Showing posts with label ಭಾರತ ಸಂವಿಧಾನ. Show all posts
Showing posts with label ಭಾರತ ಸಂವಿಧಾನ. Show all posts

Thursday, November 08, 2012

ಡಾ. ಅಂಬೇಡ್ಕರ್ ಬರೆಯುವ ಮೊದಲೇ ಭಾರತಕ್ಕೆ ಒಂದು ಸಂವಿಧಾನ ರಚನೆಯಾಗಿತ್ತು. ಆದರೆ ...?



ಸುರೇಂದ್ರ ಉಗಾರೆ, ವಕೀಲರು, ರಾಯಬಾಗ (ಬೆಳಗಾವಿ)
               
ಭಾರತ 1947ರಲ್ಲಿ ಸ್ವತಂತ್ರವಾಯಿತಾದರೂ  1950ರಲ್ಲಿ ಸಂವಿಧಾನ ಜಾರಿಯಲ್ಲಿ ಬಂದಿತ್ತು. ಈ ಸಂವಿಧಾನ ಡಾ// ಅಂಬೇಡ್ಕರ ಮುಖಂಡತ್ವದಲ್ಲಿ ರಚನೆಯಾಗಿರುವ ವಿಷಯ ಭಾರತೀಯರಿಗೆಲ್ಲ ಗೊತ್ತಿದೆ. ಪ್ರಸ್ತುತ ದಿನಗಳಲ್ಲಿ ಸಂವಿಧಾನ ತಿದ್ದುಪಡಿ ವಿಷಯಕ್ಕೆ ಕೈ ಹಾಕಿ ದಲಿತರ ವಿರೋದಿ ಕಟ್ಟಿಕೊಂಡವರು ಅನೇಕರು ಇದ್ದಾರೆ. ಯಾವ ವಿಷಯಕ್ಕಾಗಿ ತಿದ್ದುಪಡಿ ? ಅಥವಾ ದಲಿತನೊಬ್ಬನಿಂದ ರಚಿತವಾಗಿದೆ ಎಂಬ ಕಾರಣಕ್ಕಾಗಿಯೇ ? ಇಂತಹ ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಸಂವಿಧಾನ ತಿದ್ದುಪಡಿಮಾಡಲು ಹೊರಟಿರುವ ಗಣ್ಯಮಾನ್ಯರೆ, ಭಾರತದ  ಇತಿಹಾಸದ ಪುಟಗಳನ್ನು ತೆಗೆದು ಓದಿರಿ. ಡಾ// ಅಂಬೇಡ್ಕರಗಿಂತ  20 ವರ್ಷಗಳ ಮೊದಲೇ ಭಾರತಕ್ಕೊಂದು ಸಂವಿಧಾನ ರಚನೆಯಾಗಿತ್ತು. ಆದರೆ, ಸಿಖ್ ರ ಹಾಗೂ ಮುಸ್ಲಿಂರ ವಿರೋದಿಂದ ದು ಹುಟ್ಟಿದ ದಿನವೆ ಮಣ್ಣು ಮಾಡುವ ಪ್ರಸಂಗ ಬಂದಿತ್ತು. ಸಂವಿಧಾನ ರಚನೆ ಮಾಡಲು ಹೋಗಿ ಕೋಮಿನ ಪಟ್ಟ ಕಟ್ಟಿಕೊಂಡು ಸಂವಿಧಾನ ಎಂಬ ಪದ ಬಿಟ್ಟು ವರದಿ ಎಂಬ ಸಂವಿಧಾನವನ್ನು ತಯಾರಿಸಿ ಹೆಸರು ಕೆಡಿಸಿಕೊಂಡ ಪುಣ್ಯಾತ್ಮನ ಇತಿಹಾಸ ನಿಮಗೆ ಗೊತ್ತಿದೆಯೇ ?  ಆ ಪುಣ್ಯಾತ್ಮನೇ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ತಂದೆ ಮೋತಿಲಾಲ ನೆಹರು !
ಇಂಗ್ಲೆಂಡ ಸರಕಾರ ಭಾರತೀಯರಿಗೆ ಅವರ ಬೇಡಿಕೆಗೆ ಅನುಗುಣವಾಗಿ 1919ರಲ್ಲಿ ಮಂಟೆಗೊ ಜೇಮ್ಸ ಪೊರ್ಡ ಎಂಬ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆ ಭಾರತೀಯರಿಗೆ ತೃಪ್ತಿ ನೀಡಲ್ಲಿಲ್ಲ, ನಿರಾಸೆಗೊಂಡ ಭಾರತೀಯರು ಸ್ವತಂತ್ರ ಚಳುವಳಿಯನ್ನು ತೀವ್ರಗೊಳಿಸಿದರು. ಆದರು ಬ್ರಿಟಿಷರು 1919ರ ಕಾಯ್ದೆಯ ವಿಫಲತೆಯನ್ನು ತಿಳಿಯಲು ಮತ್ತು ಭಾರತಿಯರ ಆಸೆಗೆ ಸ್ಪಂದಿಸಲು ಇಂಗ್ಲೆಂಡಿನಲ್ಲಿ ಸೈಮನ್ ಮುಖಂಡತ್ವದಲ್ಲಿ ಒಂದು ಆಯೋಗವನ್ನು ರಚಿಸಿತು. ಈ ಆಯೋಗದಲ್ಲಿ ಏಳೂ ಜನ ಬಿಳಿಯರು ಇದ್ದುದ್ದರಿಂದ ಭಾರತೀಯ ಸ್ವತಂತ್ರ ಹೋರಾಟಗಾರರು ಈ ಆಯೋಗವನ್ನು ವಿರೋಧಿಸಿದರು ಮತ್ತು ಆಯೋಗ ಭಾರತಕ್ಕೆ ಬಂದರೆ ಭಾರತದ ತುಂಬ ಪ್ರತಿಭಟನೆ ಮಾಡುವುದಾಗಿ ಬ್ರಿಟಿಷರನ್ನು ಎಚ್ಚರಿಸಿದ್ದರು. ಅವಾಗ ಭಾರತದ ಇಂಗ್ಲೆಂಡಿನ ಕಾರ್ಯದರ್ಶಿಯಾಗಿದ್ದ ಲಾರ್ಡ ಬರ್ಕೆನ ಹೆಡ್ 1925 ಜುಲೈ 7ರಂದು ಭಾರತೀಯರು ತಮ್ಮ ಬೃಹತ್ ದೇಶಕ್ಕೆ ತಾವೇ ಸಂವಿಧಾನ ರಚಿಸುವುದಾದರೆ ರಚಿಸಲಿ ಎಂದು ಭಾರತೀಯರಿಗೆ ಸವಾಲು ಹಾಕಿದ್ದನು !
ಭಾರತದ ಕಾರ್ಯದರ್ಶಿಯ ಸವಾಲನ್ನು ಎದುರಿಸಲು ಮತ್ತು ಭಾರತೀಯರಿಗೆ ಸಂವಿಧಾನ ರಚಿಸುವ ಸಾಮರ್ಥ್ಯವಿದೆ ಎಂದು ತೋರಿಸುವ ಸಲುವಾಗಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ 1928ರಲ್ಲಿ ಬಾಂಬೆಯಲ್ಲಿ ಮೋತಿಲಾಲ್ ನೆಹರೂ ಮುಖಂಡತ್ವದಲ್ಲಿ ಸಮಿತಿಯೊಂದನ್ನು ರಚಿಸಿತು, ಈ ಸಮಿತಿಯಲ್ಲಿ 10 ಜನ ಸದಸ್ಯರಿದ್ದರು ಇವರಲ್ಲಿ ಮುಸ್ಲಿಂ ಮತ್ತು ಸಿಖರು ಇದ್ದರು ಹಾಗೂ ಪಂಡಿತ ಜವಾಹರಲಾಲ ನೆಹರೂರವರು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಭಾರತೀಯರಿಗೆ ತಕ್ಕಂತಹ ಸಂವಿಧಾನ ರಚನೆ ಕಾರ್ಯ ಭರದಿಂದ ಸಾಗಿತ್ತು. ನಂತರ ಡಿಸೆಂಬರ[1928] ತಿಂಗಳಲ್ಲಿ ಕಲ್ಕತ್ತಾದ ಅಧಿವೇಶನದಲ್ಲಿ ಮೋತಿಲಾಲ್ ನೆಹರೂರವರು ಕೋಮಿಗೆ ಸಂಬಂಧಿಸಿದಂತೆ ಭಾಷಣ ಮಾಡಿದರು. ಅದೇ ಅಧಿವೇಶನದಲ್ಲಿ ಸಿಖರು, ಮುಸ್ಲಿಂರು ಮೋತಿಲಾಲರ ಭಾಷಣ ವಿರೋಧಿಸಿ ಸಂವಿಧಾನ ಜಾರಿಯಾಗದಂತೆ ಪ್ರತಿಭಟಿಸಲು ತಯಾರಿ ನಡೆಸಿದರು. ಕೊನೆಗೆ, ಇಂತಹ ವಿರೋದ ನಡುವೆಯೇ ಲಾಹೋರ ಅಧೀವೇಶನದಲ್ಲಿ ಆಯೋಗ ತಯಾರಿಸಿದ ಸಂವಿಧಾನವನ್ನು ಅಂಗೀಕರಿಸಿದರು. ಈ ಅಂಗೀಕಾರದ ವಿರುದ್ದ ಸಿಖ್ ಜನಾಂಗದವರು, ಕಾಂಗ್ರೆಸಿನ ಮುಸ್ಲಿಂರು ಹಾಗೂ ಮಹಮದ್ ಅಲಿ ಜಿನ್ನಾ ಮೊದಲಾದವರ ವಿರೋಧದಿಂದಾಗಿ 14 ಅಂಶಗಳ ಸಂವಿಧಾನದಲ್ಲಿ ಸೇರಪಡೆ ಪಟ್ಟಿಯಿಂದಾಗಿ  ಮೋತಿಲಾಲ ನೆಹರೂರವರು ತಯಾರಿಸಿದ ಸಂವಿಧಾನ ಅಂಗೀಕರಿಸಿದ ದಿನವೇ ಮಣ್ಣು ಕೊಡಬೇಕಾಯಿತು !
ಹೀಗೆ ಭಾರತದ ಇತಿಹಾಸದಲ್ಲಿ ಭಾರತೀಯರ ಆಸೆಗಳಿಗೆ ಅನುಗುಣವಾಗಿ ಸಂವಿಧಾನ ಬರೆಯಲು ಹೋಗಿ, ಕೋಮುಗಳನ್ನು ಸೃಷ್ಟಿಸುವವರೇ ಆಗಿದ್ದಾರೆ. ಇಂತಹವರು ಸಂವಿಧಾನ ಬರೆಯಲು ಅರ್ಹರೆ ಒಂದೇ ಒಂದು ಸಲ ಯೋಚಿಸಿ.  ಇತಿಹಾಸದಲ್ಲಿ ಮೋತಿಲಾಲ ನೆಹರು ಬರೆದಿರುವ ಸಂವಿಧಾನವನ್ನು  'ನೆಹರೂ ವರದಿ' ಎಂದು ಕರೆಯುತ್ತಾರೆ !  ಅಷ್ಟಕ್ಕೂ ಡಾ// ಅಂಬೇಡ್ಕರ ಕರಡು ರಚನಾ ಸಮಿತಿಯ ಅಧ್ಯಕ್ಷರು, ಇವರ ಜೊತೆ ಎಲ್ಲಾ ಜಾತಿಯ ಸದಸ್ಯರಿದ್ದರು. ಸಂವಿಧಾನ ಜಾರಿಯಾಗುವ ಸಮಯದಲ್ಲಿ ಯಾರೊಬ್ಬರೂ ತುಟಿ ಬಿಚ್ಚಲಿಲ್ಲ, ಕರಡು ರಚನೆ ಮಾಡುವುದು ಡಾ// ಅಂಬೇಡ್ಕರವರಿಂದ ಮಾತ್ರ ಸಾಧ್ಯ ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಪಂಡಿತ ಜವಾಹರಲಾಲ ನೆಹರೂ ಕೂಡಾ ಸಂವಿಧಾನ ಬರೆಯುವ ಸಾಮರ್ಥ್ಯ ಇತ್ತು ಎಂದಾದರೆ ಸಂವಿಧಾನ ಬರೆಯಲಿಲ್ಲ ಏಕೆ ? ಅಪ್ಪ ಮೋತಿಲಾಲ ನೆಹರೂ ಸಿಖ್ ವಿರೋಟ್ಟಿಕೊಂಡು ಸಂವಿಧಾನ ಶಿಲ್ಪಿ ಎಂಬ ಪಟ್ಟ ಕಳೆದುಕೊಂಡರೆ, ಮಗ ಜವಾಹರ ಲಾಲ ನೆಹರೂ ಇಂಗ್ಲೆಂಡಿನ ಔತಣ ಕೂಟದಲ್ಲಿ ತನ್ನಷ್ಟಕ್ಕೆ ತಾನೇ ಕುಳಿತಿದ್ದ ಜಿನ್ನಾನನ್ನು ಕೆಣಕಿ ಪಾಕೀಸ್ತಾನದ ರಚನೆಗೆ ಕಾರಣನಾದ ಇತಿಹಾಸವಿದೆ ! ಇಂತಹ ನಾಯಕರು ಸಂವಿಧಾನ ಬರೆದರೆ ಹೇಗಿರುತ್ತೆ ಎನ್ನುವ ಕಲ್ಪನೆ ಮಾಡಲು ಸಾಧ್ಯವೆ ? ಸಾಮರ್ಥ್ಯದ ಜೊತೆ ಹೊಂದಾಣಿಕೆಯು ಇರಬೇಕು. ಈ ಗುಣ ಜವಾಹರಲಾಲ ನೆಹರೂಗೆ ಇರಲಿಲ್ಲ. ನೆಹರೂ ಸಂವಿಧಾನ ಬರೆಯದಿದ್ದರೇನು ಲಾಹೋರ ಅಧಿವೇಶದಲ್ಲಿ ತಂದೆ ಮೋತಿಲಾಲ ಬರೆದ ಸಂವಿಧಾನದ ಅಂಗೀಕಾರದ ದಿನದ ನೆನಪಿಗಾಗಿ ಜನೇವರಿ 26ರಂದು ಈಗಿನ ಸಂವಿಧಾನವನ್ನು ಅಂಗೀಕರಿಸಲಾಯಿತಲ್ಲವೆ ?

Sunday, November 04, 2012

ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿಎಂಬ ಪಟ್ಟದಿಂದ ಕೆಳಕ್ಕಿಳಿಸುವ ಷಡ್ಯಂತ್ರ !



- ರಘೋತ್ತಮ ಹೊ.ಬ, ಚಾಮರಾಜನಗರ

ಇತ್ತೀಚೆಗೆ ಅಥವಾ 1950 ಜನವರಿ 26ರಿಂದಲೂ ಈ ದೇಶದಲ್ಲಿ ಒಂದು ಷಡ್ಯಂತ್ರ ನಡೆಯುತ್ತಾ ಬಂದಿದೆ. ಅದು ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಎಂಬ ಪಟ್ಟದಿಂದ ಕೆಳಕ್ಕಿಳಿಸುವುದು! ಅರುಣ್ ಶೌರಿ ಇರಬಹುದು ಅಥವಾ ಮತ್ಯಾರೋ ಆರ್ಯ ಶೂರ ಇರಬಹುದು, ಒಟ್ಟಾರೆ ಎಲ್ಲರ ಟಾರ್ಗೆಟ್ ಒಂದೇ. ಅಂಬೇಡ್ಕರ ರಿಂದ ಸಂವಿಧಾನ ಶಿಲ್ಪಿ ಎಂಬ ಟೈಟಲ್ಲನ್ನು ಕಿತ್ತುಕೊಳ್ಳುವುದು ಅಥವಾ ಅವರು ಸಂವಿಧಾನ ಬರೆದೇ ಇಲ್ಲ ಎಂದು ಸಾಧಿಸಿ ತೋರಿಸುವುದು!

ಇದು ಎಷ್ಟು ಸಾಧ್ಯ? ಅಥವಾ ಎಷ್ಟು ಅಸಾಧ್ಯ? ಅದನ್ನು ಕಾಲವೇ ನಿರ್ಣಯಿಸುತ್ತಿದೆ. ಯಾಕೆಂದರೆ ಹಿಂದೆಲ್ಲಾ ಇದು ಅಂದರೆ ಅವರು ಇವರು ಎನ್ನುವುದು ಅಥವಾ ಇವರು ಅವರೇ ಅಲ್ಲ ಎಂದು ಸಾಧಿಸಿ ತೋರಿಸುವುದು ಅಥವಾ ಸಾಧಿಸಿಯೇ ಬಿಡುವುದು ಆಗಾಗ ನಡೆಯುತ್ತಾ ಬಂದಿದೆ. ಉದಾ: ಬುದ್ಧನನ್ನು ವಿಷ್ಣು ಎನ್ನುವುದು, ಶಿವಾಜಿಯನ್ನು ಮುಸ್ಲಿಂ ದ್ವೇಷಿ ಎನ್ನುವುದು ಇತ್ಯಾದಿ.

ಹಾಗಿದ್ದರೆ ಹೀಗೆಯೇ ಅಂದರೆ ಬುದ್ಧನನ್ನು ವಿಷ್ಣು ಎಂದ ಹಾಗೆ ಸಂವಿಧಾನ ಶಿಲ್ಪಿ ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಅಲ್ಲ ಎಂದು ಸಾಧಿಸಲು ಸಾಧ್ಯವೇ? ಜನಸಾಮಾನ್ಯರೆ ಇದನ್ನು ತೀರ್ಮಾನಿಸಬೇಕು.ಯಾಕೆಂದರೆ ತಮಗೆ ಬೇಕೆಂದವರನ್ನು ಇಂದ್ರ ಚಂದ್ರ ಎನ್ನುವುದು, ತಮಗೆ ಬೇಡ ಎಂದವರನ್ನು ಹೀಗಳೆವುದು, ಇದು ಈ ದೇಶದ ಬ್ರಾಹ್ಮಣವಾದಿ ಚರಿತ್ರಕಾರರು ಮಾಡಿಕೊಂಡು ಬಂದಿರುವ ಪದ್ಧತಿ. ಅಂತಹ ಪದ್ಧತಿಯ ಮುಂದುವರಿದ ಭಾಗವಾಗಿಯೇ ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿಅಲ್ಲ ಎಂದು ಸಾಧಿಸುವ ಈ ವ್ಯರ್ಥಾಲಾಪ. ಅಂದಹಾಗೆ ಅದುನಡೆದಿರುವುದು ಸುಭಾಷ್ ಕಶ್ಯಪ್ ಎಂಬ ಸಂವಿಧಾನ ತಜ್ಞ ಎನಿಸಿಕೊಂಡವರು ಬರೆದಿರುವ “Our Constitution”  ಎಂಬ ಕೃತಿಯಲ್ಲಿ.ಹಾಗೆ ಸಾಧಿಸ ಹೊರಟವರು ಮೊದಲು ಹೇಳುವುದು ಸಂವಿಧಾನದ ಪ್ರಥಮ ಕರಡನ್ನು ಸಿದ್ಧಪಡಿಸಿದವರು ಬಿ.ಎನ್.ರಾವ್ ಎಂಬವವರು ಎಂದು!

ಅಂದರೆ ಆಗಸ್ಟ್ 29, 1947ರಂದು ಕರಡು ಸಮಿತಿ ರಚಿಸಲ್ಪಟ್ಟರೆ ಅದು ರಚಿಸಲ್ಪಟ್ಟ ಒಂದೇ ತಿಂಗಳಲ್ಲಿ ಅಂದರೆ ಅಕ್ಟೋಬರ್ 1947ರಲ್ಲಿ ಅದರ ಸದಸ್ಯರಲ್ಲೋರ್ವರಾದ ಬಿ.ಎನ್.ರಾವ್‌ರವರು ಪ್ರಥಮ ಕರಡು ರಚಿಸಿದರಂತೆ, ಅವರು ರಚಿಸಿದ ಕರಡನ್ನು ಅಂಬೇಡ್ಕರ್ ನೇತೃತ್ವದ ಸಮಿತಿ ಬರೀ ಪರಿಶೀಲಿಸಿತಂತೆ! ಇದು ಸುಭಾಷ್ ಕಶ್ಯಪ್‌ರಂತಹ ಬ್ರಾಹ್ಮಣ ಚರಿತ್ರಾಕಾರರ ಅಂಬೋಣ. ಆದರೆ ಅದೇ ಸುಭಾಷ್ ಕಶ್ಯಪ್ ತಮ್ಮ“Our Constitution” ಕೃತಿಯ ಅದೇ ಪುಟಗಳಲ್ಲಿ ಅಂಬೇಡ್ಕರರ ಹೇಳಿಕೆಯೊಂದನ್ನು ಉಲ್ಲೇಖಿಸುತ್ತಾರೆ.

ಆ ಹೇಳಿಕೆಯಲ್ಲಿ ಸ್ವತಃ ಅಂಬೇಡ್ಕರರೇ 1947 ಆಗಸ್ಟ್‌ರಿಂದ 1949 ಅಕ್ಟೋಬರ್‌ವರೆಗೆ ಕರಡು ಸಮಿತಿ ಅನೇಕ ಸಭೆಗಳನ್ನು ನಡೆಸಿ ಸಂವಿಧಾನದ ಕರಡಿನ ಅಂತಿಮ ಪ್ರತಿಯನ್ನು 1949 ನವೆಂಬರ್ ತಿಂಗಳಲ್ಲಿ ಸಂವಿಧಾನ ಸಭೆಗೆ ಸಲ್ಲಿಸಿತು ಎನ್ನುತ್ತಾರೆ. ಹಾಗಿದ್ದರೆ 1949 ನವೆಂಬರ್ ತಿಂಗಳಲ್ಲಿ, ಎರಡು ವರ್ಷಗಳ ಸತತ ಪ್ರಯತ್ನದಲ್ಲಿ ಸಂವಿಧಾನ ಸಿದ್ಧಗೊಂಡಿತೆಂದರೆ ಅದರ ಶ್ರೇಯಸ್ಸು ಸಲ್ಲಬೇಕಾದ್ದು ಯಾರಿಗೆ? ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರರಿಗೆ ತಾನೆ? ಅಂದಹಾಗೆ 1947ರ ಆರಂಭದಲ್ಲಿ ಕೇಳಿಬರುವ ಬಿ.ಎನ್.ರಾವ್ ಎಂಬವವರ ಹೆಸರು ಸಂವಿಧಾನ ರಚಿಸಲು ತೆಗೆದುಕೊಂಡ ಮುಂದಿನ ಆ ಎರಡು ವರ್ಷಗಳ ಸಮಯದಲ್ಲಿ ಅಂದರೆ 1948, 1949ರಲ್ಲಿ ಎಲ್ಲಿಯೂ ಕೇಳಿಬರುವುದಿಲ್ಲ! (ಇತ್ತೀಚೆಗೆ ಹಿಂದುತ್ವವಾದಿಗಳಿಂದ ಕೇಳಿ ಬರುತ್ತಿರುವುದನ್ನೊರತು ಪಡಿಸಿದರೆ!).

ಇದಕ್ಕೆ ಪೂರಕವಾಗಿ ಸಂವಿಧಾನ ಸಭೆಯಲ್ಲಿ ಮಾತನಾಡಿರುವ ಸಮಿತಿಯ ಸದಸ್ಯ ಟಿ.ಟಿ.ಕೃಷ್ಣಮಾಚಾರಿಯವರು ಹೇಳಿರುವುದನ್ನು ನೋಡಿ ಸಂವಿಧಾನದ ಕರಡು ಸಮಿತಿಯಲ್ಲಿದ್ದ ಒಬ್ಬರು ತೀರಿಕೊಂಡರು, ಅವರ ಸ್ಥಾನಕ್ಕೆ ಮರುನೇಮಕ ಆಗಲಿಲ್ಲ. ಒಂದಿಬ್ಬರು ವಿದೇಶದಲ್ಲಿ ನೆಲೆಸಿದ್ದರಿಂದ ಅವರಿಗೆ ಕರಡು ರಚನೆ ಕಾರ್ಯದಲ್ಲಿ ಭಾಗವಹಿಸಲಾಗಲಿಲ್ಲ. ಮಗದೊಬ್ಬರು ಸದಸ್ಯರು ದಿಲ್ಲಿಯಿಂದ ದೂರದಲ್ಲಿದ್ದುದರಿಂದ ಅವರು ಕೂಡ ಅದರಲ್ಲಿ ಭಾಗವಹಿಸಲಿಲ್ಲ. ಅಂತಿಮವಾಗಿ ಸಂವಿಧಾನ ರಚನೆಯ ಪೂರ್ಣ ಜವಾಬ್ದಾರಿ ಅಂಬೇಡ್ಕರರ ಮೇಲೆ ಬಿದ್ದಿತು. ಅಂದಹಾಗೆ ಕೃಷ್ಣಾಮಾಚಾರಿಯವರ ಹೇಳಿಕೆಯ ಪ್ರಕಾರ ಸುಭಾಷ್ ಕಶ್ಯಪ್‌ರವರು ಹೇಳಿರುವ ಕರಡು ಸಮಿತಿ ಸದಸ್ಯರಾದ ಆ ಬಿ.ಎನ್.ರಾವ್ ಎಲ್ಲಿ ಹೋದರು? ವಿದೇಶಕ್ಕೋ ಅಥವಾ ನೇರ ಸ್ವರ್ಗಕ್ಕೋ?

ಅಂಬೇಡ್ಕರರು ಸಂವಿಧಾನ ಶಿಲ್ಪಿ ಅಲ್ಲ ಎಂದು ಹೇಳುವವರು ಇದನ್ನು ಸ್ಪಷ್ಟಪಡಿಸಬೇಕು.ಸಂವಿಧಾನ ಅರ್ಪಿತವಾದ ಆ ಸಂಧರ್ಭದಲ್ಲಿ ಅಂದರೆ ನವೆಂಬರ್ 26,1949ರಲ್ಲಿ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರ ಪ್ರಸಾದ್‌ರವರು ಡಾ.ಅಂಬೇಡ್ಕರ್‌ರವರಿಗೆ ಸಂವಿಧಾನ ರಚಿಸಲು ಪೂರ್ಣ ಸ್ವಾತಂತ್ರ ನೀಡಿದ್ದಿದ್ದರೆ, ಅವರು ಖಂಡಿತವಾಗಿಯೂ ತಮ್ಮದೇ ಆದ ಮತ್ತು ಭಿನ್ನವಾದ ಸಂವಿಧಾನವನ್ನು ಈ ದೇಶಕ್ಕೆ ನೀಡುತ್ತಿದ್ದರು. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಅಂದಹಾಗೆ ರಾಜೇಂದ್ರ ಪ್ರಸಾದರ ಈ ಹೇಳಿಕೆ ಅರ್ಥೈಸುವುದೇನನ್ನು? ಸಂವಿಧಾನ ರಚಿಸುವ ಪೂರ್ಣ ಹೊಣೆ ಅಂಬೇಡ್ಕರರ ಮೇಲೆ ಬಿದ್ದಿತ್ತು ಆದರೆ ಅವರಿಗೆ ಕೆಲವು ತಡೆಗಳಿದ್ದವು ಎಂದು ತಾನೆ? ಅದೇನೆ ಇರಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂದು ಘಂಟಾಘೋಷವಾಗಿ ಹೇಳಲು ಡಾ.ಬಾಬು ರಾಜೇಂದ್ರಪ್ರಸಾದ್ ಮತ್ತು ಟಿ.ಟಿ.ಕೃಷ್ಣಾಮಾಚಾರಿಯವರ ಇದಿಷ್ಟು ಹೇಳಿಕೆ ಮಾತ್ರ ಸಾಕು.

ಯಾಕೆಂದರೆ ಇವರಿಬ್ಬರು ಸಂವಿಧಾನದ ರಚನೆಯ ಜೊತೆ ಜೊತೆಯಲ್ಲೆ ಬೆಳೆದವರು, ಅರುಣ್ ಶೌರಿ ಮತ್ತು ಸುಭಾಷ್ ಕಶ್ಯಪ್‌ರ ಹಾಗೆ ಅದನ್ನು ಅದರ ಇತಿಹಾಸವನ್ನು ದೂರದಿಂದ ಹಿಂದುತ್ವದ ದೃಷ್ಟಿಯಿಂದ ಕೆದಕಿದವರಲ್ಲ! ಮುಂದುವರಿದು ಅಂಬೇಡ್ಕರರ ಸಂವಿಧಾನ ರಚನೆಯ ಕಾರ್ಯದ ಬಗ್ಗೆ ಆಕ್ಷೇಪಿಸುವವರು ಹೇಳುವುದು ಸಂವಿಧಾನ ಎಂಬುದು ಕತೆಯಲ್ಲ, ಕಾದಂಬರಿಯಲ್ಲ ಅದನ್ನು ಅಂಬೇಡ್ಕರರೊಬ್ಬರೇ ಬರೆದಿದ್ದಾರೆ ಎನ್ನುವುದು ಎಷ್ಟು ಸರಿ? ಎಂದು. ನಿಜ, ಸಂವಿಧಾನ ಕತೆಯಲ್ಲ, ಕಾದಂಬರಿಯೂ ಅಲ್ಲ. ಹಾಗೆಯೇ ಸ್ವಾತಂತ್ರ ಎಂಬುದೂ ಕೂಡ ಕಡ್ಲೆಪುರಿಯಲ್ಲ! ಏಕೆಂದರೆ ಗಾಂಧೀಜಿಯವರನ್ನು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂದು ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲಾಗಿದೆ.

ಇದನ್ನು ಯಾರೂ ಗಾಂಧೀಜಿ ಸ್ವಾತಂತ್ರವನ್ನು ಯಾವಾಗ, ಯಾವ ಟೈಮಲ್ಲಿ, ಯಾರ ಕೈಗೆ ತಂದುಕೊಟ್ಟರು ಎಂದು ಎಲ್ಲಿಯೂ ಪ್ರಶ್ನಿಸುವುದಿಲ್ಲ! ಅಂಬೇಡ್ಕರ್‌ರವರು ರಚಿಸಿದ ಸಂವಿಧಾನಕ್ಕೆ ಸಾಕ್ಷಿಯಾಗಿ ಸಂವಿಧಾನದ ಆ ಮೂಲ ಪ್ರತಿ ಇದೆ. ಅದರ ರಚನೆಯ ಹೊಣೆ ಹೊತ್ತ ಕರಡು ಸಮಿತಿಯ ಅಧ್ಯಕ್ಷರು ಅವರು ಎಂಬುದಕ್ಕೆ ದಾಖಲೆ ಇದೆ. ಆದರೆ ಗಾಂಧೀಜಿ ಸ್ವಾತಂತ್ರ ತಂದುಕೊಟ್ಟರೆಂಬುದಕ್ಕೆ ಏನು ದಾಖಲೆ ಇದೆ? ಹಾಗೆ ಹೇಳುವುದಾದರೆ ದೇಶಕ್ಕೆ ಸ್ವಾತಂತ್ರ ಬಂದ ದಿನ ಗಾಂಧೀಜಿ ದೇಶದ ರಾಜಧಾನಿ ದಿಲ್ಲಿಯಲ್ಲಿ ಇರಲೇ ಇಲ್ಲ. ದೂರದ ಕಲ್ಕತ್ತಾದಲ್ಲಿ ಇದ್ದರು! ಹಾಗಿದ್ದರೂ ಈ ದೇಶ ಅವರನ್ನು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂದು ಒಪ್ಪಿಕೊಂಡಿಲ್ಲವೆ?

ಗಾಂಧೀಜಿ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂಬುದನ್ನು ಒಪ್ಪಿಕೊಳ್ಳಬಹುದಾದರೆ ಅಂಬೇಡ್ಕರರನ್ನು ಸಂವಿಧಾನಶಿಲ್ಪಿ ಎಂದು ಒಪ್ಪಿಕೊಳ್ಳಲು ಏನಡ್ಡಿ? ಯಾಕೆ, ಅಂಬೇಡ್ಕರರು ಅಸ್ಪಶ್ಯರು ಎಂಬ ಕಾರಣಕ್ಕೆ ಅವರಿಗೆ ಅಂತಹ ಗೌರವವನ್ನು ನೀಡಲು ಈ ದೇಶದ ಪಟ್ಟಭದ್ರ ಹಿತಾಸಕ್ತಿಗಳಿಗೆ ಮನಸ್ಸಾಗುತ್ತಿಲ್ಲವೆ? ಸತ್ಯ ಹೇಳಿದರೆ ನಾವೇನು ಬೇಜಾರು ಮಾಡಿಕೊಳ್ಳುವುದಿಲ್ಲ. ಬೇಕಿದ್ದರೆ ನೇರವಾಗಿ ಹೇಳಲಿ, ಅಂಬೇಡ್ಕರ್ ಅಸ್ಪಶ್ಯರು ; ಆದ್ದರಿಂದ ಅವರು ಸಂವಿಧಾನ ಶಿಲ್ಪಿಯಲ್ಲ ಎಂದು !
ಕೃಪೆ : ವಾರ್ತಾಭಾರತಿ
  
 

Tuesday, September 04, 2012

ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ !

-ಡಾ. ಮೂಡ್ನಾಕೂಡು ಚಿನ್ನಸ್ವಾಮಿ


 ”ಜಾತಿಯ ಗೋಡೆಯನ್ನು ಕೆಡವಿ”
‘ಜಾತಿಯ ಗೋಡೆಯನ್ನು ಕೆಡವಿ’ ಎಂಬ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ನವಿ ಪಿಳ್ಳೆ  ಹೊರಡಿಸಿರುವ ಪತ್ರ ಕಠಿಣ ಶಬ್ದಗಳಿಂದ ಕೂಡಿದ್ದು ಹಲವಾರು ದೇಶಗಳಲ್ಲಿ ಸಂಚಲನ ಮೂಡಿಸಿದೆ.  ಜಾತಿಪದ್ಧತಿಯಿಂದುಂಟಾಗುವ  ಮಾನವ ಹಕ್ಕು ಉಲ್ಲಂಘನೆಯನ್ನು  ಅವರು ಗುಲಾಮಗಿರಿ ಹಾಗೂ ಅಪಾರ್ಥೀಡ್‍ಗಳಿಗೆ ಹೋಲಿಸಿದ್ದಾರೆ. ಮಾನವ ಜನಾಂಗದ ಆ ಎರಡು ಕಪ್ಪುಚುಕ್ಕೆಗಳನ್ನು ಹೋಗಲಾಡಿಸಿದಂತೆಯೇ ಜಾತಿಪದ್ಧತಿಯನ್ನು ಸಹ ನಿರ್ಮೂಲನ ಗೊಳಿಸಬೇಕು ಎಂದು ಕರೆ ನೀಡಿದ್ದಾರೆ.  ಅದಕ್ಕಾಗಿ ಎಲ್ಲ ದೇಶಗಳ ಸಹಕಾರವನ್ನು ಅವರು ಬಯಸುತ್ತಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 260 ಮಿಲಿಯನ್ ಜನರು ಪ್ರಪಂಚದಾದ್ಯಂತ ಜಾತಿ ಪದ್ಧತಿಯ ದೌರ್ಜನ್ಯಗಳಿಂದ ಬಳಲುತ್ತಿದ್ದಾರೆ.  ಭಾರತ ಪ್ರಮುಖವಾಗಿ ಕಾಣಿಸಿಕೊಂಡರೂ ನೇಪಾಳ, ಬಾಂಗ್ಲಾ ದೇಶ, ಪಾಕಿಸ್ತಾನ, ದಕ್ಷಿಣ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಭಾರತೀಯ ವಸಾಹತು ಸ್ಥಳಗಳಲ್ಲಿ ಜಾತಿಭೇದ ನೀತಿ ಇನ್ನೂ ಚಲಾವಣೆಯಲ್ಲಿದೆ ಎಂದು ನವಿ ಪಿಳ್ಳೆ ಬರೆಯುತ್ತಾರೆ.
ಹುಬ್ಬಳ್ಳಿಯ ಕೆಲವು ಗೆಳೆಯರು ‘ಮಾನವ ಹಕ್ಕು ಪ್ರತಿಪಾದನಾ ಸಂಸ್ಥೆ’ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ.  ಏಪ್ರಿಲ್ 2008 ರಲ್ಲಿ ನಡೆದ ಅದರ ಉದ್ಛಾಟನಾ ಸಮಾರಂಭದಲ್ಲಿ ನಾನು ಒಂದು ಮಾತು ಹೇಳಿದ್ದೆ.  ‘ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತೆಯ ಆಚರಣೆಯನ್ನು ಅಪರಾಧವೆಂದು ಪರಗಣಿಸಲಾಗಿದೆ.  ಆದರೆ ವಾಸ್ತವದಲ್ಲಿ ಹಳ್ಳಿ, ಪಟ್ಟಣವೆನ್ನದೆ ಅದಿನ್ನೂ ಜೀವಂತವಾಗಿದೆ.  ಅದರ ಮಾತೃಗರ್ಭವಾದ ಜಾತಿ ಪದ್ಧತಿ ಅಳಿಯದ ಹೊರತು ಅಸ್ಪೃಶ್ಯತೆ ನಾಶವಾಗುವುದಿಲ್ಲ. ಆದ್ದರಿಂದ ಜಾತಿ ಪದ್ದತಿಯ ಆಚರಣೆಯನ್ನು ಸಂವಿಧಾನದಲ್ಲಿ ಅಪರಾಧವೆಂದು ಪರಿಗಣಿಸಿ ತಿದ್ದುಪಡಿ ತರಬೇಕು. ಆಗ ಅದರ ಪಾಪದ ಪಿಂಡವಾದ ಅಸ್ಪೃಶ್ಯತೆ ನಿವಾರಣೆಗೆ ಪ್ರಯತ್ನಿಸಬಹುದು’ ಎಂದು. ಆ ಸಂದರ್ಭದಲ್ಲಿ ಉಪಸ್ಥಿತರಾಗಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀ ಎಸ್.ಆರ್.ನಾಯಕ್ ರವರು ಆ ಮಾತನ್ನು  ಅನುಮೋದಿಸಿದ್ದರು ಮತ್ತು ನಂತರ ಬೆಂಗಳೂರಿನಲ್ಲಿ ನಡೆದ ಇನ್ನೊಂದು ಸಭೆಯಲ್ಲಿ ಜಾತಿ ಪದ್ದತಿ ಆಚರಣೆಯನ್ನು ಸಂವಿಧಾನ ಮೂಲಕ ಅಳಿಸಿಹಾಕಬೇಕು ಎಂಬ ಕರೆಯನ್ನು ಸಹ ಕೊಟ್ಟಿದ್ದರು.  ಇದರ ನೆನಪು ಈ ಸಂದರ್ಭದಲ್ಲಿ ಪ್ರಸ್ತುತವೆಂದು ಉಲ್ಲೇಖಿಸುತ್ತಿದ್ದೇನೆ.
ಜಾತಿಯಾಧಾರಿತ ತಾರತಮ್ಯ – ಮಾನವ ಹಕ್ಕು ಉಲ್ಲಂಘನೆ:
ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಷತ್  ಜಿನೀವಾದಲ್ಲಿ ನಡೆದ ಸಭೆಯಲ್ಲಿ ಜಾತಿಯಾಧಾರಿತ ತಾರತಮ್ಯವನ್ನು  ಮಾನವ ಹಕ್ಕುಗಳ ಉಲ್ಲಂಘನೆಯೆಂದು ಪರಿಗಣಿಸಿ ಠರಾವು ಪಾಸುಮಾಡಿದೆ. ಅದಕ್ಕೆ ನೇಪಾಳ ಬೆಂಬಲ ನೀಡಿದೆ. ನೇಪಾಳ ದೇಶವು ನೀಡಿದ ಬೆಂಬಲವು ಮಹತ್ವದ್ದು ಎಂಬುದು ವಿಶೇಷ. ಯಾಕೆಂದರೆ ಇತ್ತೀಚಿನವರೆಗೂ ವಿಶ್ವದ ಏಕೈಕ ಹಿಂದೂ ರಾಷ್ಟ್ರ್ರವಾಗಿದ್ದ ನೇಪಾಳದಲ್ಲಿ ಭಾರತದಲ್ಲಿರುವಂತೆಯೆ ಹಿಂದೂಗಳು ಬಹುಸಂಖ್ಯಾತರು ಮತ್ತು ಅಲ್ಲಿಯೂ ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳು ಬೇರು ಬಿಟ್ಟು ಸಮಾಜವನ್ನು ಕುರೂಪಗೊಳಿಸಿವೆ.  ವಿಪರ್ಯಾಸವೆಂದರೆ ಭಾರತ ಈ ಠರಾವನ್ನು ವಿರೋಧಿಸುತ್ತಿದೆ.  ಜಾತಿಪದ್ಧತಿ ಎಂಬುದು ಹಿಂದೂ ಧರ್ಮದಲ್ಲಿ ಕುಟುಂಬ ವ್ಯವಸ್ಥೆಯಾಗಿದ್ದು ಅದು ದೇಶದ ಆಂತರಿಕ ವಿಚಾರವೆಂದೂ, ಅದರ ನೇತ್ಯಾತ್ಮಕ ಅಂಶಗಳಾದ ಅಸ್ಪೃಶ್ಯತೆ, ಇತ್ಯಾದಿಯನ್ನು ಸಂವಿಧಾನದ ಮೂಲಕ ಹೋಗಲಾಡಿಸಿಕೊಂಡಿದೆಯೆಂದು ವಾದಿಸುತ್ತಾ ಬಂದಿದೆ.
ಭಾರತ ಯಾಕೆ ಈ ನೀತಿ ಅನುಸರಿಸುತ್ತಿದೆ ಎಂಬುದು ಅರ್ಥವಾಗದ ವಿಷಯ. ಜಾತಿ ವೃತ್ತಿ ಸಂಬಂಧಿತವಲ್ಲ ಎಂಬುದು, ಆನುವಂಶಿಕವಲ್ಲ ಎಂಬುದು ಭ್ರಮಾತ್ಮಕವಾದುದು.  ಈ ನಿಲುವು ನೈತಿಕವಾದುದಲ್ಲ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ.  ಇಂಥ ಧೋರಣೆಯಿಂದ ಭಾರತ ಸಾಧಿಸ ಬೇಕಾಗಿರುವುದಾದರೂ ಏನನ್ನು.? ದೇಶದೊಳಗಿನ ಇಂಥ ಗಂಭೀರ ಸಮಸ್ಯೆಯೊಂದರ ಬಗ್ಗೆ ತನ್ನ ಅಂತರರಾಷ್ಟ್ರೀಯ ನಿಲುವು ಸತ್ಯಕ್ಕೆ ನಿಷ್ಠವಾಗಿರಬೇಕಾದ ಅನಿವಾರ್ಯತೆಯನ್ನು ಮರೆತು ಭಾರತ ವರ್ತಿಸುತ್ತಿದೆಯೆ? ಅದರ ಪರಿಣಾಮಗಳನ್ನು ಯೋಚಿಸಿದೆಯೆ?  ವಿಶ್ವಸಂಸ್ಥೆಯು ಜನಾಂಗೀಯ ಭೇದ ವಿನಾಶ ಸಮಿತಿಯೊಂದನ್ನು (Committee on Elimination of Racial Discrimination – CERD) ರಚಿಸಿದೆ.  ಅದು ಎಲ್ಲಾ ವಿಧದ ಜನಾಂಗೀಯ ಭೇದಗಳ ವಿನಾಶದ ಕುರಿತು 1968 ರಲ್ಲಿ  ಏರ್ಪಟ್ಟ ಅಂತರರಾಷ್ಟ್ರೀಯ ಒಡಂಬಡಿಕೆಗೆ ಅನುಗುಣವಾಗಿ ರಚನೆಯಾಗಿದೆ.  ಆ ಒಡಂಬಡಿಕೆಗೆ ಭಾರತವೂ ಸಹಿ ಮಾಡಿದೆ.  ಆ ಒಡಂಬಡಿಕೆಯ ಪ್ರಕಾರ  ವಿಶ್ವಸಂಸ್ಥೆಯು ಜನಾಂಗ, ವರ್ಣ, ಅನುವಂಶೀಯ ಅಥವಾ ಕುಲಸಂಬಂಧೀ ಭೇದಗಳ ವಿರುದ್ಧ ರಕ್ಷಣೆಯ ಭರವಸೆಯನ್ನು ತನ್ನ ಸದಸ್ಯ ರಾಷ್ಟ್ರೀಯ ಪ್ರಜೆಗಳಿಗೆ ನೀಡುತ್ತದೆ.  1996 ರಲ್ಲಿ  ಜನಾಂಗೀಯ ಭೇದ ವಿನಾಶ ಸಮಿತಿಯು ದಲಿತರ ವಿರುದ್ಧ ನಡೆಸಲಾಗುವ ಭೇದವನ್ನು ಸಹ ಅನುವಂಶೀಯ ಆಧಾರದ ಭೇದ ನಿಷೇಧದ ಅಡಿಯಲ್ಲಿ ಪರಿಗಣಿಸಬಹುದು ಎಂದು ತೀರ್ಮಾನಿಸಿದೆ. ಒಬ್ಬ ಸಹಿದಾರನಾಗಿ ಭಾರತ ಒಡಂಬಡಿಕೆಯಲ್ಲಿ ಭೇದ ನೀತಿಗೊಳಪಡುವವರ ರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮಗಳನ್ನು ಕಾಲಕಾಲಕ್ಕೆ ವರದಿಗಳ ಮೂಲಕ ನೀಡಬೇಕಾಗಿರುತ್ತದೆ.  ಅದನ್ನು ಸಮಿತಿಯು ಪರಿಶೀಲನಾ ಸಭೆಗಳಲ್ಲಿ ಪರಾಂಬರಿಸಿ ರಚನಾತ್ಮಕ ವಾಗ್ವಾದಗಳನ್ನು ನಡೆಸುತ್ತದೆ ಮತ್ತು ಸುಧಾರಣಾ ಸಲಹೆಗಳನ್ನು ನೀಡುತ್ತದೆ.
ಇಂತಹ ಒಂದು ಠರಾವನ್ನು 1996 ರಿಂದಲೂ ಭಾರತ ವಿರೋಧಿಸುತ್ತಾ ಬಂದಿದೆ.  ಭಾರತವು ಹತ್ತು ವರ್ಷಗಳ ನಂತರ ಫೆಬ್ರವರಿ 2007 ರಲ್ಲಿ ಈ ಠರಾವಿಗೆ ಉತ್ತರ ನೀಡಿದೆ.  ವಿಚಿತ್ರವೆಂದರೆ, ಅದರಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಒಂದು ಚಕಾರವೂ ಇಲ್ಲ. ಪ್ರತಿ ಘಂಟೆಗೆ ಇಬ್ಬರು ದಲಿತರನ್ನು ಥಳಿಸಲಾಗುತ್ತದೆ. ಮೂವರು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಪಡುತ್ತಾರೆ.  ಇಬ್ಬರು ದಲಿತರು ಕೊಲ್ಲಲ್ಪಡುತ್ತಾರೆ  ಎರಡು ದಲಿತರ ಮನೆಗಳನ್ನು ಸುಡಲಾಗುತ್ತದೆ, ಎಂಬ ಅಂಕಿಅಂಶಗಳು ಅಧಿಕೃತವಾಗಿ ಲಭ್ಯವಿವೆ.  ಸಫಾಯಿ ಕರ್ಮಚಾರಿ ಆಂದೋಲನವು ಮೇ 2009 ರಲ್ಲಿ ದೆಹಲಿಯೊಂದರಲ್ಲೇ 1085 ಬರಿಗೈ ಜಾಡಮಾಲಿಗಳು ಇರುವರೆಂಬ ವಸ್ತುಸ್ಥಿತಿಯನ್ನು  ಮಾಹಿತಿ ಹಕ್ಕುಗಳ ಕಾಯಿದೆ ಅಡಿಯಲ್ಲಿ ಪಡೆದು ಸರ್ವೊಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತು.  ಸರ್ಕಾರದ ಕಡತಗಳಲ್ಲೆ ಕಂಡು ಬರುವ ಇಂಥ ಬರ್ಬರ ಸತ್ಯಗಳನ್ನು  ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹೇಗೆ ಅಲ್ಲಗಳೆಯಲಾಗಿದೆ ಎಂಬುದು ಸೋಜಿಗವೂ, ವಿಷಾದನೀಯವೂ ಆಗಿದೆ.
ಕೇವಲ ವಿಶ್ವಸಂಸ್ಥೆಯಷ್ಟೆ ಅಲ್ಲ, ಭಾರತದ ಜಾತಿಯಾಧಾರಿತ ಭೇದವನ್ನು ಖಂಡಿಸಿ ಯೂರೋಪು ಒಕ್ಕೂಟವೂ ಠರಾವು ಪಾಸು ಮಾಡಿದೆ.  ಯೂರೋಪು ಸಂಸದೀಯ ಮಾನವ ಹಕ್ಕು 2000, 2002, 2003 ಮತ್ತು 2005ರ ವರದಿಗಳಲ್ಲಿ ಜಾತಿಭೇದದ ಕುರಿತು, ದಲಿತರ ಸ್ಥಿತಿಗತಿ ಕುರಿತು ಉಲ್ಲೇಖಗಳಿವೆ.  ಈ ವರದಿಗಳು ವ್ಯಾಪಕವಾಗಿ ವಿತರಿಸಲ್ಪಡುತ್ತವೆ.  ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಷ್ಟೆ ಅಲ್ಲದೆ ಯೂರೋಪು ಸದಸ್ಯ ರಾಷ್ಟ್ರಗಳು, ಐಎಲ್ಓ, ಯುನಿಸೆಫ್,  ಮುಂತಾದ ಸಂಸ್ಥೆಗಳನ್ನು ವರದಿ ತಲುಪುತ್ತದೆ.  ಆದರೂ ದೇಶದಾದ್ಯಂತ ಎಗ್ಗಿಲ್ಲದೆ ನಡೆಯುತ್ತಿರುವ ದಲಿತರ ದಮನವನ್ನು  ಮರೆಮಾಚಲು ಭಾರತ ಪ್ರಯತ್ನಿಸುತ್ತಲೇ ಇದೆ.
ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ :
ಉತ್ತರ ಭಾರತದ ಹಳ್ಳಿಗಳಲ್ಲಿ ಕೆಲವು ಅಂತರ್ಜಾತೀಯ  ವಿವಾಹಗಳು ಇಂದಿಗೂ ಕೊಲೆಯಲ್ಲಿ ಪರ್ಯವಸಾನವಾಗುತ್ತವೆ. ಅಸಮಾನತೆಯೆ ತತ್ವವಾಗಿರುವ ಜಾತಿ ಪದ್ಧತಿ ಮತ್ತು ಸಮಾನತೆ ಹಾಗೂ ಭ್ರಾತೃತ್ವವನ್ನು ಬೋಧಿಸುವ  ಪ್ರಜಾಪ್ರಭುತ್ವ ಪರಸ್ಪರ ಎಣ್ಣೆ ಸೀಗೆಕಾಯಿ ಸಂಬಂಧ ಹೊಂದಿದ ವಿರೋಧೀ ಭಾವಗಳು. ಆದ್ದರಿಂದ ಭಾರತದ ಆತ್ಮ ಅಲಿಖಿತ ಸಂವಿಧಾನವಾಗಿರುವ ಜಾತಿಪದ್ದತಿಯೆಂದರೆ ತಪ್ಪಾಗಲಾರದು. ದುರದೃಷ್ಟವಶಾತ್ ಭಾರತದ ಒಳಗಡೆ ಚರ್ಚೆಗೊಳಗಾಗುವ ವಿಷಯ ಜಾತಿಪದ್ಧತಿ ಒಡಲುಗೊಂಡಿರುವ ಅಸ್ಪೃಶ್ಯತೆಯನ್ನು ಕುರಿತು ಮಾತ್ರ. ಇದು ಮಾನವತೆಗೆ ಅಂಟಿಕೊಂಡ ದೊಡ್ಡ ಕಳಂಕ ಎಂದು ವರ್ಣಿಸಿ ಎಲ್ಲ ಜಾತಿಯವರು ಖಂಡಿಸಲು ಇಚ್ಛಿಸುತ್ತಾರೆ. ಆದರೆ ಹುಟ್ಟುತ್ತಲೇ ಮೇಲು ಕೀಳನ್ನು ನಿರ್ಧರಿಸಿ ಬಿಡುವ ಜಾತಿಯೆ ಮಾನವತೆಗೆ ದೊಡ್ಡ ಕಳಂಕ ಎಂದು ಖಂಡಿಸಲು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ವರ್ಣಾಶ್ರಮಕ್ಕೆ ಸಿಕ್ಕ ಗಾಂಧೀಜಿಯವರ ಬೆಂಬಲ ಜಾತಿಪದ್ಧತಿಗೂ ಪರೋಕ್ಷವಾಗಿ ಸಿಕ್ಕಿತೆಂಬ ನಂಬಿಕೆ. ಜಾತಿ ಪದ್ಧತಿಯ ಎಲ್ಲಾ ಅವಘಡಗಳನ್ನು ಭಾರತ ದಿನನಿತ್ಯ ಅನುಭವಿಸುತ್ತಲೇ ಸಾಮಾಜಿಕವಾಗಿ, ರಾಜಕೀಯವಾಗಿ ಕುಬ್ಜವಾಗಿದೆ. ದೇಶ ಆರ್ಥಿಕವಾಗಿ ಬಲಿಷ್ಠವಾಗಿದೆ ಎಂದು ಯಾವ ಸಮಾಜವಾದಿಯೂ ಹೇಳಲಾರ. ಅಂಬೇಡ್ಕರರನ್ನು ಹೊರತುಪಡಿಸಿ ಜಾತಿ ಪದ್ಧತಿಯ ಅನಿಷ್ಟಗಳನ್ನು ತಳ ಸ್ಪರ್ಶಿಯಾಗಿ ಅಭ್ಯಸಿಸಿದವರು ರಾಮಮನೋಹರ ಲೋಹಿಯಾ. ಜಾತಿ ಪದ್ಧತಿಯಿಂದ ಆಡಳಿತ ರಂಗ ಕಲುಷಿತಗೊಳ್ಳುತ್ತಿದೆ ಎಂಬ ಒಳ ನೋಟವಿದ್ದ ಲೋಹಿಯಾ ‘ಶೂದ್ರ ದ್ವಿಜರ ನಡುವೆ ಮದುವೆಯಾಗುವುದು ಆಡಳಿತ ರಂಗ, ಸಶಸ್ತ್ರ ಪಡೆಗಳ ನೇಮಕಾತಿಗೆ ಉಳಿದವುಗಳೊಂದಿಗೆ ಒಂದು ಅರ್ಹತೆಯೆಂದೂ, ಜೊತೆಗೂಡಿ ಊಟ ಮಾಡಲು ನಿರಾಕರಿಸುವುದನ್ನು ಒಂದು ಅನರ್ಹತೆಯೆಂದೂ ಕಟ್ಟಳೆಯಾದ ದಿನವೇ ಜಾತಿ ವಿರುದ್ಧ ಪ್ರಾಮಾಣಿಕ ಹೋರಾಟ ಪ್ರಾರಂಭವಾಗುತ್ತದೆ. ಆ ದಿನ ಇನ್ನೂ ಬರಬೇಕಿದೆ’ ಎನ್ನುತ್ತಾರೆ.
ಜಾತಿ ಶ್ರಮವನ್ನು ಮಾತ್ರ ವಿಭಜಿಸುವುದಿಲ್ಲ ಶ್ರಮಿಕರನ್ನೂ ವಿಭಜಿಸುತ್ತದೆ ಎಂದು ಡಾ.ಅಂಬೇಡ್ಕರ್ ಹೇಳುತ್ತಾರೆ. ಇದು ಅಕ್ಷರಷಹಃ ಸತ್ಯ. ವಿಭಜಿತ ಜಾತಿಗಳು ತಮ್ಮದೇ ಗೋಡೆಗಳನ್ನು ನಿರ್ಮಿಸಿಕೊಂಡು ಕೂಪ ಮಂಡೂಕಗಳಾಗಿವೆ. ಹಳ್ಳಿಗಳಲ್ಲಿ ಇನ್ನೂ ಒಂದು ಜಾತಿಯ ಜೀವನ ಪದ್ಧತಿ ಇನ್ನೊಂದು ಜಾತಿಗೆ ಅಪರಿಚಿತವಾಗಿದೆ. ಸಮಾಜ ನಿರ್ಮಾಣ ಸಮರೂಪವಾಗಿರಲು ಇದು ಅಡಚಣೆಯಾಗುತ್ತದೆ. ಕೊಡು ಕೊಳ್ಳುವಿಕೆ ಇಲ್ಲದೆ ಸಂಸ್ಕೃತಿ ಬೆಳೆಯಲಾರದು. ಕುರುಬ ಜಾತಿಯ ಮಿತ್ರರೊಬ್ಬರು ‘ನಾವು ಸ್ಪೃಶ್ಯ ದಲಿತರು’ ಎಂದು ಹೇಳುತ್ತಿದ್ದುದು ನೆನಪಿಗೆ ಬರುತ್ತದೆ. ಊರಿನ ಜಾತ್ರೆಯಲ್ಲಿ ಪಲ್ಲಕ್ಕಿ ಹೊರಲು ಇವರು ಬೇಕಾಗಿದ್ದರಂತೆ. ಡೊಳ್ಳು ಬಾರಿಸಲು, ವಾದ್ಯ ಊದಲು, ಪಂಜು ಹಿಡಿಯಲು, ಹಲಗೆ ಬಡಿಯಲು ಒಂದೊಂದು ಜಾತಿಗಳಿವೆ.   ದೇಗುಲ, ಮಠ ಯಾವುದೇ ಆದರೂ ಕೈ ಸೇವೆಗಳ ಅಗತ್ಯವಿರುವುದರಿಂದ ಸ್ಪೃಶ್ಯ ಕೆಳ ಜಾತಿಗಳ ಅವಶ್ಯಕತೆಯಿದೆ. ಶೋಷಣೆಯೇ ಜಾತಿ ಪದ್ಧತಿಯ ಜೀವಾಳ. ಸಾಮಾಜಿಕ ಅಸಮಾನತೆಯಿಂದ ಅವಮಾನವನ್ನೂ ಆರ್ಥಿಕ ಅಸಮಾನತೆಯಿಂದ ಹಸಿವನ್ನೂ ಕೆಳಜಾತಿಗಳು ಅನುಭವಿಸುತ್ತಿವೆ.
ಪ್ರತಿಯೊಂದು ಜಾತಿಗೂ ಒಂದು ಅಘೋಷಿತ ಸಾರ್ವಜನಿಕ ನಡವಳಿಕೆಯಿದೆ. ಅದು ಅನೀತಿಯದಾಗಿದೆ. ಜಾತಿಯೆ ಅನೀತಿಯ ಕಟ್ಟಳೆಯಾಗಿರುವಾಗ ಅದರ ಪರಿಣಾಮಗಳು ಅನೀತಿಯುತವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ರಾಷ್ಟ್ರಾಧ್ಯಕ್ಷರೊಬ್ಬರು ಕಾಶಿಯಲ್ಲಿ ಸಾರ್ವಜನಿಕವಾಗಿ 200 ಜನ ಬ್ರಾಹ್ಮಣರ ಪಾದಗಳನ್ನು ತೊಳೆದರು. ಅದನ್ನು ಲೋಹಿಯಾ ಚಿತ್ತಭ್ರಮೆ, ಅಸಭ್ಯತನ ಎಂದು ಬಹುವಾಗಿ ಖಂಡಿಸಿದರು, ಆದರೆ ನೆಹರೂ ಅದನ್ನು ಸಮರ್ಥಿಸಿಕೊಂಡರು, ಇನ್ನೊಬ್ಬ ರಾಷ್ಟ್ರಪತಿಗಳು ತಿರುಪತಿಯಲ್ಲಿ ತಲೆಬೋಳಿಸಿಕೊಂಡರು. ಈಗ ಮಂತ್ರಿಗಳು ತಮ್ಮ ಚೇಂಬರಿನೊಳಗೆ ಹೋಮ, ಹವನ ಮಾಡಿಸುತ್ತಾರೆ. ಕೆಳಜಾತಿಗಳು ಮಾರಮ್ಮನಿಗೆ ಕೊಡುವ ಕೋಣನ ಬಲಿಗೆ ಅವರದೇ ಆದ ಸಮರ್ಥನೆಗಳಿರುತ್ತವೆ. ಇವೆಲ್ಲವೂ ಸಂವಿಧಾನದ ಜಾತ್ಯತೀತ ನಿಲುವಿಗೆ ಒಗ್ಗುವುದಿಲ್ಲವಾದರೂ ಧರ್ಮದ ಕವಚ ತೊಟ್ಟುಕೊಳ್ಳುವುದರಿಂದ ಅಧಿಕಾರಸ್ಥರು ಖಂಡಿಸಲಾರರು. ಇಂದಿಗೂ ಸಹ ಆಡಳಿತದ ಎಲ್ಲ ರಂಗಗಳಲ್ಲಿಯೂ ಇಂಥ ಅಪಸರಣಗಳನ್ನು (aberrations) ನೋಡಬಹುದು. ಒಂದು ಕಛೇರಿಯಲ್ಲಿ ಶುಕ್ರವಾರದ ಪೂಜೆಯನ್ನು ಮಾಡುವ  ನೌಕರ ಬ್ರಾಹ್ಮಣನೇ ಯಾಕಾಗಬೇಕು? ಇಂಥ ಅಲಿಖಿತ ಕಟ್ಟಳೆಗಳನ್ನು ವಿಸ್ತರಿಸಿಕೊಂಡು ಹೋಗಲು ಲೇಖನದ ಮಿತಿಯೊಳಗೆ ಸಾಧ್ಯವಾಗಲಾರದು. ನನ್ನ ಜಾತಿಯವರು ಹೆಚ್ಚು ಸಮಾನರು ಎಂಬುದೇ ಜಾತಿಪದ್ಧತಿಯ ಧೋರಣೆ. ಇಲ್ಲದಿದ್ದರೆ ಒಬ್ಬ ಕುಲಪತಿ ತನ್ನ ಆಧಿಕಾರಾವಧಿಯಲ್ಲಿ ತನ್ನ ಜಾತಿಯ ಸಿಬ್ಬಂದಿಯನ್ನೆ ಹೆಚ್ಚು ನೇಮಕ ಮಾಡುವುದು, ಒಬ್ಬ ಪ್ರಾಧ್ಯಾಪಕ ತನ್ನ ಜಾತಿಯ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡುವುದು ಸಾಧ್ಯವಾಗುವುದಿಲ್ಲ. ಜಾತಿ, ಭ್ರಷ್ಟಾಚಾರಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂಬುದನ್ನು ಈ ದೇಶ ಅರಿತುಕೊಳ್ಳಬೇಕಾಗಿದೆ. ಒಬ್ಬ ಕಡು ಭ್ರಷ್ಟನೂ ಸಹ ಕಡತ ತನ್ನ ಜಾತಿಯವನಿಗೆ ಸಂಬಂಧಿಸಿದ್ದರೆ ಅದನ್ನು ಸ್ವಲ್ಪ ಅನುಕಂಪದಿಂದಲೇ ನೋಡುತ್ತಾನೆ. ಪಕ್ಷಪಾತ ನೀತಿಗೆ ಬಲಿಷ್ಠ, ದುರ್ಬಲ ಜಾತಿ ಎಂಬುವುದಿಲ್ಲ. ಕುರ್ಚಿ ದಕ್ಕಿದಾಗ ಬಲಿಷ್ಠ ದುರ್ಬಲನ ವಿರುದ್ಧವೂ, ದುರ್ಬಲ ಬಲಿಷ್ಠನ ವಿರದ್ಧವೂ ಸೇಡು ತೀರಿಸಿಕೊಳ್ಳುತ್ತಿರುತ್ತಾನೆ.
ರಾಜಕೀಯ ವ್ಯವಸ್ಥೆಯಲ್ಲಿ ‘ನನ್ನ ಜಾತಿಯವನು ಗೆಲ್ಲಲಿ’ ಎಂಬ ವಾಂಛೆ ಬಲಿಷ್ಠ ಜಾತಿಗಳ ಒಗ್ಗೂಡುವಿಕೆಗೆ ಕಾರಣವಾಗಿದೆ. ಅದೊಂದು ಸಾಂಕೇತಿಕ ಒಗ್ಗೂಡುವಿಕೆ ಅಷ್ಟೆ. ಆ ಕಾರಣದಿಂದಾಗಿ ಆ ಜಾತಿಯ ಎಲ್ಲರೂ ಫಲಾನುಭವಿಗಳಾಗಲು ಸಾಧ್ಯವಿಲ್ಲ ಅಥವಾ ಕನಿಷ್ಠ ಪ್ರತಿಫಲ ಪಡೆಯಲು (ರುಸುವತ್ತು ಹೊರತು) ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೂ ಪ್ರತಿಭೆ (ಮೆರಿಟ್) ಯನ್ನು ಮೆಟ್ಟಿ ಜಾತಿ ಸಮೂಹ  ತನ್ನ ನಾಯಕನನ್ನು ಆರಿಸುತ್ತದೆ. ಶತಮಾನಗಳಿಂದ ಅವಕಾಶ ವಂಚಿತ ಜಾತಿಗಳಿಗೆ ಕಾನೂನಿನ ಮೂಲಕ ನೀಡಿರುವ ಮೀಸಲಾತಿಯನ್ನು ಮೆರಿಟ್‍ನ ನೆಪವೊಡ್ಡುತ್ತಾ ವಿರೋಧಿಸುವ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪಂಡಿತರು ಜಾತಿಪದ್ಧತಿಯಿಂದ ನಿರಂತರವಾಗಿ ಹತವಾಗುತ್ತಿರುವ ಪ್ರತಿಭೆಯ ಬಗ್ಗೆ ಮಾತಾಡುವುದಿಲ್ಲ, ಜಾಣ  ಮೌನವಹಿಸುತ್ತಾರೆ.  ಪ್ರಾಯಶಃ ಇಂದು ಎಲ್ಲ ಪಕ್ಷಗಳು ವಂಶಾಡಳಿತಕ್ಕೆ ಜೋತು ಬಿದ್ದಿರುವುದು ಜಾತಿಪದ್ಧತಿಯಲ್ಲಿ ಪೂರ್ವಗ್ರಹವಿಲ್ಲದ(ದೆ) ಒಬ್ಬ ನಿಜ ನಾಯಕನನ್ನು ಆರಿಸಲು ಸಾಧ್ಯವಾಗದಿರುವ ಕಾರಣದಿಂದ ಎಂದು ಕಾಣುತ್ತದೆ.
ಇಂಥ ವ್ಯವಸ್ಥೆಯಲ್ಲಿ ಬಹು ಸಂಖ್ಯಾತರಾಗಿರುವ ಅಸಂಘಟಿತ ಸಣ್ಣ ಜಾತಿಗಳಿಗೆ ಆಗುತ್ತಿರುವ ಅನ್ಯಾಯ ಹೇಳತೀರದು. ಜಾತಿ ಲೆಕ್ಕಾಚಾರದಂತೆಯೆ ರಾಜಕೀಯ ನೇತೃತ್ವ ಪಡೆಯುತ್ತಿರುವ ಈ ದೇಶದಲ್ಲಿ ಅವರು ಹೆಚ್ಚೆಂದರೆ ಕೆಳಮಧ್ಯಮ ವರ್ಗದಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಸ್ವಾತಂತ್ರ್ಯಾನಂತರದ 62 ವರ್ಷಗಳಲ್ಲಿ ದಲಿತ, ಹಿಂದುಳಿದ ಜಾತಿಗಳು ಬಂಡವಾಳ ಶಾಹಿಗಳ ಪಟ್ಟಿಯಲ್ಲಿ ಹೆಸರು ದಾಖಲಿಸಲು ಸಾಧ್ಯವಾಗದಿರುವುದಕ್ಕೆ ಕಾರಣ ಜಾತಿ ಪದ್ಧತಿಯೆಂಬ  ದುರಂತ ವ್ಯವಸ್ಥೆ. ಈ ಭಸ್ಮಾಸುರ ಸ್ವರೂಪೀ ಜಾತಿಯ ಸೃಷ್ಟಿಗೆ ಕಾರಣವಾದ ‘ವೈದಿಕತೆ’ ಇಂದು ಎಷ್ಟು ಅಸಹಾಯಕವಾಗಿದೆ ಎಂದರೆ ತನ್ನನ್ನು ಓಲೈಸಿ ಬಂದ ಕಾರಣಗಳಿಗೆ ಬೇಡಿದ ವರವನ್ನು ದಯಪಾಲಿಸಿ ತಾನೇ ಪೇಚಿಗೆ ಸಿಕ್ಕಿ ಪರದಾಡುವ ಪರಶಿವನಂತಾಗಿದೆ.
ಕೇವಲ ಆಂತರಿಕ ಸಮಸ್ಯೆಗಳೆ? :
ಭಾರತ ಸರ್ಕಾರವು ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳನ್ನು  ಕೇವಲ ಆಂತರಿಕ ಸಮಸ್ಯಗಳೆಂದು ತಿಳಿದರೆ ಸಾಲದು.  ಈ ಸಮಸ್ಯೆಗಳು ಜನರ ಮನದಾಳದಲ್ಲಿ ಸ್ಥಾಪಿತವಾಗಿರುವುದು ಶತಶತಮಾನಗಳಿಂದ ಸ್ವಾರ್ಥ ಹಿತಾಸಕ್ತಿಗಳು ಭಿತ್ತಿದ ಮೌಢ್ಯದಿಂದ  ಮತ್ತು ಅದು ಗಟ್ಟಿಗೊಳ್ಳುತ್ತಿರುವುದು ಧಾರ್ಮಿಕ ಒತ್ತಾಸೆಯಿಂದ.  ಇದು ದೇಶಕ್ಕೂ ಮತ್ತು ಧರ್ಮಕ್ಕೂ ಒಂದು ಕಳಂಕವಾಗಿರುವುದು ಸತ್ಯ. ಆದ್ದರಿಂದ ಅದನ್ನು ತೊಳೆದುಕೊಳ್ಳುವುದಕ್ಕೆ ದೇಶವು ಮತ್ತು ಧರ್ಮವು ಕಟು ಬದ್ಧವಾಗಬೇಕು.  ಅದಕ್ಕಾಗಿ ವಿಶ್ವಸಂಸ್ಥೆಯಂಥ ಹೊರಗಿನ ಸ್ವಾಯತ್ತ ಸಂಸ್ಥೆಗಳ ಸಹಾಯ ಪಡೆಯುವುದಕ್ಕೆ ಹಿಂಜರಿಯಬಾರದು.  ರೋಗಿಯೊಬ್ಬನು ವೈದ್ಯನ ಮುಂದೆ ತನ್ನ ರೋಗನ್ನು ಹೇಳಿಕೊಳ್ಳಲೇಬೇಕು. ಆಗಲೇ ಚಿಕಿತ್ಸೆ ಸಾಧ್ಯ ಹಾಗೂ ಸುಲಭ.  ಸಂಕೋಚಪಟ್ಟುಕೊಂಡರೆ ರೋಗವು ಉಲ್ಬಣಿಸುತ್ತದೆ, ರೋಗಿಯನ್ನೆ ತಿನ್ನುತ್ತದೆ.  ವಿಶ್ವಸಂಸ್ಥೆ ಇರುವುದೇ ಜಾಗತಿಕ ನೆಲೆಯಲ್ಲಿ ಸಮಸ್ಯೆಗಳನ್ನು  ಎತ್ತಿಕೊಂಡು ನೊಂದ ದೇಶಗಳಿಗೆ ಸಹಾಯ ಹಸ್ತ ಚಾಚುವುದು.  ಮಾನವನ ಮೂಲಭೂತ ಹಕ್ಕುಗಳ ವಿಷಯದಲ್ಲಿ ಭಾರತದಲ್ಲಾಗುತ್ತಿರುವ ಕುಲಸಂಬಂಧೀ (ethnic) ಒಳ ಹಿಂಸೆಗಳು ಅಪಾರ ಮತ್ತು ಅನನ್ಯ. ವಂಶ ಪಾರಂಪರ್ಯವಾಗಿ ಕೆಲವು ಕೆಳಜಾತಿಗಳು  ಮಾಡುತ್ತಿರುವ ಕೆಲಸಗಳು ಖಂಡನೀಯವು ಮತ್ತು ಅಮಾನವೀಯವೂ ಆಗಿವೆ.
ದೇಶದಾದ್ಯಂತ ಇಂದಿಗೂ ಬರಿಗೈಯಲ್ಲಿ ಕಕ್ಕಸು ತೊಳೆಯುವ, ತಲೆಯ ಮೇಲೆ ಮಲ ಹೊರುವವರ ಸಂಖ್ಯೆ 3.40 ಲಕ್ಷಕ್ಕೂ ಅಧಿಕವಾಗಿದೆ ಎಂದು ಹೇಳಲಾಗಿದೆ.  ದೇಶದ ರಾಜಧಾನಿಯೂ ಸೇರಿದಂತೆ ಮುಂದುವರೆದ ಅನೇಕ ರಾಜ್ಯಗಳಲ್ಲಿ ಈ ಪದ್ಧತಿ ಇನ್ನೂ ಜಾರಿಯಲ್ಲಿದೆ. ಸತ್ತ ದನವನ್ನು  ಸುಲಿಯುವುದಕ್ಕೆ, ಚರ್ಮ  ಹದ ಮಾಡುವುದಕ್ಕೆ, ಚಪ್ಪಲಿ ಹೊಲಿಯುವುದಕ್ಕೆ ಒಂದೊಂದು ಜಾತಿಗಳಿರುವುದು ಅವು ಇನ್ನೂ ಅನೂಚಾನವಾಗಿ ಮುಂದುವರೆದಿರುವುದು ಗುಟ್ಟಿನ ವಿಷಯಗಳಲ್ಲ.  ಇಂಡಿಯಾದ ಸಂಸತ್ತು ಮತ್ತು ವಿಧಾನ ಸಭೆಗಳು ಕಣ್ಣುಮುಚ್ಚಿ ಬಿಡುವುದರೊಳಗೆ ಮಾನವ ಹಕ್ಕುಗಳನ್ನು ಕುರಿತ ಮಸೂದೆಗಳನ್ನು ಮಂಡಿಸಿ ಪಾಸುಮಾಡಿ ಕಾನೂನು ಹೊರಡಿಸುತ್ತವೆ.  ಆದರೆ ಅವು ಜಾರಿಯಾಗುವ ಸಾಧ್ಯತೆಗಳು ಕಡಿಮೆ.  ಮಾಹಿತಿ ತಂತ್ರಜ್ಞಾನದ ಮೂಲಕ ಅತಿ ಶೀಘ್ರವಾಗಿ ಅಂಗೈ ಪರದೆಯಲ್ಲಿ ಮೂಡುವ ಸತ್ಯ ದರ್ಶನಗಳನ್ನು ಅಲ್ಲಗಳೆಯಲು ಇನ್ನೂ ಸಾಧ್ಯವಿಲ್ಲ.  ಆದ್ದರಿಂದ ಸಂಕೋಚಗಳನ್ನು, ಮುಜುಗರಗಳನ್ನು ಬದಿಗಿಟ್ಟು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಗಳಿಂದ ನಲುಗುತ್ತಿರುವ ಭಾರತ ಠರಾವನ್ನು ಬೆಂಲಿಸುವ ಜಾಣ್ಮೆ ತೋರಬೇಕು. ನೇಪಾಳದಂತಹ ನೆರೆರಾಜ್ಯ ಸಮಿತಿಯ ಠರಾವನ್ನು ಬೆಂಬಲಿಸಿರುವುದು ಭಾರತಕ್ಕೆ ನುಂಗಲಾರದ ತುತ್ತಾಗಿದೆ. ಬೆಂಬಲ ನೀಡದಿರುವುದಕ್ಕೆ ಕಾರಣ ರಹಿತವಾಗಿರುವ ಭಾರತ ವಿಶ್ವದ ಇತರ ರಾಷ್ಟ್ರಗಳ ಎದುರು ತಲೆ ತಗ್ಗಿಸುವಂತಾಗುತ್ತದೆ.  ಆದ್ದರಿಂದ ಈಗ ಒತ್ತಡ ಹೆಚ್ಚಾಗಿದೆ.  ಜಾತಿ ಪದ್ಧದತಿಯ ಮೂಲ ಹಿಂದೂ ಧರ್ಮವೇ ಎಂಬುದು ಕಹಿಯಾದರೂ ಸತ್ಯ.  ಒಂದು ಜಾತಿ ಇನ್ನೊಂದು ಜಾತಿಯ ಮೇಲೆ ಅಥವಾ ಕೆಳಗೆ ಇರುವುದರಿಂದ ಭೇದ ನೀತಿಯನ್ನು ಅಲ್ಲಗಳೆಯಲು ಸಾಧ್ಯವಾಗುವುದಿಲ್ಲ. ವಿಶ್ವಸಂಸ್ಥೆಯು  ಜನಾಂಗೀಯ ಭೇದ ವಿನಾಶ ಸಮಿತಿಯನ್ನು ರಚಿಸಿರುವ ಉದ್ದೇಶವೇ ತಾರತಮ್ಯ ನೀತಿಯನ್ನು ಗುರುತಿಸಿ ನಿರ್ಮೂಲನ ಮಾಡುವ  ಕಾರಣವಾಗಿರುವುದರಿಂದ ಇದನ್ನು ಕೈಬಿಡಲು ಅಥವಾ ಮರೆಮಾಚಲು ಸಹ ಸಮಿತಿಗೆ ಸಾಧ್ಯವಾಗುವುದಿಲ್ಲ.
ಸಮಾನತೆ ಇಲ್ಲದೆಡೆಯಲ್ಲಿ ಸಮಾನ ಅವಕಾಶಗಳು ಇರಲಾರವು.  ಹುಟ್ಟಿನ ಮೂಲದ ಆಧಾರದ ಮೇಲೆ ಸಮಾನ ಅವಕಾಶಗಳಿಂದ ವಂಚಿತರಾದವರು ಮಾನವ ಹಕ್ಕುಗಳ ವಂಚಿತರು ಅಷ್ಟೇ ಅಲ್ಲ, ದೌರ್ಜನ್ಯಕ್ಕೆ ಒಳಗಾದವರೂ ಆಗಿರುತ್ತಾರೆ.  ಆದ್ದರಿಂದ ವಿಶ್ವಸಂಸ್ಥೆಯ ನಿಲುವನ್ನು ಒಪ್ಪಲೇ ಬೇಕಾಗುತ್ತದೆ.  ಜಾತಿಭೇದ ನೀತಿಯನ್ನು ಖಂಡಿಸಲೇಬೇಕಾಗುತ್ತದೆ.  ಇದನ್ನು ಭಾರತ ಅರಿಯಬೇಕಾಗಿದೆ. 2001 ರಲ್ಲಿ ದರ್ಬಾನ್‍ನಲ್ಲಿ ನಡೆದ ಜನಾಂಗೀಯ ಮತ್ತು ಇತರ ಭೇದ ನೀತಿ ಕುರಿತ ವಿಶ್ವ ಸಮ್ಮೇಳನದಲ್ಲಿ  ಶ್ರುತಪಡಿಸಿದ  ಡರ್ಬಾನ್  ಪ್ರಕಟಣೆಯ ಕಾರ್ಯಸೂಚಿಯಲ್ಲಿದು ಸ್ಪಷ್ಟವಾಗಿದೆ. 2001 ರ ಡರ್ಬಾನ್  ಸಮ್ಮೇಳನದಲ್ಲಿ ಜಾತಿ ತಾರತಮ್ಯವನ್ನು ಚರ್ಚೆಗೆ ತರಲು ಸಾಧ್ಯವಾಗಲಿಲ್ಲ.  ಆದರೂ ಅದು  ದಲಿತರು ನಡೆಸಿದ ಸಂಘಟಿತ ಒತ್ತಡ ತಂತ್ರದಿಂದ  ಅನುವಂಶೀಯ ವೃತ್ತಿ ತಾರತಮ್ಯ ಎಂಬ ಹೆಸರಿನಲ್ಲಿ ತುಸು ಚರ್ಚೆಗೊಳಾಯಿತು. ಈಗ ಚರ್ಚೆ ಗೆತ್ತುಕೊಂಡಿರುವುದು ಅದರ ಅನುಸರಣಾ ವರದಿ.
ಶೌಚಾಲಯದ ಮುರುಕು ಗೋಡೆಯ ಇಟ್ಟಿಗೆಯ ಚೂರು:
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿರುವ ನವಿ ಪಿಳ್ಳೆ, ತಮಿಳು ಮೂಲದ ದಕ್ಷಿಣ ಆಫ್ರಿಕಾದವರು. ಅವರಿಗೆ ಜಾತಿಪದ್ಧತಿಯ ಉಪದ್ರವಗಳು ಮತ್ತು ದಕ್ಷಿಣ ಏಷಿಯಾ ದೇಶಗಳ ಸಾಮಾಜಿಕ ನೀತಿ ಚೆನ್ನಾಗಿ ತಿಳಿದಿದೆ. ಅವರು ಠರಾವಿಗೆ ಬೆಂಬಲ ನೀಡಿದ  ನೇಪಾಳದ ವಿದೇಶಾಂಗ ಸಚಿವರನ್ನು ಅಭಿನಂದಿಸಿ ಇದು ಜಾತಿಪದ್ಧತಿಯ ಸಮಸ್ಯೆಗಳನ್ನು ಸ್ವತಃ  ಹೊತ್ತಿರುವ ದೇಶ ಇಟ್ಟ ಮಹತ್ವದ ಹೆಜ್ಜೆ, ಇದನ್ನು ಇತರರು ಪಾಲಿಸಬೇಕು ಎಂದು ಹೇಳಿದ್ದಾರೆ.
ಮಾನವ ಹಕ್ಕುಗಳ ಅಂತಃ ಸತ್ವವೆಂದರೆ ಮನುಷ್ಯ ಮನುಷ್ಯನ ನಡುವೆ ಸಮಾನತೆ ಮತ್ತು  ಸಮಾನ ಅವಕಾಶಗಳು ಇರುವಂತೆ ನೋಡಿಕೊಳ್ಳುವುದು. ಜಾತಿಪದ್ಧತಿ ಈ ಮೂಲ ಹಕ್ಕುಗಳನ್ನೆ ನಿರಾಕರಿಸುತ್ತದೆ. ಆದ್ದರಿಂದ ಅದು ಮಾನವ ಹಕ್ಕಿನ ಉಲ್ಲಂಘನೆಯ ಪರಿಧಿಯೊಳಗೆ ಬರುತ್ತದೆ. ವಿಶ್ವಸಂಸ್ಥೆಯ ಜನಾಂಗೀಯ ಭೇದ ವಿನಾಶ ಸಮಿತಿ ತೆಗೆದುಕೊಂಡಿರುವ ನಿಲುವು ಸರಿಯಾಗಿದೆ. ಮಾನವ ಹಕ್ಕುಗಳ ಹೈ ಕಮಿಷನರ್ ನವಿ ಪಿಳ್ಳೆ ‘ಜಾತಿ ಎಂಬ ನಾಚಿಕೆಗೇಡು ಪರಿಕಲ್ಪನೆಯನ್ನು ನಾಶ ಮಾಡುವ ಕಾಲ ಕೂಡಿಬಂದಿದೆ’ ಎಂದು ಆವೇಶ ಭರಿತರಾಗಿ ಹೇಳುತ್ತಾರೆ. ಇದಕ್ಕೆ ಕಾರಣ ಜಾತಿಯಿಂದ ನೊಂದ ಕೆಲವು ಜನರು ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಮುರಿದು ಬಿದ್ದ ಶೌಚಾಲಯದ ಗೋಡೆಯ ಇಟ್ಟಿಗೆಯ ಚೂರೊಂದನ್ನು ಕೊಟ್ಟರಂತೆ.  ಆ ಇಟ್ಟಿಗೆ ಚೂರು ಬರಿಗೈಯಲ್ಲಿ ಕಕ್ಕಸು ತೊಳೆಯುವ ಕೆಳಜಾತಿ ಜನರ ಜಾಗತಿಕ ಹೋರಾಟದ ಸಂಕೇತವಾಗಿ ಅವರಿಗೆ ಕಂಡಿತಂತೆ.  ಇದು ಆ ಜನ ತಾವು ಬಯಸಿ ಮಾಡುತ್ತಿರುವುದಲ್ಲ.  ಕೆಳಜಾತಿಯ ಹುಟ್ಟಿನ ಕಾರಣದಿಂದ ಮಾಡುತ್ತಿರುವುದು. ಅದನ್ನು ತಮ್ಮ  ಪೂರ್ವಜರಿಂದ ಬಳುವಳಿಯಾಗಿ  ಪಡೆದದ್ದು, ಈ ಕಾರಣಕ್ಕಾಗಿಯೆ ಜೀವನ ಪರ್ಯಂತ ‘ಮೈಲಿಗೆ’ ಅನುಭವಿಸುತ್ತಿರುವುದು ಮತ್ತು ಹೊರಗೆ ಹಾಕಲ್ಪಟ್ಟು  ಮುಟ್ಟಿಸಿಕೊಳ್ಳಬಾರದವರಾಗಿರುವುದು.
ಕಾಂಗ್ರೆಸ್‍ನ ಯುವ ನೇತಾರ ಚುನಾವಣೆಗಳ ಗೆಲುವಿನ ಶಿಲ್ಪಿ ಎಂದೇ ಖ್ಯಾತರಾಗಿರುವ  ರಾಹುಲ್ ಗಾಂಧಿ ಇತ್ತೀಚೆಗೆ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.  ಅಕ್ಟೋಬರ್ 2, ಗಾಂಧಿ ಜಯಂತಿಯಂದು ಉತ್ತರ ಪ್ರದೇಶದಲ್ಲಿ ಇಡೀ ಪಕ್ಷದ ಜನ ಪ್ರತಿನಿಧಿಗಳಿಗೆ ರಾಜ್ಯಾದಾದ್ಯಂತ ಹಳ್ಳಿಗಳ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡಲು  ಕರೆ ನೀಡಿದ್ದರು. ಅದು ವಿಫಲವಾಯಿತೆಂಬುದು ಬೇರೆ ಮಾತು.  ಆದರೆ ಅವರ ಉದ್ದೇಶ ಮತ್ತು ದಲಿತರ ಬಗೆಗೆ ತೋರುತ್ತಿರುವ ಕಳಕಳಿ ಅವರ ವೈರಿಗಳ ಪ್ರಶಂಸೆಯನ್ನು ಗಳಿಸುತ್ತಿದೆ. ಅವರೊಮ್ಮೆ ಭಾರತಕ್ಕೆ ಹಲವು ಸಲ ಭೇಡಿ ನೀಡಿದ್ದ ಇಂಗ್ಲೆಂಡಿನ ಪತ್ರಕರ್ತ ಮಿತ್ರರೊಬ್ಬರನ್ನು ಉತ್ತರ ಪ್ರದೇಶದ ಹಳ್ಳಿಯೊಂದಕ್ಕೆ ಕರೆದೊಯ್ದು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಆ ಮಿತ್ರರು ಈ ಭಾರತದ ಪರಿಚಯವೇ ನನಗಿರಲಿಲ್ಲ ಎಂದು ಉದ್ಗರಿಸಿದ್ದರು! ಈ ಹೊತ್ತಿನಲ್ಲಿ ರಾಹುಲ್ ಗಾಂಧಿಯವರಿಗೆ ದಲಿತೋದ್ಧಾರದ ನೈಜ ಕಳಕಳಿ ಇದ್ದಲ್ಲಿ ವಿಶ್ವಸಂಸ್ಥೆಯ ಠರಾವನ್ನು ಬೆಂಬಲಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು. ಈ ಸಂಸ್ಕೃತಿಯ ಕುರೂಪತೆಯನ್ನು ತೊಡೆದು ಹಾಕಲು ರಾಜಕೀಯ ಬೆರೆಸದೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಜಾತಿ ಎನ್ನುವುದು ಕೇವಲ ದಲಿತರ ಸಮಸ್ಯೆಯಾಗಿ ಉಳಿದರೆ ಜಾತಿ ನಾಶವಾಗಲಾರದು. 1936 ರಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌‌‌‌‌‌‌ರವರು ಲಾಹೋರ್‌‌‌‌‌‌‌ನಲ್ಲಿ  ‘ಜಾತ್ ಪಾತ್ ತೋಡಕ್ ಸಮಿತಿ’ ಏರ್ಪಡಿಸಿದ್ದ ಸಭೆಗಾಗಿ ಸಿದ್ಧಪಡಿಸಿದ  ಜಾತಿ ವಿನಾಶ ಕುರಿತ ಐತಿಹಾಸಿಕ ಭಾಷಣ ಹಿಂದೂ ಮುಖಂಡರುಗಳನ್ನು ತಲ್ಲಣಗೊಳಿಸಿತು. ಅದು ದಲಿತೇತರ ಹಿಂದುಗಳನ್ನು  ಕುರಿತು ಬರೆದ ಭಾಷಣ.  ಗಾಂಧೀಜಿಯವರು ಸಹ ಜಾತಿ ಭೇದವನ್ನು ಅಳಿಸಲು ಮೇಲುಜಾತಿಯ ಮನಸ್ಸುಗಳ ಬದಲಾವಣೆಯನ್ನು ಬಯಸಿದ್ದರು.  ಆದ್ದರಿಂದ, ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಂದ ಹಿಡಿದು ಭಂಗಿ ಜನರವರೆಗೆ ಎಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಜಾತಿ ಭೇದ ಮತ್ತು ಅಸ್ಪೃಶ್ಯತೆಯ ನಾಶ ಸಾಧ್ಯವಾಗಬಹುದು.

ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ : ವರ್ತಮಾನ

Wednesday, August 29, 2012

बाबासाहेब आणि भारतीय संविधान

 
 
डॉ. संदीप नंदेश्वर, नागपूर ९२२६७३४०९१
बाबासाहेब संविधान अमलात येण्याच्या आधीच भारतीय घटनेचे शिल्पकार बनले होते.

महावीर सांगलीकर हा बाळबोध भट आजकाल भारतीय संविधान आणि बाबासाहेबांच्या योगदानावर बरळतो आहे...त्याला उत्तर द्यावे इतकी त्याची लायकी नाही... पण आज संविधानाच्या संबंधाने काही प्रश्न उपस्थित होतात म्हणून संविधानाविषयी निर्माण झालेला संभ्रम दूर व्हायला हवा....

भारतीय संविधानाची निर्मिती प्रक्रिया १९०९ च्या मोर्ले-मिंटो सुधारणा कायद्यापासून सुरु झाली आहे. आणि शेवट हा २६ नोव्हेंबर १९४९ ला संविधान सभेच्या संविधान स्वीकारापर्यंत ती चालली आहे. या मध्यंतरीच्या काळात १९१९ चा montague - Chemsford सुधारणा कायदा महत्वाचा आहे. ज्या कायद्याने भारतीयांना मर्यादित राजकीय, आर्थिक, सामाजिक स्वातंत्र्य बहाल केले. हा १९१९ चा कायदा बनण्याआधी साउथबुरो कमिशन १९१८ समोर डॉ. बाबासाहेबांनी निवेदन देऊन साक्ष दिली होती. त्यात ज्या मागण्या प्रामुख्याने बाबासाहेबांनी केल्या होत्या त्या १९१९ च्या montague - Chemsford सुधारणा कायदात समाविष्ट करण्यात आल्या होत्या. बाबासाहेब वगळता तिथे या देशातील कुठल्याही अन्य व्यक्ती वा संघटनांचा समावेश का झाला नाही. फक्त डॉ. बाबासाहेब आंबेडकर यांनाच या देशाच्या स्वातंत्र्याची आणि या देशातल्या जनतेच्या हिताची काळजी होती हेच दिसून येते.

त्यानंतर १९२७ ला सायमन कमिशन इथल्या परिस्थितीचा अभ्यास करायला भारतात आले. त्या कमिशन ला महात्मा गांधीच्या नेतृत्वातील कॉंग्रेस ने विरोध केला. आणि Go Back सायमन चा नारा लावला. कॉंग्रेस ने कुठलेही सहकार्य या कमिशन ला केले नाही. परंतु बाबासाहेबांनी या कमिशन ला सुद्धा आपल्या मागण्यांचे निवेदन सदर केले. त्या निवेदनात इथल्या अस्पृश्यांच्या कल्याणासाठी इंग्रज सरकारने काय केले पाहिजे यासोबतच भारतातील संविधान निर्मितीसाठी आणि राजकीय प्रांतिक विधीमंडळाची मांडणी व रचना कशी असावी याविषयी सुद्धा मार्गदर्शन केले होते. तेव्हा कॉंग्रेस काय; गांधी काय; तर या देशातले इतर अन्य महा-(पुरुष), संस्था-संघटना निष्काम कर्मयोगाच्या समाधी अवस्थेत बसल्या होत्या.

१९२७ च्या सायमन कमिशन ने केलेल्या शिफारशीनुसारच इंग्रज संसदेने गोलमेज परिषद बोलावली. त्यात प्रामुख्याने बाबासाहेबांना पुनःच्या आमंत्रित करण्यात आले. या पहिल्या गोलमेज परिषदेला गांधीप्रणीत कॉंग्रेस ने बहिष्कार घातला. परंतु बाबासाहेबांनी गोलमेज परिषदेत हजेरी देत इंग्रज सरकारला या देशाला कश्याप्रकारच्या कायद्याची गरज आहे. हे पटवून दिले. भारतातील प्रांतिक आणि केंद्रीय विधीमंडळांची रचना कशी असावी हे सुद्धा पटवून दिले. हे गांधी आणि कॉंग्रेस ला माहित झाल्याने गांधी व कॉंग्रेस चे महत्व टिकून राहावे म्हणून गांधी दुस-या गोलमेज परिषदेला हजार झाले. तिथेही गांधी आणि बाबासाहेब यांच्यात भारतीय सामाजिक परिस्थिती लक्षात घेता आवश्यक असणा-या तरतुदी संबंधाने मोठ्या प्रमाणात खडाजंगी झाली. शेवटी गोलमेज परिषदेने बाबासाहेबांच्या बाजूने ठराव घेतला. गांधींना त्यात सपशेल अपयश पचवावे लागले आणि बाबासाहेबांपुढे घुताने टेकावे लागले. (कृपया पुणे कराराच्या संबधाचा जो विषय आहे त्यावर मी बोलत नाही. तो विषय वगळता अन्य ठरावावर मी बोलत आहे) याच गोलमेज परिषदेने घेतलेल्या ठरावांचा जाहीरनामा प्रसिद्ध करण्यात आला. आणि त्याचेच रुपांतर पुढे १९३५ च्या कायद्यात झाले. म्हणजेच याही कायद्यात बाबासाहेबांचे योगदान मोठे आहे.

पुढे भारतीय संविधान निर्मितीच्या प्रक्रियेला इंग्रज सरकारकडून प्रयत्न करण्यात आले. त्यासाठी त्यांनी विविध आयोगांना भारतात पाठविले. त्यातलेच पहिले १९४२ ला परत सायमन कमिशन भारतात आले. तेव्हाही गांधीप्रणीत कॉंग्रेस ने त्याला विरोध केला. परंतु बाबासाहेबांनी मात्र सहकार्य केले. आपल्या मागण्यांचे निवेदन देत राहिले. त्यानंतर पुन्हा संविधान निर्मितीच्या संबंधाने निर्णय घेण्यासाठी क्रिप्स मिशन (त्रीमंत्री योजना म्हणून प्रसिद्ध) भारतात आले. तेव्हा थोडीशी कॉंग्रेस ची भूमिका मवाळ झाली होती. कारण प्रत्येक वेळेस बाबासाहेब आपल्या मागण्या इंग्रजांकडून मान्य करवून घेत होते. परत १९४६ ला माउंटबेटन च्या नेतृत्वात एक आयोग भारतात आले. जो संविधान सभेच्या निर्मितीसाठी शेवटचा आयोग ठरला. या सर्व इतिहासात बाबासाहेबांचे मोठे योगदान राहिले आहे. कॉंग्रेस किंवा गांधी किंवा अन्य कुणापेक्षा पेक्षा जास्त योगदान संविधान निर्मितीच्या पूर्वइतिहासात डॉ. बाबासाहेब आंबेडकरांचे राहिलेले आहे.

माउंटबेटन ने दिलेल्या अंतिम सूचनेवरून संविधान सभेच्या निवडणुका सुरु झाल्या. बाबासाहेब पश्चिम बंगाल प्रांतातून संविधान सभेवर निवडून आले. (तेव्हाही कॉंग्रेस ने बाबासाहेब संविधान सभेवर निवडून येऊ नये म्हणून प्रयत्नांची पराकाष्टा केली होती. कारण पूर्वइतिहास त्यांना माहित असल्याने...कॉंग्रेस चे काहीही चालले नसते म्हणून) ९ डिसेंबर १९४६ ला संविधान सभेची पहिली बैठक बोलाविण्यात आली. आणि भारतीय संविधानाचे प्रारूप कसे असावे यावर दीर्घ चर्चा झाली. या चर्चेत प्रत्येकच सदस्याला मते मांडण्याची संधी देण्यात आली. बाबासाहेबांना आपली मते मांडण्यासाठी वाट पहावी लागत होती.

अखेर १३ डिसेंबर १९४६ ला बाबासाहेबांना संविधान सभेसमोर संविधानाच्या प्रारुपावर मत मांडण्यासाठी अचानक आमंत्रित करण्यात आले. (अचानक यासाठी कि अनेक सदस्य बाकी असल्याने बाबासाहेबांना याची कल्पनाच नव्हती कि त्यांना या दिवशी आपली मते मांडवी लागतील म्हणून...) बाबासाहेबांनी सुरवातीलाच याचा उल्लेख केला कि "माझा नंबर आज लागेल याची मला कल्पना नव्हती. तशी पूर्वसूचना मला मिळाली असती तर मी पूर्वतयारीनिशी माझे मत मांडले असते. पण तरीही मी माझे मत मांडणार आहे..." बाबासाहेबांचे ते संविधान सभेतील पहिले भाषण सुरु झाले. संपूर्ण सभागृह अवाक होऊन अतिशय एकाग्रचित्त झाले होते.

बाबासाहेब एकावर एक मुद्दे आपल्या बुद्धिचातुर्याने संविधान सभेसमोर मांडत होते. सभागृहातील एकही सदस्य त्या बाबासाहेबाच्या भाषणाच्या वेळी उठला नाही कि जागचा हलला सुद्धा नाही. बाबासाहेबांच्या मुखातून जणू काही भविष्याचे संविधानाच बाहेर पडत होते. ज्यात संपूर्ण मानवजातीच्या कल्याणाची एक आचारसंहिताच लिहिली जात होती. बाबासाहेबांचे भाषण झाल्यावर सभागृह टाळ्यांच्या गळगळाटांने निनादून उठले. संपूर्ण सभागृहातील सदस्यांनी बाबासाहेबांच्या विद्वत्तेपुढे मानच झुकविली. बाबासाहेबांचे विरोधकही त्या भाषणाने इतके प्रभावी झाले कि त्यांच्या तोंडून कौतुकाचे शब्दही फुटत नव्हते.

अश्यातच भारत आणि पाकिस्थानाची फाळणी होण्याचे संकेत होते. ती झाली. बाबासाहेबांचा मतदार संघ पाकिस्तानात गेला. त्यामुळे संविधान सभेतील त्यांचे सदस्यत्व धोक्यात येणार होते. अश्या परिस्थितीत बाबासाहेबांचे समर्थक आणि संविधान सभेतील अन्य सभासद ज्यांनी बाबासाहेबांचे १३ डिसेंबर १९४६ चे भाषण ऐकले होते त्यांचा कॉंग्रेस वर दबाव निर्माण झाला. कॉंगेस ला पण बाबासाहेबांना संविधान सभेतील कामकाजापासून अलिप्त ठेवता येत नव्हते. कारण इतकी प्रचंड विद्वत्ता आणि कल्याणाचा जाहीरनामा संपूर्ण कॉंग्रेस मध्ये कुणाकडेही नव्हते. भारताचे संविधान बाबासाहेबंशिवाय बनणे अशक्यप्राय होते हे कॉंग्रेस चांगल्याने जाणून होती. म्हणून शेवटी बी जी खेरांना पत्र लिहून जयकरांचे मुंबई प्रांतातील संविधान सभेतील सदस्यत्व अन्य कारणाने रद्द करण्यात आले. आणि त्या टिकाणी बाबासाहेबांना संविधान सभेवर निवडून आणण्यात आले. कॉंग्रेस, संविधान सभा, भारत देश या सर्वांचीच ती गरज होती. बाबासाहेब संविधान सभेवर निवडून जाने सर्वांच्याच हिताचे होते. त्यानंतर बाबासाहेबांनी संविधानाच्या मसुदा समितीच्या अध्यक्षपदावरून केलेली कामगिरी आणि त्यांची संविधान सभेतील सर्व कलमांवर केलेली भाषणे म्हणजे या देशाचे भवितव्यच होते.

संविधान निर्मितीचा हा पूर्ण इतिहास आपण लक्षात घेतला तर बाबासाहेब संविधान अमलात येण्याच्या आधीच भारतीय घटनेचे शिल्पकार बनले होते. परंतु काही बांडगुळे ठराविक अंतराने बाबासाहेब आणी भारतीय संविधानावर चिखलफेक करतात. ती मोडून काढण्यासाठी हा इतिहास आम्ही लक्षात घेतला पाहिजे. या देशात संविधान किती माणसांपर्यंत पोहचला आहे ? हे पाहायचे असेल तर अलीकडच्या काळात अनेक उदाहरणे डोळ्यासमोर येत आहेत. इथली माणसे INDIAN PINAL CODE, HINDU LAW, COMPANY LAW, FAMILY LAW, CONTRACT LAW etc. अश्या अनेक कायद्यांची भेसळ भारतीय संविधानाशी करतात. उदा. "कसाबला लवकर फाशी होत नाही कारण संविधान जबाबदार आहे." "भ्रष्टाचार्यांना रोकता येत नाही. कारण संविधान जबाबदार आहे." सर्व प्रश्नांसाठी वेगळे कायदे असतांना ही बाळबोध माणसे सरसकट भारतीय संविधानाला आणि बाबासाहेबांना जबाबदार ठरवितात. हे किती हास्यास्पद आहे. आणि या देशातल्या अश्या बाळबोध माणसांमध्ये किती संविधानिक जागृती झाली आहे हे आपल्या लक्षात येईल.

बाबासाहेब आणि भारतीय संविधान यावर बोटे ठेवून उलटसुलट इतिहास मांडणा-या, वाचना-या, लिहिणा-या, सांगणा-या बाल्बोधांनी हा इतिहास वाचवा आणि नंतरच चर्चा करावी.


Tuesday, August 14, 2012

ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ

                                ದಿನೇಶ ಅಮೀನಮಟ್ಟು
ಮಳೆ ನಿಂತರೂ ಒಂದಷ್ಟು ಹೊತ್ತು ಮಳೆಹನಿ ನಿಲ್ಲುವುದಿಲ್ಲ. ಅಣ್ಣಾ ತಂಡವನ್ನು ಬರ್ಖಾಸ್ತುಗೊಳಿಸಲಾಗಿದ್ದರೂ ಅದು ಪ್ರಾರಂಭಿಸಿದ್ದ ಚಳವಳಿ ಬಗ್ಗೆ ಚರ್ಚೆ-ವಿಶ್ಲೇಷಣೆಗಳು ನಿಂತಿಲ್ಲ, ಇದು ಇನ್ನಷ್ಟು ಕಾಲ ಮುಂದುವರಿಯಲಿದೆ.

ಮಿಂಚಿಮರೆಯಾಗಿ ಹೋದ ಈ ಚಳವಳಿಯ ಗರ್ಭಪಾತಕ್ಕೆ ಕಾರಣರಾದ ಖಳನಾಯಕರು ಯಾರು ಎನ್ನುವುದನ್ನು ಗುರುತಿಸುವ ಕೆಲಸ ಈಗ ಪ್ರಾರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಎಲ್ಲರೂ ಅಣ್ಣಾತಂಡದ ಪ್ರಮುಖ ಸದಸ್ಯರಾದ ಅರವಿಂದ್ ಕೇಜ್ರಿವಾಲ್, ಕಿರಣ್‌ಬೇಡಿ ಮತ್ತು ಪ್ರಶಾಂತ್ ಭೂಷಣ್ ಮೇಲೆ ಎರಗಿಬಿದ್ದಿದ್ದಾರೆ.


`ಸೃಷ್ಟಿ, ಪಾಲನೆ ಮತ್ತು ಲಯ`ದ ಮೂರೂ ಕೆಲಸಗಳನ್ನು ಈ ತ್ರಿಮೂರ್ತಿಗಳೇ ಮಾಡಿದ್ದು ಎಂದು ಅಣ್ಣಾಬೆಂಬಲಿಗರು ಆರೋಪಿಸತೊಡಗಿದ್ದಾರೆ. ಚಳವಳಿ ಹಾದಿ ತಪ್ಪಲು ಕಾರಣವಾದ ಇವರ ಪಾತ್ರ  ಕ್ಷಮಿಸಿ ಬಿಡುವಂತಹದ್ದು ಖಂಡಿತ ಅಲ್ಲ.


ಆದರೆ ಇವರಷ್ಟೇ ಖಳನಾಯಕರೇ? ಹಾಗೆಂದು ತೀರಾ ಸರಳವಾಗಿ ತೀರ್ಮಾನಿಸಿಬಿಟ್ಟರೆ ಈ ಚಳವಳಿಯ ಸೋಲು-ಗೆಲುವುಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಾರದು.

ಈ ತ್ರಿಮೂರ್ತಿಗಳಷ್ಟೇ ಖಳರು ಅಲ್ಲದೆ ಇದ್ದರೆ ಬೇರೆ ಯಾರು ? ಕೆಲವರು ಅಣ್ಣಾಹಜಾರೆಯವರನ್ನೇ ಹೆಸರಿಸುತ್ತಾರೆ. ಸ್ವಲ್ಪ ಮಟ್ಟಿಗೆ ಇದು ನಿಜ ಕೂಡಾ. ಹಜಾರೆ ಅವರು ಸಜ್ಜನ, ಪ್ರಾಮಾಣಿಕ, ನಿಸ್ವಾರ್ಥಿ, ಸರಳಜೀವಿ ಎನ್ನುವುದರ ಬಗ್ಗೆ ಬಹಳ ಮಂದಿಗೆ ಅನುಮಾನ ಇಲ್ಲ.


ಆದರೆ ಈ ಗುಣಗಳಿಂದಷ್ಟೇ ನಾಯಕನಾಗಲು ಸಾಧ್ಯವೇ ಎನ್ನುವುದು ಪ್ರಶ್ನೆ. ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ನಂತರದಲ್ಲಿ ನಡೆದ ಎರಡು ಪ್ರಮುಖ ಚಳವಳಿಗಳನ್ನು ಮುನ್ನಡೆಸಿದ್ದ ಗಾಂಧೀಜಿ ಮತ್ತು ಜಯಪ್ರಕಾಶ್ ನಾರಾಯಣ್ ಕೇವಲ ಸಜ್ಜನರು ಮತ್ತು ಪ್ರಾಮಾಣಿಕರಾಗಿರಲಿಲ್ಲ.


ಅವರು ಬುದ್ದಿವಂತರೂ ಆಗಿದ್ದರು.  ವಿಸ್ತಾರವಾದ ಓದು, ರಾಷ್ಟ್ರ-ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಅರಿವು, ಪ್ರವಾಸ ಮತ್ತು ಜನರ ಜತೆಗಿನ ಒಡನಾಟ ಅವರಿಗೆ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುವ ತೀಕ್ಷ್ಣಗ್ರಹಣಶಕ್ತಿಯನ್ನು ತಂದು ಕೊಟ್ಟಿತ್ತು.  ಒಂದು ಅನ್ನದ ಅಗುಳನ್ನು ಮುಟ್ಟಿಯೇ ಪಾತ್ರೆಯಲ್ಲಿದ್ದ ಅನ್ನ ಬೆಂದಿದೆಯೇ ಇಲ್ಲವೇ ಎನ್ನುವುದನ್ನು ಹೇಳುವಷ್ಟು ಸಮಾಜದ ನಾಡಿಮಿಡಿತವನ್ನ್ನು ಬಲ್ಲವರಾಗಿದ್ದರು.

ಜನಪ್ರಿಯತೆಯಲ್ಲಿ ತೇಲಿಹೋಗದೆ ಅದನ್ನು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಳ್ಳುವ ನಿರ್ವಹಣಾ ಶಕ್ತಿ ಮತ್ತು ಸಂಯಮ ಅವರಲ್ಲಿತ್ತು. ಜಾತಿ,ಧರ್ಮ,ಪ್ರದೇಶಗಳಲ್ಲಿ ಒಳಗಿಂದೊಳಗೆ ಒಡೆದುಹೋಗಿರುವ ದೇಶದಲ್ಲಿ ಒಂದು ಸಾಮೂಹಿಕ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗಲು ಇಂತಹ ಸಾಮರ್ಥ್ಯಬೇಕಾಗುತ್ತದೆ. ಈ ಗುಣಗಳು ಅಣ್ಣಾಹಜಾರೆಯವರಲ್ಲಿ ಇದ್ದಿದ್ದರೆ ಭ್ರಷ್ಟಾಚಾರ ವಿರೋಧಿ ಚಳವಳಿ ನಡುಹಾದಿಯಲ್ಲಿಯೇ ಅಪಘಾತಕ್ಕೆ ಈಡಾಗುತ್ತಿರಲಿಲ್ಲ.

ಅಣ್ಣಾಚಳವಳಿ ಹಾದಿ ತಪ್ಪಲು ಮಾಧ್ಯಮರಂಗ ವಹಿಸಿದ ಖಳನಾಯಕನ ಪಾತ್ರವೇ ಕಾರಣ ಎನ್ನುವವರೂ ಇದ್ದಾರೆ. ಈ ಆರೋಪವನ್ನು ಮಾಡುವ ಅಣ್ಣಾತಂಡದ ಸದಸ್ಯರು ಮತ್ತು  ಬೆಂಬಲಿಗರು  ಕೊನೆದಿನಗಳಲ್ಲಿ ಮಾಧ್ಯಮಗಳ ನಿರ್ಲಕ್ಷ್ಯ ಮತ್ತು ಟೀಕೆಗಳನ್ನು ಉದಹರಿಸುತ್ತಿದ್ದಾರೆ.


ಇದು ಮಾಧ್ಯಮಗಳನ್ನು ಅರ್ಥಮಾಡಿಕೊಳ್ಳಲಾಗದ ಅವರ ಅಜ್ಞಾನವನ್ನಷ್ಟೇ ತೋರಿಸುತ್ತದೆ. ಕೊನೆದಿನಗಳ ನಿರ್ಲಕ್ಷ್ಯಗಿಂತಲೂ  ಅಣ್ಣಾಚಳವಳಿಗೆ ಹೆಚ್ಚು ಹಾನಿ ಉಂಟು ಮಾಡಿದ್ದು ಪ್ರಾರಂಭದ ದಿನಗಳ ಅತಿಪ್ರಚಾರ.


ಕಣ್ಣುಕಟ್ಟಿನ ಪ್ರಚಾರ ವೈಖರಿ ಮೂಲಕ ಉಪವಾಸ ಶಿಬಿರದ ಮುಂದೆ ಸೇರಿದ್ದ ಸಾವಿರ ಜನರನ್ನು  ಲಕ್ಷವಾಗಿ, ಲಕ್ಷ ಜನರನ್ನು ಕೋಟಿಯಾಗಿ ಮಾಧ್ಯಮಗಳು ಬಿಂಬಿಸಿದ್ದನ್ನು ನಿಜವೆಂದೇ ನಂಬಿದ ಅಣ್ಣಾತಂಡದ ಸದಸ್ಯರು ದೇಶದ 120 ಕೋಟಿ ಜನ ತಮ್ಮ ಬೆನ್ನಹಿಂದೆ ಇದ್ದಾರೆ ಎಂದು ಭ್ರಮಿಸಿಬಿಟ್ಟರು.

 
ಮೂರೂಹೊತ್ತು ಟಿವಿ ಪರದೆಗಳಲ್ಲಿ, ಪತ್ರಿಕೆಗಳ ಪುಟಗಳಲ್ಲಿ ಕಾಣಿಸುವ ತಮ್ಮ ಮುಖಗಳನ್ನು ಪ್ರೀತಿಸುತ್ತಾ ಆತ್ಮರತಿಗೆ ಜಾರಿಬಿಟ್ಟರು. ಮಾಧ್ಯಮರಂಗ ವಾಣಿಜ್ಯೀಕರಣಗೊಂಡ ಬದಲಾದ ಪರಿಸ್ಥಿತಿಯಲ್ಲಿ ಮುಖ್ಯವಾಗಿ ಟಿವಿ ಚಾನೆಲ್‌ಗಳು ಹುಟ್ಟು-ಸಾವುಗಳೆರಡನ್ನು ಸಂಭ್ರಮದಿಂದ ಆಚರಿಸುತ್ತದೆ.

ಈ ಭರದಲ್ಲಿ ಸರಿ-ತಪ್ಪು ಇಲ್ಲವೆ ಒಳ್ಳೆಯದು-ಕೆಟ್ಟದನ್ನು ಗುರುತಿಸುವ ನ್ಯಾಯಪ್ರಜ್ಞೆ ಜನಪ್ರಿಯತೆಯ ಪ್ರವಾಹದಲ್ಲಿ ಕೊಚ್ಚಿಕೊಂಡುಹೋಗುತ್ತದೆ. ಮಾಧ್ಯಮಗಳಿಂದ ಪ್ರಚಾರ ಬಯಸುವವರಿಗೆ ಇದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲದೆ ಇದ್ದರೆ ಅಣ್ಣಾತಂಡಕ್ಕಾದ ಗತಿಯೇ ಆಗುತ್ತದೆ.

ಮಾಧ್ಯಮಗಳ ಪ್ರಚಾರದ ಊರುಗೋಲಿನ ಬಲದಿಂದ ಎದ್ದುನಿಂತದ್ದು, ಆ ಊರುಗೋಲನ್ನು ಕಿತ್ತುಕೊಂಡ ಕೂಡಲೇ ಕುಸಿದುಬೀಳುತ್ತದೆ. ಹಾಗೆಯೇ ಆಯಿತು.

ಇವರೆಲ್ಲರ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ ಅಣ್ಣಾಚಳವಳಿಯ ವೈಫಲ್ಯದಲ್ಲಿ ಖಳನಾಯಕರ ಪಾತ್ರವಹಿಸಿದ್ದ ಬಹುಮುಖ್ಯವಾದ ಸಮುದಾಯವನ್ನು ಎಲ್ಲರೂ ಮರೆತುಬಿಟ್ಟಿದ್ದಾರೆ. ಅದು ಚಳವಳಿಗೆ ಸೇರುತ್ತಿದ್ದ ಜನ. ಜಯಪ್ರಕಾಶ್ ನಾರಾಯಣ್ ನೇತೃತ್ವದ `ಸಂಪೂರ್ಣ ಕ್ರಾಂತಿ`ಯ ನಂತರದ ದಿನಗಳಲ್ಲಿ ಒಂದು ಚಳವಳಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಎಂದೂ ಭಾಗವಹಿಸಿರಲಿಲ್ಲ.

`ನಾನೇ ಅಣ್ಣಾ` ಎಂದು ತಲೆಪಟ್ಟಿ ಕಟ್ಟಿಕೊಂಡು, ಎದೆಮೇಲೆ ಬರೆಸಿಕೊಂಡು, ಹಗಲುಹೊತ್ತಿನಲ್ಲಿ ಘೋಷಣೆ ಕೂಗುತ್ತಾ, ರಾತ್ರಿಹೊತ್ತು ಕ್ಯಾಂಡಲ್ ಹಚ್ಚುತ್ತಾ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಕ್ರೀಯಾಶೀಲರಾಗಿ `ಅರಬ್ ವಸಂತ` ಇನ್ನೇನು ಭಾರತದಲ್ಲಿ ಪ್ರಾರಂಭವಾಗಿಯೇ ಬಿಟ್ಟಿತೆನ್ನುವ ಭ್ರಮಾಲೋಕವನ್ನು ಸೃಷ್ಟಿಸುತ್ತಿದ್ದವರು ಚಳವಳಿಯಲ್ಲಿ ಭಾಗವಹಿಸಿದ್ದ ಜನ.

ಅಣ್ಣಾಹಜಾರೆ ಅವರ ಮೊದಲೆರಡು ಉಪವಾಸಗಳ ಕಾಲದಲ್ಲಿ ಸಕ್ರಿಯವಾಗಿದ್ದ ಈ ಜನಸಮೂಹ ನಂತರದ ಎರಡು ಉಪವಾಸಗಳ ಕಾಲಕ್ಕೆ ಆಸಕ್ತಿಯನ್ನು ಕಳೆದುಕೊಂಡುಬಿಟ್ಟಿತು.

ಹಿಂದಿನಷ್ಟು ಜನ ಸೇರುತ್ತಿಲ್ಲ ಎಂದು ಗೊತ್ತಾದ ಕೂಡಲೇ ಆಡಳಿತಾರೂಢ ಪಕ್ಷ ಚಳವಳಿಗಾರರನ್ನು ಕರೆಸಿ ಮಾತನಾಡಲು ಕೂಡಾ ಹೋಗದೆ ಸುಮ್ಮನಾಯಿತು, ಜನ ಕಡಿಮೆ ಸೇರುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಮಾಧ್ಯಮಗಳು ಕೂಡಾ ಹಿಂದೆ ಸರಿದುಬಿಟ್ಟವು. ಅಣ್ಣಾತಂಡ ಯುದ್ಧಮುಗಿಯವ ಮೊದಲೇ ಶಸ್ತ್ರತ್ಯಾಗ ಮಾಡಲು ಮುಖ್ಯ ಕಾರಣ ತಮ್ಮ ಹಿಂದೆ ಲಕ್ಷಲಕ್ಷ ಸಂಖ್ಯೆಯಲ್ಲಿದ್ದೇವೆ ಎಂಬ ನಂಬಿಕೆ ಹುಟ್ಟಿಸಿದ್ದ ಜನ ದೂರವಾಗಿದ್ದು.

ಈ ಜನ ಹೀಗೆ ಯಾಕೆ ವರ್ತಿಸಿದರು ಎನ್ನುವುದನ್ನು ವಿಶ್ಲೇಷಿಸುವ ಮೊದಲು ಇವರು ಯಾರು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ನಡೆಯುವ ಚಳವಳಿಗಳನ್ನು ಒಂದು ನಿರ್ದಿಷ್ಟವಾದ ಆವರಣದೊಳಗೆ ಸೇರಿಸುವುದು ಕಷ್ಟವಾದರೂ ಸ್ಥೂಲವಾಗಿ ಇವುಗಳನ್ನು ರಾಜಕೀಯ ಮತ್ತು ರಾಜಕೀಯೇತರ  ಎಂದು ಗುರುತಿಸಬಹುದು.

ಈ ವ್ಯಾಖ್ಯಾನ ಕೂಡಾ ಚಳವಳಿಗಳ ಸ್ಪಷ್ಟ ಚಿತ್ರವನ್ನು ನೀಡುವುದಿಲ್ಲ. ರಾಜಕೀಯ ಉದ್ದೇಶದ ಚಳವಳಿಗಳ ಬಗ್ಗೆ ಯಾವುದೇ ಗೊಂದಲ ಇಲ್ಲ. ಉದಾಹರಣೆಗೆ ಕಾಂಗ್ರೆಸ್,ಬಿಜೆಪಿ, ಕಮ್ಯುನಿಸ್ಟ್ ಇತ್ಯಾದಿ ಪಕ್ಷಗಳು ನಡೆಸುವ ಚಳವಳಿಗಳು.

ಇಲ್ಲಿ ಎಲ್ಲವೂ ಪಾರದರ್ಶಕ. ಸಮಸ್ಯೆ ರಾಜಕೀಯೇತರ ಚಳವಳಿಗಳದ್ದು. ನಿರ್ದಿಷ್ಟವಾದ ರಾಜಕೀಯ ಸಿದ್ಧಾಂತವನ್ನು ಹೊಂದಿಯೂ ಚುನಾವಣಾ ರಾಜಕೀಯದಿಂದ ದೂರವಾಗಿರುವ ರಾಜಕೀಯೇತರ ಚಳವಳಿಗಳಿವೆ.

ಇದೇ ರೀತಿ  ರಾಜಕೀಯೇತರ ಚಳವಳಿಗಳಾಗಿ ಪ್ರಾರಂಭಗೊಂಡು ಕ್ರಮೇಣ ನೇರ ಚುನಾವಣೆಯಲ್ಲಿ ಪಾಲ್ಗೊಂಡ ಚಳವಳಿಗಳೂ ಇವೆ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕವೂ ಸೇರಿದಂತೆ ದೇಶದ ಬೇರೆಬೇರೆ ಭಾಗಗಳಲ್ಲಿನ ರೈತ ಮತ್ತು ದಲಿತ ಚಳವಳಿಗಳು. ರಾಜಕೀಯ ಚಳವಳಿಗಳಲ್ಲಿ ಭಾಗವಹಿಸಿದವರು ಒಂದು ಪಕ್ಷದ ಸಿದ್ಧಾಂತಕ್ಕೆ ಬದ್ದರಾಗಿರುವವರು.

ರಾಜಕೀಯೇತರ ಚಳವಳಿಗೆ ವಿಶಾಲವಾದ ಹರಹು ಇರುತ್ತದೆ. ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಇಲ್ಲವೆ ಭೂಮಿ ಕಳೆದುಕೊಂಡವರು, ಮನೆ ಕಳೆದುಕೊಂಡವರು,ಅನ್ಯಾಯಕ್ಕೀಡಾದವರು...

ಹೀಗೆ ಬೇರೆಬೇರೆ ಜನವರ್ಗವನ್ನು ನಿರ್ದಿಷ್ಟವಾಗಿ ಗುರಿಯಾಗಿಟ್ಟುಕೊಂಡು ಈ ಚಳವಳಿಗಳು ನಡೆಯುತ್ತಿರುತ್ತವೆ. ಈ ಎರಡೂ ಬಗೆಯ ಚಳವಳಿಗಳಿಗೆ ಸ್ಪಷ್ಟವಾದ ಐಡೆಂಟಿಟಿ ಇರುತ್ತದೆ. ಇದರಿಂದಾಗಿ ಚಳವಳಿಯ ನಾಯಕರಿಗೆ ಕೂಡಾ ತಮ್ಮ ಉದ್ದೇಶ ಮತ್ತು ಸಾಗುವ ದಾರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ.

 ಆದರೆ ಬಹಳ ದೊಡ್ಡ ಕ್ಯಾನ್‌ವಾಸ್ ಇಟ್ಟುಕೊಂಡು ಪ್ರಾರಂಭವಾದ ಅಣ್ಣಾಚಳವಳಿಗೆ ಒಂದು ನಿರ್ದಿಷ್ಟ ಐಡೆಂಟಿಟಿ ಇರಲಿಲ್ಲ. ಇದು ಈ ಚಳವಳಿಯ ಶಕ್ತಿಯೂ ಹೌದು, ದೌರ್ಬಲ್ಯ ಕೂಡಾ. ಯಾವುದೇ ರಾಜಕೀಯ ಪಕ್ಷದ ಜತೆಗೆ ಗುರುತಿಸಿಕೊಳ್ಳದವರು ಮಾತ್ರವಲ್ಲ, ಗುರುತಿಸಿಕೊಂಡವರು ಕೂಡಾ ಎದೆಮೇಲಿದ್ದ ಪಕ್ಷದ ಬ್ಯಾಡ್ಜ್‌ಗಳನ್ನು ಕಿಸೆಯಲ್ಲಿಟ್ಟುಕೊಂಡು ಅಣ್ಣಾಬ್ಯಾಡ್ಜ್ ಧರಿಸಿ ಉಪವಾಸ ಕೂತಿದ್ದರು.

ಭ್ರಷ್ಟಾಚಾರ ಎನ್ನುವುದು ಈ ದೇಶದ ಬಡವನಿಂದ ಹಿಡಿದು ಶ್ರಿಮಂತರವರೆಗೆ, ಅಶಿಕ್ಷಿತರಿಂದ ಹಿಡಿದು ಶಿಕ್ಷಿತರವರೆಗೆ ಎಲ್ಲರನ್ನೂ ಆವರಿಸಿರುವ ಸಮಸ್ಯೆಯಾಗಿರುವ ಕಾರಣ ನಮ್ಮ ಗುರಿ ದೇಶದ 120 ಕೋಟಿ ಜನ ಎಂದು ಅಣ್ಣಾತಂಡ ತಿಳಿದುಕೊಂಡುಬಿಟ್ಟಿತು.

ತಂಡದ ಸದಸ್ಯರು ಎಲ್ಲರನ್ನೂ ಬನ್ನಿಬನ್ನಿ ಎಂದು ಕೈಬೀಸಿ ಕರೆಯಲಾರಂಭಿಸಿದರು. ಹೀಗೆ ಬಂದವರಲ್ಲಿ ಬಹುಸಂಖ್ಯಾತರು ಮಧ್ಯಮವರ್ಗಕ್ಕೆ ಸೇರಿರುವ ನಗರ ಕೇಂದ್ರಿತ, ಉದ್ಯೋಗಸ್ಥ, ಸದಾ ಸುರಕ್ಷತೆಯ ಕಕ್ಷೆಯೊಳಗೆ ಇರಬೇಕೆಂದು ಬಯಸುವ ಮತ್ತು ಯಾವುದೇ ಚಳವಳಿಯಲ್ಲಿ ಭಾಗವವಹಿಸಿ ಕಷ್ಟ-ನಷ್ಟ ಅನುಭವಿಸದವರು.

ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಹುಟ್ಟಿದ ಮತ್ತು ಆರ್ಥಿಕ ಉದಾರೀಕರಣದ ಯುಗದಲ್ಲಿ ಕಣ್ಣುಬಿಟ್ಟ 25-35 ವಯಸ್ಸಿನ ಆಜುಬಾಜಿನ ಈ ಯುವವರ್ಗ  ಲಾಭ-ನಷ್ಟದ ಲೆಕ್ಕಾಚಾರ ಇಟ್ಟುಕೊಂಡೇ ಮುಂದೆ ಹೆಜ್ಜೆ ಇಡುವವರು. `ಸೋಡಾಗ್ಯಾಸ್` ರೀತಿ ಒಮ್ಮೆಲೇ ಚಿಮ್ಮಿದ ಈ `ಯುವಬೆಂಬಲವನ್ನು ಅಣ್ಣಾತಂಡ ನಂಬಿತು. ನಂಬಿಕೆ ಕೈಕೊಟ್ಟಿತು.

 ಈ ಮಧ್ಯಮ ವರ್ಗ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಯಾವುದೇ ದೇಶದಲ್ಲಿ ರಾಜಕೀಯ ಇಲ್ಲವೆ ಸಾಮಾಜಿಕ ಬದಲಾವಣೆಯಲ್ಲಿ ಭಾಗವಹಿಸಿಲ್ಲ. ಇದನ್ನು ಹೇಳಿದಾಗ ಕೆಲವರು ಅರಬ್‌ರಾಷ್ಟ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಉದಾಹರಣೆ ಕೊಡಬಹುದು. ಅಲ್ಲಿನ ಮಧ್ಯಮವರ್ಗದಿಂದಲೇ ಚಳವಳಿ ಪ್ರಾರಂಭವಾದರೂ ಅದು ಅನ್ಯಾಯಕ್ಕೀಡಾದ ಎಲ್ಲ ವರ್ಗಗಳನ್ನು ಜತೆಯಲ್ಲಿ ಕಟ್ಟಿಕೊಂಡು ಬೆಳೆಯುತ್ತಾಹೋಯಿತು.

ಆ ದೇಶಗಳಲ್ಲಿ ಸರ್ವಾಧಿಕಾರದಿಂದ ನಲುಗಿಹೋದ ಸಾಮಾನ್ಯ ಜನ ಅದರಲ್ಲಿ ಭಾಗವಹಿಸಿದ್ದರು. ಪ್ರಾಣವೊಂದನ್ನು ಬಿಟ್ಟು ಕಳೆದುಕೊಳ್ಳಲು ಬೇರೆ ಏನೂ ಇಲ್ಲದವರು ಅವರು. ಇಲ್ಲಿ ಹಾಗಾಗಲಿಲ್ಲ. ಅಣ್ಣಾಚಳವಳಿ ಎತ್ತಿದ ಭ್ರಷ್ಟಾಚಾರದ ವಿಷಯ ಎಲ್ಲರಿಗೆ ಸಂಬಂಧಿಸಿದ್ದೇ ಆಗಿದ್ದರೂ ಅದರ ತೀವ್ರತೆಯ ಅನುಭವ ಬೇರೆಬೇರೆ ವರ್ಗದ ಜನರಿಗೆ ಬೇರೆಬೇರೆ ರೀತಿಯದಾಗಿದೆ.

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವ ರೈತ, ಹೆಚ್ಚು ಸಂಬಳ ಸಿಗುತ್ತಿಲ್ಲ ಎನ್ನುವ ಕಾರ್ಮಿಕ, ಲಿಂಗತಾರತಮ್ಯ  ನಡೆಯುತ್ತಿದೆ ಎನ್ನುವ ಮಹಿಳೆ, ಜಾತಿತಾರತಮ್ಯದಿಂದಾಗಿ ದೌರ್ಜನ್ಯ ನಡೆಯುತ್ತಿದೆ ಎನ್ನುವ ದಲಿತರು, ಉದ್ಯೋಗ ಸಿಗುತ್ತಿಲ್ಲ ಎನ್ನುವ ಯುವಕರು..ಹೀಗೆ ಸಮಸ್ಯೆಗಳು ಹತ್ತಾರು.

ಇವರ ಕಷ್ಟಗಳ ಪಟ್ಟಿಯಲ್ಲಿ ಭ್ರಷ್ಟಾಚಾರ  ಇದ್ದರೂ ಅದು ಮೊದಲ ಸ್ಥಾನದಲ್ಲಿ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆ ಇವರ ಕಷ್ಟಪರಿಹಾರಕ್ಕೆ ನೆರವಾಗಲೂಬಹುದು. ಆದರೆ ಇದನ್ನು ಯಾರೂ ಅವರಿಗೆ ಮನವರಿಕೆ ಮಾಡಿಕೊಟ್ಟಿಲ್ಲ.

ಆದುದರಿಂದ ಅವರಲ್ಲಿ ಹೆಚ್ಚಿನ ಮಂದಿ ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ದೂರವೇ ಉಳಿದುಬಿಟ್ಟರು. ಅವರನ್ನು ಹತ್ತಿರಕ್ಕೆ ಕರೆದುಕೊಂಡು ಬರುವ ಪ್ರಯತ್ನವನ್ನೂ ಯಾರೂ ಮಾಡಲಿಲ್ಲ. ಈ ಕಾರಣದಿಂದಾಗಿಯೇ ಜನಲೋಕಪಾಲರ ನೇಮಕಕ್ಕಾಗಿ ನಡೆದ ಹೋರಾಟ ನಿಜವಾದ ಅರ್ಥದಲ್ಲಿ ಜನಚಳವಳಿ ಆಗಲೇ ಇಲ್ಲ.

ಅಣ್ಣಾಚಳವಳಿ ವಿಫಲಗೊಂಡ ಮಾತ್ರಕ್ಕೆ ಮುಂದಿನ ಎಲ್ಲ ದಾರಿಗಳು ಮುಚ್ಚಿಹೋಗಿವೆ ಎಂದರ್ಥ ಅಲ್ಲ. ರಾಷ್ಟ್ರೀಯ ಪಕ್ಷಗಳು ನಿಧಾನವಾಗಿ ಮರೆಗೆ ಸರಿದು ಪ್ರಾದೇಶಿಕ ಪಕ್ಷಗಳು ವಿಜೃಂಭಿಸುತ್ತಿರುವ ಈಗಿನ ರಾಜಕಾರಣದಿಂದಲೂ ಚಳವಳಿಗಾರರೂ ಕಲಿಯಬೇಕಾದ ಪಾಠ ಇದೆ.

ಬಹುಶಃ ರಾಷ್ಟ್ರಮಟ್ಟದ ಒಂದು ಚಳವಳಿಯನ್ನು ಇನ್ನುಮುಂದೆ ನಡೆಸಿಕೊಂಡು ಹೋಗುವುದು ಸಾಧ್ಯ ಇಲ್ಲವೇನೋ? ಇದರಿಂದ ನಿರಾಶರಾಗಬೇಕಾಗಿಲ್ಲ, ಈಗಲೂ ದೇಶದ ನಾನಾಭಾಗಗಳಲ್ಲಿ ನೀರು, ಭೂಮಿ, ಉದ್ಯೊಗ, ಶಿಕ್ಷಣ, ಆರೋಗ್ಯ, ಆತ್ಮಗೌರವ... ಹೀಗೆ ನಾನಾ ಉದ್ದೇಶದ ಚಳವಳಿಗಳು ತಮ್ಮ ಮಿತಿಯಲ್ಲಿ ನಡೆಯುತ್ತಿರುತ್ತವೆ.

ಪ್ರಜಾಪ್ರಭುತ್ವವನ್ನು ಜೀವಂತವಾಗಿ ಮತ್ತು ಆರೋಗ್ಯಪೂರ್ಣವಾಗಿ ಇಟ್ಟಿರುವ ಈ ಸಣ್ಣಸಣ್ಣ ಚಳವಳಿಗಳೇ ಭವಿಷ್ಯದ ಭರವಸೆಗಳು. ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ.
 
ಕೃಪೆ : ಪ್ರಜಾವಾಣಿ

Sunday, June 17, 2012

ದಲಿತ ರಾಜಕಾರಣಕ್ಕೆ ಯಾರು ಮಾದರಿ? - ದಿನೇಶ ಅಮೀನಮಟ್ಟು

`ನಾ ವು ರಾಜಕೀಯ ಕ್ಷೇತ್ರದಲ್ಲಿ ಸಮಾನತೆ ಪಡೆಯಲಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದ ಅಸಮಾನತೆ ಎಂದಿನಂತೆ ಮುಂದುವರಿಯಲಿದೆ. ಈ ವಿರೋಧಾಭಾಸವನ್ನು ನಿವಾರಿಸಿಕೊಳ್ಳದೆ ಹೋದರೆ ಅಸಮಾನತೆಯಿಂದ ನೊಂದವರು ಮುಂದೊಂದು ದಿನ ರಾಜಕೀಯ ಪ್ರಜಾಪ್ರಭುತ್ವವನ್ನು ಕಿತ್ತೊಗೆಯಲಿದ್ದಾರೆ` ಎಂದು 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಒಪ್ಪಿಕೊಂಡ ದಿನವೇ ಬಿ.ಆರ್.ಅಂಬೇಡ್ಕರ್ ಹೇಳಿದ್ದರು.

ಸಮಾನತೆಯನ್ನು ಸಾರುವ ಪ್ರಜಾಪ್ರಭುತ್ವ ಮತ್ತು ಅಸಮಾನತೆಯೇ ಸಾರವಾಗಿರುವ ಸಾಮಾಜಿಕ ವ್ಯವಸ್ಥೆಯ ನಡುವಿನ ವೈರುಧ್ಯದ ಅರಿವು ಅವರಿಗಿದ್ದ ಕಾರಣದಿಂದಲೇ ಕಟ್ಟಾ ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಅಂಬೇಡ್ಕರ್ ಕೂಡಾ ಇಂತಹ ಕಟುಮಾತುಗಳನ್ನು ಆಡಿದ್ದರು. ಅರವತ್ತೆರಡು ವರ್ಷಗಳ ನಂತರವಾದರೂ ಪರಿಸ್ಥಿತಿ ಬದಲಾಗಿದೆಯೇ?
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಎಲ್ಲವನ್ನೂ ನಿರ್ಣಯಿಸುತ್ತದೆ ಎಂದು ಹೇಳುವವರಿದ್ದಾರೆ.

ರಾಜಕೀಯ ನಾಯಕರ ಯಶಸ್ಸಿನಲ್ಲಿ ಜಾತಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ಲೇಷಿಸುವವರಿದ್ದಾರೆ. ಹೀಗಿದ್ದರೂ ದೇಶದ ಜನಸಂಖ್ಯೆಯಲ್ಲಿ ಶೇಕಡಾ 16.2ರಷ್ಟಿರುವ ಪರಿಶಿಷ್ಟ ಜಾತಿಯವರಲ್ಲಿ ಯಾರೊಬ್ಬರೂ ಪ್ರಧಾನಮಂತ್ರಿ ಆಗಲಿಲ್ಲ. ಪ್ರಧಾನಿಯಾಗುವ ಅರ್ಹತೆಯನ್ನು ಸಾಧನೆಯ ಬಲದಿಂದಲೇ ಹೊಂದಿದ್ದ ಬಾಬು ಜಗಜೀವನರಾಂ ಅವರಿಗೆ ಪ್ರಧಾನಿ ಪಟ್ಟದ ಸಮೀಪವೂ ಸುಳಿಯಲೂ ಸಾಧ್ಯವಾಗಲಿಲ್ಲ.


ಆಂಧ್ರಪ್ರದೇಶ (ಸಂಜೀವಯ್ಯ), ರಾಜಸ್ತಾನ (ಜಗನ್ನಾಥ ಪಹಾಡಿಯಾ), ಉತ್ತರ ಪ್ರದೇಶ (ಮಾಯಾವತಿ), ಬಿಹಾರ (ರಾಮಸುಂದರ ದಾಸ್) ಮತ್ತು ಮಹಾರಾಷ್ಟ್ರವನ್ನು (ಸುಶೀಲ್‌ಕುಮಾರ್ ಶಿಂಧೆ) ಹೊರತುಪಡಿಸಿದರೆ ಬೇರೆ ಯಾವ ರಾಜ್ಯಗಳಲ್ಲಿಯೂ ದಲಿತರು ಮುಖ್ಯಮಂತ್ರಿಯಾಗಲಿಲ್ಲ. ಹಿಮಾಚಲಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದ್ದರೂ ಆ ರಾಜ್ಯಗಳಲ್ಲಿ ಯಾರೂ ಮುಖ್ಯಮಂತ್ರಿ ಆಗಲಿಲ್ಲ.

ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ದಲಿತ ಚಳವಳಿ ಹೆಚ್ಚು ಸಕ್ರಿಯವಾಗಿರುವ ಕರ್ನಾಟಕದಲ್ಲಿಯೂ ದಲಿತರೂ ಮುಖ್ಯಮಂತ್ರಿಯಾಗಲಿಲ್ಲ. ಪ್ರಧಾನಿ ಇಲ್ಲವೇ ಮುಖ್ಯಮಂತ್ರಿಗಳ ಸ್ಥಾನ ಒತ್ತಟ್ಟಿಗಿರಲಿ, ಉತ್ತರಪ್ರದೇಶವೊಂದನ್ನು ಹೊರತುಪಡಿಸಿ ಬೇರೆ ಯಾವ ರಾಜ್ಯಗಳ ರಾಜಕೀಯದಲ್ಲಿಯೂ ದಲಿತರು ನಿರ್ಣಾಯಕ ಸ್ಥಾನದಲ್ಲಿ ಇಲ್ಲ.

ಇವೆಲ್ಲವನ್ನು ಮೊದಲೇ ತಿಳಿದುಕೊಂಡಿದ್ದ ಪ್ರವಾದಿಯಂತೆ ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಮಾತನಾಡಿದ್ದರು.

1952ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷವೊಂದನ್ನು ಕಟ್ಟಿ ಚುನಾವಣೆ ಎದುರಿಸಿದ ಅವರು ಜಲಂಧರ್ ನಡೆದ ಪ್ರಚಾರಸಭೆಯಲ್ಲಿ ದಲಿತ ರಾಜಕೀಯದ ಭವಿಷ್ಯದ ಹೊಳಹುಗಳನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ದಲಿತರನ್ನು ಅವರು `ಕಾಂಗ್ರೆಸ್‌ನ ಗುಲಾಮರು` ಎಂದು ಚುಚ್ಚಿದ್ದರು. `ಬಹಳಷ್ಟು ಅಸ್ಪೃಶ್ಯರು ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ.


ಅಂತಹ 30 ಸದಸ್ಯರಿದ್ದಾರೆ. ಇವರು ಎಂದಾದರೂ ಸದನದಲ್ಲಿ ಯಾವುದಾದರೂ ಪ್ರಶ್ನೆಗಳನ್ನು ಕೇಳಿದ್ದಾರೆಯೇ? ಯಾವುದಾದರೂ ಗೊತ್ತುವಳಿ ಇಲ್ಲವೇ ಮಸೂದೆಯನ್ನು ಮಂಡಿಸಿದ್ದಾರೆಯೇ? ತಮಗೆ ಅನಿಸಿದ್ದನ್ನು ಮುಲಾಜಿಲ್ಲದೆ ಹೇಳುವ ಧೈರ್ಯ ತೋರಿದ್ದಾರೆಯೇ? ಕಾಂಗ್ರೆಸ್ ಪಕ್ಷಕ್ಕೆ ಅರ್ಹ ದಲಿತರು ಬೇಕಾಗಿಲ್ಲ, ಗುಲಾಮರು ಬೇಕಾಗಿದೆ. ಇಂತಹ ಪಕ್ಷದ ಗುಲಾಮರು ದಲಿತರ ಪ್ರತಿನಿಧಿಗಳು ಹೇಗಾಗುತ್ತಾರೆ?` ಎಂದು ಅವರು ಪ್ರಶ್ನಿಸಿದ್ದರು.


ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜಕೀಯವಾಗಿ ದಲಿತರ ಸ್ಥಿತಿ ಏನಾಗಲಿದೆ ಎಂಬ ಸ್ಪಷ್ಟ ಅರಿವು ಅಂಬೇಡ್ಕರ್ ಅವರಿಗಿತ್ತು. ಅದಕ್ಕಾಗಿಯೇ ಅವರು `ದಲಿತ ಪ್ರತಿನಿಧಿಗಳನ್ನು ದಲಿತ ಮತದಾರರೇ ಆಯ್ಕೆ ಮಾಡುವಂತಹ ಪ್ರತ್ಯೇಕ ಮತದಾನದ ಹಕ್ಕನ್ನು ನೀಡುವಂತೆ ದುಂಡುಮೇಜಿನ ಪರಿಷತ್‌ನಲ್ಲಿ ವಾದಿಸಿದ್ದರು. ದಲಿತ ಮತದಾರರು ಉಳಿದೆಲ್ಲರ ಜತೆಯಲ್ಲಿ ಸೇರಿ ಸಾಮಾನ್ಯ ಅಭ್ಯರ್ಥಿಗೆ ಮತದಾನ ಮಾಡುವ ಜತೆಯಲ್ಲಿ, ಕೇವಲ ತಮ್ಮ ಮತದಿಂದಲೇ ದಲಿತ ಅಭ್ಯರ್ಥಿಯನ್ನು ಚುನಾಯಿಸುವ ಅಧಿಕಾರವೂ ಇರಬೇಕು.


ಇಲ್ಲದೆ ಹೋದರೆ ದಲಿತ ಜನಪ್ರತಿನಿಧಿಗಳು ರಾಜಕೀಯ ಪಕ್ಷಗಳ ಗುಲಾಮರಾಗುತ್ತಾರೆ` ಎಂದು ಅವರು ಪ್ರತಿಪಾದಿಸಿದ್ದರು. ಕೊನೆಗೂ ಬ್ರಿಟಿಷ್ ಪ್ರಧಾನಿ ರಾಮ್ಸೆ ಮ್ಯಾಕ್‌ಡೊನಾಲ್ಡ್ ಅಂಬೇಡ್ಕರ್ ಅಭಿಪ್ರಾಯವನ್ನು ಒಪ್ಪಿಕೊಂಡರೂ ಗಾಂಧೀಜಿಯವರ ವಿರೋಧದಿಂದಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ.

ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡುವುದನ್ನು ವಿರೋಧಿಸಿ ಗಾಂಧೀಜಿ ಪ್ರಾರಂಭಿಸಿದ್ದ ಆಮರಣಾಂತ ಉಪವಾಸಕ್ಕೆ ಮಣಿದ ಅಂಬೇಡ್ಕರ್ ಒಲ್ಲದ ಮನಸ್ಸಿನಿಂದಲೇ ತಮ್ಮ ಬೇಡಿಕೆಯನ್ನು ಕೈಬಿಟ್ಟು `ಪೂನಾ ಒಪ್ಪಂದ`ಕ್ಕೆ ಸಹಿ ಹಾಕಿದ್ದರು. ಇದರ ಪರಿಣಾಮ ತಿಳಿದುಕೊಳ್ಳಲು ಬಹಳ ಕಾಲವೇನೂ ಬೇಕಾಗಲಿಲ್ಲ. ಸ್ವತಂತ್ರಭಾರತದಲ್ಲಿ ಸ್ವಂತ ಪಕ್ಷ ಕಟ್ಟಿ ಸ್ಪರ್ಧಿಸಿದ್ದ ಎರಡೂ ಚುನಾವಣೆಗಳಲ್ಲಿ ಅಂಬೇಡ್ಕರ್ ಸೋಲಬೇಕಾಯಿತು.


ಈಗಲಾದರೂ ಪರಿಸ್ಥಿತಿ ಬದಲಾಗಿದೆಯೇ? ಬೇರೆಬೇರೆ ರಾಜ್ಯಗಳಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಐದು ಮಂದಿ ಮುಖ್ಯಮಂತ್ರಿಗಳಾದರೂ ಅವರಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಅವರೆಲ್ಲ ಮುಖ್ಯಮಂತ್ರಿಯಾಗಿದ್ದು ಸ್ವಂತ ಬಲದಿಂದ ಅಲ್ಲ, ಕಾಂಗ್ರೆಸ್ ಬೆಂಬಲದಿಂದ. ಇದಕ್ಕೆ ಹೊರತಾದವರೆಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿಯವರೊಬ್ಬರೇ.


ಈ ಕಾರಣದಿಂದಲೇ ದಲಿತ ರಾಜಕೀಯದ ಯಶಸ್ವಿ ಮಾದರಿ -ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ್ದು ಮಾತ್ರ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿ ಪರಾಭವಗೊಂಡಿದ್ದರೂ ತಳ್ಳಿಹಾಕಿ ಬಿಡುವಂತಹ ಪಕ್ಷ ಅದಲ್ಲ ಎನ್ನುವುದು ಅದರ ಬೆಳವಣಿಗೆಯನ್ನು ಗಮನಿಸುತ್ತ ಬಂದವರಿಗೆಲ್ಲರಿಗೂ ಗೊತ್ತು. ಅದರ ಈ ಶಕ್ತಿಯನ್ನು ತಿಳಿದುಕೊಳ್ಳಬೇಕಾದರೆ  ಆ ಪಕ್ಷದ ಸ್ಥಾಪಕರಾದ ಕಾನ್ಸಿರಾಮ್ ಅವರನ್ನು ಮೊದಲು ಅರ್ಥಮಾಡಿಕೊಳ್ಳಬೇಕು.


ಅಂಬೇಡ್ಕರ್ ಅವರ ನಂತರದ ಬಹುಮುಖ್ಯ ದಲಿತ ರಾಜಕೀಯ ನಾಯಕ ಕಾನ್ಸಿರಾಮ್ ಎನ್ನುವುದರಲ್ಲಿ ಅನುಮಾನ ಇಲ್ಲ. ವಿದ್ಯೆಯಲ್ಲಿಯಾಗಲಿ, ವಿದ್ವತ್‌ನಲ್ಲಿಯಾಗಲಿ  ಅಂಬೇಡ್ಕರ್ ಅವರಿಗೆ ಕಾನ್ಸಿರಾಮ್ ಸಮ ಅಲ್ಲ. ಆದರೆ ರಾಜಕೀಯವಾಗಿ ಅಂಬೇಡ್ಕರ್ ಅವರಿಗಿಂತಲೂ ಕಾನ್ಸಿರಾಮ್ ಯಶಸ್ವಿ ರಾಜಕಾರಣಿ.


1918ರಿಂದ 1930ರ ವರೆಗಿನ ಅಂಬೇಡ್ಕರ್ ಅವರ ಜೀವನದ ಮೊದಲ ಘಟ್ಟದಲ್ಲಿ ಬಹಿಷ್ಕೃತ ಹಿತಕರಣೆ ಸಭಾ ಸ್ಥಾಪನೆ, ಮಹಾಡ್ ಸತ್ಯಾಗ್ರಹ, ಪೂನಾದ ಪಾರ್ವತಿ ದೇವಸ್ಥಾನ ಮತ್ತು ನಾಸಿಕ ಕಾಳಾರಾಮ ದೇವಸ್ಥಾನ ಪ್ರವೇಶ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಚಳವಳಿಯನ್ನು ಮುನ್ನಡೆಸಿದ್ದ ಅಂಬೇಡ್ಕರ್, ನಂತರ 1930ರಿಂದ 1951ರ ವರೆಗಿನ ಅವಧಿಯಲ್ಲಿ ತಮ್ಮನ್ನು ರಾಜಕೀಯವಾಗಿ ತೊಡಗಿಸಿಕೊಂಡಿದ್ದರು.


ಈ ಅವಧಿಯಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷ, ಪರಿಶಿಷ್ಟ ಜಾತಿ ಒಕ್ಕೂಟ ಮತ್ತು ಭಾರತೀಯ ರಿಪಬ್ಲಿಕನ್ ಪಕ್ಷ ಎಂಬ ಮೂರು ರಾಜಕೀಯ ಪಕ್ಷಗಳನ್ನೂ ಅವರು ಕಟ್ಟಿದ್ದರು. ಆದರೆ ಅಂಬೇಡ್ಕರ್ ಅವರಿಗೆ ರಾಜಕೀಯ ಯಶಸ್ಸು ಸಿಗಲೇ ಇಲ್ಲ. ಈ ವೈಫಲ್ಯಕ್ಕೆ ಅಂಬೇಡ್ಕರ್ ಅವರ ಕಡು ಸೈದ್ಧಾಂತಿಕ ನಿಷ್ಠೆ ಮತ್ತು ದಲಿತ ಕೇಂದ್ರಿತ ರಾಜಕಾರಣದ ಮಿತಿಯೂ ಕಾರಣವಾಗಿರಬಹುದು. ಇದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದರೆ ಕಾನ್ಸಿರಾಮ್ ರಾಜಕಾರಣವನ್ನು ಇನ್ನಷ್ಟು ಒಳಹೊಕ್ಕು ನೋಡಬೇಕಾಗುತ್ತದೆ.


ಶುದ್ಧ ಸೈದ್ಧಾಂತಿಕ ರಾಜಕಾರಣದ ಬಗ್ಗೆ ಕಾನ್ಸಿರಾಮ್ ಅವರಿಗೆ ನಂಬಿಕೆ ಇರಲಿಲ್ಲ ಎಂದು ಹೇಳಲಾಗದು. ಆದರೆ ಅದರ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡುತ್ತಿದ್ದದ್ದು ಕಡಿಮೆ. ಅವರದ್ದು ವಾಸ್ತವದ ನೆಲೆಗಟ್ಟಿನ ರಾಜಕಾರಣ. ಈ ಮೂಲಕ ಅವರು ದಲಿತರು ಮತ್ತು ಬಹುಜನರ ನಡುವಿನ ಸಂಬಂಧದ ವ್ಯಾಕರಣವನ್ನೇ ಬದಲಿಸಿದ್ದರು. ಜೀವನದ ಪ್ರಾರಂಭದ ದಿನಗಳಲ್ಲಿ ಅವರು ಮಹಾರಾಷ್ಟ್ರದಲ್ಲಿ ಒಂದಷ್ಟು ಕಾಲ ಭಾರತೀಯ ರಿಪಬ್ಲಿಕನ್ ಪಕ್ಷದ (ಆರ್‌ಪಿಐ) ಜತೆಯಿದ್ದರೂ ಆ ಪಕ್ಷದ ದಲಿತ ಕೇಂದ್ರಿತ ರಾಜಕಾರಣವನ್ನು ಇಷ್ಟಪಡುತ್ತಿರಲಿಲ್ಲ.


ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯ `ಬಹುಜನ ಸಮಾಜ`ದ ಭಾಗವೆಂದೇ ಅವರು ಹೇಳುತ್ತಿದ್ದರು. ಇದರಿಂದಾಗಿ ಅವರು ಪ್ರಾರಂಭದಲ್ಲಿ ಕಟ್ಟಿದ `ಅಖಿಲ ಭಾರತ ಹಿಂದುಳಿದ (ಎಸ್‌ಸಿ, ಎಸ್‌ಟಿ, ಒಬಿಸಿ) ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ` (ಬಿಎಎಂಸಿಇಎಫ್) ವಾಗಲಿ, ಅದರ ನಂತರ ಸ್ಥಾಪಿಸಿದ್ದ `ದಲಿತ್ ಶೋಷಿತ್ ಸಮಾಜ್ ಸಂಘರ್ಷ ಸಮಿತಿ, ಇಲ್ಲವೇ ಡಿಎಸ್-4 ಆಗಲಿ ಕೊನೆಗೆ ಸ್ಥಾಪಿಸಿದ ಬಹುಜನ ಸಮಾಜ ಪಕ್ಷವಾಗಲಿ (ಬಿಎಸ್‌ಪಿ) ಕೇವಲ ದಲಿತ ಕೇಂದ್ರಿತ ಸಂಘಟನೆಗಳಾಗಿರಲಿಲ್ಲ.

ಮೀಸಲಾತಿಯ ಕಾರಣದಿಂದಾಗಿ ಎಷ್ಟೋ ಕಡೆ ಹಿಂದುಳಿದ ಜಾತಿಗಳಿಗಿಂತ ದಲಿತರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಅವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದರು.  ಬಿಎಸ್‌ಪಿಯ ಬ್ಯಾನರ್, ಪೋಸ್ಟರ್ ಇಲ್ಲವೇ ಲೆಟರ್‌ಹೆಡ್‌ಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಅವರ ಜತೆಯಲ್ಲಿ ಜ್ಯೋತಿಬಾ ಪುಲೆ, ಸಾಹು ಮಹಾರಾಜ್, ಪೆರಿಯಾರ್ ಮತ್ತು ನಾರಾಯಣ ಗುರುಗಳ ಭಾವಚಿತ್ರ ಅಚ್ಚುಹಾಕಿಸುವುದನ್ನು ಅವರು ಕಡ್ಡಾಯಗೊಳಿಸಿದ್ದರು.


1995ರಲ್ಲಿ ಮುಖ್ಯಮಂತ್ರಿಯಾದ ಮಾಯಾವತಿ ತಮ್ಮ ಬಜೆಟ್‌ನ ಶೇಕಡಾ 27ರಷ್ಟು ಹಣವನ್ನು ಹಿಂದುಳಿದ ಜಾತಿಗಳಿಗೆ ಮೀಸಲಿಟ್ಟಿದ್ದರು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಎಲ್ಲ ಸೌಲಭ್ಯಗಳನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದರು. ಸರ್ಕಾರಿ ನೌಕರಿಗಳಲ್ಲಿ ಮುಸ್ಲಿಮರಲ್ಲಿರುವ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ನೀಡಬೇಕೆಂಬ ಉತ್ತರಪ್ರದೇಶ ಹಿಂದುಳಿದ ಜಾತಿಗಳ ಒಕ್ಕೂಟದ ವರದಿಯನ್ನು ಮಾಯಾವತಿ ಜಾರಿಗೊಳಿಸಿದ್ದರು.


ಹಿಂದುಳಿದ ಜಾತಿಗಳ ಶೇಕಡಾ 27ರ ಮೀಸಲಾತಿಯಲ್ಲಿ ಶೇಕಡಾ ಎಂಟರಷ್ಟನ್ನು ಮುಸ್ಲಿಮರಲ್ಲಿನ ಹಿಂದುಳಿದ ಜಾತಿಗಳಿಗೆ ನೀಡಿದ್ದರು. 1996ರ ವಿಧಾನಸಭಾ ಚುನಾವಣೆಯಲ್ಲಿನ ಬಿಎಸ್‌ಪಿ ಅಭ್ಯರ್ಥಿಗಳಲ್ಲಿ ಶೇಕಡಾ 29ರಷ್ಟು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರಿದ್ದರು. ಉಳಿದಂತೆ ಶೇಕಡಾ 34ರಷ್ಟು ಹಿಂದುಳಿದ ಜಾತಿಗಳು, ಶೇಕಡಾ 18ರಷ್ಟು ಮುಸ್ಲಿಮರಿದ್ದರು.


ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಬಿಎಸ್‌ಪಿಯಲ್ಲಿ ಮಾಯಾವತಿಯವರೇ ಎಲ್ಲವೂ ಆಗಿದ್ದರೂ ಪಕ್ಷದ ಪದಾಧಿಕಾರಗಳನ್ನು ಜಾತಿಜನಸಂಖ್ಯೆಗೆ ಅನುಗುಣವಾಗಿ ನೀಡುತ್ತಾ ಬಂದಿದ್ದಾರೆ. ಹಿಂದುಳಿದ ಜಾತಿಗಳಲ್ಲಿ ಮುಖ್ಯವಾಗಿ ಅತೀ ಹಿಂದುಳಿದಿರುವ ನಿಷಾದ್, ಸೈನಿ, ಶಾಖ್ಯ, ಬಗೇಲ್, ಕಶ್ಯಪ್ ಮತ್ತು ರಾಜ್‌ಭರ್ ಸಮುದಾಯಕ್ಕೆ ಬಿಎಸ್‌ಪಿಯಲ್ಲಿ ಈಗಲೂ ಹೆಚ್ಚಿನ ಪ್ರಾತಿನಿಧ್ಯ ಇದೆ.


ವಿಧಾನಸಭೆ ನಮ್ಮ ಸುತ್ತಲಿನ ಸಮಾಜದ ರಚನೆಯನ್ನು ಪ್ರತಿಬಿಂಬಿಸುವಂತಿರಬೇಕು ಎನ್ನುವುದು ಕಾನ್ಸಿರಾಮ್ ಅವರ ಚಿಂತನೆಯಾಗಿತ್ತು. ಈ ಕಾರಣದಿಂದಾಗಿಯೇ ಮೇಲ್ಜಾತಿಯೂ ಸೇರಿದಂತೆ ಎಲ್ಲರಿಗೂ ಅವರ ಜಾತಿ ಜನಸಂಖ್ಯೆಯ ಆಧಾರದಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಅವರು ಹೇಳುತ್ತಿದ್ದದ್ದು ಮಾತ್ರವಲ್ಲ, 2002ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಹೇಳಿದಂತೆ ಮಾಡಿಯೂ ತೋರಿಸಿದ್ದರು. ನಂತರದ ದಿನಗಳಲ್ಲಿ ಮಾಯಾವತಿಯವರೂ ಆ ಸೂತ್ರವನ್ನು ಪಾಲಿಸಿಕೊಂಡು ಬಂದಿದ್ದಾರೆ.


ಮಾಯಾವತಿಯವರೂ ಸೇರಿದಂತೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದ ಮೊದಲ ಚುನಾವಣೆಯಿಂದ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಬಹುಮತ ಗಳಿಸಿದ್ದ 2007ರ ಚುನಾವಣೆಯ ವರೆಗೆ ಬಿಎಸ್‌ಪಿ ಸಾಗಿ ಬಂದ ಹಾದಿಯನ್ನು ನೋಡುತ್ತಾ ಬಂದರೆ ಉದ್ದಕ್ಕೂ ಈ ರೀತಿ ತನ್ನ ನೆಲೆಯನ್ನು ವಿಸ್ತರಿಸುತ್ತಾ ಬಂದಿರುವುದನ್ನು ಕಾಣಬಹುದು.


ಬಿಜೆಪಿ ಜತೆಗಿನ ಮೈತ್ರಿ, `ಬ್ರಾಹ್ಮಣ್ ಜೋಡೋ`-ಎಲ್ಲವೂ ಈ ಕಾರ್ಯತಂತ್ರದ ಭಾಗವೇ ಆಗಿತ್ತು. ಇದರಿಂದ ಬಿಎಸ್‌ಪಿ ಗಳಿಸಿದ್ದು ಹೆಚ್ಚು ಕಳೆದುಕೊಂಡದ್ದು ಬಹಳ ಕಡಿಮೆ. ಈ ಬಾರಿಯ ಚುನಾವಣೆಯಲ್ಲಿಯೂ ಬಿಎಸ್‌ಪಿ ಸೋಲಿಗೆ ಗೆಲುವಿನ ಮದದಿಂದ ನಡೆಸಿದ ವೈಯಕ್ತಿಕ ಹುಚ್ಚಾಟಗಳೇ ಕಾರಣ ಹೊರತು, ಅದರ ರಾಜಕೀಯ ಕಾರ್ಯತಂತ್ರದ ವೈಫಲ್ಯ ಅಲ್ಲ.


ಇದರಿಂದಾಗಿಯೇ ರಾಜಕೀಯ ಪಕ್ಷಗಳ ಗುಲಾಮಗಿರಿಯಿಂದ ಹೊರತಾದ ಸ್ವತಂತ್ರ ಮತ್ತು ಸ್ವಾಭಿಮಾನಿ ದಲಿತ ರಾಜಕಾರಣಕ್ಕೆ ಅಂಬೇಡ್ಕರ್ ಪ್ರೇರಣೆ ಒದಗಿಸಬಹುದು, ಆದರೆ ಮಾದರಿಯಾಗಿ ಕಾನ್ಸಿರಾಮ್ ಅವರನ್ನೇ ಸ್ವೀಕರಿಸಬೇಕಾಗುತ್ತದೆ.
ಕೃಪೆ : ಪ್ರಜಾವಾಣಿ 

Monday, December 05, 2011

ಗಾಂಧಿ-ಅಂಬೇಡ್ಕರ್ ಮತ್ತು ನಮ್ಮ ತಪ್ಪು ನಿಲುವುಗಳು !


    ಡಾ. ಸಿದ್ರಾಮ ಕಾರಣಿಕ

ರವಿವಾರದ ಪ್ರಜಾವಾಣಿ ಸಾಪ್ತಾಹಿಕದಲ್ಲಿ (4-12-2011)  ಎನ್.ಎಸ್. ಶಂಕರ್ ಎಂಬುವವರು ಅಂಬೇಡ್ಕರ್ ಪರಿನಿರ್ವಾಣ ದಿನದ ಸಂದರ್ಭದಲ್ಲಿ ಒಂದು ವಿಶೇಷ ಲೇಖನ ಬರೆದಿದ್ದಾರೆ. ನಿಜಕ್ಕೂ ಅದೊಂದು ವಿಶೇಷವಾದ ಲೇಖನವೇನೂ ಅಲ್ಲ ! ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಸರಿಯಾಗಿ ಗ್ರಹಿಸದೆ ಅಥವಾ ಗ್ರಹಿಸಿದರೂ ಅವರ ವಿಚಾರಗಳಿಗೆ ಸಮ್ಮತಿಯಿಲ್ಲದ ಮನೋಭಾವದವರು ಹೀಗೆ ಬರೆಯುವುದರಲ್ಲಿ ಅಚ್ಚರಿ ಪಡುವಂಥದ್ದೇನೂ  ಇಲ್ಲ. ಯಾಕೆಂದರೆ ಇಂಥ ದಿಕ್ಕುಗಾಣದ ಅಭಿಪ್ರಾಯಗಳು ಇಂದು ನಿನ್ನೆಯವಲ್ಲ ; ಅವುಗಳಿಗೂ ದೊಡ್ಡ ಇತಿಹಾಸವೇ ಇದೆ. ಗಾಂಧಿಯನ್ನು ಖಳನಾಯಕನನ್ನಾಗಿ ನೋಡಿದ್ದು ಯಾರು ಮತ್ತು ಯಾಕೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಒಂದು ವೇಳೆ ಗಾಂಧಿ-ಅಂಬೇಡ್ಕರ್ ಇಬ್ಬರೂ ಒಂದೇ ಹೋರಾಟದ ಎರಡು ವಿಭಿನ್ನ ಧ್ವನಿಗಳು ಎಂದು ಗುರುತಿಸೋಣ ; ಆದರೆ ಹಾಗೆ ಗುರುತಿಸುವಾಗ ಐತಿಹಾಸಿಕ ಸತ್ಯಗಳನ್ನು ಮರೆ ಮಾಚಿ ಮಾತನಾಡುವುದು ಸರಿಯಲ್ಲ. ಗಾಂಧಿ, ದಲಿತರ ವಿರೋಧಿಯಲ್ಲ ಎಂಬುದು ಎಷ್ಟು ಸತ್ಯವೋ ಅಷ್ಟೇ ಅವರು ದಲಿತಪರವಾದ ಕಾಳಜಿಯನ್ನೂ ಹೊಂದಿರದ ವ್ಯಕ್ತಿ. 'ಹರಿಜನ' ಎಂಬ ಒಂದು ಪತ್ರಿಕೆಯನ್ನು ಪ್ರಕಟಿಸಿ, ಕೆಲ ಅಸಹ್ಯಕರವಾದ ಆಚರಣೆಗಳನ್ನು ಪಾಲಿಸದಂತೆ ಸಮೂಹದಲ್ಲಿ ತೋರಿಸಿಕೊಳ್ಳುವುದು ಕೇವಲ ಡಾಂಭಿಕತೆ ಅಷ್ಟೆ ! ಕೇವಲ ಪೂನಾ ಒಪ್ಪಂದ ಮಾತ್ರವಲ್ಲ ; ಗಾಂಧಿಯ ನಡೆಯನ್ನು ನಿರಾಕರಿಸಲು ಇನ್ನೂ ಬಹಳಷ್ಟು ಕಾರಣಗಳು ಇವೆ ಎಂಬುದನ್ನು ಮರೆಯಬಾರದು ; ಮರೆತು ಮಾತನಾಡಿದರೆ ಅದನ್ನು 'ಜ್ಞಾನ, ಅರೆಜ್ಞಾನ ಮತ್ತು ಅಪಕಲ್ಪನೆ'ಎನ್ನಬೇಕಾಗುತ್ತದೆ ! 
1930 ರಲ್ಲಿ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ ಮೇಲೆ 'ಅಂಬೇಡ್ಕರ ಇನ್ನೂ ಸಾರ್ವಜನಿಕ ಜೀವನವನ್ನು ಪ್ರವೇಶಿಸಿರಲೂ ಇಲ್ಲ' ಎಂಬ ವ್ಯಾಖ್ಯಾನ ಮಾಡುವುದು ಅಜ್ಞಾನವಲ್ಲದೇ ಮತ್ತೇನು ? ಇದು ಡಾ.ಬಾಸಾಹೇಬ ಅಂಬೇಡ್ಕರ ಬಗ್ಗೆ ಇರುವ ಅರೆಜ್ಞಾನ ಎನ್ನಬೇಕಾಗುತ್ತದೆ. 1930 ಕ್ಕಿಂತಲೂ ಮುಂಚೆಯೇ ಡಾ. ಬಾಬಾಸಾಹೇಬರು ಮಾಡಿರುವ ಕಾರ್ಯಗಳ ಬಗ್ಗೆ ಯಾಕೆ ಇವರು ಅರಿವು ಇಟ್ಟುಕೊಂಡು ಮಾತಾಡುವುದಿಲ್ಲ ? 1920 ರಲ್ಲಿಯೇ ಡಾ. ಬಾಬಾಸಾಹೇಬ ಅಂಬೇಡ್ಕರ 'ಮೂಕ ನಾಯಕ' ಎಂಬ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದರು. 1924 ರಲ್ಲಿ 'ಬಹಿಷ್ಕೃತ ಹಿತಕಾರಿಣಿ ಸಭಾ' ಸ್ಥಾಪನೆ ಮಾಡಿದರು. 1927 ರ ಎಪ್ರಿಲ್ ತಿಂಗಳಲ್ಲಿ 'ಬಹಿಷ್ಕೃತ ಭಾರತ' ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದರು. ಅದೇ ವರ್ಷ ಮುಂಬಯಿ ವಿಧಾನಮಂಡಲದ ಸದಸ್ಯರಾದರು. ಅದೇ ವರ್ಷ ಸಪ್ಟೆಂಬರ್ ತಿಂಗಳಿನಲ್ಲಿ ;ಸಮಾಜ ಸಮತಾ ಸಂಘ' ಸ್ಥಾಪಿಸಿದರು. ಅದೇ 1927 ರ ನವ್ಹೆಂಬರ್ ತಿಂಗಳಲ್ಲಿ ಅಮರಾವತಿಯ ಅಂಬಾದೇವಿಯ ಮಂದಿರ ಪ್ರವೇಶ ಚಳುವಳಿ ನಡೆಸಿದರಲ್ಲದೆ, ಡಿಸೆಂಬರ್ ತಿಂಗಳಿನಲ್ಲಿ 'ಮನುಸ್ಮೃತಿ' ಮಹಾಡದಲ್ಲಿ ಸುಟ್ಟು ಹಾಕಿ ವೈದಿಕ ಸನಾತನಿ ಸಂಪ್ರದಾಯಕ್ಕೆ ಸವಾಲು ಹಾಕಿದರು. ಐತಿಹಾಸಿಕತೆ ರೂಪಿಸಿದ ನಾಶಿಕದ 'ಕಾಳಾರಾಮ ಮಂದಿರ ಪ್ರವೇಶ ಚಳುವಳಿ' ನಡೆಸಿದ್ದೂ 1930 ಮಾರ್ಚ್ ತಿಂಗಳಲ್ಲಿ ; ಆನಂತರವೇ ಅಂದರೆ ಅದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ದುಂಡು ಮೇಜಿನ ಪರಿಷತ್ತಿನಲ್ಲಿ ಪಾಲ್ಗೊಳ್ಳಲು ಇಂಗ್ಲಂಡಿಗೆ ಹೋದರು. ಅವರು ಇಂಗ್ಲಂಡಿಗೆ ಹೋಗುವುದಕ್ಕಿಂತ ಮುಂಚೆಯೇ ಇಷ್ಟೆಲ್ಲ ಸಾಮಾಜಿಕ ಕಾರ್ಯಗಳನ್ನು ಮಾಡಿದರೂ ಏನೂ ಮಾಡಿಯೇ ಇಲ್ಲ ಎಂದು ಹೇಳಿಕೆ ಕೊಡುವುದು ಅರೆಜ್ಞಾನದಿಂದ ಬಂದ ಅಹಂಕಾರವೇ ಸರಿ. ಒಂದು ಲೇಖನ ಬರೆಯುವಾಗ ವಿಷಯದ ಆಳ-ಅಗಲಗಳನ್ನು ಸರಿಯಾಗಿ ತಿಳಿದುಕೊಳ್ಳದೇ ಅಥವಾ ತಿಳಿದುಕೊಂಡಿದ್ದರೂ ಮರೆಮಾಚಿ ಸುಳ್ಳನ್ನು ಹೇಳುವ ಮೂಲಕ ಅವಮಾನಿಸುವ ಪ್ರವೃತ್ತಿಯನ್ನು ಬಿಡಬೇಕಾಗುತ್ತದೆ. ಎನ್.ಎಸ್. ಶಂಕರ ಅವರು ಇನ್ನೊಂದಿಷ್ಟು ಓದಿಕೊಂಡರೆ ಚೆನ್ನ !
                                                             

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.