Wednesday, May 30, 2012

‘ಆಕಳು ಒಂದು ಉಪಯುಕ್ತ ಪ್ರಾಣಿ, ಮಾತೆಯಲ್ಲ, ದೇವತೆಯಂತೂ ಅಲ್ಲವೇ ಅಲ್ಲ’ : ವಿನಾಯಕ ದಾಮೋದರ ಸಾವರ್ಕರ್

ವಿನಾಯಕ ದಾಮೋದರ ಸಾವರ್ಕರ್  ಒಂದು ಹಂತದ ವರೆಗೆ ಬ್ರಿಟಿಷರ ವಿರುದ್ಧ ದಿಟ್ಟವಾಗಿ ಧ್ವನಿ ಎತ್ತಿದವರು. ಬಳಿಕ ಬಲಪಂಥೀಯ ಹಿಂದೂ ಸಂಘಟನೆಯಲ್ಲಿ ಅವರು ತೊಡಗಿಕೊಂಡರು. ಗಾಂಧೀ ಹತ್ಯೆಯಲ್ಲಿ ಸಾವರ್ಕರ್ ೬ನೆ ಆರೋಪಿಯಾಗಿ ಅವರು ಗುರುತಿಸಿಕೊಂಡರು. ಆದರೆ ಆರೋಪ ಸಾಬೀತಾಗಲಿಲ್ಲ. ಹಿಂದೂರಾಷ್ಟ್ರ ಪ್ರತಿಪಾದಕರಾಗಿದ್ದ ವಿನಾಯಕ ದಾಮೋದರ ಸಾವರ್ಕರ್ಸಾವರ್ಕರ್ ಗೋವಿನ ಕುರಿತಂತೆ ಯಾವ ನಿಲುವು ಹೊಂದಿದ್ದರು ಎನ್ನೂದನ್ನು ಇಲ್ಲಿ ಕೊಡಲಾಗಿದೆ. (‘ಆಕಳು ಒಂದು ಉಪಯುಕ್ತ ಪ್ರಾಣಿ, ಮಾತೆಯಲ್ಲ, ದೇವತೆಯಂತೂ ಅಲ್ಲವೇ ಅಲ್ಲ’- ಮಹಾರಾಷ್ಟ್ರ ಶಾರದಾ, ಎಪ್ರಿಲ್ 1935) ದಿಂದ ಇದನ್ನು ಆರಿಸಲಾಗಿದೆ. *ಡಾ ಪಂಡಿತಾರಾಧ್ಯ ಕನ್ನಡ ಪ್ರಾಧ್ಯಾಪಕ,ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ ಮೈಸೂರು ಇವರು ಸಾವರ್ಕರ್ ಮಾತುಗಳನ್ನು ಸಂಗ್ರಹಿಸಿ ಇಲ್ಲಿ ನೀಡಿದ್ದಾರೆ.
_____________

‘‘ಹಸು, ಎತ್ತುಗಳನ್ನು ಪೂಜಿಸುವುದು ಹಿಂದೂ ಧರ್ಮಕ್ಕೆ ವಿಶಿಷ್ಟವಾದ ಸಂಗತಿ ಯಲ್ಲ. ಪ್ರಪಂಚದ ವಿವಿಧ ಕಡೆ ಜೀವಸಷ್ಟಿಗೆ ಕಾರಣವಾದ ಪುರುಷ ಮತ್ತು ಸ್ತ್ರೀ ಅವಯವಗಳ ಪ್ರತೀಕಗಳಾಗಿ ವಷಭ ಮತ್ತು ಗೋವಿನ ಪೂಜೆ ನಡೆಯುತ್ತಿತ್ತು.’’‘‘ನಾನು ಕಂಡ ಹಲವು ಪ್ರಾಮಾಣಿಕ, ಶ್ರೇಷ್ಠ, ಸಭ್ಯ ಗೋಭಕ್ತರು ಗೋಮಾತೆಯ ಗಂಜಲ ಮತ್ತು ಸಗಣಿಗಳಿಗೆ ಬ್ರಹ್ಮವಾದದ ಆಧಾರ ನೀಡಿ ಪಂಚಗವ್ಯ ಸೇವಿಸುತ್ತಾರೆ. ಗಂಜಲವನ್ನು ದೇವಾಲಯದಲ್ಲಿ ಸಿಂಪಡಿಸುತ್ತಾರೆ. ಆದರೆ ಅವರಿಗಿಂತಲೂ ಪ್ರಜ್ಞಾವಂತರಾದ ಡಾ ಅಂಬೇಡ್ಕರ್‌ರಂಥ ಶುದ್ಧ ಮತ್ತು ಪೂರ್ವಾಸ್ಪಶರ ಕೈಯಿಂದ ನಿರ್ಮಲ ಗಂಗೋದಕ ಕುಡಿಯುವುದಿಲ್ಲ! ಅದು ಮೈಗೆ ಸಿಂಪಡಿಸಿದರೂ ಮೈಲಿಗೆಯಾಯಿತೆಂದು ಸ್ನಾನ ಮಾಡುತ್ತಾರೆ.’’

‘‘ಹಸು ದೇವತೆ ಎಂದೂ ಹಾಗೆಯೇ ವರಾಹಾವತಾರಿಯಾದ ದೇವರು ಹಂದಿ ಎಂದು ಪುರಾಣ ಹೇಳುತ್ತದೆ. ಹೀಗಿರುವಾಗ ಗೋರಕ್ಷಣೆಯೇ ಏಕೆ ಬೇಕು? ಹಂದಿ ರಕ್ಷಣೆ ಸಂಘವನ್ನು ಸ್ಥಾಪಿಸಿ ಹಂದಿಪೂಜೆಯನ್ನೇಕೆ ಬಳಕೆಗೆ ತರಬಾರದು? ಮನುಷ್ಯನು ಎಲ್ಲ ರೀತಿಯಿಂದ ತನಗಿಂತ ಹೀನಗುಣವಿರುವ ಪಶುವನ್ನು ದೇವರೆಂದು ಒಪ್ಪುವುದರಿಂದ ಮನುಷ್ಯನನ್ನೇ ಪಶುವಿಗಿಂತಲೂ ಕೀಳೆಂದು ಒಪ್ಪಿ ಮಾನವೀಯತೆಯನ್ನು ಗೌಣಗೊಳಿಸಿದಂತಾಗುತ್ತದೆ.’’

‘‘ಮನುಷ್ಯ ಎಲ್ಲ ದಷ್ಟಿಯಿಂದ ತನಗಿಂತಲೂ ಸರ್ವಶ್ರೇಷ್ಠವಾದ ಪ್ರತೀಕವನ್ನು ಮಾತ್ರ ದೇವರೆಂದು ಸ್ವೀಕರಿಸಬೇಕು. ಕತ್ತೆ ಬೇಕಾದರೆ ಗೋವನ್ನು ತನಗಿಂತ ಶ್ರೇಷ್ಠ ಎಂದು ಸ್ವೀಕರಿಸಲಿ. ಆದರೆ ಮನುಷ್ಯ ಹಾಗೆ ಮಾಡುವುದು ಮೂರ್ಖತನ.’’‘‘ಇಂದಿನ ಪರಿಸ್ಥಿತಿಯಲ್ಲಿ ಅರ್ವಾಚೀನ ಮತ್ತು ಪ್ರಯೋಗಸಿದ್ಧ ವಿಜ್ಞಾನವೇ ನಮ್ಮ ರಾಷ್ಟ್ರದ ವೇದವಾಗಬೇಕು.

ಈ ಪ್ರವತ್ತಿಗೆ ಗೋಪೂಜೆ ಹೊಂದಿಕೆಯಾಗದಿದ್ದರೆ ಅದನ್ನು ಬಿಡಬೇಕು. ಇಂಥ ಮೂರ್ಖತನಕ್ಕೆ ಧರ್ಮ ಎಂದು ಪುರಾಣಗಳು ಹೇಳಿರುವುದಕ್ಕೆ ತಲೆದೂಗಿದರೆ ರಾಷ್ಟ್ರದ ಸರ್ವನಾಶ ಖಂಡಿತ. ಗೋಪೂಜೆಯಿಂದ ಆಗುವ ಲಾಭಕ್ಕಿಂತ ಹಾನಿ ಅತ್ಯಂತ ಘಾತುಕ. ಒಂದು ವೇಳೆ ಗೋಹತ್ಯೆ ನಡೆದರೂ ಅಡ್ಡಿಯಿಲ್ಲ. ರಾಷ್ಟ್ರದ ಬುದ್ಧಿಹತ್ಯೆ ಮಾತ್ರ ಆಗಬಾರದು.

ಹಸು ಮತ್ತು ಎತ್ತು ನಮ್ಮ ಕಷಿಪ್ರಧಾನ ರಾಷ್ಟ್ರಕ್ಕೆ ಉಪಯುಕ್ತ ಪ್ರಾಣಿಗಳು ಎಂದು ಆ ಪ್ರಾಣಿಗಳನ್ನು ಎಷ್ಟು ಬೇಕೊ ಅಷ್ಟು ಬಳಸಿದರೆ ಸಾಕು. ಅದರ ಬದಲು ಅದು ದೇವತೆ, ಪುರಾಣದಲ್ಲಿ ಅದನ್ನು ಪೂಜಿಸುವುದನ್ನು ಧರ್ಮ ಎಂದು ಹೇಳಿದೆ ಎಂದು ಬೊಗಳೆ ಬಿಟ್ಟರೆ ರಾಷ್ಟ್ರಕ್ಕೆ ನೂರುಪಟ್ಟು ಹಾನಿಯಾಗುತ್ತದೆ. ಅಲ್ಪ ಲಾಭಕ್ಕಾಗಿ ಹೆಚ್ಚಿನದನ್ನು ಕಳೆದುಕೊಳ್ಳುತ್ತೇವೆ.’’

‘‘ಪಶುವನ್ನು ದೇವರೆಂದು ಹೇಳಿದರೂ ದೇವರನ್ನೇ ಪಶುಗಿಂತಲೂ ಹೀನವಾಗಿ ಕಾಣಲಾಗಿದೆ. ಹಸುವಿನ ಶರೀರದಲ್ಲಿ 33 ಕೋಟಿ ದೇವತೆಗಳಿದ್ದಾರೆಂದು ಬಣ್ಣಿಸಿ, ಅದರ ಗಂಜಲ, ಸಗಣಿ ವಿಸರ್ಜನೆಯಾಗುವ ಸ್ಥಳಗಳಲ್ಲಿಯೂ ದೇವರನ್ನು ಸ್ಥಾಪಿಸಲಾಗಿದೆ! ಕಟುಕನು ದನವನ್ನು ಒಂದೇ ಹೊಡೆತಕ್ಕೆ ಕೊಲ್ಲುವಾಗ ಆ ದೇವತೆಗಳಲ್ಲಿ ಒಬ್ಬನಾದರೂ ಕಟುಕನನ್ನು ಏಕೆ ತಡೆಯುವುದಿಲ್ಲ? ಆ ದೇವರೂ ಭಕ್ತರಂತೆ ಹೇಡಿಯೇ? ಕಟುಕನೇ 33 ಕೋಟಿ ದೇವತೆಗಳಿಗಿಂತ ಪರಾಕ್ರಮಿಯೆ?’’‘‘ ಹಸು ಮಹಾಮಾತೆಯಾಗಿರುವವನೇ ಹಿಂದೂ ಎನ್ನುವುದು ಹಿಂದುತ್ವಕ್ಕೆ ಮಾಡುವ ಅಪಮಾನ. ಹಸು ಕರುವಿಗೆ ಮಾತ್ರ ತಾಯಿ, ಹಿಂದೂಗಳಿಗಲ್ಲ.

‘ಗೋರಕ್ಷಣೆಯೇ ಧರ್ಮ’, ‘ಸ್ವಧರ್ಮೇ ನಿಧನಂ ಶ್ರೇಯಃ’ ಎಂದಾಗ ವಿವೇಕ, ಬುದ್ಧಿ ಸಂಪೂರ್ಣ ಕುರುಡಾಗಿ ಪ್ರಜ್ಞೆ ತಪ್ಪಿದ ಅನುಭವವಾಗುತ್ತದೆ.’’‘‘ಇಂಥ ಅನಾಗರಿಕ ಮತ್ತು ಮೂರ್ಖ ಸಂಸ್ಕಾರಕ್ಕೆ ತಿಲಾಂಜಲಿ ನೀಡುವುದೇ ನಮ್ಮ ಧರ್ಮ ಮತ್ತು ಸಂಸ್ಕತಿಗೆ ಶೋಭಿಸುವ ಮಾರ್ಗ. ಇಂದಿನ ವೈಜ್ಞಾನಿಕ ಯುಗದಲ್ಲಿ ಗೋರಕ್ಷಣೆಯ ದಷ್ಟಿಯಿಂದ ಹಸುವನ್ನು ದೇವತೆ ಎಂದು ಒಪ್ಪುವುದು ಮೂರ್ಖತನ. ಗೋರಕ್ಷಣೆಗೆ ಧಾರ್ಮಿಕ ಸ್ವರೂಪ ಬಿಟ್ಟು ಆರ್ಥಿಕ, ವೈಜ್ಞಾನಿಕ ಸ್ವರೂಪ ನೀಡುವುದು ಉಚಿತ. ಹಸು ಎತ್ತುಗಳನ್ನು ದೇವರೆಂದು ತೋರಿಸುತ್ತ ತಿರುಗುವ ಗೋಭಕ್ತನನ್ನು ತಡೆದು ಎತ್ತನ್ನು ನೊಗಕ್ಕೆ ಹೂಡಬೇಕು; ಅವನನ್ನು ದೇಶಸೇವೆಗೆ ದುಡಿಸಬೇಕು’’ (ಸಾವರ್ಕರ್: ಒಂದು ಅಭಿನವ ದರ್ಶನ, ಅನುವಾದ: ಚಂದ್ರಕಾಂತ ಪೋಕಳೆ ಬೆಳಗಾವಿ 2009 ಪು.27-37).

ಸಾವರಕರ್, ಗೋರಕ್ಷಣೆಯ ಹುಚ್ಚುತನದಂತೆ ಧಾರ್ಮಿಕ ನಂಬಿಕೆಯ ಗೋಭಕ್ಷಣೆಯ ಕ್ರೌರ್ಯವನ್ನೂ ಖಂಡಿಸಿದ್ದಾರೆ. ಆದುದರಿಂದ ಸರಕಾರ ಗೋರಕ್ಷಣೆಯ ಮಸೂದೆಯನ್ನು ಹಿಂದಕ್ಕೆ ಪಡೆದು ಅದರ ಬಗ್ಗೆ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವದ ಗೌರವಕ್ಕೆ ಸಲ್ಲುವಂತೆ ವ್ಯಾಪಕವಾದ ವೈಚಾರಿಕ, ವೈಜ್ಞಾನಿಕ ಸಾರ್ವಜನಿಕ ಚರ್ಚೆ ನಡೆಸುವುದು ಅಗತ್ಯ.

ಕೃಪೆ : ಬಶೀರ ಬಿ.ಎಂ. ಅವರ ಫೇಸಬುಕ್ ಟೈಮ್ ಲೈನ್

ಕನ್ನಡ-ಮರಾಠಿ ಸಂಬಂಧಗಳು-1

 ಡಾ. ಸಿದ್ರಾಮ ಕಾರಣಿಕ
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ನೆರೆ-ಹೊರೆಯ ಪ್ರದೇಶಗಳಾಗಿದ್ದು, ಅವುಗಳ ಸಂಸ್ಕೃತಿಯಲ್ಲಿ ಹೆಚ್ಚಿನ ಸಾಮ್ಯತೆ ಇರುವುದು ಗಮನೀಯ. ಈ ಸಾಮ್ಯತೆಗೆ ಕಾರಣಗಳನ್ನು ಹುಡುಕುತ್ತ ಹೊರಟಂತೆ ಆ ಎರಡೂ ಪ್ರದೇಶಗಳು 'ಅವಳಿಗಳು' ಎಂಬುದು ನಿಖರವಾದ ಪ್ರಮೇಯವೊಂದು ಸೃಷ್ಟಿಯಾಗುತ್ತದೆ. ಆದರೂ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದದ ಕಾರಣದಿಂದ ಮನಸ್ಸುಗಳು ಕಲಕಿವೆ ; ಗುಂಡಾಗಿರಿ ಗುಂಡಿ ತೋಡುತ್ತಿದೆ. ಯಾವುದೇ ಕಾರಣದಿಂದ ಈ ರಾಜ್ಯಗಳ ಮಧ್ಯದ ಸಂಬಂಧ ಸುಧಾರಣೆ ಸಾಧ್ಯವೇ ಇಲ್ಲ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ನಿರಂತರವಾಗಿ ಇಂಥ ಸಂಘರ್ಷಮಯ ವಾತಾವರಣದಲ್ಲಿ ಬೇಯುತ್ತಿವೆ. ಆ ಕಿಚ್ಚು ಕೆನ್ನಾಲಿಗೆ ಚಾಚಿ ಆಹುತಿ ತೆಗೆದುಕೊಳ್ಳುತ್ತದೆಯೋ ಹೇಳಲಾಗದು ಎಂಬಂತಹ ಮಾತುಗಳು ಮಂದಿಯ ಮಂದೆ ಮತ್ತು ಮಾಧ್ಯಮಗಳ ಮೂಲಕ ಆತಂಕಕ್ಕೀಡು ಮಾಡಬಲ್ಲಂಥವು. ಆದರೆ ತುಂಬ ಆತಂಕಪಟ್ಟುಕೊಳ್ಳುವಷ್ಟು ಯಾವುದೇ ಗೊಂದಲಗಳು ಗಮನಿಕೆಯಿಂದ ದೂರ ಉಳಿಯುತ್ತವೆ. ವಿಷಯದ ಆಳಕ್ಕಿಳಿದು ಸ್ಥಳೀಯ ಸಾಮಾನ್ಯ ಜನರ ಅಭಿಪ್ರಾಯಗಳ ಮೂಲಕ ವಾಸ್ತವಿಕ ಅಂಶಗಳತ್ತ ಹೆಚ್ಚಿನ ಗಮನ ಹರಿಸಿ ಅಧ್ಯಯನ ಮಾಡುವುದರ ಮೂಲಕ ವಾಸ್ತವ ಚಿತ್ರಣವನ್ನು ಎತ್ತಿ ತೋರಿಸುವ ಅವಶ್ಯಕತೆ ಇದೆ. ಸಾಹಿತ್ಯ, ಧರ್ಮ, ಕಲೆ, ವಿಜ್ಞಾನಗಳಿಗೆ ಇಲ್ಲದ ಗಡಿಗಳು ಕೆಲವು ಸಲ ಮನುಷ್ಯನ ಬದುಕಿಗೆ ಅಡರಿಕೊಳ್ಳುತ್ತವೆ. ಇದಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಮುಖ ಕಾರಣವಾಗಿ ನಿಲ್ಲುತ್ತವೆ. ಸಾಂದರ್ಭಿಕ ಅವಘಡಗಳನ್ನೇ ಮುಂದಿಟ್ಟುಕೊಂಡು ಸಂಬಂಧ ಕೆಡಿಸುವ ಪ್ರಯತ್ನದಲ್ಲಿರುವವರಿಗೆ ಫಲ ದೊರೆಯಲಾರದೇನೋ ನಿಜ. ಆದರೆ ತಾತ್ಕಾಲಿಕವಾಗಿಯಾದರೂ ಜನರ ಭಾವನೆಗಳು ಹತೋಟಿ ತಪ್ಪಿ ಅನಾಹುತಕ್ಕೆ ಕಾರಣವಾಗಬಲ್ಲವು ಎಂಬುದನ್ನು ಮಾತ್ರ ಮರೆಯಲು ಸಾಧ್ಯವಿಲ್ಲ.

ಮನುಷ್ಯ, ಮನುಷ್ಯನನ್ನು ಅರ್ಥ ಮಾಡಿಕೊಳ್ಳುವ ವಿಚಾರದಿಂದ ದೂರ ಸರಿಯುತ್ತಿರುವ ಎರಡೂ ಭಾಷಿಕರ ನಡುವೆ ಇರುವ ಸಂಬಂಧಗಳನ್ನು ಮತ್ತೊಮ್ಮೆ ಸಾದರಪಡಿಸುವ ನಿಟ್ಟಿನಲ್ಲಿ ಅಧ್ಯಯನಗಳು ಹೆಚ್ಚು ಹೆಚ್ಚು ನಡೆದಾಗ, ಎರಡೂ ಭಾಷಿಕರ ನಡುವೆ ಸೌಹಾರ್ದ ಸಂಬಂಧಕ್ಕೆ ಪ್ರೇರಕವಾಗುವ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಾಗ, ಅದು ಸಾಂಸ್ಕೃತಿಕ ವಿನಿಮಯದ ದೃಷ್ಟಿಯಿಂದಾದರೂ ಸರಿ. ಸಾಮಾಜಿಕ ದೃಷ್ಟಿಯಿಂದಾದರೂ ಸರಿ. ಸಂಬಂಧಗಳು ಮತ್ತೇ ಚಿಗಿತುಕೊಳ್ಳಲು ಸಹಕಾರಿಯಾಗುತ್ತದೆ.

Wednesday, May 23, 2012

ಮಾತ್ಗವಿತೆ-79

ನೀನು ಇರುವ ಕಡೆಯೆಲ್ಲ ಹೂ ಹಾಸಬೇಕೆಂದಿದ್ದೆ
ನೀನು ಇರುವೆಡೆಯೆಲ್ಲೆಲ್ಲೂ ನೋವಾಗದಿರಲೆಂದು ಹಾರೈಸಿದ್ದೆ
ನೀನು ಜತೆಗಿರುವವರೆಗೂ ನೋವ ಮರೆಯಬೇಕೆಂದುಕೊಂಡಿದ್ದೆ
ನೀನು, ನಾನು ಬೇರೆಯಾಗದ ಸಂಬಂಧ ಬೆಸೆಯಬೇಕೆಂದಿದ್ದೆ
ನೀನು ಮರೆತು ಹೋದೆ ; ನಾನು ಮರೆಯಬೇಕೆಂದಿದ್ದೆ ;
ನೀನು ಬಿಟ್ಟು ಹೋದ ನೆನಪುಗಳು ಯಾಕೋ ಸಾಯುತ್ತಿಲ್ಲ !

Monday, May 21, 2012

ಮಾತ್ಗವಿತೆ-78

ಇಲ್ಲಿಯವರೆಗಿನ ವೇದಿಕೆಯ ಮಾತುಗಳು ಇತ್ತಿತ್ತಲಾಗಿ
ಉಜಳಣಿಗೆ ಬರುತ್ತಿವೆ ; ಕರೆಯುತ್ತಿವೆ !
ಕೊರಗನ್ನು ಹತ್ತಿಸಿಕೊಂಡು ಹರಗುವವರು
ಹರೆಯದ ಹುಮ್ಮಸ್ಸಿನಲ್ಲಿ ಹೊಡಮರಳಿ
ಮತ್ತೇ ಕಿಚ್ಚು ಹಚ್ಚಿಕೊಳ್ಳುತ್ತಿದ್ದಾರೆ !
ಇನ್ನಾದರೂ ಇನ್ನು ಮುಂದಾದರೂ
ಮರೆಯುವುದನ್ನು ಮುಂದು ಮಾಡಬೇಡಿ !
ಗಂಡಾಂತರ ಬರುತ್ತದೆಯೆಂದಲ್ಲ ;
ಗಳಿಗೆ ಸರಿ ಇರುವುದಿಲ್ಲ ಅಷ್ಟೆ !

Friday, May 18, 2012

ಮಾಂಸದ ಉತ್ಸವ: ಆಹಾರದ ಹಕ್ಕು ರಕ್ಷಣೆಯತ್ತ ಇಟ್ಟ ಹೆಜ್ಜೆ

'ಅಧಿಕಾರ ನನ್ನ ಅಂಕೆಯಲ್ಲಿದೆ` ಎಂದು ತೋರಿಸುವ ಒಂದು ವಿಧಾನ ಪ್ರಾಬಲ್ಯದ ಪ್ರದರ್ಶನ. `ನಾನೇ ಪ್ರಬಲ` ಎಂದು ಪ್ರತಿಪಾದಿಸುವುದರ ಒಂದು ವಿಧಾನವೇ `ಹತೋಟಿ ಸಾಧಿಸುವುದು`.

ಇದು ಒಳ್ಳೆಯದು, ಇದು ಕೆಟ್ಟದು ಎಂಬ ಅಸಂಗತ ಮೌಲ್ಯಗಳನ್ನು ತಾವೇ ತೀರ್ಮಾನಿಸಿ ಬೇರೆಯವರ ಮೇಲೆ ಹೇರುವುದು `ನಿಯಂತ್ರಣ`ದ ಇನ್ನೊಂದು ಮುಖ.

`ನಿಮ್ಮ ಮೌಲ್ಯ ತಪ್ಪು, ಒಪ್ಪಲಾಗದ್ದು` ಎಂದು ಬಾಯಿ ಮುಚ್ಚಿಸುವುದು `ನನ್ನ ಮೌಲ್ಯವೇ ಶ್ರೇಷ್ಠ` ಎನ್ನುವುದರ ಮತ್ತೊಂದು ರೂಪ. ಹೀಗೆ ಒಬ್ಬರ ಮೌಲ್ಯ, ಆಚರಣೆ ಅವಹೇಳನ ಮಾಡುತ್ತಿದ್ದರೆ ಅವರಿಗಿಂತ `ನಾವು ಕಡಿಮೆ` ಎಂಬ ಕೀಳರಿಮೆ ಬೆಳೆಯುತ್ತದೆ.


`ನೀವು ಕಡಿಮೆ ಎಂದು ಯಾಕೆ ಅಂದುಕೊಳ್ಳುತ್ತೀರಿ` ಎಂದು ಯಾವುದೇ ಮಹಿಳೆಯನ್ನು ಕೇಳಿ ನೋಡಿ. ಆಕೆ ತಲೆಯಲ್ಲಿ ಅದನ್ನೇ ತುಂಬಲಾಗಿದೆ. ತನ್ನ ಮೇಲೆ ಅಧಿಕಾರ ಚಲಾಯಿಸುತ್ತಿರುವವರ ಅಪ್ಪಣೆಗಳನ್ನು ಎದುರಾಡದೆ ಪಾಲಿಸಿದರೆ ಮಾತ್ರ ಆಕೆಗೆ ಉಳಿವು. ತಾನೇನು ಆಗಬೇಕು ಎಂದು ನಿರ್ಧರಿಸುವ ಸ್ವಾತಂತ್ರ್ಯವೂ ಇಲ್ಲ.


ತನ್ನ ಹಕ್ಕುಗಳನ್ನು ಪುರುಷರಿಗೆ ಒಪ್ಪಿಸಿದ್ದಾಳೆ. ಹೀಗಾಗಿ ಆಕೆ ದುರ್ಬಲ ಎಂದೇ ಬಿಂಬಿಸಲಾಗುತ್ತಿದೆ. ದೌರ್ಜನ್ಯ, ದಬ್ಬಾಳಿಕೆಗೆ ಆಕೆ ಸುಲಭದ ತುತ್ತು. ಮಹಿಳೆಯನ್ನು `ಕೀಳು, ಬುದ್ಧಿಗೇಡಿ, ಮೌಲ್ಯಯುತವಾದ ಯಾವುದನ್ನೂ ಮಾಡಲು ಅಸಮರ್ಥೆ` ಎಂಬಂತೆ ಕಾಣಲಾಗುತ್ತದೆ. ಎದುರಾಡಿದರೆ ಹಿಂಸೆಯಿಂದ ಮಟ್ಟಹಾಕಲಾಗುತ್ತದೆ.

ಇಂಥ ಬಲವಂತದ ಗುಲಾಮಗಿರಿಯ ಉದಾಹರಣೆಗಳೇ ಇತಿಹಾಸದುದ್ದಕ್ಕೂ ತುಂಬಿಕೊಂಡಿವೆ. ಮಹಿಳೆ ಮನುಕುಲದ ಮೊದಲ ಅಡಿಯಾಳು. ಬಿಳಿಯರು ಚರ್ಮದ ಬಣ್ಣ ಆಧರಿಸಿ ಕರಿಯರನ್ನು ಗುಲಾಮರಾಗಿ ಮಾಡಿಕೊಂಡರು.


ಉತ್ತರ ಅಮೆರಿಕದ ಮೂಲ ನಿವಾಸಿಗಳ ಮೇಲೆ ಬಿಳಿ ಚರ್ಮದ ಅಮೆರಿಕನ್ನರು ಮತ್ತು ಆಫ್ರಿಕದ ಕರಿಯ ಮೂಲ ನಿವಾಸಿಗಳ ಮೇಲೆ ಐರೋಪ್ಯರು ನಡೆಸಿದ್ದು ಇಂಥದೇ ದೌರ್ಜನ್ಯ. ಶೂದ್ರರು ಎಂದು ಕೆಲವರ್ಗಗಳನ್ನು ಕರೆದ ಬ್ರಾಹ್ಮಣರು ನಮ್ಮ ದೇಶದಲ್ಲಿ ಮಾಡಿದ್ದು ಇದನ್ನೇ. ಇಲ್ಲಿ ಜಾತಿ ಕ್ರೌರ್ಯಕ್ಕೆ ಬಲಿಯಾದದ್ದು ದಲಿತರು.

ಪ್ರಕೃತಿಯನ್ನು ಮತ್ತು ಮನುಷ್ಯರಿಗೆ ಉಪಕಾರಿಯಾದ ಅದರ ಅನೇಕ ಕೊಡುಗೆಗಳನ್ನು ಹಿಂದೂ ಪರಂಪರೆ `ಪವಿತ್ರ` ಎಂದು ಪರಿಗಣಿಸಿದೆ. ಆದರೂ ನಮ್ಮ ಸಂರಕ್ಷಣೆ ಮತ್ತು ಉಳಿವಿಗಾಗಿ ನಮಗೆ ಅವುಗಳ ಅಗತ್ಯವಿದೆ. ಹಾಗಾಗಿಯೇ ನಾವು ಅವನ್ನು ಬಳಸಿಕೊಂಡರೂ ಪರಂಪರೆಯ ನೈಜ ಆಶಯಗಳ ಚೌಕಟ್ಟಿನ ಒಳಗೆ ದುರುಪಯೋಗಕ್ಕೆ ಅವಕಾಶ ಕೊಟ್ಟಿಲ್ಲ.


ಮರಗಿಡಗಳು ನಮಗೆ ಪವಿತ್ರ; ಆದರೂ ನಮ್ಮ ಬಳಕೆಗಾಗಿ ಅವನ್ನು ಕಡಿಯುತ್ತೇವೆ. ಪರ್ವತಗಳು ನಮಗೆ ಪವಿತ್ರ; ಆದರೂ ಗ್ರಾನೈಟ್, ಕಲ್ಲುಗಳು ನಮಗೆ ಅಗತ್ಯ. ಅದಕ್ಕಾಗಿ ಸ್ವಲ್ಪ ಭಾಗ ಉಪಯೋಗಿಸುತ್ತೇವೆ. ನದಿಗಳು ಪವಿತ್ರ, ಆದರೆ ನಮಗೆ ಬೇಡವಾದದ್ದನ್ನು ಸುರಿಯಲು, ಸಾಗಿಸಲು ಆ ನದಿಗಳ ಹರಿವ ನೀರೇ ನಮಗೆ ಬೇಕು.

ಹಾವುಗಳನ್ನು ಪೂಜಿಸುತ್ತೇವೆ; ಆದರೆ ನಮ್ಮನ್ನೇ ಸಾಯಿಸಲು ಬಂದಾಗ ಅವನ್ನು ಕೊಲ್ಲುವುದು ಅನಿವಾರ್ಯ. ಅದೇ ರೀತಿ ಮನುಷ್ಯ ಕೂಡ ಸಾಕುತ್ತ, ಸಲಹುತ್ತ ಬಂದ ಅನೇಕ ಪ್ರಾಣಿಗಳನ್ನು ಕೆಲಸ, ಸಾಗಣೆ, ಸಂರಕ್ಷಣೆ, ಆಹಾರಕ್ಕಾಗಿ ಬಳಸುತ್ತಿದ್ದಾನೆ.
 ಇನ್ನೊಂದು ಮುಖದಿಂದ ನೋಡಿದರೆ ಹಿಂದೂ ಸಮಾಜ ಆಷಾಢಭೂತಿ. ಒಂದು ಕಡೆ ದೇವಿಯನ್ನು ಪೂಜಿಸುತ್ತದೆ; ಇನ್ನೊಂದು ಕಡೆ ಮಹಿಳೆಯರು ನಿಷ್ಪ್ರಯೋಜಕರು ಎಂದು ಪರಿಗಣಿಸುತ್ತದೆ, ಅವರನ್ನು ಜೀವಂತ ಸುಡಲಾಗುತ್ತದೆ.

ಹಾಲು ಇತ್ಯಾದಿ ಕೊಡುವುದರಿಂದ ಗೋವು ನಮಗೆ ಪವಿತ್ರ. ಆದರೆ ಆಡು, ಕುರಿ, ಎಮ್ಮೆಗಳೇಕೆ ಅದರಷ್ಟು ಪವಿತ್ರ ಅಲ್ಲ? ಅವೂ ಹಾಲು ಕೊಡುತ್ತವಲ್ಲ. ಅವನ್ನು ಕೊಂದರೆ ತಪ್ಪಲ್ಲ, ಆಕಳನ್ನು ಮಾತ್ರ ಕೊಲ್ಲಬಾರದು ಎಂಬ ಇಬ್ಬಂದಿತನ ಯಾಕೆ? ಸಸ್ಯಗಳಿಗೂ ಜೀವ ಇದೆ, ಅವಕ್ಕೂ ನೋವಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ. ಆದರೂ ತಾವು ತರಕಾರಿ ಸೇವಿಸುತ್ತೇವೆ. ಯಾಕೆ?


ವಿಶ್ವದ ಇತರೆಲ್ಲ ನಾಗರಿಕತೆಗಳಲ್ಲಿ ರೂಢಿಯಲ್ಲಿ ಇದ್ದಂತೆ ನಮ್ಮ ಪೂರ್ವಿಕರೂ ಗೋಮಾಂಸ ಸೇವಿಸುತ್ತಿದ್ದರು ಎನ್ನಲು ಬೇಕಾದಷ್ಟು ಪುರಾವೆಗಳಿವೆ.  ಈಗ ವಿಷಯ ಅದಲ್ಲ.


`ಹಿಂದೆ ಗೋಮಾಂಸ ತಿನ್ನುತ್ತಿದ್ದರು; ಆದ್ದರಿಂದ ಅದೇನು ಹೊಸತಲ್ಲ, ಅದನ್ನು ಒಪ್ಪದಿರಲು ಕಾರಣವಿಲ್ಲ` ಎಂದು ಇಲ್ಲಿ ವಾದಿಸುತ್ತಿಲ್ಲ. ಆದರೆ ಭಾರತದ ದಲಿತ ಮತ್ತು ತುಳಿತಕ್ಕೆ ಒಳಗಾದ ವರ್ಗಗಳ ಪಾಲಿಗೆ ದನದ ಮಾಂಸ ಪೌಷ್ಟಿಕಾಂಶದ ಮತ್ತು ಮಾಂಸಾಹಾರದ ಪ್ರಧಾನ ಮೂಲವಾಗಿತ್ತು.


ಆದಾಗ್ಯೂ ಸಮಾಜದ ಸಣ್ಣ, ಪ್ರಭಾವಶಾಲಿ ವರ್ಗವೊಂದು ದನದ ಮಾಂಸ ಸೇವನೆಯ ಕಾರಣಕ್ಕಾಗಿ ದಲಿತರನ್ನು ಕೀಳಾಗಿ ಪರಿಗಣಿಸಿತು. ವಿಪರ್ಯಾಸ ಎಂದರೆ ಆಕಳು ಜೀವಂತವಾಗಿದ್ದಾಗ ಮಾತ್ರ ಪವಿತ್ರ ಎಂದು ಗೌರವಿಸಿ ಸತ್ತ ನಂತರ ಅದನ್ನು ತುಚ್ಛವಾಗಿ ಕಂಡದ್ದು; ಸತ್ತ ಆಕಳ ಚರ್ಮ ಹದ ಮಾಡಿ ಚಪ್ಪಲಿ ತಯಾರಿಸುವುದರಿಂದ ಹಿಡಿದು ಅದಕ್ಕೆ ಸಂಬಂಧಿಸಿದ ಎಲ್ಲ ಕೆಲಸ ಮೈಲಿಗೆ ಎಂದು ಕರೆದದ್ದು, ಇದರಲ್ಲಿ ತೊಡಗಿಸಿಕೊಂಡಿದ್ದ ಸಮುದಾಯವನ್ನು ಅಸ್ಪೃಶ್ಯರು ಎಂದು ದೂರ ಇಟ್ಟದ್ದು.

ಸಂಖ್ಯಾಬಲದಲ್ಲಿ ಕಡಿಮೆ ಇದ್ದ ವರ್ಗ ಶತಶತಮಾನಗಳಿಂದಲೂ ತಾನು ರೂಪಿಸಿದ ಮೌಲ್ಯ, ಆಚರಣೆಗಳನ್ನು ಬಹುಸಂಖ್ಯಾತರ ಮೇಲೆ ಹೇರುತ್ತ, ಮಾಂಸಾಹಾರಿಗಳನ್ನು ಅದರಲ್ಲೂ ವಿಶೇಷವಾಗಿ ಗೋಮಾಂಸ ತಿನ್ನುವವರನ್ನು ಪಿಶಾಚಿಗಳು ಎಂಬಂತೆ ಬಿಂಬಿಸುತ್ತ ಬಂತು.


ದಲಿತರು ಕೀಳು, ತಾವು ಮೇಲು ಎಂದು ಮಿಥ್ಯೆ ಸೃಷ್ಟಿಸುತ್ತಲೇ ಬಂದ ಬ್ರಾಹ್ಮಣರು ಮತ್ತು ಅವರನ್ನು ಓಲೈಸುತ್ತಿದ್ದ ಮೇಲ್ಜಾತಿಯವರು ಆಹಾರವನ್ನು, ಮುಖ್ಯವಾಗಿ ಗೋಮಾಂಸ ಭಕ್ಷಣೆಯನ್ನು ದಬ್ಬಾಳಿಕೆಯ ಅಸ್ತ್ರವಾಗಿ ಬಳಸುತ್ತಲೇ ಬಂದರು.


ದಲಿತರು ತಿನ್ನುವ ಆಹಾರ `ಕೊಳಕು`, ಆದ್ದರಿಂದ ಅವರು ಕೊಳಕರು, ಅದಕ್ಕಾಗಿ ಅಸ್ಪೃಶ್ಯರು ಎಂಬ ಹಣೆಪಟ್ಟಿ ಅಂಟಿಸಿದರು. ದಮನಕ್ಕೆ ಒಳಗಾದ ಅಸಹಾಯಕರ ಮೇಲೆ ಇದಕ್ಕಿಂತ ಹೀನಾಯ ಕ್ರೌರ್ಯ ಎಸಗಿದ ಉದಾಹರಣೆ ಜಗತ್ತಿನಲ್ಲೆಲ್ಲೂ ನೋಡಲು ಸಿಗಲಿಕ್ಕಿಲ್ಲ.

ವಿಶ್ವದ ಅತ್ಯಂತ ದೊಡ್ಡ ಮತ್ತು ಬಲಿಷ್ಠ ಪ್ರಜಾಸತ್ತೆ ಎಂದು ಬೆನ್ನು ಚಪ್ಪರಿಸಿಕೊಳ್ಳುವ ನಮ್ಮ ದೇಶದಲ್ಲಿ ಇಂಥ ಸಾಂಸ್ಕೃತಿಕ ವಸಾಹತುಶಾಹಿ ಧೋರಣೆ ಸ್ವೀಕಾರಾರ್ಹವಲ್ಲ. ಆಹಾರ ಅವರವರ ಸಂಸ್ಕೃತಿಯ ಸಹಜ ಅಭಿವ್ಯಕ್ತಿ. ಸೂಕ್ಷ್ಮ ಮತ್ತು ವೈಯಕ್ತಿಕವೂ ಹೌದು.


ಅದು ಮಾರ್ಪಡಿಸಲಾಗದ ಅಸ್ತಿತ್ವದ ಸಂಕೇತ. ಇನ್ನೊಬ್ಬರ ಆಹಾರ ಪದ್ಧತಿಗಳನ್ನು ತುಚ್ಛವಾಗಿ ಕಾಣುತ್ತ ತಮ್ಮ ಆಹಾರ ವಿಧಾನ ಹೇರುವುದು ವಸಾಹತುಶಾಹಿಗಿಂತ ಕಡಿಮೆಯೇನಲ್ಲ. ಪಾರಂಪರಿಕವಾಗಿ ದನದ ಮಾಂಸ ಸೇವಿಸುವ ವರ್ಗದ ಆಹಾರ ಆಯ್ಕೆಯ ಹಕ್ಕು ಹರಣ, `ನಮ್ಮದು ವೈವಿಧ್ಯಮಯ ಸಂಸ್ಕೃತಿ` ಎಂಬ ಬಡಾಯಿಗೆ ವಿರುದ್ಧ.

ಕೆಲ ವರ್ಷಗಳ ಹಿಂದೆ ಅಮೆರಿಕದ ಸಿದ್ಧ ಆಹಾರ ಕಂಪೆನಿಯೊಂದು ಬೆಳಗಿನ ಉಪಾಹಾರ ಬಿಡುಗಡೆ ಮಾಡಿತ್ತು, ಭಾರತೀಯರ ತಿನಿಸಿಗಿಂತ ಶ್ರೇಷ್ಠ ಎಂದು ಪ್ರಚಾರ ಮಾಡಿತ್ತು. ವಿವೇಚನೆಯುಳ್ಳ ಭಾರತೀಯರ ಬಲವಾದ ವಿರೋಧಕ್ಕೆ ಮಣಿದು ತನ್ನ ಜಾಹೀರಾತು ವಾಪಸ್ ಪಡೆಯಬೇಕಾಯ್ತು. ಆದರೆ ದಲಿತರ ಆಹಾರವಾದ ದನದ ಮಾಂಸ ನೂರಾರು ವರ್ಷಗಳಿಂದ ವಿರೋಧದ ಭಯ ಇಲ್ಲದೆ ಹೀಯಾಳಿಕೆಗೆ ಒಳಗಾಗುತ್ತ ಬಂದಿದೆ.


ಅದಕ್ಕಾಗಿಯೇ ಹೈದರಾಬಾದ್‌ನ ಉಸ್ಮಾನಿಯಾ ವಿವಿಯ ದಲಿತ ಮತ್ತು ಬಹುಜನ ಸಮಾಜದ ವಿದ್ಯಾರ್ಥಿಗಳು `ದನದ ಮಾಂಸ ಉತ್ಸವ` ಮಾಡಿದ್ದು. ಇವರ ಆಹಾರದ ಹಕ್ಕಿಗೆ ವಿವಿಧ ವಿವಿಗಳಲ್ಲಿ ಕೋಮುವಾದಿಗಳ ಅಡ್ಡಿ ಇದ್ದೇ ಇದೆ. ಕಳೆದ ವರ್ಷ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿವಿಯ ವಿದ್ಯಾರ್ಥಿಗಳು ಇದನ್ನು ಮುರಿದಿದ್ದರು.


ಹೈದರಾಬಾದ್ ಕೇಂದ್ರೀಯ ವಿವಿಯ ದಲಿತ ವಿದ್ಯಾರ್ಥಿಗಳು ಅನೇಕ ವರ್ಷದಿಂದ ದನದ ಮಾಂಸ ಉತ್ಸವ ನಡೆಸುತ್ತ ಬಂದಿದ್ದಾರೆ. ಈ ಸಲದ್ದು ಉಸ್ಮಾನಿಯಾ ವಿವಿ ಸರದಿ. ಇಲ್ಲಿ ದನದ ಮಾಂಸ ಉತ್ಸವ ಯಶಸ್ವಿಯಾಗೇ ನಡೆಯಿತು.

ಇದು ಆಹಾರದ ಹಕ್ಕು ಉಳಿಸಿಕೊಳ್ಳುವ ದಲಿತ ವಿದ್ಯಾರ್ಥಿಗಳ ಸುದೀರ್ಘ ಹೋರಾಟದ ಮೊದಲ ಹೆಜ್ಜೆ. ತಮ್ಮ ಸಂಸ್ಕೃತಿಯಿಂದ ದೂರ ತಳ್ಳುವ ಪ್ರಯತ್ನಗಳಿಗೆ ಸುಶಿಕ್ಷಿತ ದಲಿತ ಯುವ ಪೀಳಿಗೆ ಸವಾಲು ಹಾಕಿದೆ. ದನದ ಮಾಂಸ ತಿನ್ನುವ ಹಕ್ಕನ್ನು ಬಲವಾಗಿ ಪ್ರತಿಪಾದಿಸುವುದು ತಮ್ಮತನ ಉಳಿಸಿಕೊಳ್ಳುವುದರ ಸಂಕೇತ.


ಆಹಾರದ ವಿಷಯದಲ್ಲಿ ತಮ್ಮ ಆಯ್ಕೆ ಗೌರವಿಸಬೇಕು ಎಂಬ ಅವರ ಬೇಡಿಕೆ ಸಮರ್ಥನೀಯ. ದೇಶಾದ್ಯಂತ ಇರುವ ಹಾಸ್ಟೆಲ್‌ಗಳು ದಲಿತ ವಿದ್ಯಾರ್ಥಿಗಳ ಆಹಾರ ಪದ್ಧತಿಗೂ ಅವಕಾಶ ಕೊಡಲೇಬೇಕು.

ಡಾ. ಆರ್. ಅಖಿಲೇಶ್ವರಿ

ಕೃಪೆ : ಪ್ರಜಾವಾಣಿ



ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ವ್ಯಂಗ್ಯಚಿತ್ರ ವಿವಾದದ ಸುತ್ತ...

ಕೇಂದ್ರೀಯ ಪಠ್ಯಕ್ರಮದ ಶಾಲೆಗಳ ಪ್ರೌಢಶಾಲಾ ವಿಭಾಗದ ಪುಸ್ತಕವೊಂದರಲ್ಲಿ ಡಾ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ವ್ಯಂಗ್ಯಚಿತ್ರ ಪ್ರಕಟಣೆಯ  ವಿವಾದ, ಅದರಿಂದ ಪಾರ್ಲಿಮೆಂಟ್‌ನಲ್ಲಿ ನಡೆದ ಭಾರೀ ಕೋಲಾಹಲ ಮತ್ತು ಇಡೀ ಪುಸ್ತಕವನ್ನೇ ವಾಪಸ್ ಪಡೆಯುವ ಸರ್ಕಾರದ ನಿರ್ಧಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಕೊಂಡು ದಲಿತರ ಸೂಕ್ಷ್ಮ ಸಂವೇದನೆಯನ್ನು ನಿರ್ಲಕ್ಷಿಸಿ ಸಾರಾಸಗಟಾಗಿ ಟೀಕಿಸಲಾಗುತ್ತಿದೆ. ದಲಿತರ ಪಾಲಿಗೆ ಡಾ. ಅಂಬೇಡ್ಕರ್ ದೈವ ಸಮಾನ. ಅದನ್ನು ಮನಗಾಣದೆ ಈ ವಿಚಾರದಲ್ಲಿ ದಲಿತರ ಆಕ್ರೋಶವನ್ನು ಅಸಹನೆ ಎಂದೇ ಬಿಂಬಿಸಲಾಗುತ್ತಿದೆ.

ವಾಸ್ತವವಾಗಿ ಇದು ಅಸಹನೆಯಲ್ಲ; ಶತಶತಮಾನಗಳಿಂದ ನಡೆಯುತ್ತ ಬಂದ ಅಪಮಾನ, ತೇಜೋವಧೆಯನ್ನು ಮೆಟ್ಟಿನಿಲ್ಲಲು ಕಲಿಯುತ್ತ, ದಾಸ್ಯದಿಂದ ಹೊರಬರಲು ಪ್ರಯತ್ನಿಸುತ್ತಿರುವ ದಮನಿತ ವರ್ಗಗಳ ದನಿ. ಈಗ ಆಗಬೇಕಿರುವುದು ಇವರ ವರ್ತನೆ ಬಗ್ಗೆ ಸಾರಾಸಗಟು ಟೀಕೆ ಅಥವಾ ಕೋಪದ ಪ್ರದರ್ಶನವಲ್ಲ. ಭಯದಿಂದಾಗಿ ತಪ್ಪು ಗ್ರಹಿಕೆಗೆ ಒಳಗಾದ ಈ ಜನರ ಬಗ್ಗೆ ಸಂವೇದನೆ ಬೆಳೆಸಿಕೊಳ್ಳುವುದು.

`ಸಂಸತ್ತಿನಲ್ಲಿ ಸರ್ಕಾರ ಪ್ರದರ್ಶಿಸಿದ ಗಾಬರಿಯ ಪ್ರತಿಕ್ರಿಯೆ ಮತ್ತು ವ್ಯಂಗ್ಯಚಿತ್ರ ಪ್ರಕಟಣೆಗಾಗಿ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ಕ್ಷಮೆ ಯಾಚಿಸಿದ್ದರ ಹಿಂದೆ ಡಾ. ಅಂಬೇಡ್ಕರ್ ಅವರನ್ನು ಆರಾಧಿಸುವ ದೊಡ್ಡ ಸಂಖ್ಯೆಯ ಮತದಾರ ಕೋಪ ಶಮನಗೊಳಿಸಿ ಓಲೈಸುವ ರಾಜಕೀಯ ತಂತ್ರಗಾರಿಕೆಯಿದೆ.

ನಮ್ಮ ಸಮಾಜದಲ್ಲಿ ಜನತಂತ್ರದ ಆಶಯಗಳು ಇನ್ನೂ ಪೂರ್ಣವಾಗಿ ಬೇರು ಬಿಟ್ಟಿಲ್ಲ ಎನ್ನುವುದಕ್ಕೆ ಇದು ಉದಾಹರಣೆ ಎನ್ನುವುದು ಸಮಾಜ ವಿಜ್ಞಾನಿಯೊಬ್ಬರ ವಿಶ್ಲೇಷಣೆ. ಇನ್ನೊಬ್ಬ ಸಮಾಜ ವಿಜ್ಞಾನಿ ಹೇಳುವಂತೆ, ಇಡೀ ಪಠ್ಯಪುಸ್ತಕವನ್ನೇ ವಾಪಸ್ ಪಡೆದಿರುವುದು ದಲಿತ ಶಕ್ತಿಯನ್ನು ಸರ್ಕಾರ ಸಾಂಕೇತಿಕವಾಗಿಯಾದರೂ ಗುರುತಿಸಿದೆ ಎನ್ನುವುದರ ನಿದರ್ಶನ. ಇವರಿಬ್ಬರ ವ್ಯಾಖ್ಯಾನವೂ ಸರಿ ಎಂದು ಹೇಳಬಹುದು.
 
ಆಳವಾಗಿ ಬೇರೂರಿದ ಜಾತಿ ಪಿಡುಗಿನಿಂದ ವಿಭಜನೆಗೊಂಡ ನಮ್ಮ ಸಮಾಜದಲ್ಲಿ ಪ್ರಜಾಸತ್ತೆ ಇನ್ನೂ ಬಲವಾಗಿ ಚಾಚಿಕೊಂಡಿಲ್ಲ ಎನ್ನುವುದು ಸತ್ಯ. ಆದರೆ ಶಿಕ್ಷಣ ಮತ್ತು ಆಧುನೀಕರಣ ನಮ್ಮ ಮನಸ್ಸುಗಳನ್ನು ಬದಲಾಯಿಸಲು ಶಕ್ತವಾಗಿಲ್ಲ ಏಕೆ ಎನ್ನುವ ಪ್ರಶ್ನೆ ಉಳಿದಿದೆ.

ದಲಿತ  ಶಕ್ತಿ ಇನ್ನೂ ಗಟ್ಟಿ ಸ್ವರೂಪ ಪಡೆದಿಲ್ಲ. ಆದರೆ ಅದು ಸರ್ಕಾರವನ್ನು ಮಣಿಸುವಷ್ಟು ಶಕ್ತವಾಗಿದೆ. ಹೀಗಾಗಿ ಸರ್ಕಾರದ ಕ್ರಮ ಬೂಟಾಟಿಕೆಯಿಂದ ಕೂಡಿದೆಯೇ ಅಥವಾ ನಾಮಕಾವಸ್ಥೆಯೇ ಎಂಬುದು ಮಹತ್ವವಲ್ಲ.ಆದರೆ ಅದು ಸತ್ಯಸಂಗತಿ ಎಂಬುದೇ ಮುಖ್ಯ.

ಸರ್ಕಾರ ಪ್ರತಿಭಟನೆಗೆ ಮಣಿದರೂ, ಈ ವ್ಯಂಗ್ಯಚಿತ್ರ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಎಂಬ ಗ್ರಹಿಕೆಯಿಂದ ಸಂಸತ್ತಿನಲ್ಲಿ ಪ್ರತಿಪಕ್ಷಗಳೆಲ್ಲ ಒಗ್ಗೂಡಿದ ಮಹತ್ವದ ವಿದ್ಯಮಾನಕ್ಕೂ ಸಾಕ್ಷಿಯಾಯಿತು. ಅಲ್ಲದೆ ಸಂಸತ್ತಿನ ನಿಲುವನ್ನು ಒಪ್ಪದ ಎನ್‌ಸಿಇಆರ್‌ಟಿಯ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಇಬ್ಬರು ಪ್ರಧಾನ ಸಲಹೆಗಾರರ ರಾಜೀನಾಮೆಗೂ ಕಾರಣವಾಯಿತು.

ಸಂಸತ್ತಿನ ಒಳಗೆ ಮತ್ತು ಹೊರಗೆ ದಲಿತರು ನಡೆಸಿದ ಪ್ರತಿಭಟನೆ ಸರಿಯಲ್ಲ ಎಂಬುದು ಸರ್ಕಾರದ ತೀರ್ಮಾನವನ್ನು ವಿರೋಧಿಸುವವರ ವಾದ. ಏಕೆಂದರೆ ಈ ವ್ಯಂಗ್ಯಚಿತ್ರ ಬಿಡಿಸಿದ್ದು 60 ವರ್ಷಗಳ ಹಿಂದೆ, ಇದನ್ನು ರಚಿಸಿದವರು ಜನಪ್ರಿಯ ವ್ಯಂಗ್ಯಚಿತ್ರಕಾರರಾಗಿದ್ದ ಶಂಕರ್.
 
ಅಲ್ಲದೆ ಆಗಿನ ಪ್ರಧಾನಿ ನೆಹರೂ ಎಷ್ಟು ಉದಾರ ಮನಸ್ಸಿನವರು ಎಂದರೆ ವ್ಯಂಗ್ಯಚಿತ್ರದ ಮೂಲಕ ಶಂಕರ್ ತಮ್ಮ ಕಾಲೆಳೆದರೂ ಮೆಚ್ಚಿಕೊಳ್ಳುತ್ತಿದ್ದರು. ಈ ವ್ಯಂಗ್ಯಚಿತ್ರ ಮೊದಲು ಪ್ರಕಟವಾಗಿದ್ದು 1948ರಲ್ಲಿ. ಇದರಿಂದ ತಮಗೆ ಅಪಮಾನವಾಯಿತು ಎನಿಸಿದ್ದರೆ ಅಂಬೇಡ್ಕರ್ ಆಗಲೇ ವಿರೋಧಿಸುತ್ತಿದ್ದರು ಎಂಬುದು ಇವರ ವಾದದ ಸಾರಾಂಶ.

ಕಲಿಕೆ ಆಸಕ್ತಿದಾಯಕ ಆಗಬೇಕು, ತಮಾಷೆ, ತಿಳಿಹಾಸ್ಯವೂ ಇರಬೇಕು ಎಂಬ ಉದ್ದೇಶದಿಂದ ವ್ಯಂಗ್ಯಚಿತ್ರ ಸೇರಿಸಲಾಯಿತು ಎಂದು ಪಠ್ಯಸಮಿತಿ ಹೇಳುತ್ತಿದೆ. ಆದರೆ ಇಂಥ ಯಾವುದೋ ಕಾಲದ ವ್ಯಂಗ್ಯಚಿತ್ರ ಈ ಕಾಲದ ಮಕ್ಕಳ ಮನಸ್ಸಿಗೆ ರಂಜನೆ ಕೊಡುತ್ತದೆ ಎಂದು ಭಾವಿಸುವುದು ಮೂರ್ಖತನ.
 
ಅಂಬೇಡ್ಕರ್ ಅವರು ಈ ವ್ಯಂಗ್ಯಚಿತ್ರ ನೋಡಿ ನಕ್ಕಿರಬಹುದು ಅಥವಾ ಬದುಕಿನುದ್ದಕ್ಕೂ ಇಂಥ ಅಪಹಾಸ್ಯದ ಮುಳ್ಳುಗಳ ಯಾತನೆ ಅನುಭವಿಸಿದ್ದರಿಂದ ಸುಮ್ಮನಿದ್ದಿರಲೂ ಬಹುದು. ಆದರೆ ಈಗ ಪುಸ್ತಕದಲ್ಲಿ ಇದನ್ನು ಬಳಸಿಕೊಂಡಿದ್ದು ಎಷ್ಟರಮಟ್ಟಿಗೆ ಪ್ರಸ್ತುತ?

ಸಂವಿಧಾನ ಬರೆಯುವುದು ಸುಲಭದ ಕೆಲಸ ಆಗಿರಲಿಲ್ಲ, ಸಾಕಷ್ಟು ಸಮಯ ಹಿಡಿದಿದೆ ಎಂದು ಮಕ್ಕಳಿಗೆ ತಿಳಿಸಿಕೊಡುವುದು ತಪ್ಪಲ್ಲ. ವ್ಯಂಗ್ಯಚಿತ್ರವೊಂದು ಆಯಾ ಕಾಲದ ವಿದ್ಯಮಾನ, ವ್ಯಕ್ತಿಗಳ ವಿಶ್ಲೇಷಣೆಯ ವ್ಯಾಖ್ಯಾನ. ಹೀಗಾಗಿ ಆ ಕಾಲಕ್ಕೆ ಸಂವಿಧಾನ ರಚನೆ ವಿಳಂಬದ ಬಗ್ಗೆ ಬರೆದ ವ್ಯಂಗ್ಯಚಿತ್ರಕ್ಕೆ ಅರ್ಥವಿದೆ. ಆದರೆ 60 ವರ್ಷದ ನಂತರ ಈಗ ಅದು ಅರ್ಥಹೀನ, ಅಪ್ರಸ್ತುತ. ಅದು ಸಂವಿಧಾನ ರಚನಾ ಪ್ರಕ್ರಿಯೆಯ ಅಂತರಂಗವನ್ನು ಪ್ರತಿಬಿಂಬಿಸುತ್ತಿಲ್ಲ.

ಮುಖ್ಯವಾದ ಸಂಗತಿ ಎಂದರೆ ಯಾವುದೇ ವ್ಯಂಗ್ಯಚಿತ್ರ ಅಥವಾ ಚಿತ್ರ ಆಯಾ ವಿಷಯಕ್ಕೆ ಪೂರಕವಾಗಿ, ವಿವರಣಾತ್ಮಕವಾಗಿ ಇರಬೇಕು. ಆದರೆ ಈ ವ್ಯಂಗ್ಯಚಿತ್ರ ಹಾಗೆ ಇರುವಂತೆ ತೋರುತ್ತಿಲ್ಲ. ಸಂವಿಧಾನ ರಚನೆಯಲ್ಲಿ ವಿಳಂಬವಾಯಿತು ಎನ್ನುವುದು ಈಗಿನ ಸನ್ನಿವೇಶದಲ್ಲಿ ಹೇಗೆ ಪ್ರಾಮುಖ್ಯವಾಗುತ್ತದೆ?

ಸಂವಿಧಾನ ರಚನೆ ಹೇಗೆ ನಡೆಯಿತು ಎಂಬುದನ್ನು ಇಂದಿನ ಮಕ್ಕಳಿಗೆ ತಿಳಿಸಲೇ ಬೇಕಿದ್ದರೆ, ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ನೀಡಲು ಡಾ. ರಾಜೇಂದ್ರ ಪ್ರಸಾದ್ ವಿರೋಧ, ಅದಕ್ಕೆ ತಲೆಯಾಡಿಸಿದ ನೆಹರು ಮತ್ತು ಇವರಿಬ್ಬರ ಈ ನಿಲುವನ್ನು ಖಡಾಖಂಡಿತವಾಗಿ ವಿರೋಧಿಸಿ ಅಂಬೇಡ್ಕರ್ ಅವರು ಸಂವಿಧಾನ ರಚನೆ ಕಾರ್ಯದಿಂದಲೇ ಹೊರ ಬರುವುದಾಗಿ ಹಾಕಿದ ಬೆದರಿಕೆಯನ್ನು ಉಲ್ಲೇಖಿಸಬಹುದಿತ್ತು. ಅದಕ್ಕೇ ಹೇಳುವುದು, ಇನ್ನೊಬ್ಬರ ಬಗ್ಗೆ ಅಪಹಾಸ್ಯ ಮಾಡುವುದು ಬಹಳ ಸುಲಭ ಎಂದು.

ದಲಿತರ ಅಸಹನೆ ಮತ್ತು ಸರ್ಕಾರದ ಶರಣಾಗತಿಯನ್ನು ಟೀಕಿಸುವವರು ಈಗ ದಿಗಿಲು ಹುಟ್ಟಿಸುವ ಇನ್ನೊಂದು ಕೆಲಸ ಮಾಡುತ್ತಿದ್ದಾರೆ.

ಸರ್ಕಾರ ರಾಷ್ಟ್ರೀಯ ಪಠ್ಯಕ್ರಮದ ಎಲ್ಲ ಪುಸ್ತಕಗಳನ್ನು ಹಿಂತೆಗೆದುಕೊಳ್ಳಬಹುದು, ವ್ಯಂಗ್ಯಚಿತ್ರಕಾರರು ಕೈಯಲ್ಲಿ ಬ್ರಷ್ ಹಿಡಿಯುವ ಮುನ್ನ ಹತ್ತತ್ತು ಸಲ ಆಲೋಚನೆ ಮಾಡಬೇಕಾಗಬಹುದು ಎಂದು ಭಯಪಡಿಸುತ್ತಿದ್ದಾರೆ.

ನಮ್ಮ ನಾಯಕರನ್ನು ಮತ್ತು ಆಗಿನ ವಿದ್ಯಮಾನಗಳನ್ನು ಮಕ್ಕಳಿಗೆ ವಿವಿಧ ರೂಪದಲ್ಲಿ ತಿಳಿಸಿಕೊಡಲು ಈ ವ್ಯಂಗ್ಯಚಿತ್ರ ಬಳಸಲಾಯಿತು ಎಂದು ಅಧ್ಯಾಪಕರೊಬ್ಬರು ಹೇಳುತ್ತಿದ್ದಾರೆ. ಇದಕ್ಕೆ ಯಾರ ತಕರಾರೂ ಇಲ್ಲ. ಯಾರ ಬಗ್ಗೆಯಾದರೂ ವಿಮರ್ಶೆ ಮಾಡುವುದಾದರೆ ನೇರವಾಗಿ ಮಾಡಿ, ಪರೋಕ್ಷವಾಗಿ ಯಾಕೆ? ಅದು ಅಪ್ರಾಮಾಣಿಕತೆ ಆಗುತ್ತದೆ.

ಈ ಅಧ್ಯಾಪಕರ ಪ್ರಕಾರ, ಇದೇ ಮೊದಲ ಸಲ ಅಂಬೇಡ್ಕರ್‌ಗೆ ಪಠ್ಯ ಪುಸ್ತಕದಲ್ಲಿ ಯಥೋಚಿತವಾದ ಗೌರವ ಕೊಡಲಾಗಿದೆ. ಆದರೆ ಇದು ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಂತೆ.

ಈಗ ನಮ್ಮ ಮುಂದೆ ಇರುವುದು ಒಂದು ವ್ಯಂಗ್ಯಚಿತ್ರ, ಹಾಸ್ಯಪ್ರಜ್ಞೆ ಅಥವಾ ಅದರ ಕೊರತೆಯ ವಿಷಯ ಅಲ್ಲ. ಬದಲಾಗಿ ಯಾರನ್ನೋ ತಪ್ಪಾಗಿ ಚಿತ್ರಿಸುವುದು, ಅವಹೇಳನ ಮಾಡುವುದು ಮತ್ತು ಸೂಕ್ಷ್ಮ ಸಂವೇದನೆ ಕಳೆದುಕೊಳ್ಳುವುದರ ವಿಷಯ. ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ನಿರ್ದಯವಾಗಿ ಬೇರೂರಿದ ಪೂರ್ವಗ್ರಹ, ತಾರತಮ್ಯ ಮನೋಭಾವದ ವಿಷಯ. ಅದಕ್ಕಾಗಿಯೇ ಈ ವ್ಯಂಗ್ಯಚಿತ್ರದಲ್ಲಿ ತಮಾಷೆಯ ಅಂಶ ಎಳ್ಳಷ್ಟೂ ಇಲ್ಲ.

 ಆರ್. ಅಖಿಲೇಶ್ವರಿ  
ಕೃಪೆ : ಪ್ರಜಾವಾಣಿ 

Thursday, May 17, 2012

ಮಾತ್ಗವಿತೆ-77

ಬದುಕಿನ ಬಿರುಯಕುಗಳು
ಬದುಕನ್ನೇ ಕಲಿಸಿವೆ !
ಬಿರುಕುಗಳ ತುಂಬಿ
ಪೂರ್ಣವಾಗುವ ಹಂಬಲಿಕೆ
ತಿಂಗಳಾದರೂ ಬೇಕು !
ತಾಳ್ಮೆ ಮತ್ತು ಕಾಯುವಿಕೆ
ಅನಿವಾರ್ಯ ; ಆನಂತರದ್ದು
ಆಗಸಕ್ಕೆ ಏಣಿ ಹಾಕುವ ಉಮೇದು !

Sunday, May 13, 2012

ವ್ಯಂಗ್ಯ ಚಿತ್ರ ಮತ್ತು ಇತಿಹಾಸದ ವ್ಯಂಗ್ಯ !

























ಈ ನರಕಕ್ಕೆ ಕೊನೆಯೇ ಇಲ್ಲವೆನಿಸುತ್ತದೆ. 1949ರಲ್ಲಿ ವ್ಯಂಗಚಿತ್ರಕಾರ ಶಂಕರ ಅವರು ರಚಿಸಿದ ಅಂಬೇಡ್ಕರ್ ಅವರು ಬಸವನ ಹುಳುವಿನ ಮೇಲೆ ಕುಳಿತ ಹಾಗು ನೆಹರೂ ಅವರು ಅದನ್ನು ಚಾಟಿಯಿಂದ ಬೀಸುತ್ತಿರುವ ವ್ಯಂಗ್ಯಚಿತ್ರವನ್ನು NCERT ಪಠ್ಯದಲ್ಲಿ ಮುದ್ರಿಸಿರುವುದರ ಬಗೆಗೆ ಇಂದು ವಿವಾದ ಸೃಷ್ಟಿಯಾಗಿದೆ.
ಇದನ್ನು ದಲಿತರು ತಮ್ಮ ಆತ್ಮಾಭಿಮಾನದ ಪ್ರಶ್ನೆಯನ್ನಾಗಿ ಪರಿಗಣಿಸಿ 63 ವರ್ಷಗಳ ನಂತರ ಈಗ ಪ್ರತಿಭಟಿಸಿದ್ದರೆ ಬಹುಪಾಲು ಮಾಧ್ಯಮಗಳು ಮತ್ತು ಅನೇಕ ಪ್ರಜ್ನಾವಂತರು ಇದನ್ನು ಅಂಬೇಡ್ಕರ್ ಅವರ ಮೇಲಿನ ಕುರುಡು ಅಭಿಮಾನದ ಪ್ರತೀಕವೆಂದೂ ಇಷ್ಟು ವರ್ಷಗಳ ಕಾಲ ಸುಮ್ಮನಿದ್ದು ಈಗ ಪ್ರತಿಭಟಿಸುವುದರ ಅಗತ್ಯತೆಯನ್ನೇ ಪ್ರಶ್ನಿಸುತ್ತಿದ್ದಾರೆ. ಇವರಿಗೇಕೆ ಈ ದುರಂತಗಳು ಅರ್ಥವಾಗುತ್ತಿಲ್ಲ? ಇಂದಿನ ಜಾಗತೀಕರಣದ ದಿನಗಳಲ್ಲಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಗೊಂದಲಗಳಲ್ಲಿ, ತಿರಸ್ಕಾರದಲ್ಲಿ ಸೋತಂತಹ ದಿನಗಳಲ್ಲಿ, ಪ್ರತಿಯೊಂದು ಪ್ರಬಲ ಜಾತಿಗಳೂ ಒಂದಾಗಿ ಸಬಲೀಕರಣಗೊಳ್ಳುತ್ತಿದ್ದರೆ ಶೋಷಿತ ಸಮುದಾಯಗಳು ತಮ್ಮೊಳಗಿನ ಅಸಮಾನತೆಯಿಂದಾಗಿ ಛಿದ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಉತ್ತರ ಪ್ರದೇಶದಲ್ಲಿ ಮಾಯವತಿ ಅಧಿಕಾರದಿಂದ ಕೆಳಗಿಳಿದ ಕೇವಲ ಎರಡು ವಾರಗಳಲ್ಲಿ ದಲಿತರ ಮೇಲಿನ ಅತ್ಯಾಚಾರ ಹಾಗೂ ಹಲ್ಲೆಗಳು ಪುನರಾರಂಭಗೊಂಡ ವಿಷಮತೆಯ ಘಳಿಗೆಯಲ್ಲಿ ಅಂದಕಾಲತ್ತಿನ ಈ ತರಹದ ವ್ಯಂಗಚಿತ್ರಗಳು ಈ ಕಾಲದಲ್ಲಿ ದಲಿತರ ತಲ್ಲಣಗಳನ್ನು ಇನ್ನಷ್ಟು ಗೋಜಲುಗೊಳಿಸುತ್ತವೆ ಎಂಬ ಕಾರಣಕ್ಕೆ ಇಲ್ಲಿನ ಪ್ರತಿಭಟನೆಯ ನಿಜವಾದ ಆತಂಕವಿರುವುದು. ಅದರ ಹೊರತಾಗಿ ಕೇವಲ ಅಭಿಮಾನದ ಉದ್ವೇಗದಿಂದ ಮಾತ್ರವಲ್ಲ. ಇದಕ್ಕಿಂತಲೂ ಮೊದಲು ಮೊನ್ನೆ ಯವನಿಕದಲ್ಲಿ ನಡೆದ ಸಂಕಿರಣದಲ್ಲಿ ಭಾಗವಹಿಸಿ ಅಲ್ಲಿ ದಲಿತ ಚಿಂತಕ ಕಂಚಾಲಯ್ಯ ಅವರ ಮಾತುಗಳನ್ನು ಕೇಳಿದಾಗ, ಅತಿಯಾದ, ಕಳೆದ 20 ವರ್ಷಗಳಿಂದ ಕೊಂಚವೂ ಭಿನ್ನ ಜಾಡು ಹಿಡಿಯದ ಅವರ ರಾಡಿಕಲ್ ಚಿಂತನೆಗಳು ನಿಜಕ್ಕೂ ದಲಿತರಿಗಾಗಲಿ, ಹಿಂದುಳಿದ ಜಾತಿಗಳಿಗಾಗಲಿ ಯಾವುದೇ ಹೊಸ ಮಾರ್ಗಗಳನ್ನು, ಗುರಿಗಳನ್ನು ತೆರೆದಿಡುವುದಿಲ್ಲ ಎಂದು ನನಗೂ ಹಾಗು ನನ್ನ ಗೆಳೆಯರಿಗೆ ಮನವರಿಕೆಯಾಯಿತು.
1930ರ ದಶಕದಲ್ಲಿ ಅಂತರ್ಜಾತೀಯ ವಿವಾಹಗಳು ಜಾತೀಯತೆಯನ್ನು ಹೆಚ್ಚೂ ಕಡಿಮೆ ನಾಶಮಾಡಬಲ್ಲವು ಎಂದು ನಂಬಿದ್ದ ಅಂಬೇಡ್ಕರ್ ಅವರು 1950ರ ದಶಕದ ವೇಳೆಗೆ ಇಂಡಿಯಾದ ಒಟ್ಟು ದಮನಿತ ಗುಣದ ಬಗೆಗೆ ತೀವ್ರ ನಿರಾಸೆ ಹೊಂದಿದ್ದರು. ಜಾತಿ ವಿನಾಶದ ಆಶಯವನ್ನೇ ಬಿಟ್ಟುಕೊಟ್ಟರು. ಇಲ್ಲಿ ಮೊದಲು ತುಳಿಯುವವರು ಬದಲಾಗಬೇಕು ಎಂದು ಪ್ರತಿಪಾದಿಸುತ್ತಿದ್ದ ಅಂಬೇಡ್ಕರ್ ಅವರಿಗೆ 50ರ ದಶಕದ ವೇಳೆಗೆ ಅದರ ಸಾಧ್ಯತೆಗಳೇ ಇಲ್ಲವೆನ್ನುವುದು ಮನವರಿಕೆಯಾಗಿ ಈ ಹಿಂದೂ ಧರ್ಮವೇ ಒಂದು ದುಷ್ಟ ಕೂಪ ಎಂದು ಕರೆದು ಬೌದ್ಧ ಧರ್ಮದ ಕಡೆಗೆ ನಡೆದರು. ವೈದಿಕ ಧರ್ಮವನ್ನು ಖಂಡಿಸಿದ ಬೌದ್ಧ ಧರ್ಮದ ಚಿಂತನೆಗಳೇ ಅಂಬೇಡ್ಕರ ಅವರಿಗೆ ದಲಿತರಿಗೆ ಹಿಂದೂ ಧರ್ಮದ ಶೋಷಣೆಯಿಂದ ಬಿಡುಗಡೆಗೆ ಹೊಸ ಬೆಳಕು ಗೋಚರಿಸಿತು. ಅವಮಾನದ ಸಂಸ್ಕೃತಿಯನ್ನೇ ಹಾಸಿ ಹೊದ್ದಿರುವ ದಲಿತ ಸಮುದಾಯಕ್ಕೆ  ಅವಮಾನ, ಆತ್ಮಾವಹೇಳನ, ದ್ವೇಷ, ಮೇಲು ಜಾತಿಗಳ ನಿರಂತರ ಅತ್ಯಾಚಾರ ಇವೆಲ್ಲ ವಿಷಪ್ರವೃತ್ತಿಗಳಿಂದ ದಲಿತರಿಗೆ ಬಿಡುಗಡೆ ಕೊಡಿಸಿ ಹೊಸ ಸಂಸ್ಕೃತಿ ಹಾಗೂ ಹೊಸ ಮೌಲ್ಯಗಳನ್ನು ಪಡೆದುಕೊಳ್ಳುವ ಮಾರ್ಗಗಳ  ಹುಡುಕಾಟದಲ್ಲಿ ತೊಡಗಿದ್ದ ಅಂಬೇಡ್ಕರ ಅವರಿಗೆ ಮಾಕ್ರ್ಸವಾದದ ಅತಿ ಬೌತಿಕವಾದ ಒಪ್ಪಿ ಕೊಳ್ಳಲು ಸಾಧ್ಯವೇ ಆಗಲಿಲ್ಲ. ಈ ಎಡಪಂಥೀಯ ನೆಲಗಟ್ಟಿನ ವರ್ಗ ಸಂಘರ್ಷದ ಮಾದರಿ ಎಂದೂ ತಳಸಮುದಾಯಗಳನ್ನು ಒಳಗೊಳ್ಳುವುದೇ ಇಲ್ಲ ಎಂದು ಅಂಬೇಡ್ಕರ್ ಅವರಿಗೆ ಸಂಪೂರ್ಣ ಮನದಟ್ಟಾಗಿತ್ತು. ಈ ಮಾಕ್ರ್ಸವಾದದ ಆರ್ಥಿಕ ಮಾರ್ಗಗಳು ಕಡೆಗೂ ಸೃಷ್ಟಿಸುವುದು ಕೊಳ್ಳುಬಾಕುತನವನ್ನು ಮತ್ತು ಜೊತೆಜೊತೆಗೇ ಅಪ್ರಜ್ನಾಪೂರಕವಾಗಿ ಜಾತೀಯತೆಯನ್ನು ಮಾತ್ರ ಎಂಬುದನ್ನು ಮನನ ಮಾಡಿಕೊಂಡ ಅಂಬೇಡ್ಕರ್ ದಲಿತರಿಗೆ ದೊಡ್ಡದಾದ ಪಾರಂಪರಿಕ ನೆಲೆಯನ್ನು, ಭದ್ರ ಬುನಾದಿಯನ್ನು, ಶೋಷಣೆರಹಿತ ವ್ಯವಸ್ಥೆಯನ್ನು, ಶಾಂತಿಯ ತೋಟವನ್ನು ಕಟ್ಟಿಕೊಡುವ ನೆಲೆಯಾಗಿಯೇ ಬೌದ್ಧ ಧರ್ಮದ ಕಡೆಗೆ ನಡೆದರು.
ಚಿಂತಕ ದಿವಂಗತ ಡಿ.ಆರ.ನಾಗರಾಜ ಪ್ರಕಾರ ಏಷ್ಯಾ ಖಂಡದ 20ನೇ ಶತಮಾನದ ಬೌದ್ಧ ಧರ್ಮದಲ್ಲಿ ಇಬ್ಬರು ತುಂಬ ಮುಖ್ಯರು. ಥಾಯ್ಲೆಂಡಿನ ಬುದ್ಧದಾಸ ಭಿಕ್ಕು ಮತ್ತು ಭಾರತದ ಬಾಬಾ ಸಾಹೇಬ ಅಂಬೇಡ್ಕರ್. ಅವರಿಬ್ಬರೂ ನಿಜವಾದ ಬೌದ್ಧ ಬಿಕ್ಷುಗಳು. ಇವರಿಬ್ಬರೂ 20ನೇ ಶತಮಾನದ ಸಮಾಜವದಿ ಮೌಲ್ಯಗಳು ಮತ್ತು ಬೌದ್ಧ ಧರ್ಮದ ನಡುವೆ ಅತ್ಯಂತ ಅರ್ಥಪೂರ್ಣ ಸಂವಾದ ನಡೆಸಿದರು. ಅಂಬೇಡ್ಕರರ ಉರಿಯುವ ಛಲ ಹೆಚ್ಚು ಆಳವಾದ ನೆಲೆಗೆ ತಲುಪುವ ಹಠವುಳ್ಳದ್ದು. ಭಾರತೀಯ ನಾಗರೀಕತೆಯ ಮೂಲಕ್ಕೆ ತಮ್ಮ ಹೋರಾಟವನ್ನು ಒಯ್ಯುವ ಹಠ ಅಂಬೇಡ್ಕರರದು. ಹೀಗಾಗಿ ಅಸ್ಪೃಶ್ಯತೆಯ ಚರಿತ್ರೆ ಮತ್ತು ಬೌದ್ಧ ಧರ್ಮದ ನಡುವೆ ಹೊಸ ರೀತಿಯ ಸಂಬಂಧಗಳನ್ನು ಅಂಬೇಡ್ಕರ ಕಂಡರು. ಅಸ್ಪೃಶ್ಯ ಸಂಸ್ಕೃತಿಹೀನನಲ್ಲ. ಬದಲಾಗಿ ದೀರ್ಘವಾದ, ಉದಾತ್ತವಾದ ಹಿನ್ನೆಲೆ ಉಳ್ಳವನು ಎಂದು ವ್ಯಾಖ್ಯಾನಿಸುವ ಮೂಲಕ ವರ್ತಮಾನದ ಹೋರಾಟಕ್ಕೆ ಹೊಸ ನೆಲೆ ಕೊಡಲು ಪ್ರಯತ್ನಿಸಿದರು.
ಅಂಬೇಡ್ಕರ ಅವರ ಮೂಲ ಆಶಯವಾಗಿದ್ದ ದಲಿತರಿಗೆ ತಮ್ಮ ಹಕ್ಕುಗಳ ಪರವಾದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹೋರಾಟಕ್ಕೆ ರಾಜಕೀಯ ಆಯಾಮವೂ ಹೆಗಲುಕೊಡುತ್ತಾ ಸಹಭಾಗಿತ್ವ ನೀಡಲೇಬೇಕೆನ್ನುವ ಮಹಾತ್ವಾಕಾಂಕ್ಷೆಯಿಂದ ಕಟ್ಟಿದ ಪಕ್ಷವು ಅವರ ನಿಧನದ ನಂತರ ಅಂಬೇಡ್ಕರ ಅವರ ಉತ್ತರದಾಯತ್ವವನ್ನು ದೀರ್ಘ ಕಾಲವಧಿಯವರೆಗೆ ನಿಭಾಯಿಸಲು ಸೋತಿತು. ದಲಿತರಿಗೆ ಸಾಮಾಜಿಕ ಹೋರಾಟವನ್ನು ಬಳಸಿಕೊಂಡು ರಾಜಕೀಯ ಅಧಿಕಾರ ತಂದುಕೊಡುವ ಆ ಮೂಲಕ ಅಸ್ಪೃಶ್ಯ ಜಾತಿಗಳು ಕಾಲಕ್ರಮೇಣ ವರ್ಗಗಳಾಗಿ ಬದಲಾಗಬೇಕೆಂಬ ಅಂಬೇಡ್ಕರರ ಮಹಾತ್ವಾಕಾಂಕ್ಷೆಯ ಆಶಯಗಳನ್ನು ಬೇರು ಮಟ್ಟದಲ್ಲಿ ನೀರೆರೆದು ಬೆಳೆಸಲು ಬೇಕಾದ ಅಪಾರ ಸಹನೆ, ಬದ್ಧತೆ ಹಾಗೂ ಪರಸ್ಪರ ತಿಳುವಳಿಕೆಗಳ ಕೊರತೆಯಿಂದ ಈ ಪಕ್ಷವು ಸೊರಗತೊಡಗಿತು. ಇಲ್ಲಿನ ಹಳೆಯ ಮಂದಿ ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಕಟ್ಟಲು ಉತ್ಸುಕರಾಗಿದ್ದರೆ, ಹೊಸ ತರುಣ ಜನಾಂಗ ನಗರ ಕೇಂದ್ರಿತ ಚಳುವಳಿಯನ್ನು ನಡೆಸಲು ಹೊರಟಿದ್ದರು. ಈ ತಲೆಮಾರಿನ ನಡುವಿನ ಭಿನ್ನತೆ 1962ರಲ್ಲಿ ಖಕ ಪಕ್ಷದಲ್ಲಿ ಬಿರುಕನ್ನು ಹುಟ್ಟಿ ಹಾಕಿತು. ಈ ವಿಭಜನೆಯ ನಂತರ ನಗರ ಕೇಂದ್ರಿತ ಹೊಸ ತಲೆಮಾರಿನ ತರುಣರ ಗುಂಪು ಹೆಚ್ಚು ಪ್ರಭಾವಶಾಲಿಯಾಗಿ ಹೊಸ ಹುರುಪಿನಿಂದ ದಲಿತ ಚಳುವಳಿಗಳನ್ನು ರೂಪಿಸತೊಡಗಿತು. ಚುನಾವಣಾ ರಾಜಕೀಯದಲ್ಲೂ ಭಾಗವಹಿಸಿ ವಿದಾನಸಭಾ ಚುನಾವಣೆಗಳಲ್ಲಿ ಕೆಲವು ಸ್ಥಾನಗಳನ್ನೂ ಸಹ ಪಡೆಯುವಲ್ಲಿ ಯಶಸ್ವಿಯಾಯಿತು. ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ಆ ಕಾಲದಲ್ಲಿ ಉತ್ರರ ಪ್ರದೇಶಕ್ಕೂ ಖಕ ಪಕ್ಷ ತನ್ನ ಪ್ರಭಾವವನ್ನು ವ್ಯಾಪಿಸಿಕೊಂಡಿತ್ತು. ಖಕ ಪಕ್ಷದ ಸೀಮಿತ ಪ್ರಭಾವಕ್ಕೆ ಉತ್ತರವೇನೋ ಎಂಬಂತೆ ಅಮೇರಿಕಾದ ಬ್ಲಾಕ ಪ್ಯಾಂಥರ್ಸನ ಸ್ಪೂರ್ಥಿಯಿಂದಾಗಿ 1970ರಲ್ಲಿ ಮಹಾರಾಷ್ಟದಲ್ಲಿ ದಲಿತ ಪ್ಯಾಂಥರ್ಸ ಎನ್ನುವ ಸಂಘಟನೆ ಹುಟ್ಟಿಕೊಂಡಿತು. ಆಗ ಜೆ.ಪಿ. ಚಳುವಳಿ ತನ್ನ ಬಿರುಸನ್ನು, ವ್ಯಾಪ್ತಿಯನ್ನು ದೇಶದಾದ್ಯಾಂತ ವ್ಯಾಪಿಸಿಕೊಳ್ಳುತ್ತಿದ್ದಂತಹ ಕಾಲ. ಭ್ರಷ್ಟಾಚಾರದ ವಿರುದ್ದ ಸಂಪೂರ್ಣ ಕ್ರಾಂತಿಗೆ ಕರೆಕೊಟ್ಟಿದ್ದ ಜೆ.ಪಿ.ಯವರು ಆ ಕಾಲಕ್ಕೆ ಅತ್ಯಂತ ಪ್ರಭಾವಿಶಾಲಿ ನಾಯಕಿಯಾಗಿದ್ದ ಇಂದಿರಾ ಗಾಂಧಿಯವರಿಗೆ ಪ್ರಬಲ ಸವಾಲನ್ನು ಒಡ್ಡಿದ್ದರು. ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದ್ದ, ಬಹುಪಾಲು ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗಗಳನ್ನ ಆಕರ್ಷಿಸಿದ್ದ ಜೆ.ಪಿ ಯವರ ನವನಿರ್ಮಾಣ ಚಳುವಳಿಗೆ, ನವ ಅಂಬೇಡ್ಕರವಾದಿಗಳ ತರುಣರ ಗುಂಪಾದ ದಲಿತ ಪ್ಯಾಂಥರ್ಸ ತಮ್ಮ ಸಹಯೋಗದ ಕೊಂಡಿಯನ್ನು ಜೋಡಿಸಿಕೊಳ್ಳಲು ವಿಫಲವಾಯಿತು.
ಈ ಜಾತ್ಯಾತೀತ ಪ್ರಗತಿಪರ ಗುಂಪು ಅತ್ತ ಎಡಪಂಥೀಯರೊಂದಿಗೂ ಗುರುತಿಸಿಕೊಳ್ಳದೆ, ಇತ್ತ ನವ ನಿರ್ಮಾಣದ ಜೆ.ಪಿ.ಚಳುವಳಿಯೊಂದಿಗೂ ಗುರತಿಸಿಕೊಳ್ಳದೆ ತಠಸ್ಥವಾಗುಳಿದಿದ್ದು ನಿಜಕ್ಕೂ ಆಶ್ಚರ್ಯವೇ ಸರಿ. ಅತ್ಯಂತ ಪ್ರಖರ ವೈಚಾರಿಕ, ಸಮತಾವಾದದ, ಎಡಪಂಥೀಯ ಲೇಖಕರು ಮತ್ತು ಚಿಂತಕರ ಪಡೆಯೇ ಅಂದಿನ ದಲಿತ ಪ್ಯಾಂಥರ್ಸ ಸಂಘಟನೆಯಲ್ಲಿತ್ತು. ಆದರೆ ಎಲ್ಲಾ ಪ್ರಗತಿಪರ ಹಾಗೂ ಜಾತ್ಯಾತೀತ ಸಂಘಟನೆಗಳಿಗೂ ತಗಲುವ ಜಾಡ್ಯದಂತೆ ಈ ಸಂಘಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದ ರಾಜ ಢಾಳೆ ಹಾಗೂ ನಾಮದೇವ ಢಸಾಳರ ನಡುವಿನ ಈ ವೈಯುಕ್ತಿಕ ಸಿದ್ಧಾಂತಗಳ ಭಿನ್ನತೆ ದಲಿತ ಪ್ಯಾಂಥರ್ಸ ಸಂಘಟನೆಯನ್ನೂ ಸಹ ಬಿಡಲಿಲ್ಲ. ರಾಜ ಢಾಳೆಯವರ ನೇತೃತ್ವದ ಗುಂಪು ಎಡಪಂಥೀಯ ಒಲವುಳ್ಳ ಸೆಕ್ಯುಲರ ರಾಜಕಾರಣವನ್ನು ಪುರಸ್ಕರಿಸಲಿಲ್ಲ. ಬದಲಾಗಿ ಅಂಬೇಡ್ಕರ ಪ್ರತಿಪಾದಿಸಿದ ಬುದ್ಧ ಧರ್ಮದ ಮಾರ್ಗದ ಕಡೆಗೆ ತನ್ನ ನಿಲುವನ್ನು ತಳೆದಿತ್ತು. ಇಲ್ಲಿ ಬುದ್ಧನ ಚಿಂತನೆಗಳ ಪ್ರಜ್ನೆಯಲ್ಲಿ ಮುನ್ನಡೆಯಬೇಕೆಂಬುದೇ ರಾಜ ಢಾಳೆಯವರ ಪ್ರಮುಖ ಆಶಯವಾಗಿತ್ತು. ಆದರೆ ನಾಮದೇವ ಢಸಾಳರವರ ನೇತೃತ್ವದ ಗುಂಪು ಮಾಕ್ರ್ಸವಾದದ ನೆಲೆಗಟ್ಟಿನಲ್ಲಿ,  ತಮ್ಮ ಎಡಪಂಥೀಯ ಚಿಂತನೆಗಳನ್ನು ನೇರವಾಗಿಯೇ ಪ್ರತಿಪಾದಿಸುತ್ತಾ ಬುದ್ಧನೆಡೆಗಿನ ನಡೆಯನ್ನು ಅಷ್ಟೊಂದು ತೀವ್ರವಾಗಿ ಸಮರ್ಥಿಸಲಿಲ್ಲ.
ಇಲ್ಲಿ ಢಸಾಳರು ಮಾಕ್ರ್ಸವಾದಿಗಳ ಮೂಲ ಸಿದ್ಧಾಂತವಾದ ವರ್ಗ ಸಂಘರ್ಷ ಮತ್ತು ಆರ್ಥಿಕ ಆಭಿವೃದ್ಧಿ ಮೂಲಕ ಅಸ್ಪೃಶ್ಯತೆಯ ನಿರ್ನಾಮ ಹಾಗೂ ಜಾತಿವಿನಾಶದ ಕನಸನ್ನು ಕಂಡರು. ಇದು ಅಂಬೇಡ್ಕರವಾದದ ಬುದ್ಧನಡೆಗಿನ ನಡೆಯ ಮೂಲಕ ಜಾತಿವಿನಾಶ ಮತ್ತು ದಲಿತರ ಆತ್ಮಾಭಿಮಾನದ ಕನಸಿಗೆ, ಚಿಂತನೆಗೆ ವ್ಯತಿರಿಕ್ತವಾಗಿತ್ತು. ಕಡೆಗೆ ಢಸಾಳರು 1977ರಲ್ಲಿ ದಲಿತರ ಪರವಾಗಿ ಇಂದಿರಾಗಾಂದಿಯವರನ್ನು ಬೆಂಬಲಿಸುವುದರೊಂದಿಗೆ ದಲಿತ ಪ್ಯಾಂಥರ್ಸ ಇಬ್ಭಾಗವಾಯಿತು. ನಂತರ ಮಹಾರಾಷ್ಟ್ರದಲ್ಲಿನ ದಲಿತ ಚಳುವಳಿಗಳು ಮತ್ತು ಸಂಘಟನೆಗಳು ಸೂಕ್ತವಾದ ರಾಜಕೀಯ ನೆಲೆ ದೊರಕದೆ ಅತಂತ್ರರಾಗಿ ಹೋರಾಟ ನಡೆಸಬೇಕಾಯಿತು. ಇವರ ಹೋರಾಟಕ್ಕೆ ಅಪಾರ ಜನಬೆಂಬಲ ಹಾಗೂ ಜನಪ್ರಿಯತೆ ದೊರಕಿದ್ದರೂ ಒಂದು ಗಟ್ಟಿಯಾದ ಕೇಂದ್ರ, ಸೂಕ್ತವಾದ ರಣನೀತಿ ದೊರೆಯದೆ ಒಂದು ಬಿಡಿಯಾದ ಸಂಘಟನೆಗಳಾಗಿ ಉಳಿದುಕೊಂಡವು. ಕಡೆಗೆ ನಾಮದೇವ ಢಸಾಳರು ಸಿನಿಕರಾಗಿ ಹತಾಶೆಯಿಂದ ಅತ್ಯಂತ ನಿರಾಶೆಯ ಸ್ಥಿತಿಯಲ್ಲಿ, ಏಕಾಂಗಿ ಭಾವದಲ್ಲಿ, ಅಸಹಾಯಕರಾಗಿ 90ರ ದಶಕದಲ್ಲಿ ಶಿವಸೇನೆಯನ್ನು ಸೇರಿದ್ದು ಇಡೀ ಪ್ರಗತಿಪರ ದಲಿತ ಚಳುವಳಿಯ ಒಂದು ದೊಡ್ಡ ಸೋಲಾಗಿತ್ತು. ಅದು ರಾಜ್ಯದ ಎಲ್ಲಾ ಬುದ್ದಿಜೀವಿಗಳ, ಎಡಪಂಥೀಯ ಚಿಂತಕರ ಸೋಲಾಗಿತ್ತು.
ಆದರೆ 70ರ ದಶಕದ ಈ ತಲ್ಲಣಗಳು ಹಾಗೂ ದಲಿತ ಸಂಘಟನೆಗಳ ವಿಘಟನೆಗಳ ನಡುವೆಯೇ ಮರಾಠಿ ದಲಿತ ಲೇಖಕರು ಅತ್ಯಂತ ದಿಟ್ಟವಾಗಿ, ಸ್ಪಷ್ಟವಾಗಿ ಬರೆಯತೊಡಗಿದರು. ಅಂಬೇಡ್ಕರವಾದವನ್ನು ತಮ್ಮೊಳಗೆ ಬೇರು ಮಟ್ಟದಲ್ಲಿ ಬಿಟ್ಟುಕೊಂಡು ಇದರ ಸ್ಫೂರ್ತಿಯಿಂದ 70 ಹಾಗು 80ರ ದಶಕಗಳಲ್ಲಿ ಶ್ರೇಷ್ಟ ದಲಿತ ಸಾಹಿತ್ಯವನ್ನು ಬರೆದರು. ಹೊಸ ಚಿಂತನೆಯನ್ನೇ ರೂಪಿಸಿದರು.ಇದು ಅತ್ಯಂತ ಸೃಜನಶೀಲ ಸಾಹಿತ್ಯದ, ಜೀವಪರ ಸಾಹಿತ್ಯದ ಕಾಲಘಟ್ಟವಾಗಿತ್ತು. ದಲಿತ ಅಕ್ಷರಸ್ಥರಲ್ಲಿ ಹೊಸ ಚಿಂತನೆಗಳನ್ನು, ಬರವಣಿಗೆಯ, ಭಾಷೆಯ ಹೊಸ ನುಡಿಕಟ್ಟನ್ನೂ ಕಟ್ಟಿಕೊಟ್ಟಿತು. ಒಂದು ಹೊಸ ಪ್ರಜ್ನಾವಂತ ತಲೆಮಾರನ್ನೇ ರೂಪಿಸಿತು ಇವರ ಈ ಸಾಹಿತ್ಯದ ಮಾದರಿ ನಂತರ ಕನ್ನಡದ ದಲಿತ ಪ್ರಜ್ನೆಯೊಳಗೂ ತನ್ನ ಪ್ರಭಾವವನ್ನು ಬೀರಿತು.
ಕರ್ನಾಟಕದಲ್ಲಿ ದಲಿತ ನಾಯಕ ಬಸವಲಿಂಗಪ್ಪನವರು ಕನ್ನಡ ಸಾಹಿತ್ಯದಲ್ಲಿರುವುದೆಲ್ಲ ಬೂಸ ಎಂದು ಸಾರ್ವಜನಿಕವಾಗಿ ಹೇಳುವುದರ ಮೂಲಕ ಈ ಬೂಸ ಚಳುವಳಿ ದಲಿತ ಚಳುವಳಿಗೆ ತನ್ನ ಎಲ್ಲಾ ಬಾಗಿಲುಗಳನ್ನು ತರೆಯಿತು. ಆಗ ಬಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಹುಟ್ಟಿಕೊಂಡ ದಲಿತ ಲೇಖಕರ ಸಂಘಟನೆ ಮುಂದೆ ದಲಿತ ಸಂಘರ್ಷ ಸಮಿತಿಯಾಗಿ ನಂತರ 20 ವರ್ಷಗಳ ಕಾಲ 90ರ ದಶಕದುದ್ದಕ್ಕೂ ಒಂದು ದೊಡ್ಡ ಪ್ರಗತಿಪರ, ಜಾತ್ಯಾತೀತ ಸಂಘಟನೆಯಾಗಿ ಬೆಳೆಯಿತು. ಅನೇಕ ದಲಿತ ಲೇಖಕರಲ್ಲಿ ಅನಾಥ ಪ್ರಜ್ನೆಯನ್ನು ತೊಡೆದು ಹಾಕಿತು.
ಆ ಕಾಲಘಟ್ಟದ ಈ ದಲಿತ ಚಳುವಳಿಗೆ ದಕ್ಕಿದ ವೈಚಾರಿಕತೆಯ ಆಯಾಮ, ಸಿದ್ಧಾಂತದ ಹಿರಿಮೆ ನಿಜಕ್ಕೂ ಬೆರಗುಗೊಳಿಸುತ್ತದೆ. ಇದಕ್ಕೆ ಕಾರಣರಾದ ಬಿ.ಕೃಷ್ಣಪ್ಪ, ದೇವನೂರು ಮಹದೇವರವರು ತಮ್ಮಲ್ಲಿನ್ನ ನೆಲ ಸಂಸ್ಕೃತಿಯ ಜೀವಂತಿಕೆಯನ್ನು ವೈಚಾರಿಕತೆಯೊಂದಿಗೆ ಬೆರೆಸಿ ಆ ಕಾಲಘಟ್ಟದ ದಲಿತ ಚಳುವಳಿಗೆ ಧಾರೆಯೆರೆದರು. ಅಂಬೇಡ್ಕರವಾದ ಹಾಗೂ ಲೋಹಿಯಾವಾದದ ಈ ಎರಕ ಎಪ್ಪತ್ತರ ಹಾಗೂ ಎಂಬತ್ತರ ದಲಿತ ಚಳುವಳಿಗೆ ನಿರಂತರ ಚಿಲುಮೆಯ ಧಾರೆಯಾಗಿತ್ತು. ಹಾಗೂ ಆ ಕಾಲಘಟ್ಟದಲ್ಲಿ ಸಮಾಜವಾದಿ ಚಳುವಳಿಗಳನ್ನು ನಿರಂತರವಾಗಿ ನಡೆಸಿದ ಎಂ.ಡಿ.ನಂಜುಂಡಸಾಮಿ, ಲಂಕೇಶ, ತೇಜಸ್ವಿ, ರಾಮದಾಸ ಅವರ ವೈಚಾರಿಕತೆ ಹಾಗೂ ಆದರ್ಶಗಳು ಈ ಚಳುವಳಿಗೆ ನೀರೆರೆದವು. ತನ್ನ ಒಳಗೊಳ್ಳುವಿಕೆಯ ನೀತಿಯಿಂದ ಸಾಮಾಜಿಕವಾಗಿಯೂ ಹಾಗೂ ರಾಜಕೀಯವಾಗಿಯೂ ಇದರ ಪ್ರಬಾವ ನಿರ್ಣಾಯಕವಾಗಿತ್ತು.
ಎಂಬತ್ತರ ದಶಕದ ಕರ್ನಾಟಕದ ದಲಿತ ಚಳುವಳಿಯ ಮತ್ತೊಂದು ಮಹ್ವದ ಸಾಧನೆಯೆಂದರೆ ತನ್ನ ಪ್ರಖರ ವೈಚಾರಿಕತೆಯ ಮೂಲಕ ದಲಿತೇತರ ಲೇಖಕರು, ಹಾಗೂ ಸಮಾನಮನಸ್ಕರನ್ನೂ ಸಹ ದಲಿತ ಪ್ರಜ್ನೆಯ ಬಗೆಗೆ, ದಲಿತ ಸಂಸ್ಕೃತಿಯ ಬಗೆಗೆ ಚಿಂತಿಸಲು ಬಲು ದೊಡ್ಡ ಪ್ರೇರಕ ಶಕ್ತಿಯಾಗಿದ್ದು. ಇದು ಕಡಿಮೆ ಸಾಧನೆಯೇನಲ್ಲ. ಆದರೆ ಈ ವೈಚಾರಿಕತೆ, ಸಾಮಾಜಿಕ ಬದ್ಧತೆ, ಸೆಕ್ಯುಲರ ನೀತಿ, ಆದರ್ಶಗಳನ್ನು ಸದಾಕಾಲ ಜೊತೆಜೊತೆಗೇ ಕೊಂಡೊಯ್ಯುವ ಬಲು ದೊಡ್ಡ ಜವಬ್ದಾರಿ ಈ 20 ವರ್ಷಗಳ ಕಾಲಘಟ್ಟ ಬಲು ಧೀರ್ಘವೇ ಆಯಿತೆನಿಸುತ್ತದೆ. ಅಂಬೇಡ್ಕರ ಹಾಗೂ ಅಂಬೇಡ್ಕರವಾದವನ್ನು ಪದೇ ಪದೇ ನವೀಕರಿಸುವ, ಜಾಗತೀಕರಣಕ್ಕೆ ತಕ್ಕಂತೆ ಹೊಸ ನುಡಿಕಟ್ಟಿನಲ್ಲಿ ಮಾತನಾಡುವ, ಅಂಬೇಡ್ಕರ ಅವರನ್ನು ಸವರ್ಣೀಯರ ಮನಸ್ಸಿನಲ್ಲಿ ಅಚ್ಚಳಿಯದಂತೆ ಬೇರೂರುವಂತೆ ಮಾಡಬೇಕಾದ ಒಳಗೊಳ್ಳುವಿಕೆಯ ಮಾರ್ಗಗಳೇನು ಎಂಬುದರ ಚಿಂತನೆಗಳನ್ನು ನಮ್ಮ ದಲಿತ ಚಳುವಳಿಗಳು ಕೈಗೆತ್ತಿಕೊಳ್ಳಲೇ ಇಲ್ಲ. ಇದಕ್ಕೇ ಕೇವಲ ದಲಿತ ಸಂಘಟನೆಗಳು ಮಾತ್ರ ಹೊಣೆಯೆಲ್ಲ ರಾಜ್ಯದ ಎಲ್ಲಾ ಪ್ರಜ್ನಾವಂತರು, ಪ್ರಗತಿಪರ ಚಿಂತಕರು ಈ ಹೊಸ ರೂಪದ, ಭಿನ್ನ ಮಾದರಿಯ ಚಿಂತನೆಗಳನ್ನು ದಲಿತ ಸಂಘಟನೆಗಳೊಂದಿಗೆ ಸೇರಿಕೊಂಡು ರೂಪಿಸಲು ಪ್ರಯತ್ನಿಸಲೇ ಇಲ್ಲ. ಎಲ್ಲದ್ದಕ್ಕೂ ದಲಿತ ಚಳುವಳಿಗಳನ್ನು ಮಾತ್ರ ದೂಷಿಸುವ ನಾವೆಲ್ಲ ನಮ್ಮೆಲ್ಮರ ಕೆಲಸಗಳನ್ನು ಕ್ಷಣಕಾಲ ಬದಿಗಿಟ್ಟು ನೇರವಾಗಿ ಚಳುವಳಿಯೊಳಗೆ ಗುರುತಿಸಿಕೊಂಟು ತಪ್ಪಾದಾಗಲೆಲ್ಲ ಎಚ್ಚರಿಸಿ ಮುನ್ನಡೆಸುವ ಗುರುತರ ಜವಾಬ್ದಾರಿಯುತ ಕಾರ್ಯಕ್ಕೆ ಧುಮುಕಲೇ ಇಲ್ಲವೆನಿಸುತ್ತದೆ. ನಮ್ಮ ಪ್ರಗತಿಪರ ಚಿಂತಕರ ಹಾಗೂ ದಲಿತ ಚಳುವಳಿಗಳೊಂದಿಗಿನ ಸಂಬಂಧ ಕೇವಲ ಸೆಮಿನಾರಗಳಲ್ಲಿ, ಅಕಡೆಮಿಕ ಚಿಂತನೆಗಳಲ್ಲಿ, ವೈಯುಕ್ತಿಕ ಸ್ನೇಹಗಳಲ್ಲಿ ಮಾತ್ರ ಸೀಮಿತವಾಯಿತೇನೋ ಎನಿಸುತ್ತದೆ. ಇದನ್ನು ನಾನು ಅತ್ಯಂತ ಎಚ್ಚರಿಕೆಯಿಂದ ಹೇಳುತಿದ್ದೇನೆ. ಅಲ್ಲದೆ ದಲಿತ ಚಳುವಳಿಗಳ ವಿಘಟನೆಗೆ ಸಿದ್ಧಾಂತದ ಭಿನ್ನಾಭಿಪ್ರಾಯಕ್ಕಿಂತಲೂ ವೈಯುಕ್ತಿಕ ನೆಲೆಯಲ್ಲಿನ ಬೇಧಗಳೇ ಮೂಲಭೂತ ಕಾರಣವಿದೆಯೆನಿಸುತ್ತದೆ. ಮೇಲ್ಕಾಣಿಸಿದ ಚಿಂತನೆಗಳ ಒಜ್ಜೆಗೆ ದಲಿತ ಚಳುವಳಿ ನಿಜಕ್ಕೂ ದಣಿದಿತ್ತು. ವಿಘಟನೆ ಅನಿವಾರ್ಯ ಎನ್ನುವ ಪರಿಸ್ಥಿತಿ ಉದ್ಭವಿಸಿತು.
90ರ ದಶಕದ ನಂತರ ನಡೆದಿದ್ದೆಲ್ಲಾ ಈಗ ಇತಿಹಾಸದ ದುರಂತ ಅಧ್ಯಾಯ. ಮಹಾರಾಷ್ಟ್ರದಂತೆ ಕರ್ನಾಟಕದ ದಲಿತ ಚಳುವಳಿ ಸಹ ನಗರ, ಪಟ್ಟಣ ಕೇಂದ್ರಿತವಾಗಿತ್ತು. ಹಳ್ಳಿಗಳ ಜಾತೀಯತೆ ಮತ್ತು ಕ್ರೂರತೆ, ಮಧ್ಯಮ ಜಾತಿಗಳಿಂದ ಅಲ್ಲಿ ನಡೆಯುವ ಅಮಾನುಷ ಹತ್ಯೆಗಳು, ತಳಸಮುದಾಯಗಳ ಅಸಹಾಯಕತೆ ಮತ್ತು ಒಬ್ಬಂಟಿತನಕ್ಕೆ ನಮ್ಮಲ್ಲಿನ ದಲಿತ ಸಂಘಟನೆಗಳ ಬಳಿ ಮಂತ್ರದಂಡವೇ ಇರಲಿಲ್ಲ ಅಥವಾ ಅತ್ಯಂತ ಸೀಮಿತವಾಗಿತ್ತು. ಇಲ್ಲಿ ಸಂಘಟನೆಗಳು ದಲಿತರ ಮೇಲಿನ ದೌರ್ಜನ್ಯಗಳಿಗೆ ಪ್ರತಿಕ್ರಿಯಾತ್ಮವಾಗಿಯೇ ಹೋರಾಡಬೇಕಾಯಿತು ಹೊರತಾಗಿ ಕ್ರಿಯಾತ್ಮಕವಾಗಿ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸಲು ಬೇಕಾದ ಮಂತ್ರದಂಡ ಇವರ ಕೈಗೆ ದಕ್ಕಲೇ ಇಲ್ಲವೆನಿಸುತ್ತದೆ ಹಾಗೂ ಇದಕ್ಕೆ ಬೇಕಾದ ಸಿದ್ಧ ಮಾದರಿಗಳನ್ನು, ಆಯಾ ಕಾಲಮಾನಕ್ಕೆ ತಕ್ಕಂತೆ ಹೊಸ ಮಾರ್ಗಗಳನ್ನು ದಲಿತೇತರ ಪ್ರಗತಿಪರರು ದಲಿತ ಚಳುವಳಿಗೆ ಕಟ್ಟಿಕೊಡಲು ಸೋತರು. ನಾವೆಲ್ಲ ಜಾಗತೀಕರಣಕ್ಕೆ ತರೆದುಕೊಂಡಿದ್ದು ಸೀಮಿತ ನೆಲೆಯಲ್ಲಿ ಮಾತ್ರ ಎಂದೆನಿಸುತ್ತದೆ.
ಏತಕ್ಕೆ ಇಂಡಿಯಾದಲ್ಲಿ ಸಾಮಾಜಿಕ ನ್ಯಾಯ ಇಂದು ಸೋತಿದೆ ? ನಮ್ಮ ಬಹುಪಾಲು ಸಂಸ್ಕೃತಿ ಚಿಂತಕರು, ಪ್ರಗತಿಪರ ಹೋರಾಟಗಾರರು ಸಾಮಾಜಿಕ ನ್ಯಾಯದ ಮೂಲಭೂತ ಆಶಯಗಳನ್ನು, ಆದ್ಯತೆಗಳನ್ನು ಅತ್ಯಂತ ಸೀಮಿತ ಅರ್ಥದಲ್ಲಿ ಗ್ರಹಿಸಿದ್ದು, ಅಂಬೇಡ್ಕರ ಪ್ರತಿಪಾದಿಸಿದ ಜಾತಿವಿನಾಶ ಮತ್ತು ಸಹಬಾಳ್ವೆಯ ಮೂಲಭೂತ ಆಶಯಗಳನ್ನು ವ್ಯವಸ್ಥೆಯೊಳಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬೇಕಾದ ಮಂತ್ರದಂಡದ ಹುಡುಕಾಟ ಇನ್ನೂ ನಡೆದಿರುವುದು ಬಲು ದೊಡ್ಡ ಸೋಲು, ದಲಿತರ ಹಕ್ಕಿನ ಬಗ್ಗೆ ಮಾತನಾಡುವಾಗ ಕೇವಲ ಅಕಡೆಮಿಕ್ ಶ್ರೇಷ್ಟತೆಯನ್ನು ಬಲವಾಗಿ ನೆಚ್ಚಿ ಅವರ ನೆಲಸಂಸ್ಕೃತಿಯನ್ನು, ಮೂಲ ಅವೈದಿಕ ಪರಂಪರೆಯನ್ನು ತಮ್ಮ ಚಿಂತನೆಯ ಮೂಸೆಯೊಳಗೆ ಒಳಗೊಳ್ಳದೇ ಹೋಗಿದ್ದು ಮತ್ತು ಈ ಅವೈದಿಕ ಪರಂಪರೆಯ ಬಗೆಗೆ ಅನೇಕ ಬಗೆಯ ಅಪಾಯಕಾರಿ ವಿಸ್ಮೃತಿಗೆ ನಮ್ಮನ್ನೆಲ್ಲಾ ಒಡ್ಡಿಕೊಂಡಿದ್ದು. ದಲಿತರಿಗೆ ಸಾಂಸ್ಕೃತಿಕ ಆಯಾಮ ಕೊಡುವ ಭರದಲ್ಲಿ ಭವಿಷ್ಯದಲ್ಲಿ ಈ ಸಾಂಸ್ಕೃತಿಕ ಎಚ್ಚರದ ಹಣತೆ ಸದಾ ಕಾಲ ಜೀವಂತವಾಗಿ ಉರಿಯುವಂತೆ ಅದಕ್ಕೆ ಬೇಕಾದ ಮೌಲ್ಯಾಧಾರಿತ ಆರ್ಥಿಕತೆಯ ತಳಹದಿಯನ್ನು ರೂಪಿಸುವಲ್ಲಿ ನಾವೆಲ್ಲಾ ಎಡವಿದ್ದು. ಗ್ರಾಮೀಣ ಭಾರತ ಹಾಗು ನಗರ ಭಾರತ ಎನ್ನುವ ಎರಡು ದಡಗಳಲ್ಲಿ ಬದುಕಬೇಕಾಗಿರುವ ದಲಿತರ ಮಾನಸಿಕ ತಯಾರಿ ಒಂದೇ ಮಟ್ಟದ್ದೇ ಅಥವಾ ವಿಭಿನ್ನವೇ ಇದಕ್ಕೆ ಉತ್ತರ ಹಾಗೂ ಪರಿಹಾರಗಳಲ್ಲಿ ಪ್ರಖರವಾದ ತೀಕ್ಷಣತೆಯ ಗ್ರಹಿಕೆಯ ಕೊರತೆ. ಈಗಾಗಲೇ ದಬ್ಬಾಳಿಕೆ ನಡೆಸುತ್ತಿರುವ ಹಳೆಯ ದಮನಕಾರಿ ನೀತಿಯನ್ನು ಸಮರ್ಥವಾಗಿ ಅರ್ಥೈಸುವಲ್ಲಿ ಯಶಸ್ವಿಯಾದ ದಲಿತ ಚಳುವಳಿ ಹಾಗೂ ಚಿಂತಕರು ಹೊಸ ರೀತಿಯ, ಜಾಗತೀಕರಣಗೊಂಡ ದೇಶದಲ್ಲಿ ಕ್ಷಣ ಕ್ಷಣಕ್ಕೂ ಹುಟ್ಟಿಕೊಳ್ಳುವ ಸವಾಲುಗಳಿಗೆ, ಅಸಮಾನತೆಗೆ, ದಮನಕಾರಿ ಪ್ರವೃತ್ತಿಗೆ ಸಮಂಜಸ ಉತ್ತರ ಹುಡುಕುವಲ್ಲಿ ಸೋತಿದ್ದು, ಜಾತಿ ಮತ್ತು ವರ್ಗವೆನ್ನುವ ಎರಡು ನೆಲೆಗಳನ್ನು ವೈಜ್ನಾನಿಕವಾಗಿ ವಿಶ್ಲೇಷಿಸುವಲ್ಲಿ ಅನಗತ್ಯ ಗೊಂದಲಗಳಿರುವುದು, ಒಂದೇ ನಾಣ್ಯದ ಎರಡು ಮುಖಗಳಾದ ಗಾಂಧೀವಾದ ಮತ್ತು ಅಂಬೇಡ್ಕರವಾದಕ್ಕೆ ದಿವಂಗತ ಡಿ.ಆರ್. ನಾಗರಾಜ ಕೊಟ್ಟ ಅದ್ಭುತ ಚಿಂತನೆಯಾದ ಗಾಂಧಿ ಗ್ರಾಮದಿಂದ ಹೊರಕ್ಕೆ ನಗರದ ಕಡೆಗೆ ನಡೆಯಬೇಕು ಮತ್ತು ಅಂಬೇಡ್ಕರ್ ನಗರದಿಂದ ಗ್ರಾಮದ ಕಡೆಗೆ ಚಲಿಸಬೇಕುಎನ್ನುವ ಮಾರ್ಗಕ್ಕೆ ನಿರ್ಲಕ್ಷ್ಯ ತೋರಿದ್ದು.
ಎಡಪಂಥೀಯ ಚಿಂತನೆ ಹಾಗು ಚಳುವಳಿ ದಲಿತ ಚಳುವಳಿ ಒಂದಕ್ಕೊಂದು ಸಹಭಾಗಿತ್ವದಲ್ಲಿ ಬೆರೆಯದೇ ಹೋದದ್ದು, ದಿವಂಗತ ಡಿ.ಆರ್.ಎನ್. ಹೇಳಿದಂತೆಭಾರತೀಯ ಬಂಡವಾಳಶಾಹಿ ಮತ್ತು ಜಾತಿಪದ್ಧತಿಗಳ ನಡುವಣ ಸಂಕೀರ್ಣ ಸಂಬಂಧಗಳನ್ನು ಅಂಬೇಡ್ಕರ ಅಷ್ಟು ಪ್ರಖರವಾಗಿ ಗ್ರಹಿಸಲಾಗಲಿಲ್ಲ. ಭಾರತೀಯ ಬಂಡವಾಳಶಾಹಿಯ ತರ್ಕ, ಮೂಲಭೂತವಾಗಿ ಮೇಲುಜಾತಿಗಳನ್ನು ಬಲಪಡಿಸುವಂತದ್ದು, ಭಾರತೀಯ ಬಂಡವಾಳಶಾಹಿ ದಲಿತರಿಗೆ ಕೆಲವು ತುಣುಕುಗಳನ್ನು ನೀಡಿ ಮೇಲುಜಾತಿಗಳಿಗೆ ಭರ್ಜರಿ ಔತಣವನ್ನು ಮುಂದುವರೆಸಿತು. ಭಾರತೀಯ ಬಂಡವಾಳಶಾಹಿ ಸಮಾಜದ ಆಯಕಟ್ಟಿನ ಕ್ಷೇತ್ರಗಳ ನಾಯಕತ್ವ ಮೇಲುಜಾತಿಯಲ್ಲೇ ಮುಂದುವರೆಯಿತು. ಮೇಲುಜಾತಿಗಳು ಮತ್ತು ಬಂಡವಾಳಶಾಹಿಗಳ ಹೊಂದಾಣಿಕೆಯನ್ನು ಅಂಬೇಡ್ಕರರಿಗಿಂತ ಲೋಹಿಯಾ ಹೆಚ್ಚು ಸೂಕ್ಷ್ಮವಾಗಿ ಗ್ರಹಿಸಿದ್ದರು. ಇಲ್ಲಿ ಅಂಬೇಡ್ಕರರವರ ಮಿತಿಯನ್ನು ನಾವೂ ಸಹ ಮೀರಲು ಸೋತೆವು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ದಲಿತರಿಗೆ ರಾಜಕೀಯವಾಗಿ ಹಕ್ಕಿನಿಂದ ಮಾತನಾಡುವ, ಕನಿಷ್ಟ ಎರಡಂಕಿಯ ಶಾಸಕ ಸ್ಥಾನಗಳನ್ನು ಗಳಿಸುವ ಬಿಎಸ್ಪಿ ಮಾದರಿ ಸಹ ಇಲ್ಲಿ ಸೋತು ಹೋಗಿದ್ದು, ಹಾಗು ಸಾಮಾಜಿಕ ನ್ಯಾಯದ ತಕ್ಕಡಿಯ ಅಡಿಯಲ್ಲಿ ಮೀಸಲಾತಿಯನ್ನು ಬಳಸಿಕೊಂಡು ವ್ಯವಸ್ಥೆಯ ಶ್ರೇಣೀಕೃತ ಮೆಟ್ಟಿಲುಗಳನ್ನು ಏರಿದ ಬಹುಪಾಲು ಅಕ್ಷರಸ್ಥ ದಲಿತರು ನಂತರ ತಮ್ಮ ಜನಾಂಗದ ಶೋಷಿತ ಬದುಕನ್ನೇ, ಶೋಷಿತರನ್ನೇ ಕಡೆಗಣಿಸಿ, ತಾವು ನಡೆದ ಬಂದ ದಾರಿಯನ್ನೇ ಮರೆತು ನವ ಭ್ರಾಹ್ಮಣರಾದದ್ದು. ಕೆಲವು ದಲಿತ ನಾಯಕರ ಅನುಕೂಲಸಿಂದು, ಅವಕಾಶವಾದಿ ರಾಜಕಾರಣ, ಕಡೆಗೆ ಅಂಬೇಡ್ಕರ ಅವರ ಚಲನಶೀಲ ರಾಜಕಾರಣವನ್ನು ಅರ್ಥೈಸಿಕೊಳ್ಳಲು ಸೋತಿದ್ದು. ಇವೆಲ್ಲವೂ ಪರಸ್ಪರ ಪೂರಕವಾಗಿಯೇ ಬೆಸೆದುಕೊಂಡು ತಳ ಸಮುದಾಯಗಳ ಬದುಕಿನ ಮೇಲೆ ಅತ್ಯಂತ ಖುಣಾತ್ಮಕ ಪರಿಣಾಮವನ್ನೇ ಬೀರಿದವು.
ಅತ್ಯಂತ ಮುಖ್ಯವಾಗಿ ಜಾಗತೀಕರಣಗೊಂಡ ಭಾರತದೊಳಗೆ ಈ ಹೆಮ್ಮಾರಿಯನ್ನು ಎದುರಿಸಲು ಇಲ್ಲಿನ ಪ್ರಗತಿಪರ ಚಿಂತಕರು ಅತ್ಯಂತ ವೈಜ್ನಾನಿಕವಾಗಿ ಕೇವಲ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿತ್ತೇನೂ ಅನಿಸುತ್ತದೆ.
ಮೊದಲನೆಯದಾಗಿ ದಣಿದ, ವಿಘಟನೆಗೊಂಡ ಚಳುವಳಿಗಳ ಪುನ ಸೃಷ್ಟಿಯ ಮೂಲಕ ದಲಿತರ ಸಬಲೀಕರಣ ಹಾಗು ಆತ್ಮಾಭಿಮಾನದ, ಇತರ ಜಾತಿಗಳಂತೆ ಆರ್ಥಿಕವಾಗಿ ನೆಮ್ಮದಿಯ ಬಾಳು ತಂದುಕೊಡಲು ಸಾಧ್ಯವೇ? ಯಜಮಾನ್ಯ ಸಂಸ್ಕೃತಿಗೆ ಸೆಡ್ಡು ಹೊಡೆಯುವ ಆ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಈ ಅತ್ಯಂತ ಹಳೆಯ ಮಾರ್ಗ ಇಂದು ತೆವಳುತ್ತಿದೆ. ಏಕೆಂದರೆ ಇದು ದಲಿತರಿಗೆ ಕ್ರಿಯಾತ್ಮಕವಾಗಿ ಪರ್ಯಾಯ ನೆಲೆಯನ್ನು, ಬಾಳನ್ನು ನೀಡಲು ಸಾಧ್ಯವಿಲ್ಲ.  ಇಲ್ಲಿನ ಕ್ರಾಂತಿಕಾರಿ ಆಶಯಗಳು ಪ್ರಭುತ್ವದೊಂದಿಗೆ ಇಲ್ಲಾ ಸೆಣೆಸಾಡುತ್ತಾ ಸಾಧಿಸಬೇಕು ಇಲ್ಲವೇ ಪ್ರಭುತ್ವದೊಂದಿಗೆ ಹಂಚಿಕೊಂಡು ಸಾಧಿಸಬೇಕು. ಮೊದಲನೇಯ ಮಾರ್ಗಕ್ಕೆ ಬದ್ಧತೆಯುಳ್ಳ ತಂಡದ ಕೊರತೆಯಿದ್ದರೆ, ಎರಡನೇ ಮಾರ್ಗಕ್ಕೆ ನೈತಿಕತೆಯ ಬಲು ದೊಡ್ಡ ಕೊರತೆಯಿದೆ. ಈ ಕತ್ತಲ ದಾರಿ ಬಲು ದೂರ ಎನ್ನುವಂತಹದ್ದೂ ಸೂರ್ಯಸ್ಪಷ್ಟ. ಇದು ನಿರಂತರವಾಗಿ ನಡೆದರೆ ಮಾತ್ರ ಇದರ ಫಲ ಎರಡು ಅಥವಾ ಮೂರು ತಲೆಮಾರುಗಳಿಗೆ ದೊರಕಬಹುದು.
ಎರಡನೇಯದಾಗಿ ಉತ್ತರ ಪ್ರದೇಶದ ಮಾದರಿಯಲ್ಲಿ ದಲಿತ ರಾಜಕೀಯ ನೆಲೆಗಟ್ಟನ್ನು ನಮ್ಮ ಕರ್ನಾಟಕದಲ್ಲಿ ಸ್ಥಾಪಿಸಲು ಸಾಧ್ಯವೇ ? ಎಪ್ಪತ್ತರ ದಶಕದಲ್ಲಿ ತಮ್ಮ ಸರ್ಕಾರಿ ಉದ್ಯೋಗವನ್ನು ತ್ಯಜಿಸಿ ಅಡಿಗಡಿಗೂ ಮೇಲ್ಜಾತಿಗಳ, ಮಧ್ಯಮವರ್ಗಗಳ ಹೀಯಾಳಿಕೆಯನ್ನು ಅನುಭವಿಸುತ್ತಾ ಬಿಎಸಪಿ ಎನ್ನುವ ದಲಿತರಿಗಾಗಿಯೇ ಒಂದು ರಾಜಕೀಯ ಪಕ್ಷವನ್ನು ಕಟ್ಟಿದವರು ಕಾನ್ಸೀರಾಮ್. ಆಗ ಕಾನ್ಸೀರಾಮ್ ಅವರು ತಮ್ಮ ಸ್ನೇಹಿತ ಖಾರ್ಪಡೆ ಅವರೊಂದಿಗೆ ಸೇರಿ 40 ವರ್ಷಗಳ ಹಿಂದೆ ಅಂಬೇಡ್ಕರ ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ, ಚಳುವಳಿ ಎನ್ನುವ ಧ್ಯೇಯ ಮಂತ್ರವನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ಅಖಿಲ ಭಾರತ ದಲಿತ ಹಾಗೂ ಆದಿವಾಸಿ ಹಾಗೂ ಹಿಂದುಳಿದವರ ಒಕ್ಕೂಟ ನಂತರ ದಲಿತ ಮತ್ತು ಅಲ್ಪ ಸಂಖ್ಯಾತ ಒಕ್ಕೂಟ ಸ್ಥಾಪಿಸಿದರು. ಇದಕ್ಕಾಗಿ ತಮ್ಮ ಜೀವಮಾನವನ್ನೆ ಮುಡಿಪಾಗಿಟ್ಟ ಕಾನ್ಸೀರಾಮ ತಮ್ಮ ಸಂಘಟನಾ ಚಾತುರ್ಯವನ್ನು ಬಳಸಿ ರಾಷ್ಟ್ರ ಮಟ್ಟದಲ್ಲಿ ದಲಿತರಿಗೆ ಒಂದು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಗಟ್ಟಿಯಾದ ಐಡೆಂಟಿಟಿಯನ್ನು ತಂದುಕೊಡಲು ಹಗಲಿರುಳೂ ದುಡಿದರು.
ಇಲ್ಲಿ ನಿಸ್ವಾರ್ಥವಿತ್ತು. ಎಪ್ಪತ್ತರ ಹಾಗೂ ಎಂಬತ್ತರ ದಶಕದಲ್ಲಿ ಕಾನ್ಸೀರಾಮ ಅವರು ಸೈಕಲ ಮೇಲೆ ಸವಾರಿ ನಡೆಸಿ ಇಡೀ ಉತ್ತರ ಭಾರತದ ಹಳ್ಳಿಗಳನ್ನು, ಪಟ್ಟಣಗಳನ್ನು ಸುತ್ತಿದರು. ತಮ್ಮ ದಣಿವರಿಯದ ತಿರುಗಾಟ ಹಾಗೂ ಅಧ್ಯಯನದಿಂದ ಇಡೀ ಉತ್ತರ ಭಾರತದ ಒಟ್ಟು ಜನಸಂಖ್ಯೆಯ ವಿವರಗಳು, ಇದರಲ್ಲಿ ಮೇಲ್ಜಾತಿಯವರೆಷ್ಟು, ಮಧ್ಯಮ ಜಾತಿಯವರೆಷ್ಟು, ಹಿಂದುಳಿದವರ ಹಾಗೂ ದಲಿತರ ಶೇಕಡವಾರು ಪ್ರಮಾಣ, ಅವರ ಸಾಮಾಜಿಕ ಸ್ಥಿತಿಗತಿಗಳು ಎಲ್ಲ ಮಾಹಿತಿಯನ್ನು ಕಲೆಹಾಕಿದರು. ಇದು ಕಾನ್ಸೀರಾಮ್ ಅವರ ಶೈಲಿ. 1984 ರಲ್ಲಿ ಬಿಎಸಪಿ ಎನ್ನುವ ತಮ್ಮ ಮಹಾತ್ವಾಕಾಂಕ್ಷೀ ರಾಜಕೀಯ ಪಕ್ಷವನ್ನು ಸ್ಥಾಪಿಸುವಷ್ಟರಲ್ಲೇ ಇಡೀ ಉತ್ರರ ಭಾರತದ ಸಾಮಾಜಿಕ ಹಾಗೂ ರಾಜಕೀಯ ಸ್ವರೂಪಗಳು, ಜಾತಿ ವ್ಯವಸ್ಥೆ, ಅವುಗಳ ಆಳ ಸ್ವರೂಪಗಳು ಎಲ್ಲವನ್ನೂ ಅರೆದು ಕುಡಿದಿದ್ದರು ಕಾನ್ಸೀರಾಮ್. ಆಗ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ದಲಿತ ಸಂಘಟನೆಗಳು ದಲಿತರ ಮೇಲಿನ ದೌರ್ಜನ್ಯಕ್ಕೆ ಪ್ರತಿಕ್ರಿಯಾತ್ಮಕವಾದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿದ್ದರೆ ಉತ್ತರ ಭಾರತದಲ್ಲಿ ಕಾನ್ಸೀರಾಮ ಅವರು ಕ್ರಿಯಾತ್ಮಕವಾಗಿ 90ರ ದಶಕದಲ್ಲಿ ದಲಿತ ನಾಯಕ ಅಥವಾ ನಾಯಕಿ ಉತ್ತರ ಭಾರತದ ಮುಖ್ಯಮಂತ್ರಿಯ ಪಟ್ಟವನ್ನು ಗಳಿಸಲೇಬೇಕು ಎನ್ನುವ ಅತ್ಯಂತ ಸ್ಪಷ್ಟವಾದ ರಾಜಿಕೀಯ ಮಹಾತ್ವಾಕಾಂಕ್ಷೆಯೊಂದಿಗೆ ಮುನ್ನುಗಿದ್ದರು.
ಇಲ್ಲಿ ಅಕಡೆಮಿಕ ಚಿಂತನೆಗಳು, ಸಾಮಾಜಿಕ ಸಂಘಟನೆಗಳು, ಬೌದ್ಧಿಕ ಕಸರತ್ತುಗಳು, ಎಡಪಂಥೀಯ ನೆಲೆಯ ಚಿಂತನ ಮಂಥನಗಳು ಯಾವ ಕಾಲಕ್ಕೂ ದಲಿತರಿಗೆ ರಾಜಕೀಯ ಸ್ಥಾನಮಾನಗಳನ್ನು ದಕ್ಕಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ನಂಬಿದ್ದ ಕಾನ್ಸೀರಾಮ ಕಡೆವರೆಗೂ ಪ್ರಗತಿಪರ ಚಿಂತಕರನ್ನು, ಎಡಪಂಥೀಯ ಬುದ್ಧಿಜೀವಿಗಳನ್ನು ತಮ್ಮ ಬಳಿ ಹಾಗೂ ಪಕ್ಷದ ಹತ್ತಿರಕ್ಕೂ ಸಹ ಬಿಟ್ಟುಕೊಳ್ಳಲಿಲ್ಲ. ಇದೇನಾದರೂ ಸಾಧ್ಯವಾಗಿದ್ದರೆ ಮಾಯಾವತಿ ನಾಯಕತ್ವದ ಬಿಎಸಪಿ ಪಕ್ಷ ಇಂದು ಸೈದ್ಧಾಂತಿಕವಾಗಿ ಈಗಿನ ಕೆಳಮಟ್ಟಕ್ಕೆ ತಲುಪುತ್ತಿರಲಿಲ್ಲವೇನೋ. ಅದೇ ರೀತಿ ಈಗಲಾದರೂ ಒಂದು ಕಾಲದಲ್ಲಿ ವೈಚಾರಿಕ ಬದ್ಧತೆಯನ್ನು, ಬುದ್ಧಿಜೀವಿ ವ್ಯಕ್ತಿತ್ವವನ್ನು ತಮ್ಮೊಳಗೆ ಆಳವಾಗಿ ಬಿಟ್ಟುಕೊಂಡಿದ್ದ ಕರ್ನಾಟಕದ ದಲಿತ ಸಂಘಟನೆಗಳು ಆ ಸೈದ್ಧಾಂತಿಕ ವ್ಯಕ್ತಿತ್ವವನ್ನೇ ನೆಚ್ಚಿಕೊಂಡು ಕಾನ್ಸೀರಾಮ ಮಾದರಿಯ ರಾಜಕೀಯ ಪ್ರೇರಿತ ಕ್ರಿಯಾತ್ಮಕ ರಾಜಕೀಯವನ್ನು ಇಂದು ಮಾಡಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಅಂಬೇಡ್ಕರ ಜನ್ಮ ದಿನದಂದು ಒಟ್ಟುಕೂಡಿ ಪ್ರಜಾ ಪ್ರಗತಿರಂಗವೆನ್ನುವ ರಾಜಕೀಯ ಪಕ್ಷವನ್ನು ಕಟ್ಟಿರುವ ಅನೇಕ ದಲಿತ ಹಾಗೂ ಅಲ್ಪ ಸಂಖ್ಯಾತ ಸಂಘಟನೆಗಳು ಕಾನ್ಸೀರಾಮ ಮಾದರಿಯನ್ನು ಅರಿತುಕೊಂಡಂತಿದೆ. ಇಲ್ಲಿ ಗೊಂದಲಗಳಿಲ್ಲ. ಇವರಲ್ಲಿ ಅಹಿಂದ ಸಮುದಾಯಕ್ಕೆ ಇಂದು ರಾಜಕೀಯವೊಂದೇ ಪಯರ್ಯಾ ಮಾರ್ಗ ಎನ್ನುವ ಸ್ಪಷ್ಟ ತಿಳುವಳಿಕೆಯಿದೆ. ಮುಂದಿನ ದಿನಗಳಲ್ಲಿ ಪ್ರಜಾ ಪ್ರಗತಿರಂಗದ ಸ್ಪಷ್ಟ ನಡೆಗಳು ಗೊತ್ತಾಗಲಿದೆ. ಸದ್ಯಕ್ಕೆ ಇದು ಅತ್ಯಂತ ವಾಸ್ತವ ಮಾರ್ಗ.
ಮೂರನೆಯದಾಗಿ ಆರ್ಥಿಕ ಸ್ವಾವಲಂಬನೆಯ, ಸಂಪೂರ್ಣ ಪಶ್ಚಿಮ ಮಾದರಿಯ ಬಂಡವಾಳಶಾಹಿಯ ಯಾವುದೇ ಗೊಂದಲಗಳಿಲ್ಲದ ಸ್ಪಷ್ಟವಾದ ಬೆಳಕಿನ ದಾರಿ. ದಲಿತರು ವಿಮುಕ್ತಿಯನ್ನು ಎತ್ತಿಹಿಡಿಯುವ, ಸಮಬಾಳು ಸಮಪಾಲು ತತ್ವದಡಿ ಕೆಲಸ ಮಾಡುವ, ಆಸ್ತಿಯನ್ನು ಸಮನಾಗಿ ಹಂಚುವ ಎಡಪಂಥೀಯ ಸಿದ್ಧಾಂತಗಳನ್ನು ತಮ್ಮೊಳಗೆ ಬಿಟ್ಟುಕೊಂಡಿದ್ದಾರೆ. ಆದರೆ ಬಹುಪಾಲು ಎಡಪಂಥೀಯ ಬುದ್ದಿಜೀವಿಗಳು ದಲಿತ ಸಂವೇದನೆಯನ್ನು, ಅಂಬೇಡ್ಕರವಾದವನ್ನು ತಮ್ಮೊಳಗೆ ಬಿಟ್ಟುಕೊಂಡಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಕಮ್ಯುನಿಷ್ಟ ಸರ್ಕಾರಗಳಿದ್ದ ಕೇರಳ ಹಾಗು ಪಶ್ಚಿಮ ಬಂಗಾಳದ ರಾಜ್ಯಗಳು. ಕೆಲಸ ಕೊಡುವವರಾಗಿ, ಕೆಲಸ ಕೇಳುವವರಾಗಬೇಡಿ ಎನ್ನುವ ಸ್ವಾಯತ್ತತೆಯ, ಸ್ವಾವಲಂಬನೆಯ ಘೋಷಣೆಯೊಂದಿಗೆ ಹುಟ್ಟಿಕೊಂಡ ದಲಿತ ಉದ್ಯಮಿಗಳು ಅರ್ಥತ ದಲಿತ ಛೇಂಬರ್ಸ ಆಫ ಕಾಮರ್ಸ ಹಾಗೂ ಕಳೆದ 20 ವರ್ಷಗಳಿಂದ ಇದರ ಪರವಾಗಿ ಚಿಂತಿಸಿದ ಖ್ಯಾತ ದಲಿತ ಚಿಂತಕ ಚಂದ್ರಬಾನು ಪ್ರಸಾದ ಇದರ ಕಟ್ಟಾ ಪ್ರತಿಪಾದಕರು. ಚಂದ್ರಬಾನು ಪ್ರಸಾದರು ದಲಿತರು ಹಾಗೂ ಆದಿವಾಸಿಗಳನ್ನು ಸಮಾಜದ ಮಖ್ಯವಾಹಿನಿಗೆ ತರಲು ದಿಗ್ವಿಜಯಸಿಂಗ ರವರ ನಾಯಕತ್ವದಲ್ಲಿ ಐತಿಹಾಸಿಕ ಭೂಪಾಲ ದಾಖಲೆಯನ್ನು ರೂಪಿಸಿದವರು. ಈ ಮೂಲಕ ಸರ್ಕಾರವು ದಲಿತ ಹಾಗೂ ಆದಿವಾಸಿಗಳ ಉದ್ಯಮಗಳಿಂದ ಶೇಕಡಾ 30ರಷ್ಟನ್ನು ಕೊಳ್ಳಬೇಕು ಎನ್ನುವ ಭೂಪಾಲ ಘೋಷಣೆ ಮಾಡಲಾಯಿತು. ಇಲ್ಲಿಯೂ ಸಹ ಯಾವುದೇ ಗೊಂದಲಗಳಿಲ್ಲ. ಸಮಾಜದ ಮುಖ್ಯವಾಹಿನಿಗೆ ದಲಿತರು ಪ್ರವೇಶ ಪಡೆಯಲೇಬೇಕಾದರೆ ದಲಿತ ಮಧ್ಯಮ ವರ್ಗ ಸೃಷ್ಟಿಯಾಗಬೇಕು, ನಂತರ ಇದೇ ದಲಿತ ಮಧ್ಯಮ ವರ್ಗ ಮುಂದೆ ಬೆಳೆದು ದಲಿತ ಉದ್ಯಮಿಗಳಾಗಬೇಕು ಎನ್ನುವ ಘೋಷಣೆ ಹಾಗು ಚಿಂತನೆ ಇಲ್ಲಿನ ಮೂಲ ಆಶಯ. ಚಿಂತಕ ಚಂದ್ರಬಾನು ಪ್ರಸಾದ ಅವರ ಪ್ರಕಾರ ಕಳೆದ 30 ವರ್ಷಗಳಲ್ಲಿ ಶೈಕ್ಷಣಿಕವಾಗಿ ಮೀಸಲಾತಿಯನ್ನು ಬಳಸಿಕೊಂಡು ನಂತರ ಸ್ವಾವಲಂಬನೆಯ ಮೂಲಕ, ಸತತ ಪರಿಶ್ರಮದ ಮೂಲಕ ಇಂದು ದಲಿತ ಉದ್ಯಮಿಯಾಗಿ ಬೆಳದ ಪ್ರಮುಖರೆಂದರೆ ಮಿಲಿಂದ ಕಾಂಬ್ಳೆ, ಅಶೋಕ ಖಡೆ, ಮಾಲ್ಕಿಯತ ಚಂದ, ಕಲ್ಪನಾ ಸರೋಜ, ಸುನೀಲ ಜೋಡೆ, ಕೋಬ್ರಗಡೆ, ಪ್ರಸಾದ ದಹಪುತೆ,ರಾಜೇಶ ಪಾಸ್ವಾನ ಮುಂತಾದವರು.
ಇವರೆಲ್ಲರೂ ಇಂದು ಕೋಟಿ ರೂಪಾಯಿಗಳ ತೆರಿಗೆಯನ್ನು ಕಟ್ಟಬಲ್ಲಷ್ಟು ಸಮರ್ಥರು. ಇದು ದಲಿತ ಹಕ್ಕುಗಳ ಚಳುವಳಿಗಳ ಯಶಸ್ಸಲ್ಲದೇ ಮತ್ತಿನ್ನೇನು ಎಂದು ಅತ್ಯಂತ ಹೆಮ್ಮೆಯಿಂದ ಪ್ರಶ್ನಿಸುತ್ತಾರೆ ಚಂದ್ರಬಾನು ಪ್ರಸಾದ. ಇದು ನಿಜವಲ್ಲವೇ? ಯಾವುದನ್ನು ನಾವೆಲ್ಲ ದಲಿತರ ಸಬಲೀಕರಣ ಎಂದು ಕರೆಯುತ್ತೇವೆಯೋ, ಯಾವುದನ್ನು ನಾವೆಲ್ಲ ದಲಿತರು ಸವರ್ಣೀಯರೊಂದಿಗೆ ಸಮಸಮವಾಗಿ ಹೆಜ್ಜೆ ಹಾಕಬೇಕೆಂದು ಕನಸಿದ್ದೆವೋ ಆ ಕನಸಿನ ಸಾಕಾರ ರೂಪವಲ್ಲವೇ ಈ ದಲಿತ ಉದ್ಯಮ ಹಾಗೂ ಉದ್ಯಮಿಗಳ ಯಶಸ್ಸು. ಇಲ್ಲಿ ಚಂದ್ರಬಾನು ಪ್ರಸಾದರು ಪ್ರತಿಪಾದಿಸುವುದು ವಲಸೆಯನ್ನು. ಅಂದರೆ ಗ್ರಾಮಗಳಲ್ಲಿನ ದಲಿತರು ಪಟ್ಟಣಕ್ಕೆ, ಪಟ್ಟಣಗಳಲ್ಲಿನ ದಲಿತರು ನಗರಕ್ಕೆ ವಲಸೆ ಹೋಗಲೇಬೇಕು, ಆ ಮೂಲಕ ಒಂದು ಚಲನಶೀಲತೆಯನ್ನು ಸೃಷ್ಟಿಸಬೇಕು, ಕಡೆಗೆ ಅಂಬೇಡ್ಕರ ಅವರು ಸಹ ನಗರಗಳಿಗೆ ವಲಸೆ ಹೋಗುವುದು ಹೊಸ ಜೀವನ ಚಳುವಳಿ ಎಂದೇ ಅಂಬೇಡ್ಕರ ವಿಶ್ಲೇಷಿಸಿದ್ದರು ಎಂದು ಚಂದ್ರಬಾನು ಪ್ರಸಾದ ಹೇಳುತ್ತಾರೆ. ಕಡೆಗೆ ಚಂದ್ರಭಾನು ಪ್ರಸಾದರು ಹೇಳುವುದು ಭಾರತದ ಸರ್ಕಾರ ದಲಿತೇತರರನ್ನು ದಲಿತರೊಂದಿಗೆ ಸಹ ಭೋಜನ ಮಾಡುವಂತೆ ಎಂದೂ ಒತ್ತಾಯ ಮಾಡುವುದಿಲ್ಲ, ಆದರೆ ಮುಕ್ತ ಮಾರುಕಟ್ಟೆ ಈ ಸಹಭೋಜನಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ದಲಿತರು ಹಾಗು ಸವರ್ಣೀಯರನ್ನು ಒಂದೇ ಊಟದ ಟೇಬಲಗೆ ತರುವಂತಹ ಶಕ್ತಿಯನ್ನು ಮುಕ್ತ ಮಾರುಕಟ್ಟೆಗೆ ಇದೆ.
2049ರ ವೇಳೆಗೆ ಭಾರತ ತನ್ನ ಸಂವಿಧಾನತ್ಮಕತೆಯ 100ನೇ ವರ್ಷಾಚರಣೆಯ ಸಂದರ್ಭದಲ್ಲಿ ದಲಿತರು ಅಂಬೇಡ್ಕರ ರೂಪಿಸಿದ ಸಂವಿಧಾನ, ಪ್ರಜಾಸತ್ತೆ ಮತ್ತು ಮುಕ್ತ ಮಾರುಕಟ್ಟೆ ಇವು ತಮ್ಮ ಸಮುದಾಯಕ್ಕೆ ಆಶ್ಚರ್ಯಕರ ಅಭಿವೃದ್ಧಿಯನ್ನು ತಂದಿವೆ ಎಂದು ಸಾಬೀತುಪಡಿಸಬೇಕು. ಆ ದಿಸೆಯಲ್ಲಿ ದಲಿತರು ಮೀಸಲಾತಿ, ರೇಷನ ಕಾರ್ಡ್, ಸ್ಕಾಲರಶಿಪಗಳಿಂದ ಹೊರಬರಬೇಕು. ಎಲ್ಲಾ ದಲಿತರು ಒಂದು ಹಾಗೂ ಎರಡನೇ ದರ್ಜೆ ಅಧಿಕಾರಿಗಳು, ಡಾಕ್ಟರುಗಳೂ, ಇಂಜಿನಿಯರಗಳೂ, ಬ್ಯಾಂಕರಗಳೂ, ಸಂಸತ ಸದಸ್ಯರೂ, ವಿಧಾನ ಮಂಡಳಿ ಸದಸ್ಯರೂ ತಮ್ಮ ಮಕ್ಕಳು ಮೀಸಲಾತಿ ಉಪಯೋಗಿಸದಂತೆ ನೋಡಿಕೊಳ್ಳಬೇಕು. ಇದು ಮೀಸಲಾತಿ ಸ್ವತಂತ್ರಗೊಳಿಸುತ್ತದೆ ಎಂಬುದನ್ನು ಸಾಬೀತುಗೊಳಿಸುತ್ತದೆ. ಇದು ಮೀಸಲಾತಿ ವಿರೋಧಿಗಳನ್ನು ಬಾಯಿ ಮುಚ್ಚಿಸುತ್ತದೆ. ( ಆಧಾರ: ದಲಿತ ಡೈರಿ: ಸಂವಾದ ಮಾಸ ಪತ್ರಿಕೆ ).
ಆದರೆ ಈ ಚಂದ್ರಬಾನು ಪ್ರಸಾದರ ಈ ವಿಶಾಲ ಮನೋಭಾವದ, ದಲಿತರ ಆಧುನೀಕರಣದ ಚಲನಶೀಲತೆಯನ್ನು ಎಡಪಂಥೀಯ ಚಿಂತಕರು ತೀವ್ರವಾಗಿ ವಿರೋಧಿಸುತ್ತಾರೆ. ಇವರ ವಿರೋಧಕ್ಕೆ ಮೂಲಭೂತ ಕಾರಣಗಳು ಹಲವು. ಮೊದಲನೆಯದಾಗಿ ಈ ಜಾಗತೀಕರಣದ, ನವವಸಾಹತುಶಾಹಿಯ ಜಗತ್ತಿನಲ್ಲಿ ದಲಿತರು ಇದರೊಂದಿಗೆ ಹೆಜ್ಜೆ ಹಾಕಿದರೆ ಈ ಪೆಡಂಭೂತದ ಹರಿಕಾರರು ಕಾಲಕ್ರಮೇಣ ದಲಿತರನ್ನು ಬಳಸಿಕೊಂಡು ಉಂಡನಂತರ ಬಾಳೆ ಎಲೆಯನ್ನು ಬಿಸಾಡುವಂತೆ ಬಿಸಾಡುತ್ತಾರೆ ಎನ್ನುವ ಆತಂಕ. ಸಾವಿರಾರು ವರ್ಷಗಳಿಂದ ಅಸಮಾನತೆಯನ್ನು, ಅಸ್ಪೃಶ್ಯತೆಯನ್ನು ಪ್ರತಿಪಾದಿಸಿದ ಭಾರತದ ಸಮಾಜ ಸಲೀಸಾಗಿ ದಲಿತರು ತಮ್ಮ ಸಮನಾಗಿ ಆಧುನಿಕರಾಗಿ ಬೆಳೆಯುವುದನ್ನು ಅನುಮೋದಿಸುವುದೇ ಇಲ್ಲ ಆಗ ದಲಿತರು ಸಂಪೂರ್ಣವಾಗಿ ಅತಂತ್ರರಾಗುತ್ತಾರೆ ಎನ್ನುವ ಕಳಕಳಿ.ಇವರ ಈ ಆತಂಕ ನಿಜಕ್ಕೂ ಸಹಜವಾದದುದೇ. ಆದರೆ ಆದರೆ ಸಂವಿಧಾನವನ್ನು ಗೌರವಿಸುವ ನಮ್ಮ ಬುದ್ಧಿಜೀವಿಗಳಿಗೆ ಅತ್ಯಂತ ಮಗ್ಧ ಹಾಗೂ ಕೆಲವು ಸರಳ ಮೂಲಭೂತ ಪ್ರಶ್ನೆಗಳನ್ನು ಹಾಕಿಕೊಳ್ಳಲು ನಿರಾಕರಿಸುತ್ತಾರೆ. ಅತ್ಯಂತ ಮುಖ್ಯ ಪ್ರಶ್ನೆ 90ರ ದಶಕದ ನಂತರದ ಭಾರತದಲ್ಲಿ, ಸಂಪೂರ್ಣ ಜಾಗತೀಕರಣ ಹಾಗೂ ವಸಾಹುತೀಕರಣಗೊಂಡ ಭಾರತದಲ್ಲಿ ಸರ್ಕಾರೀ ನೇಮಕಾತಿಗಳು ಕುಸಿಯುತ್ತಾ ಕ್ರಮೇಣವಾಗಿ ಕ್ಷೀಣಿಸುತ್ತಿರುವ ಇಂದಿನ ಸಂದರ್ಭದಲ್ಲಿ ದಲಿತರು ಎಲ್ಲಿ ನಿಲ್ಲುತ್ತಾರೆ ಹಾಗೂ ಇವರ ಪ್ರಕಾರ ಎಲ್ಲಿ ನಿಲ್ಲಬೇಕು ?
ಖಾಸಗೀ ಕ್ಷೇತ್ರಗಳಲ್ಲಿ ನಮಗೂ ಮೀಸಲಾತಿಯನ್ನು ಕೊಡಿ ಎಂದು ನಿರಂತರ, ದಣಿವಾಗುವ ತನಕ ಹೋರಾಟ ಮಾಡುತ್ತಿರಬೇಕೇ ? ಇದಕ್ಕೆ ಯಾರು ಭೌತಿಕವಾಗಿ ಜೊತೆಗೂಡುತ್ತಾರೆ?  ಕೇವಲ ಸೆಮಿನಾರಗಳಲ್ಲಿ ಖಾಸಗೀ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಪ್ರತಿಪಾದಿಸುವ ಬುದ್ಧಿಜೀವಿಗಳು ಇದರ ಪರವಾಗಿ ಆಕ್ಟಿವಿಸಂನಲ್ಲಿ ದಲಿತ ಸಂಘಟನೆಗಳೊಂದಿಗೆ ಬೀದಿಗಳಲ್ಲಿ ಭಾಗವಹಿಸುವುದರ ಸಾಧ್ಯತೆಗಳು ಈ ಕಾಲಘಟ್ಟದಲ್ಲಿ ಸಂಪೂರ್ಣ ಕಡಿಮೆ. ಅಲ್ಲದೇ ಆಕ್ಟಿವಿಸಂ ಸಹ ಹೆಚ್ಚೂ ಕಡಿಮೆ ಕ್ಷೀಣಿಸಿರುವ ಇಂದಿನ ದಿನಗಳಲ್ಲಿ, ಇಂದು ಇಂಡಿಯಾ ದೇಶ ಸಂಪೂರ್ಣವಾಗಿ ಜಾಗತಿಕರಣಗೊಂಡು ಮೇಲು ಹಾಗೂ ಮಧ್ಯಮ ಜಾತಿಗಳು ಮತ್ತು ಮೇಲ್ವರ್ಗಗಳು ಮಾತ್ರ ಅದರ ಸಂಪೂರ್ಣ ಲಾಭವನ್ನು ಹೊಡೆದುಕೊಂಡರೆ ತಳಸಮುದಾಯಗಳು ಮತ್ತು ಆದಿವಾಸಿಗಳು ಬೀದಿಗೆ ಬಿದ್ದು ಮತ್ತೆ ಮತ್ತೆ ತಮ್ಮ ಹಕ್ಕುಗಳಿಗಾಗಿ ಸರ್ಕಾರದ ಕಡೆಗೆ, ಚಳುವಳಿಗಳ ಕಡೆಗೆ ಅಸಹಾಯಕತೆಯ, ದೈನ್ಯತೆಯ ನೋಟ ಬೀರಬೇಕಾಗಿ ಬಂದಿರುವ ದುಸ್ಥಿತಿಯಲ್ಲಿ ದಲಿತರು ಇವೆಲ್ಲವನ್ನು ಮೀರಿ ಚಾಲ್ತಿಯಲ್ಲಿರುವ ಜಾಗತೀಕರಣದ ನಡೆಗಳೊಂದಿಗೆ ಜೊತೆಜೊತೆಯಾಗಿ ಹೆಜ್ಜೆ ಹಾಕಿ ಈಗಾಗಲೇ ಅದು ತೆರೆದು ತೋರಿಸಿದ ಹೆಬ್ಬಾಗಿಲುಗಳ ಮೂಲಕ ತಾವೂ ಅದರೊಳಗಿನ ಭಾಗವಾಗುವುದು ಆತ್ಮಾಭಿಮಾನದ ಬದುಕಲ್ಲವೇ?  ಇದು ವಿವೇಕದ ಮಾತಲ್ಲವೇ? ? ಇದಕ್ಕೆ ಬುದ್ಧಿಜೀವಿಗಳು ಈ ರೀತಿಯಾಗಿ ದಲಿತರು ಬಂಡವಾಳಶಾಹಿಗಳಾಗುವುದೆಂದರೆ ತಮ್ಮ ದಲಿತ ಸಂಸ್ಕೃತಿಯನ್ನು ನಾಶಪಡಿಸಿಕೊಂಡಂತೆಯೇ ಸರಿ ಹಾಗೂ ಇದು ದಲಿತ ಪರಂಪರೆಗೆ ವಿರೋಧವಾದದ್ದು ಎಂದು ಎಚ್ಚರಿಸುತ್ತಾರೆ.
ಹಾಗಿದ್ದರೆ ಯಾವುದು ದಲಿತ ಪರಂಪರೆ ? ಮನುವಾದವೇ ? ( ದಲಿತರು ಆಸ್ತಿಯನ್ನು ಹೊಂದುವಂತಿಲ್ಲ) ವರ್ಣಾಶ್ರಮವೇ ? ( ದಲಿತರು ಶಿಕ್ಷಣ ಹಾಗೂ ಮೇಲುಸ್ಥರದಲ್ಲಿ ಬದುಕಲು ಅರ್ಹರಲ್ಲ) ಅಥವ ಮಧ್ಯಮ ಜಾತಿಗಳಿಂದ ದೈಹಿಕವಾಗಿ ನಿರಂತರವಾಗಿ ಹಲ್ಲೆಗೆ, ಅತ್ಯಾಚಾರಕ್ಕೆ ಒಳಗಾಗುತ್ತಿರುವ ಗ್ರಾಮ ಪರಂಪರೆಯೇ ? ಅಥವಾ ಚಮ್ಮಾರ ಪರಂಪರೆಯೇ, ಸತ್ತ ದನವನ್ನು ಎತ್ತುವ ಪರಂಪರೆಯೇ, ಜೀತದ ಪರಂಪರೆಯೇ, ಮಲ ಹೊರುವ ಪರಂಪರೆಯೇ? ನಾವೆಲ್ಲ ಯಾವುದು ಅವೈದಿಕ ಪರಂಪರೆ, ಯಾವುದನ್ನು ದಲಿತರು ಸಂಸ್ಕೃತಿಯೆಂದು ಮುನ್ನಡೆಸಿಕೊಂಡು ಹೋಗಬೇಕೆಂದು ನಮ್ಮ ಬುದ್ಧಿಜೀವಿಗಳಿಗೆ ಇನ್ನೂ ಸ್ಪಷ್ಟತೆಯೇ ಇಲ್ಲ. ಏಕೆಂದರೆ ಉದಾಹರಣೆಗೆ ದಲಿತರ ನಿಜದ ಪರಂಪರೆಯಾದ ಮುಂಟೇಸ್ವಾಮಿಯ ಸಂಸ್ಕೃತಿಯ ಬಗೆಗೆ ಇದುವರೆಗೂ ದಲಿತರೇ ಮಾತಾನಾಡಿದ್ದು ಮತ್ತು ಚಿಂತಿಸಿದ್ದು. ದಲಿತೇತರ ಚಿಂತಕರು ಮುಂಟೇಸ್ವಾಮಿ ಪರಂಪರೆಯನ್ನು ಎತ್ತಿಕೊಂಡು ಚಿಂತಿಸಿದ್ದಾಗಲಿ, ಸಂಶೋದಿಸಿದ್ದಾಗಲಿ ಉದಾಹರಣೆಗಳಿಲ್ಲ. ಹೀಗಿದ್ದ ಮೇಲೆ ಹೇಗೆ ಈ ಬುದ್ದಿಜೀವಿಗಳನ್ನು ನೆಚ್ಚಿಕೊಂಡು ದಲಿತರು ಮತ್ತು ಆದಿವಾಸಿಗಳು ಪರಂಪರೆಯ ರಕ್ಷಣೆಗೆ ಹೋರಾಡಬೇಕು ?
ನನ್ನ ಪ್ರಕಾರ ನಮ್ಮ ಬುದ್ಧಿಜೀವಿಗಳಿಗೆ ಶ್ರಮ ಪರಂಪರೆಯ ಬಗೆಗೆ ಅಪಾರ ಅಜ್ನಾನವಿದೆ. ಉದಾಹರಣೆಗೆ ಇಂದಿನ ಉದ್ಯಮಗಳಲ್ಲಿ ಇಂಜಿನಿಯರಗಳು ಹಾಗೂ ಗುಮಾಸ್ತರು ಸವರ್ಣೀಯರಾದರೂ ಕೆಳಹಂತಗಳಲ್ಲಿ ಅಂದರೆ ವರ್ಕ್ ಶಾಪಗಳಲ್ಲಿ, ಯಂತ್ರಗಳ ಮೇಲೆ ಕೆಲಸ ಮಾಡಲು ದಲಿತ, ಆದಿವಾಸಿಗಳೇ ಬೇಕು. ಈ ಕೆಳ ಹಂತದಿಂದ ಮೇಲಿನ ಹಂತವಾದ ಇಂಜಿನಿಯರಗಳು ಹಾಗೂ ಗುಮಾಸ್ರರು ಹಾಗೂ ಮುಂದೊಂದು ದಿನ ಮಾಲೀಕರೂ ಆಗುವ ಪ್ರಕ್ರಿಯೆಯೇ ಇಂದಿನ ಖಾಸಗಿಕರಣದ ದಿನಗಳಲ್ಲಿ ಬಂಡವಾಳಶಾಹಿಗಳೊಂದಿಗೆ ಜೊತೆಜೊತೆಯಾಗಿ ನಡೆಯುವುದು ಎಂದರ್ಥ. ಇದು ಶ್ರೇಣೀಕೃತ ಸಮಾಜದಲ್ಲಿ ದಲಿತರು ಮೇಲಿನ ಮೆಟ್ಟಿಲುಗಳನ್ನೇರುವುದಲ್ಲದೆ ಮತ್ತಿನ್ನೇನು? ಇದಕ್ಕೇಕೆ ಬುದ್ಧಿಜೀವಿಗಳು ತಗಾದೆ ಎತ್ತುತ್ತಾರೆ? ಕಠಿಣವಾಗಿ ಹೇಳಬೇಕೆಂದರೆ ಒಂದುವೇಳೆ ದಲಿತರು ಈ ರೀತಿಯಾಗಿ ಮೇಲೇರುತ್ತಾ ಮೇಲುಸ್ಥರವನ್ನು ತಲುಪುತಿದ್ದರೆ ಮುಂದಿನ ವರ್ಷಗಳಲ್ಲಿ ತಮ್ಮ ಸೆಮಿನಾರಗಳ ಭೂಗತಲೋಕ್ಕೆ ಖಠಿಚಿಛಿಜ ಸಿಗುವದು ಕಷ್ಟವೆಂದೇನಾದರೂ ಚಿಂತೆಯೇ? ಇದನ್ನು ವಿಸ್ತೃತವಾಗಿ ಚರ್ಚಿಸಲು ಮತ್ತೊಂದು ವೇದಿಕೆಯೇ ಬೇಕಾಗುತ್ತದೆ. ಬಡತನದಲ್ಲಿ ಸೂಚ್ಯಾಂಕದಲ್ಲಿ, ದೌರ್ಜನ್ಯಕ್ಕೆ ಒಳಗಾದವರ ಸೂಚ್ಯಾಂಕದಲ್ಲಿ, ಅತ್ಯಾಚಾರಕ್ಕೆ ಒಳಗಾದವರ ಸೂಚ್ಯಾಂಕದಲ್ಲಿ ಇಂದಿಗೂ ದಲಿತ/ಆದಿವಾಸಿ ಜನತೆ ಕಂಡುಬರುತ್ತಾರೆ.ಇದಕ್ಕೆ ಬಿಡುಗಡೆಗೆ ಈ ದಲಿತ ಆರ್ಥಿಕ ಮಾರ್ಗವೂ ಸಹ ಬಿಡುಗಡೆಗೆ ದಾರಿ. ಇಷ್ಟೆಲ್ಲ ಹೇಳಿದ ನಂತರವೂ ನಾವೆಲ್ಲ ಚಂದ್ರಬಾನು ಪ್ರಸಾದರ ಚಿಂತನೆಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕೆಂದೇನಿಲ್ಲ. ಅನುಮೋದಿಸುವುದೂ ಕಷ್ಟ. ಆದರೆ ಚರ್ಚಿಸಲು ಯಾಕೆ ಹಿಂದೇಟು. ನಮ್ಮ ಬುದ್ಧಿಜೀವಿಗಳ ಈ ಅಸ್ಪೃಶ್ಯತೆ ಅರ್ಥವಾಗುತ್ತಿಲ್ಲ.
- ಬಿ. ಶ್ರೀಪಾದ ಭಟ್
ಕೃಪೆ : ವರ್ತಮಾನ 

ಮಾತ್ಗವಿತೆ-76


Friday, May 11, 2012

ಲೋಕಕ್ಕೇ ಬೆಳಕು `ವೈಶಾಖ ಶುದ್ಧ ಪೂರ್ಣಿಮೆ'

ಕಳೆದ ಶನಿವಾರ ಜಗತ್ತಿನಾದ್ಯಂತ ಬೌದ್ಧರು ತಮ್ಮ ಧರ್ಮದಲ್ಲಿ ಅತ್ಯಂತ ಮಹತ್ವಪೂರ್ಣ ದಿನವಾದ ವೈಶಾಖ ಶುದ್ಧ ಪೌರ್ಣಮಿಯನ್ನು ಆಚರಿಸಿದರು. ಭಗವಾನ್ ಬುದ್ಧನ ಬದುಕಿನಲ್ಲಿ ಹಾಗೆಯೇ ಬೌದ್ಧರ ಬದುಕಿನಲ್ಲಿ ಈ ದಿನಕ್ಕೆ ವಿಶೇಷ ಅರ್ಥವಿದೆ.

ಬುದ್ಧ ಹುಟ್ಟಿದ್ದು, ತನ್ನ ಅರಮನೆಯನ್ನು ತೊರೆದದ್ದು, ಬೋಧಿಯನ್ನು ಪಡೆದದ್ದು ಮತ್ತು ಮಹಾನಿರ್ವಾಣವನ್ನು ಹೊಂದಿದ್ದು-ಎಲ್ಲವೂ ವೈಶಾಖ ಶುದ್ಧ ಪೌರ್ಣಮಿಯಂದೇ. ಈ ಸಲದ ಆಚರಣೆ ವಿಶೇಷವಾಗಿತ್ತು.

ಏಕೆಂದರೆ ಇದು ಭಗವಾನ್ ಬುದ್ಧ ಬೋಧಿಯನ್ನು ಪಡೆದ ಚರಿತ್ರಾರ್ಹ ಘಟನೆಯ 2600ನೇ ವರ್ಷ. ಹೀಗಾಗಿ ಶ್ರಿಲಂಕಾದಲ್ಲಿ ಕಳೆದ ವರ್ಷವಿಡೀ ಬೋಧಿಯ 2600ನೇ ವರ್ಷದ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಯಿತು.

ಕಪಿಲವಸ್ತು ಎಂಬ ಸಣ್ಣ ಗಣರಾಜ್ಯದಲ್ಲಿ 2600ವರ್ಷಗಳಿಗಿಂತ ಹಿಂದೆ ಹುಟ್ಟಿದ ಒಬ್ಬ ಅರಸು ಕುಮಾರ  ಬೋಧಿಸಿದ ಧರ್ಮ ಇವತ್ತು ಇಡೀ ಜಗತ್ತನ್ನು ವ್ಯಾಪಿಸಿದೆ. ಧರ್ಮಾನಂದ ಕೋಸಂಬಿಯವರು ಹೇಳಿದ ಹಾಗೆ ಬೌದ್ಧ ಧರ್ಮ ಭಾರತ ವಿಶ್ವಕ್ಕೆ ನೀಡಿದ ಅತ್ಯಂತ ಮೌಲಿಕ ಕೊಡುಗೆ.

ಬುದ್ಧನ ಮಹಾ ಪರಿನಿರ್ವಾಣದ ನಂತರ ಕೆಲವೇ ಶತಮಾನಗಳಲ್ಲಿ  ಅದು ಶ್ರಿಲಂಕೆಗೆ ವ್ಯಾಪಿಸಿತು. ಮೊದಲನೆ ಸಹಸ್ರಮಾನದ ಕೊನೆಯವರೆಗೆ ಪೂರ್ವ ಏಷಿಯಾದ ಬಹುಭಾಗಗಳಿಗೆ ನಂತರ ಮಧ್ಯ ಏಷಿಯಾದ ಹಲವು ಪ್ರಾಂತಗಳಿಗೆ ಹಬ್ಬಿ ಜಗತ್ತಿನ ಅತ್ಯಂತ ವ್ಯಾಪಕ ಧರ್ಮವಾಗಿ ಬೆಳೆದ ಬೌದ್ಧ ಧರ್ಮ ಎರಡನೆ ಸಹಸ್ರಮಾನದ ಕೊನೆಗೆ ಯೂರೋಪನ್ನು ಪ್ರವೇಶಿಸಿತು.

ಆನಂತರ ಅಮೆರಿಕಾಕ್ಕೂ ಪ್ರವೇಶಿಸಿತು. ಬೌದ್ಧಧರ್ಮ ಇಂದು ಅಮೆರಿಕದ ಜನಪ್ರಿಯ ಧರ್ಮಗಳಲ್ಲಿ ಕ್ರೈಸ್ತ ಧರ್ಮದ ನಂತರ ಎರಡನೆಯ ಸ್ಥಾನದಲ್ಲಿದೆ. ಇಷ್ಟಾದರೂ ತನ್ನ ಹುಟ್ಟುನಾಡಾದ ಭಾರತದಲ್ಲಿ ಖಿಲವಾಯಿತೆನ್ನಲಾದರೂ, ಕಳೆದ ಶತಮಾನದಲ್ಲಿ ಡಾ.ಅಂಬೇಡ್ಕರ್ ಅವರ ಪ್ರಭಾವದಿಂದ ಬೌದ್ಧ ಧರ್ಮಕ್ಕೆ ಬಹು ದೊಡ್ಡ ಸಂಖ್ಯೆಯಲ್ಲಿ ದಲಿತರು ಪ್ರವೇಶಿಸಿದರು. ಇವತ್ತು ಜಗತ್ತಿನ ಮೂರನೆ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಜನರ ಧರ್ಮವಾಗಿದೆ.

ಬೌದ್ಧ ಧರ್ಮದ ಇನ್ನೊಂದು ವಿಶೇಷವೆಂದರೆ ಯಾವುದೇ ಬಲ ಪ್ರಯೋಗವಿಲ್ಲದೆ ಅತ್ಯಂತ ವ್ಯಾಪಕ ಧರ್ಮವಾಗಿ ಬೆಳೆದದ್ದು. ಇದನ್ನು ಜಪಾನಿನ ಆಧುನಿಕ ಕವಿ ತಹಕಾ ಹೀಗೆ ಬಣ್ಣಿಸುತ್ತಾನೆ:`ಎರಡು ಸಾವಿರ ವರ್ಷ ಬುದ್ದ ಬೆಳಕು ಕಂಡಾಗಿಂದ ಸೂರ್ಯನ ಮುಖವೂ ಪೂರ್ತಿ ಬದಲಾಗಿದೆ`

ಬೌದ್ಧ ಧರ್ಮದ ಇತಿಹಾಸದಲ್ಲಿ ರಕ್ತಪಾತವಾಗಲೀ, ಧರ್ಮಯುದ್ಧಗಳಾಗಲೀ ಎಂದೂ ಘಟಿಸಿಲ್ಲ. ಆದರೂ ಅದು ಇಷ್ಟೊಂದು ಲೋಕಪ್ರಿಯವಾಗಲು ಕಾರಣವೇನು? ಹೆಚ್ಚೂಕಡಿಮೆ ಬುದ್ಧನ ಕಾಲದಲ್ಲೇ ಭಗವಾನ್ ಮಹಾವೀರ ಪ್ರಚಾರಕ್ಕೆ ತಂದ ಜೈನ ಧರ್ಮ ಭಾರತದ ಗಡಿಗಳನ್ನು ದಾಟಿ ಹೋಗಲೇ ಇಲ್ಲ.

ಧರ್ಮ ಪ್ರಚಾರವಾಗಬೇಕಾದರೆ ಹಣ ಮತ್ತು ಬಲದ ನೆರವಿನಿಂದಲೇ ಸಾಧ್ಯ ಎಂಬುದು ಇಂದಿನ ಬುದ್ಧಿಜೀವಿಗಳ ಅಂಬೋಣ. ಈ ಮಾತು ಕೆಲವು ಧರ್ಮಗಳ ವಿಷಯದಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ಮಾತ್ರ ನಿಜ. ಎಲ್ಲ ಕಾಲಕ್ಕೂ ಅಲ್ಲ. ಕ್ರೈಸ್ತ ಧರ್ಮ ರೋಮ್‌ಗೆ ಬಂದಾಗ ಅದು ಬಡವರ ಧರ್ಮವಾಗಿತ್ತು. ಶ್ರಿಮಂತರ, ಬಲಾಢ್ಯರ ಧರ್ಮವಾಗಿದ್ದು ಆಮೇಲೆ.

ಐದು ಮಂದಿ ಅನುಯಾಯಿಗಳಿಂದ ಪ್ರಾರಂಭವಾದ ಬೌದ್ಧ ಧರ್ಮ ಇಷ್ಟು ಜಗದ್ವ್ಯಾಪಿಯಾಗಲು ಕಾರಣ ಬುದ್ಧನ ಬೋಧನೆಗಳ ಸರಳತೆ ಮತ್ತು ಮಾನವಪರತೆ. ಬುದ್ಧನ ಕಾಲ ಭಾರತದ ಇತಿಹಾಸದಲ್ಲಿ, ಇಡೀ ಜಗತ್ತಿನಲ್ಲಿ ದಾರ್ಶನಿಕತೆಯ ಬಹು ದೊಡ್ಡ ಮಂಥನದ ಯುಗ. ಜೈನ ಧರ್ಮವನ್ನೂ ಒಳಗೊಂಡು ಸುಮಾರು 62 ದಾರ್ಶನಿಕ ಪಂಥಗಳು ಆಗ ಭಾರತದಲ್ಲಿ ಪ್ರಚಾರದಲ್ಲಿದ್ದವು.

ಇದು ಬುದ್ಧನ ಅನುಯಾಯಿಗಳಿಗೂ ಆಗಾಗ ತಲೆಕೆಡಿಸುತ್ತಿತ್ತು. ಒಬ್ಬ ಶಿಷ್ಯ ಬುದ್ಧನನ್ನು ಹೀಗೆ ಪ್ರಶ್ನಿಸುತ್ತಾನೆ:  ಭಂತೆ, ನೀವು ಒಂದು ಧರ್ಮವೆನ್ನುತ್ತಿದ್ದೀರಿ, ಆ ನಾಥಪುತ್ತ (ಮಹಾವೀರ) ಇನ್ನೊಂದನ್ನು ಹೇಳುತ್ತಾನೆ. ಮಖ್ಖಲಿ ಗೋಸಲ ಇನ್ಯಾವುದನ್ನೋ ಹೇಳುತ್ತಾನೆ. ನಾವು ಯಾರನ್ನು ನಂಬಬೇಕು?  ಅದಕ್ಕೆ ಭಗವಾನ್ ನೀಡಿದ ಉತ್ತರ ಇದು: ಯಾರನ್ನೂ ನಂಬಬೇಡಿ.

ನಾನು ಹೇಳಿದೆನೆಂದು ನಾನು ಹೇಳಿದ್ದನ್ನೂ ನಂಬಬೇಡಿ; ನಾಥಪುತ್ತ ಹೇಳಿದನೆಂದು ಅವನು ಹೇಳಿದ್ದನ್ನು ನಂಬಬೇಡಿ; ಗೋಸಲ ಹೇಳಿದ್ದನ್ನು ಅವನು ಹೇಳಿದ್ದೆಂದು ನಂಬಬೇಡಿ. ಎಲ್ಲವನ್ನು ನಿಮ್ಮ ಅನುಭವದಲ್ಲಿ ಪರೀಕ್ಷಿಸಿ ಆಮೇಲೆ ಒಪ್ಪಿಕೊಳ್ಳಿ. ಇಷ್ಟು ಜನ ಹೇಳಿದ ಬೇರೆ ಬೇರೆ ಮಾರ್ಗಗಳಲ್ಲಿ ಯಾವುದರಿಂದ ನಿಮಗೆ ದುಃಖ ನೀಗುವುದೋ, ಆನಂದ ದೊರಕುವುದೋ ಅದನ್ನು ಆತುಕೊಳ್ಳಿ. 

ಎಲ್ಲ ಮನುಷ್ಯರ ನಿತ್ಯಾನುಭವದ ಮೇಲೆ ನಿಂತ ಅನುಭವಮುಖಿ ಸರಳ ಪರಿಕಲ್ಪನೆಗಳ ಆಧಾರದ ಮೇಲೆ ಲಿಂಗ, ಜಾತಿ, ದೇಶ ಪ್ರಬೇಧಗಳ ಹೊರತಾಗಿ ಸರ್ವರೂ ಅನುಸರಿಸಬಹುದಾದ ಬೌದ್ಧಧರ್ಮ ಸಹಜವಾಗಿಯೇ ಬಹುಸಂಖ್ಯೆಯ ಜನತೆಗೆ ಒಪ್ಪಿಗೆಯಾಯಿತು.

ಬುದ್ಧ ಶಾಸನದ ಬುನಾದಿ ಇತರ ಧರ್ಮಗಳಲ್ಲಿರುವಂತೆ ಕಾಣದ, ಕಲ್ಪಿಸಿದ ದೇವರುದಿಂಡರ ಮೇಲೆ ನಿಂತಿರಲಿಲ್ಲ. ದುಃಖವೆಂಬುದು ಎಲ್ಲರ ಅನುಭವ. ಅಲ್ಲಿಂದಲೇ ಬುದ್ಧನ ಬೋಧನೆ ಶುರುವಾಗುವುದು. ಮಾನವರ ಮನಸ್ಸು ಇಷ್ಟವಾದ್ದನ್ನು ಬಯಸುತ್ತದೆ, ಇಷ್ಟವಲ್ಲದ್ದನ್ನು ಒಲ್ಲೆನೆನ್ನುತ್ತದೆ.

ಆದ್ದರಿಂದಲೇ ದುಃಖ. ಸುಖ,ವ್ಯಸನಗಳೆರಡೂ ನಶ್ವರವೆಂಬ ಸರಳ ಸತ್ಯವನ್ನು ನಾವು ಒಪ್ಪದಿರುವುದರಿಂದ ಯೌವನದಲ್ಲಿ ಬಾಲ್ಯಕ್ಕಾಗಿ, ವಾರ್ಧಕ್ಯದಲ್ಲಿ ಯೌವನಕ್ಕಾಗಿ, ಮುಪ್ಪಿನಲ್ಲಿ ಮತ್ತೆ ಬಾಲ್ಯ-ಯೌವನಗಳಿಗಾಗಿ ಹಪಹಪಿಸತೊಡಗುತ್ತೇವೆ. ಪ್ರಿಯರಿಗಾಗಿ ಕನಲುತ್ತೇವೆ; ಅಪ್ರಿಯರ ಬಗ್ಗೆ ಹೇಸುತ್ತೇವೆ.

ಬೇಕು ಬೇಡಗಳ ಹೊಡೆತಗಳ ನಡುವೆ ಆಯಾಸಗೊಳ್ಳುತ್ತೇವೆ. ಸುಖ-ವ್ಯಸನಗಳೆರಡಕ್ಕೂ ಆಧಾರವಾದ ಅನಿತ್ಯವಾದ, ಅನಾತ್ಮವಾದಗಳನ್ನು ಬುದ್ಧ ತನ್ನ ಬೋಧನೆಯ ಕೇಂದ್ರದಲ್ಲಿರಿಸಿ, ರೋಗಕ್ಕೆ ಮದ್ದನ್ನು ಹುಡುಕುವ ವೈದ್ಯನ ಹಾಗೆ ದುಃಖದ ಕಾರಣವನ್ನು ಮತ್ತದರ ನಿವಾರಣೆಯ ಮಾರ್ಗವನ್ನು ಬೋಧಿಸಿದ.

ಅವನು ಚಾರ್ವಾಕರಂತೆ ಸುಖಕ್ಕೆ ಅಂಟಿಕೊಳ್ಳಲಿಲ್ಲ; ಅಥವಾ ಗೋಸಲನಂತೆ ನಿಯತಿವಾದಿಯಾಗಲಿಲ್ಲ; ಇತರ ಪಂಥಗಳಂತೆ ನಮ್ಮಷ್ಟೇ ಅನಿತ್ಯರಾದ ದೇವರುಗಳನ್ನು, ಸ್ವರ್ಗ-ನರಕಗಳನ್ನು ಆಶ್ರಯಿಸಲಿಲ್ಲ. ಕಂತೆಪುರಾಣ, ಕಂದಾಚಾರಗಳಿಂದ, ನರಕಭೀತಿಯಿಂದ ಮನಸ್ಸುಗಳನ್ನು ಬಿಡುಗಡೆಗೊಳಿಸಿದ. ಇದು ಬುದ್ಧ ಬೋಧಿಸಿದ ಧರ್ಮ. ಇಲ್ಲಿ ಧರ್ಮವೆಂಬ ಪದದ ಅರ್ಥ ಅನಿತ್ಯಮೂಲವಾದ ವಿಶ್ವಸತ್ಯ.

ಬುದ್ಧ ಬೋಧಿಸಿದ ಎಂಟು ಮೆಟ್ಟಿಲ ಹಾದಿಯನ್ನು ಅನುಸರಿಸಿದವನು ನಿರ್ವಾಣವೆಂಬ ದುಃಖವಿರಹಿತವಾದ ಅನಿರ್ವಚನೀಯ ನೆಲೆಯನ್ನು ತಲುಪಬಹುದೆಂಬ ಸಂದೇಶವನ್ನು ಬುದ್ಧ ಜಗತ್ತಿಗೆ ಸಾರಿದ. 

ಈ ಸರಳ ಸತ್ಯಾಧಾರಿತ ಪಂಥ ಹಿಂಸೆ ಮತ್ತು ಸಂಘರ್ಷಗಳಿಂದ ತುಂಬಿದ್ದ ಬುದ್ಧನ ಕಾಲದಲ್ಲೇ ಎಲ್ಲರನ್ನೂ ಸೆಳೆಯಿತು. ಬ್ರಾಹ್ಮಣರು, ವಣಿಕರು, ಕ್ಷತ್ರಿಯರು ಮಾತ್ರವಲ್ಲದೆ ಜನ ಸಾಮಾನ್ಯರೂ ಈ ಹೊಸ ಧರ್ಮದತ್ತ ಆಕರ್ಷಿತರಾದರು. ತನ್ನ ತತ್ವಗಳನ್ನು ಸರ್ವರಿಗೂ ಶ್ರುತಪಡಿಸಲೋಸುಗ ಭಗವಾನನು ಬುದ್ಧ ಸಂಘವನ್ನು ಸ್ಥಾಪಿಸಿದ. ಮುಂದೆ ಭಾರತದಲ್ಲಿ ಬೌದ್ಧಧರ್ಮ ಖಿಲವಾಗಿದ್ದಕ್ಕೆ ಹಲವು ಕಾರಣಗಳನ್ನು ಹೇಳಲಾಗಿದೆ.

ಒಂದು ವರ್ಗದ ಜನರ ಕುತಂತ್ರ ಮತ್ತು ಕುಟಿಲತೆಗಳೇ ಮೂಲ ಕಾರಣವೆಂದು ಕೆಲವರ ಸರಳ ತೀರ್ಮಾನ. ಆದರೆ ಧರ್ಮಾನಂದ ಕೋಸಂಬಿಯವರು ಸೂಚಿಸುವ ಕಾರಣ ಹೆಚ್ಚು ಸಮಂಜಸವಾಗಿ ತೋರುತ್ತದೆ. ಬುದ್ಧನ ಕಾಲದಲ್ಲೇ ರಾಜಾಶ್ರಯ ಪಡೆಯತೊಡಗಿದ್ದ ಬೌದ್ಧಧರ್ಮ ಅವನ ನಂತರದ ಕಾಲದಲ್ಲಿ ಹೆಚ್ಚಿನ  ರಾಜಾಶ್ರಯ ಪಡೆದು ಧನ, ಕನಕ, ವಸ್ತುವಾಹನ, ಅನುಭವರಹಿತ ಶುಷ್ಕಪಾಂಡಿತ್ಯಗಳ ಹೊರೆಯಡಿ ಮುಗ್ಗರಿಸಿತೆಂದು ಅವರು ಹೇಳುತ್ತಾರೆ.

ಮುಂದೆ ಬೌದ್ಧಧರ್ಮ ಹೀನಾಯಾನ-ಮಹಾಯಾನವಾಗಿ ಒಡೆದು, ಅವುಗಳಲ್ಲಿ ಅಸಂಖ್ಯಾತ ಕವಲುಗಳು, ಉಪ ಕವಲುಗಳು ಮೂಡಿ ಯಾವುದು ಬುದ್ಧ ಹೇಳಿದ್ದು, ಯಾವುದು ಹೇಳದೇ ಇದ್ದದ್ದು ಎಂಬುದು ಕಲಸುಕಲಸಾಗುತ್ತಿದ್ದಾಗ ಸುಮಾರು ಎರಡನೆ ಶತಮಾನದಲ್ಲಿ ಆರ್ಯ ನಾಗಾರ್ಜುನನು ಬುದ್ಧ ಶಾಸನದ ಸರಳ ಮೂಲೋದ್ದೇಶಗಳನ್ನು ಮತ್ತೆ ಸ್ಥಾಪಿಸುವುದಕ್ಕೋಸ್ಕರ ತನ್ನ ಮಾಧ್ಯಮಿಕ ಪಂಥವನ್ನು ಪ್ರಚಾರ ಮಾಡಿದ.

ಶೂನ್ಯವನ್ನು ಒಂದು ತಾತ್ವಿಕ ಪರಿಕಲ್ಪನೆಯಾಗಿ ಸ್ಥಾಪಿಸಿ ಮಾನವ ಚಿಂತನೆಗೆ ಹೊಸ ತಿರುವು ನೀಡಿದ. ಆದರೆ ಇಷ್ಟು ಹೊತ್ತಿಗಾಗಲೇ ಬೌದ್ಧಧರ್ಮ ಭಾರತದಲ್ಲಿ ಜನಪ್ರಿಯವಾಗುವ ಅವಕಾಶಗಳನ್ನು ಕಳೆದುಕೊಂಡಿತ್ತು. ಮುಂದೆ ಚಾಲ್ತಿಗೆ ಬಂದ ನಾಥ-ಸಿದ್ಧ ಮತ್ತು ಜನಪ್ರಿಯ ಭಕ್ತಿಪಂಥಗಳು ಬೌದ್ಧತತ್ವದ ಹಲವು ಮೌಲಿಕ ಅಂಶಗಳನ್ನು ಸಾಕಷ್ಟು ಹೀರಿಕೊಂಡಿದ್ದವು.

ಮುಂದೆ ಬೌದ್ಧಧರ್ಮ ಉಜ್ವಲವಾಗಿ ಬೆಳೆಯತೊಡಗಿದ್ದು ಭಾರತದ ಹೊರಗೆ. ಮೊದಲ ಸಹಸ್ರಮಾನದ ಕೊನೆಯವರೆಗೆ ಚೀಣಾ, ಮ್ಯಾನ್ಮಾರಿನಿಂದ ಹಿಡಿದು ಪೂರ್ವ ಏಷಿಯಾದ ಆ ತುದಿಯಲ್ಲಿರುವ ಜಪಾನಿನವರೆಗೂ ಅದರ ವರ್ಚಸ್ಸು ವ್ಯಾಪಿಸಿತು.

ಹೋದಹೋದ ಕಡೆ ಬುದ್ಧಧರ್ಮ ನಿಂತನೀರಾಗಿ ಉಳಿಯಲಿಲ್ಲ. ಆಯಾ ದೇಶಗಳ, ಪ್ರದೇಶಗಳ ಪ್ರಭಾವಗಳನ್ನು ಹೀರಿಕೊಂಡಿತು. ಹೊಸ ಧರ್ಮದ ಚೌಕಟ್ಟಿನಲ್ಲಿ ಅಲ್ಲಲ್ಲಿನ ದೇವ-ದೇವಿಯರ, ಸ್ವರ್ಗ-ನರಕಗಳ ಪರಿಕಲ್ಪನೆಗಳನ್ನು ಅಳವಡಿಸಿಕೊಂಡಿತು.

ಅದೇ ಸಮಯದಲ್ಲಿ ಅನಿತ್ಯತೆ, ಅನಾತ್ಮವಾದಗಳ ಮೇಲಿನ ಮೂಲ ಒತ್ತನ್ನು ಬಿಟ್ಟುಕೊಡಲಿಲ್ಲ. ಇವತ್ತು ಜಪಾನಿನಲ್ಲಿ ನಾಲ್ಕು ಮುಖ್ಯ ಪಂಥಗಳಿದ್ದರೂ ಒಟ್ಟು ಐವತ್ತಿಕ್ಕಿಂತ ಹೆಚ್ಚು ಸಣ್ಣ ಪಂಥಗಳು ಮತ್ತು ಉಪ ಪಂಥಗಳಿವೆ. ಒಂದು ವಿಶ್ವವ್ಯಾಪಿ ಬೃಹತ್ ಆಲದ ಮರದಂತೆ ಹಬ್ಬಿಕೊಂಡಿರುವ ಬುದ್ಧ ಧರ್ಮದ ಮೂಲಕಾಂಡವನ್ನು ಇಂದು ಹುಡುಕುವುದು ಸುಲಭವಲ್ಲ.

ಶ್ರಿಲಂಕಾ, ಮ್ಯಾನ್ಮಾರ್, ಥಾಯ್‌ಲ್ಯಾಂಡ್‌ಗಳ ಥೇರವಾದ ಬುದ್ಧಧರ್ಮ, ಟಿಬೆಟ್ಟಿನ ತಾಂತ್ರಿಕ ಬೌದ್ಧ ಪಂಥಗಳು, ಚೀಣಾದ ಬುದ್ಧ ಧರ್ಮಗಳು, ಜಪಾನಿನ ಝೆನ್ ಅಥವಾ ರಿಂಗೋಕ್ಯೆ ಪಂಥ ಈ ಎಲ್ಲ ಶಾಖೆಗಳು ಪ್ರತ್ಯೇಕ ಧರ್ಮಗಳೆನ್ನುವಷ್ಟರಮಟ್ಟಿಗೆ ಭಿನ್ನವಾಗಿಬಿಟ್ಟಿವೆ. ಥೇರವಾದ ದುಃಖ ನಿವಾರಣೆಗಾಗಿ ಮದಿರೆ, ಕಾಮ ತ್ಯಾಗವನ್ನು ಬೋಧಿಸಿದರೆ, ಟಿಬೆಟ್ಟಿನ ತಾಂತ್ರಿಕ ಪಂಥಗಳು ಅವನ್ನೂ ಸಾಧನೆಯ ಉಪಾಯಗಳನ್ನಾಗಿ ಬಳಸುತ್ತವೆ.

ಶಾಂತಿಯ ಪ್ರತೀಕವಾದ ಬೌದ್ಧಧರ್ಮದಲ್ಲಿದ್ದೂ ಝೆನ್ ಪಂಥ ಜಪಾನಿನ ಸಮರಕಲೆಗಳನ್ನು ತನ್ನ ಭಾಗಗಳನ್ನಾಗಿ ಮಾಡಿಕೊಂಡಿದೆ. ಆದರೂ ಅನಿತ್ಯತೆ ಮತ್ತು ಕರುಣೆಯ ಮೇಲಿನ ಅವಧಾರಣೆಯಿಲ್ಲದ  ಯಾವ ಪಂಥವೂ ಬೌದ್ಧಧರ್ಮದಲ್ಲಿ ಇಲ್ಲ.
ಜಪಾನಿನ ಸುಖಾವತಿ ಪಂಥಗಳಂತವನ್ನು ಹೊರತುಪಡಿಸಿದರೆ ಬೌದ್ಧಧರ್ಮದಲ್ಲಿ ಪ್ರಾರ್ಥನೆಯ ಮೇಲೆ ಒತ್ತು ನೀಡಲಾಗಿಲ್ಲ.

ಬುದ್ಧನು ಜಗತ್ತಿಗೆ ನೀಡಿದ ತ್ರಿರತ್ನಗಳಾದ  ಶೀಲ, ಸಮಾಧಿ, ಪ್ರಜ್ಞಾಗಳಲ್ಲಿ ಧ್ಯಾನ ಕೇಂದ್ರ ಸ್ಥಾನದಲ್ಲಿದೆ. ದುಃಖವೆನ್ನುವುದು ಮನೋಮೂಲವಾದ್ದರಿಂದ, ಆ ಮನಸ್ಸಿನ ಆಸೆಯೆಂಬ ವ್ಯಾಧಿಗೆ ಧ್ಯಾನವೇ ಔಷಧಿ.

ಧ್ಯಾನ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪ್ರಚಾರ ಮಾಡಿ ಬೌದ್ಧಧರ್ಮ ಮಾನವ ಸ್ವಾಸ್ಥ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಬುದ್ಧ ಶಾಸನದ ಮೂಲಧಾರಣೆಗಳಲ್ಲಿ ಒಂದಾದ ಶಾಂತಿ ಪ್ರಿಯತೆ ಜಗತ್ತಿನ ಹಿಂಸೆಯನ್ನು ಅದೆಷ್ಟೋ ಪಟ್ಟು ಕಡಿಮೆ ಮಾಡಿದೆ. ಯುದ್ಧಪ್ರಿಯನಾದ ಅಶೋಕ ಶಾಂತಿಪ್ರಿಯನಾಗುವಂತೆ ಪ್ರೇರೇಪಿಸಿದ್ದೂ ಬೌದ್ಧಧರ್ಮವೇ.

ಬೌದ್ಧ ಧರ್ಮ ಮಾನವೀಯ ಚಿಂತನೆ ಮತ್ತು ಕಲೆಗಳಿಗೆ ನೀಡಿದ ಕೊಡುಗೆಯೂ ಅಪಾರ. ನಾಗಾರ್ಜುನನ ಶೂನ್ಯವಾದ ಮಾನವ ಚಿಂತನೆಯಲ್ಲಿ ಒಂದು ದೊಡ್ಡ ಮುನ್ನೆಗೆತ. ಸಂಸ್ಕೃತ ಕಾವ್ಯ-ನಾಟಕಗಳ ಮೊದಲಿನಲ್ಲಿ ಬೌದ್ಧಧರ್ಮದ ಪ್ರಭಾವವಿದೆ. ಭಾರತದ ಈಶಾನ್ಯದ ಭಾಷೆ-ಸಂಸ್ಕೃತಿ-ಧರ್ಮಗಳ ಮೂಲ ಮಾತೃಕೆಯಾದ  `ಚರಿಯಾಪದ`ದಲ್ಲಿಯೂ ಬೌದ್ಧಧರ್ಮದ ಪ್ರಭಾವಗಳನ್ನು ಹುಡುಕಬಹುದು.

ಗಾಂಧಾರಯುಗದ ನಂತರ ಪ್ರಚಾರಕ್ಕೆ ಬಂದ ಧ್ಯಾನಿ ಬುದ್ಧ ಪ್ರತಿಮೆಗಳು ಸಂಸ್ಕೃತ ರಸ ಮೀಮಾಂಸೆಯಲ್ಲಿ ಶಾಂತರಸದ ಪರಿಕಲ್ಪನೆಗೆ ಅನುವು ಮಾಡಿಕೊಟ್ಟವು. ಟಿಬೆಟ್ಟಿನ ತನ್ಕಾ ಚಿತ್ರಕಲೆ, ಪಶ್ಚಿಮ ಹಿಮಾಲಯದ, ಅಜಂತಾ ಎಲ್ಲೋರಗಳ ಭಿತ್ತಿ ಚಿತ್ರಗಳು, ಚೀಣಾ,

ಕೊರಿಯಾ ಮತ್ತು ಜಪಾನಿನ ಪ್ರಕೃತಿ ಚಿತ್ರಗಳು, ಜಪಾನಿನ ಹಾಯ್ಕು ಕಾವ್ಯ ಮತ್ತು ಇತರ ಕಲೆಗಳಾದ ಕರಾಟೆ, ಜೂಡೋ, ಕೆಂಡೋ, ಚಹಾ ಸಮಾರಂಭ, ಇಕೆಬಾನ ಮುಂತಾದ ಕಲೆಗಳ ಹಿಂದೆ ಬೌದ್ಧ ಧರ್ಮದ ಸ್ಫೂರ್ತಿಯಿದೆ. ಈ ಪೌರ್ವಾತ್ಯ ಕಲೆಗಳು ಇಪ್ಪತ್ತನೆ ಶತಮಾನದಲ್ಲಿ ಪಶ್ಚಿಮಕ್ಕೆ ರವಾನೆಯಾಗಿ ಅಲ್ಲಿನ ಆಧುನಿಕ ಕಲೆಗಳ ನಿರ್ಮಿತಿಗೆ ನೆರವಾಗಿವೆ.

ಹೀಗೆ ಬೌದ್ಧ ಧರ್ಮ ನಶ್ವರವೆಂದು ತಾನು ಕರೆದ ಜಗತ್ತನ್ನು ಹೆಚ್ಚು ಸಹ್ಯವಾಗಿಯೂ ಸುಂದರವಾಗಿಯೂ ಮಾಡಿದೆ. ಆದ್ದರಿಂದಲೇ ಬುದ್ಧ ಹೇಳಿದ್ದು: ಧರ್ಮ ಮೊದಲಿನಲ್ಲಿ ಸುಂದರ, ನಡುವಿನಲ್ಲಿ ಸುಂದರ, ಕೊನೆಯಲ್ಲಿಯೂ ಸುಂದರ. ಎರಡೂವರೆ ಸಾವಿರ ವರ್ಷಗಳ ಹಿಂದೆ ಈ ಪೃಥ್ವಿಯನ್ನು ಬೆಳಗತೊಡಗಿದ ಬುದ್ಧ ವೈಶಾಖ ಶುದ್ಧ ಪೂರ್ಣಿಮೆಯ ಬೆಳಕು ಇಂದಿಗೂ ಜಗತ್ತನ್ನು ಬೆಳಗುತ್ತಿದೆ.
ಎಚ್.ಎಸ್. ಶಿವಪ್ರಕಾಶ
ಕೃಪೆ : ಪ್ರಜಾವಾಣಿ 

ಮೀಸಲಾತಿ ಚರ್ಚೆಯ ಮುಂದುವರಿಕೆ ! ನೀವೇನಂತೀರೀ ?

ಐಜೂರ ಮತ್ತು ಶ್ರೀಕಾಂತ ಅವರಿಗೆ ಫೇಸ್ ಬುಕ್ಕಿನಲ್ಲಿ ವಾಗ್ವಾದ ನಡೆದಾಗ ನಾನು ಮಧ್ಯೆ ಪ್ರವೇಶಿಸಿ ಸಲಹೆ, ಸೂಚನೆ ನೀಡಿದೆ. ಆದರೆ ಇಡಿ ಅಭಿಪ್ರಾಯಗಳನ್ನು (ಶ್ರೀನಿವಾಸ ಎಂ.ವ್ಹಿ. ಅವರು ತಾವೇ ಆ ಪೋಸ್ಟಗಳನ್ನು ತೆಗೆದಿರುವುದಾಗಿ ನನ್ನೊಂದಿಗೆ ಮೊಬೈಲ್ ಮಾತುಕತೆಯಲ್ಲಿ ಹೇಳಿದ್ದಾರೆ ! ) ಅಳಿಸಿ ಹಾಕಲಾಯಿತು !

ಮೀಸಲಾತಿಯ  ಬಗ್ಗೆ ಚರ್ಚೆ ನಡೆದಾಗ ನಾನು ಏನೂ ಹೇಳಿದರೂ ಅರ್ಥ ಮಾಡಿಕೊಳ್ಳದ ಮೇಲೆ ನಾನು ಹೇಳಿದ್ದು, ಸರಿಯಾದ ಗ್ರಹಿಕೆಗಳು ಇರದಿದ್ದ ಪಕ್ಷದಲ್ಲಿ ಯಾರು ಏನು ಹೇಳಿದರೂ ರುಚಿಸುವುದಿಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಒಂದು ಮಾತು ಹೇಳಿದ್ದಾರೆ ಶ್ರೀಕಾಂತ, 'ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು' ಈ ಮಾತಿನರ್ಥ ಮಾಡಿಕೊಂಡು ಬದುಕಿ ; ಮನುಷ್ಯರನ್ನು ಮನುಷ್ಯರೆಂದು ಪರಿಗಣಿಸಿ ಮಾತನಾಡಿ, ವಂಶಪಾರಂಪರ್ಯವಾಗಿ ಬಂದ ಕೊಳಕುತನವನ್ನು ಇನ್ನಾದರೂ ಬಿಟ್ಟು ಹೊರಬನ್ನಿ. ಕೇವಲ ವಿತಂಡವಾದ ಹೂಡುವುದು ನಮ್ಮ ಕೆಲಸವಲ್ಲ ; ಸರಿಯಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಿ ; ಯಾಕೆ ಹೀಗಿದೆ ಎಂಬ ಬಗ್ಗೆ ವಾಸ್ತವದ ನೆಲೆಯಲ್ಲಿ ವಿಚಾರ ಮಾಡಿ. ಬುದ್ಧಿ ಸ್ಥಿಮಿತತೆಯನ್ನು ಕಳೆದುಕೊಂಡಂತೆ ವರ್ತಿಸುವುದರಿಂದ ಯಾವುದೇ ಪ್ರಯೋಜನಗಳಿಲ್ಲ. ಮನುಷ್ಯನ ಹೃದಯ ಗೆಲ್ಲಿ. ತಾಳ್ಮೆ ಇದ್ದರೆ ಒಂದಿಷ್ಟು ಓದಿಕೊಂಡು ಅರಿವು ಪಡೆದುಕೊಳ್ಳಿ ; ಇಲ್ಲವೆ ವಾಸ್ತವದ ಸಮಾಜವನ್ನು ಸುತ್ತು ಹಾಕಿ ಬನ್ನಿ ! ಏನೇನೂ ಸಾಧ್ಯವಿಲ್ಲ ಎಂದಾದರೆ ಸುಮ್ಮನಿರಿ ; ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ.

ಇದನ್ನು Mahadev Hadapad and Anilkumar Ogennavar ಮಾಡಿದರು. ಆನಂತರ  ಶ್ರೀಕಾಂತ್ ಎಂ ಅವರು  ನಾನು ಖಂಡಿತ ವಿತ್ತಂಡ ವಾದ ಮಾಡಲಿಲ್ಲ, ನಾವು ಮುಂದೆ ಎನು ಮಾಡಿದರೆ ಇದು ಸರಿ ಹೋಗಬಹುದೆಂದು ಹೇಳಿದೆ ಅಷ್ಟೇ, ನೀವು ಅದನ್ನು ಅರ್ಥ ಮಾಡಿಕೊಳ್ಳಲಿಲ್ಲ ಅಷ್ಟೇ ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ಹೇಳಿದ್ದು ನನಗೆ ಕಸಿವಿಸಿಯುಂಟು ಮಾಡಿತು. ಅದಕ್ಕೆ ನಾನು, ಇನ್ನೊಮ್ಮೆ ಓದಿ ಶ್ರೀಕಾಂತ ! ನಿಮ್ಮ ಹೆಸರಿದೆ ಅಲ್ಲಿ. ಆದರೆ ಅದು ಕೇವಲ ನಿಮಗಷ್ಟೆ ಅಲ್ಲ ; ಎಲ್ಲರಿಗೂ ಅನ್ವಯಿಸಿಯೇ ನಾನು ಆ ಮಾತುಗಳನ್ನು ಬರೆದಿದ್ದೇನೆ. ನಿಜ ಹೇಳಬೇಕು ಅಂದ್ರೆ ನೀವು ಹೇಳುವ ಮಾತುಗಳು ನಿಜವಾಗಿಯೂ ಅರ್ಥವಾಗುತ್ತ ಇಲ್ಲ ; ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತೀನಿ. ನೀವೇನು ಅದಕ್ಕೆ ಜವಾಬ್ದಾರ ಆಗೋದು ಬೇಡ ; ನಿಶ್ಚಿಂತೆಯಿಂದ ಇರಿ ಎಂದು ಪ್ರತಿಕ್ರಿಯಿಸಿದೆ.

ಮತ್ತೇ ಕಿರಿಕಿರಿ ಮಾಡಿದ ಶ್ರೀಕಾಂತ್ ಎಂ ಅವರು, ಕಾಲ ಕಾಲ ಎಂದು ಮುಂದೂಡಿ ೬೦ ವರ್ಷಕ್ಕೆ ತಂದಿದ್ದೀರಾ ಮತ್ತಷ್ಟು ವರ್ಷಗಳು ಹೀಗೆ ಕಾಯೋಣ ಇದೇ ರೀತಿ ಜಾತಿ ಜಾತಿ ಎಂದೆ ಇರೋಣ ಎನ್ನುತ್ತೀರಾ, ಆಗಬಹುದು, ನಮ್ಮ ಮುಂದಿನ ಪೀಳಿಗೆಗೂ ಇದನ್ನೇ ಧಾರೆ ಎರೆದು ಹೋಗೋಣ ಅಲ್ಲವೇ ಎಂದು ಕೇಳಿದರು. ಅದಕ್ಕೆ ನಾನು, ಮತ್ತೇ ಮತ್ತೇ ಅದೇ ಯಾಕೆ ಹಾಡುತ್ತೀರಿ ? ನನ್ನ ಜಾತಿ ಯಾವುದೆಂದು ನಿಮಗೆ ಗೊತ್ತಿಲ್ಲ ; ನಿಮ್ಮ ಜಾತಿ ಯಾವುದೆಂದು ನನಗೆ ಗೊತ್ತಿಲ್ಲ. ಆದರೂ ಜಾತಿಯನ್ನು ಯಾಕೆ ನಡುವೆ ಎಳೆದು ತರುತ್ತಿದ್ದೀರೋ ತಿಳೀತಾ ಇಲ್ಲ  ಎಂದು ಪ್ರತಿಕ್ರಿಯಿಸಿದೆ.

ಆದರೂ ಬಿಡದ ಶ್ರೀಕಾಂತ್ ಎಂ ಅವರು, ಅಲ್ಲಿ ನನ್ನ ಹೆಸರನ್ನು ನೋಡಿದೆ, ನೀವು ಜಾತಿ ಅನ್ನೋ ಪದ ಬಿಟ್ಟು ಬನ್ನಿ ಎಲ್ಲವೂ ಅರ್ಥ ಆಗುತ್ತೆ, ನೀವು ಹೇಳಿದ ಹಾಗೇನೆ ಜನ ಯಾವುದಕ್ಕೂ ಜವಾಬ್ದಾರರಾಗದೆ ನಿಶ್ಚಿಂತೆಯಿಂದ ನಿದ್ರೆ ಮಾಡಿ ಮಾಡಿದರಿಂದಲೇ ಇಂದಿನ ಸ್ಥಿತಿಗೆ ಕಾರಣ ಎಂಬ ಅಪವಾದ ಹೇರಿದರು. ಮಧ್ಯೆ ಪ್ರವೇಶಿಸಿದ Srinivasa MV ಅವರು, ಮಾನ್ಯ ಸಿದ್ದರಾಮ್ ಕರಣೀಕರಲ್ಲಿ ಮನವಿ: ಕನ್ನಡ ಕಟ್ಟೆಯಲ್ಲಿ ಕೆಲವರು ಪೂರ್ವಾಗ್ರಹಪೀಡಿತ ಮನೋಪ್ರವೃತ್ತಿಯಿಂದ ಮಾತ್ರವೇ ಕೆಲವು ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಈ ರೀತಿ ಯಾವುದೇ ಗೂಪ್‌ನಲ್ಲಿ ಆಗುವುದು ಸರಿಯಿಲ್ಲ. ಏಕತಾನತೆಯಿಂದ ಕೂಡಿದ, ಕೇವಲ ದೋಷಾರೋಪಣೆಗಳಿಗೆ ಎಡೆಮಾಡಿಕೊಡುವ ಇಂತಹ ಪ್ರಕಟಣೆಗಳಿಂದ ಏನು ಸಾಧಿಸುವರು. ನಿಮ್ಮಂತೆ ಬಹಳ ಜನಕ್ಕೆ ಬೇಸರ. ನಮ್ಮ ಮನಶಾಂತಿಯನ್ನು ನಾವು ಕೆಡಸಿಕೊಳ್ಳುವುದು ಬೇಡ ಎಂಬುದಾಗಿ ಸಲಹೆ ನೀಡಿದರು. ಯಾಕೆಂದರೆ 'ಕನ್ನಡ ಕಟ್ಟೆ' ಗ್ರೂಪ್ ಆರಂಭಿಸಿದವರು ಅವರೇ !


ಅಷ್ದರೊಳಗೆ ನನ್ನ ಪ್ರತಿಕ್ರಿಯೆಯಿಂದ ಬೆಸರಗೊಂಡ ಶ್ರೀಕಾಂತ್ ಎಂ ಅವರು, ಖಂಡಿತ ನಮ್ಮ ಜಾತಿಗಳ ಬಗ್ಗೆ ಮತ್ತೊಬ್ಬರಿಗೆ ಗೊತ್ತಿಲ್ಲ, ಆದರೆ ಈ ಚರ್ಚೆ ಪ್ರಾರಂಭಕ್ಕೆ ಕಾರಣವಾಗಿದ್ದೇ ಈ ಜಾತೀಯತೆ ಅಲ್ಲವೇ ಎಂಬುದಾಗಿ ಪ್ರಶ್ನೆ ಎಸೆದಿದ್ದರು !

ಅದಕ್ಕೆ ಮತ್ತೇ Srinivasa MV ಅವರು ಮಧ್ಯೆ ಪ್ರವೇಶಿಸಿ,  ಶ್ರೀಕಾಂತ್ ಅವರೆ ಇನ್ನು ಈ ಚರ್ಚೆ ಮುಂದುವರಿಯುವುದು ಬೇಡ ಎಂದು ಹೇಳಿದರು. ಆದರೆ ಪುರೋಗಾಮಿ ನೆಲೆಯ ನಾನು, ಚರ್ಚೆ ಇರಬೇಕು ; ಆದರೆ ಆರೋಗ್ಯಕರ ಚರ್ಚೆ ಬರಬೇಕು ಎಂದು ಹೇಳಿದೆ.

ಶ್ರೀಕಾಂತ್ ಎಂ ಅವರು  ‎Srinivasa MV ಮಾತನ್ನು ಒಪ್ಪಿಕೊಂಡು ಸರಿ ಸಾರ್ ಎಂದರು !

ಈ ಬಗ್ಗೆ ಮತ್ತೇ ಚರ್ಚೆ ಸುರುವಾಯಿತು. Ajith Sheregar ಅವರು ellarigu ondu prashne ondu groupina uddesha enagirbeku?? ಎಂದು ಪ್ರಶ್ನೆ ಎಸೆದರು !

Srinivasa MV ಅವರು,  'ನಾವು ನಾಗರೀಕರಾಗಿರಬೇಕು. ಪರಸ್ಪರ ದ್ವೇಷ ಅಸೂಯೆಗಳನ್ನು ಬೆಳಸಿಕೊಳ್ಳುವುದು ಸರಿಯಿಲ್ಲ'  ಎಂಬ ಹೇಳಿಕೆ ನೀಡಿದರು.

ಆನಂತರ Srinivasa MV ಅವರು ನನ್ನ ಮೊಬೈಲಿಗೆ ಕಾಲ್ ಮಾಡಿ ಶ್ರೀಕಾಂತ ಹೇಳಿದ ವಿಚಾರಗಳ ಪುನರುಚ್ಛಾರ ಮಾಡಿದರು. ನಾನು ಹೊರಗೆ ಹೋಗುವ ಗಡಿಬಿಡಿಯಲ್ಲಿದ್ದರೂ ಮಾತಾಡಿ ಅವರು ಹೇಳಿದ್ದೇ ಸರಿ ಎಂದು ಬಿಟ್ಟೆ ! ಅವರ ಮನಸ್ಸು ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ ಅಷ್ಟೆ !
       
       ಮತ್ತೇ ನಾನು 'ಕನ್ನಡ ಕಟ್ಟೆ' ಮೂಲಕ ಹೀಗೆ ಹೇಳಿರುವೆ,  'ಶ್ರೀನಿವಾಸಜೀ, ನಿಮ್ಮ ವಿಚಾರಗಳು ತುಂಬ ಅಮೋಘವಾಗಿವೆ. ಮೀಸಲಾತಿ ಚರ್ಚೆಯನ್ನು ಬೇರೆ ದಾರಿಗೆ ಎಳೆಯುವ ಅವಶ್ಯಕತೆ ಇಲ್ಲ. ಶ್ರೀಕಾಂತ ಅವರಿಗೆ ನಾನು ಹೇಳಿದ್ದು ಸರಿಯಾಗಿಯೇ ಇದೆ. ನೀವು ಕಾಮೆಂಟ್ ನ್ನು ಗಮನಿಸಿಲ್ಲ ಎನಿಸುತ್ತದೆ. ನೀವು ನನ್ನ ಜೊತೆ ಫೋನ್ ಸಂಪರ್ಕ ಮಾಡಿದಾಗ ನಾನು ಹೇಳಿದ ವಿಚಾರಗಳು ಮತ್ತು ನಾನು ನಡೆದು ಬಂದ ದಾರಿಯ ವಿಚಾರಗಳು ಭಿನ್ನ. ನೀವು ಹಿರಿಯರು. ನಿಮ್ಮ ಬಗ್ಗೆ ಗೌರವ ಇದೆ. ದಯವಿಟ್ಟು ಮೀಸಲಾತಿಯ ವಿರುದ್ಧ ಮಾತಾಡಬೇಡಿ. ಒಂದಿಡಿ ಸಮೂಹ ನಮ್ಮೆದುರಿಗೆ ಇದೆ. ಅದರ ಬಗ್ಗೆ ದಯವಿಟ್ಟು ತಿಳಿದುಕೊಂಡಿದ್ದೀರಿ ಎಂದುಕೊಂಡಿರುವೆ. ಜಾತಿ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಮತ್ತು ಇರುತ್ತದೆ. ನಾನು ಎಡಪಂಥೀಯ ವಿಚಾರಗಳಿಂದ ಬಂದವನು. ಇಂದಿಗೂ ನಾನು ಅವರನ್ನು ಬೈಯ್ಯುತ್ತೇನೆ. ಆದರೆ ಆ ಬೈಯ್ಯುವಿಕೆಯ ಹಿಂದೆ ಅರ್ಥ ಮಾಡಿಕೊಳ್ಳುವ ಮನಸ್ಥಿತಿಗಳು ಇರುತ್ತವೆ. ವಾದ ಮಾಡಿದರೆ ನಾನೂ ಸೋಲುವುದಿಲ್ಲ ; ನೀವೂ ಸೋಲುವುದಿಲ್ಲ ! ಸೋಲು ಏನಿದ್ದರೂ ಕೆಳಹಂತದ ಬದುಕಿನಲ್ಲಿ ಇನ್ನೂ ಜೀವಂತ ಇದ್ದಾರಲ್ಲ ಅವರದು. ಮತ್ತೇ ಮತ್ತೇ ಹೇಳುತ್ತಿದ್ದೇನೆ ಇತಿಹಾಸದ ಪಳಿಯುಳಿಕೆ ನಾವು ಎನ್ನುವ ಅರಿವು ನಮಗಿರಬೇಕು. ಹಿಂದೆ ಇದ್ದ ಪರಿಸ್ಥಿತಿ ಇಂದು ಇಲ್ಲ ಎಂದು ನೀವು ಹೇಳಿದ್ದು ಸರಿ. ನಮಗೆ ಬ್ರಾಹ್ಮಣರ ಬಗ್ಗೆ ಸಿಟ್ಟಿಲ್ಲ ; ಬ್ರಾಹ್ಮಣಶಾಹಿ ಮೇಲಿದೆ. ಅದಕ್ಕೆಂತಲೇ ನಾನು ದಲಿತರು ಮತ್ತು ಬಲಿತರು ಎನ್ನುವ ಪದ ಬಳಸುತ್ತೇನೆ. ಈ ಪದದ ಹಿಂದೆ ಜಾತಿ ವಾಸನೆ ಇಲ್ಲ. ಬಲಿತ ದಲಿತರೂ ಇಂದು ಜಾತಿಯತೆ ಮಾಡುತ್ತಿದ್ದಾರೆ. ಉದಾಹರಣೆ ನಾನು ಕೊಡಬಲ್ಲೆ ; ಸೌಹಾರ್ದದ ಚರ್ಚೆಗೆ ತೆರೆದುಕೊಳ್ಳೋಣ !'

ಇದಕ್ಕೆ ನೀವೇನು ಅಂತೀರಿ ?

Thursday, May 10, 2012

ಡಬ್ಬಿಂಗ್ ಮತ್ತು ವಾದಗಳು !



ಆರಂಭದಲ್ಲಿ ಕೆ.ವಿ.ತಿರುಮಲೇಶ್ ಬರೆದ ಲೇಖನ

ಭಾಷೆ ಯಾವುದೇ ಇರಲಿ, ಅಮೀರ್ ಖಾನ್ ಚರ್ಚೆಗೆ ತಂದ ವಿಷಯ ನಮಗೆ ಮುಖ್ಯವಾಗಬೇಕು. ನಮ್ಮಲ್ಲಿ ಹಲವರಿಗೆ ಕನ್ನಡದ ಜತೆ ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳು ಬರ್ತವೆ; ಆದ್ದರಿಂದ ಅಮೀರ್ ಖಾನನ ಪ್ರೋಗ್ರಾಮನ್ನ ಅಥವಾ ಡಿಸ್ಕವರಿ ಚಾನಲಿನ ಪ್ರೋಗ್ರಾಮನ್ನ ಆಯಾ ಭಾಷೆಗಳಲ್ಲಿ ಕೇಳಿ ಅರ್ಥಮಾಡಿಕೊಳ್ಳುವುದು ಸಾಧ್ಯ. ಆದರೆ ಕರ್ನಾಟಕದಲ್ಲಿ ಕನ್ನಡ ಮಾತ್ರವೇ ಗೊತ್ತಿರುವ ಬಹುಸಂಖ್ಯೆಯ ಜನರಿದ್ದಾರೆ. ಅವರಿಗೆ ಈ ಪ್ರೋಗ್ರಾಮುಗಳು ಕನ್ನಡದಲ್ಲಿ ಸಿಗಬೇಕು. ಸದ್ಯ ಅದಕ್ಕಿರುವ ಮಾರ್ಗ ಡಬ್ಬಿಂಗ್ ಒಂದೇ. ಅದಲ್ಲ ಎಂದಾದರೆ ಇದನ್ನು ವಿರೋಧಿಸುವ ಜನರು ಮೂಲಕನ್ನಡದಲ್ಲೇ ಇಂಥ ಪ್ರೋಗ್ರಾಮುಗಳನ್ನು ಕೊಡಬೇಕು. ಹಾಗೆ ಕೊಡುವುದು ಸಾಧ್ಯವಿಲ್ಲ ಎಂದಾದರೆ ತೆಪ್ಪಗಿರಬೇಕು.

ಯಾವುದಾದರೊಂದು ಚಾನೆಲ್ ನಲ್ಲಿ ಅಮೀರ್ ಖಾನನ ಅಥವಾ ಡಿಸ್ಕವರಿ ಚಾನೆಲಿನ ಪ್ರೋಗ್ರಾಮುಗಳು ಡಬ್ಬಿಂಗ್ ಆಗಿ ಬಂದರೆ ಕನ್ನಡ ಚಿತ್ರ ನಿರ್ಮಾಪಕರಿಗೆ ಭಯ ಯಾಕೆ? ಅವುಗಳ ಜತೆ ಸ್ಪರ್ಧಿಸಬಲ್ಲ ಪ್ರೋಗ್ರಾಮುಗಳನ್ನು ನೀಡಿರಿ. Or else you will be a dog in the manger!

ಅಮೀರ್ ಖಾನ್ ಗೆ ಕೆಲವೊಂದು ಟಾಪಿಕ್ಸ್ ನೀಡಲು ಈ ಮೂಲಕ ಇಚ್ಛಿಸುತ್ತೇನೆ:

೧. ಪರೀಕ್ಷೆಗಳಲ್ಲಿ ಫೇಲ್ ಆಗುವ ವಿದ್ಯಾರ್ಥಿಗಳ ಬಗ್ಗೆ ಸಮಾಜ ಅನ್ಯಾಯ ಮಾಡುತ್ತಿದೆಯೇ?

೨. ಸ್ತ್ರೀಯರ ಮೇಲಣ ಅತ್ಯಾಚಾರ ತದೆಗಟ್ಟುವುದು ಹೇಗೆ?

೩. ಅಣು ಇಂಧನದ ವಿನಾ ಲೋಕ ತನ್ನ ಭವಿಷ್ಯವನ್ನು ಕಲ್ಪಿಸುವುದು ಸಾಧ್ಯವೇ?

೪. ಕಾನೂನು ಇದ್ದರೂ ಬಾಲ ಕಾರ್ಮಿಕ ಪದ್ಧತಿ ಯಾಕೆ ನಿಂತಿಲ್ಲ?

೫. ಪ್ರತಿಭೆ ಎನ್ನುವ ವಸ್ತುವೊಂದು ಇದೆಯೇ? ಅಥವಾ ಅವಕಾಶದ ಉಪಯೋಗವೇ ಇದರ ಹಿಂದೆ ಇರುವಂಥದೇ?

೬. ಜಾತೀಯತೆಯನ್ನು ತೊಡೆದು ಹಾಕುವುದು ಸಾಧ್ಯವೇ? ಹೇಗೆ?

೭. ಸಂಸ್ಕೃತಿ ಎಂದರೆ ನಿಜಕ್ಕೂ ಏನು?

೮. ಅಮೇರಿಕ, ಇಂಗ್ಲೆಂಡ್, ಯುರೊಪ್ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳನ್ನು ತೆಗಳುತ್ತಲೇ ಜನ ಯಾಕೆ ಅಲ್ಲಿಗೆ

ಹೋಗಲು, ಅಲ್ಲೇ ನೆಲಸಲು ಬಯಸುತ್ತಾರೆ?

೯. ಮರಣದಂಡನೆಯನ್ನು ಕಿತ್ತುಹಾಕಬೇಕೇ? ರೇಪ್ ಮಾಡಿ ಶಿರ ತುಂಡರಿಸುವ, ಆಸಿಡ್ ಎರಚಿ ಹೆಂಗಸರ ಭವಿಷ್ಯವನ್ನೇ

ನಾಶಮಾಡುವ ಕ್ರಿಮಿನಲುಗಳಿಗೂ ಮರಣದಂಡನೆ ಬೇಡವೇ?

೧೦. ನಮ್ಮ ಸಿನೆಮಾಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿವೆಯೇ? ಉದಾಹರಣೆಗೆ, ಪ್ರೀತಿ ಮಾಡಲು ಒತ್ತಾಯಿಸುವುದು,

ಸ್ತ್ರೀಯರ ಹಿಂದೆ ಬೀಳುವುದು, ಗುರಿ ಸಾಧಿಸಲು ಏನು ಮಾಡಲೂ ಸಿದ್ಧರಾಗುವುದು.

೧೧. ನಮ್ಮ ಕೃಷಿ ಉದ್ಯಮೀಕರಣಕ್ಕೆ ಒಳಗಾಗಬೇಕೇ? (ದೊಡ್ಡ ಹಿಡುವಳಿಗಳು)

೧೨. ನೀರಿನ ಸಮಸ್ಯೆಯನ್ನು ನೀಗಿಸುವುದು ಹೇಗೆ?

೧೩. ಅಂಗದುರ್ಬಲರನ್ನು ಸಮಾಜ ಹೇಗೆ ನೋಡುತ್ತದೆ?

೧೪. ಸೆಕ್ಸ್ ವರ್ಕರ್ಸ್ ಎಂದು ವೇಶ್ಯೆಯರನ್ನು ನಾಮಕರಣ ಮಾಡುವುದರಿಂದ ವೇಶ್ಯಾಪದ್ಧತಿಯನ್ನು ತಡೆಗಟ್ಟುವುದು ಸಾಧ್ಯವೇ? ಅಥವಾ ತಡೆಗಟ್ಟುವುದೇ ಬೇಡವೇ?!

೧೫. ಪ್ರಜಾಪ್ರಭುತ್ವ ಮತ್ತು ವೋಟ್ ಬ್ಯಾಂಕ್- ಈ ವಿರೋಧಾಭಾಸಕ್ಕೆ ಯಾವ ಪರಿಹಾರ?

ಇಂಥ ಹಲವಾರು ಸಮಸ್ಯೆಗಳು ನಮ್ಮ ಮುಂದಿವೆ. ಇವನ್ನು ನೀವೂ ಸೂಚಿಸಬಹುದು, ಯೋಚಿಸಬಹುದು, ಇವುಗಳ ಕುರಿತು ಬರೆಯಬಹುದು. ಅಮೀರ್ ಖಾನಿಗೂ ತಿಳಿಸಬಹುದು.

ಡಬ್ಬಿಂಗ್ ನಿಂದ ಕನ್ನಡವೇನೂ ಹಾಳಾಗುವುದಿಲ್ಲ. ಲೋಕದ ಅನೇಕ ಭಾಷೆಗಳಲ್ಲಿ ಅನುವಾದಗಳು, ಡಬ್ಬಿಂಗ್, ಸಬ್-ಟೈಟಲಿಂಗ್ ನಡೀತಿವೆ. ಅವು ಯಾವುದಕ್ಕೂ ಇಲ್ಲದ ಭಯ ಕನ್ನಡಕ್ಕೆ ಯಾಕೆ? ಅದೂ ಅಲ್ಲದೆ ರಕ್ಷಣಾತಂತ್ರದಿಂದ, ದಿಗ್ಭಂಧನದಿಂದ ಯಾವ ಭಾಷೆಯೂ ಯಾವ ಕಲೆ-ವಿಜ್ಞಾನವೂ ಬೆಳೆಯವು. ಕನ್ನಡ ಮೊಲೆಹಾಲಿನಲ್ಲಿ ಎಷ್ಟು ಕಾಲ ಇರಬೇಕು?
ಈ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು

 Sandesh S says: excellent 1 ಪ್ರತಿಭೆ ಎನ್ನುವ ವಸ್ತುವೊಂದು ಇದೆಯೇ? ಅಥವಾ ಅವಕಾಶದ ಉಪಯೋಗವೇ ಇದರ ಹಿಂದೆ ಇರುವಂಥದೇ?

    ನಮ್ಮ ಕೃಷಿ ಉದ್ಯಮೀಕರಣಕ್ಕೆ ಒಳಗಾಗಬೇಕೇ? (ದೊಡ್ಡ ಹಿಡುವಳಿಗಳು)

    ನಮ್ಮ ಸಿನೆಮಾಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿವೆಯೇ?
    ಅಮೇರಿಕ, ಇಂಗ್ಲೆಂಡ್, ಯುರೊಪ್ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳನ್ನು ತೆಗಳುತ್ತಲೇ ಜನ ಯಾಕೆ ಅಲ್ಲಿಗೆ ಹೋಗಲು, ಅಲ್ಲೇ ನೆಲಸಲು ಬಯಸುತ್ತಾರೆ?
    ಸಂಸ್ಕೃತಿ ಎಂದರೆ ನಿಜಕ್ಕೂ ಏನು? everyone should think about these
  
 Veena Bhat says : ನಿಜ ಸರ್…,ಇಲ್ಲಿ ಭಾಷೆಗಿಂತ ವಿಷಯವೇ ಮುಖ್ಯ.ಈ ಸಮಸ್ಯೆ ಒಂದು ಭಾಷೆಯ ಜನರಿಗೆ ಸೀಮಿತವಾಗಿಲ್ಲ.ಇದು ಇಡೀ ದೇಶ ಎದುರಿಸುತ್ತಿರುವ ಸಮಸ್ಯೆ .ವಿದೇಶೀ ಸಿನಿಮಾಗಳ ,ವಿದೇಶೀ ಸಂಸ್ಕೃತಿಯ ಎಲ್ಲಾ ಕೆಟ್ಟದ್ದನ್ನು ಅನುಕರಣೆ ಮಾಡುವ ನಮ್ಮ ಸಿನೆಮಾಗಳು ಮತ್ತು ವಾಹಿನಿಗಳು ಯಾವ ರೀತಿಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತಿವೆ ?
    ನನ್ನ ಕೆಲವು ಪಾಯಿಂಟ್ಸ್ ಗಳನ್ನು ಇದರೊಂದಿಗೆ ಸೇರಿಸಲು ಇಷ್ಟಪಡುತ್ತೇನೆ ..
    ೧.ಭ್ರಷ್ಟಾಚಾರ ನಿರ್ಮೂಲನ ಸಾಧ್ಯವೇ..?
    ೨.ಲಿವ್ ಇನ್ ರಿಲೇಶನ್ ಶಿಪ್ ನ್ನು ಒಪ್ಪಿಕೊಳ್ಳಬೇಕೆ..?
    ೩.ಸ್ತ್ರೀ ಸಮಾನತೆ ಹೇಗೆ ಸಾಧ್ಯ ?
    ೪ .ಸಲಿಂಗ ವಿವಾಹ ನಮ್ಮ ಸಂಸ್ಕೃತಿಗೆ ವಿರೋಧ ಅಲ್ಲವೆ ? ಇದು ಕುಟುಂಬ ವ್ಯವಸ್ಥೆಗೆ ಮಾರಕ ಅಲ್ಲವೆ ?
    ೫.ಸರಕಾರದ ಯೋಜನೆಗಳು ಜನರಿಗೆ ತಲುಪುವಂತೆ ಮಾಡುವುದು ಹೇಗೆ ? [ಹೆಚ್ಚಿನವು ಕಡತಗಳಲ್ಲೇ ಉಳಿಯುತ್ತವೆ ]
    ೬.ಬಿಕ್ಷುಕರ ಸಮಸ್ಯೆ -ಬಿಕ್ಷಾಟನೆ ಯನ್ನು ತಡೆಯುವುದು ಹೇಗೆ ?

    ವಸುಧೇಂದ್ರ says: ಪ್ರಿಯ ತಿರುಮಲೇಶ್,
    ನಿಮ್ಮ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ. ಸ್ಪರ್ಧೆಯಿಲ್ಲದ ಯಾವುದೇ ಚಟುವಟಿಕೆಯೂ ಕಾಲಕ್ರಮೇಣ ಗುಣಮಟ್ಟದಲ್ಲಿ ಕುಸಿಯುತ್ತದೆ. ಕನ್ನಡ ಸಿನಿಮಾ ಎಂಬ ‘ಹುಲಿಮರಿ’ಯನ್ನು ಬೆಕ್ಕಿನಂತೆ ಮನೆಯಲ್ಲಿ ಹಾಲು-ಅನ್ನ ಕೊಟ್ಟು ಸಾಕಿದ್ದು ಸಾಕು. ಈ ಮನೆಪ್ರೀತಿ ಇನ್ನೂ ಮುಂದುವರೆದರೆ ಅದು ತನ್ನ ಶಿಕಾರಿಯ ಶಕ್ತಿಯನ್ನೇ ಮರೆತುಬಿಟ್ಟೀತು. ಅದಕ್ಕೀಗ ಸ್ವಾತಂತ್ರ್ಯ ಕೊಡೋಣ. ಕಾಡಿನಲ್ಲಿ ಎಲ್ಲ ಪ್ರಾಣಿ ಸಂಕುಲದ ಮಧ್ಯೆ ಅದು ಘರ್ಜಿಸಲಿ. ತನ್ನ ಶಕ್ತಿಯನ್ನು ಮೆರೆಯಲಿ.

    ಮನೆಯಲ್ಲಿ ಅಕ್ಕ ಅತ್ಯಂತ ಪ್ರೀತಿಯಿಂದ ಡಿಸ್ಕವರಿ, ಹಿಸ್ಟರಿ ಛಾನಲ್ಗಳನ್ನು ನೋಡುತ್ತಾಳೆ. ಗಳಿಗೆಗೊಮ್ಮೆ ಅದರ ಆಂಗ್ಲ ವರದಿ ಅರ್ಥವಾಗದೆ ‘ಏನಂತೋ?’ ‘ಏನಂತೋ’ ಎಂದು ನನ್ನನ್ನು ಕೇಳಿದಾಗ, ಕನ್ನಡದಲ್ಲಿ ಅದನ್ನು ನಾವು ಕೊಡುತ್ತಿಲ್ಲವಲ್ಲಾ ಎಂದು ಬೇಸರವಾಗುತ್ತದೆ. ಕಲೆಯ ಆಸ್ವಾದನೆಗೆ ಸೀಮೆಗಳನ್ನು ಒಡ್ಡುವುದು ಅಮಾನವೀಯ. ಒಂಚೂರು ವಿಶಾಲ ಮನೋಭಾವದಿಂದ ಜಗತ್ತನ್ನು ನೋಡೋಣ. ದೇಶ-ವಿದೇಶಗಳಲ್ಲಿ ಎಂತೆಂಥಹ ಅದ್ಭುತ ಸಿನಿಮಾಗಳಿವೆ! ಅವುಗಳನ್ನು ನಮ್ಮವರು ನೋಡುವುದು ಬೇಡವೆ? ವಿದ್ಯಾವಂತರು ಮಾತ್ರ ಆಂಗ್ಲ ಸಬ್-ಟೈಟಲ್ ಹಾಕಿಕೊಂಡು ನೋಡಿಬಿಟ್ಟರೆ ಸಾಕೆ? ನಮ್ಮವರ ಸಿನಿಮಾ ಗ್ರಹಿಕೆ ಗುಣಮಟ್ಟ ಹೆಚ್ಚುವುದು ಯಾವಾಗ? ಲಾಂಗು-ಮಚ್ಚು ಹಿಡಿದುಕೊಂಡು ರಕ್ತ ಚೆಲ್ಲಾಡುವ ನಮ್ಮವರ ಸಿನಿಮಾಗಳು ಬಹು ಕೆಳಮಟ್ಟದಲ್ಲಿವೆ. ಬೇರೆ ರಾಜ್ಯದ ಗೆಳೆಯರ ಮುಂದೆ ಮಾತನಾಡುವಾಗ ನಮ್ಮಲ್ಲಿ ಒಳ್ಳೆಯ ಸಿನಿಮಾಗಳೇ ಇತ್ತೀಚೆಗೆ ಬಂದಿಲ್ಲವೆಂಬ ಕಟು ಸತ್ಯ ನನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತದೆ. ನಾವು ದೇಶದ ಉಳಿದ ರಾಜ್ಯಗಳವರ ಜೊತೆಗೆ ಎದೆಯುಬ್ಬಿಸಿ ಮಾತನಾಡುವಂತಹ ಸಿನಿಮಾಗಳು ನಮಗೆ ಕನ್ನಡದಲ್ಲಿ ಬೇಕು. ಸ್ಪರ್ಧೆಯನ್ನು ಒಡ್ಡದೆ ಅದನ್ನು ಸಾಧಿಸುವುದು ಆಗುವದಿಲ್ಲ.

    ಜಗತ್ತಿನ ಸಕಲೆಂಟು ನುಡಿಯ ಪುಸ್ತಕಗಳನ್ನು ಅನುವಾದ ಮಾಡಿಕೊಂಡರೂ ಕನ್ನಡದ ಸಾಹಿತ್ಯಕ್ಕೆ ಯಾವ ಕೊರೆತೆಯೂ ಆಗಿಲ್ಲ ಅಥವಾ ಅದರಿಂದ ಕನ್ನಡ ಸಂಸ್ಕೃತಿ ನಶಿಸಿಯೂ ಇಲ್ಲ. ದೇಶದಲ್ಲಿ ಹೆಮ್ಮೆಯಿಂದ ತಲೆ ಎತ್ತುವಂತೆ ಈವತ್ತಿಗೂ ನಮ್ಮ ಸಾಹಿತ್ಯವಿದೆ. ಎಂಟು ಜ್ಞಾನಪೀಠಗಳನ್ನು ಪಡೆದಿದೆ. ಹಾಗಿದ್ದ ಮೇಲೆ ಸಿನಿಮಾ ರಂಗದಲ್ಲೇಕೆ ಕಳವಳ? ಗಟ್ಟಿ ಕಾಳುಗಳು ಖಂಡಿತಾ ಉಳಿದು ಕೊಳ್ಳುತ್ತವೆ. ಡಬ್ಬಿಂಗ್ ಅನುಮತಿ ಸಿಕ್ಕರೂ ಗಿರೀಶ್ ಕಾಸರವಳ್ಳಿಯವರ ಸಿನಿಮಾಗಳು ದೇಶ-ವಿದೇಶ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯುತ್ತಲೇ ಹೋಗುತ್ತವೆನ್ನುವದರಲ್ಲಿ ನನಗೆ ಅನುಮಾನವಿಲ್ಲ. ಜೊಳ್ಳುಗಳು ಹಾರಿ ಹೋದರೆ ನನಗೆ ಬೇಸರವೇನೂ ಇಲ್ಲ ಬೇಗನೆ ಡಬ್ಬಿಂಗ್ ಬರಲಿ. ಬೇಕಿದ್ದರೆ ಯಾವ ಸಿನಿಮಾ, ಯಾವ ಕಾರ್ಯಕ್ರಮಗಳನ್ನು ಕನ್ನಡಕ್ಕೆ ತರಬಹುದೆಂಬುದನ್ನು ನಿರ್ಧರಿಸುವ ಒಂದು ‘ಪ್ರಾಮಾಣಿಕ’ ಜನರ ಗುಂಪನ್ನು ಮಾಡೋಣ.
 Ahdithcya Kjeevaratmna says: Superb figurative sense.” ಕನ್ನಡ ಸಿನಿಮಾ ಎಂಬ ‘ಹುಲಿಮರಿ’ಯನ್ನು ಬೆಕ್ಕಿನಂತೆ ಮನೆಯಲ್ಲಿ ಹಾಲು-ಅನ್ನ ಕೊಟ್ಟು ಸಾಕಿದ್ದು ಸಾಕು. ಈ ಮನೆಪ್ರೀತಿ ಇನ್ನೂ ಮುಂದುವರೆದರೆ ಅದು ತನ್ನ ಶಿಕಾರಿಯ ಶಕ್ತಿಯನ್ನೇ ಮರೆತುಬಿಟ್ಟೀತು”

        shama, nandibetta says: beautiful vasudhendra sir…. hats off….
     
 ಸಂದೀಪ್ ಕಾಮತ್ says: mir Khan has planned for only 13 episodes friends!
 
  prathibha nandakumar says: sir i agree with you but plse get me ONE slot on any kannada channel i will give you 100% better programme than satyameva jayathe. plse get me one slot plse.. plse… i will do it at half the cost…plse get me one slot… do you get the point? protest dubbing and give a chance for kannada talent.
   

  Dhananjaya says: ello. It is very good to know that you can make a good program compare to SMJ. Who stopped you. you are always to free to make your program. It all depends on your self confidence finally. 
Ananda Prasad says:  ಸತ್ಯಮೇವ ಜಯತೇ ತರಹದ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡುವುದಕ್ಕಿಂತಲೂ ನಮ್ಮ ಸ್ವಂತ ಚಿಂತನೆಯಲ್ಲೇ ಅದೇ ತರಹದ ಕಾರ್ಯಕ್ರಮಗಳನ್ನು ಅದಕ್ಕಿಂತಲೂ ಚೆನ್ನಾಗಿ ಮಾಡಲು ಸಾಧ್ಯವಿದೆ. ಅದಕ್ಕೆ ಹಣದ ಹಿಂದೆ ಬಿದ್ದಿರುವ ನಮ್ಮ ಟಿವಿ ವಾಹಿನಿಗಳು ಅವಕಾಶ ಕೊಡುವುದಿಲ್ಲ ಅಷ್ಟೇ. ಅದುವೇ ಅಂಥ ಕಾರ್ಯಕ್ರಮಗಳು ಕನ್ನಡದಲ್ಲಿ ಬರದೆ ಇರಲು ಪ್ರಧಾನ ಕಾರಣ. ಕನ್ನಡ ಟಿವಿ ವಾಹಿನಿಗಳು ಮೂಢ ನಂಬಿಕೆಗಳನ್ನು ಬೆಳೆಸುವುದರಲ್ಲಿ ಆಸಕ್ತವಾಗಿವೆಯೇ ಹೊರತು ಜ್ಞಾನ, ವಿಜ್ಞಾನ, ಚಿಂತನೆ ಬೆಳೆಸಲು ಶೇಕಡಾ ಒಂದರಷ್ಟೂ ಪ್ರಯತ್ನಿಸುತ್ತಿಲ್ಲ, ಅದು ಅವುಗಳಿಗೆ ಬೇಕಾಗಿಯೂ ಇಲ್ಲ.
 harsha says: ee thara slot kelodu badalu, youtube nalli nimma show na video upload.. aamir khan video in kannada has 28,000+ views, try to get more views that that.. aga jana yarige support madtha idare antha channel avarige torisa bahudu..adu bittu ee thara slot ge pleading madodu beda!! prove ur talent rather than asking for a chance to showcase it.. 

shivaprakash says: Madam, Getting a slot is purely depend on commercial sense of channels. If our own kannada channels are stupidly telecasting 70% Cinema related bakwaas and nonsense news, do you expect us to watch?…..No way.

Other languages like Tamil and Telugu become popular in the normal life of bengaluru, hubli, shivamogga in last 25-30 years….the reason is hungry audience are running behind creativity…..so they watched creativity and learned other languages, adopted their culture,started forgetting kannada, unfortunately started insulting kannada movies….

You wrote a sentence for Ravi belagere’s mandovi…..”Markwez hindenduu kannadakke ee mattige bandiralilla…”….what does it mean?…do u call it as remake?dubbing?translation?….everything is same….U might have observed by this time…My english is not so good, so i read mandoovi 3-4 times and enjoyed it. So u want me to buy original Markwez, learn english(or any parent language) or Mandovi?….What do u say?
Please dont kill kannada, kannadiga and karnataka by opposing dubbing.

ವಸಂತ says: ಸತ್ಯ ಮೇವ ಜಯತೇ ಮತ್ತು ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿ ಅನ್ನುವ ಪರಿಹಾರ !

    ಸತ್ಯ ಮೇವ ಜಯತೇ ಅನ್ನುವ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡದಂತೆ ಸುವರ್ಣ ವಾಹಿನಿಯನ್ನು ಕೆಲವು ಖಾಸಗಿ ಸಂಸ್ಥೆಗಳು ತಡೆದರು. ಅದರ ಬೆನ್ನಲ್ಲೇ ಜಗತ್ತಿನ ಜ್ಞಾನ, ಮನರಂಜನೆಯೆಲ್ಲವನ್ನು ಕನ್ನಡದಲ್ಲೇ ಪಡೆಯುವುದು ಕನ್ನಡ ಪರವೂ, ಗ್ರಾಹಕರಾಗಿ ಅದು ಕನ್ನಡಿಗರ ಹಕ್ಕು ಎಂಬ ಕೂಗು ಬಲು ದೊಡ್ಡ ದನಿಯಲ್ಲೇ ಕಳೆದೆರಡು ವಾರದಲ್ಲಿ ಸಾಮಾಜಿಕ ಸಂಪರ್ಕ ತಾಣಗಳು, ಪತ್ರಿಕೆಗಳು, ಸುದ್ದಿವಾಹಿನಿಗಳು ಸೇರಿದಂತೆ ಹಲವೆಡೆ ಪ್ರತಿಧ್ವನಿಸಿವೆ. ಇದರ ಫಲವೆಂಬಂತೆ ಯಾವುದೇ ಪಾಳೇಗಾರರ ಅಂಕೆಗೆ ಇನ್ನೂ ಸಿಲುಕದ ಯೂ ಟ್ಯೂಬ್ ನಂತಹ ತಾಣದಲ್ಲಿ ಈ ಕಾರ್ಯಕ್ರಮದ ಕನ್ನಡ ಆವೃತ್ತಿಯನ್ನು ನೋಡಲಾಗುವಂತಹ ಬದಲಾವಣೆಯನ್ನು ಎಚ್ಚೆತ್ತ ಕನ್ನಡದ ಗ್ರಾಹಕರು ತಂದು ಕೊಂಡಿದ್ದಾರೆ ಅನ್ನಬಹುದು. ಈ ಗೆಲುವು ಕೊಟ್ಟಿರುವ ಸಂದೇಶವೊಂದಿದೆ. ಹೆಚ್ಚೆಚ್ಚು ಮಾರುಕಟ್ಟೆ ಆಧಾರಿತ ವ್ಯವಸ್ಥೆಯತ್ತ ನಮ್ಮ ಸಮಾಜ ಮುಂದಡಿಯಿಡುತ್ತಿರುವಾಗ ಮತ್ತು ಆ ಬದಲಾವಣೆ ಕನ್ನಡ ನುಡಿಯ ಮುಂದೆ ಹಲವಾರು ಸವಾಲುಗಳನ್ನು ತರುತ್ತಿರುವಾಗ ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯ ಪಾತ್ರ ಅತ್ಯಂತ ಹಿರಿದಾಗಿದೆ ಅನ್ನುವುದು.

ಮಾರುಕಟ್ಟೆ ಅನ್ನುವುದು ಗ್ರಾಹಕ ಪಕ್ಷಪಾತಿ 
1991ರಲ್ಲಿ ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಇತರೆಡೆಯಂತೆ ಕನ್ನಡ ಸಮಾಜದಲ್ಲೂ ಹಲವಾರು ಬದಲಾವಣೆಗಳಾಗಿವೆ. ಅರ್ಥ ವ್ಯವಸ್ಥೆಯ ಎಲ್ಲ ಹಂತಗಳನ್ನು ಸರ್ಕಾರವೇ ನಿಯಂತ್ರಿಸುತ್ತಿದ್ದ ದಿನಗಳಿಂದ ಸಾಕಷ್ಟು ಹೊರ ಬಂದು ಮಾರುಕಟ್ಟೆ ಆಧಾರಿತ ವ್ಯವಸ್ಥೆಯೆಡೆಗೆ ಹೆಜ್ಜೆ ಹಾಕಿದ್ದೇವೆ. ಅದರ ಒಳಿತು-ಕೆಡಕುಗಳ ಬಗ್ಗೆ ಇಲ್ಲಿ ಚರ್ಚಿಸುವುದು ಬೇಡ. ಇಲ್ಲಿ ಗಮನಿಸಬೇಕಿರುವುದು ಏನೆಂದರೆ ಈ ಬದಲಾವಣೆ ನಿಲ್ಲದು. ಮುಂದಿನ ದಿನಗಳಲ್ಲಿ ಅರ್ಥ ವ್ಯವಸ್ಥೆಯ ಹೆಚ್ಚಿನ ಮಝಲುಗಳು ಮಾರುಕಟ್ಟೆ ಆಧಾರಿತವಾಗುತ್ತವೆ. ಇದರ ಪರಿಣಾಮವಾಗಿ ಹೆಚ್ಚಿನ ವಲಸೆ,ಹಲ ಸಂಸ್ಕೃತಿಗಳ ದಾಳಿಯಂತಹ
    ಕೆಲ ಸಮಸ್ಯೆಗಳು ಮುಂದೆಯೂ ಇರುತ್ತವೆ, ಅಷ್ಟೇ ಏಕೆ, ಕೆಲ ಮಟ್ಟಿಗೆ ಅವು ಹೆಚ್ಚಲೂ ಬಹುದು. ಈಗ, ಕನ್ನಡದ ಮುಂದಿರುವ ಸವಾಲು ಇದನ್ನು ಎದುರಿಸುವುದು ಹೇಗೆ? ಎಂಬುದು. ನನ್ನ ಪ್ರಕಾರ ಯಾವ ಸರ್ಕಾರ, ಸಾಮಾಜಿಕ ಸಂಘಟನೆಗಳು ಇದಕ್ಕೆ ಪೂರ್ತಿ ಪರಿಹಾರ ಕೊಡಲಾರರು. ಮಾರುಕಟ್ಟೆ ಅನ್ನುವುದು ಗ್ರಾಹಕ ಪಕ್ಷಪಾತಿ. ಗ್ರಾಹಕನೊಬ್ಬನೇ ಅದನ್ನು ಬಗ್ಗಿಸಬಲ್ಲ. ಗ್ರಾಹಕನೊಬ್ಬನೇ ಅದನ್ನು ತನಗೆ ಬೇಕಾದಂತೆ ರೂಪಿಸಿಕೊಳ್ಳಬಲ್ಲ. ಕನ್ನಡ ಸಮಾಜದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು, ಈ ವ್ಯವಸ್ಥೆಯ ಎಲ್ಲ ಹಂತದಲ್ಲೂ ಕನ್ನಡ ನೆಲೆ ಕಾಣಬೇಕು ಅನ್ನುವುದಾದರೆ ಈ ಗ್ರಾಹಕನಿಗೂ ಕನ್ನಡಕ್ಕೂ ಒಂದು ಕಡಿಯದ ನೆಂಟು ಬೆಸೆಯಬೇಕು. ಕನ್ನಡದ ಸುತ್ತ, ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯನ್ನು ರೂಪಿಸುವುದೊಂದೇ ಮುಕ್ತ ಮಾರುಕಟ್ಟೆ ಆಧಾರಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಅಡುಗೆಮನೆಯ ಭಾಷೆಯಾಗದಂತೆ ತಡೆಯುವ ಪರಿಹಾರ ಅನ್ನುವುದು ನನ್ನ ಗಟ್ಟಿ ನಂಬಿಕೆಯಾಗಿದೆ.

    ಕನ್ನಡ ಕೇಂದ್ರಿತವಾದ ಗ್ರಾಹಕ ಚಳುವಳಿಯೇ ಪರಿಹಾರ
ನೀವು ಕೇಳಬಹುದು ಅದು ಹೇಗೆ ಎಂದು. ಕಳೆದ ಕೆಲ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಹಲವು ಬದಲಾವಣೆಗಳನ್ನು ನೀವು ಸುಮ್ಮನೆ ಗಮನಿಸಿ. 2005ರಲ್ಲಿ ಎಫ್.ಎಮ್ ವಾಹಿನಿಗಳು ಶುರುವಾಗಿ ಕನ್ನಡವನ್ನೇ ಕೈ ಬಿಟ್ಟು ನಡೆಯುತ್ತಿದ್ದಾಗ, ಇಂದಿನ ಯುವಕರಿಗೆ ಹಿಂದಿ,ಇಂಗ್ಲಿಷೇ ಬೇಕು ಅನ್ನುವ ತಪ್ಪು ನಿಲುವಲ್ಲಿದ್ದಾಗ, ಅವರಿಗೆ ಕನ್ನಡಕ್ಕಿರುವ ಮಾರುಕಟ್ಟೆ ವ್ಯಾಪ್ತಿಯನ್ನು ದೊಡ್ಡ ಸಂಖ್ಯೆಯಲ್ಲಿ ಮನವರಿಕೆ ಮಾಡಿ ಕೊಟ್ಟದ್ದು ಕನ್ನಡದ ಗ್ರಾಹಕರೇ. ಇಂದು ಹಲವಾರು ಖಾಸಗಿ ಬ್ಯಾಂಕುಗಳ ಎಟಿಎಮ್, ಐವಿಆರ್, ಕಚೇರಿಗಳಲ್ಲಿ ಹಂತ ಹಂತವಾಗಿ ಕನ್ನಡ ನೆಲೆ ಕಂಡಿದ್ದರೆ ಅದರ ಹಿಂದೆ ಕೆಲಸ ಮಾಡಿದ್ದು ಕನ್ನಡದ ಗ್ರಾಹಕರೇ. ಮಲ್ಟಿಪ್ಲೆಕ್ಸುಗಳಲ್ಲಿ, ಮಾಲುಗಳಲ್ಲಿ, ವಿಮಾನದಲ್ಲಿ, ಮೆಟ್ರೊದಲ್ಲಿ ಹೀಗೆ ಎಲ್ಲೆಲ್ಲಿ ಕನ್ನಡ ಮೂಲೆಗುಂಪಾಗಿತ್ತೋ ಅಲ್ಲೆಲ್ಲ ಅದನ್ನು ತಕ್ಕ ಮಟ್ಟಿಗೆ ಸರಿ ಮಾಡಿದ್ದು ಮತ್ತದೇ ಕನ್ನಡದ ಗ್ರಾಹಕರು. ಸರ್ಕಾರದ ನೂರು ನಿಯಮಗಳಿದ್ದಾಗಲೂ ಆಗದ ಬದಲಾವಣೆಯನ್ನು ತಕ್ಕ ಮಟ್ಟಿಗೆ ಮಾಡಿಕೊಳ್ಳಲಾಗಿದ್ದು ಕನ್ನಡ ಗ್ರಾಹಕನ ಹಕ್ಕೊತ್ತಾಯವೊಂದರಿಂದಲೇ. ಇನ್ನೂ ನೂರಾರು ಉದಾಹರಣೆಗಳನ್ನು ಕೊಡಬಲ್ಲೆ. ಹಾಗಿದ್ರೆ ಎಲ್ಲ ಸರಿ ಹೋಗಿದೆಯಾ ಎಂದು ಕೇಳಿದರೆ ನನ್ನ ಉತ್ತರ “ಇಲ್ಲ, ಎಲ್ಲವೂ ಸರಿ ಹೋಗಿಲ್ಲ. ಆದರೆ ಸರಿ ಹೋಗಿರುವ ಬಹುತೇಕ ವಿಷಯಗಳು ಕನ್ನಡದಲ್ಲಿ ಸೇವೆಗೆ ಆಗ್ರಹಿಸಿದ ಗ್ರಾಹಕನ ಒತ್ತಾಯದಿಂದಲೇ ಆಗಿದ್ದು” ಅನ್ನುವುದಾಗಿದೆ. ಕನ್ನಡ ಕೇಂದ್ರಿತವಾದ ಒಂದು ಗಟ್ಟಿ ಗ್ರಾಹಕ ಚಳುವಳಿಯನ್ನು ರೂಪಿಸುವುದೇ ಮುಂದಿನ ದಿನದಲ್ಲಿ ಕನ್ನಡವನ್ನು ಮಾರುಕಟ್ಟೆಯ ನುಡಿಯಾಗಿ ಉಳಿಸಿಕೊಳ್ಳುವ ಏಕೈಕ ಹಾದಿ. ಈ ಆಯಾಮದಲ್ಲಿ ನೋಡಿದಾಗ ಮಾತ್ರವೇ ಡಬ್ಬಿಂಗ್ ನಿಷೇಧ ಗ್ರಾಹಕನ ಹಕ್ಕಿನ ಉಲ್ಲಂಘನೆ ಅನ್ನುವ ಹಲವು ಕನ್ನಡ ಗ್ರಾಹಕರ ವಾದದ ತಿರುಳು ಅರ್ಥವಾದೀತು.
ಕೊನೆಹನಿ: ಕೊಟ್ಟಿದ್ದನ್ನು ತಗೊಂಡು ಬಿದ್ದಿರು ಅನ್ನುವ ಚಿತ್ರೋದ್ಯಮದ ಹಲವರ ಧೋರಣೆಯ ವಿರುದ್ದ ಸಿಡಿದೆದ್ದು ಸಂಘಟಿತರಾದ ಕನ್ನಡಿಗರು ತಮ್ಮ ಗ್ರಾಹಕ ಅನ್ನುವ ಗುರುತನ್ನು ಒತ್ತಿ ಹೇಳುತ್ತಿರುವುದು ಮತ್ತು ಜಗತ್ತಿನ ಒಳ್ಳೆಯದೆಲ್ಲವನ್ನು ಕನ್ನಡದಲ್ಲೇ ಪಡೆಯುವುದು ಗ್ರಾಹಕನಾಗಿ ತನ್ನ ಹಕ್ಕು ಎಂದು ಮಾತನಾಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ದುಡ್ಡು ಕೊಟ್ಟು ಮನರಂಜನೆ ಬಯಸುವವನು ಗ್ರಾಹಕನಲ್ಲ ಅವನು ಪ್ರೇಕ್ಷಕ ಅನ್ನುವ ವಿತಂಡವಾದ ಮಾಡುವ ಚಿತ್ರರಂಗದ ಕೆಲ “ಬುದ್ದಿಜೀವಿಗಳು” ಇದನ್ನು ಅರ್ಥ ಮಾಡಿಕೊಂಡು ಗ್ರಾಹಕನ ಬಗ್ಗೆ ತಾತ್ಸಾರದಿಂದ ಮಾತನಾಡುವುದನ್ನು ನಿಲ್ಲಿಸದೇ ಹೋದರ ಕನ್ನಡ ಗ್ರಾಹಕನ ಉರಿಗಣ್ಣಿಗೆ ಬಲಿಯಾಗಿ ಮನೆ ಸೇರುವುದು ಖಂಡಿತ.
   
ರವಿ ಮೂರ್ನಾಡು, ಕ್ಯಾಮರೂನ್. says: ನಾನು ಬಾಲ್ಯದಿಂದಲೇ ಹಲವು ಭಾಷಾ ಚಲನಚಿತ್ರಗಳನ್ನು ನೋಡುತ್ತಿದ್ದೇನೆ.ಕನ್ನಡ ಚಿತ್ರಗಳನ್ನು ಇತರ ಭಾಷೆಗಳಲ್ಲಿ ನೋಡಿದ್ದೇನೆ. ಇತರ ಭಾಷಾ ಚಿತ್ರಗಳನ್ನು ಕನ್ನಡದಲ್ಲಿ ಡಬ್ ಆಗಿದ್ದನ್ನು ನೋಡಿದ್ದೆನೆ. ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿರುವ ಕೊಂಡು- ಕೊಡಾವಳಿ ಸಂಸ್ಕೃತಿ ಯಾವುದನ್ನೂ ಕಡೆಗಣಿಸಿಲ್ಲ . ಆದರೆ ಸಿನೇಮಾ ಮಾಧ್ಯಕ್ಕೆ ತೆಗೆದುಕೊಂಡಾಗ ವ್ಯಾಪಾರೀಕರಣ ದೃಷ್ಟಿಯಲ್ಲಿ ಹಲವಷ್ಟು ಕೀಳು ಅಭಿರುಚಿಯ ಚಿತ್ರಗಳು ಕನ್ನಡವನ್ನು ಕೆಳದರ್ಜೆಗೆ ತಳ್ಳಿತು ಅಂತ ಹೇಳುವುದಲ್ಲಿ ಸತ್ಯವಿದೆ.
ಅಷ್ಟಾಗಿಯೂ "ಸತ್ಯ ಮೇವ ಜಯತೇ" ಮಾನ್ಯ ಅಮೀರ್ ಖಾನರ ಚಿತ್ರದಲ್ಲಿ ಏನಿದೆ ಅನ್ನುವುದರ ಪರಾಮರ್ಶೆ ನಡೆಯಬೇಕು. ಸಮಾಜವನ್ನು ಬೊಟ್ಟು ಮಾಡಿ ತೋರಿಸುವ ಸಾಮಾಜಿಕ ದೌರ್ಬಲ್ಯಗಳು ಅಲ್ಲಿವೆಯೇ?ಅದಕ್ಕೊಂದು ಸ್ಪಂದನೆ ಇದೆಯೇ? ಇದು ಜನರಿಗೆ ಗೊತ್ತಾಗಬೇಕು.ಏಕಾ ಏಕಿ ” ಡಬ್ಬಿಂಗ್” ಬೇಡ ಅನ್ನುವ ಸಾಮಾಜಿಕ ಪ್ರತಿಷ್ಠೆಯ ಮಾತುಗಳ ಅಗತ್ಯ ಕಾಣುತ್ತಿಲ್ಲ. ಮಾನ್ಯ ಅಮೀರ್ ಖಾನರು ಭ್ರೂಣಹತ್ಯೆಯ ಖಡಕ್ ಸತ್ಯವನ್ನು ಬಿಂಭಿಸುವಾಗ ಅದರ ಬಗ್ಗೆ ಸ್ವಲ್ಪ ಆಲೋಚಿಸಬೇಕು. ರಾಷ್ಟ್ರಕ್ಕೆ ಇದರ ಬಗ್ಗೆ ಸಂದೇಶ ರವಾನಿಸುವಾಗ ಇದು ಜಗತ್ತಿನ ಸಾಮಾಜಿಕ ಕಳಕಳಿ. ಈ ಸಮಸ್ಯೆ ಕರ್ನಾಟಕದಲ್ಲಿ ಜನತೆಗೆ ಕಳಕಳಿಯ ಸಂದೇಶವಾಗಲಾರದೆ?
ಇಲ್ಲಿ ಮಾನ್ಯ ಪ್ರತಿಭಾ ನಂದಕುಮಾರ್ ಅವರು ಕನ್ನಡದಲ್ಲಿ ಅಮೀರ್ ಖಾನರ ” ಸತ್ಯ ಮೇವ ಜಯತೇ” ಚಿತ್ರವೊಂದನ್ನೇ ಡಬ್ಬಿಂಗ್ ಮಾಡುವುದು ಬೇಡ ಅನ್ನುತ್ತಿದ್ದಾರೆಯೇ ಅಥವಾ ಮುಂಬರುವ ಎಲ್ಲಾ ಚಿತ್ರಗಳು ಆ ರೀತಿ ಆಗುವುದು ಬೇಡ ಅನ್ನುತ್ತಿದ್ದಾರೆಯೇ ಅನ್ನುವುದು ಪ್ರಶ್ನೆ. ” ಸತ್ಯಮೇವ ಜಯತೇ” ಚಿತ್ರವೊಂದೇ ಆ ರೀತಿ ಆಗುವುದಾದರೆ , ಅಲ್ಲಿರುವ ಭ್ರೂಣಹತ್ಯೆಯ ಸಾಮಾಜಿಕ ಕಳಕಳಿಯ ಸಂದೇಶ ಕನ್ನಡಿಗರಿಗೆ ರವಾನೆಯಾಗುವುದು ಬೇಡವೇ? ಈ ಭ್ರೂಣಹತ್ಯೆ ನಮ್ಮ ಇತರ ಭಾಷೆ ಗೊತ್ತಿಲ್ಲದ ಕನ್ನಡಿಗರಿಗೆ ಅವಶ್ಯವಾಗಿ ಆಗಬೇಕಿತ್ತು. ಏಕೆಂದರೆ , ವಿದ್ಯಾವಂತರು ಎನ್ನುವ ಹಣೆಪಟ್ಟಿ ಕಟ್ಟಿಕೊಂಡ ಸಮಾಜದ ಹಳ್ಳಿಗಳಲ್ಲಿ ಇದರ ಸ್ಪಷ್ಟತೆ ಇನ್ನೂ ಅಂಧಾಕರದಲ್ಲೇ ಇದೆ. ಅದು ಅವರಿರುವಲ್ಲಿಗೆ ತಲುಪಲಿ. ನಾವು ಬೀದಿಯ ಕಸ ಗುಡಿಸುವ ಮೊದಲು ನಮ್ಮ ಮನೆಯ ಕಸವನ್ನು ಗುಡಿಸುವ. ಸೃಜನಶೀಲತೆ, ಬದಲಾವಣೆ,ಸಂದೇಶ ನಮಗೆ ಅವಶ್ಯವಾಗಿ ಬೇಕು. ಅದು ಮಾಧ್ಯಮವಾದರೂ ಸರಿ, ತರಗತಿಯ ಪಾಠವಾದರೂ ಸರಿ, ಅನುಭವವಾದರೂ ಸರಿ.

ಉಷಾ ಕಟ್ಟೆಮನೆ says:  ಸರ್, ನೀವು ಹೇಳಿರುವ ವಿಚಾರಗಳಿಗೆ ನನ್ನ ಸಂಪೂರ್ಣ ಸಹಮತವಿದೆ. ಇದಕ್ಕೆಲ್ಲಾ ಅಮಿರ್ ಖಾನ್ ಯಾಕೆ ಸರ್? ನಮ್ಮ ಕನ್ನಡ ಸಿನೇಮಾ ಇಂಡಸ್ಟ್ರಿಯಲ್ಲಿ ಅಭಿಜಾತ ಪ್ರತಿಭೆಗಳಿಗೇನು ಕೊರತೆಯೇ?
ಈಗ ಡಬ್ಬಿಂಗ್ ವಿರೋಧಿಸುತ್ತಿರುವವರು ನೀವು ಕೊಟ್ಟಿರುವ ಟಾಪಿಕ್ ಗಳನ್ನು ಕೈಗೆತ್ತಿಕೊಂಡು ಕಾರ್ಯಕ್ರಮಗಳನ್ನು ಮಾಡಬಹುದು. ಕನ್ನಡದ ಚಾನಲ್ ಗಳು ಹಳ್ಳಿಹುಡುಗರು ಪ್ಯಾಟೆಗೆ ಬಂದ್ರು, ಇನ್ಯಾರೋ ವಿದೇಶಕ್ಕೆ ಹೋದರು, ಅಲ್ಲಿ ಭೂತಗಳಿವೆಯೇ…? ಅವರ..ಇವರ ಖಾಸಗಿ ಬದುಕು ಹೀಗಂತೆ…. ಹಾಗಂತೆ…! ಎನ್ನುವುದನ್ನೆಲ್ಲಾ ಬಿಟ್ಟು ಸಾಮಾಜಿಕ ಸಮಸ್ಯೆಗಳತ್ತಲೂ ಇಣುಕಿ ನೋಡಬಹುದು… ಆದರೇನು ಮಾಡೋಣ..ಸಾಮಾಜಿಕ ಹೊಣೆಗಾರಿಕೆ ಎಂಬುದು ಈಗ ಪುಸ್ತಕದ ಬದನೆಕಾಯಿಯಾಗಿದೆ..! ಅದು ಸಿನೇಮಾರಂಗಕ್ಕೂ ಬೇಡ…ಚಾನಲ್ ಗಳಿಗೂ ಬೇಡ
   
Ahdithcya Kjeevaratmna says:  Prathibha Nandakumar is partly right. But she must also reckon what happens if Priya Hassan wants the role offered Pakistani actor Veena Malik in a Kannada cinema, or Kannada Dancer’s Association says they will not let mumbai dancers to dance in any Kannada film. Or any senior artist wants to host “Neena Naana” instead of Lakshmi, or wants to do the role offered to Ambika in a Kannada soap. Can Prathibha Nandakumar or Priya Hassan or anybody say for that matter can stop them in our democratic land?

So we should stop counting the chickens before they are hatched.

   
Gubbachchi Sathish says:  idakke nannadondu votide.

ಸಂದೀಪ್ ಕಾಮತ್ says: ಭಾರತದಲ್ಲಿ ಏನು ಹೇಳಿದರು ಅನ್ನೋದಕ್ಕಿಂತ ಮುಖ್ಯ ಯಾರು ಹೇಳಿದರು ಅನ್ನೊದು. ಶಂಖದಿಂದ್ರೇನೇ ಬಂದ್ರೆ ತೀರ್ಥ ಅನ್ನೋ ಹಾಗೆ ! ಆಮೀರ್ ಹೊಸತನ್ನು ಏನೂ ಹೇಳಿಲ್ಲ, ಹೇಳುತ್ತಾನೆ ಅನ್ನೋ ಭರವಸೆಯೂ ನನಗಿಲ್ಲ. ಆದರೆ ಹೇಳಿರೋದು ಆಮೀರ್ ಅನ್ನೋದೆ ಮುಖ್ಯ ಆಗುತ್ತೆ.

ಕೃಪೆ : ಅವಧಿ

ದಲಿತರ ಪ್ರತ್ಯೇಕ ಮಾಧ್ಯಮ ಇಂದಿನ ಅಗತ್ಯ


 ದಲಿತರು, ಹಿಂದುಳಿದವರಿಗೆ ಭಾರತದ ಮಾಧ್ಯಮಗಳಲ್ಲಿ ಪ್ರಾತಿನಿಧ್ಯ ಕಡಿಮೆ ಅಥವಾ ಇಲ್ಲವೆಂದರೂ ಸರಿಯೇನೋ. ಬಹುತೇಕ ಮಾಧ್ಯಮಗಳು ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಯ ಹಿಡಿತದಲ್ಲಿ ಇವೆ. ಹೀಗಾಗಿ ದಲಿತರ, ಹಿಂದುಳಿದವರ ಧ್ವನಿ ಮಾಧ್ಯಮ ಲೋಕದಲ್ಲಿ ಕೇಳಿಬರುವುದು ಕಡಿಮೆಯೇ. ಪುರೋಹಿತಶಾಹಿ ಮಾಧ್ಯಮಗಳನ್ನು ಸ್ಥಾಪಿಸಿ ನಡೆಸುವುದು ಕಡಿಮೆಯಾದರೂ ಬಂಡವಾಳಶಾಹಿಗಳು ಸ್ಥಾಪಿಸಿದ ಮಾಧ್ಯಮಗಳಲ್ಲಿ ಪುರೋಹಿತಶಾಹಿ ಮನಸ್ಸಿನ ವ್ಯಕ್ತಿಗಳು ಆಯಕಟ್ಟಿನ ನಿಯಂತ್ರಕ ಸ್ಥಾನವಾದ ಪ್ರಧಾನ ಸಂಪಾದಕ, ಸಂಪಾದಕ ಸ್ಥಾನದಲ್ಲಿ ಆಸೀನರಾಗಿರುವುದು ಭಾರತದಾದ್ಯಂತ ಕಂಡುಬರುವ ವಿದ್ಯಮಾನ. ಇದರಿಂದಾಗಿ ಭಾರತದ ಮಾಧ್ಯಮಗಳಲ್ಲಿ ವೈಚಾರಿಕತೆಗೆ, ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ದೊರಕಲೇ ಇಲ್ಲ ಮತ್ತು ದೊರಕುವ ಸಾಧ್ಯತೆಯೂ ಇಲ್ಲ. ಭಾರತದಲ್ಲಿ ವೈಚಾರಿಕತೆಗೆ, ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ದೊರಕಿದ್ದಿದ್ದರೆ ಭಾರತದ ಇಂದಿನ ಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿರುತ್ತಿತ್ತು.
ದಲಿತರು, ಹಿಂದುಳಿದವರಿಗೆ ಧ್ವನಿ ಸಿಗಬೇಕಾದರೆ ದಲಿತರು, ಹಿಂದುಳಿದರು ತಮ್ಮದೇ ಆದ ಮಾಧ್ಯಮಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ. ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಗಳ ಜಂಟಿ ನಿಯಂತ್ರಣದಲ್ಲಿ ಇರುವ ಪ್ರಸಕ್ತ ಮಾಧ್ಯಮಗಳಲ್ಲಿ ದಲಿತರಿಗೆ, ಹಿಂದುಳಿದವರಿಗೆ ಧ್ವನಿ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ ದಲಿತರು, ಹಿಂದುಳಿದವರು ತಮ್ಮದೇ ಆದ ಪ್ರತ್ಯೇಕ ಟಿವಿ ವಾಹಿನಿಗಳು ಹಾಗೂ ಮುಖ್ಯವಾಹಿನಿಯ ಪತ್ರಿಕೆಗಳನ್ನು ಕಟ್ಟಿಕೊಳ್ಳುವುದು ಅಗತ್ಯ. ಇಂಥ ಪ್ರಯತ್ನಗಳಿಗೆ ದಲಿತ, ಹಿಂದುಳಿದ ವರ್ಗದ ಉದ್ಯಮಿಗಳು ಹಾಗೂ ರಾಜಕಾರಣಿಗಳು ಮುಂದಾಗುವುದು ಅಗತ್ಯ.
ಇಂದು ದಲಿತ ಉದ್ಯಮಿಗಳು ತಮ್ಮದೇ ಆದ ’ದಲಿತ್ ಚೇಂಬರ್ ಆಫ್ ಇಂಡಸ್ಟ್ರಿ’ ಹಾಗೂ ದಲಿತ ಉದ್ಯಮಿಗಳಿಗೆ ಹಣಕಾಸು ನೆರವು ಒದಗಿಸಲು ತಮ್ಮದೇ ಆದ ಹಣಕಾಸು ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದು ಇದೇ ರೀತಿ ದಲಿತ ಟಿವಿ ವಾಹಿನಿಗಳು ಹಾಗೂ ಪತ್ರಿಕೆಗಳನ್ನೂ ಸ್ಥಾಪಿಸಿ ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಧ್ವನಿ ನೀಡಬೇಕಾದ ಅಗತ್ಯ ಹೆಚ್ಚಾಗಿದೆ. ದಲಿತರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು ಹಾಗೂ ಪುರೋಹಿತಶಾಹಿ ಚಿಂತನೆಗಳಿಂದ ದಲಿತ, ಹಿಂದುಳಿದ ವರ್ಗಗಳನ್ನು ಬಿಡಿಸುವುದು ಈ ಮಾಧ್ಯಮಗಳ ಪ್ರಧಾನ ಗುರಿಯಾಗಿರಬೇಕು. ದಲಿತರು ಹೆಚ್ಚು ವೈಚಾರಿಕವಾದ ಮೂಲ ಬೌದ್ಧ ಧರ್ಮದೆಡೆಗೆ ಸಾಗುವಂತೆ ದೇಶಾದ್ಯಂತ ಜಾಗೃತಿ ಮೂಡಿಸುವ ಕೆಲಸ ಆ ಮಾಧ್ಯಮಗಳು ಮಾಡಬೇಕು. ಆಗ ಇಡೀ ಭಾರತದಲ್ಲಿ ವೈಚಾರಿಕ ಕ್ರಾಂತಿ ಸಾಧ್ಯವಾಗಬಹುದು.
ಮಾಯಾವತಿಯಂಥ ದಲಿತ ರಾಜಕಾರಣಿಗಳು ಉತ್ತರ ಪ್ರದೇಶದಂಥ ದೊಡ್ಡ ರಾಜ್ಯವೊಂದರ ಮುಖ್ಯಮಂತ್ರಿಯಾದರೂ ದಲಿತರ ಹಾಗೂ ಹಿಂದುಳಿದವರಿಗೆ ಧ್ವನಿ ನೀಡುವ ಹಾಗೂ ಅವರಲ್ಲಿ ಜಾಗೃತಿ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸಲು ನೆರವಾಗಬಲ್ಲಂಥ ರಾಷ್ಟ್ರ ಮಟ್ಟದ ಒಂದು ಟಿವಿ ವಾಹಿನಿ ಹಾಗೂ ಪತ್ರಿಕೆಯನ್ನು ಕಟ್ಟಲು ಸಾಧ್ಯವಿತ್ತು. ಇಂಥ ಒಂದು ರಚನಾತ್ಮಕ ಕೆಲಸ ಮಾಡುವ ಬದಲು ಮಾಯಾವತಿಯವರು ನಿರ್ಜೀವ ಕಲ್ಲು ಪ್ರತಿಮೆಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ವ್ಯಯಿಸಿರುವುದು ವ್ಯರ್ಥ. ಇದೇ ಕೋಟ್ಯಂತರ ರೂಪಾಯಿ ಹಣವನ್ನು ಒಂದು ದಲಿತ ಟಿವಿ ವಾಹಿನಿಯೋ, ಪತ್ರಿಕೆಯನ್ನೋ ಕಟ್ಟಲು ಬಳಸಿದ್ದರೆ ಎಷ್ಟೋ ಪ್ರಯೋಜನ ಆಗುತ್ತಿತ್ತು.
ದಲಿತ ರಾಜಕಾರಣಿಗಳಲ್ಲಿ ಚಿಂತನೆಯ ಕೊರತೆ ಮತ್ತು ಯಾವುದಕ್ಕೆ ಆದ್ಯತೆ ನೀಡಬೇಕು ಎಂಬ ವಿವೇಚನೆ ಇಲ್ಲದೆ ಇರುವುದನ್ನು ಇದು ತೋರಿಸುತ್ತದೆ. ಹೀಗಾಗಿ ಅಧಿಕಾರ ದೊರೆತರೂ ಅದನ್ನು ಬಳಸಿ ದಲಿತರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ ಮೂಡಿಸಲು ದಲಿತ ರಾಜಕಾರಣಿಗಳು ಆದ್ಯತೆ ನೀಡದೆ ತಮ್ಮದೇ ಆದ ಪ್ರತಿಮೆಗಳ ಸ್ಥಾಪನೆ ಹಾಗೂ ಆಡಂಬರ, ಅಬ್ಬರದ ಜೀವನಶೈಲಿಗೆ ಮರುಳಾಗಿರುವುದು ಅಂಬೇಡ್ಕರ್ ಅವರ ಚಿಂತನೆಗಳಿಗೆ ವಿರುದ್ಧವಾದ ನಡವಳಿಕೆಯಾಗಿದೆ. ದಲಿತರಲ್ಲಿ, ಹಿಂದುಳಿದವರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸುವುದು ದಲಿತ ನಾಯಕರ ಪ್ರಧಾನ ಆದ್ಯತೆ ಆಗಿರಬೇಕಾಗಿತ್ತು. ಆದರೆ ಅಂಥ ಜಾಗೃತಿ ದಲಿತ ನಾಯಕರಲ್ಲಾಗಲಿ, ದಲಿತ ಉದ್ಯಮಿಗಳಲ್ಲಾಗಲಿ ಮೂಡಲೇ ಇಲ್ಲ. ದಲಿತರು ಮತ್ತು ಹಿಂದುಳಿದವರಲ್ಲಿ ವೈಚಾರಿಕ ಕ್ರಾಂತಿ ಮೂಡಿಸುವುದು ಅವರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲಗೊಳಿಸಲು ಅಗತ್ಯವಾದ ಭೂಮಿಕೆ ಆಗಿದೆ. ಈ ಕೆಲಸವನ್ನು ಮಾಡಲು ದಲಿತ ಹಾಗೂ ಹಿಂದುಳಿದ ವರ್ಗದ ನಾಯಕರು, ಉದ್ಯಮಿಗಳು ಪ್ರಧಾನ ಆದ್ಯತೆ ನೀಡಬೇಕಾದ ಅಗತ್ಯ ಇಂದು ಬಹಳಷ್ಟಿದೆ. ದಲಿತರು ಪುರೋಹಿತಶಾಹಿ ಚಿಂತನೆಗಳಿಂದ ಹೊರಬಂದು ತಮ್ಮದೇ ಆದ ಸ್ವತಂತ್ರ ಮನೋಭಾವ ಹಾಗೂ ಚಿಂತನೆಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ. ಹಾಗಾದರೆ ಭಾರತವು ಪುರೋಹಿತಶಾಹಿ ಚಿಂತನೆಗಳ ಕಬಂಧಬಾಹುಗಳಿಂದ ಸ್ವಲ್ಪವಾದರೂ ಮುಕ್ತಿ ಪಡೆಯಲು ಸಾಧ್ಯವಿದೆ.

- ಆನಂದ ಪ್ರಸಾದ್
ಕೃಪೆ : ವರ್ತಮಾನ

Wednesday, May 09, 2012

ಮಾತ್ಗವಿತೆ-75

ಅನುಗಾಲದ ಅನುರಾಗ ನೀನು
ಮಣಭಾರ ಹೊತ್ತರೂ
ತಪ ಮಾಡಿದ್ದು ಸುಳ್ಳಲ್ಲ !
ಏನಾದರೂ ಆಗಲಿ ಬಿಡು
ಅನುಬಂಧ ಮುರಿಯದು
'ಅನಿ'ಸಿಕೆ ಹುಸಿಯಲ್ಲ ;
ಇನ್ನೂ ಹಸಿಯಾಗಿಯೇ ಇದೆ !

Monday, May 07, 2012

ಧಮ್ಮದೀಕ್ಷೆ ಮತ್ತು ....... !

ನನಗೊಮ್ಮೆ ಕರ್ನಾಟಕದ ಬೌದ್ಧಧರ್ಮಕ್ಕೆ ಸಂಬಂಧಿಸಿದ ಜನರನ್ನೂ ಜಾಗಗಳನ್ನೂ ಕಣ್ಣಾರೆ ಕಾಣುವ ಆಸೆ ಮೊಳೆಯಿತು. ಆಸೆಯನ್ನು ಧಾರವಾಡದ ವೈದ್ಯಮಿತ್ರರಾದ ಡಾ. ಸಂಜೀವ ಕುಲಕರ್ಣಿಯವರಲ್ಲಿ ಹಂಚಿಕೊಂಡೆ. ಬೌದ್ಧಧರ್ಮದ ಬಗ್ಗೆ ಒಳಸೆಳೆತವುಳ್ಳ ಅವರು ಕೂಡಲೇ ಸೈಯೆಂದು ಒಪ್ಪಿಕೊಂಡರು. ಇಬ್ಬರೂ ಸೇರಿ, ತಿರುಗಾಟದ ಪಥವನ್ನೂ ನೋಡಬೇಕಾದ ಜಾಗವನ್ನೂ ಕಾಣಬೇಕಾದ ಜನರನ್ನೂ  ಗುರುತು ಮಾಡಿಕೊಳ್ಳುತ್ತ ತಯಾರಿ ನಡೆಸಲಾರಂಭಿಸಿದೆವು. ಇದರ ಪತ್ತೆಯನ್ನು ಹೇಗೊ ಮಾಡಿದ ಮೈಸೂರಿನ ಗೋವಿಂದಯ್ಯನವರು ನಾನೂ ಬರುತ್ತೇನೆಂದು ಗಂಟುಬಿದ್ದರು. ಕಡೆಗೆ ತಂಡಕ್ಕೆ ತರುಣ ಕವಿ ಅರುಣ್ ಜೋಳದಕೂಡ್ಲಿಗಿಯನ್ನೂ ಸೇರಿಸಿಕೊಂಡೆವು. 
ನಾವು ನಾಲ್ವರು, ಆಕಸ್ಮಿಕವಾಗಿ ಸಮಾಜದ ನಾಲ್ಕು  ಸ್ತರಗಳಿಂದ ಬಂದವರಾಗಿದ್ದು, ಬುದ್ಧನ ನೆಪದಲ್ಲಿ ಒಂದಾಗಿದ್ದೆವು. ಆಯಾ ದಿನ ಸಿಕ್ಕ ಅನುಭವವನ್ನು ನಾಲ್ವರೂ ಸೇರಿ ಚರ್ಚಿಸುತ್ತಿದ್ದೆವು. ಭಿನ್ನಮತಗಳನ್ನು ಇಟ್ಟುಕೊಂಡು ಜಗಳ ಮಾಡುತ್ತಿದ್ದೆವು. ನಮ್ಮ ಜತೆ ಒಂದು ಹೆಂಜೀವವೂ ಇದ್ದಿದ್ದರೆ, ತಂಡಕ್ಕೆ ಬೇರೊಂದು ಕಣ್ಣು ಒದಗಿರುತ್ತಿತ್ತೇನೊ? ಆದರೆ ಹೊರಡುವಾಗ ಹಾಗೆ ಯಾರೂ ನಮಗೆ ಸಿಗಲಿಲ್ಲ. ನಿಜ ಹೇಳಬೇಕೆಂದರೆ, ನಾವು ಈ ದಿಸೆಯಲ್ಲಿ ಚಿಂತಿಸಲಿಲ್ಲ. ಮನೆಮಡದಿ ಯಶೋಧರೆಯ ಹಂಗಿಲ್ಲದೆ ತಿಳಿವಳಿಕೆಯ ಹುಡುಕಾಟಕ್ಕೆ ಹೊರಟ ಬುದ್ಧನ ನಾಡಿನವರು ತಾನೇ ನಾವು?
ಧಾರವಾಡದಿಂದ ಪಯಣ ಆರಂಭಿಸಿ ಕರ್ನಾಟಕವನ್ನು ಅದರಂಚಿನಲ್ಲೇ ಚಲಿಸುತ್ತ ಒಂದು ಸುತ್ತು ಹಾಕಿದೆವು. ಸುಮಾರು 1500 ಕಿಮಿ ಉದ್ದದ 15 ದಿನಗಳ ಪಯಣ. ಇದರಲ್ಲಿ ನಾವು ಬೌದ್ಧ ವಿಹಾರಗಳನ್ನೂ  ಚೈತ್ಯಾಲಯಗಳನ್ನೂ ಬೌದ್ಧಮೂರ್ತಿಗಳನ್ನೂ ಕಂಡೆವು; ಧಮ್ಮಸ್ವೀಕಾರದ ಬಳಿಕ ಅಶೋಕನು ಕರ್ನಾಟಕದಲ್ಲಿ ಹಾಕಿಸಿದ ಶಾಸನಗಳನ್ನು ಕಂಡೆವು; ಬೌದ್ಧಧರ್ಮದ ಬೋಧನೆ ನಡೆಯುತ್ತಿದ್ದ ಗುರುಕುಲಗಳನ್ನೂ ಬುದ್ಧನ ಹೆಸರಲ್ಲಿ ಕಟ್ಟಲಾಗಿರುವ ಶಿಕ್ಷಣ ಸಂಸ್ಥೆಗಳನ್ನೂ ಭೇಟಿಮಾಡಿದೆವು; ಬೌದ್ಧ ಚಿಂತಕರನ್ನೂ ಭಂತೆಗಳನ್ನೂ ಸಾಧಕರನ್ನೂ ಕಂಡು ಮಾತಾಡಿದೆವು. ತಮ್ಮ ರಾಜಕೀಯ ಕಾರ್ಯಕ್ರಮದ ಭಾಗವಾಗಿ ಧಮ್ಮಪ್ರಸಾರ ಕೈಗೊಂಡಿರುವ ಬಿಎಸ್ಪಿ ಕಾರ್ಯಕರ್ತರ ಜತೆ ಚರ್ಚಿಸಿದೆವು. ಬೌದ್ಧಸಂಪ್ರದಾಯದಲ್ಲಿ ಲಗ್ನವಾಗಿರುವ ದಂಪತಿಗಳನ್ನೂ ಧಮ್ಮದೀಕ್ಷೆ ಪಡೆದು ಹೊಸಬದುಕನ್ನು ನಡೆಸುತ್ತಿರುವ ಕುಟುಂಬಗಳನ್ನೂ ಕಂಡೆವು. ಒಟ್ಟಿನಲ್ಲಿ ಅದೊಂದು ಅಪೂರ್ವ ಬೌದ್ಧಯಾನ. 
ಈ ಯಾನದಲ್ಲಿ ಮೂರು ಅಂಶಗಳು ಗೋಚರಿಸಿದವು. 1. ಕರ್ನಾಟಕದಲ್ಲಿ ಒಂದು ಕಾಲಕ್ಕೆ ವ್ಯಾಪಕ ಅಸ್ತಿತ್ವವನ್ನು ಹೊಂದಿದ್ದ ಬೌದ್ಧಧರ್ಮವು, ಸದ್ಯಕ್ಕೆ ತನ್ನ ಗತಕಾಲದ ಅವಶೇಷಗಳ ಮೂಲಕ ಉಸಿರೆಳೆಯುತ್ತಿದ್ದ ಪಳೆಯುಳಿಕೆಗಳು 2. ಧಮ್ಮದೀಕ್ಷೆ ಸ್ವೀಕರಿಸಿರುವ ಸಾವಿರಾರು ಜನರ ಬಾಳಿನಲ್ಲಿ ಹೊಸಹೊಸ ರೂಪದಲ್ಲಿ ನೆಲೆಯೂರುತ್ತ ಅದು ಚಿಗುರೊಡೆಯುತ್ತಿದ್ದುದು. 3. ಹಾಗೆ ಚಿಗುರೊಡೆಯುವ ಪ್ರಕ್ರಿಯೆಯಲ್ಲಿ ಮನೆಗಳನ್ನು ಮನಸ್ಸುಗಳನ್ನು ಸಂಬಂಧಗಳನ್ನು ಕೂಡ ಒಡೆದುಕೊಂಡಿರುವುದು. ಒಂದು, ಚರಿತ್ರೆಯ ಸ್ಥಗಿತ ದರ್ಶನವಾದರೆ, ಮತ್ತೆರಡು ವರ್ತಮಾನದ ಚಲನಶೀಲ ದರ್ಶನ; ಒಂದು, ಭಗ್ನತೆಯ ಮುಖವಾದರೆ, ಇನ್ನೆರಡು ಹೊಸಹುಟ್ಟಿನ ಮತ್ತು ಹೊಸಬಿಕ್ಕಟ್ಟಿನ ಮುಖಗಳು. ಒಂದು ಸ್ಮಾರಕಗಳ ಜಗತ್ತಾದರೆ ಇನ್ನೆರಡು ಭಾವನೆಗಳ ಮಾನುಷ ಜಗತ್ತು.
ನಮಗೆ ಕಾಡಿಸುತ್ತಿದ್ದುದು ಧಮ್ಮವು ನೆಲೆಯೂರುತ್ತಿರುವ ಕಡೆ ಹುಟ್ಟಿರುವ ಬಿರುಕು ಮತ್ತು ಬಿಕ್ಕಟ್ಟುಗಳು. ಇವು ಧಮ್ಮದೀಕ್ಷೆ ಪಡೆದ ಕುಟುಂಬದಲ್ಲಿ ವ್ಯಕ್ತಿವ್ಯಕ್ತಿಗಳ ನಡುವೆ; ಕೇರಿ ಮತ್ತು ಕುಟುಂಬಗಳ ನಡುವೆ ಬಿದ್ದಿರುವ ಕಂದರದಲ್ಲಿ ಕಾಣುತ್ತಿದ್ದವು; ದಲಿತರ ಎರಡು ಬಣಗಳ ನಡುವೆ ನಡೆಯುತ್ತಿದ್ದ ಸಂಘರ್ಷದ ರೂಪದಲ್ಲಿದ್ದವು. ಯಾವುದೇ ಹಳೆಯ ರೂಪದ ಜಾಗವನ್ನು ಹೊಸತೊಂದು ಆಕ್ರಮಿಸುವಾಗ, ಇಂತಹ ಸಂಘರ್ಷ ಸಾಮಾನ್ಯ. ಹೊಸತು ಮತ್ತು ಹಳತುಗಳ ಈ ಸಂಘರ್ಷವು ಕೆಲವು ಕಾಲದ ಬಳಿಕ ಸಾಮರಸ್ಯಗೊಂಡು ಮೂರನೆಯ ಹೊಸರೂಪವಾಗಿ ಸಿದ್ಧವಾಗಬಹುದು. ಅಂತಹ ಹೊಸರೂಪವೊಂದು ಸಿದ್ಧವಾಗುವ ತನಕ ಈ ಜಗ್ಗಾಟಗಳು ಸಹಜ. ಆದರೆ ಸಾಮಾಜಿಕ ಧಾರ್ಮಿಕ ಮಾನಸಿಕ ಹಾಗೂ ಸಾಂಸ್ಕೃತಿಕವಾದ ಈ ಜಗ್ಗಾಟಗಳ ನಡುವೆ ಸಿಕ್ಕು ನಲುಗುತ್ತಿರುವವರ ತೊಳಲಾಟ ಮತ್ತು ಹತಾಶೆಗಳನ್ನು ಹೆಚ್ಚಿನವರು ಲೆಕ್ಕಿಸಿದಂತೆ ಕಾಣುತ್ತಿರಲಿಲ್ಲ. ಮಾನವೀಯವೂ ಸಂಕೀರ್ಣವೂ ಆಗಿರುವ ಈ ನೋವು ಸಂಕಟಗಳನ್ನು ಸರಿತಪ್ಪುಗಳೆಂದು ಸರಳವಾಗಿ ತೀರ್ಮಾನಿಸುವುದು ಕಷ್ಟ. ಹೀಗಾಗಿ ಇವು ಯಾಕೆ ಮತ್ತು ಹೇಗೆ  ಮೂಡಿದವು ಎಂದು ಅರ್ಥಮಾಡಿಕೊಳ್ಳಲು ಯತ್ನಿಸಬಹುದು.
ಎರಡು ವಾರಗಳ ನಮ್ಮ ಧಮ್ಮಯಾನದಲ್ಲಿ ಧಮ್ಮದೀಕ್ಷೆ ಪಡೆದ ಹತ್ತಾರು ಕುಟುಂಬಗಳನ್ನು ನಾವು ಭೇಟಿ ಮಾಡಿದೆವು. ಇವುಗಳಲ್ಲಿ ಏಳು ದಲಿತ ಕುಟುಂಬಗಳು. ಒಂದು ಬ್ರಾಹ್ಮಣ. ಎರಡು ಬಂಟರವು. ಕೊನೆಯ ಮೂರು ಕರಾವಳಿಯವು; ಮೊದಲ ಏಳು ದಲಿತ ಕುಟುಂಬಗಳು ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಗುಲಬರ್ಗ ಜಿಲ್ಲೆಗೆ ಸೇರಿದವು. ಎಲ್ಲ ಕುಟುಂಬಗಳೂ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡವು; ಉಡಲುಣ್ಣಲು ಹೋರಾಟವಿಲ್ಲದ ಮಧ್ಯಮವರ್ಗಕ್ಕೆ ಸೇರಿದವು. ಈ ಕುಟುಂಬಗಳ ಜತೆ ನಾವು ಮಾತಾಡಿದೆವು. ಜತೆ ಕುಳಿತು ಊಂಡೆವು. ಅಲ್ಲಿ ನಮಗೆ ನಾಲ್ಕು ಪರಿಯ ದಾಂಪತ್ಯಗಳು ಕಂಡವು.
1. ಇಡಿಯಾಗಿ ಧಮ್ಮೀಕರಣಗೊಂಡಿರುವ ದಾಂಪತ್ಯಗಳು. ಇಲ್ಲಿ ದಂಪತಿಗಳಲ್ಲಿ ಸತಿಪತಿಗಳೊಂದಾದ ಭಕ್ತಿಯ ಸಾಮರಸ್ಯವಿತ್ತು. ಸಮಾನಮನಸ್ಕತೆ ಸಾಧ್ಯವಾಗಿತ್ತು. ಹಳೆಯ ಸಂಪ್ರದಾಯಗಳು ಕೈಬಿಟ್ಟುಹೋಗಿದ್ದವು. ಮಕ್ಕಳಿಗೆ ಬೌದ್ಧಹೆಸರುಗಳನ್ನು ಇಡುವುದೇ ಮುಂತಾಗಿ ಬೌದ್ಧ ಆಚರಣೆಗಳು ಆಚರಣೆಗೆ ಬಂದಿದ್ದವು. ಇವು ದೀಕ್ಷೆಗೊಂಡು ದಶಕಗಳನ್ನೆ ಕಳೆದಿರುವ ಕುಟುಂಬಗಳು. ಗುಲಬರ್ಗದ ಬುದ್ಧವಿಹಾರದಲ್ಲಿದ್ದ ಶ್ರೀಮತಿ ಖರ್ಗೆಯವರಲ್ಲಿ, ಮಲ್ಲಿಕಾರ್ಜುನ ಖರ್ಗೆಯವರಷ್ಟೇ ಧರ್ಮದ ಉಮೇದಿತ್ತು. ಆದರೂ ಇಲ್ಲಿ ಹೆಚ್ಚಿನ ಕಡೆ ಗಂಡನೇ ಸಾಧಕನಾಗಿದ್ದು, ಮಡದಿ ಅವನಿಗೆ ಸಹಚರಳಾಗಿ ಹಿಂಬಾಲಿಸಿದಂತೆ ಇತ್ತು.
2. ಇನ್ನೂ ಹೊಂದಾಣಿಕೆಯ ಪ್ರಕ್ರಿಯೆಯಲ್ಲಿರುವ ದಾಂಪತ್ಯಗಳು. ಇಲ್ಲಿ ಹೊಸಧರ್ಮದ ಬಗ್ಗೆ ಪೂರಾ ಒಪ್ಪಿಗೆ ಸಾಧ್ಯವಾಗಿರಲಿಲ್ಲ. ಆದರೂ, ಹಳತರ ಜತೆಗೆ ಒಂದು ಬಗೆಯ ಸಾಮರಸ್ಯ ಮಾಡಲು ಯತ್ನ ನಡೆದಿತ್ತು. ಉದಾ.ಗೆ, ಒಂದು ಮನೆಯಲ್ಲಿ ಹೊರಬಾಗಿಲ ಮೇಲೆ ಕೆತ್ತಲಾಗಿದ್ದ ಬುದ್ಧಮೂರ್ತಿಯ ಹಣೆಗೆ ವಿಭೂತಿಯನ್ನು ಬಳಿಯಲಾಗಿತ್ತು. ಅದು ಬುದ್ಧನನ್ನು ಪಳಗಿಸುತ್ತ ಸ್ಥಳೀಕರಿಸುತ್ತಿರುವ ಯತ್ನದಂತೆ ತೋರಿತು; ಇನ್ನೊಂದು ಮನೆಯ ದೇವರಕೋಣೆಯಲ್ಲಿ ಬುದ್ಧನ ಮೂರ್ತಿಯ ಜತೆಗೆ ಅಂಬೇಡ್ಕರ್ ಮತ್ತು ಮಲೆಮಾದೇಶ್ವರನ ಫೋಟೊಗಳನ್ನೂ ಭೇದವಿಲ್ಲದೆ ಇಡಲಾಗಿತ್ತು. ಇವೆಲ್ಲ ಧಮ್ಮದೀಕ್ಷೆ ಪಡೆದು  ಒಂದೆರಡು  ವರ್ಷಗಳಾಗಿದ್ದ ಕುಟುಂಬಗಳು.
3. ಸಾಮರಸ್ಯದ ಸಾಧ್ಯವಾಗಿರದೆ ತೊಳಲಾಟ ನಡೆಯುತ್ತಿರುವ ಕುಟುಂಬಗಳು. ಇಲ್ಲಿ ಧಮ್ಮಸ್ವೀಕಾರದ ವಿಷಯದಲ್ಲಿ ಸತಿಪತಿಗಳು ಸಮಾನ ಮನಸ್ಕರಾಗಿರಲಿಲ್ಲ. ಹೊಸಧಮ್ಮದ ವಿಷಯದಲ್ಲಿ ಗಂಡ ಉತ್ಸಾಹಿಯಾಗಿದ್ದರೆ, ಮಡದಿಯ ಮೊಗದಲ್ಲಿ ಮ್ಲಾನತೆಯಿತ್ತು. ಗಂಡನಿಗೆ ಬೇಸರವಾಗಬಾರದೆಂದೊ ಅಥವಾ  ಭಿನ್ನಮತವನ್ನು ಬಂದವರೆದುರು ತೋರಬಾರದೆಂದೊ ಆಕೆ  `ಅಳುವೇ ತುಟಿಗೆ ಬಂದಂತೆ' ಮೌನವಹಿಸಿದಂತೆ ಕಾಣುತ್ತಿತ್ತು. ಗಂಡನ ಮುಖದಲ್ಲಿ ಮನೆಯಲ್ಲಿ ನೆಲೆಸುತ್ತಿರುವ ಧಮ್ಮಸಂಸ್ಕೃತಿಯ ಬಗ್ಗೆ ಸಂತೋಷದ ಭಾವವಿದ್ದರೆ, ಆಕೆಯ ಮುಖದಲ್ಲಿ ಆತಂಕವಿತ್ತು. ಆಕೆ ಗಂಡನ ಒತ್ತಡಕ್ಕೆ ಬೌದ್ಧ ಆಚರಣೆಗಳನ್ನು ಅನಿವಾರ್ಯವಾಗಿ ಯಾಂತ್ರಿಕವಾಗಿ ಮಾಡುತ್ತಿರುವಂತೆ ತೋರಿತು.
4. ಸಾಮರಸ್ಯ ಸಾಧ್ಯವೇ ಆಗದೆ ಸಂಬಂಧ ಕುಸಿದುಬಿದ್ದಿರುವ ಕುಟುಂಬಗಳು. ಇಲ್ಲಿ ಮಹಿಳೆಯರಿಗೆ  ತಾವು ಹುಟ್ಟಿ ಬೆಳೆದು ಬಂದ ಪಾರಂಪರಿಕ ಧಾರ್ಮಿಕ ಸಂಸ್ಕೃತಿಯನ್ನು ಬಿಟ್ಟುಕೊಡುವುದು ಸಾಧ್ಯವಾಗಿರಿಲ್ಲ. ಅವರಿಗೆ ಬುದ್ಧನ ಬಗ್ಗೆ ಅಸಹನೆಯೇನಿರಲಿಲ್ಲ. ಆದರೆ ತನ್ನನ್ನು ಬಾಲ್ಯದ ದೈವಗಳಿಂದ ಬಿಡಿಸುತ್ತಿರುವ ಮತ್ತು ಬುದ್ಧನನ್ನು ಹೇರುತ್ತಿರುವ ಗಂಡನ ಬಗ್ಗೆ ಅಸಮಾಧಾನವಿತ್ತು. ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮನ್ನಣೆಯಿಲ್ಲವಲ್ಲ ಎಂಬ ಕೊರಗು ಒಳಗೊಳಗೇ ಆವಿಗೆಯ ಬೆಂಕಿಯಂತೆ ಸುಳಿಯುತ್ತಿತ್ತು. ಇದು ಒಂದು ಕಡೆ ಲಾವರಸದಂತೆ ಆಸ್ಫೊಟಗೊಂಡಿತು ಕೂಡ. ಕರ್ನಾಟಕದ ಲೀವಿಂಗ್ ಬುದ್ಧಿಸಂನ ಅಧ್ಯಯನಕ್ಕೆ ಹೊರಟ ನಮಗೆ ಇದು ಹೊಸದೊಂದು ತಿಳಿವಿನ ಕೋನವನ್ನು ನೀಡಿತು.
ಈ ಆಸ್ಫೋಟ ಸಂಭವಿಸಿದ್ದು ಒಂದು ದಲಿತ ಕುಟುಂಬದಲ್ಲಿ. ಇಲ್ಲಿ ಗಂಡ ಹೆಂಡತಿಯಿಬ್ಬರೂ ಉನ್ನತ ಶಿಕ್ಷಣ ಪಡೆದವರು. ಇವರಲ್ಲಿ ಗಂಡ ಧಮ್ಮದೀಕ್ಷೆ ಸ್ವೀಕರಿಸಿದ್ದರು. ಮಾತ್ರವಲ್ಲ. ಕಾವಿಧರಿಸಿ, ತಮ್ಮ ಹೆಸರನ್ನು ಬದಲಿಸಿಕೊಂಡು ಭಂತೆ ಕೂಡ ಆಗಿದ್ದರು. ಧಮ್ಮ ಪ್ರಸಾರದಲ್ಲಿ ಅತಿ ಉಮೇದಿನಲ್ಲಿ ತೊಡಗಿಸಿಕೊಂಡಿದ್ದರು. ಅವರನ್ನು ಕಾಣುವುದು ನಮ್ಮ ಉದ್ದೇಶವಾಗಿತ್ತು. ಆದರೆ ಅವರು ಮನೆಯಲ್ಲಿ ಇಲ್ಲವೆಂದೂ ಬಿಹಾರದ ಬೌದ್ಧಗಯಾಕ್ಕೆ ಹೋಗಿದ್ದಾರೆಂದೂ ಅವರು ಶಿಷ್ಯರು ತಿಳಿಸಿದರು. ಆದರೂ ಮನೆಗೆ ತೆರಳಿ, ಅವರ ಮಡದಿಯ ಅಭಿಪ್ರಾಯವನ್ನು ಪಡೆಯೋಣವೆಂದು ಹೊರಟೆವು. ಸಂಜೆ ಏಳರ ಹೊತ್ತು. ಭಿಕ್ಕು ಅವರ ಮನೆಗೆ ಹೋಗಿ ಬಾಗಿಲನ್ನು ತಟ್ಟಿದೆವು. ಒಳಗಿಂದ ಒಬ್ಬರು ಮಹಿಳೆ ಬಾಗಿಲನ್ನು ಅರೆತೆಗೆದು ಏನು ಬೇಕಿತ್ತು ಎಂಬಂತೆ ಹುಬ್ಬುನಿರಿಗೆ ಮಾಡಿಕೊಂಡು ನಮ್ಮನ್ನು ನೋಡಿದರು. ಅವರ ಹಣೆಯಲ್ಲಿ ವಿಭೂತಿಯಿತ್ತು. ``ನಾವು ಬೌದ್ಧಧರ್ಮದ ಅಧ್ಯಯನ ಮಾಡುವುದಕ್ಕೆ ಬಂದವರು. ಭಂತೇಜಿಯಿದ್ದರೆ ಅವರ ಜತೆ ಮಾತಾಡಬೇಕಿತ್ತು'' ಎಂದೆವು. `ಬೌದ್ಧ' `ಭಂತೆ' ಎಂಬ ಶಬ್ದಗಳನ್ನು ಕೇಳುತ್ತಿದ್ದಂತೆ ಆಕೆಯ ಮುಖ ಬಿರುಸಾಯಿತು. ಕಣ್ಣು ಕನಲಿದವು. ಗಡುಸಾದ ದನಿಯಲ್ಲಿ ``ನಿಮ್ಮ ಭಂತೇಜಿ ಮನೆಬಿಟ್ಟು ಯಾವುದೋ ದೇಶಕ್ಕೆ ಬುದ್ಧನ್ನ ಹುಡಕ್ಕೊಂಡು ಹೋಗಿದಾರೆ. ಅವರು ಬಂದ್ಮೇಲೆ ಹೊರಗಡೆ ಎಲ್ಲಾದರೂ ಕುಂತು ಮಾತಾಡಿಕೊಳ್ಳಿ ಸಾ. ಈ ಮನೇಲಿ ಅವರ ಸುದ್ದಿ ಮಾತ್ರ ತಗೀಬೇಡಿ. ಬುದ್ಧನ ವಿಷಯ ಎತ್ತಬೇಡಿ. ದಯವಿಟ್ಟು ಹೊರಟುಹೋಗಿ' ಎಂದು ಹೇಳಿದರು. ನಮಗೆ ಎದೆಗೆ ಒದ್ದಂತಾಯಿತು. ಸೂಕ್ಷ್ಮಮನಸ್ಸಿನ ಡಾ.ಸಂಜೀವ್ ಗಾಬರಿಯಿಂದ ``ಗೋವಿಂದಯ್ಯ, ಕಮಾನ್, ಲೆಟಸ್ ಗೋಬ್ಯಾಕ್' ಎಂದರು. ಆದರೆ ಗೋವಿಂದಯ್ಯನವರು ಅದನ್ನು ಕಿವಿಗೆ ಹಾಕಿಕೊಳ್ಳದೆ ``ಮೇಡಂ, ಬೇಜಾರ್ ಮಾಡಕೋಬೇಡಿ. ನಿಮ್ಮ ಯಜಮಾನರು ಇಲ್ಲದೇ ಹೋದರೆ ಏನಂತೆ? ನೀವಿದ್ದೀರಲ್ಲ. ನಿಮ್ಮ ಜೊತೇಲೆ ಮಾತಾಡ್ತೀವಿ. ಈ ಬೌದ್ಧಧರ್ಮದಿಂದ ನಿಮಗೆ ಏನು ಕಷ್ಟವಾಗಿದೆ. ಅದನಾರೂ ಒಸಿ ಹೇಳಿ. ತಿಳಕೊಳ್ಳುವ'' ಎಂದು ನಮ್ರವಾಗಿ ಹೇಳಿದರು. ಆ ಮಹಿಳೆಯ ಕ್ಯಾಣ ಇಳಿದಿರಲಿಲ್ಲ. ``ಇಲ್ಲ ಸಾ, ನೀವು ಕೇಳೋದು ಬ್ಯಾಡ. ನಾನು ಹೇಳೋದೂ ಬ್ಯಾಡ. ಬುದ್ಧನ ಹೆಸರು ಹೇಳಿಕೊಂಡು ಬರೋ ಯಾರ ಹತ್ರಾನೂ ನಂಗೆ ಮಾತಾಡೋಕೆ ಇಷ್ಟವಿಲ್ಲ' ಎಂದರು. ಅದಕ್ಕೆ ಗೋವಿಂದಯ್ಯ ``ಅಮ್ಮಾ, ನನ್ನ ಜತೆ ದೂರದಿಂದ ಬಂದಿರೊ ವಿದ್ವಾಂಸರು ಲೇಖಕರು ಅವರೆ. ಒಂದೈದು ನಿಮಿಷ ನಿಮ್ಮ ಜೊತೆ ಮಾತಾಡ್ತೀವಿ'' ಎಂದು ವಿನಂತಿಸಿದರು. ಫಾಯದೆಯಾಗಲಿಲ್ಲ. ``ನಿಮ್ಮ ಲೇಖಕರನ್ನ ವಿದ್ವಾಂಸರನ್ನ ಕಟ್ಕೊಂಡು ನನಗೇನು ಆಗಬೇಕಿದೆಯಪ್ಪ? ಆ ಬುದ್ಧನಿಂದ ನನ್ನ ಸಂಸಾರವೇ ಹಾಳಾಗಿದೆ. ನಮ್ಮ ಪಾಡಿಗೆ ಬದುಕಲು ನಮಗೆ ಬಿಡಿ. ಈಗ ತಾವು ದಯಮಾಡಿ'' ಎಂದು ತಣ್ಣಗೆ ಆದರೆ ಆಕ್ರೋಶದಿಂದ ಹೇಳಿದರು. ಈಗ ಸಂಜೀವ್ ಗೆ ತಡೆಯಲು ಆಗಲಿಲ್ಲ. ``ತರಿಕೇರಿ, ಏನ್ರೀ ಇದು? ಆ ಹೆಣಮಗಳು ಇಂಡೈರಕ್ಟಾಗಿ ನಮಗ ಗೆಟ್ ಔಟ್ ಅಂತಿದಾರ. ಆದರೂ ನಾವು ಮಾತಾಡ್ತೀವಿ ಅನಲಿಕ್ಕೆ ಹತ್ತಿದೀವಿ. ಅವರಿಗ ತ್ರಾಸ ಕೊಡಬಾರದು. ಗೋವಿಂದಯ್ಯ. ಪ್ಲೀಸ್ ಕಂಬ್ಯಾಕ್'' ಎಂದು ಚಡಪಡಿಸಿದರು. ಆದರೆ ಗೋವಿಂದಯ್ಯ ಬರಲಿಲ್ಲ. ಛಲ ಬಿಡದ ತಿವಿಕ್ರಮನಂತೆ ಆಕೆಯನ್ನು ಒಲಿಸುತ್ತ  ``ಆಯ್ತು ಮೇಡಂ, ನೀವು ನಮ್ಮ ಜೊತ ಮಾತಾಡ್ದೆ ಇದ್ದರೂ ಪರವಾಯಿಲ್ಲ. ಒಂದು ಲೋಟ ನೀರಾದರೂ ಕೊಡಿ ಮತ್ತ'' ಎಂದರು. ನಾನು ಬೈಸಿಕೊಂಡಾದರೂ ಸರಿ, ಈ ಸೋದರಿಯ ಅಳಲಿನ ಮರ್ಮವೇನೆಂದು ಅರಿತೇ ಹೋಗಬೇಕೆಂದು ಭಂಡನಾಗಿ ನಿಂತಿದ್ದೆ.  
ನಮ್ಮ ಗದ್ದಲಕ್ಕೆ ಬೀದಿಯ ಕೆಲವು ಕಿಟಕಿ ಮತ್ತು ಬಾಗಿಲು ಮೆಲ್ಲಗೆ ತೆರೆದುಕೊಂಡು ಗೋಣುಗಳು ಹೊರಚಾಚಿಕೊಂಡವು. ಕೆಲವರು ಸೆಕೆಗೆಂಬಂತೆ ಹೊರಬಂದು ಗಾಳಿ ಹಾಕಿಕೊಳ್ಳುತ್ತ ಅಂಗಳದಲ್ಲಿ ನಿಂತು ಮಸುಗು ಕತ್ತಲೆಯಲ್ಲಿ ನಮ್ಮತ್ತ ನೋಡತೊಡಗಿದರು. ಅಷ್ಟುಹೊತ್ತು ಹೊರಗೇ ನಿಲ್ಲಿಸಿ ಮಾತಾಡಿದ ಆ ಮಹಿಳೆ, ಗೋವಿಂದಯ್ಯನವರ ನೀರಬೇಡಿಕೆ ಈಡೇರಿಸಲು, ಒಳಗೆ ಹೋದರು. ಅದೇ ಹೊತ್ತಲ್ಲಿ ನಾವು ಒಳಗೆ ನುಸುಳಿಕೊಂಡೆವು. ಆಕೆ ಚೊಂಬಿನಲ್ಲಿ ತಂದ ನೀರನ್ನು ಒಂದು ಲೋಟಕ್ಕೆ ಬಗ್ಗಿಸಿ ಕೊಟ್ಟರು. ಅವರ ವಿಶ್ವಾಸ ಗಳಿಸಲು ಬಾಯಾರಿಕೆ ಇಲ್ಲದಿದ್ದರೂ ಕುಡಿದೆವು. ನಂತರ ತಮ್ಮ ದನಿಗೆ ರೋದನದ ಎಳೆ ಬೆರೆಸಿ, ಆಕೆ ತಮ್ಮ ಕಷ್ಟದ ಚರಿತ್ರೆಯ ಒಂದು ಸಣ್ಣ ಅಧ್ಯಾಯವನ್ನು ತೆಗೆದರು. ``ಸಾ, ನನ್ನ ಕಷ್ಟಾವ ಏನೂಂತ ಹೇಳಲಿ? ನಮ್ಮ ಮನೇವರು ದೀಕ್ಷ ತಕ್ಕಂಡ ಮೇಲ ಮನೆ ಪರಿಸ್ಥಿತಿಯೆ ಬದಲಾಗದೆ. ಅವರು ನಮ್ಮನ್ನ ಬೀದಿಪಾಲು ಮಾಡಿ ತಿರಗಾಟಕ್ಕೆ ಹೋಗವರೆ. ಮನೇನ ನಾನೊಬ್ಬಳೇ ಸಂಭಾಳಿಸಬೇಕು. ನೀ ಸತ್ತ್ಯಾ ಬದುಕಿದೆಯಾ ಅಂತ ಕೇಳಲ್ಲ. ಇರೋದೊಂದು ಈ ಕೂಸಿಗೆ ಏನು ಓದ್ತೀದಿಯಾ ಅಂತ ಕೇಳಕೂ ಅವರಿಗ ಪುರುಸೊತ್ತಿಲ್ಲ. ಯಾವಾಗಲೂ ಬುದ್ಧ ಧಮ್ಮ ದೀಕ್ಷೆ ಅಂತ ಓಡಾಡ್ತವರೆ. ನನ್ನ ಮೇಲೂ ಬುದ್ಧನ್ನ ಹೇರತಾ ಅವರೆ. ನನಗೆ ಅವರ ಬುದ್ಧಬೇಡ. ನನಗೆ ನನ್ನ ಮಂಟೆಸ್ವಾಮೀನೇ ಸಾಕು. ನನಗ ನನ್ನ ಮಾದೇಶ್ವರ ಬೇಕು. ನನಗೂ ನನ್ನದೇ ಧರ್ಮ ಇಲ್ಲವಾ? ನನಗೆ ಮನಶ್ಶಾಂತಿ ಕೊಡೋ ದೇವರ ಪೂಜೆ ಮಾಡುವ ಹಕ್ಕಿಲ್ಲವಾ? ನನಗೂ ಎಲ್ಲರ ಹಾಗೆ ಸಂಸಾರ ಮಾಡಬೇಕು ಅನ್ನೋ ಆಸೆಯಿಲ್ಲವಾ?'' ಎಂದು ಆವೇಶದಿಂದ ಮಾತಾಡತೊಡಗಿದರು. ಅವರಿಗೆ ಅರಿಯದಂತೆ ಕಣ್ಣಲ್ಲಿ ನೀರು ದಳದಳ ಇಳಿಯತೊಡಗಿತು.
ಯಾಕೊ ನನಗೆ ಬುದ್ಧನು ಹೇಳದೆ ಬಿಟ್ಟುಹೋದ ಬಳಿಕ ಶೋಕಿಸಿರಬಹುದಾದ ಯಶೋಧರೆಯ ನೆನಪಾಯಿತು. ಈ ಯಶೋಧರೆಗೆ ಹೊಸ ಧಮ್ಮವು ತನ್ನಿಂದ ತನ್ನ ಗಂಡನನ್ನೂ ತನ್ನ ಮಗುವಿನಿಂದ ಅದರ ತಂದೆಯನ್ನೂ ಕಿತ್ತುಕೊಂಡಿದೆ, ಪರಂಪರೆಯಿಂದ ಬಂದ ದೈವಗಳ ಸಂಬಂಧವನ್ನೂ ಅದು ಕಿತ್ತುಕೊಳ್ಳುತ್ತಿದೆ ಎಂಬ ನೋವಿತ್ತು. ಬಹುಶಃ ಇಸ್ಲಾಮೊ ಕ್ರೈಸ್ತವೊ ಎಲ್ಲ ಹೊಸ ಧರ್ಮಗಳ ಸ್ವೀಕಾರದ ಮೊದಲ ಘಟ್ಟದಲ್ಲಿ ಇಂತಹದೊಂದು ಮಾನಸಿಕ ಭಗ್ನತೆ, ಕೌಟುಂಬಿಕ ಛಿದ್ರತೆ ಸಂಭವಿಸುತ್ತದೆ ಎಂದು ಕಾಣುತ್ತದೆ. ಶರಣ ಧರ್ಮವೂ ಈ ಭಗ್ನತೆಯನ್ನು ಅನುಭವಿಸಿತ್ತು. ಇದನ್ನು ಬಸವಣ್ಣನ ವಚನವೊಂದು ಸೂಚಿಸುತ್ತದೆ: ``ಗಂಡ ಶಿವಭಕ್ತ, ಹೆಂಡತಿ ಮಾರಿಮಸಣಿಯ ಭಕ್ತೆ; ಗಂಡ ಕೊಂಬುದು ಪಾದೋದಕ ಪ್ರಸಾದ, ಹೆಂಡತಿ ಕೊಂಬುದು ಸುರೆಮಾಂಸ''; ಸಾಮಾಜಿಕ ಮುಂಚಲನೆಯನ್ನು ನೀಡುವ ಧರ್ಮಗಳನ್ನು ಸಾಮಾನ್ಯವಾಗಿ ಮೊದಲು ಸ್ವೀಕರಿಸುವವರು ಗಂಡಸರೇ ಯಾಕಾಗಿರುತ್ತಾರೆಯೊ? `ಮಲೆಗಳಲ್ಲಿಮದುಮಗಳ'ಲ್ಲೂ ದೇವಯ್ಯನೇ ಕ್ರಿಸ್ತನಾಗಲು ಹೊರಟು ಮನೆ ಪ್ರಕ್ಷುಬ್ಧವಾಗುತ್ತದೆ. ಗಂಡುಮುಖ್ಯವಾಗಿರುವ ನಮ್ಮ ಸಮಾಜದಲ್ಲಿ ನಿರ್ವಾಹವಿಲ್ಲದೆ ಅವರ ಹಿಂದೆ ಮಹಿಳೆಯರು ಹಿಂಬಾಲಿಸಬೇಕು ಇಲ್ಲವೇ ಪ್ರತಿರೋಧ ತೋರಬೇಕು. ಪುರುಷರ ಈ ಏಕಪಕ್ಷೀಯ ನಡತೆ ಧರ್ಮದ ವಿಷಯದಲ್ಲಿ ಮಾತ್ರವಲ್ಲ, ಎಲ್ಲ ಹೊಸ ಆಚರಣೆಗಳ ಸಂದರ್ಭದಲ್ಲೂ ಸಂಭವಿಸುತ್ತದೆ. ಸಸ್ಯಾಹಾರದ ಹಿನ್ನೆಲೆಯಿಂದ ಬಂದ ಮೇಲ್ಜಾತಿ ಗಂಡಸರು, ಮಾಂಸಾಹಾರದ ಅಭ್ಯಾಸ ಮಾಡಿಕೊಂಡ ಬಳಿಕ, ತಮ್ಮ ಹೊಸ ಆಹಾರಪದ್ಧತಿಗೆ ನೈತಿಕ ಸಮರ್ಥನೆ ಒದಗಿಸಿಕೊಳ್ಳಲೆಂದು ಅದನ್ನು ಮಡದಿಯರ ಮೇಲೂ ಹೇರುವುದುಂಟು; ಇದಕ್ಕೆ ಪ್ರತಿಯಾಗಿ, ಮೇಲ್ಜಾತಿಯ ಹುಡುಗಿಯನ್ನು ಕಟ್ಟಿಕೊಂಡ ದಲಿತರು ಮಡದಿಗಾಗಿ ಮಾಂಸಾಹಾರ ಬಿಟ್ಟಿರುವ ನಿದರ್ಶನಗಳೂ ಉಂಟು. ಆದರೆ ಇಂತಹ ನಿದರ್ಶನಗಳು ಕಡಿಮೆ.
ಆಹಾರ ಧರ್ಮ ಉಡುಗೆ ಇವುಗಳ ವಿಷಯದಲ್ಲಿ ಏಕಪಕ್ಷೀಯವಾದ ಒತ್ತಾಯವು ವಿಚಿತ್ರ ಪ್ರತಿರೋಧಗಳನ್ನು ಹುಟ್ಟಿಸುತ್ತದೆ. ಸದಾಶಯವಿದ್ದರೂ, ಅದನ್ನು  ಜಾರಿ ತರುವ  ವಿಧಾನವು ಅಸೂಕ್ಷ್ಮವಾಗಿದ್ದರೆ ವ್ಯತಿರಿಕ್ತ ಪರಿಣಾಮಗಳನ್ನೇ ತರುತ್ತದೆ. ಆದರೂ ಸಾಮಾನ್ಯವಾಗಿ  ಮಹಿಳೆಯರು ಗಂಡ ಸ್ವೀಕರಿಸಿದ ಧರ್ಮವನ್ನು ಕುರುಡಾಗಿ ಅನುಸರಿಸಲು ಒಪ್ಪದೆ, ತಮ್ಮ ಪಾರಂಪರಿಕ ದೈವ ಧರ್ಮಗಳನ್ನು ಉಳಿಸಿಕೊಂಡಿರುವ ನಿದರ್ಶನಗಳುಂಟು. ಅಕಬರನನ್ನು ವರಿಸಿದರೂ ಜೋಧಾಬಾಯಿ ತನ್ನ ಧಾರ್ಮಿಕತೆಯನ್ನು ಬದಲಿಸಿಕೊಳ್ಳಲಿಲ್ಲ. ರಾಮಾನುಜರ ಪ್ರೇರಣೆಯಿಂದ ಶ್ರೀವೈಷ್ಣವ ಧರ್ಮವನ್ನು ಹೊಯ್ಸಳದೊರೆ ಬಿಟ್ಟಿದೇವನು ಸ್ವೀಕರಿಸಿದರೂ, ಮಡದಿ ಶಾಂತಲೆ ಶೈವಧರ್ಮದಲ್ಲೇ ಮುಂದುವರೆದಳು. ಜೈನಧರ್ಮದಲ್ಲೂ ಹೀಗೆ ಆಯಿತು. ಜೈನನಾದ ಗಂಡ ಜೈನನಾಗದ ಮಡದಿ ಇರುವ ಕುಟುಂಬಗಳ ಬಗ್ಗೆ ಕವಿ ಧರ್ಮಶಿವ ತನ್ನ `ಸಮಯ ಪರೀಕ್ಷೆ'ಯಲ್ಲಿ ಅಸಹನೆಯಿಂದ ಪ್ರಸ್ತಾಪ ಮಾಡುತ್ತಾನೆ. ಲಂಕೇಶರ `ಸಂಕ್ರಾಂತಿ' ನಾಟಕದಲ್ಲಿ ಲಿಂಗದೀಕ್ಷೆ ಸ್ವೀಕರಿಸಿ ಬದಲಾಗಿರುವ ತನ್ನ ಪ್ರಿಯಕರನ್ನು ತಿರಸ್ಕರಿಸುವ ಹೆಣ್ಣಿನ ಪಾತ್ರವೂ; ಕುಲಧರ್ಮವನ್ನು ಬಿಟ್ಟು ಶಿಷ್ಟಧರ್ಮವನ್ನು ಸೇರಿದ ಮಗನನ್ನು ಒಪ್ಪದ ತಂದೆಯ ಪಾತ್ರವೂ ಇದೆ. ಈ ಪಾತ್ರಗಳ ಮೂಲಕ ಸಾಮಾಜಿಕವಾಗಿ ಕ್ರಾಂತಿಕಾರಕವಾದ ಧರ್ಮವು ತನ್ನ ಜಾರಿಯಾಗುವಿಕೆಯಲ್ಲಿ ಮಾಡುತ್ತಿರುವ ವ್ಯಕ್ತಿಗತ ಭಾವನೆಗಳ ಘಾಸಿಯನ್ನು ಚಿತ್ರಿಸುತ್ತದೆ. ನಾಟಕದ ಮಹತ್ವವಿರುವುದು ಅದರ ಕಲಾತ್ಮಕ ಯಶಸ್ಸಿನಲ್ಲಿ ಮಾತ್ರವಲ್ಲ; ಇಂತಹ ಸಾಂಸ್ಕೃತಿಕ ಸಂಕಟಗಳನ್ನು ಪರಿಭಾವಿಸಿರುವುದರಲ್ಲಿ ಕೂಡ.
ಹೊಸಧರ್ಮಗಳ ಸ್ವೀಕಾರವು ಅಸಮಾನತೆಯುಳ್ಳ ಸಮಾಜದಲ್ಲಿ ವ್ಯಕ್ತಿಯ ವೈಯಕ್ತಿಕ ಬೇಕುಬೇಡಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ದಮನಿತ ಸಮುದಾಯಗಳಿಗೆ ಸಾಮಾಜಿಕ ಚಲನಶೀಲತೆಯನ್ನು ಕೊಟ್ಟಿದೆ; ಆಧ್ಯಾತ್ಮಿಕ ಸಮಾನತೆಯ ಹಂಬಲವನ್ನು ಈಡೇರಿಸುವ ಮಾಧ್ಯಮವಾಗಿದೆ. ಆದರೂ ಹೊಸಧರ್ಮವನ್ನು ಒಳಗೆ ಬಿಟ್ಟುಕೊಳ್ಳುವಲ್ಲಿ ಮಹಿಳೆಯರು ಮತ್ತು ವಯಸ್ಸಾದ ಜನ ಯಾಕೆ ಹಿಂಜರಿಕೆ ತೋರುತ್ತಾರೆ? ಹಳೆಯ ಧರ್ಮವನ್ನು ಬಿಟ್ಟುಕೊಡಲಾಗದ ಜಿಗುಟುತನ ಪ್ರದರ್ಶಿಸುತ್ತಾರೆ? ಅಥವಾ `ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು' ಎಂಬಲ್ಲಿರುವ ಅಪೇಕ್ಷೆಯೇ ತಪ್ಪಾಗಿದೆಯೊ?
ಹೊಸಧರ್ಮವು ಜನರ ದೈವಪದ್ಧತಿಯನ್ನು ಮಾತ್ರವಲ್ಲ ಉಡುವ ಉಣ್ಣುವ ಪದ್ಧತಿಯನ್ನು ಬದಲಾಯಿಸುತ್ತದೆ; ಆಲೋಚನ ವಿಧಾನವನ್ನು ಬದಲಿಸುತ್ತದೆ. ಮೊದಲ ಹಂತದಲ್ಲಿ ಅದು ಸಮುದಾಯದ ಜತೆ ವ್ಯಕ್ತಿಗೆ ಇರುವ ಸಾವಯವ ಆಪ್ತ ಸಂಬಂಧವನ್ನು ಭಗ್ನಗೊಳಿಸುತ್ತದೆ; ವೈಚಾರಿಕ ಪ್ರಜ್ಞೆಯುಳ್ಳ ಗಂಡಸರು ಈ ಬಗೆಯ ಸಂಬಂಧ ನಷ್ಟವನ್ನು ಕೆಲಮಟ್ಟಿಗೆ ಸಹಿಸಬಲ್ಲರು. ಸಾರ್ವಜನಿಕ ಬದುಕಿನಲ್ಲಿರುವ ಅವರಿಗೆ ಪರ್ಯಾಯ ಸಂಬಂಧಗಳು ಸೃಷ್ಟಿಯಾಗುವ ಕಾರಣ, ಇದು ಅಷ್ಟು ದೊಡ್ಡ ಸಮಸ್ಯೆಯೆನಿಸುವುದಿಲ್ಲ. ಆದರೆ ಮನೆ ಮತ್ತು ಕೇರಿಗಳ ಪುಟ್ಟಜಗತ್ತಿನಲ್ಲೇ ಹೆಚ್ಚು ಸಮಯ ಕಳೆಯುವ ಅಷ್ಟೊಂದು ವೈಚಾರಿಕ ಸಿದ್ಧತೆಯಿಲ್ಲದ ಮಹಿಳೆಯರಿಗೆ, ಹೀಗೆ ಸಂಬಂಧ ಕಡಿದುಕೊಂಡು ಬದುಕುವುದು ಕಷ್ಟವಾಗುತ್ತದೆ. ಅದರಲ್ಲೂ ತಾವು ನಂಬಿದ ದೈವವನ್ನು ಕೈಬಿಡಲು ಏನು ಕೇಡಾಗುತ್ತದೆಯೊ ಎಂದು ಮನಸ್ಸು ಅಳುಕುತ್ತದೆ.
ಹಾಗೆಂದು ಮಹಿಳೆಯರು ಹೊಸಧರ್ಮ ಹೊಸದೈವಗಳ ವಿರೋಧಿಗಳಲ್ಲ. ಅವರ ಧಾರ್ಮಿಕ ಉದಾರತೆಗೆ ಮುಸ್ಲಿಮರಲ್ಲದ ಮಹಿಳೆಯರು ದರ್ಗಾ ಮತ್ತು ಮೊಹರಂ ಆಚರಣೆಗಳಲ್ಲಿ ತೊಡಗಿರುವುದು ಅಥವಾ ಗ್ರಾಮೀಣ ಮುಸ್ಲಿಂ ಮಹಿಳೆಯರು ಸ್ಥಳೀಯ ಸಂಪ್ರದಾಯಗಳನ್ನು ಅನುಸರಿಸುವುದು ಸಾಕ್ಷಿ. ಅವರು `ಅನ್ಯ' ದೈವಗಳನ್ನು ಹಳತರ ಜತೆಗೇ ಸ್ವೀಕರಿಸಿಯಾರು; ಆದರೆ ಹಳೆಯವನ್ನು ಪೂರಾ ಕೈಬಿಟ್ಟು ಸ್ವೀಕರಿಸಬೇಕೆಂದಾಗ, ಹೊಸಧರ್ಮವು ತಮ್ಮ ನಂಬಿಕೆಯ ಬೇರುಗಳನ್ನು ಅಲುಗಿಸಿದಾಗ, ಅವರಿಗೆ ಕಷ್ಟವಾಗುತ್ತದೆ.
ಧಮ್ಮದೀಕ್ಷೆಯಿಂದ ಬಂಧುಗಳ ಸಾಮಾಜಿಕ ಸಂಬಂಧ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಹುಟ್ಟುವ ಬಿರುಕುಗಳನ್ನು ನಿರ್ವಹಿಸುವ ಬೇಕಾದ ಸಾಮಾಜಿಕ ಮತ್ತು ಮಾನಸಿಕ ಮೆಕ್ಯಾನಿಸಂ ಕರ್ನಾಟಕದಲ್ಲಿನ್ನೂ ರೂಪುಗೊಂಡಂತೆ ಕಾಣುವುದಿಲ್ಲ. ಯಾಕೆಂದರೆ, ಮಹಿಳೆಯರು ಮೊದಲಿಗರಾಗಿ ಹೊಸಧಮ್ಮ ಸ್ವೀಕರಿಸಿ, ಅದನ್ನು ತಮ್ಮ ಪುರುಷರು ಅನುಸರಿಸುವಂತೆ ಮಾಡಿರುವ ನಿದರ್ಶನವೇ ನಮಗೆ ಸಿಗಲಿಲ್ಲ. ಆದರೆ ದೀಕ್ಷೆತೆಗೆದುಕೊಂಡ ಪುರುಷರು, ತಮ್ಮಂತೆ ಉಳಿದವರೂ ಧಮ್ಮವನ್ನು ಒಪ್ಪಿಕೊಳ್ಳಬೇಕು ಎಂಬ ಒತ್ತಾಯ ಮಾಡುತ್ತಿರುವುದು ಕಂಡಿತು. ಈ ಒತ್ತಾಯದ ಹಿಂದೆ ಅವರು ಪುರುಷರಾಗಿರುವ, ಯುವಕರಾಗಿರುವ, ನೌಕರಸ್ತರಾಗಿರುವ, ಅಕ್ಷರಸ್ತರಾಗಿರುವ, ಪ್ರಜ್ಞಾವಂತರಾಗಿರುವ ಇಗೊಗಳು ಕೆಲಸ ಮಾಡುತ್ತಿದ್ದವು. ಈ ಇಗೊಗಳು ಪರೋಕ್ಷವಾಗಿ ಉಳಿದವರಲ್ಲಿ ಬೌದ್ಧದ್ವೇಷವನ್ನು ಹುಟ್ಟಿಸಿದಂತಿದ್ದವು. ಅದರಲ್ಲೂ ಧಮ್ಮಕ್ಕೆ ಬಾರದ ಹಿರಿಯ ತಲೆಮಾರಿನವರು ಧಮ್ಮವಂತರಾಗಿರುವ ಮಕ್ಕಳಿಂದ ದೂರವಾಗಿ ಹೊಸ ಅಸ್ಪೃಶ್ಯತೆ ಮತ್ತು ಅನಾಥಪ್ರಜ್ಞೆ ಅನುಭವಿಸುತ್ತಿರುವರೆಂದೂ, ಧಮ್ಮ ಸ್ವೀಕರಿಸಿರುವ ತಲೆಮಾರು ಸ್ವೀಕರಿಸಿದವರ ಜತೆ ಸಹನೆಯಿಂದ ಒಡನಾಟ ಮಾಡುತ್ತಿಲ್ಲವೆಂದೂ ತೋರಿತು. 
ಈ ಬಗೆಯ ಸಾಮಾಜಿಕ ಮಾನವೀಯ ಸಂಬಂಧಗಳ ಬಿರುಕು ಕೇವಲ ಕುಟುಂಬಗಳ ಒಳಗೆ ಮಾತ್ರವಲ್ಲ, ಹೊಸಧರ್ಮ ಸ್ವೀಕಾರ ಮಾಡಿದ ಕುಟುಂಬದ ಜತೆ, ಹಾಗೆ ಸ್ವೀಕಾರ ಮಾಡದೆ ಉಳಿದಿರುವ ಸಮುದಾಯದ ನಡುವೆ ಕೂಡ ಕಾಣಿಸಿತು. ಈಗಾಗಲೇ ಆಧುನಿಕ ತಲೆಮಾರಿನವರ ಶಿಕ್ಷಣ, ಸರ್ಕಾರಿ ಉದ್ಯೋಗ, ನಗರವಾಸ ಮತ್ತು ಮಧ್ಯಮವರ್ಗಕ್ಕೆ ಏರುವಿಕೆಗಳು, ಅನಕ್ಷರಸ್ತ ಗ್ರಾಮೀಣ ಕೆಳವರ್ಗದ ದಲಿತರ ಜತೆಗೆ ಒಂದು ಸಣ್ಣಬಿರುಕನ್ನು ಹುಟ್ಟಿಸಿವೆ; ಈ ಬಿರುಕು ಹೊಸಧರ್ಮ ಸ್ವೀಕಾರದ ಜತೆಗೆ ಮತ್ತಷ್ಟು ಅಗಲವಾಗುತ್ತಿದೆ. ಅನೇಕ ಕಡೆ ಧಮ್ಮಸ್ವೀಕಾರ ಮಾಡಿರುವ ಶಿಷ್ಟ ದಲಿತರು, ಪಾರಂಪರಿಕ ಮತಗಳಲ್ಲೇ ಉಳಿದ ತಮ್ಮ ಬಂಧುಗಳ ಬಗ್ಗೆ ಅವರು ಅಜ್ಞಾನಿಗಳು ಎಂಬ ದನಿಯಲ್ಲಿ ಅನಾದರದಿಂದ ಮಾತಾಡುತ್ತಿದ್ದರು. ತಮ್ಮ ಹಿರೀಕರು ಮಾರಮ್ಮ ಊರಮ್ಮಗಳಿಗೆ ನಡೆದುಕೊಳ್ಳುವುದು, ಕೋಳಿ ಕೋಣ ಬಲಿಕೊಡುವುದು, ಮಾಂಸಾಹಾರ ಮದ್ಯಪಾನ ಮಾಡುವುದು ಇತ್ಯಾದಿಯನ್ನು ಅವರು ಅಸಹನೆಯಿಂದ ಕಾಣುತ್ತಿದ್ದರು. ಇದಕ್ಕೆ ತಕ್ಕಂತೆ ಕೆಲವು ದಲಿತ ಭಂತೆಗಳು ಮಾಂಸಾಹಾರ ಸೇವನೆ ಮತ್ತು ಕುಡಿತಗಳನ್ನು ಹೀನ ಆಚರಣೆಗಳೆಂದೂ ಅವನ್ನು ದಲಿತರು ಬಿಟ್ಟುಬಿಡಬೇಕೆಂದೂ ಪ್ರತಿಪಾದಿಸುತ್ತಿದ್ದರು.
ಧಮ್ಮಸ್ವೀಕಾರದಿಂದ ಹುಟ್ಟಿದ ಈ ಬಿರುಕು, ಹೈದರಾಬಾದ್ ಕರ್ನಾಟಕದ ಊರುಗಳಲ್ಲಿ ಇನ್ನೊಂದು ತೆರನಾಗಿ ಕೆಲಸಮಾಡುತ್ತಿತ್ತು. ಅಲ್ಲಿ ಧಮ್ಮದೀಕ್ಷೆಯನ್ನು ಕೇವಲ ಚಲುವಾದಿಗಳು (ಬಲಗೈ ಹೊಲೆಯರು)  ಮಾಡಿದ್ದರು. ಧಮ್ಮದೀಕ್ಷೆ ಸ್ವೀಕರಿಸಿದ ಬಳಿಕ ಮಲ್ಲಿಕಾರ್ಜುನ ಖರ್ಗೆಯವರು ಗುಲಬರ್ಗದಲ್ಲಿ ದೊಡ್ಡದೊಂದು ಬೌದ್ಧ ಚೈತ್ಯಾಲಯ ನಿರ್ಮಿಸಿದ್ದರು. ಬೀದರ್ ಗುಲಬರ್ಗ ಜಿಲ್ಲೆಗಳಲ್ಲಿ ಬಲಗೈಯವರು ಧಮ್ಮದೀಕ್ಷೆ ಪಡೆಯಲು, ಮಹಾರರೇ ಪ್ರಮುಖವಾಗಿರುವ ಮಹಾರಾಷ್ಟ್ರದ ರಿಪಬ್ಲಿಕನ್ ಪಾರ್ಟಿಯೂ ಒಂದು ಕಾರಣ. ಪಾರ್ಟಿಯು ಧಮ್ಮದೀಕ್ಷೆ ಪಡೆದ ಅಂಬೇಡ್ಕರ್ ಅವರನ್ನು ರಾಜಕೀಯ ಸಾಂಸ್ಕೃತಿಕ ನಾಯಕನೆಂದು ಭಾವಿಸಿತು. ಇದು ದಲಿತರ ಎಡಗೈ ಬಣವನ್ನು ಮತ್ತೊಂದು ಬಗೆಯಲ್ಲಿ ಸಂಘಟಿತವಾಗಲು ಪ್ರಚೋದಿಸಿತು. ಒಡೆದ ಬಣಗಳು ದಾಯಾದಿಗಳಂತೆ ಇದ್ದವು. ಬಲಗೈನವರು ಅಂಬೇಡ್ಕರ್ ಅವರನ್ನು ನಾಯಕರನ್ನಾಗಿಸಿಕೊಂಡು ಧಮ್ಮಸ್ವೀಕಾರ ಮಾಡಿದರೆ, ಎಡಗೈವರು ಜಗಜೀವನರಾಮರನ್ನು ನಾಯಕರಾಗಿಸಿಕೊಂಡು ಕ್ರೈಸ್ತಧರ್ಮದತ್ತ ಚಲಿಸಿದ್ದರು. ಹೀಗೆ ಕುಟುಂಬ, ಸಮುದಾಯ ಮತ್ತು ಕೇರಿಗಳ ನಡುವೆ ಧಮ್ಮವು ಬೇರೊಂದು ಬಗೆಯಲ್ಲಿ ಬಿರುಕಿಗೆ ಕಾರಣವಾದಂತೆ ತೋರಿತು. 
ರಹಮತ್, ಅರುಣ್, ಕುಲಕರ್ಣಿ, ಗೋವಿಂದಯ್ಯಹೊಸಧರ್ಮಗಳು ಎಷ್ಟೇ ನಾಗರಿಕವಾಗಿರಲಿ, ದಮನಿತರಿಗೆ ಸಾಮಾಜಿಕ ಚಲನಶೀಲತೆ ಕೊಡುವಂತಹದ್ದಾಗಿರಲಿ, ಅವನ್ನು ಮಾನಸಿಕ ಸಿದ್ಧತೆಯಿಲ್ಲದ ಜನರ ಮೇಲೆ ಹೇರಿದಾಗ ಅವು ಹಿಂಸ್ರಕವಾಗಿ ರೂಪಾಂತರಗೊಳ್ಳುತ್ತವೆ. ಯಾವುದೇ ಕ್ರಾಂತಿಕಾರ ಸಿದ್ಧಾಂತವನ್ನು ಸಹ ಅತ್ಯವರಸರದಲ್ಲಿ ಉತ್ಸಾಹದಲ್ಲಿ ಹೇರಿಕೊಂಡಾಗ ಅನೇಕ ಮಾನವೀಯ ಸೂಕ್ಷ್ಮತೆಗಳು ಕಳೆದುಹೋಗಿಬಿಡುತ್ತವೆ. ಈಗಿನ ಮುಸ್ಲಿಮರಲ್ಲಿ ಬಹಳ ಪ್ರಭಾವಶಾಲಿಯಾಗಿರುವ ತಬ್ಲೀಕ್ ಎಂಬ ನವಇಸ್ಲಾಮಿಕ್ ಚಳುವಳಿಯಿಂದ ಸಾವಿರಾರು ಕುಟುಂಬಗಳಲ್ಲಿ ಸತಿಪತಿಗಳೊಂದಾಗದ ಭಕ್ತಿಯು ಏರ್ಪಟ್ಟು, ಮಾನವೀಯ ಸಂಬಂಧಗಳು ಕಂಗೆಟ್ಟಿವೆ. ಧರ್ಮಪ್ರಸಾರಕ್ಕೆ ತಮ್ಮನ್ನು ಬಿಟ್ಟು ತಿಂಗಳುಗಟ್ಟಲೆ ಹೋಗುವ, ಯಾವಾಗಲೂ ಮಸೀದಿಗಳಲ್ಲಿ ಬೀಡುಬಿಟ್ಟಿರುವ ಗಂಡಂದಿರ ವರ್ತನೆಯಿಂದ ಅನೇಕ ಮಹಿಳೆಯರು, ಖಿನ್ನತೆಯಿಂದ ನರಳುತ್ತಿದ್ದಾರೆ. ಕೆಲವರು, ದೇವರ ದಾರಿಯಲ್ಲಿ ಹೋದ ಗಂಡನನ್ನು ಬಿಟ್ಟು ಹೊಸಪುರುಷನನ್ನು ಹುಡುಕಿ ಹೋಗಿರುವುದೂ ಉಂಟು.
ಕರ್ನಾಟಕದಲ್ಲಿ ಸಾಮೂಹಿಕ ಧಮ್ಮದೀಕ್ಷೆ ನೀಡುವ ಕಾರ್ಯಕ್ರಮಗಳು ನಡೆಯುತ್ತಿವೆ. ಅದು ಕರ್ನಾಟಕ ಸಾಮಾಜಿಕ ಸಮೀಕರಣವನ್ನು ಬದಲಿಸುವಷ್ಟು ಶಕ್ತವೊ ಅಲ್ಲವೊ, ಅಸ್ಪೃಶ್ಯತೆಯ ಕಾಯಿಲೆಗೆ ಯಾವ ಬಗೆಯ ಮದ್ದೊ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದಕ್ಕಾಗಿ ಬೆಲೆ ತೆರುತ್ತಿರುವವರು ಮಾತ್ರ ಮಹಿಳೆಯರಾಗಿದ್ದಾರೆ. ಧಮ್ಮದೀಕ್ಷೆ ನೀಡುತ್ತಿರುವವರು ಈ ಸಾಂಸ್ಕೃತಿಕ  ಬಿಕ್ಕಟ್ಟುಗಳನ್ನು ಪರಿಭಾವಿಸಿದಂತಿಲ್ಲ. ಹೀಗಾಗಿ ನಾವು ಕಂಡ ಬಹುತೇಕ ಯಶೋಧರೆಯರಲ್ಲಿ ಬುದ್ಧನ ಬಗ್ಗೆ ಕೋಪವಿತ್ತು. ಇದಕ್ಕೆ ಕಾರಣವಾಗಿದ್ದು ಧಮ್ಮವಲ್ಲ. ಧಮ್ಮವನ್ನು ನೆಲೆಗೊಳಿಸುತ್ತಿರುವ ವಿಧಾನ.  
ನಮ್ಮ ಬೌದ್ಧಯಾನದಲ್ಲಿ ಅನೇಕ ದಲಿತ ಕುಟುಂಬಗಳಲ್ಲಿ ಧಮ್ಮಸ್ವೀಕಾರವು ಹೊಸ ಆತ್ಮಾಭಿಮಾನವನ್ನು ಹೊಸ ಬದುಕಿನ ಕ್ರಮವನ್ನು ತಂದಿತ್ತಿರುವ ಹಲವಾರು ನಿದರ್ಶನಗಳನ್ನು ನಾವು ಕಂಡೆವು. ಆದರೆ ಎಲ್ಲ ಬಗೆಯ ಪರಿವರ್ತನೆಗಳ ಹೊತ್ತಲ್ಲಿ ಪ್ರತಿರೋಧ ಹತಾಶೆ ಅಸಹಾಯಕತೆ ಕಂಡೆವು. ನಮಗೆ ಬೌದ್ಧಧರ್ಮಕ್ಕೆ ಸೇರಿದ ಶಾಸನ, ವಿಗ್ರಹ ಚೈತ್ಯಾಲಯಗಳು ಭಗ್ನಾವಸ್ಥೆಯಲ್ಲಿ ಇದ್ದುದು ಕಂಗೆಡಿಸಲಿಲ್ಲ; ಧಮ್ಮಸ್ವೀಕಾರದ ವಿಷಯವು ಮನುಷ್ಯರ ಮತ್ತು ಕುಟುಂಬಗಳ ನಡುವೆ ಭಗ್ನತೆ ಹತಾಶೆ ತಂದಿರುವುದು ಕಂಗೆಡಿಸಿತು. ಯಶೋಧರೆಯರ ಕಷ್ಟಗಳಿಗೆ ಕೊನೆಯಿಲ್ಲವೆನಿಸಿತು.


- ರಹಮತ್ ತರೀಕೇರಿ
ಕೃಪೆ : ಕೆಂಡ ಸಂಪಿಗೆ

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.