Thursday, January 30, 2014

ಮಾತ್ಗವಿತೆ-166

ಮಾತಿನೊಳಗೆಯೇ ಮೈ ಮರೆಸುತ
ಸಾಥಿಯಾಗುವ ಸಂಭ್ರಮ ತಂದು
ಸಾಕ್ಷಿಗೇನೂ ಉಳಿಯದಂತೆ
ಸಾವಿನ ಕದ ತೆರೆದು ಹೋದದ್ದು ನ್ಯಾಯವೇ ?

Friday, January 17, 2014

ಮಾತ್ಗವಿತೆ-165

ಕರೆದ ಮನೆಯೊಳಗೆ ತಬ್ಬಿಕೊಂಡ ಕತ್ತಲೆ
ಕೆರೆದು ಕೊಳ್ಳತ್ತ ಬಿದ್ದ ಬೆತ್ತಲೆ ಮೈ
ಕೊತ್ತಲ ಗೆದ್ದವರ ಧಿಮಾಕಿನ ದಿರಿಸಿಗೆ
ಮೆತ್ತಿಕೊಂಡ ರಕುತದ ಕಲೆ ; ಕಮಟು ವಾಸನೆ !
ಕಿರ್ರೆನ್ನುವುದು ಬಾಗಿಲೋ ಕಿಟಕಿಯೋ ?
ಮರಳು ಸೋಸುವ ಸಪ್ಪಳ ತಾಳ
ಬೀಸುವ ಗಾಳಿಯಲೂ ಮೈ ಬೆವರಿನ ಇಳಿತ
ಜೀವಭಯದ ಸಂಕಟದಲೂ ನೆನಪಾದಳು ಆಕೆ !

Thursday, January 16, 2014

ಮರಾಠಿ ದಲಿತ ಕವಿ ; ಸಂಘಟಕ ನಾಮದೇವ ಢಸಾಳರಿಗೆ ಶ್ರದ್ಧಾಂಜಲಿ

ಪದ್ಮಶ್ರೀ ನಾಮದೇವ ಢಸಾಳ

ಡಾ. ಸಿದ್ರಾಮ ಕಾರಣಿಕ
ಮರಾಠಿಯ ಬಹುದೊಡ್ಡ ದಲಿತ ಬರಹಗಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಾಮದೇವ ಢಸಾಳರು ನಿನ್ನೆ (15-01-2014) ಬಾಂಬೆ ಆಸ್ಪತ್ರೆಯಲ್ಲಿ ತೀರಿಕೊಂಡರು. ಮಹಾರಾಷ್ಟ್ರದ ಪುಣೆ ಸಮೀಪದ ಒಂದು ಹಳ್ಳಿಯಲ್ಲಿ 15-02-1949 ರಲ್ಲಿ ಜನಿಸಿದ ನಾಮದೇವರು ಆನಂತರ ತಮ್ಮ ತಂದೆಯೊಂದಿಗೆ ಮುಂಬಾಯಿಗೆ ಬಂದರು. ಅಲ್ಲಿ ಗೋಲಪೀಠಾ ಎನ್ನುವ ರೆಡ್ ಲೈಟ್ ಪ್ರದೇಶದ ಜೋಪಡಿಯಲ್ಲಿ ಬೆಳೆದರು. ಕೇವಲ ಮ್ಯಾಟ್ರಿಕ್ (ಎಸ್.ಎಸ್.ಎಲ್.ಸಿ) ವರೆಗೆ ಮಾತ್ರ ಶಿಕ್ಷಣ ಪಡೆದ ಅವರು ತಮ್ಮ ಹರಿತವಾದ ಲೇಖನಿಯ ಮೂಲಕ ಮರಾಠಿ ದಲಿತ ಸಾಹಿತ್ಯ ಸಂವೇದನೆಯನ್ನು ತೀವ್ರವಾಗಿ ಹಿಡಿದಿಟ್ಟವರು. ಕೆಲವು ಕಾಲ ಮುಂಬಾಯಿಯಲ್ಲಿ ಟ್ಯಾಕ್ಸಿ ಚಾಲಕರಾಗಿ ದುಡಿದ ಅವರು ಆನಂತರದಲ್ಲಿ ಅಂಬೇಡ್ಕರ್ ಚಳುವಳಿಯಲ್ಲಿ ಗುರುತಿಸಿಕೊಂಡು, ಅಮೇರಿಕೆಯ 'ಬ್ಯಾಕ್ ಪ್ಯಾಂಥರ್' ಪ್ರೇರಣೆಯಿಂದ ಮಹಾರಾಷ್ಟ್ರದಲ್ಲಿ 'ದಲಿತ ಪ್ಯಾಂಥರ್' ಹುಟ್ಟು ಹಾಕಿದರು. ಕಾಲಾನಂತರದಲ್ಲಿ ಆ 'ಪ್ಯಾಂಥರ್' ಕೂಡ ಹೋಳಾಯಿತು. ಒಂದು ಗುಂಪಿಗೆ ಇವರೇ ನಾಯಕರಾಗಿದ್ದರು. ಕೆಲವು ಕಾಲಗಳಿಂದ ಮಾಯಸ್ಥೇನಿಯಾ ಗ್ರ್ಯಾವೀಸ್ ಎನ್ನುವ ಕ್ಯಾನ್ಸರ್ ರೋಗ ಅವರನ್ನು ಬಾಧಿಸುತ್ತಿತ್ತು. ಆದರೂ ಕ್ರಿಯಾಶೀಲರಾಗಿದ್ದರು.
ಬುಧವಾರ (15-01-2014) ನಸುಕಿನ ನಾಲ್ಕು ಗಂಟೆ ಸುಮಾರಿಗೆ ತೀರಿಕೊಂಡ ನಾಮದೇವ ಢಸಾಳರನ್ನು ಇಂದು (16-01-2014) ಚೈತ್ಯಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
ನಾಮದೇವ ಢಸಾಳರ ಸಾವು ದಲಿತ ಹೋರಾಟಕ್ಕೆ, ಬಂಡಾಯದ ಕೆಚ್ಚಿಗೆ ಮತ್ತು ಬಂಡಾಯ ಸಾಹಿತ್ಯಕ್ಕೆ ತುಂಬಲಾರದ ಹಾನಿ. ಅವರ ಪ್ರೇರಣೆ ಸದಾ ನಮ್ಮ ಮೇಲೆ ಇರಲಿ. ಅವರಿಗೆ ಗೌರವದ ವಂದನೆ.

ಮಾತ್ಗವಿತೆ-164

ನಾಲಿಗೆಯ ಮೇಲಿನ ದ್ರವ ಆರುವ ಹೊತ್ತಿಗೆ
ಹನಿ ನೀರ ಸೆಲೆಯಾಗಿ ಬರಬಾರದೇ
ಬಿರುಬಿಸಿಲ ಮೈಯ ಸುಡುವ ಹೊತ್ತಿಗೆ
ತಂಪಾದ ಬೀಸಬಾರದೇ ಗಾಳಿಯಾಗಿ
ಬಿರುಕು ತೋರಿ ಬೀಳು ಬಿದ್ದ ನೆಲಕೆ
ಮಳೆಯಾಗಿ ಸುಳಿಯಬಾರದೆ ?

Wednesday, January 15, 2014

ಅಂಬೇಡ್ಕರ್ ಅವರ ಮೊಮ್ಮಕ್ಕಳ ಬ್ರಾಹ್ಮಣತ್ವ ಸ್ವೀಕಾರ ?

ಡಾ. ಬಾಬಾಸಾಹೇಬ ಅಂಬೇಡ್ಕರ್
ಡಾ. ಸಿದ್ರಾಮ ಕಾರಣಿಕ
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರಖರ ವೈಚಾರಿಕತೆಯ ಅರಿವು ಅವರ ಜೊತೆಗೆಯೇ ಹೋಯಿತೇನೋ ಎನಿಸುತ್ತದೆ. 'ಇಲ್ಲಿಯವರೆಗೆ ನಾನು ಎಳೆದು ತಂದಿರುವ ರಥವನ್ನು ಸಾಧ್ಯವಾದರೆ ಮುಂದಕ್ಕೆ ಒಯ್ಯಿರಿ. ಇಲ್ಲವಾದರೆ ಅದನ್ನು ಅಲ್ಲಿಯೇ ಬಿಟ್ಟು ಬಿಡಿ. ಆದರೆ ದಯವಿಟ್ಟು ಹಿಂದಕ್ಕೆ ಮಾತ್ರ ತಳ್ಳಬೇಡಿ' ಎಂಬ ವಿಚಾರ ಕೇವಲ ವೇದಿಕೆಯ ಮಾತಾಗಿ ಇಂದು ಉಳಿದುಕೊಂಡಿದೆಯೇನೋ ಎಂಬ ಆತಂಕ ಕಾಡುತ್ತಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ಬೆಳೆದ ಎಷ್ಟೋ ಮಂದಿ ಇಂದು ಆ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಬೇರೆಯವರು ಯಾಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮೊಮ್ಮಕ್ಕಳೇ ಇಂದು ಬ್ರಾಹ್ಮಣತ್ವವನ್ನು ಪೋಷಿಸುತ್ತಿದ್ದಾರೆ. ದೇವಾಲಯಗಳಲ್ಲಿ ಹೋಮ-ಹವನ, ಪೂಜೆ ಮಾಡುವುದಷ್ಟೇ ಅಲ್ಲ ; 'ರಾಜಗೃಹ'ದಲ್ಲೂ ಆ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಮನಸ್ಸು ಸಂತಾಪಿತಗೊಳ್ಳುತ್ತಿದೆ.
 
ಇಂಥ ಸಂಗತಿಗಳನ್ನು ಖಂಡಿಸಲೇ ಬೇಕಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿ ಬೇಡವಾಗಿದ್ದರೆ ಅವರ ಹೆಸರನ್ನೂ ಬಳಸಿಕೊಳ್ಳುವ ಅವಶ್ಯಕತೆಯಿಲ್ಲ !

Tuesday, January 14, 2014

ಮಾತ್ಗವಿತೆ-163

ಪಾರಿವಾಳದ ಕಾಲಿಗೆ ಸಂಕೋಲೆಯ ಬಿಗಿದು
ಪಂಜರದೊಳಗೆ ದೂಡಿ ಕದವ ಬಡಿದು
ಖುಷಿ ಪಡೋರ ಪತಂಗ ಹರಿಯಲಿ
ದಾರಿ ತಪ್ಪುವ ಹಾದಿಯ ತೋರಿ
ದೂರ ನಿಂತು ನಗುತಿರುವ ನೆರೆಯವರ
ನೆನಪಳಿದು  ಹೋಗಲಿ
ಹಾರುವ ಹಕ್ಕಿಯ ಪಕ್ಕ
ಮತ್ತೇ ಬೆಳೆದು ಜೀವ ತುಂಬಲಿ

Sunday, January 12, 2014

ವಚನ-36

ತಂಗಾಳಿಗೆ ಮೈಯೊಡ್ಡಿ ಮೈ ಮರೆತರೆ
ಬಿರುಗಾಳಿಯಾಗಿ ಒದ್ದೀತು ಜೋಕೆ !
ಬೆಟ್ಟವೆಂದು ಭಾವಿಸಿ ಆಸರ ಪಡೆದರೆ
ಭೂಕಂಪನದಿಂದ ಸಮಾಧಿ ಮಾಡೀತು ಜೋಕೆ !
ಸಮ್ಮಾನದ ಸುಖ ಹೆಸರಿಗಷ್ಟೇ ಹೊರತು
ಖಮ್ಮಾನ ಬದುಕಿಗಲ್ಲ ಕಾರಣಿಕ ಸಿದ್ಧರಾಮ
ರಾಜಿಗೆ ಪೀಠದ ಆಸೆ ಬೇಡ !

Friday, January 10, 2014

ವಚನ-35

ನಡೆಯೊಳಗೆ ನೋಡು ನಡುವಿನ ಬದುಕು
ನೋಡದೇ ನಡೆಯಬೇಡ ನರಳಿಕೆ ಹೆಚ್ಚು !
ತಾನಾಡುವ ನುಡಿ ಕಾಗೆಯಾಗಬೇಕು
ಕರೆದು ಉಣ್ಣುವ ಕಾಯಕದ ಕಾಮನೆಯಲ್ಲಿ
ಕಳೆದು ಹೋದರೂ ನಡೆದೀತು ಕಾರಣಿಕ ಸಿದ್ಧರಾಮ
ಸಂಬಂಧಗಳಿಗೆ ಸಲುಹುವ ಗುಂಗು ಇರುತ್ತದೆ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.