Tuesday, January 31, 2012

ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು ?


ದಿನೇಶ್ ಅಮೀನ್ ಮಟ್ಟು
`ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ.

ಹೀಗಿದ್ದರೂ ಯಾಕೆ ನನ್ನ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಸಾಯುವುದಿಲ್ಲ, 125 ವರ್ಷ ಬದುಕುತ್ತೇನೆ...`- ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ ವಿಫಲಗೊಂಡ ನಂತರ 1946ರ ಜೂನ್ 30ರಂದು ಗಾಂಧೀಜಿ ಪುಣೆಯ ಬಹಿರಂಗ ಸಭೆಯಲ್ಲಿ ನೋವು ತುಂಬಿದ್ದ ದನಿಯಲ್ಲಿ ಈ ಮಾತು ಹೇಳಿದ್ದರು. ಆ ಘಟನೆ ನಡೆದ ನಂತರ 1948ರ ಜನವರಿ 21ರಂದು ದೆಹಲಿಯ ಬಿರ್ಲಾ ಭವನದಲ್ಲಿಯೇ ಗಾಂಧೀಜಿ ಹತ್ಯೆಗೆ ಮತ್ತೊಂದು ಪ್ರಯತ್ನ ನಡೆದಿತ್ತು. ಅದರಿಂದಲೂ ಅವರು ಪಾರಾಗಿದ್ದರು. ಕೊನೆಗೆ 1948ರ ಜನವರಿ 30ರಂದು ಅವರು ಸಾವಿಗೆ ಶರಣಾದರು.

ಪ್ರಾಣದ ಆಸೆ ಇಲ್ಲದ ಕೊಲೆಗಡುಕ, ಕೊಲೆ ಮಾಡುವುದನ್ನು ತಡೆಯುವುದು ಎಷ್ಟು ಕಷ್ಟವೋ, ಪ್ರಾಣದ ಆಸೆ ಇಲ್ಲದ ವ್ಯಕ್ತಿಯನ್ನು ಕೊಲೆಗಡುಕನಿಂದ ಉಳಿಸಿಕೊಳ್ಳುವುದು ಅಷ್ಟೇ ಕಷ್ಟ. ಗಾಂಧೀಜಿ ಹತ್ಯೆ ನಡೆಯುವ ಹೊತ್ತಿಗೆ ಕೊಲೆಗಡುಕ ನಾಥುರಾಮ್ ಗೋಡ್ಸೆ ಮಾತ್ರವಲ್ಲ, ಕೊಲೆಯಾಗಿದ್ದ ಗಾಂಧೀಜಿ ಕೂಡಾ ಬದುಕುವ ಆಸೆಯನ್ನು ಕಳೆದುಕೊಂಡಿದ್ದರು.


ಅವರ ಹತ್ಯೆಯ ದಿನವೇ ತನ್ನೆರಡು `ಊರುಗೋಲು`ಗಳಾದ ಆಭಾ ಮತ್ತು ಮನು ಜತೆ ಮಾತನಾಡುತ್ತಾ ಒಂದಲ್ಲ ಎರಡು ಬಾರಿ ತನ್ನ ಸಾವಿನ ಬಗ್ಗೆ ಗಾಂಧೀಜಿ ಮಾತನಾಡಿದ್ದರು. ತಾನು ನಂಬಿದವರೇ ತನ್ನ ಜತೆ ಇಲ್ಲವೇನೋ ಎಂಬ ಅನಾಥಪ್ರಜ್ಞೆಯೇ ಅವರಿಂದ ಈ ಮಾತುಗಳನ್ನು ಆಡಿಸಿತ್ತೋ ಏನೋ? ಹಿಂದೆ ಏಳು ಬಾರಿ ಅವರ ಹತ್ಯೆಗೆ ಪ್ರಯತ್ನ ನಡೆದಾಗ ಭಾರತೀಯರು ಶತ್ರುಗಳೆಂದು ತಿಳಿದುಕೊಂಡಿದ್ದ ಬ್ರಿಟಿಷರು ಅಧಿಕಾರದಲ್ಲಿದ್ದರು. ಹಾಗಿದ್ದರೂ ಆ ಪ್ರಯತ್ನಗಳು ವಿಫಲವಾಗಿದ್ದವು.

ಆದರೆ ಅವರ ಹತ್ಯೆ ನಡೆದಾಗ ಅವರ ಶಿಷ್ಯೋತ್ತಮರೇ ಅಧಿಕಾರದಲ್ಲಿದ್ದರು. ಅವರಿಗೂ ಬಾಪುವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಶಿಷ್ಯಂದಿರ ವರ್ತನೆಯ ಸುಳಿವು ಸಿಕ್ಕಿಯೇ ಗಾಂಧೀಜಿ ಬದುಕುವ ಆಸೆ ಕಳೆದುಕೊಂಡಿದ್ದರೇ?

ಗಾಂಧೀಜಿ ಹತ್ಯೆ ಮುಗಿದ ಅಧ್ಯಾಯ ಎಂದೇ ಹೆಚ್ಚಿನವರು ನಂಬಿದ್ದಾರೆ. ಕೊಲೆಗಡುಕರು ಯಾರೆಂದು ಗೊತ್ತಾಗಿದೆ, ಅವರಿಗೆ ಶಿಕ್ಷೆಯೂ ಆಗಿದೆ, ಇನ್ನೇನು ಎಂದು ಕೇಳುವವರಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ವಿಚಾರವಷ್ಟೇ ಗಾಂಧೀಜಿಯವರನ್ನು ಕೊಲ್ಲಲು ಗೋಡ್ಸೆಗೆ ಪ್ರೇರಣೆ ನೀಡಿತ್ತೇ? ಇಲ್ಲವೇ ಬೇರೆ ಕಾರಣಗಳೂ ಇದ್ದವೇ? ಎಂಬ ಪ್ರಶ್ನೆಗೆ ನ್ಯಾಯಾಲಯದ ತೀರ್ಪಿನಲ್ಲಿ ಉತ್ತರ ಸಿಗುವುದಿಲ್ಲ.

ಹತ್ಯೆಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುವುದು ಗೊತ್ತಿದ್ದರೂ ಗಾಂಧೀಜಿಯವರನ್ನು ಉಳಿಸಿಕೊಳ್ಳಲು ಅವರ ಅನುಯಾಯಿಗಳಿಗೆ ಯಾಕೆ ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆಗೂ ಇನ್ನೂ ಉತ್ತರ ಸಿಕ್ಕಿಲ್ಲ. ಗಾಂಧೀಜಿ ಹತ್ಯೆಗೆ ಸಂಬಂಧಿಸಿದ ಹಲವಾರು ಪುಸ್ತಕಗಳು, ನ್ಯಾಯಾಲಯದಲ್ಲಿನ ವಿಚಾರಣೆಯ ದಾಖಲೆಗಳು ಹಾಗೂ ಕೊಲೆಗಾರರಿಗೆ ಶಿಕ್ಷೆಯಾದ ನಂತರ ಎದ್ದ ವಿವಾದದಿಂದಾಗಿ ಮಹಾರಾಷ್ಟ್ರ ಸರ್ಕಾರವೇ ನೇಮಿಸಿದ ಕಪೂರ್ ಆಯೋಗದ ವರದಿಗಳ ಪುಟಗಳನ್ನು ತಿರುವಿಹಾಕಿದರೆ ಇನ್ನಷ್ಟು ಪ್ರಶ್ನೆಗಳು ಹುಟ್ಟುತ್ತವೆಯೇ ಹೊರತು ಉತ್ತರ ಸಿಗುವುದಿಲ್ಲ.

ಗಾಂಧೀಜಿ ಹತ್ಯೆಗೆ ನಡೆದ ಐದು ಪ್ರಯತ್ನಗಳನ್ನು ದೃಢೀಕರಿಸುವ ದಾಖಲೆಗಳು ಲಭ್ಯ ಇವೆ. ಈ ಐದೂ ಪ್ರಯತ್ನಗಳಲ್ಲಿ ನಾಥುರಾಮ್ ಗೋಡ್ಸೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಭಾಗವಹಿಸಿದ್ದ ಉಲ್ಲೇಖಗಳಿವೆ.

ಈ ಕಾರಣದಿಂದಾಗಿಯೇ ಪೊಲೀಸರು ಆತನನ್ನು ತಡೆಯುವ ಪ್ರಯತ್ನ ಯಾಕೆ ಮಾಡಲಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಗಾಂಧೀಜಿ ಹತ್ಯೆಗೆ ಮೊದಲ ಪ್ರಯತ್ನ ನಡೆದಿದ್ದು 1934ರ ಜೂನ್ 25ರಂದು ಪುಣೆಯಲ್ಲಿ. `ಹರಿಜನ ಯಾತ್ರೆ`ಯಲ್ಲಿ ಪಾಲ್ಗೊಳ್ಳಲು ಗಾಂಧೀಜಿ ಅಲ್ಲಿಗೆ ಹೋಗಿದ್ದರು. ಅಲ್ಲಿ ದುಷ್ಕರ್ಮಿಗಳು ಎಸೆದ ಬಾಂಬು ಗಾಂಧಿ ವಿರೋಧಿ ಅಣ್ಣಾಸಾಹೇಬ್ ಬೋಪಟ್ಕರ್ ಕಾರು ಮೇಲೆ ಬಿದ್ದ ಕಾರಣ ಗಾಂಧೀಜಿ ಪಾರಾಗಿದ್ದರು.

ಈ ಪ್ರಕರಣದ ಆರೋಪಿಗಳ್ಯಾರು ಎನ್ನುವ ಬಗ್ಗೆ ಸ್ಪಷ್ಟ ಉಲ್ಲೇಖಗಳು ಸಿಗುವುದಿಲ್ಲ. ಅಲ್ಲೆಲ್ಲೂ ಗೋಡ್ಸೆ ಹೆಸರು ಬರುವುದಿಲ್ಲ. ಆದರೆ ಗಾಂಧೀಜಿಯವರ ಕೊನೆಯ ದಿನಗಳ ಬಗ್ಗೆ ಎರಡು ಸಂಪುಟಗಳಲ್ಲಿ ಬರೆದಿರುವ ಪ್ಯಾರೇಲಾಲ್ ಅವರು ಗಾಂಧೀಜಿ ಹತ್ಯೆಯ ಮೊದಲ ಪ್ರಯತ್ನದ ಬಗ್ಗೆ ಬರೆಯುತ್ತಾ `ಈ ಪ್ರಯತ್ನದಲ್ಲಿ ಭಾಗಿಯಾಗಿದ್ದವರೇ 1948ರಲ್ಲಿ ಗಲಭೆಗ್ರಸ್ತ ದೆಹಲಿಯಲ್ಲಿ ಶಾಂತಿಪಾಲನೆಗಾಗಿ ಹೋರಾಡುತ್ತಿದ್ದ ಗಾಂಧೀಜಿಯವರ ಕೊಲೆಗೈದರು` ಎಂದು ಹೇಳಿದ್ದಾರೆ.

`ಗಾಂಧೀಜಿ ಮುಸ್ಲಿಮ್ ಪಕ್ಷಪಾತಿಯಾಗಿದ್ದರು, ಭಾರತದ ವಿಭಜನೆಗೆ ಕಾರಣರಾಗಿದ್ದರು. ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ನೀಡುವಂತೆ ಭಾರತ ಸರ್ಕಾರದ ಮೇಲೆ ಅವರು ಒತ್ತಡ ಹೇರಿದ್ದರು. ಇದನ್ನು ಕಂಡು ಕ್ರುದ್ಧರಾದ ಹಿಂದೂ ಮಹಾಸಭಾಕ್ಕೆ ಸೇರಿದ್ದ ಗೋಡ್ಸೆ ಮತ್ತು ಆಪ್ಟೆ ಗಾಂಧೀಜಿಯವರ ಹತ್ಯೆಗೆ ಮುಂದಾದರು` ಎನ್ನುವ ಸಾಮಾನ್ಯ ಅಭಿಪ್ರಾಯ ಜನಜನಿತವಾಗಿದೆ. ಅಪರಾಧಿಗಳು ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಗಳು ಮತ್ತು ನ್ಯಾಯಾಲಯದ ತೀರ್ಪು ಕೂಡಾ ಇದನ್ನೇ ಹೇಳುತ್ತವೆ.

ಗಾಂಧೀಜಿ ಹತ್ಯೆಗೆ ಮೊದಲ ಪ್ರಯತ್ನ ನಡೆದಿದ್ದಾಗ ಭಾರತದ ವಿಭಜನೆ ಆಗಿರಲಿಲ್ಲ, ಮುಸ್ಲಿಮ್ ಪಕ್ಷಪಾತಿ ಎಂಬ ಆರೋಪ ಕೂಡಾ ಅವರ ಮೇಲೆ ಇರಲಿಲ್ಲ. ಆಗಿನ್ನೂ ಬ್ರಿಟಿಷರ ವಿರುದ್ಧದ ಹೋರಾಟಕ್ಕಿಂತಲೂ ಹೆಚ್ಚಾಗಿ ಹಿಂದೂ ಸಮಾಜದ ಅನಿಷ್ಟವಾದ ಅಸ್ಪೃಶ್ಯತೆ ಮತ್ತು ಕಂದಾಚಾರಗಳ ವಿರುದ್ಧ ಜನಜಾಗೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹರಿಜನರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಬೇಕೆಂದು ಚಳವಳಿ ಪ್ರಾರಂಭಿಸಿದ್ದರು.

ಗಾಂಧೀಜಿಯವರ ಈ ವಿಚಾರಗಳೇ ಅವರ ವಿರೋಧಿಗಳ ಸಿಟ್ಟಿಗೆ ಕಾರಣವಾಗಿತ್ತೇ?
ಗಾಂಧಿ ಹತ್ಯೆಯ ಎರಡನೇ ಪ್ರಯತ್ನ ಮಹಾರಾಷ್ಟ್ರದ ಪಂಚಗಣಿಯಲ್ಲಿ 1944ರ ಜುಲೈ ತಿಂಗಳಲ್ಲಿ ನಡೆದಿತ್ತು.

ಮಲೇರಿಯಾ ಪೀಡಿತರಾಗಿದ್ದ ಗಾಂಧೀಜಿ ವಿಶ್ರಾಂತಿಗಾಗಿ ಅಲ್ಲಿಗೆ ಹೋಗಿದ್ದರು. ಅಲ್ಲಿಗೆ ನಾಥುರಾಮ್ ಗೋಡ್ಸೆ ತನ್ನ ಬೆಂಬಲಿಗರೊಂದಿಗೆ ಹೋಗಿ ಪ್ರತಿಭಟನೆ ನಡೆಸಿದ್ದ. ಆತನನ್ನು ಮಾತುಕತೆಗೆ ಗಾಂಧೀಜಿ ಕರೆದಾಗ ಹೋಗದ ಗೋಡ್ಸೆ ಪ್ರಾರ್ಥನೆಯ ಸಮಯದಲ್ಲಿ ಕೈಯಲ್ಲಿ ಕಠಾರಿ ಝಳಪಿಸುತ್ತಾ ಗಾಂಧೀಜಿ ಕಡೆ ನುಗ್ಗಿದ್ದ.

ಆಗ ಗಾಂಧಿ ಅನುಯಾಯಿಗಳು ಆತನನ್ನು ತಡೆದು ಹೊರಗೆ ಒಯ್ದಿದ್ದರು. `ಕೊಲೆ ಮಾಡಲು ಬಂದವನು ನಾಥುರಾಮ್ ಗೋಡ್ಸೆ` ಎಂದು ಆತನ ಯತ್ನವನ್ನು ವಿಫಲಗೊಳಿಸಿದ್ದ ಅಲ್ಲಿನ ವಿಶ್ರಾಂತಿಗೃಹದ ಮಾಲೀಕ ಮಣಿಶಂಕರ್ ಪುರೋಹಿತ್ ಮತ್ತು ಸತಾರದ ಡಿ.ಬಿಲಾರೆ ಗುರೂಜಿ ಅವರು ಕಪೂರ್ ಆಯೋಗದ ಮುಂದೆ ಸಾಕ್ಷ್ಯ ಹೇಳಿದ್ದಾರೆ.

ಮೂರನೇ ಪ್ರಯತ್ನ 1944ರ ಸೆಪ್ಟೆಂಬರ್‌ನಲ್ಲಿ ಗಾಂಧೀಜಿ ಮತ್ತು ಜಿನ್ನಾ ನಡುವಿನ ಮಾತುಕತೆಯ ಮೊದಲು, ಸೇವಾಗ್ರಾಮದಲ್ಲಿಯೇ ನಡೆದಿತ್ತು. ಆ ಮಾತುಕತೆಗೆ ಹೋಗದಂತೆ ತಡೆಯಲು ನಾಥುರಾಮ್ ಗೋಡ್ಸೆ ತನ್ನ ಬೆಂಬಲಿಗರೊಂದಿಗೆ ಗಾಂಧೀಜಿ ಉಳಿದುಕೊಂಡಿದ್ದ ಸೇವಾಗ್ರಾಮಕ್ಕೆ ಹೋಗಿದ್ದ. ಗಾಂಧೀಜಿ ಕಡೆ ನುಗ್ಗಿ ಬರುತ್ತಿದ್ದ ಗೋಡ್ಸೆಯನ್ನು ಆಶ್ರಮವಾಸಿಗಳು ತಡೆದು ನಿಲ್ಲಿಸಿದ್ದರು.

ಪೊಲೀಸರು ಬಂದು ತಪಾಸಣೆ ಮಾಡಿದಾಗ ಆತನ ಅಂಗಿಯ ಕಿಸೆಯಲ್ಲಿ ಕಠಾರಿ ಇದ್ದದ್ದು ಗೊತ್ತಾಗಿತ್ತು. ರೈಲು ಅಪಘಾತದ ಮೂಲಕ ಗಾಂಧೀಜಿಯವರನ್ನು ಕೊಲ್ಲುವ ನಾಲ್ಕನೇ ಪ್ರಯತ್ನ ಪುಣೆಯಲ್ಲಿಯೇ 1946ರ ಜೂನ್ 29ರಂದು ನಡೆದಿತ್ತು.ಗಾಂಧೀಜಿಯವರು ಪ್ರಯಾಣಿಸುತ್ತಿದ್ದ `ಗಾಂಧೀ ವಿಶೇಷ` ಎನ್ನುವ ಹೆಸರಿನ ರೈಲು ಪುಣೆಗೆ ಹೋಗುತ್ತಿರುವಾಗ ಹಳಿಗಳ ಮೇಲೆ ಕಲ್ಲುಬಂಡೆಗಳನ್ನು ಇಟ್ಟು ಅಪಘಾತ ನಡೆಸುವ ಪ್ರಯತ್ನ ನಡೆಸಲಾಗಿತ್ತು.

ಆದರೆ ರೈಲಿನ ಚಾಲಕ ವಹಿಸಿದ್ದ ಎಚ್ಚರಿಕೆಯಿಂದಾಗಿ ಆ ಅಪಘಾತ ನಡೆಯಲಿಲ್ಲ. ಈ ಘಟನೆ ನಡೆದ ಮರುದಿನವೇ ಗಾಂಧೀಜಿ ಪುಣೆಯಲ್ಲಿ ನಡೆದ ಸಭೆಯಲ್ಲಿ `ನಾನು 125 ವರ್ಷ ಬದುಕುತ್ತೇನೆ...`ಎಂದು ಹೇಳಿದ್ದು. ಅದನ್ನು ಕೇಳಿ ಆ ಸಭೆಯಲ್ಲಿದ್ದ ನಾಥುರಾಮ್ ಗೋಡ್ಸೆ `ಅಷ್ಟುದಿನ ನಿಮ್ಮನ್ನು ಬದುಕಲು ಯಾರು ಬಿಡುತ್ತಾರೆ` ಎಂದು ಪ್ರತಿಕ್ರಿಯಿಸಿದ್ದನ್ನು ಆತನ ಜತೆಯಲ್ಲಿದ್ದವರು ನಂತರದ ದಿನಗಳಲ್ಲಿ ಬಹಿರಂಗಪಡಿಸಿದ್ದಾರೆ.

ಗಾಂಧೀಜಿಯವರ ಹತ್ಯೆಯ ಕೊನೆಯ ಪ್ರಯತ್ನ ವಿಫಲಗೊಂಡದ್ದು 1948ರ ಜನವರಿ 20ರಂದು. ತಾವು ನಂಬಿದ್ದ `ಗುರುಹಿರಿಯರ` ಆಶೀರ್ವಾದದೊಂದಿಗೆ ಸರ್ವಸನ್ನದ್ಧರಾಗಿ ದೆಹಲಿಗೆ ಬಂದಿದ್ದ ನಾಥೂರಾಮ್ ಗೋಡ್ಸೆ ಮತ್ತು ಸಂಗಾತಿಗಳು, ಸಂಜೆ ಹೊತ್ತಿಗೆ ಬಿರ್ಲಾ ಭವನದೊಳಗೆ ಸೇರಿಕೊಂಡಿದ್ದರು. ಮೊದಲು ಮದನ್‌ಲಾಲ್ ಪಹವಾ ಗಾಂಧೀಜಿ ಪ್ರಾರ್ಥನೆ ಮಾಡುವ ಸ್ಥಳದ ಹಿಂದಿನ ಗೋಡೆಯಲ್ಲಿ ಬಾಂಬು ಇಟ್ಟು ಸ್ಫೋಟಿಸಬೇಕು.

ಅದಾದ ಕೂಡಲೇ ಗೋಡ್ಸೆ ಮತ್ತು ವಿಷ್ಣು ಕರಕರೆ ಗ್ರೆನೇಡ್ ಎಸೆಯಬೇಕು. ಅಂತಿಮವಾಗಿ ದಿಗಂಬರ ಬಡ್ಗೆ ಗಾಂಧೀಜಿಯವರ ಕಡೆ ರಿವಾಲ್ವರ್‌ನಿಂದ ಗುಂಡುಹಾರಿಸಬೇಕು-ಇದು ಮೂಲ ಯೋಜನೆ. ಆದರೆ ಬಾಂಬು ಸ್ಫೋಟವಾದ ಕೂಡಲೇ ಪೊಲೀಸರು ಮದನ್‌ಲಾಲ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಅದನ್ನು ನೋಡಿದ ಕೂಡಲೇ ಉಳಿದವರು ಅಲ್ಲಿಂದ ಪಲಾಯನಗೈದರು.

ಮದನ್‌ಲಾಲನನ್ನು ಬಂಧಿಸಿದ್ದ ಪೊಲೀಸರು 24 ಗಂಟೆಗಳ ಅವಧಿಯಲ್ಲಿ ಗಾಂಧಿ ಹತ್ಯೆಯ ಸಂಚಿನ ವಿವರಗಳನ್ನೆಲ್ಲ ಸಂಗ್ರಹಿಸಿದ್ದರು. ಪಂಜಾಬಿ ನಿರಾಶ್ರಿತ ಮದನ್‌ಲಾಲ್‌ಗೆ ಆಶ್ರಯ ನೀಡಿ ಸಾಕಿದ್ದವರು ಮಹಾರಾಷ್ಟ್ರದ ಪ್ರೊ.ಜಗದೀಶ್‌ಚಂದ್ರ ಜೈನ್ ಎಂಬ ಪ್ರಾಧ್ಯಾಪಕರು.

ತಾನು ಗಾಂಧಿ ಹತ್ಯೆಯ ಸಂಚಿನಲ್ಲಿ ಸೇರಿಕೊಂಡದ್ದನ್ನು ಆತ ಪ್ರೊ.ಜೈನ್ ಅವರಿಗೂ ತಿಳಿಸಿದ್ದ. ಮದನ್‌ಲಾಲ್ ಬಂಧನದ ಸುದ್ದಿ ಪತ್ರಿಕೆಯಲ್ಲಿ ಓದಿದ ಕೂಡಲೇ ಜಾಗೃತರಾದ ಪ್ರೊ.ಜೈನ್ ಆಗ ಮಹಾರಾಷ್ಟ್ರದ ಗೃಹಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರನ್ನು ಭೇಟಿಯಾಗಿ ಸಂಚಿನ ವಿವರ ತಿಳಿಸಿದ್ದರು.

ಆ ಮಾತುಕತೆಯಲ್ಲಿ ವಿ.ಡಿ.ಸಾವರ್ಕರ್ ಮತ್ತು `ಕರ್ಕರೆ ಸೇಠ್` ಜತೆ ಮದನ್‌ಲಾಲ್ ಹೊಂದಿದ್ದ ಸಂಪರ್ಕವನ್ನು ಕೂಡಾ ಅವರು ಒತ್ತಿ ಹೇಳಿದ್ದರು. `ದಕ್ಷತೆಗೆ ಹೆಸರಾಗಿದ್ದ ಮತ್ತು ಗಾಂಧಿವಾದಿಯಾಗಿದ್ದ ಮೊರಾರ್ಜಿ ದೇಸಾಯಿ ವರ್ತನೆ ಆಶ್ಚರ್ಯಕರವಾಗಿತ್ತು. ಪ್ರೊ.ಜೈನ್ ಹೇಳಿದ್ದನ್ನು ಅವರು ದಾಖಲಿಸಿರಲಿಲ್ಲ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಚರ್ಚಿಸಿರಲಿಲ್ಲ. ಪ್ರೊ.ಜೈನ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲು ಪೊಲೀಸರಿಗೆ ತಿಳಿಸಬಹುದಿತ್ತು.

ಅದನ್ನೂ ಮಾಡಿರಲಿಲ್ಲ. ಅಹಮದಾಬಾದ್‌ಗೆ ಹೊರಟಿದ್ದ ಅವರು ರೈಲ್ವೆ ನಿಲ್ದಾಣಕ್ಕೆ ಡಿಸಿಪಿ ನಗರ್‌ವಾಲಾ ಅವರನ್ನು ಕರೆಸಿ ವಿಷಯವನ್ನಷ್ಟೇ ತಿಳಿಸಿದ್ದರು` ಎಂದು ಗಾಂಧೀಜಿ ಮೊಮ್ಮಗ ತುಷಾರ್ ಗಾಂಧಿ `ಲೆಟ್ ಅಸ್ ಕಿಲ್ ಗಾಂಧಿ` ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಮೊರಾರ್ಜಿ ಅವರಿಂದ ವಿಷಯ ತಿಳಿದುಕೊಂಡ ಡಿಸಿಪಿ ನಗರ್‌ವಾಲ್ ತನ್ನ ಬಳಿ ಎಲ್ಲ ಮಾಹಿತಿ ಇದೆ ಎಂದು ಹೇಳುತ್ತಲೇ ಇದ್ದರೂ ಅದನ್ನು ಕೊನೆಗೂ ಬಹಿರಂಗಪಡಿಸಿದ್ದು ಗಾಂಧಿ ಹತ್ಯೆಯಾದ ಹನ್ನೆರಡು ಗಂಟೆಗಳ ನಂತರ. ಜನವರಿ 20ರಿಂದ 30ರ ವರೆಗಿನ ಹತ್ತು ದಿನಗಳ ಅವಧಿಯಲ್ಲಿ ನಾಥುರಾಮ್ ಗೋಡ್ಸೆ ಮತ್ತು ಸಂಗಾತಿಗಳು ದೆಹಲಿ-ಮುಂಬೈ ನಡುವೆ ನಿರಾತಂಕವಾಗಿ ಓಡಾಡುತ್ತಾ ಗಾಂಧಿ ಹತ್ಯೆಯ ಕೊನೆಯ ಪ್ರಯತ್ನಕ್ಕೆ ಸಿದ್ಧತೆ ನಡೆಸುತ್ತಿದ್ದರು.

ಆಗ ಕೇಂದ್ರದಲ್ಲಿ ಮಾತ್ರವಲ್ಲ, ಎಲ್ಲ ರಾಜ್ಯಗಳ ಆಡಳಿತ ಗಾಂಧೀಜಿ ಅನುಯಾಯಿಗಳ ಕೈಯಲ್ಲಿಯೇ ಇತ್ತು. ಕೇಂದ್ರದಲ್ಲಿ ಗೃಹಸಚಿವರಾಗಿದ್ದವರು `ಉಕ್ಕಿನ ಮನುಷ್ಯ` ಸರ್ದಾರ್ ವಲ್ಲಭಭಾಯಿ ಪಟೇಲ್. ಸಂಚು ರೂಪುಗೊಂಡ ಮಹಾರಾಷ್ಟ್ರದಲ್ಲಿ ಗೃಹಸಚಿವರಾಗಿದ್ದವರು ಮೊರಾರ್ಜಿ ದೇಸಾಯಿ. ಪ್ರಧಾನಿಯಾಗಿದ್ದವರು ಗಾಂಧೀಜಿ ತನ್ನ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ಜವಾಹರಲಾಲ್ ನೆಹರೂ.
ದೆಹಲಿ ಪೊಲೀಸರು ಮದನ್‌ಲಾಲ್ ನೀಡಿದ ಮಾಹಿತಿ ಆಧರಿಸಿ ಸಂಚುಕೋರರು ತಂಗಿದ್ದ ಹೊಟೇಲ್ ಕೋಣೆ ಜಾಲಾಡಿಸಿದ್ದರು.

ಅಲ್ಲಿ ಹಿಂದೂ ಮಹಾಸಭಾದ ಲೆಟರ್‌ಹೆಡ್ ಸಿಕ್ಕಿದ್ದರೂ ಆ ಸಂಘಟನೆಯ ಪದಾಧಿಕಾರಿಗಳನ್ನು ಪೊಲೀಸರು ವಿಚಾರಿಸಿರಲಿಲ್ಲ. ಕಪೂರ್ ಆಯೋಗದ ಮುಂದೆ ಮಹಾಸಭಾದ ಪದಾಧಿಕಾರಿ ಅಶೋಕ್ ಲಾಹಿರಿಯವರೇ ಇದನ್ನು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಮದನ್‌ಲಾಲ್ ಪ್ರಮುಖವಾಗಿ `ಅಗ್ರಾಣಿ` ಮತ್ತು `ಹಿಂದೂ ರಾಷ್ಟ್ರ` ಎನ್ನುವ ಎರಡು ಪತ್ರಿಕೆಗಳ ಸಂಪಾದಕರು ಮತ್ತು ಪ್ರಕಾಶಕರ ಬಗ್ಗೆ ತಿಳಿಸಿದ್ದ.

ಅವರು ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಪೊಲೀಸರು ಹತ್ತು ದಿನಗಳ ಅವಧಿಯಲ್ಲಿ ಮಾಡಿರಲಿಲ್ಲ. ಕನಿಷ್ಠ ಆ ಒಂದು ಸಣ್ಣ ಪ್ರಯತ್ನ ಮಾಡಿದ್ದರೆ ಗಾಂಧಿ ಹತ್ಯೆಯ ಸಂಚನ್ನು ಭಗ್ನಗೊಳಿಸಬಹುದಿತ್ತು. ಯಾಕೆಂದರೆ ಆ ಸಂಪಾದಕರು ಮತ್ತು ಪ್ರಕಾಶಕರ ಹೆಸರು- ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಅಪ್ಟೆ. ಗಾಂಧೀಜಿಯವರನ್ನು ಕೇವಲ ನಾಥುರಾಮ್ ಗೋಡ್ಸೆ ಕೊಂದದ್ದು ಎಂದು ಹೇಗೆ ಹೇಳುವುದು?

ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಹಿಂದೂ ಧರ್ಮ !



ಮೂಲ: ಗೈಲ್ ಓಮ್ವೆಟ್
ಸಂಗ್ರಹಾನುವಾದ: ನಾ.ದಿವಾಕರ


ಡಾ.ಬಿ.ಆರ್. ಅಂಬೇಡ್ಕರ್
ಸಾಮಾನ್ಯವಾಗಿ ಅಂಬೇಡ್ಕರ್ ಹೆಸರಿತ್ತಿದರೆ ಮೂಗು ಮುರಿಯುವ ಮೇಲ್ಜಾತಿಯವರ ಮನದಾಳದಲ್ಲಿ ಅಂಬೇಡ್ಕರ್ ಬಗ್ಗೆ ಇರುವ ದ್ವೇಷ ವೈಷಮ್ಯಗಳಿಗೆ ಮೀಸಲಾತಿ ನೀತಿಯೂ ಒಂದು ಕಾರಣ. ಮೀಸಲಾತಿ ನೀತಿಯ ಪರಿಣಾಮವಾಗಿ ನಮಗೆ ಸರ್ಕಾರಿ ಹುದ್ದೆಗಳಲ್ಲಿ ಅವಕಾಶ ದೊರೆಯುತ್ತಿಲ್ಲ, ಶಿಕ್ಷಣ ಸಂಸ್ಥೆಗಳಲ್ಲಿ ನಮಗಿಂತಲೂ ಕಡಿಮೆ ಆಂಕ ಗಳಿಸಿದವರಿಗೂ ಸೀಟು ದೊರೆಯುತ್ತದೆ ಎಂದು ವಾದಿಸುವ ಪ್ರತಿಭೆಯ ಸಮರ್ಥಕರಲ್ಲಿ ಮೀಸಲಾತಿ ಒಂದು ಸಾಮಾಜಿಕ ತೊಡಕು. ಈ ಆಕ್ರೋಶಗಳು ಮೇಲ್ನೋಟಕ್ಕೆ ಕಾಣದಿದ್ದರೂ ಆಂತರ್ಯದಲ್ಲಿ ಮೀಸಲಾತಿ ಸೌಲಭ್ಯ ಪಡೆದವರ ಬಗ್ಗೆ ಇರುವ ಅಸಡ್ಡೆ ಅನುಭವಿಸಿದವರಿಗೆ ಮಾತ್ರ ವೇದ್ಯವಾಗುತ್ತದೆ. ಮೇಲ್ಜಾತಿಯವರ, ವಿಶೇಷವಾಗಿ ದ್ವಿಜ ಸಂಪ್ರದಾಯದವರ ಮನದಾಳದಲ್ಲಿನ ಈ ಮನೋಭಾವದ ಹಿಂದೆಯೇ ಅಂಬೇಡ್ಕರ್ ಬ್ರಾಹ್ಮಣ ವಿರೋಧಿ ಎಂಬ ಭಾವನೆ ಸುಪ್ತವಾಗಿರುವುದು ಸ್ಪಷ್ಟ. ಈ ತಪ್ಪುಕಲ್ಪನೆಯನ್ನು ಹೋಗಲಾಡಿಸಬೇಕಾದ ಅನಿವಾರ್ಯತೆ ಇದೆಯೇ ಎನ್ನುವುದಕ್ಕಿಂತಲೂ, ತಪ್ಪು ಕಲ್ಪನೆಗಳಿಂದ ಉದ್ಭವಿಸುವ ಸಾಮಾಜಿಕ ಸಂಘರ್ಷಗಳನ್ನು ತಡೆಗಟ್ಟುವ ದೃಷ್ಟಿಯಿಂದ ವಾಸ್ತವವನ್ನು ಗ್ರಹಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಈ ಲೇಖನ.    


ತಮ್ಮ ಯೌವ್ವನಾವಸ್ಥೆಯಲ್ಲೇ ಅಂಬೇಡ್ಕರ್ ಅವರು ತಮ್ಮ ಸಮುದಾಯದ ನಾಯಕರಾಗಿ ಹೊರಹೊಮ್ಮುವ ಸ್ಪಷ್ಟ ಸೂಚನೆಗಳನ್ನು ನೀಡಿದ್ದರು. ಅವರ ತಂದೆಯೂ ಮಗನನ್ನು ಸಮಾಜ ಸೇವೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸುತ್ತಿದ್ದರು. ತನ್ನ ವ್ಯಾಸಂಗದೊಂದಿಗೇ ಸಮಾಜಸೇವೆಯನ್ನೂ ಮುಂದುವರೆಸುವುದಾಗಿ ಅಂಬೇಡ್ಕರ್ ಬರೋಡದ ಮಹಾರಾಜರಿಗೆ ಆಶ್ವಾಸನೆ ನೀಡಿದ್ದರು. ಒಂದು ಅಸ್ಪೃಶ್ಯ ಸಮುದಾಯದಲ್ಲಿ ಜನಿಸಿದ ವ್ಯಕ್ತಿ ಅತ್ಯುನ್ನತ ಮಟ್ಟದ ವ್ಯಾಸಂಗವನ್ನು ಲಂಡನ್ನಿನಲ್ಲಿ ಮುಗಿಸಿ ೧೯೨೦ರಲ್ಲಿ ಭಾರತಕ್ಕೆ ಹಿಂದಿರುಗಿದಾಗ , ಜೀವನೋಪಾಯಕ್ಕಾಗಿ ಸಂಪಾದಿಸುವುದರೊಡನೆ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವುದೂ ಅಂಬೇಡ್ಕರ್‌ಗೆ ಅನಿವಾರ್ಯವಾಗಿತ್ತು.


ಈ ಕಾಲಘಟ್ಟದಲ್ಲಿ ಭಾರತೀಯ ಸಮಾಜ ಪ್ರಕ್ಷುಬ್ಧತೆಯಿಂದ ಕೂಡಿತ್ತು. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ರಾಷ್ಟ್ರೀಯವಾದಿ ಚಳುವಳಿ ತೀವ್ರತೆ ಪಡೆದುಕೊಂಡಿತ್ತು. ಸೋವಿಯತ್ ಸಂಘದಲ್ಲಿ ನಡೆದ ಶ್ರಮಿಕ ವರ್ಗಗಳ ಕ್ರಾಂತಿಯಿಂದ ಪ್ರೇರೇಪಿತವಾದ ಕಾರ್ಮಿಕ ಚಳುವಳಿ ಚಿಗುರೊಡೆಯುತ್ತಿತ್ತು. ಇದೇ ವೇಳೆಯಲ್ಲಿ ಹೆಚ್ಚು ಸಂಘಟಿತವಲ್ಲದ, ಸಿದ್ಧಾಂತ ಮತ್ತು ನಾಯಕತ್ವಗಳಿಗಾಗಿ ಹುಡುಕಾಡುತ್ತಿದ್ದ ಬಲಿಷ್ಟವಾದ ಜಾತಿ ದಮನಿತರ ಚಳುವಳಿಯೂ ವ್ಯಾಪಕವಾಗಿ ಹರಡಿತ್ತು. ಮಾರ್ಕ್ಸ್‌ವಾದಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಬಲ ಚಳುವಳಿಗಳ ಬೆನ್ನಲ್ಲೇ ದಲಿತರು ಮತ್ತು ಬ್ರಾಹ್ಮಣೇತರರ ಚಳುವಳಿಗಳು ತೀವ್ರತೆ ಪಡೆದುಕೊಂಡು ರಾಜಕೀಯ ರಂಗ ಪ್ರವೇಶಿಸಿದ್ದವು. ಹತ್ತೊಂಬತ್ತನೆಯ ಶತಮಾನದಿಂದಲೇ ದೇಶಾದ್ಯಂತ ದಲಿತ ಚಳುವಳಿಗಳು ಪ್ರಾರಂಭವಾಗಿದ್ದವು. ಶಿಕ್ಷಣಕ್ಕಾಗಿ, ವ್ಯವಸಾಯ ಭೂಮಿಗಾಗಿ, ದೇವಾಲಯ ಪ್ರವೇಶಕ್ಕಾಗಿ, ಸಾರ್ವಜನಿಕ ಸೌಲಭ್ಯಗಳ ಮುಕ್ತ ಉಪಯೋಗಕ್ಕಾಗಿ ಹೋರಾಟಗಳು ರೂಪುಗೊಂಡಿದ್ದವು. ಅನೇಕ ಸಮಾಜ ಸುಧಾರಣಾ ಸಂಸ್ಥೆಗಳು, ಕ್ರೈಸ್ತ ಮಿಷನರಿಗಳು ಈ ಹೋರಾಟಗಳಿಗೆ ನೈತಿಕ ಬೆಂಬಲ ನೀಡಿದ್ದವು. ೧೮೭೫ರಲ್ಲಿ ಸ್ಥಾಪಿತವಾದ ಮಹಾತ್ಮ ಜ್ಯೋತಿ ಬಾ ಫುಲೆಯವರ ಸತ್ಯ ಶೋಧಕ ಸಮಾಜ್ ಮಹಾರಾಷ್ಟ್ರದ ದಲಿತರಿಗೆ ಬೆಂಗಾವಲಾಗಿತ್ತು. ಮಹರ್ ಸಮುದಾಯದ ಜನತೆ ಸೇನೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಆಗ್ರಹಿಸಿ ಹೋರಾಟ ಕೈಗೊಂಡಿದ್ದರು. ಅಲ್ಪ ಸ್ವಲ್ಪ ಆದಾಯವನ್ನು ಹೊಂದಿದ್ದ ಮಹರ್ ಸಮುದಾಯ ಮಹಾರಾಷ್ಟ್ರದ ಪ್ರಥಮ ಸಂಘಟಿತ ಶೋಷಿತ ಸಮುದಾಯವಾಗಿತ್ತು. ಸಾರ್ವಜನಿಕ ಕೆರೆಗಳ ನೀರನ್ನು ಉಪಯೋಗಿಸಲು ಅನೇಕ ಹೋರಾಟಗಳು ನಡೆದಿದ್ದವು.


೧೯೧೭-೧೮ರ ನಂತರದಲ್ಲಿ ರಾಷ್ಟ್ರವಾದಿ ಚಳುವಳಿಯೂ ಅಸ್ಪೃಶ್ಯತೆಯ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲಾರಂಭಿಸಿತ್ತು. ೧೯೧೬ರ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಅಸ್ಪೃಶ್ಯತೆಯ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು. ಈ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಪ್ರಬಲವಾದ ಸಮಾಜ ಸುಧಾರಕ ಸಂಘಟನೆ ಹಿಂದುಳಿದ ವರ್ಗಗಳ ಮಂಡಳಿ ಮೇಲ್ಜಾತಿಯ ವಿಥಲ್ ರಾಮ್‌ಜಿ ಶಿಂಧೆಯವರ ನೇತೃತ್ವದಲ್ಲಿ ಹಿಂದೂ ಧರ್ಮದ ಸುಧಾರಣೆಗಾಗಿ ಶ್ರಮಿಸುತ್ತಿತ್ತು. ಮಹಾರಾಷ್ಟ್ರದ ಬ್ರಾಹ್ಮಣೇತರ ಪಕ್ಷದ ಕಟ್ಟಾ ವಿರೋಧಿಯಾಗಿದ್ದ ಶಿಂಧೆ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಒಳಗೊಳ್ಳುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದರು. ಮೇಲ್ಜಾತಿಯವರ ಸುಧಾರಣಾ ಯತ್ನಗಳು ಅಸ್ಪೃಶ್ಯತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮೂರು ಸಂದರ್ಭಗಳಲ್ಲಿ ವ್ಯಕ್ತವಾಗಿದ್ದವು. ೧೯೧೭-೧೮ರ ಅವಧಿಯಲ್ಲಿ ನಡೆದ ಮೂರು ಅಸ್ಪೃಶ್ಯತಾ ನಿವಾರಣಾ ಸಮಾವೇಶಗಳಲ್ಲಿ ಅಂಬೇಡ್ಕರ್ ಅವರನ್ನು ಸನ್ಮಾನಿಸುವ ಯೋಚನೆ ಫಲಪ್ರದವಾಗಲಿಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ಗಳು ನೀಡಿದ್ದ ಸುಧಾರಣಾ ಶಿಫಾರಸ್ಸುಗಳನ್ನು ಇಲ್ಲಿ ಬೆಂಬಲಿಸಲಾಗಿತ್ತು. ಎರಡನೇ ಸಮಾವೇಶದಲ್ಲಿ ದಲಿತರ ಮತಾಂತರವನ್ನು ವಿರೋಧಿಸಲಾಗಿತ್ತು. ಮೂರನೆಯ ಸಮಾವೇಶದಲ್ಲಿ ಗಾಂಧೀಜಿಯವರು ಉಪಸ್ಥಿತರಿದ್ದರೂ ಅಸ್ಪೃಶ್ಯ ಸಮುದಾಯಗಳನ್ನು ಪ್ರತಿನಿಧಿಸುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ.


ಏತನ್ಮಧ್ಯೆ ಪ್ರಬಲವಾಗಿ ಬೆಳೆಯುತ್ತಿದ್ದ ಬ್ರಾಹ್ಮಣೇತರ ಚಳುವಳಿಗಳು ಅಸ್ಪೃಶ್ಯರ ಬೆಂಬಲ ಗಳಿಸಿದ್ದವು. ಸತ್ಯ ಶೋಧಕ ಸಮಾಜ ಬಹುತೇಕ ಗ್ರಾಮಗಳಲ್ಲಿ ಕಾರ್ಯನಿರತವಾಗಿತ್ತು. ಬ್ರಾಹ್ಮಣರ ಅಧಿಪತ್ಯ ಮತ್ತು ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದ ಈ ಸಂಘಟನೆ ಶೂದ್ರರು ಮತ್ತು ಅತಿ ಶೂದ್ರರು(ದಲಿತರು) ಭಾರತದ ಮೂಲ ನಿವಾಸಿಗಳೆಂದೂ, ಆರ್ಯರ ಆಗಮನದ ನಂತರ ಗುಲಾಮಗಿರಿಗೆ ಒಳಗಾದರೆಂದೂ ಪ್ರತಿಪಾದಿಸಿತ್ತು. ಈ ಪ್ರತಿಪಾದನೆ ಬ್ರಾಹ್ಮಣೇತರ ಚಳುವಳಿಗಳ ಮೂಲಮಂತ್ರವಾಗಿ ಪರಿಣಮಿಸಿ, ಮದ್ರಾಸಿನಲ್ಲಿ ಪ್ರಬಲವಾಗಿದ್ದ ಚಳುವಳಿಗಳಿಗೂ ವೇದಿಕೆಯನ್ನು ಒದಗಿಸಿತ್ತು. ೧೯೧೭ರ ವೇಳೆಗೆ ಬ್ರಾಹ್ಮಣೇತರ ಚಳುವಳಿಗಳು ರಾಜಕೀಯ ಪ್ರವೇಶ ಮಾಡಿದ್ದವು. ಕೊಲ್ಹಾಪುರದ ಮಹಾರಾಜ ಶಾಹು ಛತ್ರಪತಿ ಕ್ಷತ್ರಿಯನೆಂಬ ಅಹಮಿಕೆಯಿಂದ ಆಳಿದರೂ, ಬ್ರಾಹ್ಮಣ್ಯದ ವಿರೋಧಿಯಾಗಿದ್ದುದು, ಮಹಾರಾಷ್ಟ್ರದಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಪೂರಕವಾಗಿತ್ತು. ಅನೇಕ ಬ್ರಾಹ್ಮಣೇತರರು ಆಡಳಿತ ಕಛೇರಿಗಳಲ್ಲಿ ನೇಮಕಗೊಂಡರು. ಇದೇ ಅವಧಿಯಲ್ಲೇ ಸರ್ಕಾರಿ ನೌಕರಿಯಲ್ಲಿ ಮೀಸಲಾತಿಯೂ ಜಾರಿಗೆ ಬಂದಿತ್ತು. ಶಾಹು ಮಹಾರಾಜರು ಅಸ್ಪೃಶ್ಯರಿಗೆ ಪ್ರತ್ಯೇಕ ಹಾಸ್ಟೆಲುಗಳನ್ನು ನಿರ್ಮಿಸಿದ್ದೇ ಅಲ್ಲದೆ  ಸಣ್ಣ ಚಹಾ ಮಳಿಗೆಗಳನ್ನು ಸ್ಥಾಪಿಸಲೂ ನೆರವು ನೀಡಿದ್ದರು.


ಬಹುತೇಕ ಬ್ರಾಹ್ಮಣರ ನೇತೃತ್ವದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ನಡೆಯುತ್ತಿದ್ದ ಚಳುವಳಿಗಳು ಯುವಕ ಅಂಬೇಡ್ಕರ್ ಅವರ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಶಿಂಧೆ ಮುಂತಾದ ನಾಯಕರು ತಮ್ಮ ಅಸ್ಪೃಶ್ಯತಾ ವಿರೋಧಿ ಚಳುವಳಿಯಲ್ಲಿ ಅಸ್ಪೃಶ್ಯರಿಗೆ ಯಾವುದೇ ಅವಕಾಶ ನೀಡದಿದ್ದುದು ಮತ್ತು ಅಸ್ಪೃಶ್ಯರೊಡನೆ ಸಹಭೋಜನದಲ್ಲಿ ಪಾಲ್ಗೊಳ್ಳದಿದ್ದುದು ಅಂಬೇಡ್ಕರ್ ಅವರನ್ನು ಶಾಹು ಮಹರಾಜರ ಕಡೆಗೆ ಸೆಳೆದಿತ್ತು. ೧೯೨೦ರಲ್ಲಿ ಪ್ರಥಮ ಬಾರಿಗೆ ಶಾಹು ಮಹಾರಾಜರನ್ನು ಭೇಟಿಯಾದ ಅಂಬೇಡ್ಕರ್, ಅವರು ಅಸ್ಪೃಶ್ಯರೊಡನೆ ಬೆರೆಯುತ್ತಿದ್ದುದನ್ನು ಕಂಡು ಅವರಿಂದ ಪ್ರಭಾವಿತರಾಗಿದ್ದರು. ೧೯೨೦ರ ಮಾನ್‌ಗಾಂವ್ ಸಮಾವೇಶದಲ್ಲಿ ಅಂಬೇಡ್ಕರ್ ಅವರನ್ನು ಸತ್ಕರಿಸಿದ ಶಾಹು ಮಹಾರಾಜ್ ಅಂಬೇಡ್ಕರ್ ಅವರಿಗೆ ಧನಸಹಾಯ ಮಾಡಿದ್ದೂ ಅಲ್ಲದೆ ಉನ್ನತ ವ್ಯಾಸಂಗಕ್ಕೆ ಲಂಡನ್ನಿಗೂ ಕಳುಹಿಸಿದ್ದರು. ತನ್ನನ್ನು ಸಮಾನ ಮನೋಭಾವದಿಂದ ಕಾಣುತ್ತಿದ್ದ ಶಾಹು ಅವರೊಡನೆ ಅಂಬೇಡ್ಕರ್ ಮುಕ್ತವಾಗಿ ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣ್ಯವಾದದ ಬಗ್ಗೆ ಚರ್ಚಿಸುತ್ತಿದ್ದರು. ಅಂಬೇಡ್ಕರ್ ಮತ್ತು ಶಾಹು ಮಹಾರಾಜ್ ಎದುರಿಸುತ್ತಿದ್ದ ಅಪಮಾನಗಳು ವಿಭಿನ್ನ ಲಕ್ಷಣಗಳನ್ನು ಹೊಂದಿದ್ದರೂ, ಈರ್ವರಲ್ಲೂ ಸಮಾನ ಮನೋಭಾವ ವ್ಯಕ್ತವಾಗುತ್ತಿತ್ತು. ಹಾಗಾಗಿಯೇ ತಮ್ಮ ಪ್ರಾರಂಭಿಕ ದಿನಗಳಲ್ಲಿ ಬ್ರಾಹ್ಮಣರಿಂದ ಹೆಚ್ಚಿನ ಬೆಂಬಲ ಗಳಿಸಿದರೂ, ಅಂಬೇಡ್ಕರ್ ಅವರಿಗೆ ಬ್ರಾಹ್ಮಣೇತರರಲ್ಲಿ ಹೆಚ್ಚಿನ ಸಾಂಗತ್ಯ ಗೋಚರಿಸುತ್ತಿತ್ತು.


೧೯೨೩ರಲ್ಲಿ ಲಂಡನ್‌ನಿಂದ ಹಿಂದಿರುಗಿದ ಬಳಿಕ ಅಂಬೇಡ್ಕರ್ ಅವರ ಕಾರ್ಯವೈಖರಿಯೇ ಬದಲಾಗಿತ್ತು. ಅವರ ಮನೆಯ ಮುಂದೆ ಜಮಾಯಿಸುತ್ತಿದ್ದ ಸಮುದಾಯದ ಜತೆ ಕಾರ್ಯ ಚಟುವಟಿಕೆಗಳಿಗಾಗಿ ಚಡಪಡಿಸುತ್ತಿದ್ದರು. ಈ ಸಂದರ್ಭದಲ್ಲೇ ಅಂಬೇಡ್ಕರ್ ೧೯೨೪ರ ಮಾರ್ಚಿ ೯ರಂದು ಬಹಿಷ್ಕೃತ ಹಿತಕಾರಿಣಿ ಸಭಾ ಎಂಬ ಸಂಘಟನೆಯನ್ನು ಆರಂಭಿಸಿದರು. ಈ ಸಂಘಟನೆಯಲ್ಲಿ ಚಮನ್‌ಲಾಲ್ ಸೆಟಲ್‌ವಾಡ್, ಕೆ.ಎಫ್. ನಾರಿಮನ್ ಮುಂತಾದವರು ಸಕ್ರಿಯರಾಗಿದ್ದರು. ಶಿಕ್ಷಣ, ಆರ್ಥಿಕ ಪ್ರಗತಿ, ದಮನಿತ ಜನಸಮುದಾಯಗಳ ಹಿತಾಸಕ್ತಿಗಳ ರಕ್ಷಣೆ ಈ ಸಭಾದ ಮುಖ್ಯ ಧ್ಯೇಯಗಳಾಗಿದ್ದವು. ಈ ಸಂಘಟನೆಯ ಮೂಲಕ ಸಮೂಹ ನಾಯಕರಾಗಿ ಬೆಳೆದ ಅಂಬೇಡ್ಕರ್ ಉತ್ತಮ ವಾಗ್ಮಿಯಾಗಿಯೂ ಹೊರಹೊಮ್ಮಿದ್ದರು. ಅಧಿಕಾರಶಾಹಿಯಲ್ಲಿ ಅಧಿಪತ್ಯ ಸಾಧಿಸಿದ್ದ ಬ್ರಾಹ್ಮಣ ಸಮುದಾಯವನ್ನು ತೀವ್ರವಾಗಿ ಖಂಡಿಸುತ್ತಲೇ, ಅಸ್ಪೃಶ್ಯರಿಗೆ ಮತ್ತು ಶೂದ್ರರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಅಂಬೇಡ್ಕರ್ ಸಮರ್ಥಿಸುತ್ತಿದ್ದರು. ಇದೇ ವೇಳೆಗೆ ಶಾಸನ ಸಮಿತಿಯಲ್ಲೂ ಅಸ್ಪೃಶ್ಯರ ಪರವಾದ ದನಿ ಮೊಳಗಲಾರಂಭಿಸಿತ್ತು. ಸಾರ್ವಜನಿಕ ಸ್ಥಳಗಳನ್ನು ಅಸ್ಪೃಶ್ಯರಿಗೆ ಮುಕ್ತವಾಗಿಸಲು ಶಾಸನವನ್ನು ಹೊರಡಿಸಲಾಯಿತು. ೧೯೨೬ರಲ್ಲಿ ಬಾಂಬೆ ಶಾಸನ ಸಮಿತಿಗೆ ನೇಮಿಸಲ್ಪಟ್ಟ ಅಂಬೇಡ್ಕರ್ ಸಮಿತಿಯ ಅನೇಕ ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ ಅಸ್ಪೃಶ್ಯರ ಸಮಸ್ಯೆಗಳನ್ನು ಮುಂದಿಡುತ್ತಿದ್ದರು.


ಇದೇ ಸಂದರ್ಭದಲ್ಲಿ ಅಸ್ಪೃಶ್ಯರ ಮಹತ್ತರ ಹೋರಾಟವೊಂದು ರೂಪುಗೊಳ್ಳುತ್ತಿತ್ತು. ಮಾನವನ ಅತ್ಯಮೂಲ್ಯ ಅವಶ್ಯಕತೆಯಾದ ನೀರು ಅಸ್ಪೃಶ್ಯರಿಗೆ ಅಲಭ್ಯವಾಗಿತ್ತು. ಕಾರಣ ಮೇಲ್ಜಾತಿಯವರು ಅಸ್ಪೃಶ್ಯರನ್ನು ಅಶುದ್ಧರೆಂದು ಪರಿಗಣಿಸುತ್ತಿದ್ದರು. ಕೊಂಕಣ ಪ್ರಾಂತ್ಯದ ಮಹಾಡ್ ಎಂಬ ಸಣ್ಣ ಪಟ್ಟಣದಲ್ಲಿ ಪುರಸಭೆ ಸಾರ್ವಜನಿಕ ಕೆರೆಯನ್ನು ಅಸ್ಪೃಶ್ಯರಿಗೂ ಮುಕ್ತವಾಗಿಸಿ ಆದೇಶ ಹೊರಡಿಸಿತ್ತು. ಈ ಪಟ್ಟಣದಲ್ಲಿ ಮುಂಬೈನಿಂದ ವಲಸೆ ಬರುವ ದಲಿತರು, ಮೇಲ್ಜಾತಿಗಳವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂಬೇಡ್ಕರ್ ಅವರಿಗೆ ದಲಿತರು ಮಾತ್ರವಲ್ಲದೆ ಪ್ರಗತಿಪರ ಮೇಲ್ಜಾತಿಯವರ ಬೆಂಬಲವೂ ಇತ್ತು. ಇವರಲ್ಲಿ ಅನಂತರಾವ್ ಚಿತ್ರೆ, ಸುರೇಂದ್ರನಾಥ್ ಟಿಪ್ಸೆ, ಸಹಸ್ರಬುದ್ಧಿ , ಎನ್.ಎಂ.ಜೋಷಿ ಪ್ರಮುಖರಾಗಿದ್ದರು.


೧೯೨೭ರ ಮಾರ್ಚಿ ೧೯-೨೦ರಂದು ಬಹಿಷ್ಕೃತ ಹಿತರಕ್ಷಣಾ ಸಭೆಯು ಮಹಾಡ್‌ನಲ್ಲಿ ಜಿಲ್ಲಾ ಸಮಾವೇಶ ಏರ್ಪಡಿಸಿತ್ತು. ಸಮಾವೇಶದ ಎರಡನೇ ದಿನ ಚಿತ್ರೆಯವರ ಸೂಚನೆಯ ಮೇರೆಗೆ ಸಾರ್ವಜನಿಕ ಕೆರೆಯಲ್ಲಿ ಅಸ್ಪೃಶ್ಯರು ನೀರು ಕುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ೧೫೦೦ಕ್ಕೂ ಹೆಚ್ಚು ಜನ ನೀರು ಕುಡಿಯಲಾರಂಭಿಸಿದರು.  ಈ ಸುದ್ದಿ ಪಟ್ಟಣದಲ್ಲಿ ಹರಡುತ್ತಿದ್ದಂತೆಯೇ ಮೇಲ್ಜಾತಿ ಹಿಂದೂಗಳು ಎಲ್ಲೆಂದರಲ್ಲಿ ಜಮಾಯಿಸಲಾರಂಭಿಸಿದರು. ದಲಿತರು ದೇವಾಲಯಕ್ಕೂ ಪ್ರವೇಶಿಸುತ್ತಾರೆಂಬ ಭೀತಿಯಿಂದ ಮೇಲ್ಜಾತಿ ಹಿಂದೂಗಳು ಅಸ್ಪೃಶ್ಯರ ಮೇಲೆ ಆಕ್ರಮಣ ಆರಂಭಿಸಿದರು. ಆಕ್ರಮಣದಲ್ಲಿ ಅನೇಕ ಅಸ್ಪೃಶ್ಯರು ಏಟು ತಿನ್ನಬೇಕಾಯಿತು. ನಂತರ ಬ್ರಾಹ್ಮಣರು ಕೆರೆಯ ಶುದ್ಧೀಕರಣ ಕ್ರಿಯೆಯನ್ನು ಏರ್ಪಡಿಸಿದ್ದರು.


ಈ ಪ್ರಕರಣ ಮತ್ತು ಆಕ್ರಮಣ ಇಡೀ ಮಹಾರಾಷ್ಟ್ರದಲ್ಲಿ ಸಂಚಲನ ಉಂಟುಮಾಡಿತ್ತು. ದಲಿತ ಸಮುದಾಯದ ಹೋರಾಟಗಳಿಗೆ ಮಹಾಡ್ ಒಂದು ಲಾಂಛನ ಕೇಂದ್ರವಾಗಿ ಪರಿಣಮಿಸಿತು. ದೇಶಾದ್ಯಂತ ದಲಿತ ಸಮುದಾಯಗಳಿಗೆ ಈ ಹೋರಾಟ ಹೊಸ ಹುರುಪು ತಂದಿತ್ತಿತು. ೧೯೨೭ರ ಡಿಸೆಂಬರ್‌ನಲ್ಲಿ ಅಂಬೇಡ್ಕರ್ ನೀರಿನ ಹಕ್ಕಿಗಾಗಿ ಸತ್ಯಾಗ್ರಹ ಸಮಾವೇಶ ಪ್ರಾರಂಭಿಸಿದರು. ಇದೇ ಸಮಯದಲ್ಲಿ ಪ್ರಾರಂಭವಾದ ಬಹಿಷ್ಕೃತ ಭಾರತ್ ಪತ್ರಿಕೆ ಅಸ್ಪೃಶ್ಯರ ಅನೇಕ ಸಮಸ್ಯೆಗಳನ್ನು ಪ್ರಕಟಿಸಲಾರಂಭಿಸಿತು. ಆರ್ಯ ಸಮಾಜದ ಶುದ್ಧೀಕರಣ ಚಳುವಳಿಯನ್ನು ಈ ಪತ್ರಿಕೆಯ ಮೂಲಕ ಖಂಡಿಸಲಾಗುತ್ತಿತ್ತು. ಪ್ರಾರಂಭದಲ್ಲಿ ಜಾತಿ ರಹಿತ ಆರ್ಯ ಸಮಾಜದ ಸ್ಥಾಪನೆಗಾಗಿ ನಡೆಯುತ್ತಿದ್ದ ಶುದ್ಧೀಕರಣ ಕ್ರಿಯೆ ಕ್ರಮೇಣ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಸಮೀಕರಿಸುವ ಯತ್ನವಾಗಿ ಮಾರ್ಪಟ್ಟಿದ್ದು ತೀವ್ರ ಟೀಕೆಗೊಳಗಾಯಿತು. ಇದೇ ಸಂದರ್ಭದಲ್ಲಿ ಕೆಲವು ನಾಯಕರು ಸತ್ಯಾಗ್ರಹ ಸಮಾವೇಶದಲ್ಲಿ ಯಾವುದೇ ಬ್ರಾಹ್ಮಣರಿಗೆ ಅವಕಾಶ ನೀಡಕೂಡದು ಎಂದು ಆಗ್ರಹಿಸಿದರು. ಆದರೆ ಈ ವಾದವನ್ನು ತಿರಸ್ಕರಿಸಿದ ಅಂಬೇಡ್ಕರ್ ನಮ್ಮ ಚಳುವಳಿಯು ಬ್ರಾಹ್ಮಣ್ಯದ ವಿರುದ್ಧ ಮತ್ತು ಬ್ರಾಹ್ಮಣ ಧರ್ಮದ ವಿರುದ್ಧವೇ ಹೊರತು, ಬ್ರಾಹ್ಮಣರ ವಿರುದ್ಧವಲ್ಲ ಎಂದು ಹೇಳಿದ್ದರು. ನಂತರದಲ್ಲಿ ಮತಾಂತರದ ಪ್ರಶ್ನೆ ಉದ್ಭವಿಸಿದಾಗ, ಇಸ್ಲಾಂಗೆ ಮತಾಂತರ ಹೊಂದುವ ಸಲಹೆಗಳೂ ಕೇಳಿಬಂದವು. ಆದರೆ ಅಂಬೇಡ್ಕರ್ ಅವರು ಮೊದಲು ನಾವು ಹಿಂದೂ ಧರ್ಮಕ್ಕೆ ಸೇರಿದವರೇ ಇಲ್ಲವೇ ಎಂದು ನಿರ್ಧರಿಸೋಣ ಎಂದು ಹೇಳುವ ಮೂಲಕ ಇಡೀ ಚರ್ಚೆಗೆ ಹೊಸ ಆಯಾಮವನ್ನು ಒದಗಿಸಿದ್ದರು.


೧೯೨೭ರ ಡಿಸೆಂಬರ್ ೨೩ರಂದು ಸತ್ಯಾಗ್ರಹ ಸಮಾವೇಶದ ವೇಳೆಗೆ ಮಹಾಡ್‌ನಲ್ಲಿ ೧೫ ಸಾವಿರಕ್ಕೂ ಹೆಚ್ಚು ದಲಿತರು ಸೇರಿದ್ದರು. ಆದರೆ ಜಿಲ್ಲಾ ನ್ಯಾಯಾಧೀಶರು ಕೆರೆಯನ್ನು ನೀರನ್ನು ಬಳಸದಂತೆ ನಿಷೇದಾಜ್ಞೆ ಹೊರಡಿಸಿದ್ದರು. ಈ ಆಜ್ಞೆಯನ್ನು ಪಾಲಿಸಿದ ಅಂಬೇಡ್ಕರ್ ವಿಚಲಿತರಾಗದೆ, ಮತ್ತೊಂದು ವಿಶಿಷ್ಟ ಹೋರಾಟವನ್ನು ಹಮ್ಮಿಕೊಂಡಿದ್ದರು. ಪುರೋಹಿತಶಾಹಿ ಹಿಂದೂ ಧರ್ಮದ ಪವಿತ್ರ ಶಾಸನ ಗ್ರಂಥವಾದ ಮನುಸ್ಮೃತಿಯನ್ನು ದಹಿಸುವ ಕಾರ್ಯಕ್ರಮವನ್ನು ಅಂಬೇಡ್ಕರ್ ಏರ್ಪಡಿಸಿದರು. ಈ ನಿರ್ಣಯವನ್ನು ಮಂಡಿಸಿದವರು ಸಹಸ್ರಬುದ್ಧಿ ಎಂಬ ಬ್ರಾಹ್ಮಣರಾದರೆ, ಅನುಮೋದಿಸಿದವರು ಚಂಬಾರರಾದ ರಾಜಭೋಜ್ ಅವರಾಗಿದ್ದರು. ಸಮಾವೇಶದ ಪ್ರಥಮ ದಿನದ ರಾತ್ರಿ ಮನುಸ್ಮೃತಿಯನ್ನು ದಹಿಸಲಾಗಿತ್ತು. ಮೂರನೆಯ ದಿನ ಆಕ್ರಮಣಶೀಲ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಭಕ್ತಿ ಸಂತರು, ಗಾಂಧೀಜಿ, ಅಗರ್‌ಕರ್ ಮತ್ತು ಶಾಹುಮಹಾರಾಜ್ ಅವರ ಬಗ್ಗೆ ಘೋಷಣೆಗಳನ್ನು ಕೂಗಲಾಯಿತು. ನಂತರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಂಬೇಡ್ಕರ್ ಅಸ್ಪೃಶ್ಯ ಮಹಿಳೆಯರನ್ನು ಕುರಿತು, ಕೆಳಜಾತಿಗಳಂತೆ ಬೆಳ್ಳಿಯ ಒಡವೆಗಳನ್ನು ಧರಿಸುವ ಪವೃತ್ತಿಯನ್ನು ಕೈಬಿಟ್ಟು  ತಮ್ಮ ಜಾತಿ ಸಂಕೇತಗಳು ಗೋಚರಿಸದಂತೆ, ಮೇಲ್ಜಾತಿಯವರ ರೀತಿ ಉಡುಪು ಧರಿಸಲು, ಮಕ್ಕಳಿಗೆ ತಪ್ಪದೆ ಶಿಕ್ಷಣ ನೀಡಲು ಕರೆ ನೀಡಿದ್ದರು. ಈ ಹಂತದಿಂದ ಮಹಾಡ್ ಅಂಬೇಡ್ಕರ್ ಅವರ ಹೋರಾಟಗಳ ಕೇಂದ್ರ ಬಿಂದುವಾಯಿತು. ಅಸ್ಪೃಶ್ಯರ ಭಾಗವಹಿಸುವಿಕೆ ಮತ್ತು ಕೆಲವು ಮೇಲ್ಜಾತಿಯವರ ಬೆಂಬಲ ಅಂಬೇಡ್ಕರ್‌ಗೆ ಪ್ರೋತ್ಸಾಹದಾಯಕವಾಗಿತ್ತು.

ಹಿಂದೂ ಧರ್ಮದ ಪವಿತ್ರ ಶಾಸ್ತ್ರದ ವಿರುದ್ಧ ನಡೆದ ಈ ಸಂಘರ್ಷದೊಡನೆಯೇ, ಸಾರ್ವಜನಿಕ ಸ್ಥಳಗಳನ್ನು ಮತ್ತು ಅವಕಾಶಗಳನ್ನು ಬಳಸುವಲ್ಲಿ ದಲಿತರಿಗೆ ಸಮಾನ ಅವಕಾಶಗಳಿಗಾಗಿ ಹೋರಾಟಗಳು ತೀವ್ರವಾಗತೊಡಗಿತು. ೧೯೨೦ರ ದಶಕದಲ್ಲಿ ಅಸ್ಪೃಶ್ಯರಲ್ಲಿ ತಮ್ಮ  ಹಕ್ಕುಗಳ ಬಗ್ಗೆ ಹೆಚ್ಚಿನ ಪ್ರಜ್ಞೆ ಮೂಡಲಾರಂಭಿಸಿತು. ಗುರುವಾಯೂರಿನಲ್ಲಿ ದೇವಾಲಯದ ಮುಂದೆ ಹಾದು ಹೋಗುವ ರಸ್ತೆಯಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಪೆರಿಯಾರ್ ರಾಮಸ್ವಾಮಿ ಅವರ ನೇತೃತ್ವದಲ್ಲಿ ದಲಿತರು ಈ ರಸ್ತೆಯನ್ನು ಹಾದು ಹೋಗುವ ಹಕ್ಕಿಗಾಗಿ ಹೋರಾಟ ನಡೆಸಿದ್ದರು. ಪುಣೆಯ ಪಾರ್ವತಿ ದೇವಸ್ಥಾನ ಮತ್ತು ನಾಸಿಕ್‌ನಲ್ಲಿರುವ ರಾಮ ದೇವಾಲಯದಲ್ಲೂ ದಲಿತರ ಪ್ರವೇಶಕ್ಕಾಗಿ ಹೋರಾಟ ರೂಪುಗೊಂಡಿತು. ಈ ಹೋರಾಟಗಳಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಅಂಬೇಡ್ಕರ್ ಸೆಕ್ಯುಲರ್ ಪ್ರಜಾ ಹಕ್ಕುಗಳಿಗಾಗಿ ಮತ್ತು ಹಿಂದೂ ಧರ್ಮದ ನಿರಾಕರಣೆಗಾಗಿ ವೇದಿಕೆ ಸಿದ್ಧಪಡಿಸುತ್ತಿದ್ದರು. ಈ ಹಂತದಲ್ಲೇ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಸಮೀಕರಿಸುವ ಗಾಂಧೀಜಿಯವರ ಯತ್ನಗಳನ್ನು ಅಂಬೇಡ್ಕರ್ ತೀವ್ರವಾಗಿ ಟೀಕಿಸಲಾರಂಭಿಸಿದರು.

ನಾಸಿಕ್ ಸತ್ಯಾಗ್ರಹದಲ್ಲಿ ಅಂಬೇಡ್ಕರ್ಈ ಹಂತದಲ್ಲಿ ಆರ್ಯರ ಆಗಮನದ ವಾದವನ್ನು ಸಂಪೂರ್ಣವಾಗಿ ಒಪ್ಪದ ಅಂಬೇಡ್ಕರ್ ಹಿಂದೂ ಧರ್ಮವನ್ನೂ ಸಂಪೂರ್ಣವಾಗಿ ಖಂಡಿಸುತ್ತಿರಲಿಲ್ಲ. ಬದಲಾಗಿ ಭಕ್ತಿಪಂಥ, ತುಕಾರಾಂ, ಜ್ಞಾನೇಶ್ವರ್ ಮುಂತಾದ ಸಮಾಜ ಸುಧಾರಕರ ಬಗ್ಗೆ ಗಾಢವಾದ ಅಧ್ಯಯನವನ್ನು ಆರಂಭಿಸಿದ್ದರು. ತಮ್ಮದೇ ಆದ ವಿಶ್ಲೇಷಣೆ ಮತ್ತು ವ್ಯಾಖ್ಯಾನವನ್ನು ಮಂಡಿಸುವ ಧ್ಯೇಯವನ್ನು ಹೊಂದಿದ್ದ ಅಂಬೇಡ್ಕರ್ ತಮ್ಮ ಅಧ್ಯಯನ ಮತ್ತು ಅನುಭವಗಳನ್ನೇ ಆಧಾರವಾಗಿರಿಸಿಕೊಂಡಿದ್ದರು. ತಮ್ಮ ತಂದೆಯವರ ಕಬೀರ್ ಪಂಥದ ಅನುಭವಗಳನ್ನು ಅಭ್ಯಸಿಸುತ್ತ ಕಬೀರ್‌ದಾಸ್ ಅವರ ತೀವ್ರಗಾಮಿತ್ವ ಹೇಗೆ ಬ್ರಾಹ್ಮಣವಾದದ ಚೌಕಟ್ಟಿನಲ್ಲಿ ಸಿಲುಕಿಹೋಗಿತ್ತು ಎಂಬ ಅಂಶವನ್ನೂ ಅಂಬೇಡ್ಕರ್ ಗ್ರಹಿಸಿದ್ದರು. ಅವರ ಮುಂದಿನ ಚಿಂತನಾ ಕ್ರಮವೂ ಇದರಿಂದಲೇ ಪ್ರಭಾವಿತವಾಗಿತ್ತು.


ಮುಂಬೈ ಶಾಸನ ಸಮಿತಿಯಲ್ಲಿ ಅಂಬೇಡ್ಕರ್ ಪ್ರಬಲ ದನಿಯಾಗಿ ಹೊರಹೊಮ್ಮಿದ್ದರು. ಅಸ್ಪೃಶ್ಯರ ಪರವಾದ ಅನೇಕ ಶಾಸನಗಳನ್ನು ಅನುಷ್ಟಾನಗೊಳಿಸುವಲ್ಲಿ ಅಂಬೇಡ್ಕರ್ ಮಹತ್ವದ ಪಾತ್ರ ವಹಿಸಿದ್ದರು. ೧೯೨೭ರ ಸೆಪ್ಟೆಂಬರ್‌ನಲ್ಲಿ, ಮೇಲ್ಜಾತಿಯ ಹಿಂದೂಗಳು, ಕ್ರೈಸ್ತರು, ಅಸ್ಪೃಶ್ಯರನ್ನೊಳಗೊಂಡ ಸಮತಾ ಸಮಾಜ್ ಸಂಘವನ್ನು ಸ್ಥಾಪಿಸಿದ ಅಂಬೇಡ್ಕರ್ ಸಹಭೋಜನ ಮತ್ತು ಅಂತರ್ಜಾತಿ ವಿವಾಹಕ್ಕಾಗಿ ಪ್ರಚಾರ ಕೈಗೊಂಡಿದ್ದರು. ಅಂತರ್ಜಾತಿ ವಿವಾಹದ ಕಾರ್ಯಕ್ರಮ ಫಲಪ್ರದವಾಗಲಿಲ್ಲ. ಈ ಹಂತದಲ್ಲಿ ಅಸ್ಪೃಶ್ಯರ ವಿವಾಹದಲ್ಲಿ, ಮನಃಪೂರ್ವಕವಾಗಿ ಅಲ್ಲದಿದ್ದರೂ, ಸಂದರ್ಭಕ್ಕನುಗುಣವಾಗಿ ವೈದಿಕ ಸಂಪ್ರದಾಯಗಳನ್ನು ಅನುಸರಿಸಲೂ ಸೂಚಿಸಿದ್ದರು. ಬಹುಶಃ ಈ ಹಂತದಲ್ಲಿ ಅಂಬೇಡ್ಕರ್ ಹಿಂದೂ ಧರ್ಮದ ಎಲ್ಲ ಸ್ವರೂಪಗಳನ್ನು ವಿರೋಧಿಸುತ್ತಿರಲಿಲ್ಲ ಎನಿಸುತ್ತದೆ.


ನಂತರದ ದಿನಗಳಲ್ಲಿ ಅಂಬೇಡ್ಕರ್ ಅವರು ಕೈಗೊಂಡ ಹೋರಾಟಗಳು ಹಿಂದೂ ಧರ್ಮವನ್ನು ಸಾರಾಸಗಟಾಗಿ ನಿರಾಕರಿಸುವ ನಿಟ್ಟಿನಲ್ಲಿ ಸಾಗಿದ್ದು ಈಗ ಇತಿಹಾಸ. ಆದರೆ ಜಾತಿವ್ಯವಸ್ಥೆಯ ವಿರುದ್ಧದ ತಮ್ಮ ಹೋರಾಟದಲ್ಲಿ ಅಂಬೇಡ್ಕರ್ ಅವರಿಗೆ ಸ್ಪಷ್ಟತೆ ಇದ್ದು, ಯಾವುದೇ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಕಟಪಡಿಸುತ್ತಿರಲಿಲ್ಲ ಎಂಬ ಅಂಶವನ್ನು ಗಮನಿಸಬೇಕಾಗಿದೆ. ಅಂಬೇಡ್ಕರ್ ಬ್ರಾಹ್ಮಣ ದ್ವೇಷಿ, ದಲಿತರ ಪರ ಎಂದಾಕ್ಷಣ ಬ್ರಾಹ್ಮಣ ವಿರೋಧಿ ಎಂದು ಆರ್ಥೈಸುವ ಆಧುನಿಕ ಚಿಂತಕರು ಈ ಸತ್ಯವನ್ನು ಗ್ರಹಿಸಿದರೆ ಒಳಿತು. 

RSS ನಿಜ ಬಣ್ಣ ಗೊತ್ತೇನು ? ಭಾಷೆ-ವೇಶ-ದೇಶ ..... !

(ಫೋಟೊ: http://newshopper.sulekha.com/india-hindu-nationalism_photo_1064066.htm )

ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಒಂದು ದೊಡ್ಡ ಶಿಬಿರ ಹುಬ್ಬಳ್ಳಿಯಲ್ಲಿ ನಡೀತಿದೆ. ಈ ಶಿಬಿರದಲ್ಲಿ ಸಾವಿರಾರು ಆರೆಸ್ಸೆಸ್ಸಿಗರು ಪಾಲ್ಗೊಂಡಿದ್ದಾರೆ. ಸಮವಸ್ತ್ರ ಧರಿಸಿ, ಶಿಸ್ತಿನ ಸಿಪಾಯಿಗಳಾಗಿ ನಿನ್ನೆ ಇವರು ನಡೆಸಿದ ಪಥಸಂಚಲನವಂತೂ ನೋಡಿದವರ ಮೆಚ್ಚುಗೆಗೆ ಕಾರಣವಾಗುವಂತಿತ್ತು. ಮೂರು ದಿನಗಳ ಈ ಶಿಬಿರದಲ್ಲಿ ಅನೇಕ ನಾಯಕರು ಪಾಲ್ಗೊಂಡಿದ್ದಾರೆ. ರಾಜ್ಯ ರಾಜಕಾರಣ, ಭಾರತೀಯ ಜನತಾ ಪಕ್ಷದ ಆಂತರಿಕ ಶಿಸ್ತು, ಭ್ರಷ್ಟಾಚಾರಗಳ ಬಗ್ಗೆಯೆಲ್ಲಾ ಅಲ್ಲಿ ಮಾತುಕತೆಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿದವು. ಕನ್ನಡ - ಕನ್ನಡಿಗ- ಕರ್ನಾಟಕಗಳ ಬಗ್ಗೆಯಾಗಲೀ, ಭಾರತದ ಸಂವಿಧಾನದ ಬಗ್ಗೆಯಾಗಲೀ, ಒಕ್ಕೂಟ ವ್ಯವಸ್ಥೆಯ ಬಗ್ಗೆಯಾಗಲೀ, ಜಾತ್ಯಾತೀತತೆಯ ಬಗ್ಗೆಯಾಗಲೀ ಆರೆಸ್ಸೆಸ್ಸಿಗೆ ಇರುವ ನಿಲುವುಗಳನ್ನು ಅರಿತಾಗ ಈ ಸಂಭ್ರಮ ಆತಂಕವಾಗಿ ಬದಲಾಗುವುದರಲ್ಲಿ ಅಚ್ಚರಿಯಿಲ್ಲ!

ಸಂಘದ ಹೊರಮುಖ !

ಆರೆಸ್ಸೆಸ್ ಎನ್ನುವುದು ದೇಶದ ಅತ್ಯಂತ ಶಿಸ್ತುಬದ್ಧ ಸಾಮಾಜಿಕ ಸಂಘಟನೆ ಎಂದೇ ಗುರುತಾಗಿದೆ. ಇಲ್ಲಿನ ಕಾರ್ಯಕರ್ತರು ಸ್ವಾರ್ಥ ಮರೆತು ನೆರೆ ಬರ ಮೊದಲಾದ ಸಂದರ್ಭಗಳಲ್ಲಿ ಜನತೆಯ ರಕ್ಷಣೆಗೆ, ಸಹಾಯಕ್ಕೆ ಧಾವಿಸಿ ಬಂದದ್ದಿದೆ. ವ್ಯವಸ್ಥಿತವಾಗಿ ಕಟ್ಟಲ್ಪಟ್ಟಿರುವ ಈ ಸಂಸ್ಥೆಯ ಒಳರಚನೆ ಹಾಗೂ ಹರವುಗಳು ಹೆಸರುವಾಸಿಯಾಗಿದೆ. ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಬೇಕೆನ್ನುವ, ಭಾರತೀಯರನ್ನು ಭಾರತಕ್ಕಾಗಿ ಮಿಡಿಯುವಂತೆ ಮಾಡಬಲ್ಲ ಸಂಸ್ಥೆ ಇದೆಂಬ ಹೆಸರೂ ಸಂಘಕ್ಕಿದೆ. ಮನೆ ಮಠ ಸ್ವಂತ ಬದುಕು ಬಿಟ್ಟು ಸಂಘ ಬಯಸುತ್ತಿರುವ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ತ್ಯಾಗಿಗಳ ದೊಡ್ಡಪಡೆಯೇ ಇದರಲ್ಲಿದೆ. ಸಂಘದ ಅನೇಕ ಕಾರ್ಯಕರ್ತರು ಅಕ್ಷರಶಃ ಸಂತರಂತೆ ತಮ್ಮದೆಲ್ಲವನ್ನೂ ಬಿಟ್ಟು ಸಮಾಜಕ್ಕಾಗಿ ದುಡಿಯುತ್ತಿರುವುದೂ ಕೂಡಾ ಸತ್ಯ. ಆದರೆ ವೈಯುಕ್ತಿಕ ಹಿರಿಮೆಗಳು, ಅನೇಕರ ನಿಸ್ವಾರ್ಥತೆ, ತ್ಯಾಗ, ಗಟ್ಟಿತನಗಳು ಬಳಕೆಯಾಗುತ್ತಿರುವ ಉದ್ದೇಶ ಮಾತ್ರಾ ದುರದೃಷ್ಟಕರವಾದುದ್ದಾಗಿದೆ.

ಸಂಘದ ಬೋಧನೆಯನ್ನು ಪ್ರಶ್ನಾತೀತವಾಗಿ ಒಪ್ಪುವ ಕಾರ್ಯಕರ್ತರ ಸೈನ್ಯವನ್ನೇ ಹೊಂದಿರುವ ಸಂಘವು, ಮೂಲತಃ ತಾನು ನಂಬಿರುವ ಸಿದ್ಧಾಂತಗಳಲ್ಲೇ ಪ್ರಜಾಪ್ರಭುತ್ವ ವಿರೋಧಿ, ವೈವಿಧ್ಯತಾ ವಿರೋಧಿ ನಿಲುವುಗಳನ್ನು ಹೊಂದಿರುವ ಪುರಾವೆಗಳನ್ನು, ಸಂಸ್ಥೆಯ ಪೂಜನೀಯ ಆದರ್ಶವಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ
ಚಿಂತನಗಂಗಾ (ಶ್ರೀ ಗುರೂಜಿ ಸಮಗ್ರ, ಸಂಪುಟ ೧೧, ಪ್ರಕಾಶಕರು: ಸಾಹಿತ್ಯ ಸಂಗಮ ಪ್ರಕಾಶನ) ಪುಸ್ತಕದಲ್ಲಿ  ಕಾಣಬಹುದಾಗಿದೆ. ಚಿಂತನಗಂಗಾ ಸಂಘವನ್ನು ಅರಿಯುವವರಿಗೆ, ಸಂಘದ ಸಿದ್ಧಾಂತಗಳಿಗೆ ಕನ್ನಡಿ ಎನ್ನುವ ಮಾತುಗಳು ಪುಸ್ತಕದ ಮೊದಲಲ್ಲೇ ಬರೆಯಲಾಗಿರುವುದರಿಂದ ಇದನ್ನು ಸಂಘದ ಅಧಿಕೃತವಾದ ನಿಲುವು ಎಂದೇ ಪರಿಗಣಿಸಬೇಕಾಗುತ್ತದೆ. ಈ ನಿಲುವಿನ ಸರಿತಪ್ಪುಗಳನ್ನು ವಿಶ್ಲೇಷಿಸದೆ, ರಾಷ್ಟ್ರೀಯ ಸ್ವಂಯಂಸೇವಕ ಸಂಘವು ನಾಡಿನಲ್ಲಿ ಬಲಶಾಲಿಯಾಗಲು ಕನ್ನಡಿಗರು ಕೈಗೂಡಿಸಿದ್ದೇ ಆದರೆ ನಾಳಿನ ದಿನ ಮರುಕ ಪಡಬೇಕಾದೀತು!

ಭಾಷೆಗಳ ಬಗ್ಗೆ !


ವೈವಿಧ್ಯತೆಯನ್ನು ಹಳಿಯಲಾಗದ, ಆದರೆ ಒಪ್ಪಲಾಗದ ಮನಸ್ಥಿತಿಯನ್ನು, ಇಂತಹ ವೈವಿಧ್ಯತೆ ಇರುವುದರಿಂದಾಗಿಯೇ ಚಡಪಡಿಕೆ ಹೊಂದಿರುವುದನ್ನೂ ಈ ಕೆಳಗಿನ ಮಾತುಗಳು ಧ್ವನಿಸುತ್ತಿವೆ.


ನಮ್ಮ ರಾಷ್ಟ್ರೀಯ ಪರಂಪರೆಯ ವೈವಿಧ್ಯವು ಭಾಷೆಗಳ ಕ್ಷೇತ್ರಗಳಲ್ಲೂ ವ್ಯಕ್ತಗೊಂಡಿದೆ.. ಎಲ್ಲಾ ಭಾಷೆಗಳೂ ಮೂಲತಃ ಒಂದೇ. ವಾಸ್ತವವಾಗಿ ಎಲ್ಲಾ ಭಾಷೆಗಳೂ ರಾಷ್ಟ್ರೀಯ ಸಂಸ್ಕೃತಿಯ ದಿವ್ಯ ಪರಿಮಳವನ್ನು ಹರಡುವ ನವವಿಕಸಿತ ಕುಸುಮಗಳಂತೆ. ಇವೆಲ್ಲಕ್ಕೂ ಮೂಲ ಪ್ರೇರಣೆ ಎಂದರೆ ಭಾಷೆಗಳ ಆ ಸಾಮ್ರಾಜ್ಞಿ ದೇವವಾಣಿ ಸಂಸ್ಕೃತ. ಅದರ ಸಂಪನ್ನತೆ ಮತ್ತು ಪರಂಪರಾಗತ ಪಾವನ ಸಂಬಂಧಗಳಿಂದಾಗಿ ಅದೊಂದೇ ನಮ್ಮ ರಾಷ್ಟ್ರೀಯ ಏಕತೆಗೆ ಬಲನೀಡುತ್ತಿರುವ ಒಂದು ಮುಖ್ಯ ಅಂಶ. ಆದರೆ ದುರದೃಷ್ಟವಶಾತ್ ಅದು ಇಂದು ಸಾಮಾನ್ಯ ಬಳಕೆಯಲ್ಲಿಲ್ಲ. ಅದನ್ನು ಬಳಕೆಗೆ ತರುವ ನೈತಿಕ ಅಭಿಮಾನವಾಗಲೀ, ಕೆಚ್ಚೆದೆಯಾಗಲೀ ನಮ್ಮ ಇಂದಿನ ಆಡಳಿತಗಾರರಿಗಿಲ್ಲ.
 (ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಗಳು ಏಕೆ ತಲೆ ಎತ್ತುತ್ತಿವೆ ಗೊತ್ತಾಯ್ತಲ್ಲಾ?)
ಇಂಗ್ಲೀಶ್ ನಮ್ಮ ಮೇಲೆ ಹೇರಲ್ಪಟ್ಟ ಕೃತಕ ಹೊರೆ. ಇದನ್ನು ಕಿತ್ತೆಸೆಯಬೇಕು. ಇಂಗ್ಲೀಶ್ ಮುಂದುವರಿಕೆ ಮಾನಸಿಕ ದಾಸ್ಯದ ಲಕ್ಷಣ. ಸಂಪರ್ಕ ಭಾಷೆಯ ಸಮಸ್ಯೆಗೆ ಪರಿಹಾರವೇನು? ಸಂಸ್ಕೃತವು ಆ ಸ್ಥಾನವನ್ನು ಪಡೆಯುವವರೆಗೆ ಅನುಕೂಲದ ದೃಷ್ಟಿಯಿಂದ ಹಿಂದಿಗೆ ಆದ್ಯತೆ ನೀಡಬೇಕು. ಯಾಕೆಂದರೆ ದೇಶದ ಬಹುಭಾಗದ ಜನರು ಬಳಸುವುದು ಹಿಂದಿಯನ್ನೇ. ಕಲಿಯುವುದಕ್ಕೆ ಮತ್ತು ಆಡುವುದಕ್ಕೆ ಅತ್ಯಂತ ಸುಲಭವಾದ ಭಾಷೆಯೂ ಅದೇ. ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಲು ಕುಂಭ ಅಥವಾ ಬೇರಾವುದಾದರೂ ಮೇಳಕ್ಕೆ ಕಾಶಿಗಾಗಲೀ, ಪ್ರಯಾಗಕ್ಕಾಗಲೀ ಹೋದರೆ, ದೂರದ ಉತ್ತರ ದಕ್ಷಿಣ ಪೂರ್ವ ಪಶ್ಚಿಮಗಳಿಂದ ಅಲ್ಲಿ ಕಿಕ್ಕಿರಿದು ನೆರೆಯುವ ಅಗಾಧ ಜನಸ್ತೋಮ ಹಿಂದಿಯನ್ನೇ, ಅದೆಷ್ಟೇ ಅಪಕ್ವವಾಗಿರಲೀ, ಬಳಸುವುದನ್ನು ಕಾಣುತ್ತೇವೆ.
ರಾಷ್ಟ್ರೀಯ ಏಕತೆ ಮತ್ತು ಆತ್ಮಗೌರವದ ದೃಷ್ಟಿಯಿಂದ ನಾವು ಹಿಂದಿಯನ್ನು ಒಪ್ಪಬೇಕು. ವಾಸ್ತವವಾಗಿ ಬ್ರಿಟೀಷರ ಆಳ್ವಿಕೆಯಲ್ಲೂ ಬಂಗಾಳಿ, ಮರಾಠಿ ಮತ್ತು ಗುಜರಾತಿಗಳು ಅದ್ಭುತ ಪ್ರಗತಿಯನ್ನು ಸಾಧಿಸಿವೆ. ಒಂದೇ ಭಾಷೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಇವೆಲ್ಲಾ ಭಾಷೆಗಳನ್ನೂ ನಾಶಮಾಡುವುದನ್ನು ಯಾವನೂ ಸಹಿಸಲಾರ. ಆದ್ದರಿಂದ ಹಿಂದಿಯು ಇತರ ಭಾಷೆಗಳ ಮೇಲೆ ಆಕ್ರಮಣ ಅಥವಾ ಯಜಮಾನಿಕೆ ನಡೆಸುವುದೆಂಬ ಶಂಕೆ, ಭೀತಿಗಳು ಕೇವಲ ಕಟ್ಟುಕತೆ, ಸ್ವಾರ್ಥಿ ರಾಜಕಾರಣಿಗಳ ಸೃಷ್ಟಿ.

ಒಟ್ಟು ಸಾರವೆಂದರೆ "ಹಿಂದೀಯನ್ನು ನೀವೆಲ್ಲಾ ಒಪ್ಪಿ. ಬ್ರಿಟೀಷರು ಆಳುವಾಗಲೇ ಭಾರತೀಯ ಭಾಷೆಗಳು ಉದ್ಧಾರವಾಗಿದ್ದವು, ಹಿಂದೀಲಿ ಆಳಿದರೆ ಏನಾಗುತ್ತದೆ?" ಎನ್ನುವ ನಿಲುವು ಕಾಣುತ್ತದೆ. ಇಂದು ಹಿಂದೀ ಬರದಿದ್ದರೆ ಕೆಲಸ ಕೊಡಲ್ಲಾ ಎಂದು ನಮ್ಮಲ್ಲಿ ಹುಟ್ಟಿಕೊಂಡಿರುವ ಪರಿಸ್ಥಿತಿ ಆಕ್ರಮಣವಲ್ಲವೇ? ಹಿಂದೀ ಯಜಮಾನಿಕೆಯಲ್ಲವೇ?

ಒಕ್ಕೂಟದ ಬಗ್ಗೆ !



ಸ್ವಯಂನಿರ್ಣಯಾಧಿಕಾರದ ಘೋಷಣೆಯ ಈ ತಪ್ಪು ಅನ್ವಯವನ್ನು ಕಾಶ್ಮೀರಕ್ಕೆ ಮತ್ತು ಈಗ ಗೋವಾಕ್ಕೆ ವಿಸ್ತರಿಸಲಾಗಿದೆ. ಕಾಶ್ಮೀರಿಗಳೇ ತಮ್ಮ ಭವಿಷ್ಯವನ್ನು ತೀರ್ಮಾನಿಸಬೇಕು ಎಂದರೆ ದೇಶದ ಏಕತ್ವವನ್ನೂ ಭಾರತದ ಜನರ ಏಕತ್ವವನ್ನೂ ತಿರಸ್ಕರಿಸಿದಂತೆ.
ಆನಂತರ ಬಂತು ನಮ್ಮ ಸಂವಿಧಾನ. ಇದು ನಮ್ಮ ದೇಶವನ್ನು ಸ್ವಲ್ಪ ಹೆಚ್ಚು ಕಡಿಮೆ ಪ್ರತ್ಯೇಕವೇ ಆದ ಘಟಕಗಳಾಗಿ ಒಡೆದು ಪ್ರತಿಯೊಂದಕ್ಕೂ ಒಂದು ‘ರಾಜ್ಯ’ವನ್ನು ಕೊಟ್ಟು ಎಲ್ಲವನ್ನೂ ಒಂದು ‘ಒಕ್ಕೂಟ’ವಾಗಿ ‘ಸಂಯುಕ್ತ’ಗೊಳಿಸಿತು. ಪ್ರತಿಭಾಷೆಯ ಗುಂಪು ‘ಒಂದು ಜನಾಂಗ’ವಾಗಿ ತನ್ನದೇ ಪ್ರತ್ಯೇಕ ಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿ‘ಸಮೃದ್ಧವಾಗಿ ಸ್ವಯಮಾಧಿಕಾರ’ವನ್ನು ಪಡೆದ ‘’ರಾಜ್ಯಗಳ ಒಕ್ಕೂಟ’ದ ಗೀಳು ನಮ್ಮ ನಾಯಕರ ಮನಸ್ಸನ್ನೂ ವಿಚಾರಶಕ್ತಿಯನ್ನೂ ಆಕ್ರಮಿಸಿಬಿಟ್ಟಿತ್ತು.
ಇವು ನಿರಾಸೆಗೊಳಿಸುವ ಯೋಚನೆಗಳೇ. ಆದರೆ ನಾವು ನಿರಾಸೆಯಿಂದ ಕೈಕಾಲು ಸೋಲಬೇಕಾಗಿಲ್ಲ: ಏಕೆಂದರೆ ಇದಕ್ಕೆ ಒಂದು ಮದ್ದುಂಟು.
ಇದಕ್ಕಾಗಿ ನಮ್ಮ ದೇಶದ ಸಂವಿಧಾನದ ಒಕ್ಕೂಟ ಸ್ವರೂಪದ ಎಲ್ಲಾ ಮಾತನ್ನೂ ಆಳವಾಗಿ ಹೂಳಬೇಕು. ಭಾರತ ರಾಜ್ಯದೊಳಗೇ ‘ಸ್ವಯಮಾಧಿಕಾರ’ವುಳ್ಳ ಅಥವಾ ಭಾಗಶಃ ಸ್ವಯಮಾಧಿಕಾರವುಳ್ಳ ‘ರಾಜ್ಯಗಳ’ ಅಸ್ತಿತ್ವವನ್ನೇ ಅಳಿಸಿಹಾಕಬೇಕು.
ಸಾಮಾಜಿಕ ಸಮಸ್ಯೆಯ ಸರಳೀಕರಣ !
ಮೀಸಲಾತಿ ವ್ಯವಸ್ಥೆಯ ಬಗ್ಗೆ ಗುರೂಜಿಯವವರ ಅನಿಸಿಕೆ:


ನಮ್ಮ ಜನರಲ್ಲಿ ವಿವಿಧ ವಿಭಾಗಗಳವರಿಗೆ ಹರಿಜನರು, ನಿಮ್ನ ಜಾತಿಯವರು, ನಿಮ್ನ ಬುಡಕಟ್ಟಿನವರು ಹೀಗೆಲ್ಲಾ ಹೆಸರುಗಳನ್ನು ಕೊಡಾಲಾಗುತ್ತಿದೆ. ಹಣದಾಸೆ ತೋರಿಸಿ ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವುದಕ್ಕೆ ಇಷ್ಟೆಲ್ಲಾ ನಡೆಯುತ್ತಿರುವುದು.
ಇದನ್ನು ಓದಿದಾಗ ಆರೆಸ್ಸೆಸ್ ಮೀಸಲಾತಿ ಬಗ್ಗೆ ಎಂತಹ ನಿಲುವನ್ನು ಹೊಂದಿದೆ ಎಂಬುದು ಅರಿವಾಗುತ್ತದೆ. ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ನಡೆದು ಬಂದಿದೆಯೆನ್ನಲಾದ, ಇಂದಿಗೂ ಬಹುಸಂಖ್ಯಾತರನ್ನು ತಾರತಮ್ಯಕ್ಕೀಡುಮಾಡುತ್ತಿರುವ ಸಮಾಜಿಕ ಅಸಮಾನತೆಯೇ ಇರಲಿಲ್ಲ ಎನ್ನುವಂತಹ ಅನಿಸಿಕೆಯನ್ನು ಗುರೂಜಿ ಮಾತುಗಳು ಧ್ವನಿಸುತ್ತಿರುವುದು ಸಂಘ ಇಡೀ ಸಮಾಜದ ಸಮಸ್ಯೆಗಳನ್ನು ಸರಳೀಕರಿಸುತ್ತಿರುವುದನ್ನು ತೋರುತ್ತದೆ. ಜಾತೀಯತೆ ತೊಲಗಬೇಕು ಅನ್ನುವ ನಿಲುವು ಸಂಘಕ್ಕಿದೆ ಎನ್ನಲಾಗುತ್ತದೆ, ಆದರೆ ಜಾತಿಯ ಕಾರಣದಿಂದಲೇ ತುಳಿತಕ್ಕೊಳಗಾದವರನ್ನು ಮೇಲೆತ್ತುವುದಕ್ಕೆ ಸಂಘವು ದೇವಸ್ಥಾನಕ್ಕೆ ಪ್ರವೇಶ, ಬಾವಿನೀರು ಬಳಸಲು ಅನುಮತಿಯಂತಹ ಮೇಲ್ಮೇಲಿನ ಪರಿಹಾರಗಳಿಗಿಂತಲೂ ಮಿಗಿಲಾದ ಪರಿಹಾರವನ್ನು ನೀಡಲಾರದಾಗಿದೆ.

ಸಂಘದ ಧರ್ಮದೃಷ್ಟಿ !


ಈ ನಾಡಿನಲ್ಲಿರುವ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದವರ ಮನೋಭಾವವೇನು? ಅವರು ಈ ನಾಡಿನಲ್ಲಿ ಹುಟ್ಟಿದರು, ಸಂದೇಹವೇ ಇಲ್ಲ. ಆದರೆ ಈ ನೆಲದ ಉಪ್ಪಿಗೆ ನಿಷ್ಠೆಯಿಂದ ಇದ್ದಾರೆಯೇ ಅವರು!? ಅವರನ್ನು ಬೆಳೆಸಿದ ಈ ನಾಡಿಗೆ ಕೃತಜ್ಞರಾಗಿದ್ದಾರೆಯೇ? ಈ ನಾಡು ಮತ್ತು ಇಲ್ಲಿನ ಪರಂಪರೆಯ ಮಕ್ಕಳು ತಾವು ಮತ್ತು ಇದಕ್ಕೆ ಸೇವೆ ಸಲ್ಲಿಸುವುದೇ ತಮ್ಮ ಮಹಾಭಾಗ್ಯ ಎಂದು ಅವರು ಭಾವಿಸಿದ್ದಾರೆಯೇ? ಖಂಡಿತಾ ಇಲ್ಲ! ಮತಾಂತರದೊಂದಿಗೇ ರಾಷ್ಟ್ರದಲ್ಲಿ ಅವರ ಪ್ರೇಮ ಮತ್ತು ನಿಷ್ಠೆಗಳು ಹೊರಟೇ ಹೋಗಿವೆ.
ಇದು ಇಲ್ಲಿಗೇ ಮುಗಿಯಲಿಲ್ಲ. ಈ ನಾಡಿನ ಶತ್ರುಗಳೊಂದಿಗೆ ಅವರು ಮಾನಸಿಕವಾಗಿ ಏಕತೆಯನ್ನು ಬೆಳೆಸಿಕೊಂಡಿದ್ದಾರೆ.
ಕೆಲವು ಸಮಾಜ ಬಂಧುಗಳು ನಮ್ಮ ಜೊತೆ ಬಿಟ್ಟು ಕಳೆದ ಕೆಲವು ಶತಮಾನಗಳಲ್ಲಿ ಎಲ್ಲೆಲ್ಲೋ ಅಲೆಯುತ್ತಿದ್ದವರು ಈಗ ಮರಳಿ ನಮ್ಮ ಬಳಿಗೆ ಬಂದಲ್ಲಿ ಅವರಿಗೆ ನಮ್ಮ ಪ್ರೀತಿ ಗೌರವಗಳನ್ನು ತೋರಿಸದೆ, ಸಂತೋಷ ಪಡದೆ ಹೇಗಿದ್ದೇವು? ಇಲ್ಲಿ ಬಲಾತ್ಕಾರವೇನೂ ಇಲ್ಲ. ವಿಷಯವನ್ನು ಸರಿಯಾಗಿ ತಿಳಿದುಕೊಂಡು ಅವರು ಹಿಂದಕ್ಕೆ ಬರಲಿ. ಉಡುಪು, ಸಂಪ್ರದಾಯ, ವಿವಾಹ ಪದ್ಧತಿ, ಅಂತ್ಯಸಂಸ್ಕಾರ ಇಂತಹವುಗಳಲ್ಲೆಲ್ಲ ಅವರು ತಮ್ಮ ಪೂರ್ವಿಕರ ಹಿಂದುಜೀವನ ವಿಧಾನವನ್ನು ಸ್ವೀಕರಿಸಲಿ ಎಂಬುದಷ್ಟೇ ನಮ್ಮ ಕರೆ, ಪ್ರಾರ್ಥನೆ.
ಒಂದೇ ಸಂಸ್ಕೃತಿ ಮತ್ತು ಪರಂಪರೆ, ಒಂದೇ ಚರಿತ್ರೆ ಮತ್ತು ಸಂಪ್ರದಾಯಗಳು, ಒಂದೇ ಆದರ್ಶಗಳು ಮತ್ತು ಆಕಾಂಕ್ಷೆಗಳು, ಇವುಗಳಿಂದ ಜನಿಸಿದ ಒಂದೇ ರಾಷ್ಟ್ರವಾಹಿನಿಯ ತೀಕ್ಷ್ಣ ಪ್ರಜ್ಞೆ ಇದೇ ನಮ್ಮ ರಾಷ್ಟ್ರಸೌಧದ ಅಡಿಬಂಡೆ!

ಈ ನಾಡಿನ ಒಳಗಿನ ಅಪಾಯಗಳೆಂದು ಇವರು ಬಗೆದಿರುವುದು ಮೂರನ್ನು. ಮೊದಲನೆಯದು ಮುಸ್ಲಿಮರು, ಎರಡನೆಯದು ಕ್ರೈಸ್ತರು ಮತ್ತು ಮೂರನೆಯದು ಕಮ್ಯುನಿಸ್ಟರು! ಹೀಗೆಂಬ ಮೂರು ಬೇರೆಬೇರೆ ಅಧ್ಯಾಯಗಳೇ ಈ ಪುಸ್ತಕದಲ್ಲಿದೆ. ಇದೇ ಇಂದಿಗೂ ಸಂಘದ ನಿಲುವಾಗಿದೆಯೇ ?

ಆರೆಸ್ಸೆಸ್ ಮತ್ತು ಕರ್ನಾಟಕ 


ಇಂತಹ ನಿಲುವುಗಳ ಸಂಘವು ಕರ್ನಾಟಕದಲ್ಲಿ ತನ್ನ ಬೇರುಗಳನ್ನು ಗಟ್ಟಿ ಮಾಡಿಕೊಂಡಷ್ಟೂ ಕನ್ನಡ ಕನ್ನಡಿಗ ಕರ್ನಾಟಕಗಳ ಅಸ್ತಿತ್ವಕ್ಕೇ ಎರವಾದೀತು. ಏಕೆಂದರೆ ನಾಡಿನ ಆಡಳಿತದಲ್ಲಿ ಭಾಷೆಯಾಗಿ ಕನ್ನಡಕ್ಕಿಂತಾ ಹಿಂದೀಗೆ ಪ್ರಾಮುಖ್ಯತೆ. ನಾಡಾಗಿ ಒಗ್ಗೂಡಿದ ಕರ್ನಾಟಕಕ್ಕಿಂತಾ ಕನ್ನಡನಾಡನ್ನು ಪುಟ್ಟ ಪುಟ್ಟ ರಾಜ್ಯಗಳಾಗಿ ಒಡೆಯುವುದಕ್ಕೇ ಪ್ರಾಮುಖ್ಯತೆ ಮತ್ತು ಕನ್ನಡಿಗನಿಗಿಂತಾ ಕನ್ನಡಿಗರ ನಿಷ್ಠೆಯನ್ನೆಲ್ಲಾ ಧರ್ಮದ ಹೆಸರಲ್ಲಿ ಪುಟಕ್ಕಿಟ್ಟು ನೋಡುವುದಕ್ಕೆ ಪ್ರಾಮುಖ್ಯತೆ. ಕನ್ನಡಿಗ ಮುಸಲ್ಮಾನ, ಕನ್ನಡಿಗ ಕ್ರೈಸ್ತನಿಗಿಂತಾ ನಮಗೆ ಸಂಬಂಧವೇ ಇರದ ಹೊರನಾಡಿನ ಹಿಂದುವಿಗೆ ಪ್ರಾಮುಖ್ಯತೆ!


ಸಂಘ ನೇರವಾಗಿ ರಾಜಕೀಯಕ್ಕಿಳಿಯಲಿ !


ಇದೇ ಸಂಘದವರಿಗೆ ಬಿಜೆಪಿಯೆನ್ನುವ ಇನ್ನೊಂದು ಮುಖವಿದೆ. ಬಿಜೆಪಿಯೂ ಆರೆಸ್ಸೆಸ್ಸೂ ಒಂದೇ ಎನ್ನುವುದಕ್ಕೆ ಗಣವೇಶ ಧರಿಸಿದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳ ಫೋಟೋಗಳಿರುವುದೇ ಸಾಕು! ಈ ಮುಖವಾಡ ಧರಿಸಿದ ಪಕ್ಷದ ಸಿದ್ಧಾಂತ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತಾಡುತ್ತದೆ, ಕನ್ನಡ ಭಾಷೆಯ ಕನ್ನಡ ಸಂಸ್ಕೃತಿಯ ಉಳಿವಿನ ಬಗ್ಗೆ ಮಾತಾಡುತ್ತದೆ. ಮೀಸಲಾತಿಯ ಪರವಾಗಿ ಮಾತಾಡುತ್ತದೆ, ಚುನಾವಣೆ ಹತ್ತಿರ ಬಂದಾಗ, ಮುಸ್ಲಿಂರ ಮತಕ್ಕಾಗಿ ‘ಗೆದ್ದ ಮೇಲೆ ಮುಸ್ಲಿಂವೊಬ್ಬರನ್ನು ಮಂತ್ರಿ ಮಾಡುತ್ತೇನೆ’ ಎನ್ನುತ್ತಾ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುತ್ತದೆ... ಸಂಘವೇನೂ ಕಮ್ಮಿಯಿಲ್ಲ, ಬಿಜೆಪಿ ನಾಯಕರುಗಳಿಗೆ ಶಿಸ್ತಿನ ಪಾಠ ಹೇಳುತ್ತೆ, ಕೇಶವಶಿಲ್ಪಕ್ಕೆ ಕರೆಸಿ ಬುದ್ಧಿ ಹೇಳುತ್ತೆ. ತೆಪ್ಪಗಿರಲು ಆಜ್ಞೆ ಮಾಡುತ್ತದೆ...ವಿಪರ್ಯಾಸವೆಂದರೆ ಹೀಗೆ ಕೈಗೊಂಬೆಯಂತೆ ಆಡಾಡಿಸುತ್ತಲೇ ‘ಸೋನಿಯಾ ಗಾಂಧಿಯ ಕೈಗೊಂಬೆ ಕಾಂಗ್ರೆಸ್’ ಎನ್ನುವ ಆರೋಪವನ್ನೂ ಮಾಡುತ್ತದೆ. ಸಂಘ ಹೀಗೆ ಬಿಜೆಪಿಯ ಮೂಲಕ ತನ್ನ ಸಿದ್ಧಾಂತಗಳಿಗೆ ವಿರುದ್ಧವಾದುದನ್ನು ಹೇಳಿಸಿ, ಸೀಟು ಗೆಲ್ಲಿಸಿ, ಸರ್ಕಾರ ಮಾಡಿಸಿ, ಆಮೇಲೆ ತಮ್ಮ ಸಿದ್ಧಾಂತದ ಜಾರಿ ಮಾಡುವ ಮೋಸಗಾರಿಕೆಗಿಂತಾ ನೇರವಾಗಿ ತಾನೇ, ತನ್ನ ಸಿದ್ಧಾಂತಗಳನ್ನು ಚುನಾವಣಾ ಪ್ರಣಾಳಿಕೆ ಮಾಡಿಕೊಂಡು ರಾಜಕಾರಣಕ್ಕೆ ಇಳಿಯುವುದು ಪ್ರಾಮಾಣಿಕತೆಯೆನ್ನಿಸುತ್ತದೆ !

ಮಾತ್ಗವಿತೆ - 39


Monday, January 30, 2012

ಪ್ರಖರ ವಿದ್ವಾಂಸ ಎಲ್.ಬಸವರಾಜು ನಿಧನ

ಮೈಸೂರು: ಹಿರಿಯ ಸಾಹಿತಿ ಲಿಂಗಪ್ಪ ಬಸವರಾಜು (93) ಭಾನುವಾರ ರಾತ್ರಿ ಇಲ್ಲಿ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ಕೋಲಾರ ಜಿಲ್ಲೆ ಇಡಗೂರು ಗ್ರಾಮದವರಾದ ಅವರು 1919ರಲ್ಲಿ ಜನಿಸಿದ್ದರು. 40ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರು ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

1977ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, 1994ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2000ರಲ್ಲಿ ಭಾಷಾಂತರಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ, 2005ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾ ಸಮ್ಮಾನ್, ಬಸವ ಪುರಸ್ಕಾರ, ನಾಡೋಜ ಪ್ರಶಸ್ತಿ, ಪಂಪ ಪ್ರಸಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳಿಗೆ ಅವರು ಪಾತ್ರರಾಗಿದ್ದರು.


ಮೈಸೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 32 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಎಲ್.ಬಸವರಾಜು ಅವರು, ವಚನಗಳ ಸಂಶೋಧನೆ, ಗ್ರಂಥಸಂಪಾದನೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.


ಇಡಗೂರು, ಸಿದ್ದಗಂಗೆ ಮತ್ತು ಬೆಂಗಳೂರುಗಳಲ್ಲಿ ಹೈಸ್ಕೂಲುವರೆಗಿನ ಶಿಕ್ಷಣ ಪಡೆದ ನಂತರ ವಿಶೇಷ ವ್ಯಾಸಂಗಕ್ಕಾಗಿ ಮೈಸೂರಿಗೆ ತೆರಳಿದ ಎಲ್.ಬಸವರಾಜು, 1946 ರಲ್ಲಿ ಬಿಎ ಆನರ್ಸ್ ಮತ್ತು 1951 ರಲ್ಲಿ ಎಂ.ಎ. ಪದವಿ ಪಡೆದರು. ಸ್ವಲ್ಪ ಕಾಲ, ದಾವಣಗೆರೆ ಮತ್ತು ಮೈಸೂರಿನ ಯುವರಾಜ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನಂತರ, ಬಸವರಾಜು ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯನ್ನು ಸೇರಿದರು.(1967) 1979 ರಲ್ಲಿ ಸೇವೆಯಿಂದ ನಿವತ್ತರಾದರು.


ಎಲ್.ಬಸವರಾಜು ಅವರು ಗ್ರಂಥಸಂಪಾದನೆಯ ಕ್ಷೇತ್ರದಲ್ಲಿ, ಅನೇಕ ಹೊಸ ಆವಿಷ್ಕಾರಗಳನ್ನು ಮಾಡಿದ್ದಾರೆ; ವಿಶಿಷ್ಟವಾದ ದೃಷ್ಟಿಕೋನಗಳನ್ನು ಅಳವಡಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದ ಅಭಿಜಾತ ಕೃತಿಗಳು ಮತ್ತು ಜ್ಞಾನದ ಆಕರಗಳನ್ನು, ಪಂಡಿತರೇನೂ ಅಲ್ಲದ ಜನಸಾಮಾನ್ಯರ ಅಳವಿಗೆ ನಿಲುಕುವಂತೆ ನೀಡಬೇಕೆನ್ನುವುದೇ ಅವರ ಗುರಿ.


ಆದ್ದರಿಂದಲೇ ಅವರು ಅನೇಕ ಮಹಾಕಾವ್ಯಗಳ ಸರಳವಾದ ಗದ್ಯರೂಪಗಳನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಪ್ರಾಚೀನ ಕಾವ್ಯಗಳಲ್ಲಿ ಬರುವ ಪದ್ಯಗಳನ್ನು, ಬಿಡಿ ಪದಗಳಾಗಿ ಒಡೆದು, ಗದ್ಯಸಮೀಪವಾದ ವಾಕ್ಯರಚನೆಯಲ್ಲಿ ಮರುಜೋಡಣೆ ಮಾಡುವ ಪ್ರಯತ್ನವನ್ನೂ ಅವರು ಮಾಡಿದ್ದಾರೆ. ಅಗತ್ಯವಿರುವ ಕಡೆಗೆ ಸೂಕ್ತವಾದ ಲೇಖನಚಿಹ್ನೆಗಳನ್ನು ಕೊಟ್ಟಿದ್ದಾರೆ.
ಈ ರೀತಿಯ ಪ್ರಯೋಗಗಳಲ್ಲಿ ತೊಡಗಿಕೊಳ್ಳುವುದಕ್ಕಿಂತ ಮುಂಚಿತವಾಗಿಯೂ ಅವರು ಪರಿಶ್ರಮ ವಹಿಸಿ ಗ್ರಂಥಸಂಪಾದನೆ ಮಾಡಿದ್ದರು. ಓಲೆಗರಿಗಳು ಮತ್ತು ಕಾಗದದ ಹಸ್ತಪ್ರತಿಗಳ ನೆರವಿನಿಂದ ಮೂಲಪಠ್ಯವನ್ನು ಗುರುತಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಬಸವರಾಜು ಅವರು ಸಂಪಾದನೆ ಮಾಡಹೊರಡುವ ಕತಿಗಳ ಆಯ್ಕೆಯಲ್ಲಿ ಜಾತ್ಯತೀತವಾದ ಧೋರಣೆಯನ್ನು ಹೊಂದಿದ್ದಾರೆ.

`ಆದಿಪುರಾಣ`ದಂತಹ ಜೈನ ಕೃತಿ, `ಬುದ್ಧಚರಿತ`ದಂತಹ ಬೌದ್ಧಕೃತಿ, `ತೊರವೆಯ ರಾಮಾಯಣ`, `ಶಬ್ದಮಣಿದರ್ಪಣ` ಯಾವುದೂ ಅವರ ಅನಾದರಕ್ಕೆ ಗುರಿಯಾಗಿಲ್ಲ. ತಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ ಮಂಡಿಸಲು ಅವರು ಯಾವಾಗಲೂ ಹಿಂಜರಿದಿಲ್ಲ.


`ಬಸವೇಶ್ವರರ ವಚನಗಳು` `ಅಲ್ಲಮನ ವಚನಚಂದ್ರಿಕೆ`  `ಶಿವದಾಸ ಗೀತಾಂಜಲಿ`,     `ಬಸವ ವಚನಾಮೃತ`,  `ಅಕ್ಕನ ವಚನಗಳು`, `ಅಲ್ಲಮನ ವಚನಗಳು` ಇವು ಬಸವರಾಜು ಅವರು ಸಂಪಾದಿಸಿರುವ ಕೆಲವು ಪ್ರಮುಖ ಗ್ರಂಥಗಳು.
ಕೃಪೆ : ಪ್ರಜಾವಾಣಿ 

ಕನ್ನಡ ಸಾಹಿತ್ಯ ಸಂಪತ್ತು ಎಲ್ ಬಸವರಾಜು ಇನ್ನಿಲ್ಲ

ಎಲ್ ಬಸವರಾಜು ನೆನಪಿನಲ್ಲಿ ಅವರು ಬಿ.ಎಸ್. ನಾರಾಯಣಸ್ವಾಮಿಯವರೊಂದಿಗಿನ ಸಂದರ್ಶನ ಇಲ್ಲಿದೆ :
“ಬರಿಮಾತಿನ ಸಾಹಿತಿ, ಸ್ವಾಮೀಜಿ, ರಾಜಕಾರಣಿಗಳಿಂದ ದೇಶ ಹಾಳು”ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಲ್. ಬಸವರಾಜು ಅವರು ಆಯ್ಕೆಯಾದ ಕೂಡಲೇ ಅದುವರೆಗಿದ್ದ ವಿವಾದದ ಹೊಗೆಯೆಲ್ಲವೂ ಒಮ್ಮೆಗೇ ಮಾಯವಾಯಿತು. ಆ ಸ್ಥಾನಕ್ಕೆ ಪ್ರೊಫೆಸರ್ ಎಲ್‌ಬಿ ಅಷ್ಟು ಸೂಕ್ತರು ಹಾಗೂ ವಿವಾದಾತೀತರು. 90ರ ಹರೆಯದಲ್ಲೂ ಗ್ರಂಥ ಸಂಪಾದನೆ ಮತ್ತು ಸೃಜನಶೀಲ ಸಾಹಿತ್ಯದ ಸಹವಾಸದಿಂದ ಅವರು ದೂರವಾಗಿಲ್ಲ. ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಎಲ್‌ಬಿ ಅವರೊಂದಿಗೆ ಬಿ.ಎಸ್. ನಾರಾಯಣಸ್ವಾಮಿ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನೀವು ಬಹು ಹಿಂದೆಯೇ ಆಯ್ಕೆಯಾಗಬೇಕಿತ್ತು.
ಇದೀಗ ನಾಡೋಜ ಪ್ರಶಸ್ತಿಯೂ ಸಂದಿದೆ. ಈ ಬಗ್ಗೆ…?
ಈ ಪ್ರಶಸ್ತಿಗಳೆಲ್ಲಾ ನಮ್ಮೊಳಗಿನ ಅಹಂಕಾರವನ್ನು ತೃಪ್ತಿಪಡಿಸುತ್ತವೆ ಅಷ್ಟೆ. ಪ್ರಶಸ್ತಿ, ಪದವಿಯನ್ನೆಲ್ಲಾ ನಾನು ಯಾವತ್ತೂ ನಿರೀಕ್ಷಿಸಿದವನಲ್ಲ; ಅದಕ್ಕಾಗಿ ಕೆಲಸ ಮಾಡಿದವನಲ್ಲ. ಗ್ರಂಥ ಸಂಪಾದನೆ ಮತ್ತು ಸೃಜನಶೀಲ ಬರಹಗಳೆರಡರಲ್ಲೂ ತೊಡಗಿಸಿಕೊಂಡಿದ್ದೀರಿ. ನಿಮಗೆ ಖುಷಿ ಕೊಟ್ಟಿದ್ದು…ಗ್ರಂಥ ಸಂಪಾದನೆ ಇರಲಿ, ಸೃಜನಶೀಲ ಬರವಣಿಗೆ ಇರಲಿ ಎರಡನ್ನೂ ಖುಷಿಯಿಂದಲೇ ಮಾಡಿದ್ದೀನಿ ಅಂತ ಹೇಳಬಲ್ಲೆ. ಈಗ ತಿರುಗಿ ನೋಡಿದರೆ ಇವನ್ನೆಲ್ಲಾ ಬರೆದದ್ದು ನಾನೇನಾ ಅನಿಸುತ್ತದೆ. ನಾನು ಬರೆದಿಲ್ಲ; ಯಾವುದೋ ಶಕ್ತಿ ನನ್ನ ಕೈಯಿಂದ ಬರೆಸಿತು ಅನ್ನುವುದೇ ನಿಜ. ಏನೇ ಮಾಡಿದರೂ ಆ ಒಂದು ಆವೇಶದಿಂದ, ಮನಃಪೂರ್ವಕವಾಗಿ ಮಾಡಬೇಕು. ಇಲ್ಲದೇ ಹೋದರೆ ಅದು ಕೂಲಿ ಕೆಲಸ ಆಗುತ್ತದೆ.
ಗ್ರಂಥ ಸಂಪಾದನೆಯತ್ತ ನಿಮ್ಮ ಒಲವು ಹರಿದಿದ್ದು ಹೇಗೆ?

ನಾನು ವಿದ್ಯಾರ್ಥಿ ದೆಸೆಯಲ್ಲಿ ನಮ್ಮ ಪ್ರಾಚೀನ ಪಠ್ಯಗಳನ್ನು ಓದುತ್ತಾ, ಅರ್ಥ ಮಾಡಿಕೊಳ್ಳುತ್ತಿದ್ದಾಗ ಕೆಲವು ಕಡೆ ಏನೋ ತಪ್ಪಿದೆ; ಅರ್ಥ ಸರಿ ಬರುತ್ತಿಲ್ಲಾ ಎನಿಸುತ್ತಿತ್ತು. ಇದನ್ನು ನಮ್ಮ ಗುರುಗಳಿಗೂ ಹೇಳುತ್ತಿದ್ದೆ. ಅವರೂ ಕೂಡಾ ನನ್ನ ಹಾಗೇ ಅಭಿಪ್ರಾಯಪಡುತ್ತಿದ್ದರು. ಆನಂತರ ಪ್ರಾಚೀನ ಕೃತಿಯೊಂದರ ಹಲವು ಪಠ್ಯಗಳನ್ನು ಓದಿ ಯಾವುದು ಸರಿ ಎಂದು ನಿರ್ಣಯಿಸುವುದೇ ನನಗೆ ಒಂದು ಹವ್ಯಾಸವಾಗಿ ಹೋಯಿತು. ಹೀಗಾಗಿ ಗ್ರಂಥ ಸಂಪಾದನೆಯತ್ತ ನನ್ನನ್ನು ತೊಡಗಿಸಿಕೊಂಡೆ. ಮೇಲಾಗಿ ನಮ್ಮ ಪ್ರಾಚೀನ ಕೃತಿಗಳಲ್ಲಿ ಸಾಕಷ್ಟು ಪ್ರಕ್ಷೇಪಗಳಿವೆ. ಕೃತಿಯ ಉದ್ದೇಶವೇ ಮರೆಯಾಗಿ ಹೋಗುವಂತಹ ಪ್ರಕ್ಷೇಪಗಳಾಗಿವೆ. ಬಸವಣ್ಣನವರದಲ್ಲದ ಹಲವು ವಚನಗಳು ಅವರ ಅಂಕಿತನಾಮದಿಂದ ಪ್ರಕಟವಾಗಿದ್ದವು. ನಾನು ಅವನ್ನೆಲ್ಲಾ ಸ್ಥೂಲವಾಗಿ ಅಧ್ಯಯನ ಮಾಡಿ ಇವು ಬಸವಣ್ಣ ಅವರದಲ್ಲ ಎಂದು ಹೇಳಿದೆ. ಹೀಗೆ ಹೇಳಿದ್ದಕ್ಕೆ ಹಲವು ವಿರೋಧಗಳೂ ಬಂದವು. ಇನ್ನು ‘ಶೂನ್ಯಸಂಪಾದನೆ’ಯಂತಹ ಕೃತಿಗಳು ಬಹಳಷ್ಟು ಕಾಲ ಕೃತಿಕಾರನ ಹೆಸರಿನ ಬದಲಿಗೆ ಯಾರ್‍ಯಾರದೋ ಹೆಸರಿನಲ್ಲಿ ಪ್ರಕಟಗೊಳ್ಳುತ್ತಿತ್ತು. ಇಂತಹ ‘ಕಳ್ಳತನ’ದಲ್ಲಿ ಹಲವು ಮಠಗಳು, ಸ್ವಾಮೀಜಿಗಳೂ ಪಾಲ್ಗೊಂಡಿದ್ದು ಬೇಸರ ತರುವ ವಿಷಯ.
ಪ್ರಾಚೀನ ಕೃತಿಗಳು ಇಂದಿನ ಕಾಲಕ್ಕೆ ಎಷ್ಟು ಪ್ರಸ್ತುತ?
ಪ್ರಾಚೀನ ಕೃತಿಗಳಲ್ಲಿ ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವ ಗಟ್ಟಿ ಕೃತಿಗಳೇ ಈಗಲೂ ಉಳಿದಿರುವುದು. ಅವು ಇಂದಿಗೂ ಪ್ರಸ್ತುತ. ಪಂಪ, ರನ್ನ, ಬಸವಾದಿ ಶರಣರು… ಅವರೆಲ್ಲಾ ಎಂಥಾ ನೀತಿ ಹೇಳಿದ್ದಾರೆ? ಆದರೆ ಅವುಗಳನ್ನೆಲ್ಲಾ ಈಗಿನವರು ಓದಬೇಕಲ್ಲಾ… ಓದಿ ಅದರಂತೆ ನಡೆಯಬೇಕಲ್ಲಾ… ರನ್ನನ ಒಂದು ಕಂದ ಪದ್ಯ ಹೀಗಿದೆ: ‘ಶ್ರೀಯುತನೊಳುದಾರತೆ, ವಾಕ್‌ಶ್ರೀಯುತನೊಳಮತ್ಸರತ್ವಂ ಆಗದು…’ ಅಂದರೆ ಶ್ರೀಮಂತರಲ್ಲಿ ಉದಾರತೆಯೂ, ಕವಿ-ಸಾಹಿತಿಗಳಲ್ಲಿ ಅಮತ್ಸರವೂ (ಪ್ರೀತಿ) ಇರುವುದಿಲ್ಲ. ಅದರ ಬದಲು ಉದಾರವಂತನೇ ಶ್ರೀಮಂತನಾಗಿ, ಅಮತ್ಸರನು ಕವಿಯಾದರೆ ಎಷ್ಟು ಚೆನ್ನ ಎನ್ನುತ್ತಾನೆ ರನ್ನ. ಇದು ಈಗಲೂ ಎಷ್ಟು ನಿಜ ನೋಡಿ. ನಮ್ಮ ಸಾಹಿತ್ಯವಲಯದಲ್ಲಿ ಎಷ್ಟು ಮತ್ಸರ ಇದೆ ಗೊತ್ತಲ್ಲ! ಇಂದಿನವರು ಹಿರಿಯರ ನೀತಿಯನ್ನು ಪಾಲಿಸುವುದಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ವೈದಿಕ ಧರ್ಮಕ್ಕೆ ಪ್ರತಿಯಾಗಿ ಸಮಾಜ ಸುಧಾರಣೆಯಾಗುವಂತಹ ಕಾಯಕ ಧರ್ಮವನ್ನು ಬೋಧಿಸಿದ. ಅದು ಜಾತಿರಹಿತ ಧರ್ಮ. ಆದರೆ ಈಗ ಬಸವನ ಅನುಯಾಯಿ ಎಂದುಕೊಳ್ಳುವವರು ‘ಬ್ರಾಹ್ಮಣ’ರಾಗಲು ಹೊರಟಿದ್ದಾರೆ; ಜಾತಿ ರಾಜಕೀಯದಲ್ಲೇ ತೊಡಗಿದ್ದಾರೆ.
ಹಾಗಿದ್ದರೆ ಈಗಿನ ಸಾಹಿತ್ಯದ ಜಾಡು ಎತ್ತ ಸಾಗುತ್ತಿದೆ?
ಈಗಿನ ಸಾಹಿತ್ಯವೇ? ಅದೇ ನೋಡಿ, ಯಾರಿಗೆ ಅಕಾಡೆಮಿ ಪ್ರಶಸ್ತಿ ಬಂತು, ಯಾರಿಗೆ ಪಂಪ ಪ್ರಶಸ್ತಿ ಬಂತು, ನಾಡೋಜ ಬಂತು; ತನಗೆ ಬರಲಿಲ್ಲ… ಎಂಬ ಮತ್ಸರದಲ್ಲಿ ತೊಡಗಿದೆ ಅಷ್ಟೇ. ನನಗೆ ಪ್ರಶಸ್ತಿ ಬಂತು ಅಂತ ನಾನು ಉಳಿದವರ ಬಗ್ಗೆ ತಿರಸ್ಕಾರದಿಂದ ಈ ಮಾತು ಹೇಳುತ್ತಿಲ್ಲ. ಆದರೆ ವಾಸ್ತವ ಹೀಗಿದೆ. ಸಾಹಿತ್ಯ ಎನ್ನುವುದು ಸತ್ಕ್ರಿಯೆಗೆ ಪ್ರೇರೇಪಣೆ ನೀಡಬೇಕು. ಅಂದರೆ ಒಂದು ರೀತಿಯಲ್ಲಿ ದೀಪದಿಂದ ದೀಪ ಹಚ್ಚುವ ಕೆಲಸ ಮಾಡಬೇಕು. ಆದರೆ ಇವತ್ತು ಸಾಹಿತಿಗಳು ಬರೀ ಮಾತನಾಡುತ್ತಿದ್ದಾರೆಯೇ ವಿನಾ ಕೆಲಸ ಮಾಡುತ್ತಿಲ್ಲ. ಇವತ್ತಿನ ಜ್ವಲಂತ ಸಮಸ್ಯೆಗಳಿಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಸಾಹಿತ್ಯ ಸಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವಂಥ ಕೃತಿಗಳು ಬರುತ್ತಿಲ್ಲ. ಸಾಮಾನ್ಯವಾಗಿ ಬರೆಯುವವರು, ಸಾಹಿತಿಗಳನ್ನು ಜನ ಮಹಾತ್ಮ ಎಂದೇ ತಿಳಿಯುತ್ತಾರೆ. ಆದರೆ ಆತ ಮಹಾತ್ಮನೇನೂ ಆಗಿರುವುದಿಲ್ಲ. ಅವನಲ್ಲೂ ಎಲ್ಲರಂತೆ ಓರೆ-ಕೋರೆಗಳು ಇರುತ್ತವೆ. ಯುರೋಪ್‌ನಲ್ಲಿ ಇಂಗ್ಲೆಂಡ್-ಫ್ರೆಂಚ್ ಯುದ್ಧದ ಸಂದರ್ಭದಲ್ಲಿ ವರ್ಡ್ಸ್‌ವರ್ತ್ ಕವಿ ತನ್ನ ದೇಶದ ಬಗ್ಗೆ ಬಹಳ ಅಭಿಮಾನದಿಂದ ಬರೆದ. ಆದರೆ ಅದೇ ವೇಳೆ ಅವನ ದೇಶದ ಜನ ಭಾರತದಲ್ಲಿ ಶೋಷಣೆ ಮಾಡುತ್ತಿದ್ದಾಗ ಅದರ ಬಗ್ಗೆ ಚಕಾರ ಎತ್ತಲಿಲ್ಲ. ಹೀಗಾಗಿ ಕವಿಗಳೆಲ್ಲಾ ಮಹಾತ್ಮರೇನಲ್ಲ. ಇಂದು ಎಲ್ಲಾ ಕ್ಷೇತ್ರ ಹೊಲಸಾದ ಹಾಗೆ ಸಾಹಿತ್ಯವಲಯ ಕೂಡಾ ಹೊಲಸಾಗಿಬಿಟ್ಟಿದೆ. ನನಗಂತೂ ಯಾವುದೇ ಆಶಾವಾದ ಕಾಣುತ್ತಿಲ್ಲ. ಇವತ್ತು ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಸಾಹಿತಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗಬಹುದು.
ಸಾಹಿತ್ಯ ಸಮ್ಮೇಳನಗಳು ಕೂಡಾ ವಿವಾದಗಳಿಂದ ಹೊರತಾಗುತ್ತಿಲ್ಲ…
ಅದೇ ನಾನು ಹೇಳಿದೆನಲ್ಲಾ. ಇವತ್ತು ದುಡ್ಡು, ದುರಹಂಕಾರ, ದುರಾಡಳಿತ ಇವುಗಳಿಂದ ಎಲ್ಲಾ ಕ್ಷೇತ್ರಗಳೂ ಹೊಲಸಾಗುತ್ತಿವೆ. ಸಾಹಿತ್ಯ ವಲಯ ಕೂಡಾ ತಪ್ಪು ದಾರಿಯಲ್ಲಿ ಸಾಗುತ್ತಿದೆ. ನನಗೆ ಪರಮಾಶ್ಚರ್ಯ ಆಗುವಂಥ, ಆತಂಕಕಾರಿ ವಿಷಯ ಎಂದರೆ, ನಾವು ಪರಸ್ಪರ ಪ್ರೀತಿಸುತ್ತಲೇ ಇಲ್ಲ. ಬರೀ ದ್ವೇಷ ತುಂಬಿದೆ. ಪ್ರಾಯಶಃ ಯಾವ ದೇಶದಲ್ಲಿಯೂ ಇಷ್ಟೊಂದು ದ್ವೇಷ, ಕಚ್ಚಾಟ ಇಲ್ಲ ಎನಿಸುತ್ತೆ. ದ್ವೇಷ ಮಾಡುವುದೇ ನಮ್ಮ ಸಂಸ್ಕೃತಿಯಾ ಎಂಬ ಶಂಕೆ ಮೂಡಿಬಿಟ್ಟಿದೆ ನನಗೆ.ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ಕೂಡಾ ಕೇವಲ ನೆಪಮಾತ್ರಕ್ಕೆ ಎನಿಸಿಬಿಟ್ಟಿವೆ. ಅವುಗಳಿಗೆ ಏನಾದರೂ ಅರ್ಥ ಇದೆ ಎನ್ನುತ್ತೀರಾ?ನಮ್ಮ ಭಾಷೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸರ್ಕಾರ ನಿರ್ಣಯ ಕೈಗೊಳ್ಳಬೇಕು. ಆದರೆ ಅದು ಯಾವುದೇ ನಿರ್ಣಯ ಕೈಗೊಳ್ಳುತ್ತಿಲ್ಲ. ಹೀಗಾಗಿ ನಾವು ಕೈಗೊಳ್ಳಬೇಕಿದೆ. ಇದು ಒಂದು ರೀತಿ ಬಾಯಿ ಬಡಿದುಕೊಳ್ಳುವ ಕೆಲಸ, ಅಷ್ಟೇ.
ಶಾಸ್ತ್ರೀಯ ಸ್ಥಾನ-ಮಾನ ಸಿಕ್ಕ ಹಿನ್ನೆಲೆಯಲ್ಲಿ ಕನ್ನಡಕ್ಕೆ ಈಗ ಆಗಬೇಕಾದ ಕೆಲಸಗಳೇನು?
ಪ್ರಾಚೀನ ಸಾಹಿತ್ಯ ಮತ್ತು ಜನಪದ ಸಾಹಿತ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸಂಶೋಧನಾ ಕ್ಷೇತ್ರಕ್ಕೆ ನೆರವು ನೀಡಬೇಕು. ಅದಿರಲಿ. ಈ ಶಾಸ್ತ್ರೀಯ ಸ್ಥಾನ-ಮಾನ ಗಳಿಸಿಕೊಳ್ಳೋದಕ್ಕೆ ಎಷ್ಟೆಲ್ಲಾ ಹೋರಾಡಬೇಕಾಯಿತು ನೋಡಿ. ಅದೂ 90ರ ಅಂಚಿನಲ್ಲಿರುವ ದೇಜಗೌ ಅವರಂತಹ ಹಿರಿಯರು ಉಪವಾಸ ಮಾಡಬೇಕಾಯಿತು. ಆದರೆ ಕೇಂದ್ರ ಸರ್ಕಾರ ಕೊಡೋ ದುಡ್ಡಿನಿಂದಲೇ ಕನ್ನಡ ಭಾಷೆ ಅಭಿವೃದ್ಧಿ ಆಗಬೇಕೆ? ಏಕೆ, ರಾಜ್ಯ ಸರ್ಕಾರದ ಬಳಿ ದುಡ್ಡು ಇರಲಿಲ್ಲವೇ? ನಮ್ಮ ಭಾಷೆಯನ್ನು ನಾವೇ ಪ್ರೀತಿಸುತ್ತಿಲ್ಲ; ಮನುಷ್ಯ ಸ್ವಭಾವ ಎಷ್ಟು ವಿಚಿತ್ರ ನೋಡಿ. ನಮ್ಮ ಭಾಷೆಯನ್ನು ಉದ್ಧಾರ ಮಾಡೋದಕ್ಕೆ ನಮಗೇ ಮನಸಿಲ್ಲ!ಈಗಿನ ಭಯೋತ್ಪಾದನೆ ಜಾಗತಿಕ ಸಮುದಾಯದ ಮೇಲೆ ಒಡ್ಡಿರುವ ಸವಾಲಿಗೆ ಸಾಹಿತ್ಯ ಹೇಗೆ ಪ್ರತಿಕ್ರಿಯಿಸಬೇಕು?ಎಲ್ಲಿ ಮಹಾಕವಿ ವಿಫಲನಾಗುತ್ತಾನೋ ಅಲ್ಲಿ ಭಯೋತ್ಪಾದನೆ ದೈತ್ಯ ಸ್ವರೂಪ ತಾಳುತ್ತದೆ. ಇವತ್ತು ಮಹಾಕವಿ ವಿಫಲನಾಗಿದ್ದಾನೆ. ಎಲ್ಲಕ್ಕೂ ದ್ವೇಷವೇ ಮೂಲ ಆಗಿದೆ. ತಾನು ಒಂದು ಧರ್ಮ ಅನುಸರಿಸುತ್ತಿದ್ದೇನೆಂದರೆ ಮತ್ತೊಂದು ಧರ್ಮವನ್ನು ವಿರೋಧಿಸಬೇಕು, ದ್ವೇಷಿಸಬೇಕು ಎಂದು ಅರ್ಥವಲ್ಲ. ಪರಸ್ಪರ ಪ್ರೀತಿ, ಸೌಹಾರ್ದವನ್ನು ನಮ್ಮ ಹಿಂದಿನವರು ಹೇಳುತ್ತಲೇ ಬಂದಿದ್ದಾರೆ. ಆದರೆ ಕೇಳುವವರಿಲ್ಲ ಅಷ್ಟೇ. ಧರ್ಮವನ್ನು ಹೊಡೆದಾಟಕ್ಕೆ ಬಳಸಿಕೊಳ್ಳಲಾಗ್ತಿದೆ. ಆಡಳಿತ ಕೂಡಾ ಇದಕ್ಕೆ ಕುಮ್ಮಕ್ಕು ಕೊಡ್ತಿದೆ. ಪಾಕಿಸ್ತಾನದಲ್ಲಿ ಆಗುತ್ತಿರುವುದು ಇದೇ. ಹಿಂದೆ ಜೈನ, ವೈಷ್ಣವ ಮತ್ತು ಶೈವರ ನಡುವೆ ಕಿತ್ತಾಟ, ಜಗಳಗಳು ನಡೆದಿವೆ. ಅಂದರೆ ಪರಸ್ಪರ ದ್ವೇಷವೇ ಮನುಷ್ಯನ ಸಂಸ್ಕೃತಿ ಎನಿಸಿಬಿಟ್ಟಿದೆ. ಇದಕ್ಕೆ ಸಣ್ಣ ನೆಪಗಳು ಸಿಕ್ಕರೂ ಸಾಕು. ಬೇಸರದ ವಿಷಯ ಅಂದರೆ ಎಳೆಯ ಮಕ್ಕಳ ಮನಸ್ಸನ್ನು ತಿದ್ದುವಂಥ ಶಿಕ್ಷಕರು, ಅಧ್ಯಾಪಕರು ಬಹುಮಂದಿ ಇಲ್ಲ. ಶಿಕ್ಷಣ ವ್ಯವಸ್ಥೆ ಕೂಡಾ ಹಾಳಾಗಿದೆ. ಮನುಷ್ಯನ ಮನಸ್ಸು ಸಾತ್ವಿಕತೆ ಕಡೆ ಸಾಗಲು ಬೇಕಾದ ತಯಾರಿ ಕೂಡಾ ಇಲ್ಲದಂತಾಗಿದೆ. ವಿದ್ಯಾಭ್ಯಾಸವನ್ನೇ ಖಾಸಗೀಕರಣ ಮಾಡಿಬಿಟ್ಟಿದ್ದಾರೆ. ಅಂದರೆ ವಿದ್ಯೆಯನ್ನು ಶ್ರಮಪಟ್ಟು ಗಳಿಸುವುದಲ್ಲ; ಬದಲಿಗೆ ದುಡ್ಡುಕೊಟ್ಟು ಖರೀದಿಸುವಂಥ ಪರಿಸ್ಥಿತಿ ಇದೆ. ಹೀಗಾಗಿ ಮುಂದಿನ ಪೀಳಿಗೆ ಬಗ್ಗೆ ಯಾವುದೇ ಆಶಾವಾದ ಇಟ್ಟುಕೊಳ್ಳದಂಥ ಪರಿಸ್ಥಿತಿ ಇದೆ. ಇದನ್ನು ಹೇಗೆ ಉತ್ತಮಪಡಿಸುವುದು, ನನಗಂತೂ ಗೊತ್ತಾಗುತ್ತಿಲ್ಲ.
ನಿಮ್ಮ ಮುಂದಿನ ಬರವಣಿಗೆ?
ಪಂಪನ ‘ವಿಕ್ರಮಾರ್ಜುನ ವಿಜಯಂ’ ಕಾವ್ಯವನ್ನು ಮೂಲ ಮಹಾಭಾರತದೊಡನೆ ತುಲನೆ ಮಾಡಿ ಬರೆದ ಕೃತಿ ಅಚ್ಚಿನಲ್ಲಿದೆ. ಬಸವಣ್ಣನವರ ವಚನಗಳು ಈ ಕಾಲಕ್ಕೆ ಹೇಗೆ ಪ್ರಸ್ತುತವಾಗಿವೆ ಎಂಬುದರ ಬಗೆಗಿನ ವಿಮರ್ಶಾ ಕೃತಿಯೂ ಸದ್ಯವೇ ಪ್ರಕಟಗೊಳ್ಳಲಿದೆ. ಸದ್ಯಕ್ಕೆ ಈ ಎರಡು ಕೃತಿಗಳು ಬರಲಿವೆ. ಈಗಿನ ದೇಹಪ್ರಕೃತಿಯಲ್ಲಿ ಮುಂಚಿನ ಹಾಗೆ ಬರೆಯಲು ಸಾಧ್ಯವಾಗುವುದಿಲ್ಲ.ಯುವ ಜನಾಂಗಕ್ಕೆ, ಯುವ ಬರಹಗಾರರಿಗೆ ನಿಮ್ಮ ಕಿವಿಮಾತು ಏನು?ನಾನು ಆಗಲೇ ಹೇಳಿದೆನಲ್ಲಾ, ಕಿವಿಮಾತು ಹೇಳಿದರೆ ಅದನ್ನು ಕೇಳುವವರು ಯಾರು? ನಮ್ಮ ಪ್ರಾಚೀನರೇ ಎಲ್ಲಾ ಹೇಳಿದ್ದಾರೆ. ಆದರೆ ಅನುಸರಿಸುವವರಿಲ್ಲ ಅಷ್ಟೇ. ನಮ್ಮ ದೇಶ, ಸಂಸ್ಕೃತಿಯನ್ನು ನಾನು ತುಂಬಾ ಬೈಯುತ್ತಿದ್ದೀನಿ ಅಂತ ನಿಮಗೆ ಅನಿಸುತ್ತಿದೆಯೇ? ಹಾಗೇನಾದರೂ ನಿಮಗೆ ಅನಿಸಿದ್ದರೆ ನಾನು ವಿವೇಕಸ್ಥ ಅಂತ ಅರ್ಥ!
(ಕೃಪೆ: ಸಂಡೇ ಇಂಡಿಯನ್)

Thursday, January 26, 2012

ಅಣ್ಣಾ ಹಝಾರೆ ಹಿಟ್ಲರ್ ಆಗುತ್ತಿಲ್ಲ ತಾನೆ ?

ಭ್ರಷ್ಟಾಚಾರ ಮೇರೆ ಮೀರಿದಾಗ ಸಹನೆ ಕಳೆದುಕೊಳ್ಳುವ ಯಾವುದೇ ವ್ಯಕ್ತಿಗೆ ಕಪಾಳಮೋಕ್ಷ ನಡೆಸದೇ ಬೇರೆ ವಿಧಿಯಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬುಧವಾರ ಗುಡುಗಿದ ಸುದ್ಧಿ ಪ್ರಜಾವಾಣಿ ಪತ್ರಿಕೆಯಲ್ಲಿದೆ.
ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಗೆ ಯುವಕನೊಬ್ಬ ಈಚೆಗೆ ಕಪಾಳಮೋಕ್ಷ ಮಾಡಿದ್ದ ಸಂದರ್ಭದಲ್ಲಿ `ಕೇವಲ ಒಂದೇ ಏಟು ಬಿತ್ತೇ` ಎಂದು ಪ್ರಶ್ನಿಸಿ ವಿವಾದಕ್ಕೆ ಕಾರಣವಾಗಿದ್ದ ಹಝಾರೆಯ ಈ ಹೇಳಿಕೆ ಈಗ ಇನ್ನೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಭ್ರಷ್ಟಾಚಾರ ವಿರುದ್ಧದ ಜನಸಾಮಾನ್ಯನ ಹಕ್ಕುಗಳ ವಿವರ ಒಳಗೊಂಡ ಹಿಂದಿ ಚಲನಚಿತ್ರ `ಗಲಿ ಗಲಿ ಚೋರ್ ಹೈ` ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ, `ಜನರ ಸಹನೆಗೂ ಮಿತಿ ಇದೆ. ಸಹನೆ ಕಳೆದುಕೊಂಡ ಯಾರೇ ಆಗಲಿ, ಎದುರಿಗಿರುವವರ ಕಪಾಳಕ್ಕೆ ಹೊಡೆದಾಗಲೇ ಅವರ ಮೆದುಳಿಗೆ ಚುರುಕು ಮುಟ್ಟುವುದು. ಅದೇ ಈಗ ಉಳಿದಿರುವ ಮಾರ್ಗ` ಎಂದು ಪ್ರತಿಕ್ರಿಯಿಸಿದ್ದು ಅವರ ಸರ್ವಾಧಿಕಾರಿ ತೆವಲನ್ನು ಮನದಟ್ಟು ಮಾಡುವಂತಿದೆ.
ಅಣ್ಣಾ ಹಝಾರೆ ಟೋಳೀಯು ನೋಡಲೆಂದೇ ರಾಳೇ ಗಣಸಿದ್ಧಿಯಲ್ಲಿ ಚಲನಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.
ಹಝಾರೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಕಪಾಳಮೋಕ್ಷವನ್ನು ಸಮರ್ಥಿಸಿಕೊಂಡಿರುವ ಅಣ್ಣಾ ಹಜಾರೆ ತಮ್ಮನ್ನು ತಾವು ಗಾಂಧಿವಾದಿ ಎಂದು ಹೇಗೆ ಕರೆದುಕೊಳ್ಳುತ್ತಾರೆ? ಎಂದು ಪ್ರಶ್ನಿಸಿದೆ.
`ಇಷ್ಟೆಲ್ಲಾ ಅನುಭವವಿರುವ ವ್ಯಕ್ತಿಯೊಬ್ಬರು ಹಿಂಸೆಗೆ ಪ್ರಚೋದನೆ ನೀಡುತ್ತಿರುವುದು ದುರದೃಷ್ಟಕರ ಸಂಗತಿ. ಕಪಾಳಮೋಕ್ಷದಂತಹ ಸಂಗತಿ ಗಾಂಧಿ ತತ್ವಕ್ಕೆ ವಿರುದ್ಧವಾದುದು` ಎಂದು ಪಕ್ಷದ ವಕ್ತಾರೆ ರೇಣುಕಾ ಚೌಧರಿ ಟೀಕಾಪ್ರಹಾರ ನಡೆಸಿದರೆ, `ನಾನು ಅಣ್ಣಾ ಅವರನ್ನು ಇದುವರೆಗೆ ಗಾಂಧಿವಾದಿ ಎಂದೇ ಪರಿಗಣಿಸಿದ್ದೆ. ಆದರೆ ಹಿಂಸೆಗೆ ಕುಮ್ಮಕ್ಕು ನೀಡುವ ಇಂತಹ ಹೇಳಿಕೆಗಳಿಂದ ಅವರ ಮೇಲಿನ ಗೌರವ ಕಡಿಮೆಯಾಗಿದೆ. ಮಾತ್ರವಲ್ಲ, ಅಣ್ಣಾ ಸಂಘ ಪರಿವಾರದ ಜತೆ ಸೇರಿಕೊಂಡಿರುವುದನ್ನು ಈ ಮಾತುಗಳು ಧ್ವನಿಸುತ್ತವೆ. ಅವರ ಹೇಳಿಕೆಯನ್ನು ನಾನು ಖಂಡಿತಾ ವಿರೋಧಿಸುತ್ತೇನೆ` ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು  ಪ್ರತಿಕ್ರಿಯಿಸಿದ್ದಾರೆ.
`ಕಪಾಳ ಮೋಕ್ಷ ನಡೆಸುವುದಾಗಲಿ, ಬೂಟು ಎಸೆಯುವುದಾಗಲಿ ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು` ಎಂದು ಕೇಂದ್ರ ಸಚಿವ ಸಚಿನ್ ಪೈಲಟ್ ಅಭಿಪ್ರಾಯಪಟ್ಟಿದ್ದಾರೆ.
`ಅಣ್ಣಾ ಅವರ ಈ ಹೇಳಿಕೆಗೆ ಜನರೇ ತಕ್ಕ ಉತ್ತರ ನೀಡುತ್ತಾರೆ` ಎಂದು ಮಹಾರಾಷ್ಟ್ರ ಎನ್‌ಸಿಪಿ ಘಟಕದ ಮುಖ್ಯಸ್ಥ ಮಧುಕರ್ ಪಿಚಡ್ ಹೇಳಿದ್ದಾರೆ.
ಹಝಾರೆ ಮಾತುಗಳನ್ನು ಸೂಕ್ಷ್ಮವಾಗಿ ಅರಿಯಬೇಕು. ತಾನು ಹೇಳಿದಂತೆಯೇ ಎಲ್ಲರೂ ಕೇಳಬೇಕು ; ತಮ್ಮ ಮೂಲಕವೇ ಕಾನೂನು ರೂಪಿತವಾಗಬೇಕು ಎಂಬ ಧೋರಣೆ ಇಲ್ಲಿ ಕಂಡುಬರುತ್ತದೆ. ಈ ದೇಶದ ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿರುವ ಹಝಾರೆ ಟೋಳಿ ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ಗಂಡಾಂತರವನ್ನು ತರಬಹುದು. ಇದು ಸಾಮಾನ್ಯ ಜನರನ್ನು ಮತ್ತಷ್ಟು ಸಂಕಟಕ್ಕೀಡು ಮಾಡುತ್ತದೆ ಎಂಬುದನ್ನು ನಾವು ಮರೆಯಬಾರದು. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರು ಎಂದು ಹೇಳಿದ ಗಾಂಧಿಯ ಅಪರಾವತಾರದಂತೆ ಉಪವಾಸ-ಸತ್ಯಾಗ್ರಹ ಎಂಬ ಮುಖವಾಡ ಧರಿಸಿದ್ದ ಹಝಾರೆ ಟೋಳಿಯ ಬಣ್ಣ ಈಗ ಬದಲಾಗಿದೆ. ಸ್ವಾರ್ಥ ಮತ್ತು ಸ್ವಹಿತಾಸಕ್ತಿಗಳೇ ಅಲ್ಲೀಗ ತಾಂಡವಾಡುತ್ತಿವೆ. ಭಾರತಕ್ಕೆ ಹಿಟ್ಲರ್ ಬರುತ್ತಿದ್ದಾನೆ ಎಚ್ಚರ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.