇ ಭಾವಿಸುವ ವ್ಯಕ್ತಿ ಅವರನ್ನು ಹೇಗೆ ತಾನೆ ಮುಟ್ಟಿಯಾನು ? ಆ ಮಾಯದಬಲೆಯರನ್ನು ಮದುವೆಯಾಗುವಂತೆ ಸ್ವತಃ ವಿಶ್ವಾಮಿತ್ರನೇ ಬಂದು, ‘ಎನ್ನ ಬಸುರಿಂದ ಮೂಡಿರ್ದ ಕನ್ನೆಯರು’ (8/11) ಎಂದು ಹೇಳಿದರೂ ಹರಿಶ್ಚಂದ್ರನದು ಪುನರುಕ್ತಿಯಷ್ಟೆ ! ‘ಹೊಲತಿಯರ ನೆರೆವರೆ’ (8/14), ‘ಹೊಲತಿಯರನಿರಿಸಿಕೊ ಎಂದು ನೀಂ ಕರುಣಿಸಬಹುದೆ’ (8/23), ‘ಉತ್ತಮದ ರವಿಕುಲದೊಳುದಿಸಿ ಚಾಂಡಾಲತ್ವವೆತ್ತ ಸತಿಯರ್ಗೆಳಸಿ ಘೋರನರಕಾಳಿಗನಿಮಿತ್ತ ಹೋಹವನಲ್ಲ’ (8/20), ‘ಹೊಲೆಯರ ಸಂಗಮಂ ಮಾಡಿ ನಿಷ್ಕಾರಣಂ ಗೋರ ನರಕಾಳಿಯೊಳು ಬಿದ್ದು ಹೊರಳುವವನಲ್ಲ’ (8/27) ‘ಹೊಲತಿಯರ ಕೂಡಿ ನಡೆಯೆಂಬರೇ ಮುನಿಗಳು’ (8/20) ಎಂಬುದಾಗಿ ಪ್ರತಿಮಾತಿನ ಮೂಲಕ ಆ ಅನಾಮಿಕೆಯರನ್ನು ತಿರಸ್ಕರಿಸುತ್ತಾನೆ.
    ಈ ಮೊದಲೇ ಹೇಳಿದಂತೆ ಮಾಯದಬಲೆಯರು ವಿಶ್ವಾಮಿತ್ರನ ಅನೈತಿಕತೆಯ ಸಂತಾನವೇ ಆಗಿದ್ದಾರೆ. ವರ್ಣಧರ್ಮ ಅಂತಹ ವ್ಯಕ್ತಿಗಳ ಜೊತೆ ಸಂಬಂಧ ಬೆಳೆಸುವುದನ್ನು ನಿಷೇಧಿಸಿದೆ. ಈ ಕಾರಣವಾಗಿಯೇ ಹರಿಶ್ಚಂದ್ರ ಮಾತು ಮಾತಿಗೂ ಅವರು ಹೊಲತಿಯರು ಎಂದು ನುಡಿಯುತ್ತಾನೆ. ಅವರು ಬಹುಶಃ ವಿಶ್ವಾಮಿತ್ರನ ಕುಲೀನ ಹೆಣ್ಣುಗಳಾಗಿದ್ದರೆ ಹರಿಶ್ಚಂದ್ರ, ಅವರನ್ನು ಮದುವೆಯಾಗುತ್ತಿದ್ದನೇನೋ ? ಯಾಕೆಂದರೆ ದೇವಿಭಾಗವತದ ಪ್ರಕಾರ ಹರಿಶ್ಚಂದ್ರನಿಗೆ ನೂರು ಜನ ಹೆಂಡತಿಯರಿದ್ದರು. ಇನ್ನಿಬ್ಬರು ಹೆಚ್ಚಾಗುತ್ತಿರಲಿಲ್ಲ ಅಲ್ಲವೇ ?
3. ರಾಘವಾಂಕನ ದೃಷ್ಟಿ : ರಾಘವಾಂಕ ಕೂಡ ಜಾತಿಯ ಬಲೆಯಿಂದ ಹೊರಬಿದ್ದವನಲ್ಲ. ಕಾವ್ಯದ ವಸ್ತು ಹೇಗಿದ್ದರೂ ಅದನ್ನು ನಿರ್ವಹಿಸುವಲ್ಲಿ ಕವಿಯ ಪಾತ್ರ, ಮನೋಸ್ಥಿತಿ ಮುಖ್ಯವಾಗಿರುತ್ತದೆ. ಹೀಗಾಗಿ ಕವಿ ಇಲ್ಲಿ ಮಾಯದಬಲೆಯರ ಮೂಲಕ ಪಾಪದ ಫಲವಾಗಿ ಕೆಳಜಾತಿಯವರು ಹುಟ್ಟುತ್ತಾರೆ ಎಂಬ ವಾದ ಮುಂದಿಡುತ್ತಾನೆ. ‘ಶಾಪದಿಂದಾದ ದುಷ್ಕುಲಂ ಸತ್ಕುಲಜ ಭೂಪ ನಿನ್ನಯ ಸಂಗದಿಂ ಶುದ್ಧವಪ್ಪುದೆಂಬಾಪೇಕ್ಷೆಯಿಂ’ (7/22) ಬಂದೆವೆ ಎನ್ನುವ ಮಾಯದಬಲೆಯರ ಮಾತು ಇದನ್ನು ದೃಢಪಡಿಸುತ್ತದೆ. ಆ ಕಾಲದ ವಿಚಾರ ಏನೇ ಇದ್ದರೂ ಕವಿಯ ಮನೋಭಾವ ಶರಣಕ್ರಾಂತಿಯಿಂದ ಪ್ರೇರಿತವಾಗಿದ್ದರೂ ಜಾತಿಯ ಮೇಲು-ಕೀಳಿನ ತಾರತಮ್ಯವನ್ನು ಕವಿ ನಿರಾಕರಿಸುವುದಿಲ್ಲ. ಬಹುಶಃ ರಾಘವಾಂಕನಿಗೆ ಹರಿಹರ ಏಟು ನೀಡಿ ಹಲ್ಲು ಮುರಿದದ್ದು ಈ ಪ್ರಸಂಗದ ಕಾರಣವಾಗಿಯೇ ಇರಬೇಕು. ರಾಘವಾಂಕನನ್ನು ಬಂಡಾಯ ಕವಿ, ಕ್ರಾಂತಿ ಕವಿ ಎಂದು ಹೊಗಳಿದವರು ಈ ವಿಚಾರವನ್ನು ಗಮನಿಸಿದಂತೆ ತೋರುವುದಿಲ್ಲ.
    ರಾಘವಾಂಕನ ಹರಿಶ್ಚಂದ್ರ, ಕಾವ್ಯದ ಕೊನೆಯವರೆಗೂ ಕೂಡ ಜಾತಿಯ ಬಗ್ಗೆ  ಇಟ್ಟುಕೊಂಡಿರುವ  ಮೇಲರಿಮೆಯನ್ನು  ಬಿಟ್ಟುಕೊಡುವುದಿಲ್ಲ. ಕಾಶಿ ಕ್ಷೇತ್ರದಲ್ಲಿ ತನ್ನ ಹೆಂಡತಿ-ಮಗನನ್ನು ಮಾರಿದ ಮೇಲೆ, ಋಣದ ಭಾರ ಕಡಿಮೆಯಾಗದೇ ಇದ್ದಾಗ ತನ್ನನ್ನು ತಾನು ಮಾರಿಕೊಳ್ಳಲು ತಯಾರಾಗುತ್ತಾನೆ. ಆತನನ್ನು ಖರೀದಿಸಲು ಬಂದ  ವೀರಬಾಹುಕನ ‘ಸಂಬಳಿಗೋಲು’ ಕಂಡು ಈತ ಹೊಲೆಯನೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಹರಿಶ್ಚಂದ್ರ ಆತನಿಗೆ ತನ್ನನ್ನು ಮಾರಿಕೊಳ್ಳುವುದಿಲ್ಲ ಎನ್ನುತ್ತಾನೆ.
     
ನಡುಗದಂಜದೆ ಹೆದರದೋಸರಿಸದೆಕಟಕಟ               
ಕಡೆಯ ಹೊಲೆಯು ಮೇರೆದಪ್ಪಿ ಬಂದೆನ್ನ ತ               
ನ್ನೊಡೆಯಂಗೆ ದಾಸನಾಗೀಗಗಳೆಂದೆಂಬುದಿದು ಕಾಲಗುಣವೀ ಎನ್ನನು       
ಎಡೆಗೊಂಡ ಕರ್ಮಫಲವೋ ಕಡೆಗೆ ಮೆಣಸು ಹುಳಿ           
ತಡೆ ಜೋಳದಿಂ ಕುಂದೆ ನೋಡು ನೋಡೆಂದು ಘುಡು ಘುಡಿಸಿ        
ಕೋಪಾಟೋಪದಿಂ ಜರಿದು ಝಕಿಸಿದನವನಿಪನನಾಮಿಕನನು (7/19)
    ಕ್ರಯ ಮಾಡಲು ಬಂದ ಗ್ರಾಹಕನ ಜಾತಿ ಹಿಡಿದು ಭ್ರಾಂತಿ ಕಳೆದುಕೊಂಡಂತೆ ವರ್ತಿಸುವ ಹರಿಶ್ಚಂದ್ರನ ದೃಷ್ಟಿ ಎಷ್ಟೊಂದು ಸಂಕುಚಿತವಾದುದಾಗಿದೆ ಎಂಬುದನ್ನು ಈ ಪದ್ಯ ತಿಳಿಸುತ್ತದೆ. ತಾನೀಗ ರಾಜನಲ್ಲವೆಂದು ಅರಿತೂ  ಪರರಾಜ್ಯದಲ್ಲಿ ಬಂದು ‘ಹೊನ್ನುಳ್ಳ ಧನಿಕರಾರಾದೊಡಂ ಕೊಂಬುವರ್ ಬನ್ನಿ’ ಎಂದು ಕೂಗಿದವನೂ ಹರಿಶ್ಚಂದ್ರನೇ ವೀರಬಾಹುಕ ಹೊಲೆಯ ಎಂದರಿತ ತಕ್ಷಣ ಕನಲುವ ಅವಶ್ಯಕತೆ ಏನಿತ್ತು ? ಇಂಥ ವರ್ತನೆಯನ್ನು ಗಮನಿಸಿಯೇ ವೀರಬಾಹುಕನೂ ಕನಲಿ, ‘ಹದುಳಿಪ್ಪ ನಾನು ಚಾಂಡಾಳನೋ ಹುಸಿಯ ಹೊಲೆಯಿಂ ಹೋರುವ ನೀನು ಚಾಂಡಾಳನೋ’ ಎಂದು ಹೇಳುವ ಮಾತಿನ ಏಟು ಬಹುಶಃ ಹರಿಶ್ಚಂದ್ರನಿಗೆ ತಾಗಿದಂತಿಲ್ಲ. ನುಡಿದಂತೆ ನಡೆಯದ ಹರಿಶ್ಚಂದ್ರ ಸತ್ಯವಂತನೆಂದು ಜಗತ್ತಿಗೆ ಹೇಗೆ ಪರಿಚಯವಾದನೋ ? ಆತನನ್ನು ‘ಹುಸಿಯ ಹೊಲೆಹೊರೆಕಾರ’ ಎಂದು ವೀರಬಾಹುಕ ಸಂಭೋದಿಸಿರುವುದು ಔಚಿತ್ಯಪೂರ್ಣವಾಗಿದೆ.
    ಹರಿಶ್ಚಂದ್ರನಲ್ಲಿಯ ಜಾತಿಯ ಮೇಲರಿಮೆ, ಆತ ತಿನ್ನುವ ಕೂಳಿಗೂ ವ್ಯಾಪಿಸಿದೆ. ಹೆಣದ ಪಡಿಯಕ್ಕಿಯನ್ನು ವೃಷಭಕ್ಕೆ ತಿನ್ನಿಸಿ ಅದು ಹಾಕಿದ ಸೆಗಣಿಯಲ್ಲಿ ಪಚನವಾಗದೇ ಉಳಿದ ಅಕ್ಕಿಯನ್ನು ಆರಿಸಿ ಅನ್ನ ಮಾಡಿ ತಿನ್ನುವ ಆತನ ವರ್ತನೆ ವಿಚಿತ್ರವೆನಿಸುತ್ತದೆ.
    ಜಲ ಪ್ರೋಕ್ಷಿಸಿ ಶುದ್ಧೀಕರಣ ಮಾಡಿದರೆ ಸಾಕು ಎಂದು ಮನುಸ್ಮೃತಿಯೇ ಹೇಳುತ್ತದೆ. ಅದೂ ಅಲ್ಲದೆ ಶುದ್ಧೀಕರಣದ ಅವಶ್ಯಕತೆಯಾದರೂ ಏನು ? ತಾನು ಮಾಡುವ ವೃತ್ತಿಗೆ ಲಭ್ಯತೆಯ ಆಧಾರದ ಮೇಲೆ ಬದುಕಬೇಕೆಂಬ ಕನಿಷ್ಟ ಆಲೋಚನೆಯಾದರೂ ಆತನಿಗೆ ಬೇಡವೇ ? ತಾನು ಮೇಲ್ಜಾತಿಯವ, ಮೇಲಾಗಿ ಅರಸ ಎನ್ನುವ ಮೇಲರಿಮೆ ಆತನಿಂದ ಕಳಚುವುದೇ ಇಲ್ಲ. ಅಂಬಲಿ ಉಣ್ಣುವಾತನಿಗೆ ಮೀಸೆ ತಿಕ್ಕುಲೊಬ್ಬ ಆಳು ಎಂಬಂತೆ ವೀರಬಾಹುಕನ ಆಳಾಗಿ ದುಡಿಯುವ ಹರಿಶ್ಚಂದ್ರನ ಸೇವೆ (ಕೈ-ಕಾಲು ಒತ್ತುವುದು, ಗೋಮಯ ಅಕ್ಕಿಯನ್ನು ಆರಿಸಿ ತರುವುದು ಇತ್ಯಾದಿ) ಮಾಡಲು ಸತ್ಯಕೀರ್ತಿ ಎಂಬ ಮಂತ್ರಿ  ಇದ್ದೇ ಇರುತ್ತಾನೆ. ತನ್ನನ್ನು ತಾನು ಮಾರಾಟ ಮಾಡಿಕೊಳ್ಳದೇ ಸತ್ಯಕೀರ್ತಿಯನ್ನು ಮಾರಿದ್ದರೂ ನಡೆಯುತ್ತಿತ್ತಲ್ಲವೇ ? ಬೆಂಕಿಗೆ ಆಹುತಿಯಾಗಲು ನಾ ಮೊದಲೆಂದು ಮುನ್ನುಗ್ಗುವ ಸತ್ಯಕೀರ್ತಿ ಮಾರಾಟದ ವಸ್ತುವಾಗಲು ಹರಿಶ್ಚಂದ್ರನ ಮಾತಿಗೆ ಇಲ್ಲವೆನ್ನುತ್ತಿದ್ದನೇ ?
    ಎಲ್ಲ ನಿಟ್ಟಿನಿಂದ  ನೋಡಿದಾಗಲೂ ಹರಿಶ್ಚಂದ್ರ ಸತ್ಯವಂತ ಎಂಬುದಾಗಲೀ ಆದರ್ಶ ಅರಸನಾಗಿಯಾಗಲೀ ಕಾಣಿಸುವುದೇ ಇಲ್ಲ. ಒಬ್ಬ ಮೇಲ್ಜಾತಿಯ ಕನವರಿಕೆಯಲ್ಲಿ ಮತಿವಿಕಲ್ಪಕ್ಕೆ ಒಳಗಾದ ವ್ಯಕ್ತಿಯಂತೆ ಕಾವ್ಯದಲ್ಲಿ ಆತನ ವರ್ತನೆ ಸ್ಪಷ್ಟವಾಗಿ ಬಿಂಬಿತವಾಗಿದೆ.                
               
                                        *******

Wednesday, October 31, 2012

ಮತ್ತೇ ನಾವು ಆಂಡಯ್ಯ ಆಗುವುದು ಬೇಡ !



ಡಾ. ಸಿದ್ರಾಮ ಕಾರಣಿಕ 
 
ಕನ್ನಡ ಶಾಸ್ತ್ರಕ್ಕೆ ಯಾರು ಎಂದರೆ ನಾವು ಬಹಳ ಹಿಂದೆ ಶಂಕರಭಟ್ಟರು ಎನ್ನುತ್ತಿದ್ದೇವು ! ಆದರೆ ಇಂದು ಶಂಕರ ಭಟ್ ಅವರು ಬರೆಯುತ್ತಿರುವುದನ್ನು ಕಂಡಾಗ ಯಾಕೋ ನಮಗೇ ಮುಜುಗರು ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ವಿದ್ವಾಂಸರು ಬರೆದುದೆನ್ನೆಲ್ಲ ಒಪ್ಪಿಕೊಂಡು ಬಿಟ್ಟರೆ ತಲೆಯಲ್ಲಿ ಪ್ರಶ್ನೆಗಳೇ ಹುಟ್ಟುವುದಿಲ್ಲ ! ಹಾಗೆ ಪ್ರಶ್ನೆಗಳು ಹುಟ್ಟದಿದ್ದರೆ ನಾವು ಮನುಷ್ಯರು ಅನ್ನಿಸಿಕೊಳ್ಳುವುದಕ್ಕೆ, ನಮಗೂ ಒಂದು ವ್ಯಕ್ತಿತ್ವ ಇದೆ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗಬೇಕು. ಉಜಿರೆಯಲ್ಲಿ ಒಂದು ರಾಷ್ಟ್ರೀಯ ವಿಚಾರ ಸಂಕಿರಣದ ಸಂದರ್ಭದಲ್ಲಿ ಸೇರಿದ ನಮ್ಮಲ್ಲಿ ಒಂದು ಪ್ರಶ್ನೆ ಹೀಗಿತ್ತು. ಶಂಕರ ಭಟ್ಟರು ಬರೆಯುತ್ತಾರೆ. ಅವರಿಗೆ ಕನ್ನಡದ ವ್ಯಾಕರಣ ಮತ್ತು ಶಾಸ್ತ್ರಗಳ ಪರಿಚಯವಿದೆ. ಆದರೂ ಅಸಂಬದ್ಧವಾಗಿ ಬರೆಯತ್ತಾರೆ ಮತ್ತು ಅದಕ್ಕೆ ಉತ್ತರವನ್ನು ಕೇಳಿದರೆ ಅವರು ಏನನ್ನೂ ಹೇಳುವುದಿಲ್ಲ ! ಅಂದರೆ ಅವರು ಬರೆದ ಪುಸ್ತಕದ ಬಗ್ಗೆಯೇ ವಿಮರ್ಶೆ ನಡೆದಾಗಲೂ, ಪ್ರೀತಿಯಿಂದ ಆ ‘ಕಾರ್ಯ’ಕ್ಕೆ ಅವರನ್ನು ಆಹ್ವಾನಿಸಿದರೂ ಅವರು ನಮ್ಮನ್ನು ನಿರಾಸೆಗೊಳಿಸುತ್ತಾರೆ !
ರವಿವಾರದ ವಿಜಯ ಕರ್ನಾಟಕದಲ್ಲಿ (9-9-2012) ಶಂಕರಭಟ್ಟ ಅವರು ಒಂದು ಲೇಖನ ಬರೆದಿದ್ದಾರೆ. ಅದರ ಶೀರ್ಷಿಕೆ ‘ಓದುವ ಹಾಗೆಯೇ ಬರೆಯುವುದು’ ಎಂದಿದೆ. ಅಂದರೆ ಸಂಸ್ಕøತದಿಂದ ಎರವಲು ಪಡೆದ ಪದಗಳನ್ನು ನಾವು ಯಾವ ರೀತಿ ಉಚ್ಚರಿಸುತ್ತೇವೆಯೋ ಅದೇ ರೀತಿಯಲ್ಲಿ ಬರೆಯಬೇಕೆಂದು ಸೂಚಿಸುತ್ತಾರೆ ! ಇದು ಆಂಡಯ್ಯನ ವಾದ ಎಂದರೂ ನಡೆಯುತ್ತದೆ ! ಶಂಕರಭಟ್ಟರು ಹಿರಿಯರು, ವಿದ್ವಾಂಸರು ಎನ್ನುವುದು ಬೇರೆ ಮಾತು. ಆದರೆ ಅದನ್ನೇ ಮುಂದು ಮಾಡಿಕೊಂಡು ಕನ್ನಡಿಗರನ್ನು ಹಾದಿ ತಪ್ಪಿಸುವ ನಡೆಯನ್ನು ಅವರು ಮುಂದುವರಿಸಿರುವುದು ಮಾತ್ರ ಸಮಂಜಸವೆಂದು ತೋರುತ್ತಿಲ್ಲ !
ಶಂಕರ ಭಟ್ಟರು ನಮ್ಮನ್ನು ಒಂದು ರೀತಿಯಲ್ಲಿ ಕನ್‍ಫ್ಯೂಜ್ ಮಾಡುತ್ತಿದ್ದಾರೆ ಎಂದೆನಿಸುತ್ತದೆ ನನಗೆ ! ಜನಸಾಮಾನ್ಯರಿಗೆ ಏನು ಬೇಕು ಎನ್ನುವುದನ್ನು ಅರಿತುಕೊಳ್ಳದ ಮತ್ತು ಆ ಬಗ್ಗೆ ಅನುಭವ ಇಲ್ಲದಿರುವ ಅವರು ತಮ್ಮ ಗೂಡಿನೊಳಗೆ ಕುಳಿತುಕೊಂಡು ತಮಗೆ ತೋಚಿದಂತೆ ವಿಚಾರಗಳನ್ನು ಹರಿಯಬಿಡುತ್ತಿರುವುದು ಸರ್ವಥಾ ಸರಿಯಲ್ಲ. ಯಾಕೆಂದರೆ ಅವರು ಉಪಯೋಗಿಸುವ ಕನ್ನಡ ಪದಗಳೇ ಒಮ್ಮೊಮ್ಮೆ ಕನ್ನಡಿಗರಿಗೆ ಅರ್ಥವಾಗಲಾರವು ! ‘ತಿಳಿವಿಗರು’, ‘ಹೊರಪಡಿಕೆಗಳು’, ‘ಎತ್ತುಗೆ’, ‘ಬರಿಗೆ’  ಮೊದಲಾದ ಪದಗಳು ಜನಸಾಮಾನ್ಯರಿಗೆ ಹೇಗೆ ಅರ್ಥವಾಗುತ್ತವೆ ? ನಿಮ್ಮ ಬುದ್ಧಿಶಕ್ತಿ ಅಪಾರವಾಗಿರಬಹುದು. ಆದರೆ ಅದನ್ನು ದಯವಿಟ್ಟು ಜನಸಾಮಾನ್ಯರ ಮೇಲೆ ಹೇರಬೇಡಿ !
ಇಡೀ ಲೇಖನವನ್ನು ಕಂಡಾಗ ಸಂಸ್ಕøತ ಭಾಷೆಯ ಅಕ್ಷರಗಳನ್ನು ಬಳಕೆ ಮಾಡುವುದರ ಬಗ್ಗೆ ಗಂಭೀರ ಆರೋಪಗಳನ್ನು ಎತ್ತಿದ್ದಾರೆ. ಆದರೆ ತಾವೇ ತಮಗೇ ಗೊತ್ತಿಲ್ಲದಂತೆ ಅವುಗಳನ್ನು ಬಳಸುತ್ತಾರೆ ! ‘ಸುಲಭ>ಸುಲಬ, ಖುಷಿ>ಕುಶಿ, ಪೂಜ್ಯಭಾ>ಪೂಜ್ಯಬಾವ ಮೊದಲಾಗಿ ಬಳಸಿದ್ದಾರೆ. ಇದು ಕನ್ನಡ ಪ್ರೇಮವೇ ? ‘... ಮಾರ್ಪಾಡನ್ನು ಮಾಡಿರದಿದ್ದರೆ, ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇನ್ನಶ್ಟು ತೊಡಕಿನದಾಗುತ್ತಿತ್ತು’ ಎನ್ನುವ ಅವರಿಗೆ ತಾವು ಮಾಡುತ್ತಿರುವುದೂ ತೊಡಕಿನ ಸೃಷ್ಟಿಯೇ ಅಂತ ಯಾಕೆ ಅನ್ನಿಸುತ್ತಿಲ್ಲ ? ಮಹಾಪ್ರಾಣವನ್ನು ತಿರಸ್ಕರಿಸುವ ಮೂಲಕ ಬಳಕೆಯಲ್ಲಿರುವ ಕನ್ನಡ ಪದಗಳ ಅರ್ಥವ್ಯತ್ಯಾಸವಾಗುವುದಿಲ್ಲವೆ ? ನಾನು ಬದಲಾವಣೆಯ ಗಾಳಿ ಬೀಸುತ್ತಿದ್ದೇನೆ ಎಂದು ಅವರು ತಿಳಿದುಕೊಂಡಿದ್ದರೆ ಯಾಕೋ ಸಮಂಜಸವೆನಿಸಲಾರದು ! ಆಡುಭಾಷೆಯನ್ನು ಹದಗೆಡಿಸಿ ಕ್ಲಿಷ್ಟ ಮಾಡುವ ಪರಿ ಒಂದು ರೀತಿಯಲ್ಲಿ ನಗುವನ್ನೂ ತರುತ್ತದೆ !
ಶಂಕರ ಭಟ್ಟರ ಲೇಖನವಷ್ಟೇ ಅಲ್ಲ. ಸಿದ್ಧರಾಜು ಬೋರೇಗೌಡ ಅವರ ಲೇಖನ ‘ಬಾರತದವರು ಅಮೆರಿಕಾದವರಿಂದ ಆಳಗ್ಗಳೆ ಮತ್ತು ಆಳೀಳಿಗೆಯ ಪಾಟ’ (ವಿಜಯ ಕರ್ನಾಟಕ : 19-09-2012) ಕೂಡ ಇದೇ ರೀತಿಯ ಗೊಂದಲಗಳನ್ನು ಹುಟ್ಟು ಹಾಕುವಂತಿದೆ. ಯಾಕೆಂದರೆ ಲೇಖಕರು ಕನ್ನಡ ಲಿಪಿ ಸುದಾರಣೆಯಲ್ಲಿ ನುಡಿಯರಿಗೆ ಶಂಕರ ಬಟ್ಟರ ಶಾಲೆಗೆ ಸೇರಿದವರು. ಅಮೆರಿಕಾದ ಸ್ಕ್ರಿಪ್ಟ್ಸ್ ಅರಕೆ ಸಂಸ್ತೆಯಲ್ಲಿ ಬುಡಕಣಗಳ ಮೇಲೆ ಪಿಎಚ್ಡಿ ಮಾಡುತ್ತಿದ್ದಾರೆ ! ಇವರು ಬಳಸುವ ಪದಗಳು ಕೂಡ ಸಾಮಾನ್ಯರಿಗೆ ಅರ್ಥವಾಗುವ ಮಟ್ಟದಲ್ಲಿ ಇಲ್ಲ. ಶೀರ್ಷಿಕೆಯಲ್ಲಿಯೇ ಇರುವ ಆಳಗ್ಗಳೆ, ಆಳೀಳಿಗೆ ಹಾಗೂ ಲೇಖನದಲ್ಲಿ ಬಂದಿರುವ ಒಪ್ಪುಕೂಟ, ಮೇಟಿಯಾಳ್ಕೆ, ಆಳ್ಕೆ, ಈಳಿಗೆ, ಬೇರ್ಮೆ ಹಲತನ, ಹೆಗ್ಗಳ, ಮಿಂಬಲೆ ಮೊದಲಾದ ಪದಗಳನ್ನು ಒತ್ತಾಯಪೂರ್ವಕವಾಗಿಯೋ ಇಲ್ಲವೆ ಹಾಗೆ ಬರೆಯಲೇ ಬೇಕು ಎಂಬ ಹಠದಿಂದಲೋ ಉಪಯೋಗಿಸಿದ್ದಾರೆ !
ಸಿದ್ಧರಾಜು ಅವರೇ ಲೇಖನದಲ್ಲಿ ಒಂದು ಕಡೆ ‘ಹೆಚ್ಚೆಣಿಕೆಯವರ ತೀಟೆಗಾಗಿ ಕೊರೆಯೆಣಿಕೆಯವರನ್ನು ತೊಂದರೆಗೀಡು ಮಾಡುವುದು ಆಳಾಳ್ಕೆಯಾಗದು’ ಎನ್ನುತ್ತಾರೆ. ಹಾಗಾದರೆ ಶಂಕರಭಟ್ಟರು ಮತ್ತು ಅವರ ಅನುಯಾಯಿಗಳಾದ ಸಿದ್ಧರಾಜು ಅವರು ಮಾಡುತ್ತಿರುವುದದರೂ ಏನು ? ಕನ್ನಡದ ಬಗ್ಗೆ ತುಂಬ ಕಾಳಜಿ ಇದೆ. ಅದು ಉಳಿಯಬೇಕು, ಬೆಳೆಯಬೇಕು ಎಂಬುದು ಎಲ್ಲ ಕನ್ನಡಿಗರ ಆಶಯವಾಗಿರುತ್ತದೆ. ಆದರೆ ಅದನ್ನು ಹೀಗೇ ಇರಬೇಕು ಎಂದು ನಿರ್ದೇಶನ ಮಾಡಿ ಜನರ ಮೇಲೆ ಹೇರುವುದು ಸರ್ವಥಾ ಸರಿಯಲ್ಲ ! ಶಂಕರ ಭಟ್ಟರಂತೂ ‘ಅಕ್ಷರ’ವನ್ನು ‘ಬರಿಗೆ’ ಎಂದೇ ಕರೆಯಲು ಆರಂಭಿಸಿದ್ದಾರೆ ! ಭಾಷೆಯೊಂದರಲ್ಲಿ ಕಡಿಮೆ ಅಕ್ಷರಗಳಿದ್ದಷ್ಟೂ ಆ ಭಾಷೆ ಬೆಳವಣಿಗೆ ಹೊಂದುತ್ತದೆ ಎಂಬ ವಿಚಾರವನ್ನು (ವಿ.ಕ. 21-10-2012) ಪ್ರತಿಪಾದಿಸತೊಡಗಿದ್ದಾರೆ. ಇಲ್ಲಿ ಹೊಸದೇನೂ ಇಲ್ಲ. ಕನ್ನಡದ್ದೇ ಎನ್ನುವ ಪದಗಳನ್ನು ಬಿಟ್ಟರೆ ವಿಚಾರವೆಲ್ಲ ಹಳೆಯದೇ. ಕೇಶಿರಾಜ ಕೂಡ ಅಕ್ಷರಗಳನ್ನು ಕಡಿಮೆ ಮಾಡಲು ಹೆಣಗಾಡಿದ್ದಾನೆ ; ಭಾಷಾಶಾಸ್ತ್ರಜ್ಞರೂ ಈ ಬಗ್ಗೆ ಈಗಾಗಲೇ ಚರ್ಚೆ ನಡೆಯಿಸಿದ್ದಾರೆ.
ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಲೇಬೇಕು. ಭಾಷೆಯ ಜಾಯಮಾನಕ್ಕೆ ತಕ್ಕಂತೆ ಅಕ್ಷರಗಳು ರೂಪುಗೊಂಡಿರುತ್ತವೆ. ಈ ವಿಚಾರವನ್ನು ಶಂಕರ ಭಟ್ಟರು ಯಾಕೆ ಮರೆತಿದ್ದಾರೋ ತಿಳಿಯದು. ಸಮಸ್ಕøತದಲ್ಲಿ ಕಡಿಮೆ ಅಕ್ಷರಗಳಿರುವುದನ್ನು ಹೇಳಿರುವ ಅವರು ಅದೇ ದೇವನಾಗರಿ ಲಿಪಿಯನ್ನು ಬಳಸಿಕೊಂಡು ಬೆಳೆದು ಬಂದಿರುವ ಹಿಂದಿ, ಮರಾಠಿ ಬಗ್ಗೆ ಮಾತನಾಡುವುದಿಲ್ಲ. ಮರಾಠಿ ಅಥವಾ ಹಿಂದಿಯಲ್ಲಿ ‘ಇ, ಈ, ಉ, ಊ’ ಇವೆಯಾದರೂ ‘ಎ, ಒ’ಗಳು ಇಲ್ಲ. ಹೀಗಾಗಿಯೇ ಮರಾಠಿಗರು ಮಾತನಾಡುವಾಗ ‘ಹೆಡ್ಮಾಸ್ಟರ್’ ಎನ್ನುವುದನ್ನು ‘ಹೇಡಮಾಸ್ಟರ್’ ಎಂದೇ ಉಚ್ಛರಿಸುತ್ತಾರೆ. ಹಾಗೆಯೇ ‘ಒದರುವ’ ಎಂಬುದನ್ನು ‘ಓದರುವ’ ಎಂದೇ ಮಾತಿನಲ್ಲೂ ಬರವಣಿಗೆಯಲ್ಲೂ ಬಳಸುತ್ತಾರೆ. ಹೀಗಾದಾಗ ಆಯಾ ಪ್ರದೇಶದ ಭಾಷೆಗಳ ಮಿತಿಯನ್ನು ತಿಳಿದುಕೊಂಡಿರಬೇಕು. ಕೇವಲ ಆಡುಮಾತುಗಳನ್ನೇ ಇಟ್ಟುಕೊಂಡು ವಾದಕ್ಕೆ ಇಳಿಯುವ ಶಂಕರ ಭಟ್ಟರು ಇಂಥ ಸೂಕ್ಷ್ಮಗಳನ್ನೂ ಅರಿತಿರಬೇಕಾಗುತ್ತದೆ. ಅಕ್ಷರಗಳು ಹೆಚ್ಚೋ, ಕಡಿಮೆಯೋ ಎಂಬುದು ಭಾಷಾ ಬೆಳವಣಿಗೆಗೆ ಪೂರಕವಾದ ಸಂಗತಿಯಲ್ಲ ಎಂಬುದನ್ನು ಮೊದಲು ಅವರು ಗಮನಿಸಬೇಕು. ಚೀನಿ ಭಾಷೆಯಲ್ಲಿ ಎಷ್ಟು ಅಕ್ಷರಗಳಿವೆ ಎಂಬುದನ್ನು ಅವರು ಅರಿತಿದ್ದಾರೆ. ಹಾಗಂತ ಚೀನಿ ಭಾಷೆ ನಶಿಸಿದೆಯೆ ? ಇಲ್ಲ. ಇವತ್ತು ಆ ದೇಶದ ಪ್ರತಿಯೊಂದು ಉತ್ಪನ್ನಗಳ ಮೇಲೆ ಆ ಭಾಷೆಯ ಬಳಕೆ ಇದೆ. ಕನ್ನಡಕ್ಕೆ ಕುತ್ತು ಇರುವುದು ಇಂಥಲ್ಲಿಯೇ ! ವಿನಃ ಶಂಕರ ಭಟ್ಟರು ಅಥವಾ ಅವರ ಅನುಯಾಯಿಗಳು ಹೇಳುವ ಕಾರಣಗಳಿಂದಲ್ಲ ಎನ್ನುವುದನ್ನು ನಾವೆಲ್ಲ ಅರಿಯಬೇಕಿದೆ. ಒಂದು ನಾಡಿನ ಭಾಷೆಯೊಂದು ಅನ್ನ ಕೊಡುವ ತಾಕತ್ತು ಹೊಂದಿರಬೇಕು ; ಆ ನಾಡಿನಲ್ಲಿ ಉತ್ಪನ್ನವಾಗುವ ಎಲ್ಲ ವಸ್ತುಗಳ ಮೇಲೆ ಅಲ್ಲಿಯ ಭಾಷೆಯೇ ಪ್ರಮುಖವಾಗಿ ಕಾಣಿಸಬೇಕು. ಅಂದಾಗ ಮಾತ್ರ ಆ ನಾಡಿನ ಭಾಷೆ ಉಳಿಯುತ್ತದೆ ; ಬೆಳೆಯುತ್ತದೆ. ಒಣ ವೇದಾಂತಕ್ಕಿಂತ ವಾಸ್ತವವನ್ನು ತಿಳಿದುಕೊಳ್ಳುವುದು ಉತ್ತಮ.
ಇದೆಲ್ಲ ಬಿಟ್ಟು ಅಕ್ಷರಗಳನ್ನು ಕಡಿಮೆ ಮಾಡಬೇಕು. ಪದಗಳನ್ನು ‘ಹೀಗೆ’ ಪರಿವರ್ತಿಸಿಕೊಳ್ಳಬೇಕು ಎಂಬುದೆಲ್ಲ ಪ್ರಚಾರಕ್ಕಾಗಿ ಮಾಡುವ ಒಂದು ಗಿಮಿಕ್ಕಾಗಿ ತೋರುತ್ತದೆ ! ಇದರಿಂದ ಯಾರಿಗೂ ನಯಾಪೈಸೆಯ ಲಾಭವಿಲ್ಲ. ‘ಎಲ್ಲರ ಕನ್ನಡ’ ಎಂದು ಹೇಳುತ್ತಲೇ ಕನ್ನಡವನ್ನು ತೀರ ಸಂಕೀರ್ಣಗೊಳಿಸಿ ಹಾಳು ಮಾಡುತ್ತಿರುವ ಕೆಲಸ ನಿಲ್ಲಬೇಕು. ಅಂಥವರಿಗೆ ವೇದಿಕೆ ಒದಗಿಸುವ ವೇದಿಕೆಗಳೂ ಕೂಡ ನಿಷ್ಪಕ್ಷಪಾತದಿಂದ ಎಲ್ಲರ ಅಭಿಪ್ರಾಯಗಳಿಗೆ ಮನ್ನಣೆ ಕೊಡಬೇಕು.
ಹೀಗೇ ಇರಬೇಕು. ಹೀಗೆಯೇ ಬರಬೇಕು ; ಬರೆಯಬೇಕು ಎಂಬ ವಿಚಾರಗಳನ್ನೇ ಇಟ್ಟುಕೊಂಡಿದ್ದ ಆಂಡಯ್ಯ ಕೂಡ ಕಬ್ಬಿಗರ ಕಾವ ಬರೆದ. ಆದರೆ ಅದರ ಪ್ರಭಾವ ಏನಾಯಿತು ? ಏನಾದರೂ ಬದಲಾವಣೆ ಸಾಧ್ಯವಾಯಿತೇ. ಈಗ ‘ಕಬ್ಬಿಗರ ಕಾವ’ ಅರ್ಥ ಮಾಡಿಕೊಳ್ಳುವವರೆಷ್ಟು ಇದ್ದಾರೆ ? ಇಂಥ ವಿಷಯಗಳನ್ನೆಲ್ಲ ಮನಗಾಣದೇ ವಿಚಾರಗಳನ್ನು, ಅಭಿಪ್ರಾಯಗಳನ್ನು ಹೇರುವುದು ಸರ್ವಥಾ ಸರಿಯಲ್ಲ. ಬಹುಶಃ ಆಂಡಯ್ಯನ ಅನುಯಾಯಿಗಳು ಇನ್ನೂ ಇದ್ದಾರೆ ಎನ್ನುವುದೇ ಸೋಜಿಗ ! ಮತ್ತೇ ನಾವು ಆಂಡಯ್ಯ ಆಗುವುದು ಬೇಡ !

Tuesday, October 16, 2012

ಶಂಖದಿಂದ ಬಂದರೆ ಮಾತ್ರ ತೀರ್ಥ !



ಸಾಹಿತ್ಯದ ವಿಮರ್ಶೆಯ ಬಗ್ಗೆ ನಾನು ಪದೇ ಪದೇ ಅಂದ್ರೆ ಬಹಳಷ್ಟು ಸಲ ಹೊಸದಾಗಿ ಬರೆಯುವ ನನ್ನ ವಿದ್ಯಾರ್ಥಿಗಳಾದಿಯಾಗಿ ಎಲ್ಲರಿಗೂ ಹೇಳುವ ಸಂಗತಿಯನ್ನು ನಿಮ್ಮ ಮುಂದೆ ಇಡುತ್ತಿರುವೆ. ಒಂದು ನಾಲ್ಕು ಸಾಲಿನ ಕವಿತೆಯನ್ನು ಕೊಟ್ಟು ಆ ಬಗ್ಗೆ ಬರೆಯುತ್ತೇನೆ. ಆ ಕವಿತೆ ಹೀಗೆಇದೆ ;

ಆತ ಅತ್ತ ಕಡೆಯಿಂದ ಬಂದ
ಆಕೆ ಇತ್ತ ಕಡೆಯಿಂದ ಬಂದಳು
ನಡುವೆ ಒಂದು ವೃತ್ತ
ಇಬ್ಬರೂ ಸಂಧಿಸುವಲ್ಲಿ
ಆತ ಬಲಕ್ಕೆ ಹೊರಳಿದ
ಆಕೆ ಎಡಕ್ಕೆ ಹೊರಳಿದಳು !

ಹೀಗೆ ಬರೆದು ಯಾರಾದರೂ ವಿದ್ವಾಂಸರು, ಬರಹಗಾರರು ಎಂದುಕೊಂಡವರ ಬಳಿಗೆ ನೀವು 'ಸರ್, ಇದು ನಾನು ಬರೆದ ಕವಿತೆ' ಎಂದುಕೊಂಡು ಹೋದಿರೋ ಮುಗಿಯಿತು ...  ಅವರು ಬುದ್ಧಿವಾದ ಹೇಳುತ್ತಾರೆ. ಇದು ಕವಿತೆಯೇ ಅಲ್ಲ ಎನ್ನುವಂತೆ ಮಾತಾಡುತ್ತಾರೆ ! ಇನ್ನೊಂದಿಷ್ಟು ಗಂಭೀರವಾಗಿ ಬರೆಯುವಂತೆ ಪುಕ್ಕಟೆ ಸಲಹೆಯನ್ನೂ ನೀಡುತ್ತಾರೆ !

ಅದೇ ನೀವು ಇದೇ ಕವಿತೆಯನ್ನು ತೆಗೆದುಕೊಂಡು ಯಾವುದೋ ಒಬ್ಬ ಹೆಸರಾಂತ ಕವಿಯ ಹೆಸರನ್ನು  ಬರೆದು 'ಇದು ಸರ್ ಇಂಥವರು ಬರೆದ ಕವಿತೆ' ಅನ್ನಿ. ಆವಾಗ ಸುರುವಾಗುತ್ತೆ ನೋಡಿ ಅವರ ವಿಮರ್ಶಕ ಬುದ್ಧಿ ! ಈ ಕವಿತೆಯನ್ನು ಅವರು ಹೊಗಳುತ್ತಾರೆ. ಪ್ರಕೃತಿ-ಪುರುಷ ಎಂದು ಮೊದಲಾಗಿ ಮಾತನಾಡುತ್ತಾರೆ. ಕೆಲವೊಬ್ಬರು ಅದಕ್ಕೆ ಆಧ್ಯಾತ್ಮಿಕ ಹೋಲಿಕೆಯನ್ನೂ ನೀಡುತ್ತಾರೆ !

ಹಾಗಾದರೆ ಶಂಖದಿಂದ ಬಂದದ್ದು ಮಾತ್ರ ತೀರ್ಥವೇ ?

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.