Saturday, August 31, 2013

ಮಾತ್ಗವಿತೆ-143

ಬಸಿರು ಬರಿದಾದಾಗ ಮಾತು ಬರುವುದಿಲ್ಲ
ಉಸಿರು, ಹಸಿರಾಗಿಸುವ ಕನಸಿಗೆ
ಹುಳ ಮೆತ್ತಿಕೊಂಡರೆ
ಹೂವಾಗುವುದು ದೂರವೇ ಉಳಿಯಿತು
ಬೇಂದ್ರೆ ಅಜ್ಜನ ರೀತಿ

ನಾನು ಪ್ರಲಾಪಿಸಲಾರೆ !

Tuesday, August 27, 2013

ಮಾತ್ಗವಿತೆ-142

ಗುದಮುರುಗಿಯ ಮಂದಿಗೆ
ತಿನಿಸುಗಳೂ ಬಹಳ !
ತಮ್ಮದಷ್ಟೇ ಕೆರೆದುಕೊಳ್ಳುವುದಿಲ್ಲ ಅವರು
ಜೊತೆಗೆ ಸುಮ್ಮಿದ್ದವರಿಗೂ ತಗುಲಿಕೊಳ್ಳುತ್ತಾರೆ !

Friday, August 23, 2013

ಮಾತ್ಗವಿತೆ-141

ನಿನ್ನ ಕೆಡವುಬೇಕು ಎಂದಿದ್ದೆ ;
ನಿನ್ನ ತಡುವಬೇಕು ಎಂದಿದ್ದೆ
ಕಡೆಗೂ ಕೊಡು ಕೊಡು ಎನ್ನುತ್ತಲೇ
ಕೋಡಂಗಿಯಾದ ನೀನೂ ಮತ್ತು
ನಾನೂ ಬದುಕಿಲ್ಲವೆ ?

Tuesday, August 20, 2013

ಅಂಬೇಡ್ಕರ ಅವರನ್ನು ಅರಿಯದವರಿಗೆ.....


ಡಾ. ಸಿದ್ರಾಮ ಕಾರಣಿಕ

ಮೊನ್ನೆ ಸ್ನೇಹಿತರೊಬ್ಬರು ಮಲಗುವ ಸಮಯದಲ್ಲಿ (ನನ್ನ ಮಲಗುವ ಸಮಯವಲ್ಲ ; ಯಾಕೆಂದರೆ ನಾನು ಮಲಗುವುದೇ ನಸುಕಿನ ಜಾವದಲ್ಲಿ. ಫೋನು ಮಾಡಿದ್ದು ಅವರು ಮಲಗುವ ಸಮಯದಲ್ಲಿ) ಮೊಬೈಲಿಗೆ ರಿಂಗಾಯಿಸಿ ಮಾತನಾಡಿದರು. ನನಗೆ ಅಚ್ಚರಿ ಎನಿಸಲಿಲ್ಲ. ಯಾಕೆಂದರೆ ನಾನು ಮೊಬೈಲಿಗೆ ಸಿಗುವುದೇ ಇಂಥ ಹೊತ್ತಿನಲ್ಲಿ ! ಸ್ನೇಹಿತರು ಬಹುಶಃ ಕುಡಿದುಕೊಂಡೇ ಮಾತನಾಡುತ್ತಿದ್ದಾರೆ ಎಂದು ನಾನು ಎಣಿಕೆ ಹಾಕಿದೆ. ಅವರು ಹೇಳುತ್ತಿದ್ದರು, “ಬ್ರದರ್, ದಲಿತ ಸಾಹಿತ್ಯದ ಬರವಣಿಗೆಗಳಲ್ಲಿ ಎಲ್ಲರೂ ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ತೀರ ಕೆಳಗು ಮಾಡಿ ಬರೆಯಲಾಗುತ್ತಿದೆ. ಇದು ತಪ್ಪು. ಇದಕ್ಕಾಗಿಯೇ ನಾವು ಚಳುವಳಿ ಮಾಡಬೇಕಾಗುತ್ತದೆ...” 

ಇದು ನನಗೂ ಅಚ್ಚರಿಯೇ ಸರಿ ! ಫೋನು ಮಾಡಿದ ಸ್ನೇಹಿತ ದಲಿತ ಸಂಘಟನೆಯಲ್ಲಿ ಗುರುತಿಸಿಕೊಂಡವರು, ಕೆಲವು ಹೋರಾಟ ಮಾಡಿದವರು. ಏನೂ ಇಲ್ಲದಾದಾಗ ಮನೆಯಲ್ಲಿ ಮುಸುಕು ಹಾಕಿಕೊಂಡು ಮಲಗುವಂಥವರು ; ಇಲ್ಲವೆ ಸಂಬಂಧವೇ ಇಲ್ಲದ ವಿಷಯಗಳಲ್ಲಿ ತಲೆ ಹಾಕಿ ಪತ್ರಿಕೆಗಳಲ್ಲಿ ಹೆಸರು ಮಾಡಿರುವಂಥವರು !
ಇಂತಿಪ್ಪ ಸ್ನೇಹಿತರು ಮೊಬೈಲಿನಲ್ಲಿ ಮಾತನಾಡುತ್ತಲೇ ಇದ್ದರು. ಡಾ. ಬಾಬಾಸಾಹೇಬ ಅಂಬೇಡ್ಕರ್ ವಿಷಯವಾಗಿ ಬರೆಯುವಾಗ ದಲಿತ ಲೇಖಕರು, ಅಂಬೇಡ್ಕರ್‍ರ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳ ಬಗ್ಗೆಯೇ ಹೆಚ್ಚು ಬರೆದು ಅಂಬೇಡ್ಕರ್ ಅವರನ್ನು ಒಂದಿಷ್ಟು ‘ಕೆಳಗು’ ಮಾಡುತ್ತಿದ್ದಾರೆ ಎಂಬುದು ಅವರ ಆರೋಪವಾಗಿತ್ತು. ಛತ್ರಪತಿ ಶಾಹು ಮಹಾರಾಜ, ಬಡೋದೆಯ ಗಾಯಕವಾಡ, ಮೈಸೂರಿನ ಒಡೆಯರು ಮೊದಲಾದ ರಾಜರ ಬಗ್ಗೆ, ದೇವರಾಯ ಇಂಗಳೆ ಮೊದಲಾದ ಹಿರಿಯರ ಬಗ್ಗೆ ಹೆಚ್ಚು ಬರೆದು ಅಂಬೇಡ್ಕರ್ ಅವರ ಬಗ್ಗೆ ಕಮ್ಮಿ ಬರೆಯಲಾಗುತ್ತಿದೆ ಎಂಬುದು ಅವರ ಅಂಬೋಣ. ಆದರೆ ಇದಕ್ಕೂ ಮಿಗಿಲಾಗಿ ಅವರು ಹೇಳಿದ ಇನ್ನೊಂದು ಮಾತು ನನಗೆ ತುಂಬ ಕೆಡುಕು ಎನಿಸಿತು. ಮಹಾತಾಯಿ ರಮಾಯಿ ಬಗ್ಗೆ ಹೇಳುವಾಗಲೂ ನೀವು ಅಂಬೇಡ್ಕರ್ ಅವರನ್ನು ‘ಕೆಳಗು’ ಮಾಡುತ್ತೀರಿ ಎಂಬುದು ಅವರ ಕಾಳಜಿ ! ಹಾಗಾದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಓದಿ ತಿಳಿದುಕೊಂಡಷ್ಟು ನಾವು ರಮಾಯಿ ಬಗ್ಗೆ ಏನು ತಿಳಿದುಕೊಂಡಿದ್ದೇವೆ ? ಅಥವಾ ತಿಳಿದುಕೊಳ್ಳಲು ಎಂದಾದರೂ ಆಸಕ್ತಿ ತಳೆದಿದ್ದೇವೆಯೇ ? ಸ್ನೇಹಿತರ ಮಾತಿಗೆ ಪ್ರತಿಯಾಗಿ ನಾನು ಈ ಉತ್ತರವನ್ನು ನೀಡಲೇಬೇಕಾಗುತ್ತದೆ. ಯಾಕೆಂದರೆ ಅವರು ನನ್ನನ್ನೂ ನನ್ನ ಸಾಹಿತ್ಯವನ್ನೂ ಕುರಿತಾಗಿಯೂ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ !

ಡಾ. ಬಾಬಾಸಾಹೇಬ ಅಂಬೇಡ್ಕರ್ ಬರೀ ಹೆಸರಲ್ಲ ; ಅದು ನನ್ನ ಉಸಿರು. ಅದು ಬೆಂಕಿ ಕೆಂಡ ; ಯಾರಾದರೂ ಆಕ್ಷೇಪಿಸಿದ್ದರೆ ಸುಟ್ಟು ಬಿಡುವಷ್ಟು ಪ್ರಖರ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳ, ಹೋರಾಟದ ಬದುಕಿನ ಅರಿವಿಲ್ಲದೆ ಮಾತನಾಡುವುದು ನಿಜವಾಗಿಯೂ ಮೂರ್ಖತನವೇ ಸರಿ. ಅರ್ಧ ಓದು ಹಾಳು ಮಾಡುತ್ತದೆ ಎಂಬ ಮಾತು ಸತ್ಯವೆನಿಸುತ್ತದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರಿನಲ್ಲಿ ಹೋರಾಟ, ಚಳುವಳಿ ಮಾಡುವ ಕೆಲ ವ್ಯಕ್ತಿಗಳು ವಾಸ್ತವದಲ್ಲಿ ಎಷ್ಟರಮಟ್ಟಿಗೆ ಅದಕ್ಕೆ ಬದ್ಧರಾಗಿದ್ದಾರೆ ಎಂಬುದು ನನ್ನ ಪ್ರಶ್ನೆ. ಹೀಗಾಗಿಯೇ ಬಲಿತ ದಲಿತರ ಬಗ್ಗೆ ಹೇಳಿದಂತೆಯೇ ಇಂಥ ದರಿದ್ರ ದಲಿತರ ಬಗ್ಗೆಯೂ ನಾವು ದಾಖಲಿಸಲೇಬೇಕಿದೆ. ಇಂಥವರು ಬರೀ ಡಾ. ಬಾಬಾಸಾಹೇಬ ಅಂಬೇಡ್ಕರ್ ಮಾತ್ರವಲ್ಲ, ಇಡೀ ದಲಿತ ಜನಾಂಗವನ್ನೇ ಅಪಹಾಸ್ಯ ಮಾಡುವವರಿಗೆ ಹಾದಿ ಮಾಡಿ ಕೊಡುತ್ತಾರೆ ಎಂದರೆ ತಪ್ಪಾಗಲಾರದು.

Thursday, August 15, 2013

ಕನ್ನಡ ಕಾವ್ಯದಲ್ಲಿ ಸ್ವಾತಂತ್ರ್ಯ ಪರಿಕಲ್ಪನೆ

 ಡಾ. ಸಿದ್ರಾಮ ಕಾರಣಿಕ 
_____________________________________________________
‘ತಾಯಾಗಿ ಬರಲಿರುವ ಸ್ವಾತಂತ್ರ್ಯವಿದು  ಬಂತೆ, ಹಣದ  ಮಕ್ಕಳ ಮನೆಯ ಸೂಳೆಯಾಗಿ ?
----------------------------------------------------------------------------- 
 

‘ನಡೆ ಮುಂದೆ ನಡೆ ಮುಂದೆ  ಹಿಗ್ಗಿ ನಡೆ ಮುಂದೆ’ ಎಂದು ಪಾಂಚ್ಯಜನ್ಯ ಮೊಳಗಿಸುವದರ   ಮೂಲಕ ‘ಚಂಡಿ ಚಾಮುಂಡಿ ಪೇಳ್ ಬೇಕಾದದೇನು ? ಗಂಡುಸಾದರೆ ನಿನ್ನ ಬಲಿ ಕೊಡುವಿಯೇನು ?’ ಎಂಬ ದಿಟ್ಟತನ  ತೋರಿದ ಸಾಹಿತಿಗಳು ಆ ಕಾರಣವಾಗಿ ಜೇಲುವಾಸವನ್ನು  ಅನುಭವಿಸಿದರು. ನರಬಲಿ  ಕವಿತೆಯೆ ಕಾರಣವಾಗಿ ಬೇಂದ್ರೆಯವರು ಮುಗುದದಲ್ಲಿ ಸ್ಥಾನಬದ್ಧತೆಯ ಶಿಕ್ಷೆ ಅನುಭವಿಸುವಂತಾಯಿತು.  ಆದರೆ ಭಾರತ ಸ್ವಾತಂತ್ರ್ಯ  ಗಳಿಸಿದ ತರುವಾಯ ರಾಷ್ಟ್ರೀಯ ಪ್ರಜ್ಞೆಯು ಮಸಕಾಗತೊಡಗಿತು. ಸ್ವಾತಂತ್ರ್ಯ  ಬಂದ ಉತ್ಸಾಹದಲ್ಲಿ ‘ಓ ಬಾರ, ಸಹ್ಯಾದ್ರಿ ; ಬಾರ ಓ ವಿಂಧ್ಯಾದ್ರಿ ಬಾರಾ ಹಿಮಾದ್ರಿ’ ಎಂದು ಸ್ವಾತಂತ್ರ್ಯವನ್ನು ಸ್ವಾಗತಿಸುವ ಸಂಭ್ರಮ, ‘ಏನು ಕಾಂತಿಯಿದು, ಏನು  ಶಾಂತಿ ಈ ತುಂಗ ಶೃಂಗದಲ್ಲಿ ......’ ಎನ್ನುತ್ತ  ಭವ್ಯತೆಯನ್ನು  ಕೊಂಡಾಡಿದ  ಕವಿಗಳು,  ಆನಂತರ  ಉತ್ಸಾಹ  ಕಳೆದುಕೊಂಡರು. ಇದಕ್ಕೆ  ಕಾರಣ, ಅಧಿಕಾರ ಲಾಲಾಸೆಯ ವ್ಯಾಮೋಹಿತನ, ಸ್ವಾರ್ಥಪರ  ರಾಜಕಾರಣ, ಗದ್ದುಗೆಗಾಗಿ ಪರಸ್ಪರ  ಹೊಡೆದಾಟ  ಮೋಸ, ವಂಚನೆಗಳೇ ಸ್ವಾತಂತ್ರ್ಯೋತ್ತರ  ಭಾರತದಲ್ಲಿ  ಬೆಳೆದಾಗ,  ಸ್ವಾತಂತ್ರ್ಯ ಬಂದಾಗ ಏನೆಲ್ಲ ಸಾಧಿಸುತ್ತೇವೆ ಎಂದುಕೊಂಡಿದ್ದ ಸಾಹಿತಿಗಳು  ಭ್ರಮನಿರಸನಗೊಂಡರು.  ಶೋಷಣೆ  ಮಾಡುವಲ್ಲಿ  ಆಂಗ್ಲರಿಗಿಂತ  ನಮ್ಮವರೇನು ಕಡಿಮೆಯಿಲ್ಲ ಎಂಬ ಮನವರಿಕೆ ಅವರಿಗಾದಾಗ,
        `ಹೊಸದಾಗಿ ಬಂತು ಇನ್ನೊಂದು ಸರಕಾರ
        ಬೆಲೆಗಳೆಲ್ಲಾ ಏರಿ  ಬಾಯ್ತುಂಬ  ಖಾರ
        ಮತ್ತಷ್ಟು  ಕಿರಿದಾಯ್ತು  ಗೋದಿಯ ಚಪಾತಿ
        ಇದಕ್ಕೆನ್ನುವರು  ರಾಜಕಾರಣ  ಪ್ರಗತಿ’
     ಎಂದು ನೊಂದುಕೊಂಡರು. ಸ್ವಾತಂತ್ರದ ದುರ್ಬಳಕೆ ಕಂಡು ‘ತಾಯಾಗಿ ಬರಲಿರುವ ಸ್ವಾತಂತ್ರ್ಯವಿದು  ಬಂತೆ, ಹಣದ  ಮಕ್ಕಳ ಮನೆಯ ಸೂಳೆಯಾಗಿ ? ಎಂದು ತಳಮಳಿಸಿದರು.
    ಗೌರೀಶ ಕಾಯ್ಕಿಣಿ  ಹೇಳುತ್ತಾರೆ, “ನಿಜವಾಗಿ ನೋಡಿದರೆ ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯ ತೀವ್ರ ಉತ್ಕರ್ಷದ ಪ್ರಸಂಗಗಳನ್ನು   ಬಿಟ್ಟರೆ ಅಖಂಡವಾದ ರಾಷ್ಟೀಯ ಪ್ರಜ್ಞೆ  ಮೂಡಿ ಬಂದದ್ದೇ ಕಡಿಮೆ. ಏಕೆಂದರೆ ಭಾರತವು ಇಂದಿಗೂ   ಒಂದು ಅಖಂಡ, ಒಂದೇ ಜೀನಸಿನ  ರಾಷ್ಟ್ರವಾಗಿಲ್ಲ”  (ಬಿಡುಗಡೆ ಬೆಳ್ಳಿ : 1975)

Wednesday, August 14, 2013

ಮಾತ್ಗವಿತೆ-140

ಹೊಳೆಯ ದಡದಲಿ ನಿಂತು ಹೊಳೆಯುತಿರುವ
ಹೊಸ ಬೆಳಕಿನ ತಾರೆಗೆ ಕೈ ಮಾಡಲೇ ?
ಹಳೆಯ  ನೆನಪುಗಳ ಬಿಸಿಲ ಬೆಳಕವನು
ಜಳಕ ಮಾಡಿ ತೆಗೆದು ಒಗೆಯಲೇ ?
ಮೆತ್ತಿಕೊಂಡ ಮರುಳತನವನೇ ಹರಿದು ಒಗೆಯಲೇ ?
ಚಿತ್ತಕ್ಕೆ ಚಿತ್ತಾರಗಳು ಹಲವು ; ಮತ್ತೇ
ಕೂಟಕ್ಕೆ ಬರೀ ಕತ್ತಲು !

Saturday, August 10, 2013

ಮಾತ್ಗವಿತೆ-139

ಬಯಕೆಗಳೇ ಯಾಕೆ ಹೀಗೆ ಕಸಿವಿಸಿ ?
ಬಸಿರು ತುಂಬಿಕೊಳ್ಳಲಿ, ಹಸಿರಾಗಲಿ
ಉಸಿರು ಮೂಡಲಿ...... ಹೆಸರಾಗಲಿ
ಉಸಿರು ಮೂಡಿ ಹೆಸರಾದಾಗ
ಹೊಸದಾಗಿ ಬನ್ನಿ ಖುಷಿ ಖುಷಿಯಲಿ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.