Showing posts with label ಸ್ವಾರ್ಥ. Show all posts
Showing posts with label ಸ್ವಾರ್ಥ. Show all posts

Tuesday, August 14, 2012

ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ

                                ದಿನೇಶ ಅಮೀನಮಟ್ಟು
ಮಳೆ ನಿಂತರೂ ಒಂದಷ್ಟು ಹೊತ್ತು ಮಳೆಹನಿ ನಿಲ್ಲುವುದಿಲ್ಲ. ಅಣ್ಣಾ ತಂಡವನ್ನು ಬರ್ಖಾಸ್ತುಗೊಳಿಸಲಾಗಿದ್ದರೂ ಅದು ಪ್ರಾರಂಭಿಸಿದ್ದ ಚಳವಳಿ ಬಗ್ಗೆ ಚರ್ಚೆ-ವಿಶ್ಲೇಷಣೆಗಳು ನಿಂತಿಲ್ಲ, ಇದು ಇನ್ನಷ್ಟು ಕಾಲ ಮುಂದುವರಿಯಲಿದೆ.

ಮಿಂಚಿಮರೆಯಾಗಿ ಹೋದ ಈ ಚಳವಳಿಯ ಗರ್ಭಪಾತಕ್ಕೆ ಕಾರಣರಾದ ಖಳನಾಯಕರು ಯಾರು ಎನ್ನುವುದನ್ನು ಗುರುತಿಸುವ ಕೆಲಸ ಈಗ ಪ್ರಾರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಎಲ್ಲರೂ ಅಣ್ಣಾತಂಡದ ಪ್ರಮುಖ ಸದಸ್ಯರಾದ ಅರವಿಂದ್ ಕೇಜ್ರಿವಾಲ್, ಕಿರಣ್‌ಬೇಡಿ ಮತ್ತು ಪ್ರಶಾಂತ್ ಭೂಷಣ್ ಮೇಲೆ ಎರಗಿಬಿದ್ದಿದ್ದಾರೆ.


`ಸೃಷ್ಟಿ, ಪಾಲನೆ ಮತ್ತು ಲಯ`ದ ಮೂರೂ ಕೆಲಸಗಳನ್ನು ಈ ತ್ರಿಮೂರ್ತಿಗಳೇ ಮಾಡಿದ್ದು ಎಂದು ಅಣ್ಣಾಬೆಂಬಲಿಗರು ಆರೋಪಿಸತೊಡಗಿದ್ದಾರೆ. ಚಳವಳಿ ಹಾದಿ ತಪ್ಪಲು ಕಾರಣವಾದ ಇವರ ಪಾತ್ರ  ಕ್ಷಮಿಸಿ ಬಿಡುವಂತಹದ್ದು ಖಂಡಿತ ಅಲ್ಲ.


ಆದರೆ ಇವರಷ್ಟೇ ಖಳನಾಯಕರೇ? ಹಾಗೆಂದು ತೀರಾ ಸರಳವಾಗಿ ತೀರ್ಮಾನಿಸಿಬಿಟ್ಟರೆ ಈ ಚಳವಳಿಯ ಸೋಲು-ಗೆಲುವುಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಾರದು.

ಈ ತ್ರಿಮೂರ್ತಿಗಳಷ್ಟೇ ಖಳರು ಅಲ್ಲದೆ ಇದ್ದರೆ ಬೇರೆ ಯಾರು ? ಕೆಲವರು ಅಣ್ಣಾಹಜಾರೆಯವರನ್ನೇ ಹೆಸರಿಸುತ್ತಾರೆ. ಸ್ವಲ್ಪ ಮಟ್ಟಿಗೆ ಇದು ನಿಜ ಕೂಡಾ. ಹಜಾರೆ ಅವರು ಸಜ್ಜನ, ಪ್ರಾಮಾಣಿಕ, ನಿಸ್ವಾರ್ಥಿ, ಸರಳಜೀವಿ ಎನ್ನುವುದರ ಬಗ್ಗೆ ಬಹಳ ಮಂದಿಗೆ ಅನುಮಾನ ಇಲ್ಲ.


ಆದರೆ ಈ ಗುಣಗಳಿಂದಷ್ಟೇ ನಾಯಕನಾಗಲು ಸಾಧ್ಯವೇ ಎನ್ನುವುದು ಪ್ರಶ್ನೆ. ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ನಂತರದಲ್ಲಿ ನಡೆದ ಎರಡು ಪ್ರಮುಖ ಚಳವಳಿಗಳನ್ನು ಮುನ್ನಡೆಸಿದ್ದ ಗಾಂಧೀಜಿ ಮತ್ತು ಜಯಪ್ರಕಾಶ್ ನಾರಾಯಣ್ ಕೇವಲ ಸಜ್ಜನರು ಮತ್ತು ಪ್ರಾಮಾಣಿಕರಾಗಿರಲಿಲ್ಲ.


ಅವರು ಬುದ್ದಿವಂತರೂ ಆಗಿದ್ದರು.  ವಿಸ್ತಾರವಾದ ಓದು, ರಾಷ್ಟ್ರ-ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಅರಿವು, ಪ್ರವಾಸ ಮತ್ತು ಜನರ ಜತೆಗಿನ ಒಡನಾಟ ಅವರಿಗೆ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುವ ತೀಕ್ಷ್ಣಗ್ರಹಣಶಕ್ತಿಯನ್ನು ತಂದು ಕೊಟ್ಟಿತ್ತು.  ಒಂದು ಅನ್ನದ ಅಗುಳನ್ನು ಮುಟ್ಟಿಯೇ ಪಾತ್ರೆಯಲ್ಲಿದ್ದ ಅನ್ನ ಬೆಂದಿದೆಯೇ ಇಲ್ಲವೇ ಎನ್ನುವುದನ್ನು ಹೇಳುವಷ್ಟು ಸಮಾಜದ ನಾಡಿಮಿಡಿತವನ್ನ್ನು ಬಲ್ಲವರಾಗಿದ್ದರು.

ಜನಪ್ರಿಯತೆಯಲ್ಲಿ ತೇಲಿಹೋಗದೆ ಅದನ್ನು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಳ್ಳುವ ನಿರ್ವಹಣಾ ಶಕ್ತಿ ಮತ್ತು ಸಂಯಮ ಅವರಲ್ಲಿತ್ತು. ಜಾತಿ,ಧರ್ಮ,ಪ್ರದೇಶಗಳಲ್ಲಿ ಒಳಗಿಂದೊಳಗೆ ಒಡೆದುಹೋಗಿರುವ ದೇಶದಲ್ಲಿ ಒಂದು ಸಾಮೂಹಿಕ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗಲು ಇಂತಹ ಸಾಮರ್ಥ್ಯಬೇಕಾಗುತ್ತದೆ. ಈ ಗುಣಗಳು ಅಣ್ಣಾಹಜಾರೆಯವರಲ್ಲಿ ಇದ್ದಿದ್ದರೆ ಭ್ರಷ್ಟಾಚಾರ ವಿರೋಧಿ ಚಳವಳಿ ನಡುಹಾದಿಯಲ್ಲಿಯೇ ಅಪಘಾತಕ್ಕೆ ಈಡಾಗುತ್ತಿರಲಿಲ್ಲ.

ಅಣ್ಣಾಚಳವಳಿ ಹಾದಿ ತಪ್ಪಲು ಮಾಧ್ಯಮರಂಗ ವಹಿಸಿದ ಖಳನಾಯಕನ ಪಾತ್ರವೇ ಕಾರಣ ಎನ್ನುವವರೂ ಇದ್ದಾರೆ. ಈ ಆರೋಪವನ್ನು ಮಾಡುವ ಅಣ್ಣಾತಂಡದ ಸದಸ್ಯರು ಮತ್ತು  ಬೆಂಬಲಿಗರು  ಕೊನೆದಿನಗಳಲ್ಲಿ ಮಾಧ್ಯಮಗಳ ನಿರ್ಲಕ್ಷ್ಯ ಮತ್ತು ಟೀಕೆಗಳನ್ನು ಉದಹರಿಸುತ್ತಿದ್ದಾರೆ.


ಇದು ಮಾಧ್ಯಮಗಳನ್ನು ಅರ್ಥಮಾಡಿಕೊಳ್ಳಲಾಗದ ಅವರ ಅಜ್ಞಾನವನ್ನಷ್ಟೇ ತೋರಿಸುತ್ತದೆ. ಕೊನೆದಿನಗಳ ನಿರ್ಲಕ್ಷ್ಯಗಿಂತಲೂ  ಅಣ್ಣಾಚಳವಳಿಗೆ ಹೆಚ್ಚು ಹಾನಿ ಉಂಟು ಮಾಡಿದ್ದು ಪ್ರಾರಂಭದ ದಿನಗಳ ಅತಿಪ್ರಚಾರ.


ಕಣ್ಣುಕಟ್ಟಿನ ಪ್ರಚಾರ ವೈಖರಿ ಮೂಲಕ ಉಪವಾಸ ಶಿಬಿರದ ಮುಂದೆ ಸೇರಿದ್ದ ಸಾವಿರ ಜನರನ್ನು  ಲಕ್ಷವಾಗಿ, ಲಕ್ಷ ಜನರನ್ನು ಕೋಟಿಯಾಗಿ ಮಾಧ್ಯಮಗಳು ಬಿಂಬಿಸಿದ್ದನ್ನು ನಿಜವೆಂದೇ ನಂಬಿದ ಅಣ್ಣಾತಂಡದ ಸದಸ್ಯರು ದೇಶದ 120 ಕೋಟಿ ಜನ ತಮ್ಮ ಬೆನ್ನಹಿಂದೆ ಇದ್ದಾರೆ ಎಂದು ಭ್ರಮಿಸಿಬಿಟ್ಟರು.

 
ಮೂರೂಹೊತ್ತು ಟಿವಿ ಪರದೆಗಳಲ್ಲಿ, ಪತ್ರಿಕೆಗಳ ಪುಟಗಳಲ್ಲಿ ಕಾಣಿಸುವ ತಮ್ಮ ಮುಖಗಳನ್ನು ಪ್ರೀತಿಸುತ್ತಾ ಆತ್ಮರತಿಗೆ ಜಾರಿಬಿಟ್ಟರು. ಮಾಧ್ಯಮರಂಗ ವಾಣಿಜ್ಯೀಕರಣಗೊಂಡ ಬದಲಾದ ಪರಿಸ್ಥಿತಿಯಲ್ಲಿ ಮುಖ್ಯವಾಗಿ ಟಿವಿ ಚಾನೆಲ್‌ಗಳು ಹುಟ್ಟು-ಸಾವುಗಳೆರಡನ್ನು ಸಂಭ್ರಮದಿಂದ ಆಚರಿಸುತ್ತದೆ.

ಈ ಭರದಲ್ಲಿ ಸರಿ-ತಪ್ಪು ಇಲ್ಲವೆ ಒಳ್ಳೆಯದು-ಕೆಟ್ಟದನ್ನು ಗುರುತಿಸುವ ನ್ಯಾಯಪ್ರಜ್ಞೆ ಜನಪ್ರಿಯತೆಯ ಪ್ರವಾಹದಲ್ಲಿ ಕೊಚ್ಚಿಕೊಂಡುಹೋಗುತ್ತದೆ. ಮಾಧ್ಯಮಗಳಿಂದ ಪ್ರಚಾರ ಬಯಸುವವರಿಗೆ ಇದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲದೆ ಇದ್ದರೆ ಅಣ್ಣಾತಂಡಕ್ಕಾದ ಗತಿಯೇ ಆಗುತ್ತದೆ.

ಮಾಧ್ಯಮಗಳ ಪ್ರಚಾರದ ಊರುಗೋಲಿನ ಬಲದಿಂದ ಎದ್ದುನಿಂತದ್ದು, ಆ ಊರುಗೋಲನ್ನು ಕಿತ್ತುಕೊಂಡ ಕೂಡಲೇ ಕುಸಿದುಬೀಳುತ್ತದೆ. ಹಾಗೆಯೇ ಆಯಿತು.

ಇವರೆಲ್ಲರ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ ಅಣ್ಣಾಚಳವಳಿಯ ವೈಫಲ್ಯದಲ್ಲಿ ಖಳನಾಯಕರ ಪಾತ್ರವಹಿಸಿದ್ದ ಬಹುಮುಖ್ಯವಾದ ಸಮುದಾಯವನ್ನು ಎಲ್ಲರೂ ಮರೆತುಬಿಟ್ಟಿದ್ದಾರೆ. ಅದು ಚಳವಳಿಗೆ ಸೇರುತ್ತಿದ್ದ ಜನ. ಜಯಪ್ರಕಾಶ್ ನಾರಾಯಣ್ ನೇತೃತ್ವದ `ಸಂಪೂರ್ಣ ಕ್ರಾಂತಿ`ಯ ನಂತರದ ದಿನಗಳಲ್ಲಿ ಒಂದು ಚಳವಳಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಎಂದೂ ಭಾಗವಹಿಸಿರಲಿಲ್ಲ.

`ನಾನೇ ಅಣ್ಣಾ` ಎಂದು ತಲೆಪಟ್ಟಿ ಕಟ್ಟಿಕೊಂಡು, ಎದೆಮೇಲೆ ಬರೆಸಿಕೊಂಡು, ಹಗಲುಹೊತ್ತಿನಲ್ಲಿ ಘೋಷಣೆ ಕೂಗುತ್ತಾ, ರಾತ್ರಿಹೊತ್ತು ಕ್ಯಾಂಡಲ್ ಹಚ್ಚುತ್ತಾ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಕ್ರೀಯಾಶೀಲರಾಗಿ `ಅರಬ್ ವಸಂತ` ಇನ್ನೇನು ಭಾರತದಲ್ಲಿ ಪ್ರಾರಂಭವಾಗಿಯೇ ಬಿಟ್ಟಿತೆನ್ನುವ ಭ್ರಮಾಲೋಕವನ್ನು ಸೃಷ್ಟಿಸುತ್ತಿದ್ದವರು ಚಳವಳಿಯಲ್ಲಿ ಭಾಗವಹಿಸಿದ್ದ ಜನ.

ಅಣ್ಣಾಹಜಾರೆ ಅವರ ಮೊದಲೆರಡು ಉಪವಾಸಗಳ ಕಾಲದಲ್ಲಿ ಸಕ್ರಿಯವಾಗಿದ್ದ ಈ ಜನಸಮೂಹ ನಂತರದ ಎರಡು ಉಪವಾಸಗಳ ಕಾಲಕ್ಕೆ ಆಸಕ್ತಿಯನ್ನು ಕಳೆದುಕೊಂಡುಬಿಟ್ಟಿತು.

ಹಿಂದಿನಷ್ಟು ಜನ ಸೇರುತ್ತಿಲ್ಲ ಎಂದು ಗೊತ್ತಾದ ಕೂಡಲೇ ಆಡಳಿತಾರೂಢ ಪಕ್ಷ ಚಳವಳಿಗಾರರನ್ನು ಕರೆಸಿ ಮಾತನಾಡಲು ಕೂಡಾ ಹೋಗದೆ ಸುಮ್ಮನಾಯಿತು, ಜನ ಕಡಿಮೆ ಸೇರುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಮಾಧ್ಯಮಗಳು ಕೂಡಾ ಹಿಂದೆ ಸರಿದುಬಿಟ್ಟವು. ಅಣ್ಣಾತಂಡ ಯುದ್ಧಮುಗಿಯವ ಮೊದಲೇ ಶಸ್ತ್ರತ್ಯಾಗ ಮಾಡಲು ಮುಖ್ಯ ಕಾರಣ ತಮ್ಮ ಹಿಂದೆ ಲಕ್ಷಲಕ್ಷ ಸಂಖ್ಯೆಯಲ್ಲಿದ್ದೇವೆ ಎಂಬ ನಂಬಿಕೆ ಹುಟ್ಟಿಸಿದ್ದ ಜನ ದೂರವಾಗಿದ್ದು.

ಈ ಜನ ಹೀಗೆ ಯಾಕೆ ವರ್ತಿಸಿದರು ಎನ್ನುವುದನ್ನು ವಿಶ್ಲೇಷಿಸುವ ಮೊದಲು ಇವರು ಯಾರು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ನಡೆಯುವ ಚಳವಳಿಗಳನ್ನು ಒಂದು ನಿರ್ದಿಷ್ಟವಾದ ಆವರಣದೊಳಗೆ ಸೇರಿಸುವುದು ಕಷ್ಟವಾದರೂ ಸ್ಥೂಲವಾಗಿ ಇವುಗಳನ್ನು ರಾಜಕೀಯ ಮತ್ತು ರಾಜಕೀಯೇತರ  ಎಂದು ಗುರುತಿಸಬಹುದು.

ಈ ವ್ಯಾಖ್ಯಾನ ಕೂಡಾ ಚಳವಳಿಗಳ ಸ್ಪಷ್ಟ ಚಿತ್ರವನ್ನು ನೀಡುವುದಿಲ್ಲ. ರಾಜಕೀಯ ಉದ್ದೇಶದ ಚಳವಳಿಗಳ ಬಗ್ಗೆ ಯಾವುದೇ ಗೊಂದಲ ಇಲ್ಲ. ಉದಾಹರಣೆಗೆ ಕಾಂಗ್ರೆಸ್,ಬಿಜೆಪಿ, ಕಮ್ಯುನಿಸ್ಟ್ ಇತ್ಯಾದಿ ಪಕ್ಷಗಳು ನಡೆಸುವ ಚಳವಳಿಗಳು.

ಇಲ್ಲಿ ಎಲ್ಲವೂ ಪಾರದರ್ಶಕ. ಸಮಸ್ಯೆ ರಾಜಕೀಯೇತರ ಚಳವಳಿಗಳದ್ದು. ನಿರ್ದಿಷ್ಟವಾದ ರಾಜಕೀಯ ಸಿದ್ಧಾಂತವನ್ನು ಹೊಂದಿಯೂ ಚುನಾವಣಾ ರಾಜಕೀಯದಿಂದ ದೂರವಾಗಿರುವ ರಾಜಕೀಯೇತರ ಚಳವಳಿಗಳಿವೆ.

ಇದೇ ರೀತಿ  ರಾಜಕೀಯೇತರ ಚಳವಳಿಗಳಾಗಿ ಪ್ರಾರಂಭಗೊಂಡು ಕ್ರಮೇಣ ನೇರ ಚುನಾವಣೆಯಲ್ಲಿ ಪಾಲ್ಗೊಂಡ ಚಳವಳಿಗಳೂ ಇವೆ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕವೂ ಸೇರಿದಂತೆ ದೇಶದ ಬೇರೆಬೇರೆ ಭಾಗಗಳಲ್ಲಿನ ರೈತ ಮತ್ತು ದಲಿತ ಚಳವಳಿಗಳು. ರಾಜಕೀಯ ಚಳವಳಿಗಳಲ್ಲಿ ಭಾಗವಹಿಸಿದವರು ಒಂದು ಪಕ್ಷದ ಸಿದ್ಧಾಂತಕ್ಕೆ ಬದ್ದರಾಗಿರುವವರು.

ರಾಜಕೀಯೇತರ ಚಳವಳಿಗೆ ವಿಶಾಲವಾದ ಹರಹು ಇರುತ್ತದೆ. ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಇಲ್ಲವೆ ಭೂಮಿ ಕಳೆದುಕೊಂಡವರು, ಮನೆ ಕಳೆದುಕೊಂಡವರು,ಅನ್ಯಾಯಕ್ಕೀಡಾದವರು...

ಹೀಗೆ ಬೇರೆಬೇರೆ ಜನವರ್ಗವನ್ನು ನಿರ್ದಿಷ್ಟವಾಗಿ ಗುರಿಯಾಗಿಟ್ಟುಕೊಂಡು ಈ ಚಳವಳಿಗಳು ನಡೆಯುತ್ತಿರುತ್ತವೆ. ಈ ಎರಡೂ ಬಗೆಯ ಚಳವಳಿಗಳಿಗೆ ಸ್ಪಷ್ಟವಾದ ಐಡೆಂಟಿಟಿ ಇರುತ್ತದೆ. ಇದರಿಂದಾಗಿ ಚಳವಳಿಯ ನಾಯಕರಿಗೆ ಕೂಡಾ ತಮ್ಮ ಉದ್ದೇಶ ಮತ್ತು ಸಾಗುವ ದಾರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ.

 ಆದರೆ ಬಹಳ ದೊಡ್ಡ ಕ್ಯಾನ್‌ವಾಸ್ ಇಟ್ಟುಕೊಂಡು ಪ್ರಾರಂಭವಾದ ಅಣ್ಣಾಚಳವಳಿಗೆ ಒಂದು ನಿರ್ದಿಷ್ಟ ಐಡೆಂಟಿಟಿ ಇರಲಿಲ್ಲ. ಇದು ಈ ಚಳವಳಿಯ ಶಕ್ತಿಯೂ ಹೌದು, ದೌರ್ಬಲ್ಯ ಕೂಡಾ. ಯಾವುದೇ ರಾಜಕೀಯ ಪಕ್ಷದ ಜತೆಗೆ ಗುರುತಿಸಿಕೊಳ್ಳದವರು ಮಾತ್ರವಲ್ಲ, ಗುರುತಿಸಿಕೊಂಡವರು ಕೂಡಾ ಎದೆಮೇಲಿದ್ದ ಪಕ್ಷದ ಬ್ಯಾಡ್ಜ್‌ಗಳನ್ನು ಕಿಸೆಯಲ್ಲಿಟ್ಟುಕೊಂಡು ಅಣ್ಣಾಬ್ಯಾಡ್ಜ್ ಧರಿಸಿ ಉಪವಾಸ ಕೂತಿದ್ದರು.

ಭ್ರಷ್ಟಾಚಾರ ಎನ್ನುವುದು ಈ ದೇಶದ ಬಡವನಿಂದ ಹಿಡಿದು ಶ್ರಿಮಂತರವರೆಗೆ, ಅಶಿಕ್ಷಿತರಿಂದ ಹಿಡಿದು ಶಿಕ್ಷಿತರವರೆಗೆ ಎಲ್ಲರನ್ನೂ ಆವರಿಸಿರುವ ಸಮಸ್ಯೆಯಾಗಿರುವ ಕಾರಣ ನಮ್ಮ ಗುರಿ ದೇಶದ 120 ಕೋಟಿ ಜನ ಎಂದು ಅಣ್ಣಾತಂಡ ತಿಳಿದುಕೊಂಡುಬಿಟ್ಟಿತು.

ತಂಡದ ಸದಸ್ಯರು ಎಲ್ಲರನ್ನೂ ಬನ್ನಿಬನ್ನಿ ಎಂದು ಕೈಬೀಸಿ ಕರೆಯಲಾರಂಭಿಸಿದರು. ಹೀಗೆ ಬಂದವರಲ್ಲಿ ಬಹುಸಂಖ್ಯಾತರು ಮಧ್ಯಮವರ್ಗಕ್ಕೆ ಸೇರಿರುವ ನಗರ ಕೇಂದ್ರಿತ, ಉದ್ಯೋಗಸ್ಥ, ಸದಾ ಸುರಕ್ಷತೆಯ ಕಕ್ಷೆಯೊಳಗೆ ಇರಬೇಕೆಂದು ಬಯಸುವ ಮತ್ತು ಯಾವುದೇ ಚಳವಳಿಯಲ್ಲಿ ಭಾಗವವಹಿಸಿ ಕಷ್ಟ-ನಷ್ಟ ಅನುಭವಿಸದವರು.

ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಹುಟ್ಟಿದ ಮತ್ತು ಆರ್ಥಿಕ ಉದಾರೀಕರಣದ ಯುಗದಲ್ಲಿ ಕಣ್ಣುಬಿಟ್ಟ 25-35 ವಯಸ್ಸಿನ ಆಜುಬಾಜಿನ ಈ ಯುವವರ್ಗ  ಲಾಭ-ನಷ್ಟದ ಲೆಕ್ಕಾಚಾರ ಇಟ್ಟುಕೊಂಡೇ ಮುಂದೆ ಹೆಜ್ಜೆ ಇಡುವವರು. `ಸೋಡಾಗ್ಯಾಸ್` ರೀತಿ ಒಮ್ಮೆಲೇ ಚಿಮ್ಮಿದ ಈ `ಯುವಬೆಂಬಲವನ್ನು ಅಣ್ಣಾತಂಡ ನಂಬಿತು. ನಂಬಿಕೆ ಕೈಕೊಟ್ಟಿತು.

 ಈ ಮಧ್ಯಮ ವರ್ಗ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಯಾವುದೇ ದೇಶದಲ್ಲಿ ರಾಜಕೀಯ ಇಲ್ಲವೆ ಸಾಮಾಜಿಕ ಬದಲಾವಣೆಯಲ್ಲಿ ಭಾಗವಹಿಸಿಲ್ಲ. ಇದನ್ನು ಹೇಳಿದಾಗ ಕೆಲವರು ಅರಬ್‌ರಾಷ್ಟ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಉದಾಹರಣೆ ಕೊಡಬಹುದು. ಅಲ್ಲಿನ ಮಧ್ಯಮವರ್ಗದಿಂದಲೇ ಚಳವಳಿ ಪ್ರಾರಂಭವಾದರೂ ಅದು ಅನ್ಯಾಯಕ್ಕೀಡಾದ ಎಲ್ಲ ವರ್ಗಗಳನ್ನು ಜತೆಯಲ್ಲಿ ಕಟ್ಟಿಕೊಂಡು ಬೆಳೆಯುತ್ತಾಹೋಯಿತು.

ಆ ದೇಶಗಳಲ್ಲಿ ಸರ್ವಾಧಿಕಾರದಿಂದ ನಲುಗಿಹೋದ ಸಾಮಾನ್ಯ ಜನ ಅದರಲ್ಲಿ ಭಾಗವಹಿಸಿದ್ದರು. ಪ್ರಾಣವೊಂದನ್ನು ಬಿಟ್ಟು ಕಳೆದುಕೊಳ್ಳಲು ಬೇರೆ ಏನೂ ಇಲ್ಲದವರು ಅವರು. ಇಲ್ಲಿ ಹಾಗಾಗಲಿಲ್ಲ. ಅಣ್ಣಾಚಳವಳಿ ಎತ್ತಿದ ಭ್ರಷ್ಟಾಚಾರದ ವಿಷಯ ಎಲ್ಲರಿಗೆ ಸಂಬಂಧಿಸಿದ್ದೇ ಆಗಿದ್ದರೂ ಅದರ ತೀವ್ರತೆಯ ಅನುಭವ ಬೇರೆಬೇರೆ ವರ್ಗದ ಜನರಿಗೆ ಬೇರೆಬೇರೆ ರೀತಿಯದಾಗಿದೆ.

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವ ರೈತ, ಹೆಚ್ಚು ಸಂಬಳ ಸಿಗುತ್ತಿಲ್ಲ ಎನ್ನುವ ಕಾರ್ಮಿಕ, ಲಿಂಗತಾರತಮ್ಯ  ನಡೆಯುತ್ತಿದೆ ಎನ್ನುವ ಮಹಿಳೆ, ಜಾತಿತಾರತಮ್ಯದಿಂದಾಗಿ ದೌರ್ಜನ್ಯ ನಡೆಯುತ್ತಿದೆ ಎನ್ನುವ ದಲಿತರು, ಉದ್ಯೋಗ ಸಿಗುತ್ತಿಲ್ಲ ಎನ್ನುವ ಯುವಕರು..ಹೀಗೆ ಸಮಸ್ಯೆಗಳು ಹತ್ತಾರು.

ಇವರ ಕಷ್ಟಗಳ ಪಟ್ಟಿಯಲ್ಲಿ ಭ್ರಷ್ಟಾಚಾರ  ಇದ್ದರೂ ಅದು ಮೊದಲ ಸ್ಥಾನದಲ್ಲಿ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆ ಇವರ ಕಷ್ಟಪರಿಹಾರಕ್ಕೆ ನೆರವಾಗಲೂಬಹುದು. ಆದರೆ ಇದನ್ನು ಯಾರೂ ಅವರಿಗೆ ಮನವರಿಕೆ ಮಾಡಿಕೊಟ್ಟಿಲ್ಲ.

ಆದುದರಿಂದ ಅವರಲ್ಲಿ ಹೆಚ್ಚಿನ ಮಂದಿ ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ದೂರವೇ ಉಳಿದುಬಿಟ್ಟರು. ಅವರನ್ನು ಹತ್ತಿರಕ್ಕೆ ಕರೆದುಕೊಂಡು ಬರುವ ಪ್ರಯತ್ನವನ್ನೂ ಯಾರೂ ಮಾಡಲಿಲ್ಲ. ಈ ಕಾರಣದಿಂದಾಗಿಯೇ ಜನಲೋಕಪಾಲರ ನೇಮಕಕ್ಕಾಗಿ ನಡೆದ ಹೋರಾಟ ನಿಜವಾದ ಅರ್ಥದಲ್ಲಿ ಜನಚಳವಳಿ ಆಗಲೇ ಇಲ್ಲ.

ಅಣ್ಣಾಚಳವಳಿ ವಿಫಲಗೊಂಡ ಮಾತ್ರಕ್ಕೆ ಮುಂದಿನ ಎಲ್ಲ ದಾರಿಗಳು ಮುಚ್ಚಿಹೋಗಿವೆ ಎಂದರ್ಥ ಅಲ್ಲ. ರಾಷ್ಟ್ರೀಯ ಪಕ್ಷಗಳು ನಿಧಾನವಾಗಿ ಮರೆಗೆ ಸರಿದು ಪ್ರಾದೇಶಿಕ ಪಕ್ಷಗಳು ವಿಜೃಂಭಿಸುತ್ತಿರುವ ಈಗಿನ ರಾಜಕಾರಣದಿಂದಲೂ ಚಳವಳಿಗಾರರೂ ಕಲಿಯಬೇಕಾದ ಪಾಠ ಇದೆ.

ಬಹುಶಃ ರಾಷ್ಟ್ರಮಟ್ಟದ ಒಂದು ಚಳವಳಿಯನ್ನು ಇನ್ನುಮುಂದೆ ನಡೆಸಿಕೊಂಡು ಹೋಗುವುದು ಸಾಧ್ಯ ಇಲ್ಲವೇನೋ? ಇದರಿಂದ ನಿರಾಶರಾಗಬೇಕಾಗಿಲ್ಲ, ಈಗಲೂ ದೇಶದ ನಾನಾಭಾಗಗಳಲ್ಲಿ ನೀರು, ಭೂಮಿ, ಉದ್ಯೊಗ, ಶಿಕ್ಷಣ, ಆರೋಗ್ಯ, ಆತ್ಮಗೌರವ... ಹೀಗೆ ನಾನಾ ಉದ್ದೇಶದ ಚಳವಳಿಗಳು ತಮ್ಮ ಮಿತಿಯಲ್ಲಿ ನಡೆಯುತ್ತಿರುತ್ತವೆ.

ಪ್ರಜಾಪ್ರಭುತ್ವವನ್ನು ಜೀವಂತವಾಗಿ ಮತ್ತು ಆರೋಗ್ಯಪೂರ್ಣವಾಗಿ ಇಟ್ಟಿರುವ ಈ ಸಣ್ಣಸಣ್ಣ ಚಳವಳಿಗಳೇ ಭವಿಷ್ಯದ ಭರವಸೆಗಳು. ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ.
 
ಕೃಪೆ : ಪ್ರಜಾವಾಣಿ

Sunday, April 01, 2012

ಸಿದ್ಧಲಿಂಗಯ್ಯನವರ ಹೊಗಳು ಭಟ್ಟಂಗಿತನ ಎಲ್ಲಿಯವರೆಗೆ ?


ಬೆಂಕಿಯಲ್ಲಿ ಬೆಂದ ಬಡವರಿಗೆ, ಒಡಲಾಳದ ಉರಿಗೆ ನಲುಗಿಹೋದ ಅಸಹಾಯಕರಿಗೆ ದನಿಯಾದವರು ಸಿದ್ಧಲಿಂಗಯ್ಯ. ಅವರ ನೋವಿಗೆ ಮಿಡಿದವರು ಸಿದ್ಧಲಿಂಗಯ್ಯ. ಅವರ ಬದುಕನ್ನೇ ಬರಹಕ್ಕೆ ಇಳಿಸಿದವರು ಸಿದ್ಧಲಿಂಗಯ್ಯ. ಕುಗ್ಗಿ ಕಾಲಕಸವಾದವರ ಬದುಕಿಗೊಂದು ಆಶಾಕಿರಣವಾದವರು ಸಿದ್ಧಲಿಂಗಯ್ಯ. ವ್ಯವಸ್ಥೆಗೆ ವಿರುದ್ಧವಾಗಿ ಸಿಡಿದೆದ್ದು ನಿಂತವರು ಸಿದ್ಧಲಿಂಗಯ್ಯ. ಕನ್ನಡ ಸಾಹಿತ್ಯಕ್ಕೆ ಬಂಡಾಯದ ಬಿಸಿ ಮುಟ್ಟಿಸಿದವರು ಸಿದ್ಧಲಿಂಗಯ್ಯ. ಬಂಡೆಗಲ್ಲುಗಳೂ ಬಾಯ್ಬಿಡುವಂತೆ ಮಾಡಿದವರು ಸಿದ್ಧಲಿಂಗಯ್ಯ. ಕವನಗಳು ಸಾವಿರಾರು ನದಿಗಳಾಗಿ ಕ್ರಾಂತಿಗೀತೆಗಳ ರೂಪದಲ್ಲಿ ನಾಡಿನ ತುಂಬಾ ಹರಿದಾಡುವಂತಾಗಿದ್ದು ಸಿದ್ಧಲಿಂಗಯ್ಯನವರಿಂದ....

ಎಷ್ಟೆಲ್ಲ ಸಾಧನೆ, ಸಾರ್ಥಕ, ಸಂತೃಪ್ತಭಾವ ಒಬ್ಬ ವ್ಯಕ್ತಿಯ ಒಂದಷ್ಟು ಕವನಗಳಿಂದ!?
ಹಾಗೆಯೇ ಸಿದ್ಧಲಿಂಗಯ್ಯನವರು ಕೂಡ- ಕವಿಯಾದರು- ದಲಿತ ಕವಿಯಾದರು- ಬಂಡಾಯಗಾರರಾದರು. ದಿನ ಬೆಳಗಾಗುವುದರಲ್ಲಿ ಕನ್ನಡ ಸಾಹಿತ್ಯಲೋಕದ ಮಿನುಗುತಾರೆಯಾದರು. ಕವನಗಳು ಕ್ರಾಂತಿ ಕಹಳೆ ಮೊಳಗಿಸಿದವು, ಶಿಷ್ಟ ಸಾಹಿತ್ಯಕ್ಕೆ ಉತ್ಕೃಷ್ಟತೆಯನ್ನು ತಂದುಕೊಟ್ಟವು. ಸಿದ್ಧಲಿಂಗಯ್ಯನವರು ಸಾವಿರಾರು ಯುವ ಕವಿಗಳಿಗೆ ಮಾದರಿಯಾದರು. ಜನಪ್ರಿಯ ವ್ಯಕ್ತಿಯಾದರು. ಹೋದಲೆಲ್ಲ ಸನ್ಮಾನ, ಊರೂರಲ್ಲಿ ಮೆರವಣಿಗೆ.
ದಿನಗಳುರುಳಿದಂತೆ, ಕಾಲಚಕ್ರ ತಿರುಗಿದಂತೆ, ವಯಸ್ಸಾದಂತೆ, ಕರಿ ಕುರುಚಲು ಗಡ್ಡ ಬಿಳಿಯಾದಂತೆ ಸಿದ್ದಲಿಂಗಯ್ಯನವರೂ ಬದಲಾದರು. ಅಧಿಕಾರಿಗಳು ಮತ್ತು ಅಧಿಕಾರಸ್ಥರಿಗೆ ಹತ್ತಿರವಾದರು. ಉಳ್ಳವರ ಒಡ್ಡೋಲಗದಲ್ಲಿ ಓಲಾಡತೊಡಗಿದರು. ಅಧಿಕಾರ ಅರಸಿ ಅಂಗಳಕ್ಕೇ ಬಂತು. ಯಾವುದರ ವಿರುದ್ಧ ಹೋರಾಡಿದ್ದರೋ ಅದರ ಅವಿಭಾಜ್ಯ ಅಂಗವೇ ಆಗಿಹೋದರು. ಯಾರ ವಿರುದ್ಧ ಸಿಡಿದೆದ್ದಿದ್ದರೋ ಅವರ ಕಹಳೆ ಕೊಂಬಾದರು. ಅವರೇ ವ್ಯವಸ್ಥೆಯಾದರು. ಅವ್ಯವಸ್ಥೆಗೆ ಮಾದರಿಯಾದರು. ಬಿಳಿ ಗಡ್ಡ ಕಪ್ಪಗಾಯಿತು. ಮಸಿ ಎಲ್ಲವನ್ನೂ ನುಂಗಿತು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ದಲಿತರೆಂದರೆ ಪ್ರೀತಿ. ದಲಿತರ ಪ್ರತಿನಿಧಿಯಂತಿದ್ದ ಸಿದ್ದಲಿಂಗಯ್ಯನವರನ್ನು ಎಂಎಲ್‌ಸಿ ಮಾಡಿದರೆ ದಲಿತೋದ್ಧಾರವಾಗುತ್ತದೆ ಎಂದು ಭ್ರಮಿಸಿದ್ದ ಹೆಗಡೆ, ಕವಿಗೆ ಕುರ್ಚಿಯ ರುಚಿ ಹತ್ತಿಸಿದರು. ಕುರ್ಚಿ ಮೇಲೆ ಕೂತ ಕ್ಷಣದಿಂದಲೇ ಸಿದ್ದಲಿಂಗಯ್ಯ ದಲಿತರನ್ನು ಮರೆತರು. ಬಂಡಾಯಕ್ಕೆ ಬೆಂಕಿ ಹಾಕಿ ಬೂದಿ ಮಾಡಿದರು. ತಮ್ಮ ಹಳೆಯ ಕ್ರಾಂತಿಗೀತೆಗಳನ್ನು ಇಂದಿನ ವ್ಯವಸ್ಥೆಗೆ ಒಗ್ಗುವಂತೆ ತಿದ್ದಿ ಮರು ಮುದ್ರಿಸಿದರು. ಮಠ ಮಾನ್ಯಗಳಿಗೆ ಹೊಕ್ಕಿ ಮಠಾಧೀಶರ ಕಾಲಿಗೆ ಬಿದ್ದರು. ಪಕ್ಷಾತೀತ ವ್ಯಕ್ತಿಯಾದರು, ಪಕ್ಕಾ ರಾಜಕಾರಣಿಯಾದರು, ಅಜಾತಶತ್ರುವಾದರು. ಹೆಗಡೆ, ದೇವೇಗೌಡ, ಪಟೇಲ್, ಕೃಷ್ಣ, ಕುಮಾರಸ್ವಾಮಿ ಮತ್ತು ಈಗ ಬಿಜೆಪಿಯ ಯಡಿಯೂರಪ್ಪ- ಉದ್ದಕ್ಕೂ ಅಧಿಕಾರಸ್ಥರನ್ನು ಓಲೈಸಿಕೊಂಡೇ ಬಂದರು. ಅಧಿಕಾರವನ್ನು ನಿರಂತರವಾಗಿ ಅನುಭವಿಸುತ್ತಲೇ ಬಂದರು.
ಎಲ್ಲಾ ಕಾಲಕ್ಕೂ, ಎಲ್ಲಾ ಕಡೆಯೂ, ಎಲ್ಲೆಲ್ಲಿಯೂ ಸಿದ್ಧ-ಲಿಂಗಯ್ಯನಾದರು.
ಓದಿ, ಬೆಳೆದು ಬಂದ ಪರಿಶ್ರಮಕ್ಕೆ ಸಿಕ್ಕಿದ್ದು ಬೆಂಗಳೂರು ಯೂಸಿವರ್ಸಿಟಿಯ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥನ ಸ್ಥಾನ. ಅಲ್ಲಿದ್ದಷ್ಟು ದಿನವೂ ಪಾಠ ಮಾಡದೆ ದಾಖಲೆ ಬರೆದುಹೋದರು.

ನೋವುಂಡ ಜನರ ಪ್ರತಿನಿಧಿಯಾಗಿ, ಕವಿಯಾಗಿ, ಜನಪ್ರಿಯ ವ್ಯಕ್ತಿಯಾಗಿದ್ದಕ್ಕೆ ಸಿಕ್ಕಿದ್ದು ಎಂಎಲ್‌ಸಿ (ಎರಡು ಟರ್ಮ್), ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ. ಅಧಿಕಾರದ ಕುರ್ಚಿಯಲ್ಲಿ ಕೂತಷ್ಟು ದಿನವೂ ದಲಿತರನ್ನು ನೆನೆಯದೆ, ಕನ್ನಡವನ್ನು ಕಟ್ಟಿ ಬೆಳೆಸದೆ ಸ್ವಾರ್ಥಿಯಾದರು.
ಇಂತಹ ವ್ಯಕ್ತಿಗೆ ಮತ್ತೆ ಈಗ, ಸಂಘ ಪರಿವಾರದ ಸತ್ರದಲ್ಲಿ ಸನ್ಮಾನ- ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನ!?
ಕೃಪೆ : ಗಾಳಿ ಬೀಜ ಬ್ಲಾಗ್

Tuesday, March 06, 2012

ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧರ್ಮದ ಸವಾರಿ – ಮತದಾರರು ಎಚ್ಚೆತ್ತುಕೊಳ್ಳಬೇಕು

-ಆನಂದ ಪ್ರಸಾದ್

ಕರ್ನಾಟಕ ಕಂಡ ಮುಖ್ಯ ಮಂತ್ರಿಗಳ ಪೈಕಿ ಯಡಿಯೂರಪ್ಪನವರು ಅತ್ಯಂತ ಭ್ರಷ್ಟ, ಸ್ವಜನ ಪಕ್ಷಪಾತಿ ಹಾಗೂ ನಿರ್ಲಜ್ಜ ಮುಖ್ಯಮಂತ್ರಿಯೆಂದು ಹೇಳಲು ಹೆಚ್ಚಿನ ಪಾಂಡಿತ್ಯವೇನೂ ಬೇಕಾಗಿಲ್ಲ ಎನಿಸುತ್ತದೆ. ಈವರೆಗೆ ಈ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರ ಮೇಲೆ ಪ್ರಕರಣಗಳು ದಾಖಲಾಗಿ ಜೈಲಿಗೆ ಹೋದ ಉದಾಹರಣೆ ಇಲ್ಲ. ಹೀಗಿದ್ದರೂ ಯಡಿಯೂರಪ್ಪನವರು ಮಹಾ ನಾಯಕ ಎಂದು ರಾಜ್ಯದ ಲಿಂಗಾಯತ ಮಠಾಧೀಶರು ಅವರನ್ನು ಬೆಂಬಲಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ವಿದ್ಯಮಾನವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಯಡಿಯೂರಪ್ಪ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಆದರೆ ವಾಸ್ತವವಾಗಿ ಯಡಿಯೂರಪ್ಪ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಅನ್ನುವುದಕ್ಕಿಂತ, ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿದ್ದ ಜನತಾ ಪರಿವಾರದ ಒಡಕು ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದು ಎಂಬುದು ಹೆಚ್ಚು ಸೂಕ್ತವಾಗುತ್ತದೆ. ಇಲ್ಲಿ ಜನತಾ ಪರಿವಾರ ಒಡೆಯದೆ ಗಟ್ಟಿಯಾಗಿದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಏರಲು ಸಾಧ್ಯವೇ ಇರಲಿಲ್ಲ. ಈ ನಿಟ್ಟಿನಲ್ಲಿ ದೇವೇಗೌಡರು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪರೋಕ್ಷವಾಗಿ ಕೊಡುಗೆಯನ್ನು ನೀಡಿದ್ದಾರೆ ಎಂದೇ ಹೇಳಬೇಕಾಗುತ್ತದೆ.
ಯಡಿಯೂರಪ್ಪ ಅವರು ಕರ್ನಾಟಕ ಈವರೆಗೆ ಕಂಡ ಅತ್ಯಂತ ಮೂಢನಂಬಿಕೆಯ ಮುಖ್ಯಮಂತ್ರಿಯಾಗಿಯೂ ಕಂಡು ಬರುತ್ತಾರೆ. ದೇಶದ ಹಲವಾರು ದೇವಸ್ಥಾನಗಳಿಗೆ ಎಡತಾಕಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ. ’ಯಜ್ಞ, ಯಾಗ, ಮಾಟ ಮಂತ್ರ’ಗಳ ಮೊರೆಹೋದ ಇನ್ನೊಬ್ಬ ಮುಖ್ಯಮಂತ್ರಿಯನ್ನೂ ಕರ್ನಾಟಕ ಕಂಡಿಲ್ಲ. ಇಷ್ಟೆಲ್ಲಾ ದೈವ ಭಕ್ತಿ ಇರುವ, ಸ್ವಾಮೀಜಿಗಳ ಮುದ್ದಿನ ಕೂಸಾದ ಯಡಿಯೂರಪ್ಪನವರನ್ನು ಅವರ ಧರ್ಮ ಶ್ರದ್ದೆ, ದೈವ ಭಕ್ತಿ ಅಡ್ಡ ದಾರಿಯಲ್ಲಿ ನಡೆಯದಂತೆ ತಡೆಯಲಿಲ್ಲ. ಹೀಗಾದರೆ ಧರ್ಮ ಶ್ರದ್ಧೆ, ಮಹಾನ್ ದೈವಭಕ್ತಿಯ ಸಾಧನೆಯಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಕರ್ನಾಟಕಕ್ಕೆ ವಿಶ್ವಾದ್ಯಂತ ಕೆಟ್ಟ ಹೆಸರು ತಂದ ಯಡಿಯೂರಪ್ಪನವರು ಸದಾ ವಿರೋಧ ಪಕ್ಷಗಳನ್ನು ದೂರುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಪದೇ ಪದೇ ವಿರೋಧ ಪಕ್ಷಗಳು ಆಡಳಿತ ನಡೆಸಲು ಬಿಡಲಿಲ್ಲ ಎಂಬುದು ಅವರ ಅತ್ಯಂತ ಬಾಲಿಶ ಹೇಳಿಕೆಯಾಗಿತ್ತು. ಆಡಳಿತ ಪಕ್ಷದ ಬಳಿ ಎಲ್ಲ ಸಂಪನ್ಮೂಲ, ಅಧಿಕಾರಿ ವರ್ಗ, ಅಧಿಕಾರ ಇರುವಾಗ ವಿರೋಧ ಪಕ್ಷಗಳು ಅಭಿವೃದ್ಧಿ ಕೆಲಸ ಮಾಡಲು ಬಿಡಲಿಲ್ಲ ಎಂಬುದು ಅತ್ಯಂತ ಹಾಸ್ಯಾಸ್ಪದವಾಗಿ ಕಾಣುತ್ತದೆ. ಈವರೆಗಿನ ಕರ್ನಾಟಕದ ಇತಿಹಾಸದಲ್ಲಿ ನೋಡಿದರೆ ಯಾವ ಮುಖ್ಯಮಂತ್ರಿಯೂ ಇಂಥ ಬಾಲಿಶ ಹೇಳಿಕೆಗಳನ್ನು ನೀಡುತ್ತಿರಲಿಲ್ಲ.
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಷ್ಟು ಬಲಿದಾನ ಹಾಗೂ ಹೋರಾಟಗಳ ಫಲವಾಗಿ ಲಭಿಸಿರುವುದು. ಹೀಗಾಗಿ ನಮ್ಮ ಮತದಾರರು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವಾಮೀಜಿಗಳ ಅವಲಂಬಿತ ಪಾಳೆಗಾರಿಕೆ ವ್ಯವಸ್ಥೆಯಾಗಲು ಬಿಡಬಾರದು. ಜಾತಿ ನೋಡಿ ಮತ್ತು ಸ್ವಾಮೀಜಿಗಳ ಸೂಚನೆಯಂತೆ ಮತ ಹಾಕುವ ಪ್ರವೃತ್ತಿ ಬೆಳೆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ. ಹೀಗಾಗಿ ನಮ್ಮ ಮತದಾರರು ಸ್ವಾಮೀಜಿಗಳ ಗುಲಾಮರಾಗದೆ ಸ್ವಾತಂತ್ರ್ಯ ಮನೋಭಾವದಿಂದ ಮತ ಹಾಕುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಹಾಗಾದಾಗ ಸ್ವಾಮೀಜಿಗಳನ್ನು ಒಲಿಸಿ ಭ್ರಷ್ಟರು ಅಧಿಕಾರಕ್ಕೆ ಏರಲು ಹವಣಿಸುವುದು ನಿಲ್ಲಬಹುದು. ಇತ್ತೀಚೆಗಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹರಿಸುವ ರೀತಿಯಲ್ಲಿ ಸ್ವಾಮೀಜಿಗಳ ಗುಂಪು ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ತಲೆ ಹಾಕುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ವಾಮೀಜಿಗಳು ರಾಜಕೀಯ ವ್ಯವಸ್ಥೆಯನ್ನು ನಿರ್ಧರಿಸುವುದಾದರೆ ಚುನಾವಣೆಗಳನ್ನು ನಡೆಸುವ ಅಗತ್ಯವೇ ಇಲ್ಲ.
ಯಡಿಯೂರಪ್ಪನವರು ಅಪರೇಷನ್ ಕಮಲ ಎಂಬ ಅತ್ಯಂತ ಲಜ್ಚೆಗೇಡಿ ಕೆಲಸವನ್ನು ಮಾಡಿದಾಗ ಯಾವುದೇ ಸ್ವಾಮೀಜಿಗಳು ಅದನ್ನು ಖಂಡಿಸಲಿಲ್ಲ. ಬಹುತೇಕ ಕರ್ನಾಟಕದ ಮಾಧ್ಯಮಗಳೂ ಅದನ್ನು ಖಂಡಿಸಿ ಜನಜಾಗೃತಿ ಮಾಡಿದ್ದು ಕಾಣಲಿಲ್ಲ. ಹೀಗಾಗಿಯೇ ಯಡಿಯೂರಪ್ಪನವರಿಗೆ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಯೋಚನೆ ಬಂದಿರಬೇಕು. ಅದಕ್ಕೆ ಸರಿಯಾಗಿ ಮತದಾರರೂ ಭ್ರಷ್ಟರಾಗಿ ಅಪರೇಷನ್ ಕಮಲಕ್ಕೆ ಒಳಗಾದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಲೇ ಬಂದರು. ಹೀಗಾಗಿ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಚುನಾವಣೆಗಳು ಎಂಬುದು ಒಂದು ಅಣಕವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಎಚ್ಚರಿಸಲು ಕರ್ನಾಟಕದ ಮಾಧ್ಯಮಗಳು ಮುಂದಾಗಲಿಲ್ಲ. ಇದರ ದುಷ್ಫಲ ಇಂದು ನಾವು ಕಾಣುತ್ತಿದ್ದೇವೆ.
ಯಡಿಯೂರಪ್ಪನವರಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಅಭಿರುಚಿಗಳೂ ಇರುವಂತೆ ಕಾಣುವುದಿಲ್ಲ. ಒಬ್ಬ ಉತ್ತಮ ನಾಯಕನು ಬಹಳಷ್ಟು ಓದಿಕೊಂಡಿರುತ್ತಾನೆ. ಹೀಗಾಗಿ ಅವನಲ್ಲಿ ಚಿಂತನಶಕ್ತಿ ಬೆಳೆದಿರುತ್ತದೆ. ಇಂಥ ನಾಯಕನು ಎಂಥ ಸಂದರ್ಭಗಳಲ್ಲೂ ಭ್ರಷ್ಟನಾಗುವುದಿಲ್ಲ. ಯಡಿಯೂರಪ್ಪನವರಲ್ಲಿ ಕಾಣುವುದು ಹಳ್ಳಿಯ ಗೌಡಿಕೆಯ ಠೇ೦ಕಾರ, ಸೇಡು ತೀರಿಸಿಕೊಳ್ಳಬೇಕೆಂಬ ತವಕ ಹಾಗೂ ಇನ್ನಷ್ಟು ಮತ್ತಷ್ಟು ಸಂಪತ್ತು ಕೂಡಿ ಹಾಕಬೇಕೆಂಬ ದುರಾಶೆ. ಇದರಿಂದಾಗಿಯೇ ಅಧಿಕಾರ ದೊರಕಿದಾಗ ಅದನ್ನು ಜನಕಲ್ಯಾಣಕ್ಕಾಗಿ ಬಳಸದೆ ತನ್ನ ಪರಿವಾರದ ಸಂಪತ್ತು ಬೆಳೆಸಲು ಬಳಸಿಕೊಂಡರು. ತನ್ನ ಸುತ್ತಮುತ್ತ ಹೊಗಳುಭಟರ ಪಡೆಯನ್ನು ಕಟ್ಟಿಕೊಂಡು ವಾಸ್ತವದಿಂದ ವಿಮುಖರಾದರು. ಕರ್ನಾಟಕದ ಪತ್ರಕರ್ತರನ್ನೂ ಭ್ರಷ್ಟಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಪರವಾಗಿ ಬರೆಯಲು ಮತ್ತು ವರದಿ ಮಾಡಲು ಪತ್ರಕರ್ತರಿಗೆ ಅವರು ಸಾಕಷ್ಟು ಆಮಿಷಗಳನ್ನು ಒಡ್ಡಿ ವಿಮರ್ಶೆಯೇ ಬರದಂತೆ ನೋಡಿಕೊಂಡರು. ಇದರ ಪರಿಣಾಮ ಏನೆಂದರೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದರೂ ಎಚ್ಚರಿಸದ ಮಾಧ್ಯಮಗಳು ಇನ್ನಷ್ಟು ತಪ್ಪು ದಾರಿಯಲ್ಲಿ ಹೋಗಲು ಅವರನ್ನು ಪ್ರೇರೇಪಿಸಿತು. ಮಾಧ್ಯಮಗಳನ್ನು ಭ್ರಷ್ಟಗೊಳಿಸುವುದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಸರ್ವಾಧಿಕಾರಿ ಪ್ರವೃತ್ತಿಯನ್ನು ಬೆಳೆಸಲು ಕಾರಣವಾಗುತ್ತದೆ. ಕರ್ನಾಟಕದಲ್ಲಿ ಆದದ್ದೂ ಅದೇ. ಹೀಗಾಗಿ ಮಾಧ್ಯಮಗಳನ್ನು ಒಬ್ಬ ಉತ್ತಮ ನಾಯಕ ಎಂದೂ ಭ್ರಷ್ಟಗೊಳಿಸಲು ಹೋಗುವುದಿಲ್ಲ.
ಕೃಪೆ : ವರ್ತಮಾನ

Wednesday, February 22, 2012

ಬಸವಣ್ಣನ ಹೆಸರನ್ನು ಹೇಳಲು ನಾಚಿಕೆಯಾಗಬೇಕು ,,,,,,

ಯಾರದೋ ಜಯಂತಿ ; 
ಮಾಡುತ್ತೇವೆ ಅದ್ದೂರಿ !
ಯಾವುದೋ ಹಬ್ಬ 
ಮಾಡುತ್ತೇವೆ ಅದ್ದೂರಿ !
ಮನುಷ್ಯನನ್ನು ಮನುಷ್ಯನನ್ನಾಗಿ 
ಅರಿಯುವ
ಹಬ್ಬವೇನಾದರೂ ಇದೆಯಾ 
ಎಂದರೆ ..... ಉತ್ತರಗಳೆಲ್ಲ ಸ್ತಬ್ದ !
ಕೆಲವು ಬಂಕೆ ಮೆತ್ತಿಸಿಕೊಂಡಿವೆ.
ಕೆಲವು ಬಂಕೆಯನ್ನು ಮೀರಿ ಬಸಿರಾಗುತ್ತಿವೆ ;
ಕೆಲವಂತೂ ಇನ್ನೂ ಬಂಜೆಯಾಗಿಯೇ ಉಳಿದಿವೆ !
ಗುಂಜಿಯಾದರೂ ಯೋಚನೆ ಬೇಡ !
ಯೋಚನೆ ಏನು ಬಂತು ಹಂಡೆ ತುಂಬಿದೆ ;
ಆದರೆ
ನುಡಿದಂತೆ ನಡೆಯುವ 
ಹಠ-ಛಲ-ಖುಷಿ ಹೋಗಲಿ ಬಿಡಿ
ಬಿಸಿಯಾದರೂ ಇದೆಯೇ ?
ಜಗತ್ತಿಗೆ ಗುರುವಾಗಬೇಕಿದ್ದ 
ಬಸವಣ್ಣನನ್ನು ಎತ್ತಾಗಿಸಿ,
ಪೂಜೆ ಮಾಡುತ್ತೇವಲ್ಲ
ನಮಗೆ
ನಾಚಿಕೆಯಾಗಬೇಕು !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.