ರವಿ ಕೃಷ್ಣಾರೆಡ್ಡಿ
ಹಿರಿಯ ರಂಗಕರ್ಮಿ, ಲೇಖಕ, ನಾಟಕಕಾರ ಪ್ರಸನ್ನರ ಪ್ರಯತ್ನ ಇದು. ಹತ್ತಿಯ ನೂಲಿಗೆ ಬಣ್ಣ ಹಾಕಿ ಖಾದಿ ಬಟ್ಟೆ ನೇಯುವುದರಿಂದ ಹಿಡಿದು ವಿವಿಧ ದಿರಿಸುಗಳನ್ನು ಹೊಲಿದು ಮಾರುಕಟ್ಟೆಗೆ ತಲುಪಿಸುವ ತನಕ “ಚರಕ” ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಲ್ಲಿ ಮೂರ್ನಾಲ್ಕು ಕಡೆ ಅದು ತನ್ನದೇ ಆದ “ದೇಸಿ” ಹೆಸರಿನ ಅಂಗಡಿಗಳ ಮೂಲಕ ಈ ರೆಡಿಮೇಡ್ ದಿರಿಸುಗಳನ್ನು ಮಾರಾಟ ಮಾಡುತ್ತದೆ.
ವಾರ್ಷಿಕ ಒಂದು ಕೋಟಿ ಆದಾಯವಿರುವ ಈ “ಚರಕ” ಸಹಕಾರ ಸಂಘ ನಡೆಯುತ್ತಿರುವುದೆಲ್ಲ ಅಲ್ಲಿ ಕೆಲಸ ಮಾಡುವ ಸ್ಥಳೀಯ ಹೆಣ್ಣು ಮಕ್ಕಳ ಆಡಳಿತ ಮಂಡಳಿಯಿಂದಲೆ. ಅಲ್ಲಿ ಕೆಲಸ ಮಾಡುವ ಯಾರು ಬೇಕಾದರೂ ಆಡಳಿತ ಮಂಡಳಿಯ ಸದಸ್ಯರಾಗಬಹುದು. ಅವರನ್ನು ಆಯ್ಕೆ ಮಾಡುವುದು ಪ್ರಜಾಸತ್ತಾತ್ಮಕವಾಗಿ; ಅಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳೆ ತಮ್ಮಲ್ಲಿಯ ಹಲವರನ್ನು ಅಧ್ಯಕ್ಷೆ, ಕಾರ್ಯದರ್ಶಿ, ಇತ್ಯಾದಿಯಾಗಿ ಆರಿಸಿಕೊಳ್ಳುತ್ತಾರೆ.
ಅಲ್ಲಿಗೆ ನಾನು 2009ರ ಮಾರ್ಚ್ನಲ್ಲಿ ಭೇಟಿ ಕೊಟ್ಟಿದ್ದೆ; ಹಿರಿಯ ಮಿತ್ರರಾದ ಡಿ.ಎಸ್.ನಾಗಭೂಷಣ್ ಮತ್ತು ಸವಿತಾ ನಾಗಭೂಷಣ್ರೊಂದಿಗೆ. ಅಂದು “ಚರಕ”ದ ಆ ವರ್ಷದ ಅಧ್ಯಕ್ಷೆ ಮತ್ತು ಕಾರ್ಯದರ್ಶಿಯವರೊಡನೆ ಅನೌಪಚಾರಿಕವಾಗಿ ಎಂಬಂತೆ ಮಾತನಾಡುತ್ತ ಅವರ ಮಾತುಗಳನ್ನು ವಿಡಿಯೊ ರೆಕಾರ್ಡ್ ಮಾಡಿದ್ದೆ. ಇಷ್ಟು ದಿನ ಅದನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಲು ಆಗಿರಲಿಲ್ಲ. ಇತ್ತೀಚೆಗಷ್ಟೆ ಸಾಧ್ಯವಾಯಿತು. ಈ ವಿಡಿಯೊ ಬಹುಶಃ ನಿಮಗೆ “ಚರಕ”ದ ಬಗ್ಗೆ ಒಂದಷ್ಟು ವಿಭಿನ್ನ ಮಾಹಿತಿ ನೀಡಬಹುದು ಎನ್ನಿಸುತ್ತದೆ.
ಕೃಪೆ : ವರ್ತಮಾನ