Sunday, November 13, 2011

ಹಳೆ ಸುದ್ದಿ !

ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಬಂದ ಸುದ್ದಿ : ಧಾರವಾಡ ಆವೃತ್ತಿ : Monday October 18 2010 00:00 IST

ಸಮಷ್ಟಿ ಪ್ರಜ್ಞೆಯ ಸಾಂಸ್ಕೃತಿಕ ಆಚರಣೆ: ಹೊರಟ್ಟಿ

ಕನ್ನಡಪ್ರಭ ವಾರ್ತೆ, ಧಾರವಾಡ, ಅ. ೧೭
ಸಂಸ್ಕೃತಿಯ ಜಡತ್ವದಿಂದಾಗಿ ಪರಂಪರೆ, ಸಂಪ್ರದಾಯ ಎಂಬ ಸಂಗತಿಗಳು ಸಮುದಾಯಗಳ ನಡುವೆ ಕಂದಕ ಮೂಡಿಸಿವೆ. ಸಂಸ್ಕೃತಿಗೆ ಚಲನಶೀಲತೆ ದಕ್ಕಿದಾಗ ಹೃದಯಗಳ ಬೆಸುಗೆ ಕಾರ್ಯ ಸಿದ್ಧಿಸುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಸಾರಸ್ವತಪುರ ಗೌಳಿಗಲ್ಲಿಯ ಮಾರುತಿ ದೇವಸ್ಥಾನದ ಜಿಲ್ಲಾ ದಸರಾ ಜಂಬೂ ಸವಾರಿ ಉತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯಗಳು ವಿಜಯದಶಮಿ ಸಂದರ್ಭದಲ್ಲಿ ಸಾಮೂಹಿಕ ಆಚರಣೆಗೆ ತೊಡಗಿದಾಗ ಅಪನಂಬಿಕೆಗಳು ಅಳಿದು, ಸಾಮುದಾಯಿಕ ವಿಶ್ವಾಸ ಮೂಡಿ ವ್ಯಕ್ತಿಯಿಂದ ರಾಷ್ಟ್ರ ಮುಖ್ಯ ಎಂಬ ಸಮಷ್ಠಿ ಪ್ರಜ್ಞೆ ಜಾಗೃತವಾಗುತ್ತದೆ ಎಂದು ಹೇಳಿದರು.
ಭೂಗೋಳವೇ ಸಾಂಸ್ಕೃತಿಕ ಪಲ್ಲಟಕ್ಕೀಡಾಗಿ, ಜಗತ್ತೇ ವಿಶ್ವಮಾನವತ್ವದ ಕಕ್ಷೆಗೆ ಒಳಪಡುತ್ತಿರುವ ಈ ಸನ್ನಿವೇಶನದಲ್ಲಿ ಭಾರತೀಯರು ನಿಂತ ಗಡಿಯಾರದಂತೆ. ಸಾಂಸ್ಕೃತಿಕ ಹೊಂದಾಣಿಕೆಗೆ, ವಿಕೇಂದ್ರೀಕರಣಕ್ಕೆ ಮುಂದಾಗಬೇಕು. ಸಾಂಸ್ಕೃತಿಕ ಆಚರಣೆಗಳು, ಸಾಂಸ್ಕೃತಿಕ ಜನಾಂದೋಲನವಾಗಿ ರೂಪಗೊಳ್ಳಬೇಕಾದದ್ದು ಅಗತ್ಯ ಎಂದರು.

- ಜಂಬೂಸವಾರಿ ಸಾರ್ಥಕ: ಬೆಲ್ಲದ
ಅಧ್ಯಕ್ಷತೆ ವಹಿಸಿದ್ದ ಶಾಸಕ ಚಂದ್ರಕಾಂತ ಬೆಲ್ಲದ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅಲಕ್ಷ್ಯಕ್ಕೀಡಾದ ಪ್ರದೇಶಗಳಲ್ಲಿ ಸಾಂಸ್ಕೃತಿಕ ಸಮಾರಂಭಗಳನ್ನು ಏರ್ಪಡಿಸಬೇಕಿದೆ. ಆರ್ಥಿಕ, ಸಾಮಾಜಿಕ ಸಮಾನತೆ ಮೂಡಿಸುವ ಹಾದಿಯಲ್ಲಿ ಸಾಂಸ್ಕೃತಿಕ ಸಮಾನತೆ ಮೂಡಿಸುವ ದಿಸೆಯಲ್ಲಿ ಇಂದಿನ ಜಂಬೂ ಸವಾರಿ ಸಾರ್ಥಕವಾಗಿದೆ ಎಂದರು.
ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯ ವಹಿಸಿ ಜಂಬೂ ಸವಾರಿ ಅಂಬಾರಿ ಪೂಜೆ ಸಲ್ಲಿಸಿದರು. ಹುಡಾ ಅಧ್ಯಕ್ಷ ದತ್ತಾ ಡೋರ್ಲೆ, ಪಾಲಿಕೆ ಸದಸ್ಯರಾದ ರಘು ಲಕ್ಕಣ್ಣವರ, ಫರೀದಾ ರೋಣದ, ಉತ್ಸವ ಸಮಿತಿ ಅಧ್ಯಕ್ಷ ಶ್ರೀಧರ ಪಂಜೀಕರ, ವಿಶ್ವಸ್ಥ ಮಂಡಳಿ ಅಧ್ಯಕ್ಷ ಮಂಜುಗೌಡ್ರ ಪಾಟೀಲ, ಬೂದಪ್ಪ ಶಿಸನಹಳ್ಳಿ, ಬಸವರಾಜ ಬಾಗೂರ ಇದ್ದರು.

- ಸಾಧಕರಿಗೆ ಸನ್ಮಾನ
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಡಿ.ಎಂ. ಹಿರೇಮಠ, ಲೀಲಾವತಿ ಕಳಸಪ್ಪನವರ, ನಿಜಗುಣ ರಾಜಗುರು, ನ್ಯಾಯವಾದಿ ಪ್ರಕಾಶ ಉಡಿಕೇರಿ, ಸ್ವಾತಂತ್ರ್ಯ ಯೋಧ ಎಸ್‌.ಎಂ. ಕಬ್ಬಿಣಕಂತಿಮಠ, ಬಿ.ಸಿ. ಮಠಪತಿ, ಡಾ| ಸಿದ್ಧರಾಮ ಕಾರಣಿಕ, ಕುಸ್ತಿ ಪಟುಗಳಾದ ಉಮೇಶ ಪಾಟೀಲ, ಶಿವಾನಂದ ಓಲಿಕಾರ. ಶಿವಾನಿ ಹಳ್ಳಿಕೇರಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರಗಳ ಜೊತೆಯಾಗಿ ಗೌಳಿಗಲ್ಲಿಯಿಂದ ಆರಂಭವಾದ ದಸರಾ ಜಂಬೂ ಸವಾರಿ, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುರುಘಾಮಠ ತಲುಪಿ ಸಮಾರೋಪವಾಯಿತು.

1 comment:

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.