Showing posts with label ಸಾಯಿ. Show all posts
Showing posts with label ಸಾಯಿ. Show all posts

Tuesday, July 30, 2013

ಧರ್ಮಗಳ ಗೊಂದಲ ನಿವಾರಣೆ


ಮೂಲ ಮರಾಠಿ : ಡಾ. ವಿನೋದ ಗಾಯಕವಾಡ                            
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
------------------------------------------------------------------------------------
ಒಂದೊಮ್ಮೆ ಆ ಬಾಲಯೋಗಿ ಪ್ರಸನ್ನಚಿತ್ತನಾಗಿ ಕುಳಿತಿರುವಾಗ ಜನರೆಲ್ಲ ಆತನ ಸುತ್ತ ನೆರೆಯುತ್ತಿದ್ದರು. ಸಹಜವಾಗಿಯೇ ಮಾತುಕತೆ-ಚರ್ಚೆ ಸುರುವಾಗುತ್ತಿದ್ದವು. ಆತ ಕೂಡ ತುಂಬ ಉತ್ಸಾಹದಿಂದಲೇ ಉತ್ತರ ನೀಡುತ್ತಿದ್ದ. ಜನರ ಪ್ರಶ್ನೆಗಳು ಮುಗಿಯುವುದೇ ಇಲ್ಲವೇನೋ ಎನಿಸುತ್ತಿತ್ತು. ಇದು ಆತನ ಅರಿವಿಗೂ ಬಂತು. ಆದರೂ ಉತ್ತರ ನೀಡಲು ಆತ ಬೇಸರಿಸುತ್ತಿರಲಿಲ್ಲ. ಕೇಳಿದವರಿಗೆ ಸಮಾಧಾನವಾಗುತ್ತಿರವುದನ್ನು ಕಂಡು ಆತ ಮತ್ತಷ್ಟು ಖುಷಿಗೊಳ್ಳುತ್ತಿದ್ದ.
“ಬೇಟಾss...”
ಮುಸ್ಲಿಂ ಮುದುಕನೊಬ್ಬ ತುಂಬ ವಿನಯದಿಂದಲೇ ತನ್ನ ಬಿಳಿಗಡ್ಡದ ಮೇಲೆ ಕೈಯಾಡಿಸುತ್ತ ಕರೆದ.
“ಜೀ, ಚಾಚಾ ...”
“ಒಂದ್ ಸವಾಲ್ ಕೇಳ್ಲಿ ?”
“ಜೀ”
“ನಾರಾಜ್ ಆಗ್ಬಾರ್ದ ಮತ್ತ ...”
“ಇಲ್ಲ ... ನಾ ನಾರಾಜ್ ಆಗೂದಿಲ್ಲ ಚಾಚಾ. ನಿಮಗ ಗೊತ್ತೇತಿ ...”
“ಖರೇ, ತುಮ್ ಕೌನ್ ಹೋ ?”
“ಇದಕ್ಕ ನಾ ಒಂದ್ಸಲಾ ಉತ್ತರಾ ಕೊಟ್ಟೇನಿ ಚಾಚಾ. ಮೈ ತೋ ಖುದಾ ಕಾ ಬಂದಾ ಹ್ಞುಂ...” ಆಕಾಶದತ್ತ ಕೈ ಎತ್ತಿ ಆ ಯೋಗಿ ಹೇಳಿದ.
“ಅದೂ ಖರೆ...” ಗಡಬಡಿಸಿದ ಮುದುಕ ತಪ್ಪೊಪ್ಪಿಕೊಂಡ. ಆತನಿಗೆ ಮುಂದೆ ಕೇಳುವ ಧೈರ್ಯವಾಗುತ್ತಿರಲಿಲ್ಲ. ಆತ ಧೈರ್ಯವನ್ನೆಲ್ಲ ಒಟ್ಟುಗೂಡಿಸತೊಡಗಿದ್ದ.
“ಮತ್ತ ...?” ಆ ಬಾಲಯೋಗಿ ನಗುತ್ತಲೇ ಕೇಳಿದ.
“ತುಮ್ ಕೌನಸೇ ಧರ್ಮ ಕೇ ಹೋ ? ಹಿಂದೂ ಯಾ ... ಮುಸ್ಲಿಂ ? ಚಾಚಾ ಬಿಡಿ ಬಿಡಿಯಾಗಿಯೇ ಕೇಳಿಯೇ ಬಿಟ್ಟ !
ಸೇರಿದವರೆಲ್ಲ ಸ್ತಬ್ದರಾದರು.
“ಚಾಚಾss...” ಆ ಬಾಲಯೋಗಿ ಆ ಮುದುಕನ್ನೇ ತೀಕ್ಷ್ಣವಾಗಿ ದಿಟ್ಟಿಸುತ್ತ ಕರೆದ.
“ಜೀss ...”
“ನಾ ನಿಮಗ ಯಾರ ಅನ್ನಿಸ್ತೇನಿ ? ಹಿಂದೂ ಅನ್ನಿಸ್ತೀನೋ ಇಲ್ಲ ಮುಸ್ಲಿಂ ಕಾಣ್ಸತೀನೋ ?”
“ಆ್ಞಂss ... ಅss... ...”
“ಬೋಲೋ ...”
“ನನಗಂತೂ ಮುಸಲಮಾನ ಅನ್ನಿಸ್ತಿ. ... ಹಮಾರೇ ಹೀ ಮಜಹಬ್ ಕೆ ಲಗ್ತೇ ಹೋ ... ಇಸ್ಲಾಂ ಕೇ ಬಂದೇ ಲಗ್ತೇ ಹೋ”
“ನಿಮಗ ಹಂಗ ಅನ್ನಿಸಿದ್ರ ನಾ ಖರೇನ ಮುಸಲ್ಮಾನ ಅದೇನಿ !”
“ಯಾ ಖುದಾss, ತೇರಿ ರಹಮತ್ ಐಸಿ ಹೀ ರಹೇ” ಆ ಮುದುಕ ಆಕಾಶದ ಕಡೆ ನೋಡುತ್ತ ತುಂಬ ಖುಷಿಯಿಂದ ಹೇಳಿದ. ಆತನ ಮುಖ ಮೊರದಗಲವಾಗಿತ್ತು.
ಆ ಗುಂಪಿನಲ್ಲಿದ್ದ ಹಿಂದೂಗಳಿಗೆ ಏನೋ ಅಸ್ವಸ್ಥತೆ ಆವರಿಸಿತು ! ಅವರು ಪರಸ್ಪರ ಮುಖ ಮುಖ ನೋಡಿಕೊಳ್ಳತೊಡಗಿದರು.
“ಸದಾಶಿವss, ನಿನ್ನ ಒಂದ್ಮಾತ ಕೇಳ್ಲಿ ?”
“ಕೇಳ ಬಾಳಾ ...” ಸದಾಶಿವ ವಿನಮ್ರತೆಯಿಂದಲೇ ಎದ್ದು ನಿಂತು ಕೈ ಮುಗಿದು ಹೇಳಿದ.
“ಕುಂಡ್ರು ... ಕುಂಡ್ರು ... ನನಗ ಹೇಳ ಈಗ, ನಿನಗ ನಾ ಯಾರ ಅನ್ನಿಸ್ತೇನಿ ?”
ಸದಾಶಿವ ಕೆಳಗೆ ಕುಳಿತುಕೊಳ್ಳುತ್ತ ಹೇಳಿದ, “ಅಗ್ದೀ ದೇವ್ರ ಆಣೀ ಮಾಡಿ ಹೇಳ್ತ್ಯಾನು ... ನೀ ನಮಗ ಹಿಂದೂನss ಅನ್ನಿಸ್ತಿ. ...ಅಲ್ಲ, ಖರೇ ಅಂದ್ರೂ ನೀ ಹಿಂದೂssನ ಅದಿ... ನಡು ನಡುವ ಮುಸಲರ ಭಾಷಾ ಮಾತಾಡಿದ್ರ ಯ್ಯಾನಾತು ? ಈ ಚಾಚಾಗ ಯ್ಯಾನ ಅನ್ನಿಸಿದ್ರೂ ಅದರಿಂದ ಯ್ಯಾನೂ ಫರಕ್ ಬೀಳೂದಿಲ್ಲ ! ನೀ ಹಿಂದೂನss ಅದಿ”
ಸದಾಶಿವನ ಉತ್ತರದಿಂದ ಹಿಂದೂಗಳಿಗೆ ತುಂಬ ಖುಷಿಯಾಯಿತು. ಯಾಕೆಂದರೆ ಆತ ಅವರ ಮನಸ್ಸಿನೊಳಗೆ ಇದ್ದುದ್ದನ್ನೇ ಹೇಳಿದ್ದ. ಆದರೆ ಮುಸ್ಲಿಂರು ಒಂದಿಷ್ಟು ಬೇಸರಿಸಿಕೊಂಡರು.
ಆ ಯೋಗಿ ಮಾತ್ರ ನಗುತ್ತಲೇ ಇದ್ದ.
ಆತನ ಮುಖದ ಮೇಲಿನ ಕಾಂತಿ ಚಿಮ್ಮುತ್ತಲೇ ಇತ್ತು.
ಆಗ ವಾಮನ ತಾತ್ಯಾ ಕೈ ಮುಗಿದು ಹೇಳಿದ, “ಮಹಾರಾಜ್, ನಿಮ್ಮ ಈ ಉತ್ತರದಿಂದ ನಮಗ ಸಮಾಧಾನ ಆಗಿಲಿಲ್ಲ. ನಾವೆಲ್ಲ ಸೇರಿ, ನೀವು ಯಾರ ಅದೇರಿ ಅನ್ನೋದಕ್ಕ ಏನ ಮಹತ್ವ ಅದ ? ನೀವ್ ಯಾರ ಅದೇರಿ ಅದನ್ನ ನೀವss ನಿಮ್ಮ ಬಾಯಿಂದ ಹೇಳ್ರಿ. ಅಂದ್ರ ನಮಗ ಸಮಾಧಾನ ಆಗ್ತದ”
“ಹ್ಞಾಂ ... ಹ್ಞಾಂ ... ನೀವss ಹೇಳ್ರಿ ನೀವss ಹೇಳ್ರಿ”
“ಅಗ್ದೀ ಬರೋಬ್ಬರಿ...”
“ಸಹೀ ಹೈ ... ಸಹೀ ಹೈ”
ಇದss ಸರಿ. ಕೃಪಾ ಮಾಡಿ ನೀವss ಹೇಳ್ರಿ... ತುಮ್ ಕೌನ್ ಹೋ ? ಹಿಂದೂ ಯಾ ಮುಸ್ಲಿಂ ?
ಆ ಯೋಗಿ ಇನ್ನೂ ನಗುತ್ತಲೇ ಇದ್ದ.
ಆತ ಕೈ ಮೇಲೆತ್ತಿ ಎಲ್ಲರನ್ನೂ ಶಾಂತವಾಗಿಸಿ ಹೇಳಿದ, “ಒಂದ್ ವೇಳೆ ನಾ ಮುಸಲಮಾನ್ರಿಗಿ ಮುಸಲಮಾನ ಅನ್ನಿಸಿದರ, ಹಿಂದೂಗೋಳ್ಗಿ ಹಿಂದೂ ಅನ್ನಿಸಿದ್ರ ಆಕ್ಷೇಪ ಮಾಡುವಂಥದ್ದ ಏನೇತಿ ? ನಾ ಹಿಂದೂನೂ ಹೌದು ... ಮತ್ತ ಮುಸಲಮಾನನೂ ಹೌದು. ಪ್ರಶ್ನೆಯೇ ಇಲ್ಲಿ ಉದ್ಭವಿಸೋದಿಲ್ಲ. ಅಲ್ಲೇನ ಚಾಚಾ ? ಏನಪಾ ಸದಾಶಿವಾ ?”
ಆತನ ಈ ಮಾತು ಯಾರಿಗೂ ತಿಳಿಯಲಿಲ್ಲ. ಆತನ ಹೇಳಿಕೆಯಿಂದ ಎಲ್ಲರಿಗೂ ಸಮಾಧಾನವಾಗುವ ಬದಲು ಮತ್ತಷ್ಟು ಬೆಚೈನಿ ಉಂಟಾಯಿತು.
ಚಾಚಾ ಎದ್ದು ನಿಂತು ಕೇಳಿದ, “ಬೇಟಾ, ನಮಗ ಸಮಾಧಾನ ಆಗದಿಲ್ಲ. ಖರೇ ಏನೇತಿ ಅದನ್ನ ನೀನ ನಿನ್ನ ಬಾಯಿಂದನss ಹೇಳ. ಹಂಗೇನಾರ ನೀ ಹಿಂದೂ ಅಂದ್ರೂ ನಮಗ್ಯಾನ ಫರಕ್ ಬೀಳೂದುಲ್ಲ. ನೀ ಮುಸಲರಾಂವ ಅಂದ್ರೂ ಹಿಂದೂಗೋಳಿಗೂ ಯ್ಯಾನ ಫರಕ್ ಬೀಳೂದುಲ್ಲ. ನಿನ್ನ ಮ್ಯಾಲ ನಮ್ಮೆಲ್ಲರ ಭಕ್ತಿ ಈಗ ಹೆಂಗ ಏತಿ ಹಂಗss ಇರ್ತೇತಿ...”
“ಹಂಗೇನಾರ ಇತ್ತಂದ್ರ ಮತ್ತ ಯಾಕ ಪ್ರಶ್ನಾ ಮಾಡಿದ್ರಿ ? ನಾ ಹಿಂದೂ ಅಥವಾ ಮುಸಲ್ಮಾನ ಆಗೋದ್ರಿಂದ ಜರ್ ಯಾರಿಗೂ ಫರಕ್ ಬೀಳೂದಿಲ್ಲ ಅಂದ್ರ ನೀವ್ಯಾಕ ಅದರಾಗ ಬೀಳಾಕತ್ತೇರಿ ?”
“ಹಂಗೇನಿಲ್ಲ ... ಒಂದ್ಸಲಾ ನಿನ್ನ ಬಾಯಿಂದ ನಾವ್ ಕೇಳ್ಬೇಕಾಗೇತಿ...”
ಸದಾಶಿವ ನುಡಿದ.
“ಆತು, ಆತರಲೇಪಾ ... ಈ ಪ್ರಶ್ನಾ ಭಾಳ ಗಹನ ಏತಿ. ನಿಮ್ಮ ದೃಷ್ಟಿಕೋನದಿಂದ ಅದ್ ಭಾಳ ಮೌಲ್ಯದ್ದ ಅನ್ನಿಸ್ತೇತಿ ! ನನ್ನ ದೃಷ್ಟಿಯೊಳಗ ಇದೆಲ್ಲ ಅರ್ಥ ಇಲ್ಲದ್ದು ! ಆದರ ಒಮ್ಮೀ ಮನುಷ್ಯಾನ ಕಡಿ ಹೆಂಗ ನೋಡ್ಬೇಕ ಅನ್ನೋದನ್ನ ನೀವೆಲ್ಲಾರೂ ಕಲಿಯಾಕss ಬೇಕ. ಈ ಪ್ರಶ್ನೆಕ ನಾ ಉತ್ತರ ಕೊಡೂದಿಲ್ಲ. ನನ್ನ ಅವ್ವನ ಇದಕ್ಕ ಉತ್ತರ ಕೊಡ್ತಾಳು ... !” ಇಷ್ಟು ಹೇಳಿದ ಆ ಯೋಗಿ ತನ್ನನ್ನೇ ನಿಟ್ಟಿಸುತ್ತ ಕುಳಿತ್ತಿದ್ದ ಬಾಯಜಾಬಾಯಿಯತ್ತ ತಿರುಗಿ ಕರೆದ, “ಆಯೀss...”
ಆಕೆ ಎಚ್ಚೆತ್ತುಕೊಂಡಳು.
“ಏನೋ ಬಾಳಾ ...?”
“ನೀ ಈ ಎಲ್ಲಾ ಚರ್ಚಾ ಕೇಳಾಕತ್ತಿಯಲ್ಲ ?” ಆತನ ಗೂಢಧ್ವನಿ ಆಕೆಯ ಕಿವಿಯಲ್ಲಿ ಹೊಕ್ಕಾಗ ಆಕೆ ಮೈಯಲ್ಲಿ ವಿಚಿತ್ರವಾದ ಒಂದು ಚೇತನ ಸಂಚಲನವಾದಂತಾಯಿತು.
“ಹ್ಞಾಂ, ಹೌದಪಾ... ಕೇಳ್ಲಿಕ್ಕತ್ತೇನಿ. ಆದರ ಬಾಳಾ, ಅದರಾಗ ನನಗೇನೂ ತಿಳಿಲಿಲ್ಲ !”
“ಆಯೀ, ನೀನ ಹೇಳ ... ನಾ ಯಾರ ಅದೇನಿ ? ಹಿಂದೂನೋ ಮುಸಲ್ಮಾನೋ ?”
“ಬಾಳಾ, ನನಗ ಅದೇನೂ ತಿಳಿಯೂ ಮಾತಲ್ಲ ತಗಿ. ಮತ್ತ ನನಗ ಅದರ ಗರಜೂ ಇಲ್ಲ ! ನೀ ನನ್ನ ಮಗಾ ಅದೀ ; ನಾ ನಿನ್ನ ಅವ್ವ ಅದೇನಿ ಅನ್ನೋದ ಮಾತ್ರ ನನಗ ಗೊತ್ತದ ಅಷ್ಟ ! ನೀ ಹಿಂದೂ ಆಗಿರು, ಮುಸ್ಲಿಂ ಆಗಿರು ನನಗೇನ ಫರಕ್ ಬೀಳೂದಿಲ್ಲ”
“ಕೇಳ್ರಿ, ಇದು ... ಇದು ನಿಮ್ಮ ಪ್ರಶ್ನಾಕ ಸರಿಯಾದ ಉತ್ತರ ! ನನ್ನ ಈ ಅವ್ವ ನನ್ನ ಕಡೀ ಧರ್ಮದ ದೃಷ್ಟಿಯಿಂದ ನೋಡೂದಿಲ್ಲ. ಅಂಗಡ್ಯಾಂವ ಬೆಲ್ಲಾ ಕೊಡಬೇಕಾರ ಕಾಗದಾ ಸುತ್ತಿ ಕೊಡ್ತಾನಲಾ ... ಹಂಗ ಮನುಷ್ಯನನ್ನ ಧರ್ಮದ ಕಾಗದದಾಗ ಗುಂಡಾಳ್ಸಾಕತ್ತೇರಿ ನೀವು ! ಅರೇ, ಬೆಲ್ಲಾ ಮಹತ್ವದ್ದೋ, ಕಾಗದಾ ಮಹತ್ವದ್ದೋ ? ನಿಮ್ಮ ಎಲ್ಲಾ ಚರ್ಚಾ ಆ ಕಾಗದದ ಸುತ್ತss ಗಿರಕಿ ಹೊಡಿಯಾಕತ್ತೇತಿ. ಯಾವುದರ ರುಚಿ ನೋಡಬೇಕಾಗೇತ್ಯೋ ಅದನ್ನss ಬಿಟ್ಟೇರಿ ! ಯಾವುದನ್ನ ಉಪಯೋಗ ಮಾಡಬೇಕೋ ಅದನ್ನ ಉಪಯೋಗ ಮಾಡವಲ್ಲರಿ ! ನಿಮಗ ಬೇಕಾದ ಬೆಲ್ಲಾ ನೀವ್ ತಿನ್ನಾವ್ರಾದ್ರೂ ಯಾವಾಗ ? ಒಳಗಿನ ಬೆಲ್ಲಾ ತಗದರ ಕಾಗದಾ ಕಚರಾದಾಗ ಸೇರ್ತೇತಿ ಹೌದಿಲ್ಲೋ ? ಹೂವಿನೊಳಗಿನ ಸುಗಂಧ ಭಾಳ ಮುಖ್ಯ ; ಯಾಕಂದ್ರ ಹೂವು ಒಂದss ಒಂದ ದಿನಾ ತಾಜಾ ಇರ್ತೇತಿ. ಮರುದಿನಾ ಅದ ಹಾಳ ಆಗ್ತೇತಿ ! ಅದರೊಳಗಿನ ಸುಗಂಧ ಮಾತ್ರ ಶಾಶ್ವತ ಆಗಿರ್ತೇತಿ. ಕಂಠಕ್ಕಿಂತ ಅದರೊಳಗಿಂದ ಜಿಗಿಯೋ ಧ್ವನಿ ಮಹತ್ವದ್ದು ! ಕಣ್ಣಿಗಿಂತ ಅದರೊಳಗ ಇರೂ ತೇಜಸ್ಸ ಮಹತ್ವದ್ದು ! ಆ ತೇಜಸ್ಸಿನಿಂದಾನ ಈ ಜಗಾ ಕಾಣ್ತೇತಿ ಹೌದಿಲ್ಲೋ ? ಈ ದೇಹ ಯಾವ ಧರ್ಮದ ಅವ್ವ-ಅಪ್ಪನ ಹೊಟ್ಟಿಯೊಳಗ ಹುಟ್ಟೇತಿ ಅನ್ನೋದು ಮಹತ್ವದ್ದಲ್ಲ ; ಈ ದೇಹದೊಳಗಿರೋ ಅವಿನಾಶಿ ತತ್ವಕ್ಕ, ಶಾಶ್ವತ ಆತ್ಮಕ್ಕ ಮಹತ್ವ ಏತಿ ! ನೀವು ಶಾಣ್ಯಾ ಮಂದಿ ಇದ್ದೇರಿ. ಹಿಂಗಾಗಿ ಧರ್ಮದ ಬಗ್ಗೀ ಚರ್ಚಾ ಮಾಡ್ತೇರಿ... ಆದರ ನನ್ನ ಆಯೀ ನಿಮಗಿಂತ ಶಾಣ್ಯಾ ಅದಾಳು ... ಆಕೀ ಧರ್ಮಕ್ಕಿಂತ ಮನುಷ್ಯಾನ ಕಡೀ ನೋಡ್ತಾಳು ; ಮನುಷ್ಯಾನ ಒಳಗಿರೋ ದೈವತ್ವದ ಕಡೀ ನೋಡ್ತಾಳು... ನೀವೂ ಸುದ್ದಾ ಇದ ದೃಷ್ಟಿ ಇಟ್ಕೊಳ್ರಿ ... ಅಂದ್ರ ನಿಮ್ಮ ಜೀವನಾ ಸಾರ್ಥಕ ಆಗ್ತೇತಿ ...”

*****

Tuesday, July 23, 2013

ಮ್ಹಾಳಸಾ : ಅಪರೂಪದ ಭಕ್ತೆ !

ಮೂಲ ಮರಾಠಿ : ಡಾ. ವಿನೋದ ಗಾಯಕವಾಡ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
--------------------------------------------- 
(ಸಧ್ಯದಲ್ಲೇ ಪ್ರಕಟಗೊಳ್ಳುವ ನಾನು ಅನುವಾದಿಸಿದ ಸಾಯಿ ಕಥಾ ಆಧಾರಿತ ಮಹಾಕಾದಂಬರಿಯ ಒಂದು ಕತೆ)

ಮ್ಹಾಳಸಾ !
ಮ್ಹಾಳಿ...
ಕುಬ್ಜ ದೇಹ, ಕೆದರಿದ ಕೂದಲು, ಒಣಗಿದ ಮುಖ, ಹರಿದ ಬಟ್ಟೆ, ಅಲ್ಲಲ್ಲಿ ಚಿಂದಿ ಕಟ್ಟಿಕೊಂಡಿರುವ ಮ್ಹಾಳಸಾ...
ಹುಚ್ಚಳಂತೆ ಕಾಣುತ್ತಿದ್ದಳು... ಅಲ್ಲಲ್ಲ ಹುಚ್ಚಳೇ !
ತುಂಬ ಅಚ್ಚರಿಗೊಳ್ಳುವ ಹೃದಯ ಹಿಂಡುವ ಕತೆ ಆಕೆಯ ಬೆನ್ನಿಗಿತ್ತು...
ಸಂಗಮನೇರ ಊರಿನ ಸಮೀಪ ಕಸರವಾಡಿ ಸಣ್ಣ ಹಳ್ಳಿಯೊಂದಿದೆ. ಆ ಹಳ್ಳಿಯೇ ಮ್ಹಾಳಸಾಳ ಹುಟ್ಟೂರು... ಜಾತಿಯಿಂದ ಮರಾಠಾ ಹೆಣ್ಣುಮಗಳು...
ತಂದೆ-ತಾಯಿ ತುಂಬು ಪ್ರೀತಿಯಿಂದಲೇ ಆಕೆಗೆ ಹೆಸರಿಟ್ಟಿದ್ದರು...
ರಾಧಾ...
ಜನರೆಲ್ಲ ಮುದ್ದಿನಿಂದ ‘ರಾಧೀ’ ಎಂದೇ ಕರೆಯುತ್ತಿದ್ದರು...
ರಾಧಿ ತುಂಬ ಮಾತುಗಾರ್ತಿ, ಹಠಗಾರ್ತಿಯಾಗಿದ್ದರೂ ಎಲ್ಲ ಕೆಲಸವನ್ನೂ ಮಾಡಿ ಮುಗಿಸುತ್ತಿದ್ದಳು.
ಯಾರಾದರೂ ತನಗೆ ಕೆಲಸ ಹೇಳಬೇಕು... ತಾನು ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಬೇಕು ಎಂಬ ಹಂಬಲ ಆಕೆಯದು ! ಬೇರೆಯವರ ಕೆಲಸ ಮಾಡುವುದರಲ್ಲೇ ಆಕೆ ಖುಷಿ ಪಡೆಯುತ್ತಿದ್ದಳು...
“ರಾಧೇ...”ಯಾರಾದರೂ ಕರೆಯುತ್ತಿದ್ದರು...
“ಏನ್ರೀಪಾ ?”
“ನೀ ಯಾರಾಕೀ ?”
“ನಾ ನಮ್ಮವ್ವನ ಪೈಕಿ ಅಲ್ಲ” ಆಕೆಯ ಉತ್ತರ ನೀಡುವ ರೀತಿಯೇ ವಿಚಿತ್ರವಾಗಿತ್ತು. ಸುತ್ತು ಬಳಸಿ ‘ತಾನು ಯಾರಾಕಿ’ ಎಂದು ಹೇಳುವ ಮೊದಲು ‘ತಾನು ಯಾರಾಕಿ ಅಲ್ಲ’ ಎಂಬುದನ್ನು ಹೇಳುವಲ್ಲಿ ಆಕೆಗೆ ಗಮ್ಮತ್ತೆನಿಸುತ್ತಿತ್ತು...
“ಮತ್ತ ಯಾರಾಕಿ ?”
“ನಾ ಅಪ್ಪನ ಪೈಕಿನೂ ಅಲ್ಲ !”
“ಮತ್ತ ?”
“ಕಾಕಾ-ಕಾಕೂನಾಕೀ ಅಲ್ಲ...”
“ಮತ್ತ ಯಾರಲೇ ನೀ ?”
ಆಕೆ ಮನುಷ್ಯರಿಂದ ಗಿಡ-ಮರಗಳತ್ತ, ಅಲ್ಲಿಂದ ಸೂರ್ಯ-ಚಂದ್ರ ಮೊದಲಾದ ಗ್ರಹ ತಾರೆಗಳತ್ತ ಹೊರಳುತ್ತಿದ್ದಳು... !
ಕೇಳುತ್ತಿರುವವರಿಗೆ ಏನೋ ಗಮ್ಮತ್ತಿಲ್ಲ ಎನಿಸಿ ಬೇಸರವಾಗಬೇಕು... ಅವರು ಅಲ್ಲಿಂದ ಜಾಗ ಖಾಲಿ ಮಾಡುವಾಗಲೇ ಆಕೆ ಅವರ ಕೈ ಹಿಡಿದು ಜಿಗಿಯುತ್ತ ಹೇಳುತ್ತಿದ್ದಳು... “ಹೆಂಗ ಗಮ್ಮತ್ತ ಮಾಡ್ನಿ ? ... ಆದರ ಈಗ ನಾ ಖರೇ ಖರೇನ ಹೇಳ್ತೇನ ಹ್ಞಾಂ...”
“ಹೇಳ ನೋಡೂಣು ?”
“ರಾಧಾ ಯಾರಾಕಿ ಇರ್ತಾಳು ?” ಆಕೆ ಮರಳಿ ಪ್ರಶ್ನೆ ಹಾಕುತ್ತಿದ್ದಳು...
“ಲೇ, ಇಲ್ಲಿ ನೋಡ... ನನಗೀಗ ವ್ಯಾಳಿ ಇಲ್ಲ... ಹೇಳೋದಿತ್ತಂದ್ರ ಸರಳ ಹೇಳ... ಇಲ್ಲಂದ್ರ ಹೇಳಬ್ಯಾಡ...ಆದರ ಉಲ್ಟಾ-ಸುಲ್ಟಾ ಪ್ರಶ್ನಾ ಮಾತ್ರ ಕೇಳಬ್ಯಾಡಾ...”
“ನಿಲ್ರಿ... ನಿಲ್ರಿ... ಕುದರ್ಗಿ ಭಾಳ ಅವಸ್ರ ನೋಡ... ! ನಾ ಹೇಳ್ತೇನಿ...”
“ಹೇಳ ...”
“ರಾಧಾ ಕೃಷ್ಣನಾಕಿ ಇರ್ತಾಳು...”
‘ಹ್ಞೂಂ !”
“ನಾನೂ ಸುದ್ದಾ ಕೃಷ್ಣನ ರಾಧಾ ಅದೇನಿ...” ಆಕೆ ಆಕಾಶದತ್ತ ನೋಡುತ್ತ ಎಲ್ಲಿಯೋ ಕಳೆದು ಹೋಗುತ್ತಿದ್ದಳು...
“ಆದರ ನಿನ್ನ ಕೃಷ್ಣ ಎಲ್ಲಿ ಅದಾನು ?”
ಆಕೆ ತಟ್ಟನೇ ವಾಸ್ತವಕ್ಕೆ ಬಂದು ಮರಳಿ ಹೇಳುತ್ತಿದ್ದಳು, “ಬರಾಂವ ಅದಾನು ನನ್ನ ಕೃಷ್ಣ... ನನ್ನ ದೇವ್ರು...”
“ಬರ್ತಾನಲೇ... ಖರೇನ ಬರ್ತಾನು ! ಈಗ ಮೊದಲ ನನ್ನ ಕೈ ಬಿಡ... ಹೋಗ್ತೇನ ನಾ...”
“ಹೋಗ್ರಿ”
ಹೀಗೆ ಹುಚ್ಚಿ ಎನಿಸುವ, ವಟಗುಟ್ಟುವ ರಾಧಾ ತುಂಬ ಮುದ್ದಾದ ಹುಡುಗಿ !
ಮನ ಸೆಳೆಯುವ ಪೋರಿ...
ಆದರೆ...
ಆಕೆಯ ಬದುಕಿನಲ್ಲಿ ಒಂದು ತಿರುವು ಬಂತು...
ಬಾಲ್ಯದಲ್ಲೇ ಆಕೆಗೆ ಮದುವೆಯಾಯಿತು...
ಆಕೆಯ ಮನದ ಧ್ಯಾನದಲ್ಲಿ ಕೃಷ್ಣ ಇದ್ದ... ಆದರೆ ಆಕೆಯ ಬದುಕಿನಲ್ಲಿ ನಾಮದೇವ ಆಬಾ ಸಾವಂತ ಹೆಸರಿನ ಅತ್ಯಂತ ಸಾಮಾನ್ಯ ಮತ್ತು ದುರಂಹಕಾರಿ ಮನುಷ್ಯ ಗಂಡನಾಗಿ ಬಂದ ! ಆಕೆಯ ಭಾವ ಜಗತ್ತು ಮುರಿದು ಬಿತ್ತು...
ಗಂಡನ ಮನೆಯಲ್ಲಿ ಆಕೆಯ ಹೆಸರೂ ಬದಲಾಯಿತು...
‘ರಾಧಾ’ ರೇವೂ’ ಆದಳು !
ರೇವೂ...
ಆಕೆಗೆ ಆ ಹೆಸರು ಇಷ್ಟವಾಗಲಿಲ್ಲ... ಗಂಡನೂ ಇಷ್ಟವಾಗಲಿಲ್ಲ... ಇಡೀ ಗಂಡನ ಮನೆಯೇ ಆಕೆಯನ್ನು ಹರಿದು ಮುಕ್ಕುವಂತಿತ್ತು...
ಹೀನಾಯವಾದ ವರ್ತನೆ...
ತಿಳುವಳಿಕೆರಹಿತ ನಡತೆ...
ಎಲ್ಲದಕ್ಕೂ ತಪ್ಪು ತಿಳುವಳಿಕೆ... ಅಜ್ಞಾನ...
ದನದಂತೆ ದುಡಿತ ಮತ್ತು ಮೈ ತುಂಬ ಹೊಡೆತ !
ಎಲ್ಲಿಯೂ ಹನಿ ಪ್ರೀತಿಯೂ ಇರಲಿಲ್ಲ...
ಒಂದಿಷ್ಟೂ ಆತ್ಮೀಯತೆಯ ಸೋಂಕು ಇರಲಿಲ್ಲ...
ಅಲ್ಲಿ ತನ್ನವರು ಎನ್ನುವವರು ಯಾರೂ ಇರಲಿಲ್ಲ...
ಮನುಷ್ಯರು ಇದ್ದರೂ ಮನುಷ್ಯತ್ವ ಇರಲಿಲ್ಲ...
ರಾಧಾ ಬೇಸರಿಸಿಕೊಂಡಳು... ನೊಂದುಕೊಂಡಳು...
ಒಂದು ಆಕೆ ತವರಿಗೆ ಬಂದವಳೇ ಇನ್ನೆಂದೂ ತಾನು ಗಂಡನ ಮನೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿಬಿಟ್ಟಳು...
ಕೆಲವು ತಿಂಗಳು ಗತಿಸಿದವು...
ಒಂದು ದಿನ ಆಕೆಯ ಅಪ್ಪ ಆಕೆಯನ್ನು ಕರೆದ...
“ರಾಧೇ...”
“ಏನ ಬಾಬಾ ?”
“ನೀ ಗಂಡನ ಮನೀಗಿ ಮತ್ತ ಹೋಗೂದಿಲ್ಲೇನ... ?”
“ಇಲ್ಲ...”
“ಅದss ಯಾಕ ಅಂತೇನಿ ?”
“ಅದನ್ನss ಎಷ್ಟ ಸಲಾ ಹೇಳ್ಬೇಕ ಬಾಬಾ ? ನಿನಗೆಲ್ಲಾ ಗೊತ್ತss ಏತ್ಯಲ್ಲಾ ಬಾಬಾ ?”
“ಏತಿ ಪೋರಿ... ಎಲ್ಲಾ ಗೊತ್ತೇತಿ... ಆದ್ರ ಅದss ನಿನ್ನ ಖರೇ ಮನಿ !”
“ನನಗ ಹಂಗ ಅನ್ನಿಸೂದಿಲ್ಲ ಬಾಬಾ !”
“ಎಷ್ಟ ತಿಳಿಸಿ ಹೇಳಬೇಕವಾ ನಿನಗ ?”
“ಹೇಳಬ್ಯಾಡ್ರಿ ಬಿಡ್ರ್ಯಲಾ...”
“ಹಂಗಲ್ಲವಾ... ನಾನರೇ ಎಷ್ಟ ದಿವ್ಸ ಇರಾಂವದೇನಿ... ? ಲಗ್ನ ಆದ ಹೆಣ್ಮಗಳ ಮನ್ಯಾಗಿದ್ರ ಅಪ್ಪನ ಎದಿ ಮ್ಯಾಲೀನ ಕಲ್ಲ ಇದ್ದಾಂಗ !”
“ಬಾಬಾ, ನಾ ನಿನಗ ಭಾರ ಆಗೇನಿ ಅಂತ ಹೇಳಿ ಬಿಡಲಾ... ! ಅದ ದಿನಾ ನಾ ಮನಿ ಬಿಟ್ಟ ಹೋಗ್ತೇನಿ...!”
“ಎಲ್ಲಿಗ್ಯಂತ ಹೋಗ್ತೀ ಮಗಳ ?”
“ಎಲ್ಲ್ಯರೇ ಹೋಗ್ತೇನ ಬಿಡ...”
“ಹಂಗ ಅನ್ನಬಾರ್ದವಾ...”
“ಬಾಬಾ, ಮತ್ತ ಇನ್ನ ಬ್ಯಾರೆ ನಾ ಏನ ಹೇಳ್ಲಿ ?”
“ಗಂಡನ ಕಡೀ...”
“ಅಂವ್ನ ಹೆಸ್ರ ತೆಗಿಬ್ಯಾಡ... !” ಆಕೆ ಕೆಟ್ಟದಾಗಿ ಕಿರುಚಿದಳು. ಕೈ ಮೇಲೆ ಎತ್ತಿ ಥೈ ಥೈ ಎಂದು ಕುಣಿಯತೊಡಗಿದಳು...
ಕೆಳಗೆ ಬಿದ್ದು ಅಳತೊಡಗಿದಳು... ನಿಜಕ್ಕೂ ಆಕೆ ಆಗ ಅರಿವು ಕಳೆದುಕೊಂಡಳು... !
ಕೆಲ ವರ್ಷ ಹಾಗೆಯೇ ಕಳೆದು ಹೋದವು...
ಒಂದು ದಿನ ಊರು, ಮನೆ, ತಂದೆ, ತಾಯಿ... ಎಲ್ಲರನ್ನೂ... ಎಲ್ಲವನ್ನೂ ಬಿಟ್ಟು ಯಾರಿಗೂ ಹೇಳದೇ ಆಕೆ ಹೊರಟು ಹೋದಳು !
ಎಲ್ಲಿ ಹೋಗಬೇಕು ಎಂಬ ನಿರ್ಧಾರವಿರಲಿಲ್ಲ...
ಏನು ಮಾಡಬೇಕು ಎಂಬುದೂ ಗೊತ್ತಿರಲಿಲ್ಲ...
ಬೆಕ್ಕು-ನಾಯಿಗಳಿಗಾದರೂ ಒಂದು ಧ್ಯೇಯ ಇರುತ್ತದೆ...
ರಾಧೆಗೆ ಅದೂ ಇರಲಿಲ್ಲ... !
ಆದರೆ ಆಕೆಯ ಅಂತರಂಗದಲ್ಲಿ ಕೃಷ್ಣನಿದ್ದ...
ಆತ ಆಕೆಯೊಳಗೆ ಆಳಕ್ಕಿಳಿದು ಬಿಟ್ಟಿದ್ದ...
ಆಕೆ ಸಹಜವಾಗಿಯೇ ತೀರ್ಥಸ್ಥಳಗಳತ್ತ ನಡೆದಳು... ಅದರಲ್ಲೇ ಆಕೆ ನೆಮ್ಮದಿ ಕಾಣತೊಡಗಿದಳು...
ಪಂಢರಪುರ...
ಆಳಂದಿ...
ಜೇಜೂರಿ...
ನಿಧನೆ...
ನೇವಾಸೆ...
ಕೃಷ್ಣ, ವಿಠ್ಠಲ, ಮಹಾದೇವ, ಜ್ಞಾನದೇವ, ಚಾಂಗದೇವ...
ಆಕೆಯ ಭೇಟಿ ನಿರಂತರವಾಯಿತು...
ಮೈ ಮೇಲಿನ ಬಟ್ಟೆಗಳು ಹರಿದು  ಚಿಂದಿಯಾಗಿದ್ದವು...ಚಿಂದಿಗಳೂ ಹಾರಿ ಹೋದವು...
ವರ್ಷಗಳು ಮಾತ್ರ ಯಾವುದನ್ನೂ ತಲೆಗೇರಿಸಿಕೊಳ್ಳದೇ ಓಡುತ್ತಲೇ ಇದ್ದವು...
ಆಗ ರಾಧೆಯ ಕೂದಲು ಜಡೆಗಟ್ಟಿದ್ದವು...
ಮುಖದ ಮೇಲೆ ಸುರಿಯಾಕಾರದ ನೆರಿಗೆ ಮೂಡಿದ್ದವು...
ಬಾಯಿ ಮಾತ್ರ ನಿರಂತರವಾಗಿ ಏನನ್ನೋ ಬಡಬಡಿಸುತ್ತಿತ್ತು...
ಆಕೆಯ ಮಾತು-ವರ್ತನೆಗೆ ಯಾವುದೂ ತಳ-ಬುಡ ಇರಲಿಲ್ಲ ! ಯಾವುದೇ ವಿಷಯವಿರುತ್ತಿರಲಿಲ್ಲ... ಯಾವುದೇ ತರ್ಕವೂ ಇರಲಿಲ್ಲ...
ನಾಲಿಗೆ ಅಲ್ಲಾಡುತ್ತಿತ್ತು... ಕಂಠದಿಂದ ಧ್ವನಿ ಹೊರ ಬೀಳುತ್ತಿತ್ತು... ಆಮೇಲೆ ಬಡಬಡಿಕೆ ಹೆಚ್ಚಾಗುತ್ತಿತ್ತು !
ಆಕೆ ಎಲ್ಲಿ ಬೇಕಲ್ಲಿ ಕುಳಿತುಕೊಳ್ಳುತ್ತಿದ್ದಳು...
ಸಿಕ್ಕಿದ್ದನ್ನೇ ತಿನ್ನುತ್ತಿದ್ದಳು...
ಆದರೆ ಯಾವಾಗಲೂ ನಗುತ್ತಲೇ ಇರುತ್ತಿದ್ದಳು !
ಆಕೆಗೆ ದುಃಖದ ಅರಿವೆ ಇಲ್ಲವೇನೋ ಎನಿಸುತ್ತಿತ್ತು... ಅಥವಾ ಬದುಕಿನ ದುಃಖವನ್ನೆಲ್ಲ ಆಕೆ ಕಳೆದುಕೊಂಡಿದ್ದಳೇನೋ ಎನಿಸುತ್ತಿತ್ತು ... ಜೀರ್ಣಿಸಿಕೊಂಡಿದ್ದಳೇನೋ ಎನಿಸುತ್ತಿತ್ತು...
ದೇವರು ಆಕೆಗೆ ಕಾಣುತ್ತಿರಲಿಲ್ಲ ; ಭೇಟಿಯೂ ಆಗುತ್ತಿರಲಿಲ್ಲ...  ಮನಸ್ಸಿನ ಕಳವಳ ಒಮ್ಮೊಮ್ಮೆ ಹೆಚ್ಚಾಗುತ್ತಿತ್ತು... ಹೀಗಿರುವಾಗ ಆಕೆಗೆ ಯಾರೋ ಶಿರಡಿಯ ಸಾಯಿಬಾಬಾ ಬಗ್ಗೆ ಹೇಳಿದರು...
ಆಕೆಯ ಕಿವಿಗಳು ನೆಟ್ಟಗಾದವು...
ಸಾಯೀ...
ಸಾಯಿಬಾಬಾ...
ಆಕೆಯ ಮನದ ತಳದೊಳಗೆ ಅನುಭೂತಿಯ ಲಹರಿಗಳು ಹುಟ್ಟಿಕೊಂಡವು... ಆಕೆಗೆ ಏನೋ ಒಂದು ರೀತಿಯ ಸಮಾಧಾನ ಎನಿಸತೊಡಗಿತು... ಸಾಯಿಯೇ ನಿನ್ನೆಲ್ಲ ದುಃಖಗಳನ್ನು ಕಡಿಮೆ ಮಾಡಬಲ್ಲವನು ಎಂದು ಮನಸ್ಸು ಸಾರಿ ಸಾರಿ ಹೇಳುತ್ತಿತ್ತು...
ಮತ್ತೇ...
ಆಕೆಯ ಹೆಜ್ಜೆಗಳು ಶಿರಡಿಯತ್ತ ಹೊರಳಿದವು...
ಆಕೆ ಶಿರಡಿ ತಲುಪಿದಳು...
ಆಕೆಯ ಅವತಾರ ನೋಡಿದರೆ ಹುಚ್ಚಿಯಂತೆಯೇ ಇತ್ತು... ಜನ ಆಕೆಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ...
ಆದರೆ...
ಸಾಯಿ ಆಕೆಯನ್ನು ನೋಡಿದರು...
ಇಬ್ಬರ ದೃಷ್ಟಿಗಳೂ ಸೇರಿದವು...
ಸಾಯಿ ನಗುತ್ತಲೇ ಹೇಳಿದರು... “ಶಾಮ್ಯಾ, ಮ್ಹಾಳಸಾ ಬಂದಳ ನೋಡೋ... ! ಕಾಲಿಗಿ ಚಿಂದಿ ಅರಿವಿ ಕಟ್ಕೊಂಡ ತಿರ್ಗಿ ತಿರ್ಗಿ ಆಕೀ ದಣಿದಾಳು... ಈಗ ಸೀದಾ ಇಲ್ಲಿಗೀ ಬಂದಾಳ ನೋಡ... ಮ್ಹಾಳೇss... ಮ್ಹಾಳೇ... ಬಾರss ಬಾ...”
ಆಕೆ ಸಾಯಿಯನ್ನು ನಿಟ್ಟಿಸಿದಳು...

(ಮುಂದಿನ ಕತೆಯನ್ನು ಕಾದಂಬರಿಯಲ್ಲಿಯೇ ಓದಿ)

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.