Monday, November 26, 2012

ಮಾತ್ಗವಿತೆ- 103

ಗೆದ್ದಾಗ ಬಾಲ ಹಿಡಿಯೋ ಮಂದಿ
ಬಿದ್ದಾಗ ಆಳಿಗೊಂದೊಂದು ಕಲ್ಲು !
ಸೋಲು-ಗೆಲವು ಇರಬೇಕಲ್ಲವೆ ?
ಪ್ರತಿಸಲವೂ ನಾವೇ ಗೆಲ್ಲಬೇಕು ಅಂದ್ರೆ
ಅದೇನು ಪುರಾಣದ ಪವಾಡವೋ ?

Friday, November 23, 2012

ಮಾತ್ಗವಿತೆ - 102

ಬಿರಿದ ತುಟಿಗಳ ನಡುವೆ ಮತ್ತಿನ ಗುಂಗು
ಬರಿದಾದ ಸಿಗಾರೇಟು ತುಂಡಿನ ಬೆಂಕಿ ಬೆಳಕು !
ಸುಡು ಸುಡುವ ಎದೆಯೊಳಗೆ ಕಗ್ಗತ್ತಲ ಕಣಿವೆ
ಸಿಗಬೇಕಿತ್ತು ಎನ್ನುವ ಝಗಮಗಿಸುವ ಅಗ್ನಿ ಕುಂಡ !

Thursday, November 22, 2012

ಪತ್ರಕರ್ತ `ಸಾಕ್ಷಿ'ಯಾಗಬೇಕೆ, `ರಕ್ಷಕ'ನಾಗಬೇಕೆ?

                                   - ದಿನೇಶ ಮೀನಮಟ್ಟು 
ಆತ್ಮಹತ್ಯೆ ಮಾಡಿಕೊಳ್ಳುವಂತಹ ಅಪರಾಧವನ್ನು ಅವನೇನು ಮಾಡಿರಲಿಲ್ಲ. ವೃತ್ತಿಯಲ್ಲಿ ಆತ ಒಬ್ಬ ಪತ್ರಿಕಾ ಛಾಯಾಗ್ರಾಹಕನಾಗಿದ್ದ. ಜಗತ್ತಿನ ಅತಿದೊಡ್ಡ ಪತ್ರಿಕೆಗಳು ಆತನ ಪೋಟೋಗಳನ್ನು ಪ್ರಕಟಿಸಲು ತುದಿಗಾಲಲ್ಲಿ ನಿಂತಿದ್ದವು. ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಒಲಿದು ಬಂದಿತ್ತು.

ಎಲ್ಲಕ್ಕಿಂತಲೂ ಮುಖ್ಯವಾಗಿ ಆತನ ವಯಸ್ಸು ಕೇವಲ ಮೂವತ್ತಮೂರು ಆಗಿತ್ತು. ಆ ವಯಸ್ಸಿಗೆ ಸಿಕ್ಕ ಯಶಸ್ಸು, ಮನ್ನಣೆಯನ್ನು ಗಮನಿಸಿದರೆ ವೃತ್ತಿಯಲ್ಲಿ ಆತನ ಭವಿಷ್ಯ ಉಜ್ವಲವಾಗಿತ್ತು ಎನ್ನುವುದಕ್ಕೆ ಅನುಮಾನವೇ ಇರಲಿಲ್ಲ. ಹೀಗಿದ್ದರೂ ಬದುಕುವ ಆಸೆಯನ್ನೇ ಕಳೆದುಕೊಂಡ ಆತ ಆತ್ಮಹತ್ಯೆ ಮಾಡಿಕೊಂಡ. ಆತನ ಹೆಸರು ಕೆವಿನ್ ಕಾರ್ಟರ್.

ಇಷ್ಟು ಹೇಳಿದರೆ ಬಹಳಷ್ಟು ಮಂದಿಗೆ ಗುರುತು ಹತ್ತಲಾರದು. ಆತ ಜಗತ್ತಿಗೆ ಪರಿಚಯವಾಗಿದ್ದೇ ಒಂದು ಫೋಟೊದ ಮೂಲಕ. ದಕ್ಷಿಣ ಆಫ್ರಿಕಾದವನಾಗಿದ್ದ ಕಾರ್ಟರ್ ಬರಗಾಲ ಮತ್ತು ಬಂಡುಕೋರರ ಹಿಂಸಾಚಾರದಿಂದ ನಲುಗಿಹೋಗಿದ್ದ ಸೂಡಾನ್‌ಗೆ ಹೋಗಿದ್ದಾಗ ಅಲ್ಲೊಂದು ಹೃದಯವಿದ್ರಾವಕ ದೃಶ್ಯವನ್ನು ಕಾಣುತ್ತಾನೆ. ತಕ್ಷಣ ಆತನೊಳಗಿದ್ದ ಕಸಬುದಾರ ಛಾಯಾಗ್ರಾಹಕ ಜಾಗೃತನಾಗುತ್ತಾನೆ.

ಹಸಿವಿನಿಂದಾಗಿ ಮೂಳೆಚಕ್ಕಳವಾಗಿ ಹೋಗಿದ್ದ ಮಗುವೊಂದು ಸಂತ್ರಸ್ತರ ಶಿಬಿರದಲ್ಲಿರುವ ಗಂಜಿ ಕೇಂದ್ರದ ಕಡೆ ತೆವಳುತ್ತಾ ಹೋಗುತ್ತಿರುವುದು ಮತ್ತು ಅದರ ಹಿಂದೆಯೇ ಒಂದು ರಣಹದ್ದು ಆ ಮಗುವಿನ ಮೇಲೆ ಎರಗಿಬೀಳಲು ಕಾಯುತ್ತಿರುವ ದೃಶ್ಯ ಅದು.

ಸದ್ದು ಮಾಡಿದರೆ ಹದ್ದು ಹಾರಿಹೋಗುತ್ತೇನೋ ಎಂಬ ಭಯದಿಂದ ಕಾರ್ಟರ್ ಕೂಡಾ ತೆವಳುತ್ತಾ ಸಾಧ್ಯ ಇರುವಷ್ಟು  ಹತ್ತಿರ ಹೋಗಿ ಫೋಟೊ ತೆಗೆಯುತ್ತಾನೆ. ಅದಕ್ಕಿಂತ ಮೊದಲು ಹದ್ದು ರೆಕ್ಕೆ ಬಿಚ್ಚಬಹುದೇನೋ ಎಂಬ ನಿರೀಕ್ಷೆಯಿಂದ ಆತ 20 ನಿಮಿಷ ಕಾದಿದ್ದನಂತೆ.

ಆ ಫೋಟೊ ಮೊದಲು `ದಿ ನೂಯಾರ್ಕ್ ಟೈಮ್ಸ` ಮತ್ತು `ದಿ ಮೇಲ್ ಆ್ಯಂಡ್ ಗಾರ್ಡಿಯನ್` ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಅದರ ನಂತರ  ಹಲವಾರು ಪತ್ರಿಕೆಗಳು ಅದನ್ನು ಮರುಮುದ್ರಿಸಿದ್ದವು. ಜಗತ್ತಿನಾದ್ಯಂತ ಓದುಗರು ಅದಕ್ಕೆ ಪ್ರತಿಕ್ರಿಯಿಸಿದ್ದರು.  ಬರಗಾಲ ಮತ್ತು ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿದ್ದ ಸೂಡಾನ್ ಸರ್ಕಾರಕ್ಕೆ ವಿಶ್ವದ ಎಲ್ಲ ಕಡೆಗಳಿಂದಲೂ ನೆರವು ಹರಿದುಬಂದಿತ್ತು.

ಆದರೆ ಬಹಳಷ್ಟು ಓದುಗರು ನೋವು, ದುಃಖ, ಆಕ್ರೋಶಗಳಿಂದ ಪ್ರತಿಕ್ರಿಯಿಸಿದ್ದರು. ಕೆಲವರು ಛಾಯಾಗ್ರಾಹಕನ ಅಸಂವೇದನಾಶೀಲತೆಯನ್ನು ಟೀಕಿಸಿದ್ದರು. `..ಒಬ್ಬ ಛಾಯಾಗ್ರಾಹಕ ಕೇವಲ ಒಂದು ಫೋಟೊ ಸಂಪಾದನೆಯನ್ನಷ್ಟೇ ನೋಡದೆ, ಮೊದಲು ಹದ್ದನ್ನು ಅಲ್ಲಿಂದ ಓಡಿಸಿ ಮಗುವನ್ನು ರಕ್ಷಿಸಬೇಕಿತ್ತು. ವೃತ್ತಿ ಏನೇ ಇರಲಿ ಆತ ಮೊದಲು ಮನುಷ್ಯನಾಗಬೇಕು..` ಎಂದೆಲ್ಲ ಜನ ಪ್ರತಿಕ್ರಿಯಿಸಿದ್ದರು.

ಕೆಲವು ಪತ್ರಿಕೆಗಳು ಕಾರ್ಟರ್ ಕೂಡಾ ಒಬ್ಬ ರಣಹದ್ದು ಎಂದು ಬಣ್ಣಿಸಿ `ಎರಡು ಹದ್ದುಗಳ ನಡುವೆ ಮಗು ಇತ್ತು` ಎಂದು ಬರೆದಿದ್ದವು. ಕೊನೆಗೆ `ನೂಯಾರ್ಕ್ ಟೈಮ್ಸ`ನ ಸಂಪಾದಕರು ವಿವರಣೆ ಕೊಡಬೇಕಾಯಿತು.

ಸತ್ಯಸಂಗತಿ ಏನೆಂದರೆ ಫೋಟೊ ತೆಗೆದ ಕೂಡಲೇ ಕಾರ್ಟರ್ ಹದ್ದನ್ನು ಅಲ್ಲಿಂದ ಓಡಿಸಿ ಆ ಹೆಣ್ಣುಮಗುವನ್ನು ತಕ್ಷಣದ ಅಪಾಯದಿಂದ ಪಾರು ಮಾಡಿದ್ದ. ಅದರ ನಂತರ ಮಗುವಿನ ಗತಿಯೇನಾಯಿತು ಎನ್ನುವುದು ಆತನಿಗೂ ತಿಳಿದಿರಲಿಲ್ಲ. ಬರಗಾಲಪೀಡಿತ ಸೂಡಾನ್‌ನಲ್ಲಿ ಮುಕ್ತಪತ್ರಿಕಾ ಸ್ವಾತಂತ್ರ್ಯ ಇರಲಿಲ್ಲ.

ಅಲ್ಲಿದ್ದ ಬರಪೀಡಿತ ಮನುಷ್ಯರ ಫೋಟೊ ತೆಗೆಯುವುದು ಅಲ್ಲಿನ ಪ್ರಭುತ್ವಕ್ಕೆ ಇಷ್ಟದ ಕೆಲಸವೂ ಆಗಿರಲಿಲ್ಲ. ಬರಪೀಡಿತ ವ್ಯಕ್ತಿಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸಾಧ್ಯತೆ ಇರುವುದರಿಂದ ಅವರನ್ನು ಮುಟ್ಟುವುದಕ್ಕೆ ನಿರ್ಬಂಧ ಕೂಡಾ ಇತ್ತು. ಒಂದು ಫೋಟೊವನ್ನಷ್ಟೇ ನೋಡಿ ಕಾರ್ಟರ್ ಮನುಷ್ಯನೇ ಅಲ್ಲ ಎಂದು ತೀರ್ಮಾನಿಸಿದ ಅಮಾಯಕ ಜನರಿಗೆ ಈ ಎಲ್ಲ ವಿವರಗಳು ಗೊತ್ತಿರುವ ಸಾಧ್ಯತೆಗಳು ಕಡಿಮೆ. ಇದು ಎಲ್ಲ  ಕಾಲದ ಸತ್ಯ.

`ಆ ಬಾಲಕಿಯ ಫೋಟೊ ತೆಗೆದ ನಂತರ ಕಾರ್ಟರ್ ಮನಸ್ಸು ಕಲಕಿಹೋಗಿತ್ತು. ಆತ ಸಮೀಪದ ಮರವೊಂದರ ನೆರಳಲ್ಲಿ ಕೂತು ಸಿಗರೇಟ್ ಸೇದುತ್ತಾ ದೇವರ ಹತ್ತಿರ ಮಾತನಾಡಿದ್ದ. ಅವನು ಎಷ್ಟೊಂದು ದುಃಖಿತನಾಗಿದ್ದನೆಂದರೆ `ನನಗೆ ನನ್ನ ಮಗಳನ್ನು ಆಲಿಂಗಿಸಬೇಕೆನಿಸುತ್ತದೆ` ಎಂದು ಬಡಬಡಿಸುತ್ತಿದ್ದ` ಎಂದು ಆ ಸಮಯದಲ್ಲಿ ಕಾರ್ಟರ್ ಜತೆಯಲ್ಲಿದ್ದ ಸ್ನೇಹಿತ ಸಿಲ್ವಾ ನಂತರದ ದಿನಗಳಲ್ಲಿ ಬರೆದಿದ್ದ.

ಈ ವಿವಾದಗಳ ನಂತರವೂ ಆ ಚಿತ್ರಕ್ಕಾಗಿ ಕೆವಿನ್ ಕಾರ್ಟರ್  ಪ್ರತಿಷ್ಠಿತ `ಪುಲಿಟ್ಜರ್` ಪ್ರಶಸ್ತಿ ಪಡೆಯುತ್ತಾನೆ. ರಾಯಿಟರ್ ಸುದ್ದಿ ಸಂಸ್ಥೆಯಲ್ಲಿ ಆಕರ್ಷಕ ಸಂಬಳದ ಉದ್ಯೋಗ ಪಡೆಯುತ್ತಾನೆ. ಆದರೆ ಆತ ಎಂದೂ ಸಂತೋಷವಾಗಿರಲಿಲ್ಲ.

ಕೆವಿನ್ ಕಾರ್ಟರ್‌ನ ಬದುಕನ್ನು ಸಾವು ಕೊನೆಗೊಳಿಸಿದರೂ, ಆ ಸಾವಿನಿಂದ ಹುಟ್ಟಿಕೊಂಡ ಅನೇಕ ಪ್ರಶ್ನೆಗಳು ಇಂದು ಕೂಡಾ ಮಾಧ್ಯಮಕ್ಷೇತ್ರದ ಮುಂದೆ ಇವೆ. `ಒಬ್ಬ ಪತ್ರಕರ್ತ ಸಾಕ್ಷಿಯಾಗಬೇಕೇ, ಇಲ್ಲವೇ ರಕ್ಷಕನಾಗಬೇಕೇ?` ಎನ್ನುವುದು ಮೊದಲ ಪ್ರಶ್ನೆ. 

ಮಂಗಳೂರಿನ `ಸ್ಟೇಹೋಂ` ಮೇಲೆ ದಾಳಿ ನಡೆಸಿ ಅಲ್ಲಿದ್ದ ಯುವಕ - ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದ ದುಷ್ಕರ್ಮಿಗಳ ಕೃತ್ಯವನ್ನು ವರದಿ ಮಾಡಿದ್ದ ಸುದ್ದಿವಾಹಿನಿಯ ವರದಿಗಾರ ನವೀನ್ ಸೂರಿಂಜೆಯ ಬಂಧನ ಕೆವಿನ್ ಕಾರ್ಟರ್ ಬಿಟ್ಟುಹೋಗಿರುವ ಪ್ರಶ್ನೆಗಳನ್ನು ಮತ್ತೆ ಕೇಳುವಂತೆ ಮಾಡಿದೆ.

ಅಂತರರಾಷ್ಟ್ರೀಯ ಖ್ಯಾತಿಯ ಪತ್ರಿಕಾಛಾಯಾಗ್ರಾಹಕ ರಘು ರಾಯ್ ಇತ್ತೀಚಿನ ಇಂತಹ ವಿವಾದಗಳ ಬಗ್ಗೆ ಪ್ರತಿಕ್ರಿಯಿಸುತ್ತಾ `ಶೂಟ್ ಮಾಡಿ ಚಿತ್ರ ಪಡೆಯುವುದು ಅದರ ಮೂಲಕ ಘಟನೆಗೆ ಸಾಕ್ಷ್ಯ ಒದಗಿಸುವುದು ಅಷ್ಟೇ ಒಬ್ಬ ಕ್ಯಾಮೆರಾಮೆನ್ ಕೆಲಸ` ಎಂದಿದ್ದರು. ಎಲ್ಲರೂ ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ.

ಇದಕ್ಕೆ ರೋಚಕತೆಯ ಬೆನ್ನುಹತ್ತಿ ದಾರಿ ತಪ್ಪುತ್ತಿರುವ ಕೆಲವು ಸುದ್ದಿವಾಹಿನಿಗಳು ಮುಖ್ಯ ಕಾರಣ. `ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಇಂತಹ ಮಾಧ್ಯಮಗಳಿಗೆ ಮೂಗುದಾರ ಹಾಕಬೇಕು` ಎಂದು ಜನ ಬಹಿರಂಗವಾಗಿಯೇ ಮಾತನಾಡತೊಡಗಿದ್ದಾರೆ. ವೃತ್ತಿನಿಷ್ಠ ಮಾಧ್ಯಮಗಳನ್ನು ಎಂದೂ ಬಯಸದ ಪ್ರಭುತ್ವ, ಹಾದಿ ತಪ್ಪಿರುವ ಕೆಲವು ಸುದ್ದಿವಾಹಿನಿಗಳನ್ನು ಉಲ್ಲೇಖಿಸಿ ಒಟ್ಟು ಪತ್ರಿಕಾ ಸ್ವಾತಂತ್ರ್ಯವನ್ನೇ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ.

ಅದು  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದಿಂದ ಕರ್ನಾಟಕದ ಬಿಜೆಪಿ ಸರ್ಕಾರದವರೆಗೆ ಎಲ್ಲೆಡೆ ವ್ಯವಸ್ಥಿತವಾಗಿ ಪ್ರಾರಂಭವಾಗಿದೆ. ಆದುದರಿಂದ `ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ` ಮತ್ತು `ಪತ್ರಿಕಾ ಸ್ವಾತಂತ್ರ್ಯದ ಹರಣ`ವನ್ನು ಪ್ರತ್ಯೇಕವಾಗಿ ಇಟ್ಟುಕೊಂಡು ಚರ್ಚೆ ನಡೆಸಬೇಕಾಗಿದೆ. ಇವೆರಡನ್ನೂ ಸಾಮಾನ್ಯೀಕರಿಸುವುದರಿಂದ ಅಪಾಯ ಪತ್ರಕರ್ತರಿಗೆ ಮಾತ್ರ ಅಲ್ಲ, ಪ್ರಜಾಪ್ರಭುತ್ವಕ್ಕೂ ಇದೆ.

ಪತ್ರಕರ್ತರು, ಪತ್ರಿಕಾಛಾಯಾಗ್ರಾಹಕರು ಮತ್ತು ಕ್ಯಾಮೆರಾಮೆನ್‌ಗಳು `ಸಾಕ್ಷಿಗಳಾಗಬೇಕೆ, ರಕ್ಷಕರಾಗಬೇಕೆ?` ಎನ್ನುವುದು ಇತ್ತೀಚಿನವರೆಗೆ ಕೇವಲ ನೈತಿಕ ಪ್ರಶ್ನೆಯಾಗಿತ್ತು. ಆದುದರಿಂದ ರಕ್ಷಕರಾಗದೆ ಸಾಕ್ಷಿಗಳಾಗಲಷ್ಟೇ ಹೊರಟವರನ್ನು ಪೊಲೀಸರು ಬಂಧಿಸುತ್ತಿರಲಿಲ್ಲ.

ಈಗಲೂ ಇದನ್ನು ನೈತಿಕ ಪ್ರಶ್ನೆಯಾಗಿಯೇ ಇಟ್ಟುಕೊಂಡು ಚರ್ಚೆ ನಡೆಯಲಿ, ನಡೆಯಲೇಬೇಕು. ಆದರೆ ಪೊಲೀಸರು ಈಗ ಇದನ್ನು ಕಾನೂನಿನ ಪ್ರಶ್ನೆಯನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. `ಪತ್ರಕರ್ತರಿಗೆ `ಸಾಕ್ಷಿದಾರನ ಕರ್ತವ್ಯ`ವಷ್ಟೇ ಮುಖ್ಯ ಅಲ್ಲ, ಆತನಿಗೆ `ರಕ್ಷಕನ ಜವಾಬ್ದಾರಿ`ಯೂ ಇರಬೇಕು, ಪತ್ರಕರ್ತನೊಬ್ಬ ರಕ್ಷಕನಾಗದೆ ಕೇವಲ ಸಾಕ್ಷಿಯಾದರೆ ಆತ ಅಪರಾಧಿ` ಎಂದು ಪೊಲೀಸರು ಹೇಳುತ್ತಿದ್ದಾರೆ. 

ತನ್ನ ವರದಿ ಇಲ್ಲವೇ ಚಿತ್ರವನ್ನು ಸಾಕ್ಷಿಯಾಗಿ ಒದಗಿಸುವ ಮೂಲಕವೇ ಪತ್ರಕರ್ತ ರಕ್ಷಕನಾಗುತ್ತಾನೆ ಎಂಬುದನ್ನು ಪೊಲೀಸರು ಮರೆತಿದ್ದಾರೆ. ನವೀನ್ ಮತ್ತು ಗೆಳೆಯರು `ಹೋಂಸ್ಟೇ` ದಾಳಿಯನ್ನು ಮಾಧ್ಯಮಗಳ ಮೂಲಕ ಬಯಲುಗೊಳಿಸದೆ ಇದ್ದಿದ್ದರೆ ಅಲ್ಲಿನ ಕೋಮುವಾದಿಗಳ ಅಟ್ಟಹಾಸ ಮತ್ತು ಪೊಲೀಸರ ನಿಷ್ಕ್ರಿಯತೆ ಖಂಡಿತ ಬಯಲಾಗುತ್ತಿರಲಿಲ್ಲ. ಈ ದುಷ್ಕೃತ್ಯವನ್ನು ಸಾಕ್ಷಿಸಮೇತ ಬಯಲುಗೊಳಿಸುವ ಮೂಲಕ ನವೀನ್ ಮತ್ತು ಗೆಳೆಯರು ಮುಂದೆ ಇನ್ನಷ್ಟು ಯುವಕ-ಯುವತಿಯರು ಈ ರೀತಿಯ ದಾಳಿಗೊಳಗಾಗದಂತೆ ರಕ್ಷಿಸಿದ್ದಾರೆ.

`ಒಬ್ಬ ವೃತ್ತಿನಿಷ್ಠ, ಸಂವೇದನಾಶೀಲ ಮತ್ತು ಪ್ರಾಮಾಣಿಕನಾದ ಪತ್ರಕರ್ತ ಇಲ್ಲವೇ ಪತ್ರಿಕಾಛಾಯಾಗ್ರಾಹಕ ಯಾವ ದೇಶ ಇಲ್ಲವೇ ಕಾಲದಲ್ಲಿ  ಸಂತೋಷ-ನೆಮ್ಮದಿಯಿಂದ ಬದುಕಲು ಸಾಧ್ಯವೇ?` ಎನ್ನುವ ಎರಡನೆ ಪ್ರಶ್ನೆಯನ್ನು ಕೂಡಾ ಕೆವಿನ್ ಕಾರ್ಟರ್ ಬಿಟ್ಟುಹೋಗಿದ್ದಾನೆ. ಆತನ ಆತ್ಮಹತ್ಯೆಗೆ ಸೂಡಾನ್ ಬಾಲಕಿಯ ಫೋಟೊವೊಂದೇ ಕಾರಣ ಅಲ್ಲ.

ವರ್ಣದ್ವೇಷ ಅದರ ಉತ್ತುಂಗದಲ್ಲಿರುವ ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ವರ್ಗದ ಬಿಳಿಯರ ಕುಟುಂಬದಲ್ಲಿ ಹುಟ್ಟಿದ್ದ ಕಾರ್ಟರ್ ಬಾಲ್ಯದಿಂದಲೇ ಕಪ್ಪುಜನಾಂಗದವರ ಮೇಲೆ ಬಿಳಿಯರು ನಡೆಸುತ್ತಿದ್ದ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದವ. ಅವಕಾಶ ಸಿಕ್ಕಿದಾಗಲೆಲ್ಲ ಅದರ ವಿರುದ್ಧ ಪ್ರತಿಭಟನೆ ನಡೆಸಿದವ. `ದಿ ಬ್ಯಾಂಗ್ ಬ್ಯಾಂಗ್ ಕ್ಲಬ್` ಎಂದು ಕರೆಯಲಾಗುತ್ತಿದ್ದ ನಾಲ್ಕು ಬಿಳಿಯ ಪತ್ರಿಕಾಛಾಯಾಗ್ರಾಹಕರ ಸಂಘಟನೆಯಲ್ಲಿ ಕಾರ್ಟರ್ ಒಬ್ಬನಾಗಿದ್ದ.

ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ದುಷ್ಕರ್ಮಿಗಳು ಕಪ್ಪುಜನಾಂಗಕ್ಕೆ ಸೇರಿದ ವ್ಯಕ್ತಿಗಳ ಕುತ್ತಿಗೆಗೆ ಟಯರ್‌ಗಳನ್ನು ತೂಗುಹಾಕಿ ಬೆಂಕಿಹಚ್ಚಿ ಸಾಯಿಸುವುದು ಸಾಮಾನ್ಯವಾಗಿತ್ತು. ಇದಕ್ಕೆ `ನೆಕ್ಲೆಸಿಂಗ್` ಎಂದು ಕರೆಯುತ್ತಿದ್ದರು. ಇಂತಹ ಮೊದಲ ಘಟನೆಯ ಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಣೆಗೆ ಕೊಟ್ಟವ ಕಾರ್ಟರ್. ಈ ರೀತಿಯ ಹಲವಾರು ಅಮಾನುಷ ಘಟನೆಗಳ ಚಿತ್ರಗಳನ್ನು ಕಾರ್ಟರ್ ತೆಗೆದಿದ್ದ. ವೃತ್ತಿಜೀವನದಲ್ಲಿ ಎದುರಿಸಿದ ಇಂತಹ ಘಟನೆಗಳಿಂದ ಆತ ನೊಂದುಹೋಗಿದ್ದ.

 ಅಷ್ಟೊತ್ತಿಗೆ ಆತನ ಜೀವದ ಗೆಳೆಯ ಮತ್ತು `ದಿ ಬ್ಯಾಂಗ್‌ಬ್ಯಾಂಗ್ ಕ್ಲಬ್`ನ ಸದಸ್ಯ ಕೆನ್ ಊಸ್ಟರ್‌ಬ್ರೋಕ್ ಫೋಟೊ ತೆಗೆಯುತ್ತಿದ್ದಾಗಲೇ ಪೊಲೀಸರ ಗುಂಡಿಗೆ ಬಲಿಯಾಗುತ್ತಾನೆ. ಸಾವಿನ ಸಮಯದಲ್ಲಿ ಗೆಳೆಯನ ಸಮೀಪವೇ ಕಾರ್ಟರ್ ಇದ್ದ. ಆತನ ಮನೋಕ್ಲೇಶಕ್ಕೆ ಈ ಘಟನೆ ಕೂಡಾ ಕಾರಣ. ನಂತರದ ದಿನಗಳಲ್ಲಿ ಕುಡಿತದ ದಾಸನಾಗಿ ಹೋಗಿದ್ದ, ಮಾದಕ ವ್ಯಸನಿಯೂ ಆಗಿದ್ದ.

ಕೊನೆಕೊನೆಗೆ ತಾನು ತೆಗೆದ ಚಿತ್ರಗಳೆಲ್ಲವೂ ಎದ್ದುಬಂದು ಆತನನ್ನು ಕಾಡತೊಡಗಿ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡುಬಿಟ್ಟಿದ್ದವು.  ಸಾಯುವ ಮೊದಲು ಬರೆದಿಟ್ಟಿದ ಪತ್ರ ಕೂಡಾ ಇದನ್ನೇ ಹೇಳುತ್ತಿದೆ:  `....ಹತ್ಯೆಗಳು... ಹೆಣಗಳು.. ಕೋಪ, ನೋವು... ಹಸಿವು ಮತ್ತು ಗಾಯದಿಂದ ನರಳುತ್ತಿರುವ ಮಕ್ಕಳು... ಹಿಂಸಾವಿನೋದಿ ಹುಚ್ಚು ಪೊಲೀಸರು... -ಈ ಎಲ್ಲ ನೆನಪುಗಳು ನನ್ನನ್ನು ಕಾಡುತ್ತಿವೆ. ನಾನು ನನ್ನ ಗೆಳೆಯ ಕೆನ್‌ನನ್ನು ಭೇಟಿಯಾಗಲು ಹೋಗುತ್ತಿದ್ದೇನೆ, ಆದೃಷ್ಟಶಾಲಿಯಾಗಿದ್ದರೆ ಆತನ ಭೇಟಿಯಾಗಬಹುದು....` ಎಂದು ಕಾರ್ಟರ್ ಆ ಪತ್ರದಲ್ಲಿ ಬರೆದಿದ್ದ.

 ಪತ್ರಕರ್ತರು ಸಂವೇದನಾಶೀಲರಾಗಿರಕೆಂದು ಸಮಾಜ ಬಯಸುತ್ತದೆ, ಸರ್ಕಾರವೂ ಅದನ್ನೇ ಹೇಳುತ್ತಿದೆ. ಆದರೆ ರಾಕ್ಷಸ ರೂಪ ಪಡೆಯುತ್ತಿರುವ ಸರ್ಕಾರ ಮತ್ತು ಸಂವೇದನೆಯನ್ನೇ ಕಳೆದುಕೊಳ್ಳುತ್ತಿರುವ ಸಮಾಜದ ಮಧ್ಯೆ ಪತ್ರಕರ್ತ ಸಂವೇದನಾಶೀಲನಾಗಿ ಉಳಿಯಲು ಹೇಗೆ ಸಾಧ್ಯ? ಬಹಳಷ್ಟು ಸಂದರ್ಭಗಳಲ್ಲಿ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ಹೊರಟ ಪತ್ರಕರ್ತ ಹತಾಶನಾಗುತ್ತಾನೆ, ಸಿನಿಕನಾಗುತ್ತಾನೆ, ದುರ್ಬಲ ಮನಸ್ಸಿನವನಾಗಿದ್ದರೆ ಕೊನೆಗೆ ಕೆವಿನ್ ಕಾರ್ಟರ್‌ನಂತೆ ಆತ್ಮಹತ್ಯೆ ಮಾಡಿಕೊಳ್ಳಬಹುದು.

ಮತ್ತೆ ಮೊದಲಿನ ಪ್ರಶ್ನೆಗೆ ಬರುವುದಾದರೆ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಅಪರಾಧ ಮಾಡಿದ್ದ? ಇದನ್ನೇ ಇನ್ನು ಸ್ವಲ್ಪ ಬದಲಾಯಿಸಿ ಕೇಳುವುದಾದರೆ ನವೀನ್ ಸೂರಿಂಜೆ ಎಂಬ ಪತ್ರಕರ್ತ ಬಂಧನಕ್ಕೊಳಗಾಗುವಂತಹ ಯಾವ ಅಪರಾಧ ಮಾಡಿದ್ದ? ಅಪರಾಧ ಮಾಡದೆ ಇದ್ದಿದ್ದರೆ ಬಂಧಿತ ಪತ್ರಕರ್ತನ ವೃದ್ದ ತಂದೆ-ತಾಯಿಯ ನೋವು ನಮ್ಮದು ಕೂಡಾ ಎಂದು ಸಮಾಜಕ್ಕೆ ಯಾಕೆ ಅನಿಸುವುದಿಲ್ಲ?

ಕೃಪೆ : ಪ್ರಜಾವಾಣಿ

Wednesday, November 21, 2012

ಮಾತ್ಗವಿತೆ-101

ಸುಖಕ್ಕೆ ಸಾವಿರದ ಹಾದಿಗಳು
ತುಂಬ ಹಾಸಿರುವ ಕಲ್ಲುಮುಳ್ಳುಗಳು  !
ಕತ್ತಲ ರಾತ್ರಿಗೆ ಚಂದ್ರನ ಬೆಳಕಿಲ್ಲ ;
ಇರುವುದೊಂದೇ ಮಿಣುಕುವ ಚುಕ್ಕಿ
ಮುಚ್ಚಿದ ಮೋಡಗಳ ತೆರೆ ಸರಿಸುವ
ಗೆಲುವಿನ ನಗೆ ಬೀರುತ್ತಿದೆ !

Thursday, November 15, 2012

ಮೊಗ್ಗು ಅರಳಲೇ ಬೇಕು .... !

ಮೂಲ ಮರಾಠಿ : ಕೆ.ಬಿ. ಹನ್ನೂರಕರ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
ಜಯವಂತರಾವ ಜಗತಾಪ – ಮಾಧುರಿ !
ಇಬ್ಬರದೂ ಮಧುರ ದಾಂಪತ್ಯ ; ಸುಖೀ ಸಂಸಾರ !
ಇಬ್ಬರೂ ಕಲಿತವರು ; ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಅವರು ಉದ್ಯೋಗಿಗಳು ಕೂಡ. ಅವರ ಸುಂದರವಾದ ಸಂಸಾರದಲ್ಲಿ ಹೂವು ಅರಳಿದಂತೆ ಸಾಗರ ಎನ್ನುವ ಮಗ ಮಡಿಲು ತುಂಬಿದ್ದ. ದುಂಡುದುಂಡಾಗಿದ್ದ ಸಾಗರ ಬೆಳೆದಂತೆಲ್ಲ ಬುದ್ಧಿವಂತನಾಗುತ್ತಲೇ ಶಾಲೆಯ ಕಟ್ಟೆಯನ್ನೂ ಹತ್ತಿ ಇಂಗ್ಲೀಷ್ ಪಾಠವನ್ನು ಕಲಿಯುತ್ತಿದ್ದ !
ಸುಖೀ ಸಂಸಾರಕ್ಕೆ ದೃಷ್ಟಿ ಹತ್ತಲು ಹೆಚ್ಚು ಹೊತ್ತು ಹಿಡಿಯುವುದಿಲ್ಲ ಅಲ್ಲವೆ ?
ಜಯವಂತರಾವ ಮತ್ತು ಮಾಧುರಿ ದಾಂಪತ್ಯದಲ್ಲೂ ಹಾಗೇ ಆಯಿತು !
ಅವರಿಬ್ಬರಲ್ಲಿ ಈಗ ಕೆಲ ದಿನಗಳಿಂದ ವಿಚಾರವೊಂದು ತಲೆ ತಿನ್ನತೊಡಗಿತ್ತು !
ಇಂದು ಸಾಯಂಕಾಲ !
ಇಬ್ಬರೂ ಬ್ಯಾಂಕಿನಿಂದ ಮನೆಗೆ ಮರಳಿದ್ದರು. ತಲೆ ತಿನ್ನುತ್ತಿದ್ದ ವಿಷಯದ ಬಗ್ಗೆ ಚರ್ಚೆ ಮಾಡುವ ವಿಚಾರ ಅವರಲ್ಲಿ ಇತ್ತು !
ಮಾಧುರಿ ಮತ್ತೇ ಬಸುರಿಯಾಗಿದ್ದಳು !
ಕುತೂಹಲ, ಹಂಬಲ, ಉತ್ಸಾಹ, ಆತಂಕ ಇಬ್ಬರಲ್ಲೂ ಮನೆ ಮಾಡಿದ್ದವು !
ಹುಟ್ಟುವ ಕೂಸು ಹೆಣ್ಣೋ ಗಂಡೋ ?
ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡಿಸಿದರೆ ... ... ?
ಇದೇ ವಿಚಾರದ ಗೊಂದಲದಲ್ಲಿ ಅವರಿಬ್ಬರೂ ಚಿಂತಿತರಾಗಿದ್ದರು !
ಭ್ರೂಣಲಿಂಗ ಪತ್ತೆ ಮಾಡಿಸುವುದು ಕಾನೂನಿನ ಪ್ರಕಾರ ಅಪರಾಧ !
ಅದು ಅವರಿಬ್ಬರಿಗೂ ತಿಳಿಯದ ಸಂಗತಿಯೇನಲ್ಲ !
ಆದರೂ ... !
ಜಯವಂತರಾವ್ ಹೇಳತೊಡಗಿದ ;
“ಮಾಧುರಿ, ಕಾಯ್ದೆ ಮಾಡೋದ ಮುರಿಯು ಸಲ್ವಾಗಿ ! ನಮಗ ಅದ ಬೇಕಾಗಿಲ್ಲ ಬಿಡ. ಆದರ ಬರೀ ಮಾಹಿತಿ ತಿಳ್ಕೋ ಸಲ್ವಾಗಿಯಾದರೂ ಈ ಪರೀಕ್ಷೆ ಮಾಡ್ಸೂಣುಲಾ ? ಇದು ಪಾಪದ ಕೆಲ್ಸ, ಬೇಕಾಯ್ದೆಶೀರ ಅನ್ನೋದೇನೋ ಖರೆ. ಆದರ ಭಾಳಷ್ಟ ಮಂದಿ ಸಿಟಿ ಒಳಗಿರೋ ಪ್ರಸಿದ್ಧ ಡಾಕ್ಟರ್ ಮಾಧವ ಗುಂಡೆ ದವಾಖಾನಿಯೊಳಗ ಹಿಂಥಾದ್ದss ಮಾಡ್ತಾರಂತ ಮಾತಾಡ್ಕೋತಾರು”
ಚರ್ಚೆ ಮುಂದುವರಿದಿತ್ತು ... ... !
*****
ಮಾಧವರಾವ ಗುಂಡೆ !
ನಗರದ ಪ್ರಖ್ಯಾತ ಸ್ತ್ರೀ ರೋಗ ತಜ್ಞ ! ಹಲವಾರು ರಾಜಕೀಯ ಮುಖಂಡರೊಂದಿಗೆ ಆತನ ಸಂಪರ್ಕವೂ ಇತ್ತು !
ಆತ ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡುತ್ತಿದ್ದ !
ಅನೇಕ ಏಜಂಟರನ್ನು ನೇಮಿಸಿಕೊಂಡು ದೇಶದಲ್ಲಿಯ ಮೂಲೆ ಮೂಲೆಗಳಲ್ಲಿ ವ್ಯಾಪಾರ ಸುರುವಿಟ್ಟುಕೊಂಡಿದ್ದ. ಸಾವಿರಾರು ರುಪಾಯಿಗಳನ್ನು ಜನರಿಂದ ಹಿರಿದುಕೊಂಡು ಪಾಪದ ಕೆಲಸ ಮಾಡುತ್ತಿದ್ದ ಕಟುಕ ! ಕಾಯ್ದೆಯನ್ನು ಮೀರಿಯೂ ಹೇಗೆ ಮುಂದುವರಿಯಬಹುದು ಎಂಬುದಕ್ಕೆ ಆತ ಗುಪ್ತ ಮಾರ್ಗವನ್ನೇ ತೋರಿಸಿದ್ದ ! ಇದೆಲ್ಲದರ ಉಸ್ತುವಾರಿ ನೋಡಿಕೊಳ್ಳಲು ಶ್ರೀಧರ ಪೋಟಬಾಳೆ ಹೆಸರಿನ ನಂಬಿಗಸ್ಥ ಭಂಟನೊಬ್ಬನನ್ನು ಆತ ನೇಮಿಸಿಕೊಂಡಿದ್ದ !
*****
ಜಯವಂತರಾವ ಮತ್ತು ಮಾಧುರಿ ಕೊನೆಗೊಮ್ಮೆ ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಳ್ಳಲು ರಾಜಿಯಾದರು ! ಡಾ. ಗುಂಡೆಯ ದವಾಖಾನೆಗೆ ಹೋಗಲು ಅವರು ನಿರ್ಧರಿಸಿದರು ! ಸಾವಿರಾರು ರುಪಾಯಿ ಫೀಜು ತುಂಬಿ ರವಿವಾರದ ಒಂದು ದಿನ ಸಾಯಂಕಾಲ ಪರೀಕ್ಷೆಯ ಸಮಯವನ್ನು ನಿಗದಿಪಡಿಸಿಕೊಂಡರು !
*****
ರವಿವಾರ ಓಡೋಡುತ್ತ ಬಂತು !
ಸಂಜೆಯ ಸಮಯ. ದವಾಖಾನೆಯ ಭವ್ಯ ಕಟ್ಟಡದ ಸುಸಜ್ಜಿತ ನೆಲಮಾಳಿಗೆಯಲ್ಲಿ ಯಾರಿಗೂ ಸುಳಿವು ಸಿಗದಂತೆ ಡಾ. ಗುಂಡೆ ಸೊನೋಗ್ರಾಫಿ ಮಶೀನು ಇಟ್ಟಿದ್ದ ! ಮಾಧುರಿಯನ್ನು ಒಳ ಕರೆಯಲಾಯಿತು. ಪರೀಕ್ಷೆಯ ಎಲ್ಲ ಹಂತವನ್ನೂ ಒಂದೊಂದಾಗಿ ಮುಗಿಸಲಾಯಿತು. ಕೆಲ ಹೊತ್ತು ಕಳೆದ ಮೇಲೆ ತನ್ನ ಆಫೀಸಿಗೆ ಬರುವಂತೆ ಜಯವಂತರಾವ ಮತ್ತು ಮಾಧುರಿಗೆ ಹೇಳಿದ.
ಗಂಡ-ಹೆಂಡತಿಯರಿಬ್ಬರೂ ಒಳ ಹೊಕ್ಕಾಗ, ಡಾ. ಗುಂಡೆ, ರೀಪೋರ್ಟನ್ನು ತುಂಬ ಚಿಂತಾಕ್ರಾಂತನಾದಂತೆ ನೋಡುತ್ತಿದ್ದ ! ದಂಪತಿಗಳನ್ನು ಕುಳಿತುಕೊಳ್ಳಲು ಹೇಳಿ, ರಿಪೋರ್ಟು ಸರಿಸಿಟ್ಟು ಹೇಳಿದ,
“ಹೆಣ್ಣು ... ಹೆಣ್ಣು ಮಗುವಿದೆ !”
ಡಾ. ಗುಂಡೆಯ ಮಾತು ಕೇಳಿ ಜಯವಂತರಾವನ ಮುಖ ಕಳೆಗುಂದಿತು ! 
ಡಾ. ಗುಂಡೆಯೇ ಮತ್ತೇ ಮಾತನ್ನು ಮುಂದುವರಿಸಿದ.
“ಹ್ಞಾss ! ಏನ ಮಾಡೂಣು ಹೇಳ್ರಿ ? ಕೂಸ ಬೆಳಿಬೇಕೋ ಇಲ್ಲ ... ... ... ?”
ವಿಚಾರ ಮಾಡದೇ ನಿರ್ಧರಿಸುವುದು ಸರಿಯಲ್ಲ ಎಂದುಕೊಂಡ ಗಂಡ-ಹೆಂಡತಿಯರಿಬ್ಬರೂ ಆದಷ್ಟು ಬೇಗನೇ ತಮ್ಮ ನಿರ್ಧಾರವನ್ನು ತಿಳಿಸುವುದಾಗಿ ಹೇಳಿ ಅಲ್ಲಿಂದ ಎದ್ದು ಸೀದಾ ಮನೆಗೆ ಬಂದರು !
*****
ಒಂದೆರಡು ದಿನ ಆ ಬಗ್ಗೆ ಯಾವ ಚರ್ಚೆಯೂ ನಡೆಯಲಿಲ್ಲ !
ಒಂದು ದಿನ ಮಾತನಾಡುತ್ತ ಕುಳಿತಾಗ ಆ ವಿಷಯವನ್ನು ಯಜವಂತರಾವನೇ ಪ್ರಸ್ತಾಪ ಮಾಡಿದ ;
“ಮಾಧುರಿ, ನಿನ್ನ ಅಭಿಪ್ರಾಯ ಏನು ?”
“ಯಾವುದಕ್ಕೆ ?”
“ಅದೇ ಡಾ. ಗುಂಡೆಯವರ ಕಡೆ ಹೋಗೋದು ... !”
“ನೋಡ್ರಿ, ನನ್ನ ಹೊಟ್ಟಿಯೊಳಗ ಹೆಣ್ಣುಕೂಸು ಬೆಳ್ಯಾಕತ್ತೇತಿ ಅನ್ನೂದss ನನಗ ಹೆಮ್ಮೀ ಅನ್ನಿಸಾಕತ್ತೇತಿ ! ದೇವ್ರು, ಮೊದಲ ಬಂಗಾರದಂಥಾ ಮಗನ ಕೊಟ್ಟ ; ಈಗ ಮಗಳು ! ಮಗಳ ಹುಟ್ಟಿ ಬಂದ್ರ ಮನಿಯೊಳಗ ಸುಖ-ಶಾಂತಿ ಹೆಚ್ಚಾಗ್ತಾವ್ರಿ !”
ಜಯವಂತರಾವ ಆಕೆಯ ಮಾತಿಗೆ ಸಹಮತ ತೋರಲಿಲ್ಲ !
ಹೆಣ್ಣುಮಗುವಿನ ತೊಂದರೆ ತಮಗೆ ಬೇಡ ಎಂದು ಬಿಟ್ಟ !
ಮಾಧುರಿಗೆ ಸಿಟ್ಟು ಉಕ್ಕಿ ಬಂತು ! ಆಕೆ ತುಂಬ ಜೋರಿನಿಂದಲೇ ಹೇಳತೊಡಗಿದಳು ;
“ನೋಡ್ರಿ, ಈ ಜಗತ್ತ ಉದ್ಧಾರ ಮಾಡುವಾಕೀ ಒಬ್ಬ ಹೆಣ್ಣss ಆಗಿರ್ತಾಳ ಅನ್ನೂದ ಮರೀಬ್ಯಾಡ್ರಿ. ಕ್ರಾಂತಿಗೂ ಆಕೀ ತಾಯಿ ಮತ್ತ ಶಾಂತಿಗೂ ತಾಯಿ ! ವೀರಮಾತಾ ಜೀಜಾಬಾಯಿ ಇರದಿದ್ರ ವೀರ ಪರಾಕ್ರಮಿ ಶಿವಾಜಿ ಮಾರಾಜ್ರು ಹುಟ್ಟಿ ಬರಾಕ ಸಾಧ್ಯssನ ಇರ್ಲಿಲ್ಲ ! ಸಾವಿತ್ರಿಬಾಯಿ ಫುಲೆ ಇರದಿದ್ರ ಸ್ತ್ರೀ ಶಿಕ್ಷಣದ ಹಾದಿಯೇ ಕಾಣ್ಸೂತ್ತಿರ್ಲಿಲ್ಲ ! ಸನಾತನಿ ವಿಚಾರಗೋಳಿಂದ ಕುರುಡ ಆಗಿರೋ ಸಮಾಜಕ್ಕ ಸ್ತ್ರೀ ಶಿಕ್ಷಣದ ಮೂಲಕನ ವೈಭವ ಪ್ರಾಪ್ತ ಆಗೇತಿ ಅನ್ನೋದ ಮರೀಬ್ಯಾಡ್ರಿ ! ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಾಗ ಝಾನ್ಸಿ ರಾಣಿ ಲಕ್ಷ್ಮಿಬಾಯಿ, ತಾರಾರಾಣಿ, ಅಹಲ್ಯ ಹೋಳ್ಕರ್, ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮೊದಲಾದ ವೀರವನಿತೇರು ರಣರಂಗಕ್ಕ ಇಳ್ದು ಹುತಾತ್ಮರಾಗ್ಯಾರು ! ಪಂಡಿತ ರಮಬಾಯಿ, ಆನಿಬೇಸೆಂಟ್, ಇಂದಿರಾ ಗಾಂಧಿ ವೊದಲಾದೋರೆಲ್ಲ ಇತಿಹಾಸ ನಿರ್ಮಿಸ್ಯಾರು ! ಸಿಂಧೂತಾಯಿ ಸಪಕಾಳ, ಕಲ್ಪನಾ ಚಾವ್ಲಾ ಮೊದಲಾದೋರು ಹೆಣ್ಣಮಕ್ಕಳss ಅಲ್ಲೇನ್ರಿ ? ... ... ...”
ಜಯವಂತರಾವ ತಟಸ್ಥನಾಗಿಯೇ ಕೇಳುತ್ತಿದ್ದ ! ಮಾಧುರಿ ತಡೆಯಿಲ್ಲದಂತೆ ಮಾತನಾಡುತ್ತಿದ್ದಳು !
“... ... ... ಜಗತ್ತನ್ನ ಉದ್ಧಾರ ಮಾಡೂ ಭಾಳ ದೊಡ್ಡ ಶಕ್ತಿ ಹೆಣ್ಣಮಕ್ಕಳ ಕಡೀ ಇರ್ತೇತಿ ! ಹೆಣ್ಣಂದ್ರ ಬರೀ ಹೆಣ್ಣಲ್ಲ ! ಆಕೀ ತಾಯಿ ಆಗ್ತಾಳು, ಮಗಳ ಆಗ್ತಾಳು, ಅಕ್ಕಾ-ತಂಗಿ ಆಗ್ತಾಳು, ಸೊಸಿ ಆಗ್ತಾಳು, ಅತ್ತೀ ಆಗ್ತಾಳು ! ತ್ಯಾಗ, ಪ್ರೇಮ, ಪರಾಕ್ರಮ, ಸಹಿಷ್ಣುತೆ, ವಿವೇಕ, ಚೊಲೋ ಗುಣಗೋಳ ಖಣಿ ಆಗಿರ್ತಾಳು ! ನಿಸರ್ಗವನ್ನ ಸಮತೋಲನ ಮಾಡಾಕೂ ಹೆಣ್ಣ ಬೇಕಾಗ್ತಾಳು ಮರೀಬ್ಯಾಡ್ರಿ ! ... ... ...”
ಒಂದಿಷ್ಟು ಉಸಿರು ಒಳಗೆಳೆದುಕೊಂಡ ಮಾಧುರಿ ಮತ್ತೇ ಮಾತನಾಡತೊಡಗಿದಳು ;
“... ... ... ಡಾ. ಗುಂಡೇದ ಪಾಪದ ಫಲಾ ತುಂಬಿ ಬಂದೇತಿ ಅಂತ ಮಂದಿ ಮಾತಾಡ್ತಿರ್ತಾರು ! ಹೊಟ್ಟ್ಯಾಗ ಇರೂವಾಗನ ಹೆಣ್ಣಕೂಸಗಳ್ನ ಕೊಲ್ಲೂ ಆ ಡಾ. ಗುಂಡೆ ವೈದ್ಯ ವೃತ್ತಿಗನ ಮಸಿ ಬಳಿಯಾಕತ್ತಾನು. ಅಂವಾ ನಮ್ಮ ಸಮಾಜಕ್ಕ ಅಂಟಿದ ಒಂದ್ ದೊಡ್ಡ ವಿಕೃತಿ ! ನಿಮಗ ಗೊತ್ತಿಲ್ಲೇನ್ರಿ ... ; ಮುನ್ಸಿಪಾಲ್ಟಿ ಗಟಾರದಾಗ ಎಳೀ ಕಂದಮ್ಮಗೋಳ ಹೆಣಾ ಸಿಕ್ಕಾವು ! ಬೀದಿ ನಾಯಿಗೋಳು ಹಂಗ ಹರ್ದ ತಿಂತಿರ್ತಾವು ! ಕಾಗಿ, ಹದ್ದು ಅಳಿದುಳಿದ ಎಲುವು ಮತ್ತ ಮಾಂಸವನ್ನು ಎತ್ಕೊಂಡ ಹೊಂಟಾವು ! ಅಷ್ಟ ಯಾಕ... ಡಾ. ಗುಂಡೆನ ಹೊಲದಾಗೀನ ಬಾವಿಯಾಗನ ಹೆಣ್ಣ ಕೂಸಗೋಳ ಎಲವುಗೋಳ ಸಿಕ್ಕಾವಲಾ ! ಕಾಯ್ದೆ, ಪೋಲೀಸ್ರು ಏನೂ ಮಾಡೂದಿಲ್ಲ. ಗೊತ್ತಿದ್ರೂ ಗೊತ್ತಿರ್ಲಾರ್ದಾಂಗ ಇರ್ತಾರು ! ಅಲ್ರಿ, ಆ ಸತ್ತ ಹೆಣ್ಣ ಮಕ್ಕಳ ಬದಕಿದ್ರ ಯಾರೋ ಡಾಕ್ಟರ್, ಲೆಕ್ಚರ್, ಇಂಜೀನಿಯರ್, ವಿಜ್ಞಾನಿ, ಪ್ರಧಾನ ಮಂತ್ರಿ, ರಾಷ್ಟ್ರಪತಿ, ಸಮಾಜಸೇವಕಿ, ರಾಜಕಾರಣಿ, ಗೃಹಿಣಿ ಆಗ್ಬಹುದಿತ್ತಲ್ರಿ ? ನಿಮ್ಮ ಅವ್ವನೂ ಒಬ್ಬಾಕಿ ಹೆಣ್ಣ ಆಗಿದ್ರಿಂದನ ನೀವ್ ಇಂದ ಈ ಜಗತ್ತ ನೋಡಾಕತ್ತೇರಿ ! ಇದೆಲ್ಲ ನೀವ ಯಾಕ ಮರಿತೇರಿ ? ... ... ... ... ಖರೇ ಹೇಳ್ಬೇಕಂದ್ರ ಆ ಕೆಟ್ಟ ಹುಳಾ ಡಾ. ಗುಂಡೆ ಕಡೀ ನನಗ ಹೋಗಾಕ ಮನಸ್ಸ ಇರ್ಲಿಲ್ಲ ! ನಿಮ್ಮ ಬಲವಂತಕ ಬಲಿ ಆದ್ನಿ ಅಷ್ಟ”
ಜಯವಂತರಾವ ಆಕೆ ಮಾತನಾಡುವಾಗ ನಡುವೆ ಬಾಯಿ ಹಾಕಲಿಲ್ಲ ! ಆಕೆ ಮಾತು ನಿಲ್ಲಿಸಿದ ಮೇಲೆ ಏನೂ ತಿಳಿಯದವನಂತೆ ತನ್ನ ವಿಚಾರ ಹೇಳತೊಡಗಿದ !
“ಮುಗಿತೇನ ನಿನ್ನ ಸ್ತ್ರೀಮಾತ್ಮೆ ಪುರಾಣಾ ? ಮಾಧುರಿ, ಹಕೀಕತ್ತ ತಿಳ್ಯೂಲ್ಲದ ಭಾವನಾದ ಭರದಾಗ ತೆಗ್ದಕೊಳ್ಳೂ ನಿರ್ಧಾರಗೋಳು ತಪ್ಪ ಹಾದಿಗಿ ಒಯ್ಯತಾವು ! ಸಮಾಜದ ಹಿತಾ, ದೇಶದ ಹಿತಾ, ಸಮಾಜದ ಅರಿವು ಇಂದ ಬದುಕ ಕಟ್ಟೂದಿಲ್ಲ ! ಸ್ವಾರ್ಥ ಮತ್ತ ಸ್ವಹಿತ ಬಿಟ್ಟ ಬ್ಯಾರೆ ಯಾವುದರಾಗೂ ಮಂದಿಗಿ ಆಸಕ್ತಿ ಇಲ್ಲ ! ಸ್ತ್ರೀಭ್ರೂಣ ಹತ್ಯೆಯಿಂದ ಹೆಣ್ಣಮಕ್ಕಳ ಸಂಖ್ಯಾ ಕಮ್ಮಿ ಆಗ್ತೇತಿ ಅನ್ನೂ ನಿನ್ನ ವಿಚಾರ ತಲ್ಯಾಗಿಂದ ತಗದ ಬಿಡ. ನಾವು ನಮ್ಮ ಕುಟುಂಬದ್ದಷ್ಟss ವಿಚಾರ ಮಾಡೂಣು ! ಶಿವಾಜಿ ಮಾರಾಜ್ರು ಬ್ಯಾರೆಯೋರ ಮನಿಯೊಳಗ ಹುಟ್ಟಿ ಬರ್ಲಿ ಅಂತ ಯಾರಾದ್ರೂ ಅಂತಾರೇನ ? ಹುಚ್ಚರಾಂಗ ವಿಚಾರ ಮಾಡಬ್ಯಾಡ ! ಸುಮ್ನss ನಮ್ಮ ಮನ್ಯಾಗ ಕಿರಿಕಿರಿ ಬ್ಯಾಡ. ಟೈಮ್ ಭಾಳ ಕಮ್ಮಿ ಏತಿ. ಗರ್ಭಪಾತ ಮಾಡಸ್ಕೊಳ್ಳಾಕ ತಯಾರಾಗ ನೀ ! ಮುಂದಿಂದೆಲ್ಲ ಬರೊಬ್ಬರಿ ಆಗ್ತೇತಿ !”
ಆತನ ಮಾತು ಕೇಳಿದ ಮಾಧುರಿ ಸಂತಾಪಿತಗೊಂಡಳು ! ಆವೇಶದಿಂದಲೇ ಆಕೆ ಮರು ಉತ್ತರ ನೀಡತೊಡಗಿದಳು !
“ಅಲ್ರಿ, ನೀವು ಈ ಸಮಾಜದಾಗ ಸುಶಿಕ್ಷಿತ ವ್ಯಕ್ತಿ ಅನ್ಸಕೊಂಡಾವ್ರು ! ಹಿಂಥಾ ವಿಚಾರಗೋಳು ನಿಮಗ ಶೋಭಾ ತರೂದಿಲ್ಲ ! ನೀವ ಏssನ ಹೇಳ್ರಿ. ನಾ ಅಂತೂ ಒಪ್ಪೂದಿಲ್ಲ ! ಪಾಪದ ಹಾದಿ ತುಳಿಯೂದಿಲ್ಲ. ತಿಳ್ಕೋರಿ !”
ಜಯವಂತರಾವನಿಗೂ ಕೋಪ ಉಕ್ಕಿ ಬಂತು !
ಮಾಧುರಿಯ ಸಂಕಟ ಆತನಿಗೆ ಅರಿವಾಗಲೇ ಇಲ್ಲ ! ಹಠಕ್ಕೆ ಬಿದ್ದವರಂತೆ ಆತ ಮತ್ತೇ ವಾದಿಸಿದ !
“ನೋಡ ಮಾಧುರಿ, ನಾನು ಇಡೀ ಸ್ತ್ರೀ ಜಾತಿಯನ್ನ ದ್ವೇಷಾ ಮಾಡಾಕತ್ತಿಲ್ಲ ! ನಮಗ ಹೆಣ್ಣಮಗು ಯಾಕ ಬ್ಯಾಡ ಅನ್ನೂದಕ್ಕ ಕಾರಣಾ ಹೇಳ್ತೇನ ಕೇಳ ; ಸಮಾಜದ ಎಲ್ಲಾ ಸರದಾಟ ಒಂದಿಷ್ಟ ಕಣ್ಣ ಹಾಯ್ಸಿ ನೋಡ ! ಬಾಜೂ ಮನಿ ರಮಾಕಾಕೂನ ಉದಾಹರಣೀನ ತೊಗೋ ! ಆ ಗಂಡ ಸತ್ತ ಹೆಣ್ಣಮಗ್ಳು, ಬದುಕಿನ್ಯಾಗ ತಾ ಗಳಿಸಿದ್ದೆಲ್ಲಾ ತನ್ನ ಮಗಳ ಸುಗಂಧಾನ ಶಿಕ್ಷಣಕ್ಕಾಗಿ ಖರ್ಚ ಮಾಡಿದ್ಳು. ಶ್ರೀಮಂತ ಮನೆತನ ಸಿಗ್ಲಿ ಅಂತ ಸಿಕ್ಕಾಪಟ್ಟೆ ವರದಕ್ಷಿಣಿ ನೀಡಿ ಮದ್ವಿನೂ ಮಾಡಿಕೊಟ್ಳು. ಆದರ ಆದದ್ದೇನ ಗೊತ್ತೇತ್ತಲಾ ? ಮದ್ವಿ ಆದ ಒಂದss ವರ್ಷದಾಗ ಸುಗಂಧಾ ವರದಕ್ಷಿಣಿ ಕಿರುಕುಳಕ್ಕ ಬಲಿ ಆದ್ಳು ! ಆಕೀ ಅತ್ತಿ ಮನ್ಯಾವ್ರು ಹುಲ್ಲಿನ ಬಣವಿ ಸುಟ್ಟ ಹಾಕಿದಾಂಗ ಆಕೀನ ಸುಟ್ಟ ಹಾಕಿದ್ರು ! ಅಷ್ಟss ಅಲ್ಲ ; ಪೋಲೀಸ್ರನ ಒಳಗ ಮಾಡ್ಕೊಂಡ ಅದ ಆತ್ಮಹತ್ಯಾ ಕೇಸ್ ಅಂತ ಮುಚ್ಚಿ ಹಾಕಿದ್ರು ! ... ...”
ಜಯವಂತರಾವ ಸತ್ಯವನ್ನೇ ನುಡಿಯುತ್ತಿದ್ದ. ಅದು ಆತ ಕಂಡ ಸತ್ಯವೇ ಆಗಿತ್ತಲ್ಲವೆ ? ಮುಂದುವರಿದು ಆತ ಹೇಳತೊಡಗಿದ ;
“... ... ರಮಾಕಾಕೂ ನ್ಯಾಯಕ್ಕಾಗಿ ಭಾಳ ಹೋರಾಟ ಮಾಡಿದ್ಳು. ಆದರ ಅದೆಲ್ಲ ವ್ಯರ್ಥ ಆತು ! ತನ್ನ ಮಗಳ ಬೂದಿಯನ್ನ ಆಕಿ ಪಂಚಗಂಗಾ ನದಿಯೊಳಗ ಹಾಕಿಬಿಟ್ಳು ! ಮೂಕ ಆಗಿರೋ ಆ ನದಿ ಅನಿವಾರ್ಯದಿಂದನss ಆ ಪಾಪವನ್ನ ಹೊಟ್ಟಿಯೊಳಗ ಹಾಕ್ಕೊಂತು ! ಇನ್ನೊಂದ ನಿನಗ ಗೊತ್ತಿರಬೇಕಲಾ ? ಸೊಸಿ ನೋಡಾಕ ಚೊಲೋ ಅದಾಳು ಅಂತ ಆಕೀ ಮಾಂವ್ನss ಬಲತ್ಕಾರ ಮಾಡಿ ತನ್ನ ಹಸಿವ ತೀರ್ಸಕೊಂಡ ಸುದ್ದಿ ! ಮಾನಾ ಕಳ್ಕೊಂಡ ಆ ಸೊಸಿ ರೈಲ್ವೆ ಹಳಿಗಿ ತಲಿ ಕೊಟ್ಳು. ಆಕೀ ಎಲವ ಕೂಡ ಸಿಗದಿಲ್ಲ ! ಮಾಧುರಿ, ನಿಪ್ಪಾಣಿಯೊಳಗ ನನ್ನ ಒಬ್ಬ ಸ್ನೇಹಿತನ ಮಗ್ಳ ಮ್ಯಾಲ ಆಕೀ ಗಂಡನss ಮಾನಸಿಕ ಮತ್ತ ದೈಹಿಕ ಅತ್ಯಾಚಾರ ಮಾಡಿ, ಎರ್ಡೂ ಮಕ್ಳ ಜೊತಿ ಆಕೀನ ಮನಿಯಿಂದ ಹೊರ್ಗ ಹಾಕಿದಾ ! ಆ ಮಕ್ಳು ಪೋಟಗಿ (ಜೀವನಾಂಶ) ಸಲ್ವಾಗಿ ಕೋರ್ಟಿನ್ಯಾಗ ದಾವೆ ಹೂಡಿದ್ರೂ ಫಾಯ್ದಾ ಆಗ್ಲಿಲ್ಲ ! ಕೇಸ್ ಐದಾರ ವರ್ಷ ನಡೀತು ! ಗಂಡ ಆದಾವ್ನು ತನ್ನ ಆಸ್ತಿಯೆಲ್ಲಾ ಅಷ್ಟರೊಳಗss ಮಾರಿಬಿಟ್ಟಿದ್ದ ! ಮುಚ್ಚಮರೀಲೆ ಮತ್ತೊಂದ ಮದ್ವಿ ಮಾಡ್ಕೊಂಡ ಸಂಸಾರ ಸುರು ಮಾಡಿದ ! ಪೋಟಗಿ ಬದಲ ಜೇಲಿಗಿ ಹೋಗಾಕ ರೆಡಿ ಅದೇನ ಅಂತ ಅಂವಾ ಈಗ ಹೇಳ್ತಾನು ! ಅದ ಕಾಯ್ದಾದಾಗ ಇಲ್ಲ ! ಹಿಂಥಾ ಕಾಯ್ದೆ-ಕಾನೂನು ಕೋರ್ಟುಗಳ ಒತ್ತಡ ಇದ್ದಾಗ್ಲೂ ಹೆಣ್ಣಮಕ್ಳ ಮ್ಯಾಲ ಇನ್ನೂ ಶೋಷಣಾ ನಡೀತಾನss ಏತಿ ! ... ...”
ಜಯವಂತರಾವ ದಣಿವಿಲ್ಲದಂತೆ ಮಾತನಾಡತೊಡಗಿದ್ದ ! ಮಾಧುರಿ ತಲೆ ಕೆಳಗೆ ಹಾಕಿ ಕುಳಿತ್ತಿದ್ದಳು !
“... ... ಮಾಧುರಿ, ನೀ ಒಮ್ಮಿ ಕೋರ್ಟ್ ಕಂಪೌಂಡ್ದಾಗ ಹೋಗಿ ನೋಡ ; ಇಪ್ಪತ್ತ-ಇಪ್ಪತ್ತೆರಡ ವಯಸ್ಸಿನ ಸಾವಿರಾರು ಹೆಣ್ಣಮಕ್ಳು ಡೈವೋರ್ಸ್ ಮತ್ತ ಪೋಟಗಿ ಸಲ್ವಾಗಿ ಫ್ಯಾಮಿಲಿ ಕೋರ್ಟಿನ ಮುಂದ ನಿಂತಿರ್ತಾರು ! ಭವಿಷ್ಯದಾಗ ನಮಗ ಹುಟ್ಟೂ ಮಗ್ಳೂ ಕೋರ್ಟ್ ಕಂಪೌಂಡ್ದಾಗ ಕಾಣ್ಸೂದಿಲ್ಲ ಅಂತ ಹೆಂಗ ಹೇಳಾಕಾಗ್ತೇತಿ ? ಹೆಣ್ಣಮಕ್ಳಿಗಿ ಕೌಟಂಬಿಕ ಹಿಂಸಾಚಾರ್ದ ವಿರುದ್ಧ ಸಂರಕ್ಷಣಾ ಸಿಗ್ಬೇಕಂತ ಕಾಯ್ದಾನೂ ಏತಿ ! ಆದರ ಆ ಕಾಯ್ದೆಯಿಂದ ಗಂಡಾ-ಹೆಂಡ್ತಿ ನಡುವ ಜಗ್ಳ ಸುರುವಾಗ್ತೇತಿ ! ... ಹಿಂದೂ ವಾರಸಾ ಕಾಯ್ದೆಕ ತಿದ್ದಪಡಿ ತಂದ ಮಗ್ಳಿಗಿ ಅಪ್ಪನ ಆಸ್ತಿಯೊಳಗ ಅಣತಮರ ಜೋಡಿ ಸಮಾನ ಪಾಲ ಕೊಡಬೇಕನ್ನೂ ಕಾಯ್ದೆ ಮಾಡ್ಯಾರು. ಹಂಗss ಡೈವೋರ್ಸ್ ಕೊಡೂವಾಗ ಗಂಡನ ಆಸ್ತಿಯೊಳಗ ಹೆಂಡ್ತಿಗಿ ಅರ್ಧಾ ಪಾಲ ಕೊಡಬೇಕಂತ ವಿಧೇಯಕವನ್ನ ಪಾರ್ಲಿಮೆಂಟಿನ್ಯಾಗ ಮನ್ನೆ ಮನ್ನೆ ಪಾಸ್ ಮಾಡ್ಯಾರು ! ಈ ಕಾಯ್ದೆದಿಂದ ಅಣ್ಣ-ತಮ್ಮ, ಅಕ್ಕ-ತಂಗಿ, ಅಪ್ಪ-ಅವ್ವ ಅನ್ನೂ ಸಂಬಂಧಗೋಳೆಲ್ಲ ಹಾಳಾಗಿ ಕುಟುಂಬ ವಿಘಟನಾ ಆಗಾಕತ್ತೇತಿ ! ಸಮಾಜದಾಗ ನೆಮ್ಮದಿ ಕನಸಿನ ಮಾತಾಗೇತಿ ! ಮಗಳನ್ನ ಸಾಕಿ, ಬೆಳ್ಸಿ ಮದ್ವಿ ಮಾಡ್ಸೂ ಅಷ್ಟೊತ್ತಿಗಿ ಹಡದ ಅವ್ವ-ಅಪ್ಪನ ಹೆಣಾ ಬಿದ್ದ ಹೋಗಿರ್ತೇತಿ ! ಇದ್ನೆಲ್ಲ ನೋಡಿ ಮನ್ಯಾಗ ಮಗ್ಳ  ಹುಟ್ಟಿದ್ರ ಪೀಡಾ ಹುಟ್ಟಿದಾಂಗ ಅನ್ನೂ ಭಾವ್ನಾ ಹೆಚ್ಚಾಗಾಕತ್ತೇತಿ ! ಮುಂದ ನಮಗಾಗ್ಲಿ, ನಮ್ಮ ಮಕ್ಳಿಗಾಗ್ಲಿ ತ್ರಾಸ ಆಗ್ಬಾರ್ದು ಅಂದ್ರ ಈಗ ನೀ ತ್ಯಾಗಾ ಮಾಡಾಕssಬೇಕ ! ‘ಸತ್ಯಮೇವ ಜಯತೆ’ ಕಾರ್ಯಕ್ರಮ ತೋರ್ಸತಾರು ಅಂದ್ರ ಇರೂ ಚಿತ್ರ ಬದ್ಲಾಗೂದಿಲ್ಲ ! ನೀ ಇಲ್ಲ ಅನ್ನಬ್ಯಾಡ. ಡಾ. ಗುಂಡೆಯವರ ಸಲ್ಲಾ ಪಡಕೊಂಡ ಲಗೂ ಮಾಡಿ ಈ ಗರ್ಭ ತೆಗೆಸೋಣು !”
ಮಾಧುರಿ ಒಳಗೊಳಗೆ ಕುದಿಯುತ್ತಿದ್ದಳು !
ಗಂಡ ಹೇಳಿದ ಮಾತುಗಳನ್ನು ಕೇಳಿಸಿಕೊಂಡ ಆಕೆ, ತನ್ನ ಗಂಡ ಸ್ತ್ರೀ ಜಾತಿಯ ಬಗ್ಗೆ ಎಂಥ ಮಾತಾಡ್ತಾನೆ ಎಂದು ಆಘಾತವಾಯಿತು ! ಆಕೆ ಸಾರಾಸಗಟಾಗಿ ಆತನ ಮಾತನ್ನು ಧಿಕ್ಕರಿಸಿದಳು !
ಜಯವಂತರಾವ ಕುದ್ದು ಹೋದ !
“ನೋಡ ಮಾಧುರಿ, ಎಲ್ಲಾ ಹೆಣ್ಣ ಜಾತೀನ ಕೀಳ ಮಾಡಿ ನಾ ಮಾತಾಡಾಕತ್ತಿಲ್ಲ.  ಆದರ ಇಷ್ಟೆಲ್ಲ ಆಗಾಕ ಹೆಣ್ಣss ಕಾರಣ ಅಂತ ಅನ್ಸೂದಿಲ್ಲ ನಿನಗ ? ಸೊಸಿ ಮ್ಯಾಲಿನ ಶೋಷಣಾ ಮತ್ತ ವರದಕ್ಷಿಣಿ ಕೇಸುಗಳೊಳಗ ಅತ್ತೀ ಕೈವಾಡ ಭಾಳ ಇರ್ತೇತಿ ! ಕೋರ್ಟಿನ್ಯಾಗೂ ಇದ ಸಿದ್ಧ ಆಗೇತಿ ! ಹೆಣ್ಣುಭ್ರೂಣ ಹತ್ಯಾದ ಪಾಪದೊಳಗ ಹೆಣ್ಣಿನ ಪಾತ್ರ ಭಾಳ ಏತಿ ಅನ್ನೋದ ಮರೀಬ್ಯಾಡ ! ಹೆಣ್ಣಮಕ್ಳು ದಿಟ್ಟತನದಿಂದ ಇದನ್ನ ನಿರಾಕರಿಸಿದ್ರ ಹಿಂಥಾ ಪಾಪಗೋಳ ಘಟ್ಸೂದಿಲ್ಲ ! ಆದರ ದುರ್ದೈವ ನೋಡ, ಹೆಣ್ಣುಭ್ರೂಣ ಹತ್ಯಾದಂಥಾ ಪಾಪದಾಗ ಹೆಣ್ಣುಗೋಳ ಸಮ್ಮತಿ ಇದ್ದss ಇರ್ತೇತಿ ! ಅವರ ಸಮ್ಮತಿ ಕೊಟ್ಟ ಮ್ಯಾಲನ ಡಾಕ್ಟರೂ ಈ ಅಪರಾಧದಾಗ ಸಹಭಾಗ ಆಗ್ತಾರು ! ... ...”
ಮಾಧುರಿಗೆ ತನ್ನ ಗಂಡನ ಮಾತಿನಲ್ಲಿ ಸತ್ಯ ಕಾಣಿಸತೊಡಗಿತು !
ಆತ ಹೇಳುತ್ತಿರುವುದರಲ್ಲಿ ತಪ್ಪೇನೂ ಇಲ್ಲ !
“ಎಲ್ಲಾದಕ್ಕೂ ಹೆಣ್ಣss ಜವಾಬ್ದಾರ ಆಗಿದ್ರ ಈ ಗರ್ಭ ತೆಗೆಸೋದನ್ನ ನಾ ಸಮರ್ಥನಾ ಮಾಡ್ಕೋದಿಲ್ರಿ ! ಗರ್ಭಪಾತದ ಪಾತಕ ನನ್ನಿಂದ ಸಾಧ್ಯ ಇಲ್ರಿ ! ನನ್ನ ಹೊಟ್ಟ್ಯಾಗಿರೋ ಕೂಸು ಜಗತ್ತ ನೋಡ್ಬೇಕ್ರಿ ! ನನ್ನ ಮೊಗ್ಗು ಅರಳಾಕssಬೇಕ್ರಿ !
ಜಯವಂತರಾವ ಮುಂದೆ ಮಾತನಡಲಿಲ್ಲ !
ಆತ ತನ್ನ ಪ್ರಯತ್ನವನ್ನೇ ಕೈ ಬಿಟ್ಟ !
*****
ಮಾಧುರಿಗೆ ನವಮಾಸಗಳು ತುಂಬಿದವು !
ಹೆರಿಗೆಯೂ ಆಯಿತು ; ಮುದ್ದಾದ ಮಗಳು ಮಡಿಲು ತುಂಬಿದ್ದಳು !
ಮಗಳಿಗೆ ‘ಪಾರು’ ಎಂದು ಪ್ರೀತಿಯಿಂದಲೇ ಹೆಸರಿಡಲಾಯಿತು ! ವಿಚಿತ್ರ ನೋಡಿ ; ಈಗ ಜಯವಂತರಾವ ತನ್ನ ಮಗಳನ್ನು ಬಿಟ್ಟು ಒಂದುಕ್ಷಣವೂ ಇರುತ್ತಿರಲಿಲ್ಲ ! ಗಂಡ-ಹೆಂಡತಿಯರಿಬ್ಬರೂ ಮಗಳ ಪಾಲನೆ-ಪೋಷಣೆ ಚೆನ್ನಾಗಿಯೇ ಮಾಡಿದರು. ಮಗನಿಗೆ  ನೀಡಿದಂತೆಯೇ ಒಳ್ಳೆಯ ಶಿಕ್ಷಣವನ್ನೂ ಕೊಡಿಸಿದರು.
ಪಾರು ತುಂಬ ಬುದ್ಧಿವಂತೆ ! ತುಂಬ ಚೂಟಿ !
ಪದವಿ ಮುಗಿಸಿದ ಮೇಲೆ ಐ.ಎ.ಎಸ್. ಪರೀಕ್ಷೆ ಬರೆದು ಪಾಸಾದಳು !
ದೇಶಸೇವೆಗಾಗಿ ಆಕೆ ಸರಕಾರಿ ಆಡಳಿತದಲ್ಲಿ ಬಹುದೊಡ್ಡ ಹುದ್ದೆ ಪಡೆದಳು !
ಕಮರಿ ಹೋಗಬೇಕಿದ್ದ ಮೊಗ್ಗು ಅರಳಿ ನಿಂತಿತ್ತು !
ಮಾಧುರಿ-ಜಯವಂತರಾವ ಇಬ್ಬರಲ್ಲೂ ಧನ್ಯತಾ ಭಾವ ಇತ್ತು !
ಮಾಧುರಿ ಇಡೀ ಜಗತ್ತಿಗೇ ಹಿರಿದಾದ ಸಂದೇಶವೊಂದನ್ನು ನೀಡಿದ್ದಳು ;
ಮೊಗ್ಗು ಅರಳಲೇ ಬೇಕು !’
*****

ಮಾತ್ಗವಿತೆ-100


Tuesday, November 13, 2012

`ಮಾರ್ಕ್ಸ್‌ವಾದದ ಯಾಂತ್ರಿಕತೆಯಿಂದ ಬಿಡಿಸಿಕೊಂಡ ಬರಹ ನನ್ನದು'


ಶ್ರೀಲಂಕಾದ ಚೆಕಾಫ್ ಜಯತಿಲಕೆ ಕಮ್ಮಲ್ಲವೀರ ಸಂದರ್ಶನ 
                                                                                - ಡಿ.ಕೆ. ರಮೇಶ್



* ರಾಜಕೀಯ ಹೋರಾಟಗಾರರಾದ ನೀವು ಸಾಹಿತ್ಯದತ್ತ ಮುಖ ಮಾಡಿದ್ದು ಹೇಗೆ?ಚಿಕ್ಕಂದಿನಿಂದ ನನ್ನ ಒಲವು ಸಾಹಿತ್ಯದತ್ತಲೇ. ಉಳ್ಳವರು ಮತ್ತು ಉಳ್ಳದವರ ನಡುವಿನ ಘರ್ಷಣೆಯಿಂದಾಗಿ ಸಮತಾವಾದ ಶ್ರೀಲಂಕಾದಲ್ಲಿ ಬೇರು ಬಿಡುತ್ತಿತ್ತು. ಚಹಾ ತೋಟಗಳ ಕಾರ್ಮಿಕರು, ಬಂದರು ಕೆಲಸಗಾರರು ಸಂಘಟಿತರಾಗುತ್ತಿದ್ದರು. ಆಗ ದೇಶದ ತುಂಬಾ ರಷ್ಯಾ ಸಾಹಿತ್ಯದ ಅಲೆಯಿತ್ತು. ಬಡತನದ ಕಾರಣಕ್ಕೆ ಚಿಕ್ಕಂದಿನಿಂದಲೇ ಶಾಲೆ ತೊರೆದ ನಾನು ಅಂತಹ ಅನೇಕ ಸಾಹಿತ್ಯ ಕೃತಿಗಳನ್ನು ಓದತೊಡಗಿದೆ. ಹದಿನೇಳನೇ ವಯಸ್ಸಿಗೆ ಬರೆಯಲು ಆರಂಭಿಸಿದೆ. ಆ ಬಳಿಕ ನವ ಸಮ ಸಮಾಜದಲ್ಲಿ ದುಡಿದೆ. ಅದರಿಂದ ಸಾಕಷ್ಟು ಅನುಭವಗಳಾದವು. ಶ್ರೀಲಂಕಾದ ಹಳ್ಳಿ ಹಳ್ಳಿಗಳನ್ನು ತಿರುಗುವುದು, ಜನರ ನೋವು ನಲಿವುಗಳನ್ನು ಹತ್ತಿರದಿಂದ ನೋಡುವುದು ಸಾಧ್ಯವಾಯಿತು.


ಕೆಲ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಬಳಿಕ ಸಂಘಟನೆಯಿಂದ ದೂರ ಉಳಿದೆ. ಸಾಹಿತ್ಯದ ಕೆಲಸಗಳಲ್ಲಿ ಹೆಚ್ಚು ಮಗ್ನನಾದೆ. ದಕ್ಷಿಣ ಅಮೆರಿಕ, ಆಫ್ರಿಕಾ, ಭಾರತೀಯ ಸಾಹಿತ್ಯವನ್ನು ಓದುತ್ತಾ ಹೋದೆ. ಜತೆಗೆ ಬರವಣಿಗೆಯೂ ಸಾಗಿತು.
ಬರೆವ ಬೆರಗಿನ ಕುರಿತು ಒಂದಿಷ್ಟು...
ಕೆಲ ಕಾದಂಬರಿಗಳನ್ನು ಬರೆದಿದ್ದರೂ ಸೃಜನಶೀಲ ಬರವಣಿಗೆಯಲ್ಲಿ ಸಣ್ಣಕತೆಯೇ ನನ್ನ ನೆಚ್ಚಿನ ಪ್ರಕಾರ. ಇಡೀ ಶ್ರೀಲಂಕಾದಲ್ಲಿ ಕಾದಂಬರಿಕಾರನಿಗಿಂತಲೂ ಹೆಚ್ಚಾಗಿ ನನ್ನೊಳಗಿನ ಕತೆಗಾರನನ್ನು ಸಹೃದಯಿಗಳು ಗುರುತಿಸಿದ್ದಾರೆ. ಸೃಜನಶೀಲ ಬರವಣಿಗೆಯಲ್ಲಿ ಕತೆ ಅತ್ಯಂತ ಪ್ರಭಾವಶಾಲಿಯಾದುದು ಎಂದು ನಂಬಿದ್ದೇನೆ. ಅಲ್ಲದೆ ಇದು ಸಾಹಿತ್ಯದ ನವಿರು ಕಸರತ್ತು ಕೂಡ. ಒಂದೊಳ್ಳೆಯ ಕತೆ ಒಳ್ಳೆಯ ಕಾವ್ಯದಂತೆಯೇ ಮಧುರ. ಕತೆಯನ್ನು ಓದುವುದರಿಂದಲೇ ಸಾಹಿತ್ಯದ ಒಂದು ಅಭ್ಯಾಸ ಆರಂಭವಾಗುತ್ತದೆ. ಕತೆಯ ಪದ ಅಥವಾ ವಾಕ್ಯಗಳನ್ನು ಓದುವುದಕ್ಕಿಂತ ಅವುಗಳ ಧ್ವನಿಯನ್ನು ಗುರುತಿಸುವುದು ಮುಖ್ಯ.

ಇಂಗ್ಲಿಷ್‌ನಲ್ಲಿ eading between the lines ಎನ್ನುತ್ತಾರಲ್ಲಾ ಹಾಗೆ. ಅಲ್ಲಿನ ಉಪಮೆ, ಪ್ರತೀಕ, ಕಾಣ್ಕೆಗಳನ್ನು ಸಂದರ್ಭಕ್ಕೆ ಸರಿಯಾಗಿ ಗ್ರಹಿಸಿದಾಗಲೇ ಒಂದೊಳ್ಳೆ ರಸಾನುಭವ ಸಾಧ್ಯ. ಕತೆ ಬರೆಯುವಾಗ ಶೈಲಿ, ನಿರೂಪಣೆ ಕೂಡ ಅಷ್ಟೇ ಮುಖ್ಯ.

ಹೀಗಾಗಿ ನನ್ನ ಬರವಣಿಗೆಯಲ್ಲಿ ಬರೆವ ಶೈಲಿ, ಬಳಸುವ ಭಾಷೆ ಹಾಗೂ ನಿರೂಪಣೆಯ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ. ಇದು ಕೂಡ ಕತೆಯ ವಸ್ತುವಿನಷ್ಟೇ ಮಹತ್ವದ್ದು. ಸಾಂದರ್ಭಿಕ ಅರ್ಥಗಳು, ಪದಗಳ ಸಾಂಕೇತಿಕ ಪ್ರಸ್ತುತತೆ ಹಾಗೂ ಭಾಷೆಯ ಲಯವನ್ನು ವಿಶೇಷವಾಗಿ ಗಮನಿಸುತ್ತೇನೆ. ಏಕೆಂದರೆ ಎಲ್ಲಾ ಕತೆಗಳನ್ನು ಒಂದೇ ಶೈಲಿ ಹಾಗೂ ಲಯದಲ್ಲಿ ಬರೆಯಲು ಸಾಧ್ಯವಿಲ್ಲ. ಒಂದು ಭಾಷೆಗೆ ಇರುವ ಲಯವನ್ನು ಕಂಡುಕೊಳ್ಳುವುದು ಲೇಖಕನಿಗಿರಬೇಕಾದ ಮುಖ್ಯ ಗುಣ. ಜತೆಗೆ ಓದುಗರೂ ಬರೆದದ್ದನ್ನು ಅರ್ಥ ಮಾಡಿಕೊಳ್ಳುವಷ್ಟು ಮುಂದುವರಿದಿರಬೇಕು. ಅವರ ಅಭಿರುಚಿಯೂ ಬರಹಗಾರನಷ್ಟೇ ಎತ್ತರದಲ್ಲಿರಬೇಕು. ಅನುಭವ ಹಾಗೂ ಭಾಷೆಯ ಸೂಕ್ಷ್ಮತೆಯನ್ನು ಗಮನಿಸುವ ಕೆಲಸ ಅವರಿಂದಾಗಬೇಕು.
* ನಿಮ್ಮ ಕತೆಗಳ ಒಟ್ಟು ದನಿ?
ಬಹುಶಃ ಕಪ್ಪು ಬಿಳುಪು ರೀತಿಯಲ್ಲಿ ಇದಮ್ಮಿತ್ತಂ ಎಂದು ನನ್ನ ಕತೆಗಳ ಆಶಯವನ್ನು ಹೇಳಿಕೊಳ್ಳಲಾಗದು. ಕಾಲ- ದೇಶಗಳಲ್ಲಿ ನಡೆದ ಸಾಹಿತ್ಯ ಕೃಷಿ ಮನುಷ್ಯ ಪರವಾಗಿರುವಂತೆಯೇ ನನ್ನ ಕತೆಗಳು ಕೂಡ ಅದರತ್ತಲೇ ತುಡಿಯುತ್ತವೆ. ಮಾರ್ಕ್ಸ್‌ವಾದದ ಹಿನ್ನೆಲೆಯಿಂದ ಬಂದವನಾದರೂ ಅದರ ಯಾಂತ್ರಿಕತೆಯಿಂದ ಬಿಡಿಸಿಕೊಂಡ ಬರವಣಿಗೆ ನನ್ನದಾಯಿತು ಎಂದು ಹೇಳಬಹುದೇನೋ.
*  ಜನಾಂಗೀಯ ಕಲಹದ ಬಳಿಕ ಶ್ರೀಲಂಕಾದ ತಮಿಳು ಹಾಗೂ ಸಿಂಹಳ ಸಾಹಿತ್ಯದಲ್ಲಿ ಎಂಥ ಬದಲಾವಣೆಗಳಾದವು?
ತಮಿಳು ಸಾಹಿತ್ಯ ನನಗೆ ಅಷ್ಟು ಆಳವಾಗಿ ಗೊತ್ತಿಲ್ಲದ ಕಾರಣ ಅದರ ಕುರಿತು ಪ್ರಸ್ತಾಪಿಸುವುದಿಲ್ಲ. ಆದರೆ ಸಿಂಹಳ ಕವಿತೆ, ಸಣ್ಣಕತೆ ಹಾಗೂ ಕಾದಂಬರಿ ಪ್ರಕಾರಗಳ ಕುರಿತು ಪ್ರತಿಕ್ರಿಯಿಸಬಲ್ಲೆ. ಕದನದ ಸಮಯದಲ್ಲಿ ಕೂಡ ಬಹುತೇಕ ಸಿಂಹಳ ಬರಹಗಾರರು ಜನಾಂಗೀಯ ಕಲಹ ಕುರಿತು ಸೂಕ್ಷ್ಮಜ್ಞರಾಗಿರಲಿಲ್ಲ. ಸಮರೋತ್ತರ ಸಂದರ್ಭವಾದ ಈ ದಿನಗಳಲ್ಲಿಯೂ ನನಗೆ ಅಂಥ ಮಹತ್ವದ ಬದಲಾವಣೆಗಳು ಕಂಡು ಬರುತ್ತಿಲ್ಲ. ಹಾಗೆಂದು ಅಂತಹ ಸೂಕ್ಷ್ಮತೆಯಿಂದ ಎಲ್ಲರೂ ಹೊರತಾಗಿದ್ದಾರೆ ಎಂದರ್ಥವಲ್ಲ. ಹಾಗೆ ಸೃಜನಾತ್ಮಕವಾಗಿ ಸ್ಪಂದಿಸಿದ ಕೆಲವರ ಕೃತಿಗಳು ತುಂಬಾ ಶಕ್ತಿಶಾಲಿಯಾಗಿಯೇ ಇವೆ.

ಸಿಂಹಳ ಸಿನಿಮಾಗಳಲ್ಲಿ ಮಾತ್ರ ಅಲ್ಪಮಟ್ಟಿನ ಬದಲಾವಣೆಗಳುಂಟಾದವು. ಯುದ್ಧದ ಸಂದರ್ಭಗಳಲ್ಲಿ ಕದನವನ್ನು ವಿಮರ್ಶಿಸಿ ಕೆಲವು ಚಿತ್ರಗಳು ತಯಾರಾದವು. ಆ ಚಿತ್ರಗಳ ಕೆಲವು ಕಲಾವಿದರನ್ನು ಬೆದರಿಸಲಾಯಿತು, ಅವಮಾನಿಸಲಾಯಿತು. ಆದರೆ ಅಂತಹ ಕಲಾವಿದರು ಅಂತರರಾಷ್ಟ್ರೀಯ ನೆಲೆಯಲ್ಲಿ ಗುರುತಿಸಿಕೊಂಡರು. ವಿಚಿತ್ರವೆಂದರೆ ಯುದ್ಧ ಮುಗಿವ ಹೊತ್ತಿಗೆ ಇಡೀ ಸಂಘರ್ಷವನ್ನು ವೀರಗಾಥೆಯಂತೆ, ದೇಶಭಕ್ತಿಯ ಸಂಕೇತವೆಂಬಂತೆ ಬಿಂಬಿಸಲಾಯಿತು. ಕಲಾತ್ಮಕ ಅಂಶಗಳಿಲ್ಲದಿದ್ದರೂ ಕೂಡ ಅಂತಹ ಚಿತ್ರಗಳಿಗೆ ಸರ್ಕಾರದ ಮನ್ನಣೆ ದೊರೆಯಿತು. ಈಗ ಜನಾಂಗೀಯವಾದಿ ಚಲನಚಿತ್ರಗಳತ್ತಲೇ ಹೆಚ್ಚು ಒಲವು ಇದ್ದಂತಿದೆ.
ತಮಿಳರ ಬದುಕು ನಿಮ್ಮನ್ನು ಕಾಡಲು ಕಾರಣ?
ತೀರಾ ಹತ್ತಿರದಿಂದ ತಮಿಳರ ಬದುಕನ್ನು ನೋಡಿದ್ದೆ. ಸಾಮಾನ್ಯ ಸಿಂಹಳ ವ್ಯಕ್ತಿಯ ನೋವುಗಳಿಗೂ ಅವರ ನೋವುಗಳಿಗೂ ಅಂಥ ವ್ಯತ್ಯಾಸ ಇರಲಿಲ್ಲ. ಎಲ್‌ಟಿಟಿಇಯ ತೀವ್ರಗಾಮಿ ಹೋರಾಟ ತಮಿಳರ ನೋವುಗಳಿಗೆ ನಿಜವಾಗಿ ಸ್ಪಂದಿಸಲಿದೆಯೇ ಎಂಬ ಅನುಮಾನ ನನ್ನೊಳಗೂ ಇತ್ತು. ಶ್ರೀಲಂಕಾಕ್ಕೆ ಸ್ವಾತಂತ್ರ್ಯ ದೊರೆತ ನಂತರ ಎಲ್ಲಾ ಸರ್ಕಾರಗಳೂ ತಮಿಳರನ್ನು ಮೂಲೆಗುಂಪು ಮಾಡಿದವು. ವೈವಿಧ್ಯತೆಗೆ ಅವಕಾಶ ನೀಡದೆ ಸಿಂಹಳೀಯರಿಗೆ ಮಾತ್ರ ಮಣೆ ಹಾಕಲಾಯಿತು. ತಮಿಳರ ದಮನಕ್ಕೆ ಇದೂ ಒಂದು ಕಾರಣ. ಶ್ರೀಲಂಕಾದ ಉತ್ತರ ಹಾಗೂ ಪೂರ್ವ ಭಾಗಗಳ ಬದುಕು ದೊಡ್ಡಮಟ್ಟದಲ್ಲಿ ಅನಾವರಣಗೊಂಡಿರುವುದು ನನ್ನ ಕಾದಂಬರಿ `ಸಿಯೋತ್ ತತು ಸಿಂಧ`ದಲ್ಲಿ.
*  ನೀವು ಕಂಡುಕೊಂಡಂತೆ ಎರಡೂ ದೇಶಗಳ ನಡುವೆ ಇರುವ ಸಾರಸ್ವತ ಲೋಕದ ವ್ಯತ್ಯಾಸ?
ನಮ್ಮ ದೇಶದಲ್ಲಿ ಕೆಲವು ಪ್ರಗತಿಪರ ಸಾಹಿತ್ಯಕ ಹೋರಾಟಗಳು ನಡೆದಿವೆ. ಆದರೆ ಕನ್ನಡದಲ್ಲಿ ಅಥವಾ ಭಾರತದ ಕೆಲ ಭಾಷೆಗಳಲ್ಲಿ ಆಗಿರುವಂತೆ ನವೋದಯ, ಪ್ರಗತಿಶೀಲ, ನವ್ಯ, ದಲಿತ- ಬಂಡಾಯ ಹೀಗೆ ವಿವಿಧ ಕಾಲಘಟ್ಟಗಳ ಚಳವಳಿ ಸಾಧ್ಯವಾಗಿಲ್ಲ. ಈ ಚಳವಳಿಗಳ ಆಶಯ ನಮ್ಮ ಸಾಹಿತ್ಯದಲ್ಲಿ ಸಮಗ್ರವಾಗಿ ಅಡಕವಾಗಿವೆಯೇ ಹೊರತು ಒಡೆದು ಕಾಣುವ ಪ್ರತ್ಯೇಕತೆ ತೋರದು.

ಮೇಲಾಗಿ ಭಾರತದ ಜಾತಿ ಪದ್ದತಿ ಹಾಗೂ ದೊಡ್ಡ ಧಾರ್ಮಿಕ ಅಂತರ ನಮ್ಮಲ್ಲಿಲ್ಲ. ಬಹುತೇಕ ಹೋರಾಟಗಳು ನಮ್ಮ ದೇಶದಲ್ಲಿ ಆರ್ಥಿಕ ಅಸಮಾನತೆಯ ವಿರುದ್ಧ ನಡೆದಿವೆ. ಹೀಗಾಗಿ ಭಾರತದ ಯು.ಆರ್. ಅನಂತಮೂರ್ತಿ, ರವೀಂದ್ರನಾಥ ಟ್ಯಾಗೋರ್, ಕಮಲಾದಾಸ್, ಸಾದತ್ ಹಸನ್ ಮಾಂಟೊ, ಅರುಂಧತಿ ರಾಯ್, ಸಲ್ಮಾನ್ ರಶ್ದಿ ಮುಂತಾದವರು ಹೆಚ್ಚು ವೈವಿಧ್ಯಮಯವಾಗಿ ತೋರುತ್ತಾರೆ.

ಇನ್ನು ರಚನೆಯ ವಿಚಾರಕ್ಕೆ ಬಂದರೆ ನಮ್ಮಲ್ಲಿ ಕಾವ್ಯ ಬೆಳೆದಷ್ಟು ಇತರ ಸಾಹಿತ್ಯ ಪ್ರಕಾರಗಳು ಬೆಳೆದಿಲ್ಲ. ಕತೆ, ಕಾದಂಬರಿಗಳಂತಹ ಗದ್ಯ ಪ್ರಕಾರದಲ್ಲಿ ಸಾಕಷ್ಟು ಕೃಷಿ ನಡೆಯಬೇಕಿದೆ. ವಿವಿಧ ಭಾಷೆಗಳ ಅನುವಾದಿತ ಸಾಹಿತ್ಯ ಶ್ರೀಲಂಕಾದಲ್ಲಿ ವಿಫುಲವಾಗಿ ದೊರೆಯುತ್ತದೆ. ಆದರೆ ಸಿಂಹಳ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವಂತಹ ಅನುವಾದಕರ ಕೊರತೆ ಇದೆ. ಬಹುತೇಕ ದೇಶಗಳಲ್ಲಿ ನಡೆಯುವಂತೆ ಸಾಹಿತ್ಯದ ಬೆಳವಣಿಗೆ ಕುರಿತು ನಮ್ಮ ಸರ್ಕಾರದ ಗಮನ ಅಷ್ಟಕ್ಕಷ್ಟೇ.

ಕೃಪೆ : ಪ್ರಜಾವಾಣಿ  

Thursday, November 08, 2012

ಪ್ರಳಯವಾಗಲೇ ಬೇಕು !

ನಾಗೇಶ್ ಶಿವಶರಣ 
ಭ್ರಷ್ಟರ, ಧರ್ಮಾಂರ, ಕೊಲೆಪಾತಕಿಗಳ
ಸರ್ವನಾಶಕೇ
ಪ್ರಳಯವಾಗಲೇ ಬೇಕು  !
ಬೆಟ್ಟ ಗುಡ್ಡಗಳೇ ಬಾಯ್ತರೆಯಿರಿ
ಎಲ್ಲರ ಒಳನುಂಗಲು
ಜ್ವಾಲೆಯನೂದು ಭೂವಿಯೇ
ಎಲ್ಲರೆದೆಯ ಗಡ ಗಡ ನಡುಗಿಸಲು !

ಜಾತಿ ಧರ್ಮಗಳೆಲ್ಲ ಸುಟ್ಟು ಹೋಗಲಿ
ದೇವರುದಿಂಡಿರುಗಳ ಶವದ ಪೆಟ್ಟಿಗೆ ಕಟ್ಟಲಿ
ದಿಗ್ಗ ದಿಗಂತವ ನಡುಗಲಿ
ಈ ಜಗಕೆ ಪ್ರಳಯವಾಗಲಿ !

ಓ ಮಿಂಚು, ಗುಡುಗು, ಸಿಡಿಲುಗಳೇ ಸಿಡಿದೆದ್ದು ಬನ್ನಿ
ಭ್ರಷ್ಟರ ಸುಟ್ಟು, ಶಿಷ್ಟರ ಉಳಿಸಲು
ಚಂಡಮಾರುತಗಳೇ ನುಗ್ಗಿ ಬಿಡಿ
ನವಯುಗವ ಬೆಳೆಸಲು !

ಎಲ್ಲವೂ ಸರ್ವನಾಶವಾಗಲಿ
ಸತ್ಪುರ್ಶರು ಜನನಗೆಯಲಿ
ಅದಕೇ ಪ್ರಳಯವಾಗಲಿ
ಮಾನವಧರ್ಮ ಚಿಗುರಲಿ !

ಡಾ. ಅಂಬೇಡ್ಕರ್ ಬರೆಯುವ ಮೊದಲೇ ಭಾರತಕ್ಕೆ ಒಂದು ಸಂವಿಧಾನ ರಚನೆಯಾಗಿತ್ತು. ಆದರೆ ...?



ಸುರೇಂದ್ರ ಉಗಾರೆ, ವಕೀಲರು, ರಾಯಬಾಗ (ಬೆಳಗಾವಿ)
               
ಭಾರತ 1947ರಲ್ಲಿ ಸ್ವತಂತ್ರವಾಯಿತಾದರೂ  1950ರಲ್ಲಿ ಸಂವಿಧಾನ ಜಾರಿಯಲ್ಲಿ ಬಂದಿತ್ತು. ಈ ಸಂವಿಧಾನ ಡಾ// ಅಂಬೇಡ್ಕರ ಮುಖಂಡತ್ವದಲ್ಲಿ ರಚನೆಯಾಗಿರುವ ವಿಷಯ ಭಾರತೀಯರಿಗೆಲ್ಲ ಗೊತ್ತಿದೆ. ಪ್ರಸ್ತುತ ದಿನಗಳಲ್ಲಿ ಸಂವಿಧಾನ ತಿದ್ದುಪಡಿ ವಿಷಯಕ್ಕೆ ಕೈ ಹಾಕಿ ದಲಿತರ ವಿರೋದಿ ಕಟ್ಟಿಕೊಂಡವರು ಅನೇಕರು ಇದ್ದಾರೆ. ಯಾವ ವಿಷಯಕ್ಕಾಗಿ ತಿದ್ದುಪಡಿ ? ಅಥವಾ ದಲಿತನೊಬ್ಬನಿಂದ ರಚಿತವಾಗಿದೆ ಎಂಬ ಕಾರಣಕ್ಕಾಗಿಯೇ ? ಇಂತಹ ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಸಂವಿಧಾನ ತಿದ್ದುಪಡಿಮಾಡಲು ಹೊರಟಿರುವ ಗಣ್ಯಮಾನ್ಯರೆ, ಭಾರತದ  ಇತಿಹಾಸದ ಪುಟಗಳನ್ನು ತೆಗೆದು ಓದಿರಿ. ಡಾ// ಅಂಬೇಡ್ಕರಗಿಂತ  20 ವರ್ಷಗಳ ಮೊದಲೇ ಭಾರತಕ್ಕೊಂದು ಸಂವಿಧಾನ ರಚನೆಯಾಗಿತ್ತು. ಆದರೆ, ಸಿಖ್ ರ ಹಾಗೂ ಮುಸ್ಲಿಂರ ವಿರೋದಿಂದ ದು ಹುಟ್ಟಿದ ದಿನವೆ ಮಣ್ಣು ಮಾಡುವ ಪ್ರಸಂಗ ಬಂದಿತ್ತು. ಸಂವಿಧಾನ ರಚನೆ ಮಾಡಲು ಹೋಗಿ ಕೋಮಿನ ಪಟ್ಟ ಕಟ್ಟಿಕೊಂಡು ಸಂವಿಧಾನ ಎಂಬ ಪದ ಬಿಟ್ಟು ವರದಿ ಎಂಬ ಸಂವಿಧಾನವನ್ನು ತಯಾರಿಸಿ ಹೆಸರು ಕೆಡಿಸಿಕೊಂಡ ಪುಣ್ಯಾತ್ಮನ ಇತಿಹಾಸ ನಿಮಗೆ ಗೊತ್ತಿದೆಯೇ ?  ಆ ಪುಣ್ಯಾತ್ಮನೇ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ತಂದೆ ಮೋತಿಲಾಲ ನೆಹರು !
ಇಂಗ್ಲೆಂಡ ಸರಕಾರ ಭಾರತೀಯರಿಗೆ ಅವರ ಬೇಡಿಕೆಗೆ ಅನುಗುಣವಾಗಿ 1919ರಲ್ಲಿ ಮಂಟೆಗೊ ಜೇಮ್ಸ ಪೊರ್ಡ ಎಂಬ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆ ಭಾರತೀಯರಿಗೆ ತೃಪ್ತಿ ನೀಡಲ್ಲಿಲ್ಲ, ನಿರಾಸೆಗೊಂಡ ಭಾರತೀಯರು ಸ್ವತಂತ್ರ ಚಳುವಳಿಯನ್ನು ತೀವ್ರಗೊಳಿಸಿದರು. ಆದರು ಬ್ರಿಟಿಷರು 1919ರ ಕಾಯ್ದೆಯ ವಿಫಲತೆಯನ್ನು ತಿಳಿಯಲು ಮತ್ತು ಭಾರತಿಯರ ಆಸೆಗೆ ಸ್ಪಂದಿಸಲು ಇಂಗ್ಲೆಂಡಿನಲ್ಲಿ ಸೈಮನ್ ಮುಖಂಡತ್ವದಲ್ಲಿ ಒಂದು ಆಯೋಗವನ್ನು ರಚಿಸಿತು. ಈ ಆಯೋಗದಲ್ಲಿ ಏಳೂ ಜನ ಬಿಳಿಯರು ಇದ್ದುದ್ದರಿಂದ ಭಾರತೀಯ ಸ್ವತಂತ್ರ ಹೋರಾಟಗಾರರು ಈ ಆಯೋಗವನ್ನು ವಿರೋಧಿಸಿದರು ಮತ್ತು ಆಯೋಗ ಭಾರತಕ್ಕೆ ಬಂದರೆ ಭಾರತದ ತುಂಬ ಪ್ರತಿಭಟನೆ ಮಾಡುವುದಾಗಿ ಬ್ರಿಟಿಷರನ್ನು ಎಚ್ಚರಿಸಿದ್ದರು. ಅವಾಗ ಭಾರತದ ಇಂಗ್ಲೆಂಡಿನ ಕಾರ್ಯದರ್ಶಿಯಾಗಿದ್ದ ಲಾರ್ಡ ಬರ್ಕೆನ ಹೆಡ್ 1925 ಜುಲೈ 7ರಂದು ಭಾರತೀಯರು ತಮ್ಮ ಬೃಹತ್ ದೇಶಕ್ಕೆ ತಾವೇ ಸಂವಿಧಾನ ರಚಿಸುವುದಾದರೆ ರಚಿಸಲಿ ಎಂದು ಭಾರತೀಯರಿಗೆ ಸವಾಲು ಹಾಕಿದ್ದನು !
ಭಾರತದ ಕಾರ್ಯದರ್ಶಿಯ ಸವಾಲನ್ನು ಎದುರಿಸಲು ಮತ್ತು ಭಾರತೀಯರಿಗೆ ಸಂವಿಧಾನ ರಚಿಸುವ ಸಾಮರ್ಥ್ಯವಿದೆ ಎಂದು ತೋರಿಸುವ ಸಲುವಾಗಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ 1928ರಲ್ಲಿ ಬಾಂಬೆಯಲ್ಲಿ ಮೋತಿಲಾಲ್ ನೆಹರೂ ಮುಖಂಡತ್ವದಲ್ಲಿ ಸಮಿತಿಯೊಂದನ್ನು ರಚಿಸಿತು, ಈ ಸಮಿತಿಯಲ್ಲಿ 10 ಜನ ಸದಸ್ಯರಿದ್ದರು ಇವರಲ್ಲಿ ಮುಸ್ಲಿಂ ಮತ್ತು ಸಿಖರು ಇದ್ದರು ಹಾಗೂ ಪಂಡಿತ ಜವಾಹರಲಾಲ ನೆಹರೂರವರು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಭಾರತೀಯರಿಗೆ ತಕ್ಕಂತಹ ಸಂವಿಧಾನ ರಚನೆ ಕಾರ್ಯ ಭರದಿಂದ ಸಾಗಿತ್ತು. ನಂತರ ಡಿಸೆಂಬರ[1928] ತಿಂಗಳಲ್ಲಿ ಕಲ್ಕತ್ತಾದ ಅಧಿವೇಶನದಲ್ಲಿ ಮೋತಿಲಾಲ್ ನೆಹರೂರವರು ಕೋಮಿಗೆ ಸಂಬಂಧಿಸಿದಂತೆ ಭಾಷಣ ಮಾಡಿದರು. ಅದೇ ಅಧಿವೇಶನದಲ್ಲಿ ಸಿಖರು, ಮುಸ್ಲಿಂರು ಮೋತಿಲಾಲರ ಭಾಷಣ ವಿರೋಧಿಸಿ ಸಂವಿಧಾನ ಜಾರಿಯಾಗದಂತೆ ಪ್ರತಿಭಟಿಸಲು ತಯಾರಿ ನಡೆಸಿದರು. ಕೊನೆಗೆ, ಇಂತಹ ವಿರೋದ ನಡುವೆಯೇ ಲಾಹೋರ ಅಧೀವೇಶನದಲ್ಲಿ ಆಯೋಗ ತಯಾರಿಸಿದ ಸಂವಿಧಾನವನ್ನು ಅಂಗೀಕರಿಸಿದರು. ಈ ಅಂಗೀಕಾರದ ವಿರುದ್ದ ಸಿಖ್ ಜನಾಂಗದವರು, ಕಾಂಗ್ರೆಸಿನ ಮುಸ್ಲಿಂರು ಹಾಗೂ ಮಹಮದ್ ಅಲಿ ಜಿನ್ನಾ ಮೊದಲಾದವರ ವಿರೋಧದಿಂದಾಗಿ 14 ಅಂಶಗಳ ಸಂವಿಧಾನದಲ್ಲಿ ಸೇರಪಡೆ ಪಟ್ಟಿಯಿಂದಾಗಿ  ಮೋತಿಲಾಲ ನೆಹರೂರವರು ತಯಾರಿಸಿದ ಸಂವಿಧಾನ ಅಂಗೀಕರಿಸಿದ ದಿನವೇ ಮಣ್ಣು ಕೊಡಬೇಕಾಯಿತು !
ಹೀಗೆ ಭಾರತದ ಇತಿಹಾಸದಲ್ಲಿ ಭಾರತೀಯರ ಆಸೆಗಳಿಗೆ ಅನುಗುಣವಾಗಿ ಸಂವಿಧಾನ ಬರೆಯಲು ಹೋಗಿ, ಕೋಮುಗಳನ್ನು ಸೃಷ್ಟಿಸುವವರೇ ಆಗಿದ್ದಾರೆ. ಇಂತಹವರು ಸಂವಿಧಾನ ಬರೆಯಲು ಅರ್ಹರೆ ಒಂದೇ ಒಂದು ಸಲ ಯೋಚಿಸಿ.  ಇತಿಹಾಸದಲ್ಲಿ ಮೋತಿಲಾಲ ನೆಹರು ಬರೆದಿರುವ ಸಂವಿಧಾನವನ್ನು  'ನೆಹರೂ ವರದಿ' ಎಂದು ಕರೆಯುತ್ತಾರೆ !  ಅಷ್ಟಕ್ಕೂ ಡಾ// ಅಂಬೇಡ್ಕರ ಕರಡು ರಚನಾ ಸಮಿತಿಯ ಅಧ್ಯಕ್ಷರು, ಇವರ ಜೊತೆ ಎಲ್ಲಾ ಜಾತಿಯ ಸದಸ್ಯರಿದ್ದರು. ಸಂವಿಧಾನ ಜಾರಿಯಾಗುವ ಸಮಯದಲ್ಲಿ ಯಾರೊಬ್ಬರೂ ತುಟಿ ಬಿಚ್ಚಲಿಲ್ಲ, ಕರಡು ರಚನೆ ಮಾಡುವುದು ಡಾ// ಅಂಬೇಡ್ಕರವರಿಂದ ಮಾತ್ರ ಸಾಧ್ಯ ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಪಂಡಿತ ಜವಾಹರಲಾಲ ನೆಹರೂ ಕೂಡಾ ಸಂವಿಧಾನ ಬರೆಯುವ ಸಾಮರ್ಥ್ಯ ಇತ್ತು ಎಂದಾದರೆ ಸಂವಿಧಾನ ಬರೆಯಲಿಲ್ಲ ಏಕೆ ? ಅಪ್ಪ ಮೋತಿಲಾಲ ನೆಹರೂ ಸಿಖ್ ವಿರೋಟ್ಟಿಕೊಂಡು ಸಂವಿಧಾನ ಶಿಲ್ಪಿ ಎಂಬ ಪಟ್ಟ ಕಳೆದುಕೊಂಡರೆ, ಮಗ ಜವಾಹರ ಲಾಲ ನೆಹರೂ ಇಂಗ್ಲೆಂಡಿನ ಔತಣ ಕೂಟದಲ್ಲಿ ತನ್ನಷ್ಟಕ್ಕೆ ತಾನೇ ಕುಳಿತಿದ್ದ ಜಿನ್ನಾನನ್ನು ಕೆಣಕಿ ಪಾಕೀಸ್ತಾನದ ರಚನೆಗೆ ಕಾರಣನಾದ ಇತಿಹಾಸವಿದೆ ! ಇಂತಹ ನಾಯಕರು ಸಂವಿಧಾನ ಬರೆದರೆ ಹೇಗಿರುತ್ತೆ ಎನ್ನುವ ಕಲ್ಪನೆ ಮಾಡಲು ಸಾಧ್ಯವೆ ? ಸಾಮರ್ಥ್ಯದ ಜೊತೆ ಹೊಂದಾಣಿಕೆಯು ಇರಬೇಕು. ಈ ಗುಣ ಜವಾಹರಲಾಲ ನೆಹರೂಗೆ ಇರಲಿಲ್ಲ. ನೆಹರೂ ಸಂವಿಧಾನ ಬರೆಯದಿದ್ದರೇನು ಲಾಹೋರ ಅಧಿವೇಶದಲ್ಲಿ ತಂದೆ ಮೋತಿಲಾಲ ಬರೆದ ಸಂವಿಧಾನದ ಅಂಗೀಕಾರದ ದಿನದ ನೆನಪಿಗಾಗಿ ಜನೇವರಿ 26ರಂದು ಈಗಿನ ಸಂವಿಧಾನವನ್ನು ಅಂಗೀಕರಿಸಲಾಯಿತಲ್ಲವೆ ?

Tuesday, November 06, 2012

ವಚನ-23


ಅಯ್ಯಾ ಎನ್ನ ಕುರುಡನ ಮಾಡಿದಿರಿ ;
ಎನ್ನ ಕುಂಟನ ಮಾಡಿದಿರಿ !
ಇನ್ನೂ ಮುಂದುವರೆದು
ನನ್ನ ಮೂಕನಾಗಿಸಿ, ಕಿವುಡನ ಮಾಡಿದಿರಿ !
ನಾನು, ನನಗೇ ಗೊತ್ತಿಲ್ಲದಂತೆ
ಗುದಮುರಗಿ ಹಾಕುವದ ಕಲಿಸಿದಿರಿ
ನನಗೇನು ಅರಿಯದೇ ? ನಾನು ಕಾರಣಿಕ ಸಿದ್ಧರಾಮ
ಅರ್ಥಕ್ಕೆ ನಿಲುಕುವುದಿಲ್ಲ ; ಅರಿವಿಗೆ ತೆರೆದುಕೊಳ್ಳುತ್ತೇನೆ !

Sunday, November 04, 2012

ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿಎಂಬ ಪಟ್ಟದಿಂದ ಕೆಳಕ್ಕಿಳಿಸುವ ಷಡ್ಯಂತ್ರ !



- ರಘೋತ್ತಮ ಹೊ.ಬ, ಚಾಮರಾಜನಗರ

ಇತ್ತೀಚೆಗೆ ಅಥವಾ 1950 ಜನವರಿ 26ರಿಂದಲೂ ಈ ದೇಶದಲ್ಲಿ ಒಂದು ಷಡ್ಯಂತ್ರ ನಡೆಯುತ್ತಾ ಬಂದಿದೆ. ಅದು ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಎಂಬ ಪಟ್ಟದಿಂದ ಕೆಳಕ್ಕಿಳಿಸುವುದು! ಅರುಣ್ ಶೌರಿ ಇರಬಹುದು ಅಥವಾ ಮತ್ಯಾರೋ ಆರ್ಯ ಶೂರ ಇರಬಹುದು, ಒಟ್ಟಾರೆ ಎಲ್ಲರ ಟಾರ್ಗೆಟ್ ಒಂದೇ. ಅಂಬೇಡ್ಕರ ರಿಂದ ಸಂವಿಧಾನ ಶಿಲ್ಪಿ ಎಂಬ ಟೈಟಲ್ಲನ್ನು ಕಿತ್ತುಕೊಳ್ಳುವುದು ಅಥವಾ ಅವರು ಸಂವಿಧಾನ ಬರೆದೇ ಇಲ್ಲ ಎಂದು ಸಾಧಿಸಿ ತೋರಿಸುವುದು!

ಇದು ಎಷ್ಟು ಸಾಧ್ಯ? ಅಥವಾ ಎಷ್ಟು ಅಸಾಧ್ಯ? ಅದನ್ನು ಕಾಲವೇ ನಿರ್ಣಯಿಸುತ್ತಿದೆ. ಯಾಕೆಂದರೆ ಹಿಂದೆಲ್ಲಾ ಇದು ಅಂದರೆ ಅವರು ಇವರು ಎನ್ನುವುದು ಅಥವಾ ಇವರು ಅವರೇ ಅಲ್ಲ ಎಂದು ಸಾಧಿಸಿ ತೋರಿಸುವುದು ಅಥವಾ ಸಾಧಿಸಿಯೇ ಬಿಡುವುದು ಆಗಾಗ ನಡೆಯುತ್ತಾ ಬಂದಿದೆ. ಉದಾ: ಬುದ್ಧನನ್ನು ವಿಷ್ಣು ಎನ್ನುವುದು, ಶಿವಾಜಿಯನ್ನು ಮುಸ್ಲಿಂ ದ್ವೇಷಿ ಎನ್ನುವುದು ಇತ್ಯಾದಿ.

ಹಾಗಿದ್ದರೆ ಹೀಗೆಯೇ ಅಂದರೆ ಬುದ್ಧನನ್ನು ವಿಷ್ಣು ಎಂದ ಹಾಗೆ ಸಂವಿಧಾನ ಶಿಲ್ಪಿ ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಅಲ್ಲ ಎಂದು ಸಾಧಿಸಲು ಸಾಧ್ಯವೇ? ಜನಸಾಮಾನ್ಯರೆ ಇದನ್ನು ತೀರ್ಮಾನಿಸಬೇಕು.ಯಾಕೆಂದರೆ ತಮಗೆ ಬೇಕೆಂದವರನ್ನು ಇಂದ್ರ ಚಂದ್ರ ಎನ್ನುವುದು, ತಮಗೆ ಬೇಡ ಎಂದವರನ್ನು ಹೀಗಳೆವುದು, ಇದು ಈ ದೇಶದ ಬ್ರಾಹ್ಮಣವಾದಿ ಚರಿತ್ರಕಾರರು ಮಾಡಿಕೊಂಡು ಬಂದಿರುವ ಪದ್ಧತಿ. ಅಂತಹ ಪದ್ಧತಿಯ ಮುಂದುವರಿದ ಭಾಗವಾಗಿಯೇ ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿಅಲ್ಲ ಎಂದು ಸಾಧಿಸುವ ಈ ವ್ಯರ್ಥಾಲಾಪ. ಅಂದಹಾಗೆ ಅದುನಡೆದಿರುವುದು ಸುಭಾಷ್ ಕಶ್ಯಪ್ ಎಂಬ ಸಂವಿಧಾನ ತಜ್ಞ ಎನಿಸಿಕೊಂಡವರು ಬರೆದಿರುವ “Our Constitution”  ಎಂಬ ಕೃತಿಯಲ್ಲಿ.ಹಾಗೆ ಸಾಧಿಸ ಹೊರಟವರು ಮೊದಲು ಹೇಳುವುದು ಸಂವಿಧಾನದ ಪ್ರಥಮ ಕರಡನ್ನು ಸಿದ್ಧಪಡಿಸಿದವರು ಬಿ.ಎನ್.ರಾವ್ ಎಂಬವವರು ಎಂದು!

ಅಂದರೆ ಆಗಸ್ಟ್ 29, 1947ರಂದು ಕರಡು ಸಮಿತಿ ರಚಿಸಲ್ಪಟ್ಟರೆ ಅದು ರಚಿಸಲ್ಪಟ್ಟ ಒಂದೇ ತಿಂಗಳಲ್ಲಿ ಅಂದರೆ ಅಕ್ಟೋಬರ್ 1947ರಲ್ಲಿ ಅದರ ಸದಸ್ಯರಲ್ಲೋರ್ವರಾದ ಬಿ.ಎನ್.ರಾವ್‌ರವರು ಪ್ರಥಮ ಕರಡು ರಚಿಸಿದರಂತೆ, ಅವರು ರಚಿಸಿದ ಕರಡನ್ನು ಅಂಬೇಡ್ಕರ್ ನೇತೃತ್ವದ ಸಮಿತಿ ಬರೀ ಪರಿಶೀಲಿಸಿತಂತೆ! ಇದು ಸುಭಾಷ್ ಕಶ್ಯಪ್‌ರಂತಹ ಬ್ರಾಹ್ಮಣ ಚರಿತ್ರಾಕಾರರ ಅಂಬೋಣ. ಆದರೆ ಅದೇ ಸುಭಾಷ್ ಕಶ್ಯಪ್ ತಮ್ಮ“Our Constitution” ಕೃತಿಯ ಅದೇ ಪುಟಗಳಲ್ಲಿ ಅಂಬೇಡ್ಕರರ ಹೇಳಿಕೆಯೊಂದನ್ನು ಉಲ್ಲೇಖಿಸುತ್ತಾರೆ.

ಆ ಹೇಳಿಕೆಯಲ್ಲಿ ಸ್ವತಃ ಅಂಬೇಡ್ಕರರೇ 1947 ಆಗಸ್ಟ್‌ರಿಂದ 1949 ಅಕ್ಟೋಬರ್‌ವರೆಗೆ ಕರಡು ಸಮಿತಿ ಅನೇಕ ಸಭೆಗಳನ್ನು ನಡೆಸಿ ಸಂವಿಧಾನದ ಕರಡಿನ ಅಂತಿಮ ಪ್ರತಿಯನ್ನು 1949 ನವೆಂಬರ್ ತಿಂಗಳಲ್ಲಿ ಸಂವಿಧಾನ ಸಭೆಗೆ ಸಲ್ಲಿಸಿತು ಎನ್ನುತ್ತಾರೆ. ಹಾಗಿದ್ದರೆ 1949 ನವೆಂಬರ್ ತಿಂಗಳಲ್ಲಿ, ಎರಡು ವರ್ಷಗಳ ಸತತ ಪ್ರಯತ್ನದಲ್ಲಿ ಸಂವಿಧಾನ ಸಿದ್ಧಗೊಂಡಿತೆಂದರೆ ಅದರ ಶ್ರೇಯಸ್ಸು ಸಲ್ಲಬೇಕಾದ್ದು ಯಾರಿಗೆ? ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರರಿಗೆ ತಾನೆ? ಅಂದಹಾಗೆ 1947ರ ಆರಂಭದಲ್ಲಿ ಕೇಳಿಬರುವ ಬಿ.ಎನ್.ರಾವ್ ಎಂಬವವರ ಹೆಸರು ಸಂವಿಧಾನ ರಚಿಸಲು ತೆಗೆದುಕೊಂಡ ಮುಂದಿನ ಆ ಎರಡು ವರ್ಷಗಳ ಸಮಯದಲ್ಲಿ ಅಂದರೆ 1948, 1949ರಲ್ಲಿ ಎಲ್ಲಿಯೂ ಕೇಳಿಬರುವುದಿಲ್ಲ! (ಇತ್ತೀಚೆಗೆ ಹಿಂದುತ್ವವಾದಿಗಳಿಂದ ಕೇಳಿ ಬರುತ್ತಿರುವುದನ್ನೊರತು ಪಡಿಸಿದರೆ!).

ಇದಕ್ಕೆ ಪೂರಕವಾಗಿ ಸಂವಿಧಾನ ಸಭೆಯಲ್ಲಿ ಮಾತನಾಡಿರುವ ಸಮಿತಿಯ ಸದಸ್ಯ ಟಿ.ಟಿ.ಕೃಷ್ಣಮಾಚಾರಿಯವರು ಹೇಳಿರುವುದನ್ನು ನೋಡಿ ಸಂವಿಧಾನದ ಕರಡು ಸಮಿತಿಯಲ್ಲಿದ್ದ ಒಬ್ಬರು ತೀರಿಕೊಂಡರು, ಅವರ ಸ್ಥಾನಕ್ಕೆ ಮರುನೇಮಕ ಆಗಲಿಲ್ಲ. ಒಂದಿಬ್ಬರು ವಿದೇಶದಲ್ಲಿ ನೆಲೆಸಿದ್ದರಿಂದ ಅವರಿಗೆ ಕರಡು ರಚನೆ ಕಾರ್ಯದಲ್ಲಿ ಭಾಗವಹಿಸಲಾಗಲಿಲ್ಲ. ಮಗದೊಬ್ಬರು ಸದಸ್ಯರು ದಿಲ್ಲಿಯಿಂದ ದೂರದಲ್ಲಿದ್ದುದರಿಂದ ಅವರು ಕೂಡ ಅದರಲ್ಲಿ ಭಾಗವಹಿಸಲಿಲ್ಲ. ಅಂತಿಮವಾಗಿ ಸಂವಿಧಾನ ರಚನೆಯ ಪೂರ್ಣ ಜವಾಬ್ದಾರಿ ಅಂಬೇಡ್ಕರರ ಮೇಲೆ ಬಿದ್ದಿತು. ಅಂದಹಾಗೆ ಕೃಷ್ಣಾಮಾಚಾರಿಯವರ ಹೇಳಿಕೆಯ ಪ್ರಕಾರ ಸುಭಾಷ್ ಕಶ್ಯಪ್‌ರವರು ಹೇಳಿರುವ ಕರಡು ಸಮಿತಿ ಸದಸ್ಯರಾದ ಆ ಬಿ.ಎನ್.ರಾವ್ ಎಲ್ಲಿ ಹೋದರು? ವಿದೇಶಕ್ಕೋ ಅಥವಾ ನೇರ ಸ್ವರ್ಗಕ್ಕೋ?

ಅಂಬೇಡ್ಕರರು ಸಂವಿಧಾನ ಶಿಲ್ಪಿ ಅಲ್ಲ ಎಂದು ಹೇಳುವವರು ಇದನ್ನು ಸ್ಪಷ್ಟಪಡಿಸಬೇಕು.ಸಂವಿಧಾನ ಅರ್ಪಿತವಾದ ಆ ಸಂಧರ್ಭದಲ್ಲಿ ಅಂದರೆ ನವೆಂಬರ್ 26,1949ರಲ್ಲಿ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರ ಪ್ರಸಾದ್‌ರವರು ಡಾ.ಅಂಬೇಡ್ಕರ್‌ರವರಿಗೆ ಸಂವಿಧಾನ ರಚಿಸಲು ಪೂರ್ಣ ಸ್ವಾತಂತ್ರ ನೀಡಿದ್ದಿದ್ದರೆ, ಅವರು ಖಂಡಿತವಾಗಿಯೂ ತಮ್ಮದೇ ಆದ ಮತ್ತು ಭಿನ್ನವಾದ ಸಂವಿಧಾನವನ್ನು ಈ ದೇಶಕ್ಕೆ ನೀಡುತ್ತಿದ್ದರು. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಅಂದಹಾಗೆ ರಾಜೇಂದ್ರ ಪ್ರಸಾದರ ಈ ಹೇಳಿಕೆ ಅರ್ಥೈಸುವುದೇನನ್ನು? ಸಂವಿಧಾನ ರಚಿಸುವ ಪೂರ್ಣ ಹೊಣೆ ಅಂಬೇಡ್ಕರರ ಮೇಲೆ ಬಿದ್ದಿತ್ತು ಆದರೆ ಅವರಿಗೆ ಕೆಲವು ತಡೆಗಳಿದ್ದವು ಎಂದು ತಾನೆ? ಅದೇನೆ ಇರಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂದು ಘಂಟಾಘೋಷವಾಗಿ ಹೇಳಲು ಡಾ.ಬಾಬು ರಾಜೇಂದ್ರಪ್ರಸಾದ್ ಮತ್ತು ಟಿ.ಟಿ.ಕೃಷ್ಣಾಮಾಚಾರಿಯವರ ಇದಿಷ್ಟು ಹೇಳಿಕೆ ಮಾತ್ರ ಸಾಕು.

ಯಾಕೆಂದರೆ ಇವರಿಬ್ಬರು ಸಂವಿಧಾನದ ರಚನೆಯ ಜೊತೆ ಜೊತೆಯಲ್ಲೆ ಬೆಳೆದವರು, ಅರುಣ್ ಶೌರಿ ಮತ್ತು ಸುಭಾಷ್ ಕಶ್ಯಪ್‌ರ ಹಾಗೆ ಅದನ್ನು ಅದರ ಇತಿಹಾಸವನ್ನು ದೂರದಿಂದ ಹಿಂದುತ್ವದ ದೃಷ್ಟಿಯಿಂದ ಕೆದಕಿದವರಲ್ಲ! ಮುಂದುವರಿದು ಅಂಬೇಡ್ಕರರ ಸಂವಿಧಾನ ರಚನೆಯ ಕಾರ್ಯದ ಬಗ್ಗೆ ಆಕ್ಷೇಪಿಸುವವರು ಹೇಳುವುದು ಸಂವಿಧಾನ ಎಂಬುದು ಕತೆಯಲ್ಲ, ಕಾದಂಬರಿಯಲ್ಲ ಅದನ್ನು ಅಂಬೇಡ್ಕರರೊಬ್ಬರೇ ಬರೆದಿದ್ದಾರೆ ಎನ್ನುವುದು ಎಷ್ಟು ಸರಿ? ಎಂದು. ನಿಜ, ಸಂವಿಧಾನ ಕತೆಯಲ್ಲ, ಕಾದಂಬರಿಯೂ ಅಲ್ಲ. ಹಾಗೆಯೇ ಸ್ವಾತಂತ್ರ ಎಂಬುದೂ ಕೂಡ ಕಡ್ಲೆಪುರಿಯಲ್ಲ! ಏಕೆಂದರೆ ಗಾಂಧೀಜಿಯವರನ್ನು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂದು ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲಾಗಿದೆ.

ಇದನ್ನು ಯಾರೂ ಗಾಂಧೀಜಿ ಸ್ವಾತಂತ್ರವನ್ನು ಯಾವಾಗ, ಯಾವ ಟೈಮಲ್ಲಿ, ಯಾರ ಕೈಗೆ ತಂದುಕೊಟ್ಟರು ಎಂದು ಎಲ್ಲಿಯೂ ಪ್ರಶ್ನಿಸುವುದಿಲ್ಲ! ಅಂಬೇಡ್ಕರ್‌ರವರು ರಚಿಸಿದ ಸಂವಿಧಾನಕ್ಕೆ ಸಾಕ್ಷಿಯಾಗಿ ಸಂವಿಧಾನದ ಆ ಮೂಲ ಪ್ರತಿ ಇದೆ. ಅದರ ರಚನೆಯ ಹೊಣೆ ಹೊತ್ತ ಕರಡು ಸಮಿತಿಯ ಅಧ್ಯಕ್ಷರು ಅವರು ಎಂಬುದಕ್ಕೆ ದಾಖಲೆ ಇದೆ. ಆದರೆ ಗಾಂಧೀಜಿ ಸ್ವಾತಂತ್ರ ತಂದುಕೊಟ್ಟರೆಂಬುದಕ್ಕೆ ಏನು ದಾಖಲೆ ಇದೆ? ಹಾಗೆ ಹೇಳುವುದಾದರೆ ದೇಶಕ್ಕೆ ಸ್ವಾತಂತ್ರ ಬಂದ ದಿನ ಗಾಂಧೀಜಿ ದೇಶದ ರಾಜಧಾನಿ ದಿಲ್ಲಿಯಲ್ಲಿ ಇರಲೇ ಇಲ್ಲ. ದೂರದ ಕಲ್ಕತ್ತಾದಲ್ಲಿ ಇದ್ದರು! ಹಾಗಿದ್ದರೂ ಈ ದೇಶ ಅವರನ್ನು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂದು ಒಪ್ಪಿಕೊಂಡಿಲ್ಲವೆ?

ಗಾಂಧೀಜಿ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂಬುದನ್ನು ಒಪ್ಪಿಕೊಳ್ಳಬಹುದಾದರೆ ಅಂಬೇಡ್ಕರರನ್ನು ಸಂವಿಧಾನಶಿಲ್ಪಿ ಎಂದು ಒಪ್ಪಿಕೊಳ್ಳಲು ಏನಡ್ಡಿ? ಯಾಕೆ, ಅಂಬೇಡ್ಕರರು ಅಸ್ಪಶ್ಯರು ಎಂಬ ಕಾರಣಕ್ಕೆ ಅವರಿಗೆ ಅಂತಹ ಗೌರವವನ್ನು ನೀಡಲು ಈ ದೇಶದ ಪಟ್ಟಭದ್ರ ಹಿತಾಸಕ್ತಿಗಳಿಗೆ ಮನಸ್ಸಾಗುತ್ತಿಲ್ಲವೆ? ಸತ್ಯ ಹೇಳಿದರೆ ನಾವೇನು ಬೇಜಾರು ಮಾಡಿಕೊಳ್ಳುವುದಿಲ್ಲ. ಬೇಕಿದ್ದರೆ ನೇರವಾಗಿ ಹೇಳಲಿ, ಅಂಬೇಡ್ಕರ್ ಅಸ್ಪಶ್ಯರು ; ಆದ್ದರಿಂದ ಅವರು ಸಂವಿಧಾನ ಶಿಲ್ಪಿಯಲ್ಲ ಎಂದು !
ಕೃಪೆ : ವಾರ್ತಾಭಾರತಿ
  
 

Friday, November 02, 2012

ಮಾತ್ಗವಿತೆ-99

ಹಲವು ಕೆಲವು ಹುಚ್ಚಾಟಗಳನ್ನೇ
ಹೆಚ್ಚಿನವು ಎಂದು ಪ್ರೀತಿ-ಪ್ರೇಮ
ಪರಿಚಯವಿಲ್ಲದವರು ಆ ಹೆಸರಲ್ಲಿ
ಪರಿಚಿತರಾದೋರು ಪಲ್ಲಂಗ ಪುರಾಣದ
ಕನಸು ಕಂಡವರು ಎಂದರೆ
ನನ್ನದು ಖಂಡಿತ ತಪ್ಪು !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.