Monday, November 28, 2011

ಭಾರತದ ಸಂವಿಧಾನದಲ್ಲಿ ಹಿಂದೂ ಪಕ್ಷಪಾತವಿದೆಯೇ?


ಕೋಮುವಾದಿ ಹಿಂಸೆ ನಿಗ್ರಹ ಮಸೂದೆಯು ದೇಶಾದ್ಯಂತ ಚರ್ಚೆಯಲ್ಲಿದೆ. ಅದರಲ್ಲಿ ತುಂಬಾ ಮುಖ್ಯವಾಗಿರುವ ಅಂಶ ಬಹುಸಂಖ್ಯಾತರ ಸಂಘಟಿತ ಹಿಂಸೆ ಯಿಂದ ಅಲ್ಪಸಂಖ್ಯಾತರನ್ನು ರಕ್ಷಿಸುವ ಅಂಶ. ಅದರ ಬಗ್ಗೆ ಹಿಂದುತ್ವವಾದಿ ಫ್ಯಾಸಿಸ್ಟ್ ಸಂಘಪರಿವಾರ ಮಾತ್ರ ತೀವ್ರವಾದ ಆಕ್ಷೇಪ ವನ್ನು ದಾಖಲಿಸುತ್ತಿದೆ. ಅದರಲ್ಲಿ ಅತಿ ಮುಖ್ಯ ವಾದದ್ದು ಈ ಮಸೂದೆ ಅಲ್ಪಸಂಖ್ಯಾತರು ಬಹುಸಂಖ್ಯಾತರ ಮೇಲೆ ಮಾಡಬಹುದಾದ ಸಂಘಟಿತ ಹಿಂಸಾಚಾರವನ್ನು ದಾಖಲಿಸು ವುದೇ ಇಲ್ಲ ಎಂಬುದು.ಹಾಗೆಯೇ ಈ ದೇಶದಲ್ಲಿ ಅಲ್ಪಸಂಖ್ಯಾತರು ಯಾರೂ ಇಲ್ಲ ಎಂಬುದೇ ಅವರ ಇನ್ನೊಂದು ವಾದ. ಪ್ರಗತಿ ಪರರಲ್ಲೂ ಹಲವರು ಈ ಮಸೂದೆಯನ್ನು ಜಾರಿ ಮಾಡುವಾಗ ಅಲ್ಪಸಂಖ್ಯಾತರು ಎಂದು ತೀರ್ಮಾನ ಮಾಡಲು ರಾಜ್ಯವನ್ನು ಘಟಕವನ್ನಾಗಿ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯ ಪಡುತ್ತಾರೆ. ಆಗ ಕಾಶ್ಮೀರದಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾಗಿ ಹಿಂದೂ ಅಲ್ಪಸಂಖ್ಯಾತರ ಹಿತವನ್ನು ಈ ಮಸೂದೆ ಕಾಪಾಡುತ್ತದೆ. ಆದ್ದರಿಂದ ಬಿಜೆಪಿ ಪ್ರತಿಪಾದಿಸುತ್ತಿರುವ ಅನುಮಾನಗಳಿಗೆ ಕಾರಣವಿಲ್ಲ ಎಂದು ಅವರು ಈ ತರ್ಕವನ್ನು ಮಸೂದೆಯ ಬೆಂಬಲಕ್ಕೆ ಪ್ರಮುಖ ತರ್ಕವನ್ನಾಗಿ ಬಳಸಿಕೊಳ್ಳುತಾರೆ.
ಆದರೆ ಇವೆರಡು ವಾದದಲ್ಲೂ ಮೇಲ್ನೋ ಟದ ತರ್ಕ ಸಮಂಜಸತೆ ಇದ್ದರೂ ಸ್ವತಂತ್ರ ಭಾರತದ ನಿರ್ಮಾಣ ಪ್ರಕ್ರಿಯೆಯಲ್ಲೇ ಇದ್ದ ಕೆಲವು ಹಿಂದೂ ಪಕ್ಷಪಾತವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಸಂಘಪರಿವಾರ ಅದನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದರೆ ಉದಾರವಾದಿ ಪ್ರಗತಿಪರರ ಒಂದು ಗುಂಪು ಈ ಹಿಂದೂ ಪಕ್ಷಪಾತಿತನದ ಬೇರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ವಾಸ್ತವವಾಗಿ ಕಾಶ್ಮೀರದಲ್ಲಿರಲಿ, ಈಶಾನ್ಯ ಭಾರತದಲ್ಲಿರಲಿ ಭಾರತದ ಪ್ರಭುತ್ವ ಇಡಿ ಯಾದದ್ದು. ಅದರ ತರಬೇತಿ,ರಾಷ್ಟ್ರೀಯ ಮಾನಸಿಕತೆ ಎಲ್ಲವೂ ಒಂದೇ ಎರಕದಲ್ಲಿ ಅಚ್ಚುಹೊಯ್ದದ್ದು.ಹಾಗೂ ಎರಕದಲ್ಲಿ ಹಿಂದು ರಾಷ್ಟ್ರೀಯತೆಯ ಅಂಶಗಳು ಗುಪ್ತ ಗಾಮಿನಿಯಾಗಿ ಮುಸ್ಲಿಂ ಬಹುಸಂಖ್ಯಾತ ಮತ್ತು ಕ್ರಿಶ್ಚಿಯನ್ ಬಹುಸಂಖ್ಯಾತ ರಾಜ್ಯ ಗಳಲ್ಲೂ ಹರಿದೇ ಇದೆ.
ಏಕೆಂದರೆ ಭಾರತದ ಸ್ವಾತಂತ್ರ್ಯ ಹೋರಾಟದ ಅಂತರ್ಗತ ಭಾಗವಾಗಿಯೇ ಭಾರತ ರಾಷ್ಟ್ರೀಯತೆ ಎಂಬ ಪರಿಕಲ್ಪನೆಗೆ ಹಿಂದೂ ರಾಷ್ಟ್ರೀಯತೆಯ ಛಾಯೆ ಅಂಟಿಕೊಂಡೇ ಇತ್ತು.ಇದು ಸಾವರ್ಕರರ, ತಿಲಕ್, ಸಂಘಪರಿವಾರದ ಹಿಂದುತ್ವವಾದಿ ರಾಷ್ಟ್ರೀಯತೆಯಲ್ಲಿ ಆಕ್ರಮಣಕಾರಿಯಾಗಿ ಅಭಿವ್ಯಕ್ತಗೊಂಡರೆ ಗಾಂಧೀ ಪ್ರಣೀತ ಭಾರತೀಯತೆಯಲ್ಲೂ ಹಿಂದೂ ಲಾಂಛನ, ರಾಷ್ಟ್ರೀಯತೆಯ ವ್ಯಾಖ್ಯಾನಗಳಿಗೆ ಒಂದು ಬಗೆಯ ಸಮ್ಮತಿ ದೊರಕಿಬಿಟ್ಟಿತು. ಇದೇ ಪ್ರಾಯಶಃ ನಂತರದಲ್ಲಿ ಸಂಘಪರಿವಾರ ಚಾಲ್ತಿಗೆ ತಂದ ಹಲವು ಇಷ್ಯೂಗಳಿಗೆ ಸಾಂವಿ ಧಾನಿಕ ಮಾನ್ಯತೆಯನ್ನು ತಂದುಕೊಟ್ಟುಬಿಟ್ಟವು ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಇಡೀ ದೇಶದ ಪ್ರಭುತ್ವಕ್ಕೆ, ಕೆಲವು ರಾಜ್ಯಗಳಲ್ಲಿ ಇತರ ಧರ್ಮೀಯರು ಬಹುಸಂಖ್ಯಾತರಾಗಿ ದ್ದರೂ, ಒಟ್ಟಾರೆಯಾಗಿ ಹಿಂದೂ ಪಕ್ಷಪಾತಿತನ ವನ್ನು ತಂದುಕೊಟ್ಟಿದೆ.
63 ವರ್ಷಗಳ ಭಾರತ ಪ್ರಭುತ್ವದ ಇತಿಹಾಸವನ್ನು ಗಮನಿಸಿದ ನಂತರ ಇದನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಭಾರತದ ಪ್ರಭುತ್ವಕ್ಕೆ ಸೆಕ್ಯುಲರ್ ಕಿರೀಟವಿ ದ್ದರೂ ಅಂತರ್ಗಾಮಿನಿಯಾಗಿ ಹಿಂದೂ ಪಕ್ಷಪಾತಿತನ ದಕ್ಕಿದ್ದರ ಮೂಲ ಪ್ರಧಾನವಾಗಿ ಮೇಲ್ಜಾತಿ ಮೇಲ್ವರ್ಗದವರೇ ಹೆಚ್ಚಿದ್ದ ನಮ್ಮ ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ಮತ್ತು ಅಂತಹ ಇಕ್ಕಟ್ಟಿನ ಸಂದರ್ಭದಲ್ಲೂ ಅಂಬೇಡ್ಕರ್ ಅಂಥವರ ವಿರುದ್ಧ ಸತತ ಹೋರಾಡಿ ದರೂ ಅಂತಿಮವಾಗಿ ನಾವು ಪಡೆದುಕೊಂಡ ಸಂವಿಧಾನದಲ್ಲೂ ಇದೆ ಎಂಬುದನ್ನು ಮರೆ ಯಲಾಗುವುದಿಲ್ಲ. ನಮ್ಮ ಸಂವಿಧಾನದಲ್ಲಿ ಪ್ರಭುತ್ವಕ್ಕೆ ಹಿಂದೂ ಪಕ್ಷಪಾತಿತನ ತಂದುಕೊಟ್ಟ ಅಂಶಗಳ ಬಗ್ಗೆ ಪ್ರೀತಂ ಸಿಂಗ್ ಎಂಬ ಪಂಜಾಬಿ ವಿದ್ವಾಂಸ ರೊಬ್ಬರು ಕೆಲವು ಅಧ್ಯಯನ ಮಾಡಿದ್ದಾರೆ.
ಉದಾಹರಣೆಗೆ:ನಮ್ಮ ಸಂವಿಧಾನದ ಮುನ್ನುಡಿಯ ಪ್ರಥಮ ಸಾಲಿನಲ್ಲೇ ಸಂವಿಧಾನ ರಚನಾ ಸಭೆ ಬ್ರಾಹ್ಮಣ ಶಾಹಿಯೊಂದಿಗೆ ಮಾಡಿಕೊಂಡ ರಾಜಿಯತ್ತ ಅವರು ಗಮನ ಸೆಳೆಯುತ್ತಾರೆ. ಸಂವಿಧಾನದ ಮೊದಲ ವಾಕ್ಯ ಹೀಗೆ ಪ್ರಾರಂಭವಾಗುತ್ತದೆ:‘‘Article 1. Name and territory of the Union (1) India, that is Bharat, shall be a Union of States”‘‘ಇಂಡಿಯಾ ಎಂದರೆ ಭಾರತ ಎಂಬ ಈ ಐಕ್ಯದೇಶವು ಹಲವು ರಾಜ್ಯಗಳ ಐಕ್ಯದೇಶವಾಗಿರುತ್ತದೆ ’’.
ಈ ಮೊದಲ ಪರಿಚ್ಚೇದದ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಏಕೆಂದರೆ ‘ಭಾರತ್’ ಎಂಬುದು ಹಿಂದೂ ಮೇಲ್ಜಾತಿಗಳು ಭಾರತದ ಪ್ರಾಚೀನ ತೆಯ ಬಗ್ಗೆ ಕಟ್ಟಿಕೊಂಡು ಬಂದಿರುವ ‘‘ಭರತ ವರ್ಷ’’ ಎಂಬ ಕಲ್ಪನೆಯ ಕೂಸು. ಅದಕ್ಕಾ ಗಿಯೇ 1949ರಲ್ಲಿ ಒಬ್ಬ ಹಿಂದೂ ಸನ್ಯಾಸಿನಿ ಈ ದೇಶವನ್ನು ಇಂಡಿಯಾ ಎಂದು ಕರೆಯ ಬಾರದೆಂದೂ, ಇದನ್ನು ಭಾರತವೆಂದೇ ಕರೆಯ ಬೇಕೆಂದೂ ಮತ್ತು ಹಿಂದಿಯನ್ನು ಇಲ್ಲಿನ ಏಕೈಕ ರಾಷ್ಟ್ರ ಭಾಷೆ ಮಾಡಬೇಕೆಂದು ಒತ್ತಾಯಿಸುತ್ತಾ ಉಪವಾಸ ಕೂರುತ್ತಾಳೆ. ಆ ಕಾಲದಲ್ಲಿ ಬ್ರಿಟಿಷರು ಭಾರತವನ್ನು ಇಂಡಿಯಾ ಎಂದೇ ಕರೆಯುತ್ತಿದರೂ ಸಾಮಾನ್ಯ ಜನ ಈ ದೇಶವನ್ನು ಹಿಂದೂಸ್ಥಾನವೆಂದೇ ಕರೆಯುತ್ತಿದ್ದರು. ಅದೇ ರೀತಿ ಉತ್ತರ ಭಾರತದಲ್ಲಿ ಹಿಂದೂಸ್ಥಾನೀ ಎಂದು ಕರೆಯಲ್ಪಡುವ ಭಾಷೆ ಯನ್ನೇ ಹಿಂದೂಗಳು ಮತ್ತು ಮುಸ್ಲಿಮರು ಬಳಸುತ್ತಿದ್ದರು.
ಹಿಂದೂ ಮೂಲಭೂತವಾದಿಗಳು ಮತ್ತು ಬ್ರಾಹ್ಮಣಶಾಹಿ ಒಲವುಳ್ಳವರು ಮಾತ್ರ ಸನಾತನ ಧರ್ಮ ಪರಂಪರೆಯ ಮುಂದುವರಿಕೆಯಾಗಿ ‘ಭಾರತ’ ಎಂದು ಕರೆಯಬೇಕೆಂದು ಪಟ್ಟು ಹಿಡಿದಿದ್ದರು. ಅಂತಹ ಸಾಕಷ್ಟು ಮಂದಿ ಕಾಂಗ್ರೆಸ್ಸಿನಿಂದಲೇ ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗಿದ್ದರು. ಅಂತಿಮವಾಗಿ ಈ ಜನ ಇಂಡಿಯಾ ಹೆಸರಿನ ಜೊತೆಗೆ ಭಾರತ ಎಂಬ ಹೆಸರಿಗೆ ಒಪ್ಪಿಕೊಂಡರು. ಹೀಗಾಗಿ ಈ ಬ್ರಾಹ್ಮಣಶಾಹಿಗಳ ವಿರೋಧವಿ ದ್ದದ್ದು ಮುಸ್ಲಿಮರ ನೆನಪನ್ನು ತರುವ ‘ಹಿಂದೂ ಸ್ಥಾನಿ’ಯ ವಿರುದ್ಧವೇ ಹೊರತು ಬ್ರಿಟಿಷರ ನೆನಪನ್ನು ತರುವ ‘ಇಂಡಿಯಾದ’ ಬಗೆಗಲ್ಲ. ಹೀಗೆ ಸ್ವತಂತ್ರ ಭಾರತದ ಹೆಸರಿನಲ್ಲೇ ಆರ್ಯ ಅರ್ಥಾತ್ ಬ್ರಾಹ್ಮಣ ಸಂಸ್ಕೃತಿಯ ದ್ಯೋತಕ ಉಳಿದುಕೊಂಡಿತು.
ಭಾರತವು ದುರ್ಬಲ ಕೇಂದ್ರ ಆದರೆ ಪ್ರಬಲ ಪ್ರಾಂತ್ಯ ಸರಕಾರಗಳುಳ್ಳ ಒಕ್ಕೂಟವಾಗಬೇಕೋ ಅಥವಾ ಪ್ರಬಲ ಕೇಂದ್ರ ಸರಕಾರವುಳ್ಳ ‘ಯೂನಿಯನ್’ ಆಗಬೇಕೋ ಎನ್ನುವ ವಾದ ಈ ದೇಶವನ್ನು ವಿಭಜನೆಯ ಕಡೆಗೇ ಕೊಂಡೊಯ್ದಿತು. ಸ್ವತಂತ್ರ ಭಾರತದಲ್ಲಿ ಸಂಖ್ಯಾ ಬಾಹುಳ್ಯದಲ್ಲಿ ಹಿಂದೂಗಳೇ ಮೇಲುಗೈ ಇರುವುದರಿಂದ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶದ ಪ್ರಾಂತ್ಯಗಳಿಗೆ ಸ್ವಾಯತ್ತ ಅಧಿಕಾರವುಳ್ಳ ಪ್ರಾಂತ್ಯಗಳ ಒಕ್ಕೂಟವಾಗಿ ಸ್ವತಂತ್ರ ಭಾರತ ರಚನೆಯಾಗಬೇಕೆಂಬುದು ಮುಸ್ಲಿಂ ಲೀಗಿನ ಮೊದಲ ಒತ್ತಾಯ ವಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಅದಕ್ಕೆ ಬೆಂಬಲವಾಗಿ ನಿಂತಿದ್ದ ಬಿರ್ಲಾನಂಥ ಪ್ರಮುಖ ಉದ್ದಿಮೆಪತಿಗಳು ಪ್ರಬಲ ಕೇಂದ್ರ ಸರಕಾರದ ಪಕ್ಷಪಾತಿಗಳಾಗಿದ್ದರು. ಹೀಗಾಗಿಯೇ ದೇಶ ವಿಭಜನೆ ಯಾದರೂ ಪರವಾಗಿಲ್ಲ, ಸ್ವತಂತ್ರ ಭಾರತ ದಲ್ಲಿ ಪ್ರಬಲ ಕೇಂದ್ರ ಸರಕಾರವುಳ್ಳ ‘ಯೂನಿಯನ್’ ರಚನೆಯಾಯಿತು.
ಸಿಖ್ ಸಮುದಾಯವಂತೂ ಇದೇ ಕಾರಣಕ್ಕಾಗಿ ಸಂವಿಧಾನದ ಕರಡಿಗೆ ಸಹಿಯನ್ನು ಹಾಕಲೂ ನಿರಾಕರಿಸಿತ್ತು. ಪ್ರಬಲ ಕೇಂದ್ರ ಸರಕಾರವಿದ್ದ ಮಾತ್ರಕ್ಕೆ ಅದು ಬಲಿಷ್ಠ ಕೋಮಿನ ಪಕ್ಷಪಾತಿ ಯಾಗಲೇ ಬೇಕೆಂದೇನೂ ಇಲ್ಲ. ಸಮಾಜದಲ್ಲಿ ಜಾತ್ಯತೀತತೆ ಬಲವಾಗಿ ಬೇರುಬಿಟ್ಟಿದ್ದರೆ ಅಂತ ಹ ಸಾಧ್ಯತೆ ಇರುವುದಿಲ್ಲ. ಆದರೆ ಆಧುನಿಕ ಭಾರತ ಇನ್ನೂ ಆ ನಿಟ್ಟಿನಲ್ಲಿ ಬೆಳೆಯಬೇಕಿತ್ತು.
ಹಾಗೆಯೇ ಸಂವಿಧಾನದ 25 (2) (ಬಿ) ಪರಿಚ್ಚೇದವು ಎಲ್ಲರಿಗೂ ತಮ್ಮ ತಮ್ಮ ಧಾರ್ಮಿಕ ಶ್ರದ್ಧೆಯನ್ನು ಆಚರಿಸಲು, ಪ್ರತಿಪಾದಿಸಲು ಮತ್ತು ಪ್ರಚಾರ ಮಾಡಲು ಅವಕಾಶ ಮಾಡಿಕೊಡು ವುದರ ಜೊತೆಜೊತೆಗೆ ಹಿಂದೂ ಧಾರ್ಮಿಕ ಆಚರಣೆಯಲ್ಲಿ ಸುಧಾರಣೆ ತರುವ ಜವಾಬ್ದಾರಿ ಯನ್ನೂ ಪ್ರಭುತ್ವದ ಮೇಲೆ ಹೊರಿಸುತ್ತ ಮತ್ತು ಹಿಂದೂ ಧರ್ಮದ ಅಡಿಯಲ್ಲಿ ಬೌದ್ಧ ರನ್ನೂ, ಜೈನರನ್ನೂ ಮತ್ತು ಸಿಖ್ಖರನ್ನೂ ಸೇರಿಸುತ್ತದೆ.
ಇದರ ಬಗ್ಗೆ ಪ್ರತಾಪ್ ಮೆಹ್ತಾ, ಅನ್ವರ್ ಅಲಂ ಹಾಗೂ ಇನ್ನಿತರ ವಿದ್ವಾಂಸರು ತಮ್ಮ ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಹಿಂದೂ-ಬ್ರಾಹ್ಮಣ ಧರ್ಮದ ವಿರುದ್ಧ ಬಂಡಾಯವೆದ್ದ ಧರ್ಮಗಳನ್ನು ಹಿಂದೂ ಧರ್ಮಕ್ಕೆ ಸೇರಿಸುವ ಮೂಲಕ ಸಂವಿಧಾನಾತ್ಮಕವಾಗಿ ಹಿಂದುತ್ವವಾದಿಗಳ ಅಜೆಂಡಾಗೆ ಬಲ ತಂದುಕೊಟ್ಟಂತಾಯಿತು. ಅಲ್ಲದೆ ಒಂದು ಜಾತ್ಯತೀತ ಸರಕಾರ ಕೇವಲ ಹಿಂದೂ ಧರ್ಮದ ಸುಧಾರಣೆಯ ಬಗ್ಗೆ ಮಾತನಾಡುವುದರ ಮೂಲಕ ಪರೋಕ್ಷವಾಗಿ ಭಾವೀ ಭಾರತದ ಪ್ರಧಾನ ಹಕ್ಕುದಾರರು ಹಿಂದೂಗಳೇ ಎಂದು ಪ್ರತಿಪಾದಿಸಿದಂತಾಯಿತು.ಇದೂ ಸಹ ಮುಂದೆ ಯಡಿಯೂರಪ್ಪನವರಂಥ ರಾಜಕಾರಣಿಗಳಿಗೆ ಸದನ ಎಂಬುದೂ ಸಹ ಪ್ರಧಾನವಾಗಿ ಹಿಂದೂ ದೇವಸ್ಥಾನವೇ ಹೊರತು ಇದರ ಮೇಲೆ ಇತರ ಧರ್ಮೀಯರಿಗೆ ಇಲ್ಲಿ ಎರಡನೇ ಸ್ಥಾನವೇ ಎಂಬ ಪರಿಕಲ್ಪನೆ ರೂಢಿಸಿಕೊಳ್ಳಲು ಅನುಕೂಲವಾಯಿತು. ಹಾಗೆಯೇ 48ನೇ ಪರಿಚ್ಚೇದದಲ್ಲಿ ಗೋಹತ್ಯೆ ನಿಷೇಧದ ಪ್ರಸ್ತಾವನೆ.
ಇದರ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ಸಾಕಷ್ಟು ಚರ್ಚೆಗಳಾಗಿದ್ದಾವೆ. ಗೋವು-ಹಿಂದಿ-ಹಿಂದೂ ಇವುಗಳೇ ಭಾರತದ ಸೂಚಕ ಮತ್ತು ಲಾಂಛನಗಳೆಂಬ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲದೆ ಸಂವಿಧಾನ ಸಭೆಯಲ್ಲಿ ಚರ್ಚೆಗಳಾಗಿವೆ. ಆಮೇಲೆ ಉಳುವ ಯೋಗ್ಯ ರಾಸುಗಳ ಮತ್ತು ಹಾಲು ಕೊಡುವ ಹಸುಗಳ ಹತ್ಯೆಯನ್ನು ನಿಷೇಧಿಸಬೇಕೆಂಬ ಪ್ರಸ್ತಾಪನೆ ಸೇರ್ಪಡೆಯಾಯಿತು.

 ಇದಲ್ಲದೆ ಸಂವಿಧಾನದ 343ನೆ ಕಲಂನಲ್ಲಿ ದೇವನಾಗರಿ ಲಿಪಿಯಲ್ಲಿರುವ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ಪರಿಗಣಿಸಬೇಕೆಂಬ ಮತ್ತು 351ನೆ ಕಲಂನ ಪ್ರಕಾರ ಹಿಂದಿಯನ್ನು ಬೆಳೆಸಲು ಪ್ರಧಾನವಾಗಿ ಸಂಸ್ಕೃತವನ್ನೇ ಬಳಸಬೇಕೆಂಬ ಸಲಹೆ ರೂಪದ ಆದೇಶ ಇರುವ ಕಲಮುಗಳೂ ಸಹ ಬ್ರಾಹ್ಮಣವಾದಿ ಚಿಂತನೆಗಳಿಗೆ ಮತ್ತು ಬ್ರಾಹ್ಮಣಶಾಹಿಗೆ ಸಂವಿಧಾನಾತ್ಮಕ ಮಾನ್ಯತೆಯನ್ನೇ ತಂದುಕೊಟ್ಟಿತು. ವಾಸ್ತವವಾಗಿ ಹಿಂದಿಗಿಂತ ಹಿಂದೂಸ್ಥಾನಿ ಮತ್ತು ದೇವನಾಗರಿ ಲಿಪಿಗಿಂತ ಕೈಥಿ ಲಿಪಿ ಆಗ ಹೆಚ್ಚು ಬಳಕೆಯಲ್ಲಿತ್ತು. ಆದರೆ ಬ್ರಾಹ್ಮಣವಾದಿ ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಮತ್ತು ಭಾವೀ ಭಾರತದಲ್ಲಿ ಮತ್ತೆ ಬ್ರಾಹ್ಮಣವಾದಿ ಹಿಂದೂಗಳ ಪಾರಮ್ಯವನ್ನು ಉಳಿಸಿಕೊಳ್ಳುವ ಭಾಗವಾಗಿಯೇ ಇಂತಹಾ ಹಲವು ಕಲಮುಗಳು ಉಳಿದುಕೊಂಡು ಬಂದಿದೆ. ಇವೆಲ್ಲಾ ಕೆಲವು ಉದಾಹರಣೆಗಳಷ್ಟೆ. ಅಂಬೇಡ್ಕರ್‌ರವರ ಮೂಲ ಆಶಯಗಳು ಶಾಸನ ಬಲವಿಲ್ಲದ ನಿರ್ದೇಶನಾ ತತ್ವಗಳಲ್ಲಿ ಸೇರ್ಪಡೆಯಾಗಿವೆ. ಶಾಸನ ಬಲವಿರುವ ಉಳಿದ ಸಂವಿಧಾನ ದೇಶದ ಸಾಮಾಜಿಕ ರಚನೆಯನ್ನು ಕಿಂಚಿತ್ತೂ ಬದಲಾವಣೆ ಮಾಡದೆ ಮುಂದುವರಿಯುವಂತಾಗಿದೆ. ಹೀಗಾಗಿಯೇ ಸದನವೆಂಬುದು ದೇವಸ್ಥಾನ, ಮಾಂಸಾಹಾರ ಅಪವಿತ್ರ ಎಂಬ ಬ್ರಾಹ್ಮಣವಾದಿ ಮಾತುಗಳು ಸಂವಿಧಾನಾತ್ಮಕವಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಬಾಯಿಂದ ಬರುವುದು ಆಕಸ್ಮಿಕವಲ್ಲ. ಹೀಗಾಗಿ ಸಂವಿಧಾನಕ್ಕೆ ತೊಡಿಸಲಾಗಿರುವ ಅಗೋಚರ ಜನಿವಾರವನ್ನು ಕಳಚಿ ನಿಜಕ್ಕೂ ಸೆಕ್ಯುಲರ್ ಮಾಡಬೇಕಿರುವುದೂ ಸಹ ನಿಜವಾದ ಎಡಪಂಥೀಯ, ಅಂಬೇಡ್ಕರ್ ವಾದಿ, ಸೆಕ್ಯುಲರ್, ಪ್ರಗತಿಪರರೆಲ್ಲರ ಮುಂದಿನ ಸವಾಲಾಗಿದೆ.
                                                                                                                                                                                   ಕೃಪೆ : ವಾರ್ತಾ ಭಾರತಿ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.