Showing posts with label ಕತೆ. Show all posts
Showing posts with label ಕತೆ. Show all posts

Tuesday, July 30, 2013

ಧರ್ಮಗಳ ಗೊಂದಲ ನಿವಾರಣೆ


ಮೂಲ ಮರಾಠಿ : ಡಾ. ವಿನೋದ ಗಾಯಕವಾಡ                            
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
------------------------------------------------------------------------------------
ಒಂದೊಮ್ಮೆ ಆ ಬಾಲಯೋಗಿ ಪ್ರಸನ್ನಚಿತ್ತನಾಗಿ ಕುಳಿತಿರುವಾಗ ಜನರೆಲ್ಲ ಆತನ ಸುತ್ತ ನೆರೆಯುತ್ತಿದ್ದರು. ಸಹಜವಾಗಿಯೇ ಮಾತುಕತೆ-ಚರ್ಚೆ ಸುರುವಾಗುತ್ತಿದ್ದವು. ಆತ ಕೂಡ ತುಂಬ ಉತ್ಸಾಹದಿಂದಲೇ ಉತ್ತರ ನೀಡುತ್ತಿದ್ದ. ಜನರ ಪ್ರಶ್ನೆಗಳು ಮುಗಿಯುವುದೇ ಇಲ್ಲವೇನೋ ಎನಿಸುತ್ತಿತ್ತು. ಇದು ಆತನ ಅರಿವಿಗೂ ಬಂತು. ಆದರೂ ಉತ್ತರ ನೀಡಲು ಆತ ಬೇಸರಿಸುತ್ತಿರಲಿಲ್ಲ. ಕೇಳಿದವರಿಗೆ ಸಮಾಧಾನವಾಗುತ್ತಿರವುದನ್ನು ಕಂಡು ಆತ ಮತ್ತಷ್ಟು ಖುಷಿಗೊಳ್ಳುತ್ತಿದ್ದ.
“ಬೇಟಾss...”
ಮುಸ್ಲಿಂ ಮುದುಕನೊಬ್ಬ ತುಂಬ ವಿನಯದಿಂದಲೇ ತನ್ನ ಬಿಳಿಗಡ್ಡದ ಮೇಲೆ ಕೈಯಾಡಿಸುತ್ತ ಕರೆದ.
“ಜೀ, ಚಾಚಾ ...”
“ಒಂದ್ ಸವಾಲ್ ಕೇಳ್ಲಿ ?”
“ಜೀ”
“ನಾರಾಜ್ ಆಗ್ಬಾರ್ದ ಮತ್ತ ...”
“ಇಲ್ಲ ... ನಾ ನಾರಾಜ್ ಆಗೂದಿಲ್ಲ ಚಾಚಾ. ನಿಮಗ ಗೊತ್ತೇತಿ ...”
“ಖರೇ, ತುಮ್ ಕೌನ್ ಹೋ ?”
“ಇದಕ್ಕ ನಾ ಒಂದ್ಸಲಾ ಉತ್ತರಾ ಕೊಟ್ಟೇನಿ ಚಾಚಾ. ಮೈ ತೋ ಖುದಾ ಕಾ ಬಂದಾ ಹ್ಞುಂ...” ಆಕಾಶದತ್ತ ಕೈ ಎತ್ತಿ ಆ ಯೋಗಿ ಹೇಳಿದ.
“ಅದೂ ಖರೆ...” ಗಡಬಡಿಸಿದ ಮುದುಕ ತಪ್ಪೊಪ್ಪಿಕೊಂಡ. ಆತನಿಗೆ ಮುಂದೆ ಕೇಳುವ ಧೈರ್ಯವಾಗುತ್ತಿರಲಿಲ್ಲ. ಆತ ಧೈರ್ಯವನ್ನೆಲ್ಲ ಒಟ್ಟುಗೂಡಿಸತೊಡಗಿದ್ದ.
“ಮತ್ತ ...?” ಆ ಬಾಲಯೋಗಿ ನಗುತ್ತಲೇ ಕೇಳಿದ.
“ತುಮ್ ಕೌನಸೇ ಧರ್ಮ ಕೇ ಹೋ ? ಹಿಂದೂ ಯಾ ... ಮುಸ್ಲಿಂ ? ಚಾಚಾ ಬಿಡಿ ಬಿಡಿಯಾಗಿಯೇ ಕೇಳಿಯೇ ಬಿಟ್ಟ !
ಸೇರಿದವರೆಲ್ಲ ಸ್ತಬ್ದರಾದರು.
“ಚಾಚಾss...” ಆ ಬಾಲಯೋಗಿ ಆ ಮುದುಕನ್ನೇ ತೀಕ್ಷ್ಣವಾಗಿ ದಿಟ್ಟಿಸುತ್ತ ಕರೆದ.
“ಜೀss ...”
“ನಾ ನಿಮಗ ಯಾರ ಅನ್ನಿಸ್ತೇನಿ ? ಹಿಂದೂ ಅನ್ನಿಸ್ತೀನೋ ಇಲ್ಲ ಮುಸ್ಲಿಂ ಕಾಣ್ಸತೀನೋ ?”
“ಆ್ಞಂss ... ಅss... ...”
“ಬೋಲೋ ...”
“ನನಗಂತೂ ಮುಸಲಮಾನ ಅನ್ನಿಸ್ತಿ. ... ಹಮಾರೇ ಹೀ ಮಜಹಬ್ ಕೆ ಲಗ್ತೇ ಹೋ ... ಇಸ್ಲಾಂ ಕೇ ಬಂದೇ ಲಗ್ತೇ ಹೋ”
“ನಿಮಗ ಹಂಗ ಅನ್ನಿಸಿದ್ರ ನಾ ಖರೇನ ಮುಸಲ್ಮಾನ ಅದೇನಿ !”
“ಯಾ ಖುದಾss, ತೇರಿ ರಹಮತ್ ಐಸಿ ಹೀ ರಹೇ” ಆ ಮುದುಕ ಆಕಾಶದ ಕಡೆ ನೋಡುತ್ತ ತುಂಬ ಖುಷಿಯಿಂದ ಹೇಳಿದ. ಆತನ ಮುಖ ಮೊರದಗಲವಾಗಿತ್ತು.
ಆ ಗುಂಪಿನಲ್ಲಿದ್ದ ಹಿಂದೂಗಳಿಗೆ ಏನೋ ಅಸ್ವಸ್ಥತೆ ಆವರಿಸಿತು ! ಅವರು ಪರಸ್ಪರ ಮುಖ ಮುಖ ನೋಡಿಕೊಳ್ಳತೊಡಗಿದರು.
“ಸದಾಶಿವss, ನಿನ್ನ ಒಂದ್ಮಾತ ಕೇಳ್ಲಿ ?”
“ಕೇಳ ಬಾಳಾ ...” ಸದಾಶಿವ ವಿನಮ್ರತೆಯಿಂದಲೇ ಎದ್ದು ನಿಂತು ಕೈ ಮುಗಿದು ಹೇಳಿದ.
“ಕುಂಡ್ರು ... ಕುಂಡ್ರು ... ನನಗ ಹೇಳ ಈಗ, ನಿನಗ ನಾ ಯಾರ ಅನ್ನಿಸ್ತೇನಿ ?”
ಸದಾಶಿವ ಕೆಳಗೆ ಕುಳಿತುಕೊಳ್ಳುತ್ತ ಹೇಳಿದ, “ಅಗ್ದೀ ದೇವ್ರ ಆಣೀ ಮಾಡಿ ಹೇಳ್ತ್ಯಾನು ... ನೀ ನಮಗ ಹಿಂದೂನss ಅನ್ನಿಸ್ತಿ. ...ಅಲ್ಲ, ಖರೇ ಅಂದ್ರೂ ನೀ ಹಿಂದೂssನ ಅದಿ... ನಡು ನಡುವ ಮುಸಲರ ಭಾಷಾ ಮಾತಾಡಿದ್ರ ಯ್ಯಾನಾತು ? ಈ ಚಾಚಾಗ ಯ್ಯಾನ ಅನ್ನಿಸಿದ್ರೂ ಅದರಿಂದ ಯ್ಯಾನೂ ಫರಕ್ ಬೀಳೂದಿಲ್ಲ ! ನೀ ಹಿಂದೂನss ಅದಿ”
ಸದಾಶಿವನ ಉತ್ತರದಿಂದ ಹಿಂದೂಗಳಿಗೆ ತುಂಬ ಖುಷಿಯಾಯಿತು. ಯಾಕೆಂದರೆ ಆತ ಅವರ ಮನಸ್ಸಿನೊಳಗೆ ಇದ್ದುದ್ದನ್ನೇ ಹೇಳಿದ್ದ. ಆದರೆ ಮುಸ್ಲಿಂರು ಒಂದಿಷ್ಟು ಬೇಸರಿಸಿಕೊಂಡರು.
ಆ ಯೋಗಿ ಮಾತ್ರ ನಗುತ್ತಲೇ ಇದ್ದ.
ಆತನ ಮುಖದ ಮೇಲಿನ ಕಾಂತಿ ಚಿಮ್ಮುತ್ತಲೇ ಇತ್ತು.
ಆಗ ವಾಮನ ತಾತ್ಯಾ ಕೈ ಮುಗಿದು ಹೇಳಿದ, “ಮಹಾರಾಜ್, ನಿಮ್ಮ ಈ ಉತ್ತರದಿಂದ ನಮಗ ಸಮಾಧಾನ ಆಗಿಲಿಲ್ಲ. ನಾವೆಲ್ಲ ಸೇರಿ, ನೀವು ಯಾರ ಅದೇರಿ ಅನ್ನೋದಕ್ಕ ಏನ ಮಹತ್ವ ಅದ ? ನೀವ್ ಯಾರ ಅದೇರಿ ಅದನ್ನ ನೀವss ನಿಮ್ಮ ಬಾಯಿಂದ ಹೇಳ್ರಿ. ಅಂದ್ರ ನಮಗ ಸಮಾಧಾನ ಆಗ್ತದ”
“ಹ್ಞಾಂ ... ಹ್ಞಾಂ ... ನೀವss ಹೇಳ್ರಿ ನೀವss ಹೇಳ್ರಿ”
“ಅಗ್ದೀ ಬರೋಬ್ಬರಿ...”
“ಸಹೀ ಹೈ ... ಸಹೀ ಹೈ”
ಇದss ಸರಿ. ಕೃಪಾ ಮಾಡಿ ನೀವss ಹೇಳ್ರಿ... ತುಮ್ ಕೌನ್ ಹೋ ? ಹಿಂದೂ ಯಾ ಮುಸ್ಲಿಂ ?
ಆ ಯೋಗಿ ಇನ್ನೂ ನಗುತ್ತಲೇ ಇದ್ದ.
ಆತ ಕೈ ಮೇಲೆತ್ತಿ ಎಲ್ಲರನ್ನೂ ಶಾಂತವಾಗಿಸಿ ಹೇಳಿದ, “ಒಂದ್ ವೇಳೆ ನಾ ಮುಸಲಮಾನ್ರಿಗಿ ಮುಸಲಮಾನ ಅನ್ನಿಸಿದರ, ಹಿಂದೂಗೋಳ್ಗಿ ಹಿಂದೂ ಅನ್ನಿಸಿದ್ರ ಆಕ್ಷೇಪ ಮಾಡುವಂಥದ್ದ ಏನೇತಿ ? ನಾ ಹಿಂದೂನೂ ಹೌದು ... ಮತ್ತ ಮುಸಲಮಾನನೂ ಹೌದು. ಪ್ರಶ್ನೆಯೇ ಇಲ್ಲಿ ಉದ್ಭವಿಸೋದಿಲ್ಲ. ಅಲ್ಲೇನ ಚಾಚಾ ? ಏನಪಾ ಸದಾಶಿವಾ ?”
ಆತನ ಈ ಮಾತು ಯಾರಿಗೂ ತಿಳಿಯಲಿಲ್ಲ. ಆತನ ಹೇಳಿಕೆಯಿಂದ ಎಲ್ಲರಿಗೂ ಸಮಾಧಾನವಾಗುವ ಬದಲು ಮತ್ತಷ್ಟು ಬೆಚೈನಿ ಉಂಟಾಯಿತು.
ಚಾಚಾ ಎದ್ದು ನಿಂತು ಕೇಳಿದ, “ಬೇಟಾ, ನಮಗ ಸಮಾಧಾನ ಆಗದಿಲ್ಲ. ಖರೇ ಏನೇತಿ ಅದನ್ನ ನೀನ ನಿನ್ನ ಬಾಯಿಂದನss ಹೇಳ. ಹಂಗೇನಾರ ನೀ ಹಿಂದೂ ಅಂದ್ರೂ ನಮಗ್ಯಾನ ಫರಕ್ ಬೀಳೂದುಲ್ಲ. ನೀ ಮುಸಲರಾಂವ ಅಂದ್ರೂ ಹಿಂದೂಗೋಳಿಗೂ ಯ್ಯಾನ ಫರಕ್ ಬೀಳೂದುಲ್ಲ. ನಿನ್ನ ಮ್ಯಾಲ ನಮ್ಮೆಲ್ಲರ ಭಕ್ತಿ ಈಗ ಹೆಂಗ ಏತಿ ಹಂಗss ಇರ್ತೇತಿ...”
“ಹಂಗೇನಾರ ಇತ್ತಂದ್ರ ಮತ್ತ ಯಾಕ ಪ್ರಶ್ನಾ ಮಾಡಿದ್ರಿ ? ನಾ ಹಿಂದೂ ಅಥವಾ ಮುಸಲ್ಮಾನ ಆಗೋದ್ರಿಂದ ಜರ್ ಯಾರಿಗೂ ಫರಕ್ ಬೀಳೂದಿಲ್ಲ ಅಂದ್ರ ನೀವ್ಯಾಕ ಅದರಾಗ ಬೀಳಾಕತ್ತೇರಿ ?”
“ಹಂಗೇನಿಲ್ಲ ... ಒಂದ್ಸಲಾ ನಿನ್ನ ಬಾಯಿಂದ ನಾವ್ ಕೇಳ್ಬೇಕಾಗೇತಿ...”
ಸದಾಶಿವ ನುಡಿದ.
“ಆತು, ಆತರಲೇಪಾ ... ಈ ಪ್ರಶ್ನಾ ಭಾಳ ಗಹನ ಏತಿ. ನಿಮ್ಮ ದೃಷ್ಟಿಕೋನದಿಂದ ಅದ್ ಭಾಳ ಮೌಲ್ಯದ್ದ ಅನ್ನಿಸ್ತೇತಿ ! ನನ್ನ ದೃಷ್ಟಿಯೊಳಗ ಇದೆಲ್ಲ ಅರ್ಥ ಇಲ್ಲದ್ದು ! ಆದರ ಒಮ್ಮೀ ಮನುಷ್ಯಾನ ಕಡಿ ಹೆಂಗ ನೋಡ್ಬೇಕ ಅನ್ನೋದನ್ನ ನೀವೆಲ್ಲಾರೂ ಕಲಿಯಾಕss ಬೇಕ. ಈ ಪ್ರಶ್ನೆಕ ನಾ ಉತ್ತರ ಕೊಡೂದಿಲ್ಲ. ನನ್ನ ಅವ್ವನ ಇದಕ್ಕ ಉತ್ತರ ಕೊಡ್ತಾಳು ... !” ಇಷ್ಟು ಹೇಳಿದ ಆ ಯೋಗಿ ತನ್ನನ್ನೇ ನಿಟ್ಟಿಸುತ್ತ ಕುಳಿತ್ತಿದ್ದ ಬಾಯಜಾಬಾಯಿಯತ್ತ ತಿರುಗಿ ಕರೆದ, “ಆಯೀss...”
ಆಕೆ ಎಚ್ಚೆತ್ತುಕೊಂಡಳು.
“ಏನೋ ಬಾಳಾ ...?”
“ನೀ ಈ ಎಲ್ಲಾ ಚರ್ಚಾ ಕೇಳಾಕತ್ತಿಯಲ್ಲ ?” ಆತನ ಗೂಢಧ್ವನಿ ಆಕೆಯ ಕಿವಿಯಲ್ಲಿ ಹೊಕ್ಕಾಗ ಆಕೆ ಮೈಯಲ್ಲಿ ವಿಚಿತ್ರವಾದ ಒಂದು ಚೇತನ ಸಂಚಲನವಾದಂತಾಯಿತು.
“ಹ್ಞಾಂ, ಹೌದಪಾ... ಕೇಳ್ಲಿಕ್ಕತ್ತೇನಿ. ಆದರ ಬಾಳಾ, ಅದರಾಗ ನನಗೇನೂ ತಿಳಿಲಿಲ್ಲ !”
“ಆಯೀ, ನೀನ ಹೇಳ ... ನಾ ಯಾರ ಅದೇನಿ ? ಹಿಂದೂನೋ ಮುಸಲ್ಮಾನೋ ?”
“ಬಾಳಾ, ನನಗ ಅದೇನೂ ತಿಳಿಯೂ ಮಾತಲ್ಲ ತಗಿ. ಮತ್ತ ನನಗ ಅದರ ಗರಜೂ ಇಲ್ಲ ! ನೀ ನನ್ನ ಮಗಾ ಅದೀ ; ನಾ ನಿನ್ನ ಅವ್ವ ಅದೇನಿ ಅನ್ನೋದ ಮಾತ್ರ ನನಗ ಗೊತ್ತದ ಅಷ್ಟ ! ನೀ ಹಿಂದೂ ಆಗಿರು, ಮುಸ್ಲಿಂ ಆಗಿರು ನನಗೇನ ಫರಕ್ ಬೀಳೂದಿಲ್ಲ”
“ಕೇಳ್ರಿ, ಇದು ... ಇದು ನಿಮ್ಮ ಪ್ರಶ್ನಾಕ ಸರಿಯಾದ ಉತ್ತರ ! ನನ್ನ ಈ ಅವ್ವ ನನ್ನ ಕಡೀ ಧರ್ಮದ ದೃಷ್ಟಿಯಿಂದ ನೋಡೂದಿಲ್ಲ. ಅಂಗಡ್ಯಾಂವ ಬೆಲ್ಲಾ ಕೊಡಬೇಕಾರ ಕಾಗದಾ ಸುತ್ತಿ ಕೊಡ್ತಾನಲಾ ... ಹಂಗ ಮನುಷ್ಯನನ್ನ ಧರ್ಮದ ಕಾಗದದಾಗ ಗುಂಡಾಳ್ಸಾಕತ್ತೇರಿ ನೀವು ! ಅರೇ, ಬೆಲ್ಲಾ ಮಹತ್ವದ್ದೋ, ಕಾಗದಾ ಮಹತ್ವದ್ದೋ ? ನಿಮ್ಮ ಎಲ್ಲಾ ಚರ್ಚಾ ಆ ಕಾಗದದ ಸುತ್ತss ಗಿರಕಿ ಹೊಡಿಯಾಕತ್ತೇತಿ. ಯಾವುದರ ರುಚಿ ನೋಡಬೇಕಾಗೇತ್ಯೋ ಅದನ್ನss ಬಿಟ್ಟೇರಿ ! ಯಾವುದನ್ನ ಉಪಯೋಗ ಮಾಡಬೇಕೋ ಅದನ್ನ ಉಪಯೋಗ ಮಾಡವಲ್ಲರಿ ! ನಿಮಗ ಬೇಕಾದ ಬೆಲ್ಲಾ ನೀವ್ ತಿನ್ನಾವ್ರಾದ್ರೂ ಯಾವಾಗ ? ಒಳಗಿನ ಬೆಲ್ಲಾ ತಗದರ ಕಾಗದಾ ಕಚರಾದಾಗ ಸೇರ್ತೇತಿ ಹೌದಿಲ್ಲೋ ? ಹೂವಿನೊಳಗಿನ ಸುಗಂಧ ಭಾಳ ಮುಖ್ಯ ; ಯಾಕಂದ್ರ ಹೂವು ಒಂದss ಒಂದ ದಿನಾ ತಾಜಾ ಇರ್ತೇತಿ. ಮರುದಿನಾ ಅದ ಹಾಳ ಆಗ್ತೇತಿ ! ಅದರೊಳಗಿನ ಸುಗಂಧ ಮಾತ್ರ ಶಾಶ್ವತ ಆಗಿರ್ತೇತಿ. ಕಂಠಕ್ಕಿಂತ ಅದರೊಳಗಿಂದ ಜಿಗಿಯೋ ಧ್ವನಿ ಮಹತ್ವದ್ದು ! ಕಣ್ಣಿಗಿಂತ ಅದರೊಳಗ ಇರೂ ತೇಜಸ್ಸ ಮಹತ್ವದ್ದು ! ಆ ತೇಜಸ್ಸಿನಿಂದಾನ ಈ ಜಗಾ ಕಾಣ್ತೇತಿ ಹೌದಿಲ್ಲೋ ? ಈ ದೇಹ ಯಾವ ಧರ್ಮದ ಅವ್ವ-ಅಪ್ಪನ ಹೊಟ್ಟಿಯೊಳಗ ಹುಟ್ಟೇತಿ ಅನ್ನೋದು ಮಹತ್ವದ್ದಲ್ಲ ; ಈ ದೇಹದೊಳಗಿರೋ ಅವಿನಾಶಿ ತತ್ವಕ್ಕ, ಶಾಶ್ವತ ಆತ್ಮಕ್ಕ ಮಹತ್ವ ಏತಿ ! ನೀವು ಶಾಣ್ಯಾ ಮಂದಿ ಇದ್ದೇರಿ. ಹಿಂಗಾಗಿ ಧರ್ಮದ ಬಗ್ಗೀ ಚರ್ಚಾ ಮಾಡ್ತೇರಿ... ಆದರ ನನ್ನ ಆಯೀ ನಿಮಗಿಂತ ಶಾಣ್ಯಾ ಅದಾಳು ... ಆಕೀ ಧರ್ಮಕ್ಕಿಂತ ಮನುಷ್ಯಾನ ಕಡೀ ನೋಡ್ತಾಳು ; ಮನುಷ್ಯಾನ ಒಳಗಿರೋ ದೈವತ್ವದ ಕಡೀ ನೋಡ್ತಾಳು... ನೀವೂ ಸುದ್ದಾ ಇದ ದೃಷ್ಟಿ ಇಟ್ಕೊಳ್ರಿ ... ಅಂದ್ರ ನಿಮ್ಮ ಜೀವನಾ ಸಾರ್ಥಕ ಆಗ್ತೇತಿ ...”

*****

Tuesday, July 23, 2013

ಮ್ಹಾಳಸಾ : ಅಪರೂಪದ ಭಕ್ತೆ !

ಮೂಲ ಮರಾಠಿ : ಡಾ. ವಿನೋದ ಗಾಯಕವಾಡ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
--------------------------------------------- 
(ಸಧ್ಯದಲ್ಲೇ ಪ್ರಕಟಗೊಳ್ಳುವ ನಾನು ಅನುವಾದಿಸಿದ ಸಾಯಿ ಕಥಾ ಆಧಾರಿತ ಮಹಾಕಾದಂಬರಿಯ ಒಂದು ಕತೆ)

ಮ್ಹಾಳಸಾ !
ಮ್ಹಾಳಿ...
ಕುಬ್ಜ ದೇಹ, ಕೆದರಿದ ಕೂದಲು, ಒಣಗಿದ ಮುಖ, ಹರಿದ ಬಟ್ಟೆ, ಅಲ್ಲಲ್ಲಿ ಚಿಂದಿ ಕಟ್ಟಿಕೊಂಡಿರುವ ಮ್ಹಾಳಸಾ...
ಹುಚ್ಚಳಂತೆ ಕಾಣುತ್ತಿದ್ದಳು... ಅಲ್ಲಲ್ಲ ಹುಚ್ಚಳೇ !
ತುಂಬ ಅಚ್ಚರಿಗೊಳ್ಳುವ ಹೃದಯ ಹಿಂಡುವ ಕತೆ ಆಕೆಯ ಬೆನ್ನಿಗಿತ್ತು...
ಸಂಗಮನೇರ ಊರಿನ ಸಮೀಪ ಕಸರವಾಡಿ ಸಣ್ಣ ಹಳ್ಳಿಯೊಂದಿದೆ. ಆ ಹಳ್ಳಿಯೇ ಮ್ಹಾಳಸಾಳ ಹುಟ್ಟೂರು... ಜಾತಿಯಿಂದ ಮರಾಠಾ ಹೆಣ್ಣುಮಗಳು...
ತಂದೆ-ತಾಯಿ ತುಂಬು ಪ್ರೀತಿಯಿಂದಲೇ ಆಕೆಗೆ ಹೆಸರಿಟ್ಟಿದ್ದರು...
ರಾಧಾ...
ಜನರೆಲ್ಲ ಮುದ್ದಿನಿಂದ ‘ರಾಧೀ’ ಎಂದೇ ಕರೆಯುತ್ತಿದ್ದರು...
ರಾಧಿ ತುಂಬ ಮಾತುಗಾರ್ತಿ, ಹಠಗಾರ್ತಿಯಾಗಿದ್ದರೂ ಎಲ್ಲ ಕೆಲಸವನ್ನೂ ಮಾಡಿ ಮುಗಿಸುತ್ತಿದ್ದಳು.
ಯಾರಾದರೂ ತನಗೆ ಕೆಲಸ ಹೇಳಬೇಕು... ತಾನು ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಬೇಕು ಎಂಬ ಹಂಬಲ ಆಕೆಯದು ! ಬೇರೆಯವರ ಕೆಲಸ ಮಾಡುವುದರಲ್ಲೇ ಆಕೆ ಖುಷಿ ಪಡೆಯುತ್ತಿದ್ದಳು...
“ರಾಧೇ...”ಯಾರಾದರೂ ಕರೆಯುತ್ತಿದ್ದರು...
“ಏನ್ರೀಪಾ ?”
“ನೀ ಯಾರಾಕೀ ?”
“ನಾ ನಮ್ಮವ್ವನ ಪೈಕಿ ಅಲ್ಲ” ಆಕೆಯ ಉತ್ತರ ನೀಡುವ ರೀತಿಯೇ ವಿಚಿತ್ರವಾಗಿತ್ತು. ಸುತ್ತು ಬಳಸಿ ‘ತಾನು ಯಾರಾಕಿ’ ಎಂದು ಹೇಳುವ ಮೊದಲು ‘ತಾನು ಯಾರಾಕಿ ಅಲ್ಲ’ ಎಂಬುದನ್ನು ಹೇಳುವಲ್ಲಿ ಆಕೆಗೆ ಗಮ್ಮತ್ತೆನಿಸುತ್ತಿತ್ತು...
“ಮತ್ತ ಯಾರಾಕಿ ?”
“ನಾ ಅಪ್ಪನ ಪೈಕಿನೂ ಅಲ್ಲ !”
“ಮತ್ತ ?”
“ಕಾಕಾ-ಕಾಕೂನಾಕೀ ಅಲ್ಲ...”
“ಮತ್ತ ಯಾರಲೇ ನೀ ?”
ಆಕೆ ಮನುಷ್ಯರಿಂದ ಗಿಡ-ಮರಗಳತ್ತ, ಅಲ್ಲಿಂದ ಸೂರ್ಯ-ಚಂದ್ರ ಮೊದಲಾದ ಗ್ರಹ ತಾರೆಗಳತ್ತ ಹೊರಳುತ್ತಿದ್ದಳು... !
ಕೇಳುತ್ತಿರುವವರಿಗೆ ಏನೋ ಗಮ್ಮತ್ತಿಲ್ಲ ಎನಿಸಿ ಬೇಸರವಾಗಬೇಕು... ಅವರು ಅಲ್ಲಿಂದ ಜಾಗ ಖಾಲಿ ಮಾಡುವಾಗಲೇ ಆಕೆ ಅವರ ಕೈ ಹಿಡಿದು ಜಿಗಿಯುತ್ತ ಹೇಳುತ್ತಿದ್ದಳು... “ಹೆಂಗ ಗಮ್ಮತ್ತ ಮಾಡ್ನಿ ? ... ಆದರ ಈಗ ನಾ ಖರೇ ಖರೇನ ಹೇಳ್ತೇನ ಹ್ಞಾಂ...”
“ಹೇಳ ನೋಡೂಣು ?”
“ರಾಧಾ ಯಾರಾಕಿ ಇರ್ತಾಳು ?” ಆಕೆ ಮರಳಿ ಪ್ರಶ್ನೆ ಹಾಕುತ್ತಿದ್ದಳು...
“ಲೇ, ಇಲ್ಲಿ ನೋಡ... ನನಗೀಗ ವ್ಯಾಳಿ ಇಲ್ಲ... ಹೇಳೋದಿತ್ತಂದ್ರ ಸರಳ ಹೇಳ... ಇಲ್ಲಂದ್ರ ಹೇಳಬ್ಯಾಡ...ಆದರ ಉಲ್ಟಾ-ಸುಲ್ಟಾ ಪ್ರಶ್ನಾ ಮಾತ್ರ ಕೇಳಬ್ಯಾಡಾ...”
“ನಿಲ್ರಿ... ನಿಲ್ರಿ... ಕುದರ್ಗಿ ಭಾಳ ಅವಸ್ರ ನೋಡ... ! ನಾ ಹೇಳ್ತೇನಿ...”
“ಹೇಳ ...”
“ರಾಧಾ ಕೃಷ್ಣನಾಕಿ ಇರ್ತಾಳು...”
‘ಹ್ಞೂಂ !”
“ನಾನೂ ಸುದ್ದಾ ಕೃಷ್ಣನ ರಾಧಾ ಅದೇನಿ...” ಆಕೆ ಆಕಾಶದತ್ತ ನೋಡುತ್ತ ಎಲ್ಲಿಯೋ ಕಳೆದು ಹೋಗುತ್ತಿದ್ದಳು...
“ಆದರ ನಿನ್ನ ಕೃಷ್ಣ ಎಲ್ಲಿ ಅದಾನು ?”
ಆಕೆ ತಟ್ಟನೇ ವಾಸ್ತವಕ್ಕೆ ಬಂದು ಮರಳಿ ಹೇಳುತ್ತಿದ್ದಳು, “ಬರಾಂವ ಅದಾನು ನನ್ನ ಕೃಷ್ಣ... ನನ್ನ ದೇವ್ರು...”
“ಬರ್ತಾನಲೇ... ಖರೇನ ಬರ್ತಾನು ! ಈಗ ಮೊದಲ ನನ್ನ ಕೈ ಬಿಡ... ಹೋಗ್ತೇನ ನಾ...”
“ಹೋಗ್ರಿ”
ಹೀಗೆ ಹುಚ್ಚಿ ಎನಿಸುವ, ವಟಗುಟ್ಟುವ ರಾಧಾ ತುಂಬ ಮುದ್ದಾದ ಹುಡುಗಿ !
ಮನ ಸೆಳೆಯುವ ಪೋರಿ...
ಆದರೆ...
ಆಕೆಯ ಬದುಕಿನಲ್ಲಿ ಒಂದು ತಿರುವು ಬಂತು...
ಬಾಲ್ಯದಲ್ಲೇ ಆಕೆಗೆ ಮದುವೆಯಾಯಿತು...
ಆಕೆಯ ಮನದ ಧ್ಯಾನದಲ್ಲಿ ಕೃಷ್ಣ ಇದ್ದ... ಆದರೆ ಆಕೆಯ ಬದುಕಿನಲ್ಲಿ ನಾಮದೇವ ಆಬಾ ಸಾವಂತ ಹೆಸರಿನ ಅತ್ಯಂತ ಸಾಮಾನ್ಯ ಮತ್ತು ದುರಂಹಕಾರಿ ಮನುಷ್ಯ ಗಂಡನಾಗಿ ಬಂದ ! ಆಕೆಯ ಭಾವ ಜಗತ್ತು ಮುರಿದು ಬಿತ್ತು...
ಗಂಡನ ಮನೆಯಲ್ಲಿ ಆಕೆಯ ಹೆಸರೂ ಬದಲಾಯಿತು...
‘ರಾಧಾ’ ರೇವೂ’ ಆದಳು !
ರೇವೂ...
ಆಕೆಗೆ ಆ ಹೆಸರು ಇಷ್ಟವಾಗಲಿಲ್ಲ... ಗಂಡನೂ ಇಷ್ಟವಾಗಲಿಲ್ಲ... ಇಡೀ ಗಂಡನ ಮನೆಯೇ ಆಕೆಯನ್ನು ಹರಿದು ಮುಕ್ಕುವಂತಿತ್ತು...
ಹೀನಾಯವಾದ ವರ್ತನೆ...
ತಿಳುವಳಿಕೆರಹಿತ ನಡತೆ...
ಎಲ್ಲದಕ್ಕೂ ತಪ್ಪು ತಿಳುವಳಿಕೆ... ಅಜ್ಞಾನ...
ದನದಂತೆ ದುಡಿತ ಮತ್ತು ಮೈ ತುಂಬ ಹೊಡೆತ !
ಎಲ್ಲಿಯೂ ಹನಿ ಪ್ರೀತಿಯೂ ಇರಲಿಲ್ಲ...
ಒಂದಿಷ್ಟೂ ಆತ್ಮೀಯತೆಯ ಸೋಂಕು ಇರಲಿಲ್ಲ...
ಅಲ್ಲಿ ತನ್ನವರು ಎನ್ನುವವರು ಯಾರೂ ಇರಲಿಲ್ಲ...
ಮನುಷ್ಯರು ಇದ್ದರೂ ಮನುಷ್ಯತ್ವ ಇರಲಿಲ್ಲ...
ರಾಧಾ ಬೇಸರಿಸಿಕೊಂಡಳು... ನೊಂದುಕೊಂಡಳು...
ಒಂದು ಆಕೆ ತವರಿಗೆ ಬಂದವಳೇ ಇನ್ನೆಂದೂ ತಾನು ಗಂಡನ ಮನೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿಬಿಟ್ಟಳು...
ಕೆಲವು ತಿಂಗಳು ಗತಿಸಿದವು...
ಒಂದು ದಿನ ಆಕೆಯ ಅಪ್ಪ ಆಕೆಯನ್ನು ಕರೆದ...
“ರಾಧೇ...”
“ಏನ ಬಾಬಾ ?”
“ನೀ ಗಂಡನ ಮನೀಗಿ ಮತ್ತ ಹೋಗೂದಿಲ್ಲೇನ... ?”
“ಇಲ್ಲ...”
“ಅದss ಯಾಕ ಅಂತೇನಿ ?”
“ಅದನ್ನss ಎಷ್ಟ ಸಲಾ ಹೇಳ್ಬೇಕ ಬಾಬಾ ? ನಿನಗೆಲ್ಲಾ ಗೊತ್ತss ಏತ್ಯಲ್ಲಾ ಬಾಬಾ ?”
“ಏತಿ ಪೋರಿ... ಎಲ್ಲಾ ಗೊತ್ತೇತಿ... ಆದ್ರ ಅದss ನಿನ್ನ ಖರೇ ಮನಿ !”
“ನನಗ ಹಂಗ ಅನ್ನಿಸೂದಿಲ್ಲ ಬಾಬಾ !”
“ಎಷ್ಟ ತಿಳಿಸಿ ಹೇಳಬೇಕವಾ ನಿನಗ ?”
“ಹೇಳಬ್ಯಾಡ್ರಿ ಬಿಡ್ರ್ಯಲಾ...”
“ಹಂಗಲ್ಲವಾ... ನಾನರೇ ಎಷ್ಟ ದಿವ್ಸ ಇರಾಂವದೇನಿ... ? ಲಗ್ನ ಆದ ಹೆಣ್ಮಗಳ ಮನ್ಯಾಗಿದ್ರ ಅಪ್ಪನ ಎದಿ ಮ್ಯಾಲೀನ ಕಲ್ಲ ಇದ್ದಾಂಗ !”
“ಬಾಬಾ, ನಾ ನಿನಗ ಭಾರ ಆಗೇನಿ ಅಂತ ಹೇಳಿ ಬಿಡಲಾ... ! ಅದ ದಿನಾ ನಾ ಮನಿ ಬಿಟ್ಟ ಹೋಗ್ತೇನಿ...!”
“ಎಲ್ಲಿಗ್ಯಂತ ಹೋಗ್ತೀ ಮಗಳ ?”
“ಎಲ್ಲ್ಯರೇ ಹೋಗ್ತೇನ ಬಿಡ...”
“ಹಂಗ ಅನ್ನಬಾರ್ದವಾ...”
“ಬಾಬಾ, ಮತ್ತ ಇನ್ನ ಬ್ಯಾರೆ ನಾ ಏನ ಹೇಳ್ಲಿ ?”
“ಗಂಡನ ಕಡೀ...”
“ಅಂವ್ನ ಹೆಸ್ರ ತೆಗಿಬ್ಯಾಡ... !” ಆಕೆ ಕೆಟ್ಟದಾಗಿ ಕಿರುಚಿದಳು. ಕೈ ಮೇಲೆ ಎತ್ತಿ ಥೈ ಥೈ ಎಂದು ಕುಣಿಯತೊಡಗಿದಳು...
ಕೆಳಗೆ ಬಿದ್ದು ಅಳತೊಡಗಿದಳು... ನಿಜಕ್ಕೂ ಆಕೆ ಆಗ ಅರಿವು ಕಳೆದುಕೊಂಡಳು... !
ಕೆಲ ವರ್ಷ ಹಾಗೆಯೇ ಕಳೆದು ಹೋದವು...
ಒಂದು ದಿನ ಊರು, ಮನೆ, ತಂದೆ, ತಾಯಿ... ಎಲ್ಲರನ್ನೂ... ಎಲ್ಲವನ್ನೂ ಬಿಟ್ಟು ಯಾರಿಗೂ ಹೇಳದೇ ಆಕೆ ಹೊರಟು ಹೋದಳು !
ಎಲ್ಲಿ ಹೋಗಬೇಕು ಎಂಬ ನಿರ್ಧಾರವಿರಲಿಲ್ಲ...
ಏನು ಮಾಡಬೇಕು ಎಂಬುದೂ ಗೊತ್ತಿರಲಿಲ್ಲ...
ಬೆಕ್ಕು-ನಾಯಿಗಳಿಗಾದರೂ ಒಂದು ಧ್ಯೇಯ ಇರುತ್ತದೆ...
ರಾಧೆಗೆ ಅದೂ ಇರಲಿಲ್ಲ... !
ಆದರೆ ಆಕೆಯ ಅಂತರಂಗದಲ್ಲಿ ಕೃಷ್ಣನಿದ್ದ...
ಆತ ಆಕೆಯೊಳಗೆ ಆಳಕ್ಕಿಳಿದು ಬಿಟ್ಟಿದ್ದ...
ಆಕೆ ಸಹಜವಾಗಿಯೇ ತೀರ್ಥಸ್ಥಳಗಳತ್ತ ನಡೆದಳು... ಅದರಲ್ಲೇ ಆಕೆ ನೆಮ್ಮದಿ ಕಾಣತೊಡಗಿದಳು...
ಪಂಢರಪುರ...
ಆಳಂದಿ...
ಜೇಜೂರಿ...
ನಿಧನೆ...
ನೇವಾಸೆ...
ಕೃಷ್ಣ, ವಿಠ್ಠಲ, ಮಹಾದೇವ, ಜ್ಞಾನದೇವ, ಚಾಂಗದೇವ...
ಆಕೆಯ ಭೇಟಿ ನಿರಂತರವಾಯಿತು...
ಮೈ ಮೇಲಿನ ಬಟ್ಟೆಗಳು ಹರಿದು  ಚಿಂದಿಯಾಗಿದ್ದವು...ಚಿಂದಿಗಳೂ ಹಾರಿ ಹೋದವು...
ವರ್ಷಗಳು ಮಾತ್ರ ಯಾವುದನ್ನೂ ತಲೆಗೇರಿಸಿಕೊಳ್ಳದೇ ಓಡುತ್ತಲೇ ಇದ್ದವು...
ಆಗ ರಾಧೆಯ ಕೂದಲು ಜಡೆಗಟ್ಟಿದ್ದವು...
ಮುಖದ ಮೇಲೆ ಸುರಿಯಾಕಾರದ ನೆರಿಗೆ ಮೂಡಿದ್ದವು...
ಬಾಯಿ ಮಾತ್ರ ನಿರಂತರವಾಗಿ ಏನನ್ನೋ ಬಡಬಡಿಸುತ್ತಿತ್ತು...
ಆಕೆಯ ಮಾತು-ವರ್ತನೆಗೆ ಯಾವುದೂ ತಳ-ಬುಡ ಇರಲಿಲ್ಲ ! ಯಾವುದೇ ವಿಷಯವಿರುತ್ತಿರಲಿಲ್ಲ... ಯಾವುದೇ ತರ್ಕವೂ ಇರಲಿಲ್ಲ...
ನಾಲಿಗೆ ಅಲ್ಲಾಡುತ್ತಿತ್ತು... ಕಂಠದಿಂದ ಧ್ವನಿ ಹೊರ ಬೀಳುತ್ತಿತ್ತು... ಆಮೇಲೆ ಬಡಬಡಿಕೆ ಹೆಚ್ಚಾಗುತ್ತಿತ್ತು !
ಆಕೆ ಎಲ್ಲಿ ಬೇಕಲ್ಲಿ ಕುಳಿತುಕೊಳ್ಳುತ್ತಿದ್ದಳು...
ಸಿಕ್ಕಿದ್ದನ್ನೇ ತಿನ್ನುತ್ತಿದ್ದಳು...
ಆದರೆ ಯಾವಾಗಲೂ ನಗುತ್ತಲೇ ಇರುತ್ತಿದ್ದಳು !
ಆಕೆಗೆ ದುಃಖದ ಅರಿವೆ ಇಲ್ಲವೇನೋ ಎನಿಸುತ್ತಿತ್ತು... ಅಥವಾ ಬದುಕಿನ ದುಃಖವನ್ನೆಲ್ಲ ಆಕೆ ಕಳೆದುಕೊಂಡಿದ್ದಳೇನೋ ಎನಿಸುತ್ತಿತ್ತು ... ಜೀರ್ಣಿಸಿಕೊಂಡಿದ್ದಳೇನೋ ಎನಿಸುತ್ತಿತ್ತು...
ದೇವರು ಆಕೆಗೆ ಕಾಣುತ್ತಿರಲಿಲ್ಲ ; ಭೇಟಿಯೂ ಆಗುತ್ತಿರಲಿಲ್ಲ...  ಮನಸ್ಸಿನ ಕಳವಳ ಒಮ್ಮೊಮ್ಮೆ ಹೆಚ್ಚಾಗುತ್ತಿತ್ತು... ಹೀಗಿರುವಾಗ ಆಕೆಗೆ ಯಾರೋ ಶಿರಡಿಯ ಸಾಯಿಬಾಬಾ ಬಗ್ಗೆ ಹೇಳಿದರು...
ಆಕೆಯ ಕಿವಿಗಳು ನೆಟ್ಟಗಾದವು...
ಸಾಯೀ...
ಸಾಯಿಬಾಬಾ...
ಆಕೆಯ ಮನದ ತಳದೊಳಗೆ ಅನುಭೂತಿಯ ಲಹರಿಗಳು ಹುಟ್ಟಿಕೊಂಡವು... ಆಕೆಗೆ ಏನೋ ಒಂದು ರೀತಿಯ ಸಮಾಧಾನ ಎನಿಸತೊಡಗಿತು... ಸಾಯಿಯೇ ನಿನ್ನೆಲ್ಲ ದುಃಖಗಳನ್ನು ಕಡಿಮೆ ಮಾಡಬಲ್ಲವನು ಎಂದು ಮನಸ್ಸು ಸಾರಿ ಸಾರಿ ಹೇಳುತ್ತಿತ್ತು...
ಮತ್ತೇ...
ಆಕೆಯ ಹೆಜ್ಜೆಗಳು ಶಿರಡಿಯತ್ತ ಹೊರಳಿದವು...
ಆಕೆ ಶಿರಡಿ ತಲುಪಿದಳು...
ಆಕೆಯ ಅವತಾರ ನೋಡಿದರೆ ಹುಚ್ಚಿಯಂತೆಯೇ ಇತ್ತು... ಜನ ಆಕೆಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ...
ಆದರೆ...
ಸಾಯಿ ಆಕೆಯನ್ನು ನೋಡಿದರು...
ಇಬ್ಬರ ದೃಷ್ಟಿಗಳೂ ಸೇರಿದವು...
ಸಾಯಿ ನಗುತ್ತಲೇ ಹೇಳಿದರು... “ಶಾಮ್ಯಾ, ಮ್ಹಾಳಸಾ ಬಂದಳ ನೋಡೋ... ! ಕಾಲಿಗಿ ಚಿಂದಿ ಅರಿವಿ ಕಟ್ಕೊಂಡ ತಿರ್ಗಿ ತಿರ್ಗಿ ಆಕೀ ದಣಿದಾಳು... ಈಗ ಸೀದಾ ಇಲ್ಲಿಗೀ ಬಂದಾಳ ನೋಡ... ಮ್ಹಾಳೇss... ಮ್ಹಾಳೇ... ಬಾರss ಬಾ...”
ಆಕೆ ಸಾಯಿಯನ್ನು ನಿಟ್ಟಿಸಿದಳು...

(ಮುಂದಿನ ಕತೆಯನ್ನು ಕಾದಂಬರಿಯಲ್ಲಿಯೇ ಓದಿ)

Sunday, March 03, 2013

ಮಾಯವಾದ ಮಂತ್ರಿಸಿದ ನಿಂಬೆ !


- ಮಿ.ವೆಂ.ಶ್ರೀನಿವಾಸ
ಸಾಯಂಕಾಲ ೬ ಗಂಟೆ ಸಮಯ. ನಾನು ಮತ್ತು ನನ್ನ ಹೆಂಡತಿ ವಾಕಿಂಗ್‌ಗೆ ಹೂರಟಿದ್ದೆವು. ದಿನವೂ ಸಂಜೆ ನಾವಿಬ್ಬರೂ ವಾಕಿಂಗ್‌ಗೆ ಹೋಗಿ ಬರುವಾಗ ತರಕಾರಿ ಮತ್ತು ಮನೆಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಬರುವುದು ರೂಢಿ. ಸರ್ಕಲ್ ಹತ್ತಿರ ಬಂದಾಗ ರಸ್ತೆ ಬದಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಒಂದು ಬೋರ್ಡ್ ಕಡೆ ಗಮನ ಹರಿಯಿತು. ದಿನಾ ನೋಡುತ್ತಿದ್ದ ಬೊರ್ಡ್ ಅದು. ಅವತ್ತು ಅದರ ಕಡೆ ಗಮನ ಹರಿದು ಅಲ್ಲಿ ಓದುತ್ತಾ ನಿಂತೆ. ಅದು ಜ್ಯೋತಿಷಿಯೊಬ್ಬನ ಮನೆ ಮುಂದೆ ಇದ್ದ ಅವನ ಪ್ರಚಾರದ ಬೋರ್ಡ್. "ಶ್ರೀ ಕಾಳಿಕಾಂಬಾ ಜ್ಯೋತಿಷ್ಯಾಲಯ. ನಿಮ್ಮ ಎಲ್ಲ ಸಮಸ್ಯಗಳಿಗೆ ನಮ್ಮಿಂದ ಪರಿಹಾರ ಪಡೆಯಿರಿ. ಕೌಟುಂಬಿಕ ಸಮಸ್ಯೆ, ಪ್ರೇಮ ವ್ಯವಹಾರ, ಕೋರ್ಟ್ ಕಚೇರಿ ವ್ಯವಹಾರ, ಉದ್ಯೋಗ ಮತ್ತಿತರ ಸಮಸ್ಯೆಗಳಿಗೆ ತೃಪ್ತಿಕರ ಸಮಾಧಾನ ಕಂಡುಕೊಳ್ಳಿ. ಜ್ಯೋತಿಷಿ ಪಂ.ಶಂಕರ ಭಟ್." ನಾನು ಅದನ್ನು ಓದಿ ಸಣ್ಣಗೆ ನಗುತ್ತಾ ನನ್ನ ಶ್ರೀಮತಿಯತ್ತ ನೋಡಿದೆ. ಅವಳು "ನಡೀರಿ, ಸುಮ್ಮನೆ. ಲೇಟಾಗಿದೆ. ಏನಕ್ಕೆ ಇದು?" ಎಂದಳು. "ಸುಮ್ಮನೆ. ಏನು ಹೇಳ್ತಾನೋ, ನೋಡೋಣ." ಅಂದೆ. ಆ ದಿನಗಳಲ್ಲಿ ನನಗೆ ಜ್ಯೊತಿಷ್ಯದ ಬಗ್ಗೆ ಆಸಕ್ತಿಯುಂಟಾಗಿ, ಜ್ಯೊತಿಷ್ಯ ಕುರಿತ ಹಲವಾರು ಪುಸ್ತಕಗಳನ್ನು ಓದಿ ತಿಳಿದುಕೊಳ್ಳುತಿದ್ದೆ. ಕೆಲವಾರು ಸಂದೇಹಗಳು ನನ್ನನ್ನು ಕಾಡುತ್ತಿದ್ದವು. ಆದರೆ ಫಲಜ್ಯೋತಿಷ್ಯದ ಬಗ್ಗೆ ನನ್ನ ನಂಬಿಕೆ ಕುಸಿಯತೊಡಗಿತ್ತು. ಈಗೀಗ ನನಗೆ ಅದು ಒಂದು ರೀತಿಯಲ್ಲಿ ಕೆಲವರ ಉದರಂಭರಣಕ್ಕೆ ಎಂದು ಅನ್ನಿಸತೊಡಗಿತ್ತು. ನನ್ನ ಬಲವಂತದಿಂದ ನನ್ನ ಶ್ರೀಮತಿಯು ನನ್ನ ಜೊತೆ ಆ ಜ್ಯೋತಿಷ್ಯಾಲಯಕ್ಕೆ ಬಂದಳು.

ಜ್ಯೋತಿಷ್ಯಾಲಯದ ಒಳಗೆ ಪ್ರವೇಶ ಮಾಡಿದಾಗ, ಒಳಗಡೆ ಒಂದು ರೀತಿಯ ಭಯವನ್ನು ಉಂಟುಮಾಡುವ ವಾತಾವರಣ ಇದ್ದಂತೆ ಅನ್ನಿಸಿತು. ನಾವು ಒಳಗೆ ಬಂದ ಬಾಗಿಲಿನ ಎದುರಿನ ಗೋಡೆಯ ಮೇಲೆ ಶಕ್ತಿಸ್ವರೂಪಣಿ ಪಾರ್ವತಿಯ ವಿವಿಧ ಫೋಟೋಗಳು. ಕೆಲವು ಅಪರೂಪದ ಚಿತ್ರಗಳು - ಕಾಮಾಖ್ಯ, ಮಹಿಷಾಸುರಮರ್ಧಿನಿ, ಸಂತೋಷಿ ಮಾ, ಶಿವ ಪಾರ್ವತಿ, .ಕಾಳಿಕಾದೇವಿ. ಅವುಗಳಲ್ಲಿ ಕಾಳಿಕಾದೇವಿಯ ಚಿತ್ರವೇ ಎಲ್ಲಕ್ಕಿಂತ ದೊಡ್ಡದಾಗಿ ಮಧ್ಯದಲ್ಲಿ ಇತ್ತು. ಆ ಚಿತ್ರದಲ್ಲಿ ಕಾಳಿಕಾದೇವಿಗೆ ನಾಲ್ಕು ಕೈಗಳು - ಒಂದು ಎಡ ಕೈಯಲ್ಲಿ ರಾಕ್ಷಸ ಚಂಡನ ತಲೆ, ಇನ್ನೊಂದು ಎಡಗೈಯಲ್ಲಿ ಒಂದು ಪಾತ್ರೆ. ಚಂಡನ ರುಂಡದಿಂದ ಸುರಿಯುತ್ತಿರುವ ರಕ್ತ ಈ ಪಾತ್ರೆಗೆ ಬೀಳುತ್ತಿದೆ. ಬಲಗೈವೊಂದರಲ್ಲಿ ಕೊಂಕಿದ ಖಡ್ಗ, ಇನೊಂದು ಬಲಗೈಯಲ್ಲಿ ತ್ರಿಶೂಲ. ರುಂಡಗಳ ನೀಳವಾದ ಮಾಲೆಯನ್ನು ಧರಿಸಿದ್ದಾಳೆ. ಸೊಂಟದ ಸುತ್ತ ಕತ್ತರಿಸಲ್ಪಟ್ಟ ರಾಕ್ಷಸರ ಕೈಗಳಿಂದ ಮಾಡಿದ ಡಾಬು! ಅವಳ ಬಲಗಾಲು ಕೆಳಗೆ ಬಿದ್ದಿರುವ ಶಿವನ ಎದೆಯ ಮೇಲೆ. ಕೋಪದಿಂದ ಕೂಡಿದ ಮುಖ. ಅವಳು ನಾಲಿಗೆಯನ್ನು ಹೊರಚಾಚಿದ್ದಾಳೆ. ನೋಡಲು ಭಯ ಹುಟ್ಟಿಸುವಂತಿತ್ತು. ಪ್ರತಿ ಚಿತ್ರಕ್ಕೂ ಕೆಂಪು ಹೂವಿನ ಹಾರ. ದೇವಿಯ ಮುಖಕ್ಕೆ ಅರಿಸಿನ ಕುಂಕಮದ ದಪ್ಪನೆಯ ಬೊಟ್ಟುಗಳು. ಎಲ್ಲಾ ಚಿತ್ರಗಳಿಗೂ ವಿಭೂತಿಯ ಗೆರೆಗಳು. ಕೆಳಗೆ ಆ ಗೋಡೆಯ ಉದ್ದಕ್ಕೂ ಎರಡು ಅಡಿ ಅಗಲದ  ಒಂದು ವೇದಿಕೆ. ಅದರ ಮೇಲೆ ಪಾರ್ವತಿ ಮತ್ತು ಗಣೇಶನ ಪ್ರತಿಮೆಗಳಿದ್ದವು. ಅವುಗಳ ಸುತ್ತಾ ಹೂವು ಚೆಲ್ಲಿತ್ತು. ಕೆಂಪು ಬಣ್ಣದ ಹೂವುಗಳೇ ಜಾಸ್ತಿ. ಗುಲಾಬಿ, ಕನಕಾಂಬರ, ಕಣಗಲೆ, ಸೇವಂತಿ ಹೂವುಗಳೂ ಇದ್ದವು. ಪಾರ್ವತಿಯ ಪ್ರತಿಮೆಯ ಹತ್ತಿರ ಸುತ್ತಾ ಕುಂಕುಮ ಚೆಲ್ಲಿತ್ತು. ಬಹುಶಃ ಕುಂಕುಮಾರ್ಚನೆ ಮಾಡಿದ್ದಿರಬೇಕು. ಪ್ರತಿಮೆಗಳ ಎರಡೂ ಕಡೆ ದೀಪದ ಕಂಬಗಳು, ಐದು ಬತ್ತಿಯವು. ಎರಡೂ ದೀಪಗಳ ಒಂದೊಂದು ಬತ್ತಿಯನ್ನು ಹೊತ್ತಿಸಿದ್ದರು. ಎರಡೂ ಕಡೆ ದೀಪದ ಪಕ್ಕ ಸ್ಟೀಲ್ ಲೋಟದಲ್ಲಿ ಊದುಬತ್ತಿ ಹೊತ್ತಿಸಿತ್ತು. ಊದುಬತ್ತಿಯ ಹೊಗೆ ಜೋರಾಗಿಯೇ ಬರುತ್ತಿತ್ತು; ಆರತಿ ತಟ್ಟೆ, ಸಾಮ್ರಾಣಿ ತಟ್ಟೆ ಮತ್ತಿತರ ಪೂಜಾ ಸಾಮಗ್ರಿಗಳಿದ್ದವು. ವೇದಿಕೆಯ ಮುಂದೆ ನೆಲದಲ್ಲಿ ಎನಾಮಲ್ ಬಣ್ಣದಲ್ಲಿ ಕಪ್ಪು, ಬಿಳಿ, ಕಿತ್ತಳೆ, ಹಸಿರು ಮತ್ತು ಹಳದಿ ಬಣ್ಣಗಳನ್ನು ಬಳಸಿ ಬರೆದ ಕಾಳಿಯಂತ್ರದ ಚಿತ್ತಾರವಿತ್ತು. ಇದರ ಮಧ್ಯೆ ಒಂದು ಕಳಶ. ಒಳಗೆ ಮಾವಿನ ಸೊಪ್ಪಿನ ಒಂದು ಸಣ್ಣ ಗೊಂಚಲು. ಕಳಶಕ್ಕೆ ಅರಿಸಿನ ಕುಂಕುಮಗಳಿಂದ ಪೂಜಿಸಿದ್ದರು.

ರಸ್ತೆ ಕಡೆಗಿದ್ದ ಗೋಡೆಯ ಮೂಲೆಗೆ ಗೋಡೆಗೆ ಲಗತ್ತಿಸಿದಂತೆ ಒಂದು ಮೇಜು. ಮೇಜಿನ ಒಂದು ಕಡೆ ಜ್ಯೋತಿಷಿಗೆ ಒಂದು ಕುರ್ಚಿ. ಇದರಲ್ಲಿ ಕುಳಿತ ಜ್ಯೋತಿಷಿಗೆ ಎದುರಿನ ರಸ್ತೆ ಕಾಣುವಂತಿತ್ತು. ಮೇಜಿನ ಮೇಲೆ ಒಂದಷ್ಟು ಕವಡೆಗಳು. ಒಂದು ಹಲಗೆ, ಕೆಲವು ಬಳಪಗಳು ಸಹ ಇದ್ದವು. ಹಾಗೂ ಕೆಲವು ಪುಸ್ತಕಗಳಿದ್ದವು. ಬಹುಶಃ ಜ್ಯೋತಿಷ್ಯ ಮತ್ತು ದೇವರ ಕುರಿತ ಪುಸ್ತಕಗಳಿದ್ದಿರಬಹುದು. ಎದುರು ಬದಿಯಲ್ಲಿ ನಾಲ್ಕು ಕುರ್ಚಿಗಳು. ಈ ನಾಲ್ಕು ಕುರ್ಚಿಗಳು ರಸ್ತೆ ಬದಿಯ ಗೋಡೆಗೆ ಹತ್ತಿಕೊಂಡಂತೆ ಇದ್ದವು. ನಾವು ಒಳ ಬಂದ ಬಾಗಿಲನ್ನು ಬಿಟ್ಟು ಉಳಿದ ಜಾಗವನ್ನು ಪೂರ್ತಿ ಅಕ್ರಮಿಸಿಕೊಂಡಿದ್ದವು. ಈ ಕುರ್ಚಿಗಳು ಬಂದವರು ಕುಳಿತುಕೊಳ್ಳಲು. ಈ ಕುರ್ಚಿಗಳಲ್ಲಿ ಕುಳಿತವರಿಗೆ ಫೋಟಗಳಿದ್ದ ಗೋಡೆ ಎದುರಿಗೆ ಕಾಣುತ್ತಿತ್ತು. ಪೂಜೆಗೆ ಇಟ್ಟಿದ್ದ ವಿಗ್ರಹಗಳು, ಕಳಶ, ಕಾಳಿಯಂತ್ರ ಎಲ್ಲಾ ಕಾಣುತ್ತಿದ್ದವು !

ರಸ್ತೆಗೆ ಮುಖಮಾಡಿದ ಕುರ್ಚಿಯಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದ. ಅವನ ತೋಳುಗಳು, ಹೊಟ್ಟೆ ಮತ್ತು ಹಣೆಯ ಮೇಲೆಲ್ಲಾ ವಿಭೂತಿಯ ಪಟ್ಟೆಗಳಿದ್ದವು. ಹಣೆಯ ಮಧ್ಯೆ ಒಂದು ದೊಡ್ಡ ಕೆಂಪು ಕುಂಕುಮದ ಬೊಟ್ಟಿತ್ತು. ಎರಡೂ ಕೈಗಳ ನಾಲ್ಕೂ ಬೆರಳುಗಳಿಗೂ ಉಂಗುರಗಳು. ವಿವಿಧ ಹರಳುಗಳಿದ್ದ ಎಂಟು ಉಂಗುರಗಳು. ಬಲಗೈಗೆ ಒಂದು ಚಿನ್ನದ ಕಡಗ. ಕುತ್ತಿಗೆಯಲ್ಲಿ ಎರಡು ದಪ್ಪ ಚೈನ್ ಸರಗಳು. ಈತನೇ ಹೊರಗೆ ಇದ್ದ ಬೋರ್ಡಿನಲ್ಲಿ ಹೇಳಿರುವ ಜ್ಯೋತಿಷಿ ಪಂ. ಶಂಕರ ಭಟ್ ಇರಬೇಕು ಅನ್ನಿಸಿತು. ಶ್ರೀಮಂತ ಜ್ಯೋತಿಷಿ ಎನ್ನಿಸಿತು. ವ್ಯಾಪಾರ ಚೆನ್ನಾಗಿರಬಹುದು ಎನ್ನಿಸಿತು. ನಾವು ಆತನಿಗೆ ನಮಸ್ಕರಿಸಿದೆವು. ಆತ ಮರುನಮಸ್ಕಾರ ಮಾಡಿ, "ಬನ್ನಿ. ಕುಳಿತುಕೊಳ್ಳಿ" ಎಂದು ತನ್ನ ಎದುರಿಗೆ ಇದ್ದ ಕುರ್ಚಿಗಳತ್ತ ಕೈ ತೋರಿಸಿದ. ನಾವು ಕುಳಿತ ನಂತರ ಅವನು "ಏನು ವಿಷಯ? ನಿಮ್ಮ ಸಮಸ್ಯೆ ಏನು?" ಎಂದು ಕೇಳಿದ. ನಾನು ಗೋಡೆಯ ಮೇಲಿದ್ದ ಫೋಟೋಗಳನ್ನು ಮತ್ತೊಮ್ಮೆ ನಿಧಾನವಾಗಿ ನೋಡಿ ನಂತರ ಆತನತ್ತ ತಿರುಗಿ "ನಿಮ್ಮ ಸಲಹೆ ಬೇಕಾಗಿತ್ತು. ನನ್ನ ಒಂದು ಕೆಲಸ ಆಗಬೇಕಿದೆ. ಅದು ಆಗುವುದೋ ಇಲ್ಲವೋ ಎಂದು ಚಿಂತೆ. ಅದಕ್ಕೆ ನಿಮ್ಮ ಸಲಹೆ ಪಡೆಯೋಣ ಅಂತ ಬಂದೆ" ಎಂದೆ. "ಏನು ನಿಮ್ಮ ಸಮಸ್ಯೆ ಹೇಳಿ", ಎಂದು ಆತ ಕೇಳಿದ. "ಅದು" ಎಂದು ಹೇಳಲು ಅನುಮಾನಿಸುವಂತೆ ಮಾಡಿದೆ. "ಹೇಳಿ ಏನು ಸಮಸ್ಯೆ? ಯಾವ ಸಂಕೋಚವೂ ಬೇಡ. ಇಲ್ಲಿ ಸಂಪೂರ್ಣ ಗೌಪ್ಯತೆ ಕಾಪಾಡುತ್ತೇವೆ" ಅಂತ ಆಶ್ವಾಸನೆ ಕೊಟ್ಟ. ಆಗ ನಾನು "ಕೊರ್ಟ್‌ನಲ್ಲಿ ಒಂದು ಕೇಸಿದೆ. ಬಿಸಿನೆಸ್ ವಿಚಾರವಾಗಿ. ನನ್ನ ಪರವಾಗಿ ಆಗುತ್ತೋ ಇಲ್ಲವೋ ಅಂತ" ಎಂದು ಹೇಳಿದೆ. ನಾನು ಹೇಳುತ್ತಿದ್ದ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಇದ್ದ ಆತ ಪೂಜಾಸ್ಥಳದಲ್ಲಿದ್ದ ಒಂದು ನಿಂಬೆಹಣ್ಣನ್ನು ಎತ್ತಿಕೊಂಡು ಬಂದು ಮೇಜಿನ ಮೇಲಿಟ್ಟ. ಮೇಜಿನ ಡ್ರಾಯರ್ ತೆಗೆದು ಒಳಗಿನಿಂದ ಹಸಿದಾರದ ಉಂಡೆ ತೆಗೆದುಕೊಂಡ. ಹಸಿದಾರವು ಅರಿಸಿದ ನೀರಿನಲ್ಲಿ ಅದ್ದಿ ಅದ್ದಿ ತೆಗೆದ ಹಾಗೆ ಹಳದಿ ಬಣ್ಣವಾಗಿತ್ತು. ಆ ಅರಿಸಿನ ಬಣ್ಣದ ದಾರವನ್ನು ನಿಂಬೆಹಣ್ಣಿನ ಮೇಲೆಲ್ಲಾ ಸುತ್ತತೊಡಗಿದ. "ಸಾಕಷ್ಟು ಹಣ ಬರಬಹುದು ಅಂತ ಕಾಣುತ್ತೆ." ಅಂತ ಆತ ಕೇಳಿದ. "ಹೌದು, ಹತ್ತು ಲಕ್ಷದ ವ್ಯವಹಾರ" ಎಂದು ನಾನು ಹೇಳಿದೆ. "ಯಾವಾಗಿನಿಂದ ಈ ಕೇಸ್ ಕೋರ್ಟಿನಲ್ಲಿದೆ?" ಎಂದು ಕೇಳುತ್ತಾ ನಿಂಬೆ ಹಣ್ಣಿನ ಮೇಲೆಲ್ಲಾ ಅರಿಸಿದ ದಾರ ಸುತ್ತುವ ಕೆಲಸ ಮುಂದುವರೆಸಿದ್ದ. ದಾರ ಸುತ್ತುವ ದಿಕ್ಕನ್ನು ಅಗಾಗ ಬದಲಿಸುತ್ತ ನಿಂಬೆ ಹಣ್ಣು ಮೇಲೆ ಪೂರ್ತಿ ದಾರ ಬರುವಂತೆ ದಾರ ಸುತ್ತುತ್ತಾ ಮಾತನಾಡುತಿದ್ದ. "ಸುಮಾರು ಹತ್ತು ವರ್ಷಗಳಿಂದ" ಎಂದೆ. "ಊಂ.." ಎನ್ನುತ್ತಾ ಇದ್ದ ಆತ ದಾರ ಸುತ್ತಿದ ಕೆಲಸ ಮುಗಿಸಿ ನಿಂಬೆ ಹಣ್ಣನ್ನು ಮೇಜಿನ ಮೇಲೆ ತನ್ನ ಹತ್ತಿರ ಇರಿಸಿಕೊಂಡ. "ಯಾರಿಂದ ಹಣ ಬರಬೇಕಿದೆ?" ಎಂದ. "ಅದು ಬೇಡ. ನಿಮಗೆ ನನ್ನ ಸಮಸ್ಯೆ ಬಗೆ ಹರಿಸಲು ಸಾಧ್ಯವೋ ಇಲ್ಲವೋ ತಿಳಿಸಿ" ಎಂದೆ. "ಆಯ್ತು. ಸಮಸ್ಯೆ ಪರಿಹರಿಸೋಣ." ಎಂದು ಹೇಳುತ್ತಾ ದಾರ ಸುತ್ತಿದ ಆ ನಿಂಬೆ ಹಣ್ಣನು ಮೇಜಿನ ಡ್ರಾಯರ್ ಒಳಗೆ ಇಟ್ಟ, ನಂತರ ಮೇಜಿನ ಮೇಲಿದ್ದ ಪಂಚಾಗ ತೆಗೆದುಕೊಂಡ. ನಿಮ್ಮ ಹುಟ್ಟಿದ್ದ ದಿನ, ಜಾಗ, ಸಮಯ ಹೇಳ್ತೀರಾ?" ಎಂದ. ನಾನು "ತಗೊಳ್ಳಿ ನನ್ನ ಜಾತಕ ಇಲ್ಲಿದೆ." ಎಂದು ಹೇಳಿ ನನ್ನ ಜೋಬಿನಿಂದ ಜಾತಕ ತೆಗೆದುಕೊಟ್ಟೆ. "ಜಾತಕ ಇರೋದು ಬಹಳ ಅನುಕೂಲ ಆಯ್ತು." ಎನ್ನುತ್ತಾ ಜಾತಕವನ್ನು ಪರಿಶೀಲಿಸತೊಡಗಿದ. ಸ್ವಲ್ಪ ಸಮಯ ಜಾತಕ ನೋಡಿ ನಂತರ ಪಂಚಾಗ ತೆಗೆದುಕೊಂಡು ಅವತ್ತಿನ ಪುಟ ತೆಗೆದು ನೋಡಿದ. "ಗೋಚಾರದಲ್ಲಿ ಅಶುಭ ಗ್ರಹಗಳಿಂದ ನಿಮಗೆ ತೊಂದರೆ ಇದೆ. ಈಗ ಒಂದು ನಿಂಬೆ ಹಣ್ಣನ್ನು ಮಂತ್ರಿಸಿ ಕೊಡುತ್ತೇನೆ. ನಾನೀಗ ಹೇಳುವ ಹಾಗೆ ಮಾಡಿ. ಈಗ ನೇರವಾಗಿ ಮನೆಗೆ ಹೋಗಿ, ಕೈಕಾಲು ಮುಖ ತೊಳೆದುಕೊಂಡು ಪೂಜಾರೂಂನಲ್ಲಿ ಒಂದು ಕಳಶವನ್ನಿಟ್ಟು ಅದಕ್ಕೆ ನೀರನ್ನು ತುಂಬಿ. ಅದರ ಒಳಗೆ ನಾನು ಮಂತ್ರಿಸಿ ಕೊಡುವ ನಿಂಬೆ ಹಣ್ಣನ್ನು ಮುಳುಗಿಸಿ. ಅರಿಸಿ, ಕುಂಕುಮ ಮತ್ತು ಹೂವುಗಳಿಂದ ಕಳಶದ ನೀರನ್ನು ಪೂಜಿಸಿ. ಊದುಬತ್ತಿ ಮತ್ತು ಕರ್ಪೂರದಾರತಿಯಿಂದ ಪೂಜೆ ಮಾಡಿ. ನಿಮ್ಮ ಮನೆದೇವರ ಪೂಜೆಯನ್ನೂ ಮಾಡಿ. ಪೂಜೆ ಎಲ್ಲಾ ಮುಗಿದ ಮೇಲೆ ಪೂಜಾರೂಂಗೆ ಬೀಗವನ್ನು ಹಾಕಿ. ನಾಳೆ ಸಂಜೆ ಇಲ್ಲಿಗೆ ಬರುವ ಒಂದು ಗಂಟೆ ಮೊದಲು ಪೂಜಾರೂಂ ಬೀಗ ತೆಗೆದು ಬಾಗಿಲು ತೆಗೆಯಿರಿ. ಕಳಶದ ಪೂಜೆಯನ್ನು ಮಾಡಿ, ನಂತರ ನಿಮ್ಮ ಮನೆದೇವರ ಪೂಜೆಯನ್ನೂ ಮಾಡಿ. ಪೂಜೆಯಾದ ಮೇಲೆ ಕಳಶದಲ್ಲಿಟ್ಟಿದ್ದ ನಿಂಬೆಯ ಹಣ್ಣನ್ನು ಹೊರ ತೆಗೆದು ಚೆನ್ನಾಗಿ ಒರೆಸಿ ಶುಭ್ರವಾದ ಕೆಂಪು ಬಟ್ಟೆಯಲ್ಲಿ ಸುತ್ತಿಕೊಂಡು ಮಡಿಯಿಂದ ಇಲ್ಲಿಗೆ ತೆಗೆದುಕೊಂಡು ಬನ್ನಿ. ನೀವು ತರುವ ನಿಂಬೆ ಹಣ್ಣನ್ನಿಟ್ಟು ನಾನು ದೇವಿ ಪೂಜೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕೇಳುತ್ತೇನೆ. ದೇವಿ ಏನು ಸೂಚಿಸುವಳೋ ನೋಡೋಣ. ಎಲ್ಲೂ ನೂ ಲೋಪವಾಗದಂತೆ ಎಚ್ಚರವಹಿಸಿ" ಎಂದ. "ಆಗಬಹುದು" ಎಂದೆ. ಜ್ಯೋತಿಷಿ ಮೇಜಿನ ಡ್ರಾಯರ್ ಹೊರಕ್ಕೆಳೆದು ಹಳದಿಯ ಹಸಿದಾರ ಸುತ್ತಿದ್ದ ನಿಂಬೆ ಹಣ್ಣನ್ನು ತೆಗೆದುಕೊಂಡು ಪೂಜೆಯ ಸ್ಥಳಕ್ಕೆ ಹೋಗಿ ಅರಿಸಿ ಕುಂಕುಮ ಸ್ವಲ್ಪ ಸಿಂಪಡಿಸಿ ಊದುಬತ್ತಿಯ ಹೊಗೆಯಲ್ಲಿ ಕ್ಷಣ ಹೊತ್ತು ಹಿಡಿದ. ಪಾರ್ವತಿಯ ಪ್ರತಿಮೆಗೆ ಮತ್ತು ಕಾಳಿಕಾದೇವಿಯ ಫೋಟೋಗೆ ತೋರಿಸಿ ನಂತರ ನಿಂಬೆಯ ಹಣ್ಣನ್ನು ಮುಷ್ಠಿಯಲ್ಲಿ ಹಿಡಿದು ಮೂಗಿನ ಮೇಲೆ, ಹುಬ್ಬಿನ ಮಧ್ಯ ಒತ್ತಿಕೊಂಡು ಕಣ್ಣು ಮುಚ್ಚಿ ಯಾವುದೋ ಮಂತ್ರವನ್ನು ಹೇಳಿಕೊಂಡ. ನಂತರ ಮಂತ್ರಿಸಿದ ಆ ನಿಂಬೆ ಹಣ್ಣನ್ನು ನನ್ನ ಬಲಗೈಗೆ ಕೊಟ್ಟ. "ಈಗ ನೂರು ರೂಪಾಯಿ ದಕ್ಷಿಣೆ ಕೊಡಿ. ನಾಳೆ ದೇವಿಯ ಸೂಚನೆ ನೋಡಿ ಖರ್ಚು ಎಷ್ತಾಗುತ್ತೆ ಅಂತ ಗೊತ್ತಾಗುತ್ತೆ" ಎಂದು ಹೇಳಿದ. "ಸರಿ ಆಗಲಿ" ಎಂದು ಹೇಳಿ ಅವನಿಗೆ ನೂರು ರೂಪಾಯಿ ದಕ್ಷಿಣೆ ಕೊಟ್ಟೆ. ನಾನು ಮತ್ತು ನನ್ನ ಹೆಂಡತಿ ಮನೆಯ ಕಡೆಗೆ ಹೊರೆಟೆವು.

ಮನೆಗೆ ಹೋಗುತ್ತಾ ನನ್ನ ಹೆಂಡತಿ ಕೇಳಿದಳು, "ಯಾವುದ್ ರೀ, ಕೇಸು; ನನಗೆ ಗೊತ್ತಿಲ್ಲದ್ದು?" "ಯಾವ್ ಕೇಸೂ ಇಲ್ಲ. ಸುಮ್ನೆ ಹೇಳ್ದೆ." ಎಂದು ನಾನಂದೆ. "ನೀವ್ ಒಬ್ಬರು. ಮಂತ್ರಿಸಿದ ನಿಂಬೆಹಣ್ಣು ಬೇರೆ ಕೊಟ್ಟಿದಾನೆ." ಎಂದಳು ನನ್ನ ಶ್ರೀಮತಿ. "ಏನ್ ಮಾಡ್ ಬೇಕ್ ಅಂತ ಹೇಳಿದಾನಲ್ಲ. ನಿಂಗೆ ಇಷ್ಟ ಇದ್ರೆ ಮಾಡು." ಎಂದೆ. ನನ್ನ ಶ್ರೀಮತಿಗೆ ಪೂಜೆ ಪುನಸ್ಕಾರಗಳಲ್ಲಿ ಬಹಳ ಶ್ರದ್ಧೆ. ಮನೆಗೆ ಹೋದ ಮೇಲೆ, ಅವಳು ಸ್ನಾನ ಮಾಡಿ ಬಂದು ಕಳಶವನ್ನಿಟ್ಟು, ಅದರಲ್ಲಿ ನಿಂಬೆ ಹಣ್ಣನ್ನು ಮುಳುಗಿಸಿದಳು. ಕಳಶದ ನೀರಿಗೆ ಅರಿಸಿ ಕುಂಕುಮ ಹಾಕಿದಳು. ಹೂವನ್ನೂ ಹಾಕಿದಳು. ಊದುಬತ್ತಿ ಮತ್ತು ಕರ್ಪೂರದಾರತಿಯಿಂದ ಪೂಜೆ ಮಾಡಿದಳು. ಆ ಜ್ಯೋತಿಷಿ ಹೇಳಿದ ಹಾಗೆ ಪೂಜೆಯನ್ನು ಮಾಡಿದ ನಂತರ ಪೂಜಾರೂಂನ ಬಾಗಿಲಿಗೆ ಬೀಗ ಹಾಕಿದಳು. ಮಾರನೆಯ ದಿನ ಮಧ್ಯಾಹ್ನ ಊಟವಾದ ನಂತರ ಸ್ವಲ್ಪ ಮಲಗಿದ್ದೆ. ನನ್ನ ಶ್ರೀಮತಿ "ಏನ್ ರೀ, ಬನ್ನಿ ಇಲ್ಲಿ ಬೇಗ" ಎಂದು ಜೋರಾಗಿ ಕರೆದಳು. ಧ್ವನಿಯಲ್ಲಿ ಭಯವಿದ್ದಂತೆ ಅನ್ನಿಸಿತು. "ಏನು? ಬಂದೆ" ಅನ್ನುತ್ತಾ ನಾನು ಬೆಡ್‌ರೂಂನಿಂದ ಬಂದೆ. ನನ್ನ ಹೆಂಡತಿ ಪೂಜಾರೂಂನಲ್ಲಿದ್ದಳು. "ಏನಾಯಿತು?" ಎಂದೆ. "ನೋಡೀಂದ್ರೆ,. ಮಂತ್ರಿಸಿದ ನಿಂಬೆ ಹಣ್ಣು ಇಲ್ಲ. ಮಾಯವಾಗಿದೆ." ಎಂದಳು. ಅವಳ ಕೈಯಲ್ಲಿ ಅರಿಸಿದ ದಾರ ಗೋಜಲಾಗಿ ಉಂಡೆಯಂತೆ ಅವಳ ಕೈಯಲ್ಲಿತ್ತು. ಅವಳ ಕೈ ಅರಿಸಿ ಕುಂಕುಮದ ಓಕಳಿ ನೀರಿನಲ್ಲಿ ಅದ್ದಿದಂತಿತ್ತು. ಆಗ ನನಗರ್ಥವಾಯಿತು: ಅವಳು ಆ ಜ್ಯೋತಿಷಿ ಹೇಳಿದಂತೆ ಪೂಜಾರೂಂನ್ ಬಾಗಿಲು ತೆಗೆದು ಕಳಶಕ್ಕೆ ಪೂಜೆ ಮಾಡಿದ್ದಾಳೆ. ಕೆಂಪು ಬಟ್ಟೆಯೊಂದನ್ನು ಸಿದ್ಧವಾಗಿಟ್ಟುಕೊಂಡು ಕಳಶದ ನೀರಿನಿಂದ ಮಂತ್ರಿಸಿದ ನಿಂಬೆ ಹಣ್ಣನ್ನು ಹೊರಗೆ ತೆಗೆಯಲು ಹೋಗಿದ್ದಾಳೆ. ಅಲ್ಲಿ ಮಂತ್ರಿಸಿದ ನಿಂಬೆಹಣ್ಣು ಇಲ್ಲ! ಕೇವಲ ಅದರ ಮೇಲೆ ಸುತ್ತಿದ್ದ ದಾರದ ಗೋಜಲು ಮಾತ್ರ ಅವಳ ಕೈಯಲ್ಲಿದೆ. "ಅಷ್ಟೇ ತಾನೆ. ಬಿಡು." ಎಂದು ನಾನೆಂದಾಗ ಅವಳು "ಏನು, ಅಷ್ಟೇ ತಾನೆ?! ಒಳ್ಳೇ ಫಜೀತಿ ತಂದಿಟ್ರಿ. ಏನೋ ಮಾಟ ಮಾಡಿದ್ದಾನೆ? ಗ್ರಹಚಾರ. ಏನಾಗುತ್ತೋ ? ಬನ್ನಿ ಅವನ ಹತ್ತಿರ ಹೋಗೋಣ" ಎಂದಳು. "ಏನೂ ಬೇಡ. ಏನಾಗಿದೆ ಅಂತ ಯೋಚಿಸೋಣ", ಎಂದು ನಾನಂದೆ. ನನ್ನ ಹೆಂಡತಿ ಮಾತ್ರ ಬೇಜಾರು ಮತ್ತು ಆತಂಕದಿಂದ ಚಡಪಡಿಸುತ್ತಿದ್ದಳು.

ಮಾರನೆಯ ದಿನ ಬೆಳಿಗ್ಗೆ ನನ್ನ ಶ್ರೀಮತಿ ತನ್ನ ವಾರಗಿತ್ತಿ ಅಂದರೆ ನನ್ನ ತಮ್ಮನ ಹೆಂಡತಿಯ ಹತ್ತಿರ ಆ ಜ್ಯೋತಿಷಿಯ ಬಗ್ಗೆ ವಿಚಾರಿಸುತ್ತಿದ್ದಳು. ನನ್ನ ತಮ್ಮನಿಗೆ ಜ್ಯೋತಿಷಿಗಳ ಬಳಿ ಭವಿಷ್ಯ ಕೇಳುವ ಚಟ. ನನ್ನ ನಾದಿನಿ ಹೇಳಿದಳು "ಓ, ಹೌದಾ? ಆ ಜ್ಯೋತಿಷೀನೇ ಇವರ ಕೊಲೀಗ್ ಒಬ್ಬರಿಗೆ ಹೀಗೇ ಮಾಡಿದ್ದನಂತೆ..." ಅವರು ಅವನ ಹತ್ತಿರ ಜ್ಯೋತಿಷ್ಯ ಕೇಳಲು ಹೋಗಿದ್ದಾಗ ಇದೇ ರೀತಿ ನಿಂಬೇ ಹಣ್ಣನ್ನು ಮಂತ್ರಿಸಿ ಕೊಟ್ಟಿದ್ದನಂತೆ. ನಿಂಬೇಹಣ್ಣು ಮಾಯವಾದಾಗ ಅವರು ಹೆದರಿ ಅವನ ಹತ್ತಿರ ಹೋದಾಗ ಅವನು "ಏನೋ ಅಪಚಾರವಾಗಿದೆ. ದೇವಿ ನಿಮ್ಮ ಮೇಲೆ ಮುನಿಸಿಕೊಂಡಿದ್ದಾಳೆ. ನಿಮಗೆ ಕಷ್ಟ ಕಾದಿದೆ." ಎಂದೆಲ್ಲಾ ಹೆದರಿಸಿದನಂತೆ. ಆಗಲಂತೂ ಅವರಿಗೆ ತುಂಬಾ ಭಯವಾಯಿತಂತೆ. "ಈಗ ಏನು ಮಾಡೋದು?" ಎಂದು ಅವನನ್ನು ಕೇಳಿದರಂತೆ. ದೇವಿಯನ್ನು ಶಾಂತಗೊಳಿಸಲು ಯಾವುದೋ ಹೋಮ, ಪೂಜೆ ಮಾಡಬೇಕು ಎಂದೆಲ್ಲಾ ಹೇಳಿ ಸುಮಾರು ಎಂಟು ಹತ್ತು ಸಾವಿರ ಖರ್ಚು ಮಾಡಿಸಿದನಂತೆ. "ಅದೇ, ನಮ್ಮ ಅಪಾರ್ಟ್‌ಮೆಂಟ್ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಇದ್ದರಲ್ಲಾ ರವಿ, ಅವರಿಗೂ ಹೀಗೆ ಮಾಡಿದ್ದು ಅವನು" ಎಂದು ಹೇಳಿದಳು ನನ್ನ ನಾದಿನಿ. ನನ್ನ ತಮ್ಮ, ಅವನ ಹೆಂಡತಿ ಮತ್ತು ಮಗ ಮನೆಗೆ ಬಂದಿದ್ದರು. ಸಂಕ್ರಾಂತಿ ಹಬ್ಬಕ್ಕೆ ಇಬ್ಬರೂ ಸೇರಿ ಸಕ್ಕರೆ ಅಚ್ಚು ಮಾಡಿಕ್ಕೊಳ್ಳುತ್ತಿದ್ದರು. ಹಾಲ್‌ನಲ್ಲಿ ಕುಳಿತಿದ್ದ ನನಗೆ ನನ್ನ ಶ್ರೀಮತಿ ಮತ್ತು ನನ್ನ  ನಾದಿನಿ ಮಾತನಾಡುವುದು ಕೇಳಿಸುತ್ತಿತ್ತು. "ಏನೋ ಅದು ಕೃಷ್ಣ?" ಅಂತ ನನ್ನ ಪಕ್ಕದಲಲ್ಲಿ ಕುಳಿತಿದ್ದ ನನ್ನ ತಮ್ಮನನ್ನು ಕೇಳಿದೆ. "ರವಿ ಅವರಿಗೆ ಸುಮ್ಮನೆ ಖರ್ಚು ಮಾಡಿಸಿದ ಆ ಢೋಂಗಿ ಜ್ಯೋತಿಷಿ. ರವಿ ಅವನ್ ಹತ್ತಿರ ಯಾವ ಪ್ರಶ್ನೆ ಕೇಳಿದ್ದರೋ ಅದಕ್ಕೆ ಅವನಿಂದ ಪರಿಹಾರನೂ ಸಿಗಲಿಲ್ಲ.", ಎಂದು ಹೇಳಿದ ನನ್ನ ತಮ್ಮ. "ಭವಿಷ್ಯ ಕೇಳೋಕೇ ಹೋಗಬಾರದು", ಎಂದು ನಾನು ಹೇಳಿದೆ. ಇದನ್ನು ಕೇಳಿಸಿಕೊಂಡ ನನ್ನ ಶ್ರೀಮತಿ ಅಡುಗೆಮನೆಯಿಂದ ಹಾಲ್‍ಗೆ ಬಂದು "ಆಹಾ, ಏನ್ ಮಾತಾಡ್ತೀರಿ? ನಿನ್ನೆ ನೀವು ಏಕೆ ಹೋಗಿದ್ದು?" ಎಂದು ನನ್ನನ್ನು ಮೂದಲಿಸಿದಳು. "ನಾನೇನೂ ಯಾವುದೇ ಪರಿಹಾರಕ್ಕೆ ಅವನ ಹತ್ತಿರ ಹೋಗಿರಲ್ಲಿಲ್ಲ. ಸುಮ್ಮನೆ ಕುತೂಹಲಕ್ಕೆ. ಅದು ನಿನಗೂ ಗೊತ್ತು." ಎಂದೆ. "ಏನೋ? ಈಗ ನೋಡಿ ಏನಾಗಿದೆ?" ಎಂದು ಕೇಳಿದಳು ನನ್ನ ಶ್ರೀಮತಿ.

ಅಷ್ಟರಲ್ಲಿ ನನ್ನ ತಮ್ಮನ ಮಗ ಮೂರು ವರ್ಷದ ಅಭಿಷೇಕ್ ಅಳುತ್ತಾ ಅವನ ಅಮ್ಮನ ಹತ್ತಿರ ಬಂದ. "ಏನಾಯಿತೋ?" ಎಂದು ಅವನನ್ನು ನನ್ನ ನಾದಿನಿ ಕೇಳಿದಳು. "ಅಮ್ಮ ನೀನು ಕೊಟ್ಟ ಆನೆ ನೀರಲ್ಲಿ ಬಿದ್ ಹೋಯ್ತು. ತೆಕ್ಕೊಡು ಬಾ." ಅಂದ. ಆನೆ ಆಕಾರದ ಸಕ್ಕರೆ ಅಚ್ಚು ಡೈನಿಂಗ್ ಟೇಬಲ್ ಮೇಲಿದ್ದ ನೀರಿನ ಮಗ್‌ನಲ್ಲಿ ಬಿದ್ದುಬಿಟ್ಟಿತ್ತು. "ಇರು ಒಂದ್ ನಿಮಿಷ. ಪಾಕ ಆರಿ ಹೋಗುತ್ತೆ. ಅಚ್ಚಲ್ಲಿ ಹಾಕಿ ಬಂದು ತೆಕೋಡ್ತೀನಿ" ಎಂದು ಅಡಿಗೆ ಮನೆಗೆ ಹೋದಳು ನನ್ನ ನಾದಿನಿ ತನ್ನ ಅತ್ತಿಗೆ ಜೊತೆ. ಸ್ವಲ್ಪ ಸಮಯದ ನಂತರ ಬಂದು ನೀರಿನಲ್ಲಿ ಬಿದ್ದಿದ್ದ ಸಕ್ಕರೆ ಅಚ್ಚನ್ನು ತೆಗೆದು ಮಗನಿಗೆ ಕೊಟ್ಟಳು. ಅವನು ಅಳಲು ಶುರು ಮಾಡಿದ. "ಏನೋ ಯ್ತು?" ಎಂದು ನಾನು ಅವನನ್ನು ಕೇಳಿದೆ. ಅವನು ಅಳುತ್ತಾ "ನೋಡಿ ದೊಡ್ಡಪ್ಪ, ಆನೆ ಕಾಲು ಇಲ್ವೇ ಇಲ್ಲ." ಎಂದ. "ಎಲ್ಲಿ ಕೊಡು ಇಲ್ಲಿ" ಎಂದು ಅವನ ಹತ್ತಿರ ಇದ್ದ ಸಕ್ಕರೆ ಅಚ್ಚನ್ನು ಇಸಕೊಂಡೆ. ನೋಡಿದರೆ ಸಕ್ಕರೆ ಅಚ್ಚು ನೀರಿನಲ್ಲಿ ಐದು ಹತ್ತು ನಿಮಿಷ ಮುಳುಗಿದ್ದರಿಂದ ಸ್ವಲ್ಪ ಕರಗಿತ್ತು. ಆನೆಯ ಕಾಲುಗಳು, ಸೊಂಡಿಲು ಹಾಗೂ ಸುತ್ತಾ ಅಂಚೆಲ್ಲಾ ನೀರಿನಲ್ಲಿ ಕರಗಿದ್ದವು. ಆ ಸಕ್ಕರೆ ಅಚ್ಚನ್ನು ನೋಡುತ್ತಿದ್ದಂತೆ ನನಗೆ ಹೊಳೆಯಿತು ಆ ಜ್ಯೋತಿಷಿ ಏನು ಮಾಡಿದ್ದಾನೆ ಎಂದು. "ಲೇ ಪದ್ಮ, ಬಾರೇ ಇಲ್ಲಿ. ನೀನೂ ಬಾಮ್ಮ ಲಕ್ಷ್ಮಿ" ಎಂದು ಅಡಿಗೆ ಮನೆಯಲ್ಲಿದ್ದ ನನ್ನ ಹೆಂಡತಿ ಮತ್ತು ನನ್ನ ತಮ್ಮನ ಹೆಂಡತಿ ಇಬ್ಬರನ್ನೂ ಕರೆದೆ. ಅವರಿಬ್ಬರೂ ಹಾಲ್‌ಗೆ ಬಂದು ದೀವಾನ ಮೇಲೆ ಕುಳಿತುಕೊಳ್ಳೂತ್ತಾ "ಏನು?" ಎಂದರು. "ಆ ಜ್ಯೋತಿಷಿ ಏನ್ ಟ್ರಿಕ್ ಮಾಡ್ತಿದ್ದಾನೆ ಅಂತ ಗೊತ್ತಾಗಿ ಹೋಯಿತು." ಎಂದೆ. "ಇಲ್ಲಿ ನೋಡಿ ಸಕ್ಕರೆ ಅಚ್ಚು ಐದ್ ಹತ್ ನಿಮಿಷ ನೀರಲ್ಲಿ ಇದ್ದಿದ್ದಕ್ಕೆ ಎಷ್ಟ್ ಕರಗಿ ಹೋಗಿದೆ. ಅವನು ನಮಗೆ ನಿಂಬೆ ಹಣ್ಣಿನಂತೆ ಗುಂಡಗಿದ್ದ ಸಕ್ಕರೆ ಅಥವಾ ಬತ್ತಾಸು ಉಂಡೆಗೆ ದಾರ ಸುತ್ತಿ ಕೊಟ್ಟಿದ್ದ. ಅದಕ್ಕೇ ಅದು ನೀರಿನಲ್ಲಿ ರಾತ್ರಿಯೆಲ್ಲಾ ಇಟ್ಟಿದ್ದರಿಂದ ಕರಗಿ ಹೋಗಿದೆ. ಅಷ್ಟೇ." ಎಂದೆ. "ಅದು ಹೇಗ್ರೀ? ನಮ್ಮ ಎದುರಿನಲ್ಲೇ ನಿಂಬೇ ಹಣ್ಣಿಗೇ ದಾರ ಸುತ್ತುತ್ತಿದ್ನಲ್ಲಾ" ಎಂದಳು ನನ್ನ ಶ್ರೀಮತಿ. "ನೆನಪಿಸ್ಕೋ. ನಿನ್ನೆ ಅವನು ಏನ್ ಮಾಡ್ದ. ನಿಂಬೆಹಣ್ಣಿಗೆ ನಮ್ಮ ಎದುರಿನಲ್ಲೇ ದಾರ ಏನೋ ಸುತ್ತಿದ. ಆ ನಿಂಬೇ ಹಣ್ಣನ್ನ ಮೇಜಿನ ಮೇಲೆ ಇಟ್ಟಿದ್ದ. ಅದು ಸರಿ. ಆದರೆ ಪಂಚಾಂಗ ತೆಗೆಯೋದಿಕ್ಕೆ ಮೇಜಿನ ಮೇಲೆ ಜಾಗ ಬೇಕೂಂತ ನಿಂಬೆಹಣ್ಣು ಮೇಜಿನ ಡ್ರಾಯರ್ ಒಳಗೆ ಇಟ್ಟ ಅಲ್ವ? ನೆನಪಿಸ್ಕೋ?" ಎಂದು ನಾನು ಹೇಳಿದಾಗ "ಹೌದು." ಎಂದಳು ನನ್ನ ಶ್ರೀಮತಿ. "ಕೊನೇಲ್ಲಿ ಕೊಡುವಾಗ ಮೇಜಿನ ಡ್ರಾಯರ್ ಇಂದ ತೆಗೆದು ಕೊಟ್ಟಿದ್ದು ಆ ನಿಂಬೇ ಹಣ್ಣಲ್ಲ. ಅವನು ಮೊದಲೇ ಮಾಡಿಟ್ಟಿದ್ದ ಸಕ್ಕರೆ ಉಂಡೆ! ಅಲ್ಲೇ ಅವನು ಕರಾಮತ್ತು ಮಾಡಿದ್ದು. ನಿಂಬೆ ಹಣ್ಣನ್ನ ಹಾಗೇ ಕೊಡಬಹುದಿತ್ತು. ದಾರದಲ್ಲಿ ಸುತ್ತಿಕೊಟ್ಟಿದೇಕೆ ? ಮೋಸಮಾಡುವ ಉದ್ದೇಶವಿಲ್ಲದಿದ್ದರೆ ನಿಂಬೇಹಣ್ಣನ್ನು ಹಾಗೇ ಕೊಡಬಹುದಿತ್ತು.  ಯೋಚನೆ ಮಾಡಿ." ಎಂದು ನಾನಂದೆ. ಎಲ್ಲರೂ"ಹೌದ್ ಅಲ್ವಾ!" ಎಂದು ಆಶ್ಚರ್ಯಪಟ್ಟರು. "ಅದಕ್ಕೇ ನಾನು ಯಾವಾಗಲೂ ಹೇಳೋದು 'ನೋಡಿದ್ದೂ ಸುಳ್ಳಾಗಬಹುದು. ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು' ಅಂತ" ಎಂದು ಹೇಳಿದೆ.

Thursday, November 15, 2012

ಮೊಗ್ಗು ಅರಳಲೇ ಬೇಕು .... !

ಮೂಲ ಮರಾಠಿ : ಕೆ.ಬಿ. ಹನ್ನೂರಕರ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
ಜಯವಂತರಾವ ಜಗತಾಪ – ಮಾಧುರಿ !
ಇಬ್ಬರದೂ ಮಧುರ ದಾಂಪತ್ಯ ; ಸುಖೀ ಸಂಸಾರ !
ಇಬ್ಬರೂ ಕಲಿತವರು ; ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಅವರು ಉದ್ಯೋಗಿಗಳು ಕೂಡ. ಅವರ ಸುಂದರವಾದ ಸಂಸಾರದಲ್ಲಿ ಹೂವು ಅರಳಿದಂತೆ ಸಾಗರ ಎನ್ನುವ ಮಗ ಮಡಿಲು ತುಂಬಿದ್ದ. ದುಂಡುದುಂಡಾಗಿದ್ದ ಸಾಗರ ಬೆಳೆದಂತೆಲ್ಲ ಬುದ್ಧಿವಂತನಾಗುತ್ತಲೇ ಶಾಲೆಯ ಕಟ್ಟೆಯನ್ನೂ ಹತ್ತಿ ಇಂಗ್ಲೀಷ್ ಪಾಠವನ್ನು ಕಲಿಯುತ್ತಿದ್ದ !
ಸುಖೀ ಸಂಸಾರಕ್ಕೆ ದೃಷ್ಟಿ ಹತ್ತಲು ಹೆಚ್ಚು ಹೊತ್ತು ಹಿಡಿಯುವುದಿಲ್ಲ ಅಲ್ಲವೆ ?
ಜಯವಂತರಾವ ಮತ್ತು ಮಾಧುರಿ ದಾಂಪತ್ಯದಲ್ಲೂ ಹಾಗೇ ಆಯಿತು !
ಅವರಿಬ್ಬರಲ್ಲಿ ಈಗ ಕೆಲ ದಿನಗಳಿಂದ ವಿಚಾರವೊಂದು ತಲೆ ತಿನ್ನತೊಡಗಿತ್ತು !
ಇಂದು ಸಾಯಂಕಾಲ !
ಇಬ್ಬರೂ ಬ್ಯಾಂಕಿನಿಂದ ಮನೆಗೆ ಮರಳಿದ್ದರು. ತಲೆ ತಿನ್ನುತ್ತಿದ್ದ ವಿಷಯದ ಬಗ್ಗೆ ಚರ್ಚೆ ಮಾಡುವ ವಿಚಾರ ಅವರಲ್ಲಿ ಇತ್ತು !
ಮಾಧುರಿ ಮತ್ತೇ ಬಸುರಿಯಾಗಿದ್ದಳು !
ಕುತೂಹಲ, ಹಂಬಲ, ಉತ್ಸಾಹ, ಆತಂಕ ಇಬ್ಬರಲ್ಲೂ ಮನೆ ಮಾಡಿದ್ದವು !
ಹುಟ್ಟುವ ಕೂಸು ಹೆಣ್ಣೋ ಗಂಡೋ ?
ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡಿಸಿದರೆ ... ... ?
ಇದೇ ವಿಚಾರದ ಗೊಂದಲದಲ್ಲಿ ಅವರಿಬ್ಬರೂ ಚಿಂತಿತರಾಗಿದ್ದರು !
ಭ್ರೂಣಲಿಂಗ ಪತ್ತೆ ಮಾಡಿಸುವುದು ಕಾನೂನಿನ ಪ್ರಕಾರ ಅಪರಾಧ !
ಅದು ಅವರಿಬ್ಬರಿಗೂ ತಿಳಿಯದ ಸಂಗತಿಯೇನಲ್ಲ !
ಆದರೂ ... !
ಜಯವಂತರಾವ್ ಹೇಳತೊಡಗಿದ ;
“ಮಾಧುರಿ, ಕಾಯ್ದೆ ಮಾಡೋದ ಮುರಿಯು ಸಲ್ವಾಗಿ ! ನಮಗ ಅದ ಬೇಕಾಗಿಲ್ಲ ಬಿಡ. ಆದರ ಬರೀ ಮಾಹಿತಿ ತಿಳ್ಕೋ ಸಲ್ವಾಗಿಯಾದರೂ ಈ ಪರೀಕ್ಷೆ ಮಾಡ್ಸೂಣುಲಾ ? ಇದು ಪಾಪದ ಕೆಲ್ಸ, ಬೇಕಾಯ್ದೆಶೀರ ಅನ್ನೋದೇನೋ ಖರೆ. ಆದರ ಭಾಳಷ್ಟ ಮಂದಿ ಸಿಟಿ ಒಳಗಿರೋ ಪ್ರಸಿದ್ಧ ಡಾಕ್ಟರ್ ಮಾಧವ ಗುಂಡೆ ದವಾಖಾನಿಯೊಳಗ ಹಿಂಥಾದ್ದss ಮಾಡ್ತಾರಂತ ಮಾತಾಡ್ಕೋತಾರು”
ಚರ್ಚೆ ಮುಂದುವರಿದಿತ್ತು ... ... !
*****
ಮಾಧವರಾವ ಗುಂಡೆ !
ನಗರದ ಪ್ರಖ್ಯಾತ ಸ್ತ್ರೀ ರೋಗ ತಜ್ಞ ! ಹಲವಾರು ರಾಜಕೀಯ ಮುಖಂಡರೊಂದಿಗೆ ಆತನ ಸಂಪರ್ಕವೂ ಇತ್ತು !
ಆತ ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡುತ್ತಿದ್ದ !
ಅನೇಕ ಏಜಂಟರನ್ನು ನೇಮಿಸಿಕೊಂಡು ದೇಶದಲ್ಲಿಯ ಮೂಲೆ ಮೂಲೆಗಳಲ್ಲಿ ವ್ಯಾಪಾರ ಸುರುವಿಟ್ಟುಕೊಂಡಿದ್ದ. ಸಾವಿರಾರು ರುಪಾಯಿಗಳನ್ನು ಜನರಿಂದ ಹಿರಿದುಕೊಂಡು ಪಾಪದ ಕೆಲಸ ಮಾಡುತ್ತಿದ್ದ ಕಟುಕ ! ಕಾಯ್ದೆಯನ್ನು ಮೀರಿಯೂ ಹೇಗೆ ಮುಂದುವರಿಯಬಹುದು ಎಂಬುದಕ್ಕೆ ಆತ ಗುಪ್ತ ಮಾರ್ಗವನ್ನೇ ತೋರಿಸಿದ್ದ ! ಇದೆಲ್ಲದರ ಉಸ್ತುವಾರಿ ನೋಡಿಕೊಳ್ಳಲು ಶ್ರೀಧರ ಪೋಟಬಾಳೆ ಹೆಸರಿನ ನಂಬಿಗಸ್ಥ ಭಂಟನೊಬ್ಬನನ್ನು ಆತ ನೇಮಿಸಿಕೊಂಡಿದ್ದ !
*****
ಜಯವಂತರಾವ ಮತ್ತು ಮಾಧುರಿ ಕೊನೆಗೊಮ್ಮೆ ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಳ್ಳಲು ರಾಜಿಯಾದರು ! ಡಾ. ಗುಂಡೆಯ ದವಾಖಾನೆಗೆ ಹೋಗಲು ಅವರು ನಿರ್ಧರಿಸಿದರು ! ಸಾವಿರಾರು ರುಪಾಯಿ ಫೀಜು ತುಂಬಿ ರವಿವಾರದ ಒಂದು ದಿನ ಸಾಯಂಕಾಲ ಪರೀಕ್ಷೆಯ ಸಮಯವನ್ನು ನಿಗದಿಪಡಿಸಿಕೊಂಡರು !
*****
ರವಿವಾರ ಓಡೋಡುತ್ತ ಬಂತು !
ಸಂಜೆಯ ಸಮಯ. ದವಾಖಾನೆಯ ಭವ್ಯ ಕಟ್ಟಡದ ಸುಸಜ್ಜಿತ ನೆಲಮಾಳಿಗೆಯಲ್ಲಿ ಯಾರಿಗೂ ಸುಳಿವು ಸಿಗದಂತೆ ಡಾ. ಗುಂಡೆ ಸೊನೋಗ್ರಾಫಿ ಮಶೀನು ಇಟ್ಟಿದ್ದ ! ಮಾಧುರಿಯನ್ನು ಒಳ ಕರೆಯಲಾಯಿತು. ಪರೀಕ್ಷೆಯ ಎಲ್ಲ ಹಂತವನ್ನೂ ಒಂದೊಂದಾಗಿ ಮುಗಿಸಲಾಯಿತು. ಕೆಲ ಹೊತ್ತು ಕಳೆದ ಮೇಲೆ ತನ್ನ ಆಫೀಸಿಗೆ ಬರುವಂತೆ ಜಯವಂತರಾವ ಮತ್ತು ಮಾಧುರಿಗೆ ಹೇಳಿದ.
ಗಂಡ-ಹೆಂಡತಿಯರಿಬ್ಬರೂ ಒಳ ಹೊಕ್ಕಾಗ, ಡಾ. ಗುಂಡೆ, ರೀಪೋರ್ಟನ್ನು ತುಂಬ ಚಿಂತಾಕ್ರಾಂತನಾದಂತೆ ನೋಡುತ್ತಿದ್ದ ! ದಂಪತಿಗಳನ್ನು ಕುಳಿತುಕೊಳ್ಳಲು ಹೇಳಿ, ರಿಪೋರ್ಟು ಸರಿಸಿಟ್ಟು ಹೇಳಿದ,
“ಹೆಣ್ಣು ... ಹೆಣ್ಣು ಮಗುವಿದೆ !”
ಡಾ. ಗುಂಡೆಯ ಮಾತು ಕೇಳಿ ಜಯವಂತರಾವನ ಮುಖ ಕಳೆಗುಂದಿತು ! 
ಡಾ. ಗುಂಡೆಯೇ ಮತ್ತೇ ಮಾತನ್ನು ಮುಂದುವರಿಸಿದ.
“ಹ್ಞಾss ! ಏನ ಮಾಡೂಣು ಹೇಳ್ರಿ ? ಕೂಸ ಬೆಳಿಬೇಕೋ ಇಲ್ಲ ... ... ... ?”
ವಿಚಾರ ಮಾಡದೇ ನಿರ್ಧರಿಸುವುದು ಸರಿಯಲ್ಲ ಎಂದುಕೊಂಡ ಗಂಡ-ಹೆಂಡತಿಯರಿಬ್ಬರೂ ಆದಷ್ಟು ಬೇಗನೇ ತಮ್ಮ ನಿರ್ಧಾರವನ್ನು ತಿಳಿಸುವುದಾಗಿ ಹೇಳಿ ಅಲ್ಲಿಂದ ಎದ್ದು ಸೀದಾ ಮನೆಗೆ ಬಂದರು !
*****
ಒಂದೆರಡು ದಿನ ಆ ಬಗ್ಗೆ ಯಾವ ಚರ್ಚೆಯೂ ನಡೆಯಲಿಲ್ಲ !
ಒಂದು ದಿನ ಮಾತನಾಡುತ್ತ ಕುಳಿತಾಗ ಆ ವಿಷಯವನ್ನು ಯಜವಂತರಾವನೇ ಪ್ರಸ್ತಾಪ ಮಾಡಿದ ;
“ಮಾಧುರಿ, ನಿನ್ನ ಅಭಿಪ್ರಾಯ ಏನು ?”
“ಯಾವುದಕ್ಕೆ ?”
“ಅದೇ ಡಾ. ಗುಂಡೆಯವರ ಕಡೆ ಹೋಗೋದು ... !”
“ನೋಡ್ರಿ, ನನ್ನ ಹೊಟ್ಟಿಯೊಳಗ ಹೆಣ್ಣುಕೂಸು ಬೆಳ್ಯಾಕತ್ತೇತಿ ಅನ್ನೂದss ನನಗ ಹೆಮ್ಮೀ ಅನ್ನಿಸಾಕತ್ತೇತಿ ! ದೇವ್ರು, ಮೊದಲ ಬಂಗಾರದಂಥಾ ಮಗನ ಕೊಟ್ಟ ; ಈಗ ಮಗಳು ! ಮಗಳ ಹುಟ್ಟಿ ಬಂದ್ರ ಮನಿಯೊಳಗ ಸುಖ-ಶಾಂತಿ ಹೆಚ್ಚಾಗ್ತಾವ್ರಿ !”
ಜಯವಂತರಾವ ಆಕೆಯ ಮಾತಿಗೆ ಸಹಮತ ತೋರಲಿಲ್ಲ !
ಹೆಣ್ಣುಮಗುವಿನ ತೊಂದರೆ ತಮಗೆ ಬೇಡ ಎಂದು ಬಿಟ್ಟ !
ಮಾಧುರಿಗೆ ಸಿಟ್ಟು ಉಕ್ಕಿ ಬಂತು ! ಆಕೆ ತುಂಬ ಜೋರಿನಿಂದಲೇ ಹೇಳತೊಡಗಿದಳು ;
“ನೋಡ್ರಿ, ಈ ಜಗತ್ತ ಉದ್ಧಾರ ಮಾಡುವಾಕೀ ಒಬ್ಬ ಹೆಣ್ಣss ಆಗಿರ್ತಾಳ ಅನ್ನೂದ ಮರೀಬ್ಯಾಡ್ರಿ. ಕ್ರಾಂತಿಗೂ ಆಕೀ ತಾಯಿ ಮತ್ತ ಶಾಂತಿಗೂ ತಾಯಿ ! ವೀರಮಾತಾ ಜೀಜಾಬಾಯಿ ಇರದಿದ್ರ ವೀರ ಪರಾಕ್ರಮಿ ಶಿವಾಜಿ ಮಾರಾಜ್ರು ಹುಟ್ಟಿ ಬರಾಕ ಸಾಧ್ಯssನ ಇರ್ಲಿಲ್ಲ ! ಸಾವಿತ್ರಿಬಾಯಿ ಫುಲೆ ಇರದಿದ್ರ ಸ್ತ್ರೀ ಶಿಕ್ಷಣದ ಹಾದಿಯೇ ಕಾಣ್ಸೂತ್ತಿರ್ಲಿಲ್ಲ ! ಸನಾತನಿ ವಿಚಾರಗೋಳಿಂದ ಕುರುಡ ಆಗಿರೋ ಸಮಾಜಕ್ಕ ಸ್ತ್ರೀ ಶಿಕ್ಷಣದ ಮೂಲಕನ ವೈಭವ ಪ್ರಾಪ್ತ ಆಗೇತಿ ಅನ್ನೋದ ಮರೀಬ್ಯಾಡ್ರಿ ! ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಾಗ ಝಾನ್ಸಿ ರಾಣಿ ಲಕ್ಷ್ಮಿಬಾಯಿ, ತಾರಾರಾಣಿ, ಅಹಲ್ಯ ಹೋಳ್ಕರ್, ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮೊದಲಾದ ವೀರವನಿತೇರು ರಣರಂಗಕ್ಕ ಇಳ್ದು ಹುತಾತ್ಮರಾಗ್ಯಾರು ! ಪಂಡಿತ ರಮಬಾಯಿ, ಆನಿಬೇಸೆಂಟ್, ಇಂದಿರಾ ಗಾಂಧಿ ವೊದಲಾದೋರೆಲ್ಲ ಇತಿಹಾಸ ನಿರ್ಮಿಸ್ಯಾರು ! ಸಿಂಧೂತಾಯಿ ಸಪಕಾಳ, ಕಲ್ಪನಾ ಚಾವ್ಲಾ ಮೊದಲಾದೋರು ಹೆಣ್ಣಮಕ್ಕಳss ಅಲ್ಲೇನ್ರಿ ? ... ... ...”
ಜಯವಂತರಾವ ತಟಸ್ಥನಾಗಿಯೇ ಕೇಳುತ್ತಿದ್ದ ! ಮಾಧುರಿ ತಡೆಯಿಲ್ಲದಂತೆ ಮಾತನಾಡುತ್ತಿದ್ದಳು !
“... ... ... ಜಗತ್ತನ್ನ ಉದ್ಧಾರ ಮಾಡೂ ಭಾಳ ದೊಡ್ಡ ಶಕ್ತಿ ಹೆಣ್ಣಮಕ್ಕಳ ಕಡೀ ಇರ್ತೇತಿ ! ಹೆಣ್ಣಂದ್ರ ಬರೀ ಹೆಣ್ಣಲ್ಲ ! ಆಕೀ ತಾಯಿ ಆಗ್ತಾಳು, ಮಗಳ ಆಗ್ತಾಳು, ಅಕ್ಕಾ-ತಂಗಿ ಆಗ್ತಾಳು, ಸೊಸಿ ಆಗ್ತಾಳು, ಅತ್ತೀ ಆಗ್ತಾಳು ! ತ್ಯಾಗ, ಪ್ರೇಮ, ಪರಾಕ್ರಮ, ಸಹಿಷ್ಣುತೆ, ವಿವೇಕ, ಚೊಲೋ ಗುಣಗೋಳ ಖಣಿ ಆಗಿರ್ತಾಳು ! ನಿಸರ್ಗವನ್ನ ಸಮತೋಲನ ಮಾಡಾಕೂ ಹೆಣ್ಣ ಬೇಕಾಗ್ತಾಳು ಮರೀಬ್ಯಾಡ್ರಿ ! ... ... ...”
ಒಂದಿಷ್ಟು ಉಸಿರು ಒಳಗೆಳೆದುಕೊಂಡ ಮಾಧುರಿ ಮತ್ತೇ ಮಾತನಾಡತೊಡಗಿದಳು ;
“... ... ... ಡಾ. ಗುಂಡೇದ ಪಾಪದ ಫಲಾ ತುಂಬಿ ಬಂದೇತಿ ಅಂತ ಮಂದಿ ಮಾತಾಡ್ತಿರ್ತಾರು ! ಹೊಟ್ಟ್ಯಾಗ ಇರೂವಾಗನ ಹೆಣ್ಣಕೂಸಗಳ್ನ ಕೊಲ್ಲೂ ಆ ಡಾ. ಗುಂಡೆ ವೈದ್ಯ ವೃತ್ತಿಗನ ಮಸಿ ಬಳಿಯಾಕತ್ತಾನು. ಅಂವಾ ನಮ್ಮ ಸಮಾಜಕ್ಕ ಅಂಟಿದ ಒಂದ್ ದೊಡ್ಡ ವಿಕೃತಿ ! ನಿಮಗ ಗೊತ್ತಿಲ್ಲೇನ್ರಿ ... ; ಮುನ್ಸಿಪಾಲ್ಟಿ ಗಟಾರದಾಗ ಎಳೀ ಕಂದಮ್ಮಗೋಳ ಹೆಣಾ ಸಿಕ್ಕಾವು ! ಬೀದಿ ನಾಯಿಗೋಳು ಹಂಗ ಹರ್ದ ತಿಂತಿರ್ತಾವು ! ಕಾಗಿ, ಹದ್ದು ಅಳಿದುಳಿದ ಎಲುವು ಮತ್ತ ಮಾಂಸವನ್ನು ಎತ್ಕೊಂಡ ಹೊಂಟಾವು ! ಅಷ್ಟ ಯಾಕ... ಡಾ. ಗುಂಡೆನ ಹೊಲದಾಗೀನ ಬಾವಿಯಾಗನ ಹೆಣ್ಣ ಕೂಸಗೋಳ ಎಲವುಗೋಳ ಸಿಕ್ಕಾವಲಾ ! ಕಾಯ್ದೆ, ಪೋಲೀಸ್ರು ಏನೂ ಮಾಡೂದಿಲ್ಲ. ಗೊತ್ತಿದ್ರೂ ಗೊತ್ತಿರ್ಲಾರ್ದಾಂಗ ಇರ್ತಾರು ! ಅಲ್ರಿ, ಆ ಸತ್ತ ಹೆಣ್ಣ ಮಕ್ಕಳ ಬದಕಿದ್ರ ಯಾರೋ ಡಾಕ್ಟರ್, ಲೆಕ್ಚರ್, ಇಂಜೀನಿಯರ್, ವಿಜ್ಞಾನಿ, ಪ್ರಧಾನ ಮಂತ್ರಿ, ರಾಷ್ಟ್ರಪತಿ, ಸಮಾಜಸೇವಕಿ, ರಾಜಕಾರಣಿ, ಗೃಹಿಣಿ ಆಗ್ಬಹುದಿತ್ತಲ್ರಿ ? ನಿಮ್ಮ ಅವ್ವನೂ ಒಬ್ಬಾಕಿ ಹೆಣ್ಣ ಆಗಿದ್ರಿಂದನ ನೀವ್ ಇಂದ ಈ ಜಗತ್ತ ನೋಡಾಕತ್ತೇರಿ ! ಇದೆಲ್ಲ ನೀವ ಯಾಕ ಮರಿತೇರಿ ? ... ... ... ... ಖರೇ ಹೇಳ್ಬೇಕಂದ್ರ ಆ ಕೆಟ್ಟ ಹುಳಾ ಡಾ. ಗುಂಡೆ ಕಡೀ ನನಗ ಹೋಗಾಕ ಮನಸ್ಸ ಇರ್ಲಿಲ್ಲ ! ನಿಮ್ಮ ಬಲವಂತಕ ಬಲಿ ಆದ್ನಿ ಅಷ್ಟ”
ಜಯವಂತರಾವ ಆಕೆ ಮಾತನಾಡುವಾಗ ನಡುವೆ ಬಾಯಿ ಹಾಕಲಿಲ್ಲ ! ಆಕೆ ಮಾತು ನಿಲ್ಲಿಸಿದ ಮೇಲೆ ಏನೂ ತಿಳಿಯದವನಂತೆ ತನ್ನ ವಿಚಾರ ಹೇಳತೊಡಗಿದ !
“ಮುಗಿತೇನ ನಿನ್ನ ಸ್ತ್ರೀಮಾತ್ಮೆ ಪುರಾಣಾ ? ಮಾಧುರಿ, ಹಕೀಕತ್ತ ತಿಳ್ಯೂಲ್ಲದ ಭಾವನಾದ ಭರದಾಗ ತೆಗ್ದಕೊಳ್ಳೂ ನಿರ್ಧಾರಗೋಳು ತಪ್ಪ ಹಾದಿಗಿ ಒಯ್ಯತಾವು ! ಸಮಾಜದ ಹಿತಾ, ದೇಶದ ಹಿತಾ, ಸಮಾಜದ ಅರಿವು ಇಂದ ಬದುಕ ಕಟ್ಟೂದಿಲ್ಲ ! ಸ್ವಾರ್ಥ ಮತ್ತ ಸ್ವಹಿತ ಬಿಟ್ಟ ಬ್ಯಾರೆ ಯಾವುದರಾಗೂ ಮಂದಿಗಿ ಆಸಕ್ತಿ ಇಲ್ಲ ! ಸ್ತ್ರೀಭ್ರೂಣ ಹತ್ಯೆಯಿಂದ ಹೆಣ್ಣಮಕ್ಕಳ ಸಂಖ್ಯಾ ಕಮ್ಮಿ ಆಗ್ತೇತಿ ಅನ್ನೂ ನಿನ್ನ ವಿಚಾರ ತಲ್ಯಾಗಿಂದ ತಗದ ಬಿಡ. ನಾವು ನಮ್ಮ ಕುಟುಂಬದ್ದಷ್ಟss ವಿಚಾರ ಮಾಡೂಣು ! ಶಿವಾಜಿ ಮಾರಾಜ್ರು ಬ್ಯಾರೆಯೋರ ಮನಿಯೊಳಗ ಹುಟ್ಟಿ ಬರ್ಲಿ ಅಂತ ಯಾರಾದ್ರೂ ಅಂತಾರೇನ ? ಹುಚ್ಚರಾಂಗ ವಿಚಾರ ಮಾಡಬ್ಯಾಡ ! ಸುಮ್ನss ನಮ್ಮ ಮನ್ಯಾಗ ಕಿರಿಕಿರಿ ಬ್ಯಾಡ. ಟೈಮ್ ಭಾಳ ಕಮ್ಮಿ ಏತಿ. ಗರ್ಭಪಾತ ಮಾಡಸ್ಕೊಳ್ಳಾಕ ತಯಾರಾಗ ನೀ ! ಮುಂದಿಂದೆಲ್ಲ ಬರೊಬ್ಬರಿ ಆಗ್ತೇತಿ !”
ಆತನ ಮಾತು ಕೇಳಿದ ಮಾಧುರಿ ಸಂತಾಪಿತಗೊಂಡಳು ! ಆವೇಶದಿಂದಲೇ ಆಕೆ ಮರು ಉತ್ತರ ನೀಡತೊಡಗಿದಳು !
“ಅಲ್ರಿ, ನೀವು ಈ ಸಮಾಜದಾಗ ಸುಶಿಕ್ಷಿತ ವ್ಯಕ್ತಿ ಅನ್ಸಕೊಂಡಾವ್ರು ! ಹಿಂಥಾ ವಿಚಾರಗೋಳು ನಿಮಗ ಶೋಭಾ ತರೂದಿಲ್ಲ ! ನೀವ ಏssನ ಹೇಳ್ರಿ. ನಾ ಅಂತೂ ಒಪ್ಪೂದಿಲ್ಲ ! ಪಾಪದ ಹಾದಿ ತುಳಿಯೂದಿಲ್ಲ. ತಿಳ್ಕೋರಿ !”
ಜಯವಂತರಾವನಿಗೂ ಕೋಪ ಉಕ್ಕಿ ಬಂತು !
ಮಾಧುರಿಯ ಸಂಕಟ ಆತನಿಗೆ ಅರಿವಾಗಲೇ ಇಲ್ಲ ! ಹಠಕ್ಕೆ ಬಿದ್ದವರಂತೆ ಆತ ಮತ್ತೇ ವಾದಿಸಿದ !
“ನೋಡ ಮಾಧುರಿ, ನಾನು ಇಡೀ ಸ್ತ್ರೀ ಜಾತಿಯನ್ನ ದ್ವೇಷಾ ಮಾಡಾಕತ್ತಿಲ್ಲ ! ನಮಗ ಹೆಣ್ಣಮಗು ಯಾಕ ಬ್ಯಾಡ ಅನ್ನೂದಕ್ಕ ಕಾರಣಾ ಹೇಳ್ತೇನ ಕೇಳ ; ಸಮಾಜದ ಎಲ್ಲಾ ಸರದಾಟ ಒಂದಿಷ್ಟ ಕಣ್ಣ ಹಾಯ್ಸಿ ನೋಡ ! ಬಾಜೂ ಮನಿ ರಮಾಕಾಕೂನ ಉದಾಹರಣೀನ ತೊಗೋ ! ಆ ಗಂಡ ಸತ್ತ ಹೆಣ್ಣಮಗ್ಳು, ಬದುಕಿನ್ಯಾಗ ತಾ ಗಳಿಸಿದ್ದೆಲ್ಲಾ ತನ್ನ ಮಗಳ ಸುಗಂಧಾನ ಶಿಕ್ಷಣಕ್ಕಾಗಿ ಖರ್ಚ ಮಾಡಿದ್ಳು. ಶ್ರೀಮಂತ ಮನೆತನ ಸಿಗ್ಲಿ ಅಂತ ಸಿಕ್ಕಾಪಟ್ಟೆ ವರದಕ್ಷಿಣಿ ನೀಡಿ ಮದ್ವಿನೂ ಮಾಡಿಕೊಟ್ಳು. ಆದರ ಆದದ್ದೇನ ಗೊತ್ತೇತ್ತಲಾ ? ಮದ್ವಿ ಆದ ಒಂದss ವರ್ಷದಾಗ ಸುಗಂಧಾ ವರದಕ್ಷಿಣಿ ಕಿರುಕುಳಕ್ಕ ಬಲಿ ಆದ್ಳು ! ಆಕೀ ಅತ್ತಿ ಮನ್ಯಾವ್ರು ಹುಲ್ಲಿನ ಬಣವಿ ಸುಟ್ಟ ಹಾಕಿದಾಂಗ ಆಕೀನ ಸುಟ್ಟ ಹಾಕಿದ್ರು ! ಅಷ್ಟss ಅಲ್ಲ ; ಪೋಲೀಸ್ರನ ಒಳಗ ಮಾಡ್ಕೊಂಡ ಅದ ಆತ್ಮಹತ್ಯಾ ಕೇಸ್ ಅಂತ ಮುಚ್ಚಿ ಹಾಕಿದ್ರು ! ... ...”
ಜಯವಂತರಾವ ಸತ್ಯವನ್ನೇ ನುಡಿಯುತ್ತಿದ್ದ. ಅದು ಆತ ಕಂಡ ಸತ್ಯವೇ ಆಗಿತ್ತಲ್ಲವೆ ? ಮುಂದುವರಿದು ಆತ ಹೇಳತೊಡಗಿದ ;
“... ... ರಮಾಕಾಕೂ ನ್ಯಾಯಕ್ಕಾಗಿ ಭಾಳ ಹೋರಾಟ ಮಾಡಿದ್ಳು. ಆದರ ಅದೆಲ್ಲ ವ್ಯರ್ಥ ಆತು ! ತನ್ನ ಮಗಳ ಬೂದಿಯನ್ನ ಆಕಿ ಪಂಚಗಂಗಾ ನದಿಯೊಳಗ ಹಾಕಿಬಿಟ್ಳು ! ಮೂಕ ಆಗಿರೋ ಆ ನದಿ ಅನಿವಾರ್ಯದಿಂದನss ಆ ಪಾಪವನ್ನ ಹೊಟ್ಟಿಯೊಳಗ ಹಾಕ್ಕೊಂತು ! ಇನ್ನೊಂದ ನಿನಗ ಗೊತ್ತಿರಬೇಕಲಾ ? ಸೊಸಿ ನೋಡಾಕ ಚೊಲೋ ಅದಾಳು ಅಂತ ಆಕೀ ಮಾಂವ್ನss ಬಲತ್ಕಾರ ಮಾಡಿ ತನ್ನ ಹಸಿವ ತೀರ್ಸಕೊಂಡ ಸುದ್ದಿ ! ಮಾನಾ ಕಳ್ಕೊಂಡ ಆ ಸೊಸಿ ರೈಲ್ವೆ ಹಳಿಗಿ ತಲಿ ಕೊಟ್ಳು. ಆಕೀ ಎಲವ ಕೂಡ ಸಿಗದಿಲ್ಲ ! ಮಾಧುರಿ, ನಿಪ್ಪಾಣಿಯೊಳಗ ನನ್ನ ಒಬ್ಬ ಸ್ನೇಹಿತನ ಮಗ್ಳ ಮ್ಯಾಲ ಆಕೀ ಗಂಡನss ಮಾನಸಿಕ ಮತ್ತ ದೈಹಿಕ ಅತ್ಯಾಚಾರ ಮಾಡಿ, ಎರ್ಡೂ ಮಕ್ಳ ಜೊತಿ ಆಕೀನ ಮನಿಯಿಂದ ಹೊರ್ಗ ಹಾಕಿದಾ ! ಆ ಮಕ್ಳು ಪೋಟಗಿ (ಜೀವನಾಂಶ) ಸಲ್ವಾಗಿ ಕೋರ್ಟಿನ್ಯಾಗ ದಾವೆ ಹೂಡಿದ್ರೂ ಫಾಯ್ದಾ ಆಗ್ಲಿಲ್ಲ ! ಕೇಸ್ ಐದಾರ ವರ್ಷ ನಡೀತು ! ಗಂಡ ಆದಾವ್ನು ತನ್ನ ಆಸ್ತಿಯೆಲ್ಲಾ ಅಷ್ಟರೊಳಗss ಮಾರಿಬಿಟ್ಟಿದ್ದ ! ಮುಚ್ಚಮರೀಲೆ ಮತ್ತೊಂದ ಮದ್ವಿ ಮಾಡ್ಕೊಂಡ ಸಂಸಾರ ಸುರು ಮಾಡಿದ ! ಪೋಟಗಿ ಬದಲ ಜೇಲಿಗಿ ಹೋಗಾಕ ರೆಡಿ ಅದೇನ ಅಂತ ಅಂವಾ ಈಗ ಹೇಳ್ತಾನು ! ಅದ ಕಾಯ್ದಾದಾಗ ಇಲ್ಲ ! ಹಿಂಥಾ ಕಾಯ್ದೆ-ಕಾನೂನು ಕೋರ್ಟುಗಳ ಒತ್ತಡ ಇದ್ದಾಗ್ಲೂ ಹೆಣ್ಣಮಕ್ಳ ಮ್ಯಾಲ ಇನ್ನೂ ಶೋಷಣಾ ನಡೀತಾನss ಏತಿ ! ... ...”
ಜಯವಂತರಾವ ದಣಿವಿಲ್ಲದಂತೆ ಮಾತನಾಡತೊಡಗಿದ್ದ ! ಮಾಧುರಿ ತಲೆ ಕೆಳಗೆ ಹಾಕಿ ಕುಳಿತ್ತಿದ್ದಳು !
“... ... ಮಾಧುರಿ, ನೀ ಒಮ್ಮಿ ಕೋರ್ಟ್ ಕಂಪೌಂಡ್ದಾಗ ಹೋಗಿ ನೋಡ ; ಇಪ್ಪತ್ತ-ಇಪ್ಪತ್ತೆರಡ ವಯಸ್ಸಿನ ಸಾವಿರಾರು ಹೆಣ್ಣಮಕ್ಳು ಡೈವೋರ್ಸ್ ಮತ್ತ ಪೋಟಗಿ ಸಲ್ವಾಗಿ ಫ್ಯಾಮಿಲಿ ಕೋರ್ಟಿನ ಮುಂದ ನಿಂತಿರ್ತಾರು ! ಭವಿಷ್ಯದಾಗ ನಮಗ ಹುಟ್ಟೂ ಮಗ್ಳೂ ಕೋರ್ಟ್ ಕಂಪೌಂಡ್ದಾಗ ಕಾಣ್ಸೂದಿಲ್ಲ ಅಂತ ಹೆಂಗ ಹೇಳಾಕಾಗ್ತೇತಿ ? ಹೆಣ್ಣಮಕ್ಳಿಗಿ ಕೌಟಂಬಿಕ ಹಿಂಸಾಚಾರ್ದ ವಿರುದ್ಧ ಸಂರಕ್ಷಣಾ ಸಿಗ್ಬೇಕಂತ ಕಾಯ್ದಾನೂ ಏತಿ ! ಆದರ ಆ ಕಾಯ್ದೆಯಿಂದ ಗಂಡಾ-ಹೆಂಡ್ತಿ ನಡುವ ಜಗ್ಳ ಸುರುವಾಗ್ತೇತಿ ! ... ಹಿಂದೂ ವಾರಸಾ ಕಾಯ್ದೆಕ ತಿದ್ದಪಡಿ ತಂದ ಮಗ್ಳಿಗಿ ಅಪ್ಪನ ಆಸ್ತಿಯೊಳಗ ಅಣತಮರ ಜೋಡಿ ಸಮಾನ ಪಾಲ ಕೊಡಬೇಕನ್ನೂ ಕಾಯ್ದೆ ಮಾಡ್ಯಾರು. ಹಂಗss ಡೈವೋರ್ಸ್ ಕೊಡೂವಾಗ ಗಂಡನ ಆಸ್ತಿಯೊಳಗ ಹೆಂಡ್ತಿಗಿ ಅರ್ಧಾ ಪಾಲ ಕೊಡಬೇಕಂತ ವಿಧೇಯಕವನ್ನ ಪಾರ್ಲಿಮೆಂಟಿನ್ಯಾಗ ಮನ್ನೆ ಮನ್ನೆ ಪಾಸ್ ಮಾಡ್ಯಾರು ! ಈ ಕಾಯ್ದೆದಿಂದ ಅಣ್ಣ-ತಮ್ಮ, ಅಕ್ಕ-ತಂಗಿ, ಅಪ್ಪ-ಅವ್ವ ಅನ್ನೂ ಸಂಬಂಧಗೋಳೆಲ್ಲ ಹಾಳಾಗಿ ಕುಟುಂಬ ವಿಘಟನಾ ಆಗಾಕತ್ತೇತಿ ! ಸಮಾಜದಾಗ ನೆಮ್ಮದಿ ಕನಸಿನ ಮಾತಾಗೇತಿ ! ಮಗಳನ್ನ ಸಾಕಿ, ಬೆಳ್ಸಿ ಮದ್ವಿ ಮಾಡ್ಸೂ ಅಷ್ಟೊತ್ತಿಗಿ ಹಡದ ಅವ್ವ-ಅಪ್ಪನ ಹೆಣಾ ಬಿದ್ದ ಹೋಗಿರ್ತೇತಿ ! ಇದ್ನೆಲ್ಲ ನೋಡಿ ಮನ್ಯಾಗ ಮಗ್ಳ  ಹುಟ್ಟಿದ್ರ ಪೀಡಾ ಹುಟ್ಟಿದಾಂಗ ಅನ್ನೂ ಭಾವ್ನಾ ಹೆಚ್ಚಾಗಾಕತ್ತೇತಿ ! ಮುಂದ ನಮಗಾಗ್ಲಿ, ನಮ್ಮ ಮಕ್ಳಿಗಾಗ್ಲಿ ತ್ರಾಸ ಆಗ್ಬಾರ್ದು ಅಂದ್ರ ಈಗ ನೀ ತ್ಯಾಗಾ ಮಾಡಾಕssಬೇಕ ! ‘ಸತ್ಯಮೇವ ಜಯತೆ’ ಕಾರ್ಯಕ್ರಮ ತೋರ್ಸತಾರು ಅಂದ್ರ ಇರೂ ಚಿತ್ರ ಬದ್ಲಾಗೂದಿಲ್ಲ ! ನೀ ಇಲ್ಲ ಅನ್ನಬ್ಯಾಡ. ಡಾ. ಗುಂಡೆಯವರ ಸಲ್ಲಾ ಪಡಕೊಂಡ ಲಗೂ ಮಾಡಿ ಈ ಗರ್ಭ ತೆಗೆಸೋಣು !”
ಮಾಧುರಿ ಒಳಗೊಳಗೆ ಕುದಿಯುತ್ತಿದ್ದಳು !
ಗಂಡ ಹೇಳಿದ ಮಾತುಗಳನ್ನು ಕೇಳಿಸಿಕೊಂಡ ಆಕೆ, ತನ್ನ ಗಂಡ ಸ್ತ್ರೀ ಜಾತಿಯ ಬಗ್ಗೆ ಎಂಥ ಮಾತಾಡ್ತಾನೆ ಎಂದು ಆಘಾತವಾಯಿತು ! ಆಕೆ ಸಾರಾಸಗಟಾಗಿ ಆತನ ಮಾತನ್ನು ಧಿಕ್ಕರಿಸಿದಳು !
ಜಯವಂತರಾವ ಕುದ್ದು ಹೋದ !
“ನೋಡ ಮಾಧುರಿ, ಎಲ್ಲಾ ಹೆಣ್ಣ ಜಾತೀನ ಕೀಳ ಮಾಡಿ ನಾ ಮಾತಾಡಾಕತ್ತಿಲ್ಲ.  ಆದರ ಇಷ್ಟೆಲ್ಲ ಆಗಾಕ ಹೆಣ್ಣss ಕಾರಣ ಅಂತ ಅನ್ಸೂದಿಲ್ಲ ನಿನಗ ? ಸೊಸಿ ಮ್ಯಾಲಿನ ಶೋಷಣಾ ಮತ್ತ ವರದಕ್ಷಿಣಿ ಕೇಸುಗಳೊಳಗ ಅತ್ತೀ ಕೈವಾಡ ಭಾಳ ಇರ್ತೇತಿ ! ಕೋರ್ಟಿನ್ಯಾಗೂ ಇದ ಸಿದ್ಧ ಆಗೇತಿ ! ಹೆಣ್ಣುಭ್ರೂಣ ಹತ್ಯಾದ ಪಾಪದೊಳಗ ಹೆಣ್ಣಿನ ಪಾತ್ರ ಭಾಳ ಏತಿ ಅನ್ನೋದ ಮರೀಬ್ಯಾಡ ! ಹೆಣ್ಣಮಕ್ಳು ದಿಟ್ಟತನದಿಂದ ಇದನ್ನ ನಿರಾಕರಿಸಿದ್ರ ಹಿಂಥಾ ಪಾಪಗೋಳ ಘಟ್ಸೂದಿಲ್ಲ ! ಆದರ ದುರ್ದೈವ ನೋಡ, ಹೆಣ್ಣುಭ್ರೂಣ ಹತ್ಯಾದಂಥಾ ಪಾಪದಾಗ ಹೆಣ್ಣುಗೋಳ ಸಮ್ಮತಿ ಇದ್ದss ಇರ್ತೇತಿ ! ಅವರ ಸಮ್ಮತಿ ಕೊಟ್ಟ ಮ್ಯಾಲನ ಡಾಕ್ಟರೂ ಈ ಅಪರಾಧದಾಗ ಸಹಭಾಗ ಆಗ್ತಾರು ! ... ...”
ಮಾಧುರಿಗೆ ತನ್ನ ಗಂಡನ ಮಾತಿನಲ್ಲಿ ಸತ್ಯ ಕಾಣಿಸತೊಡಗಿತು !
ಆತ ಹೇಳುತ್ತಿರುವುದರಲ್ಲಿ ತಪ್ಪೇನೂ ಇಲ್ಲ !
“ಎಲ್ಲಾದಕ್ಕೂ ಹೆಣ್ಣss ಜವಾಬ್ದಾರ ಆಗಿದ್ರ ಈ ಗರ್ಭ ತೆಗೆಸೋದನ್ನ ನಾ ಸಮರ್ಥನಾ ಮಾಡ್ಕೋದಿಲ್ರಿ ! ಗರ್ಭಪಾತದ ಪಾತಕ ನನ್ನಿಂದ ಸಾಧ್ಯ ಇಲ್ರಿ ! ನನ್ನ ಹೊಟ್ಟ್ಯಾಗಿರೋ ಕೂಸು ಜಗತ್ತ ನೋಡ್ಬೇಕ್ರಿ ! ನನ್ನ ಮೊಗ್ಗು ಅರಳಾಕssಬೇಕ್ರಿ !
ಜಯವಂತರಾವ ಮುಂದೆ ಮಾತನಡಲಿಲ್ಲ !
ಆತ ತನ್ನ ಪ್ರಯತ್ನವನ್ನೇ ಕೈ ಬಿಟ್ಟ !
*****
ಮಾಧುರಿಗೆ ನವಮಾಸಗಳು ತುಂಬಿದವು !
ಹೆರಿಗೆಯೂ ಆಯಿತು ; ಮುದ್ದಾದ ಮಗಳು ಮಡಿಲು ತುಂಬಿದ್ದಳು !
ಮಗಳಿಗೆ ‘ಪಾರು’ ಎಂದು ಪ್ರೀತಿಯಿಂದಲೇ ಹೆಸರಿಡಲಾಯಿತು ! ವಿಚಿತ್ರ ನೋಡಿ ; ಈಗ ಜಯವಂತರಾವ ತನ್ನ ಮಗಳನ್ನು ಬಿಟ್ಟು ಒಂದುಕ್ಷಣವೂ ಇರುತ್ತಿರಲಿಲ್ಲ ! ಗಂಡ-ಹೆಂಡತಿಯರಿಬ್ಬರೂ ಮಗಳ ಪಾಲನೆ-ಪೋಷಣೆ ಚೆನ್ನಾಗಿಯೇ ಮಾಡಿದರು. ಮಗನಿಗೆ  ನೀಡಿದಂತೆಯೇ ಒಳ್ಳೆಯ ಶಿಕ್ಷಣವನ್ನೂ ಕೊಡಿಸಿದರು.
ಪಾರು ತುಂಬ ಬುದ್ಧಿವಂತೆ ! ತುಂಬ ಚೂಟಿ !
ಪದವಿ ಮುಗಿಸಿದ ಮೇಲೆ ಐ.ಎ.ಎಸ್. ಪರೀಕ್ಷೆ ಬರೆದು ಪಾಸಾದಳು !
ದೇಶಸೇವೆಗಾಗಿ ಆಕೆ ಸರಕಾರಿ ಆಡಳಿತದಲ್ಲಿ ಬಹುದೊಡ್ಡ ಹುದ್ದೆ ಪಡೆದಳು !
ಕಮರಿ ಹೋಗಬೇಕಿದ್ದ ಮೊಗ್ಗು ಅರಳಿ ನಿಂತಿತ್ತು !
ಮಾಧುರಿ-ಜಯವಂತರಾವ ಇಬ್ಬರಲ್ಲೂ ಧನ್ಯತಾ ಭಾವ ಇತ್ತು !
ಮಾಧುರಿ ಇಡೀ ಜಗತ್ತಿಗೇ ಹಿರಿದಾದ ಸಂದೇಶವೊಂದನ್ನು ನೀಡಿದ್ದಳು ;
ಮೊಗ್ಗು ಅರಳಲೇ ಬೇಕು !’
*****

Sunday, September 23, 2012

ಹೇಳೋದು ಆಚಾರ ; ತಿನ್ನೋದು ಬದನೆ !


 ಕತೆ
ಮೂಲ ಮರಾಠಿ : ಅಡ್ವೋಕೇಟ್ ಕೆ.ಬಿ. ಹನ್ನೂರಕರ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
-------------------------------------------------------------------------------------------------------------
ಪ್ರತಾಪರಾವ್ ಸರನೋಬತ್ !
ಮುರಕಟ್ಟೆವಾಡಿ ಎಂಬೋ ಊರಿನಲ್ಲಿ ಇರುವ ಒಬ್ಬ ಡಾಕ್ಟರು !
ಪದವಿ ಪಡೆಯುವಾಗ ಸ್ವೀಕರಿಸಿದ ಪ್ರಮಾಣ ವಚನಕ್ಕೆ ತಕ್ಕಂತೆ ಡಾಕ್ಟರೀತನ ಮಾಡುವ ಡಾಕ್ಟರು ! ಒಬ್ಬ ಪ್ರಾಮಾಣಿಕ ಡಾಕ್ಟರು ಎಂದೇ ಜನಮನ್ನಣೆ ಗಳಿಸಿದ್ದ ಅಸಾಮಿ !
ಆ ದಿನ ಆ ಡಾಕ್ಟರಲ್ಲಿಗೆ ಬಂದವನು ಒಬ್ಬ ರೋಗಿ ; ಹೆಸರು ಗುಂಡೂ ಸಾವಂತ !
ಉಚಗಾವಿಯ ಗ್ರಾಮದೇವತೆ ಉಗ್ರಸ್ವರೂಪಿಣಿ. ಆ ದೇವತೆಗೊಂದು ದೇವಸ್ಥಾನ. ವರ್ಷದಲ್ಲಿ ಶ್ರಾವಣ ಮಾಸವೊಂದನ್ನು ಬಿಟ್ಟು ಉಳಿದ ಹನ್ನೊಂದು ತಿಂಗಳಿನ ನಲವತ್ತ್ನಾಲ್ಕು ವಾರಗಳಲ್ಲಿ ಎಂಬತ್ತೆಂಟು ಸಲ ಅಲ್ಲಿ ಜಾತ್ರೆ ನೆರೆಯುತ್ತದೆ !
ಬಂಧುಗಳ ಕರೆಯನ್ನು ಮನ್ನಿಸಿ ಗುಂಡೂ ಸಾವಂತ ಗ್ರಾಮದೇವತೆಯ ಜಾತ್ರೆಗೆಂದು ಉಚಗಾವಿಗೆ ಹೋಗಿದ್ದ ! ಅಲ್ಲಿಯ ದೇವಿಗೆ ಮಾಂಸಾಹಾರವೇ ನೈವೇದ್ಯ ! ಊರಿನ ಪ್ರತಿಯೊಬ್ಬರೂ ಊರದೇವಿಗೆ ಕುರಿಯನ್ನು ಬಲಿ ನೀಡಿ, ರಾತ್ರಿಯಲ್ಲಿ ಭರ್ಜರಿ ಮಾಂಸದಡುಗೆ ಮಾಡುತ್ತಿದ್ದರು ! ಊರಿಗೆ ಊರೇ ಮಸಾಲೆ ಮಾಂಸದ ವಾಸನೆಯಲ್ಲಿ ಪಾವನವಾಗುತ್ತಿತ್ತು ! ಮಾಂಸದಡುಗೆ ಇದೆ ಎಂದರೆ ಸಾರಾಯಿ ಇಲ್ಲದಿದ್ದರೆ ನಡೆಯುತ್ತದೆಯೇ ? ಸಾರಾಯಿ ತುಂಬಿ ಹರಿಯುತ್ತಿತ್ತು !
ಮಂಗಳವಾರ ಮತ್ತು ಶುಕ್ರವಾರ ಆ ದೇವಿಯ ವಾರಗಳು. ಆ ದಿನಗಳಲ್ಲಿ ಸಾರಾಯಿ ಮಾರಾಟಗಾರರಿಗೆ ಶುಕ್ರದೆಸೆ ! ಬುಕ್ಯಾಳದ ಸಾರಾಯಿ ತುಂಬಿದ ಟ್ಯೂಬ್‍ಗಳು ಊರ ಹೊರಗಿನ ಮಾವಿನ ತೋಪಿನಲ್ಲಿ ಒಟ್ಟಿದ್ದ ಬಣವೆಗಳಲ್ಲಿ ಅಥವಾ ಗೂಡುಗಳಲ್ಲಿ ತುಂಬಿರುತ್ತಿದ್ದವು ! ಜೊತೆಗೆ ಸರಕಾರಿ ಪರ್ಮಿಟ್ಟಿನ ಸಾರಾಯಿ ಕೂಡ ಇರುತ್ತಿತ್ತು !
ತಾವು ಆಮಂತ್ರಿಸಿದ ಬಂಧು-ಬಾಂಧವ-ಮಿತ್ರರನ್ನು ಆ ಊರಿನ ಮಂದಿ ಗ್ಲಾಸಿನ ಮೂಲಕವೇ ಸ್ವಾಗತಿಸುತ್ತಿದ್ದರು ! ಗುಂಡೂ ಸಾವಂತನಿಗೂ ಅದೇ ರೀತಿಯ ಸ್ವಾಗತ ಸಿಕ್ಕಿತ್ತು ! ಸ್ವಂತ ದುಡ್ಡಿನಲ್ಲಿ ಸಾರಾಯಿ ಕುಡಿಯಲು ಹಿಂದುಮುಂದೆ ನೋಡುತ್ತಿದ್ದ ಗುಂಡೂ ಜಾತ್ರೆಯ ನಿಮಿತ್ಯವಾಗಿ ಪುಕ್ಕಟೆ ಸಿಕ್ಕ ಸಾರಾಯಿಯನ್ನು ಮನಸೋ ಇಚ್ಚೆ ಕುಡಿದೇ ಕುಡಿದ ! ಆಮೇಲೆ ಸಾಕೆನಿಸುವಷ್ಟು ಮಟನ್ ಊಟ !
ಸಾರಾಯಿ ಕುಡಿದು, ಕುರಿಯ ಮಾಂಸದುಟವನ್ನು ಮುಗಿಸಿಕೊಂಡು ತನ್ನ ಮನೆಗೆ ಮರಳಿದ ಗುಂಡೂ ನೆಲ ಹಿಡಿದು ಮಲಗಿಯೇ ಬಿಟ್ಟ ! ಅತಿಯಾದರೆ ಅಮೃತವೂ ವಿಷವಾಗುತ್ತದೆಯಲ್ಲವೆ ? ಪುಕ್ಕಟೆಯಾಗಿ ಸಿಕ್ಕ ಸಾರಾಯಿ ಮತ್ತು ಕುರಿ ಮಾಂಸದ ಫೀಸುಗಳ ಭರ್ಜರಿ ಊಟ ! ಅತಿಯಾಗಲು ಇನ್ನೇನು ಬೇಕು ?
ವಾಂತಿ-ಭೇದಿ ಸುರುವಾಗಿ ಸುಸ್ತಾಗಿ ಹೋದ ಗುಂಡೂ !
ಗಂಡನ ಆವಸ್ಥೆ ಕಂಡ ಆತನ ಹೆಂಡತಿ ಶಟುಲಿ ಕೈ-ಕಾಲು ಕಳೆದುಕೊಂಡಂತಾದಳು ! ದುಃಖತಪ್ತ ಆಕೆ ಅಕ್ಕ-ಪಕ್ಕದವರ ಸಹಾಯದಿಂದ ಗಂಡನನ್ನು ಡಾ. ಸರನೋಬತ್ ಕಡೆ ಕರೆದುಕೊಂಡು ಬಂದಿದ್ದಳು !
*****
ಗುಂಡೂನನ್ನು ಪರೀಕ್ಷೆ ಮಾಡಿದ ಡಾ. ಸರನೋಬತ್ ಏನೋ ಹೇಳಬೇಕು ಎನ್ನುವಷ್ಟರಲ್ಲಿಯೇ ಅಲ್ಲಿಗೆ ನಾರಾಯಣ ಪಾಟೀಲನ ಆಗಮನವಾಯಿತು !
ಪಂಢರಪುರದ ವಾರಕರಿಯಾದ ನಾರಾಯಣ ಪಾಟೀಲ ಕೊರಳಲ್ಲಿ ತುಳಸಿ ಮಾಲೆ, ಹಣೆಗೆ ಗಂಧ ಧರಿಸಿಕೊಂಡು ಮಹಾರಾಜನಂತೆ ಬೈಕಿನ ಮೇಲೆ ಅಲ್ಲಿಗೆ ಬಂದಿದ್ದ ! ನಿಜವಾಗಿಯೂ ಆತನನ್ನು ಎಲ್ಲರೂ ಸಾಧು-ಸಂತರಿಗೆ ಕರೆಯುವಂತೆ ಮಹಾರಾಜ ಎಂದೇ ಕರೆಯುತ್ತಿದ್ದರು !
ಆತನ ಜೊತೆಯಲ್ಲಿ ಸುಂದರವಾದ ಹರೆಯದ ಹುಡುಗಿ ಬೇರೆ ಇದ್ದಳು !
ಆಕೆ ಆತನ ಹೆಂಡತಿಯ ತಂಗಿ !
ಬಂದದ್ದು ಒಂದು ಸಿರೀಯಸ್ ಕೇಸು ಎಂಬುದು ಆ ಹುಡುಗಿಯ ಮುಲುಕಾಟದಿಂದಲೇ ಕಂಡುಬರುತ್ತಿತ್ತು ! ಡಾಕ್ಟರ್ ಸರನೋಬತ್ ತಡ ಮಾಡದೇ, ತನ್ನ ಸಹಾಯಕಿಗೆ ಗುಂಡೂನನ್ನು ನೋಡಿಕೊಳ್ಳಲು ಹೇಳಿ, ನಾರಾಯಣ ಪಾಟೀಲನ ಕಡೆ ಬಂದ. ಇಬ್ಬರನ್ನೂ ಒಳಗಿನ ರೂಮಿಗೆ ಕರೆಯಿಸಿಕೊಂಡ ಡಾ. ಸರನೋಬತ್ ವಿಚಾರಿಸತೊಡಗಿದ.
“ಏನ್ ಅಂತೀರಿ ನಾರಾಯಣರಾವ್, ಏನ್ ಸಮಾಚಾರಾ ?”
“ನೋಡ್ರಿ ಡಾಕ್ಟರ್ ಸಾಹೇಬ್ರ, ನಾ ಈ ತುಳಸೀ ಮಾಲಿ ಮ್ಯಾಲ ಆಣಿ ಮಾಡ್ಯ ಹೇಳ್ತೇನಿ... ..”
ಡಾಕ್ಟರು ನಗುತ್ತಲೇ ಹೇಳಿದ, “ಅಲ್ರಿ, ನೀವ್ ಮಹಾರಾಜ ಅದೇರಿ. ಮಾಲಿ ಮ್ಯಾಲ ಆಣೀ ಮಾಡೂ ಅವಶ್ಯಕತಾನ ಇಲ್ಲ. ಈಗ ಹೇಳ್ರಿ ನಿಮ್ಮ ಇಬ್ಬರದಾಗ ಯಾರ್ಗೆ ಏನಾಗೇದ ?
“ಡಾಕ್ಟರ್ ಸಾಹೇಬ್ರ, ಈಕೀ ನನ್ನ ಮೇವಣ್ಯಾಳ್ತಿ. ದ್ರೌಪತಿ ವಾಘಮಾರೆ ಅನ್ನೂದು ಈಕೀ ಹೆಸ್ರು. ಈಗ ಎರಡ್ಮೂರ ದಿವ್ಸದಿಂದ ಈಕೀ ಭಾssಳ ತ್ರಾಸ ಮಾಡ್ಕೊಳ್ಳಾಕತ್ತಾಳು. ಒಮ್ಮಿಂದೊಮ್ಮಲೇ ಚೀರಾಕss ಸುರು ಮಾಡ್ತಾಳು !”
“ಅಂಥಾದ್ದೇನಾಗೇದ ಹೇಳ್ರ್ಯಲಾ ?”
“ಹೊಟ್ಟಿ ನೋಯ್ಸತೇತಿ ಅಂತ ಹೇಳ್ತಾಳ್ರಿ. ಭಾಳ ನೋಸತೇತಿ. ಹೊಟ್ಟ್ಯಾಗ ಗಂಟಾಗೇತಿ ಅಂತಾಳು ! ಯಾಡ್ ದಿವ್ಸದಿಂದ ಬರೀ ಇದನ ನೋಡ್ಯss ನೋಡ್ಯ ನಂಗೂ ಅದss ಸಂಸೇ ಬರಾಕತ್ತೇತಿ. ಡಾಕ್ಟರ್ ಸಾಹೇಬ್ರ, ಏನಾರ ಮಾಡ್ರಿ, ಮದಲ ಈಕೀ ಹೊಟ್ಟ್ಯಾಗಿಂದ ಗಂಟ ತಗದ ಹಾಕ್ರಿ. ಖಾಲಿ ಫುಕ್ಕಟ ಕಿರಿಕಿರಿ ಸಾಕಾಗೇತಿ !”
“ಈಕೀ ನಿಮ್ಮ ಮನ್ಯಾಗ ಇರ್ತಾಳೇನ್ರಿ ?”
“ಹೌಂದ್ರಿ. ಈಗ ನಮ್ಮ ಮನ್ಯಾಗ ಅದಾಳು. ನನ್ನ ಧರ್ಮಪತ್ನಿ ಮಂಜುಳಾ ಡೆಲಿವರಿ ಸಲುವಾಗಿ ತವರ್ಮನಿಗಿ ಹೋಗ್ಯಾಳು. ಮದಲ್ನೆ ಡೆಲಿವರಿ ನೋಡ್ರ್ಯ ತವರ್ಮನ್ಯಾಗ ಆಗಬೇಕನ್ನೂದು ಪ್ರಥಾ ಏತಿ. ಈಗ ಆಕೀ ಹೋಗಿ ಮೂರ ತಿಂಗ್ಳಾತ್ರಿ. ನಮ್ಮ ಮಾಂವ ಭಾಳ ಕಾಳಜಿ ಇರೂ ಮನಿಸ್ಯಾ. ಎಲ್ಲಾರ್ದೂ ಕಾಳಜಿ ಮಾಡ್ತಾನು ! ಜೋಡಿ ಇಲ್ಲದಿರಕ ಹೊಲಮನಿ ಕೆಲಸದಾಗ ನನ್ನ ಹೊಟ್ಟಿಪಾಡಿಂದ ಹೈರಾಣ ಆಗ್ತೇತಿ ಅಂತ, ಅವರss ಈ ದ್ರೌಪದೀನ ನಮ್ಮ ಮನ್ಯಾಗ ಇಟ್ಟ ಹೋಗ್ಯಾರು ! ಹಂಗಿದ್ರೂ ನಾ ಏನ ಸುಮ್ನಿಲ್ಲ. ಈಕೀ ಬಗ್ಗಿ ಭಾಳಂದ್ರ ಭಾಳ ಕಾಳಜಿ ಮಾಡ್ತೇನಿ. ಈಕೀನೂ ನಂದ ಭಾಳ ಕಾಳಜಿ ಮಾಡ್ತಾಳು ! ನೀವ್ ನೋಡಾಕತ್ತೇರಲ್ಲ, ನೋಡಾಕ ಎಷ್ಟ ಸುಂದರ ಅದಾಳು ಈಕಿ ! ಹೆಂಗ ಸುಂದರ ಅದಾಳೋ ಹಂಗ ಮನ್ಯಾಗೀನ ಎಲ್ಲಾ ಕೆಲಸಾನೂ ಮಾಡೋದ್ರಾಗ ಭಾssಳ ಹುಶಾರಿ !
ನಮ್ಮ ಮಾಂವ್ಗ ಕಂಡಾಪಟ್ಟಿ ಜಮೀನ ಏತಿ. ಕುಂತ ತಿಂದ್ರೂ ಕರಗುಲ್ಲದಷ್ಟ ಸಂಪತ್ತ ಏತಿ. ಆದರ ಅವ್ರಿಗಿ ಗಂಡ ಮಕ್ಳ ಇಲ್ರಿ. ಯಾಡ್ಡೂss ಹೆಣ್ಣಮಕ್ಕಳಾನ ಅದಾವು ! ನನ್ನ ಧರ್ಮಪತ್ನಿ ಮಂಜುಳಾ ಮತ್ತ ಈಕೀ ದ್ರೌಪದಿ. ಇಬ್ಬರ ! ಗಂಡಮಕ್ಕಳ ಇಲ್ಲಂತ ನಮ್ಮ ಮಾಂವ್ನ ಅಣತಮರು ಅಂವ್ನ ಆಸ್ತಿ ಕಸಗೊಳ್ಳಾಕ ತಯಾರ ಆಗ್ಯಾರು ! ಆ ಅಣತಮರು ಭಾಳ ಕೆಟ್ಟವ್ರ ಅದಾರು. ನಮ್ಮ ಮಾಂವಗ  ಮ್ಯಾಲಿಂದ ಮ್ಯಾಲ ತ್ರಾಸ್ ಮಾಡ್ತಿರ್ತಾರು ! ಡಾಕ್ಟರ್ ಸಾಹೇಬ್ರ, ನೀವ್ ನೋಡ್ಬೇಕರಿ, ದರ ಅಮಾಸಿಗಿ ಅವ್ರು ಮಾಟಾ ಮಾಡ್ಸಿ ನಮ್ಮ ಮಾಂವನ ಮನಿ ಮುಂದ ಒಗಿತಾರು ! ಟೆಂಗಿನಕಾಯಿ, ಸೂಂಜಿ ಚುಚ್ಚಿದ ಲಿಂಬಿಕಾಯಿ, ಗುಲಾಲದಾಗ ಮಾಡಿದ ಅನ್ನ, ಕರೀಗೊಂಬಿ ಹೀಂಗ್ ಏನೇನೋ ವಿಚಿತ್ರ ವಿಚಿತ್ರ ವಸ್ತುಗೋಳ್ನ ನಮ್ಮ ಮಾಂವ್ನ ಮನಿ ಆಜೂಬಾಜೂ ಬಿದ್ದಿರ್ತಾವು ! ಹಿಂಗಾಗಿ ನಮ್ಮ ಮಾಂವ್ನ ಮನ್ಯಾಗ ಭಾಳ ತ್ರಾಸ್ ಆಗಾಕತ್ತಾವು !
ನಮ್ಮ ಅತ್ತಿಗಿ ಭಾಳ ತ್ರಾಸ ಆಗೇತಿ. ಮಾಂವ್ಗೂ ತ್ರಾಸ್ ಏತಿ. ಬೆಳಗಾಂವದಾಗಿನ ಭಾಳ ಡಾಕ್ಟರ್ ಕಡೀ ಇಬ್ಬರೂನು ತೋರ್ಸೇವಿ. ರೊಕ್ಕ ಇರೂ ಪೆಸೆಂಟ್ ಸಿಕ್ರ ಅವಶ್ಯಕತಾ ಇರಲಿಕ್ಕಂದ್ರೂ ಏನೇನೋ ತಪಾಸ ಮಾಡಿ ಪೆಸೆಂಟ್‍ಗೋಳ್ನ ಲುಟಾಸ್ತಾರು ! ಬಿ.ಪಿ., ಶುಗರ್ ಇಲ್ಲಿಕಂದ್ರೂ ಅದಾವಂತ ಹೇಳಿ ಹಗಲಿ ದರೋಡಿ ಮಾಡ್ತಾರು ಡಾಕ್ಟರ್ ಸಾಹೇಬ್ರ, ನಾ ಅಂತೂ ಹೇಳಿ ಕೇಳಿ ಮಹಾರಾಜಾ ಮನಿಷ್ಯಾ. ಬೇಕಾರ ನಾ ಆಣಿ ಮಾಡ್ಯ ಹೇಳ್ತೇನಿ ; ನಮ್ಮ ಮಾಂವ್ನ ಮನ್ಯಾಗ ಏನೇನ ತ್ರಾಸ ಆಗಾಕತ್ತಾವಲಾ ಅವುಗೋಳೀಗೆಲ್ಲ ಅವರ ಅಣತಮರು ಮಾಡಿಸಿದ ಮಾಟಾssನ ಕಾರಣ ಏತಿ ! ದೇವ್ರಾಣಿರೀಪಾ, ಅವ್ರನೂ ನಿಮ್ಮ ಕಡೀನ ತೋರ್ಸಕ ಕರಕೊಂಡ ಬರಾಂವದೇನಿ !”
ದೀರ್ಘವಾಗಿ  ಹೇಳಿದ ನಾರಾಯಣನ ಆಮತು ಕೇಳಿ ಡಾಕ್ಟರ ಮನಸ್ಸು ದ್ವಂದ್ವಕ್ಕೆ ಸಿಲುಕಿತು !
“ನಾರಾಯಣರಾವ್, ನೀವ್ ಸಂತ ಮಹಾರಾಜ ಇದ್ದೇರಿ. ಆದರ ಮ್ಯಾಲಿಂದ ಮ್ಯಾಲ ದೇವ್ರಾಣಿ, ದೇವ್ರಾಣಿ ಅಂತ ಯಾಕ ಹೇಳ್ತೇರಿ ? ಮಂದಿ ಏನೋ ಮಾಡ್ಸಿದ್ದಾರು ಅಂತ ಎಂಥ ಭ್ರಮಾ ಇಟ್ಕೊಂಡೀರಲ್ಲ ? ಅಲ್ಲ, ಸಂತರು ಏನ ಹೇಳ್ಯಾರು ಗೊತ್ತದ ಏನ ನಿಮಗ ... ; ‘ಮೈಮ್ಯಾಗ ಬರೂ ಗಾಳಿಧೂಳಿ ಬರೀ ಸೋಗಿನ ದಾಳಿ !’ ಅಲ್ವೇನ್ರಿ ? ಜ್ಞಾನೇಶ್ವರ ಮಹಾರಾಜರು ಹೇಳ್ಯಾರಲ್ಲ ;  ‘ಮಂತ್ರದಿಂದ ವೈರಿ ಸತ್ತರ ಸೊಂಟಕ್ಯಾಕ ಉಡದಾರ ?’ ಮತ್ತೊಂದ ಕಡೀ ಅವರss ಹೇಳ್ಯಾರ, ‘ಹರಕೆ ಹೊತ್ತು ಮಗು ಹಡೆದರ ಕಾರಣ ಹೇಗಾಗುತ್ತಾನ ಪತಿ ?’ ಅಂದ್ರ ... ... ನಾ ಏನ ಹೇಳ್ಬೇಕಂತೀನಿ ಅಂದ್ರ ಈ ಹರಕೆ, ಮಾಟ-ಮಂತ್ರಾ ಎಲ್ಲಾ ಬಂಡಲ್ ಅದವು. ಇಂದ ಜಗತ್ತ ಎಷ್ಟ ಮುಂದ ಹೋಗೇದ ? ನೀವು ನೋಡ್ಯರ ಸಂತ ಮಹಾರಾಜ ಆಗಿನೂ ಹಳೀದನ್ನ ಜಗ್ಗಾಡ್ಕೊಂತ ಕುಂತೇರಿ ! ಮೂಢನಂಬಿಕಿ ಮ್ಯಾಲ ಯಾಕ ನಿಮಗ ನಂಬ್ಕಿ ? ವಿಚಿತ್ರ ಅನ್ನಿಸ್ತದ ನನಗ. ಕೊಳ್ಳಾಗ ಮಾಲಿ, ಕಾಲಾಗ ದಿಂಡಿ ಅಂತೇರಿ ; ಪಂಢರಪುರದ ವಾರಕರೀ ಅಂತೇರಿ ! ಮತ್ತ ಮ್ಯಾಲ ಇಂಥಾ ವಿಚಾರಗಳ್ನೆಲ್ಲ ನಂಬತೇರಿ ! ಖರೇ ಹೇಳ್ಬೇಕಂದ್ರ ನಿಮ್ಮಂಥವರ್ನ ನಾ ಎಂದೂ ನೋಡಿಲ್ಲ ! ಜ್ಞಾನೇಶ್ವರ, ತುಕಾರಾಮ, ಚೋಖಾಮೇಳ, ಸಾವತಾ, ಏಕನಾಥ ಮೊದಲಾದ ಸಂತ ಮಹರಾಜರು ಈ ಮೂಢನಂಬಿಕೆಯನ್ನು ಕಟುವಾಗಿ ಟೀಕಿಸ್ಯಾರ. ಇಂಥ ಹುಚ್ಚುತನದ ಕಲ್ಪನೆಗಳನ್ನ ತಿರಸ್ಕರಿಸ್ಯಾರ. ಕೆಟ್ಟ ರೂಢಿ, ಸಂಪ್ರದಾಯ ಅನ್ನೂ ಪ್ರವಾಹಗಳ ವಿರುದ್ಧ ಈಜಿ ನಮಗ ಅರಿವ ನೀಡೂ ಕೆಲಸಾ ಮಾಡ್ಯಾರು. ಇದೆಲ್ಲ ಬರೀ ಭ್ರಮಾ ನಾರಾಯಣರಾವ್ ! ಇದರಿಂದ ಇಡೀ ಸಮಾಜ ದುರ್ಬಲ ಆಗ್ತದ ಅಷ್ಟ !”
ಡಾಕ್ಟರು ತುಂಬ ವಿಷಯಗಳ ಮಾತನಾಡಿ ಆತನಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ. ಆದರೆ ಮೂರ್ಖನಾದ ಆ ನಾರಾಯಣರಾವ್ ಮಹಾರಾಜನಿಗೆ ಒಂದಿಷ್ಟೂ ತಿಳಿಯಲಿಲ್ಲ ! ಬದಲಿಗೆ ಆತ ಮತ್ತೇ ತನ್ನ ಹಳೇ ಹಾಡನ್ನೇ ಹಾಡುತ್ತ ಮೂರ್ಖತನದ ಸೂರು ಎಳೆದ !
“ಹಂಗಲ್ರಿss ಡಾಕ್ಟರ್ ಸಾಹೇಬ್ರ, ಈ ದ್ರೌಪದಿ ಮ್ಯಾಲ ಯಾರೋ ಮಾಟಾ ಮಾಡಿಸ್ಯಾರರೀ ! ಅದರ ಪ್ರಭಾವ ಇದೇತಿ. ಯಾರೋ ಮಾಟಾ ಮಾಡ್ಸಿ ಹೊಟ್ಟ್ಯಾಗ ಹಾಕ್ಯಾರಿ ! ರಾತ್ರಿ ಸರೋತ್ತಿನ್ಯಾಗ ಈಕೀ ಒದ್ದಾಡೋದೇನು, ಚೀರಾಡೋದೇನು ! ಹೊಟ್ಟ್ಯಾಗೀನ ಗಂಟದಿಂದ ಸಾಕಾಗೇತಿ ಅನ್ನೋದೇನು ! ಇದೆಲ್ಲ ಹೊಟ್ಟ್ಯಾಗೀನ ಗಂಟದss ತ್ರಾಸ ! ನಿಮಗ ಮಾಟಾ ಮಾಡ್ಸೂ ವಿಷ್ಯಾ ತಿಳ್ಯೂದಿಲ್ಲ ಬಿಡ್ರಿ ! ನೀವ್ ಈಕೀನ ಚೊಲೋತಂಗ ಚೆಕ್ ಮಾಡ್ರಿ. ಮತ್ತ ಹೊಟ್ಟ್ಯಾಗ ಇರೂ ಗಂಟಷ್ಟ ತಗದ ಬಿಡ್ರಿ ! ನಮ್ಮ ಮಾಂವ-ಅತ್ತೀಗಿ ಯಾಕ ಸುಮ್ನ ತ್ರಾಸ ಕೊಡೂದು ಅಂತ ನಾನss ಈ ಜವಾಬ್ದಾರಿ ಹೊತ್ಕೊಂಡೇನಿ. ಹೊಟ್ಟ್ಯಾಗಿಂದ ಅಷ್ಟ ನಿಕಾಲ ಮಾಡ್ರಿ”
“ನೀವ್ ಹೆಂಗ್ ಅಂತೇರಿ ಹಂಗ. ನಾ ಎಲ್ಲಾ ತಪಾಸ ಮಾಡ್ತೇನಿ. ಅಲ್ಲಿತಂಕಾ ನೀವೊಂದಿಷ್ಟ ಹೊರಗ ಹೋಗ್ರಿ”
“ಡಾಕ್ಟರ್ ಸಾಹೇಬ್ರ, ಫೀಜಿನ ಚಿಂತಿ ಮಾಡಬ್ಯಾಡ್ರಿ. ಎಷ್ಟಬೇಕೋ ಅಷ್ಟ ಖರ್ಚ ಮಾಡಾಕ ನಾ ತಯಾರಿದೇನಿ. ಈಕೀ ಚೊಲೋ ಆದರ ಸಾಕ ನೋಡ್ರಿ” ಎಂದು ನಾರಾಯಣರಾವ್ ತುಂಬ ಉತ್ಸುಕತೆಯಿಂದಲೇ ಹೇಳಿದ.
“ಓಕೆ, ಓಕೆ. ಆತಾತು. ನೀವ್ ಹೊರಗ ಕೂಡ್ರಿ. ನಾ ಚೆಕ್‍ಫ್ ಮಾಡ್ತೇನಿ” ಎಂದು ಹೇಳಿದ ಡಾಕ್ಟರು ದ್ರೌಪದಿಯೊಂದಿಗೆ ಚೆಕ್‍ಫ್ ರೂಮಿನೊಳಗೆ ಹೊಕ್ಕ !
*****
ಡಾಕ್ಟರ್ ಸರನೋಬತ್ ತುಂಬ ಚಾಣಾಕ್ಷ ವ್ಯಕ್ತಿ.
ಚಿಚ್ಚಿ ಅಂದ್ರ ಚಿಕನ್ ಅನ್ನೊದು ಆತನಿಗೆ ಗೊತ್ತು ! ಒಂದಿಷ್ಟು ಚೆಕಫ್ ಮಾಡುವಷ್ಟರಲ್ಲಿಯೇ ಹಕೀಕತ್ತು ಏನು ಎನ್ನುವುದು ಆತನಿಗೆ ಗೊತ್ತಾಗಿ ಹೋಗಿತ್ತು !
ದ್ರೌಪದಿಯ ಹೊಟ್ಟೆಯಲ್ಲಿ ಇರುವ ಗಂಟು ಬೇರೆಯೇ ಆಗಿದೆ !
ಆಕೆಗೆ ಇನ್ನೂ ಮದುವೆಯೇ ಆಗಿಲ್ಲ ; ಆದರೂ ಹೊಟ್ಟೆಯಲ್ಲಿ ಮುಲುಕಾಡುವ ಪಿಂಡ ಇದೆ !
ಹೇಗಾಯಿತು ಇದು ?
ಇದು ಮಾಟ ಮಾಡಿಸಿದ್ದಲ್ಲ !
ದ್ರೌಪದಿ ಯಾರೋ ಗಂಡಸಿನ ಜೊತೆ ಮೈತ್ರಿ ಮಾಡಿ, ಸಲ್ಲಾಪವಾಡಿ ಸುಖದಲ್ಲಿಯೇ ಗೊತ್ತಾಗದಂತೆ ಮಾಡಿದ ಒಂದು ಸಣ್ಣ ತಪ್ಪಿನಿಂದ ಈ ಗಂಟು ಅಥವಾ ಪಿಂಡ ಬೆಳೆದು ನಿಂತಿದೆ !
ಇದು ಅನೈತಿಕ ಸಂಬಂಧದ ಪ್ರತಿಫಲವಲ್ಲದೇ ಬೇರೇನೂ ಅಲ್ಲ !
ದ್ರೌಪದಿಯನ್ನು ವಿಶ್ವಾಸಕ್ಕೆ ತೆಗದುಕೊಂಡ ಡಾ. ಸರನೋಬತ್ ಡಾಕ್ಟರು ಸತ್ಯವನ್ನು ಹೊತೆಗೆಯುವ ಪ್ರಯತ್ನ ಮಾಡಿದ ! ಆತ ಆತ್ಮೀಯವಾಗಿಯೇ ಮಾತನಾಡಿದ ;
“ನೋಡ ದ್ರೌಪದಿ, ನಿನ್ನ ರೋಗ ಭಾಳ ದೊಡ್ಡದು ! ಎಲ್ಲಾರಿಗೂ ತ್ರಾಸ ಮಾಡೂವಂಥದ್ದು ! ನಿಂದ ಮದ್ವಿ ಆಗಿಲ್ಲ ; ಆದರ ನಿನ್ನ ಹೊಟ್ಟ್ಯಾಗ ಪಿಂಡ ಬೆಳ್ಯಾಕತ್ತದ ! ಇದ ಹೆಂಗ ? ಮೂರ ತಿಂಗ್ಳಾದ್ರೂ ನೀ ಯಾಕ ಸುಮ್ಮನಿದ್ದೀ ? ಹಂಗ ನೋಡಿದ್ರ ಋತುಚಕ್ರದಾಗ ಒಂದೆರಡ ಪಾಳಿ ತಪ್ಪಿದ ಮ್ಯಾಲಾದ್ರೂ ನೀ ಒಂದಿಷ್ಟ ವಿಚಾರ ಮಾಡ್ಬೇಕಿತ್ತಲಾ ? ಆದರ ನೀ ಹಂಗ ಮಾಡಿಲ್ಲ ! ಖರೇ ಹೇಳ, ಇದೆಲ್ಲ ಭಾನಗಡಿ ಯಾರ್ದು ?”
ದ್ರೌಪದಿಗೆ ದುಃಖ ಒತ್ತರಿಸಿ ಬಂತು ! ಆಕೆ ಮುಳು ಮುಳು ಅಳುತ್ತಲೇ ಕತೆ ಹೇಳತೊಡಗಿದ್ದಳು !
“ಸರ್, ಇದೆಲ್ಲಾ ನಮ್ಮ ಮಾಮಾ ಮಾಡಿದ ಭಾನಗಡಿನ ! ನಮ್ಮ ಅಕ್ಕಾ ಡೆಲಿವರೀ ಸಲ್ವಾಗಿ ತೌರ್ಮನಿಗಿ ಹ್ವಾದ ಮ್ಯಾಲ, ಮಾಮಾನ ಹೊಟ್ಟೀದ ಹಾಲ್ ಆಗ್ಬಾರ್ದಂತ ನಮ್ಮ ಅಪ್ಪ ನನ್ನ ತಂದು ಇಲ್ಲಿಟ್ರು. ನಮ್ಮ ಮಾಮಾನ ಮ್ಯಾಲ, ನಮ್ಮ ಮನ್ಯಾವರ್ದು ಭಾಳಂದ್ರ ಭಾssಳ ವಿಶ್ವಾಸ ಇತ್ತು ! ಇವರ ಮಾರಾಜಾ ಅದಾರ ಅಂದ ಮ್ಯಾಲ ನಂಬ್ಕಿ ಇಡೂಲ್ಲದ ಏನ ಮಾಡ್ತಾರು ಹೇಳ್ರ್ಯಲ್ಲ ? ಆದರ ಮನಿಯೊಳಗ ನಮ್ಮಿಬ್ಬರ ನಡುವ ಪ್ರೇಮದ ರಂಗ ಹರದಾಡಿತು ! ಮನಿಯೊಳಗ ಇರಾವ್ರ ನಾವಿಬ್ರ ! ಹೊಲಕ್ಕ ಹೋಗಿ ಬಂದ ಇವ್ರು ನನ್ನ ಹಂತ್ಯಾಕ ಕರೀತಿದ್ರು ! ಎಣ್ಣಿ ಹಚ್ಚಿ ಮೈ ಮಾಲೀಸ್ ಮಾಡಾಕ ಹೇಳ್ತಿದ್ರು ! ತಲಿ ನೋಸಾಕತ್ತೇತಿ ಒರ್ಸು ಅಂತಿದ್ರು ! ನಾ ಬ್ಯಾರೆ ಏನೂ ವಿಚಾರ ಮಾಡೂಲ್ಲದ ಭಾಳ ವಿಶ್ವಾಸದಿಂದನ ಮಾಡತಿದ್ನಿ. ಆದರ ಸಾವಕಾಶ ನಮ್ಮ ಮಾಮಾ ಸಮತೋಲನ ಕಳ್ಕೊಂಡ್ರು ! ಗೊತ್ತಾಗದಂಗ ನನ್ನ ಹಾಸಿಗೀಗಿ ಎಳೆದ್ರು ! ನಾನೂ ಹರೇದ ಹುಡುಗಿ ! ನನ್ನ ವಿರೋಧ ಭಾಳ ದಿನ ಉಳಿಲಿಲ್ಲ ! ಹರೇದ ನನ್ನ ಮೈಯ್ಯಾಗನೂ ಹಸವ ಇತ್ತು ! ಪ್ರಕೃತಿ ನಿಯಮ ಮೀರಾಕ ಆಗದಿಲ್ಲ ! ಹಸವ ಹೆಚ್ಚಾತು ! .... ಮತ್ತ ಬ್ಯಾರೆ ಏನ ಆಗ್ತೇತಿ ಹೇಳ್ರ್ಯಲಾ ? ಏನ ಆಗಬಾರ್ದಿತ್ತಲಾ ಅದss ಆತು ! ಮೊದಲ ಸಲಾ ನನಗ ಕಾಂಡೋಮ್ ತೋರ್ಸಿ ಇದರಿಂದ ಹೊಟ್ಟೀಲಿ ಆಗೂದಿಲ್ಲ ಅಂತ ಮಾಮಾ ಹೇಳತ್ತಿದ್ರು ! ಇಬ್ರಿಗೂ ಸುಖಾ ಸಿಗಾಕತ್ತಿತ್ತು ! ನಾ ಮೋಹದ ಬಲ್ಯಾಗ ಬಿದ್ದೇನಿ ಅನ್ನೂ ಖಬರss ಇರ್ಲಿಲ್ಲ ! ಒಂದೆರಡಲ್ಲ ಭಾssಳ ರಾತ್ರಿಗೋಳು ಮೈ ಸುಖದಾಗ ಕಳದ ಹ್ವಾದೂ ! ಕಾಂಡೋಮ್‍ದಿಂದ ಯಾವ ತೊಂದ್ರೀನೂ ಇಲ್ಲ ಅಂತ ನನ್ನ ಗೆಳತ್ಯಾರ ಹೇಳೂದ ಕೇಳಿದ್ನಿ ! ಹಿಂಗಾಗಿ ದಿನ್ನಾ ಮೈ ಸುಖಾ ನಂಗೂ ಬೇಕ ಅನ್ನಸತಿತ್ತು ! ಆದರ ಆ ಸುಖದಾಗ ಕಾಂಡೋಮ್ ಏತ್ಯೋ ಇಲ್ಲೋ ತಿಳಿಲಾರ್ದ ಮೈ ಮರತ್ನಿ ! ಸುಖದಾಗ ಮೈ ಮರಿತಿದ್ರ ಫಲಾನ ಈ ಹೊಟ್ಟಿ !
ಸರ್, ಈಗ ಈ ಮಾಮಾ ನನ್ನೂ ಮದ್ವಿ ಆಗ್ತೇನು ಅಂತಾರು ! ಇಬ್ರನೂ ಖುಷಿಲೇ ಇಡ್ತೇನಿ ಅಂತಾರು ! ಈಗ ನೋಡ್ಯರ ಮಾಟಾ-ಮಂತ್ರ ಮುಂದ ಮಾಡಿ ತಾ ಬಚಾವ್ ಆಗಾಕ ನೋಡಾಕತ್ತಾರು ! ನನ್ನ ಈ ನರಕದಿಂದ ಪಾರ ಮಾಡ್ರಿ ಸರ್ ! ಇಲ್ಲಂದ್ರ ನಾ ಕೇರೀನೋ ಬಾಂವಿನೋ ನೋಡ್ಕೋಬೇಕಾಗ್ತೇತಿ ! ನಂಗ ಬ್ಯಾರೆ ಹಾದಿ ಇಲ್ಲ ... !”
*****
ಡಾ. ಸರನೋಬತ್‍ನಿಗೆ ನಡೆದಿರುವುದು ಏನು ಎಂಬುದು ಪಕ್ಕಾ ಗೊತ್ತಾಗಿ ಹೋಗಿತ್ತು ! ಆದರೆ ಮುಂದಿನ ದಾರಿ ಏನು ಎಂಬುದು ತಿಳಿಯಲಿಲ್ಲ ! ಆತ ನಾರಾಯಣರಾವ್‍ನನ್ನು ಒಳಗೆ ಕರೆಯಿಸಿದ.
“ನಾರಾಯಣರಾವ್, ಮಹಾರಾಜರ್ಹಂಗ ಸೋಂಗ ಹಾಕಿ ಮಾಟಾ-ಮಂತ್ರ ಮುಂದ ಮಾಡಿ ನೀವ್ ಭಾssಳ ಮೋಸಾ ಮಾಡೇರಿ ! ಪುಣ್ಯಕರ್ಮಕ್ಕ ಬೆನ್ನೆಲಬಾಗಿ ನಿಲ್ಲಬೇಕಾದ ನೀವss ಮಹಾರಾಜರ್ಹಾಂಗ ಸೋಂಗ ಹಾಕಿ ಭಾಳ ಕೆಟ್ಟ ಪಾಪಾ ಮಾಡೇರಿ ! ಈ ಹುಡ್ಗಿ ಹೊಟ್ಟ್ಯಾಗಿರೂ ಗಂಟು ಯಾರೋ ಮಾಟಾ ಮಾಡಿಸಿದ್ದಲ್ಲ ; ಅದು ನೀವss ಮಾಡಿದ ಪಾಪದ ಫಲಾ ! ಖರೇ ಹೇಳ್ಬೇಕಂದ್ರ ನಿಮ್ಮ ಹರಕತ್ತ ಕಂಡು ನನಗ ಹೇಸ್ಗಿ ಅನ್ನಿಸ್ಲಿಕ್ಕತ್ತದ ! ಭ್ರೂಣ ಹತ್ಯಾ ಮಹಾಪಾಪ ; ಆ ಪಾಪಾ ಮಾಡಂತ ನನಗ ಹೇಳ್ಕಲಿಕ್ಕತ್ತೀರಿ ? ನಿಮ್ಮ ಮಹಾರಾಜಗಿರಿಗಿ ಏನ ಅನ್ನಬೇಕೋ ತಿಳೀವಲ್ದು. ಈಗ ಸರಳ ನೀವ್ ಇಲ್ಲಿಂದ ಜಾಗಾ ಮಾಡ್ರಿ. ಇಲ್ಲಂದ್ರ ಪೋಲೀಸ್‍ರ್ನ ಕರ್ಸಬೇಕಾದೋತು !”
ಪೋಲೀಸು ಎಂಬ ಮಾತು ಕೇಳಿದ ತಕ್ಷಣ ನಾರಾಯಣನ ಮೈಯಿಂದ ನೀರು ಇಳಿಯತೊಡಗಿತು ! ಆತ ಲಗುಬಗೆಯಿಂದ ದ್ರೌಪದಿಯನ್ನು ಕರೆದುಕೊಂಡು ಆ ಆಸ್ಪತ್ರೆಯಿಂದ ಪಚಾರಾದ !
*****
ದ್ರೌಪದಿ ಹಠ ಹಿಡಿದು ಕುಳಿತ್ತಿದ್ದಳು !
“ನೀ ನಿರೋಧ ಹಾಕ್ಕೊಂಡ ಮ್ಯಾಲೂ ಇದ ಹ್ಯಾಂಗ ಆತು ? ಇದಕ್ಕ ಇನ್ನ ಉಳದಿರೋ ಹಾದಿ ಒಂದss ಒಂದ ; ಆತ್ಮಹತ್ಯೆ ! ಆದರ ಆತ್ಮಹತ್ಯಾ ಮಾಡ್ಕೊಳ್ಳಾಕೂ ಧೈರ್ಯಾ ಬೇಕಾಗ್ತೇತಿ. ಆ ಧೈರ್ಯಾನೂ ನಂಗಿಲ್ಲ ! ಇನ್ನ ನಿನ್ನ ಉಸಾಬರಿ ಸಾಕು. ನಾ ನಿನ್ನ ಬಿಟ್ಟ ಹೋಗ್ತೇನಿ”
ಸಿಟ್ಟಿನಿಂದ ಒಂದೇ ಸಮನೇ ಬೈಯ್ಯುತ್ತಲೇ ಇದ್ದ ದ್ರೌಪದಿ ಅದೇ ದಿನ ತನ್ನ ತವರಿಗೆ ಹೊರಟು ಹೋದಳು !
*****
ದ್ರೌಪದಿ ಹುಚ್ಚಿಯಂತಾಗಿದ್ದಳು !
ಅನ್ನ-ನೀರು-ನಿದ್ದೆಯ ಮೇಲಿನ ಆಕೆಯ ಲಕ್ಷ್ಯ ಹಾರಿ ಹೋಗಿತ್ತು ! ಕಾಲ ಉರುಳಿದಂತೆ ಆಕೆಯ ಪ್ರಕೃತಿ ಬಿಗಡಾಯಿಸತೊಡಗಿತ್ತು ! ಬರುಬರುತ್ತ ಆಕೆ ಯಾರೊಂದಿಗೂ ಮಾತನಾಡದೇ ಮೌನಿಯಾಗಿರತೊಡಗಿದಳು ! ನಿಜವಾಗಿ ಮೂಕಿಯೇ ಆದಳು ! ಆಕೆಯನ್ನು ಮಾತನಡಿಸುವ ಪ್ರಯತ್ನದಲ್ಲಿ ತಂದೆ-ತಾಯಿ ಸೋತು ಹೋದರು !
‘ಹೇಗೆ ಹೇಳಬೇಕು ?’
‘ಏನು ಹೇಳಬೇಕು ?’
‘ತಂದೆ-ತಾಯಿ ಏನು ತಿಳಿದುಕೊಳ್ಳಬಹುದು ?’
‘ಅಕ್ಕ ಸುಮ್ಮನಿರುತ್ತಾಳೆಯೇ ?’
ಇತ್ಯಾದಿ ಇತ್ಯಾದಿ ಪ್ರಶ್ನೆಗಳ ಪೇಚಿನಲ್ಲಿ ದ್ರೌಪದಿ ಸಿಲುಕಿಕೊಂಡಿದ್ದಳು !
ಅತ್ತ ದರಿ ; ಇತ್ತ ಪುಲಿ !
ತುಂಬ ಪ್ರಯತ್ನದ ನಂತರ ಆಕೆ ಮೌನವನ್ನು ಮುರಿದಳು !
ಅಳಿಯನ ಅಯೋಗ್ಯತನ ಕೇಳಿ ತಂದೆ-ತಾಯಿಯ ತಲೆ ಗಿಮಿಗಿಮಿ ತಿರುಗತೊಡಗಿತ್ತು ! ಅವರು ಮೂರ್ಚೆ ಬೀಳುವುದೊಂದೇ ಬಾಕಿ ಇತ್ತು ! ಇದರಿಂದ ಹೇಗೆ ಪಾರಾಗಬೇಕು ಎಂಬ ಚಿಂತೆ ಅವರನ್ನು ಆವರಿಸಿಕೊಂಡು ಹಿಂಡಿ ಹಿಪ್ಪಿ ಮಾಡಿತ್ತು ! ಆದರೆ ಯಾವ ಹಾದಿಗಳೂ ಅವರ ಮುಂದೆ ಸುರಳಿತವಾಗಿ ತೆರೆದುಕೊಳ್ಳಲಿಲ್ಲ ! ಹಾಗೆ ಹೀಗೆ ಮಾಡಿ ಕೊನೆ ಅವರೊಂದು ನಿರ್ಧಾರಕ್ಕೆ ಬಂದರು ;
ದ್ರೌಪದಿಯನ್ನು ನಾರಾಯಣನಿಗೇ ಮದುವೆ ಮಾಡಿಕೊಡಬೇಕು !
*****
ದ್ರೌಪದಿ ಭಿಡೆ ಬಿಟ್ಟೇ ಹೇಳಿದಳು ;
“ಮಾಮಾ ನನ್ನ ಜೋಡಿ ಲಗ್ನಾ ಮಾಡ್ಕೋತೇನಿ ಅಂತ ಆಣೀ ಮಾಡ್ಯಾಣು ! ಅಂವ್ನ ಜೋಡೀನ ನಾ ಸಂಸಾರ ಮಾಡಾಕಿ. ಯಾವದರ ಗುಡ್ಯಾಗ ಯಾಕಾಗವಲ್ದು ನಮ್ಮ ಲಗ್ನಾ ಮಾಡ್ಸರಿ. ಲಗ್ನಾ ಆದ್ರ ಎಲ್ಲಾ ಚೊಲೋ ಆಗ್ತೇತಿ”
ತನ್ನ ಅಳಿಯನನ್ನು ಕರೆಯಿಸಿಕೊಂಡು ಯಾರಿಗೂ ಗೊತ್ತಾಗದಂತೆ ವೈಜನಾಥ ದೇವಾಲಯದಲ್ಲಿ ಮದುವೆ ಮಾಡಿ ಬಿಡಬೇಕು ಎಂದು ಆಕೆಯ ಅಪ್ಪನೂ ನಿರ್ಧರಿಸಿದ !
ಆದರೆ ಮಂಜುಳಾ ?
ಮಂಜುಳಾ ವಿರೋಧಿಸಿದಳು !
“ನನ್ನ ತಂಗೀನ ಸಂವತಿ ಅಂತ ನಾ ಹೆಂಗ್ ಒಪ್ಕೊಳ್ಲಿ ? ಇಷ್ಟ ದಿವಸ ಅಕ್ಕಾ-ತಂಗಿ ಅಂತ ಪ್ರೀತಿಲೇ ಬದಕೇವಿ. ಈಗ ಸಂವತೇರ ಆಗಿ ಬದಕಬೇಕೇನ ? ಸಂವತಿ ಅಂದ್ರ ಮನ್ಯಾಗ ಜಗಳ ಆಗೇ ಆಗ್ತಾವ ! ನಾ ಈ ಲಗ್ನಕ ಒಪ್ಪೂದಿಲ್ಲ ತಿಳ್ಕೋರಿ”
ಮಂಜುಳಾ ಮಾತು ಕೇಳಿದ ಮೇಲೆ ನಾನಾ ಪರಿಯಿಂದ ಆಕೆಯನ್ನು ಸಮಾಧಾನಿಸಿ, “ಸಧ್ಯ ಇರೋದ ಇದೊಂದ ಹಾದಿ. ಇಲ್ಲಂದ್ರ ಎರಡೂ ಮನೆತನಗಳ ಮಾನ-ಮರ್ಯಾದೆ ಹರಾಜಾಗ್ತೇತಿ” ಎಂದಾಗ ಆಕೆ ಗತ್ಯಂತರವಿಲ್ಲದೆ ಹ್ಞೂಂಗುಟ್ಟಿದಳು !
*****
ಅಳಿಯ ನಾರಾಯಣನನ್ನು ಊರಿಗೆ ಕರೆಯಿಸಲಾಯಿತು !
ಆತನ ಮುಂದೆ ವಿಷಯವನ್ನು ಪ್ರಸ್ತಾಪಿಸಿದರು. ಆತನಿಂದಲೇ ಆದ ಈ ಹಲ್ಕಾ ಕೆಲಸಕ್ಕಾಗಿ ಜಗಳಾ ಮಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ತಿಳಿ ಹೇಳಿದರು !
ನಾರಾಯಣ ತಿರುಗಿ ಬಿದ್ದ !
ಎಲ್ಲವನ್ನೂ ಕೇಳಿದ ಆತನಿಗೆ ಒಂದುಕ್ಷಣ ಒಳ್ಳೆಯದೇ ಆಯಿತು ಎನಿಸಿದರೂ ಮಹಾರಾಜ ಮಂಡಳಿಯಲ್ಲಿ ತನಗೆ ಸ್ಥಾನಮಾನ ಸಿಗಲಾರದು ; ಅದರಿಂದ ತಾನು ದೂರ ಉಳಿಯಬೇಕಾಗುತ್ತದೆ ಎಂದುಕೊಂಡ. ಆತನ ಕಪಟ ಸಂತತನ ಜಾಗೃತವಾಗಿತ್ತು. ತನ್ನದೇನೂ ತಪ್ಪಿಲ್ಲ ಎಂದು ವಾದಿಸತೊಡಗಿದ !
“ನೀವೇನ ಆಟಾ ಸುರು ಮಾಡೇರಿ ? ನಿಮ್ಮ ಮಗ್ಳ ಎಲ್ಲಿ ಸೆಗಣಾ ತಿಂದ ಬಂದಾಳೋ ಯಾರ್ಗಿ ಗೊತ್ತ ! ಆಕೀ ಮಾತ ಕೇಳಿ ನೀವ್ ಆ ಸೆಗಣಾ ನನ್ನ ಮ್ಯಾಲ ಚೆಲ್ಲೂ ವಿಚಾರ ಮಾಡೇರಿ ? ಜನಕ್ಕ ಅಂಜದಿದ್ರೂ ಮನಕ್ಕಾದ್ರೂ ಅಂಜಬೇಕಲಾ ! ನನ್ನ ಮ್ಯಾಲ ಇಲ್ಲದ ಆರೋಪ ಹೊರ್ಸಬ್ಯಾಡ್ರಿ. ಯಾರ ಮುಂದಾರ ಇದ್ನ ಹೇಳ್ಯರ ಕೇಳಿದೋರು ನನ್ನ ಮುಖಕ ಸೆಗಣಿ ಬಳದಾರಲಾ ! ಇದರಾಗ ನನ್ನ ಸೇರ್ಸಕೋಬ್ಯಾಡ್ರಿ. ಮುಂದ ನನ್ನ ಏನೂ ಕೇಳಬ್ಯಾಡ್ರಿ. ಏನ್ ಮಾಡ್ಕೋತಿರೋ ಮಾಡ್ಕೋರಿ”
ಅವಸರ ಅವಸರವಾಗಿಯೇ ಎಲ್ಲವನ್ನೂ ಒದರಿ ತರತುರಿಯಲ್ಲೇ ಆತ ಅಲ್ಲಿಂದ ಹೊರಟು ಹೋದ !
ಈಗ ಮಾತ್ರ ಕುಟುಂಬ ಮೇಲೆ ಆಕಾಶವೇ ಹರಿದು ಬಿದ್ದಂತಾಯಿತು ! ಹೇಗಾದರೂ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದಿದ್ದ ಹುಮ್ಮಸ್ಸು ಕರಗಿ ದುಸುಮುಸುಗಳು ಆರಂಭವಾದವು !
*****
ಇದ್ದಕ್ಕಿದ್ದಂತೆ ಒಂದು ದಿನ ಮನೆಯಲ್ಲಿ ಹಾಹಾಕಾರವೇ ಎದ್ದಿತು !
ಬೆಳಗಾಗಿ ತುಂಬ ಹೊತ್ತದರೂ ದ್ರೌಪದಿ ಎದ್ದಿಲ್ಲ ಎಂದುಕೊಂಡು ಮನೆಯವರು ಬಾಗಿಲು ತಟ್ಟಿ ಎಬ್ಬಿಸುವ ಪ್ರಯತ್ನ ಮಾಡಿದರು. ಆದರೆ ತುಂಬ ಹೊತ್ತು ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ! ಗಾಭರಿಯಾದ ಮನೆಯವರು ಬಾಗಿಲು ಮುರಿದು ಒಳಹೊಕ್ಕರು !
ದ್ರೌಪದಿ ಹೆಣವಾಗಿ ಮಲಗಿದ್ದಾಳೆ !
ಅಸ್ತವ್ಯಸ್ತಗೊಂಡ ಆಕೆಯ ದೇಹ ಒದ್ದಾಡಿ ಒದ್ದಾಡಿ ಹೆಣವಾಗಿದೆ ! ಮನೆಯಲ್ಲಿದ್ದ ಕೀಟನಾಶಕ ಔಷಧಿಯ ಡಬ್ಬಿ ಅಲ್ಲೇ ಪಕ್ಕದಲ್ಲಿ ಉರುಳಿ ಬಿದ್ದಿತ್ತು !
ಇಡೀ ಮನೆ ರೋಧಿಸತೊಡಗಿತು !
ಅಕ್ಕಪಕ್ಕದವರು ಸೇರಿದರು. ತಮ್ಮ ಮನೆಯ ಮಾನ ಉಳಿಸಿಕೊಳ್ಳಲು ಹಾರ್ಟ್ ಅಟ್ಯಾಕ್ ಆಗಿ ತನ್ನ ಮಗಳು ತೀರಿಕೊಂಡಿದ್ದಾಳೆ ಎಂದು ತಂದೆ-ತಾಯಿ ಹೇಳಿಕೊಂಡು ಅತ್ತರು !
ಮನೆಯ ಮಾನವೇನೋ ಉಳಿಯಿತು !
ಬಂಗಾರದಂಥ ಮಗಳು ಬದುಕುಳಿಯಲಿಲ್ಲ !
ದ್ರೌಪದಿ ಸಹಜವಾಗಿ ಸಾಯದೇ ಮಹಾರಾಜ ಅನ್ನಿಸಿಕೊಂಡ ನಾರಾಯಣನ ಹಲ್ಕಟ್ ಕೆಲಸದಿಮದ ಹೆಣವಾಗಿದ್ದಳು !
ಹೊರಜಗತ್ತಿಗೆ ಇದು ತಿಳಿಯಲೇ ಇಲ್ಲ ! ನಾರಾಯಣ ಮಹಾರಾಜನ ಸಂತತನ ಅಭಾದಿತವಾಗಿ ಮುಂದುವರಿಯಿತು !
ನಾರಾಯಣನಂತಹ ಸೋಗಲಾಡಿ ಜನರನ್ನು ಕಂಡೇ ಸಂತ ತುಕಾರಾಮ ಒಂದು ಹೇಳುತ್ತಾನೆ;
‘ತುಕಾನ ಮಾತಿದು ಇಂಥ ನರರನ್ನು
ಚಪ್ಪಲಿಯಿಂದ ಹೊಡೆಯಬೇಕು !’
*****

Tuesday, August 21, 2012

ಕಮರಿ ಹೋದವು ಕರುಳಿನ ಕಣ್ಣೀರು !

ಮೂಲ ಮರಾಠಿ : ಕೆ.ಬಿ. ಹನ್ನೂರಕರ 
 ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
 _____________________________________________________________________________
ಶಾಂತಾಬಾಯಿ !
ಗಂಡ, ಅಪಘಾತದಲ್ಲಿ ತೀರಿಕೊಂಡ ಮೇಲೆ ವಿಧವೆಯಾದ ಆಕೆಯ ಮಡಿಲಲ್ಲಿ ಚಿಕ್ಕ ಚಿಕ್ಕ ಮೂರು ಮಕ್ಕಳಿದ್ದವು ; ಬದುಕು ನಡೆಸಲು ಏನೂ ಇರಲಿಲ್ಲ !
ಮಾಡುವುದಾದರೂ ಏನು ?
ಶಾಂತಾಬಾಯಿ ನೋವಿನಲ್ಲೂ ಸ್ಥೈರ್ಯ ಕಳೆದುಕೊಳ್ಳಲಿಲ್ಲ.
ಅಸಹಾಯಕತೆಯಿಂದ ಅಳಲಿಲ್ಲ ; ಎದೆಗುಂದಲಿಲ್ಲ.
ಗುಬ್ಬಿಯಂತಹ ಮೂರು ಮಕ್ಕಳಿಗಾಗಿ ಆಕೆ ತುಂಬು ಧೈರ್ಯದಿಂದಲೇ ಎದೆ ಮೇಲೆ ಎಗರಿ ಬಿದ್ದಿದ್ದ ಪರಿಸ್ಥಿತಿಯನ್ನು ನಿಭಾಯಿಸಿದಳು.
ಗಂಡನ ಸಾವು ಎಂದರೆ ಹೆಣ್ಣಿನ ಬಾಳಿನ ಮೇಲೆ ಬಿದ್ದ ಸಂಕಟದ ಗುಡ್ಡವೇ ಸರಿ. ಆದರೆ ತನ್ನ ಮಕ್ಕಳನ್ನು ಬೆಳೆಸಲು, ಪಾಲಿಸಲು ಆ ಸಂಕಟದ ಗುಡ್ಡವೇ ಶಾಂತಾಬಾಯಿಗೆ ಶಕ್ತಿ ನೀಡಿದಂತಿತ್ತು !
ಏನಾದರೂ ಸರಿ ; ತನ್ನ ಬಳ್ಳಿಯ ಹೂಗಳು ಅರಳಲೇ ಬೇಕು ಎಂಬ ಹಠವನ್ನು ಮನದಲ್ಲಿ ತುಂಬಿಕೊಂಡ ಆಕೆ ಬದುಕಿ ತೋರಿದಳು.
ವೊದಲಿಗೆ ಕಾಯಿಪಲ್ಲೆ ಮಾರುವ ಕಾಯಕ ಮಾಡತೊಡಗಿದಳು. ಮುಂಗಡ ಹಣವಿಲ್ಲದೆ ಕಾಯಿಪಲ್ಲೆ ದೊರೆಯುತ್ತಿತ್ತು. ಜನಸಂಚಾರದ ಹಾದಿಯ ಬದಿಗೆ ಕುಳಿತು ಕಾಯಿಪಲ್ಲೆ ಮಾರಬಹುದು ; ಬಾಡಿಗೆ ಅಂಗಡಿಯ ಅವಶ್ಯಕತೆಯೇ ಇಲ್ಲ ! ಆಕೆ ನೋವನ್ನೆಲ್ಲ ಮರೆತು ಮನಸಿಟ್ಟು ದುಡಿದು ಮಕ್ಕಳನ್ನು ಬೆಳೆಸತೊಡಗಿದಳು !
ಶಾಂತಾಬಾಯಿ ಹೆಚ್ಚು ಕಲಿತವಳಲ್ಲ. ಆದರೆ ಶಿಕ್ಷಣವೇ ಮನುಷ್ಯ ಬದುಕಲು ಅಸ್ತ್ರವಾಗುತ್ತದೆ ಎಂಬ ಅರಿವು ಆಕೆಯಲ್ಲಿತ್ತು ! ಕ್ರಾಂತಿದೀಪ ಸಾವಿತ್ರಿಬಾಯಿ ಫುಲೆಯ ಆದರ್ಶಗಳನ್ನು ಮುಂದಿಟ್ಟುಕೊಂಡಿದ್ದಳು. ಕಷ್ಟಗಳ ಸುರಿಮಳೆಯೇ ಸುರಿದರೂ ಕೂಡ ತನ್ನ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ; ಉನ್ನತವಾದ ಸರಕಾರಿ ಹುದ್ದೆ ದೊರೆಯಬೇಕು ಎಂದು ಆಕೆ ಪಣ ತೊಟ್ಟಳು. ಮಕ್ಕಳಿಗೂ ಕೂಡ ಆಕೆ ಯಾವಾಗಲೂ ಇದನ್ನೇ ಹೇಳುತ್ತಿದ್ದಳು. ಗುರಿ ತಲುಪಲು ಬೇಕಾದ ಬಲವನ್ನು ಅವರಲ್ಲಿ ತುಂಬುತ್ತಿದ್ದಳು. ಹಂಬಲದ ಹುಚ್ಚಿನಲ್ಲಿಯೇ ಬೆವರು ಹರಿಸಿ ದುಡಿಯತೊಡಗಿದ್ದಳು. ತನ್ನ ಭವ್ಯವಾದ, ದಿವ್ಯವಾದ ಕನಸನ್ನು ನನಸಾಗಿಸಿಕೊಳ್ಳಲು ಆಕಾಶ-ಭೂಮಿಗಳೆರಡನ್ನೂ ಒಂದು ಮಾಡುವ ಉಮೇದು ಆಕೆಯಲ್ಲಿತ್ತು.
ಆಕೆಯ ಮಕ್ಕಳಾದರೂ ಆಕೆಯ ಹಂಬಲದಂತೆಯೇ ಬುದ್ಧಿವಂತರಾಗಿಯೇ ಬೆಳೆದರು. ಆ ಮೂರೂ ಮಕ್ಕಳು ಉನ್ನತ ಶಿಕ್ಷಣ ಪಡೆದುದರಿಂದ ಶಾಂತಬಾಯಿಯ ಕಷ್ಟಗಳು ಕರಗಿ ಹೋಗಿ ಸುಖದ ಸಂಭ್ರಮ ಗೂಡು ಕಟ್ಟುತ್ತಿತ್ತು.
ಹಿರಯ ಮಗ ಪ್ರಲ್ಹಾದ ಇಂಜಿನೀಯರ್ ಆಗಿ ಬೆಳಗಾವಿ ಬಿಟ್ಟು ಮುಂಬಾಯಿ ಸೇರಿಕೊಂಡು ಸರಕಾರಿ ಹುದ್ದೆ ಗಳಿಸಿದ. ಎರಡನೆಯ ಮಗ ಪ್ರಕಾಶನೂ ಬಿ.ಕಾಂ. ಪದವೀಧರನಾಗಿ ಮುಂಬಾಯಿಯ ಬ್ಯಾಂಕಿನಲ್ಲಿ ನೌಕರಿ ಗಿಟ್ಟಿಸಿಕೊಂಡು ಬೆಳಗಾವಿಯನ್ನು ಬಿಟ್ಟ. ಮೂರನೆಯ ಮಗ ವಿನಾಯಕ ಬಿಜಿನೆಸ್ದಲ್ಲಿ ಆಸಕ್ತಿವಹಿಸಿ ಬೆಳಗಾವಿಯ ಒಂದು ಸೂಕ್ತ ಜಾಗದಲ್ಲಿ ಹೊಟೇಲು ಆರಂಭಿಸಿದ.
*****
ಒಂದು ಕಾಲದಲ್ಲಿ ರೊಟ್ಟಿಯ ತುಣುಕಿಗಾಗಿ ಹಪಹಪಿಸುತ್ತಿದ್ದ ತನ್ನ ಮೂರೂ ಮಕ್ಕಳು ಇಂದು ಹಣದ ರಾಶಿಯ ಮೇಲೆ ರಾಜ್ಯ ಮಾಡುವುದನ್ನು ಕಂಡು ಶಾಂತಾಬಾಯಿಯ ಜೀವ ತೃಪ್ತಗೊಂಡಿತು. ಒಂದು ಕಾಲದಲ್ಲಿ ಎಲ್ಲಿಯಾದರೂ ಸಹಾಯ ಬೇಡಿಯಾಳು ಎಂದು ಶಾಂತಾಬಾಯಿಯಿಂದ ದೂರ ಓಡುತ್ತಿದ್ದ ಸಂಬಂಧಿಕರು ಈಗ ಆಕೆಯ ಆಸುಪಾಸಿನಲ್ಲೇ ಸುತ್ತಾಡತೊಡಗಿದ್ದರು ! ಮೇಲಿಂದ ಮೇಲೆ ಆಕೆಯ ಕ್ಷೇಮ ಸಮಾಚಾರ ವಿಚಾರಿಸಿಕೊಳ್ಳಲು ಬರತೊಡಗಿದ್ದರು ! ಸೊಸೆಯಂದಿರನ್ನು ಯಾವಾಗ ತರುತ್ತಿ ಎಂದೂ ಕೇಳತೊಡಗಿದರು ! ಮಕ್ಕಳ ಮುಂದೆ ಶಾಂತಾಬಾಯಿ ಮದುವೆಯ ಪ್ರಸ್ತಾಪ ಮಾಡಿದಾಗ, ಈ ಮುರುಕು ಮನೆಗೆ ಯಾರು ಹೆಣ್ಣು ಕೊಡುತ್ತಾರೆ ; ವೊದಲು ಹೊಸಮನೆ ಕಟ್ಟೋಣ, ಆಮೇಲೆ ಮದುವೆ-ಗಿದುವೆ ಎಲ್ಲ ಎಂದರು !
*****
ಮೂರೂ ಮಕ್ಕಳು ಸೇರಿ, ತಮ್ಮ ಹಳೆಯ ಮನೆಯನ್ನು ಕೆಡವಿ, ಅದೇ ಜಾಗದಲ್ಲಿ ಮೂರು ಅಂತಸ್ತಿನ ಅದ್ಭುತವಾದ ಮಹಲನ್ನು ಕಟ್ಟಿಸಿದರು. ಚೆಲುವೆಯರಾದ ಸೊಸೆಯಂದಿರು ಮನೆ ತುಂಬಿದರು. ಮನೆ ನಂದನವಾಗಿ ನಲಿಯತೊಡಗಿತ್ತು !
ಆದರೆ ಮುಂದೆ ನಡೆದದ್ದು ಮಾತ್ರ ಘೋರವಾದದ್ದು ! ಎಣಿಸಿದಂತೆ ಯಾವುದೂ ಆಗುವುದಿಲ್ಲ ! ಮದುವೆಯ ಸಲುವಾಗಿ ಎರಡೆರಡು ತಿಂಗಳು ರಜೆ ಹಾಕಿ ಬಂದ ಪ್ರಲ್ಹಾದ ಮತ್ತು ಪ್ರಕಾಶರಿಗೆ ರಜೆ ಯಾವಾಗ ಮುಗಿಯುತ್ತದೆಯೋ ಎನಿಸತೊಡಗಿತ್ತು ! ಯಾಕೆಂದರೆ ಬಡತನದ ಅರಿವಿನ ಶಾಂತಾಬಾಯಿಯ ಕಟ್ಟುನಿಟ್ಟು ಹೊಸದಾಗಿ ಮನೆ ಸೇರಿದ ಸೊಸೆಯಂದಿರಿಗೆ ಇರುಸು-ಮುರುಸು ಉಂಟು ಮಾಡುತ್ತಿತ್ತು !
ಕಿರಿಯ ಮಗ ವಿನಾಯಕನ ಹೆಂಡತಿಯಂತೂ ಹೋಯ್ಮಾಲಿಯೇ ಆಗಿದ್ದಳು ! ಇಂದಲ್ಲ ನಾಳೆ, ಇಬ್ಬರೂ ಮೈದುನರು ಮುಂಬಾಯಿಗೆ ತಮ್ಮ ತಮ್ಮ ಹೆಂಡತಿಯರೊಂದಿಗೆ ಹೊರಟು ಬಿಡುತ್ತಾರೆ ; ಇಲ್ಲಿ ತಾನೊಬ್ಬಳೇ ಈ ಮುದುಕಿಯ ಕಷ್ಟವನ್ನು ಸಹಿಸಬೇಕಾಗುತ್ತದೆ ಎಂಬುದು ಆಕೆಯ ಒಳಗುದಿಯಾಗಿತ್ತು ! ಮುದುಕಿಯನ್ನು ತಾನೊಬ್ಬಳೇ ನೋಡಿಕೊಳ್ಳಬೇಕಾಗುತ್ತದೆ ಎಂದುಕೊಂಡ ಆಕೆ ಗಂಡನ ಹತ್ತಿರ ತಕರಾರು ಎತ್ತಿದಳು. ಹಿರಿಯರಿಬ್ಬರೂ ಕಿರಿಯ ತಮ್ಮನನ್ನು ಬೆಂಬಲಿಸಿದರು. ಮುಂಬಾಯಿಗೆ ಮರಳುವ ಮುಂಚೆ ಬೇರೆಯಾಗುವ ಮಾತುಗಳನ್ನು ಸೊಸೆಯಂದಿರು ವಿನಿಮಯ ಮಾಡಿಕೊಂಡರು ! ಹೆಂಡತಿಯರ ಗುಂಗಿನಲ್ಲಿದ್ದ ಶಾಂತಾಬಾಯಿ ಕರುಳ ಕುಡಿಗಳಾಗಿದ್ದ ಆ ಮೂರೂ ಮಕ್ಕಳೂ ತಲೆಕೆಟ್ಟವರಂತೆ ವರ್ತಿಸಿದರು ! ಅವರಿಗೆ ತಮ್ಮ ಅವ್ವ ಎದುರಿಸಿದ ಕಷ್ಟಗಳ ಅರಿವು ಮರೆತು, ಹೆಂಡತಿಯರ ಹೇಳಿಕೆ ಮಾತಿಗೆ ತಲೆಬಾಗಿ ಪಾಲು ಹಂಚಿಕೊಳ್ಳಲು ಸಿದ್ಧವಾದರು !
ಶಾಂತಾಬಾಯಿಗೆ ವೊದವೊದಲು ಈ ಸಂಗತಿ ಒಂದಿಷ್ಟು ನೋವು ನೀಡಿದ್ದು ಸತ್ಯ. ಆದರೆ ಮಕ್ಕಳು ಹೇಗಾದರೂ ಸುಖಿಯಾಗಿದ್ದರೆ ಸಾಕು ಎಂದಿತು ತಾಯಿ ಹೃದಯ ! ಪಾಲು ಹಂಚಿಕೊಳ್ಳಲು ಆಕೆ ಸಮ್ಮತಿಸಿದಳು. ಹಾಗೆ ನೋಡಿದರೆ ಹಿರಿಯ ಮಕ್ಕಳಿಬ್ಬರೂ ನೌಕರಿಯ ನಿಮಿತ್ಯವಾಗಿ ಮನೆಯನ್ನು ಬಿಟ್ಟು ಹೋಗುವವರೇ ಅಲ್ಲವೆ ; ಅದಕ್ಕೆ ಯಾಕೆ ತಕರಾರು ಎಂದುಕೊಂಡ ಆಕೆ ಅವರ ಅಭಿಪ್ರಾಯವನ್ನು ಒಪ್ಪಿಕೊಂಡಳು !
*****
ಪಂಚರನ್ನು ಕರೆಯಿಸಲಾಯಿತು !
ಮನೆಯಂತೂ ವೊದಲೇ ಮೂರು ಅಂತಸ್ತಿನದೇ ಆಗಿತ್ತು ! ಮೇಲಿನ ಮಹಡಿ ಹಿರಿಯ ಮಗ ಪ್ರಲ್ಹಾದನ ಪಾಲಾಯಿತು. ನಡುವಿನ ಮಗ ಪ್ರಕಾಶನಿಗೆ ನಡುವಿನ ಮಹಡಿ ಎಂದಾಯಿತು. ಕೆಳಗಿದ್ದ ಮನೆ ಕಿರಿಯ ಮಗ ವಿನಾಯಕನಿಗೆ ಉಳಿಯಿತು. ಹೀಗಾಗಿ ಮನೆ ಪಾಲು ಮಾಡಿಕೊಳ್ಳುವಲ್ಲಿ ಯಾವ ತಕರಾರೂ ಇರಲಿಲ್ಲ.
ಪಂಚರನ್ನು ಕರೆಯಿಸಿದ್ದು ಮನೆ ಪಾಲು ಮಾಡಿಕೊಳ್ಳಲು ಅಲ್ಲ !
ಮುದುಕಿಯಾದ  ಶಾಂತಾಬಾಯಿಯನ್ನು ಹೇಗೆ ಹಂಚಿಕೊಳ್ಳಬೇಕು ? ಮುಂಬಾಯಿಯ ಇಬ್ಬರೂ ಸೊಸೆಯಂದಿರು ಅತ್ತೆಯನ್ನು ತಾವಿದ್ದಲ್ಲಿಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದರು ! ಕಿರಿಯಾಕೆ ಕೂಡ ತನಗೂ ನಿಭಾಯಿಸುವುದಾಗುವುದಿಲ್ಲ ಎಂದು ಜಾರಿಕೊಂಡಿದ್ದಳು !
“ಹಂಗಾದ್ರ, ವಯಸ್ಸಾದ ಮುದ್ಕಿ ಎಲ್ಲಿರ್ಬೇಕ ಹೇಳ್ರ್ಯಲ್ಲ ?” ಪಂಚರು ಪ್ರಶ್ನೆ ಎಸೆದರು.
ವೊದಲೇ ಮಾತಾಡಿಕೊಂಡಂತೆ ಹಿರಿಸೊಸೆ, “ಅತ್ತಿಯೋರ್ನ ನಾಕನೇ ಮಾಡಿ ಮ್ಯಾಗ ಅಂದ್ರ ಟೆರೆಸ್ ಮ್ಯಾಲ ಇರೂ ರೂಮದಾಗ ಇಟ್ಟರಾಗುದಿಲ್ಲೇನ ?” ಎಂದಾಗ ಉಳಿದಿಬ್ಬರೂ ಸೊಸೆಯಂದಿರು ಸಮ್ಮತಿ ಸೂಚಿಸಿದರು ! ಮೂರೂ ಮಂದಿ ಗಂಡುಮಕ್ಕಳು ಮೌನವಾಗಿಯೇ ತಮಗೇನೂ ಸಂಬಂಧವೇ ಇಲ್ಲ ಎನ್ನುವಂತೆ ನಿಂತಿದ್ದರು !
“ನೀವ್ ಏನ್ ಅಂತೀರೋ ಪೋರಗೋಳ್ರ್ಯಾ ?” ಪಂಚರು ಮಕ್ಕಳನ್ನೇ ನೇರವಾಗಿ ಕೇಳಿದರು.
“ಅವ್ರ ಹೆಂಗ್ ಹೇಳ್ತಾರೋ ಹಂಗ ಆಗ್ಲಿ” ಮೂವರೂ ‘ಜೀ’ ಎಳೆದರು !
“ಹಂಗಾದ್ರ, ಆ ಮುದ್ಕಿ ಹೊಟ್ಟಿಗಿ-ಬಟ್ಟಿಗಿ ಏನ್ಮಡ್ಬೇಕಂತೇರಿ ?”
“ಅತ್ತೀ ಕಡೀ ಭಾಳ ರೊಕ್ಕ ಇರ್ಬೇಕಲಾ. ಇಲ್ಲದಿರಕ ಮೂರ ಮಕ್ಳಾ ಸಾಕಿ, ಸಾಲಿ ಕಲ್ಸಾಕ ಆಗ್ತಿತ್ತೇನ್ರಿ ? ಇನ್ನೂ ಭಾಳಕೂನೆ ರೊಕ್ಕ ಇರ್ಬೇಕ ಬಿಡ್ರಿ. ನಮ್ಮ ಕಡಿಂದ ಒಂದ ದಮ್ಮಡಿನೂ ಅಕಿಗೂ ಕೊಡಾಕಾಗುದಿಲ್ಲ” ಎಂಬ ಸೊಸೆಯಂದಿರ ಕಟುನುಡಿಗಳನ್ನು ಕೇಳಿದ ಶಾಂತಾಬಾಯಿಗೆ ನೆಲ ನುಂಗಬಾರದೇ ಎನಿಸತೊಡಗಿತು ! ಆದರೆ ಎಂಥದ್ದೇ ಸಂಕಷ್ಟ ಸಂದರ್ಭದಲ್ಲೂ ನೋವನ್ನು ಸಹಿಸಿಕೊಳ್ಳುವ ಶಕ್ತಿ, ಆಕೆಯ ಗಂಡ ತೀರಿಕೊಂಡಾಗಲೇ ಆಕೆಗೆ ಸಿದ್ಧಿಸಿತ್ತು !
ಎಂಥಾ ಕೌರ್ಯ !
ಪಂಚರು ತಮ್ಮ ತಮ್ಮಲೇ ಮಾತಾಡಿಕೊಂಡರು.  ಒಂದು ದಿಟ್ಟ ನಿಲುಮೆಯನ್ನು ತಾಳಿದ ಅವರು, ಆ ಗಂಡುಮಕ್ಕಳಿಗೆ ಹೇಳಿದರು, “ಏನ್ರ್ಯಪಾ, ನಿಮ್ಮ ಹ್ಯಾಂತೇರ ಮಾತಾಡ್ತಾರು ; ನೀವ್ ನೋಡ್ಯರ ಕಲ್ಲಿನಗತೆ ಮೂಕಾಗಿ ನಿಂತೇರಿ. ಇದೇನ ಸರಿ ಅಲ್ಲ. ಪಾಪ ಆ ಮುದ್ಕಿ, ನಿಮ್ಮ ಸಲಮಂದ ಎಸ್ಟೊಂದ್ ಕಸ್ಟಾ ಸೋಸ್ಯಾಳ ಅನ್ನೂದ ನಿಮಗೇನ ಅರೀದಲ್ಲ. ಎಲ್ಲಾ ನೋಡ್ಕೊಂಡ ಬೆಳದೇರಿ. ನಿಮ್ಮ ಸಲಮಂದ ರಕ್ತಾ ಬೆವರ ಮಾಡ್ಕೊಂಡ ದುಡದ ಹೆಣ್ಣಮಗಳ ಆಕಿ. ಹಂತಾಕಿಯನ್ನ ನೀವ್ ಟೇರೆಸ್ ಮ್ಯಾಲ ಹಾಕಾಕತ್ತೇರಿ ? ನಿಮಗೇನ ಇದ ಒಪ್ಪೂ ಮಾತ ?”
ಪಂಚರ ಯಾವೊಂದು ಮಾತುಗಳೂ ಆ ಮಕ್ಕಳ ಮೇಲೆ ಯಾವೊಂದು ಪರಿಣಾಮವನ್ನೂ ಬೀರಿದಂತೆ ಕಾಣಿಸಲಿಲ್ಲ !
ಹೇಳಿಕೇಳಿ ನಿರ್ಲಜ್ಜರೇ ಆಗಿದ್ದ ಅವರು ಮಾತನಾಡಲು ಬಾಯಿಯೇ ಇಲ್ಲದವರಂತೆ ನಿಂತುಕೊಂಡಿದ್ದರು !
ಹಿರಿಯ ಮಗ ಕೊನೆಗೂ ಬಾಯಿ ಬಿಟ್ಟ !
“ನಾವಿಬ್ರೂ ಮುಂಬಾಯಾಗ ಇರಾರು. ಹಂಗಾಗಿ ನಮ್ಮ ಕಡಿಂದ ಅವ್ವನ ನೋಡಕೊಳ್ಳಾಕ ಆಗೂದ ಇಲ್ಲ. ಇಸ್ಟಂತೂ ಮಾಡಾಕ ತಯಾರ ಅದೇವು. ಏನಂದ್ರ ಯಾರ್ನರೆ ಆಳ ಇಟ್ಟ ಅವ್ವನ ಸೇವಾ ಮಾಡ್ಸತೇವು. ಮುಂಬಾಯಾಗ ಇರೂ ನಾವಿಬ್ರೂ ಆಳಿನ ಎರಡ ತಿಂಗ್ಳ ಪಗಾರ ಕೊಡತೇವು. ಸಣ್ಣಾಂವ ಮೂರ್ನೆ ತಿಂಗ್ಳದ ನೋಡ್ಕೋಲಿ”
ಕಿರಿಯ ಮಗ ಕೂಡ ಮಾತಾಡಿದ, “ನಾನೂ ಅದನ ಕೊಡಾಕ ತಯಾರಿದೇನಿ. ಅವ್ವನ ನೋಡ್ಕೊಳ್ಳಾಕ ಖಾಯಮ್ಮಾಗಿ ಯಾರ್ನರೆ ಪಗಾರ ಕೊಟ್ಟ ನೇಮಸ್ರಿ”
“ಏನ್ರೆಪಾ, ಏನ್ ಹೇಳ್ತೇರಿ ?” ಉಳಿದವರಿಬ್ಬರನ್ನು ಪಂಚರು ಕೇಳಿದರು.
“ಅಂವಾ ಹೇಳಿದಾಂಗ ಮಾಡ್ರಿ. ನಾವೂ ನಮ್ಮ ನಮ್ಮ ಪಾಲಿನ ಆಳಿನ ಪಗಾರ ಕಳ್ಸತೇವು”
ಪಂಚರಿಗೆ ಅಸಹ್ಯವೆನಿಸಿತು ! ಎಂಥ ಮಕ್ಕಳಿವು ! ಮುಂದೆ ಏನೊಂದೂ ಮಾತನಾಡದೆ ಅವರು ಎದ್ದು ಹೋದರು !
ಟೇರೆಸ್ ಮೇಲೆ ಹಳೆಯ ಸಾಮಾನುಗಳನ್ನು ಇಡಲು ಕಟ್ಟಿದ್ದ ಕೋಣೆಯನ್ನು ಸ್ವಚ್ಛಗೊಳಿಸಿದ ಆ ಮೂವರೂ ಮಕ್ಕಳು, ಶಾಂತಾಬಾಯಿಗಾಗಿ ಒಂದು ಮಂಚ, ಗಾದಿ, ಒಂದಿಷ್ಟು ಪಾತ್ರ-ಪಗಡಿಗಳೊಂದಿಗೆ ಅವ್ವನನ್ನು ಅಲ್ಲಿಟ್ಟು, ಆಕೆಯನ್ನು ನೊಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ಸಂಬಳದ ಆಧಾರದ ಮೇಲೆ ನೇಮಿಸಿದರು !
*****
ರಜೆಗಳನ್ನೆಲ್ಲ ಮುಗಿಸಿಕೊಂಡ ಪ್ರಲ್ಹಾದ ಮತ್ತು ಪ್ರಕಾಶ ತಮ್ಮ ಹೆಂಡತಿಯರೊಂದಿಗೆ ಮುಂಬಾಯಿಗೆ ಹೋದರು. ಕಿರಿಯಾತ ತನ್ನ ಹೊಟೇಲು ಉದ್ದಿಮೆಯಲ್ಲಿ ಮಗ್ನನಾದ. ಆತನ ಹೆಂಡತಿ ಮಹಿಳಾ ವಿವೋಚನಾ ಚಳುವಳಿಯ ಸದಸ್ಯೆಯಾಗಿದ್ದಳು ! ಮಹಿಳಾ ವಿವೋಚನೆಯ ಬಗ್ಗೆ ಆಕೆ ಉದ್ದುದ್ದ ಭಾಷಣವನ್ನೂ ಸಭೆ-ಸಮಾರಂಭದಲ್ಲಿ ಬಿಗಿಯುತ್ತಿದ್ದಳು ! ಆಕೆಯ ಮಾತುಗಳನ್ನು ಕೇಳಿದವರು ಆಕೆಯನ್ನು ಮೆಚ್ಚಿಕೊಳ್ಳತೊಡಗಿದರು !
ತನ್ನ ಸ್ವಂತ ಅತ್ತೆಯನ್ನೇ ನೋಡಿಕೊಳ್ಳದೇ ನಿರ್ದಯವಾಗಿ ಟೇರೆಸ್ಗೆ ವರ್ಗಾಯಿಸಿದ ಮೇಲೆಯೂ ಆಕೆಯ ಲಂಗು-ಲಗಾಮಿಲ್ಲದ ಮಹಿಳಾ ವಿವೋಚನಾ ಪರ ಭಾಷಣಗಳು ನಿರಂತರವಾಗಿದ್ದವು !
“ಇಂದಿನವರು ವೃದ್ಧ ತಂದೆ-ತಾಯಿಯರನ್ನು ನೋಡೋದಿಲ್ಲ. ಇಂಥವರಿಗೆ ಧಿಕ್ಕಾರವಿರಲಿ. ಸಮಾಜದಲ್ಲಿ ಇಂಥ ಅಮಾನವೀಯ ವರ್ತನೆಗಳಿಗೆ ಅಂಕುಶ ಹಾಕುವ ಕೆಲಸವನ್ನು ನಾವು ಮಾಡಬೇಕಿದೆ”
ಇದು ಆಕೆಯ ಭಾಷಣದ ಒಂದು ಝಲಕು !
*****
ಒಂದು ದಿನ ಬೆಳಿಗ್ಗೆ ಇದ್ದಕಿದ್ದಂತೆ ಆ ಸಮಾಜಸೇವಕಿ ಸೊಸೆಯ ಮನೆಯ ಟೇರೆಸಿನ ಮೇಲೆ ಕಾಗೆಗಳು ‘ಕಾವ್ ಕಾವ್’ ಅನ್ನತೊಡಗಿದ್ದವು ! ತಮ್ಮ ಗೂಡಿಗೆ ಬೆಂಕಿ ಬಿದ್ದಂತೆ ಅವು ಹಾಹಾಕಾರ ಎಬ್ಬಿಸಿದ್ದವು ! ಗುಬ್ಬಿಗಳು ಕೂಡ ಅಳುಧ್ವನಿಯಲ್ಲಿ ಚಿಂವ್ಗುಟ್ಟುತ್ತಿದ್ದವು !
ಅಕ್ಕಪಕ್ಕದವರಿಗೆ ಏನೊಂದೂ ತಿಳಿಯದಂತಾಯಿತು ! ನಡೆಯಬಾರದ್ದೇನೋ ನಡೆದಿದೆ ಎಂದುಕೊಂಡರೂ ನಡೆದಿರುವುದು ಏನು ಎಂಬುದು ಅವರಿಗೆ ಗೊತ್ತಾಗಲಿಲ್ಲ ! ಗಲ್ಲಿಯವರೆಲ್ಲ ಒಂದು ಕಡೆ ಸೇರಿ ಗುಜುಗುಜು ಆರಂಭಿಸಿದ್ದರು ! ಎರಡು ಮತ್ತು ಮೂರನೇ ಮಹಡಿಗಳಲ್ಲಿ ಬಾಡಿಗೆದಾರರಿದ್ದರು. ತಮ್ಮ ಮನೆಯ ಟೇರೆಸ್ ಮೇಲೆ ಏನೋ ನಡೆದಿದೆ ಎಂಬ ಗುಮಾನಿ ಅವರಿಗೆ ಬಂತು. ಬಾಡಿಗೆದಾರ ಶಿವಬಾ ಪರೀಟ್ ಟೇರೆಸ್ ಮೇಲೆ ಹೋದ.
ಅಲ್ಲೆಲ್ಲ ತಡೆದುಕೊಳ್ಳಲಾರದಂಥ ದುರ್ಗಂಧ ಹರಡಿತ್ತು ! ಯಾವುದೋ ಪ್ರಾಣಿ ಸತ್ತು ಕೊಳೆತು ಹೋದ ಆ ದುರ್ಗಂಧವನ್ನು ತಡೆದುಕೊಳ್ಳಲಾರದೇ ಶಿವಬಾ ದಡದಡನೇ ಕೆಳಗಿಳಿದು ಬಂದು ಸೇರಿದವರಿಗೆಲ್ಲ ಹೇಳಿದ, “ಅಲ್ಲೇನೋ ಸತ್ತ ಕೊಳತಾಂಗ ವಾಸ ಬರಾಕತ್ತೇತಿ”
ಪಂಚರೂ ಸೇರಿದರು. ಬೆಳಿಗ್ಗೆ ಬೆಳಿಗ್ಗೆ ಗಟಾರು ಸ್ವಚ್ಛಗೊಳಿಸಲು ಬಂದಿದ್ದ ಕಾರ್ಮಿಕರಿಗೆ ಟೇರೆಸ್ ಮೇಲೆ ಹೋಗಿ ನೋಡಿಕೊಂಡು ಬರುವಂತೆ ಹೇಳಲಾಯಿತು. ಅವರೆಲ್ಲ ಟೇರೆಸ್ ಏರಿದರು.
ಮೇಲೆ ಹೋಗಿ ನೋಡಿದರೆ ಆ ಮುದುಕಿ ಇರುತ್ತಿದ್ದ ಕೋಣೆಯಿಂದಲೇ ಆ ದುರ್ಗಂಧ ಹರಡಿತ್ತು ! ಕಾರ್ಮಿಕರು ಪಂಚರನ್ನು ಕೂಗಿ ಕರೆದರು. ಪಂಚರು ಮೇಲೆ ಬಂದು ಆ ಕೋಣೆಯ ಬಾಗಿಲು ಮುರಿಸಿ ಒಳಹೊಕ್ಕರು.
ಅವರೆಲ್ಲರ ತಲೆ ಸುತ್ತಿದಂತಾಯಿತು ! ಒಳಗಿನ ದೃಶ್ಯ ಭಯಂಕರವಾಗಿತ್ತು ! ‘ಹೆಣ, ಹೆಣ’ ಎನ್ನುತ್ತ ಅವರೆಲ್ಲ ಕೂಗು ಹಾಕತೊಡಗಿದರು !
ಶಾಂತಾಬಾಯಿಯ ಹೆಣ ಮಂಚದ ಮೇಲಿನಿಂದ ಕೆಳಗೆ ಬಿದ್ದು ಕೊಳೆತು ಹೋಗಿತ್ತು !
ಯಾವ ಶಾಂತಾಬಾಯಿ ಪಡಬಾರದ ಕಷ್ಟಗಳನ್ನೆಲ್ಲ ಸಹಿಸಿ, ತನ್ನ ಮೂವರು ಮಕ್ಕಳನ್ನು ಬೆಳೆಸಿ, ಓದಿಸಿ ವಿದ್ಯಾವಂತರನ್ನಾಗಿಸಿ ಆದರ್ಶ ತಾಯಿ ಎಂಬುದಾಗಿ ಗೌರವಿಸಲ್ಪಡುತ್ತಿದ್ದಳೋ ಅಂಥವಳ ದೇಹವನ್ನು ಕ್ರೀಮಿ-ಕೀಟಗಳು ಮುಕ್ಕಿ ತಿನ್ನುತ್ತಿದ್ದವು ! ಅವೆಲ್ಲ ಆಕೆಯ ಮಕ್ಕಳಂತೆಯೇ ಆಕೆಯ ಮಾಂಸವನ್ನು ತಿಂದು ಕೊಬ್ಬಿಕೊಂಡು ಓಡಾಡಿಕೊಂಡಿದ್ದವು !
ಅಲ್ಲಿ ಶಾಂತಾಬಾಯಿಯ ದೇಹದ ಎಲುಬಿನ ಹಂದರ ಮಾತ್ರ ಉಳಿದಿತ್ತು !
ಮೂಗು ಮುಚ್ಚಿಕೊಂಡೇ ಬಂದು ನೋಡಿದ ಗಲ್ಲಿಯವರೆಲ್ಲರ ಎದೆ ಒಡೆದಂತಾಗಿತ್ತು ! ಅವರ ಮನಸ್ಸುಗಳು ಆ ಆದರ್ಶ ತಾಯಿಗೆ ಬಂದ ದುರ್ಗತಿಗೆ ಕಂಡು ರೋಧಿಸತೊಡಗಿದ್ದವು. ಅವರ ಹೃದಯ ಘಾಸಿಗೊಂಡಿತ್ತು !
*****
ಮುಂಬಾಯಿಯ ಮಕ್ಕಳಿಗೆ ಸುದ್ದಿ ತಲುಪಿಸಲಾಯಿತು.
ಕೃತಘ್ನ ಆ ಭಂಡ ಮಕ್ಕಳು ಬರಲೇ ಇಲ್ಲ ; “ನಾವ್ ಬಂದ್ರೇನ ಆಕಿ ಬದಕ್ತಾಳು ? ವಿನಾಯಕ ಅಂತ್ಯಸಂಸ್ಕಾರ ಮಾಡಿ ಮುಗಸ್ಲಿ. ನಾವ್ ತಿಥಿ ಮಾಡಾಕ ಬರ್ತೇವು” ಎಂದು ಅಲ್ಲಿಂದಲೇ ಸುದ್ದಿ ಕಳುಹಿಸಿದರು !
ಫೋನಿನಲ್ಲಿ ಅವರ ಮಾತುಗಳನ್ನು ಕೇಳಿದ ಪಂಚರು ಅವಕ್ಕಾದರು !
“ಹಿಂಥಾ ನಾಲಾಯಕ್ ಮಕ್ಳು ಯಾರ್ ಹೊಟ್ಟ್ಯಾಗೂ ಹುಟ್ಟಬಾರ್ದು !”
*****
ಪೋಲೀಸರಿಗೆ ಸುದ್ದಿ ಹೋಯಿತು.
ಪೋಲೀಸರು ಬರುತ್ತಲೇ ಸಮಾಜಸೇವಕಿಯಾಗಿದ್ದ ಶಾಂತಾಬಾಯಿಯ ಸೊಸೆ ಬಾಯಿ ಬಾಯಿ ಬಡೆದುಕೊಂಡು ಅಳುವ ನಾಟಕವನ್ನು ಚೆನ್ನಾಗಿಯೇ ನಿಭಾಯಿಸಿದಳು !
ವಿನಾಯಕನೂ ದುಃಖದಲ್ಲಿದ್ದವರಂತೆ ಸೋಗು ಹಾಕಿದ್ದ !
ಪೋಲೀಸರ ವಿಚಾರಣೆ ನಡೆಸಿದ್ದರು.
“ಏನ್ರಿ ವಿನಾಯಕರಾವ್, ಈ ಹೆಣಾ ಯಾರ್ದು ?”
“ನಮ್ಮ ತಾಯಿದರಿ ಸರ್”
“ನಿಮ್ಮ ತಾಯಿಯದ ಅಂತ ಹೆಂಗ ಹೇಳ್ತೇರಿ ?”
“ಹ್ವಾದ ವಾರ ನಾವ್ ಮೂರೂ ಮಂದಿ ಅಣತಮರು ಮಾತಾಡಿಕೊಂಡಾಂಗ ಪಾಲಾ ಮಾಡ್ಕೊಂಡ ಮ್ಯಾಲ ನಮ್ಮ ತಾಯ್ಗಿ ಟೇರೆಸ್ ಮ್ಯಾಲಿನ ರೂಮಿನ್ಯಾಗ ಇರೂ ವ್ಯವಸ್ಥಾ ಮಾಡಿದ್ದ್ಯುರಿ.”
“ನಿಮ್ಮ ತಾಯೀನ ನೋಡಾಕ ಈ ಎಂಟ ದಿವ್ಸದಾಗ ಯಾವಾಗರೇ ಮ್ಯಾಲ ಹೋಗಿದ್ರಿ ?”
“ಇಲ್ರಿ ಸರ್”
“ಯಾಕ್ ?”
“ಈ ತಿಂಗ್ಳ ಹಿರಿಯಣ್ಣ, ಆಕೀನ ನೋಡ್ಕೊಳ್ಳೂ ಮಾತಾಗಿತ್ರಿ”
“ಅವ್ರಾದ್ರೂ ನೋಡ್ಯಾರೇನು ?”
“ಇಲ್ರಿ ಸರ್, ಅವ್ರು ಮುಂಬಾಯಾಗ ಇರ್ತಾರು”
“ಅವ್ರ ಅಲ್ಲಿಂದ ಹೆಂಗ್ ನೋಡ್ತಾರ್ರಿ ವಿನಾಯಕರಾವ್ ?”
“ಪಗಾರದ ಮ್ಯಾಲ ಒಂದಾಳ ನೇಮಿಸು ವಿಚಾರಿತ್ರಿ ಸರ್”
“ಆ ಆಳ ಎಲ್ಲಿ ಅದಾನು ?”
“ಗೊತ್ತಿಲ್ರಿ ಸರ್”
“ಯಾಕ ?”
“ಅದನ್ನ ಹಿರಿ ಅಣ್ಣಾನ ನಿರ್ಧರಿಸ್ಬೇಕಿತ್ರಿ”
“ಹೋಗ್ಲಿ, ಆ ಆಳಮನಸ್ಯಾ ಬಂದಾನಿಲ್ಲೋ ? ಅಂವಾ ಚೊಲೋತಂಗ ನೋಡ್ಕೋತಾನೋ ಇಲ್ಲೋ ನೋಡ್ಬೇಕಾಗಿತ್ತಲ್ಲ ನೀವ್ ?”
“ನೋಡ್ಬೇಕಿತ್ರಿ ಸರ್ ... ...”
“ನೋಡ್ಬೇಕಿತ್ತು ಅಂತೀರಿ ! ಮತ್ತ್ಯಾಕ ನೋಡದಿಲ್ಲ ?”
“ಹೇಳ್ಯನಲ್ರಿ. ಈ ತಿಂಗ್ಳ ಜವಾಬದಾರಿ ಹಿರಿ ಅಣ್ಣಂದ ಇತ್ತು... ...”
“ಶಬ್ಬಾಶ್ ... ! ಗುಡ್... ! ವೇರಿ ಗುಡ್ ! ಹಿಂಥಾ ಮಕ್ಳು ಪ್ರತಿಯೊಬ್ಬ ತಂದೆ-ತಾಯಿ ಹೊಟ್ಟ್ಯಾಗ ಹುಟ್ಟಿ ಬಂದ್ರ ಕಣ್ಣಾಗೀನು ಕಣ್ಣೀರ ಕರಗಿ ಹೋಗ್ತಾವು ! ಲೇ ಹುಚ್ಚ, ಜನಕಲ್ಲದಿದ್ರೂ ಮನಕ್ಕಾದ್ರೂ ನಾಚಬೇಕಲೇ ! ಖರೇ ಅಂದ್ರ ನಿಮ್ಮಂಥ ಬದ್ಮಾಸ್ ಮಕ್ಕಳನ್ನ ಹುಟ್ಟಿಸಿದ ಆ ತಾಯಿ ಭಾಳ ದೊಡ್ಡ ತಪ್ಪ ಮಾಡಿದಂಗಾತು ! ... ...”
ಸಮಾಜಸೇವಕಿ ಸೊಸೆಯತ್ತ ತಿರುಗಿದ ಪೋಲೀಸ್ ಇನ್ಸಪೆಕ್ಟರ್, “ಏನೇ ಮಿಡ್ಕಲಾಡಿ, ಮಹಿಳಾ ವಿವೋಚನಾ ಹೋರಾಟ ಮಾಡೂ ಸಮಾಜಸೇವಕಿ ಹೌದಿಲ್ಲೋ ನೀ ? ಇದ ಏನ್ ನಿನ್ನ ಸಮಾಜ ಸೇವಾ ? ಇದ ಏನ್ ನಿನ್ನ ಮಹಿಳಾ ವಿವೋಚನಾ ? ಹೇಳೋದ ಆಚಾರ ; ತಿನ್ನೋದು ಬದ್ನಿಕಾಯಿ ! ಹಂಗ ನೋಡ್ಯರ ನಿಮ್ಮ ಮೈಮ್ಯಾಲ ಡಾಂಬರ್ ಸುರುವಿ ಬಾರಕೋಲಲೇ ಬಾರ್ಸಬೇಕ ! ಆದರ ಕಾನೂನದಾಗ ಹಂಥಾ ಅವಕಾಶಾ ಇಲ್ಲಂತ ಬಿಟ್ಟೇನಿ. ಥೂ ನಿಮ್ಮ ಜನ್ಮಕ !”
ಇನ್ಸಪೆಕ್ಟರ್ ಎದ್ದು, ಆ ತಾಯಿಯ ಎಲುಬಿನ ಹಂದರಕ್ಕೆ ಶಿರಬಾಗಿ ನಮಸ್ಕರಿಸಿದ ; ಆತನಿಗೆ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ ! ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಿದವನೇ ಅಲ್ಲಿಂದ ಹೊರಟು ಹೋದ !
ಪಂಚರ ಹೇಳಿಕೆಯಿಂದ ಶಾಂತಾಬಾಯಿ ಅನ್ನ-ನೀರಿಲ್ಲದೇ ಚಡಪಡಿಸಿ ತೀರಿಕೊಂಡಿದ್ದಾಳೆ ಎಂಬುದಾಗಿ ಪಂಚನಾಮೆ ಆಯಿತು !
*****
ಆ ಆದರ್ಶ ತಾಯಿಗೆ ಸತ್ತಮೇಲೆಯೂ ಅಪಮಾನವಾಗಬಾರದೆಂದು ಪಂಚರೇ ಮುಂದೆ ನಿಂತು ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದರು !
ಶಾಂತಾಬಾಯಿಯ ಮಕ್ಕಳು ಮತ್ತು ಸೊಸೆಯಂದಿರನ್ನು ಜನ ನಿಂದಿಸತೊಡಗಿದರು ! ಅದರಲ್ಲಂತೂ ಹತ್ತಿರವೇ ಇದ್ದರೂ ಹೆತ್ತತಾಯಿಯನ್ನು ಮರೆತ ಕೃತಘ್ನ ಮಗ ವಿನಾಯಕ ಮತ್ತು ಸಮಾಜಸೇವಕಿಯ ಸೋಗಿನ ಸೊಸೆಯನ್ನು ನಿಂದಿಸುತ್ತ ಮಹಾತಾಯಿಯ ಅಂತ್ಯಸಂಸ್ಕಾರಕ್ಕೆ ಎಲ್ಲ ತಯಾರಿ ಮಾಡಿಕೊಂಡರು. ಒಂದು ಚೀಲದಲ್ಲಿ ಆ ತಾಯಿಯ ಹೆಣದ ಎಲುಬುಗಳನ್ನೆಲ್ಲ ತುಂಬಿ, ಮಸಣಕ್ಕೆ ಒಯ್ದು ಬೆಂಕಿ ಇಟ್ಟರು !
‘ಕಣ್ಣೀರು ಕಮರಿ ಹೋದವು !’
ಮಸಣಕ್ಕೆ ಬಂದವರೆಲ್ಲ ಕಣ್ಣೀರುಗರೆಯುತ್ತ ಮನೆಗೆ ಮರಳಿದರು.
ನಿಜವಾಗಿಯೂ ಜೀವನ ಎನ್ನುವುದು ಎರಡು ಕ್ಷಣದ ಆಟವೇ ಅಲ್ಲವೆ ? ಸಂಬಂಧ-ಗಿಂಬಂಧ, ಪ್ರೇಮ ಅನ್ನುವುದೆಲ್ಲ ಬರಿ ಬುರುಡೆ ! ಕೇವಲ ತೋರಿಕೆಯಷ್ಟೆ ! ಅದೆಲ್ಲವನ್ನೂ ಸೃಷ್ಟಿಸಿಕೊಂಡವರೂ ನಾವೇ ಅಲ್ಲವೆ ?
*****
“ಅವ್ವ, ನೀನು ಪ್ರತಿಕ್ಷಣ ನೆನಪಾಗುತ್ತಿಯಾ. ನೀನಿಲ್ಲದೇ ನಾವೆಲ್ಲ ತಬ್ಬಲಿಗಳಾಗಿದ್ದೇವೆ ! ನಿನ್ನ ಆದರ್ಶದ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ. ನಿನ್ನ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡು ನಿನಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದೇವೆ”
ದಿನಪತ್ರಿಕೆಗಳಲ್ಲಿ ಶಾಂತಾಬಾಯಿಯ ದೊಡ್ಡದಾದ ಫೋಟೋ ಹಾಕಿಸಿ ಆ ನಿರ್ದಯಿ ಮಕ್ಕಳು ಶ್ರದ್ಧಾಂಜಲಿ ಸಲ್ಲಿಸಿದ್ದರು !
ಪತ್ರಿಕೆಗಳಲ್ಲಿ ಅದನ್ನು ಕಂಡವರೆಲ್ಲ ‘ಕರುಳ ಕಣ್ಣೀರು ಕಮರಿ ಹೋದವು’ ಎಂದು ನೊಂದುಕೊಂಡರು !
*****

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.