Showing posts with label ಅಸಮಾನತೆ. Show all posts
Showing posts with label ಅಸಮಾನತೆ. Show all posts

Sunday, March 17, 2013

ಜಾತೀಯತೆ ಎಂಬ ಪ್ರಿಸಮ್ !

ಆಗ ಬೆಂಗಳೂರಿನ ಪೊಲೀಸ್ ಕಮಿಷನರ್ ನಿವೃತ್ತ ರಾಗುವ ಸಮಯ ಬಂದಿತ್ತು. ಮುಂದೆ ಯಾರನ್ನು ಕಮಿಷನರ್ ಆಗಿ ನೇಮಿಸಬೇಕು ಎಂಬ ಬಗ್ಗೆ ಮುಖ್ಯ ಮಂತ್ರಿ ಶ್ರೀ ದೇವರಾಜ ಅರಸು ಅವರ ಜತೆ ಚರ್ಚೆ ನಡೆಯುತ್ತಿತ್ತು. ನನಗೆ ಆಗ ಅಷ್ಟು ಅನುಭವ ಇರಲಿಲ್ಲ. ಒಬ್ಬ ಅಧಿಕಾರಿಯ ಹೆಸರನ್ನು ನಾನು ಸೂಚಿಸಿದೆ. ವರಿಷ್ಠತೆಯ ಪ್ರಕಾರ ಆ ಅಧಿಕಾರಿ ಆಯುಕ್ತ ರಾಗಬೇಕಿತ್ತು. ಆಗ ಲಿನ್ ಸಾಹೇಬರು ''ಇಲ್ಲ, ಅವರು ''ಈ'' ಜಾತಿಗೆ ಸೇರಿದವರು. ಮಹಾನಿರ್ದೇಶಕರು ಮತ್ತು ಗೃಹ ಕಾರ್ಯ ದರ್ಶಿಯವರು ಕೂಡ ಅದೇ ಜಾತಿಗೆ ಸೇರಿ ದವರು. ಮೂರು ಜನ ಪೋಲಿಸ್ ಮೇಲಧಿಕಾರಿಗಳು ಒಂದೇ ಜಾತಿ ಯವರಾಗಿರಬಾರದು'' ಎಂದು ಹೇಳಿದರು. ಆಮೇಲೆ ಸರಿ ಯಾದ ಜಾತಿಯ ಒಬ್ಬ ಅಧಿಕಾರಿಯನ್ನು ಆಯ್ಕೆ ಮಾಡಲಾ ಯಿತು. ಉಪವಿಭಾಗಾಧಿಕಾರಿಯ ಹುದ್ದೆಯಿಂದ ನಾನು ನೇರ ವಾಗಿ ಮುಖ್ಯಮಂತ್ರಿಯವರ ಕಚೇರಿಗೆ ಉಪಕಾರ್ಯ ದರ್ಶಿ ಯಾಗಿ ನೇಮಕಗೊಂಡಿದ್ದೆ. ಅರಸು ಅವರು ಮುಖ್ಯಮಂತ್ರಿ ಆದ ನಂತರ ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿ ಎಂಬ ಎರಡು ಹುದ್ದೆಗಳ ರಚನೆ ಆಯಿತು. ಅದ ಕ್ಕಿಂತ ಮೊದಲು ಈ ಹುದ್ದೆಗಳು ಇರಲಿಲ್ಲ. ಮುಖ್ಯಮಂತ್ರಿ ಅವರ ಆಪ್ತಕಾರ್ಯದರ್ಶಿ ಹುದ್ದೆ ಮಾತ್ರ ಇತ್ತು. ಉಪಕಾರ್ಯ ದರ್ಶಿಯವರ ಹುದ್ದೆಯ ರಚನೆ ಆದ ನಂತರ, ಅಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ದಿವಂಗತ ಆರ್.ಜೆ.ರೆಬೆಲ್ಲೊ ಅವರು ಅರಸು ಅವರ ಬಳಿ, ''ಈಗ ಈ ಹುದ್ದೆ ರಚಿಸಲಾಗಿದೆ. ನೀವು ಅದಕ್ಕೆ ಯಾರನ್ನು ನೇಮಕ ಮಾಡಲು ಇಷ್ಟ ಪಡುತ್ತೀರಿ?'' ಎಂದು ಕೇಳಿದ್ದರು. ಅದಕ್ಕೆ ಅರಸು ಅವರು, ''ನನಗೆ ಇಲ್ಲಿನ ಜಾತಿಯ ಅಧಿಕಾರಿ ಬೇಡ. ಯಾರಾದರೂ ಹೊರಗಡೆಯಿಂದ ಬಂದವ ರನ್ನು ಕೊಡಿ'' ಎಂದು ಕೇಳಿದ್ದರು. ಹಾಗಾಗಿ ರೆಬೆಲ್ಲೊ ಅವರು ನನ್ನನ್ನು ಆ ಸ್ಥಾನಕ್ಕೆ ನೇಮಕ ಮಾಡಿದರು. ಅವತ್ತಿನಿಂದ ಇವತ್ತಿನ ವರೆಗೆ ಆಗಿರುವ ವ್ಯತ್ಯಾಸ ಎಂದರೆ ಈಗ ಸಚಿವರು ಸಾಮಾನ್ಯವಾಗಿ ತಮ್ಮ ಜಾತಿಯ ಅಧಿಕಾರಿಗಳನ್ನು ಆಯ್ಕೆ ಮಾಡುತ್ತಾರೆ. ನಾಡಿನಲ್ಲಿ ಜಾತಿ ಪ್ರಭಾವ ಹೆಚ್ಚಾಗುವ ಒಂದು ಉದಾಹರಣೆ ಇದು.

ಯಾವುದೇ ಒಂದು ಜಾತಿಯ ಪ್ರಾಬಲ್ಯ ಆಡಳಿತದಲ್ಲಿ ಇರಬಾರದು ಎನ್ನುವ ಕಾರಣಕ್ಕಾಗಿ ಇಲ್ಲಿ ಪೊಲೀಸ್ ಆಯುಕ್ತರ ನೇಮಕಾತಿಯ ವಿಷಯ ಹೇಳಬೇಕಾಯಿತು. ಆದರೆ ಈಗ ನಾವು ನೋಡುತ್ತಿರುವ ಹಾಗೆ ಚುನಾವಣೆಗಳು ಜಾತಿಯ ಆಧಾರದ ಮೇಲೆ ನಡೆಯುತ್ತವೆ. ಇದು ವಿಚಿತ್ರ. ಏಕೆಂದರೆ ಒಬ್ಬ ವೈದ್ಯ, ದರ್ಜಿ, ವಾಸ್ತುಶಿಲ್ಪಿ, ಲೆಕ್ಕಿಗ ಅಥವ ಇತರ ಯಾವುದೇ ತಜ್ಞರ ಬಳಿ ಹೋಗುವಾಗ ನಾವು ಅವರ ಪ್ರವೀಣತೆಯನ್ನು ನೋಡು ತ್ತೇವೆಯೇ ಹೊರತು ಜಾತಿಯನ್ನು ನೋಡುವುದಿಲ್ಲ. ಆದರೆ ಚುನಾವಣೆಯ ಅಭ್ಯರ್ಥಿಗಳ ವಿಷಯ ಬಂದಾಗ ಜನರು ಜಾತಿಯನ್ನು ವಿಶೇಷವಾಗಿ ಪರಿಗಣಿಸುತ್ತಾರೆ.

ಪಂಜಾಬಿನಿಂದ ಬಂದ ನಂತರ, ಇಲ್ಲಿಯ ನಿತ್ಯ ಜೀವನದಲ್ಲಿ ಜಾತೀಯತೆಯ ಪ್ರಭಾವ ನೋಡಿ ನನಗೆ ಆಶ್ಚರ್ಯ ಆಯಿತು. ಇಲ್ಲಿಯ ಊಟದ ರುಚಿ ಜಾತಿ ಪ್ರಕಾರ ಹೋಗುತ್ತದೆ. ಅಲ್ಲಿ ಪಂಜಾಬಿ ಊಟ ಅಂದರೆ ಪಂಜಾಬಿ ಊಟ ಅಷ್ಟೆ. ಇಲ್ಲಿ ಊಟ ಆದ ನಂತರ ನಾನು ಕೇಳಿದ ಕೆಲವು ಟಿಪ್ಪಣಿಗಳು ಹೀಗಿವೆ: ''ಅಹಾ! ಇದು ಶುದ್ಧ ಅಯ್ಯಂಗಾರ್ ಊಟ; ಇದು ಮಾಧ್ವರ ಊಟ; ಇದು ಲಿಂಗಾಯತರ ಊಟ; ಇದು ಮುಲಕ್‌ನಾಡು ಊಟ; ಇದು ಕುರುಬರ ಊಟ; ಇದು ಒಕ್ಕಲಿಗರ ಊಟ'' ಇತ್ಯಾದಿ. ಈಗ ನಾನು ಕೂಡ ರುಚಿಯಿಂದ ಊಟದ ಜಾತಿಯನ್ನು ಗುರುತಿಸಬಲ್ಲೆ. ಒಂದು ಕಡೆ ಚಕ್ಕೆ, ಜೀರಿಗೆ, ಲವಂಗ ಮುಖ್ಯ ವಾದರೆ, ಇನ್ನೊಂದು ಕಡೆ ಇಂಗು, ಸಾಸಿವೆ, ಮೆಂತೆಕಾಳು; ಲಿಂಗಾ ಯ ತರಿಗೆ ಬೆಳ್ಳುಳ್ಳಿ ಇಷ್ಟವಾದರೆ, ಒಕ್ಕಲಿಗರಿಗೆ ಈರುಳ್ಳಿ. ಲಿಂಗಾ ಯತರಲ್ಲಿ ಮತ್ತು ಬ್ರಾಹ್ಮಣೇತರ ಜಾತಿಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯ ಹೆಚ್ಚು ಬಳಕೆ ಬಹುಶಃ ಬ್ರಾಹ್ಮಣರಿಂದ ತಮ್ಮ ಪ್ರತ್ಯೇಕತೆಯನ್ನು ತೋರಿಸಲು ಆಗಿದೆ. ಸ್ಮೃತಿಗಳಲ್ಲಿ ಬೆಳ್ಳುಳ್ಳಿ, ಈರುಳ್ಳಿಯ ನಿಷೇಧ ಮಾಡಿರುವುದಕ್ಕೆ ಪ್ರತಿಕ್ರಿಯೆಯಾಗಿ ಕೂಡ ಇದನ್ನು ಮಾಡಿರಬಹುದು. ಆದರೆ ಕಾರಣ ಏನೇ ಇರಲಿ, ಈಗ ಬ್ರಾಹ್ಮಣರ ಮಜ್ಜಿಗೆಯಲ್ಲಿ ಇಂಗು, ಲಿಂಗಾಯಿತರ ಮಜ್ಜಿಗೆಯಲ್ಲಿ ಬೆಳ್ಳುಳ್ಳಿ ಮತ್ತು ಒಕ್ಕಲಿಗರ ಮಜ್ಜಿಗೆಯಲ್ಲಿ ಈರುಳ್ಳಿ ಇರುತ್ತದೆ. ಬಡ ಜಾತಿಯವರಿಗೆ ಏನು ಸಿಕ್ಕುತ್ತೋ ಅದೇ ನಡೆಯುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯ ದುರ್ವಾಸನೆಗೋಸ್ಕರ ಅವುಗಳನ್ನು ತಿನ್ನಬಾರದು ಅಂತ ಸ್ಮೃತಿಕಾರರು ಹೇಳಿರಬಹುದು. ಆದರೆ 'ಇದರ ಪರ್ಯಾಯವಾಗಿ ಅವರು ಅಷ್ಟೇ ದುರ್ವಾಸನೆಯುಳ್ಳ ಇಂಗನ್ನು ಹುಡುಕಿಬಿಟ್ಟರು' ಎಂದು ಸ್ವಾಮಿ ವಿವೇಕಾನಂದರು ಒಂದು ಕಡೆ ಬರೆದಿದ್ದಾರೆ. ಒಂದು ಕಾಲದಲ್ಲಿ ಮನುವಾದವನ್ನು ತಿರಸ್ಕರಿಸಿ, ಮಜ್ಜಿಗೆ ಮತ್ತು ಚಟ್ನಿಯಲ್ಲಿ ಬೆಳ್ಳುಳ್ಳಿ ಹಾಕುವ ಲಿಂಗಾ ಯತರು ಕೂಡ ಈಗ ಒಂದು ಜಾತಿ ಆಗಿಬಿಟ್ಟಿದ್ದಾರೆ. ನಾನು ಬೆಳಗಾವಿಯಲ್ಲಿ ವಿಭಾಗಾಧಿಕಾರಿಯಾಗಿದ್ದಾಗ ನನ್ನ ಮುಂದೆ ಜಾತಿ ಪ್ರಮಾಣ ಪತ್ರದ ಬಗ್ಗೆ ಒಂದು ಮೇಲ್ಮನವಿ ಬಂದಿತ್ತು. ಮೇಲ್ಮನವಿದಾರರಿಗೆ 'ಲಿಂಗಾಯಿತ' ಎಂದು ಜಾತಿ ಪ್ರಮಾಣ ಪತ್ರ ಬೇಕಿತ್ತು. ನನ್ನ ತೀರ್ಪಿನಲ್ಲಿ, 'ಲಿಂಗಾಯಿತ ಎಂದರೆ ಜಾತಿಯ ನಿರಾಕರಣೆ. ಅದು ಜಾತಿ ಅಲ್ಲ' ಎಂದು ನಾನು ಹೇಳಿದೆ.

ಊಟದ ಅಥವ ಉಡುಪುಗಳ ವ್ಯತ್ಯಾಸಗಳನ್ನು ಸಾಂಸ್ಕೃತಿಕ ವಿವಿಧತೆಯ ದೃಷ್ಟಿಯಿಂದ ನೋಡಿದರೆ ಅದು ಮಳೆಬಿಲ್ಲಿನ ಹಾಗೆ ವರ್ಣಮಯ ಎಂದನ್ನಿಸುತ್ತದೆ. ಆದರೆ ಶೇಖ್ ರೀದ್‌ಜೀ ಹೇಳಿದಂತೆ, ''ಈ ಕುಸುಬಿಯನ್ನು ಮುಟ್ಟಬಾರದು. ಇದು ಕೈಯನ್ನು ನೋಯಿಸುತ್ತದೆ.'' ಜಾತೀಯತೆ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ ಜನ ಎಲ್ಲವನ್ನೂ ಜಾತೀಯತೆಯ ಪ್ರಿಸಮ್‌ನಿಂದಲೇ ನೋಡುತ್ತಾರೆ. ಭೀಮ್‌ಸೇನ್ ಜೋಶಿಯ ವರು ವಚನಗಳನ್ನು ಹಾಡಲಿಲ್ಲ; ಮಲ್ಲಿಕಾರ್ಜುನ ಮನ್ಸೂರ್ ಅವರು ದಾಸರ ಪದಗಳನ್ನು ಹಾಡಲಿಲ್ಲ. ರಾಮರಾವ್ ನಾಯಕ್ ಅವರು ಮಲ್ಲಿಕಾರ್ಜುನ ಮನ್ಸೂರ್ ಅವರನ್ನು ಬಿಟ್ಟರೆ ಉಳಿದ ಉತ್ತರ ಕರ್ನಾಟಕದ ಸಂಗೀತವನ್ನು 'ಬೆಳ್ಳುಳ್ಳಿ ಹಾಡುಗಾರಿಕೆ' ಎಂದು ಅಣಕಿಸುತ್ತಿದ್ದರು.

ಕುಲ ಕುಲ ಎಂದು ಹೇಳುವವರ ಸಂಖ್ಯೆಯೇನೂ ಕಡಿಮೆ ಆಗುತ್ತಿಲ್ಲ. ಆಧುನಿಕ ಶಿಕ್ಷಣದ ಪ್ರಭಾವ ಹೆಚ್ಚಾಗುವುದರಿಂದ, ಈ ಕುಲ ಕುಲ, ಜಾತಿ ಜಾತಿ ಭಾವನೆ ಕ್ರಮೇಣ ಕ್ಷೀಣವಾಗಬಹುದು ಎಂಬ ನಂಬಿಕೆ ಇತ್ತು. ಆದರೆ ನಾವೀಗ ನೋಡುತ್ತಿರುವುದು ಇದಕ್ಕೆ ವಿರುದ್ಧವಾದದ್ದು. ಶಿಕ್ಷಿತರಿಂದಲೇ ಜಾತೀಯತೆಗೆ ಹೆಚ್ಚು ಪ್ರಚೋದನೆ ಸಿಗುತ್ತಿದೆ, ವಿಶೇಷವಾಗಿ ಚುನಾವಣೆಯ ಕಾಲದಲ್ಲಿ. ಚುನಾವಣೆ ಹತ್ತಿರ ಬರುತ್ತಿರುವಾಗ ನಾವು ಜಾತೀಯತೆಯ ತಾಂಡವವನ್ನು ನೋಡಬಹುದು.

ಅವಿಭಕ್ತ ಕುಟುಂಬಗಳು ಕೊನೆಗೊಳ್ಳುತ್ತಿರುವುದರಿಂದ ಮತ್ತು ಸಣ್ಣ ಕುಟುಂಬಗಳು ಹೆಚ್ಚಾಗುತ್ತಿರುವುದರಿಂದ ಬಹುಶಃ ಜನರು ಜಾತಿಯಲ್ಲಿ ಸುರಕ್ಷತೆಯನ್ನು ಹುಡುಕುತ್ತಿದ್ದಾರೆ. 1970ರಲ್ಲಿ ನಾನು ಬಳ್ಳಾರಿಯ ಮೋಕ ಗ್ರಾಮದಲ್ಲಿ ಒಂದು ತಿಂಗಳು ವಾಸ ವಿದ್ದೆ. ಬೇಸಿಗೆಯ ರಜದಲ್ಲಿ ಮೋಕದ ಶಾಲೆ ನನ್ನ ವಾಸಸ್ಥಾನ ವಾಗಿತ್ತು. ಒಂದು ದಿನ ನಾನು ಅಲ್ಲಿಯ ಕರಣಂ (ಶಾನುಭೋಗ)ರಾದ ದಿವಂಗತ ಭುಜಂಗರಾವ್ ದೇಸಾಯಿಯವರಲ್ಲಿ, 'ಈ ಊರಿನ ಎಲ್ಲರಿಗಿಂತ ಬಡ ಕುಟುಂಬದ ಮನೆಗೆ ಹೋಗಬೇಕು' ಎಂದು ಹೇಳಿದೆ. ಅವರು ನನ್ನನ್ನು ಮೋಕ ಗ್ರಾಮದ ಅತಿ ಬಡವನೊಬ್ಬನ ಗುಡಿಸಲಿಗೆ ಕರೆದುಕೊಂಡು ಹೋದರು. ಹೆಂಡತಿಯನ್ನು ಕಳೆದುಕೊಂಡಿದ್ದ ಆತನಿಗೆ ಇಬ್ಬರು ಮಕ್ಕಳಿದ್ದರು. ಹಿರಿಯವನಿಗೆ ಸುಮಾರು ಒಂಬತ್ತು ವರ್ಷವಾಗಿದ್ದರೆ, ಕಿರಿಯವನಿಗೆ ಸುಮಾರು ಆರು ವರ್ಷ ವಯಸ್ಸಾಗಿತ್ತು. ಒಂದು ತಿಂಗಳಿನಲ್ಲಿ ಆತನಿಗೆ ಸರಾಸರಿ ಇಪ್ಪತ್ತು ಅಥವ ಇಪ್ಪತ್ತೈದು ದಿನ ಕೆಲಸ ಸಿಗುತ್ತಿತ್ತು. ''ಕೆಲಸ ಸಿಗದೆ ಇರುವ ದಿನಗಳಲ್ಲಿ ನಿಮಗೆ ಊಟ ಎಲ್ಲಿಂದ ಸಿಗುತ್ತದೆ?'' ಎಂದು ನಾನು ಅವನನ್ನು ಕೇಳಿದೆ. ಅದಕ್ಕೆ ಆತ, ''ಅವತ್ತು ನಾನು ನೀರು ಕುಡಿದು ಉಪವಾಸ ಇದ್ದು ಬಿಡುತ್ತೇನೆ. ನನ್ನ ಮಕ್ಕಳಿಗೆ ನಮ್ಮ ಜಾತಿಯವರು ಊಟ ಕೊಡು ತ್ತಾರೆ'' ಎಂದು ಹೇಳಿದ. ಇದು ಜಾತಿಯ ಸಾಮಾಜಿಕ ಭದ್ರತೆ.

ಜಾತಿಯ ದೃಷ್ಟಿಯಿಂದ ಒಬ್ಬ ಮನುಷ್ಯನನ್ನು ನೋಡುವುದು ಎಂದರೆ ಮನುಷ್ಯತ್ವವನ್ನು ಕಿರಿದುಗೊಳಿಸಿದಂತೆ. ಒಮ್ಮೆ ಮಾಸ್ತಿಯವರು ಮಾತನಾಡುತ್ತಾ, ''ನಾನು ಕುವೆಂಪುಗೆ ನೀವು ಮಾನವತೆಯ ಕವಿಯಾಗಬೇಕು. ಒಕ್ಕಲಿಗರ ಕವಿ ಮಾತ್ರ ಆಗಬೇಡಿ ಎಂದು ಹೇಳಿದೆ'' ("I told Kuvempu, 'Ayya, be a poet for the humanity. Don't be a poet for the Vokkaligas alone'') ಎಂದು ನನ್ನ ಬಳಿ ಹೇಳಿದರು. ಕುವೆಂಪು ಅವರಿಗೆ ಆ ಮಾತನ್ನು ಹೇಳುವುದು ಮಾಸ್ತಿ ಅವರಿಗೆ ಮಾತ್ರ ಸಾಧ್ಯ ಇತ್ತು. ಈಗ ಇಂತಹ ಸಲಹೆಯನ್ನು ನಾಡಿನ ಜನತೆಗೆ ಕೊಡುವವರು ಯಾರಿದ್ದಾರೆ? ಈಗ ಸಾಹಿತ್ಯ ಮತ್ತು ಸಾಹಿತ್ಯದ ವಿಮರ್ಶೆಯನ್ನು ಕೂಡ ಜಾತೀಯತೆಯ ದೃಷ್ಟಿಯಿಂದ ನೋಡಲಾಗುತ್ತದೆ.

ಪ್ರಿಸಮ್‌ನಿಂದ ಹೊರಡುವ ಪ್ರಕಾಶ ಮಳೆ ಬಿಲ್ಲಿನ ಏಳು ಬಣ್ಣಗಳಲ್ಲಿ ವಿಭಕ್ತವಾಗುತ್ತದೆ. ಜಾತೀಯತೆಯ ಪ್ರಿಸಮ್‌ನಿಂದ ನೋಡಿದರೆ ಎಲ್ಲವೂ ವಿಭಕ್ತವಾದ ವರ್ಣಗಳಾಗಿ ಕಾಣಿಸುತ್ತವೆ. ಆದರೆ ಬಹಳ ಹೊತ್ತು ಆ ಪ್ರಿಸಮ್ ಅನ್ನು ಕಣ್ಣಮುಂದೆ ಇಟ್ಟರೆ ತಲೆನೋವು ಬರಬಹುದು. ಈ ತಲೆನೋವಿಗೆ ಉಪಚಾರ ಇಲ್ಲ.

ಕೃಪೆ : ವಿಜಯ ಕರ್ನಾಟಕ

Thursday, March 07, 2013

8 ಮಾರ್ಚ್ : ಒಂದೆರಡು ಮಾತುಗಳು !

ಡಾ. ಸಿದ್ರಾಮ ಕಾರಣಿಕ

8 ಮಾರ್ಚ್ ವಿಶ್ವ ಮಹಿಳಾ ದಿನ. ನಾವೆಲ್ಲ ಒಬ್ಬರಿಗೊಬ್ಬರು ವಿಶ್ ಮಾಡುತ್ತ ಖುಷಿಯಿಂದ ಕಳೆಯುತ್ತೇವೆ. ಆದರೆ ಇಂದಿಗಾದರೂ ಹೆಣ್ನುಮಕ್ಕಳ ಪಾಡು ಬದಲಾಗಿದೆಯೇ ? ಎಷ್ಟೋ ಹೋರಾಟಗಳು ನಡೆದರೂ ಸ್ತ್ರೀ ಇನ್ನೂ ಪುರುಷ ಪ್ರಧಾನ ಸಾಮಾಜಿಕ ಬಂಧನದಿಂದ ಬಿಡುಗಡೆ ಹೊಂದಿಯೇ ಇಲ್ಲ. ಮುಕ್ತವಾಗಲು ಆಕೆಗೆ ಅವಕಾಶಗಳೇ ಇಲ್ಲ. ದಿಲ್ಲಿಯಲ್ಲಿ ಅತ್ಯಾಚಾರ ನಡೆದಾಗ ಅದು ವಿಶ್ವವ್ಯಾಪಿಯಾಗಿ ಗಮನ ಸೆಳೆಯಿತು. ಪ್ರತಿಭಟನೆಗಳು ನಡೆದವು. ಆದರೆ ಫಲ ಮಾತ್ರ ಸೊನ್ನೆ ! ಯಾಕೆಂದರೆ ಅಂತಹ ಪ್ರಕರಣಗಳು ಮೇಲಿಂದ ಮೇಲೆ ಇನ್ನೂ ಹೆಚ್ಚಾಗಿಯೇ ವರದಿಯಾಗುತ್ತಿವೆ. ವರದಿಯಾದ ಪ್ರಕರಣಗಳನ್ನು ಬಿಟ್ಟು ಇನ್ನೂ ಎಷ್ಟೋ ಪ್ರಕರಣಗಳು ಹೇಳ ಹೆಸರಿಲ್ಲದಂತೆ ಈ ದೇಶದಲ್ಲಿ ನಡೆಯುತ್ತಲೇ ಇವೆ. ಇವೆಲ್ಲವುಗಳಿಗೆ ಕೊನೆ ಎಂಬುದೇ ಇಲ್ಲವೆ ಎನಿಸುತ್ತದೆ. ಹಾಗಾದರೆ ನಮ್ಮ ಪ್ರತಿಭಟನೆ, ಹೋರಾಟಗಳಿಗೆ ಇಂಥ ಸಾಮಾಜಿಕ ಜಾಡ್ಯವನ್ನು ಕೊನೆಗೊಳಿಸುವ ಶಕ್ತಿಯೇ ಇಲ್ಲವೆ ? ನಾವೆಲ್ಲ ಮೊಸಳೆ ಕಣ್ಣೀರು ಸುರಿಸುತ್ತಿದ್ದೇವೆಯೇ ? ಯಾಕೆ ಹೀಗಾಗುತ್ತದೆ ? ಮನುಷ್ಯರು ಮನುಷ್ಯರೇ ಅಲ್ಲವೇನೋ ಎಂಬಂತೆ ವರ್ತಿಸುವುದ್ಯಾಕೆ ? ನಮ್ಮ ಮನಸ್ಸುಗಳು ಇನ್ನೂ ಕೊಳಕುತನಗಳನ್ನು ಕಳೆದುಕೊಂಡಿಲ್ಲವೆ ? ಎಲ್ಲಿಯವರೆಗೆ ಸುಮ್ಮನಿರಬೇಕು ? ಮಾರ್ಚ್ ಎಂಟರಂದು ವಿಶ್ ಮಾಡುವ ಮೂಲಕವೋ ವೇದಿಕೆಗಳಲ್ಲಿ ದೊಡ್ಡ ದೊಡ್ಡ ಮಾತನಾಡುವ ಮೂಲಕವೋ ಸಮಾನತೆಯ ವ್ಯಂಗ್ಯ ಮಾಡುತ್ತಿದ್ದೇವೆಯೇ ? ಯಾಕೆ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವುದಿಲ್ಲ ? ಯಾಕೆ ನಮ್ಮಲ್ಲಿ ನೈತಿಕ ಉಳಿದೇ ಇಲ್ಲವೇ ?

Tuesday, January 08, 2013

ಡಾ. ಅಂಬೇಡ್ಕರ್ ಮತ್ತು ನಂತರ.....


                               ಡಾ. ಸಿದ್ರಾಮ ಕಾರಣಿಕ 


ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆ ಎಂಬ ಮೌಲ್ವಿಕ ನೀತಿತತ್ವಗಳನ್ನು ಪ್ರತಿಯೊಬ್ಬರೂ ಹೇಳುತ್ತಾರೆ. ಆದರೆ ಹೇಳುವ ಹೇರಳ ಜನ, ಆಚರಣೆ ಸಂದರ್ಭದಲ್ಲಿ ಮಾತ್ರ ಇರುವುದೇ ಇಲ್ಲ. ಸಂಪ್ರದಾಯಶೀಲ ಭಾರತದಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ವಿಕೃತಿಯ ಹಲವು ಮುಖಗಳೇ ಮುಂದುವರಿದುಕೊಂಡು ಬಂದಿವೆ. ಇಂಥ ಹಲವು ವಿಕೃತಿಗಳಲ್ಲಿ ಜಾತಿಸೃಷ್ಟಿ ಕೂಡ ಒಂದು. ಜಾತಿ ವಿನಾಶದ ಹಾದಿಯಲ್ಲಿ ಹಲವಾರು ಸಂತರು, ಶರಣರು, ವಿಚಾರವಾದಿಗಳು, ಮಹಾತ್ಮರು, ಮುನ್ನಾಳುಗಳು ಹೋರಾಟ ಮಾಡಿದ್ದಾರೆ. ಆ ಹೋರಾಟಗಳ ಫಲ ಒಂದಿಷ್ಟು ಜಾಗೃತಿಯನ್ನೂ ಜನರಲ್ಲಿ ತುಂಬಿದ್ದು ನಿಜ. ಆದರೆ ಜಾತಿಯೆಂಬ ಭೂತ ವಿವಿಧ ರೂಪಗಳಲ್ಲಿ ಮತ್ತೇ ಮತ್ತೇ ಮುಖದೋರುತ್ತ ಹೇಂಕರಿಸುತ್ತಲೇ ಇದೆ. ಭಾರತ ದೇಶದಲ್ಲಿ ಈ ಜಾತಿಯ ಕಾರಣದಿಂದಲೇ ಸ್ಪೃಶ್ಯ-ಅಸ್ಪೃಶ್ಯ ಭಾವನೆಗಳು ಇನ್ನೂ ಬದುಕುಳಿದು ಭೂತಾಕಾರವಾಗಿ ಬೆಳೆಯುತ್ತಲೇ ಇವೆ ; ಮನುಷ್ಯನನ್ನು ಮನುಷ್ಯನನ್ನಾಗಿ ನೋಡದ ಮೃಗೀಯ ವರ್ತನೆಗಳು ಪುನರಾವರ್ತನೆಯಾಗುತ್ತಲೇ ಇವೆ.
    ಡಾ. ಬಾಬಾಸಾಹೇಬ ಅಂಬೇಡ್ಕರ್ ರು ಈ ಜಾತಿ ವಿನಾಶಕ್ಕಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡೇ ಬಂದವರು. ಹಿಂದೂ ಧರ್ಮದ ಸನಾತನ ಸಂಪ್ರದಾಯವನ್ನು ಸಾರಾಸಗಟಾಗಿ ತಿರಸ್ಕರಿಸಿ, ಕಟುವಾಕ್ಯಗಳಿಂದ ಆ ಧರ್ಮದ ಅಂತರಂಗದಲ್ಲಿದ್ದ ಕೊಳಕನ್ನು ಬಿಚ್ಚಿಟ್ಟಿದ್ದಾರೆ. ಈ ಧರ್ಮದಲ್ಲಿ ಅ
ಸ್ಪೃಶ್ಯರೆನ್ನಿಸಿಕೊಂಡವರ ಬದುಕು ಹಸನಾಗಲು, ಅವರೆಲ್ಲ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತಾಗಲು ತಮ್ಮ ಕೊನೆ ಉಸಿರಿನವರೆಗೆ ಕ್ರಿಯಾಶೀಲರಾಗಿದ್ದ ಮಹಾನ್ ನೇತಾರ ಡಾ. ಬಾಬಾಸಾಹೇಬ ಅಂಬೇಡ್ಕರರು. ಅಸ್ಪೃಶ್ಯ ಅನುಭವಗಳಿಂದ ರೊಚ್ಚಿಗೆದ್ದ ಅವರು ಅಸ್ಪೃಶ್ಯನ ಗೋಳನ್ನು ಸ್ವತಃ ಕಂಡುಂಡವರು.
    `ಇಡೀ ದೇಶದ ಮೂಲೆ ಮೂಲೆ ಬಿಡದೆ ಎಲ್ಲೆಲ್ಲೂ ಅ
ಸ್ಪೃಶ್ಯನೆಂಬುವನು ಆತಂಕವನ್ನೆದುರಿಸುತ್ತಾನೆ. ಪಕ್ಷಪಾತಕ್ಕೆ ಸಿಕ್ಕು ನರಳುತ್ತಾನೆ. ಇಂಡಿಯಾದ ಈ ಅವಕಾಶಹೀನ ನಿರ್ಭಾಗ್ಯನಿಗೆ ಎಲ್ಲ ಕಡೆಯೂ ಅನ್ಯಾಯವೇ ಎದುರಾಗುತ್ತದೆ. ಸುತ್ತು ಕೋಟಲೆಗಳ ನೆರೆಯಲ್ಲಿ ಮೈ ಮುರಿದು ಗೆಯ್ಯುವ ಅಸ್ಪೃಶ್ಯರಿಗೆ ಮಾತ್ರವೇ ಈ ಕಟುಸತ್ಯ ಅರಿವಾಗಲು ಸಾಧ್ಯ.'1 ಎನ್ನುವ ಮೂಲಕ, ಅವರು ಈ ಅನುಭವಗಳ ಮೂಲಕವೇ ಎಚ್ಚರಾಗಿ ಎದ್ದು ನಿಂತು ತಮ್ಮ ಮೇಲೆ ನಡೆಯುವ ಅನ್ಯಾಯವನ್ನು ಮೆಟ್ಟಿ ನಿಲ್ಲಲು  ಅಸ್ಪೃಶ್ಯರು ಸಿದ್ಧರಾಗಬೇಕು ಎಂದು ಕರೆ ನೀಡುತ್ತಾರೆ. ಯಾಕೆಂದರೆ ಯಾವ ಮಹಾತ್ಮಾನಾಗಲೀ ಜಗದ್ಗುರುವಾಗಲೀ ನಿಮ್ಮನ್ನು ಉದ್ಧಾರ ಮಾಡಲಾರರು ; ನಿಮ್ಮ ಉದ್ಧಾರವನ್ನು ನೀವೇ ಸ್ವತಃ ಮಾಡಿಕೊಳ್ಳಬೇಕು ಎಂಬುದು ಅವರ ಸ್ಪಷ್ಟ ವಿಚಾರವಾಗಿತ್ತು. 
    ಜಾತಿಯಿಂದ ಮೇಲು ಎಂದುಕೊಂಡು ಮೆರೆಯುವ ಮಂದಿಗೂ ಕೂಡ ಡಾ. ಬಾಬಾಸಾಹೇಬ ಅಂಬೇಡ್ಕರರು ಎಚ್ಚರಿಕೆ ನೀಡುತ್ತಾರೆ : `ನಿಮ್ಮ ಸಾಮಾಜಿಕ ಸ್ವರೂಪವನ್ನು ಬದಲು ಮಾಡದೆ ಹೋದರೆ ನೀವೇನೂ ಪ್ರಗತಿ ಸಾಧಿಸಲಾರಿರಿ ಎಂದು ನಾನು ನಿಸ್ಸಂಶಯವಾಗಿ ಹೇಳುತ್ತೇನೆ. ರಕ್ಷಣೆಗಾಗಲಿ, ದಾಳಿಗಾಗಲಿ ನೀವು ಜನಬಲವನ್ನು ಸಿದ್ಧಗೊಳಿಸಲಾರಿರಿ, ಜಾತಿಯ ತಳಗಳನ್ನಿಟ್ಟುಕೊಂಡು ನೀವು ಏನನ್ನೂ ಕಟ್ಟಲಾರಿರಿ, ರಾಷ್ಟ್ರವನ್ನು ನಿರ್ಮಿಸಲಾರಿರಿ, ನೀತಿಯನ್ನು ನೆಲೆಗೊಳಿಸಲಾರಿರಿ. ಜಾತಿಯ ಆಧಾರದ ಮೇಲೆ ಕಟ್ಟಿದುದು ಅದು ಏನೇ ಆಗಿರಲಿ ಬಿರುಕು ಬಿಡುವುದು ; ಅಖಂಡವಾಗಿ ಉಳಿಯಲಾರದು.'2
    ಈ ಮಾತು ಕೆಲವರಿಗಾದರೂ ತಟ್ಟಿರಬಹುದು. ಜಾತಿಯ ಬಲೆಯಿಂದ ಬಿಡಿಸಿಕೊಂಡು ಹೊರಬರಲು ಬಹಳಷ್ಟು ಜನರಿಗೆ  ಸಾಧ್ಯವಾಗಲೇ ಇಲ್ಲ. ಅದು ಇಂದಿನವರೆಗೂ ಸಾಧ್ಯವಾಗಿಲ್ಲ ಎಂದರೆ  ಅಚ್ಚರಿ ಪಡುವ ಇಲ್ಲ. ಹಿಂದೂ ಧರ್ಮದ ಸಾಮಾಜಿಕ ವ್ಯವಸ್ಥೆಯಲ್ಲಿ ಪರಿವರ್ತನೆಯಾಗುವುದು ಸಾಧ್ಯವೇ ಇಲ್ಲ ಎಂಬುದನ್ನು  ಮನಗಂಡ ಡಾ. ಬಾಬಾಸಾಹೇಬರು ಹೋರಾಟವನ್ನು ತೀವ್ರಗೊಳಿಸಿದರು. `ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವಲ್ಲಿ ಹಿಂದೂ ಧರ್ಮವು ಸಮರ್ಥವಾಗಿದೆ ಎಂದು ಭಾವಿಸುವುದೇ ತಪ್ಪು .............. ಹಿಂದೂ ಧರ್ಮವು ಸ್ವತಃ ಅಸ್ಪøಶ್ಯರ ವಿರುದ್ಧ ಅಸಮಾನತೆ ಹಾಗೂ ಅನ್ಯಾಯಗಳ ಸಾಕಾರ ರೂಪವಾಗಿದೆ. ಅದು ನ್ಯಾಯದ ಬಗ್ಗೆ ಉಪದೇಶ ನೀಡಿದರೆ ತನ್ನ ಅಸ್ತಿತ್ವದ ವಿರುದ್ಧ ಹೋದಂತೇ. ಇದು ಸಾಧ್ಯವಾಗುತ್ತದೆ ಎಂದು ಕನಸು ಕಾಣುವುದೂ ಒಂದೇ ಪವಾಡಕ್ಕೆ ಕಾಯುವುದೂ ಒಂದೇ'3
    ಹಿಂದೂ ಧರ್ಮದ ಕುತಂತ್ರ ಮತ್ತು ಒಳಸಂಚಿನ ವಿನ್ಯಾಸಗಳನ್ನು ಅಧ್ಯಯನ ಮಾಡಿ, ಅನುಭವದ ಮೂಲಕ ಕಂಡುಕೊಂಡ ಸತ್ಯ ಇದಾಗಿತ್ತು. ಡಾ. ಬಾಬಾಸಾಹೇಬರಿಗೆ ಹಿಂದೂ ಧರ್ಮದಲ್ಲಿರುವ ಪೊಳ್ಳುತನ, ನಯವಂಚಕತೆ ಮತ್ತು ಮೋಸಗಾರಿಕೆಗಳ ಪರಿಪೂರ್ಣ ಪರಿಚಯವಾಗಿತ್ತು. ಹೀಗಾಗಿಯೇ ಹೇಸಿಗೆ ಹುಟ್ಟಿಸುವಷ್ಟು ತಾರತಮ್ಯ ಹೊಂದಿದ ಸಮಾಜದ ವರ್ತನೆಯಿಂದ ಬೇಸತ್ತು ಅ
ಸ್ಪೃಶ್ಯರು ಹಿಂದೂಗಳಲ್ಲ ಎಂದು ಘೋಷಿಸಿಯೇ ಬಿಟ್ಟರು.
    `ಅ
ಸ್ಪೃಶ್ಯರು ಹಿಂದೂಗಳ ಸಮಾಜಕ್ಕೆ ಸೇರುವುದಿಲ್ಲ ಮತ್ತು ಹಿಂದೂಗಳಿಗೆ ತಾವು ಮತ್ತು ಅಸ್ಪೃಶ್ಯರು ಒಂದೇ ಸಮಾಜಕ್ಕೆ ಸೇರಿದವರು ಎಂಬ ಭಾವನೆ ಬರುವುದಿಲ್ಲ. ಈ ಕಾರಣದಿಂದಾಗಿಯೇ ಅಸ್ಪೃಶ್ಯರೊಂದಿಗಿನ ಹಿಂದೂಗಳ ನಡವಳಿಕೆಯಲ್ಲಿ ಯಾವ ನೈತಿಕ ಕಾಳಜಿಗಳಿಲ್ಲದ ಅಸಡ್ಡೆ ವ್ಯಕ್ತವಾಗುತ್ತದೆ'4 ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು. ಹೀಗಾಗಿಯೇ ಹಿಂದೂ ಧರ್ಮ ತಮ್ಮದು ಎಂದು ಹೇಳಿಕೊಳ್ಳಲು ಯಾವ ಹೆಮ್ಮೆಯೂ ಇಲ್ಲ ; ಅದು ಸಾವಿನ ಪಾಶ ಎಂಬ ಅರಿವಿನಿಂದ ಹಿಂದೂ ಧರ್ಮವನ್ನು ತೊರೆಯಲು ಸಿದ್ಧರಾದರು. ವಿಚಿತ್ರವೆಂದರೆ ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಕೋಮುವಾದಿ ಎಂಬ ಹಣೆಪಟ್ಟಿ ಹೊತ್ತುಕೊಂಡ ರಾಜಕೀಯ ಪಕ್ಷವೊಂದರ ಪುಢಾರಿಯೊಬ್ಬ `ಡಾ. ಅಂಬೇಡ್ಕರರು ಹಿಂದೂ ಧರ್ಮದ ನಿಜವಾದ ಹೀರೋ' ಎಂಬ ಪ್ರಚಾರಕ್ಕೆ ತೊಡಗಿದ್ದ ! ಡಾ. ಬಾಬಾಸಾಹೇಬರನ್ನು ಅರ್ಥ ಮಾಡಿಕೊಳ್ಳಲಾರದ ಮೂರ್ಖತನವನ್ನು ಇದು ಸೂಚಿಸುತ್ತದೆ.
    ಸಮಾಜದಲ್ಲಿ ದಸ್ಯುಗಳಿಗಿಂತಲೂ ಕೀಳಾಗಿ ಅನ್ಯಾಯ, ಅವಮಾನ, ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದ ಅ
ಸ್ಪೃಶ್ಯರು, ಸನಾತನ ಹಿಂದೂ ಧರ್ಮದ ವಿಚಾರದಲ್ಲಿ  ಧರ್ಮಬಾಹಿರರು. ಇದ್ದೂ ಸತ್ತಂತೆ ಬದುಕುವುದಕ್ಕಿಂತ, ತಲೆಯೆತ್ತಿ ನಿಂತು, ಸ್ವಾಭಿಮಾನದೊಂದಿಗೆ  ಬದುಕುವ  ದಾರಿಯನ್ನು  ಡಾ. ಬಾಬಾಸಾಹೇಬರು ಹುಡುಕುತ್ತಿದ್ದರು. ಹಿಂದೂಗಳಲ್ಲಿ ಇರುವ ಕೊಳಕುತನ, ಕುಗೇಡಿತನ, ಕೊಳ್ಳುಬಾಕತನ ಮೊದಲಾದವುಗಳಿಂದ ಹೇಸಿಕೊಂಡ ಡಾ. ಬಾಬಾಸಾಹೇಬರು ಅಂಥ ಹೊಲಸಿನಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸುತ್ತಾರೆ ; ಹೊಸ ಬದುಕಿಗೆ ಹಾರೈಸುತ್ತಾರೆ.
    `ಜೀವನ ಮೌಲ್ಯಗಳು ಸಂಪೂರ್ಣವಾಗಿ ಬದಲಾಗಬೇಕು. ಜೀವನಪೂರ್ತಿ ಹೊಸದಾಗಬೇಕು. ಆದರೆ ಹೊಸ ಜೀವ ಹೆಣದ ದೇಹದಲ್ಲಿ ಹೋಗಲಾರದು. ಹೊಸ ಜೀವನಕ್ಕೆ ಹೊಸ ದೇಹವೇ ಬೇಕು. ಹೊಸ ದೇಹ ತಾಳುವುದಕ್ಕೆ ಮುನ್ನ ಹಳೆಯ ದೇಹ ಬಿಟ್ಟು ಹೋಗಲೇಬೇಕು. ಹೊಸ ಜೀವನ ಹುಟ್ಟಿ ಮಿಡಿಯಬೇಕಾದರೆ ಹಳೆಯದು ನಿಷ್ಕ್ರಿಯವಾಗಿ ಹೋಗಬೇಕು'5 ಎಂಬ ವಿಚಾರವನ್ನು ಪ್ರತಿಪಾದಿಸಿ ಅಂತಿಮವಾಗಿ ಬೌದ್ಧ ಧರ್ಮವನ್ನು ಆಯ್ಕೆ ಮಾಡಿಕೊಂಡರು.
    ಹಿಂದೂ ಧರ್ಮದಲ್ಲಿನ ಯಥಾಸ್ಥಿತಿವಾದ ಮತ್ತು ಸೋಗಲಾಡಿತನದಿಂದಲೇ ಡಾ. ಬಾಬಾಸಾಹೇಬ ಅಂಬೇಡ್ಕರರು ಬೌದ್ಧಧರ್ಮಕ್ಕೆ ಮತಾಂತರಗೊಂಡರು. ಅದು ಅವರಿಗೆ ಅಂದಿನ ಅನಿವಾರ್ಯವೂ ಆಗಿತ್ತು. ಜಾತಿಯ ಸೂತಕದಿಂದ ಮುಕ್ತವಾಗಿ ಸಮಾನತೆ ಮತ್ತು ಸ್ವಾಭಿಮಾನದಿಂದ ಬದುಕಬೇಕು ಎಂದುಕೊಂಡ ಬಹಳಷ್ಟು ಅ
ಸ್ಪೃಶ್ಯರು ಡಾ. ಬಾಬಾಸಾಹೇಬಕಾಲದಲ್ಲಿ ಮತ್ತು ಆನಂತರದಲ್ಲಿ ಬೌದ್ಧ ಧರ್ಮವನ್ನು ಸೀಕರಿಸಿದರು ; ಕೆಲವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು ; ಇನ್ನೂ ಕೆಲವರು ಇಸ್ಲಾಂ ಧರ್ಮವನ್ನೂ ಅವಲಂಬಿಸಿದರು. ಇದು ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ. ಆದರೆ ಇತ್ತೀಚಿನ ವಾಸ್ತವ ಚಿತ್ರಣವನ್ನು ಗಮನಿಸಿದಾಗ ಹೀಗೆ ಮತಾಂತರವಾಗುತ್ತಿರುವವರು ಅತಂತ್ರರಾಗುತ್ತಿರುವುದು ಕಂಡು ಬರುತ್ತದೆ.
    ಭಾರತೀಯ ಬೌದ್ಧ, ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳಲ್ಲಿಯೂ ಕೂಡ ಜಾತಿಯ ಬೇರುಗಳು ಗಟ್ಟಿಗೊಳ್ಳುತ್ತಿವೆ. ಇದಕ್ಕೆ ಹಿಂದೂ ಧರ್ಮದ ಪ್ರಭಾವವೂ ಕಾರಣವಾಗಿರಬಹುದು. ಮತಾಂತರಗೊಂಡವರು ಅಲ್ಲಿ ಪ್ರತ್ಯೇಕವಾಗಿ ಪರಿಗಣಿಸಲ್ಪಡುತ್ತಿದ್ದಾರೆ. ನವ ಬೌದ್ಧ, ನವ ಕ್ರಿಶ್ಚಿಯನ್ ಎನ್ನುವುದಾಗಲಿ ಅಥವಾ ದಲಿತ ಬೌದ್ಧರು, ದಲಿತ ಕ್ರಿಶ್ಚಿಯನ್ನರು ಎನ್ನುವುದಾಗಲಿ ಮೇಲು ನೋಟಕ್ಕೆ ಕಾಣಿಸಿಕೊಳ್ಳುವ ಪ್ರತ್ಯೇಕೀಕರಣಗಳು ! ಡಾ. ಬಾಬಾಸಾಹೇಬ ಅಂಬೇಡ್ಕರರು ಕಂಡ ಕನಸು ಇಂಥಲ್ಲಿ ನನಸಾಗದು. ಇಂಥ ಗೊಂದಲಗಳು ಅ
ಸ್ಪೃಶ್ಯರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಖಂಡಿತವಾಗಿಯೂ ಕಾಲ್ತೊಡಕುಗಳಾಗುತ್ತವೆ.
    ಹಿಂದೂ ಧರ್ಮದಲ್ಲಿನ ಜಾತಿ, ಮತಾಂತರಗೊಂಡ ಧರ್ಮದಲ್ಲಿನ ಪ್ರತ್ಯೇಕತೆ ಕಂಗೆಡಿಸುವ ಸಂಗತಿಗಳೇ ಆಗಿವೆ. ಹೀಗೆಂದುಕೊಂಡು ತೀರ ಹತಾಶರಾಗಬೇಕಾದ ಕಾರಣಗಳಿಲ್ಲ. ಇಂದು ಶಿಕ್ಷಣ ಮುಕ್ತವಾಗಿದೆ. ಅಕ್ಷರದ ಅರಿವಿನ ಮೂಲಕ ಸಂವಿಧಾನದತ್ತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಜ್ಞಾವಂತರಾಗಬೇಕು. ಒಳಜಾತಿಗಳಲ್ಲಿ ಇರುವ ಭೇದ ಮರೆತು, ಸಂಬಂಧಗಳನ್ನು ಬೆಸೆಯಬೇಕು ; ಏಕತ್ವವನ್ನು ಸಾಧಿಸಬೇಕು. ಕ್ಷುಲ್ಲಕ ಆಮಿಷಗಳಿಗೆ ಬಲಿಯಾಗದೆ ಅವಕಾಶಗಳನ್ನು ಬಳಸಿಕೊಂಡು ಉನ್ನತಿಗೆ ಏರಬೇಕು. ರಾಜಕೀಯ ಶಕ್ತಿ ಪಡೆಯಬೇಕು. ಯಾರ ಕೃಪೆ, ದಾನಕ್ಕೆ ತಲೆಬಾಗದೇ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲಬೇಕು. ಹೀಗಾದಾಗ ಮಾತ್ರ ಡಾ. ಬಾಬಾಸಾಹೇಬರು ಕಂಡ ಕನಸನ್ನು ನನಸು ಮಾಡುವುದರತ್ತ ಒಂದು ದೊಡ್ಡ ಹೆಜ್ಜೆ ಇಟ್ಟಂತಾಗುತ್ತದೆ.
ಅಡಿ ಟಿಪ್ಪಣಿಗಳು :
1. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-1 : ಪು- 164
2.
ಅದೇ :
: ಪು-93
3. ಅದೇ : ಪು-529
4. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-5 : ಪು-150
5. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-1 : ಪು-108
                                                                   *****

Sunday, June 17, 2012

ದಲಿತ ರಾಜಕಾರಣಕ್ಕೆ ಯಾರು ಮಾದರಿ? - ದಿನೇಶ ಅಮೀನಮಟ್ಟು

`ನಾ ವು ರಾಜಕೀಯ ಕ್ಷೇತ್ರದಲ್ಲಿ ಸಮಾನತೆ ಪಡೆಯಲಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದ ಅಸಮಾನತೆ ಎಂದಿನಂತೆ ಮುಂದುವರಿಯಲಿದೆ. ಈ ವಿರೋಧಾಭಾಸವನ್ನು ನಿವಾರಿಸಿಕೊಳ್ಳದೆ ಹೋದರೆ ಅಸಮಾನತೆಯಿಂದ ನೊಂದವರು ಮುಂದೊಂದು ದಿನ ರಾಜಕೀಯ ಪ್ರಜಾಪ್ರಭುತ್ವವನ್ನು ಕಿತ್ತೊಗೆಯಲಿದ್ದಾರೆ` ಎಂದು 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಒಪ್ಪಿಕೊಂಡ ದಿನವೇ ಬಿ.ಆರ್.ಅಂಬೇಡ್ಕರ್ ಹೇಳಿದ್ದರು.

ಸಮಾನತೆಯನ್ನು ಸಾರುವ ಪ್ರಜಾಪ್ರಭುತ್ವ ಮತ್ತು ಅಸಮಾನತೆಯೇ ಸಾರವಾಗಿರುವ ಸಾಮಾಜಿಕ ವ್ಯವಸ್ಥೆಯ ನಡುವಿನ ವೈರುಧ್ಯದ ಅರಿವು ಅವರಿಗಿದ್ದ ಕಾರಣದಿಂದಲೇ ಕಟ್ಟಾ ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಅಂಬೇಡ್ಕರ್ ಕೂಡಾ ಇಂತಹ ಕಟುಮಾತುಗಳನ್ನು ಆಡಿದ್ದರು. ಅರವತ್ತೆರಡು ವರ್ಷಗಳ ನಂತರವಾದರೂ ಪರಿಸ್ಥಿತಿ ಬದಲಾಗಿದೆಯೇ?
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಎಲ್ಲವನ್ನೂ ನಿರ್ಣಯಿಸುತ್ತದೆ ಎಂದು ಹೇಳುವವರಿದ್ದಾರೆ.

ರಾಜಕೀಯ ನಾಯಕರ ಯಶಸ್ಸಿನಲ್ಲಿ ಜಾತಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ಲೇಷಿಸುವವರಿದ್ದಾರೆ. ಹೀಗಿದ್ದರೂ ದೇಶದ ಜನಸಂಖ್ಯೆಯಲ್ಲಿ ಶೇಕಡಾ 16.2ರಷ್ಟಿರುವ ಪರಿಶಿಷ್ಟ ಜಾತಿಯವರಲ್ಲಿ ಯಾರೊಬ್ಬರೂ ಪ್ರಧಾನಮಂತ್ರಿ ಆಗಲಿಲ್ಲ. ಪ್ರಧಾನಿಯಾಗುವ ಅರ್ಹತೆಯನ್ನು ಸಾಧನೆಯ ಬಲದಿಂದಲೇ ಹೊಂದಿದ್ದ ಬಾಬು ಜಗಜೀವನರಾಂ ಅವರಿಗೆ ಪ್ರಧಾನಿ ಪಟ್ಟದ ಸಮೀಪವೂ ಸುಳಿಯಲೂ ಸಾಧ್ಯವಾಗಲಿಲ್ಲ.


ಆಂಧ್ರಪ್ರದೇಶ (ಸಂಜೀವಯ್ಯ), ರಾಜಸ್ತಾನ (ಜಗನ್ನಾಥ ಪಹಾಡಿಯಾ), ಉತ್ತರ ಪ್ರದೇಶ (ಮಾಯಾವತಿ), ಬಿಹಾರ (ರಾಮಸುಂದರ ದಾಸ್) ಮತ್ತು ಮಹಾರಾಷ್ಟ್ರವನ್ನು (ಸುಶೀಲ್‌ಕುಮಾರ್ ಶಿಂಧೆ) ಹೊರತುಪಡಿಸಿದರೆ ಬೇರೆ ಯಾವ ರಾಜ್ಯಗಳಲ್ಲಿಯೂ ದಲಿತರು ಮುಖ್ಯಮಂತ್ರಿಯಾಗಲಿಲ್ಲ. ಹಿಮಾಚಲಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದ್ದರೂ ಆ ರಾಜ್ಯಗಳಲ್ಲಿ ಯಾರೂ ಮುಖ್ಯಮಂತ್ರಿ ಆಗಲಿಲ್ಲ.

ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ದಲಿತ ಚಳವಳಿ ಹೆಚ್ಚು ಸಕ್ರಿಯವಾಗಿರುವ ಕರ್ನಾಟಕದಲ್ಲಿಯೂ ದಲಿತರೂ ಮುಖ್ಯಮಂತ್ರಿಯಾಗಲಿಲ್ಲ. ಪ್ರಧಾನಿ ಇಲ್ಲವೇ ಮುಖ್ಯಮಂತ್ರಿಗಳ ಸ್ಥಾನ ಒತ್ತಟ್ಟಿಗಿರಲಿ, ಉತ್ತರಪ್ರದೇಶವೊಂದನ್ನು ಹೊರತುಪಡಿಸಿ ಬೇರೆ ಯಾವ ರಾಜ್ಯಗಳ ರಾಜಕೀಯದಲ್ಲಿಯೂ ದಲಿತರು ನಿರ್ಣಾಯಕ ಸ್ಥಾನದಲ್ಲಿ ಇಲ್ಲ.

ಇವೆಲ್ಲವನ್ನು ಮೊದಲೇ ತಿಳಿದುಕೊಂಡಿದ್ದ ಪ್ರವಾದಿಯಂತೆ ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಮಾತನಾಡಿದ್ದರು.

1952ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷವೊಂದನ್ನು ಕಟ್ಟಿ ಚುನಾವಣೆ ಎದುರಿಸಿದ ಅವರು ಜಲಂಧರ್ ನಡೆದ ಪ್ರಚಾರಸಭೆಯಲ್ಲಿ ದಲಿತ ರಾಜಕೀಯದ ಭವಿಷ್ಯದ ಹೊಳಹುಗಳನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ದಲಿತರನ್ನು ಅವರು `ಕಾಂಗ್ರೆಸ್‌ನ ಗುಲಾಮರು` ಎಂದು ಚುಚ್ಚಿದ್ದರು. `ಬಹಳಷ್ಟು ಅಸ್ಪೃಶ್ಯರು ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ.


ಅಂತಹ 30 ಸದಸ್ಯರಿದ್ದಾರೆ. ಇವರು ಎಂದಾದರೂ ಸದನದಲ್ಲಿ ಯಾವುದಾದರೂ ಪ್ರಶ್ನೆಗಳನ್ನು ಕೇಳಿದ್ದಾರೆಯೇ? ಯಾವುದಾದರೂ ಗೊತ್ತುವಳಿ ಇಲ್ಲವೇ ಮಸೂದೆಯನ್ನು ಮಂಡಿಸಿದ್ದಾರೆಯೇ? ತಮಗೆ ಅನಿಸಿದ್ದನ್ನು ಮುಲಾಜಿಲ್ಲದೆ ಹೇಳುವ ಧೈರ್ಯ ತೋರಿದ್ದಾರೆಯೇ? ಕಾಂಗ್ರೆಸ್ ಪಕ್ಷಕ್ಕೆ ಅರ್ಹ ದಲಿತರು ಬೇಕಾಗಿಲ್ಲ, ಗುಲಾಮರು ಬೇಕಾಗಿದೆ. ಇಂತಹ ಪಕ್ಷದ ಗುಲಾಮರು ದಲಿತರ ಪ್ರತಿನಿಧಿಗಳು ಹೇಗಾಗುತ್ತಾರೆ?` ಎಂದು ಅವರು ಪ್ರಶ್ನಿಸಿದ್ದರು.


ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜಕೀಯವಾಗಿ ದಲಿತರ ಸ್ಥಿತಿ ಏನಾಗಲಿದೆ ಎಂಬ ಸ್ಪಷ್ಟ ಅರಿವು ಅಂಬೇಡ್ಕರ್ ಅವರಿಗಿತ್ತು. ಅದಕ್ಕಾಗಿಯೇ ಅವರು `ದಲಿತ ಪ್ರತಿನಿಧಿಗಳನ್ನು ದಲಿತ ಮತದಾರರೇ ಆಯ್ಕೆ ಮಾಡುವಂತಹ ಪ್ರತ್ಯೇಕ ಮತದಾನದ ಹಕ್ಕನ್ನು ನೀಡುವಂತೆ ದುಂಡುಮೇಜಿನ ಪರಿಷತ್‌ನಲ್ಲಿ ವಾದಿಸಿದ್ದರು. ದಲಿತ ಮತದಾರರು ಉಳಿದೆಲ್ಲರ ಜತೆಯಲ್ಲಿ ಸೇರಿ ಸಾಮಾನ್ಯ ಅಭ್ಯರ್ಥಿಗೆ ಮತದಾನ ಮಾಡುವ ಜತೆಯಲ್ಲಿ, ಕೇವಲ ತಮ್ಮ ಮತದಿಂದಲೇ ದಲಿತ ಅಭ್ಯರ್ಥಿಯನ್ನು ಚುನಾಯಿಸುವ ಅಧಿಕಾರವೂ ಇರಬೇಕು.


ಇಲ್ಲದೆ ಹೋದರೆ ದಲಿತ ಜನಪ್ರತಿನಿಧಿಗಳು ರಾಜಕೀಯ ಪಕ್ಷಗಳ ಗುಲಾಮರಾಗುತ್ತಾರೆ` ಎಂದು ಅವರು ಪ್ರತಿಪಾದಿಸಿದ್ದರು. ಕೊನೆಗೂ ಬ್ರಿಟಿಷ್ ಪ್ರಧಾನಿ ರಾಮ್ಸೆ ಮ್ಯಾಕ್‌ಡೊನಾಲ್ಡ್ ಅಂಬೇಡ್ಕರ್ ಅಭಿಪ್ರಾಯವನ್ನು ಒಪ್ಪಿಕೊಂಡರೂ ಗಾಂಧೀಜಿಯವರ ವಿರೋಧದಿಂದಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ.

ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡುವುದನ್ನು ವಿರೋಧಿಸಿ ಗಾಂಧೀಜಿ ಪ್ರಾರಂಭಿಸಿದ್ದ ಆಮರಣಾಂತ ಉಪವಾಸಕ್ಕೆ ಮಣಿದ ಅಂಬೇಡ್ಕರ್ ಒಲ್ಲದ ಮನಸ್ಸಿನಿಂದಲೇ ತಮ್ಮ ಬೇಡಿಕೆಯನ್ನು ಕೈಬಿಟ್ಟು `ಪೂನಾ ಒಪ್ಪಂದ`ಕ್ಕೆ ಸಹಿ ಹಾಕಿದ್ದರು. ಇದರ ಪರಿಣಾಮ ತಿಳಿದುಕೊಳ್ಳಲು ಬಹಳ ಕಾಲವೇನೂ ಬೇಕಾಗಲಿಲ್ಲ. ಸ್ವತಂತ್ರಭಾರತದಲ್ಲಿ ಸ್ವಂತ ಪಕ್ಷ ಕಟ್ಟಿ ಸ್ಪರ್ಧಿಸಿದ್ದ ಎರಡೂ ಚುನಾವಣೆಗಳಲ್ಲಿ ಅಂಬೇಡ್ಕರ್ ಸೋಲಬೇಕಾಯಿತು.


ಈಗಲಾದರೂ ಪರಿಸ್ಥಿತಿ ಬದಲಾಗಿದೆಯೇ? ಬೇರೆಬೇರೆ ರಾಜ್ಯಗಳಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಐದು ಮಂದಿ ಮುಖ್ಯಮಂತ್ರಿಗಳಾದರೂ ಅವರಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಅವರೆಲ್ಲ ಮುಖ್ಯಮಂತ್ರಿಯಾಗಿದ್ದು ಸ್ವಂತ ಬಲದಿಂದ ಅಲ್ಲ, ಕಾಂಗ್ರೆಸ್ ಬೆಂಬಲದಿಂದ. ಇದಕ್ಕೆ ಹೊರತಾದವರೆಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿಯವರೊಬ್ಬರೇ.


ಈ ಕಾರಣದಿಂದಲೇ ದಲಿತ ರಾಜಕೀಯದ ಯಶಸ್ವಿ ಮಾದರಿ -ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ್ದು ಮಾತ್ರ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿ ಪರಾಭವಗೊಂಡಿದ್ದರೂ ತಳ್ಳಿಹಾಕಿ ಬಿಡುವಂತಹ ಪಕ್ಷ ಅದಲ್ಲ ಎನ್ನುವುದು ಅದರ ಬೆಳವಣಿಗೆಯನ್ನು ಗಮನಿಸುತ್ತ ಬಂದವರಿಗೆಲ್ಲರಿಗೂ ಗೊತ್ತು. ಅದರ ಈ ಶಕ್ತಿಯನ್ನು ತಿಳಿದುಕೊಳ್ಳಬೇಕಾದರೆ  ಆ ಪಕ್ಷದ ಸ್ಥಾಪಕರಾದ ಕಾನ್ಸಿರಾಮ್ ಅವರನ್ನು ಮೊದಲು ಅರ್ಥಮಾಡಿಕೊಳ್ಳಬೇಕು.


ಅಂಬೇಡ್ಕರ್ ಅವರ ನಂತರದ ಬಹುಮುಖ್ಯ ದಲಿತ ರಾಜಕೀಯ ನಾಯಕ ಕಾನ್ಸಿರಾಮ್ ಎನ್ನುವುದರಲ್ಲಿ ಅನುಮಾನ ಇಲ್ಲ. ವಿದ್ಯೆಯಲ್ಲಿಯಾಗಲಿ, ವಿದ್ವತ್‌ನಲ್ಲಿಯಾಗಲಿ  ಅಂಬೇಡ್ಕರ್ ಅವರಿಗೆ ಕಾನ್ಸಿರಾಮ್ ಸಮ ಅಲ್ಲ. ಆದರೆ ರಾಜಕೀಯವಾಗಿ ಅಂಬೇಡ್ಕರ್ ಅವರಿಗಿಂತಲೂ ಕಾನ್ಸಿರಾಮ್ ಯಶಸ್ವಿ ರಾಜಕಾರಣಿ.


1918ರಿಂದ 1930ರ ವರೆಗಿನ ಅಂಬೇಡ್ಕರ್ ಅವರ ಜೀವನದ ಮೊದಲ ಘಟ್ಟದಲ್ಲಿ ಬಹಿಷ್ಕೃತ ಹಿತಕರಣೆ ಸಭಾ ಸ್ಥಾಪನೆ, ಮಹಾಡ್ ಸತ್ಯಾಗ್ರಹ, ಪೂನಾದ ಪಾರ್ವತಿ ದೇವಸ್ಥಾನ ಮತ್ತು ನಾಸಿಕ ಕಾಳಾರಾಮ ದೇವಸ್ಥಾನ ಪ್ರವೇಶ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಚಳವಳಿಯನ್ನು ಮುನ್ನಡೆಸಿದ್ದ ಅಂಬೇಡ್ಕರ್, ನಂತರ 1930ರಿಂದ 1951ರ ವರೆಗಿನ ಅವಧಿಯಲ್ಲಿ ತಮ್ಮನ್ನು ರಾಜಕೀಯವಾಗಿ ತೊಡಗಿಸಿಕೊಂಡಿದ್ದರು.


ಈ ಅವಧಿಯಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷ, ಪರಿಶಿಷ್ಟ ಜಾತಿ ಒಕ್ಕೂಟ ಮತ್ತು ಭಾರತೀಯ ರಿಪಬ್ಲಿಕನ್ ಪಕ್ಷ ಎಂಬ ಮೂರು ರಾಜಕೀಯ ಪಕ್ಷಗಳನ್ನೂ ಅವರು ಕಟ್ಟಿದ್ದರು. ಆದರೆ ಅಂಬೇಡ್ಕರ್ ಅವರಿಗೆ ರಾಜಕೀಯ ಯಶಸ್ಸು ಸಿಗಲೇ ಇಲ್ಲ. ಈ ವೈಫಲ್ಯಕ್ಕೆ ಅಂಬೇಡ್ಕರ್ ಅವರ ಕಡು ಸೈದ್ಧಾಂತಿಕ ನಿಷ್ಠೆ ಮತ್ತು ದಲಿತ ಕೇಂದ್ರಿತ ರಾಜಕಾರಣದ ಮಿತಿಯೂ ಕಾರಣವಾಗಿರಬಹುದು. ಇದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದರೆ ಕಾನ್ಸಿರಾಮ್ ರಾಜಕಾರಣವನ್ನು ಇನ್ನಷ್ಟು ಒಳಹೊಕ್ಕು ನೋಡಬೇಕಾಗುತ್ತದೆ.


ಶುದ್ಧ ಸೈದ್ಧಾಂತಿಕ ರಾಜಕಾರಣದ ಬಗ್ಗೆ ಕಾನ್ಸಿರಾಮ್ ಅವರಿಗೆ ನಂಬಿಕೆ ಇರಲಿಲ್ಲ ಎಂದು ಹೇಳಲಾಗದು. ಆದರೆ ಅದರ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡುತ್ತಿದ್ದದ್ದು ಕಡಿಮೆ. ಅವರದ್ದು ವಾಸ್ತವದ ನೆಲೆಗಟ್ಟಿನ ರಾಜಕಾರಣ. ಈ ಮೂಲಕ ಅವರು ದಲಿತರು ಮತ್ತು ಬಹುಜನರ ನಡುವಿನ ಸಂಬಂಧದ ವ್ಯಾಕರಣವನ್ನೇ ಬದಲಿಸಿದ್ದರು. ಜೀವನದ ಪ್ರಾರಂಭದ ದಿನಗಳಲ್ಲಿ ಅವರು ಮಹಾರಾಷ್ಟ್ರದಲ್ಲಿ ಒಂದಷ್ಟು ಕಾಲ ಭಾರತೀಯ ರಿಪಬ್ಲಿಕನ್ ಪಕ್ಷದ (ಆರ್‌ಪಿಐ) ಜತೆಯಿದ್ದರೂ ಆ ಪಕ್ಷದ ದಲಿತ ಕೇಂದ್ರಿತ ರಾಜಕಾರಣವನ್ನು ಇಷ್ಟಪಡುತ್ತಿರಲಿಲ್ಲ.


ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯ `ಬಹುಜನ ಸಮಾಜ`ದ ಭಾಗವೆಂದೇ ಅವರು ಹೇಳುತ್ತಿದ್ದರು. ಇದರಿಂದಾಗಿ ಅವರು ಪ್ರಾರಂಭದಲ್ಲಿ ಕಟ್ಟಿದ `ಅಖಿಲ ಭಾರತ ಹಿಂದುಳಿದ (ಎಸ್‌ಸಿ, ಎಸ್‌ಟಿ, ಒಬಿಸಿ) ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ` (ಬಿಎಎಂಸಿಇಎಫ್) ವಾಗಲಿ, ಅದರ ನಂತರ ಸ್ಥಾಪಿಸಿದ್ದ `ದಲಿತ್ ಶೋಷಿತ್ ಸಮಾಜ್ ಸಂಘರ್ಷ ಸಮಿತಿ, ಇಲ್ಲವೇ ಡಿಎಸ್-4 ಆಗಲಿ ಕೊನೆಗೆ ಸ್ಥಾಪಿಸಿದ ಬಹುಜನ ಸಮಾಜ ಪಕ್ಷವಾಗಲಿ (ಬಿಎಸ್‌ಪಿ) ಕೇವಲ ದಲಿತ ಕೇಂದ್ರಿತ ಸಂಘಟನೆಗಳಾಗಿರಲಿಲ್ಲ.

ಮೀಸಲಾತಿಯ ಕಾರಣದಿಂದಾಗಿ ಎಷ್ಟೋ ಕಡೆ ಹಿಂದುಳಿದ ಜಾತಿಗಳಿಗಿಂತ ದಲಿತರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಅವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದರು.  ಬಿಎಸ್‌ಪಿಯ ಬ್ಯಾನರ್, ಪೋಸ್ಟರ್ ಇಲ್ಲವೇ ಲೆಟರ್‌ಹೆಡ್‌ಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಅವರ ಜತೆಯಲ್ಲಿ ಜ್ಯೋತಿಬಾ ಪುಲೆ, ಸಾಹು ಮಹಾರಾಜ್, ಪೆರಿಯಾರ್ ಮತ್ತು ನಾರಾಯಣ ಗುರುಗಳ ಭಾವಚಿತ್ರ ಅಚ್ಚುಹಾಕಿಸುವುದನ್ನು ಅವರು ಕಡ್ಡಾಯಗೊಳಿಸಿದ್ದರು.


1995ರಲ್ಲಿ ಮುಖ್ಯಮಂತ್ರಿಯಾದ ಮಾಯಾವತಿ ತಮ್ಮ ಬಜೆಟ್‌ನ ಶೇಕಡಾ 27ರಷ್ಟು ಹಣವನ್ನು ಹಿಂದುಳಿದ ಜಾತಿಗಳಿಗೆ ಮೀಸಲಿಟ್ಟಿದ್ದರು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಎಲ್ಲ ಸೌಲಭ್ಯಗಳನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದರು. ಸರ್ಕಾರಿ ನೌಕರಿಗಳಲ್ಲಿ ಮುಸ್ಲಿಮರಲ್ಲಿರುವ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ನೀಡಬೇಕೆಂಬ ಉತ್ತರಪ್ರದೇಶ ಹಿಂದುಳಿದ ಜಾತಿಗಳ ಒಕ್ಕೂಟದ ವರದಿಯನ್ನು ಮಾಯಾವತಿ ಜಾರಿಗೊಳಿಸಿದ್ದರು.


ಹಿಂದುಳಿದ ಜಾತಿಗಳ ಶೇಕಡಾ 27ರ ಮೀಸಲಾತಿಯಲ್ಲಿ ಶೇಕಡಾ ಎಂಟರಷ್ಟನ್ನು ಮುಸ್ಲಿಮರಲ್ಲಿನ ಹಿಂದುಳಿದ ಜಾತಿಗಳಿಗೆ ನೀಡಿದ್ದರು. 1996ರ ವಿಧಾನಸಭಾ ಚುನಾವಣೆಯಲ್ಲಿನ ಬಿಎಸ್‌ಪಿ ಅಭ್ಯರ್ಥಿಗಳಲ್ಲಿ ಶೇಕಡಾ 29ರಷ್ಟು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರಿದ್ದರು. ಉಳಿದಂತೆ ಶೇಕಡಾ 34ರಷ್ಟು ಹಿಂದುಳಿದ ಜಾತಿಗಳು, ಶೇಕಡಾ 18ರಷ್ಟು ಮುಸ್ಲಿಮರಿದ್ದರು.


ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಬಿಎಸ್‌ಪಿಯಲ್ಲಿ ಮಾಯಾವತಿಯವರೇ ಎಲ್ಲವೂ ಆಗಿದ್ದರೂ ಪಕ್ಷದ ಪದಾಧಿಕಾರಗಳನ್ನು ಜಾತಿಜನಸಂಖ್ಯೆಗೆ ಅನುಗುಣವಾಗಿ ನೀಡುತ್ತಾ ಬಂದಿದ್ದಾರೆ. ಹಿಂದುಳಿದ ಜಾತಿಗಳಲ್ಲಿ ಮುಖ್ಯವಾಗಿ ಅತೀ ಹಿಂದುಳಿದಿರುವ ನಿಷಾದ್, ಸೈನಿ, ಶಾಖ್ಯ, ಬಗೇಲ್, ಕಶ್ಯಪ್ ಮತ್ತು ರಾಜ್‌ಭರ್ ಸಮುದಾಯಕ್ಕೆ ಬಿಎಸ್‌ಪಿಯಲ್ಲಿ ಈಗಲೂ ಹೆಚ್ಚಿನ ಪ್ರಾತಿನಿಧ್ಯ ಇದೆ.


ವಿಧಾನಸಭೆ ನಮ್ಮ ಸುತ್ತಲಿನ ಸಮಾಜದ ರಚನೆಯನ್ನು ಪ್ರತಿಬಿಂಬಿಸುವಂತಿರಬೇಕು ಎನ್ನುವುದು ಕಾನ್ಸಿರಾಮ್ ಅವರ ಚಿಂತನೆಯಾಗಿತ್ತು. ಈ ಕಾರಣದಿಂದಾಗಿಯೇ ಮೇಲ್ಜಾತಿಯೂ ಸೇರಿದಂತೆ ಎಲ್ಲರಿಗೂ ಅವರ ಜಾತಿ ಜನಸಂಖ್ಯೆಯ ಆಧಾರದಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಅವರು ಹೇಳುತ್ತಿದ್ದದ್ದು ಮಾತ್ರವಲ್ಲ, 2002ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಹೇಳಿದಂತೆ ಮಾಡಿಯೂ ತೋರಿಸಿದ್ದರು. ನಂತರದ ದಿನಗಳಲ್ಲಿ ಮಾಯಾವತಿಯವರೂ ಆ ಸೂತ್ರವನ್ನು ಪಾಲಿಸಿಕೊಂಡು ಬಂದಿದ್ದಾರೆ.


ಮಾಯಾವತಿಯವರೂ ಸೇರಿದಂತೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದ ಮೊದಲ ಚುನಾವಣೆಯಿಂದ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಬಹುಮತ ಗಳಿಸಿದ್ದ 2007ರ ಚುನಾವಣೆಯ ವರೆಗೆ ಬಿಎಸ್‌ಪಿ ಸಾಗಿ ಬಂದ ಹಾದಿಯನ್ನು ನೋಡುತ್ತಾ ಬಂದರೆ ಉದ್ದಕ್ಕೂ ಈ ರೀತಿ ತನ್ನ ನೆಲೆಯನ್ನು ವಿಸ್ತರಿಸುತ್ತಾ ಬಂದಿರುವುದನ್ನು ಕಾಣಬಹುದು.


ಬಿಜೆಪಿ ಜತೆಗಿನ ಮೈತ್ರಿ, `ಬ್ರಾಹ್ಮಣ್ ಜೋಡೋ`-ಎಲ್ಲವೂ ಈ ಕಾರ್ಯತಂತ್ರದ ಭಾಗವೇ ಆಗಿತ್ತು. ಇದರಿಂದ ಬಿಎಸ್‌ಪಿ ಗಳಿಸಿದ್ದು ಹೆಚ್ಚು ಕಳೆದುಕೊಂಡದ್ದು ಬಹಳ ಕಡಿಮೆ. ಈ ಬಾರಿಯ ಚುನಾವಣೆಯಲ್ಲಿಯೂ ಬಿಎಸ್‌ಪಿ ಸೋಲಿಗೆ ಗೆಲುವಿನ ಮದದಿಂದ ನಡೆಸಿದ ವೈಯಕ್ತಿಕ ಹುಚ್ಚಾಟಗಳೇ ಕಾರಣ ಹೊರತು, ಅದರ ರಾಜಕೀಯ ಕಾರ್ಯತಂತ್ರದ ವೈಫಲ್ಯ ಅಲ್ಲ.


ಇದರಿಂದಾಗಿಯೇ ರಾಜಕೀಯ ಪಕ್ಷಗಳ ಗುಲಾಮಗಿರಿಯಿಂದ ಹೊರತಾದ ಸ್ವತಂತ್ರ ಮತ್ತು ಸ್ವಾಭಿಮಾನಿ ದಲಿತ ರಾಜಕಾರಣಕ್ಕೆ ಅಂಬೇಡ್ಕರ್ ಪ್ರೇರಣೆ ಒದಗಿಸಬಹುದು, ಆದರೆ ಮಾದರಿಯಾಗಿ ಕಾನ್ಸಿರಾಮ್ ಅವರನ್ನೇ ಸ್ವೀಕರಿಸಬೇಕಾಗುತ್ತದೆ.
ಕೃಪೆ : ಪ್ರಜಾವಾಣಿ 

Tuesday, January 31, 2012

ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಹಿಂದೂ ಧರ್ಮ !



ಮೂಲ: ಗೈಲ್ ಓಮ್ವೆಟ್
ಸಂಗ್ರಹಾನುವಾದ: ನಾ.ದಿವಾಕರ


ಡಾ.ಬಿ.ಆರ್. ಅಂಬೇಡ್ಕರ್
ಸಾಮಾನ್ಯವಾಗಿ ಅಂಬೇಡ್ಕರ್ ಹೆಸರಿತ್ತಿದರೆ ಮೂಗು ಮುರಿಯುವ ಮೇಲ್ಜಾತಿಯವರ ಮನದಾಳದಲ್ಲಿ ಅಂಬೇಡ್ಕರ್ ಬಗ್ಗೆ ಇರುವ ದ್ವೇಷ ವೈಷಮ್ಯಗಳಿಗೆ ಮೀಸಲಾತಿ ನೀತಿಯೂ ಒಂದು ಕಾರಣ. ಮೀಸಲಾತಿ ನೀತಿಯ ಪರಿಣಾಮವಾಗಿ ನಮಗೆ ಸರ್ಕಾರಿ ಹುದ್ದೆಗಳಲ್ಲಿ ಅವಕಾಶ ದೊರೆಯುತ್ತಿಲ್ಲ, ಶಿಕ್ಷಣ ಸಂಸ್ಥೆಗಳಲ್ಲಿ ನಮಗಿಂತಲೂ ಕಡಿಮೆ ಆಂಕ ಗಳಿಸಿದವರಿಗೂ ಸೀಟು ದೊರೆಯುತ್ತದೆ ಎಂದು ವಾದಿಸುವ ಪ್ರತಿಭೆಯ ಸಮರ್ಥಕರಲ್ಲಿ ಮೀಸಲಾತಿ ಒಂದು ಸಾಮಾಜಿಕ ತೊಡಕು. ಈ ಆಕ್ರೋಶಗಳು ಮೇಲ್ನೋಟಕ್ಕೆ ಕಾಣದಿದ್ದರೂ ಆಂತರ್ಯದಲ್ಲಿ ಮೀಸಲಾತಿ ಸೌಲಭ್ಯ ಪಡೆದವರ ಬಗ್ಗೆ ಇರುವ ಅಸಡ್ಡೆ ಅನುಭವಿಸಿದವರಿಗೆ ಮಾತ್ರ ವೇದ್ಯವಾಗುತ್ತದೆ. ಮೇಲ್ಜಾತಿಯವರ, ವಿಶೇಷವಾಗಿ ದ್ವಿಜ ಸಂಪ್ರದಾಯದವರ ಮನದಾಳದಲ್ಲಿನ ಈ ಮನೋಭಾವದ ಹಿಂದೆಯೇ ಅಂಬೇಡ್ಕರ್ ಬ್ರಾಹ್ಮಣ ವಿರೋಧಿ ಎಂಬ ಭಾವನೆ ಸುಪ್ತವಾಗಿರುವುದು ಸ್ಪಷ್ಟ. ಈ ತಪ್ಪುಕಲ್ಪನೆಯನ್ನು ಹೋಗಲಾಡಿಸಬೇಕಾದ ಅನಿವಾರ್ಯತೆ ಇದೆಯೇ ಎನ್ನುವುದಕ್ಕಿಂತಲೂ, ತಪ್ಪು ಕಲ್ಪನೆಗಳಿಂದ ಉದ್ಭವಿಸುವ ಸಾಮಾಜಿಕ ಸಂಘರ್ಷಗಳನ್ನು ತಡೆಗಟ್ಟುವ ದೃಷ್ಟಿಯಿಂದ ವಾಸ್ತವವನ್ನು ಗ್ರಹಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಈ ಲೇಖನ.    


ತಮ್ಮ ಯೌವ್ವನಾವಸ್ಥೆಯಲ್ಲೇ ಅಂಬೇಡ್ಕರ್ ಅವರು ತಮ್ಮ ಸಮುದಾಯದ ನಾಯಕರಾಗಿ ಹೊರಹೊಮ್ಮುವ ಸ್ಪಷ್ಟ ಸೂಚನೆಗಳನ್ನು ನೀಡಿದ್ದರು. ಅವರ ತಂದೆಯೂ ಮಗನನ್ನು ಸಮಾಜ ಸೇವೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸುತ್ತಿದ್ದರು. ತನ್ನ ವ್ಯಾಸಂಗದೊಂದಿಗೇ ಸಮಾಜಸೇವೆಯನ್ನೂ ಮುಂದುವರೆಸುವುದಾಗಿ ಅಂಬೇಡ್ಕರ್ ಬರೋಡದ ಮಹಾರಾಜರಿಗೆ ಆಶ್ವಾಸನೆ ನೀಡಿದ್ದರು. ಒಂದು ಅಸ್ಪೃಶ್ಯ ಸಮುದಾಯದಲ್ಲಿ ಜನಿಸಿದ ವ್ಯಕ್ತಿ ಅತ್ಯುನ್ನತ ಮಟ್ಟದ ವ್ಯಾಸಂಗವನ್ನು ಲಂಡನ್ನಿನಲ್ಲಿ ಮುಗಿಸಿ ೧೯೨೦ರಲ್ಲಿ ಭಾರತಕ್ಕೆ ಹಿಂದಿರುಗಿದಾಗ , ಜೀವನೋಪಾಯಕ್ಕಾಗಿ ಸಂಪಾದಿಸುವುದರೊಡನೆ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವುದೂ ಅಂಬೇಡ್ಕರ್‌ಗೆ ಅನಿವಾರ್ಯವಾಗಿತ್ತು.


ಈ ಕಾಲಘಟ್ಟದಲ್ಲಿ ಭಾರತೀಯ ಸಮಾಜ ಪ್ರಕ್ಷುಬ್ಧತೆಯಿಂದ ಕೂಡಿತ್ತು. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ರಾಷ್ಟ್ರೀಯವಾದಿ ಚಳುವಳಿ ತೀವ್ರತೆ ಪಡೆದುಕೊಂಡಿತ್ತು. ಸೋವಿಯತ್ ಸಂಘದಲ್ಲಿ ನಡೆದ ಶ್ರಮಿಕ ವರ್ಗಗಳ ಕ್ರಾಂತಿಯಿಂದ ಪ್ರೇರೇಪಿತವಾದ ಕಾರ್ಮಿಕ ಚಳುವಳಿ ಚಿಗುರೊಡೆಯುತ್ತಿತ್ತು. ಇದೇ ವೇಳೆಯಲ್ಲಿ ಹೆಚ್ಚು ಸಂಘಟಿತವಲ್ಲದ, ಸಿದ್ಧಾಂತ ಮತ್ತು ನಾಯಕತ್ವಗಳಿಗಾಗಿ ಹುಡುಕಾಡುತ್ತಿದ್ದ ಬಲಿಷ್ಟವಾದ ಜಾತಿ ದಮನಿತರ ಚಳುವಳಿಯೂ ವ್ಯಾಪಕವಾಗಿ ಹರಡಿತ್ತು. ಮಾರ್ಕ್ಸ್‌ವಾದಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಬಲ ಚಳುವಳಿಗಳ ಬೆನ್ನಲ್ಲೇ ದಲಿತರು ಮತ್ತು ಬ್ರಾಹ್ಮಣೇತರರ ಚಳುವಳಿಗಳು ತೀವ್ರತೆ ಪಡೆದುಕೊಂಡು ರಾಜಕೀಯ ರಂಗ ಪ್ರವೇಶಿಸಿದ್ದವು. ಹತ್ತೊಂಬತ್ತನೆಯ ಶತಮಾನದಿಂದಲೇ ದೇಶಾದ್ಯಂತ ದಲಿತ ಚಳುವಳಿಗಳು ಪ್ರಾರಂಭವಾಗಿದ್ದವು. ಶಿಕ್ಷಣಕ್ಕಾಗಿ, ವ್ಯವಸಾಯ ಭೂಮಿಗಾಗಿ, ದೇವಾಲಯ ಪ್ರವೇಶಕ್ಕಾಗಿ, ಸಾರ್ವಜನಿಕ ಸೌಲಭ್ಯಗಳ ಮುಕ್ತ ಉಪಯೋಗಕ್ಕಾಗಿ ಹೋರಾಟಗಳು ರೂಪುಗೊಂಡಿದ್ದವು. ಅನೇಕ ಸಮಾಜ ಸುಧಾರಣಾ ಸಂಸ್ಥೆಗಳು, ಕ್ರೈಸ್ತ ಮಿಷನರಿಗಳು ಈ ಹೋರಾಟಗಳಿಗೆ ನೈತಿಕ ಬೆಂಬಲ ನೀಡಿದ್ದವು. ೧೮೭೫ರಲ್ಲಿ ಸ್ಥಾಪಿತವಾದ ಮಹಾತ್ಮ ಜ್ಯೋತಿ ಬಾ ಫುಲೆಯವರ ಸತ್ಯ ಶೋಧಕ ಸಮಾಜ್ ಮಹಾರಾಷ್ಟ್ರದ ದಲಿತರಿಗೆ ಬೆಂಗಾವಲಾಗಿತ್ತು. ಮಹರ್ ಸಮುದಾಯದ ಜನತೆ ಸೇನೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಆಗ್ರಹಿಸಿ ಹೋರಾಟ ಕೈಗೊಂಡಿದ್ದರು. ಅಲ್ಪ ಸ್ವಲ್ಪ ಆದಾಯವನ್ನು ಹೊಂದಿದ್ದ ಮಹರ್ ಸಮುದಾಯ ಮಹಾರಾಷ್ಟ್ರದ ಪ್ರಥಮ ಸಂಘಟಿತ ಶೋಷಿತ ಸಮುದಾಯವಾಗಿತ್ತು. ಸಾರ್ವಜನಿಕ ಕೆರೆಗಳ ನೀರನ್ನು ಉಪಯೋಗಿಸಲು ಅನೇಕ ಹೋರಾಟಗಳು ನಡೆದಿದ್ದವು.


೧೯೧೭-೧೮ರ ನಂತರದಲ್ಲಿ ರಾಷ್ಟ್ರವಾದಿ ಚಳುವಳಿಯೂ ಅಸ್ಪೃಶ್ಯತೆಯ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲಾರಂಭಿಸಿತ್ತು. ೧೯೧೬ರ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಅಸ್ಪೃಶ್ಯತೆಯ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು. ಈ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಪ್ರಬಲವಾದ ಸಮಾಜ ಸುಧಾರಕ ಸಂಘಟನೆ ಹಿಂದುಳಿದ ವರ್ಗಗಳ ಮಂಡಳಿ ಮೇಲ್ಜಾತಿಯ ವಿಥಲ್ ರಾಮ್‌ಜಿ ಶಿಂಧೆಯವರ ನೇತೃತ್ವದಲ್ಲಿ ಹಿಂದೂ ಧರ್ಮದ ಸುಧಾರಣೆಗಾಗಿ ಶ್ರಮಿಸುತ್ತಿತ್ತು. ಮಹಾರಾಷ್ಟ್ರದ ಬ್ರಾಹ್ಮಣೇತರ ಪಕ್ಷದ ಕಟ್ಟಾ ವಿರೋಧಿಯಾಗಿದ್ದ ಶಿಂಧೆ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಒಳಗೊಳ್ಳುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದರು. ಮೇಲ್ಜಾತಿಯವರ ಸುಧಾರಣಾ ಯತ್ನಗಳು ಅಸ್ಪೃಶ್ಯತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮೂರು ಸಂದರ್ಭಗಳಲ್ಲಿ ವ್ಯಕ್ತವಾಗಿದ್ದವು. ೧೯೧೭-೧೮ರ ಅವಧಿಯಲ್ಲಿ ನಡೆದ ಮೂರು ಅಸ್ಪೃಶ್ಯತಾ ನಿವಾರಣಾ ಸಮಾವೇಶಗಳಲ್ಲಿ ಅಂಬೇಡ್ಕರ್ ಅವರನ್ನು ಸನ್ಮಾನಿಸುವ ಯೋಚನೆ ಫಲಪ್ರದವಾಗಲಿಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ಗಳು ನೀಡಿದ್ದ ಸುಧಾರಣಾ ಶಿಫಾರಸ್ಸುಗಳನ್ನು ಇಲ್ಲಿ ಬೆಂಬಲಿಸಲಾಗಿತ್ತು. ಎರಡನೇ ಸಮಾವೇಶದಲ್ಲಿ ದಲಿತರ ಮತಾಂತರವನ್ನು ವಿರೋಧಿಸಲಾಗಿತ್ತು. ಮೂರನೆಯ ಸಮಾವೇಶದಲ್ಲಿ ಗಾಂಧೀಜಿಯವರು ಉಪಸ್ಥಿತರಿದ್ದರೂ ಅಸ್ಪೃಶ್ಯ ಸಮುದಾಯಗಳನ್ನು ಪ್ರತಿನಿಧಿಸುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ.


ಏತನ್ಮಧ್ಯೆ ಪ್ರಬಲವಾಗಿ ಬೆಳೆಯುತ್ತಿದ್ದ ಬ್ರಾಹ್ಮಣೇತರ ಚಳುವಳಿಗಳು ಅಸ್ಪೃಶ್ಯರ ಬೆಂಬಲ ಗಳಿಸಿದ್ದವು. ಸತ್ಯ ಶೋಧಕ ಸಮಾಜ ಬಹುತೇಕ ಗ್ರಾಮಗಳಲ್ಲಿ ಕಾರ್ಯನಿರತವಾಗಿತ್ತು. ಬ್ರಾಹ್ಮಣರ ಅಧಿಪತ್ಯ ಮತ್ತು ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದ ಈ ಸಂಘಟನೆ ಶೂದ್ರರು ಮತ್ತು ಅತಿ ಶೂದ್ರರು(ದಲಿತರು) ಭಾರತದ ಮೂಲ ನಿವಾಸಿಗಳೆಂದೂ, ಆರ್ಯರ ಆಗಮನದ ನಂತರ ಗುಲಾಮಗಿರಿಗೆ ಒಳಗಾದರೆಂದೂ ಪ್ರತಿಪಾದಿಸಿತ್ತು. ಈ ಪ್ರತಿಪಾದನೆ ಬ್ರಾಹ್ಮಣೇತರ ಚಳುವಳಿಗಳ ಮೂಲಮಂತ್ರವಾಗಿ ಪರಿಣಮಿಸಿ, ಮದ್ರಾಸಿನಲ್ಲಿ ಪ್ರಬಲವಾಗಿದ್ದ ಚಳುವಳಿಗಳಿಗೂ ವೇದಿಕೆಯನ್ನು ಒದಗಿಸಿತ್ತು. ೧೯೧೭ರ ವೇಳೆಗೆ ಬ್ರಾಹ್ಮಣೇತರ ಚಳುವಳಿಗಳು ರಾಜಕೀಯ ಪ್ರವೇಶ ಮಾಡಿದ್ದವು. ಕೊಲ್ಹಾಪುರದ ಮಹಾರಾಜ ಶಾಹು ಛತ್ರಪತಿ ಕ್ಷತ್ರಿಯನೆಂಬ ಅಹಮಿಕೆಯಿಂದ ಆಳಿದರೂ, ಬ್ರಾಹ್ಮಣ್ಯದ ವಿರೋಧಿಯಾಗಿದ್ದುದು, ಮಹಾರಾಷ್ಟ್ರದಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಪೂರಕವಾಗಿತ್ತು. ಅನೇಕ ಬ್ರಾಹ್ಮಣೇತರರು ಆಡಳಿತ ಕಛೇರಿಗಳಲ್ಲಿ ನೇಮಕಗೊಂಡರು. ಇದೇ ಅವಧಿಯಲ್ಲೇ ಸರ್ಕಾರಿ ನೌಕರಿಯಲ್ಲಿ ಮೀಸಲಾತಿಯೂ ಜಾರಿಗೆ ಬಂದಿತ್ತು. ಶಾಹು ಮಹಾರಾಜರು ಅಸ್ಪೃಶ್ಯರಿಗೆ ಪ್ರತ್ಯೇಕ ಹಾಸ್ಟೆಲುಗಳನ್ನು ನಿರ್ಮಿಸಿದ್ದೇ ಅಲ್ಲದೆ  ಸಣ್ಣ ಚಹಾ ಮಳಿಗೆಗಳನ್ನು ಸ್ಥಾಪಿಸಲೂ ನೆರವು ನೀಡಿದ್ದರು.


ಬಹುತೇಕ ಬ್ರಾಹ್ಮಣರ ನೇತೃತ್ವದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ನಡೆಯುತ್ತಿದ್ದ ಚಳುವಳಿಗಳು ಯುವಕ ಅಂಬೇಡ್ಕರ್ ಅವರ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಶಿಂಧೆ ಮುಂತಾದ ನಾಯಕರು ತಮ್ಮ ಅಸ್ಪೃಶ್ಯತಾ ವಿರೋಧಿ ಚಳುವಳಿಯಲ್ಲಿ ಅಸ್ಪೃಶ್ಯರಿಗೆ ಯಾವುದೇ ಅವಕಾಶ ನೀಡದಿದ್ದುದು ಮತ್ತು ಅಸ್ಪೃಶ್ಯರೊಡನೆ ಸಹಭೋಜನದಲ್ಲಿ ಪಾಲ್ಗೊಳ್ಳದಿದ್ದುದು ಅಂಬೇಡ್ಕರ್ ಅವರನ್ನು ಶಾಹು ಮಹರಾಜರ ಕಡೆಗೆ ಸೆಳೆದಿತ್ತು. ೧೯೨೦ರಲ್ಲಿ ಪ್ರಥಮ ಬಾರಿಗೆ ಶಾಹು ಮಹಾರಾಜರನ್ನು ಭೇಟಿಯಾದ ಅಂಬೇಡ್ಕರ್, ಅವರು ಅಸ್ಪೃಶ್ಯರೊಡನೆ ಬೆರೆಯುತ್ತಿದ್ದುದನ್ನು ಕಂಡು ಅವರಿಂದ ಪ್ರಭಾವಿತರಾಗಿದ್ದರು. ೧೯೨೦ರ ಮಾನ್‌ಗಾಂವ್ ಸಮಾವೇಶದಲ್ಲಿ ಅಂಬೇಡ್ಕರ್ ಅವರನ್ನು ಸತ್ಕರಿಸಿದ ಶಾಹು ಮಹಾರಾಜ್ ಅಂಬೇಡ್ಕರ್ ಅವರಿಗೆ ಧನಸಹಾಯ ಮಾಡಿದ್ದೂ ಅಲ್ಲದೆ ಉನ್ನತ ವ್ಯಾಸಂಗಕ್ಕೆ ಲಂಡನ್ನಿಗೂ ಕಳುಹಿಸಿದ್ದರು. ತನ್ನನ್ನು ಸಮಾನ ಮನೋಭಾವದಿಂದ ಕಾಣುತ್ತಿದ್ದ ಶಾಹು ಅವರೊಡನೆ ಅಂಬೇಡ್ಕರ್ ಮುಕ್ತವಾಗಿ ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣ್ಯವಾದದ ಬಗ್ಗೆ ಚರ್ಚಿಸುತ್ತಿದ್ದರು. ಅಂಬೇಡ್ಕರ್ ಮತ್ತು ಶಾಹು ಮಹಾರಾಜ್ ಎದುರಿಸುತ್ತಿದ್ದ ಅಪಮಾನಗಳು ವಿಭಿನ್ನ ಲಕ್ಷಣಗಳನ್ನು ಹೊಂದಿದ್ದರೂ, ಈರ್ವರಲ್ಲೂ ಸಮಾನ ಮನೋಭಾವ ವ್ಯಕ್ತವಾಗುತ್ತಿತ್ತು. ಹಾಗಾಗಿಯೇ ತಮ್ಮ ಪ್ರಾರಂಭಿಕ ದಿನಗಳಲ್ಲಿ ಬ್ರಾಹ್ಮಣರಿಂದ ಹೆಚ್ಚಿನ ಬೆಂಬಲ ಗಳಿಸಿದರೂ, ಅಂಬೇಡ್ಕರ್ ಅವರಿಗೆ ಬ್ರಾಹ್ಮಣೇತರರಲ್ಲಿ ಹೆಚ್ಚಿನ ಸಾಂಗತ್ಯ ಗೋಚರಿಸುತ್ತಿತ್ತು.


೧೯೨೩ರಲ್ಲಿ ಲಂಡನ್‌ನಿಂದ ಹಿಂದಿರುಗಿದ ಬಳಿಕ ಅಂಬೇಡ್ಕರ್ ಅವರ ಕಾರ್ಯವೈಖರಿಯೇ ಬದಲಾಗಿತ್ತು. ಅವರ ಮನೆಯ ಮುಂದೆ ಜಮಾಯಿಸುತ್ತಿದ್ದ ಸಮುದಾಯದ ಜತೆ ಕಾರ್ಯ ಚಟುವಟಿಕೆಗಳಿಗಾಗಿ ಚಡಪಡಿಸುತ್ತಿದ್ದರು. ಈ ಸಂದರ್ಭದಲ್ಲೇ ಅಂಬೇಡ್ಕರ್ ೧೯೨೪ರ ಮಾರ್ಚಿ ೯ರಂದು ಬಹಿಷ್ಕೃತ ಹಿತಕಾರಿಣಿ ಸಭಾ ಎಂಬ ಸಂಘಟನೆಯನ್ನು ಆರಂಭಿಸಿದರು. ಈ ಸಂಘಟನೆಯಲ್ಲಿ ಚಮನ್‌ಲಾಲ್ ಸೆಟಲ್‌ವಾಡ್, ಕೆ.ಎಫ್. ನಾರಿಮನ್ ಮುಂತಾದವರು ಸಕ್ರಿಯರಾಗಿದ್ದರು. ಶಿಕ್ಷಣ, ಆರ್ಥಿಕ ಪ್ರಗತಿ, ದಮನಿತ ಜನಸಮುದಾಯಗಳ ಹಿತಾಸಕ್ತಿಗಳ ರಕ್ಷಣೆ ಈ ಸಭಾದ ಮುಖ್ಯ ಧ್ಯೇಯಗಳಾಗಿದ್ದವು. ಈ ಸಂಘಟನೆಯ ಮೂಲಕ ಸಮೂಹ ನಾಯಕರಾಗಿ ಬೆಳೆದ ಅಂಬೇಡ್ಕರ್ ಉತ್ತಮ ವಾಗ್ಮಿಯಾಗಿಯೂ ಹೊರಹೊಮ್ಮಿದ್ದರು. ಅಧಿಕಾರಶಾಹಿಯಲ್ಲಿ ಅಧಿಪತ್ಯ ಸಾಧಿಸಿದ್ದ ಬ್ರಾಹ್ಮಣ ಸಮುದಾಯವನ್ನು ತೀವ್ರವಾಗಿ ಖಂಡಿಸುತ್ತಲೇ, ಅಸ್ಪೃಶ್ಯರಿಗೆ ಮತ್ತು ಶೂದ್ರರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಅಂಬೇಡ್ಕರ್ ಸಮರ್ಥಿಸುತ್ತಿದ್ದರು. ಇದೇ ವೇಳೆಗೆ ಶಾಸನ ಸಮಿತಿಯಲ್ಲೂ ಅಸ್ಪೃಶ್ಯರ ಪರವಾದ ದನಿ ಮೊಳಗಲಾರಂಭಿಸಿತ್ತು. ಸಾರ್ವಜನಿಕ ಸ್ಥಳಗಳನ್ನು ಅಸ್ಪೃಶ್ಯರಿಗೆ ಮುಕ್ತವಾಗಿಸಲು ಶಾಸನವನ್ನು ಹೊರಡಿಸಲಾಯಿತು. ೧೯೨೬ರಲ್ಲಿ ಬಾಂಬೆ ಶಾಸನ ಸಮಿತಿಗೆ ನೇಮಿಸಲ್ಪಟ್ಟ ಅಂಬೇಡ್ಕರ್ ಸಮಿತಿಯ ಅನೇಕ ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ ಅಸ್ಪೃಶ್ಯರ ಸಮಸ್ಯೆಗಳನ್ನು ಮುಂದಿಡುತ್ತಿದ್ದರು.


ಇದೇ ಸಂದರ್ಭದಲ್ಲಿ ಅಸ್ಪೃಶ್ಯರ ಮಹತ್ತರ ಹೋರಾಟವೊಂದು ರೂಪುಗೊಳ್ಳುತ್ತಿತ್ತು. ಮಾನವನ ಅತ್ಯಮೂಲ್ಯ ಅವಶ್ಯಕತೆಯಾದ ನೀರು ಅಸ್ಪೃಶ್ಯರಿಗೆ ಅಲಭ್ಯವಾಗಿತ್ತು. ಕಾರಣ ಮೇಲ್ಜಾತಿಯವರು ಅಸ್ಪೃಶ್ಯರನ್ನು ಅಶುದ್ಧರೆಂದು ಪರಿಗಣಿಸುತ್ತಿದ್ದರು. ಕೊಂಕಣ ಪ್ರಾಂತ್ಯದ ಮಹಾಡ್ ಎಂಬ ಸಣ್ಣ ಪಟ್ಟಣದಲ್ಲಿ ಪುರಸಭೆ ಸಾರ್ವಜನಿಕ ಕೆರೆಯನ್ನು ಅಸ್ಪೃಶ್ಯರಿಗೂ ಮುಕ್ತವಾಗಿಸಿ ಆದೇಶ ಹೊರಡಿಸಿತ್ತು. ಈ ಪಟ್ಟಣದಲ್ಲಿ ಮುಂಬೈನಿಂದ ವಲಸೆ ಬರುವ ದಲಿತರು, ಮೇಲ್ಜಾತಿಗಳವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂಬೇಡ್ಕರ್ ಅವರಿಗೆ ದಲಿತರು ಮಾತ್ರವಲ್ಲದೆ ಪ್ರಗತಿಪರ ಮೇಲ್ಜಾತಿಯವರ ಬೆಂಬಲವೂ ಇತ್ತು. ಇವರಲ್ಲಿ ಅನಂತರಾವ್ ಚಿತ್ರೆ, ಸುರೇಂದ್ರನಾಥ್ ಟಿಪ್ಸೆ, ಸಹಸ್ರಬುದ್ಧಿ , ಎನ್.ಎಂ.ಜೋಷಿ ಪ್ರಮುಖರಾಗಿದ್ದರು.


೧೯೨೭ರ ಮಾರ್ಚಿ ೧೯-೨೦ರಂದು ಬಹಿಷ್ಕೃತ ಹಿತರಕ್ಷಣಾ ಸಭೆಯು ಮಹಾಡ್‌ನಲ್ಲಿ ಜಿಲ್ಲಾ ಸಮಾವೇಶ ಏರ್ಪಡಿಸಿತ್ತು. ಸಮಾವೇಶದ ಎರಡನೇ ದಿನ ಚಿತ್ರೆಯವರ ಸೂಚನೆಯ ಮೇರೆಗೆ ಸಾರ್ವಜನಿಕ ಕೆರೆಯಲ್ಲಿ ಅಸ್ಪೃಶ್ಯರು ನೀರು ಕುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ೧೫೦೦ಕ್ಕೂ ಹೆಚ್ಚು ಜನ ನೀರು ಕುಡಿಯಲಾರಂಭಿಸಿದರು.  ಈ ಸುದ್ದಿ ಪಟ್ಟಣದಲ್ಲಿ ಹರಡುತ್ತಿದ್ದಂತೆಯೇ ಮೇಲ್ಜಾತಿ ಹಿಂದೂಗಳು ಎಲ್ಲೆಂದರಲ್ಲಿ ಜಮಾಯಿಸಲಾರಂಭಿಸಿದರು. ದಲಿತರು ದೇವಾಲಯಕ್ಕೂ ಪ್ರವೇಶಿಸುತ್ತಾರೆಂಬ ಭೀತಿಯಿಂದ ಮೇಲ್ಜಾತಿ ಹಿಂದೂಗಳು ಅಸ್ಪೃಶ್ಯರ ಮೇಲೆ ಆಕ್ರಮಣ ಆರಂಭಿಸಿದರು. ಆಕ್ರಮಣದಲ್ಲಿ ಅನೇಕ ಅಸ್ಪೃಶ್ಯರು ಏಟು ತಿನ್ನಬೇಕಾಯಿತು. ನಂತರ ಬ್ರಾಹ್ಮಣರು ಕೆರೆಯ ಶುದ್ಧೀಕರಣ ಕ್ರಿಯೆಯನ್ನು ಏರ್ಪಡಿಸಿದ್ದರು.


ಈ ಪ್ರಕರಣ ಮತ್ತು ಆಕ್ರಮಣ ಇಡೀ ಮಹಾರಾಷ್ಟ್ರದಲ್ಲಿ ಸಂಚಲನ ಉಂಟುಮಾಡಿತ್ತು. ದಲಿತ ಸಮುದಾಯದ ಹೋರಾಟಗಳಿಗೆ ಮಹಾಡ್ ಒಂದು ಲಾಂಛನ ಕೇಂದ್ರವಾಗಿ ಪರಿಣಮಿಸಿತು. ದೇಶಾದ್ಯಂತ ದಲಿತ ಸಮುದಾಯಗಳಿಗೆ ಈ ಹೋರಾಟ ಹೊಸ ಹುರುಪು ತಂದಿತ್ತಿತು. ೧೯೨೭ರ ಡಿಸೆಂಬರ್‌ನಲ್ಲಿ ಅಂಬೇಡ್ಕರ್ ನೀರಿನ ಹಕ್ಕಿಗಾಗಿ ಸತ್ಯಾಗ್ರಹ ಸಮಾವೇಶ ಪ್ರಾರಂಭಿಸಿದರು. ಇದೇ ಸಮಯದಲ್ಲಿ ಪ್ರಾರಂಭವಾದ ಬಹಿಷ್ಕೃತ ಭಾರತ್ ಪತ್ರಿಕೆ ಅಸ್ಪೃಶ್ಯರ ಅನೇಕ ಸಮಸ್ಯೆಗಳನ್ನು ಪ್ರಕಟಿಸಲಾರಂಭಿಸಿತು. ಆರ್ಯ ಸಮಾಜದ ಶುದ್ಧೀಕರಣ ಚಳುವಳಿಯನ್ನು ಈ ಪತ್ರಿಕೆಯ ಮೂಲಕ ಖಂಡಿಸಲಾಗುತ್ತಿತ್ತು. ಪ್ರಾರಂಭದಲ್ಲಿ ಜಾತಿ ರಹಿತ ಆರ್ಯ ಸಮಾಜದ ಸ್ಥಾಪನೆಗಾಗಿ ನಡೆಯುತ್ತಿದ್ದ ಶುದ್ಧೀಕರಣ ಕ್ರಿಯೆ ಕ್ರಮೇಣ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಸಮೀಕರಿಸುವ ಯತ್ನವಾಗಿ ಮಾರ್ಪಟ್ಟಿದ್ದು ತೀವ್ರ ಟೀಕೆಗೊಳಗಾಯಿತು. ಇದೇ ಸಂದರ್ಭದಲ್ಲಿ ಕೆಲವು ನಾಯಕರು ಸತ್ಯಾಗ್ರಹ ಸಮಾವೇಶದಲ್ಲಿ ಯಾವುದೇ ಬ್ರಾಹ್ಮಣರಿಗೆ ಅವಕಾಶ ನೀಡಕೂಡದು ಎಂದು ಆಗ್ರಹಿಸಿದರು. ಆದರೆ ಈ ವಾದವನ್ನು ತಿರಸ್ಕರಿಸಿದ ಅಂಬೇಡ್ಕರ್ ನಮ್ಮ ಚಳುವಳಿಯು ಬ್ರಾಹ್ಮಣ್ಯದ ವಿರುದ್ಧ ಮತ್ತು ಬ್ರಾಹ್ಮಣ ಧರ್ಮದ ವಿರುದ್ಧವೇ ಹೊರತು, ಬ್ರಾಹ್ಮಣರ ವಿರುದ್ಧವಲ್ಲ ಎಂದು ಹೇಳಿದ್ದರು. ನಂತರದಲ್ಲಿ ಮತಾಂತರದ ಪ್ರಶ್ನೆ ಉದ್ಭವಿಸಿದಾಗ, ಇಸ್ಲಾಂಗೆ ಮತಾಂತರ ಹೊಂದುವ ಸಲಹೆಗಳೂ ಕೇಳಿಬಂದವು. ಆದರೆ ಅಂಬೇಡ್ಕರ್ ಅವರು ಮೊದಲು ನಾವು ಹಿಂದೂ ಧರ್ಮಕ್ಕೆ ಸೇರಿದವರೇ ಇಲ್ಲವೇ ಎಂದು ನಿರ್ಧರಿಸೋಣ ಎಂದು ಹೇಳುವ ಮೂಲಕ ಇಡೀ ಚರ್ಚೆಗೆ ಹೊಸ ಆಯಾಮವನ್ನು ಒದಗಿಸಿದ್ದರು.


೧೯೨೭ರ ಡಿಸೆಂಬರ್ ೨೩ರಂದು ಸತ್ಯಾಗ್ರಹ ಸಮಾವೇಶದ ವೇಳೆಗೆ ಮಹಾಡ್‌ನಲ್ಲಿ ೧೫ ಸಾವಿರಕ್ಕೂ ಹೆಚ್ಚು ದಲಿತರು ಸೇರಿದ್ದರು. ಆದರೆ ಜಿಲ್ಲಾ ನ್ಯಾಯಾಧೀಶರು ಕೆರೆಯನ್ನು ನೀರನ್ನು ಬಳಸದಂತೆ ನಿಷೇದಾಜ್ಞೆ ಹೊರಡಿಸಿದ್ದರು. ಈ ಆಜ್ಞೆಯನ್ನು ಪಾಲಿಸಿದ ಅಂಬೇಡ್ಕರ್ ವಿಚಲಿತರಾಗದೆ, ಮತ್ತೊಂದು ವಿಶಿಷ್ಟ ಹೋರಾಟವನ್ನು ಹಮ್ಮಿಕೊಂಡಿದ್ದರು. ಪುರೋಹಿತಶಾಹಿ ಹಿಂದೂ ಧರ್ಮದ ಪವಿತ್ರ ಶಾಸನ ಗ್ರಂಥವಾದ ಮನುಸ್ಮೃತಿಯನ್ನು ದಹಿಸುವ ಕಾರ್ಯಕ್ರಮವನ್ನು ಅಂಬೇಡ್ಕರ್ ಏರ್ಪಡಿಸಿದರು. ಈ ನಿರ್ಣಯವನ್ನು ಮಂಡಿಸಿದವರು ಸಹಸ್ರಬುದ್ಧಿ ಎಂಬ ಬ್ರಾಹ್ಮಣರಾದರೆ, ಅನುಮೋದಿಸಿದವರು ಚಂಬಾರರಾದ ರಾಜಭೋಜ್ ಅವರಾಗಿದ್ದರು. ಸಮಾವೇಶದ ಪ್ರಥಮ ದಿನದ ರಾತ್ರಿ ಮನುಸ್ಮೃತಿಯನ್ನು ದಹಿಸಲಾಗಿತ್ತು. ಮೂರನೆಯ ದಿನ ಆಕ್ರಮಣಶೀಲ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಭಕ್ತಿ ಸಂತರು, ಗಾಂಧೀಜಿ, ಅಗರ್‌ಕರ್ ಮತ್ತು ಶಾಹುಮಹಾರಾಜ್ ಅವರ ಬಗ್ಗೆ ಘೋಷಣೆಗಳನ್ನು ಕೂಗಲಾಯಿತು. ನಂತರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಂಬೇಡ್ಕರ್ ಅಸ್ಪೃಶ್ಯ ಮಹಿಳೆಯರನ್ನು ಕುರಿತು, ಕೆಳಜಾತಿಗಳಂತೆ ಬೆಳ್ಳಿಯ ಒಡವೆಗಳನ್ನು ಧರಿಸುವ ಪವೃತ್ತಿಯನ್ನು ಕೈಬಿಟ್ಟು  ತಮ್ಮ ಜಾತಿ ಸಂಕೇತಗಳು ಗೋಚರಿಸದಂತೆ, ಮೇಲ್ಜಾತಿಯವರ ರೀತಿ ಉಡುಪು ಧರಿಸಲು, ಮಕ್ಕಳಿಗೆ ತಪ್ಪದೆ ಶಿಕ್ಷಣ ನೀಡಲು ಕರೆ ನೀಡಿದ್ದರು. ಈ ಹಂತದಿಂದ ಮಹಾಡ್ ಅಂಬೇಡ್ಕರ್ ಅವರ ಹೋರಾಟಗಳ ಕೇಂದ್ರ ಬಿಂದುವಾಯಿತು. ಅಸ್ಪೃಶ್ಯರ ಭಾಗವಹಿಸುವಿಕೆ ಮತ್ತು ಕೆಲವು ಮೇಲ್ಜಾತಿಯವರ ಬೆಂಬಲ ಅಂಬೇಡ್ಕರ್‌ಗೆ ಪ್ರೋತ್ಸಾಹದಾಯಕವಾಗಿತ್ತು.

ಹಿಂದೂ ಧರ್ಮದ ಪವಿತ್ರ ಶಾಸ್ತ್ರದ ವಿರುದ್ಧ ನಡೆದ ಈ ಸಂಘರ್ಷದೊಡನೆಯೇ, ಸಾರ್ವಜನಿಕ ಸ್ಥಳಗಳನ್ನು ಮತ್ತು ಅವಕಾಶಗಳನ್ನು ಬಳಸುವಲ್ಲಿ ದಲಿತರಿಗೆ ಸಮಾನ ಅವಕಾಶಗಳಿಗಾಗಿ ಹೋರಾಟಗಳು ತೀವ್ರವಾಗತೊಡಗಿತು. ೧೯೨೦ರ ದಶಕದಲ್ಲಿ ಅಸ್ಪೃಶ್ಯರಲ್ಲಿ ತಮ್ಮ  ಹಕ್ಕುಗಳ ಬಗ್ಗೆ ಹೆಚ್ಚಿನ ಪ್ರಜ್ಞೆ ಮೂಡಲಾರಂಭಿಸಿತು. ಗುರುವಾಯೂರಿನಲ್ಲಿ ದೇವಾಲಯದ ಮುಂದೆ ಹಾದು ಹೋಗುವ ರಸ್ತೆಯಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಪೆರಿಯಾರ್ ರಾಮಸ್ವಾಮಿ ಅವರ ನೇತೃತ್ವದಲ್ಲಿ ದಲಿತರು ಈ ರಸ್ತೆಯನ್ನು ಹಾದು ಹೋಗುವ ಹಕ್ಕಿಗಾಗಿ ಹೋರಾಟ ನಡೆಸಿದ್ದರು. ಪುಣೆಯ ಪಾರ್ವತಿ ದೇವಸ್ಥಾನ ಮತ್ತು ನಾಸಿಕ್‌ನಲ್ಲಿರುವ ರಾಮ ದೇವಾಲಯದಲ್ಲೂ ದಲಿತರ ಪ್ರವೇಶಕ್ಕಾಗಿ ಹೋರಾಟ ರೂಪುಗೊಂಡಿತು. ಈ ಹೋರಾಟಗಳಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಅಂಬೇಡ್ಕರ್ ಸೆಕ್ಯುಲರ್ ಪ್ರಜಾ ಹಕ್ಕುಗಳಿಗಾಗಿ ಮತ್ತು ಹಿಂದೂ ಧರ್ಮದ ನಿರಾಕರಣೆಗಾಗಿ ವೇದಿಕೆ ಸಿದ್ಧಪಡಿಸುತ್ತಿದ್ದರು. ಈ ಹಂತದಲ್ಲೇ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಸಮೀಕರಿಸುವ ಗಾಂಧೀಜಿಯವರ ಯತ್ನಗಳನ್ನು ಅಂಬೇಡ್ಕರ್ ತೀವ್ರವಾಗಿ ಟೀಕಿಸಲಾರಂಭಿಸಿದರು.

ನಾಸಿಕ್ ಸತ್ಯಾಗ್ರಹದಲ್ಲಿ ಅಂಬೇಡ್ಕರ್ಈ ಹಂತದಲ್ಲಿ ಆರ್ಯರ ಆಗಮನದ ವಾದವನ್ನು ಸಂಪೂರ್ಣವಾಗಿ ಒಪ್ಪದ ಅಂಬೇಡ್ಕರ್ ಹಿಂದೂ ಧರ್ಮವನ್ನೂ ಸಂಪೂರ್ಣವಾಗಿ ಖಂಡಿಸುತ್ತಿರಲಿಲ್ಲ. ಬದಲಾಗಿ ಭಕ್ತಿಪಂಥ, ತುಕಾರಾಂ, ಜ್ಞಾನೇಶ್ವರ್ ಮುಂತಾದ ಸಮಾಜ ಸುಧಾರಕರ ಬಗ್ಗೆ ಗಾಢವಾದ ಅಧ್ಯಯನವನ್ನು ಆರಂಭಿಸಿದ್ದರು. ತಮ್ಮದೇ ಆದ ವಿಶ್ಲೇಷಣೆ ಮತ್ತು ವ್ಯಾಖ್ಯಾನವನ್ನು ಮಂಡಿಸುವ ಧ್ಯೇಯವನ್ನು ಹೊಂದಿದ್ದ ಅಂಬೇಡ್ಕರ್ ತಮ್ಮ ಅಧ್ಯಯನ ಮತ್ತು ಅನುಭವಗಳನ್ನೇ ಆಧಾರವಾಗಿರಿಸಿಕೊಂಡಿದ್ದರು. ತಮ್ಮ ತಂದೆಯವರ ಕಬೀರ್ ಪಂಥದ ಅನುಭವಗಳನ್ನು ಅಭ್ಯಸಿಸುತ್ತ ಕಬೀರ್‌ದಾಸ್ ಅವರ ತೀವ್ರಗಾಮಿತ್ವ ಹೇಗೆ ಬ್ರಾಹ್ಮಣವಾದದ ಚೌಕಟ್ಟಿನಲ್ಲಿ ಸಿಲುಕಿಹೋಗಿತ್ತು ಎಂಬ ಅಂಶವನ್ನೂ ಅಂಬೇಡ್ಕರ್ ಗ್ರಹಿಸಿದ್ದರು. ಅವರ ಮುಂದಿನ ಚಿಂತನಾ ಕ್ರಮವೂ ಇದರಿಂದಲೇ ಪ್ರಭಾವಿತವಾಗಿತ್ತು.


ಮುಂಬೈ ಶಾಸನ ಸಮಿತಿಯಲ್ಲಿ ಅಂಬೇಡ್ಕರ್ ಪ್ರಬಲ ದನಿಯಾಗಿ ಹೊರಹೊಮ್ಮಿದ್ದರು. ಅಸ್ಪೃಶ್ಯರ ಪರವಾದ ಅನೇಕ ಶಾಸನಗಳನ್ನು ಅನುಷ್ಟಾನಗೊಳಿಸುವಲ್ಲಿ ಅಂಬೇಡ್ಕರ್ ಮಹತ್ವದ ಪಾತ್ರ ವಹಿಸಿದ್ದರು. ೧೯೨೭ರ ಸೆಪ್ಟೆಂಬರ್‌ನಲ್ಲಿ, ಮೇಲ್ಜಾತಿಯ ಹಿಂದೂಗಳು, ಕ್ರೈಸ್ತರು, ಅಸ್ಪೃಶ್ಯರನ್ನೊಳಗೊಂಡ ಸಮತಾ ಸಮಾಜ್ ಸಂಘವನ್ನು ಸ್ಥಾಪಿಸಿದ ಅಂಬೇಡ್ಕರ್ ಸಹಭೋಜನ ಮತ್ತು ಅಂತರ್ಜಾತಿ ವಿವಾಹಕ್ಕಾಗಿ ಪ್ರಚಾರ ಕೈಗೊಂಡಿದ್ದರು. ಅಂತರ್ಜಾತಿ ವಿವಾಹದ ಕಾರ್ಯಕ್ರಮ ಫಲಪ್ರದವಾಗಲಿಲ್ಲ. ಈ ಹಂತದಲ್ಲಿ ಅಸ್ಪೃಶ್ಯರ ವಿವಾಹದಲ್ಲಿ, ಮನಃಪೂರ್ವಕವಾಗಿ ಅಲ್ಲದಿದ್ದರೂ, ಸಂದರ್ಭಕ್ಕನುಗುಣವಾಗಿ ವೈದಿಕ ಸಂಪ್ರದಾಯಗಳನ್ನು ಅನುಸರಿಸಲೂ ಸೂಚಿಸಿದ್ದರು. ಬಹುಶಃ ಈ ಹಂತದಲ್ಲಿ ಅಂಬೇಡ್ಕರ್ ಹಿಂದೂ ಧರ್ಮದ ಎಲ್ಲ ಸ್ವರೂಪಗಳನ್ನು ವಿರೋಧಿಸುತ್ತಿರಲಿಲ್ಲ ಎನಿಸುತ್ತದೆ.


ನಂತರದ ದಿನಗಳಲ್ಲಿ ಅಂಬೇಡ್ಕರ್ ಅವರು ಕೈಗೊಂಡ ಹೋರಾಟಗಳು ಹಿಂದೂ ಧರ್ಮವನ್ನು ಸಾರಾಸಗಟಾಗಿ ನಿರಾಕರಿಸುವ ನಿಟ್ಟಿನಲ್ಲಿ ಸಾಗಿದ್ದು ಈಗ ಇತಿಹಾಸ. ಆದರೆ ಜಾತಿವ್ಯವಸ್ಥೆಯ ವಿರುದ್ಧದ ತಮ್ಮ ಹೋರಾಟದಲ್ಲಿ ಅಂಬೇಡ್ಕರ್ ಅವರಿಗೆ ಸ್ಪಷ್ಟತೆ ಇದ್ದು, ಯಾವುದೇ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಕಟಪಡಿಸುತ್ತಿರಲಿಲ್ಲ ಎಂಬ ಅಂಶವನ್ನು ಗಮನಿಸಬೇಕಾಗಿದೆ. ಅಂಬೇಡ್ಕರ್ ಬ್ರಾಹ್ಮಣ ದ್ವೇಷಿ, ದಲಿತರ ಪರ ಎಂದಾಕ್ಷಣ ಬ್ರಾಹ್ಮಣ ವಿರೋಧಿ ಎಂದು ಆರ್ಥೈಸುವ ಆಧುನಿಕ ಚಿಂತಕರು ಈ ಸತ್ಯವನ್ನು ಗ್ರಹಿಸಿದರೆ ಒಳಿತು. 

Tuesday, January 10, 2012

ಮಳೆಯೆಂದರೆ ಅದು ಬರೀ ಮಳೆಯಲ್ಲ !

ಮಳೆಯೆಂದರೆ ಬರೀ ಮಳೆಯಲ್ಲ !
ಬೆಳೆ ಹಾಳು ಮಾಡಬೇಕು !
ಕೋಟೆ ಕೊತ್ತಲುಗಳನ್ನು ಕೆಡುವಬೇಕು !
ಪಾಪ-ಪುಣ್ಯ, ಸ್ವರ್ಗ-ನರಕ, ದೇವರು-ದೆವ್ವ
ಪೂಜೆ-ಪೂಜಾರಿ, ಎಲ್ಲ ...
ಎಲ್ಲವನ್ನೂ ಕೊಚ್ಚಿಕೊಂಡು ಹೋಗಬೇಕು !
ಹೆಂಗಸು, ಗಂಡಸು, ಮಕ್ಕಳು, ಮುದುಕರೆನ್ನದೇ
ನೆಲ, ನಾಲೆ, ಗುಡ್ಡ, ಮಡ್ಡಿ, ಕಸ-ಕಡ್ಡಿ ಎನ್ನದೇ
ಎಲ್ಲವನ್ನೂ ಎಲ್ಲರನ್ನೂ ಸ್ವಾಹಾ ಮಾಡಬೇಕು !
ಜೀವ ಜಗತ್ತನ್ನು ಬಲಿ ತೆಗೆದುಕೊಳ್ಳಬೇಕು ಮಳೆ !
ಸುರಿಯಬೇಕು ಧೋ ಧೋ ಎಂದು !
ಎಲ್ಲವೂ ಕೊಚ್ಚಿಕೊಂಡು
ಭೂಮಿಯ ಮೇಲೆ ಏನೂ ಇಲ್ಲವಾದಾಗ
ಹೊಸ ಜೀವಿಗಳ ಉಗಮವಾಗಬೇಕು !
ಅಲ್ಲಿ ಮೇಲು ಕೀಳಿನ ತಿಳಿಗೇಡಿ
ತನಕ್ಕೆ ಅವಕಾಶ ಇರದು !
ಹಾಳುಮೂಳಗಳಿಗೆ ಮೂಲವಿರದು !
ಬದುಕು ಮಾತ್ರ ನಿರ್ಭೀತವಾಗಿರುತ್ತದೆ !
ಮನುಷ್ಯ ಮನುಷ್ಯನನ್ನು
ಮನುಷ್ಯನೆಂದೇ ಪರಿಗಣಿಸುತ್ತಾನೆ !
ಬಾಂಧವ್ಯಗಳ ಹೊಸ ಮನ್ವಂತರ 
ಆರಂಭವಾಗುತ್ತದೆ !

ಡಾ. ಸಿದ್ರಾಮ ಕಾರಣಿಕ
(ಮರಾಠಿ ಕವಿತೆಯೊಂದರ ಪ್ರಭಾವದಿಂದ)

Monday, December 05, 2011

ಗಾಂಧಿ-ಅಂಬೇಡ್ಕರ್ ಮತ್ತು ನಮ್ಮ ತಪ್ಪು ನಿಲುವುಗಳು !


    ಡಾ. ಸಿದ್ರಾಮ ಕಾರಣಿಕ

ರವಿವಾರದ ಪ್ರಜಾವಾಣಿ ಸಾಪ್ತಾಹಿಕದಲ್ಲಿ (4-12-2011)  ಎನ್.ಎಸ್. ಶಂಕರ್ ಎಂಬುವವರು ಅಂಬೇಡ್ಕರ್ ಪರಿನಿರ್ವಾಣ ದಿನದ ಸಂದರ್ಭದಲ್ಲಿ ಒಂದು ವಿಶೇಷ ಲೇಖನ ಬರೆದಿದ್ದಾರೆ. ನಿಜಕ್ಕೂ ಅದೊಂದು ವಿಶೇಷವಾದ ಲೇಖನವೇನೂ ಅಲ್ಲ ! ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಸರಿಯಾಗಿ ಗ್ರಹಿಸದೆ ಅಥವಾ ಗ್ರಹಿಸಿದರೂ ಅವರ ವಿಚಾರಗಳಿಗೆ ಸಮ್ಮತಿಯಿಲ್ಲದ ಮನೋಭಾವದವರು ಹೀಗೆ ಬರೆಯುವುದರಲ್ಲಿ ಅಚ್ಚರಿ ಪಡುವಂಥದ್ದೇನೂ  ಇಲ್ಲ. ಯಾಕೆಂದರೆ ಇಂಥ ದಿಕ್ಕುಗಾಣದ ಅಭಿಪ್ರಾಯಗಳು ಇಂದು ನಿನ್ನೆಯವಲ್ಲ ; ಅವುಗಳಿಗೂ ದೊಡ್ಡ ಇತಿಹಾಸವೇ ಇದೆ. ಗಾಂಧಿಯನ್ನು ಖಳನಾಯಕನನ್ನಾಗಿ ನೋಡಿದ್ದು ಯಾರು ಮತ್ತು ಯಾಕೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಒಂದು ವೇಳೆ ಗಾಂಧಿ-ಅಂಬೇಡ್ಕರ್ ಇಬ್ಬರೂ ಒಂದೇ ಹೋರಾಟದ ಎರಡು ವಿಭಿನ್ನ ಧ್ವನಿಗಳು ಎಂದು ಗುರುತಿಸೋಣ ; ಆದರೆ ಹಾಗೆ ಗುರುತಿಸುವಾಗ ಐತಿಹಾಸಿಕ ಸತ್ಯಗಳನ್ನು ಮರೆ ಮಾಚಿ ಮಾತನಾಡುವುದು ಸರಿಯಲ್ಲ. ಗಾಂಧಿ, ದಲಿತರ ವಿರೋಧಿಯಲ್ಲ ಎಂಬುದು ಎಷ್ಟು ಸತ್ಯವೋ ಅಷ್ಟೇ ಅವರು ದಲಿತಪರವಾದ ಕಾಳಜಿಯನ್ನೂ ಹೊಂದಿರದ ವ್ಯಕ್ತಿ. 'ಹರಿಜನ' ಎಂಬ ಒಂದು ಪತ್ರಿಕೆಯನ್ನು ಪ್ರಕಟಿಸಿ, ಕೆಲ ಅಸಹ್ಯಕರವಾದ ಆಚರಣೆಗಳನ್ನು ಪಾಲಿಸದಂತೆ ಸಮೂಹದಲ್ಲಿ ತೋರಿಸಿಕೊಳ್ಳುವುದು ಕೇವಲ ಡಾಂಭಿಕತೆ ಅಷ್ಟೆ ! ಕೇವಲ ಪೂನಾ ಒಪ್ಪಂದ ಮಾತ್ರವಲ್ಲ ; ಗಾಂಧಿಯ ನಡೆಯನ್ನು ನಿರಾಕರಿಸಲು ಇನ್ನೂ ಬಹಳಷ್ಟು ಕಾರಣಗಳು ಇವೆ ಎಂಬುದನ್ನು ಮರೆಯಬಾರದು ; ಮರೆತು ಮಾತನಾಡಿದರೆ ಅದನ್ನು 'ಜ್ಞಾನ, ಅರೆಜ್ಞಾನ ಮತ್ತು ಅಪಕಲ್ಪನೆ'ಎನ್ನಬೇಕಾಗುತ್ತದೆ ! 
1930 ರಲ್ಲಿ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ ಮೇಲೆ 'ಅಂಬೇಡ್ಕರ ಇನ್ನೂ ಸಾರ್ವಜನಿಕ ಜೀವನವನ್ನು ಪ್ರವೇಶಿಸಿರಲೂ ಇಲ್ಲ' ಎಂಬ ವ್ಯಾಖ್ಯಾನ ಮಾಡುವುದು ಅಜ್ಞಾನವಲ್ಲದೇ ಮತ್ತೇನು ? ಇದು ಡಾ.ಬಾಸಾಹೇಬ ಅಂಬೇಡ್ಕರ ಬಗ್ಗೆ ಇರುವ ಅರೆಜ್ಞಾನ ಎನ್ನಬೇಕಾಗುತ್ತದೆ. 1930 ಕ್ಕಿಂತಲೂ ಮುಂಚೆಯೇ ಡಾ. ಬಾಬಾಸಾಹೇಬರು ಮಾಡಿರುವ ಕಾರ್ಯಗಳ ಬಗ್ಗೆ ಯಾಕೆ ಇವರು ಅರಿವು ಇಟ್ಟುಕೊಂಡು ಮಾತಾಡುವುದಿಲ್ಲ ? 1920 ರಲ್ಲಿಯೇ ಡಾ. ಬಾಬಾಸಾಹೇಬ ಅಂಬೇಡ್ಕರ 'ಮೂಕ ನಾಯಕ' ಎಂಬ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದರು. 1924 ರಲ್ಲಿ 'ಬಹಿಷ್ಕೃತ ಹಿತಕಾರಿಣಿ ಸಭಾ' ಸ್ಥಾಪನೆ ಮಾಡಿದರು. 1927 ರ ಎಪ್ರಿಲ್ ತಿಂಗಳಲ್ಲಿ 'ಬಹಿಷ್ಕೃತ ಭಾರತ' ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದರು. ಅದೇ ವರ್ಷ ಮುಂಬಯಿ ವಿಧಾನಮಂಡಲದ ಸದಸ್ಯರಾದರು. ಅದೇ ವರ್ಷ ಸಪ್ಟೆಂಬರ್ ತಿಂಗಳಿನಲ್ಲಿ ;ಸಮಾಜ ಸಮತಾ ಸಂಘ' ಸ್ಥಾಪಿಸಿದರು. ಅದೇ 1927 ರ ನವ್ಹೆಂಬರ್ ತಿಂಗಳಲ್ಲಿ ಅಮರಾವತಿಯ ಅಂಬಾದೇವಿಯ ಮಂದಿರ ಪ್ರವೇಶ ಚಳುವಳಿ ನಡೆಸಿದರಲ್ಲದೆ, ಡಿಸೆಂಬರ್ ತಿಂಗಳಿನಲ್ಲಿ 'ಮನುಸ್ಮೃತಿ' ಮಹಾಡದಲ್ಲಿ ಸುಟ್ಟು ಹಾಕಿ ವೈದಿಕ ಸನಾತನಿ ಸಂಪ್ರದಾಯಕ್ಕೆ ಸವಾಲು ಹಾಕಿದರು. ಐತಿಹಾಸಿಕತೆ ರೂಪಿಸಿದ ನಾಶಿಕದ 'ಕಾಳಾರಾಮ ಮಂದಿರ ಪ್ರವೇಶ ಚಳುವಳಿ' ನಡೆಸಿದ್ದೂ 1930 ಮಾರ್ಚ್ ತಿಂಗಳಲ್ಲಿ ; ಆನಂತರವೇ ಅಂದರೆ ಅದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ದುಂಡು ಮೇಜಿನ ಪರಿಷತ್ತಿನಲ್ಲಿ ಪಾಲ್ಗೊಳ್ಳಲು ಇಂಗ್ಲಂಡಿಗೆ ಹೋದರು. ಅವರು ಇಂಗ್ಲಂಡಿಗೆ ಹೋಗುವುದಕ್ಕಿಂತ ಮುಂಚೆಯೇ ಇಷ್ಟೆಲ್ಲ ಸಾಮಾಜಿಕ ಕಾರ್ಯಗಳನ್ನು ಮಾಡಿದರೂ ಏನೂ ಮಾಡಿಯೇ ಇಲ್ಲ ಎಂದು ಹೇಳಿಕೆ ಕೊಡುವುದು ಅರೆಜ್ಞಾನದಿಂದ ಬಂದ ಅಹಂಕಾರವೇ ಸರಿ. ಒಂದು ಲೇಖನ ಬರೆಯುವಾಗ ವಿಷಯದ ಆಳ-ಅಗಲಗಳನ್ನು ಸರಿಯಾಗಿ ತಿಳಿದುಕೊಳ್ಳದೇ ಅಥವಾ ತಿಳಿದುಕೊಂಡಿದ್ದರೂ ಮರೆಮಾಚಿ ಸುಳ್ಳನ್ನು ಹೇಳುವ ಮೂಲಕ ಅವಮಾನಿಸುವ ಪ್ರವೃತ್ತಿಯನ್ನು ಬಿಡಬೇಕಾಗುತ್ತದೆ. ಎನ್.ಎಸ್. ಶಂಕರ ಅವರು ಇನ್ನೊಂದಿಷ್ಟು ಓದಿಕೊಂಡರೆ ಚೆನ್ನ !
                                                             

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.