Wednesday, August 29, 2012

बाबासाहेब आणि भारतीय संविधान

 
 
डॉ. संदीप नंदेश्वर, नागपूर ९२२६७३४०९१
बाबासाहेब संविधान अमलात येण्याच्या आधीच भारतीय घटनेचे शिल्पकार बनले होते.

महावीर सांगलीकर हा बाळबोध भट आजकाल भारतीय संविधान आणि बाबासाहेबांच्या योगदानावर बरळतो आहे...त्याला उत्तर द्यावे इतकी त्याची लायकी नाही... पण आज संविधानाच्या संबंधाने काही प्रश्न उपस्थित होतात म्हणून संविधानाविषयी निर्माण झालेला संभ्रम दूर व्हायला हवा....

भारतीय संविधानाची निर्मिती प्रक्रिया १९०९ च्या मोर्ले-मिंटो सुधारणा कायद्यापासून सुरु झाली आहे. आणि शेवट हा २६ नोव्हेंबर १९४९ ला संविधान सभेच्या संविधान स्वीकारापर्यंत ती चालली आहे. या मध्यंतरीच्या काळात १९१९ चा montague - Chemsford सुधारणा कायदा महत्वाचा आहे. ज्या कायद्याने भारतीयांना मर्यादित राजकीय, आर्थिक, सामाजिक स्वातंत्र्य बहाल केले. हा १९१९ चा कायदा बनण्याआधी साउथबुरो कमिशन १९१८ समोर डॉ. बाबासाहेबांनी निवेदन देऊन साक्ष दिली होती. त्यात ज्या मागण्या प्रामुख्याने बाबासाहेबांनी केल्या होत्या त्या १९१९ च्या montague - Chemsford सुधारणा कायदात समाविष्ट करण्यात आल्या होत्या. बाबासाहेब वगळता तिथे या देशातील कुठल्याही अन्य व्यक्ती वा संघटनांचा समावेश का झाला नाही. फक्त डॉ. बाबासाहेब आंबेडकर यांनाच या देशाच्या स्वातंत्र्याची आणि या देशातल्या जनतेच्या हिताची काळजी होती हेच दिसून येते.

त्यानंतर १९२७ ला सायमन कमिशन इथल्या परिस्थितीचा अभ्यास करायला भारतात आले. त्या कमिशन ला महात्मा गांधीच्या नेतृत्वातील कॉंग्रेस ने विरोध केला. आणि Go Back सायमन चा नारा लावला. कॉंग्रेस ने कुठलेही सहकार्य या कमिशन ला केले नाही. परंतु बाबासाहेबांनी या कमिशन ला सुद्धा आपल्या मागण्यांचे निवेदन सदर केले. त्या निवेदनात इथल्या अस्पृश्यांच्या कल्याणासाठी इंग्रज सरकारने काय केले पाहिजे यासोबतच भारतातील संविधान निर्मितीसाठी आणि राजकीय प्रांतिक विधीमंडळाची मांडणी व रचना कशी असावी याविषयी सुद्धा मार्गदर्शन केले होते. तेव्हा कॉंग्रेस काय; गांधी काय; तर या देशातले इतर अन्य महा-(पुरुष), संस्था-संघटना निष्काम कर्मयोगाच्या समाधी अवस्थेत बसल्या होत्या.

१९२७ च्या सायमन कमिशन ने केलेल्या शिफारशीनुसारच इंग्रज संसदेने गोलमेज परिषद बोलावली. त्यात प्रामुख्याने बाबासाहेबांना पुनःच्या आमंत्रित करण्यात आले. या पहिल्या गोलमेज परिषदेला गांधीप्रणीत कॉंग्रेस ने बहिष्कार घातला. परंतु बाबासाहेबांनी गोलमेज परिषदेत हजेरी देत इंग्रज सरकारला या देशाला कश्याप्रकारच्या कायद्याची गरज आहे. हे पटवून दिले. भारतातील प्रांतिक आणि केंद्रीय विधीमंडळांची रचना कशी असावी हे सुद्धा पटवून दिले. हे गांधी आणि कॉंग्रेस ला माहित झाल्याने गांधी व कॉंग्रेस चे महत्व टिकून राहावे म्हणून गांधी दुस-या गोलमेज परिषदेला हजार झाले. तिथेही गांधी आणि बाबासाहेब यांच्यात भारतीय सामाजिक परिस्थिती लक्षात घेता आवश्यक असणा-या तरतुदी संबंधाने मोठ्या प्रमाणात खडाजंगी झाली. शेवटी गोलमेज परिषदेने बाबासाहेबांच्या बाजूने ठराव घेतला. गांधींना त्यात सपशेल अपयश पचवावे लागले आणि बाबासाहेबांपुढे घुताने टेकावे लागले. (कृपया पुणे कराराच्या संबधाचा जो विषय आहे त्यावर मी बोलत नाही. तो विषय वगळता अन्य ठरावावर मी बोलत आहे) याच गोलमेज परिषदेने घेतलेल्या ठरावांचा जाहीरनामा प्रसिद्ध करण्यात आला. आणि त्याचेच रुपांतर पुढे १९३५ च्या कायद्यात झाले. म्हणजेच याही कायद्यात बाबासाहेबांचे योगदान मोठे आहे.

पुढे भारतीय संविधान निर्मितीच्या प्रक्रियेला इंग्रज सरकारकडून प्रयत्न करण्यात आले. त्यासाठी त्यांनी विविध आयोगांना भारतात पाठविले. त्यातलेच पहिले १९४२ ला परत सायमन कमिशन भारतात आले. तेव्हाही गांधीप्रणीत कॉंग्रेस ने त्याला विरोध केला. परंतु बाबासाहेबांनी मात्र सहकार्य केले. आपल्या मागण्यांचे निवेदन देत राहिले. त्यानंतर पुन्हा संविधान निर्मितीच्या संबंधाने निर्णय घेण्यासाठी क्रिप्स मिशन (त्रीमंत्री योजना म्हणून प्रसिद्ध) भारतात आले. तेव्हा थोडीशी कॉंग्रेस ची भूमिका मवाळ झाली होती. कारण प्रत्येक वेळेस बाबासाहेब आपल्या मागण्या इंग्रजांकडून मान्य करवून घेत होते. परत १९४६ ला माउंटबेटन च्या नेतृत्वात एक आयोग भारतात आले. जो संविधान सभेच्या निर्मितीसाठी शेवटचा आयोग ठरला. या सर्व इतिहासात बाबासाहेबांचे मोठे योगदान राहिले आहे. कॉंग्रेस किंवा गांधी किंवा अन्य कुणापेक्षा पेक्षा जास्त योगदान संविधान निर्मितीच्या पूर्वइतिहासात डॉ. बाबासाहेब आंबेडकरांचे राहिलेले आहे.

माउंटबेटन ने दिलेल्या अंतिम सूचनेवरून संविधान सभेच्या निवडणुका सुरु झाल्या. बाबासाहेब पश्चिम बंगाल प्रांतातून संविधान सभेवर निवडून आले. (तेव्हाही कॉंग्रेस ने बाबासाहेब संविधान सभेवर निवडून येऊ नये म्हणून प्रयत्नांची पराकाष्टा केली होती. कारण पूर्वइतिहास त्यांना माहित असल्याने...कॉंग्रेस चे काहीही चालले नसते म्हणून) ९ डिसेंबर १९४६ ला संविधान सभेची पहिली बैठक बोलाविण्यात आली. आणि भारतीय संविधानाचे प्रारूप कसे असावे यावर दीर्घ चर्चा झाली. या चर्चेत प्रत्येकच सदस्याला मते मांडण्याची संधी देण्यात आली. बाबासाहेबांना आपली मते मांडण्यासाठी वाट पहावी लागत होती.

अखेर १३ डिसेंबर १९४६ ला बाबासाहेबांना संविधान सभेसमोर संविधानाच्या प्रारुपावर मत मांडण्यासाठी अचानक आमंत्रित करण्यात आले. (अचानक यासाठी कि अनेक सदस्य बाकी असल्याने बाबासाहेबांना याची कल्पनाच नव्हती कि त्यांना या दिवशी आपली मते मांडवी लागतील म्हणून...) बाबासाहेबांनी सुरवातीलाच याचा उल्लेख केला कि "माझा नंबर आज लागेल याची मला कल्पना नव्हती. तशी पूर्वसूचना मला मिळाली असती तर मी पूर्वतयारीनिशी माझे मत मांडले असते. पण तरीही मी माझे मत मांडणार आहे..." बाबासाहेबांचे ते संविधान सभेतील पहिले भाषण सुरु झाले. संपूर्ण सभागृह अवाक होऊन अतिशय एकाग्रचित्त झाले होते.

बाबासाहेब एकावर एक मुद्दे आपल्या बुद्धिचातुर्याने संविधान सभेसमोर मांडत होते. सभागृहातील एकही सदस्य त्या बाबासाहेबाच्या भाषणाच्या वेळी उठला नाही कि जागचा हलला सुद्धा नाही. बाबासाहेबांच्या मुखातून जणू काही भविष्याचे संविधानाच बाहेर पडत होते. ज्यात संपूर्ण मानवजातीच्या कल्याणाची एक आचारसंहिताच लिहिली जात होती. बाबासाहेबांचे भाषण झाल्यावर सभागृह टाळ्यांच्या गळगळाटांने निनादून उठले. संपूर्ण सभागृहातील सदस्यांनी बाबासाहेबांच्या विद्वत्तेपुढे मानच झुकविली. बाबासाहेबांचे विरोधकही त्या भाषणाने इतके प्रभावी झाले कि त्यांच्या तोंडून कौतुकाचे शब्दही फुटत नव्हते.

अश्यातच भारत आणि पाकिस्थानाची फाळणी होण्याचे संकेत होते. ती झाली. बाबासाहेबांचा मतदार संघ पाकिस्तानात गेला. त्यामुळे संविधान सभेतील त्यांचे सदस्यत्व धोक्यात येणार होते. अश्या परिस्थितीत बाबासाहेबांचे समर्थक आणि संविधान सभेतील अन्य सभासद ज्यांनी बाबासाहेबांचे १३ डिसेंबर १९४६ चे भाषण ऐकले होते त्यांचा कॉंग्रेस वर दबाव निर्माण झाला. कॉंगेस ला पण बाबासाहेबांना संविधान सभेतील कामकाजापासून अलिप्त ठेवता येत नव्हते. कारण इतकी प्रचंड विद्वत्ता आणि कल्याणाचा जाहीरनामा संपूर्ण कॉंग्रेस मध्ये कुणाकडेही नव्हते. भारताचे संविधान बाबासाहेबंशिवाय बनणे अशक्यप्राय होते हे कॉंग्रेस चांगल्याने जाणून होती. म्हणून शेवटी बी जी खेरांना पत्र लिहून जयकरांचे मुंबई प्रांतातील संविधान सभेतील सदस्यत्व अन्य कारणाने रद्द करण्यात आले. आणि त्या टिकाणी बाबासाहेबांना संविधान सभेवर निवडून आणण्यात आले. कॉंग्रेस, संविधान सभा, भारत देश या सर्वांचीच ती गरज होती. बाबासाहेब संविधान सभेवर निवडून जाने सर्वांच्याच हिताचे होते. त्यानंतर बाबासाहेबांनी संविधानाच्या मसुदा समितीच्या अध्यक्षपदावरून केलेली कामगिरी आणि त्यांची संविधान सभेतील सर्व कलमांवर केलेली भाषणे म्हणजे या देशाचे भवितव्यच होते.

संविधान निर्मितीचा हा पूर्ण इतिहास आपण लक्षात घेतला तर बाबासाहेब संविधान अमलात येण्याच्या आधीच भारतीय घटनेचे शिल्पकार बनले होते. परंतु काही बांडगुळे ठराविक अंतराने बाबासाहेब आणी भारतीय संविधानावर चिखलफेक करतात. ती मोडून काढण्यासाठी हा इतिहास आम्ही लक्षात घेतला पाहिजे. या देशात संविधान किती माणसांपर्यंत पोहचला आहे ? हे पाहायचे असेल तर अलीकडच्या काळात अनेक उदाहरणे डोळ्यासमोर येत आहेत. इथली माणसे INDIAN PINAL CODE, HINDU LAW, COMPANY LAW, FAMILY LAW, CONTRACT LAW etc. अश्या अनेक कायद्यांची भेसळ भारतीय संविधानाशी करतात. उदा. "कसाबला लवकर फाशी होत नाही कारण संविधान जबाबदार आहे." "भ्रष्टाचार्यांना रोकता येत नाही. कारण संविधान जबाबदार आहे." सर्व प्रश्नांसाठी वेगळे कायदे असतांना ही बाळबोध माणसे सरसकट भारतीय संविधानाला आणि बाबासाहेबांना जबाबदार ठरवितात. हे किती हास्यास्पद आहे. आणि या देशातल्या अश्या बाळबोध माणसांमध्ये किती संविधानिक जागृती झाली आहे हे आपल्या लक्षात येईल.

बाबासाहेब आणि भारतीय संविधान यावर बोटे ठेवून उलटसुलट इतिहास मांडणा-या, वाचना-या, लिहिणा-या, सांगणा-या बाल्बोधांनी हा इतिहास वाचवा आणि नंतरच चर्चा करावी.


Friday, August 24, 2012

ನಸುಕಿನ ಕಿರಣಗಳ ಕನಸ ಬಸುರಿನ ಮುಲುಕು !

 
 ಬಸವರಾಜ ಸುಳೇಭಾವಿ
ಅದು ನಿನ್ನ ಹೆಸರಾಗಿರಲಿ
ಅಥವಾ ಒಂದು ಪ್ರೇಮ ಪತ್ರ
ಹಾಗೆಯೇ ಮನಸ ಭಿತ್ತಿಯಲಿ
ಮೂಡಿದ ನಿನ್ನ ಚಿತ್ರ ಅಥವಾ
ಎದೆಯಿಂದ ಜಾರಿಬಿದ್ದ
ಈ ಪದ್ಯದ ಸಾಲು
ಎಲ್ಲವನು ನಾನು
ಬೆಳಕಿನ ಧ್ಯಾನದ
ನಸುಕಿನ ಕಿರಣಗಳಿಂದ
ಕನಸ ಬಸುರಿನ ಮುಲುಕುಗಳಿಂದ
ಹೋರಾಟದ ನಿಶಾನೆ ಹಿಡಿದ ಕೈಗಳ
ವಸಂತದ ಹಂಬಲಗಳಿಂದ
ಬರೆದಿರುವೆ
ಒಂದು ದಿನ ಎಲ್ಲವೂ ಅಳುಕಬಹುದು
ಆದರೆ ನಿನ್ನಾಣೆ
ಬದುಕಿನ ಮೈಲುಗಲ್ಲ ಮೇಲೆ
ಹೃದಯವೇ ಬಾಯಿಗೆ ಬಂದು
ಆಡಿದ ಮಾತು ಹಾಗೇ ಉಳಿಯಲಿದೆ
ಈ ಭೂಮಿಯಂತೆ ಆ ಆಕಾಶದಂತೆ
ಮತ್ತು ಹೂ ಉದುರಿಬಿದ್ದ ಮೇಲೂ
ಉಳಿವ ಬೀಜದಂತೆ

Tuesday, August 21, 2012

ಕಮರಿ ಹೋದವು ಕರುಳಿನ ಕಣ್ಣೀರು !

ಮೂಲ ಮರಾಠಿ : ಕೆ.ಬಿ. ಹನ್ನೂರಕರ 
 ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
 _____________________________________________________________________________
ಶಾಂತಾಬಾಯಿ !
ಗಂಡ, ಅಪಘಾತದಲ್ಲಿ ತೀರಿಕೊಂಡ ಮೇಲೆ ವಿಧವೆಯಾದ ಆಕೆಯ ಮಡಿಲಲ್ಲಿ ಚಿಕ್ಕ ಚಿಕ್ಕ ಮೂರು ಮಕ್ಕಳಿದ್ದವು ; ಬದುಕು ನಡೆಸಲು ಏನೂ ಇರಲಿಲ್ಲ !
ಮಾಡುವುದಾದರೂ ಏನು ?
ಶಾಂತಾಬಾಯಿ ನೋವಿನಲ್ಲೂ ಸ್ಥೈರ್ಯ ಕಳೆದುಕೊಳ್ಳಲಿಲ್ಲ.
ಅಸಹಾಯಕತೆಯಿಂದ ಅಳಲಿಲ್ಲ ; ಎದೆಗುಂದಲಿಲ್ಲ.
ಗುಬ್ಬಿಯಂತಹ ಮೂರು ಮಕ್ಕಳಿಗಾಗಿ ಆಕೆ ತುಂಬು ಧೈರ್ಯದಿಂದಲೇ ಎದೆ ಮೇಲೆ ಎಗರಿ ಬಿದ್ದಿದ್ದ ಪರಿಸ್ಥಿತಿಯನ್ನು ನಿಭಾಯಿಸಿದಳು.
ಗಂಡನ ಸಾವು ಎಂದರೆ ಹೆಣ್ಣಿನ ಬಾಳಿನ ಮೇಲೆ ಬಿದ್ದ ಸಂಕಟದ ಗುಡ್ಡವೇ ಸರಿ. ಆದರೆ ತನ್ನ ಮಕ್ಕಳನ್ನು ಬೆಳೆಸಲು, ಪಾಲಿಸಲು ಆ ಸಂಕಟದ ಗುಡ್ಡವೇ ಶಾಂತಾಬಾಯಿಗೆ ಶಕ್ತಿ ನೀಡಿದಂತಿತ್ತು !
ಏನಾದರೂ ಸರಿ ; ತನ್ನ ಬಳ್ಳಿಯ ಹೂಗಳು ಅರಳಲೇ ಬೇಕು ಎಂಬ ಹಠವನ್ನು ಮನದಲ್ಲಿ ತುಂಬಿಕೊಂಡ ಆಕೆ ಬದುಕಿ ತೋರಿದಳು.
ವೊದಲಿಗೆ ಕಾಯಿಪಲ್ಲೆ ಮಾರುವ ಕಾಯಕ ಮಾಡತೊಡಗಿದಳು. ಮುಂಗಡ ಹಣವಿಲ್ಲದೆ ಕಾಯಿಪಲ್ಲೆ ದೊರೆಯುತ್ತಿತ್ತು. ಜನಸಂಚಾರದ ಹಾದಿಯ ಬದಿಗೆ ಕುಳಿತು ಕಾಯಿಪಲ್ಲೆ ಮಾರಬಹುದು ; ಬಾಡಿಗೆ ಅಂಗಡಿಯ ಅವಶ್ಯಕತೆಯೇ ಇಲ್ಲ ! ಆಕೆ ನೋವನ್ನೆಲ್ಲ ಮರೆತು ಮನಸಿಟ್ಟು ದುಡಿದು ಮಕ್ಕಳನ್ನು ಬೆಳೆಸತೊಡಗಿದಳು !
ಶಾಂತಾಬಾಯಿ ಹೆಚ್ಚು ಕಲಿತವಳಲ್ಲ. ಆದರೆ ಶಿಕ್ಷಣವೇ ಮನುಷ್ಯ ಬದುಕಲು ಅಸ್ತ್ರವಾಗುತ್ತದೆ ಎಂಬ ಅರಿವು ಆಕೆಯಲ್ಲಿತ್ತು ! ಕ್ರಾಂತಿದೀಪ ಸಾವಿತ್ರಿಬಾಯಿ ಫುಲೆಯ ಆದರ್ಶಗಳನ್ನು ಮುಂದಿಟ್ಟುಕೊಂಡಿದ್ದಳು. ಕಷ್ಟಗಳ ಸುರಿಮಳೆಯೇ ಸುರಿದರೂ ಕೂಡ ತನ್ನ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ; ಉನ್ನತವಾದ ಸರಕಾರಿ ಹುದ್ದೆ ದೊರೆಯಬೇಕು ಎಂದು ಆಕೆ ಪಣ ತೊಟ್ಟಳು. ಮಕ್ಕಳಿಗೂ ಕೂಡ ಆಕೆ ಯಾವಾಗಲೂ ಇದನ್ನೇ ಹೇಳುತ್ತಿದ್ದಳು. ಗುರಿ ತಲುಪಲು ಬೇಕಾದ ಬಲವನ್ನು ಅವರಲ್ಲಿ ತುಂಬುತ್ತಿದ್ದಳು. ಹಂಬಲದ ಹುಚ್ಚಿನಲ್ಲಿಯೇ ಬೆವರು ಹರಿಸಿ ದುಡಿಯತೊಡಗಿದ್ದಳು. ತನ್ನ ಭವ್ಯವಾದ, ದಿವ್ಯವಾದ ಕನಸನ್ನು ನನಸಾಗಿಸಿಕೊಳ್ಳಲು ಆಕಾಶ-ಭೂಮಿಗಳೆರಡನ್ನೂ ಒಂದು ಮಾಡುವ ಉಮೇದು ಆಕೆಯಲ್ಲಿತ್ತು.
ಆಕೆಯ ಮಕ್ಕಳಾದರೂ ಆಕೆಯ ಹಂಬಲದಂತೆಯೇ ಬುದ್ಧಿವಂತರಾಗಿಯೇ ಬೆಳೆದರು. ಆ ಮೂರೂ ಮಕ್ಕಳು ಉನ್ನತ ಶಿಕ್ಷಣ ಪಡೆದುದರಿಂದ ಶಾಂತಬಾಯಿಯ ಕಷ್ಟಗಳು ಕರಗಿ ಹೋಗಿ ಸುಖದ ಸಂಭ್ರಮ ಗೂಡು ಕಟ್ಟುತ್ತಿತ್ತು.
ಹಿರಯ ಮಗ ಪ್ರಲ್ಹಾದ ಇಂಜಿನೀಯರ್ ಆಗಿ ಬೆಳಗಾವಿ ಬಿಟ್ಟು ಮುಂಬಾಯಿ ಸೇರಿಕೊಂಡು ಸರಕಾರಿ ಹುದ್ದೆ ಗಳಿಸಿದ. ಎರಡನೆಯ ಮಗ ಪ್ರಕಾಶನೂ ಬಿ.ಕಾಂ. ಪದವೀಧರನಾಗಿ ಮುಂಬಾಯಿಯ ಬ್ಯಾಂಕಿನಲ್ಲಿ ನೌಕರಿ ಗಿಟ್ಟಿಸಿಕೊಂಡು ಬೆಳಗಾವಿಯನ್ನು ಬಿಟ್ಟ. ಮೂರನೆಯ ಮಗ ವಿನಾಯಕ ಬಿಜಿನೆಸ್ದಲ್ಲಿ ಆಸಕ್ತಿವಹಿಸಿ ಬೆಳಗಾವಿಯ ಒಂದು ಸೂಕ್ತ ಜಾಗದಲ್ಲಿ ಹೊಟೇಲು ಆರಂಭಿಸಿದ.
*****
ಒಂದು ಕಾಲದಲ್ಲಿ ರೊಟ್ಟಿಯ ತುಣುಕಿಗಾಗಿ ಹಪಹಪಿಸುತ್ತಿದ್ದ ತನ್ನ ಮೂರೂ ಮಕ್ಕಳು ಇಂದು ಹಣದ ರಾಶಿಯ ಮೇಲೆ ರಾಜ್ಯ ಮಾಡುವುದನ್ನು ಕಂಡು ಶಾಂತಾಬಾಯಿಯ ಜೀವ ತೃಪ್ತಗೊಂಡಿತು. ಒಂದು ಕಾಲದಲ್ಲಿ ಎಲ್ಲಿಯಾದರೂ ಸಹಾಯ ಬೇಡಿಯಾಳು ಎಂದು ಶಾಂತಾಬಾಯಿಯಿಂದ ದೂರ ಓಡುತ್ತಿದ್ದ ಸಂಬಂಧಿಕರು ಈಗ ಆಕೆಯ ಆಸುಪಾಸಿನಲ್ಲೇ ಸುತ್ತಾಡತೊಡಗಿದ್ದರು ! ಮೇಲಿಂದ ಮೇಲೆ ಆಕೆಯ ಕ್ಷೇಮ ಸಮಾಚಾರ ವಿಚಾರಿಸಿಕೊಳ್ಳಲು ಬರತೊಡಗಿದ್ದರು ! ಸೊಸೆಯಂದಿರನ್ನು ಯಾವಾಗ ತರುತ್ತಿ ಎಂದೂ ಕೇಳತೊಡಗಿದರು ! ಮಕ್ಕಳ ಮುಂದೆ ಶಾಂತಾಬಾಯಿ ಮದುವೆಯ ಪ್ರಸ್ತಾಪ ಮಾಡಿದಾಗ, ಈ ಮುರುಕು ಮನೆಗೆ ಯಾರು ಹೆಣ್ಣು ಕೊಡುತ್ತಾರೆ ; ವೊದಲು ಹೊಸಮನೆ ಕಟ್ಟೋಣ, ಆಮೇಲೆ ಮದುವೆ-ಗಿದುವೆ ಎಲ್ಲ ಎಂದರು !
*****
ಮೂರೂ ಮಕ್ಕಳು ಸೇರಿ, ತಮ್ಮ ಹಳೆಯ ಮನೆಯನ್ನು ಕೆಡವಿ, ಅದೇ ಜಾಗದಲ್ಲಿ ಮೂರು ಅಂತಸ್ತಿನ ಅದ್ಭುತವಾದ ಮಹಲನ್ನು ಕಟ್ಟಿಸಿದರು. ಚೆಲುವೆಯರಾದ ಸೊಸೆಯಂದಿರು ಮನೆ ತುಂಬಿದರು. ಮನೆ ನಂದನವಾಗಿ ನಲಿಯತೊಡಗಿತ್ತು !
ಆದರೆ ಮುಂದೆ ನಡೆದದ್ದು ಮಾತ್ರ ಘೋರವಾದದ್ದು ! ಎಣಿಸಿದಂತೆ ಯಾವುದೂ ಆಗುವುದಿಲ್ಲ ! ಮದುವೆಯ ಸಲುವಾಗಿ ಎರಡೆರಡು ತಿಂಗಳು ರಜೆ ಹಾಕಿ ಬಂದ ಪ್ರಲ್ಹಾದ ಮತ್ತು ಪ್ರಕಾಶರಿಗೆ ರಜೆ ಯಾವಾಗ ಮುಗಿಯುತ್ತದೆಯೋ ಎನಿಸತೊಡಗಿತ್ತು ! ಯಾಕೆಂದರೆ ಬಡತನದ ಅರಿವಿನ ಶಾಂತಾಬಾಯಿಯ ಕಟ್ಟುನಿಟ್ಟು ಹೊಸದಾಗಿ ಮನೆ ಸೇರಿದ ಸೊಸೆಯಂದಿರಿಗೆ ಇರುಸು-ಮುರುಸು ಉಂಟು ಮಾಡುತ್ತಿತ್ತು !
ಕಿರಿಯ ಮಗ ವಿನಾಯಕನ ಹೆಂಡತಿಯಂತೂ ಹೋಯ್ಮಾಲಿಯೇ ಆಗಿದ್ದಳು ! ಇಂದಲ್ಲ ನಾಳೆ, ಇಬ್ಬರೂ ಮೈದುನರು ಮುಂಬಾಯಿಗೆ ತಮ್ಮ ತಮ್ಮ ಹೆಂಡತಿಯರೊಂದಿಗೆ ಹೊರಟು ಬಿಡುತ್ತಾರೆ ; ಇಲ್ಲಿ ತಾನೊಬ್ಬಳೇ ಈ ಮುದುಕಿಯ ಕಷ್ಟವನ್ನು ಸಹಿಸಬೇಕಾಗುತ್ತದೆ ಎಂಬುದು ಆಕೆಯ ಒಳಗುದಿಯಾಗಿತ್ತು ! ಮುದುಕಿಯನ್ನು ತಾನೊಬ್ಬಳೇ ನೋಡಿಕೊಳ್ಳಬೇಕಾಗುತ್ತದೆ ಎಂದುಕೊಂಡ ಆಕೆ ಗಂಡನ ಹತ್ತಿರ ತಕರಾರು ಎತ್ತಿದಳು. ಹಿರಿಯರಿಬ್ಬರೂ ಕಿರಿಯ ತಮ್ಮನನ್ನು ಬೆಂಬಲಿಸಿದರು. ಮುಂಬಾಯಿಗೆ ಮರಳುವ ಮುಂಚೆ ಬೇರೆಯಾಗುವ ಮಾತುಗಳನ್ನು ಸೊಸೆಯಂದಿರು ವಿನಿಮಯ ಮಾಡಿಕೊಂಡರು ! ಹೆಂಡತಿಯರ ಗುಂಗಿನಲ್ಲಿದ್ದ ಶಾಂತಾಬಾಯಿ ಕರುಳ ಕುಡಿಗಳಾಗಿದ್ದ ಆ ಮೂರೂ ಮಕ್ಕಳೂ ತಲೆಕೆಟ್ಟವರಂತೆ ವರ್ತಿಸಿದರು ! ಅವರಿಗೆ ತಮ್ಮ ಅವ್ವ ಎದುರಿಸಿದ ಕಷ್ಟಗಳ ಅರಿವು ಮರೆತು, ಹೆಂಡತಿಯರ ಹೇಳಿಕೆ ಮಾತಿಗೆ ತಲೆಬಾಗಿ ಪಾಲು ಹಂಚಿಕೊಳ್ಳಲು ಸಿದ್ಧವಾದರು !
ಶಾಂತಾಬಾಯಿಗೆ ವೊದವೊದಲು ಈ ಸಂಗತಿ ಒಂದಿಷ್ಟು ನೋವು ನೀಡಿದ್ದು ಸತ್ಯ. ಆದರೆ ಮಕ್ಕಳು ಹೇಗಾದರೂ ಸುಖಿಯಾಗಿದ್ದರೆ ಸಾಕು ಎಂದಿತು ತಾಯಿ ಹೃದಯ ! ಪಾಲು ಹಂಚಿಕೊಳ್ಳಲು ಆಕೆ ಸಮ್ಮತಿಸಿದಳು. ಹಾಗೆ ನೋಡಿದರೆ ಹಿರಿಯ ಮಕ್ಕಳಿಬ್ಬರೂ ನೌಕರಿಯ ನಿಮಿತ್ಯವಾಗಿ ಮನೆಯನ್ನು ಬಿಟ್ಟು ಹೋಗುವವರೇ ಅಲ್ಲವೆ ; ಅದಕ್ಕೆ ಯಾಕೆ ತಕರಾರು ಎಂದುಕೊಂಡ ಆಕೆ ಅವರ ಅಭಿಪ್ರಾಯವನ್ನು ಒಪ್ಪಿಕೊಂಡಳು !
*****
ಪಂಚರನ್ನು ಕರೆಯಿಸಲಾಯಿತು !
ಮನೆಯಂತೂ ವೊದಲೇ ಮೂರು ಅಂತಸ್ತಿನದೇ ಆಗಿತ್ತು ! ಮೇಲಿನ ಮಹಡಿ ಹಿರಿಯ ಮಗ ಪ್ರಲ್ಹಾದನ ಪಾಲಾಯಿತು. ನಡುವಿನ ಮಗ ಪ್ರಕಾಶನಿಗೆ ನಡುವಿನ ಮಹಡಿ ಎಂದಾಯಿತು. ಕೆಳಗಿದ್ದ ಮನೆ ಕಿರಿಯ ಮಗ ವಿನಾಯಕನಿಗೆ ಉಳಿಯಿತು. ಹೀಗಾಗಿ ಮನೆ ಪಾಲು ಮಾಡಿಕೊಳ್ಳುವಲ್ಲಿ ಯಾವ ತಕರಾರೂ ಇರಲಿಲ್ಲ.
ಪಂಚರನ್ನು ಕರೆಯಿಸಿದ್ದು ಮನೆ ಪಾಲು ಮಾಡಿಕೊಳ್ಳಲು ಅಲ್ಲ !
ಮುದುಕಿಯಾದ  ಶಾಂತಾಬಾಯಿಯನ್ನು ಹೇಗೆ ಹಂಚಿಕೊಳ್ಳಬೇಕು ? ಮುಂಬಾಯಿಯ ಇಬ್ಬರೂ ಸೊಸೆಯಂದಿರು ಅತ್ತೆಯನ್ನು ತಾವಿದ್ದಲ್ಲಿಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದರು ! ಕಿರಿಯಾಕೆ ಕೂಡ ತನಗೂ ನಿಭಾಯಿಸುವುದಾಗುವುದಿಲ್ಲ ಎಂದು ಜಾರಿಕೊಂಡಿದ್ದಳು !
“ಹಂಗಾದ್ರ, ವಯಸ್ಸಾದ ಮುದ್ಕಿ ಎಲ್ಲಿರ್ಬೇಕ ಹೇಳ್ರ್ಯಲ್ಲ ?” ಪಂಚರು ಪ್ರಶ್ನೆ ಎಸೆದರು.
ವೊದಲೇ ಮಾತಾಡಿಕೊಂಡಂತೆ ಹಿರಿಸೊಸೆ, “ಅತ್ತಿಯೋರ್ನ ನಾಕನೇ ಮಾಡಿ ಮ್ಯಾಗ ಅಂದ್ರ ಟೆರೆಸ್ ಮ್ಯಾಲ ಇರೂ ರೂಮದಾಗ ಇಟ್ಟರಾಗುದಿಲ್ಲೇನ ?” ಎಂದಾಗ ಉಳಿದಿಬ್ಬರೂ ಸೊಸೆಯಂದಿರು ಸಮ್ಮತಿ ಸೂಚಿಸಿದರು ! ಮೂರೂ ಮಂದಿ ಗಂಡುಮಕ್ಕಳು ಮೌನವಾಗಿಯೇ ತಮಗೇನೂ ಸಂಬಂಧವೇ ಇಲ್ಲ ಎನ್ನುವಂತೆ ನಿಂತಿದ್ದರು !
“ನೀವ್ ಏನ್ ಅಂತೀರೋ ಪೋರಗೋಳ್ರ್ಯಾ ?” ಪಂಚರು ಮಕ್ಕಳನ್ನೇ ನೇರವಾಗಿ ಕೇಳಿದರು.
“ಅವ್ರ ಹೆಂಗ್ ಹೇಳ್ತಾರೋ ಹಂಗ ಆಗ್ಲಿ” ಮೂವರೂ ‘ಜೀ’ ಎಳೆದರು !
“ಹಂಗಾದ್ರ, ಆ ಮುದ್ಕಿ ಹೊಟ್ಟಿಗಿ-ಬಟ್ಟಿಗಿ ಏನ್ಮಡ್ಬೇಕಂತೇರಿ ?”
“ಅತ್ತೀ ಕಡೀ ಭಾಳ ರೊಕ್ಕ ಇರ್ಬೇಕಲಾ. ಇಲ್ಲದಿರಕ ಮೂರ ಮಕ್ಳಾ ಸಾಕಿ, ಸಾಲಿ ಕಲ್ಸಾಕ ಆಗ್ತಿತ್ತೇನ್ರಿ ? ಇನ್ನೂ ಭಾಳಕೂನೆ ರೊಕ್ಕ ಇರ್ಬೇಕ ಬಿಡ್ರಿ. ನಮ್ಮ ಕಡಿಂದ ಒಂದ ದಮ್ಮಡಿನೂ ಅಕಿಗೂ ಕೊಡಾಕಾಗುದಿಲ್ಲ” ಎಂಬ ಸೊಸೆಯಂದಿರ ಕಟುನುಡಿಗಳನ್ನು ಕೇಳಿದ ಶಾಂತಾಬಾಯಿಗೆ ನೆಲ ನುಂಗಬಾರದೇ ಎನಿಸತೊಡಗಿತು ! ಆದರೆ ಎಂಥದ್ದೇ ಸಂಕಷ್ಟ ಸಂದರ್ಭದಲ್ಲೂ ನೋವನ್ನು ಸಹಿಸಿಕೊಳ್ಳುವ ಶಕ್ತಿ, ಆಕೆಯ ಗಂಡ ತೀರಿಕೊಂಡಾಗಲೇ ಆಕೆಗೆ ಸಿದ್ಧಿಸಿತ್ತು !
ಎಂಥಾ ಕೌರ್ಯ !
ಪಂಚರು ತಮ್ಮ ತಮ್ಮಲೇ ಮಾತಾಡಿಕೊಂಡರು.  ಒಂದು ದಿಟ್ಟ ನಿಲುಮೆಯನ್ನು ತಾಳಿದ ಅವರು, ಆ ಗಂಡುಮಕ್ಕಳಿಗೆ ಹೇಳಿದರು, “ಏನ್ರ್ಯಪಾ, ನಿಮ್ಮ ಹ್ಯಾಂತೇರ ಮಾತಾಡ್ತಾರು ; ನೀವ್ ನೋಡ್ಯರ ಕಲ್ಲಿನಗತೆ ಮೂಕಾಗಿ ನಿಂತೇರಿ. ಇದೇನ ಸರಿ ಅಲ್ಲ. ಪಾಪ ಆ ಮುದ್ಕಿ, ನಿಮ್ಮ ಸಲಮಂದ ಎಸ್ಟೊಂದ್ ಕಸ್ಟಾ ಸೋಸ್ಯಾಳ ಅನ್ನೂದ ನಿಮಗೇನ ಅರೀದಲ್ಲ. ಎಲ್ಲಾ ನೋಡ್ಕೊಂಡ ಬೆಳದೇರಿ. ನಿಮ್ಮ ಸಲಮಂದ ರಕ್ತಾ ಬೆವರ ಮಾಡ್ಕೊಂಡ ದುಡದ ಹೆಣ್ಣಮಗಳ ಆಕಿ. ಹಂತಾಕಿಯನ್ನ ನೀವ್ ಟೇರೆಸ್ ಮ್ಯಾಲ ಹಾಕಾಕತ್ತೇರಿ ? ನಿಮಗೇನ ಇದ ಒಪ್ಪೂ ಮಾತ ?”
ಪಂಚರ ಯಾವೊಂದು ಮಾತುಗಳೂ ಆ ಮಕ್ಕಳ ಮೇಲೆ ಯಾವೊಂದು ಪರಿಣಾಮವನ್ನೂ ಬೀರಿದಂತೆ ಕಾಣಿಸಲಿಲ್ಲ !
ಹೇಳಿಕೇಳಿ ನಿರ್ಲಜ್ಜರೇ ಆಗಿದ್ದ ಅವರು ಮಾತನಾಡಲು ಬಾಯಿಯೇ ಇಲ್ಲದವರಂತೆ ನಿಂತುಕೊಂಡಿದ್ದರು !
ಹಿರಿಯ ಮಗ ಕೊನೆಗೂ ಬಾಯಿ ಬಿಟ್ಟ !
“ನಾವಿಬ್ರೂ ಮುಂಬಾಯಾಗ ಇರಾರು. ಹಂಗಾಗಿ ನಮ್ಮ ಕಡಿಂದ ಅವ್ವನ ನೋಡಕೊಳ್ಳಾಕ ಆಗೂದ ಇಲ್ಲ. ಇಸ್ಟಂತೂ ಮಾಡಾಕ ತಯಾರ ಅದೇವು. ಏನಂದ್ರ ಯಾರ್ನರೆ ಆಳ ಇಟ್ಟ ಅವ್ವನ ಸೇವಾ ಮಾಡ್ಸತೇವು. ಮುಂಬಾಯಾಗ ಇರೂ ನಾವಿಬ್ರೂ ಆಳಿನ ಎರಡ ತಿಂಗ್ಳ ಪಗಾರ ಕೊಡತೇವು. ಸಣ್ಣಾಂವ ಮೂರ್ನೆ ತಿಂಗ್ಳದ ನೋಡ್ಕೋಲಿ”
ಕಿರಿಯ ಮಗ ಕೂಡ ಮಾತಾಡಿದ, “ನಾನೂ ಅದನ ಕೊಡಾಕ ತಯಾರಿದೇನಿ. ಅವ್ವನ ನೋಡ್ಕೊಳ್ಳಾಕ ಖಾಯಮ್ಮಾಗಿ ಯಾರ್ನರೆ ಪಗಾರ ಕೊಟ್ಟ ನೇಮಸ್ರಿ”
“ಏನ್ರೆಪಾ, ಏನ್ ಹೇಳ್ತೇರಿ ?” ಉಳಿದವರಿಬ್ಬರನ್ನು ಪಂಚರು ಕೇಳಿದರು.
“ಅಂವಾ ಹೇಳಿದಾಂಗ ಮಾಡ್ರಿ. ನಾವೂ ನಮ್ಮ ನಮ್ಮ ಪಾಲಿನ ಆಳಿನ ಪಗಾರ ಕಳ್ಸತೇವು”
ಪಂಚರಿಗೆ ಅಸಹ್ಯವೆನಿಸಿತು ! ಎಂಥ ಮಕ್ಕಳಿವು ! ಮುಂದೆ ಏನೊಂದೂ ಮಾತನಾಡದೆ ಅವರು ಎದ್ದು ಹೋದರು !
ಟೇರೆಸ್ ಮೇಲೆ ಹಳೆಯ ಸಾಮಾನುಗಳನ್ನು ಇಡಲು ಕಟ್ಟಿದ್ದ ಕೋಣೆಯನ್ನು ಸ್ವಚ್ಛಗೊಳಿಸಿದ ಆ ಮೂವರೂ ಮಕ್ಕಳು, ಶಾಂತಾಬಾಯಿಗಾಗಿ ಒಂದು ಮಂಚ, ಗಾದಿ, ಒಂದಿಷ್ಟು ಪಾತ್ರ-ಪಗಡಿಗಳೊಂದಿಗೆ ಅವ್ವನನ್ನು ಅಲ್ಲಿಟ್ಟು, ಆಕೆಯನ್ನು ನೊಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ಸಂಬಳದ ಆಧಾರದ ಮೇಲೆ ನೇಮಿಸಿದರು !
*****
ರಜೆಗಳನ್ನೆಲ್ಲ ಮುಗಿಸಿಕೊಂಡ ಪ್ರಲ್ಹಾದ ಮತ್ತು ಪ್ರಕಾಶ ತಮ್ಮ ಹೆಂಡತಿಯರೊಂದಿಗೆ ಮುಂಬಾಯಿಗೆ ಹೋದರು. ಕಿರಿಯಾತ ತನ್ನ ಹೊಟೇಲು ಉದ್ದಿಮೆಯಲ್ಲಿ ಮಗ್ನನಾದ. ಆತನ ಹೆಂಡತಿ ಮಹಿಳಾ ವಿವೋಚನಾ ಚಳುವಳಿಯ ಸದಸ್ಯೆಯಾಗಿದ್ದಳು ! ಮಹಿಳಾ ವಿವೋಚನೆಯ ಬಗ್ಗೆ ಆಕೆ ಉದ್ದುದ್ದ ಭಾಷಣವನ್ನೂ ಸಭೆ-ಸಮಾರಂಭದಲ್ಲಿ ಬಿಗಿಯುತ್ತಿದ್ದಳು ! ಆಕೆಯ ಮಾತುಗಳನ್ನು ಕೇಳಿದವರು ಆಕೆಯನ್ನು ಮೆಚ್ಚಿಕೊಳ್ಳತೊಡಗಿದರು !
ತನ್ನ ಸ್ವಂತ ಅತ್ತೆಯನ್ನೇ ನೋಡಿಕೊಳ್ಳದೇ ನಿರ್ದಯವಾಗಿ ಟೇರೆಸ್ಗೆ ವರ್ಗಾಯಿಸಿದ ಮೇಲೆಯೂ ಆಕೆಯ ಲಂಗು-ಲಗಾಮಿಲ್ಲದ ಮಹಿಳಾ ವಿವೋಚನಾ ಪರ ಭಾಷಣಗಳು ನಿರಂತರವಾಗಿದ್ದವು !
“ಇಂದಿನವರು ವೃದ್ಧ ತಂದೆ-ತಾಯಿಯರನ್ನು ನೋಡೋದಿಲ್ಲ. ಇಂಥವರಿಗೆ ಧಿಕ್ಕಾರವಿರಲಿ. ಸಮಾಜದಲ್ಲಿ ಇಂಥ ಅಮಾನವೀಯ ವರ್ತನೆಗಳಿಗೆ ಅಂಕುಶ ಹಾಕುವ ಕೆಲಸವನ್ನು ನಾವು ಮಾಡಬೇಕಿದೆ”
ಇದು ಆಕೆಯ ಭಾಷಣದ ಒಂದು ಝಲಕು !
*****
ಒಂದು ದಿನ ಬೆಳಿಗ್ಗೆ ಇದ್ದಕಿದ್ದಂತೆ ಆ ಸಮಾಜಸೇವಕಿ ಸೊಸೆಯ ಮನೆಯ ಟೇರೆಸಿನ ಮೇಲೆ ಕಾಗೆಗಳು ‘ಕಾವ್ ಕಾವ್’ ಅನ್ನತೊಡಗಿದ್ದವು ! ತಮ್ಮ ಗೂಡಿಗೆ ಬೆಂಕಿ ಬಿದ್ದಂತೆ ಅವು ಹಾಹಾಕಾರ ಎಬ್ಬಿಸಿದ್ದವು ! ಗುಬ್ಬಿಗಳು ಕೂಡ ಅಳುಧ್ವನಿಯಲ್ಲಿ ಚಿಂವ್ಗುಟ್ಟುತ್ತಿದ್ದವು !
ಅಕ್ಕಪಕ್ಕದವರಿಗೆ ಏನೊಂದೂ ತಿಳಿಯದಂತಾಯಿತು ! ನಡೆಯಬಾರದ್ದೇನೋ ನಡೆದಿದೆ ಎಂದುಕೊಂಡರೂ ನಡೆದಿರುವುದು ಏನು ಎಂಬುದು ಅವರಿಗೆ ಗೊತ್ತಾಗಲಿಲ್ಲ ! ಗಲ್ಲಿಯವರೆಲ್ಲ ಒಂದು ಕಡೆ ಸೇರಿ ಗುಜುಗುಜು ಆರಂಭಿಸಿದ್ದರು ! ಎರಡು ಮತ್ತು ಮೂರನೇ ಮಹಡಿಗಳಲ್ಲಿ ಬಾಡಿಗೆದಾರರಿದ್ದರು. ತಮ್ಮ ಮನೆಯ ಟೇರೆಸ್ ಮೇಲೆ ಏನೋ ನಡೆದಿದೆ ಎಂಬ ಗುಮಾನಿ ಅವರಿಗೆ ಬಂತು. ಬಾಡಿಗೆದಾರ ಶಿವಬಾ ಪರೀಟ್ ಟೇರೆಸ್ ಮೇಲೆ ಹೋದ.
ಅಲ್ಲೆಲ್ಲ ತಡೆದುಕೊಳ್ಳಲಾರದಂಥ ದುರ್ಗಂಧ ಹರಡಿತ್ತು ! ಯಾವುದೋ ಪ್ರಾಣಿ ಸತ್ತು ಕೊಳೆತು ಹೋದ ಆ ದುರ್ಗಂಧವನ್ನು ತಡೆದುಕೊಳ್ಳಲಾರದೇ ಶಿವಬಾ ದಡದಡನೇ ಕೆಳಗಿಳಿದು ಬಂದು ಸೇರಿದವರಿಗೆಲ್ಲ ಹೇಳಿದ, “ಅಲ್ಲೇನೋ ಸತ್ತ ಕೊಳತಾಂಗ ವಾಸ ಬರಾಕತ್ತೇತಿ”
ಪಂಚರೂ ಸೇರಿದರು. ಬೆಳಿಗ್ಗೆ ಬೆಳಿಗ್ಗೆ ಗಟಾರು ಸ್ವಚ್ಛಗೊಳಿಸಲು ಬಂದಿದ್ದ ಕಾರ್ಮಿಕರಿಗೆ ಟೇರೆಸ್ ಮೇಲೆ ಹೋಗಿ ನೋಡಿಕೊಂಡು ಬರುವಂತೆ ಹೇಳಲಾಯಿತು. ಅವರೆಲ್ಲ ಟೇರೆಸ್ ಏರಿದರು.
ಮೇಲೆ ಹೋಗಿ ನೋಡಿದರೆ ಆ ಮುದುಕಿ ಇರುತ್ತಿದ್ದ ಕೋಣೆಯಿಂದಲೇ ಆ ದುರ್ಗಂಧ ಹರಡಿತ್ತು ! ಕಾರ್ಮಿಕರು ಪಂಚರನ್ನು ಕೂಗಿ ಕರೆದರು. ಪಂಚರು ಮೇಲೆ ಬಂದು ಆ ಕೋಣೆಯ ಬಾಗಿಲು ಮುರಿಸಿ ಒಳಹೊಕ್ಕರು.
ಅವರೆಲ್ಲರ ತಲೆ ಸುತ್ತಿದಂತಾಯಿತು ! ಒಳಗಿನ ದೃಶ್ಯ ಭಯಂಕರವಾಗಿತ್ತು ! ‘ಹೆಣ, ಹೆಣ’ ಎನ್ನುತ್ತ ಅವರೆಲ್ಲ ಕೂಗು ಹಾಕತೊಡಗಿದರು !
ಶಾಂತಾಬಾಯಿಯ ಹೆಣ ಮಂಚದ ಮೇಲಿನಿಂದ ಕೆಳಗೆ ಬಿದ್ದು ಕೊಳೆತು ಹೋಗಿತ್ತು !
ಯಾವ ಶಾಂತಾಬಾಯಿ ಪಡಬಾರದ ಕಷ್ಟಗಳನ್ನೆಲ್ಲ ಸಹಿಸಿ, ತನ್ನ ಮೂವರು ಮಕ್ಕಳನ್ನು ಬೆಳೆಸಿ, ಓದಿಸಿ ವಿದ್ಯಾವಂತರನ್ನಾಗಿಸಿ ಆದರ್ಶ ತಾಯಿ ಎಂಬುದಾಗಿ ಗೌರವಿಸಲ್ಪಡುತ್ತಿದ್ದಳೋ ಅಂಥವಳ ದೇಹವನ್ನು ಕ್ರೀಮಿ-ಕೀಟಗಳು ಮುಕ್ಕಿ ತಿನ್ನುತ್ತಿದ್ದವು ! ಅವೆಲ್ಲ ಆಕೆಯ ಮಕ್ಕಳಂತೆಯೇ ಆಕೆಯ ಮಾಂಸವನ್ನು ತಿಂದು ಕೊಬ್ಬಿಕೊಂಡು ಓಡಾಡಿಕೊಂಡಿದ್ದವು !
ಅಲ್ಲಿ ಶಾಂತಾಬಾಯಿಯ ದೇಹದ ಎಲುಬಿನ ಹಂದರ ಮಾತ್ರ ಉಳಿದಿತ್ತು !
ಮೂಗು ಮುಚ್ಚಿಕೊಂಡೇ ಬಂದು ನೋಡಿದ ಗಲ್ಲಿಯವರೆಲ್ಲರ ಎದೆ ಒಡೆದಂತಾಗಿತ್ತು ! ಅವರ ಮನಸ್ಸುಗಳು ಆ ಆದರ್ಶ ತಾಯಿಗೆ ಬಂದ ದುರ್ಗತಿಗೆ ಕಂಡು ರೋಧಿಸತೊಡಗಿದ್ದವು. ಅವರ ಹೃದಯ ಘಾಸಿಗೊಂಡಿತ್ತು !
*****
ಮುಂಬಾಯಿಯ ಮಕ್ಕಳಿಗೆ ಸುದ್ದಿ ತಲುಪಿಸಲಾಯಿತು.
ಕೃತಘ್ನ ಆ ಭಂಡ ಮಕ್ಕಳು ಬರಲೇ ಇಲ್ಲ ; “ನಾವ್ ಬಂದ್ರೇನ ಆಕಿ ಬದಕ್ತಾಳು ? ವಿನಾಯಕ ಅಂತ್ಯಸಂಸ್ಕಾರ ಮಾಡಿ ಮುಗಸ್ಲಿ. ನಾವ್ ತಿಥಿ ಮಾಡಾಕ ಬರ್ತೇವು” ಎಂದು ಅಲ್ಲಿಂದಲೇ ಸುದ್ದಿ ಕಳುಹಿಸಿದರು !
ಫೋನಿನಲ್ಲಿ ಅವರ ಮಾತುಗಳನ್ನು ಕೇಳಿದ ಪಂಚರು ಅವಕ್ಕಾದರು !
“ಹಿಂಥಾ ನಾಲಾಯಕ್ ಮಕ್ಳು ಯಾರ್ ಹೊಟ್ಟ್ಯಾಗೂ ಹುಟ್ಟಬಾರ್ದು !”
*****
ಪೋಲೀಸರಿಗೆ ಸುದ್ದಿ ಹೋಯಿತು.
ಪೋಲೀಸರು ಬರುತ್ತಲೇ ಸಮಾಜಸೇವಕಿಯಾಗಿದ್ದ ಶಾಂತಾಬಾಯಿಯ ಸೊಸೆ ಬಾಯಿ ಬಾಯಿ ಬಡೆದುಕೊಂಡು ಅಳುವ ನಾಟಕವನ್ನು ಚೆನ್ನಾಗಿಯೇ ನಿಭಾಯಿಸಿದಳು !
ವಿನಾಯಕನೂ ದುಃಖದಲ್ಲಿದ್ದವರಂತೆ ಸೋಗು ಹಾಕಿದ್ದ !
ಪೋಲೀಸರ ವಿಚಾರಣೆ ನಡೆಸಿದ್ದರು.
“ಏನ್ರಿ ವಿನಾಯಕರಾವ್, ಈ ಹೆಣಾ ಯಾರ್ದು ?”
“ನಮ್ಮ ತಾಯಿದರಿ ಸರ್”
“ನಿಮ್ಮ ತಾಯಿಯದ ಅಂತ ಹೆಂಗ ಹೇಳ್ತೇರಿ ?”
“ಹ್ವಾದ ವಾರ ನಾವ್ ಮೂರೂ ಮಂದಿ ಅಣತಮರು ಮಾತಾಡಿಕೊಂಡಾಂಗ ಪಾಲಾ ಮಾಡ್ಕೊಂಡ ಮ್ಯಾಲ ನಮ್ಮ ತಾಯ್ಗಿ ಟೇರೆಸ್ ಮ್ಯಾಲಿನ ರೂಮಿನ್ಯಾಗ ಇರೂ ವ್ಯವಸ್ಥಾ ಮಾಡಿದ್ದ್ಯುರಿ.”
“ನಿಮ್ಮ ತಾಯೀನ ನೋಡಾಕ ಈ ಎಂಟ ದಿವ್ಸದಾಗ ಯಾವಾಗರೇ ಮ್ಯಾಲ ಹೋಗಿದ್ರಿ ?”
“ಇಲ್ರಿ ಸರ್”
“ಯಾಕ್ ?”
“ಈ ತಿಂಗ್ಳ ಹಿರಿಯಣ್ಣ, ಆಕೀನ ನೋಡ್ಕೊಳ್ಳೂ ಮಾತಾಗಿತ್ರಿ”
“ಅವ್ರಾದ್ರೂ ನೋಡ್ಯಾರೇನು ?”
“ಇಲ್ರಿ ಸರ್, ಅವ್ರು ಮುಂಬಾಯಾಗ ಇರ್ತಾರು”
“ಅವ್ರ ಅಲ್ಲಿಂದ ಹೆಂಗ್ ನೋಡ್ತಾರ್ರಿ ವಿನಾಯಕರಾವ್ ?”
“ಪಗಾರದ ಮ್ಯಾಲ ಒಂದಾಳ ನೇಮಿಸು ವಿಚಾರಿತ್ರಿ ಸರ್”
“ಆ ಆಳ ಎಲ್ಲಿ ಅದಾನು ?”
“ಗೊತ್ತಿಲ್ರಿ ಸರ್”
“ಯಾಕ ?”
“ಅದನ್ನ ಹಿರಿ ಅಣ್ಣಾನ ನಿರ್ಧರಿಸ್ಬೇಕಿತ್ರಿ”
“ಹೋಗ್ಲಿ, ಆ ಆಳಮನಸ್ಯಾ ಬಂದಾನಿಲ್ಲೋ ? ಅಂವಾ ಚೊಲೋತಂಗ ನೋಡ್ಕೋತಾನೋ ಇಲ್ಲೋ ನೋಡ್ಬೇಕಾಗಿತ್ತಲ್ಲ ನೀವ್ ?”
“ನೋಡ್ಬೇಕಿತ್ರಿ ಸರ್ ... ...”
“ನೋಡ್ಬೇಕಿತ್ತು ಅಂತೀರಿ ! ಮತ್ತ್ಯಾಕ ನೋಡದಿಲ್ಲ ?”
“ಹೇಳ್ಯನಲ್ರಿ. ಈ ತಿಂಗ್ಳ ಜವಾಬದಾರಿ ಹಿರಿ ಅಣ್ಣಂದ ಇತ್ತು... ...”
“ಶಬ್ಬಾಶ್ ... ! ಗುಡ್... ! ವೇರಿ ಗುಡ್ ! ಹಿಂಥಾ ಮಕ್ಳು ಪ್ರತಿಯೊಬ್ಬ ತಂದೆ-ತಾಯಿ ಹೊಟ್ಟ್ಯಾಗ ಹುಟ್ಟಿ ಬಂದ್ರ ಕಣ್ಣಾಗೀನು ಕಣ್ಣೀರ ಕರಗಿ ಹೋಗ್ತಾವು ! ಲೇ ಹುಚ್ಚ, ಜನಕಲ್ಲದಿದ್ರೂ ಮನಕ್ಕಾದ್ರೂ ನಾಚಬೇಕಲೇ ! ಖರೇ ಅಂದ್ರ ನಿಮ್ಮಂಥ ಬದ್ಮಾಸ್ ಮಕ್ಕಳನ್ನ ಹುಟ್ಟಿಸಿದ ಆ ತಾಯಿ ಭಾಳ ದೊಡ್ಡ ತಪ್ಪ ಮಾಡಿದಂಗಾತು ! ... ...”
ಸಮಾಜಸೇವಕಿ ಸೊಸೆಯತ್ತ ತಿರುಗಿದ ಪೋಲೀಸ್ ಇನ್ಸಪೆಕ್ಟರ್, “ಏನೇ ಮಿಡ್ಕಲಾಡಿ, ಮಹಿಳಾ ವಿವೋಚನಾ ಹೋರಾಟ ಮಾಡೂ ಸಮಾಜಸೇವಕಿ ಹೌದಿಲ್ಲೋ ನೀ ? ಇದ ಏನ್ ನಿನ್ನ ಸಮಾಜ ಸೇವಾ ? ಇದ ಏನ್ ನಿನ್ನ ಮಹಿಳಾ ವಿವೋಚನಾ ? ಹೇಳೋದ ಆಚಾರ ; ತಿನ್ನೋದು ಬದ್ನಿಕಾಯಿ ! ಹಂಗ ನೋಡ್ಯರ ನಿಮ್ಮ ಮೈಮ್ಯಾಲ ಡಾಂಬರ್ ಸುರುವಿ ಬಾರಕೋಲಲೇ ಬಾರ್ಸಬೇಕ ! ಆದರ ಕಾನೂನದಾಗ ಹಂಥಾ ಅವಕಾಶಾ ಇಲ್ಲಂತ ಬಿಟ್ಟೇನಿ. ಥೂ ನಿಮ್ಮ ಜನ್ಮಕ !”
ಇನ್ಸಪೆಕ್ಟರ್ ಎದ್ದು, ಆ ತಾಯಿಯ ಎಲುಬಿನ ಹಂದರಕ್ಕೆ ಶಿರಬಾಗಿ ನಮಸ್ಕರಿಸಿದ ; ಆತನಿಗೆ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ ! ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಿದವನೇ ಅಲ್ಲಿಂದ ಹೊರಟು ಹೋದ !
ಪಂಚರ ಹೇಳಿಕೆಯಿಂದ ಶಾಂತಾಬಾಯಿ ಅನ್ನ-ನೀರಿಲ್ಲದೇ ಚಡಪಡಿಸಿ ತೀರಿಕೊಂಡಿದ್ದಾಳೆ ಎಂಬುದಾಗಿ ಪಂಚನಾಮೆ ಆಯಿತು !
*****
ಆ ಆದರ್ಶ ತಾಯಿಗೆ ಸತ್ತಮೇಲೆಯೂ ಅಪಮಾನವಾಗಬಾರದೆಂದು ಪಂಚರೇ ಮುಂದೆ ನಿಂತು ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದರು !
ಶಾಂತಾಬಾಯಿಯ ಮಕ್ಕಳು ಮತ್ತು ಸೊಸೆಯಂದಿರನ್ನು ಜನ ನಿಂದಿಸತೊಡಗಿದರು ! ಅದರಲ್ಲಂತೂ ಹತ್ತಿರವೇ ಇದ್ದರೂ ಹೆತ್ತತಾಯಿಯನ್ನು ಮರೆತ ಕೃತಘ್ನ ಮಗ ವಿನಾಯಕ ಮತ್ತು ಸಮಾಜಸೇವಕಿಯ ಸೋಗಿನ ಸೊಸೆಯನ್ನು ನಿಂದಿಸುತ್ತ ಮಹಾತಾಯಿಯ ಅಂತ್ಯಸಂಸ್ಕಾರಕ್ಕೆ ಎಲ್ಲ ತಯಾರಿ ಮಾಡಿಕೊಂಡರು. ಒಂದು ಚೀಲದಲ್ಲಿ ಆ ತಾಯಿಯ ಹೆಣದ ಎಲುಬುಗಳನ್ನೆಲ್ಲ ತುಂಬಿ, ಮಸಣಕ್ಕೆ ಒಯ್ದು ಬೆಂಕಿ ಇಟ್ಟರು !
‘ಕಣ್ಣೀರು ಕಮರಿ ಹೋದವು !’
ಮಸಣಕ್ಕೆ ಬಂದವರೆಲ್ಲ ಕಣ್ಣೀರುಗರೆಯುತ್ತ ಮನೆಗೆ ಮರಳಿದರು.
ನಿಜವಾಗಿಯೂ ಜೀವನ ಎನ್ನುವುದು ಎರಡು ಕ್ಷಣದ ಆಟವೇ ಅಲ್ಲವೆ ? ಸಂಬಂಧ-ಗಿಂಬಂಧ, ಪ್ರೇಮ ಅನ್ನುವುದೆಲ್ಲ ಬರಿ ಬುರುಡೆ ! ಕೇವಲ ತೋರಿಕೆಯಷ್ಟೆ ! ಅದೆಲ್ಲವನ್ನೂ ಸೃಷ್ಟಿಸಿಕೊಂಡವರೂ ನಾವೇ ಅಲ್ಲವೆ ?
*****
“ಅವ್ವ, ನೀನು ಪ್ರತಿಕ್ಷಣ ನೆನಪಾಗುತ್ತಿಯಾ. ನೀನಿಲ್ಲದೇ ನಾವೆಲ್ಲ ತಬ್ಬಲಿಗಳಾಗಿದ್ದೇವೆ ! ನಿನ್ನ ಆದರ್ಶದ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ. ನಿನ್ನ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡು ನಿನಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದೇವೆ”
ದಿನಪತ್ರಿಕೆಗಳಲ್ಲಿ ಶಾಂತಾಬಾಯಿಯ ದೊಡ್ಡದಾದ ಫೋಟೋ ಹಾಕಿಸಿ ಆ ನಿರ್ದಯಿ ಮಕ್ಕಳು ಶ್ರದ್ಧಾಂಜಲಿ ಸಲ್ಲಿಸಿದ್ದರು !
ಪತ್ರಿಕೆಗಳಲ್ಲಿ ಅದನ್ನು ಕಂಡವರೆಲ್ಲ ‘ಕರುಳ ಕಣ್ಣೀರು ಕಮರಿ ಹೋದವು’ ಎಂದು ನೊಂದುಕೊಂಡರು !
*****

Tuesday, August 14, 2012

ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ

                                ದಿನೇಶ ಅಮೀನಮಟ್ಟು
ಮಳೆ ನಿಂತರೂ ಒಂದಷ್ಟು ಹೊತ್ತು ಮಳೆಹನಿ ನಿಲ್ಲುವುದಿಲ್ಲ. ಅಣ್ಣಾ ತಂಡವನ್ನು ಬರ್ಖಾಸ್ತುಗೊಳಿಸಲಾಗಿದ್ದರೂ ಅದು ಪ್ರಾರಂಭಿಸಿದ್ದ ಚಳವಳಿ ಬಗ್ಗೆ ಚರ್ಚೆ-ವಿಶ್ಲೇಷಣೆಗಳು ನಿಂತಿಲ್ಲ, ಇದು ಇನ್ನಷ್ಟು ಕಾಲ ಮುಂದುವರಿಯಲಿದೆ.

ಮಿಂಚಿಮರೆಯಾಗಿ ಹೋದ ಈ ಚಳವಳಿಯ ಗರ್ಭಪಾತಕ್ಕೆ ಕಾರಣರಾದ ಖಳನಾಯಕರು ಯಾರು ಎನ್ನುವುದನ್ನು ಗುರುತಿಸುವ ಕೆಲಸ ಈಗ ಪ್ರಾರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಎಲ್ಲರೂ ಅಣ್ಣಾತಂಡದ ಪ್ರಮುಖ ಸದಸ್ಯರಾದ ಅರವಿಂದ್ ಕೇಜ್ರಿವಾಲ್, ಕಿರಣ್‌ಬೇಡಿ ಮತ್ತು ಪ್ರಶಾಂತ್ ಭೂಷಣ್ ಮೇಲೆ ಎರಗಿಬಿದ್ದಿದ್ದಾರೆ.


`ಸೃಷ್ಟಿ, ಪಾಲನೆ ಮತ್ತು ಲಯ`ದ ಮೂರೂ ಕೆಲಸಗಳನ್ನು ಈ ತ್ರಿಮೂರ್ತಿಗಳೇ ಮಾಡಿದ್ದು ಎಂದು ಅಣ್ಣಾಬೆಂಬಲಿಗರು ಆರೋಪಿಸತೊಡಗಿದ್ದಾರೆ. ಚಳವಳಿ ಹಾದಿ ತಪ್ಪಲು ಕಾರಣವಾದ ಇವರ ಪಾತ್ರ  ಕ್ಷಮಿಸಿ ಬಿಡುವಂತಹದ್ದು ಖಂಡಿತ ಅಲ್ಲ.


ಆದರೆ ಇವರಷ್ಟೇ ಖಳನಾಯಕರೇ? ಹಾಗೆಂದು ತೀರಾ ಸರಳವಾಗಿ ತೀರ್ಮಾನಿಸಿಬಿಟ್ಟರೆ ಈ ಚಳವಳಿಯ ಸೋಲು-ಗೆಲುವುಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಾರದು.

ಈ ತ್ರಿಮೂರ್ತಿಗಳಷ್ಟೇ ಖಳರು ಅಲ್ಲದೆ ಇದ್ದರೆ ಬೇರೆ ಯಾರು ? ಕೆಲವರು ಅಣ್ಣಾಹಜಾರೆಯವರನ್ನೇ ಹೆಸರಿಸುತ್ತಾರೆ. ಸ್ವಲ್ಪ ಮಟ್ಟಿಗೆ ಇದು ನಿಜ ಕೂಡಾ. ಹಜಾರೆ ಅವರು ಸಜ್ಜನ, ಪ್ರಾಮಾಣಿಕ, ನಿಸ್ವಾರ್ಥಿ, ಸರಳಜೀವಿ ಎನ್ನುವುದರ ಬಗ್ಗೆ ಬಹಳ ಮಂದಿಗೆ ಅನುಮಾನ ಇಲ್ಲ.


ಆದರೆ ಈ ಗುಣಗಳಿಂದಷ್ಟೇ ನಾಯಕನಾಗಲು ಸಾಧ್ಯವೇ ಎನ್ನುವುದು ಪ್ರಶ್ನೆ. ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ನಂತರದಲ್ಲಿ ನಡೆದ ಎರಡು ಪ್ರಮುಖ ಚಳವಳಿಗಳನ್ನು ಮುನ್ನಡೆಸಿದ್ದ ಗಾಂಧೀಜಿ ಮತ್ತು ಜಯಪ್ರಕಾಶ್ ನಾರಾಯಣ್ ಕೇವಲ ಸಜ್ಜನರು ಮತ್ತು ಪ್ರಾಮಾಣಿಕರಾಗಿರಲಿಲ್ಲ.


ಅವರು ಬುದ್ದಿವಂತರೂ ಆಗಿದ್ದರು.  ವಿಸ್ತಾರವಾದ ಓದು, ರಾಷ್ಟ್ರ-ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಅರಿವು, ಪ್ರವಾಸ ಮತ್ತು ಜನರ ಜತೆಗಿನ ಒಡನಾಟ ಅವರಿಗೆ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುವ ತೀಕ್ಷ್ಣಗ್ರಹಣಶಕ್ತಿಯನ್ನು ತಂದು ಕೊಟ್ಟಿತ್ತು.  ಒಂದು ಅನ್ನದ ಅಗುಳನ್ನು ಮುಟ್ಟಿಯೇ ಪಾತ್ರೆಯಲ್ಲಿದ್ದ ಅನ್ನ ಬೆಂದಿದೆಯೇ ಇಲ್ಲವೇ ಎನ್ನುವುದನ್ನು ಹೇಳುವಷ್ಟು ಸಮಾಜದ ನಾಡಿಮಿಡಿತವನ್ನ್ನು ಬಲ್ಲವರಾಗಿದ್ದರು.

ಜನಪ್ರಿಯತೆಯಲ್ಲಿ ತೇಲಿಹೋಗದೆ ಅದನ್ನು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಳ್ಳುವ ನಿರ್ವಹಣಾ ಶಕ್ತಿ ಮತ್ತು ಸಂಯಮ ಅವರಲ್ಲಿತ್ತು. ಜಾತಿ,ಧರ್ಮ,ಪ್ರದೇಶಗಳಲ್ಲಿ ಒಳಗಿಂದೊಳಗೆ ಒಡೆದುಹೋಗಿರುವ ದೇಶದಲ್ಲಿ ಒಂದು ಸಾಮೂಹಿಕ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗಲು ಇಂತಹ ಸಾಮರ್ಥ್ಯಬೇಕಾಗುತ್ತದೆ. ಈ ಗುಣಗಳು ಅಣ್ಣಾಹಜಾರೆಯವರಲ್ಲಿ ಇದ್ದಿದ್ದರೆ ಭ್ರಷ್ಟಾಚಾರ ವಿರೋಧಿ ಚಳವಳಿ ನಡುಹಾದಿಯಲ್ಲಿಯೇ ಅಪಘಾತಕ್ಕೆ ಈಡಾಗುತ್ತಿರಲಿಲ್ಲ.

ಅಣ್ಣಾಚಳವಳಿ ಹಾದಿ ತಪ್ಪಲು ಮಾಧ್ಯಮರಂಗ ವಹಿಸಿದ ಖಳನಾಯಕನ ಪಾತ್ರವೇ ಕಾರಣ ಎನ್ನುವವರೂ ಇದ್ದಾರೆ. ಈ ಆರೋಪವನ್ನು ಮಾಡುವ ಅಣ್ಣಾತಂಡದ ಸದಸ್ಯರು ಮತ್ತು  ಬೆಂಬಲಿಗರು  ಕೊನೆದಿನಗಳಲ್ಲಿ ಮಾಧ್ಯಮಗಳ ನಿರ್ಲಕ್ಷ್ಯ ಮತ್ತು ಟೀಕೆಗಳನ್ನು ಉದಹರಿಸುತ್ತಿದ್ದಾರೆ.


ಇದು ಮಾಧ್ಯಮಗಳನ್ನು ಅರ್ಥಮಾಡಿಕೊಳ್ಳಲಾಗದ ಅವರ ಅಜ್ಞಾನವನ್ನಷ್ಟೇ ತೋರಿಸುತ್ತದೆ. ಕೊನೆದಿನಗಳ ನಿರ್ಲಕ್ಷ್ಯಗಿಂತಲೂ  ಅಣ್ಣಾಚಳವಳಿಗೆ ಹೆಚ್ಚು ಹಾನಿ ಉಂಟು ಮಾಡಿದ್ದು ಪ್ರಾರಂಭದ ದಿನಗಳ ಅತಿಪ್ರಚಾರ.


ಕಣ್ಣುಕಟ್ಟಿನ ಪ್ರಚಾರ ವೈಖರಿ ಮೂಲಕ ಉಪವಾಸ ಶಿಬಿರದ ಮುಂದೆ ಸೇರಿದ್ದ ಸಾವಿರ ಜನರನ್ನು  ಲಕ್ಷವಾಗಿ, ಲಕ್ಷ ಜನರನ್ನು ಕೋಟಿಯಾಗಿ ಮಾಧ್ಯಮಗಳು ಬಿಂಬಿಸಿದ್ದನ್ನು ನಿಜವೆಂದೇ ನಂಬಿದ ಅಣ್ಣಾತಂಡದ ಸದಸ್ಯರು ದೇಶದ 120 ಕೋಟಿ ಜನ ತಮ್ಮ ಬೆನ್ನಹಿಂದೆ ಇದ್ದಾರೆ ಎಂದು ಭ್ರಮಿಸಿಬಿಟ್ಟರು.

 
ಮೂರೂಹೊತ್ತು ಟಿವಿ ಪರದೆಗಳಲ್ಲಿ, ಪತ್ರಿಕೆಗಳ ಪುಟಗಳಲ್ಲಿ ಕಾಣಿಸುವ ತಮ್ಮ ಮುಖಗಳನ್ನು ಪ್ರೀತಿಸುತ್ತಾ ಆತ್ಮರತಿಗೆ ಜಾರಿಬಿಟ್ಟರು. ಮಾಧ್ಯಮರಂಗ ವಾಣಿಜ್ಯೀಕರಣಗೊಂಡ ಬದಲಾದ ಪರಿಸ್ಥಿತಿಯಲ್ಲಿ ಮುಖ್ಯವಾಗಿ ಟಿವಿ ಚಾನೆಲ್‌ಗಳು ಹುಟ್ಟು-ಸಾವುಗಳೆರಡನ್ನು ಸಂಭ್ರಮದಿಂದ ಆಚರಿಸುತ್ತದೆ.

ಈ ಭರದಲ್ಲಿ ಸರಿ-ತಪ್ಪು ಇಲ್ಲವೆ ಒಳ್ಳೆಯದು-ಕೆಟ್ಟದನ್ನು ಗುರುತಿಸುವ ನ್ಯಾಯಪ್ರಜ್ಞೆ ಜನಪ್ರಿಯತೆಯ ಪ್ರವಾಹದಲ್ಲಿ ಕೊಚ್ಚಿಕೊಂಡುಹೋಗುತ್ತದೆ. ಮಾಧ್ಯಮಗಳಿಂದ ಪ್ರಚಾರ ಬಯಸುವವರಿಗೆ ಇದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲದೆ ಇದ್ದರೆ ಅಣ್ಣಾತಂಡಕ್ಕಾದ ಗತಿಯೇ ಆಗುತ್ತದೆ.

ಮಾಧ್ಯಮಗಳ ಪ್ರಚಾರದ ಊರುಗೋಲಿನ ಬಲದಿಂದ ಎದ್ದುನಿಂತದ್ದು, ಆ ಊರುಗೋಲನ್ನು ಕಿತ್ತುಕೊಂಡ ಕೂಡಲೇ ಕುಸಿದುಬೀಳುತ್ತದೆ. ಹಾಗೆಯೇ ಆಯಿತು.

ಇವರೆಲ್ಲರ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ ಅಣ್ಣಾಚಳವಳಿಯ ವೈಫಲ್ಯದಲ್ಲಿ ಖಳನಾಯಕರ ಪಾತ್ರವಹಿಸಿದ್ದ ಬಹುಮುಖ್ಯವಾದ ಸಮುದಾಯವನ್ನು ಎಲ್ಲರೂ ಮರೆತುಬಿಟ್ಟಿದ್ದಾರೆ. ಅದು ಚಳವಳಿಗೆ ಸೇರುತ್ತಿದ್ದ ಜನ. ಜಯಪ್ರಕಾಶ್ ನಾರಾಯಣ್ ನೇತೃತ್ವದ `ಸಂಪೂರ್ಣ ಕ್ರಾಂತಿ`ಯ ನಂತರದ ದಿನಗಳಲ್ಲಿ ಒಂದು ಚಳವಳಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಎಂದೂ ಭಾಗವಹಿಸಿರಲಿಲ್ಲ.

`ನಾನೇ ಅಣ್ಣಾ` ಎಂದು ತಲೆಪಟ್ಟಿ ಕಟ್ಟಿಕೊಂಡು, ಎದೆಮೇಲೆ ಬರೆಸಿಕೊಂಡು, ಹಗಲುಹೊತ್ತಿನಲ್ಲಿ ಘೋಷಣೆ ಕೂಗುತ್ತಾ, ರಾತ್ರಿಹೊತ್ತು ಕ್ಯಾಂಡಲ್ ಹಚ್ಚುತ್ತಾ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಕ್ರೀಯಾಶೀಲರಾಗಿ `ಅರಬ್ ವಸಂತ` ಇನ್ನೇನು ಭಾರತದಲ್ಲಿ ಪ್ರಾರಂಭವಾಗಿಯೇ ಬಿಟ್ಟಿತೆನ್ನುವ ಭ್ರಮಾಲೋಕವನ್ನು ಸೃಷ್ಟಿಸುತ್ತಿದ್ದವರು ಚಳವಳಿಯಲ್ಲಿ ಭಾಗವಹಿಸಿದ್ದ ಜನ.

ಅಣ್ಣಾಹಜಾರೆ ಅವರ ಮೊದಲೆರಡು ಉಪವಾಸಗಳ ಕಾಲದಲ್ಲಿ ಸಕ್ರಿಯವಾಗಿದ್ದ ಈ ಜನಸಮೂಹ ನಂತರದ ಎರಡು ಉಪವಾಸಗಳ ಕಾಲಕ್ಕೆ ಆಸಕ್ತಿಯನ್ನು ಕಳೆದುಕೊಂಡುಬಿಟ್ಟಿತು.

ಹಿಂದಿನಷ್ಟು ಜನ ಸೇರುತ್ತಿಲ್ಲ ಎಂದು ಗೊತ್ತಾದ ಕೂಡಲೇ ಆಡಳಿತಾರೂಢ ಪಕ್ಷ ಚಳವಳಿಗಾರರನ್ನು ಕರೆಸಿ ಮಾತನಾಡಲು ಕೂಡಾ ಹೋಗದೆ ಸುಮ್ಮನಾಯಿತು, ಜನ ಕಡಿಮೆ ಸೇರುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಮಾಧ್ಯಮಗಳು ಕೂಡಾ ಹಿಂದೆ ಸರಿದುಬಿಟ್ಟವು. ಅಣ್ಣಾತಂಡ ಯುದ್ಧಮುಗಿಯವ ಮೊದಲೇ ಶಸ್ತ್ರತ್ಯಾಗ ಮಾಡಲು ಮುಖ್ಯ ಕಾರಣ ತಮ್ಮ ಹಿಂದೆ ಲಕ್ಷಲಕ್ಷ ಸಂಖ್ಯೆಯಲ್ಲಿದ್ದೇವೆ ಎಂಬ ನಂಬಿಕೆ ಹುಟ್ಟಿಸಿದ್ದ ಜನ ದೂರವಾಗಿದ್ದು.

ಈ ಜನ ಹೀಗೆ ಯಾಕೆ ವರ್ತಿಸಿದರು ಎನ್ನುವುದನ್ನು ವಿಶ್ಲೇಷಿಸುವ ಮೊದಲು ಇವರು ಯಾರು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ನಡೆಯುವ ಚಳವಳಿಗಳನ್ನು ಒಂದು ನಿರ್ದಿಷ್ಟವಾದ ಆವರಣದೊಳಗೆ ಸೇರಿಸುವುದು ಕಷ್ಟವಾದರೂ ಸ್ಥೂಲವಾಗಿ ಇವುಗಳನ್ನು ರಾಜಕೀಯ ಮತ್ತು ರಾಜಕೀಯೇತರ  ಎಂದು ಗುರುತಿಸಬಹುದು.

ಈ ವ್ಯಾಖ್ಯಾನ ಕೂಡಾ ಚಳವಳಿಗಳ ಸ್ಪಷ್ಟ ಚಿತ್ರವನ್ನು ನೀಡುವುದಿಲ್ಲ. ರಾಜಕೀಯ ಉದ್ದೇಶದ ಚಳವಳಿಗಳ ಬಗ್ಗೆ ಯಾವುದೇ ಗೊಂದಲ ಇಲ್ಲ. ಉದಾಹರಣೆಗೆ ಕಾಂಗ್ರೆಸ್,ಬಿಜೆಪಿ, ಕಮ್ಯುನಿಸ್ಟ್ ಇತ್ಯಾದಿ ಪಕ್ಷಗಳು ನಡೆಸುವ ಚಳವಳಿಗಳು.

ಇಲ್ಲಿ ಎಲ್ಲವೂ ಪಾರದರ್ಶಕ. ಸಮಸ್ಯೆ ರಾಜಕೀಯೇತರ ಚಳವಳಿಗಳದ್ದು. ನಿರ್ದಿಷ್ಟವಾದ ರಾಜಕೀಯ ಸಿದ್ಧಾಂತವನ್ನು ಹೊಂದಿಯೂ ಚುನಾವಣಾ ರಾಜಕೀಯದಿಂದ ದೂರವಾಗಿರುವ ರಾಜಕೀಯೇತರ ಚಳವಳಿಗಳಿವೆ.

ಇದೇ ರೀತಿ  ರಾಜಕೀಯೇತರ ಚಳವಳಿಗಳಾಗಿ ಪ್ರಾರಂಭಗೊಂಡು ಕ್ರಮೇಣ ನೇರ ಚುನಾವಣೆಯಲ್ಲಿ ಪಾಲ್ಗೊಂಡ ಚಳವಳಿಗಳೂ ಇವೆ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕವೂ ಸೇರಿದಂತೆ ದೇಶದ ಬೇರೆಬೇರೆ ಭಾಗಗಳಲ್ಲಿನ ರೈತ ಮತ್ತು ದಲಿತ ಚಳವಳಿಗಳು. ರಾಜಕೀಯ ಚಳವಳಿಗಳಲ್ಲಿ ಭಾಗವಹಿಸಿದವರು ಒಂದು ಪಕ್ಷದ ಸಿದ್ಧಾಂತಕ್ಕೆ ಬದ್ದರಾಗಿರುವವರು.

ರಾಜಕೀಯೇತರ ಚಳವಳಿಗೆ ವಿಶಾಲವಾದ ಹರಹು ಇರುತ್ತದೆ. ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಇಲ್ಲವೆ ಭೂಮಿ ಕಳೆದುಕೊಂಡವರು, ಮನೆ ಕಳೆದುಕೊಂಡವರು,ಅನ್ಯಾಯಕ್ಕೀಡಾದವರು...

ಹೀಗೆ ಬೇರೆಬೇರೆ ಜನವರ್ಗವನ್ನು ನಿರ್ದಿಷ್ಟವಾಗಿ ಗುರಿಯಾಗಿಟ್ಟುಕೊಂಡು ಈ ಚಳವಳಿಗಳು ನಡೆಯುತ್ತಿರುತ್ತವೆ. ಈ ಎರಡೂ ಬಗೆಯ ಚಳವಳಿಗಳಿಗೆ ಸ್ಪಷ್ಟವಾದ ಐಡೆಂಟಿಟಿ ಇರುತ್ತದೆ. ಇದರಿಂದಾಗಿ ಚಳವಳಿಯ ನಾಯಕರಿಗೆ ಕೂಡಾ ತಮ್ಮ ಉದ್ದೇಶ ಮತ್ತು ಸಾಗುವ ದಾರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ.

 ಆದರೆ ಬಹಳ ದೊಡ್ಡ ಕ್ಯಾನ್‌ವಾಸ್ ಇಟ್ಟುಕೊಂಡು ಪ್ರಾರಂಭವಾದ ಅಣ್ಣಾಚಳವಳಿಗೆ ಒಂದು ನಿರ್ದಿಷ್ಟ ಐಡೆಂಟಿಟಿ ಇರಲಿಲ್ಲ. ಇದು ಈ ಚಳವಳಿಯ ಶಕ್ತಿಯೂ ಹೌದು, ದೌರ್ಬಲ್ಯ ಕೂಡಾ. ಯಾವುದೇ ರಾಜಕೀಯ ಪಕ್ಷದ ಜತೆಗೆ ಗುರುತಿಸಿಕೊಳ್ಳದವರು ಮಾತ್ರವಲ್ಲ, ಗುರುತಿಸಿಕೊಂಡವರು ಕೂಡಾ ಎದೆಮೇಲಿದ್ದ ಪಕ್ಷದ ಬ್ಯಾಡ್ಜ್‌ಗಳನ್ನು ಕಿಸೆಯಲ್ಲಿಟ್ಟುಕೊಂಡು ಅಣ್ಣಾಬ್ಯಾಡ್ಜ್ ಧರಿಸಿ ಉಪವಾಸ ಕೂತಿದ್ದರು.

ಭ್ರಷ್ಟಾಚಾರ ಎನ್ನುವುದು ಈ ದೇಶದ ಬಡವನಿಂದ ಹಿಡಿದು ಶ್ರಿಮಂತರವರೆಗೆ, ಅಶಿಕ್ಷಿತರಿಂದ ಹಿಡಿದು ಶಿಕ್ಷಿತರವರೆಗೆ ಎಲ್ಲರನ್ನೂ ಆವರಿಸಿರುವ ಸಮಸ್ಯೆಯಾಗಿರುವ ಕಾರಣ ನಮ್ಮ ಗುರಿ ದೇಶದ 120 ಕೋಟಿ ಜನ ಎಂದು ಅಣ್ಣಾತಂಡ ತಿಳಿದುಕೊಂಡುಬಿಟ್ಟಿತು.

ತಂಡದ ಸದಸ್ಯರು ಎಲ್ಲರನ್ನೂ ಬನ್ನಿಬನ್ನಿ ಎಂದು ಕೈಬೀಸಿ ಕರೆಯಲಾರಂಭಿಸಿದರು. ಹೀಗೆ ಬಂದವರಲ್ಲಿ ಬಹುಸಂಖ್ಯಾತರು ಮಧ್ಯಮವರ್ಗಕ್ಕೆ ಸೇರಿರುವ ನಗರ ಕೇಂದ್ರಿತ, ಉದ್ಯೋಗಸ್ಥ, ಸದಾ ಸುರಕ್ಷತೆಯ ಕಕ್ಷೆಯೊಳಗೆ ಇರಬೇಕೆಂದು ಬಯಸುವ ಮತ್ತು ಯಾವುದೇ ಚಳವಳಿಯಲ್ಲಿ ಭಾಗವವಹಿಸಿ ಕಷ್ಟ-ನಷ್ಟ ಅನುಭವಿಸದವರು.

ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಹುಟ್ಟಿದ ಮತ್ತು ಆರ್ಥಿಕ ಉದಾರೀಕರಣದ ಯುಗದಲ್ಲಿ ಕಣ್ಣುಬಿಟ್ಟ 25-35 ವಯಸ್ಸಿನ ಆಜುಬಾಜಿನ ಈ ಯುವವರ್ಗ  ಲಾಭ-ನಷ್ಟದ ಲೆಕ್ಕಾಚಾರ ಇಟ್ಟುಕೊಂಡೇ ಮುಂದೆ ಹೆಜ್ಜೆ ಇಡುವವರು. `ಸೋಡಾಗ್ಯಾಸ್` ರೀತಿ ಒಮ್ಮೆಲೇ ಚಿಮ್ಮಿದ ಈ `ಯುವಬೆಂಬಲವನ್ನು ಅಣ್ಣಾತಂಡ ನಂಬಿತು. ನಂಬಿಕೆ ಕೈಕೊಟ್ಟಿತು.

 ಈ ಮಧ್ಯಮ ವರ್ಗ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಯಾವುದೇ ದೇಶದಲ್ಲಿ ರಾಜಕೀಯ ಇಲ್ಲವೆ ಸಾಮಾಜಿಕ ಬದಲಾವಣೆಯಲ್ಲಿ ಭಾಗವಹಿಸಿಲ್ಲ. ಇದನ್ನು ಹೇಳಿದಾಗ ಕೆಲವರು ಅರಬ್‌ರಾಷ್ಟ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಉದಾಹರಣೆ ಕೊಡಬಹುದು. ಅಲ್ಲಿನ ಮಧ್ಯಮವರ್ಗದಿಂದಲೇ ಚಳವಳಿ ಪ್ರಾರಂಭವಾದರೂ ಅದು ಅನ್ಯಾಯಕ್ಕೀಡಾದ ಎಲ್ಲ ವರ್ಗಗಳನ್ನು ಜತೆಯಲ್ಲಿ ಕಟ್ಟಿಕೊಂಡು ಬೆಳೆಯುತ್ತಾಹೋಯಿತು.

ಆ ದೇಶಗಳಲ್ಲಿ ಸರ್ವಾಧಿಕಾರದಿಂದ ನಲುಗಿಹೋದ ಸಾಮಾನ್ಯ ಜನ ಅದರಲ್ಲಿ ಭಾಗವಹಿಸಿದ್ದರು. ಪ್ರಾಣವೊಂದನ್ನು ಬಿಟ್ಟು ಕಳೆದುಕೊಳ್ಳಲು ಬೇರೆ ಏನೂ ಇಲ್ಲದವರು ಅವರು. ಇಲ್ಲಿ ಹಾಗಾಗಲಿಲ್ಲ. ಅಣ್ಣಾಚಳವಳಿ ಎತ್ತಿದ ಭ್ರಷ್ಟಾಚಾರದ ವಿಷಯ ಎಲ್ಲರಿಗೆ ಸಂಬಂಧಿಸಿದ್ದೇ ಆಗಿದ್ದರೂ ಅದರ ತೀವ್ರತೆಯ ಅನುಭವ ಬೇರೆಬೇರೆ ವರ್ಗದ ಜನರಿಗೆ ಬೇರೆಬೇರೆ ರೀತಿಯದಾಗಿದೆ.

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವ ರೈತ, ಹೆಚ್ಚು ಸಂಬಳ ಸಿಗುತ್ತಿಲ್ಲ ಎನ್ನುವ ಕಾರ್ಮಿಕ, ಲಿಂಗತಾರತಮ್ಯ  ನಡೆಯುತ್ತಿದೆ ಎನ್ನುವ ಮಹಿಳೆ, ಜಾತಿತಾರತಮ್ಯದಿಂದಾಗಿ ದೌರ್ಜನ್ಯ ನಡೆಯುತ್ತಿದೆ ಎನ್ನುವ ದಲಿತರು, ಉದ್ಯೋಗ ಸಿಗುತ್ತಿಲ್ಲ ಎನ್ನುವ ಯುವಕರು..ಹೀಗೆ ಸಮಸ್ಯೆಗಳು ಹತ್ತಾರು.

ಇವರ ಕಷ್ಟಗಳ ಪಟ್ಟಿಯಲ್ಲಿ ಭ್ರಷ್ಟಾಚಾರ  ಇದ್ದರೂ ಅದು ಮೊದಲ ಸ್ಥಾನದಲ್ಲಿ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆ ಇವರ ಕಷ್ಟಪರಿಹಾರಕ್ಕೆ ನೆರವಾಗಲೂಬಹುದು. ಆದರೆ ಇದನ್ನು ಯಾರೂ ಅವರಿಗೆ ಮನವರಿಕೆ ಮಾಡಿಕೊಟ್ಟಿಲ್ಲ.

ಆದುದರಿಂದ ಅವರಲ್ಲಿ ಹೆಚ್ಚಿನ ಮಂದಿ ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ದೂರವೇ ಉಳಿದುಬಿಟ್ಟರು. ಅವರನ್ನು ಹತ್ತಿರಕ್ಕೆ ಕರೆದುಕೊಂಡು ಬರುವ ಪ್ರಯತ್ನವನ್ನೂ ಯಾರೂ ಮಾಡಲಿಲ್ಲ. ಈ ಕಾರಣದಿಂದಾಗಿಯೇ ಜನಲೋಕಪಾಲರ ನೇಮಕಕ್ಕಾಗಿ ನಡೆದ ಹೋರಾಟ ನಿಜವಾದ ಅರ್ಥದಲ್ಲಿ ಜನಚಳವಳಿ ಆಗಲೇ ಇಲ್ಲ.

ಅಣ್ಣಾಚಳವಳಿ ವಿಫಲಗೊಂಡ ಮಾತ್ರಕ್ಕೆ ಮುಂದಿನ ಎಲ್ಲ ದಾರಿಗಳು ಮುಚ್ಚಿಹೋಗಿವೆ ಎಂದರ್ಥ ಅಲ್ಲ. ರಾಷ್ಟ್ರೀಯ ಪಕ್ಷಗಳು ನಿಧಾನವಾಗಿ ಮರೆಗೆ ಸರಿದು ಪ್ರಾದೇಶಿಕ ಪಕ್ಷಗಳು ವಿಜೃಂಭಿಸುತ್ತಿರುವ ಈಗಿನ ರಾಜಕಾರಣದಿಂದಲೂ ಚಳವಳಿಗಾರರೂ ಕಲಿಯಬೇಕಾದ ಪಾಠ ಇದೆ.

ಬಹುಶಃ ರಾಷ್ಟ್ರಮಟ್ಟದ ಒಂದು ಚಳವಳಿಯನ್ನು ಇನ್ನುಮುಂದೆ ನಡೆಸಿಕೊಂಡು ಹೋಗುವುದು ಸಾಧ್ಯ ಇಲ್ಲವೇನೋ? ಇದರಿಂದ ನಿರಾಶರಾಗಬೇಕಾಗಿಲ್ಲ, ಈಗಲೂ ದೇಶದ ನಾನಾಭಾಗಗಳಲ್ಲಿ ನೀರು, ಭೂಮಿ, ಉದ್ಯೊಗ, ಶಿಕ್ಷಣ, ಆರೋಗ್ಯ, ಆತ್ಮಗೌರವ... ಹೀಗೆ ನಾನಾ ಉದ್ದೇಶದ ಚಳವಳಿಗಳು ತಮ್ಮ ಮಿತಿಯಲ್ಲಿ ನಡೆಯುತ್ತಿರುತ್ತವೆ.

ಪ್ರಜಾಪ್ರಭುತ್ವವನ್ನು ಜೀವಂತವಾಗಿ ಮತ್ತು ಆರೋಗ್ಯಪೂರ್ಣವಾಗಿ ಇಟ್ಟಿರುವ ಈ ಸಣ್ಣಸಣ್ಣ ಚಳವಳಿಗಳೇ ಭವಿಷ್ಯದ ಭರವಸೆಗಳು. ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ.
 
ಕೃಪೆ : ಪ್ರಜಾವಾಣಿ

Monday, August 13, 2012

ದ್ವಿಜರಲ್ಲ ಇವರು ದಲಿತರು, ಎರಡೆರಡು ಸಲ ಸಾಯುವವರು !


 ಡಿ. ಉಮಾಪತಿ
 
 
ದ್ವಿಜರಲ್ಲ ಇವರು ದಲಿತರು, ಎರಡೆರಡು ಸಲ ಸಾಯುವವರು!
ಭಾರತದ ಉಚ್ಚ ಕುಲದವರು ಎರಡೆರಡು ಸಲ ಹುಟ್ಟುತ್ತಾರಂತೆ. ಒಮ್ಮೆ ತಾಯಿಯ ಬಸಿರಿನಿಂದ ಜನಿಸಿದಾಗ. ಮತ್ತೊಮ್ಮೆ ಉಪನಯನದ ವೇಳೆ ಬ್ರಹ್ಮೋಪದೇಶ ಪಡೆದು ಉಪವೀತ ಧರಿಸಿದಾಗ. ಎರಡು ಸಾರಿ ಸಾಯುವ ಕುಲಗಳೂ ಇವೆ. ಕೀಳು ಕುಲಗಳ ದಲಿತರು ವಿಶೇಷವಾಗಿ ಪಾಕಿಸ್ತಾನದ ದಲಿತರು ಎರಡೆರಡು ಬಾರಿ ಸಾಯುತ್ತಾರೆ. ಒಮ್ಮೆ ತಾಯಿಯ ಬಸಿರಿನಿಂದ ಹೊರಬಿದ್ದಾಗ. ಇನ್ನೊಮ್ಮೆ ಕಡೆಯುಸಿರೆಳೆದು ಮಣ್ಣಲ್ಲಿ ಮಣ್ಣಾದಾಗ.

ಪಾಕಿಸ್ತಾನದಿಂದ ಇಂಡಿಯಾಗೆ ಹೊರಟಿದ್ದ 130 ಹಿಂದೂಗಳನ್ನು ಪಾಕಿಸ್ತಾನಿ ಅಧಿಕಾರಿಗಳು ಉಭಯ ದೇಶಗಳ ವಾಘಾ ಗಡಿಯಲ್ಲಿ ತಡೆದು ನಿಲ್ಲಿಸಿರುವ ವರದಿಗಳಿಗೆ ವ್ಯಾಪಕ ಪ್ರಚಾರ ದೊರೆತಿದೆ. ಈ ಹಿಂದೂಗಳನ್ನು ಭಾರತಕ್ಕೆ ಹೋಗಲು ಬಿಡುವುದಿಲ್ಲ ಎಂದು ಸಿಡುಕಿರುವ ಆ ದೇಶದ ಒಳಾಡಳಿತ ಮಂತ್ರಿ ರೆಹ್ಮಾನ್ ಮಲ್ಲಿಕ್. ಹಿಂದೂಗಳ ಈ ವಲಸೆಯ ಕತೆಗಳು ಪಾಕಿಸ್ತಾನದ ಹೆಸರಿಗೆ ಮಸಿ ಬಳಿಯುವ ಹುನ್ನಾರಗಳು ಎಂದು ಗಳುಹಿದ್ದಾರೆ.

ಆದರೆ ಪಾಕಿಸ್ತಾನೀ ಮಾನವ ಹಕ್ಕುಗಳ ಆಯೋಗದ ನಿಲವು ಸತ್ಯಾಂಶವನ್ನು ಧ್ವನಿಸುವಂತಿದೆ. ಸಿಂಧ್ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಿಂದ ಧಾರ್ಮಿಕ ಅಲ್ಪಸಂಖ್ಯಾತರ ಮುಂದುವರೆದ ವಲಸೆ ಕಳವಳಕಾರಿ ಎಂದು ಬಣ್ಣಿಸಿರುವ ಆಯೋಗ ಈ ಕುರಿತು ತೀವ್ರ ಆಕ್ರೋಶ ಪ್ರಕಟಿಸಿದೆ.

ವಲಸೆ ಹೋಗುವಂತೆ ಸ್ಥಳೀಯ ಪಟ್ಟಭದ್ರ ಹಿತಗಳು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಬಲಪ್ರಯೋಗ ಮಾಡುತ್ತಿವೆ. ಈ ಪಟ್ಟಭದ್ರರ ಪೈಕಿ ಕೆಲವರು ಧಾರ್ಮಿಕ ಕಟ್ಟರ್‌ಪಂಥೀಯರು. ಉಳಿದವರು ಅಲ್ಪಸಂಖ್ಯಾತರ ಆಸ್ತಿಪಾಸ್ತಿ ಕಬಳಿಸುವ ಪಿತೂರಿಕೋರರು. ಅಲ್ಪಸಂಖ್ಯಾತ ನಾಗರಿಕರನ್ನು ಹಿಂಸೆ, ಬಲಾತ್ಕಾರ, ತಾರತಮ್ಯ ಹಾಗೂ ತರುಣಿಯರ ಬಲವಂತದ ಮತಾಂತರದ ಅಸಹ್ಯಕರ ಅತ್ಯಾಚಾರಗಳನ್ನು ತಡೆಯುವಲ್ಲಿ ಪಾಕಿಸ್ತಾನಿ ಸರ್ಕಾರ ವಿಫಲ ಆಗಿದೆ. ಈ ವೈಫಲ್ಯದ ಪ್ರತಿಬಿಂಬವೇ ಮುಸ್ಲಿಮೀತರ ನಾಗರಿಕರ ವಲಸೆ ಎಂಬುದು ಪಾಕಿಸ್ತಾನೀ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಝೋಹ್ರಾ ಯೂಸೂಫ್ ಅವರು ಶುಕ್ರವಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ.

ಇತ್ತೀಚೆಗೆ ಹಿಂದೂ ಯುವಕನೊಬ್ಬ ಇಸ್ಲಾಮ್ ಧರ್ಮಕ್ಕೆ ಮತಾಂತರ ಹೊಂದುವ ಧಾರ್ಮಿಕ ವಿಧಿ ವಿಧಾನಗಳನ್ನು ಟೆಲಿವಿಷನ್ ಚಾನೆಲ್ಲೊಂದರ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ತೋರಿಸಿದ್ದು ಅತಿ ಹೇಯ ಮತ್ತು ಅಸಮರ್ಥನೀಯ ಎಂದೂ ಝೋಹ್ರಾ ಹೇಳಿದ್ದಾರೆ.

ಇಂತಹ ಪ್ರಕರಣ ಅಥವಾ ಪ್ರಕರಣಗಳಲ್ಲಿ ಮಾತುಗಳು, ಪದಗಳು, ವಾಕ್ಯಗಳ ನಡುವೆ ಹುದುಗಿರುವ ಕ್ರೂರ ವಾಸ್ತವವೊಂದು ಉಂಟು. ಪಾಕಿಸ್ತಾನೀ ಹಿಂದೂ ಜನಸಂಖ್ಯೆಯ ಅಧಿಕತ ಅಂಕಿ ಅಂಶಗಳು ಲಭ್ಯವಿಲ್ಲ. ಒಂದು ಅಂದಾಜಿನ ಪ್ರಕಾರ ಈ ಸಂಖ್ಯೆ 40ರಿಂದ 60 ಲಕ್ಷದಷ್ಟು. ನಲವತ್ತೇ ಇರಲಿ, ಅರವತ್ತೇ ಆಗಲಿ, ಈ ಜನಸಂಖ್ಯೆಯ ಪೈಕಿ ದಲಿತರ ಪ್ರಮಾಣ ಶೇ.75ರಷ್ಟು. ಹಿಂದೂಗಳು ದಲಿತರನ್ನು ಹಿಂದೂಗಳಂತೆ ನಡೆಸಿಕೊಳ್ಳುತ್ತಿಲ್ಲ. ಆದರೂ ಒಟ್ಟಾರೆ ಲೆಕ್ಕದ ಪ್ರಶ್ನೆ ಬಂದಾಗ ದಲಿತರನ್ನು ಹಿಂದೂಗಳ ಲೆಕ್ಕದಲ್ಲೇ ಸೇರಿಸಿ ಹೇಳಲಾಗುತ್ತದೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಮಾತಾಡಿದಾಗಲೆಲ್ಲ ಕ್ರೈಸ್ತರು, ಅಹ್ಮದೀಯರು ಹಾಗೂ ಹಿಂದೂಗಳ ಪ್ರಸ್ತಾಪ ಆಗುತ್ತದೆ. ಆದರೆ ಈ ಅಲ್ಪಸಂಖ್ಯಾತರೊಳಗಡೆಯೇ ಅಲ್ಪಸಂಖ್ಯಾತರಿದ್ದಾರೆ. ಅವರು ಸಿಂಧ್ ಮತ್ತು ದಕ್ಷಿಣ ಪಂಜಾಬಿನ ಕೆಳಜಾತಿಯ ಹಿಂದೂಗಳು. ಇವರ ಸಂಖ್ಯೆ ಇಪ್ಪತ್ತು ಲಕ್ಷದಿಂದ ನಲವತ್ತು ಲಕ್ಷದವರೆಗೆ ಇದ್ದೀತು. ಸವರ್ಣೀಯ ಹಿಂದೂಗಳಿಗೆ ಇವರ ಕುರಿತು ಯಾವ ಕಾಳಜಿಯೂ ಇಲ್ಲ ಎನ್ನುತ್ತಾರೆ ಪಾಕಿಸ್ತಾನದ ನೀತಿ ನಿರ್ಧಾರಗಳ ವಿಮರ್ಶಕ ಸಿದ್ದೀಕ್ ಹುಮಾಯೂನ್.

ಪಾಕಿಸ್ತಾನದ ದಲಿತರ ಕತೆ ಪಾಕಿಸ್ತಾನದಷ್ಟೇ ಹಳೆಯದು. ಜೋಗೇಂದ್ರನಾಥ ಮಂಡಲ್ ಎಂಬ ದಲಿತ ನಾಯಕರನ್ನು ಮುಹಮ್ಮದ್ ಆಲಿ ಜಿನ್ನಾ ಪಾಕಿಸ್ತಾನದ ಪ್ರಥಮ ಕಾನೂನು ಮತ್ತು ಕಾರ್ಮಿಕ ಮಂತ್ರಿಯನ್ನಾಗಿ ಮಾಡಿದ್ದರು. ಅದೇ ಕಡೆ, ಆ ದೇಶದಲ್ಲಿ ದಲಿತರೊಬ್ಬರು ಅಂತಹ ಉನ್ನತ ಸ್ಥಾನಕ್ಕೆ ಮತ್ತೆಂದೂ ಏರಗೊಡಲಿಲ್ಲ. ಜಿನ್ನಾ ಸಾವಿನ ನಂತರ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಯಿತು. ಪೂರ್ವ ಬಂಗಾಳದಲ್ಲಿ (ಈಗಿನ ಬಾಂಗ್ಲಾ ದೇಶ) 1950 ಸುಮಾರಿನಲ್ಲಿ ಸಾವಿರಾರು ಮಂದಿ ದಲಿತರ ನರಮೇಧ ಮತ್ತು ಭಾರತಕ್ಕೆ ನಿರಾಶ್ರಿತರ ವಲಸೆಯ ಅಲೆಯನ್ನು ಕಂಡು ಹತಾಶರಾದರು ಮಂಡಲ್. 1953ರಲ್ಲಿ ಭಾರತಕ್ಕೆ ಓಡಿ ಬಂದು ಅಂದಿನ ಪಾಕ್ ಪ್ರಧಾನಿ ಲಿಯಾಕತ್ ಆಲಿ ಖಾನ್‌ಗೆ ತಮ್ಮ ರಾಜೀನಾಮೆ ಪತ್ರ ಕಳಿಸಿಕೊಟ್ಟರು. ಭಾರತಕ್ಕೆ ವಲಸೆ ಹೋಗುವ ಸುಲಭದ ದಾರಿಯನ್ನು ಸವರ್ಣೀಯರನೇಕರು ಆರಿಸಿಕೊಂಡರು. ಆದರೆ ನಿರ್ಗತಿಕ ಕೆಳಜಾತಿಗಳಿಗೆ ಅಲ್ಲಿಯೇ ಉಳಿಯದೆ ಗತ್ಯಂತರ ಇರಲಿಲ್ಲ.

1998ರಲ್ಲಿ ದಲಿತರ ಪಾಲಿನ ಶೇ.6ರಷ್ಟು ಸರ್ಕಾರಿ ಉದ್ಯೋಗ ಮೀಸಲಾತಿಯನ್ನು ಅಲ್ಪಸಂಖ್ಯಾತರ ಕೋಟಾ ಎಂದು ಬದಲಾಯಿಸಲಾಯಿತು. ಪಾಕಿಸ್ತಾನದ ಸಂಸತ್ತಿನ ಅಂದಿನ ಇಬ್ಬರು ದಲಿತ ಸದಸ್ಯರಾದ ಕ್ರಿಶನ್ ಭೀಲ್ ಮತ್ತು ಡಾ.ಮೇಘ್ವಾರ್ ಈ ಅನ್ಯಾಯಕ್ಕೆ ಅಸಹಾಯಕ ಸಾಕ್ಷಿಗಳಾದರು. ತೀಕ್ಷ್ಣಸ್ವರೂಪದ ಬಲಿಷ್ಠ ಅಲ್ಪಸಂಖ್ಯಾತ ಸಂಸದರನ್ನು ಅವರು ಎದುರಿಸದೆ ಹೋದರು. ಈ ಬೆಳವಣಿಗೆಯಿಂದಾಗಿ ಕಾನೂನಿನ ಪ್ರಕಾರ ಪಾಕಿಸ್ತಾನದ ಅಲ್ಪಸಂಖ್ಯಾತರ ಭಾಗವಾಗಿ ಕರಗಿ ಹೋದರು ದಲಿತರು. ಆದರೆ ಅಲ್ಪಸಂಖ್ಯಾತರು ದಲಿತರನ್ನು ತಮ್ಮವರು ಎಂದು ಒಪ್ಪಿಕೊಳ್ಳದೆ ಹೊರಗೇ ಇರಿಸಿದರು. ಇಬ್ಬಗೆಯ ತಾರತಮ್ಯವನ್ನು ಎದುರಿಸುವ ಇವರು ಪಾಕಿಸ್ತಾನಿ ಸಮಾಜದ ಪಾಲಿಗೆ ಅಲ್ಪಸಂಖ್ಯಾತರಾದರೆ, ಸವರ್ಣೀಯ ಹಿಂದೂ ಅಲ್ಪಸಂಖ್ಯಾತರ ಪಾಲಿಗೆ ಕೀಳು ಜಾತಿಗಳ ದಲಿತರು ಎನ್ನುತ್ತಾರೆ ಸಿದ್ದೀಕ್.

''ಹಮೇ ಭೀ ಜೀನೇ ದೋ: ಪಾಕಿಸ್ತಾನ್ ಮೇಂ ಅಛೂತ್ ಲೋಗೋಂಕೇ ಸೂರತೇಹಾಲ್'' ಪಾಕಿಸ್ತಾನಿ ದಲಿತರ ದುರ್ದೆಸೆಯ ಮೇಲೆ ಬೆಳಕು ಚೆಲ್ಲುತ್ತದೆ. ಅಲ್ಲಿನ ಕೆಳಜಾತಿಗಳ ಜನರ ನಡುವೆ ಕೆಲಸ ಮಾಡುತ್ತಿರುವ ಪಿರ್ಭು ಲಾಲ್ ಸಾತ್ಯಾನಿ ಎಂಬುವರು ಈ ಪುಸ್ತಕದ ಲೇಖಕರು. ಉರ್ದುವಿನಲ್ಲಿರುವ ಈ ಪುಸ್ತಕದ ಪ್ರಕಾಶಕ ಸಂಸ್ಥೆ ಪಾಕಿಸ್ತಾನದ ಲಾಹೋರಿನ ಎ.ಎಸ್.ಆರ್.ರಿಸೋರ್ಸ್ ಸೆಂಟರ್.

ದೇಶ ವಿಭಜನೆಯ ಸಂದರ್ಭದಲ್ಲಿ ಈಗಿನ ಪಾಕಿಸ್ತಾನ ಸೀಮೆಯಲ್ಲಿ ನೆಲೆಸಿದ್ದ ಬಹುತೇಕ ಹಿಂದುಗಳು ಭಾರತಕ್ಕೆ ವಲಸೆ ಹೋದರು. ಪಾಕಿಸ್ತಾನದಲ್ಲಿ ಉಳಿದ ಬಹುಸಂಖ್ಯಾತರು ದಲಿತರೇ ಆಗಿದ್ದರು. ವಿಭಜನೆಯ ನಂತರವೂ ಹಿಂದೂಗಳ ಭಾರತ ವಲಸೆ ನಿರಂತರ. 1965, 1971ರ ಭಾರತ- ಪಾಕ್ ಯುದ್ಧಗಳು, 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಹಾಗೂ ಭಾರತದ ನಾನಾ ಭಾಗಗಳಲ್ಲಿ ಮುಸ್ಲಿಮರ ನರಮೇಧದ ನಂತರ ಗಣನೀಯ ಸಂಖ್ಯೆಯ ಪಾಕಿಸ್ತಾನಿ ಹಿಂದೂಗಳು ಭಾರತ ವಲಸೆ ಕೈಗೊಂಡರು. ವಲಸೆಗಾರರ ಪೈಕಿ ಬಹುತೇಕರು ಹಿಂದೂ ಸವರ್ಣೀಯರು. ದೈನಂದಿನ ಹೊಟ್ಟೆ ಬಟ್ಟೆಯ ಪಾಡಿನಲ್ಲೇ ಮೂಗಿನ ಮಟ್ಟ ಮುಳುಗಿದ್ದ ದಲಿತರಿಗೆ ವಲಸೆ ಹೋಗುವಷ್ಟು ಚೈತನ್ಯ ಇರಲಿಲ್ಲ.

ಪಾಕಿಸ್ತಾನೀ ದಲಿತರ ಪೈಕಿ ಮುಕ್ಕಾಲು ಪ್ರಮಾಣ ಭೂರಹಿತ ಕಷಿ ಕಾರ್ಮಿಕರು ಮತ್ತು, ಕಸ ಗುಡಿಸುವವರು. ಕೈಗೆ ಬೀಳುವ ಕೂಲಿ ಜುಜುಬಿ ಮೊತ್ತದ್ದು. ಮೇಲ್ಜಾತಿ ಹಿಂದೂಗಳು ಮತ್ತು ಮುಸಲ್ಮಾನ ಜಮೀನುದಾರರು ಇವರಿಂದ ಬಲವಂತದ ಬಿಟ್ಟಿ ಚಾಕರಿ ಮಾಡಿಸಿಕೊಳ್ಳತ್ತಾರೆ. ಭೂಮಾಲೀಕರು ಮತ್ತು ಲೇವಾದೇವಿಗಾರರ ಸಾಲ ತೀರಿಸಲು ಜೀತದಾಳುಗಳಾಗಿ ಬದುಕು ಸವೆಸುವವರೂ ಉಂಟು. ಪ್ರತಿಭಟಿಸಿದರೆ ಇವರ ಮೇಲೆ ಸುಳ್ಳು ಕೇಸು ದಾಖಲಾಗುವುದೇ ದಿಟ. ಇವರ ದನಕರುಗಳನ್ನು ಪಾತ್ರೆ ಪಡಗಗಳನ್ನೂ ಕಿತ್ತುಕೊಂಡು ಕಿರುಕುಳ ಕೊಡುವ ಸ್ಥಳೀಯ ಸರ್ಕಾರಿ ಸಿಬ್ಬಂದಿ. ದಲಿತರು ಗುಡಿಸಿಲು ಹಾಕುವ ಜಾಗವನ್ನು ಗ್ರಾಮೀಣ ಸಿಂಧ್‌ನ ಭೂ ಮಾಫಿಯಾ ಕಬ್ಜಾ ಮಾಡುತ್ತದೆ. ಸತ್ತವರ ದಹನ ಸಂಸ್ಕಾರದ ಜಾಗಗಳೂ ಸ್ಥಳೀಯ ಮುಸ್ಲಿಮರ ಪಾಲು.

ಶಾಲೆಗಳಲ್ಲಿ ದಲಿತ ಮಕ್ಕಳು ತಾರತಮ್ಯದ ಅವಹೇಳನವನ್ನು ನಿತ್ಯ ಭರಿಸುತ್ತಾರೆ. ಮುಸ್ಲಿಂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ದಟ್ಟ ದರಿದ್ರರಾಗಿದ್ದರೂ ದಲಿತರ ಮಕ್ಕಳಿಗೆ ವಿದ್ಯಾರ್ಥಿವೇತನ ದೊರೆಯದು. ವಿದ್ಯಾರ್ಥಿ ವೇತನದ ಹಣ ಝಕಾತ್ ನಿಧಿಯಿಂದ ಬರುತ್ತದೆ. ಝಕಾತ್ ನಿಧಿಯನ್ನು ಮಸ್ಲಿಮೀತರರು ಬಳಸುವಂತಿಲ್ಲ. ಬಡತನದ ಕಾರಣ ದಲಿತರ ಮಕ್ಕಳು ಉನ್ನತ ಶಿಕ್ಷಣ ವಂಚಿತರು. ಅಪಹರಿಸಿ, ಮಾನಭಂಗ ಮಾಡಿ ಇಸ್ಲಾಮ್‌ಗೆ ಮತಾಂತರ ಮಾಡುತ್ತಾರೆಂಬ ಭಯದಿಂದ ದಲಿತರು ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ.

ಬಹುಪಾಲು ದಲಿತರಿಗೆ ರಾಷ್ಟ್ರೀಯ ಗುರುತಿನ ಚೀಟಿ ನೀಡಿಲ್ಲ. ಹೀಗಾಗಿ ಸರ್ಕಾರಿ ಅಭಿವದ್ಧಿ ಯೋಜನೆಗಳಿಗೂ ಅವರು ಅಸ್ಪಶ್ಯರು. ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಲಾಗುವ ಸರ್ಕಾರಿ ಸೌಲಭ್ಯಗಳೆಲ್ಲ ಸಂಘಟಿತರೂ ಬಲಿಷ್ಠರೂ ಆದ ಕ್ರೈಸ್ತರು ಮತ್ತು ಹಿಂದೂ ಮೇಲ್ಜಾತಿಗಳ ಮಂದಿಯ ಪಾಲು. ಬಡತನ, ನಿರಕ್ಷರತೆ ಕಾಡಿರುವ ಇವರಿಗೆ ರಾಜಕೀಯ ನಾಯಕತ್ವ ಇಲ್ಲ. ಇನ್ನು ದಲಿತ ಚಳವಳಿಗಳ ಸೊಲ್ಲು ದೂರವೇ ಉಳಿಯಿತು. ಮುಸಲ್ಮಾನರು ಮತ್ತು ಹಿಂದೂ ಮೇಲ್ಜಾತಿಗಳು ಸೂಚಿಸಿದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಮತ ಹಾಕದೆ ಹೋದರೆ ದೈಹಿಕ ಹಲ್ಲೆ ನಿಶ್ಚಿತ. ಜೊತೆಗೆ ಮನೆ ಮಠವನ್ನೂ ಖಾಲಿ ಮಾಡಬೇಕು.

ಪಾಕಿಸ್ತಾನದಲ್ಲೂ ದಲಿತರು ಸವರ್ಣೀಯ ಹಿಂದೂಗಳ ದೇವಸ್ಥಾನಗಳನ್ನು ಪ್ರವೇಶಿಸುವಂತಿಲ್ಲ. ಅವರನ್ನು ತುಳಿಯಲು ಸ್ಥಳೀಯ ಮುಸ್ಲಿಮ್ ಊಳಿಗಮಾನ್ಯ ಒಡೆಯರ ಜೊತೆಗೆ ಹಿಂದೂ ಸವರ್ಣೀಯರು ಖುಷಿಯಾಗಿ ಕೈ ಜೋಡಿಸುವವರು. ಭಾರತದ ಹಳ್ಳಿಗಾಡುಗಳಲ್ಲಿ ನಡೆಯುವಂತೆ ಪಾಕಿಸ್ತಾನದಲ್ಲೂ ಮುಸ್ಲಿಮರು ಇಲ್ಲವೇ ಸವರ್ಣೀಯ ಹಿಂದೂಗಳ ಹೊಟೆಲುಗಳಲ್ಲಿ ಪ್ರತ್ಯೇಕ ತಟ್ಟೆ ಲೋಟ ಬಳಸಬೇಕು. ತಿಂದು ಕುಡಿದ ನಂತರ ಅವುಗಳನ್ನು ತೊಳೆದಿಡಬೇಕು. ಜಡ್ಡು ಜಾಪತ್ತಾದರೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಅವರನ್ನು ಮುಟ್ಟಿ ಪರೀಕ್ಷೆ ಮಾಡುವುದಿಲ್ಲ. ಸಾರ್ವಜನಿಕ ಬಳಕೆಗೆ ಇಟ್ಟಿರುವ ಯಾವ ವಸ್ತುಗಳನ್ನೂ ಇವರು ಮುಟ್ಟುವಂತಿಲ್ಲ. ದಲಿತ ಮಹಿಳೆಯರು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಇಲ್ಲವೇ ಮತಾಂತರದ ಸರಕುಗಳು. ರೋಸಿ ಹೋದ ಹಲವು ದಲಿತರು ಸ್ವಇಚ್ಛೆಯಿಂದ ಇಸ್ಲಾಮ್ ಇಲ್ಲವೇ ಕ್ರೈಸ್ತ ಧರ್ಮೀಯರಾಗಿ ಪರಿವರ್ತನೆ ಹೊಂದಿರುವುದಾಗಿ ಹೇಳುತ್ತದೆ ಸಾತ್ಯಾನಿ ಪುಸ್ತಕ.

ಅತ್ತ ಮುಸಲ್ಮಾನರು ಇತ್ತ ತಮ್ಮವರೇ ಆಗಬೇಕಿದ್ದ ಹಿಂದೂ ಸವರ್ಣೀಯರು. . . ಇಬ್ಬರೂ ಜೀವಂತ ಕಿತ್ತು ತಿಂದು ಹಿಂಸಿಸುವ ಈ ದಲಿತರು ಹುಟ್ಟುವುದು ಒಂದೇ ಬಾರಿಯಾದರೂ ಸಾಯುವುದು ಎರಡೆರಡು ಬಾರಿ ಇಲ್ಲವೇ ಲೆಕ್ಕವಿಲ್ಲದಷ್ಟು ಬಾರಿ ಎಂದರೆ ತಪ್ಪಾದೀತೇ?
 
ಕೃಪೆ : ವಿಜಯ ಕರ್ನಾಟಕ 

Friday, August 10, 2012

ಮಾತ್ಗವಿತೆ-95

ಮತ್ತೇ ಮತ್ತೇ ಅದೇ ಹಾಡು ಹಾಡಿ ಹಾಡಿ
ಕಿಸಬಾಯಿ ದಾಸನಾಗುವ ದಾರಿಗೆರವಾದರೆ
ಅರಿವಿನ ಪಥ ತೆರೆದುಕೊಳ್ಳುವುದಾದರೂ ಹೇಗೆ ?
ಸತ್ತು ಸತ್ತು ಬೇಸತ್ತು ಹೋಗುವ ಬದಲು
ಸಾಕಿನ್ನು ಹಳೆಯ ಹಾಡು ; ಹಳೆಯ ಜಾಡು
ಎನ್ನುವ ದನಿಗೆ ದನಿಯಾಗುವ ಧಣಿಯಾಗಬಹುದಲ್ಲವೆ ?

ಚನ್ನಮ್ಮ ವಿವಿ ನೇಮಕಾತಿ ಕರ್ಮಕಾಂಡ !

  • ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪೂರ್ವ ನಿಗದಿತ ಪಟ್ಟಿಯಲ್ಲಿರುವವರೇ ಆಯ್ಕೆಯಾಗಿದ್ದು ಮೊದಲೇ ಹರಡಿದ್ದ ಸುದ್ದಿ ಖರೆ ಆಗಿದೆ..!

    ಖೇದದ ಸಂಗತಿ ಎಂದರೆ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿರುವ ಸುಳಿವನ್ನು ರಾಜ್ಯಪಾಲ, ವಿವಿ ಸಿಂಡಿಕೇಟ್‌ ಸದಸ್ಯರಿಗೆ ಲಿಖೀತವಾಗಿ ಮಾಹಿತಿ ನೀಡಿದರೂ ಅರ್ಹರಿಗೆ ಮಾತ್ರ ನ್ಯಾಯ ದೊರೆತಿಲ್ಲ. ವಿವಿ ಆಂತರಿಕ ಶಕ್ತಿಗಳೇ ಮೇಲುಗೈ ಸಾಧಿಸಿವೆ.

    ವಿವಿಧ ವಿಷಯಗಳ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯಲ್ಲಿ ಪಾರದರ್ಶಕತೆ ಇಲ್ಲ ಎಂಬ ಕೂಗನ್ನು ಯಾರೊಬ್ಬರೂ ಗಂಭೀರ ಪರಿಗಣಿಸದೇ ಹೋಗಿದ್ದರಿಂದ ಅರ್ಹತೆ, ಅನುಭವಗಳು ಗಾಳಿಗೆ ತೂರಲ್ಪಟ್ಟಿವೆ. ಹುದ್ದೆ ಪಡೆಯುತ್ತೇವೆಂದು ನಂಬಿದವರು, ಸಂದರ್ಶನದಲ್ಲಿ ಉತ್ತಮವಾಗಿ ಉತ್ತರ ನೀಡಿದ್ದೇವೆಂಬ ಆತ್ಮವಿಶ್ವಾಸ ಹೊಂದಿದರು ನಿರಾಸೆ ಪಡುವಂತಾಗಿದೆ. ಇಂತಹ ಹುದ್ದೆಗೆ ಇಂತಹವರೇ ನೇಮಕಾತಿ ಆಗುತ್ತಾರೆಂಬ ಸುದ್ದಿಯಲ್ಲಿ ಇದ್ದವರಿಗೇ ಪಟ್ಟ ನೀಡಿದ ಕೀರ್ತಿಗೆ ವಿವಿ ಭಾಜನವಾಗಿದೆ!

    ಅರ್ಹತೆ, ಅನುಭವದಿಂದ ಹುದ್ದೆ ದೊರೆಯುತ್ತದೆಂಬ ಆತ್ಮವಿಶ್ವಾಸ ಹೊಂದಿದವರು ತಮಗಿಂತ ಕಡಿಮೆ ಅರ್ಹರಾದವರಿಗೆ ಹುದ್ದೆ ಭಾಗ್ಯ ದೊರೆತಿದ್ದು ಕಂಡು ಮಾನಸಿಕವಾಗಿ ಕುಗ್ಗಿ ಹೋಗಿ ವಿವಿಗೆ ಹಿಡಿಶಾಪ ಹಾಕುವಂತಾಗಿದೆ.

    ಇದಕ್ಕೆ ಸಾಕ್ಷಿಯೆಂಬಂತೆ ಸಮಾಜಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಜ. 12ರಂದು ಸಂದರ್ಶನ ನಡೆದಿತ್ತು. ಸಂದರ್ಶನಕ್ಕೆ ಮೊದಲೇ ಈ ಎರಡೂ ಹುದ್ದೆಗಳಿಗೆ ಯಾರು ಆಯ್ಕೆ ಆಗುತ್ತಾರೆ ಎಂಬ ಸುದ್ದಿ ಹರಡಿತ್ತೋ ಅವರ ಹೆಸರುಗಳೆ ಆಯ್ಕೆ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಅವರೇ ಹುದ್ದೆ ಅಲಂಕರಿಸಿದ್ದಾರೆ.

    ವಿವಿಯಲ್ಲಿನ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವರು ಜ. 16ರಂದೇ ವಿವಿಯ ಎಲ್ಲ ಸಿಂಡಿಕೇಟ್‌ ಸದಸ್ಯರಿಗೆ ಪತ್ರ ಬರೆದು ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಹುದ್ದೆಗೆ ಇಂತಹವರೇ ಆಯ್ಕೆ ಆಗುತ್ತಾರೆ ಎಂಬ ಅನುಮಾನ ಇದೆ. ಆಯ್ಕೆಯ ಪೂರ್ವನಿರ್ಧಾರ ಆಗಿದ್ದರೆ, ಹುದ್ದೆಗೆ ಅರ್ಜಿ ಆಹ್ವಾನಿಸಿದ್ದೇಕೆ? ಸಂದರ್ಶನದ ನಾಟಕ ಯಾಕೆ ಬೇಕು ಎಂದು ಪ್ರಶ್ನಿಸಿ ಮನದಾಳದ ನೋವು ತೋಡಿಕೊಂಡಿದ್ದರು.

    ಪತ್ರದಲ್ಲಿ ಆಯ್ಕೆಯಾಗಲಿರುವ ಅಭ್ಯರ್ಥಿ ಹೆಸರು ನಮೂದಿಸಿ ಹುದ್ದೆ ಆಕಾಂಕ್ಷಿ ಅಭ್ಯರ್ಥಿಯೊಬ್ಬರು ಜ. 17ರಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ಅವರಿಗೂ ಮನವಿ ಕಳುಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌.ಡಿ, ನೆಟ್‌-ಸೆಟ್‌ ಮುಗಿಸಿದ, 20 ವರ್ಷಕ್ಕಿಂತ ಹೆಚ್ಚಿನ ಬೋಧನಾ ಅನುಭವ ಹೊಂದಿದವರು ಸಂದರ್ಶನದಲ್ಲಿ ಭಾಗಿಯಾಗಿದ್ದರೂ, ಕೇವಲ ಸೆಟ್‌ ಮಾತ್ರ ಮುಗಿಸಿದ ವ್ಯಕ್ತಿ ಆಯ್ಕೆ ಆಗುವ ಸುದ್ದಿ ಹರಡಿದೆ ಎಂದು ದೂರಿನಲ್ಲಿ ತಿಳಿಸಿದ್ದರು.

    ಜ. 25ರಂದು ನಡೆದ ವಿವಿ ಸಿಂಡಿಕೇಟ್‌ ಸಭೆಯಲ್ಲಿ ಆಯ್ಕೆಯಾದವರ ಪಟ್ಟಿ ಮಂಡಿಸಲ್ಪಟ್ಟಾಗ ಯಾರು ಹುದ್ದೆ ಪಡೆಯುತ್ತಾರೆಂದು ಆರೋಪಿಸಲಾಗಿತ್ತೋ ಅವರೇ ಹುದ್ದೆಗೆ ಆಯ್ಕೆಯಾಗಿದ್ದುದು ದೃಢೀಕರಿಸಲ್ಪಟ್ಟಿತು!

    ಪೆನ್ಸಿಲ್‌ನಿಂದ ನಮೂದನೆ ಯಾಕೆ?: ರಾಣಿ ಚನ್ನಮ್ಮ ವಿವಿಯ ಹುದ್ದೆಗಳ ಆಯ್ಕೆಗೆ ನಡೆದ ಸಂದರ್ಶನ ಬಹುಶಃ ಅಂಗನವಾಡಿ ಕಾರ್ಯಕರ್ತೆಯರ ಆಯ್ಕೆ ಸಂದರ್ಶನಕ್ಕಿಂತಲೂ ಕಡೆಯಾಗಿ ನಡೆಯಿತು ಎಂದು ಹೇಳಲಾಗುತ್ತಿದೆ.

    ಮಹತ್ವದ ಹುದ್ದೆಗಳಿಗೆ ಅದಾಗಲೇ ಹೆಸರುಗಳು ನಿಗದಿಯಾಗಿದ್ದರಿಂದಲೋ ಏನೋ ನೇಮಕಾತಿ ಸಂದರ್ಶನಕ್ಕೆ ಬಂದ ಅಭ್ಯರ್ಥಿಗಳನ್ನು ತಲಾ ಕೆಲವೇ ನಿಮಿಷಗಳಂತೆ ಸಂದರ್ಶಿಸಿ ಕಳುಹಿಸಲಾಗಿದೆ. ಸಮಾಜಶಾಸ್ತ್ರ ವಿಭಾಗದಲ್ಲಿ 45 ಜನರನ್ನು ಕೇವಲ ಆರು ತಾಸಿನಲ್ಲಿ ಸಂದರ್ಶಿಸಿ ಕಳುಹಿಸಿರುವುದು ವಿವಿ ದಾಖಲೆಯೇ ಸರಿ ಎನ್ನುವುದು ಅಭ್ಯರ್ಥಿಗಳ ಅನಿಸಿಕೆ. ಇದರಲ್ಲಿ ಭೋಜನ ಸಮಯವೂ ಸೇರಿದೆ ಎನ್ನುತ್ತಾರೆ ಅಭ್ಯರ್ಥಿಗಳು.

    ಅರ್ಥಶಾಸ್ತ್ರ ವಿಭಾಗದಲ್ಲಿ ಸಂದರ್ಶನಕ್ಕೆ ಆಗಮಿಸಿದ್ದ ಅಭ್ಯರ್ಥಿಯೊಬ್ಬರನ್ನು ಸಂದರ್ಶಿಸಿದವರು, ಅಧ್ಯಯನ ಕೇಂದ್ರಗಳನ್ನು ಪದವಿ ಕಾಲೇಜುಗಳಲ್ಲಿಯೇ ವಿವಿ ಆರಂಭಿಸುತ್ತಿದೆ. ಹೀಗಿರುವಾಗ ಪಿಎಚ್‌ಡಿ ಆದ ನೀವು ಅಲ್ಲಿಯೇ ಪಾಠ ಮಾಡಿ. ಇಲ್ಲಿಗೆ ಯಾಕೆ ಬರುತ್ತೀರಿ ಎನ್ನುವುದಾಗಿ ಹೇಳಿ ವಾಪಸು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

    ಸಂದರ್ಶನಕ್ಕೆ ಹೋದ ಅಭ್ಯರ್ಥಿಗಳು ಮಂಡಿಸಿದ ಪ್ರಬಂಧಗಳ ದಾಖಲಾತಿಗಳನ್ನು, ಉಪನ್ಯಾಸದ ಮಾಹಿತಿಯನ್ನು, ವಿವಿಧ ಸಾಧನೆಗಳ ದಾಖಲೆಗಳನ್ನು ಪರಿಶೀಲಿಸುವಾಗ ನೋಂದಣಿಯನ್ನು ಪೆನ್ಸಿಲ್‌ನಿಂದ ಮಾಡಿಕೊಂಡು ಅಭ್ಯರ್ಥಿಗಳ ಸಹಿ ಪಡೆಯಲಾಗಿದೆ. ಪಿನ್ಸಿಲ್‌ನಿಂದ ನಮೂದಿಸಿರುವುದೇಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ ಎಂಬುದು ಕೆಲ ಅಭ್ಯರ್ಥಿಗಳ ಅನಿಸಿಕೆ. ಸಂದರ್ಶನದಲ್ಲಿ ಉತ್ತಮವಾಗಿ ಉತ್ತರಿಸಿದ ಕೆಲ ಅಭ್ಯರ್ಥಿಗಳಿಗೆ ಹುದ್ದೆ ನೀಡಿದರೆ ಏನು ಅಭಿವೃದ್ಧಿ ಕೈಗೊಳ್ಳುತ್ತೀರಿ ಎಂಬ ನೀಲಿನಕ್ಷೆ ತೋರಿಸಿ ಎಂದು ಕೇಳಲಾಗಿದೆಯಂತೆ.

    ಡೀಸೆಂಟ್‌ ನೋಟ್‌ಗೂ ಡೋಂಟ್‌ ಕೇರ್‌: ವಿವಿಧ ವಿಷಯಗಳ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲಿ ಅರ್ಹರಿಗೆ ಆದ ಅನ್ಯಾಯ, ಪಾರದರ್ಶಕತೆ ಕೊರತೆ ಬಗೆಗೆ ಆಕ್ಷೇಪವೆತ್ತಿ ಜ. 25ರಂದು ನಡೆದ ವಿವಿ ಸಿಂಡಿಕೇಟ್‌ ಸಭೆಯಲ್ಲಿ ಐವರು ಸದಸ್ಯರು ಡೀಸೆಂಟ್‌ ನೋಟ್‌ ಸಲ್ಲಿಸಿದ್ದರು. ಕೆಲ ಸದಸ್ಯರು ಅಸಮರ್ಥರ ನೇಮಕಾತಿ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.

    ಇದಾವುದನ್ನೂ ಗಂಭೀರವಾಗಿ ಪರಿಗಣಿಸದ ವಿವಿ ಕುಲಪತಿಯವರು ತಮ್ಮದೇ ನಿರ್ಧಾರ ಪ್ರಕಟಿಸಿ ನೇಮಕಾತಿ ಪಟ್ಟಿ ಮಂಡಿಸಿ ಅನ್ಯಾಯವಾದವರು ಬೇಕಾದರೆ ಕಾನೂನು ಮೊರೆ ಹೋಗಲಿ ಎಂಬ ಹೇಳಿಕೆ ನೀಡಿದರು ಎಂದು ಹೇಳಲಾಗುತ್ತಿದೆ.

    ಸಭೆ ನಂತರ ಡೀಸೆಂಟ್‌ ನೋಟ್‌ ಮಂಡಿಸಿದ ಸದಸ್ಯರ ಮನವೊಲಿಕೆಗೆ ಕುಲಪತಿ ಯತ್ನಿಸಿದರು ಎಂದು ಹೇಳಲಾಗುತ್ತಿದ್ದು, ಇಬ್ಬರು ಸದಸ್ಯರಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ. ಮೂವರು ಸದಸ್ಯರು ಮಾತ್ರ ತಮ್ಮ ನಿಲುವಿಗೆ ಬದ್ಧರಾಗಿರುವುದಾಗಿ ಹೇಳಲಾಗುತ್ತಿದೆ.

    ನೇಮಕಾತಿ ಅನ್ಯಾಯದ ಬಗ್ಗೆ ರಾಜ್ಯಪಾಲರಿಗೂ ದೂರು ಹೋಗಿದೆ. ಆದರೆ, ಉತ್ತರ ಕರ್ನಾಟಕದ ವಿವಿಗಳ ಘಟಿಕೋತ್ಸವ ಇನ್ನಿತರ ಸಮಾರಂಭಗಳಿಂದ ದೂರವೇ ಉಳಿದಿರುವ ರಾಜ್ಯಪಾಲರು ಅನ್ಯಾಯದ ವಿರುದ್ಧದ ದೂರನ್ನು ದೂರವೇ ಇಟ್ಟು ಬಿಟ್ಟರೆ ಎಂಬ ಅನುಮಾನ ಅನೇಕರನ್ನು ಕಾಡುತ್ತಿದೆ.
    ಅಮರೇಗೌಡ ಗೋನವಾರ, ಉದಯವಾಣಿ- | Jan 31, 2012

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.