Friday, March 30, 2012

ಸದ್ದಿಲ್ಲದೆ ಸಾಮಾಜಿಕ ಕ್ರಾಂತಿ : ಪ್ರಸನ್ನ ಅವರ ಪರಿಶ್ರಮ

ರವಿ ಕೃಷ್ಣಾರೆಡ್ಡಿ


ಸಾಗರದ ಬಳಿಯ ಹೆಗ್ಗೋಡು ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ಪರಿಚಿತವಾದ ಸ್ಥಳವೇ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ಲಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿಯೇ ಸದ್ದಿಲ್ಲದೆ ಸಾಮಾಜಿಕ ಕ್ರಾಂತಿಯೊಂದು ಜರುಗುತ್ತಿದೆ. ಅದು “ಚರಕ” ಸಂಸ್ಥೆಯ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ರೂಪದಲ್ಲಿ.
ಹಿರಿಯ ರಂಗಕರ್ಮಿ, ಲೇಖಕ, ನಾಟಕಕಾರ ಪ್ರಸನ್ನರ ಪ್ರಯತ್ನ ಇದು. ಹತ್ತಿಯ ನೂಲಿಗೆ ಬಣ್ಣ ಹಾಕಿ ಖಾದಿ ಬಟ್ಟೆ ನೇಯುವುದರಿಂದ ಹಿಡಿದು ವಿವಿಧ ದಿರಿಸುಗಳನ್ನು ಹೊಲಿದು ಮಾರುಕಟ್ಟೆಗೆ ತಲುಪಿಸುವ ತನಕ “ಚರಕ” ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಲ್ಲಿ ಮೂರ್ನಾಲ್ಕು ಕಡೆ ಅದು ತನ್ನದೇ ಆದ “ದೇಸಿ” ಹೆಸರಿನ ಅಂಗಡಿಗಳ ಮೂಲಕ ಈ ರೆಡಿಮೇಡ್ ದಿರಿಸುಗಳನ್ನು ಮಾರಾಟ ಮಾಡುತ್ತದೆ.
ವಾರ್ಷಿಕ ಒಂದು ಕೋಟಿ ಆದಾಯವಿರುವ ಈ “ಚರಕ” ಸಹಕಾರ ಸಂಘ ನಡೆಯುತ್ತಿರುವುದೆಲ್ಲ ಅಲ್ಲಿ ಕೆಲಸ ಮಾಡುವ ಸ್ಥಳೀಯ ಹೆಣ್ಣು ಮಕ್ಕಳ ಆಡಳಿತ ಮಂಡಳಿಯಿಂದಲೆ. ಅಲ್ಲಿ ಕೆಲಸ ಮಾಡುವ ಯಾರು ಬೇಕಾದರೂ ಆಡಳಿತ ಮಂಡಳಿಯ ಸದಸ್ಯರಾಗಬಹುದು. ಅವರನ್ನು ಆಯ್ಕೆ ಮಾಡುವುದು ಪ್ರಜಾಸತ್ತಾತ್ಮಕವಾಗಿ; ಅಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳೆ ತಮ್ಮಲ್ಲಿಯ ಹಲವರನ್ನು ಅಧ್ಯಕ್ಷೆ, ಕಾರ್ಯದರ್ಶಿ, ಇತ್ಯಾದಿಯಾಗಿ ಆರಿಸಿಕೊಳ್ಳುತ್ತಾರೆ.
ಮತ್ತೆ “ಚರಕ” ಕೇವಲ ನೌಕರಿ ನೀಡುವ ಸಂಸ್ಥೆ ಮಾತ್ರವಲ್ಲ. ಅದೊಂದು ಸಾಂಸ್ಕೃತಿಕ ಸಂಘಟನೆ ಸಹ. ಅಲ್ಲಿ ವರ್ಷಕ್ಕೊಮ್ಮೆ ಚರಕ ಉತ್ಸವ ನಡೆಯುತ್ತದೆ. ಇದೇ ಹೆಣ್ಣುಮಕ್ಕಳು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ವೈಚಾರಿಕವಾಗಿ ಅವರನ್ನು ಬೆಳೆಸುವ ಪರಿಸರ ಅದು.
ಅಲ್ಲಿಗೆ ನಾನು 2009ರ ಮಾರ್ಚ್‌ನಲ್ಲಿ ಭೇಟಿ ಕೊಟ್ಟಿದ್ದೆ; ಹಿರಿಯ ಮಿತ್ರರಾದ ಡಿ.ಎಸ್.ನಾಗಭೂಷಣ್ ಮತ್ತು ಸವಿತಾ ನಾಗಭೂಷಣ್‌ರೊಂದಿಗೆ. ಅಂದು “ಚರಕ”ದ ಆ ವರ್ಷದ ಅಧ್ಯಕ್ಷೆ ಮತ್ತು ಕಾರ್ಯದರ್ಶಿಯವರೊಡನೆ ಅನೌಪಚಾರಿಕವಾಗಿ ಎಂಬಂತೆ ಮಾತನಾಡುತ್ತ ಅವರ ಮಾತುಗಳನ್ನು ವಿಡಿಯೊ ರೆಕಾರ್ಡ್ ಮಾಡಿದ್ದೆ. ಇಷ್ಟು ದಿನ ಅದನ್ನು ಎಡಿಟ್ ಮಾಡಿ ಅಪ್‌ಲೋಡ್ ಮಾಡಲು ಆಗಿರಲಿಲ್ಲ. ಇತ್ತೀಚೆಗಷ್ಟೆ ಸಾಧ್ಯವಾಯಿತು. ಈ ವಿಡಿಯೊ ಬಹುಶಃ ನಿಮಗೆ “ಚರಕ”ದ ಬಗ್ಗೆ ಒಂದಷ್ಟು ವಿಭಿನ್ನ ಮಾಹಿತಿ ನೀಡಬಹುದು ಎನ್ನಿಸುತ್ತದೆ.
ಕೃಪೆ : ವರ್ತಮಾನ

ಅಣ್ಣಾ ಅಂದರೆ ಇಂಡಿಯಾ ಎಂದು ನಾವೆಲ್ಲರೂ ತುಂಬಾ ಗೌರವಿಸಿದ್ದ ಕಿರಣ್ ಬೇಡಿ ಎಂಬ ಮಾಜಿ ಅಧಿಕಾರಿ ಭಾರತದ ಭಾವುಟ ಹಿಡಿದು ಕುಣಿದಾಡುವುದು. ಕೇಜ್ರಿವಾಲ ಎಂಬ ವ್ಯಕ್ತಿ ಥೇಟ್ ಸ್ವಯಂ ಸೇವಾ ಸಂಸ್ಥೆಯ ವಕ್ತಾರನಾಗಿ ಸರ್ಕಾರದ ವಿರುದ್ಧ ಕಿಡಿ ಕಾರುವುದು.
ಪ್ರತಿನಿತ್ಯ ರಸ್ತೆಯಲ್ಲಿ ಶಾಲಾ ಮಕ್ಕಳು, ಸಂಘ, ಸಂಸ್ಥೆಗಳು ಮೊಂಬತ್ತಿ ಹಿಡಿದು ಮೆರವಣಿಗೆ ತೆಗೆಯುವುದು ಜನ ಲೋಕ್‌ಪಾಲ್ ಮಸೂದೆಗೆ ಆಗ್ರಹಿಸುವುದು ನನಗೆ ತಮಾಷೆಯಾಗಿ ಕಾಣುತ್ತಿದೆ.
ಈ ಅಸಂಗತ ನಾಟಕವನ್ನು ನಾವು ದಿನ ನೋಡಬೇಕಲ್ಲ ಎಂಬ ಖೇದವೂ ಕಾಡುತ್ತದೆ.
Anna_Hazare (Pic courtesy: wikipedia)
ಸುಮ್ಮನೆ ಹೇಳಿ ಬಿಡುತ್ತೇನೆ. ಎಲ್ಲಾ ಸಂಸದರು ಲೋಕಸಭೆಯಲ್ಲಿ ಒಮ್ಮತದಿಂದ ಒಪ್ಪಿ ಅಣ್ಣಾ ಹಜಾರೆ ತಂಡ ಪ್ರತಿಪಾದಿಸುವ ಜನ ಲೋಕ್‌ಪಾಲ್ ಮಸೂದೆಯನ್ನು ಜಾರಿಗೆ ತಂದು ಬಿಟ್ಟರು ಎಂದು ಕೊಳ್ಳೋಣ. ಭ್ರಷ್ಟಾಚಾರ ಮಾಡಿದ ಪ್ರಧಾನಿ ಅಥವಾ ಸುಪ್ರೀಂಕೋರ್ಟು ನ್ಯಾಯಮೂರ್ತಿ ಇವರನ್ನು ಈ ಲೋಕ್‌ಪಾಲ್ ಗಲ್ಲಿಗೆ ಹಾಕುತ್ತದೆ ಎಂದೇ ಭಾವಿಸೋಣ. ಇದರಿಂದ ಭ್ರಷ್ಟಾಚಾರ ನಿಲ್ಲುತ್ತದೆಯೇ? (ಇದು ಕಾರ್ಯಸಾಧುವಲ್ಲದ ಕಲ್ಪನೆ, ಆ ಮಾತು ಬೇರೆ.)
Anna_Hazareನನ್ನ ಪ್ರಶ್ನೆ ಇಷ್ಟು? ಈ ದೇಶದಲ್ಲಿ ಸರ್ಕಾರಿ ನೌಕರರು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಸೇರಿ ಎಷ್ಟು? ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರನ್ನು ಒಳಗೊಂಡ ನೌಕರರು ಎಷ್ಟು? ನಮ್ಮ ಎಲ್ಲಾ ರಾಷ್ಟ್ರೀಯ ಹಾಗೂ ಚೋಟಾ, ಮೋಟಾ ಪ್ರಾದೇಶಿಕ ಪಕ್ಷಗಳ ಜನ ಪ್ರತಿನಿಧಿಗಳ ಸಂಖ್ಯೆ ಎಷ್ಟು? ಇವರಲ್ಲಿ ಗ್ರಾ.ಪಂ.ಸದಸ್ಯರಿಂದ ಹಿಡಿದು, ಲೋಕಸಭೆ ಸದಸ್ಯರವರೆಗೆ ಈ ಎಲ್ಲರನ್ನೂ ಒಟ್ಟು ಸೇರಿಸಿದರೆ ಈ ದೇಶದ ಶೇ.2ರಷ್ಟು ಸಂಖ್ಯೆಯನ್ನು ಇದು ದಾಟುವುದಿಲ್ಲ. ಈ ಎರಡರಷ್ಟು ಸಂಖ್ಯೆಯ ಜನರನ್ನು ತೋರಿಸಿ, ಇಡೀ ರಾಷ್ಟ್ರದ ಜ್ವಲಂತ ಸಮಸ್ಯೆ ಇದೊಂದೆ ಎನ್ನುವಂತೆ ಬಿಂಬಿಸಿ ಹೋರಾಟ ಮಾಡುತ್ತಿರುವುದು ಏನನ್ನು ಸೂಚಿಸುತ್ತದೆ?
ಸುಮ್ಮನೆ ಲೋಕಾಯುಕ್ತರ ವರದಿಯನ್ನು ಪ್ರಸ್ತಾಪಿಸುತ್ತೇನೆ. ಈ ವರದಿ ಆಕ್ರಮ ಗಣಿಗಾರಿಕೆ, ರಾಷ್ಟ್ರದ ಅತ್ಯಮೂಲ್ಯ ಸಂಪನ್ಮೂಲವನ್ನು ಕೊಳ್ಳೆ ಹೊಡೆದು ರಫ್ತು ಮಾಡಿದ್ದು, ತೀವ್ರ ಭ್ರಷ್ಟಾಚಾರ ಎಲ್ಲವನ್ನೂ ಬಯಲು ಮಾಡಿದ್ದಾರೆ. ಸಂತೋಷ ಹೆಗಡೆಯವರು ಸರ್ಕಾರಕ್ಕೆ ಈ ಬಗ್ಗೆ ಶಿಫಾರಸ್ಸು ಮಾಡಿದ್ದು ನನಗೆ ಇಲ್ಲಿ ಮುಖ್ಯ ಅನ್ನಿಸುತ್ತದೆ. ಸರ್ಕಾರದ ತೆರಿಗೆ ವಂಚಿಸಿದ್ದರ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು, ಈ ಹಣವನ್ನು ಸರ್ಕಾರ ವಶ ಪಡೆಸಿಕೊಳ್ಳಬೇಕು. ಕಾನೂನು ಪ್ರಕಾರ ಇದಕ್ಕಿಂತಲೂ ಬೇರೇನೂ ಮಾಡಲು ಸಾಧ್ಯವಿದೆ ಪಾಪ ಸಂತೋಷ ಹೆಗಡೆಯವರಿಗೆ.
ಇಲ್ಲಿ ಯಡಿಯೂರಪ್ಪ, ಸೋಮಣ್ಣ, ರೆಡ್ಡಿ ಬ್ರದರ್ಸ್ ಇವರೆಲ್ಲಾ ತುಂಬಾ ಭ್ರಷ್ಟರು. ಇದನ್ನೆಲ್ಲಾ ಒಪ್ಪಿಕೊಳ್ಳೋಣ. ಅವರನ್ನು ಜನ ಕ್ಯಾಕರಿಸಿ ಛೀ, ಥೂ ಎಂದು ಉಗಿಯುತ್ತಾರೋ ಬಿಡುತ್ತಾರೋ ಅದನ್ನು ಮುಂದೆ ನೋಡೋಣ.
ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಘೋಷಿಸಿ ಸತ್ಯ ಹರಿಶ್ಚಂದ್ರರೆಂದು ವೇದಿಕೆ ಮೇಲೆ ಕಂಗೊಳಿಸುವ ಕಾರ್ಪೋರೇಟ್ ಸಂಸ್ಥೆಗಳ ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡಬೇಕು?
ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿರುವ ಭಾಗವನ್ನು ಹೇಳುವ ಮೂಲಕ ನನ್ನ ಮಾತನ್ನು ವಿಸ್ತರಿಸುವೆ. ರಾಜ್ಯ ಸರ್ಕಾರದ ಒಡೆತನ ಇರುವ ಮೈಸೂರು ಮಿನರಲ್ಸ್ ಲಿ., ಕಂಪನಿ (ಎಂಎಂ.ಎಲ್.) ಜೊತೆ ಜಿಂದಾಲ್ ಉಕ್ಕು ಕಾರ್ಖಾನೆಯು ವಿಜಯನಗರ ಮಿನರಲ್ಸ್ ಪ್ರೈ. ಲಿ., (ವಿಎಂಪಿಲ್) ಎಂಬ ಹೆಸರಿನಲ್ಲಿ ಜಂಟಿಯಾಗಿ ಸಂಡೂರಿನ ಪ್ರದೇಶದಲ್ಲಿ ತಿಮ್ಮಪ್ಪನ ಗುಡಿ ಐರನ್ ಓರ್ ಕಂಪನಿ (ಟಿಐಓಎಂ) ಗಣಿಗಾರಿಕೆ ಆರಂಭಿಸಿತು. ಕರಾರಿನಲ್ಲಿ ಮೂರನೆ ವ್ಯಕ್ತಿಗೆ ಕಬ್ಬಿಣದ ಅದಿರು ಮಾರುವಂತಿಲ್ಲ ಎಂದಿದೆ. ಸೌಥ್ ವೆಸ್ಟ್ ಮೈನಿಂಗ್ ಲಿ., ಕಂಪನಿಯು 85,022 ಮೆಟ್ರಿಕ್  ಟನ್ ಕಬ್ಬಿಣದ ಅದಿರು ರಫ್ತು ಮಾಡಿದೆ. 2003-04ರಿಂದ 2004-05ರವರೆಗೆ 3,65,594 ಮೆಟ್ರಿಕ್ ಟನ್ ಕಬ್ಬಿಣದ ಅದಿರು ರಫ್ತು ಮಾಡಿದೆ.
ಜಿಂದಾಲ್ ಉಕ್ಕಿನ ಕಾರ್ಖಾನೆಯು ತನ್ನ ಅವಶ್ಯಕತೆಗೆ ಮೀರಿ ಕಬ್ಬಿಣದ ಅದಿರು ಖರೀದಿಸಿದೆ. ಮತ್ತು ಅದನ್ನು ಆಕ್ರಮವಾಗಿ ರಫ್ತು ಮಾಡಿದೆ. ತನ್ನ ಉಕ್ಕು ಉದ್ಯಮಕ್ಕೆ ಬೇಕಾಗಿದ್ದಕ್ಕಿಂತಲೂ 12,97,707 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಖರೀದಿಸಿದೆ. ಆಕ್ರಮವಾಗಿ ಇದನ್ನು ರಫ್ತು ಮಾಡಿದೆ. ಒಂದು ಟನ್ ಕಬ್ಬಿಣದ ಅದಿರಿಗೆ 2500 ರೂ. ಎಂದು ಲೆಕ್ಕ ಹಾಕಿದರೂ ಇದರ ಮೌಲ್ಯವು 324,42,52,500 ರೂ. ಆಗುತ್ತದೆ.
ಈ ಕಾರ್ಪೋರೇಟ್ ಸಂಸ್ಥೆಯ ಗಣಿದಾಹ, ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡಬೇಕು?
ತನ್ನ ಹೊಲಸು ಕೈಗಳನ್ನು ರಾಜಕಾರಣಿಗಳ ಬಿಳಿ ಬಟ್ಟೆಗೆ ಹಚ್ಚಿ, ಅವರ ಜೇಬು ಹೊಲಸು ಮಾಡಿ, ನೋಡಿ ಕಳ್ಳರು ಎಲ್ಲಿದ್ದಾರೆ ಎಂದು ಹೇಳುತ್ತಾ ಭಾರತದ ಭಾವುಟ ಹಿಡಿದು, ಮೊಂಬತ್ತಿ ಹಚ್ಚಿ ತಮ್ಮ ಕರಾಳ ಮುಖ ಬಚ್ಚಿಟ್ಟುಕೊಂಡು ದೇಶಭಕ್ತರಾಗಿ ಕಾಣುವ ಇವರ ಬಗ್ಗೆ ಜನ ಲೋಕ್‌ಪಾಲ್ ಮಸೂದೆಯಲ್ಲಿ ಉತ್ತರ ಇದೆಯಾ? ನನಗೆ ಗೊತ್ತು, ನಾನು ಹುತ್ತ ಹೊಡೆದಿದ್ದೇನೆ. ಪ್ರತಿಕ್ರಿಯೆಗಳು ಬರಲಿ, ನಂತರ ನನ್ನ ಸಂವಾದ ಮುಂದುವರೆಸುವೆ.
ಕೃಪೆ : ವರ್ತಮಾನ

ಮಾತ್ಗವಿತೆ-60

ನನಗೆ ಕನಸುಗಳಿಲ್ಲ ಎಂದು
ಯಾಕೆ ನಿನಗೆ ಅನಿಸಿತು ?
ಕಾಡಿಸುವುದು ಬೇಡವೆಂದು
ಸುಮ್ಮನಿರುವುದೇ ಸರಿಯಲ್ಲವೇನೋ ?
ನೂರೆಂಟು ಬಯಕೆಗಳು ; ಸಾವಿರದ ಕುಸುರುಗಳು
ಹೆಸರು ಹೇಳಲು ಕಾದು ಕುಳಿತಿವೆ !
ಸ್ಪರ್ಧೆಗೆ ಇಳಿದು ಮೇಲೇರಿ ಬರುತ್ತವೆ !
ಅನುಭವಿಸು ; ನೀನೇ ಕೇಳಿದ್ದು !

Thursday, March 29, 2012

ಮಾತ್ಗವಿತೆ-59

ನನ್ನ ಎದೆಯಲ್ಲಿ
ಮಿಣುಕು ಮಿಣುಕಾಗಿದ್ದ
ನೀನು
ಇಡೀ ಹೃದಯದ
ಲಬ್ ಡಬ್ ಆಗಿದ್ದೊಂದು
ಅಚ್ಚರಿ !

Tuesday, March 27, 2012

ಮಾತ್ಗವಿತೆ-58

ಹರಿದೊಗೆದ ಮೇಲೆ ಸಂಬಂಧಗಳ
ಸೂಕ್ಷ್ಮಗಳಾದರೂ ಯಾಕೆ ಬೇಕು ?
ಮರೆವೆಯಿಂದ ಕರೆಯದಿದ್ದರೆ ಸರಿ
ಇರುತ್ತಿತ್ತು ; ಮೆರೆಯುವಿಕೆಯ
ಅಹಂಕಾರದಲ್ಲಿ ಮರೆತವರ ನಾಟಕ
ಯಾಕೆ ಬೇಕು ದುಡಿವ ಬದುಕಿಗೆ ?

Monday, March 26, 2012

ಜಾತಿ ನಾಯಕನಾಗುವುದು ಜನಪ್ರಿಯತೆಯಲ್ಲ !

                          ದಿನೇಶ ಅಮೀನಮಟ್ಟು

ತನ್ನನ್ನು ಹೊಗಳಲು ಆಸ್ಥಾನ ತುಂಬಾ ವಿದೂಷಕರನ್ನು ಇಟ್ಟುಕೊಳ್ಳುತ್ತಿದ್ದ ರಾಜ ಮಹಾರಾಜರು ತಮ್ಮ ಬಗ್ಗೆ ಪ್ರಜೆಗಳು ಏನನ್ನುತ್ತಾರೆ ಎಂದು ತಿಳಿದುಕೊಳ್ಳಲು ಮಾತ್ರ ಮಾರುವೇಷದಲ್ಲಿ ಊರು ಸುತ್ತುತ್ತಿದ್ದರಂತೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸುತ್ತ ವಿದೂಷಕರಷ್ಟೇ ಇದ್ದಾರೆ, ಅದರ ಜತೆಗೆ ಮಾರುವೇಷದಲ್ಲಿ ಅವರೊಮ್ಮೆ ರಾಜ್ಯದಲ್ಲಿ ಒಂದು ಸುತ್ತು ಹೊಡೆದರೆ ಮರುದಿನದಿಂದ ಭಿನ್ನಮತೀಯ ಚಟುವಟಿಕೆಗಳನ್ನೆಲ್ಲ ಕೈಬಿಟ್ಟು ತೆಪ್ಪಗೆ ಮನೆಮೂಲೆ ಸೇರಿ ತನ್ನ ಸರದಿಗಾಗಿ ಕಾಯುತ್ತಾ ಕೂರಬಹುದು. ಆಡಳಿತಾರೂಢ ಬಿಜೆಪಿಯ ಭ್ರಷ್ಟಚಾರ, ವ್ಯಭಿಚಾರ ಮತ್ತು ಒಳಜಗಳದ ಜತೆಗೆ ಕಳೆದ ಆರು ತಿಂಗಳಲ್ಲಿ ಮತ್ತೆ ಮುಖ್ಯಮಂತ್ರಿಯಾಗಲು ಯಡಿಯೂರಪ್ಪನವರು ನಡೆಸುತ್ತಿರುವ ಸರ್ಕಸ್ ಜನರಲ್ಲಿ ರೇಜಿಗೆ ಹುಟ್ಟಿಸಿದೆ. ಇದನ್ನು ತಿಳಿದುಕೊಳ್ಳಬೇಕಾದರೆ ಬಸ್ ನಿಲ್ದಾಣಗಳಲ್ಲಿಯೋ ಇಲ್ಲವೇ ಊರ ಸಂತೆಗಳಲ್ಲಿಯೋ ಜನರು ಆಡುತ್ತಿರುವ ಮಾತುಗಳಿಗೆ ಕಿವಿಕೊಟ್ಟರೆ ಸಾಕು.  ಈ ಪರಿಸ್ಥಿತಿ ಯಲ್ಲಿಯೂ `ತನಗೊಮ್ಮೆ ನಾಯಕತ್ವ ಕೊಟ್ಟು ನೋಡಿ, ಮುಂದಿನ ಚುನಾವಣೆಯಲ್ಲಿ 150 ಶಾಸಕರನ್ನು ಗೆಲ್ಲಿಸಿಕೊಂಡು ಬರುತ್ತೇನೆ` ಎಂದು ಯಡಿಯೂರಪ್ಪನವರು ಹೇಳುತ್ತಾರೆಂದರೆ.....
 ಗರಿಷ್ಠ ಐದು ವರ್ಷಗಳ ಕಾಲ ಮಾತ್ರ ಆಳಲು ರಾಜ್ಯದ ಮತದಾರರು ತಮ್ಮ ಪಕ್ಷವನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಿದ್ದಾರೆ ಎಂದು ಯಡಿಯೂರಪ್ಪನವರು ಎಂದೂ ತಿಳಿದುಕೊಂಡವರಲ್ಲ. ಪ್ರಾರಂಭದ ದಿನದಿಂದಲೇ ಅವರು ಮಾತು ಶುರು ಮಾಡಿದರೆ `ಇನ್ನು ಇಪ್ಪತ್ತು ವರ್ಷಗಳ ಕಾಲ ನಾವೇ...` ಎಂದು ಹೇಳುತ್ತಿದ್ದರು. ಈ ರೀತಿ ಹೇಳುವುದು  ನಾಡಿನ ಪ್ರಜ್ಞಾವಂತ ಮತದಾರರಿಗೆ ಮಾಡುವ ಅವಮಾನ ಎನ್ನುವ ಸಣ್ಣ ಅಳುಕು ಕೂಡಾ ಅವರನ್ನು ಕಾಡುವುದಿಲ್ಲ. ಉಳಿಸಿಕೊಂಡರೆ ಮಾತ್ರ ಈ ಐದು ವರ್ಷಗಳ ಅವಧಿ, ಇಲ್ಲದಿದ್ದರೆ ಅದಕ್ಕಿಂತ ಮೊದಲೇ ಗಂಟುಮೂಟೆ ಕಟ್ಟಿಕೊಂಡು ಹೊರಟು ಹೋಗಬೇಕಾಗುತ್ತದೆ ಎನ್ನುವ ಪ್ರಜಾಪ್ರಭುತ್ವ ವ್ಯವಸ್ಥೆಯ ಕಠೋರ ಸತ್ಯವನ್ನೂ ಅವರು ಅರ್ಥಮಾಡಿಕೊಂಡಿಲ್ಲ.

ಗೆಲುವಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ವಿಫಲನಾದವನು ಆ ಗೆಲುವನ್ನು ಬಹಳ ಕಾಲ ಉಳಿಸಿಕೊಳ್ಳಲು ಆಗುವುದಿಲ್ಲ. ಯಡಿಯೂರಪ್ಪನವರ ರಾಜಕೀಯ ಹಿನ್ನಡೆಗೆ ಇದು ಕಾರಣ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ತನ್ನಿಂದ ಎಂದು ಅವರು ಬಲವಾಗಿ ನಂಬಿದ್ದಾರೆ. ಅವರು ಒಂದು ಪ್ರಾದೇಶಿಕ ಪಕ್ಷದ ನಾಯಕರಾಗಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದಿದ್ದರೆ ಅವರ ನಂಬಿಕೆಗೆ ಆಧಾರ ಇರುತ್ತಿತ್ತು, ಅದನ್ನು ನಂಬಬಹುದಿತ್ತು.


ಆದರೆ ಯಡಿಯೂರಪ್ಪನವರು ಒಂದು ರಾಷ್ಟ್ರೀಯ ಪಕ್ಷದ ನಾಯಕರು. ರಾಜ್ಯದ ಮತದಾರರು ಆರಿಸಿದ್ದು ಭಾರತೀಯ ಜನತಾ ಪಕ್ಷವನ್ನು, ಕೇವಲ ಯಡಿಯೂರಪ್ಪನವರನ್ನಲ್ಲ. ಅದೇನು ದೊಡ್ಡ ಗೆಲುವು ಕೂಡಾ ಅಲ್ಲ. ಸಂಖ್ಯೆಯಲ್ಲಿ ಶಾಸಕರು ಹೆಚ್ಚಿದ್ದರೂ ಮತ ಪ್ರಮಾಣದಲ್ಲಿ  ಶೇಕಡಾ 0.73ರಷ್ಟು ಮುಂದೆ ಇದ್ದದ್ದು ಕಾಂಗ್ರೆಸ್.


ರಾಜ್ಯದಲ್ಲಿ  ಅಧಿಕಾರಕ್ಕೆ ಬರುವಷ್ಟು ಬಿಜೆಪಿ ಬೆಳೆಯಲು ಮುಖ್ಯಪಾತ್ರ ವಹಿಸಿದ್ದವರು ಬಿ.ಎಸ್.ಯಡಿಯೂರಪ್ಪ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅವರೊಬ್ಬರೇ ಗೆಲುವಿಗೆ ಕಾರಣರಲ್ಲ. ಯಡಿಯೂರಪ್ಪನವರ ಜನಪ್ರಿಯತೆಯ ಜತೆಯಲ್ಲಿ ಸೀಮಿತ ಪ್ರಮಾಣದಲ್ಲಿಯಾದರೂ ಸಂಘ ಪರಿವಾರ ಹೊಂದಿದ್ದ ನೆಲೆ, ಎಚ್.ಡಿ.ಕುಮಾರಸ್ವಾಮಿಯವರ `ವಚನಭಂಗ` ಹುಟ್ಟಿಸಿದ ಜನಾಕ್ರೋಶ, ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯವಾಗಿ ಅನ್ಯಾಯಕ್ಕೀಡಾಗಿದ್ದ ಮಾದಿಗ ಸಮುದಾಯವನ್ನು ಸೆಳೆದುಕೊಂಡು ನಡೆಸಿದ್ದ ಸೋಷಿಯಲ್ ಎಂಜಿನಿಯರಿಂಗ್, ಅಸ್ಪೃಶ್ಯರಲ್ಲದ ಬೋವಿ ಮತ್ತಿತರ ಜಾತಿಗಳ ಅಭ್ಯರ್ಥಿಗಳನ್ನು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಕ್ಷೇತ್ರದಲ್ಲಿ ಕಣಕ್ಕಿಳಿಸಿ ಮೇಲ್ಜಾತಿ ಮತಗಳನ್ನು ಪಡೆದ ರಾಜಕೀಯ ಜಾಣತನ, ನೀರಿನಂತೆ ಹರಿದ ಬಳ್ಳಾರಿ ಗಣಿ ಲೂಟಿಕೋರರ ದುಡ್ಡು....ಇವುಗಳೆಲ್ಲವೂ 2008ರಲ್ಲಿ ಬಿಜೆಪಿ ಗೆಲುವಿಗೆ ಕಾರಣ.


ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುತ್ತೇನೆ ಎಂದು ಯಡಿಯೂರಪ್ಪನವರು ಈಗ ಹೇಳುತ್ತಿರುವುದು ತನ್ನ ಯಾವ ಸಾಧನೆಯನ್ನು ನಂಬಿಕೊಂಡು? ಮೂರುವರೆ ವರ್ಷಗಳ ಕಾಲದ ಭ್ರಷ್ಟಾಚಾರ ಮುಕ್ತ ನಡವಳಿಕೆಯನ್ನೇ? ರಾಜ್ಯಕ್ಕೆ ಕೊಟ್ಟಿರುವ ಬಿಗಿಯಾದ  ಆಡಳಿತವನ್ನೇ?  ಅನುಷ್ಠಾನಕ್ಕೆ ತಂದಿರುವ ಜನಪರ ಅಭಿವೃದ್ಧಿ ಯೋಜನೆಗಳನ್ನೇ? ಶಾಸಕರು ಸೇರಿದಂತೆ ಸಹೋದ್ಯೋಗಿಗಳ ಜತೆ ತಾನು ಉಳಿಸಿಕೊಂಡಿರುವ ಸೌಹಾರ್ದಯುತ ಸಂಬಂಧವನ್ನೇ? ಯಾವುದನ್ನು?  ಲೋಕಾಯುಕ್ತ ಸಲ್ಲಿಸಿದ್ದ ಪ್ರಥಮಮಾಹಿತಿ ವರದಿಯನ್ನು ಹೈಕೋರ್ಟ್ ರದ್ದು ಮಾಡಿದ ಮಾತ್ರಕ್ಕೆ ತಾನು ದೋಷಮುಕ್ತ ಎಂದು ಅವರು ಹೇಗೆ ತಿಳಿದುಕೊಂಡರೋ ಗೊತ್ತಿಲ್ಲ.  ಅವರ ಬೆಂಬಲಿಗರು ಸದಾ ಹೇಳುತ್ತಿರುವ `ಸಹಜ ನ್ಯಾಯ`ದ ಪ್ರಕಾರ ಆ ಪ್ರಕರಣ ಸುಪ್ರೀಂಕೋರ್ಟ್‌ನ ವಿಚಾರಣೆಗೊಳಪಡಬೇಕಲ್ಲವೇ? ಒಂದೊಮ್ಮೆ ಹೈಕೋರ್ಟ್ ತೀರ್ಪು ತನ್ನ ವಿರುದ್ಧವಾಗಿ ಬಂದಿದ್ದರೆ ಅದನ್ನು ಯಡಿಯೂರಪ್ಪನವರು ಒಪ್ಪಿಕೊಳ್ಳುತ್ತಿದ್ದರೇ? ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತಿರಲಿಲ್ಲವೇ?  ತನ್ನ ನಿರಪರಾಧಿತನದ ಬಗ್ಗೆ ಅವರು ಅಷ್ಟೊಂದು ವಿಶ್ವಾಸ ಹೊಂದಿದ್ದರೆ ಆದಷ್ಟು ಬೇಗ ಲೋಕಾಯುಕ್ತ ಮೇಲ್ಮನವಿ ಸಲ್ಲಿಸುವಂತೆ ಮಾಡಿ ಸುಪ್ರೀಂಕೋರ್ಟ್‌ನಿಂದಲೇ ಪ್ರಾಮಾಣಿಕತೆಗೆ  ಯಾಕೆ ಸರ್ಟಿಫಿಕೇಟ್ ತೆಗೆದುಕೊಳ್ಳಬಾರದು? ಯಡಿಯೂರಪ್ಪನವರನ್ನು ಭ್ರಷ್ಟಾಚಾರದ ಆರೋಪಗಳು ಯಾವ ರೀತಿಯಲ್ಲಿ ಸುತ್ತಿಕೊಂಡಿವೆ ಎಂದರೆ ಬಹಳ ಬೇಗ ಅವೆಲ್ಲವುಗಳಿಂದ ಬಿಡಿಸಿಕೊಳ್ಳುವುದು ಕಷ್ಟ. ಇವುಗಳಿಂದ ಬಿಡಿಸಿಕೊಳ್ಳದೆ ಚುನಾವಣೆಯಲ್ಲಿ ಮತದಾರರನ್ನು ಹೇಗೆ ಎದುರಿಸಲು ಸಾಧ್ಯ?


ಭ್ರಷ್ಟಾಚಾರದ ಆರೋಪ ಹೊತ್ತವರೂ ಉತ್ತಮ ಆಡಳಿತಗಾರರಾಗಿರುವ ಉದಾಹರಣೆಗಳು ಸಾಕಷ್ಟಿವೆ. ಶರದ್‌ಪವಾರ್, ಮಾಯಾವತಿ, ಜಯಲಲಿತಾ ಮೊದಲಾದವರೆಲ್ಲ ಈ ಗುಂಪಿಗೆ ಸೇರಿದವರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ಎಷ್ಟು ದಿನ ಶಿಸ್ತಿನಿಂದ ಕೂತು ಆಡಳಿತ ನಡೆಸಿದ್ದಾರೆ? ಅಧಿಕಾರಿಗಳ ವರ್ಗಾವಣೆಗಳಷ್ಟೇ ಆಡಳಿತ ಅಲ್ಲವಲ್ಲ? ಬಜೆಟ್‌ನಲ್ಲಿ ಒಂದಷ್ಟು ಜನಪ್ರಿಯ ಯೋಜನೆಗಳ ಘೋಷಣೆ ಮತ್ತು ಮಠ-ಮಂದಿರಗಳಿಗೆ ದುಡ್ಡು ಹಂಚಿಕೆಯಷ್ಟೇ ಅಭಿವೃದ್ಧಿ ಯೋಜನೆಗಳೆಂದು ಅವರು ತಿಳಿದುಕೊಂಡ ಹಾಗಿದೆ. ರಾಜ್ಯದ ಕೃಷಿ ಮತ್ತು ಕೈಗಾರಿಕೆಗಳ ಕ್ಷೇತ್ರದಲ್ಲಿ ರಾಜ್ಯ ಹಿನ್ನಡೆ ಅನುಭವಿಸಿರುವುದಕ್ಕೆ ಸರ್ಕಾರವೇ ಮಂಡಿಸಿರುವ ಆರ್ಥಿಕ ಸಮೀಕ್ಷೆಗಿಂತ ಬೇರೆ ದಾಖಲೆಗಳೇನು ಬೇಕು? ಮಾತೆತ್ತಿದರೆ ಸೈಕಲ್, ಸೀರೆ, ಪಂಚೆ ಎನ್ನುವುದನ್ನು ಬಿಟ್ಟರೆ ಸರ್ಕಾರದ ಸಾಧನೆಯೆಂದು ಹೇಳಿಕೊಳ್ಳಲು ಬೇರೇನಾದರೂ ಇದೆಯೇ? ಮೂರುವರ್ಷಗಳಾಗುತ್ತಾ ಬಂದರೂ ಉತ್ತರ ಕರ್ನಾಟಕದ ನೆರೆಪೀಡಿತ ಕುಟುಂಬಗಳಿಗೆಲ್ಲ ಮನೆ ಕಟ್ಟಿಕೊಡಲು ಸಾಧ್ಯವಾಗದಿರುವುದನ್ನು ಸಾಧನೆ ಎನ್ನೋಣವೇ?


ಕೊನೆಯದಾಗಿ ಯಡಿಯೂರಪ್ಪನವರ ನಡವಳಿಕೆ. ಬಿಜೆಪಿ ಶಾಸಕರು ಬಂಡೆದ್ದು ಮೊದಲು ಗಾಲಿ ಜನಾರ್ದನ ರೆಡ್ಡಿ ಜತೆಯಲ್ಲಿ, ನಂತರ ಎಚ್.ಡಿ.ಕುಮಾರಸ್ವಾಮಿಯವರ ಜತೆಯಲ್ಲಿ ಸೇರಿಕೊಂಡು ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿದ್ದು ಮುಖ್ಯವಾಗಿ ಯಡಿಯೂರಪ್ಪನವರ ಮೇಲಿನ ಸಿಟ್ಟಿನಿಂದಾಗಿ. ತಮ್ಮ ಮಾತುಗಳನ್ನು ಕೇಳುವ ತಾಳ್ಮೆಯಾಗಲಿ, ಅದನ್ನು ಅರ್ಥಮಾಡಿಕೊಳ್ಳುವ ಔದಾರ್ಯವಾಗಲಿ ಅವರಲ್ಲಿ ಇಲ್ಲ ಎನ್ನುವುದೇ ಆ ಭಿನ್ನಮತೀಯರ ಪ್ರಮುಖ ದೂರು ಆಗಿತ್ತು. ಮೊನ್ನೆ ರೆಸಾರ್ಟ್‌ಗೆ ಬೆಂಬಲಿಗ ಶಾಸಕರನ್ನು ಕರೆದುಕೊಂಡು ಹೋದ ಅವರ ನಡವಳಿಕೆಯನ್ನು ಗಮನಿಸಿದರೆ ಯಡಿಯೂರಪ್ಪನವರು ಈಗಲೂ ಬದಲಾಗಿದ್ದಾರೆಂದು ಅನಿಸುವುದಿಲ್ಲ. ಭೇಟಿಗೆಂದು ತನ್ನ ಮನೆಗೆ ಬಂದವರನ್ನು ಹೊರಗೆ ಹೋಗಲು ಬಿಡದೆ ಕುರಿಗಳನ್ನು ಅಟ್ಟಿಸಿಕೊಂಡು ಹೋಗುವಂತೆ ಬಸ್‌ನಲ್ಲಿ ತುಂಬಿಸಿ ಕೊಂಡೊಯ್ದಿದ್ದಾರೆ. ಅವರಲ್ಲಿ ಬಹಳಷ್ಟು ಶಾಸಕರಿಗೆ ರೆಸಾರ್ಟ್ ವಾಸ ಅನಿರೀಕ್ಷಿತವಾಗಿತ್ತು. ಅವರೆಲ್ಲ ಬೆಂಬಲಿಗರಾಗಿದ್ದರೂ ತಮ್ಮ ಮೇಲೆ ವಿಶ್ವಾಸ ಇಲ್ಲದ ನಾಯಕನ ಈ ರೀತಿಯ ಬಲವಂತದ ನಡವಳಿಕೆಯನ್ನು ಖಂಡಿತ ಇಷ್ಟಪಡಲಾರರು.


ಹಾಗಿದ್ದರೆ ಯಾವ ಬಲವನ್ನು ನಂಬಿ ಅವರು ಬಿಜೆಪಿಯನ್ನು ಅಧಿಕಾರಕ್ಕೆ ಮರಳಿ ತರುತ್ತೇನೆ ಎಂದು ಹೇಳುತ್ತಿರುವುದು? ತನಗೆ ಜನರ ಬೆಂಬಲ ಇದೆ ಎಂದು ಅವರು ಹೇಳುತ್ತಿದ್ದಾರೆ. ಯಾವ ಜನ? ಈಗಿನ ವಿಧಾನಸಭೆಯಲ್ಲಿ ಅತೀ ಹೆಚ್ಚು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ಶಾಸಕರನ್ನು ಹೊಂದಿರುವುದು ಬಿಜೆಪಿ. ಆದರೆ ಕಳೆದವಾರ ರೆಸಾರ್ಟಿನಲ್ಲಿ ಬಲ ಪ್ರದರ್ಶಿಸಲು ಕೂಡಿಹಾಕಿಕೊಂಡಿದ್ದ ಶಾಸಕರಲ್ಲಿ ಪರಿಶಿಷ್ಟ ಶಾಸಕರ ತಲೆಗಳು ಹೆಚ್ಚು ಕಾಣಲೇ ಇಲ್ಲ, ಪ್ರಮುಖ ದಲಿತ ನಾಯಕರು ಯಾರೂ ಅಲ್ಲಿ ಇರಲಿಲ್ಲ.


ಶೋಭಾ ಕರಂದ್ಲಾಜೆಯವರನ್ನೂ ಸೇರಿಸಿಕೊಂಡರೂ ಯಡಿಯೂರಪ್ಪನವರ ಜತೆಯಲ್ಲಿ ಕಾಣಿಸಿಕೊಂಡದ್ದು  ಇಬ್ಬರೋ ಮೂವರೋ ಒಕ್ಕಲಿಗ ಶಾಸಕರು ಅಷ್ಟೇ. ಹಿಂದುಳಿದ ಜಾತಿಗಳ ಶಾಸಕರಿದ್ದದ್ದು ಕೂಡಾ ಬೆರಳೆಣಿಕೆಯಲ್ಲಿ. ಅವರ ಸುತ್ತ ಸೇರಿರುವ ಬಹುತೇಕ ಶಾಸಕರು ಲಿಂಗಾಯತ ಜಾತಿಗೆ ಸೇರಿದವರು. ಶಕ್ತಿಪ್ರದರ್ಶನಕ್ಕೆ ಅವರು ಬಳಸಿಕೊಳ್ಳುತ್ತಿರುವುದು ಕೂಡಾ ಸ್ವಜಾತಿಯ ಸ್ವಾಮೀಜಿಗಳನ್ನು.


ಭಾರತದ ರಾಜಕೀಯದಲ್ಲಿ ಜಾತಿಯದ್ದು ಬಹಳ ನಿರ್ಣಾಯಕ ಪಾತ್ರ ಎನ್ನುವುದು ನಿಜ. ಆದರೆ ಇದನ್ನು ಅರ್ಥಮಾಡಿಕೊಳ್ಳದೆ ಇಲ್ಲಿನ ಜಾತಿವ್ಯವಸ್ಥೆಯ ಹುತ್ತದೊಳಗೆ ಪೆದ್ದರಂತೆ ಕೈಹಾಕುವವರನ್ನು ಒಳಗಿದ್ದ ಹಾವು ಎದ್ದುಬಂದು ಕಡಿದುಬಿಡುತ್ತದೆ. ಜಾತಿಯ ಆಧಾರದಲ್ಲಿಯೇ ಮತಚಲಾಯಿಸುವವರು ಒಂದಷ್ಟು ಸಂಖ್ಯೆಯಲ್ಲಿದ್ದರೂ ಹೆಚ್ಚಿನವರು ಜಾತಿ ಅಭ್ಯರ್ಥಿಗಳನ್ನು ಬೆಂಬಲಿಸಲು ಬೇರೆ ಕಾರಣಗಳೂ ಇರುತ್ತವೆ.  ಒಂದೊಮ್ಮೆ ಆ ರೀತಿ ಯಾವುದಾದರೂ ಒಂದು ಜಾತಿಯವರು ಸ್ವಜಾತಿ ಅಭ್ಯರ್ಥಿಗೆ ನೂರಕ್ಕೆ ನೂರರಷ್ಟು ಮತಹಾಕಿ ಗೆಲ್ಲಿಸಬೇಕೆಂದು ನಿರ್ಧರಿಸಿದರೂ ಅದಕ್ಕೆ ಬೇಕಾದ ಸಂಖ್ಯಾಬಲ ದೇಶದಲ್ಲಿರುವ ಯಾವ ಜಾತಿಗೂ ಇಲ್ಲ, ಬೇರೆ ಜಾತಿಯವರ ಬೆಂಬಲ ಬೇಕೇ ಬೇಕು. ಈ ದೇಶದಲ್ಲಿ ಅತ್ಯಂತ ನಿಷ್ಠಾವಂತ ಮತದಾರರನ್ನು ಹೊಂದಿರುವ ರಾಜಕೀಯ ನಾಯಕಿ ಮಾಯಾವತಿ. ಆ ರಾಜ್ಯದಲ್ಲಿ ಶೇಕಡಾ 22ರಷ್ಟಿರುವ ದಲಿತರು ಬಿಎಸ್‌ಪಿ ಬೆಂಬಲಿಗರು, ಅವರೊಳಗೆ ಶೇಕಡಾ ಹನ್ನೆರಡರಷ್ಟಿರುವ ಜಾಟವರು ಕಣ್ಣುಮುಚ್ಚಿಕೊಂಡು ಬೆಹೆನ್‌ಜಿಗೆ ಮತಹಾಕುವವರು. ಹೀಗಿದ್ದರೂ ಅವರು ಯಾಕೆ ಸೋತುಹೋದರು? ಕರ್ನಾಟಕದಲ್ಲಿ ಮುಸ್ಲಿಮರ ಜನಸಂಖ್ಯೆ ಲಿಂಗಾಯತರಿಗಿಂತ ಶೇಕಡಾ ಎರಡರಷ್ಟು ಮಾತ್ರ ಕಡಿಮೆ ಇದೆ.


ಮುಸ್ಲಿಮರು ಗುಂಪಾಗಿ ಒಂದೇ ಅಭ್ಯರ್ಥಿಗೆ ಮತಚಲಾಯಿಸುತ್ತಾರೆ ಎನ್ನುವ ಅಭಿಪ್ರಾಯವೂ ಇದೆ. ಹೀಗಿದ್ದರೂ ಗ್ರಾಮಪಂಚಾಯತ್‌ನಿಂದ ಸಂಸತ್‌ವರೆಗೆ ಎಷ್ಟು ಮುಸ್ಲಿಮ್ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅವರಿಗೆ ಸಾಧ್ಯವಾಗಿದೆ?


ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ ಪ್ರಮಾಣ ಶೇಕಡಾ ಹದಿನೈದುವರೆ. ಒಂದಷ್ಟು ಕ್ಷೇತ್ರಗಳಲ್ಲಿ ಈ ಪ್ರಮಾಣ ಶೇಕಡಾ 20-25ರಷ್ಟಿರಬಹುದು. ಆದರೆ ಇಷ್ಟರಿಂದಲೇ ಒಬ್ಬ ಲಿಂಗಾಯತ ಅಭ್ಯರ್ಥಿ ಗೆಲ್ಲಲು ಸಾಧ್ಯವೇ? ಕಳೆದ ಚುನಾವಣೆಯ ಕಾಲದಲ್ಲಿ ರಾಜ್ಯದ ಲಿಂಗಾಯತರು ಬಹುಸಂಖ್ಯೆಯಲ್ಲಿ ಯಡಿಯೂರಪ್ಪನವರಿಂದಾಗಿ ಬಿಜೆಪಿಗೆ ಮತ ಹಾಕಿರುವುದು ನಿಜ ಇರಬಹುದು. ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಿದ ನಂತರ ಅಸಮಾಧಾನಕ್ಕೀಡಾಗಿದ್ದ ಲಿಂಗಾಯತರು ರಾಜಕೀಯ ಬಲಪ್ರದರ್ಶನದ ಅವಕಾಶಕ್ಕಾಗಿ ಕಾಯುತ್ತಿದ್ದರು. ಅದೇ ಸಮಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಿಜೆಪಿ ರಾಜ್ಯದ ಪ್ರಮುಖ ಜಾತಿಗೆ ಸೇರಿರುವ ಒಬ್ಬ ಜನಪ್ರಿಯ ನಾಯಕನ ಹುಡುಕಾಟದಲ್ಲಿತ್ತು. ಈ ಎರಡೂ ಅವಕಾಶವನ್ನು ಯಡಿಯೂರಪ್ಪನವರು ಬಳಸಿಕೊಂಡರು, ಮುಖ್ಯಮಂತ್ರಿಯೂ ಆಗಿಬಿಟ್ಟರು.ಆದರೆ ತನ್ನ ಜಾತಿಯ ಜನ ಹೆಮ್ಮೆಪಟ್ಟುಕೊಳ್ಳುವಂತಹ ಜನಪ್ರಿಯ ನಾಯಕರಾಗಿ  ಬೆಳೆದರೇ? ಜನನಾಯಕನಾಗಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದ ಯಡಿಯೂರಪ್ಪನವರು ಮೂರುವರೆ ವರ್ಷಗಳ ಕಾಲದ ಅಧಿಕಾರದ ನಂತರ ತನ್ನ ರಾಜಕೀಯ ಉಳಿವಿಗಾಗಿ ಒಂದು ಜಾತಿಯ ನಾಯಕನಾಗಿ ತನ್ನನ್ನು ಬಿಂಬಿಸಿಕೊಳ್ಳುವ ಮಟ್ಟಕ್ಕೆ ಇಳಿದಿರುವುದು ಖಂಡಿತ ಅವರ ಜನಪ್ರಿಯತೆಯನ್ನು ತೋರಿಸುವುದಿಲ್ಲ.
ಕೃಪೆ : ಪ್ರಜಾವಾಣಿ

Saturday, March 24, 2012

ಮಾತ್ಗವಿತೆ-57

ಒಳಗಣ್ಣಿನ ಒಳಲೋಕ ಕಾಣಬಾರದು !
ಒಳ ಅರಿವು ಒಳ ಹರಿವು ತೋರಬಾರದು !
ಒಳಗೊಂದು ಮಿಡಿತ ; ಹೊರಗೆ
ಹಲವು ತುಡಿತ !
ಕಾರಣಕ್ಕೆ ಕಾರಣಾಂತರಗಳೂ ಇರುತ್ತವೆ !
ಒಳ-ಹೊರಗಿನ ಘಾಸಿತನಕ್ಕೆ ಹೇಸಿಕೆ ಬಿಡು
ಹೊಸ ಲೋಕದ ಕನಸು ಧ್ಯಾನಿಸು !

Tuesday, March 20, 2012

ಮಾತ್ಗವಿತೆ-56

ಯಾರಿಗೆ ಏನು ಹೇಳುವುದು
ಮನಸ್ಸುಗಳೇ ಮಿಸ್ಸಾಗಿರುವಾಗ ?
ಮೈ ಮುರಿದು ದುಡಿ ; ಪರಿಶ್ರಮ ಪಡು ;
ಪ್ರಯತ್ನಿಸು ಎಂಬಿತ್ಯಾದಿಗಳ ನಡುವೆ
ಪರರಾಶ್ರಯ ಪಡಿ ಎಂಬುದೇ ಅಧಿಕವಾಗಿರುವಾಗ
ಯಾರಿಗೆ ಏನು ಹೇಳಬೇಕು ?
ಹ್ಞೂಂ ಅನ್ನಲೇ ? ಉಹ್ಞೂಂ ಅನ್ನಲೇ ?
ದ್ವಂದ್ವತೆಗಳಲ್ಲ ; ಬದುಕಿನ ಪ್ರಶ್ನೆ !

ಜಾತೀಯತೆ ಹಾಗೂ ಜಾತ್ಯಾತೀತತೆ !

-ಡಾ.ಎಸ್.ಬಿ.ಜೋಗುರ

ಅದೊಂದು ಅಚ್ಚುಕಟ್ಟಾದ ವೇದಿಕೆ. ವೇದಿಕೆಯ ಮೇಲೆ ನಿರೂಪಕನನ್ನು ಒಳಗೊಂಡು ಏಳು ಜನ. ಆ ಏಳು ಜನರಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವವನನ್ನು ಮೈನಸ್ ಮಾಡಿದರೆ ಮಿಕ್ಕವರೆಲ್ಲಾ ಬಹುತೇಕವಾಗಿ ಒಂದೇ ಜಾತಿಗೆ ಸೇರಿದವರು. ಅವರೆಲ್ಲರೂ ಅಲ್ಲಿ ಸೇರಿರುವ ಉದ್ದೇಶ ‘ಜಾತ್ಯಾತೀತತೆಯ ಪ್ರಸ್ತುತತೆ’ ಎನ್ನುವ ವಿಷಯದ ಬಗ್ಗೆ ಕುರಿತು ಚರ್ಚಿಸುವುದಾಗಿದೆ. ಜಾತ್ಯಾತೀತತೆ ಎಂದರೇನು? ಎನ್ನುವ ವಿಷಯದಿಂದ ಆರಂಭವಾಗುವ ಅವರ ಚರ್ಚೆ ಅದರ ಕಾರಣಗಳು. ಪರಿಣಾಮಗಳನ್ನೊಳಗೊಂಡು ಅಂತಿಮವಾಗಿ ತಮ್ಮ ಸಮುದಾಯ ಚಿಕ್ಕ ಸಮುದಾಯ, ಅನೇಕ ಬಗೆಯ ಹಕ್ಕು ಸೌಲಭ್ಯಗಳಿಂದ ವಂಚಿತವಾದ ಸಮುದಾಯ, ಹಾಗೆ ನೋಡಿದರೆ ತಮ್ಮ ಜಾತಿಗೆ ಸಿಗುವ ಸೌಲಭ್ಯಗಳು ತನ್ನದೇ ಸೈಜಿನ ಜಾತಿಯವರಿಗೆ ಸಿಗುವ ಸೌಲಭ್ಯಗಳಿಗಿಂತಲೂ ಕಡಿಮೆ, ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಅದನ್ನು ನಾವೆಲ್ಲಾ ಒಗ್ಗಟ್ಟಾಗಿ ವೋಟು ಕೇಳಲು ಬರುವವರಿಗೆ ಮನದಟ್ಟು ಮಾಡಬೇಕು, ನಮ್ಮ ಜಾತಿಯ ಮಠಾಧೀಶರನ್ನೊಳಗೊಂಡು ಆ ದಿಶೆಯಲ್ಲಿ ಒಂದು ಗಟ್ಟಿ ಹೋರಾಟವನ್ನು ರೂಪಿಸಬೇಕು ಎನ್ನುವವರೆಗೆ ಆ ಚರ್ಚೆ ಬಂದು ನಿಲ್ಲುತ್ತದೆ. ಈ ರೀತಿಯ ಚರ್ಚೆಗಳು ಕೇಂದ್ರ ವೃತ್ತಾಂತದಿಂದ ಕರೆಕ್ಟಾಗಿ ಶುರುವಾದರೂ ವಿಚಲಿತವಾಗಿ ಎಲ್ಲೆಲ್ಲೋ ಹಾಯುವ, ಸುತ್ತಿ ಸುಳಿಯುವ ಸುಂಟರಗಾಳಿಯಂತೆ ಹೋಗಿ ನಿಲ್ಲುವ ಅಪಾಯದ ನಡುವೆ, ಜಾತ್ಯಾತೀತತೆ ಎನ್ನುವ ಪದ ಇವರ ಭಂಡತನಕ್ಕೆ ಬೆದರಿ ನಾಚಿ ನೀರಾಗುವ ಜೊತೆಗೆ ತನ್ನ ಅನರ್ಥಕ್ಕೆ ಕಂಗಾಲಾಗುವುದೂ ಇದೆ.
ಇಂಗ್ಲಿಷ್‍ನ  ‘ಸೆಕ್ಯುಲ್ಯಾರಿಝಂ’ ಎನ್ನುವ ಪದ ಆಯಾ ಹೊತ್ತಿಗೊದಗುವಂತೆ ಅರ್ಥೈಸುವಲ್ಲಿರುವ ಮುಖ್ಯ ಕಾರಣ ಇತರೆ ಭಾಷೆಗಳಲ್ಲಿ [ಕನ್ನಡವನ್ನೊಳಗೊಂಡು] ಸಾರ್ವತ್ರಿಕವಾಗಿ ಸಲ್ಲಬಹುದಾದ ಸ್ವೀಕೃತವಾದ ಏಕಮಾತ್ರ ಪದವಿಲ್ಲ. ಕನ್ನಡದಲ್ಲಂತೂ ಜಾತ್ಯಾತೀತತೆ ಎನ್ನುವ ಪದವನ್ನು ಧರ್ಮ ನಿರಪೇಕ್ಷತೆ, ಮತಾತೀತತೆ ಎಂತಲೂ ಕರೆಯವುದಿದೆ. ಅತ್ಯಂತ ಜಟಿಲವಾಗಿರುವ ಜಾತಿ ಹಾಗೂ ಧರ್ಮದಂತಹ ವಿಷಯಗಳಲ್ಲಿ ಸಡಿಲತೆಯನ್ನು ಕಂಡುಕೊಳ್ಳುವ ಮಾರ್ಗವಾಗಿ ಜಾತ್ಯಾತೀತತೆ ಪರಿಕಲ್ಪನೆ ಬೆಳೆದುಬಂದಿದೆ. ಸರಳವಾಗಿ ಹೇಳುವುದಾದರೆ ಧರ್ಮ ಮತ್ತು ಜಾತಿಯಂಥ  ವಿಷಯಗಳನ್ನು ಕುರಿತು ಅತ್ಯಂತ ಯತಾರ್ಥವಾಗಿ ವ್ಯವಹರಿಸುವ ಮನ:ಸ್ಥಿತಿಯ ಜಾತ್ಯಾತೀತತೆ. ಪಿ.ಎಚ್.ಲ್ಯಾಂಡಿಸ್ ಎನ್ನುವ ಚಿಂತಕರು ಈ ಜಾತ್ಯಾತೀತತೆ ಎನ್ನುವುದು ಎರಡು ಪ್ರಮುಖ ಧ್ಯೇಯಗಳನ್ನು ಆಧರಿಸಿದೆ ಎಂದಿರುವರು. ಒಂದನೆಯದಾಗಿ ಅನೇಕ ಶತಮಾನಗಳಿಂದಲೂ ನಂಬಿಕೊಂಡು ಬರಲಾಗಿದ್ದ ಅತಿಮಾನುಷ ಶಕ್ತಿಗಳ ಬಗೆಗಿನ ನಂಬುಗೆಯ ಬುಡಕ್ಕೆ ಕೈ ಹಾಕಿ ಅಲ್ಲಾಡಿಸುವುದು, ಎರಡನೆಯದಾಗಿ ಈ ಅತಿಮಾನುಷ ಶಕ್ತಿಯ ಬಗೆಗಿನ ನಂಬುಗೆಯ ಜಾಗದಲ್ಲಿ ವೈಚಾರಿಕತೆಯನ್ನು ತಂದು ನಿಲ್ಲಿಸಿರುವ ಕೆಲಸ ಅಷ್ಟೇ ಮುಖ್ಯವಾದುದು. ಅನೇಕ ಶತಮಾನಗಳಿಂದಲೂ ಧರ್ಮದ ಹೊಟ್ಟೆಯೊಳಗೆ ಬೆಚ್ಚಗೆ ಕುಳಿತು ಕಾವು ಕಂಡ ನಂಬುಗೆಗಳು, ಸಂಪ್ರದಾಯಗಳ ಬೇರುಗಳು ಸಡಿಲುಗೊಂಡು, ನಡುಕ ಉಂಟಾಗುವಲ್ಲಿ ಈ ಜಾತ್ಯಾತೀತ ಮನೋಭಾವವೇ ಕಾರಣ. ಆದರೆ ಇತ್ತೀಚಿನ ದಿನಗಳಲ್ಲಿ ಈ ಜಾತ್ಯಾತೀತತೆ ಎನ್ನುವ ಪದ ಆಯಾ ದೇಶಗಳಲ್ಲಿ ಕೋಮುಗಲಭೆಗಳು ಘಟಿಸಿದಾಗ ಬಳಕೆಯಾಗುವ ಪದವಾಗಿ ತನ್ನ ಸಂಕುಚಿತ ಸೀಮಿತವನ್ನು ಉಳಿಸಿಕೊಂಡಿದೆ ಎನ್ನುವಂತಾಗಿದೆ.
ಜಾತ್ಯಾತೀತತೆಯ ಬಗೆಗೆ ಮಾತನಾಡುತ್ತಾ ಖ್ಯಾತ ಇತಿಹಾಸಕಾರ್ತಿ ರೋಮಿಲಾ ಥಾಪರ್ ಅವರು ’ಜಾತ್ಯಾತೀತತೆ ಎನ್ನುವುದು ಜಾತ್ಯಾತೀತವಲ್ಲದ ಘಟನೆಗಳಿಗೆ ಸಿಗಬಹುದಾದ ಪ್ರತಿಕ್ರಿಯೆಯ ಹಂತದಲ್ಲಿಯ ಒಂದು ಪದವಾಗಿ ಮಾತ್ರ ಉಳಿದಿದೆ’ ಎಂದಿರುವುದರ ಹಿಂದೆ ಆ ಪದದ ಸಸ್ತಾ ಬಳಕೆಯ ಬಗೆಗಿನ ಕಳಕಳಿ ಅಡಕವಾಗಿದೆ. ಅನೇಕ ಸಂದರ್ಭಗಳಲ್ಲಿ ಈ ಜಾತ್ಯಾತೀತತೆಯ ಪರಿಕಲ್ಪನೆಯನ್ನು ಪಾಶ್ಚಾತ್ತೀಕರಣಕ್ಕೆ ಸಂವಾದಿ ಎನ್ನುವ ಹಾಗೆ ಬಳಸುವುದೂ ಇದೆ. ಆದರೆ ಎರಡೂ ಬೇರೆ ಬೇರೆ ಕಲ್ಪನೆಗಳೇ. ಜಾತ್ಯಾತೀತತೆ ಎನ್ನುವದು ಧರ್ಮ ಮತ್ತು ಜಾತಿಯನ್ನು ಧಿಕ್ಕರಿಸುವ ಬಗ್ಗೆ ಮಾತನಾಡುವುದಲ್ಲ, ಬದಲಾಗಿ ತನ್ನಂತೆ ಪರರ ಬಗೆದೊಡೆ ಕೈಲಾಸ ಕಣ್ಣ ಮುಂದೆಯೇ ಎಂದು ಪ್ರತಿಪಾದಿಸುವ ಮನೋಭಾವ. ಹಾಗೆ ನೋಡಿದರೆ ಈ ಜಾತ್ಯಾತೀತತೆಗೆ ಒಂದು ಅಗಾಧವಾದ ಶಕ್ತಿಯಿದೆ. ಅದು ಕೇವಲ ವೇದಿಕೆಯ ಉಪಭೋಗದ ವಿಷಯವಾಗಿ, ಚರ್ಚೆ ಮತ್ತು ಸಂವಾದದ ಸರಕಾಗಿ ಉಳಿದಿರುವ ಹಿನ್ನೆಲೆಯಲ್ಲಿಯೇ ಅದರ ತಾಕತ್ತಿನ ಅರಿವು ನಮಗೆ ಸರಿಯಾಗಿ ಗ್ರಹಿಕೆಯಾಗುತ್ತಿಲ್ಲ. ಇದನ್ನು ಬಳಸಿ ಒಂದು ಸಮುದಾಯವನ್ನು ಕೇವಲ ಧಾರ್ಮಿಕ ಸಾಮರಸ್ಯದ ತಳಹದಿಯ ಮೇಲೆ ಕಟ್ಟುವ ಕೆಲಸ ಮಾತ್ರವಲ್ಲದೇ ಅದನ್ನು ಔಚಿತ್ಯಪೂರ್ಣವಾಗಿ ರೂಪಿಸುವಲ್ಲಿಯೂ ಇದು ನೆರವಾಗುತ್ತದೆ. ಅದು ಗಾಂಧೀಜಿಯವರ ರಾಮರಾಜ್ಯ, ಪ್ಲೇಟೊನ ಆದರ್ಶರಾಜ್ಯ, ಥಾಮಸ್ ಮೋರ್‍‌ನ ಯುಟೊಪಿಯಾಕ್ಕೆ ತುಂಬಾ ಹತ್ತಿರವಾದ ಸಮುದಾಯವನ್ನು ಕಟ್ಟುವಲ್ಲಿ ಈ ಜಾತ್ಯಾತೀತತೆಯ ಶಕ್ತಿ ನೆರವಾಗುತ್ತದೆ. ಈ ಪರಿಕಲ್ಪನೆಯನ್ನು ಬಳಸುವಾಗಲೆಲ್ಲಾ ನಾವು ಬಹುತೇಕವಾಗಿ ಹಿಂದು-ಮುಸ್ಲಿಂ, ಧಾರ್ಮಿಕ ಸಮೂಹಗಳನ್ನು ಮೀರಿ, ಹೊರತುಪಡಿಸಿ ಚಿಂತಿಸುವುದೇ ಇಲ್ಲ. ಜಾತ್ಯಾತೀತತೆ ಎನ್ನುವುದು ಧರ್ಮ, ಜಾತಿ, ಭಾಷೆ, ಪ್ರಾದೇಶಿಕತೆಯನ್ನು ಮೀರಿ ಅನ್ವಯ, ಅಳವಡಿಕೆಯಾಗುವ ಅವಶ್ಯಕತೆಯಿದೆ.
ಜಾತಿ ಎನ್ನುವುದು ಭಾರತೀಯ ಸಮಾಜದಲ್ಲಿ ಮತ್ತೆ ನಮ್ಮ ಬದುಕಿನ ಬೇರೆ ಬೇರೆ ಆಯಾಮಗಳ ಬಗೆಗಿನ ತೀರ್ಮಾನಗಳ ಮಧ್ಯೆ ಎಂಟ್ರಿ ಹೊಡೆಯುವ ಪರಿಣಾಮವಾಗಿ ನಾವು ಜಾತ್ಯಾತೀತತೆಯ ಪರಿಕಲ್ಪನೆಯನ್ನು ಸಂಕುಚಿತವಾದ ರೀತಿಯಲ್ಲಿ ಬಳಸುವ, ಅದರ ಆಳ ಅಗಲವನ್ನು ಕುಬ್ಜಗೊಳಿಸುವ ಕೆಲಸವನ್ನು ತಿಳಿದೂ ಮಾಡುತ್ತಿರುತ್ತೇವೆ. ಹಾಗಾದಾಗ ಜಾತ್ಯಾತೀತತೆ ಎನ್ನುವ ಪದ ಹುಳ ತಿಂದ ಕಟ್ಟಿಗೆಯಂಥಾಗುತ್ತದೆ. ಭಾರತೀಯ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ತಳ ಊರಿದ ಈ ಕಲ್ಪನೆಯನ್ನು ವಸ್ತುನಿಷ್ಠ ಹಿನ್ನೆಲೆಯಲ್ಲಿ ಅರಿಯುವ ಅವಶ್ಯಕತೆಯಿದೆ. ಜಾತಿಯ ಸೆಳಕಿನೊಂದಿಗೆ ಜಾತ್ಯಾತೀತತೆ ಎನ್ನುವ ಪದ ಪ್ರಯೋಗ ಮಾಡುವಾತ ಆ ಪದಕ್ಕೂ ನ್ಯಾಯ ಕೊಡಲಾರ. ಅಂತೆಯೇ ತನ್ನ ಜೊತೆಗಿರುವ ಜನಸಮೂಹಕ್ಕೂ ಕೂಡಾ. ಇನ್ನು ಕೆಲ ವಿದೇಶಿ ಚಿಂತಕರು ಭಾರತೀಯ ನೆಲದಲ್ಲಿ ಜಾತ್ಯಾತೀತತೆ ಎನ್ನುವುದು ಸಾಧ್ಯವೇ ಇಲ್ಲ ಯಾಕೆಂದರೆ ಇಲ್ಲಿ ವೃತ್ತಿ ಮತ್ತು ಪ್ರವೃತ್ತಿ ಎರಡೂ ಒಂದೇ ಆಗಿಲ್ಲ ಎನ್ನುವುದಿದೆ. ಅಂದರೆ ಆಚರಣೆ ಮತ್ತು ಅನುಸರಣೆಯ ಮಧ್ಯೆ ಇಲ್ಲಿ ತುಂಬಾ ಅಂತರಗಳಿವೆ ಎಂದು ಹೇಳುವವರಿದ್ದಾರೆ.
ಆಂದ್ರೇ ಬೀತೇ ಎನ್ನುವ ಚಿಂತಕರು ಈ ಜಾತ್ಯಾತೀತತೆ ಎನ್ನುವ ಪರಿಕಲ್ಪನೆ ಕೇವಲ ಭಾರತದಲ್ಲಿ ಮಾತ್ರವಲ್ಲದೇ ತಾವು ತುಂಬಾ ಸೆಕ್ಯುಲರ್ ಎಂದು ಹೇಳಿಕೊಳ್ಳುವ ಫ್ರಾನ್ಸ್ ಮತ್ತು ಜರ್ಮನಿಯಲ್ಲಿಯೂ ಗೊಂದಲಗಳನ್ನು ಒಳಗೊಂಡಿರುವುದಿದೆ. ಅತಿ ಮುಖ್ಯವಾಗಿ ಆಯಾ ರಾಷ್ಟ್ರೀಯ ನೆಲೆಯಲ್ಲಿ ಜಾತ್ಯಾತೀತತೆ ಎನ್ನುವುದು ಅರ್ಥೈಸುವಂತಾದರೂ ಅದರ ಮೂಲ ಆಶಯ ಮಾತ್ರ ಧರ್ಮ, ಜಾತಿ, ಜನಾಂಗ, ಭಾಷೆಗಳಿಗೆ ಸಂಬಂಧಿಸಿರುವ ಉದಾರ ಮನೋಭಾವವೇ ಆಗಿರಬೇಕೇ ಹೊರತು ಮೂಲ ಆಶಯದಿಂದ ವ್ಯತಿರಿಕ್ತವಾಗಿ ಜಾತ್ಯಾತೀತತೆಯ ವ್ಯಾಖ್ಯಾನವೇ ವಿಭಿನ್ನವಾಗುವುದು ವಿಪರ್ಯಾಸ.
ಭಾರತವನ್ನು ನಾವು ಗಣನೆಗೆ ತೆಗೆದುಕೊಂಡಾಗ ಇಲ್ಲಿರುವ ಧರ್ಮಗಳು, ಭಾಷೆಗಳು, ವೇಷ- ಭೂಷಣಗಳು, ಆಹಾರ ಪದ್ಧತಿಗಳು, ಹಬ್ಬ ಹರಿದಿನಗಳು, ಜಾತ್ರೆಗಳು ಈ ನೆಲದ ಬದುಕಿನಲ್ಲಿ ಸ್ವಾಭಾವಿಕವಾಗಿಯೇ ಜಾತ್ಯಾತೀತತೆಯ ಗುಣಗಳನ್ನು ಸಂಪೋಷಿಸಿಕೊಂಡು ಬರುವಲ್ಲಿ ಕಾರಣವಾಗಿವೆ. ಈ ಗುಣಕ್ಕೆ ಧಕ್ಕೆ ಬಂದಾಗಲೆಲ್ಲಾ ಬದುಕು ಭಯವಾಗಿ ಕಾಡುವುದಿದೆ. ಬದುಕಿನ ರಿಕ್ತತೆಯನ್ನು ಮೀರಿಯೂ ಕೂಡಿ ಬದುಕುವ ತಹತಹಿಕೆಗೆ ತೊಡಕಾಗುವ ಶಕ್ತಿಗಳನ್ನು ಸಹಿಸದಿರುವ ಗುಣ ಈ ಮಣ್ಣಿನಲ್ಲಿಯೇ ಇದೆ. ನಾವು ಅಭಿವೃದ್ಧಿ ಹೊಂದುತ್ತಿರುವ ಮಾರ್ಗಗುಂಟ ಆಧುನೀಕರಣ ಹೊಂದುವ ಹಂಬಲದವರಾದರೆ  ಆ ದಿಶೆಯಲ್ಲಿ ನೆರವಾಗುವ ಬಹುತೇಕ ಸಂಸ್ಥೆಗಳನ್ನು ಜಾತ್ಯಾತೀತ ನೆಲೆಯಲ್ಲಿಯೇ ಪ್ರತಿಷ್ಟಾಪನೆ ಮಾಡುವ ಜರೂರತ್ತಿದೆ.
ನಮ್ಮ ಮಕ್ಕಳು ನೆರೆಮನೆಯ ಹುಡುಗರೊಂದಿಗೆ ಕೂಡಿ ಆಡುವಾಗ ಅವರು ಹೀಗೆ, ಹಾಗೆ ಅದನ್ನ ತಿಂತಾರೆ ಇದನ್ನು ತಿಂತಾರೆ ಎಂದು ಮಕ್ಕಳ ಕಿವಿಯಲ್ಲಿ ಪಿಸುಗುಡುವ ಪಿಚಕಾರಿಗಳಾಗದೇ ಒಂದು ಮಗು ಇನ್ನೊಂದು ಮಗುವಿಗಿಂತಾ ಯಾವುದೇ ರೀತಿಯಲ್ಲೂ ಭಿನ್ನವಾಗಲಾರದು ಎನ್ನುವ ಉದಾರತೆಯಿಂದ ಆರಂಭವಾಗುವ ಪಾಠ, ಶಾಲೆ-ಕಾಲೇಜುಗಳು, ನಮ್ಮ ನೌಕರಶಾಹಿ ವ್ಯವಸ್ಥೆಗಳು, ವಿಶ್ವವಿದ್ಯಾಲಯಗಳನ್ನೊಳಗೊಂಡು ನಮ್ಮ ದೈನಂದಿನ ಬದುಕನ್ನು ತನ್ನಿಷ್ಟದಂತೆ ರೂಪಿಸಹೊರಟ ಸಮೂಹ ಮಾಧ್ಯಮಗಳವರೆಗೂ ಮುಂದುವರೆಯಬೇಕು. ಹೀಗೆ ಸಮಾಜದ ಎಲ್ಲ ಸ್ತರದ ಸಂಘ-ಸಂಸ್ಥೆಗಳು ಜಾತ್ಯಾತೀತತೆಯ ನೆಲೆಯಲ್ಲಿಯೇ ಮೈದಳೆದು, ಕಾರ್ಯ ನಿರ್ವಹಿಸುವಂತಾಗಬೇಕು. ’ಈ ಮುಂಚಿನ ಧಾರ್ಮಿಕ ಭಿನ್ನತೆಗಳನ್ನು ಸಾರೂಪ್ಯಗೊಳಿಸುವಲ್ಲಿಯೇ ಜಾತ್ಯಾತೀತತೆಯ ಗುಣದ ಅಗಮ್ಯ ಶಕ್ತಿ ಅಡಗಿದೆ’ ಎಂದು ಸಮಾಜಶಾಸ್ತ್ರಜ್ಞ ಎಮ್.ಎನ್.ಶ್ರೀನಿವಾಸರು ಹೇಳಿರುವುದಿದೆ. ಜಾತ್ಯಾತೀತತೆಯ ಸ್ಥಾಪನೆಯಲ್ಲಿ ಧಾರ್ಮಿಕ ಸಂಗತಿಗಳು ಸಮಾಜದಲ್ಲಿಯ ಮಿಕ್ಕ ಎಲ್ಲ ಸಂಸ್ಥೆಗಳನ್ನು ನಿಯಂತ್ರಿಸುವ ಬದಲಾಗಿ ಅವುಗಳ ಮುಕ್ತ, ಸ್ವಾಯತ್ತ ಕಾರ್ಯ ನಿರ್ವಹಣೆಯಲ್ಲಿ ತೊಡಕಾಗದಿರುವಂತೆ ವ್ಯವಹರಿಸುವುದು ಕೂಡಾ ಅಷ್ಟೇ ಮುಖ್ಯವಾದುದು. ಆ ಮೂಲಕ ಜಾತಿ ಧರ್ಮಗಳ ಪ್ರಭುತ್ವವನ್ನು ತಕ್ಕ ಮಟ್ಟಿಗಾದರೂ ಕಡಿಮೆ ಮಾಡಬಹುದು. ಜಾತ್ಯಾತೀತತೆ ಎನ್ನುವದು ಒಂದು ಬಲವಂತದ ಹೇರಿಕೆ ಇಲ್ಲವೇ ಕಷ್ಟದ ಆಯ್ಕೆಯಾಗದೇ ಒಂದು ಬೃಹತ್ ಸಮಷ್ಠಿಯ ಇಷ್ಟವಾಗಬೇಕು.
ಕೃಪೆ : ವರ್ತಮಾನ

ಮಾತ್ಗವಿತೆ-55

ನಿನ್ನೊಳಗಿನ ನನ್ನ ನೋಡುವ ತವಕದಿಂದ
ಕಳ್ಳಿಸಾಲಿನಲ್ಲಿ ಖಾಲಿ ಕುಂತಾಗ
ಕೈಯಾಡಿಸಿದಾಗ ಯಾಕೆ ಕೊಸರಿಕೊಂಡೆ ?
ನಾನು-ನೀನಾಗಿ, ನೀನು-ನಾನಾಗಿ
ಚಿಗುರು ಒಡಮೂಡಿದ ನಾಚಿಕೆಯೋ ?
ಅಂಜಿಕೆಯೋ ? ; ಭಂಜಿಕೆಯೋ ?

ಮಾತ್ಗವಿತೆ-54

ನೋಡು ನೋಡುತ್ತಲೇ ಬೆಕ್ಕಸ ಬೆರಗಾಗಿ
ಮಿಥುನದ ಮಥನದಲ್ಲಿ ಮೈ ಮರೆತು
ಕಕ್ಕಿಕೊಳ್ಳಬೇಕು ಎನ್ನುವಷ್ಟರಲ್ಲಿಯೇ
ಗತಿಗೇಡಿ ಬೆಕ್ಕಿಗೆ ಉಣಿಸಿದ್ದು
ನೆನಪಿಗೆ ಬಂತು !

Friday, March 16, 2012

ಜಾತಿ ವಿನಾಶ ಮತ್ತು ಹಾವನೂರು ವರದಿ

- ಪ್ರೊ. ಎಂ.ಡಿ. ನಂಜುಂಡಸ್ವಾಮಿ
ಶ್ರೀ ಹಾವನೂರ್‌‌‌‌‍ರವರ ಅಧ್ಯಕ್ಷತೆಯಲ್ಲಿ ಸಲ್ಲಿಸಲಾಗಿರುವ ಹಿಂದುಳಿದ ವರ್ಗಗಳ ಆಯೋಗದ ವರದಿಯ ಬಗ್ಗೆ ಇತ್ತೀಚೆಗೆ ಟೀಕೆಗಳು ಕೇಳಿಬರುತ್ತಿವೆ. ಇದರಲ್ಲಿ ವೀರಶೈವರು ಮತ್ತು ಮರಾಠರು ತಮ್ಮನ್ನು ಮುಂದುವರಿದವರೆಂದು ಪರಿಗಣಿಸಿರುವುದು ತಮಗೆ ಅನ್ಯಾಯವಾಗಿದೆಯೆಂದು ಹೇಳುತ್ತಿದ್ದಾರೆ. ವೈಜ್ಞಾನಿಕವಾಗಿ ಜನಸಂಖ್ಯೆಯಲ್ಲಿ ನಿಗದಿಪಡಿಸದೆ, ತಮ್ಮ ಶೇಕಡಾ 90 ಭಾಗ ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆಂದೂ ಶೇಕಡಾ 70 ಭಾಗಕ್ಕಿಂತ ಹೆಚ್ಚು ಜನರು ಕೃಷಿ ಕಾರ್ಮಿಕರೆಂದೂ, ಹೀಗಿದ್ದರೂ ತಮ್ಮನ್ನು ಹಿಂದುಳಿದವರೆಂದು ಪರಿಗಣಿಸದೆ ಅನ್ಯಾಯವಾಗಿದೆಯೆಂದೂ ವೀರಶೈವರು ದೂರುತ್ತಿದ್ದಾರೆ. ವೀರಶೈವರಲ್ಲಿ ಕೆಲವರನ್ನು ಮಾತ್ರ ಹಿಂದುಳಿದವರೆಂದೂ, ಮಿಕ್ಕವರನ್ನು ಮುಂದುವರಿದವರೆಂದೂ ಆಯೋಗ ಪರಿಗಣಿಸಿ ವೀರಶೈವರಲ್ಲಿ ಒಡಕನ್ನು ತರಲು ಪ್ರಯತ್ನಿಸಿದೆಯೆಂದೂ ದೂರಲಾಗುತ್ತಿದೆ.
ಈ ಎಲ್ಲ ದೂರುಗಳಿಗೂ ಹಿನ್ನೆಲೆಯಲ್ಲಿರುವ ಮುಖ್ಯ ಕಾರಣಗಳು ಇಷ್ಟು: ಭಾರತದ ಜಾತಿಪದ್ಧತಿಯ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು; ಜಾತಿ ವಿನಾಶದ ಬಗ್ಗೆ ಸರಿಯಾದ ಸ್ಪಷ್ಟತೆ ಇಲ್ಲದಿರುವುದು; ಹಾವನೂರರ ವರದಿಯನ್ನು ನಿಷ್ಪಕ್ಷಪಾತದಿಂದ ಅರ್ಥಮಾಡಿಕೊಂಡಿಲ್ಲದಿರುವುದು; ಹಾವನೂರರು ಸಂವಿಧಾನದ ನಿಯಮವನ್ನು ವಿಶ್ಲೇಷಣೆ ಮಾಡಿರುವ ನ್ಯಾಯ ತೀರ್ಪುಗಳ ಚೌಕಟ್ಟಿನಲ್ಲಿ ವರದಿ ತಯಾರಿಸಿದ್ದಾರೆ ಎನ್ನುವ ಅಂಶವನ್ನು ಗಣನೆಗೆ ತೆಗೆದುಕೊಂಡಿಲ್ಲದಿರುವುದು; ಜಾತಿ ಅಂಶಗಳು ಸಿಕ್ಕದಂತೆ ಮಾಡಿರುವ ಕೇಂದ್ರ ಸರ್ಕಾರದ ಕುತಂತ್ರದ ಬಗ್ಗೆ ಅರಿವಿಲ್ಲದಿರುವುದು; ಹಾಗೂ ನ್ಯಾಯಾಲಯಗಳು ಮಾಡಿರುವ ಕುತಂತ್ರಗಳನ್ನು ಗಮನಿಸಿಲ್ಲದಿರುವುದು. ಈ ಕಾರಣಗಳಿಂದಾಗಿ ವಿನಾಶದಲ್ಲಿ ಆಸಕ್ತಿಯಿರುವವರಿಗೆ ಹಾಗೂ ಸಮಾನತೆಯ ಹೋರಾಟದಲ್ಲಿ ಆಸಕ್ತಿ ಇರುವವರಿಗೆ ಈ ಕೆಳಕಂಡ ಕೆಲವು ಅಂಶಗಳನ್ನು ಗಮನಕ್ಕೆ ತರುವುದು ಈ ಲೇಖನದ ಉದ್ದಿಶ್ಯ.
1. ಹಿಂದುಳಿದ ವರ್ಗಗಳಿಗೆ ಸೌಲಭ್ಯ ಒದಗಿಸುವ ಕಾರ್ಯದಲ್ಲಿ ಹಾವನೂರರ ಆಯೋಗಕ್ಕೆ ಇದ್ದ ಅಡತಡೆಗಳು ಕೇಂದ್ರ ಸರ್ಕಾರ  ಮತ್ತು ಶ್ರೇಷ್ಠ ನ್ಯಾಯಾಲಯದ ತೀರ್ಮಾನಗಳು. ಕೇಂದ್ರ ಸರ್ಕಾರ ನಿಮ್ನ ವರ್ಗಗಳಿಗೆ ಹಾಗೂ ಪರಿಶಿಷ್ಟ ಪಂಗಡಗಳಿಗೆ ಯಾವ ನಿಖರವಾದ ನೀತಿಯ ಆಧಾರವೂ ಇಲ್ಲದೆ 18% ಅವಕಾಶಗಳನ್ನು ಮೀಸಲಿಟ್ಟಿತು. (ಶತಮಾನಗಳಿಂದ ಆಗಿರುವ ವಂಚನೆಯ ದೃಷ್ಟಿಯಿಂದ ಇದು ನ್ಯಾಯವಾದ ಕ್ರಮವೇ ಆಗಿದೆ.) ನಂತರ ಶ್ರೇಷ್ಠ ನ್ಯಾಯಾಲಯವು 50% ಮಾತ್ರ ಮೀಸಲಿಡಬೇಕೆಂದೂ, ಉಳಿದ 50% ಸಾಮರ್ಥ್ಯ ((Merit Pool) ಕ್ಷೇತ್ರಕ್ಕೆ ಪ್ರತ್ಯೇಕವಿಡಬೇಕೆಂದೂ ಹೇಳಿತು. (ಬಾಲಾಜಿ ಮೊಕದ್ದಮೆ, AIR, 1963 ಸುಪ್ರೀಂಕೋರ್ಟ್ ಪುಟ 649). ಇದರಿಂದಾಗಿ ಆಯೋಗಕ್ಕುಳಿದ ಸ್ಥಾನಗಳು 32% ಮಾತ್ರ. ಈ ಅವಕಾಶಗಳನ್ನು ಅದು 83% ಜನರಿಗೆ ಹಂಚುವ ಕೆಲಸ ಮಾಡಿದೆ. ಇದು ಹೇಗೆಂದರೆ ಸಾಮರ್ಥ್ಯ  ಕ್ಷೇತ್ರದ 50% ಸ್ಥಾನಗಳನ್ನೂ ಕೇವಲ ಪರೀಕ್ಷೆಯಲ್ಲಿ ಪಡೆದ ಅಂಕಿ-ಅಂಶಗಳ ಆಧಾರದ ಮೇಲೆ 4% ಬ್ರಾಹ್ಮಣರೇ ಪಡೆಯುತ್ತಿರುವ ಪರಿಸರದಲ್ಲಿ ಮತ್ತೆ ಕೇಂದ್ರ ಮೀಸಲಿಟ್ಟ 18% ಸ್ಥಾನಗಳನ್ನು 13% ನಿಮ್ನವರ್ಗ ಹಾಗೂ ಪರಿಶಿಷ್ಟ ಜನಾಂಗಗಳು ಪಡೆದ ಮೇಲೆ ಉಳಿಯುವ 32% ಸ್ಥಾನಗಳು 83% ಜನರಿಗೆ ಉಳಿಯುತ್ತವೆ.
2. ಮಿಕ್ಕೆಲ್ಲ ಜಾತಿಗಳಲ್ಲಿ ಒಗ್ಗಟ್ಟಿಲ್ಲದಂತೆ ನೋಡಿಕೊಂಡು ತನ್ನ ಪ್ರತಿಷ್ಠೆಯನ್ನು ಮುಂದುವರಿಸಿಕೊಂಡು ಹೋಗುವ ಪುರೋಹಿತಶಾಹಿಯ ಕುತಂತ್ರವೇ ಜಾತಿ ಪದ್ಧತಿ. ಶೂದ್ರರಲ್ಲಿ ಹರಿಜನರನ್ನು ಮತ್ತು ಇತರ ಶೂದ್ರರನ್ನು ಒಡೆಯಲು ಹಾಗೂ ಡಾ. ಅಂಬೇಡ್ಕರರ ಬೆಂಬಲ ಸಹಾನುಭೂತಿ ಪಡೆಯಲು ಮಾಡಿದ ಮೊದಲ ಕುತಂತ್ರ ಅವರಿಗೆ ಮಾತ್ರ ಮೀಸಲು ಸ್ಥಾನ ಕೊಟ್ಟಿದ್ದು. ಅನಂತರ ಈ ಗೊಂದಲದಿಂದ ತನ್ನ ವರ್ಗ ತಪ್ಪಿಸಿಕೊಂಡು ಹಾಯಾಗಿರಲು ಸಾಮರ್ಥ್ಯ -ಕ್ಷೇತ್ರದ ಜಾಲವನ್ನು ಸೃಷ್ಟಿಸಿದ್ದು ಆ ವರ್ಗದ ಎರಡನೇ ಕುತಂತ್ರ. ಇದಕ್ಕಿಂತ ಹೆಚ್ಚಿನ ಪರಿಣಾಮಕಾರಿಯಾದ ಕುತಂತ್ರವನ್ನು ಕೂಡ ಶ್ರೇಷ್ಠ ನ್ಯಾಯಾಲಯ ಮಾಡಿದೆ. ಇದೇನೆಂದರೆ ನಿಜವಾಗಿಯೂ ಹಿಂದುಳಿದ ವರ್ಗಗಳನ್ನು ಮುಂದುವರಿದ ವರ್ಗವೆಂದು ಪರಿಗಣಿಸುವಂತೆ ಅದು ಒದಗಿಸಿರುವ ಸೂತ್ರ. ಉದಾಹರಣೆಗೆ, ಮೇಲ್ಕಂಡ ಬಾಲಾಜಿ ಮೊಕದ್ದಮೆಯಲ್ಲಿ ನಾಗನಗೌಡ ಸಮಿತಿಯವರು 1000ಕ್ಕೆ 6.9 ಜನರು ಹೈಸ್ಕೂಲಿನ ಮೇಲಿನ ಮೂರು ತರಗತಿಗಳಲ್ಲಿರುವುದನ್ನು ರಾಜ್ಯ ಸರಾಸರಿ (State Average) ಎಂದು ಗುಣಿಸಿ, ಯಾವುದೇ ಜಾತಿಯ ಜನಸಂಖ್ಯೆಯಲ್ಲಿ 6.9ಕ್ಕಿಂತ ಸ್ವಲ್ಪ ಕಡಿಮೆ ಜನರು ಹೈಸ್ಕೂಲು ತರಗತಿಯಲ್ಲಿದ್ದರೆ ಆ ಜಾತಿ ಹಿಂದುಳಿದದ್ದು ಎನ್ನುವ ಸೂತ್ರವನ್ನು ಅಳವಡಿಸಿದ್ದನ್ನು ವಿಶ್ಲೇಷಿಸುತ್ತಾ ಶ್ರೇಷ್ಠ ನ್ಯಾಯಾಲಯವು 6.9ಕ್ಕಿಂತ ಸ್ವಲ್ಪ ಕಡಿಮೆಯಿದ್ದರೂ ಆ ಜಾತಿಯನ್ನು ಹಿಂದುಳಿದಿದ್ದೆಂದು ಹೇಳಲು ಸಾಧ್ಯವಿಲ್ಲವೆಂದೂ, 6.9ರ ಅರ್ಧಕ್ಕಿಂತಲೂ ಕಡಿಮೆಯಿರುವ ಅಂದರೆ ಜಾತಿಯ 1000 ಜನರಲ್ಲಿ 2.45 ಜನರು ಹೈಸ್ಕೂಲಿನಲ್ಲಿದ್ದರೆ ಅಂತಹ ಜಾತಿಯನ್ನು ಹಿಂದುಳಿದದ್ದೆಂದು ಪರಿಗಣಿಸಬಹುದೆಂದೂ ಹೇಳಿದೆ.
ಹಾವನೂರರು ಹೈಸ್ಕೂಲಿನ ಮೇಲಿನ ಮೂರು ತರಗತಿಗಳನ್ನು ತೆಗೆದುಕೊಂಡರೆ ಬಹಳಷ್ಟು ಜಾತಿಗಳನ್ನು ಮುಂದುವರಿದವರೆಂದು ಹೇಳಬೇಕಾಗುತ್ತದೆಯಾದ್ದರಿಂದ, ಎಸ್.ಎಸ್.ಎಲ್.ಸಿ. ಅಂಕಿಅಂಶದ ಆಧಾರದ ಮೇಲೆ ರಾಜ್ಯ ಸರಾಸರಿಯಾದ 1000 ಜನರಿಗೆ 1.69 ಜನರು ಯಾವುದೇ ಜಾತಿಯಲ್ಲಿ ಮೆಟ್ರಿಕ್‍ನಲ್ಲಿದ್ದರೆ ಆ ಜಾತಿ ಮುಂದುವರಿದದ್ದು ಎನ್ನುವ ಸೂತ್ರ ಅಳವಡಿಸಿದ್ದಾರೆ. ವೀರಶೈವರು ಹಾಗೂ ರಾಜ್ಯ ಸರಾಸರಿಯನ್ನು ಮೀರಿದರೆ ಅದಕ್ಕೆ ಹಾವನೂರರು ಏನು ಮಾಡಲೂ ಸಾಧ್ಯವಿಲ್ಲ. ನಿಜವಾಗಿಯೂ, ಬಹುಸಂಖ್ಯಾತ ಗ್ರಾಮಾಂತರದ ವೀರಶೈವರು ಹರಿಜನರಷ್ಟೇ ದುಃಸ್ಥಿತಿಯಲ್ಲಿರುವುದು ನಿಜವಾದರೂ, ಶ್ರೇಷ್ಠ ನ್ಯಾಯಾಲಯದ ಸೂತ್ರದಂತೆ ಅದನ್ನೇ ಪಾಲಿಸಬೇಕಾಗಿ ಬಂದ ಹಾವನೂರರ  ಸೂತ್ರದಂತೆ ಮುಂದುವರೆದವರೆಂದು ಕರೆಯಲ್ಪಡುತ್ತಾರೆ.
ಇವೆರಡೂ  ಸೂತ್ರಗಳು ತಿರಸ್ಕರಿಸಲು ಅರ್ಹವಾದವು. (ಆದರೆ ನ್ಯಾಯಾಲಯದಲ್ಲಿ ಇವು ತಿರಸ್ಕೃತವಾಗುವುದಿಲ್ಲ.) ಏಕೆಂದರೆ, 300ಕ್ಕೊಬ್ಬ ಹೈಸ್ಕೂಲ್ ಓದಿರುವ ಜಾತಿ ಮುಂದುವರಿದದ್ದು ಎನ್ನುವ ನ್ಯಾಯಾಲಯಗಳು 2000ಕ್ಕೆ 3 ಜನ ಓದಿನ ಜಾತಿಯನ್ನು ಮುಂದುವರಿದದ್ದು ಎಂದು ಹೇಳಿಯೇ ಹೇಳುತ್ತವೆ. 0.16% ಶೈಕ್ಷಣಿಕ ಮುಂದುವರಿಕೆ ಯಾವ ಪ್ರಗತಿಯ ಸೂಚಿಯಲ್ಲ. ಇದಲ್ಲದೆ, ರಾಜ್ಯ ಸರಾಸರಿ ಕೂಡ ತಲಾ ಪ್ರತಿ ಆದಾಯದ ಗುಣಿತದಷ್ಟೇ ದೋಷ ಪೂರಿತವಾದದ್ದು. ಬಿರ್ಲಾ ಮತ್ತು ಹರಿಜನನೊಬ್ಬನ ಆದಾಯದ ಸರಾಸರಿಯು ತಲಾ ಆದಾಯವಾಗುವುದಾದರೆ, ಬ್ರಾಹ್ಮಣ ಹಾಗೂ ಕ್ರೈಸ್ತರ ಪೂರ್ವ ಸಾಕ್ಷರತೆ ಮತ್ತು ಹರಿಜನರ ಅನಕ್ಷರತೆಯ ಸರಾಸರಿಯು ರಾಜ್ಯ ಸರಾಸರಿ ಆಗುತ್ತದೆ.
3. ಶ್ರೇಷ್ಠ ನ್ಯಾಯಾಲಯದ ಕುತಂತ್ರಗಳ ಜೊತೆಗೆ ಕೇಂದ್ರ ಸರ್ಕಾರ ಕೂಡ ತನ್ನದೊಂದು ಕುತಂತ್ರದೊಂದಿಗೆ ಷಾಮೀಲಾಗಿದೆ. ಸಂವಿಧಾನದ ಮೀಸಲು ಸ್ಥಾನಗಳ ವಿತರಣೆಗೆ ಅವಶ್ಯಕವಾಗಿ ಬೇಕಾದ ಅಂಕಿಅಂಶಗಳೇ ಸಿಗದಂತೆ ತನ್ನ ಜನಗಣತಿ (Census) ಕೆಲಸದಲ್ಲಿ ಅದು ಜಾತಿ ವಿವರಗಳನ್ನು ಶೇಖರಿಸುವುದನ್ನೇ ಸಂಪೂರ್ಣ ಕೈಬಿಟ್ಟಿದೆ. ಜಾತ್ಯತೀತತೆಯ ಪ್ರವರ್ತಕ ಎಂಬ ಸೋಗಿನಲ್ಲಿ ಕೇಂದ್ರ ಸರ್ಕಾರ ಇಡೀ ಸಮಸ್ಯೆಯನ್ನು ಬಗೆಹರಿಸಲು ಬೇಕಾದ ಅಂಕಿಅಂಶಗಳೇ ದುರ್ಲಭವಾಗುವಂತೆ ಮಾಡಿದೆ. ಶೈಕ್ಷಣಿಕ ಹಾಗೂ ಔದ್ಯೋಗಿಕ ಅಂಕಿಅಂಶಗಳೂ ಕೂಡ ದೊರಕುತ್ತಿಲ್ಲದ ಸನ್ನಿವೇಶದಲ್ಲಿ ಹಾವನೂರರ ಆಯೋಗ ಸಾಮಾಜಿಕ- ಆರ್ಥಿಕ ಸಮೀಕ್ಷೆ ನಡೆಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಇನ್ನು ಮೇಲಾದರೂ ರಾಜ್ಯ ಸರ್ಕಾರವೇ ಪ್ರತಿ ಜಾತಿಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಸಂಗ್ರಹಿಸಲು ಪ್ರಯತ್ನಿಸಬೇಕೆಂದೂ ಆಯೋಗ ಶಿಫಾರಸ್ಸು ಮಾಡಿದೆ. ಜನಗಣತಿಯನ್ನು ರಾಜ್ಯ ಪಟ್ಟಿ (State list)ಗೆ ಸೇರಿಸಲು ಹೋರಾಟ ಆಗಬೇಕಾಗಿದೆ.
4. ಸಮಾನತೆಗಾಗಿ ಹೋರಾಡುವವರು ಮೇಲಿನ ಅಂಶಗಳನ್ನು ಗಮನದದಲ್ಲಿಟ್ಟುಕೊಂಡು ತಮ್ಮ ಹೋರಾಟವನ್ನು ರೂಪಿಸಿಕೊಳ್ಳಬೇಕು. ಸಾಮರ್ಥ್ಯದ ಹೆಸರಿನಲ್ಲಿ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಂಡಿರುವ ಅಸಮರ್ಥ ಪುರೋಹಿತ ವರ್ಗ ಈ ದೇಶವನ್ನು ಅಧೋಗತಿಗೆ ಇಳಿಸಿರುವ ಸಂದರ್ಭದಲ್ಲಿ ಸಮಾನ ವಿತರಣೆಗೆ ಬೇಕಾದ ಅಂಕಿ-ಅಂಶಗಳನ್ನೇ ಬಚ್ಚಿಟ್ಟಿರುವಾಗ, ಹಾಗೂ ರಾಜ್ಯ-ಸರಾಸರಿ ಎಂಬ ಶೋಚನೀಯ ಸೂತ್ರವನ್ನು ಜಾರಿಗೆ ತಂದಿರುವಾಗ ಹಿಂದುಳಿದವರ ಹೋರಾಟದ ಸ್ವರೂಪ ಬದಲಾಗಬೇಕು.
5. ಆದ್ದರಿಂದ, ಹಿಂದುಳಿದವರು ಈಗ ಸಿಕ್ಕುವ ಅಂಕಿಅಂಶಗಳ ಆಧಾರದ ಮೇಲೆಯೇ ಹೋರಾಟ ರೂಪಿಸಲು ಪ್ರಯತ್ನಿಸಬೇಕು. ಇದು ಸಾಧ್ಯ. ಕೆಳಕಂಡ ಎರಡು ದಾರಿಗಳಲ್ಲಿ ಯಾವುದಾದರೂ ಒಂದು ದಾರಿಯನ್ನು ಹೋರಾಟ ಆರಿಸಿಕೊಳ್ಳಬಹುದು.
ಅ) ಹಾವನೂರರೇ ಹೇಳುವಂತೆ `ಜಾತಿ-ಜಾತಿಯ ನಡುವಿನ ಫಲಿತಾಂಶವೇ ಸಮಾನತಾ ಸಾಧನೆಯ ಯಶಸ್ಸು’ (ವರದಿ ಪುಟ6) ಎನ್ನುವ ಸೂತ್ರದ ಆಧಾರದ ಮೇಲೆ ಫಲಿತಾಂಶ ಪ್ರತಿ ಜಾತಿಯಲ್ಲಿ ಎಷ್ಟಿರಬೇಕು ಎನ್ನುವುದನ್ನು ಮೊದಲು ಗುಣಿಸಬೇಕು. ಪೂರ್ಣ ಸಾಕ್ಷರತೆ ಮತ್ತು ಪೂರ್ಣ ಉದ್ಯೋಗ ಪಡೆದಿರುವ ಬ್ರಾಹ್ಮಣ ಜಾತಿಯನ್ನು ನಾವು ಫಲಿತಾಂಶದ ಸೂಚಿಯಾಗಿ ತೆಗೆದುಕೊಳ್ಳಬೇಕು. (ಇಲ್ಲಿರುವ ಅಂಕಿ-ಅಂಶ ಕೇವಲ ಸರ್ಕಾರದ ಸೇವೆಯಲ್ಲಿರುವ ಬ್ರಾಹ್ಮಣರದ್ದು. ಖಾಸಗಿ ಕ್ಷೇತ್ರವೂ ಪೂರ್ಣ ಅವರಿಗೇ ಮೀಸಲಾಗಿದ್ದರೂ ಕೂಡ ಇರುವ ಅಂಕಿ ಅಂಶದ ಆಧಾರದ ಮೇಲೆ ಹೋರಾಟ ಪ್ರಾರಂಭವಾಗಬಹುದು.) ವಸ್ತುಸ್ಥಿತಿ ಹೀಗಿದೆ :
ಮುಖ್ಯಜಾತಿಗಳು ಜನಸಂಖ್ಯೆ ಮೆಟ್ರಿಕ್ ತೇರ್ಗಡೆ ಆದವರು 1972 (4ನೇ ವರ್ಗ ಬಿಟ್ಟು) ಸರ್ಕಾರಿ ನೌಕರಿಗಳಲ್ಲಿರುವವರು.
ಬ್ರಾಹ್ಮಣರು  4.23  13,113   36,235
ಲಿಂಗಾಯಿತರು(ಮುಂದುವರಿದ) 22.00  10,224   39,408
ಒಕ್ಕಲಿಗರು 11.82 3,764  19,189
ಕುರುಬರು 6.77  927   5,185
ನಿಮ್ನ ವರ್ಗಗಳು  13.63  2,203 16,461
ಮುಸ್ಲಿಮರು 10.63  3,517  20,727
ಕ್ರೈಸ್ತರು 2.09  2,928  8,009
ಇತರ ಹಿಂದುಳಿದ  ವರ್ಗಗಳು  29.32  14,383  60,810
ರಾಜ್ಯದ  ಒಟ್ಟು  100.00  50,759  1,98,015
ಸಮಾನ ಫಲಿತಾಂಶವನ್ನು ಬ್ರಾಹ್ಮಣ ಜಾತಿಯನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕಿದರೆ ಎಷ್ಟರಮಟ್ಟಿಗೆ ಎಲ್ಲ ಜಾತಿಗಳೂ ಹಿಂದುಳಿದಿವೆ ಎನ್ನುವುದು ಗೊತ್ತಾಗುತ್ತದೆ. ಹಾಗೆಯೇ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಜಾತಿಗಳಿಗೆ ನ್ಯಾಯವಾಗಿ ದೊರೆಯಬೇಕಾದ ಅವಕಾಶಗಳನ್ನು ಯಾರು ಅಪಹರಿಸುತ್ತಿದ್ದಾರೆ ಎನ್ನುವುದೂ ಗೊತ್ತಾಗುತ್ತದೆ. ಜನಸಂಖ್ಯೆಯ ಆಧಾರದ ಮೇಲೆ ಎಲ್ಲ ಜಾತಿಗಳಿಗೂ ದೊರೆಯಬೇಕಾದ ಅವಕಾಶಗಳು ಮುಂದಿನ ಪುಟದ ಮೇಲ್ಗಡೆ ಇವೆ.
ಈ ಅಂಕಿಅಂಶಗಳನ್ನು ನೋಡಿದರೆ ಸಮಾನ  ಫಲಿತಾಂಶ ಸಾಧನೆಗೆ ಈಗಿರುವ ರಾಜ್ಯ ವ್ಯವಸ್ಥೆಯಲ್ಲಿರುವ ಶಿಕ್ಷಣ ಸೌಲಭ್ಯವನ್ನು ಸುಮಾರು 600% ಮತ್ತು ಉದ್ಯೋಗ ಸೌಲಭ್ಯವನ್ನು ಸುಮಾರು 500% ಹೆಚ್ಚಿಸಬೇಕಾಗುತ್ತದೆ. ವರ್ಷಕ್ಕೆ 1% ಆರ್ಥಿಕ ಪ್ರಗತಿಯ ಈಗಿನ ಯೋಜನಾಕ್ರಮದಿಂದ ಈ ಕೆಲಸ ಮಾಡಲು ಸುಮಾರು 250 ವರ್ಷವಾದರೂ ಬೇಕು. ಆದ್ದರಿಂದ ಸಮಾನ ಫಲಿತಾಂಶವನ್ನು ತಕ್ಷಣದಲ್ಲಿ ಸಾಧಿಸಬೇಕಾದರೆ ಈಗಿರುವ ಸೌಲಭ್ಯಗಳನ್ನೇ  ಜನಸಂಖ್ಯೆಯ ಆಧಾರದ ಮೇಲೆ ವಿತರಣೆ ಮಾಡಬೇಕು.
ಪ್ರಮುಖ ಜಾತಿಗಳು  ಮೆಟ್ರಿಕ್  ಶಿಕ್ಷಿತರು  ಇರಬೇಕಾದ  ಸಂಖ್ಯೆ  ಸರ್ಕಾರಿ ನೌಕರಿಯಲ್ಲಿ ಇರಬೇಕಾದ  ಸಂಖ್ಯೆ
(ಬ್ರಾಹ್ಮಣರು) (13,113) (36,235)
ಲಿಂಗಾಯಿತರು  68,187  1,88,422
ಒಕ್ಕಲಿಗರು 26,585  1,01,095
ಕುರುಬರು  19,669  54,352
ನಿಮ್ನ ವರ್ಗಗಳು  39,339  1,81,175
ಮುಸ್ಲಿಮರು  32,782 9 ,587
ಕೈಸ್ತರು 6,425 17,755
ಇತರ ಹಿಂದುಳಿದ  ವರ್ಗಗಳು  90,479  2,50,021
ರಾಜ್ಯದ  ಒಟ್ಟು 2,96,579 9,19,642
ಹಿಂದುಳಿದ ವರ್ಗಗಳ ಅವಕಾಶಗಳನ್ನು ಯಾವ ಯಾವ ವರ್ಗದವರು ಅಪಹರಿಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿಯುವುದು, ಹಾಗೂ ಯಾವ ಯಾವ ವರ್ಗದವರಿಗೆ ಎಷ್ಟು ಪ್ರಮಾಣದಲ್ಲಿ ವಂಚನೆ ನಡೆಯುತ್ತಿದೆ ಎನ್ನುವುದು ಕೂಡ ಸ್ಪಷ್ಟವಾಗುತ್ತದೆ.
ಜನಸಂಖ್ಯೆಯ ಆಧಾರದ ಮೇಲೆ ಉದ್ಯೋಗ ಸೌಲಭ್ಯಗಳ ವಿತರಣೆಯ ವಿವರಗಳಿಗೆ ಈ ಪಟ್ಟಿ ನೋಡಿ:-
ಪ್ರಮುಖ ಜಾತಿಗಳು ಶೇಕಡಾ ಜನಸಂಖ್ಯೆ ನೌಕರಿ ಹೊಂದಿರುವುದು ನೌಕರಿ ನ್ಯಾಯವಾಗಿ ಸಿಕ್ಕಬೇಕಾದ್ದು
ಬ್ರಾಹ್ಮಣರು 4.23 36,235 8,373
ಲಿಂಗಾಯಿತರು 22.00 39,408  42,560
ಒಕ್ಕಲಿಗರು  11.82 19,189 23,403
 ಕುರುಬರು  6.77  5,185  13,404
 ನಿಮ್ನ ವರ್ಗಗಳು  13.14 16,461 26,017
 ಮುಸ್ಲಿಮರು 10.63 20,727  21,047
 ಕೈಸ್ತರು 2.09 8,009 4,138
 ಇತರ ಹಿಂದುಳಿದ ವರ್ಗಗಳು  29.32 60,810  58,053
ರಾಜ್ಯದ ಒಟ್ಟು 1,98,015 ಉದ್ಯೋಗಗಳಲ್ಲಿ (4ನೇ ವರ್ಗ ಬಿಟ್ಟು) ಈ ಅಂಕಿ ಅಂಶಗಳು  ನಮ್ಮ ಸಮಾಜದ ಹಲವಾರು ವೈಚಿತ್ರ್ಯಗಳನ್ನು ಹೊರಗೆಡಹುತ್ತವೆ. ಅದರಲ್ಲಿ ಮುಖ್ಯವಾಗಿ ಬಹುಸಂಖ್ಯಾತ ಜಾತಿಗಳಿಗಾಗಿರುವ ಮೋಸ ಬ್ರಾಹ್ಮಣ ಜಾತಿ ಪಡೆದುಕೊಂಡಿರುವ ಲಾಭ ಎನ್ನುವುದು ಸ್ಪಷ್ಟವಾಗುತ್ತದೆ. ಅದು ಸುಮಾರು 450% ರಷ್ಟು ಹೆಚ್ಚಿನ ಲಾಭ ಪಡೆಯುತ್ತಿದೆ.
6. ಹೀಗಾಗಿರುವುದಕ್ಕೆ ಮುಖ್ಯ ಕಾರಣ ಸಾಮರ್ಥ್ಯ ((Merit)ವನ್ನು ಅಳತೆಮಾಡಲು ನಾವು ಇಟ್ಟುಕೊಂಡಿರುವ ಸೂತ್ರ. ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಒದರುವುದು ಸಾಮರ್ಥ್ಯ ಎನ್ನಿಸಿಕೊಂಡಿದೆ. ವೇದಗಳನ್ನು ಬಾಯಿಪಾಠ ಮಾಡಿ ಮರುಪಠನ ಮಾಡುವುದು ಸಾಮರ್ಥ್ಯ ಎನ್ನಿಸಿಕೊಂಡಿದೆ. ಬ್ರಾಹ್ಮಣರು ಸಮರ್ಥರು ಎನ್ನುವ ನಂಬಿಕೆ ಹಿಂದಿನಿಂದ ಬಂದಿವೆ. ಆದರೆ, ಅವರ ಸಾಮರ್ಥ್ಯ ಸೀಮಿತ. ಮಿಕ್ಕೆಲ್ಲ ಕ್ಷೇತ್ರದಲ್ಲಿ ಅವರು ಅಸಮರ್ಥರಾದ್ದರಿಂದಲೇ ಅಂತಹವರು ದೇಶದ ಎಲ್ಲ ಕ್ಷೇತ್ರಗಳನ್ನೂ ತಮ್ಮದಾಗಿಸಿಕೊಂಡಿರುವುದರಿಂದಲೇ ಭಾರತ ಮೂರನೇ ದರ್ಜೆ ದೇಶವಾಗಿರುವುದು. ಔದ್ಯೋಗಿಕ ಸಾಮರ್ಥ್ಯವೇ ಬೇರೆ. ಇದು ದೇಶದ ದಿನನಿತ್ಯ ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವ ಔದ್ಯೋಗಿಕ ಜಾತಿಗಳ ಜನರಲ್ಲಿ ಮಾತ್ರ ಕಾಣಲು ಸಾಧ್ಯ.
ಇದಲ್ಲದೆ, ಸೀಮಿತ ಉದ್ಯೋಗಾವಕಾಶದ ಭಾರತದ ವಿಕೃತ ಆರ್ಥಿಕ ವ್ಯವಸ್ಥೆಯಲ್ಲಿ ನಿರುದ್ಯೋಗಿಗಳಾಗಿರುವ ಆದರೆ ಸಮರ್ಥರಾದ ಅಭ್ಯರ್ಥಿ ಅಭ್ಯರ್ಥಿಗಳ ಹೆಚ್ಚಳ ಎಲ್ಲಾ ಜಾತಿಗಳಲ್ಲೂ ಇರುವುದು ಸರ್ವವಿದಿತ. ಹೀಗಿರುವಾಗ ಪರೀಕ್ಷೆಯ ಅಂಕಗಳ ಮೇಲೆ ತೀರ್ಮಾನಿಸುವ ಶೇಕಡಾ 50 ಭಾಗ  ಸಾಮರ್ಥ್ಯ ಕ್ಷೇತ್ರ (Merit Pool) ರದ್ದಾಗಬೇಕು. ಸಮಾನ ಫಲಿತಾಂಶ ಹಾಗೂ ದಕ್ಷತೆಗಳನ್ನು ಸಾಧಿಸಲು ಇರುವ ಮಾರ್ಗ ಇದೊಂದೇ. ಅದೇನೆಂದರೆ, ಜನಸಂಖ್ಯೆಯ ಆಧಾರದ ಮೇಲೆ ಅವಕಾಶಗಳನ್ನು ಆಯಾ ಜಾತಿಯ ಪ್ರಮಾಣಕ್ಕನುಗುಣವಾಗಿ (Reservation According to Proportion of Population) ಮೀಸಲಿಡಬೇಕು ಹಾಗೂ ಆಯಾ ಜಾತಿಗಳೊಳಗೇ  ಸಾಮರ್ಥ್ಯ ಕ್ಷೇತ್ರ ( Merit Pool in each Caste) ರಚಿಸಿ, ಸಮರ್ಥರಿಗೆ 50 ಭಾಗ ಆದ್ಯತೆ ಕೊಟ್ಟು ಉಳಿದ 50 ಭಾಗವನ್ನು ಇತರ ಸೂತ್ರಗಳ ಆಧಾರದ ಮೇಲೆ ಹಂಚಬೇಕು.
7. ಇಂತಹ ಸೂತ್ರದಿಂದ ಜಾತೀಯತೆ ಮುಂದುವರಿಯುತ್ತದೆಂದು ಢೋಂಗಿ ಸಮದರ್ಶಿಗಳು ಗುಲ್ಲೆಬ್ಬಿಸುತ್ತಾರೆ. ಆದರೆ, ಒಂದು ಜಾತಿ ತನ್ನ ಜಾತಿ ಲಕ್ಷಣಗಳನ್ನು ಕಳೆದುಕೊಳ್ಳಬೇಕಾದರೆ ಅದು ಕೆಲವು ಕನಿಷ್ಟ ಸಾಧನೆಗಳನ್ನು ಮಾಡಬೇಕಾಗುತ್ತದೆ. ಜಾತಿಯ ಔದ್ಯೋಗಿಕ ಸಾಮರ್ಥ್ಯ್ ದಿಂದ ಭಿನ್ನವಾದ ಸಾಮರ್ಥ್ಯವನ್ನು ಅದು ಬೇರೆಲ್ಲ  ಕ್ಷೇತ್ರದಲ್ಲಿ ಬೆಳೆಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಒಂದು ಸಮಂಜಸ ಪ್ರಮಾಣವನ್ನು ನಾವು ನಿಗದಿ ಮಾಡಬಹುದು.
ಯಾವುದೇ ಜಾತಿಯ 50 ಭಾಗ ಶಾಲಾ ವಯಸ್ಕ ಜನಸಂಖ್ಯೆ ಮೆಟ್ರಿಕ್ ಪಾಸಾಗುವ ಹಂತ ಮುಟ್ಟಿದಾಗ, ಮತ್ತು 50 ಭಾಗ ಉದ್ಯೋಗ ವಯಸ್ಕ-ಜನಸಂಖ್ಯೆ ಜಾತಿ-ಉದ್ಯೋಗದಿಂದ ಭಿನ್ನವಾದ ಕ್ಷೇತ್ರಗಳಲ್ಲಿ ಉದ್ಯೋಗಸ್ಥರಾದಾಗ ಆ ಜಾತಿಯನ್ನು ಮುಂದುವರಿದ ಜಾತಿ ಎಂದು ಘೋಷಿಸುವುದು. ದೇಶದ ದಕ್ಷತೆಗೆ 50% ಭಾಗ ಮೀಸಲಿಡಬೇಕು ಎನ್ನುವ ವಾದವನ್ನು ಒಪ್ಪುವವರೂ ಒಂದು ಜಾತಿಯ ಮುಂದುವರಿಕೆಗೂ ಇದೇ ಸೂತ್ರವನ್ನು ಒಪ್ಪಬೇಕಾಗುತ್ತದೆ.
8. ಮೇಲಿನ ಸೂತ್ರಗಳನ್ನು ರಾಷ್ಟ್ರದ ಬಹುಮುಖ  ಸಾಮರ್ಥ್ಯದ ಬಗ್ಗೆ ಕಳಕಳಿ ಇರುವ ಯಾವುದೇ ಉತ್ತಮ ಜಾತಿಯೂ ಒಪ್ಪಲೇಬೇಕು. ಆದರೆ ಅವು ಒಪ್ಪುತ್ತಿಲ್ಲ. ಏಕೆಂದರೆ, ಉತ್ತಮ ಜಾತಿಗಳು ಇದರಿಂದ ಅಲ್ಪಕಾಲಿಕ ಅನ್ಯಾಯವನ್ನು ಅನುಭವಿಸಬೇಕಾಗುತ್ತದೆ. ಶತಮಾನಗಳಿಂದ ಇತರ ಜಾತಿಗಳಿಗೆ ಅವು ಮಾಡಿರುವ ಅನ್ಯಾಯವನ್ನು ಸರಿಪಡಿಸಲು ಅವಕ್ಕೆ ಇಚ್ಛೆಯಿಲ್ಲ.
ಆದ್ದರಿಂದಲೇ, ಅವು ಹಿಂದುಳಿದಿರುವಿಕೆಯನ್ನು ಆರ್ಥಿಕ ಆಧಾರದ (Economic Backwardness) ಮೇಲೆ ನಿರ್ಣಯಿಸಬೇಕು ಎನ್ನುವ ಕೂಗನ್ನು ಎಬ್ಬಿಸುತ್ತಿರುವುದು. ವಿಶೇಷಾವಕಾಶದ ಸೂತ್ರಗಳನ್ನೇ ವಿರೋಧಿಸುವ ಈ ಶಕ್ತಿಗಳು ಜಾತ್ಯತೀತ ಮುಖವಾಡವನ್ನು ಹಾಕಿಕೊಂಡು ಅಲ್ಪಸ್ವಲ್ಪ ಸೌಲಭ್ಯಗಳನ್ನು ಪಡೆಯುತ್ತಿರುವ ಹಿಂದುಳಿದ ಜಾತಿಗಳಿಗೆ ಹೆಚ್ಚಿನ ಮೋಸ ಮಾಡಲು ಹಂಚಿಕೆ ನಡೆಸಿದ್ದಾರೆ. ವೀರಶೈವರೂ ಕೂಡ, ತಾವೂ ಮುಂದುವರಿದವರಿರಬಹುದೆಂಬ ಅನುಮಾನದಲ್ಲಿಯೋ, ಅಥವಾ ತಮಗೆ ಸಿಕ್ಕಿರುವ ಪ್ರಾತಿನಿಧ್ಯ ಹೆಚ್ಚೇನೋ ಎನ್ನುವ ಅನುಮಾನದಿಂದಲೋ, ಅಥವಾ ಉತ್ತಮ ಜಾತಿಯವರ ಸನಾತನವಾದಿ ಕುತಂತ್ರವನ್ನೇ ಉಪಯೋಗಿಸುವ ಸಲುವಾಗಿಯೋ ಇದೇ ಕೂಗನ್ನು ಹಾಕುವುದಕ್ಕೆ ಪ್ರಾರಂಭಿಸಿರಬಹುದು. ಅವರ ಹೋರಾಟದ ಅಸ್ಪಷ್ಟತೆಯಿಂದಾಗಿ ಅವರ ನಿಜವಾದ ಮರ್ಮ ಗೊತ್ತಾಗುತ್ತಿಲ್ಲ.
ಆರ್ಥಿಕ ಹಿಂದುಳಿದಿರುವಿಕೆಯನ್ನು ಸೂತ್ರವನ್ನಾಗಿ ಒಪ್ಪಿದರೆ ಜಾತಿ ಪದ್ಧತಿ ಹಾಗೂ ಅಸಮಾನತೆಗಳು ಮುಂದುವರಿಯುತ್ತವೆ. ಹತ್ತು ಸಾವಿರ ಕುರಿಗಳಿರುವ ಒಬ್ಬ ಕುರುಬನ ಮಗನಿಗೂ ಯಾವ ಆಸ್ತಿಯೂ ಇಲ್ಲದ ಶ್ಯಾನುಭೋಗನ ಮಗನಿಗೂ ಸಮಾನವಕಾಶ ಕೊಟ್ಟರೆ ಅಸಮಾನತೆ ಮುಂದುವರಿಯುತ್ತದೆ. (1977 – 78ರ ಸಾಲಿನಲ್ಲಿ ಹಾವನೂರರು ವಿಶೇಷ ವರ್ಗ (Special Category)ಕ್ಕೆ ಕೊಟ್ಟಿರುವ ಸೌಲಭ್ಯಗಳು ಮೆಡಿಕಲ್ ಸೀಟು ಹಂಚಿಕೆಯಲ್ಲಿ ಎಲ್ಲವೂ ಬ್ರಾಹ್ಮಣ ವಿದ್ಯಾರ್ಥಿಗಳಿಗೇ ಸಿಕ್ಕಿವೆ.)
ಈ ಸೂತ್ರವನ್ನು ಒಪ್ಪಿದರೆ ಢೋಂಗಿ ಸಾಮಥ್ರ್ಯ ಕ್ಷೇತ್ರ ರಚಿಸಿಕೊಂಡು 50% ಭಾಗ ಅವಕಾಶಗಳನ್ನು ಅಪಹರಿಸುತ್ತಿರುವ ಉತ್ತಮ ಜಾತಿಗಳು ಬಡತನದ ಸರ್ಟಿಫಿಕೇಟುಗಳ ಮೂಲಕ ಇನ್ನೂ ಶೇಕಡಾ 20-30 ಭಾಗ ಜಾಗಗಳನ್ನು ಅಪಹರಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಹರಿಜನರಿಗೆ ಸರ್ಟಿಫಿಕೇಟುಗಳು ಸಿಕ್ಕುವುದೂ ಕಷ್ಟವಾಗುತ್ತದೆ. ಇತ್ತೀಚೆಗೆ ಶ್ರೀ ಜಗಜೀವನರಾಮ್ರವರು ಇದನ್ನೇ ಹೇಳಿದ್ದು ಸತ್ಯವಾದ ವಿಷಯ. ಅವರು ಹರಿಜನರಾದದ್ದರಿಂದ ಅವರಿಗೆ ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಹಿಂದುಳಿದ ವರ್ಗಗಳು ಈ ಆರ್ಥಿಕ ಹಿಂದುಳಿದಿರುವಿಕೆಯ ಸೂತ್ರವನ್ನು ಬಲವಾಗಿ ವಿರೋಧಿಸಬೇಕು.
9. ಇದಕ್ಕಿಂತ ಮುಖ್ಯವಾಗಿ ಉತ್ತಮ ಜಾತಿಯವರು ಮಾಡಿರುವ ಕುತಂತ್ರ ಮತ್ತೊಂದಿದೆ. ರಾಜ್ಯ ಮಟ್ಟದಲ್ಲಿ ಹಿಂದುಳಿದ ವರ್ಗಗಳು ಕಡಿದಾಡಿಕೊಳ್ಳುವಂತೆ ಮಾಡಿ, ಕೇಂದ್ರ ಸೇವಾ ಕ್ಷೇತ್ರ (Central Services)ಗಳಲ್ಲಿ ಅವರಿಗೆ ಯಾವ ಮೀಸಲು ಸ್ಥಾನವನ್ನೂ ಕೊಡದೇ 27 ವರ್ಷಗಳು ಕಾಲಹರಣ ಮಾಡಿ ಅಲ್ಲಿನ ಎಲ್ಲ ಅವಕಾಶಗಳನ್ನೂ ತಾನೇ ತೆಗೆದುಕೊಂಡಿವೆ. ಕಾಲೇಲ್ಕರ್ ಆಯೋಗದ ವರದಿಯನ್ನು ಮೂಲೆಗೆಸೆದಿವೆ. ಈ ಬಗ್ಗೆ ವೀರಶೈವರಾಗಲೀ, ಯಾವುದೇ ಹಿಂದುಳಿದ ವರ್ಗವಾಗಲೀ ಪ್ರತಿಭಟನೆ ಮಾಡಿಲ್ಲ. ದೇಶದ ಎಲ್ಲ ರಾಜ್ಯಗಳ ಹಿಂದುಳಿದ ವರ್ಗಗಳ ಯುವಜನರು ನಿರುದ್ಯೋಗಿಗಳಾಗಿರುವುದಕ್ಕೆ ಇದೊಂದು ಬಹು ದೊಡ್ಡ ಕಾರಣ.
ಇದರ  ಜೊತೆಗೇ, ಖಾಸಗಿ ಉದ್ಯಮ (Private Sector)ಗಳೂ ಉತ್ತಮ ಜಾತಿಯವರ ಪೂರ್ಣ ಸ್ವಾಮ್ಯವಾಗಿರುವುದರ ಬಗ್ಗೆ ಕೂಡ ಹಿಂದುಳಿದ ವರ್ಗಗಳು ಎಚ್ಚರಗೊಳ್ಳಬೇಕು. ಕೇಂದ್ರ ಸೇವಾಕ್ಷೇತ್ರ ಹಾಗೂ ಖಾಸಗಿ ಕ್ಷೇತ್ರಗಳಲ್ಲೂ ಜನಸಂಖ್ಯಾ ಪ್ರಮಾಣದ ಮೀಸಲು ಸ್ಥಾನಕ್ಕೆ ಹೋರಾಡಬೇಕು.
10. ಮೇಲೆ ಹೇಳಿದ ವಿಷಯಗಳೆಲ್ಲ ಮೇಲ್ಮೈಯಲ್ಲಿ ಕಾಣುವ ಸತ್ಯಗಳು, ಇವುಗಳಿಗೆಲ್ಲ ಮೂಲಕಾರಣಗಳಾದ ಆರ್ಥಿಕ ರಾಜಕೀಯ ವ್ಯವಸ್ಥೆ ಜಾತಿ ಪದ್ಧತಿಯನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡು ಅವಕಾಶಗಳನ್ನು ಸೀಮಿತಗೊಳಿಸುವ ಶಕ್ತಿಯಾಗಿದೆ. ವಿವರಿಸಿದಲ್ಲಿ ಇವು, ಬಂಡವಾಳಶಾಹಿ ಆಸ್ತಿ ಸಂಬಂಧಗಳು, ಜನರಿಗೆ ತಿಳಿಯದ ಭಾಷೆಯಲ್ಲಿ ರಾಜ್ಯ ವ್ಯವಹಾರ, ನಿರುದ್ಯೋಗ ಸೃಷ್ಟಿಸುವ ಬೃಹತ್ ಕೈಗಾರಿಕಾ ಯಂತ್ರಗಳು, ಬಹುಸಂಖ್ಯಾತರು ಮೇಲೇಳದಂತೆ ಮಾಡುವ ಕೃಷಿಕ್ಷೇತ್ರದ ನಿರ್ಲಕ್ಷ್ಯ, ಬಹುಸಂಖ್ಯಾತ ಕೃಷಿಕರು ಯಥಾಸ್ಥಿತಿಯಲ್ಲಿರುವಂತೆ ಮಾಡುವ ಬೆಲೆ ನೀತಿ, ಬಹುಸಂಖ್ಯಾತರನ್ನು ಕೇವಲ ಪ್ರೇಕ್ಷಕರನ್ನಾಗಿಸುವ ರಾಜಕೀಯ ಕೇಂದ್ರೀಕರಣ, ದೈಹಿಕ ಶ್ರಮ ಹಾಗೂ ಮಾನಸಿಕ ಶ್ರಮಕ್ಕಿರುವ ಮೌಲ್ಯದ ವ್ಯತ್ಯಾಸ ಇತ್ಯಾದಿ ಕಾರಣಗಳು ಜಾತಿಗಳು ಜಡವಾಗಿಯೇ ಇರುವಂತೆ ಹಾಗೂ ದೇಶ ಮುಂದೆ ಹೋಗದಂತೆ ಹಿಡಿದಿಟ್ಟಿವೆ. ಸಾಮಾಜಿಕ ಕ್ರಾಂತಿಗಾಗಿ ಹೋರಾಡುವವರು ಅದಕ್ಕೆ ಪೂರಕವಾದ ಆರ್ಥಿಕ -ರಾಜಕೀಯ ಕ್ರಾಂತಿಗೂ ಶ್ರಮಿಸದಿದ್ದಲ್ಲಿ ಜಾತಿವಿನಾಶ ಸಾಧ್ಯವಿಲ್ಲ. ಬುದ್ಧ-ಬಸವರು ಸೋಲಲು ಮೂಲ ಕಾರಣ ಇದೇ ಆಗಿದೆ.
11. ಸಮಾನತೆಗಾಗಿ ಹೋರಾಡುವ ಯಾರೇ ಆಗಲಿ, ವಿಶೇಷವಾಗಿ ಕಲ್ಯಾಣದ ಬಸವಣ್ಣನ ಶಿಷ್ಯರಾದ ವೀರಶೈವರು ಮೇಲ್ಕಂಡ ಅಂಶಗಳನ್ನು ಗಮನದಲ್ಲಿಟ್ಟು ಕೆಳಗಿನ ಕನಿಷ್ಠ ಕಾರ್ಯಕ್ರಮದೊಂದಿಗೆ ತಮ್ಮ ಹೋರಾಟವನ್ನು ಪ್ರಾರಂಭಿಸಬೇಕು. ಶೀಘ್ರ ಕಾರ್ಯಕ್ರಮವಾಗಿ:
  • ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾತಿ ಅಂಕಿ ಅಂಶಗಳನ್ನು, ಶೈಕ್ಷಣಿಕ ಹಾಗೂ ಔದ್ಯೋಗಿಕ ಅಂಕಿ ಅಂಶಗಳನ್ನು, ಶಾಲಾ ವಯಸ್ಕ ಹಾಗೂ ಉದ್ಯೋಗ ವಯಸ್ಕರ ಅಂಕಿ ಅಂಶಗಳನ್ನು ಶೇಖರಿಸಲು;
  • ಈಗಿರುವ ಢೋಂಗಿ ಸಾಮರ್ಥ್ಯ್ ಕ್ಷೇತ್ರ (Merit Pool)ದ ರದ್ದಿಗಾಗಿ;
  • ಜಾತಿ ಜನಸಂಖ್ಯೆ ಆಧಾರದ ಮೇಲೆ ಅವಕಾಶಗಳ  ಮೀಸಲು ಹಾಗೂ ಆಯಾ ಜಾತಿಗಳಲ್ಲೇ ಸಾಮಥ್ರ್ಯ ಕ್ಷೇತ್ರದ ರಚನೆಗಾಗಿ;
  • ಯಾವುದೇ ಜಾತಿಯ ಶಾಲಾವಯಸ್ಕರಲ್ಲಿ  ಶೇಕಡಾ 50ಭಾಗ ಮೆಟ್ರಿಕ್ ಪಾಸಾದವರು ಹಾಗೂ ಉದ್ಯೋಗ ವಯಸ್ಕರಲ್ಲಿ 50 ಭಾಗ ಜನರು ಜಾತಿ – ಕಸುಬನ್ನು ಬಿಟ್ಟು ಬೇರೆ ವೃತ್ತಿ ಮಾಡುತ್ತಿರುವವರು ಇದ್ದಲ್ಲಿ ಅಂತಹ ಜಾತಿಯನ್ನು ಮುಂದುವರೆದದ್ದೆಂದು ಘೋಷಿಸುವ ಸೂತ್ರಕ್ಕಾಗಿ;
  • ಅಖಿಲ ಭಾರತ ಹಿಂದುಳಿದ ವರ್ಗಗಳ ಆಯೋಗ ರಚನೆಗಾಗಿ ಹಾಗೂ ಖಾಸಗಿ ಕ್ಷೇತ್ರಗಳಲ್ಲೂ ಕೇಂದ್ರ ಸೇವಾ ಕ್ಷೇತ್ರಗಳಲ್ಲೂ ಮೀಸಲು ಸ್ಥಾನಕ್ಕಾಗಿ;
  • ಇದಲ್ಲದೆ  ಜಾತಿ ವಿನಾಶದ ದೂರಕಾಲಿಕ ಕಾರ್ಯಕ್ರಮವಾಗಿ
  • ಹಿಂದಿ ಅಥವಾ ಇಂಗ್ಲಿಷಿಗೆ ಬದಲು ಎಲ್ಲ ಹಂತ ಎಲ್ಲ ಕ್ಷೇತ್ರಗಳಲ್ಲಿ ಜನ ಭಾಷೆ (ಮಾತೃಭಾಷೆ)ಯ ಬಳಕೆಗಾಗಿ;
  • ಎಲ್ಲ ಕ್ಷೇತ್ರಗಳಲ್ಲಿ ಮಾನವ ಶ್ರಮದ  ಸಮಾನ ಮೌಲ್ಯೀಕರಣಕ್ಕಾಗಿ;
  • ಮಾನವ ಶಕ್ತಿಯನ್ನು ತಿರಸ್ಕರಿಸುವ ಬೃಹತ್ ಯಂತ್ರಗಳ ಬದಲು ಮಾನವ ಶಕ್ತಿಯನ್ನು ಬಳಸಿಕೊಳ್ಳುವ ಸಣ್ಣ  ಯಂತ್ರಗಳಿಗಾಗಿ;
  • ಜಾತಿ ಸೃಷ್ಟಿಸುವ ಬಂಡವಾಳಶಾಹಿ ಆಸ್ತಿ ವ್ಯವಸ್ಥೆಯ ಬದಲು ಜಾತಿ ವಿನಾಶಕ್ಕೆ  ಪೂರಕವಾಗುವ, ಉತ್ಪಾದನೆ ಸಾಮಾಜೀಕರಣವಾಗಿರುವ ಉತ್ಪಾದನಾ ಆಸ್ತಿಯ ಸಾಮಾಜೀಕರಣಕ್ಕಾಗಿ;
  • ಯೋಜನಾ ವೆಚ್ಚದ ಶೇ.80 ಭಾಗವನ್ನು ಶೇ.80 ಭಾಗ ಜನರು ಅವಲಂಬಿಸಿರುವ ಕೃಷಿ ಕ್ಷೇತ್ರಕ್ಕೆ ಮೀಸಲಿಡಲು.
  • ಕೈಗಾರಿಕಾ ವಸ್ತುಗಳಿಗೆ ವೈಜ್ಞಾನಿಕವಾಗಿ ಬೆಲೆ ನಿಗದಿಮಾಡುವಂತೆಯೇ ಕೃಷಿ ಉತ್ಪಾದನೆಗೂ ಬೆಲೆ ನಿಗದಿ ಮಾಡಲು;
  • ಗ್ರಾಮಮಟ್ಟದ ಜನರೂ ಸಮಾನ ಪಾತ್ರ ವಹಿಸುವಂತೆ ಯೋಜನಾ ಹಾಗೂ ರಾಜಕೀಯ ವಿಕೇಂದ್ರೀಕರಣಕ್ಕಾಗಿ.
ಈ ಮೇಲ್ಕಂಡ ಕಾರ್ಯಕ್ರಮವನ್ನು ಹಾವನೂರರೂ  ಸಲಹೆ ಮಾಡಿದ್ದಾರೆ. ವೀರಶೈವ ಮುಖಂಡರಾಗಲೀ  ಬೇರೆ ಹಿಂದುಳಿದವರ ನಾಯಕರಾಗಲೀ ಇದನ್ನು ಗಮನಿಸಿಲ್ಲ. ಹಾಗೆಯೇ, ವೀರಶೈವರಲ್ಲಿ ಒಡಕನ್ನು ತರಲಿಕ್ಕೆ ಯಾವ ಆದಿ ಶಂಕರಾಚಾರ್ಯನೂ  ಎದ್ದು ಬಂದಂತೆ ಕಂಡುಬರುತ್ತಿಲ್ಲ. ವೀರಶೈವರ ಒಡಕಿಗೆ ಅವರೇ ಕಾರಣರು.  ಹಲವಾರು ಉಪಜಾತಿಗಳನ್ನು ಸೃಷ್ಟಿಸಿಕೊಂಡು ಪ್ರತಿಯೊಂದಕ್ಕೆ ಮಠ ಜಗದ್ಗುರುಗಳನ್ನು ಸೃಷ್ಟಿಸಿಕೊಂಡಿರುವುದಕ್ಕೆ ಯಾರು ಕಾರಣರು? ಉಪಜಾತಿಗಳ ನಡುವೆ ವಿವಾಹ ನಡೆಸಬೇಕೆಂದು ಕಳೆದ ವೀರಶೈವ ಮಹಾ ಸಮ್ಮೇಳನದಲ್ಲಿ ನಿರ್ಣಯ ಮಾಡಿದವರು ಯಾರು? ನಾವು ಅತಿ ವರ್ಣಾಶ್ರಮಿಗಳು, ನಮ್ಮ ಬಗ್ಗೆ ಅಲ್ಲಸಲ್ಲದ ಟೀಕೆಗಳನ್ನು ಮಾಡಿದ್ದಾರೆಂದು ಇತರರನ್ನು ದೂರುವ ಬದಲು ಜಾತಿ ಸಮಸ್ಯೆಯ ಬಗ್ಗೆ ಕೂಲಂಕುಷ ಅಧ್ಯಯನ ನಡೆಸಬೇಕಾದದ್ದೂ ಆನಂತರ ಸರಿಯಾದ ದಿಕ್ಕಿನಲ್ಲಿ ಹೋರಾಟ ರೂಪಿಸಿಕೊಳ್ಳಬೇಕಾದದ್ದು ವೀರಶೈವರ ಜವಾಬ್ದಾರಿ. ಅವರ ಇತ್ತೀಚಿನ ನಿಲುವು ಕಲ್ಯಾಣದ ಬಸವಣ್ಣನಿಗೆ ಕಲ್ಯಾಣಕಾರಿಯಾಗಿಯೇನೂ ಇಲ್ಲ.
ಕಲ್ಯಾಣದ ಬಸವಣ್ಣನ ಸಮಾನತಾ ಆಂದೋಲನ ಪ್ರಾರಂಭಿಸಬೇಕೆಂಬ ನಿಜವಾದ ಇಚ್ಛೆ ವೀರಶೈವರಿಗಿದ್ದರೆ ಅವರಿಗಿರುವ ಮಾರ್ಗಗಳು ಎರಡು: ಉಪಜಾತಿಗಳ ಬೇರೆ ಬೇರೆ ಬಾವುಟ ಹಾರಿಸುತ್ತಿರುವ ಎಲ್ಲ ಮಠಾಧೀಶರೂ ಮಠಗಳೂ ವಿಲೀನಗೊಂಡು ಒಂದೇ ಬಾವುಟದಡಿಯಲ್ಲಿ ಸೇರಿ ತಮ್ಮ ನವಪುರೋಹಿತಶಾಹಿಗೆ ಚರಮಗೀತೆ ಹಾಡಬೇಕು. ದೇಹವೇ ದೇಗುಲ, ಕಾಯಕವೇ ಕೈಲಾಸ ಎನ್ನುವ ಪುರೋಹಿತಶಾಹಿ-ವಿರೋಧಿಗಳಿಗೆ ಇದು ಕಷ್ಟವಾಗಬಾರದು. ಇದಕ್ಕೆ ಮಠಾಧೀಶರುಗಳು ಒಪ್ಪದಿದ್ದಲ್ಲಿ, ಬಸವಣ್ಣನ ನಿಜವಾದ ಶಿಷ್ಯರುಗಳೆಲ್ಲ ಒಂದಾಗಿ ಈ ಮಠ ಮಾನ್ಯಗಳನ್ನು ಸಾಮೂಹಿಕವಾಗಿ ಬಹಿಷ್ಕರಿಸಬೇಕು. ಇವೆರಡೂ ಶೀಘ್ರದಲ್ಲಿಯೇ ನಡೆಯದಿದ್ದಲ್ಲಿ ಕರ್ನಾಟಕದ ವೀರಶೈವರು ಕೇವಲ ಜಾತಿವಾದಿಗಳಾಗಿದ್ದಾರೆ; ಬಸವಣ್ಣನ ಜಾತಿ-ವಿನಾಶ ಆಂದೋಲನವನ್ನು ಮರೆತಿದ್ದಾರೆ ಎಂದು ಯಾರಾದರೂ ಹೇಳಲೇ ಬೇಕಾಗುತ್ತದೆ.
ಈ ಲೇಖನ ಎಲ್ಲ ಹಿಂದುಳಿದ ವರ್ಗಗಳನ್ನೂ ಉದ್ದೇಶಿಸಿ ಬರೆದದ್ದು. ವೀರಶೈವರ ಹಾಹಾಕಾರದ ಸನ್ನಿವೇಶದಲ್ಲಿ ಅವರಿಗೆ ಹೇಳಿರುವ ಕಿವಿಮಾತುಗಳನ್ನು ಎಲ್ಲ ಹಿಂದುಳಿದವರೂ ಗಮನಕ್ಕೆ ತೆಗೆದುಕೊಂಡು ಸ್ಪಷ್ಟ ಹೋರಾಟಕ್ಕೆ ಸಿದ್ಧವಾಗಬೇಕೆಂದು ವಿನಂತಿಸಿಕೊಳ್ಳುತ್ತೇನೆ.

ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು ಅವರಿಂದ ವರ್ತಮಾನ ಬ್ಲಾಗ್ ಪ್ರಕಟಿಸಿದ ಲೇಖನ.

ಮಾತ್ಗವಿತೆ-53

ನಿರಾಳವಾದ ಮನಸಿಗೆ
ಆಳವೂ ಇರುತ್ತದೆ
ಅಳು ಮರೆತ ಮಗುವಿನ
ಮುಖದಂತಿದ್ದರೂ
ಬಾಳಿನೊಳಗೆ ಅನಂತ
ಅನಿಸಿಕೆಗಳ
ತಳಮಳ ಇರುತ್ತದೆ !

ಮಾತ್ಗವಿತೆ-52

ಕೆದರಿದ ಕೂದಲುಗಳ ನಡುವೆ ಬಿಕ್ಕುವ
ಧ್ವನಿ ಯಾರದೆಂದು ತಲೆಯೆತ್ತಿ ನೋಡಿದರೆ
ಅಲ್ಲಿ ನನ್ನದೇ ಪ್ರತಿಬಿಂಬ !
ಸಾಕು ಮಾಡು ಆಲಾಪ !
ಬಾರಿಸುವುದು ಇನ್ನೂ ಇದೆ
ಎಂದುಕೊಂಡೆ !

ಬಸೂ ಅವರ : ಮುಚ್ಚಿಡುವ ಮಾತು ತೀರ ಎಳಸು !

ನದಿಗೆ ಬದುಕು ರೂಪಕವೊ?
ಬದುಕಿಗೆ ನದಿ ರೂಪಕವೊ?
ಪ್ರಶ್ನೆ ಅದಲ್ಲ
ತೇಲಿದರೆ ಕಾಣುವುದೊಂದು
ಒಳಗಿಳಿದರೆ ಸಿಗುವುದೊಂದು...
ಎಂಬುದಷ್ಟೇ ಮುಖ್ಯ
ಹರಿದು ನದಿಯಾಗುವ
ತೆರೆದು ಬದುಕಾಗುವಲ್ಲಿ
ಮುಚ್ಚಿಡುವ ಮಾತು ತೀರ ಎಳಸು

ನನಗೆ ಅರ್ಥವಾಗಲಿ ಎಂದು
ಅದೇ ಹಳೆ ಶಬ್ದಗಳಲ್ಲೆ
ನಾನಿದನ್ನು ಗುರುತಿಟ್ಟುಕೊಂಡಿದ್ದೇನೆ

ಬದುಕಿಸುವ ಭಾಷೆಗೆ
ಬೇರೆ ರೂಪ, ಅರ್ಥ ಇರುವುದುಂಟೆ?
ಹರಿವ ನದಿಗೆ ಮುಚ್ಚಿಟ್ಟುಕೊಳ್ಳಲು ಬರುವುದುಂಟೆ?
ಹತ್ತಿರ ನಡೆ
ಕನ್ನಡಿ ದೂರವಾದಷ್ಟೂ ನಿನ್ನದೇ
ಮುಖ ಅಸ್ಪಷ್ಟವಾಗುವುದು

ಕತ್ತಲಾಗುವುದು ಎಂದೂ ಅಸಹಜವಲ್ಲ
ಕತ್ತಲಾದ ಮೇಲೆ ಹಣತೆ ಹಚ್ಚದಿರುವುದಷ್ಟೇ ಅಸಹಜ

ಹೇಳಲು ಇನ್ನೇನೂ ಉಳಿದಿಲ್ಲ
ಸಹಜ ಅಸಹಜಗಳ ದಂಡೆಗಳ ಮೇಲೆಯೇ ಬದುಕು ಕಾಲೂರಿದೆ
ಬಸವರಾಜ್ ಸುಳೇಬಾವಿ
 

Wednesday, March 14, 2012

ಮಾತ್ಗವಿತೆ-51

ಮಾತಾಡುವುದಿಲ್ಲ ಅಂದ್ರೆ
ಎಲ್ಲವನ್ನೂ ನುಂಗಿಕೊಂಡು
ಬದುಕಿದ್ದೇವೆ ಅಂತಲ್ಲ !
ಹೇಸಿಗೆಯಲ್ಲಿ ಕಲ್ಲು ಎಸೆದು
ನಮ್ಮ ಮುಖವನ್ನೇ ಯಾಕೆ
ಹಾಳು ಮಾಡಿಕೊಳ್ಳಬೇಕು !

ಮಾತ್ಗವಿತೆ-50

ಒಂದಾನೊಂದು ಕಾಲವಿತ್ತು ;
ಕೋಟೆ ಕಟ್ಟಿದವನ ಕೈಗಳನ್ನೇ
ಕತ್ತರಿಸಲಾಗುತ್ತಿತ್ತು !
ಇಂದಿಗೂ ಅದೂ ಬದಲಾಗಿಲ್ಲ
ಇತಿಹಾಸ ಮರುಕಳಿಸುತ್ತಲೇ
ಇರುತ್ತದೆ !

ಮಾತ್ಗವಿತೆ-49

ನಡೆಯುವ ಹಾದಿಯಲ್ಲಿ ಕಲ್ಲು ಮುಳ್ಳುಗಳು
ಎಂದಂದುಕೊಂಡು ಮುಂದೆ ನಡೆಯುವುದ
ನಿಲ್ಲಿಸಲಾದೀತೇ ?
ಕಲ್ಲು ಮುಳ್ಳು ಇರಲೇಬಾರದು ಎಂದರೆ ಹೇಗೆ ?
ದಾಟುವ ಛಲ ಇರಬೇಕು ; ಬಲ ಬೇಕು !

Tuesday, March 13, 2012

ತಬ್ಬಲಿ ಕೋಗಿಲೆ ಹಾಡಿದ್ದು ಅರ್ಥವಾಗಿದೆಯೇ ?


ಡಾ. ಸಿದ್ರಾಮ ಕಾರಣಿಕ

ಗಿಡದಾ ಮ್ಯಾಲೊಂದು ಕೋಗಿಲೆ ಕುಳಿತು
ಹಾಡ ಹಾಡುತ್ತಿತ್ತ ತನ್ನ ಕತೆಯ ಹೇಳುತ್ತಿತ್ತ
ವೇದನೆಯಿಂದ ತುಂಬಿದ ತುಂಬಿದ ಕೋಗಿಲೆ ದುಃಖದಿಂದಿತ್ತ

ಬಂಧು-ಬಳಗವ ನೆನಪಿಸಿಕೊಂಡು ಬಿಕ್ಕುತ್ತಿತ್ತ
ಒಂಟಿಯಾಗಿ ಕುಳಿತಾ ಕೋಗಿಲೆ ಭಾಳ ನೊಂದಿತ್ತ
ಯಾರೂ ಇಲ್ಲದ ತಬ್ಬಲಿಯಾಗಿ ಗಿಡದಲಿ ಕುಳಿತ್ತಿತ್ತ

ತಾಯಿ-ತಂದೆಯರು ಯಾರು ಅನ್ನೋದು ಗೊತ್ತಿಲ್ಲಾಗಿತ್ತ
ಕಾಗೆಯ ಕಾವಲಿ ಹೊರ ಜಗಕದು ಆವಾಗ್ಗೆ ಬಂದಿತ್ತ
ತನ್ನವರ ಕಾಣದ ಕಂಗೆಟ್ಟ ಕೋಗಿಲೆ ದಿಕ್ಕ ತಪ್ಪಿತ್ತ

ಆಕಡಿ-ಈಕಡಿ ಏನು ತಿಳಿಯದ ಭಾಳ ಅಂಜಿತ್ತ
ತಾನ್ಯಾರು ಅಂತ ತಿಳಿಯದದು ಮರೆಯಲಿ ಕುಳಿತ್ತಿತ್ತ
ತನ್ನ ಜಲುಮವ ನೆನೆ ನೆನೆದು ಕಣ್ಣೀರ ತಂದಿತ್ತ

ಹಿಂಡು ಹಿಂಡಿನ ಗಿಳಿಗಳ ತಂಡ ನೋಡ ನೋಡುತ್ತಿತ್ತ
ತನ್ನ ನಶೀಬದಲಿ ಹಾಂಗಿಲ್ಲೆಂದು ಭಾಳ ಅತ್ತಿತ್ತ
ತನ್ನವರಿದ್ದರ ಕರೆಯಲೆಂದೇ ಹಾಡಲಿ ಕರೆದಿತ್ತ

Monday, March 12, 2012

ಮಾತ್ಗವಿತೆ-48

ಹೌದು !
ನಿಮ್ಮ ವಾದಗಳು, ನಿಮ್ಮ ಭರವಸೆಗಳು
ಎತ್ತ ಹೋದವು ಧಣಿಗಳೇ ?
ಸತ್ತವರನ್ನು ಮತ್ತೇ ಸಾಯಿಸುವ
ಹುನ್ನಾರಗಳನ್ನು ಕಲಿತಿರಾದರೂ ಎಲ್ಲಿಂದ ?
ನಿಮ್ಮ ವೇದಿಕೆಯ ಮಾತುಗಳು
ವೇದನೆಯನ್ನು ಕಡಿಮೆ ಮಾಡುವುದಿಲ್ಲ !

Thursday, March 08, 2012

ಮಾತ್ಗವಿತೆ-47

ಎಲ್ಲ ಕ್ರಾಂತಿಗಳು, ಹೋರಾಟಗಳು
ಅಸಮಾಧಾನ, ಅತೃಪ್ತಿ ಮತ್ತು ಹಕ್ಕುಗಳ
ಪ್ರತಿಪಾದನೆಗಾಗಿಯೇ ಚಾಲನೆಗೊಳ್ಳುತ್ತವೆ.
ಚಾಲಕಶಕ್ತಿ ಮತ್ತು ಮನೋಸ್ಥೈರ್ಯಗಳು
ಎಲ್ಲವನ್ನೂ ಸಾಧಿಸಿ ಬಿಡುತ್ತವೆ ;
ಇಲ್ಲವಾದಲ್ಲಿ ಗುಂಪುಗಾರಿಕೆಗಳು
ಹುಟ್ಟಿಕೊಳ್ಳುತ್ತವೆ !

ಮಾತ್ಗವಿತೆ-46

ಮೌನದ ಕಣಿವೆ ಹಾಯ್ದು
ಈಗ ತಾನೇ ದಣಿವಾರಿಸಿಕೊಳ್ಳುತ್ತಿದ್ದೇನೆ !
ಮಾತಿಗೆ ಯಾರೂ ನಿಲುಕುತ್ತಿಲ್ಲ !
ಮತ್ತೇ ಮೌನವೇ ಮಾತನಾಡತೊಡಗುತ್ತದೆ !

Tuesday, March 06, 2012

ವಿಶ್ರಾಂತ ಕುಲಪತಿ ಡಾ.ಮುರಿಗೆಪ್ಪ ಮತ್ತು ಕೆಲವು ಪ್ರಶ್ನೆಗಳು…

- ಪರಶುರಾಮ ಕಲಾಲ್

 ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಒಂದುವರ್ಷ ಹೆಚ್ಚುವರಿಯಾಗಿ ರಾಜ್ಯಪಾಲರಿಂದ ಅವಕಾಶ ಪಡೆದು, ಒಟ್ಟು ನಾಲ್ಕು ವರ್ಷ ಅವಧಿಪೂರ್ಣಗೊಳಿಸಿ, ಡಾ.ಎ. ಮುರಿಗೆಪ್ಪ ಈಗ ವಿಶ್ರಾಂತ ಕುಲಪತಿಗಳಾಗಿದ್ದಾರೆ. ಪ್ರಭಾರಿ ಕುಲಪತಿಯಾಗಿ ಡಾ.ಹಿ.ಚಿ.ಬೋರಲಿಂಗಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ.
ಡಾ.ಹಿ.ಚಿ.ಬೋರಲಿಂಗಯ್ಯ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು, ಅವರ ಮೇಲೆ ತನಿಖೆ ನಡೆಸಬೇಕೆಂದು ಸಿಂಡಿಕೇಟ್ ಸಭೆ ತೀರ್ಮಾನಿಸಿದೆ. ಈ ತನಿಖೆ ಇನ್ನೂ ನಡೆಯುತ್ತಿರುವಾಗಲೇ ಈಗ ಪ್ರಭಾರಿ ಕುಲಪತಿಗಳಾಗಿಯೇ ಡಾ.ಹಿ.ಚಿ.ಬೋರಲಿಂಗಯ್ಯ ಕೆಲಸ ನಿರ್ವಹಿಸಬೇಕಿದೆ. ಇದು ಆಡಳಿತಾತ್ಮಕವಾಗಿ ಎಷ್ಟು ಸರಿ ಎಂಬ ಪ್ರಶ್ನೆಯು ಹುಟ್ಟಿಕೊಂಡಿದೆ.
ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಬುಧವಾರ ಕನ್ನಡ ವಿವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಾಲ್ಕು ವರ್ಷದ ಆಡಳಿತದಲ್ಲಿ ಸಂಕಷ್ಟದ ದಿನಗಳನ್ನು ಹೀಗೆ ನೆನಪಿಸಿಕೊಂಡಿದ್ದಾರೆ:
  1. ಹಂಪಿ ಕನ್ನಡ ವಿಶ್ವವಿದ್ಯಾಲಯದ 80 ಏಕರೆ ಭೂಮಿಯನ್ನು ವಿಜಯನಗರ ಪುನಃಶ್ಚೇತನ ಟ್ರಸ್ಟ್‌ಗೆ ಥೀಮ್ ಪಾರ್ಕ್‌ಗಾಗಿ ನೀಡಲು ನನ್ನನ್ನು ಅಂದಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದರು ಎಂದಿದ್ದಾರೆ. ಥೀಮ್ ಪಾರ್ಕ್ ಅನ್ನು ಕನ್ನಡ ವಿವಿ ಪಕ್ಕ ಮಾಡುತ್ತೇವೆ. ಕನ್ನಡ ವಿವಿಯ 80 ಏಕರೆಯಲ್ಲಿ ರಿಸರ್ಚ್ ಸೆಂಟರ್ ಬಿಲ್ಡಿಂಗ್ ಕಟ್ಟಿ ಕನ್ನಡ ವಿವಿ.ಗೆ ಬಿಟ್ಟುಕೊಡುತ್ತೇನೆ ಎಂದು ಹೇಳಿ ಆ ಮೇಲೆ ಈ ಮಾತಿಗೆ ವಿರುದ್ಧವಾಗಿ ನಡೆದುಕೊಂಡರು. ದಾರಿ ತಪ್ಪಿಸಿದರು.
  2. ಯು.ಆರ್. ಅನಂತಮೂರ್ತಿ ಅವರನ್ನು ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಿದಾಗ, “ಅವರಿಗೆ ಯಾಕೆ ನಾಡೋಜ ಗೌರವ ಪದವಿ ನೀಡುತ್ತೀರಿ. ಅದನ್ನು ಕೈ ಬಿಡಿ, ಬೇರೆಯವರನ್ನು ಆಯ್ಕೆ ಮಾಡಿ, ಇಲ್ಲವಾದರೆ ನುಡಿಹಬ್ಬದಲ್ಲಿ ಗಲಾಟೆ ಮಾಡಿಸಬೇಕಾಗುತ್ತದೆ,” ಎಂದು ಸಚಿವರಾದ ಜಿ.ಜನಾರ್ಧನ ರೆಡ್ಡಿ, ಬಿ.ಶ್ರೀರಾಮುಲು, ಶಾಸಕ ಆನಂದ್ ಸಿಂಗ್ ಒತ್ತಾಯಿಸಿದರು. ಅವರಿಗೆ ಸಮರ್ಪಕ ಉತ್ತರ ಹೇಳಿ ನಿಭಾಯಿಸಿದೆ.
  3. ನಾಡೋಜ ಗೌರವ ಪದವಿಯನ್ನು ತಾವು ಸೂಚಿಸಿದವರಿಗೆ ಕೊಡಬೇಕೆಂದು ರಾಜ್ಯಪಾಲ ಹಂಸರಾಜ ಭಾರದ್ವಾಜ, ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಬೇರೆ ಬೇರೆ ಹೆಸರನ್ನು ಸೂಚಿಸಿದರು. ಅದನ್ನು ಪರಿಗಣಿಸಲಿಲ್ಲ. ಇದರಿಂದ ಕುಲಾಧಿಪತಿಯಾಗಿದ್ದ ರಾಜ್ಯಪಾಲರು, ಸಮ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ನುಡಿಹಬ್ಬ ಘಟಿಕೋತ್ಸವಕ್ಕೆ ಬರಲಿಲ್ಲ.
  4. ಸಿಂಡಿಕೇಟ್ ಸದಸ್ಯರಾದವರಿಗೆ ದೂರದೃಷ್ಠಿ ಇರಬೇಕು. ಕನಸು ಇರಬೇಕು. ಅದು ಇಲ್ಲದವರು ಸದಸ್ಯರಾದರೆ ಸಮಸ್ಯೆ ಸೃಷ್ಠಿಯಾಗುತ್ತದೆ. (ಹೀಗೆ ಹೇಳುವ ಮೂಲಕ ಸಿಂಡಿಕೇಟ್ ಸದಸ್ಯರ ಆಯ್ಕೆ ಸರಿ ಇರಲಿಲ್ಲ ಎಂದು ಹೇಳಿದಂತಾಯಿತು. ಅಲ್ಲವೆ?)
ಈ ಸಂದರ್ಭಗಳಲ್ಲಿ ಕುಲಪತಿಗಳಾಗಿ ಡಾ.ಎ.ಮುರಿಗೆಪ್ಪ ಯಾವ ರೀತಿ ದಿಟ್ಟಕ್ರಮ ಕೈಗೊಂಡರು?
ಯಾಕೆ ಈ ಕುರಿತಂತೆ ತಮ್ಮ ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿಲ್ಲ?
ಎಲ್ಲರನ್ನೂ ಸರಿದೂಗಿಸುವ ಪ್ರಯತ್ನ ನಡೆಸುವ ಅಗತ್ಯ ಏನಿತ್ತು? ಇದು ಸರಿಯಾದ ಕ್ರಮವೇ?
ಇಂತಹ ಪ್ರಶ್ನೆಗಳು ಬರುವುದು ಸಹಜ. ಕಠಿಣವಾಗಿಯೇ ನಡೆದುಕೊಂಡೆ ಎಂದೇ ಈಗ ಡಾ.ಎ.ಮುರಿಗೆಪ್ಪ ಹೇಳುತ್ತಾರೆ. ಕನ್ನಡ ವಿವಿಯ ಬೆಳವಣಿಗೆಯನ್ನು ಹತ್ತಿರದಿಂದ ನೋಡಿದವರು, ಅವರೂ ಏನನ್ನೂ ಮಾಡಲಿಲ್ಲ, ಎಲ್ಲದಕ್ಕೂ ಬೆಂಡಾದರು ಎಂದೇ ಹೇಳುತ್ತಾರೆ.
ಕನ್ನಡ ವಿವಿ ಕೊಡಮಾಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಮೊಟ್ಟ ಮೊದಲು ಕುವೆಂಪು ಅವರಿಗೆ ಮರಣೋತ್ತರವಾಗಿ ಕೊಡುವ ಮೂಲಕ ಆರಂಭವಾಯಿತು. ಕನ್ನಡ ನಾಡು, ನುಡಿಗೆ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ಕೊಡಬೇಕೆನ್ನುವುದು ಇದರ ಉದ್ದೇಶವಾಗಿತ್ತು. ಇದು ಬರುತ್ತಾ ಹಿಗ್ಗಿಸಿಕೊಂಡು ಏರುತ್ತಾ ಹೋಗಿ ರಾಜ್ಯೋತ್ಸವ ಪ್ರಶಸ್ತಿಯಂತೆ ಅಗ್ಗವಾಗಿ ಬಿಟ್ಟಿತು. ಜಾತಿ, ಪ್ರದೇಶವಾರು ಗುರುತಿಸಲು ಆರಂಭವಾಯಿತು. ನಾ ಎಂಬ ಡೋಜು ಹೆಚ್ಚಾದವರಿಗೆ ಈ ನಾಡೋಜ ಎಂಬ ಅನ್ವರ್ಥನಾಮಕ್ಕೆ ತಿರುಗಿ ಬಿಟ್ಟಿತು. ಹೀಗಾಗಿ ಕಳೆದ ವರ್ಷ ಯೋಗಪಟು ಒಬ್ಬರಿಗೆ ನಾಡೋಜ ದೊರೆಯಿತು. ಜ್ಯೋತಿಷಿಗಳಿಗೆ ಮುಂದಿನ ವರ್ಷ ಕೊಟ್ಟರೂ ಕೊಡಬಹುದು ಎನ್ನುವಲ್ಲಿಗೆ ಬಂದಿದೆ.
ಈ ಗೌರವ ಪದವಿಗೆ ಗೌರವ ಸಿಗುವಂತೆ ಮಾಡಬೇಕಿದೆ.
ಕನ್ನಡ ವಿವಿ ಕುಲಪತಿಗಳಾಗಲು ದೊಡ್ಡ ಲಾಬಿಯೇ ಪ್ರಾರಂಭಗೊಂಡಿದೆ. ಈಗಾಗಲೇ 14 ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಯುಜಿಸಿ ಒಬ್ಬ ಸದಸ್ಯರ ಹೆಸರನ್ನು ಸೂಚಿಸಿಲ್ಲವಾದ್ದರಿಂದ ಇನ್ನೂ ಆಯ್ಕೆ ಸಮಿತಿ ಪೂರ್ಣಗೊಂಡಿಲ್ಲ. ಸಮಿತಿ ರಚನೆಯಾದ ಮೇಲೆ ಅರ್ಜಿ ಸಲ್ಲಿಸುವ ಇನ್ನಷ್ಟು ಅಕಾಂಕ್ಷಿಗಳು ಇದ್ದಾರೆ.
ಕನ್ನಡ ವಿಶ್ವವಿದ್ಯಾಲಯ ಈಗ ಸಂಕಷ್ಟದಲ್ಲಿದೆ. ಜಡವಾಗಿದೆ. ಅಲ್ಲಿ ಗುಂಪುಗಾರಿಕೆಗೆ ಹೆಚ್ಚಾಗಿ ಪರಸ್ಪರ ಟೀಕೆ, ಅಪಸ್ಪರಗಳು ಹೊರ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕನ್ನಡ ವಿವಿಯನ್ನು ಸಾಂಸ್ಕೃತಿಕವಾಗಿ, ಸಂಶೋಧನಾತ್ಮಕವಾಗಿ, ಆಡಳಿತಾತ್ಮಕವಾಗಿ ಮುನ್ನೆಡೆಸುವ ಛಾತಿ ಇರುವವರು ಕುಲಪತಿಗಳಾಗಿ ಬರಬೇಕಿದೆ. ಕನ್ನಡ ವಿವಿ.ಗೆ ಹೊಸ ಸ್ವರೂಪ ಕೊಟ್ಟ ಮೊದಲಿನ ಉತ್ಸಾಹ, ಕನ್ನಡ ನಾಡು-ನುಡಿ ಕಟ್ಟುವ ಕೆಲಸ ಆರಂಭವಾಗಬೇಕಿದೆ. ಇದನ್ನು ಮಾಡಬೇಕಾದವರು ಯಾರು? ಇದು ಪ್ರಶ್ನೆಯಾಗಿಯೇ ಇದೆ.
ಕೃಪೆ : ವರ್ತಮಾನ

ಮರಾಠಿ ಕವಿತೆ : आयुष्यात बरीच माणसं

Rajshekar Chittawadgi
आयुष्यात बरीच माणसं येतात,
काही खूप जवळ येतात, समजून घेतात, नंतर
दूर जातात,
आपल्...यात काय वाईट आहे ते ओरडून
सांगतात, दोष देतात..
दोष देतात त्यात काहीच वाईट नाही.
दोष दाखवतं तेच खरं आपलं माणूस...
पण दोष देऊन दूर झाली तर मात्र
अशी माणसं जवळ न आलेलीच बरी..
कारण अशी माणसं जो काही दोष देऊन
जातात
तो दोष नेहमी कानात गरम रस
ओतल्यासारखा झोंबत राहतो....
माणसाने कुणाच्या हि आयुष्यातून
जाताना मागे फुलं सोडून जावं
आणि
काटे स्वतःसोबत घेऊन जावेत..
कारण...
मागे राहिलेला फुलांसोबत जगू शकतो,
पण शब्दांचे काटे क्षणाक्षणाने
आणि कणा कणाने मारतात.

ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧರ್ಮದ ಸವಾರಿ – ಮತದಾರರು ಎಚ್ಚೆತ್ತುಕೊಳ್ಳಬೇಕು

-ಆನಂದ ಪ್ರಸಾದ್

ಕರ್ನಾಟಕ ಕಂಡ ಮುಖ್ಯ ಮಂತ್ರಿಗಳ ಪೈಕಿ ಯಡಿಯೂರಪ್ಪನವರು ಅತ್ಯಂತ ಭ್ರಷ್ಟ, ಸ್ವಜನ ಪಕ್ಷಪಾತಿ ಹಾಗೂ ನಿರ್ಲಜ್ಜ ಮುಖ್ಯಮಂತ್ರಿಯೆಂದು ಹೇಳಲು ಹೆಚ್ಚಿನ ಪಾಂಡಿತ್ಯವೇನೂ ಬೇಕಾಗಿಲ್ಲ ಎನಿಸುತ್ತದೆ. ಈವರೆಗೆ ಈ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರ ಮೇಲೆ ಪ್ರಕರಣಗಳು ದಾಖಲಾಗಿ ಜೈಲಿಗೆ ಹೋದ ಉದಾಹರಣೆ ಇಲ್ಲ. ಹೀಗಿದ್ದರೂ ಯಡಿಯೂರಪ್ಪನವರು ಮಹಾ ನಾಯಕ ಎಂದು ರಾಜ್ಯದ ಲಿಂಗಾಯತ ಮಠಾಧೀಶರು ಅವರನ್ನು ಬೆಂಬಲಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ವಿದ್ಯಮಾನವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಯಡಿಯೂರಪ್ಪ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಆದರೆ ವಾಸ್ತವವಾಗಿ ಯಡಿಯೂರಪ್ಪ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಅನ್ನುವುದಕ್ಕಿಂತ, ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿದ್ದ ಜನತಾ ಪರಿವಾರದ ಒಡಕು ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದು ಎಂಬುದು ಹೆಚ್ಚು ಸೂಕ್ತವಾಗುತ್ತದೆ. ಇಲ್ಲಿ ಜನತಾ ಪರಿವಾರ ಒಡೆಯದೆ ಗಟ್ಟಿಯಾಗಿದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಏರಲು ಸಾಧ್ಯವೇ ಇರಲಿಲ್ಲ. ಈ ನಿಟ್ಟಿನಲ್ಲಿ ದೇವೇಗೌಡರು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪರೋಕ್ಷವಾಗಿ ಕೊಡುಗೆಯನ್ನು ನೀಡಿದ್ದಾರೆ ಎಂದೇ ಹೇಳಬೇಕಾಗುತ್ತದೆ.
ಯಡಿಯೂರಪ್ಪ ಅವರು ಕರ್ನಾಟಕ ಈವರೆಗೆ ಕಂಡ ಅತ್ಯಂತ ಮೂಢನಂಬಿಕೆಯ ಮುಖ್ಯಮಂತ್ರಿಯಾಗಿಯೂ ಕಂಡು ಬರುತ್ತಾರೆ. ದೇಶದ ಹಲವಾರು ದೇವಸ್ಥಾನಗಳಿಗೆ ಎಡತಾಕಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ. ’ಯಜ್ಞ, ಯಾಗ, ಮಾಟ ಮಂತ್ರ’ಗಳ ಮೊರೆಹೋದ ಇನ್ನೊಬ್ಬ ಮುಖ್ಯಮಂತ್ರಿಯನ್ನೂ ಕರ್ನಾಟಕ ಕಂಡಿಲ್ಲ. ಇಷ್ಟೆಲ್ಲಾ ದೈವ ಭಕ್ತಿ ಇರುವ, ಸ್ವಾಮೀಜಿಗಳ ಮುದ್ದಿನ ಕೂಸಾದ ಯಡಿಯೂರಪ್ಪನವರನ್ನು ಅವರ ಧರ್ಮ ಶ್ರದ್ದೆ, ದೈವ ಭಕ್ತಿ ಅಡ್ಡ ದಾರಿಯಲ್ಲಿ ನಡೆಯದಂತೆ ತಡೆಯಲಿಲ್ಲ. ಹೀಗಾದರೆ ಧರ್ಮ ಶ್ರದ್ಧೆ, ಮಹಾನ್ ದೈವಭಕ್ತಿಯ ಸಾಧನೆಯಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಕರ್ನಾಟಕಕ್ಕೆ ವಿಶ್ವಾದ್ಯಂತ ಕೆಟ್ಟ ಹೆಸರು ತಂದ ಯಡಿಯೂರಪ್ಪನವರು ಸದಾ ವಿರೋಧ ಪಕ್ಷಗಳನ್ನು ದೂರುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಪದೇ ಪದೇ ವಿರೋಧ ಪಕ್ಷಗಳು ಆಡಳಿತ ನಡೆಸಲು ಬಿಡಲಿಲ್ಲ ಎಂಬುದು ಅವರ ಅತ್ಯಂತ ಬಾಲಿಶ ಹೇಳಿಕೆಯಾಗಿತ್ತು. ಆಡಳಿತ ಪಕ್ಷದ ಬಳಿ ಎಲ್ಲ ಸಂಪನ್ಮೂಲ, ಅಧಿಕಾರಿ ವರ್ಗ, ಅಧಿಕಾರ ಇರುವಾಗ ವಿರೋಧ ಪಕ್ಷಗಳು ಅಭಿವೃದ್ಧಿ ಕೆಲಸ ಮಾಡಲು ಬಿಡಲಿಲ್ಲ ಎಂಬುದು ಅತ್ಯಂತ ಹಾಸ್ಯಾಸ್ಪದವಾಗಿ ಕಾಣುತ್ತದೆ. ಈವರೆಗಿನ ಕರ್ನಾಟಕದ ಇತಿಹಾಸದಲ್ಲಿ ನೋಡಿದರೆ ಯಾವ ಮುಖ್ಯಮಂತ್ರಿಯೂ ಇಂಥ ಬಾಲಿಶ ಹೇಳಿಕೆಗಳನ್ನು ನೀಡುತ್ತಿರಲಿಲ್ಲ.
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಷ್ಟು ಬಲಿದಾನ ಹಾಗೂ ಹೋರಾಟಗಳ ಫಲವಾಗಿ ಲಭಿಸಿರುವುದು. ಹೀಗಾಗಿ ನಮ್ಮ ಮತದಾರರು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವಾಮೀಜಿಗಳ ಅವಲಂಬಿತ ಪಾಳೆಗಾರಿಕೆ ವ್ಯವಸ್ಥೆಯಾಗಲು ಬಿಡಬಾರದು. ಜಾತಿ ನೋಡಿ ಮತ್ತು ಸ್ವಾಮೀಜಿಗಳ ಸೂಚನೆಯಂತೆ ಮತ ಹಾಕುವ ಪ್ರವೃತ್ತಿ ಬೆಳೆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ. ಹೀಗಾಗಿ ನಮ್ಮ ಮತದಾರರು ಸ್ವಾಮೀಜಿಗಳ ಗುಲಾಮರಾಗದೆ ಸ್ವಾತಂತ್ರ್ಯ ಮನೋಭಾವದಿಂದ ಮತ ಹಾಕುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಹಾಗಾದಾಗ ಸ್ವಾಮೀಜಿಗಳನ್ನು ಒಲಿಸಿ ಭ್ರಷ್ಟರು ಅಧಿಕಾರಕ್ಕೆ ಏರಲು ಹವಣಿಸುವುದು ನಿಲ್ಲಬಹುದು. ಇತ್ತೀಚೆಗಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹರಿಸುವ ರೀತಿಯಲ್ಲಿ ಸ್ವಾಮೀಜಿಗಳ ಗುಂಪು ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ತಲೆ ಹಾಕುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ವಾಮೀಜಿಗಳು ರಾಜಕೀಯ ವ್ಯವಸ್ಥೆಯನ್ನು ನಿರ್ಧರಿಸುವುದಾದರೆ ಚುನಾವಣೆಗಳನ್ನು ನಡೆಸುವ ಅಗತ್ಯವೇ ಇಲ್ಲ.
ಯಡಿಯೂರಪ್ಪನವರು ಅಪರೇಷನ್ ಕಮಲ ಎಂಬ ಅತ್ಯಂತ ಲಜ್ಚೆಗೇಡಿ ಕೆಲಸವನ್ನು ಮಾಡಿದಾಗ ಯಾವುದೇ ಸ್ವಾಮೀಜಿಗಳು ಅದನ್ನು ಖಂಡಿಸಲಿಲ್ಲ. ಬಹುತೇಕ ಕರ್ನಾಟಕದ ಮಾಧ್ಯಮಗಳೂ ಅದನ್ನು ಖಂಡಿಸಿ ಜನಜಾಗೃತಿ ಮಾಡಿದ್ದು ಕಾಣಲಿಲ್ಲ. ಹೀಗಾಗಿಯೇ ಯಡಿಯೂರಪ್ಪನವರಿಗೆ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಯೋಚನೆ ಬಂದಿರಬೇಕು. ಅದಕ್ಕೆ ಸರಿಯಾಗಿ ಮತದಾರರೂ ಭ್ರಷ್ಟರಾಗಿ ಅಪರೇಷನ್ ಕಮಲಕ್ಕೆ ಒಳಗಾದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಲೇ ಬಂದರು. ಹೀಗಾಗಿ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಚುನಾವಣೆಗಳು ಎಂಬುದು ಒಂದು ಅಣಕವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಎಚ್ಚರಿಸಲು ಕರ್ನಾಟಕದ ಮಾಧ್ಯಮಗಳು ಮುಂದಾಗಲಿಲ್ಲ. ಇದರ ದುಷ್ಫಲ ಇಂದು ನಾವು ಕಾಣುತ್ತಿದ್ದೇವೆ.
ಯಡಿಯೂರಪ್ಪನವರಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಅಭಿರುಚಿಗಳೂ ಇರುವಂತೆ ಕಾಣುವುದಿಲ್ಲ. ಒಬ್ಬ ಉತ್ತಮ ನಾಯಕನು ಬಹಳಷ್ಟು ಓದಿಕೊಂಡಿರುತ್ತಾನೆ. ಹೀಗಾಗಿ ಅವನಲ್ಲಿ ಚಿಂತನಶಕ್ತಿ ಬೆಳೆದಿರುತ್ತದೆ. ಇಂಥ ನಾಯಕನು ಎಂಥ ಸಂದರ್ಭಗಳಲ್ಲೂ ಭ್ರಷ್ಟನಾಗುವುದಿಲ್ಲ. ಯಡಿಯೂರಪ್ಪನವರಲ್ಲಿ ಕಾಣುವುದು ಹಳ್ಳಿಯ ಗೌಡಿಕೆಯ ಠೇ೦ಕಾರ, ಸೇಡು ತೀರಿಸಿಕೊಳ್ಳಬೇಕೆಂಬ ತವಕ ಹಾಗೂ ಇನ್ನಷ್ಟು ಮತ್ತಷ್ಟು ಸಂಪತ್ತು ಕೂಡಿ ಹಾಕಬೇಕೆಂಬ ದುರಾಶೆ. ಇದರಿಂದಾಗಿಯೇ ಅಧಿಕಾರ ದೊರಕಿದಾಗ ಅದನ್ನು ಜನಕಲ್ಯಾಣಕ್ಕಾಗಿ ಬಳಸದೆ ತನ್ನ ಪರಿವಾರದ ಸಂಪತ್ತು ಬೆಳೆಸಲು ಬಳಸಿಕೊಂಡರು. ತನ್ನ ಸುತ್ತಮುತ್ತ ಹೊಗಳುಭಟರ ಪಡೆಯನ್ನು ಕಟ್ಟಿಕೊಂಡು ವಾಸ್ತವದಿಂದ ವಿಮುಖರಾದರು. ಕರ್ನಾಟಕದ ಪತ್ರಕರ್ತರನ್ನೂ ಭ್ರಷ್ಟಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಪರವಾಗಿ ಬರೆಯಲು ಮತ್ತು ವರದಿ ಮಾಡಲು ಪತ್ರಕರ್ತರಿಗೆ ಅವರು ಸಾಕಷ್ಟು ಆಮಿಷಗಳನ್ನು ಒಡ್ಡಿ ವಿಮರ್ಶೆಯೇ ಬರದಂತೆ ನೋಡಿಕೊಂಡರು. ಇದರ ಪರಿಣಾಮ ಏನೆಂದರೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದರೂ ಎಚ್ಚರಿಸದ ಮಾಧ್ಯಮಗಳು ಇನ್ನಷ್ಟು ತಪ್ಪು ದಾರಿಯಲ್ಲಿ ಹೋಗಲು ಅವರನ್ನು ಪ್ರೇರೇಪಿಸಿತು. ಮಾಧ್ಯಮಗಳನ್ನು ಭ್ರಷ್ಟಗೊಳಿಸುವುದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಸರ್ವಾಧಿಕಾರಿ ಪ್ರವೃತ್ತಿಯನ್ನು ಬೆಳೆಸಲು ಕಾರಣವಾಗುತ್ತದೆ. ಕರ್ನಾಟಕದಲ್ಲಿ ಆದದ್ದೂ ಅದೇ. ಹೀಗಾಗಿ ಮಾಧ್ಯಮಗಳನ್ನು ಒಬ್ಬ ಉತ್ತಮ ನಾಯಕ ಎಂದೂ ಭ್ರಷ್ಟಗೊಳಿಸಲು ಹೋಗುವುದಿಲ್ಲ.
ಕೃಪೆ : ವರ್ತಮಾನ

Sunday, March 04, 2012

ಅಂಬೇಡ್ಕರ್ ಎಂಬ ಕರಗದ ಬಂಡೆ !



  ರಘೋತ್ತಮ ಹೊ. ಬ


ಹುಶಃ ಹೀಗೆಂದರೆ ಯಾರಾದರೂ ನಗಾಡಬಹುದು. ಏನು? ಅಂಬೇಡ್ಕರರನ್ನು ಹೀಗೆಲ್ಲಾ ಹೋಲಿಸಬಹುದೇ? ಅಥವಾ ಅವರ ಸಿದ್ಧಾಂತವನ್ನು ಹೇಗೆಂದರೆ ಹಾಗೆ ಹೇಳಬಹುದೇ ಎಂದು ಯಾರಾದರೂ ಕೇಳಬಹುದು. ಆಕ್ಷೇಪ ವ್ಯಕ್ತಪಡಿಸಬಹುದು. ಆದರೆ? ಅವರ ಇತಿಹಾಸವನ್ನು, ಅವರ ಜೀವನದ ಒಂದೊಂದು ಘಟನೆಗಳನ್ನು, ಆ ಘಟನೆಗಳ ಒಂದೊಂದು ಕ್ಷಣವನ್ನು ಅವಲೋಕಿಸಿದರೆ ಹೌದಾ! ಎಂದು ಚಕಿತರಾಗಿ ನೋಡುತ್ತಿದ್ದರೆ! ಅವರೊಂದು ವಿಸ್ಮಯದ ಕರಗದ ಬಂಡೆ ಎಂಬುದು ತಿಳಿಯುತ್ತದೆ. ಈ ದೇಶದ ವಿವಿಧ ವಾದಗಳು ಎಂಬ ನದಿಗಳ ದಿಕ್ಕನ್ನೇ ಬದಲಿಸಿದ ಬಂಡೆ ಎಂಬುದು ಅರ್ಥವಾಗುತ್ತದೆ. ಅಂದಹಾಗೆ ಅಂಬೇಡ್ಕರ್‌ರವರಿಗೆ ಇದರ ಅರಿವು ಇರಲಿಲ್ಲವೇ? ಅಂದರೆ ನಾನು ಮಾಡುತ್ತಿರುವುದೆಲ್ಲ ಈ ದೇಶದ ಸ್ಥಾಪಿತ ವ್ಯವಸ್ಥೆಗೆ ವಿರುದ್ಧವಾದುದು, ಈ ದೇಶದ ಪಟ್ಟಭದ್ರಶಾಹಿಗೆ ವಿರುದ್ಧವಾದುದು. ಎಂಬುದರ ಅರಿವಿರಲಿಲ್ಲವೇ? ಖಂಡಿತ ಇತ್ತು.
ಅದನ್ನು ಅಂದರೆ ತಮ್ಮ ಈ ತಮ್ಮತನವನ್ನು ಬಿಟ್ಟುಕೊಡದ ನಡೆಯನ್ನು ಗಮನಿಸಿಯೇ ಅವರು I am like a rock which does not melt but turns the course of the river” ಎಂದಿರುವುದು. ಹೌದು, ಅಂಬೇಡ್ಕರ್ ಈ ದೇಶದ ‘‘ನದಿಗಳ’’ ದಿಕ್ಕುಗಳನ್ನೇ ಬದಲಿಸಿದ ಸರದಾರ, ಏಕಾಂಗಿ ವೀರ. ಅವರು ಆ ವಾಕ್ಯವನ್ನು ಅಂದರೆ ‘‘ನಾನೊಂದು ಕಲ್ಲು ಬಂಡೆಯಂತೆ ಕರಗುವುದಿಲ್ಲ! ಆದರೆ ನದಿಯ ದಿಕ್ಕನ್ನೇ ಬದಲಿಸುವವನು’’ ಎಂದಿರುವುದು ಅವರ ವ್ಯಕ್ತಿತ್ವವನ್ನು ಅವರು ಗಟ್ಟಿಯಾಗಿ ಕಾಪಾಡಿಕೊಂಡದ್ದಕ್ಕೆ ಅವರ ನಿಲುವನ್ನು ಅವರು ಬದಲಿಸದ್ದಕ್ಕೆ.
ಅಂದಹಾಗೆ ಅಂಬೇಡ್ಕರ್‌ರವರು ಈ ಮಾತನ್ನು ಹೇಳಿದ್ದು ಅವರು ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಿದ್ದೂ ಆ ಪಕ್ಷದ ಸದಸ್ಯರಾಗದೇ ಹಾಗೆ ಉಳಿದುಕೊಂಡದ್ದಕ್ಕೆ. ಆದರೆ ‘‘ನದಿಯ ದಿಕ್ಕನ್ನೇ ಬದಲಿಸಿದೆ’’ ಎಂಬ ಅವರ ಬಾಯಿಯಿಂದ ಹೊರಟ ಆ ಮಾತು? ಭಾರತದ ಇತಿಹಾಸದಲ್ಲೇ ಅವರು ಆಡಿದ ಪ್ರಮುಖ ಪಾತ್ರದ ಬಗ್ಗೆ, ಹಾಗೆ ಆಡಿಯೂ ಬೇರೆ ಪಾತ್ರಗಳ ಆಟಾ ಟೋಪದಲ್ಲಿಯೂ ಅವರು ಕಳೆದುಹೋಗದೇ ಉಳಿದುಕೊಂಡ ಬಗೆ, ಹಾಗೆ ಉಳಿದು ತನ್ನ ಜನರನ್ನು ಅಂತಹ ಇತಿಹಾಸದ ಮುಂಚೂಣಿಗೆ ತಂದ ರೀತಿಯನ್ನು ಬಿಂಬಿಸಿದಂತಿತ್ತು.
ಯಾರಿಗೆ ಗೊತ್ತಿತ್ತು? ದಲಿತರಲ್ಲಿಯೂ ಅಂಬೇಡ್ಕರ್‌ರಂತಹ ಕ್ರಾಂತಿಕಾರಿ ಹುಟ್ಟುತ್ತಾರೆಂದು? ಹುಟ್ಟಿ ಈ ದೇಶವನ್ನು ಅಲ್ಲೋಲ ಕಲ್ಲೋಲ ಮಾಡುತ್ತಾರೆಂದು? ಯಾವ ಜಡ್ಡು ಗಟ್ಟಿದ ಅಂತಹ ವ್ಯವಸ್ಥೆಯನ್ನೆ ಬುಡಮೇಲು ಗೊಳಿಸುತ್ತಾರೆಂದು? ಆದರೆ ಅಂತಹದೊಂದು ಭಾರತದ ಇತಿಹಾಸದಲ್ಲಿ 1891ರಿಂದ 1956ರ ನಡುವೆ ನಡೆದು ಹೋಗಿದೆ. ಹುಟ್ಟಿನಿಂದ ಹಿಡಿದು ಮರಣದವರೆಗೆ ಅಂಬೇಡ್ಕರ್ ಬದುಕಿದ ಬಗೆ ರೋಚಕ, ವಿಸ್ಮಯಕಾರಿ, ಕುತೂಹಲಭರಿತ. ಇದಕ್ಕಿಂತ ಹೆಚ್ಚಾಗಿ 65 ವರ್ಷಗಳ ತಮ್ಮ ತುಂಬು ಜೀವನದಲ್ಲಿ ಅವರು ಹಿಂದೂವಾದ, ಕಮ್ಯುನಿಸ್ಟ್ ವಾದ, ಸಮಾಜವಾದ, ಗಾಂಧಿವಾದ ಇತ್ಯಾದಿ ನದಿಗಳಲ್ಲಿ ಕರಗಲೇ ಇಲ್ಲ. ಬದಲಿಗೆ ಅಂತಹ ನದಿಗಳು ಅಂಬೇಡ್ಕರ್‌ರನ್ನು ಕೊಚ್ಚಿ ಕೊಂಡು ಹೋಗಲು, ಕರಗಿಸಲು ಪ್ರಯತ್ನಿಸಿದವಾದರೂ ಅವುಗಳಿಗೆ ಅದುಸಾಧ್ಯವಾಗಲೇಇಲ್ಲ
ಯಾಕೆಂದರೆ ಅವರೇ ಹೇಳಿಕೊಂಡಿರುವ ಹಾಗೆ ಅವರು ಕರಗದ ಬಂಡೆ! ಬೇಕಿದ್ದರೆ ‘ನದಿ’ ಆ ‘ಬಂಡೆ’ಯನ್ನು ನೋಡಿ ಕೋಪದಿಂದ ಮತ್ತಷ್ಟು ಉಕ್ಕಿ ಹರಿದಿರಬಹುದೇ ಹೊರತು ಅದನ್ನು ಮುಳುಗಿಸಲು ಅವುಗಳ ಕೈಯಲ್ಲಿ ಸಾಧ್ಯವಾಗಲಿಲ್ಲ. ಹಾಗಿದ್ದರೆ ಆ ನದಿಗಳು ಆಡಿರುವ ಪಾತ್ರ? ಮೊಟ್ಟಮೊದಲಿಗೆ ನಾವು ‘ಹಿಂದೂ ನದಿ’ಯ ಬಗ್ಗೆ ಹೇಳಲೇ ಬೇಕು. ‘ಹಿಂದೂ’ ಬಹುಶಃ ಅಂತಹ ‘ನದಿ’ಯೇ ಇಲ್ಲ ಎಂದು ಅಂಬೇಡ್ಕರರು ಒಂದೆಡೆ ಹೇಳುತ್ತಾರೆ. ಯಾಕೆಂದರೆ ಅವರು ಹೇಳಿರುವುದು There is no Hinduism ಎಂದು.
ಹಾಗೆ ಹೇಳುವ ಮೂಲಕ ಅವರು ‘ಅದು’ ತಮ್ಮ ಹತ್ತಿರ ಸುಳಿಯದ ಹಾಗೆ ತಮ್ಮ ಸುತ್ತಲಿನ ಇತರೆ ಬಂಡೆಗಳನ್ನು ಸೋಕದ ಹಾಗೆ ಬದುಕಿದ್ದಾರೆ. ಅದೂ ಎಂತಹ ಬದುಕು? ಅಂತಹ ಬದುಕನ್ನು ಅಂಬೇಡ್ಕರರು ಆ ಕಾಲದಲ್ಲಿ ಬದುಕಿದ್ದರೆ? ಎಂಬುದೇ ಒಂದು ರೋಚಕ, ವಿಸ್ಮಯಕಾರಿ ಸಂಶೋಧನೆಗೆ ಸರಕಾಗುತ್ತದೆ. ಬಹುಶಃ ಅಂಬೇಡ್ಕರ್‌ರ ಬದುಕಿನ ಅಂತಹ ಒಂದು ಸಮಗ್ರ ಸಂಶೋಧನೆ ಏನಾ ದರೂ ನಡೆದು ಅದು ಬರಹದ ರೂಪದಲ್ಲಿ ದಾಖಲಾದರೆ ಹಿಂದೂ ಧರ್ಮ ಈ ಕಾಲಕ್ಕೆ ರಿಪೇರಿ ಆಗಲು ಖಂಡಿತ ಸಾಧ್ಯವಿಲ್ಲ! ಅಷ್ಟೊಂದು ಪ್ರಬಲ ಪ್ರತಿರೋಧವನ್ನು ಒಡ್ಡಿದ್ದಾರೆ ಅಂಬೇಡ್ಕರ್‌ರವರು! ಏಕೆಂದರೆ 1929ರ ಆ ಕಾಲದಲ್ಲೇ ಹಿಂದೂ ಧರ್ಮದ ಆಧಾರ ಸ್ತಂಭವಾದ ಮನುಸ್ಮೃತಿಯನ್ನು ಸುಟ್ಟವರು ಅಂಬೇಡ್ಕರ್‌ರವರು.
1935ರಲ್ಲಿ ‘‘ಹಿಂದೂವಾಗಿ ಹುಟ್ಟಿದರೂ ಹಿಂದೂವಾಗಿ ಸಾಯಲಾರೆ’’ ಎಂದು ಗುಡುಗಿದರು ಮತ್ತು ಅವರು ಹಾಗೇ ಸಾಧಿಸಿ ತೋರಿಸಿದರು ಕೂಡ! ಇವಿಷ್ಟೇ ಸಾಕು ಅಂಬೇಡ್ಕರ್‌ರನ್ನು ‘ಹಿಂದೂ’ ಎಂಬ ‘ನದಿ’ ಏಕೆ ಸೋಕಲಾಗಲಿಲ್ಲ. ಅಥವಾ ಆ ‘ಅದ್ಭುತ ಅಗ್ನಿ ಪರ್ವತ’ವನ್ನು ನೋಡಿ ಅದು ಏಕೆ ತನ್ನ ದಿಕ್ಕನ್ನೇ ಬದಲಿಸಿಕೊಂಡಿತು ಎಂಬುದಕ್ಕೆ. ಅಂದಹಾಗೆ ‘ಹಿಂದೂ ಧರ್ಮದ ಒಗಟುಗಳು’, ‘ಕ್ರಾಂತಿ ಮತ್ತು ಪ್ರತಿ ಕ್ರಾಂತಿ’, ‘ಶೂದ್ರರು ಯಾರು?’ ‘ಜಾತಿ ನಿರ್ಮೂಲನೆ’ ಇತ್ಯಾದಿ ಕೃತಿಗಳೆಂಬ ಸಿಡಿತಲೆಗಳು ಆ ‘ಅಗ್ನಿಪರ್ವತ’ದಿಂದ ಅರ್ಥಾತ್ ಬೆಂಕಿಯ ಬಂಡೆಯಿಂದ ಹೊರ ಬಿದ್ದಿವೆ. ಆದರೆ ಅವಷ್ಟೆ ಅಲ್ಲ. ಅವರ ಜೀವನದ ಪ್ರತಿಯೊಂದು ಕ್ಷಣವು ಹಿಂದೂ ಧರ್ಮದ ವಿರುದ್ಧ ನಿತ್ಯ ಸೆಣಸಿದ ಅಮೃತ ಘಳಿಗೆಗಳಂತೆ ಇವೆ. ಅಂತಹ ಅಮೃತ ಘಳಿಗೆಗಳಿಂದಲೇ ಬಾಬಾ ಸಾಹೇಬ್ ಎಂಬ ಅಮೃತ ಶಿಲೆ ಹುಟ್ಟಿರುವುದು ಎಂದರೆ ಅತಿಶಯೋಕ್ತಿಯೇನಲ್ಲ.
ಅಂಬೇಡ್ಕರ್‌ರನ್ನು ಮುಳುಗಿಸಲಾಗದೇ, ಕರಗಿಸಲಾಗದೇ ತನ್ನ ದಿಕ್ಕನ್ನೇ ಬದಲಿಸಿದ ಮತ್ತೊಂದು ನದಿಯೆಂದರೆ ಅದು ಗಾಂಧಿವಾದ. ಗಾಂಧಿವಾದ ಬಹುಶಃ ಅಂಬೇಡ್ಕರ್‌ರು ಹೇಳುವ ಹಾಗೆ ಅದು ಆ ಕಾಲದಲ್ಲೇ ಅಸ್ತಿತ್ವದಲ್ಲಿದ್ದ ವಾದ. ಅವರನ್ನು ಅಂದರೆ ಗಾಂಧೀಜಿಯ ವರನ್ನು ಇಂದ್ರ, ಚಂದ್ರ ಎಂದು ಹೊಗಳಿ ಅವರಿಂದಾಗಿಯೇ ಈ ದೇಶ ಸ್ವಾತಂತ್ರ್ಯ ಪಡೆಯಿತು ಎಂದು ವರ್ಣಿಸುವ ವಾದ ಅದು. ಅಂತಹ ವರ್ಣನೆಯನ್ನು ತೆಗಳಲು ಹೋಗುತ್ತಿಲ್ಲ. ಆದರೆ ಅಂತಹ ವಾದ ಅಂಬೇಡ್ಕರ್‌ರನ್ನು ಮುಳುಗಿಸಲಾಗಲಿಲ್ಲ, ಅಲು ಗಾಡಿಸಲು ಸಾಧ್ಯವಾಗಲಿಲ್ಲ. ಎಂಬುದನ್ನಷ್ಟೆ ಇಲ್ಲಿ ಹೇಳಲು ಬಯಸುತ್ತಿರುವುದು. ಹೌದು ಗಾಂಧಿವಾದ ಅಂಬೇಡ್ಕರ್‌ರ ವಿರುದ್ಧ ಹಿಂದೂ ವಾದದಷ್ಟೆ ಪ್ರಬಲವಾಗಿ ಅಪ್ಪಳಿಸಿದ ವಾದ.
ಒಂದರ್ಥದಲ್ಲಿ ಅವರನ್ನು ಅವರ ಜೀವನದಲ್ಲಿ ನಿರಂತರವಾಗಿ ಕಾಡಿದ ವಾದ. ಅದರ ಪ್ರವಾಹ ಮತ್ತು ಪ್ರಭಾವ ಅದೆಷ್ಟು ತೀಕ್ಷ್ಣವೆಂದರೆ ಬಹುಶಃ ಕೆಲವು ದಲಿತರು ಈಗಲೂ ಗಾಂಧಿವಾದವೆಂಬ ಆ ವಾದವನ್ನು ಅರ್ಥ ಮಾಡಿಕೊಳ್ಳಲಾಗದೇ ಒದ್ದಾಡುತ್ತಿ ದ್ದಾರೆ. ಅಷ್ಟೊಂದು ವೇಗದ್ದು, ಘಾತುಕಕಾರಿ ಯಾದದ್ದು ಗಾಂಧಿವಾದವೆಂಬ ಆ ವಾದ. ಆದರೆ ಅದೃಷ್ಟವಶಾತ್ ಅಂಬೇಡ್ಕರ್ ಅದಕ್ಕೆ ಕೊಚ್ಚಿ ಹೋಗಲಿಲ್ಲ. ಬದಲಿಗೆ ಅದರ ವಿರುದ್ಧ ಸಿಡಿದು ನಿಂತರು. ಯಾವ ಪರಿ ಎಂದರೆ ಸ್ವತಃ ಗಾಂಧೀಜಿಯೇ ತಮ್ಮ ಪ್ರಾಣಕ್ಕಾಗಿ ಅಂಬೇಡ್ಕರ್‌ರ ಬಳಿ ಭಿಕ್ಷೆ ಬೇಡುವಷ್ಟರ ಮಟ್ಟಿಗೆ! ಪ್ರಾಯಶಃ ಆ ಒಂದು ದಿನ ಅಂಬೇಡ್ಕರ್ ನಕಾರ ಸೂಚಿಸಿ ದ್ದರೆ ಗಾಂಧಿ ಇರುತ್ತಿರಲಿಲ್ಲ.
ಆದರೆ? ಅಂದರೆ ಪೂನಾ ಒಪ್ಪಂದದ ಆ ಸಂದರ್ಭದಲ್ಲಿ ಗಾಂಧೀಜೀಯವರ ಪ್ರಾಣ ಪಕ್ಷಿ ಹಾರಿ ಹೋಗಿ ದ್ದರೆ ಗಾಂಧಿವಾದ ಅಂಬೇಡ್ಕರ್‌ರನ್ನು ಮತ್ತು ಅವರ ಜನರನ್ನು ಕೊಚ್ಚಿಕೊಂಡು ಹೋಗಿರುತ್ತಿತ್ತು. ಇತಿಹಾಸದಲ್ಲಿ ಅಂಬೇಡ್ಕರ್‌ರ ಸಣ್ಣ ಕುರುಹು ಸಹ ಇರುತ್ತಿರಲಿಲ್ಲ. ಆದರೆ ಪೂನಾ ಒಪ್ಪಂದದ ಆ ಸಂಕಷ್ಟದ ಸಂದರ್ಭದಲ್ಲಿ ಅಂಬೇಡ್ಕರ್‌ರು ಗಾಂಧೀಜಿಯವರನ್ನು ಬದುಕಿಸಿದರು! ಆದರೆ ಗಾಂಧಿವಾದವನ್ನು ಸಾಯಿಸಿದರು!! ಗಾಂಧೀಜಿಯ ಬಗ್ಗೆ ಇಂದು ಯಾರು ಎಷ್ಟೇ ಮಾತನಾಡಲಿ. ಆದರೆ ಪೂನಾ ಒಪ್ಪಂದದ ಪ್ರಶ್ನೆ ಬಂದಾಗ ಅವರ ಬಾಯಿ ಬಂದ್ ಆಗುತ್ತದೆ. ಅರ್ಥಾತ್ ಗಾಂಧಿ ವಾದಕ್ಕೆ full stop ಬೀಳುತ್ತದೆ.
ಗಾಂಧಿವಾದವನ್ನು ಹೇಳಲಾಗದೇ, ಸಮರ್ಥಿಸಲಾಗದೇ ಅಂತಹವರ ವಾದ ಅಕ್ಷರಶಃ ಸಾಯುತ್ತದೆ. ಯಾಕೆಂದರೆ ಗಾಂಧೀಜಿಯನ್ನು ಮತ್ತವರ ಸಿದ್ದಾಂತಗಳನ್ನು ಇಂದ್ರ, ಚಂದ್ರ ಎಂದು ಹೊಗಳಿ ಹಾಗಿದ್ದರೆ ಅವರು ಯಾಕೆ ಆ ಬಡಪಾಯಿ ದಲಿತರ ವಿರುದ್ಧ ಅಮರಣಾಂತ ಉಪವಾಸ ಸತ್ಯಾಗ್ರಹವೆಂಬ ತಮ್ಮ ಕತ್ತಿ ಝಳಪಿಸಿದರು? ಎಂದು ಕೇಳಿದರೆ ಯಾರು ತಾನೇ ಉತ್ತರಿಸಲು ಸಾಧ್ಯ? ಉತ್ತರಿಸುವುದಿರಲಿ, ಹೌದಲ್ಲವಾ, ಗಾಂಧೀಜೀ ಹಾಗೆ ಏಕೆ ಮಾಡಿದರು? ಎಂದು ತಡವರಿಸುತ್ತಾರೆ. ತನ್ಮೂಲಕ ಆ ವಾದವನ್ನು ಹಳ್ಳ ಹಿಡಿಸುತ್ತಾರೆ.
ಒಂದರ್ಥದಲ್ಲಿ ಅಂಬೇಡ್ಕರ್ ಪೂನಾ ಒಪ್ಪಂದದಲ್ಲಿ ಸೋತು ಗೆದ್ದಿದ್ದಾರೆ. ಗಾಂಧೀಜಿ ಗೆದ್ದು ಸೋತಿದ್ದಾರೆ! ಅವರು ಸೋತಿದ್ದಾರೆ ಎಂದರೆ ಅಂಬೇಡ್ಕರ್‌ವಾದ ಗಾಂಧಿವಾದ ಎಂಬ ವಾದವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ ಎಂದರ್ಥ. ಅಥವಾ ಅದು ಮುಂದೆ ಚಲಿಸಿದೆ ಎಂದರೆ ಅಂಬೇಡ್ಕರ್ ಅದರಲ್ಲಿ ಅಂದರೆ ಗಾಂಧಿವಾದದಲ್ಲಿ ಮುಳುಗಲಿಲ್ಲ, ಕರಗಲೂ ಇಲ್ಲ. ಬೃಹತ್ ಬಂಡೆಯ ಹಾಗೆ ನಿಂತುಕೊಂಡರು ಎಂದು ಅರ್ಥ. ಅಕಸ್ಮಾತ್ ಹಾಗೆ ನಿಲ್ಲದೆ ಕೊಚ್ಚಿಕೊಂಡು ಹೋದರು ಎನ್ನುವುದಾದರೆ ಕಡೇ ಪಕ್ಷ ಗಾಂಧಿವಾದವನ್ನು ಹೊತ್ತುಕೊಂಡು ಸಾಗುತ್ತಿರುವ ಕಾಂಗ್ರೆಸ್‌ನಲ್ಲಾದರೂ ಅವರು ಸೇರಬೇಕಿತ್ತು ತಾನೇ?
ಊಹೂಂ ಅಂಬೇಡ್ಕರ್‌ರವರು ಗಾಂಧೀಜಿಯಿಂದ ಎಷ್ಟು ದೂರ ಇದ್ದರೋ ಅಷ್ಟೆ ದೂರ ಕಾಂಗ್ರೆಸ್‌ನಿಂದಲೂ ಸಹ ಇದ್ದರು. ಯಾವುದೇ ಕಾರಣಕ್ಕೂ ಆ ಪಕ್ಷದ ಸದಸ್ಯರಾಗಲಿಲ್ಲ. ಸದಸ್ಯರಿರಲಿ ಅದರ ಸಿದ್ಧಾಂತದತ್ತ ಸಹ ಕಣ್ಣೆತ್ತಿ ನೋಡಲಿಲ್ಲ. ಈ ನಿಟ್ಟಿನಲ್ಲಿ ತನ್ನ ಸಮುದಾಯವು ಸಹ ತನ್ನದೇ ಹಾದಿಯಲಿ ಸಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಬಾಬಾ ಸಾಹೇಬರು ಗಾಂಧಿ ಮತ್ತು ಕಾಂಗ್ರೆಸ್ಸನ್ನು ಕುರಿತು “what Congress and Gandhi have done to untouchables? ಎಂಬ ಬೃಹತ್ ಗ್ರಂಥವನ್ನೇ ಬರೆದರು!
ಹಾಗೆ ಬರೆದು ಅದನ್ನು ತನ್ನವರಿಗೆ ‘‘ತಾನು ಹೇಗೆ ಗಾಂಧಿವಾದದಲ್ಲಿ ಕರಗಲಿಲ್ಲ’’ ಎಂಬುದನ್ನು ವಿವರಿಸಿ ಸಾಕ್ಷಿಯಾಗಿ ಇಟ್ಟು ಹೋದರು! ಸಮಾಜವಾದ ಅಥವಾ ಕಮ್ಯುನಿಸ್ಟ್‌ವಾದ ಬಹುಶಃ ಅಂಬೇಡ್ಕರ್‌ರನ್ನು ಮುಳುಗಿಸಲು ಬಂದ ಮತ್ತೊಂದು ವಾದ. ಕಾರ್ಲ್‌ಮಾರ್ಕ್ಸ್, ಲೆನಿನ್, ಮಾವೋ ಇತ್ಯಾದಿಗಳು ಇದರ ಪ್ರತಿಪಾದಕರಿರಬಹುದು. ಆದರೆ ಭಾರತದಲ್ಲಿ ಇದರ ಹೊಣೆ ಹೊತ್ತವರು ಬ್ರಾಹ್ಮಣರು! ಅಕ್ಷರಶಃ ಮಾರ್ಕ್ಸ್‌ವಾದ ದುಡಿಯುವ ವರ್ಗಗಳ ಬಡವರ ಪರ ಇತ್ತಾದರೂ ಅದು ಭಾರತದ ಕೆಳ ಜಾತಿಗಳ ಪರ ಇರಲಿಲ್ಲ! ಯಾಕೆಂದರೆ ಮಾರ್ಕ್ಸ್‌ಗೆ ಜಾತಿ ಗೊತ್ತಿರಲಿಲ್ಲವಲ್ಲ! ಹಾಗಂತ ಆತ ‘ಸಮಾಜವಾದ’ ಎಂಬ ಆ ಅಡುಗೆ ಮಾಡಿದ್ದು ಕೂಡ ಜಾತಿಪೀಡಿತ ಭಾರತಕ್ಕಲ್ಲ. ಪಾಶ್ಚಿಮಾತ್ಯ ಮತ್ತಿತರ ರಾಷ್ಟ್ರಗಳಿಗಷ್ಟೆ.
ಈ ನಿಟ್ಟಿನಲ್ಲಿ ಅದು ಭಾರತಕ್ಕೆ ಕಾಲಿಟ್ಟಿತ್ತಾದರೂ ಅಂಬೇಡ್ಕರ್ ಅದರ ಪ್ರಭಾವಕ್ಕೆ ಒಳಗಾಗಲಿಲ್ಲ. ಯಾಕೆಂದರೆ ಅವರಿಗೆ ಗೊತ್ತಿತ್ತು. ಜಾತಿ ತಾರತಮ್ಯಕ್ಕೆ ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲ ಎಂಬುದು. ಒಟ್ಟಿನಲ್ಲಿ ದಲಿತರ ಸಮಸ್ಯೆಗಳಿಗೆ ಮೇಲ್ನೋಟಕ್ಕೆ ಮಾರ್ಕ್ಸ್‌ವಾದದಲ್ಲಿ ಉತ್ತರ ಸಿಗುತ್ತದೆ ಎಂದೆನಿಸಿದರೂ ವಾಸ್ತವದಲ್ಲಿ ಅದು ಹಿಂದೂಗಳ ಕೈಗೆ ವರ್ಗ ಹೋರಾಟದ ಹೆಸರಿನಲ್ಲಿ ಸಿಗುವ ಮತ್ತೊಂದು ಶೋಷಣೆಯ ಅಸ್ತ್ರವೆಂಬುದು ಅಂಬೇಡ್ಕರ್‌ರಿಗೆ ಚೆನ್ನಾಗಿ ತಿಳಿದಿತ್ತು. ಆ ಕಾರಣಕ್ಕೆ ಅವರು ಮಾರ್ಕ್ಸ್‌ವಾದ ಅಥವಾ ಸಮಾಜವಾದದ ಪ್ರವಾಹಕ್ಕೆ ಕೊಚ್ಚಿ ಹೋಗಲಿಲ್ಲ. ಬದಲಿಗೆ ಅದಕ್ಕೂ ಕೂಡ ‘‘ಬುದ್ಧ ಅಥವಾ ಕಾರ್ಲ್ಸ್‌ಮಾರ್ಕ್ಸ್’’ ಕೃತಿಯ ಮೂಲಕ ಒಂದು ಸವಾಲೆಸೆದರು.
ತನ್ಮೂಲಕ ದಲಿತರು ಮಾರ್ಕ್ಸ್‌ವಾದ ಬಲೆಯೊಳಗೆ ಬೀಳದ ಹಾಗೆ ನೋಡಿಕೊಂಡರು. ಅಂಬೇಡ್ಕರ್‌ರನ್ನು ಹಾದುಹೋದ ಮತ್ತೊಂದು ವಾದ ಹಿಂಸಾವಾದ. ಅದನ್ನು ಫ್ಯಾಸಿಸಂ ಎಂದಾದರೂ ಎನ್ನಿ, ನಕ್ಸಲಿಸಂ ಎಂದಾದರೂ ಎನ್ನಿ ಅಥವಾ ಇನ್ಯಾವುದೇ ಹೆಸರಿನಿಂದಾದರೂ ಕರೆಯಿರಿ. ಒಟ್ಟಿನಲ್ಲಿ ಹಿಂಸೆಯ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ವಾದಿಸುವ ವಾದವದು. ‘‘ಬಂದೂಕಿನ ನಳಿಕೆಯ ಮೂಲಕ ಅಧಿಕಾರ’’ ಎಂಬ ಸಿದ್ಧಾಂತವದು. ನಿಜ, ದಲಿತರ ಎಲ್ಲಾ ಸಮಸ್ಯೆಗಳಿಗೂ ಇದರಲ್ಲಿ ಪರಿಹಾರವಿದೆ. ಹಿಂದೂಗಳ ದೌರ್ಜನ್ಯಕ್ಕೆ ದಬ್ಬಾಳಿಕೆಗೆ ಹಿಂಸೆಯೇ ಉತ್ತರ ಎಂದೆನಿಸುತ್ತದೆ. ಆದರೆ? ಒಮ್ಮೆ ದಲಿತರು ಬಂದೂಕು ಹಿಡಿದರೆ ಹಿಂದೂಗಳು ಸುಮ್ಮನಿರುತ್ತಾರೆಯೇ? ಅವರು Government Police ಮೂಲಕ ದಲಿತರ ಅಂತಹ ಬಂದೂಕನ್ನು ಬಂದ್ ಮಾಡಿಸುತ್ತಾರಷ್ಟೆ.
ಸಾಲದಕ್ಕೆ ದಲಿತರನ್ನೇನೂ ಬರೀ ಹಿಂಸೆಯ ಮೂಲಕವೇ ಈ ಸ್ಥಿತಿಗೆ ತಂದಿದ್ದಲ್ಲವಲ್ಲ. ಬದಲಿಗೆ ‘ಶಾಸ್ತ್ರ’ಗಳ ಮೂಲಕ, ಆ ‘ಶಾಸ್ತ್ರಗಳನ್ನು ಅದರ ವಿಧಿಗಳನ್ನು ಹೇಳುವುದರ ಮೂಲಕ, ಅವರನ್ನು ಅಕ್ಷರ, ಆಯುಧ ಇತ್ಯಾದಿ ಬದುಕಿನ ಆವಶ್ಯಕ ಅಂಶಗಳಿಂದ ದೂರವಿರಿಸಿ ನಿಷೇಧ ಹೇರಿದ್ದರಿಂದಷ್ಟೆ ಅಸ್ಪಶ್ಯತೆ ಬೆಳೆದಿದ್ದು. ಹೀಗಿರುವಾಗ ಅಂಬೇಡ್ಕರ್‌ರು ಅಂತಹ ಶಾಸ್ತ್ರಗಳನ್ನು, ಆ ಶಾಸ್ತ್ರಗಳನ್ನು ಬರೆಯುವ ಶಾಸನ ಸಭೆಗಳ ಸ್ಥಾನಗಳತ್ತ ಕಣ್ಣಿಟ್ಟರೆ ಹೊರತು ಸುಮ್ಮನೆ ಬಂದೂಕು ಹಿಡಿದು ಬೀದಿಯಲ್ಲಿ ನಿಂತು ರಕ್ತ ಚೆಲ್ಲುವುದರತ್ತಲ್ಲ. ಅಂತಿಮವಾಗಿ ಇದು“Budha and his Dhamma” ಕೃತಿಯ ಮೂಲಕ ಬಾಣ ಬಿಟ್ಟ ಅವರು ‘‘ದಲಿತರ ಸಮಸ್ಯೆಗಳಿಗೆ ಅಹಿಂಸಾವಾದಿ ಬುದ್ಧನಲ್ಲಿ ಪರಿಹಾರವಿದೆ’’ ಎಂದು ತಿಳಿಸಿ ಹಿಂಸಾವಾದದಲ್ಲಿ ತಾವು ಮುಳುಗುವುದನ್ನು ಅಥವಾ ಕರಗಿ ಹೋಗುವುದನ್ನು ತಪ್ಪಿಸಿಕೊಂಡರು.
ಒಟ್ಟಾರೆ ಹಿಂಸಾವಾದಕ್ಕೂ ಮೇಲೆ ಹೇಳಿದ ಉಳಿದ ವಾದಗಳಿಗೆ ಆದ ಗತಿಯನ್ನೇ ಕಾಣಿಸಿದರು! ಹಾಗಿದ್ದರೆ ಅಂಬೇಡ್ಕರ್ ಅದೆಂತಹ ವಾದಿ? ಅವರು ಅಪ್ಪಟ ಪ್ರಜಾಪ್ರಭುತ್ವವಾದಿ. ಪ್ರಜಾಪ್ರಭುತ್ವದ ಮಾರ್ಗದಿಂದಷ್ಟೆ ಅವರು ನ್ಯಾಯ ಪಡೆಯಬಹುದೆಂದರಿತ್ತಿದ್ದವರು. ಅದಕ್ಕಾಗಿ ಅವರು ತಮ್ಮ ಜೀವನದುದ್ದಕ್ಕೂ ಗೆಲ್ಲಲಿ ಸೋಲಲಿ ರಾಜಕೀಯವನ್ನೇ ಮಾಡುತ್ತಾ ಬಂದರು. "Political power is the master key through which you can unlock all doors of progress” ಎಂದು ತನ್ನ ಜನರಿಗೆ ನಿರಂತರ ಪಾಠ ಹೇಳುತ್ತಾ ಬಂದರು. ಮತ್ತು ಹಾಗೆಯೇ ಅಂತಹ ಪಾಠವನ್ನು ಇಡೀ ದೇಶಕ್ಕೆ ಹೇಳುವ ಅವಕಾಶ ಪಡೆದು ‘‘ಸಂವಿಧಾನ ಶಿಲ್ಪಿ’’ ಎನಿಸಿಕೊಂಡರು.
ಒಮ್ಮೆ ಅವರು ಸಂವಿಧಾನ ಶಿಲ್ಪಿ ಎನಿಸಿಕೊಂಡ ಮೇಲೆ, ಮೇಲೆ ಹೇಳಿದ ಹಿಂದೂವಾದ, ಗಾಂಧಿವಾದ, ಸಮಾಜವಾದ, ಹಿಂಸಾವಾದ ಇತ್ಯಾದಿ ವಾದಗಳು ಅವರ ಬಳಿ ಸುಳಿಯಲು ಸಾಧ್ಯವೇ? ಅವರು ಅದರಲ್ಲಿ ಕರಗಿ ಹೋಗಲು ಸಾಧ್ಯವೇ? ಖಂಡಿತ ಅಸಾಧ್ಯ. ಬದಲಿಗೆ ಅಂಬೇಡ್ಕರ್‌ರು ಹಾಗೆ ಬಂದ ಎಲ್ಲ ನದಿಗಳ ದಿಕ್ಕನ್ನೇ ಬದಲಿಸಿ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡರು. ಸ್ವಂತಿಕೆ ಎಂದ ಮೇಲೆ ಅವರ ಹೆಸರು ಆ ಸ್ವಂತಿಕೆಯ ವಾದಕ್ಕೆ ಬರಲೇ ಬೇಕಲ್ಲವೇ? ಹೌದು, ಅಂಬೇಡ್ಕರ್‌ರವರು ತಮ್ಮದೇ ಹೆಸರಿನ ಅಂಬೇಡ್ಕರ್‌ವಾದ ವಾದರು. ಈ ಜಗತ್ತಿಗೆ ತಾನೇ ಒಂದು ವಿಭಿನ್ನ ಮಾದರಿ ಎಂದು ತೋರಿಸಿಕೊಟ್ಟರು. ಆ ಮೂಲಕ ತಾನೇಕೆ ಕರಗದೇ ಆ ಎಲ್ಲಾ ನದಿಗಳ ದಿಕ್ಕನ್ನೇ ಬದಲಿಸಿ ತನ್ನ ಸ್ವಂತಿಕೆಯನ್ನು ಕಾಪಾಡಿಕೊಂಡೆ ಎಂದು ಇಡೀ ಜಗತ್ತಿಗೆ ಸಾರಿ ಹೇಳಿದರು.
                                                                                    

ಮಾತ್ಗವಿತೆ-45

ವಿಧಿಯ ಹಳಿದು ಪರಿ ಯೋಜನೆಗಳಿಲ್ಲ
ಯಾಕೆಂದರೆ ವಿಧಿ ಅನ್ನೋದೇ ಇಲ್ಲ !
ಅದು ನಮ್ಮ ಕಾರ್ಯ, ನಮ್ಮ ವ್ಯಕ್ತಿತ್ವ
ನಮ್ಮ ಪ್ರಯತ್ನ, ನಮ್ಮ ಪರಿಶ್ರಮ
ಮತ್ತು ಸಾಧನೆಗಳ ಮೂಲಕ ಸಾಕಾರಗೊಳ್ಳುತ್ತದೆ
ಸಹಿಸದವರಿದ್ದರೆ ವಿರೂಪಗೊಳ್ಳುತ್ತದೆ !

Saturday, March 03, 2012

ಇತಿಹಾಸದ ವಾರಸುದಾರರು ನಾವು ಪ್ರಶ್ನೆ ಕೇಳುತ್ತಿದ್ದೇವೆ : ಉತ್ತರ ಹೇಳಿ

ನಿಮ್ಮ ಕಾಲ್ತುಳಿತಕ್ಕೆ ಸಿಕ್ಕ
ನನ್ನ ಶ್ವಾಸ ಈಗಲೂ
ವಿಲಿವಿಲಿ ಒದ್ದಾಡುತ್ತಲಿದೆ.

ಊರ ಹೊರಗೆ ತಿಪ್ಪೆಯಲ್ಲಿ
ನಾವು ನಿಮಗೆ ಎಷ್ಟು ಕೊಡಬೇಕೆನ್ನುವುದನ್ನು
ಒಮ್ಮೆ ಲೆಕ್ಕ ತೋರಿಸಿ ಹೇಳಿ :

ಇತಿಹಾಸದ ವಾರಸುದಾರರು ನಾವು
ಪ್ರಶ್ನೆ ಕೇಳುತ್ತಿದ್ದೇವೆ : ಉತ್ತರ ಹೇಳಿ

ಮಹಾತ್ಮ ಫುಲೆ ಅಂಬೇಡ್ಕರ್ ರು ಈಗಾಗಲೇ
ನಿಮ್ಮ ಅಕೌಂಟ್ಸನ್ನು ಆಡಿಟ್ ಮಾಡಿದ್ದಾರೆ
ಗ್ರಂಥ ಗ್ರಂಥಗಳಲ್ಲಿ ಹುದುಗಿಕೊಂಡಿರುವ
ಫ್ರಾಡ್ಸ್ ಗಳನ್ನು ಡಿಟೆಕ್ಟ್ ಮಾಡಿದ್ದಾರೆ

ಜನರಲ್ ಎಂಟ್ರಿ ಎಷ್ಟು
ಮಾಡಬೇಕೆಂಬುದನ್ನು ಅವರು
ಆಡಿಟ್ ರಿಪೋರ್ಟ್ ಈಗಾಗಲೇ ನೀಡಿದ್ದಾರೆ

ಇಷ್ಟಿದ್ದರೂ ನೀವು ಅದೇ ಹಾಡು
ಹಾಡುವ ಕಿಸುಬಾಯಿ ದಾಸರು

ಹೋದ ಜನ್ಮದ ಕೊಳೆತ ಸ್ಟಾಂಪ್ಸ್ ಗಳು
ಈಗಾಗಲೇ ಔಟ್ ಡೇಟೆಡ್ ಗಳಾಗಿವೆ
ನಿಮ್ಮ ಹಣೆಯ ಮೇಲಿನ ಗಂಧ
ಅದಕ್ಕಿಂತಲೂ ಮೊದಲು ಬಾಯ್ ಕಟ್ ಆಗಿದೆ

ಈಗಲೂ ಅವಕಾಶವಿದೆ : ಮಾಡಿದ ತಪ್ಪು
ತಿದ್ದಿಕೊಳ್ಳಲು : ನಿಮ್ಮ ಪಾಪಗಳ ಎಕ್ಸೆಸ್
ಬ್ಯಾಲನ್ಸ್ ರಿಟರ್ನ್ ಆಫ್ ಮಾಡಿಕೊಡುತ್ತೇವೆ

ಅದಕ್ಕಾಗಿ

ನೀವು ಮಾಡಬೇಕಾದದ್ದಿಷ್ಟೆ :

ಮನುಷ್ಯರಂತೆ ಜೀವಿಸುವುದು ಕಲಿಯಿರಿ
ಒಂದು ವೇಳೆ ಅದು ಸಾಧ್ಯವಾಗದಿದ್ದರೆ
ದಿವಾಳಿಗೆದ್ದಿದ್ದೇವೆಂದಾದರೂ
ಜಾಹೀರು ಪಡಿಸಿರಿ !


ಮೂಲ ಮರಾಠಿ : ಪ್ರಹ್ಲಾದ್ ಚೆಂದವಣಕರ್
ಕನ್ನಡಕ್ಕೆ : ಡಾ. ಸರಜೂ ಕಾಟ್ಕರ್

Thursday, March 01, 2012

ನಾಳಿನ ರೊಟ್ಟಿಯ ಚಿಂತೆ... !


ನಮ್ಮನ್ನು ನಾವೇ ಪ್ರೀತಿಸತೊಡಗಿ 
ಮದುವೆಯಾಗಲು ಅವಕಾಶವಿರಲಿಲ್ಲ
ಆಗಸದ ಕನಸಿನ ವ್ಯಾಪಾರಿಗಳೋ 
ತಮ್ಮ ಹಡಗುಗಳಿಗೆ ಲಂಗರು ಹಾಕಿಬಿಟ್ಟಿದ್ದರು
ನಡೆಯಲು ದಾರಿ ಸರಳವಿತ್ತು,

ಆದರೆ ಸುಖ ಸ್ವೇಚ್ಛೆಯ ಮಾಟದ 
ಒಡವೆ ಕಳಚಲಾಗದೆ ಉಳಿಯಿತು

ಆತ್ಮವು ಅಂತರಾಳದ ಸ್ವಮರುಕದ 
ಹಂಗಿನಿಂದ ಹೊರಬರುತ್ತಿದೆ
ಪ್ರತಿ ದಿನವೂ ಭವಿಷ್ಯದ ತುಟಿಗಳ 
ಮೇಲೆ ಮಂದಹಾಸ ಮೂಡಿಸುತ್ತದೆ
ದೇವಸೃಷ್ಟಿಯ ಈ ನರಕದೊಳಗೆ 
ಬಂದಿಯಾಗಲು ಇಷ್ಟವಿಲ್ಲ ನನಗೆ

ಅಮೃತ ಹೊತ್ತ ಮೋಡಗಳು 
ಅಮರತ್ವದ ಮಳೆ ಸುರಿಸುವವೋ ಇಲ್ಲವೋ
ಮೈಮರೆತು ಇಲ್ಲೇ ಗೋರಿಯಾಗಲಾರೆ

ನನ್ನ ಮಟ್ಟಿಗೆ ಈಗಲೂ ಅದೊಂದೇ
ನಾಳಿನ ರೊಟ್ಟಿಯ ಚಿಂತೆ...
ಮೂಲ ಮರಾಠಿ : ನಾಮದೇವ ಢಸಾಳ
ಕನ್ನಡಕ್ಕೆ : ಡಾ ಎಚ್ ಎಸ್ ಅನುಪಮಾ

ನಾನೊಂದು ದಿನ ದೇವರಿಗೆ ನಿನ್ನವ್ವನ ಹಡಾ ಎಂದು ಬೈದೆ !


ನಾನೊಂದು ದಿನ ದೇವರಿಗೆ
ನಿನ್ನವ್ವನ ಹಡಾ ಎಂದು ಬೈದೆ

ಆತ ಫಕ್ಕೆಂದು ನಕ್ಕ

ನೆರೆಮನೆಯ ಬೋರು ಬಹಾದ್ದೂರ್ ಕಂಗಾಲಾಗಿ
ಹರಳೆಣ್ಣೆ ಕುಡಿದವನಂತೆ ಮುಖ ಮಾಡಿ
"ಏನೋ ಮಾರಾಯಾ ನೀನು ಆ ನಿರ್ಗುಣ ನಿರಾಕಾರ

ಅನಾಥ ಜಗನ್ನಾಥನಿಗೆ ಹೀಗೇಕೆ

ವಿನಾಕಾರಣ ಬೈಯುತ್ತಿ" ಎಂದು ಕೇಳಿದ
ಇನ್ನೊಮ್ಮೆ ನಾನು ಬೈದೆ

ಯುನಿವ್ಹರ್ಸಿಟಿಯ ಕಟ್ಟಡ ಸೊಂಟದವರೆಗೆ
ಕುಸಿದು ಬಿದ್ದಂತಾಯಿತು
ನನ್ನ ಬೈಗುಳದ ಬಗ್ಗೆ ಹಾಗೂ
ಮನುಷ್ಯನಿಗೇಕೆ ಸಿಟ್ಟು ಬರುತ್ತದೆಂಬುದರ ಬಗ್ಗೆ

ಅಲ್ಲೀಗ ರೀಸರ್ಚ್ ನಡೆದಿದೆಯಂತೆ

ನನ್ನ ಹುಟ್ಟುಹಬ್ಬದ ದಿನ ಮತ್ತೆ
ನಾನು ದೇವರಿಗೆ ಬೈದೆ
ಇನ್ನಷ್ಟು ಮತ್ತಷ್ಟು
ಬೈಗುಳಗನ್ನು ಬೈದೇ ಬೈದೆ

"ಮಗನೇ ತುಂಡು ರೊಟ್ಟಿಗಾಗಿ ಎಂದಾದರೂ
ನೀನು ಚಕ್ಕಡಿ ತುಂಬ ಕಟ್ಟಿಗೆ ಒಡೆದಿದ್ದಿಯಾ ?
ಚಿಂದಿ ತೊಟ್ಟ ಅವ್ವನ ಮಾನವನ್ನು
ಎಂದಾದರೂ ನೀನು ಕಾಯ್ದಿದ್ದಿಯಾ ?
ಅಪ್ಪನಿಗೆ ಬೇಕಾಗುವ ಬೀಡಿಯನ್ನು
ಎಂದಾದರೂ ನೀನು ತಂದುಕೊಟ್ಟಿದ್ದೀಯಾ ?
ಅವನಿಗೆ ಬೇಕಾದ ಶೆರೆಗಾಗಿ
ಎಂದಾದರೂ ಚಮಚಾಗಿರಿ ಮಾಡಿದ್ದೀಯಾ ?

ಇಂಪಾಸಿಬಲ್ ; ನಿನಗಿದು ಅಸಾಧ್ಯ
ಅದಕ್ಕೆ ಬೇಕು ; ಅವಮಾನಿತವಾದ ಬದುಕು
ಎಲ್ಲರಿಂದ 'ಛೀ' 'ಥೂ' ಅನ್ನಿಸಿಕೊಳ್ಳುವಂಥ ಜೀವನ
ಮಣ್ಣಿನ ಜೊತೆ ಮಣ್ಣಾಗಿ ದುಡಿಯುವ
ನನ್ನ ಅವ್ವನಂಥ ಅವ್ವ
ಇವುಗಳಲ್ಲಿ ಯಾವುದೂ ಅವನಿಗಿಲ್ಲದಿದ್ದುರಿಂದ
ನಾನೊಂದು ದಿನ ದೇವರಿಗೆ
ನಿನ್ನವ್ವನ ಹಡಾ ಎಂದು ಎಲ್ಲರೆದುರೇ ಬೈದೆ !

                                ಮೂಲ ಮರಾಠಿ : ಕೇಶವ ಮೇಶ್ರಾಮ 
                         ಕನ್ನಡಕ್ಕೆ : ಡಾ. ಸರಜೂ ಕಾಟ್ಕರ್

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.