Showing posts with label Publication. Show all posts
Showing posts with label Publication. Show all posts

Wednesday, December 04, 2013

ಬರಹಗಾರನ ಸ್ವಾಭಿಮಾನಕ್ಕೆ ಪೆಟ್ಟು !

ಡಾ. ಸಿದ್ರಾಮ ಕಾರಣಿಕ
ನಾನು ಪುಸ್ತಕಗಳನ್ನು ರಚಿಸುವಾಗ ಅಥವಾ ಅನುವಾದಿಸುವಾಗ ಮೊದಲು ಕಚ್ಚಾ ಬರವಣಿಗೆ ಮಾಡುತ್ತೇನೆ. ಮೊದಲ ಬರವಣಿಗೆಗೆ ನಾನು ಕೆಲವು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತೇನೆ. ಒಂದು ಪುಟಕ್ಕೆ ಇಂತಿಷ್ಟು ಎಂದು ಹಣವನ್ನೂ ನೀಡುತ್ತೇನೆ. ಆನಂತರ ಏಕಾಂತದಲ್ಲಿ ನಾನು ಪಕ್ಕಾ ಬರವಣಿಗೆಗೆ ತೊಡಗುತ್ತೇನೆ. ಆನಂತರ ಡಿ.ಟಿ.ಪಿ, ತಿದ್ದುಪಡಿ ಎಲ್ಲ ಮಾಡುತ್ತೇನೆ. ಸಾಯಿ ಕಾದಂಬರಿಯನ್ನು ಅನುವಾದ ಮಾಡುವಂತೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮರಾಠಿ ಪ್ರಾಧ್ಯಾಪಕರಾದ ಡಾ. ವಿನೋದ ಗಾಯಕವಾಡರು ಬಹಳಷ್ಟು ಸಲ ಒತ್ತಾಯಿಸಿದಾಗ ಕೂಡ ನಾನು ಅವರಿಗೂ ಇದನ್ನು ಹೇಳಿದ್ದೆ. ಎಂಟುನೂರು ಪುಟಗಳ ಬರವಣಿಗೆಗೆ ಎಂಟು ಸಾವಿರ ಕೊಡಬೇಕಾಗುತ್ತದೆ ಎಂದೆ. ಅವರು ಒಟ್ಟು ಹತ್ತು ಸಾವಿರು ರುಪಾಯಿ ನೀಡಿದರು. ಎರಡು ಸಾವಿರು ಹೆಚ್ಚಾಯಿತು ; ಕೃತಿ ಪ್ರಕಟವಾದ ಮೇಲೆ ಸಂಭಾವನೆ (ರಾಯಲ್ಟಿ) ಬಂದಾಗ ಅದನ್ನು ಮರಳಿಸುತ್ತೇನೆ ಎಂದು ನಾನು ಅವರಿಗೆ ಎರಡ್ಮೂರು ಸಲ ಹೇಳಿದ್ದೆ. ಆದರೆ ಸಂಭಾವನೆ ಬಿಡಿ ; ನಾನೇ ಅನುವಾದಿಸಿದ ನನ್ನದೇ ಕೃತಿಯನ್ನೂ ನಾನು ಮೇಲಿಂದ ಮೇಲೆ ನಾನು ಕೇಳಿದಾಗಲೂ ಪ್ರಕಾಶಕರು ಕೇವಲ ಒಂದೇ ಪ್ರತಿ ಕಳುಹಿಸಿ ಇಡೀ ಬರಹಗಾರನ ಸ್ವಾಭಿಮಾನಕ್ಕೆ ಪೆಟ್ಟು ನೀಡಿದರು. ಚರ್ಚೆಯ ಮೂಲಕ ಬಗೆ ಹರಿಸಿಕೊಳ್ಳಬೇಕು ಎಂದುಕೊಂಡಾಗಲೂ ಮೂಲ ಲೇಖಕರು ಮತ್ತು ಪ್ರಕಾಶಕರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ನ್ಯಾಯಾಲಯದ ಮೂಲಕ ನ್ಯಾಯ ಕೇಳಲೇಬೇಕಾಗುತ್ತದೆ. ಧಾರವಾಡದ ಹೈಕೋರ್ಟಿನಲ್ಲಿ ಕೇಸು ದಾಖಲು ಮಾಡುವ ವಿಚಾರದಲ್ಲಿರುವೆ. ತಿಳಿದವರು, ನ್ಯಾಯವಾದಿಗಳು ಬಗ್ಗೆ ನನಗೆ ಸಲಹೆ ನೀಡಬೇಕು ಎಂದು ಮೂಲಕ ಕೇಳಿಕೊಳ್ಳುತ್ತಿರುವೆ.

Thursday, May 02, 2013

ಪ್ರಕಾಶಕರಿಗೆ ಒಂದು ಪ್ರಶ್ನೆ !

ನಾಗವಂಶಜ ದಲಿತರೇ ನಿಮ್ಮ ಅಸ್ಮಿತೆ ಎಲ್ಲಿ ಹೋಯಿತು ?
ಮೂಲ ಮರಾಠಿ : ಶ್ರೀನಿವಾಸ ಭಾಲೇರಾವ್
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
ಈ ಕಿರುಹೊತ್ತಿಗೆಯನ್ನು ನಾನು 2009 ರಲ್ಲಿ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದೆ. ಲಡಾಯಿ ಪ್ರಕಾಶನದ ಶ್ರೀ ಬಸವರಾಜ್ ಸುಳೇಭಾವಿಯವರು ಹಠಕ್ಕೆ ಬಿದ್ದು ಈ ಕೃತಿಯನ್ನು ತಾವೇ ಪ್ರಕಟಿಸುವುದಾಗಿ ಹೇಳಿದರು. ಯಾವುದೇ ಫಲಾಪೇಕ್ಷೆ ಇಲ್ಲದೆ ನಾನು ಅದನ್ನು ಡಿ.ಟಿ.ಪಿ. ಮಾಡಿಸಿ ಅವರಿಗೆ ನೀಡಿದೆ. ಈ ನಡುವೆ ಅವರಿಗೆ ಏನೇನೋ ತೊಂದರೆಗಳು ಕಾಡಿದ್ದರಿಂದ ನಾನು ಕೇಳಲು ಹೋಗಲಿಲ್ಲ. ಅವರು ಆ ಹೊತ್ತಿಗೆಯ ಮುಖಪುಟ ಮತ್ತು ISBN ಸಂಖ್ಯೆ ಕೂಡ ನನಗೆ ನೀಡಿದ್ದಾರೆ. ಆದರೆ ವಿಚಿತ್ರವೆಂದರೆ ಇನ್ನೂ ಆ ಹೊತ್ತಿಗೆ ಮುದ್ರಣವಾಗಿಲ್ಲ. ಇದು ಯಾಕೆ ಹೀಗಾಯಿತೋ ನನಗೇ ಗೊತ್ತಾಗುತ್ತ ಇಲ್ಲ. ಲಡಾಯಿಯ ಬಸವರಾಜ್ ಸುಳೇಭಾವಿಯವರು ನನಗೆ ತುಂಬ ಆತ್ಮೀಯರಾಗಿದ್ದೂ ಬೇರೆ ಬೇರೆ ಪುಸ್ತಕಗಳನ್ನು ಪ್ರಕಟಿಸುತ್ತಿದ್ದರೂ ಈ ಕೃತಿಗೆ ಯಾಕೆ ಅವರು ದಿವ್ಯ ಮೌನ ತಾಳಿದ್ದಾರೋ ನನಗಂತೂ ತಿಳಿಯುವುದಿಲ್ಲ. ಪ್ರತಿಸಲ ಕೇಳಿದಾಗೊಮ್ಮೆ ಆಶ್ವಾಸನೆ ಮಾತ್ರ ಸಿಗುತ್ತದೆ. ಇನ್ನು ಹತ್ತು ದಿನ, ಹದಿನೈದು ದಿನ, ಮುಂದಿನ ತಿಂಗಳು.... ಇತ್ಯಾದಿ. ಅವರ ಇಷ್ಟಪಟ್ಟು ಅನುವಾದ ಮಾಡಿಸಿದ ಇನ್ನೊಂದು ಮಹತ್ವದ ಕೃತಿಯ ಹಸ್ತಪ್ರತಿ ಕೂಡ ಅವರ ಕಡೆಯೇ ಇದೆ. ಅದಕ್ಕೂ ಮುಖಪುಟ ಮಾಡಿಸಿ, ISBN ಸಂಖ್ಯೆ ನೀಡಿದ್ದಾರೆ. ಆ ಕೃತಿಯ ಬಗ್ಗೆ ಹೇಳುವುದು ತುಂಬ ಇದೆ. ಪ್ರಜ್ಞಾವಂತರೂ ಅನ್ನಿಸಿಕೊಂಡವರೂ ಕೂಡ ಕೆಲವು ಸಲ ಹೇಗ್ಹೇಗೋ ನಡೆದುಕೊಳ್ಳುತ್ತಾರಲ್ಲ ? ನನ್ನ ಆ ಎರಡೂ ಪುಸ್ತಕಗಳನ್ನು ನನಗೆ ಬೇಕಾದ ಪ್ರಕಾಶಕರಿಂದ ಅಥವಾ ಸ್ವತಃ ನಾನೇ ಪ್ರಕಟ ಮಾಡುವ ಉಮೇದಿನಲ್ಲಿರುವೆ.

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.