Saturday, December 31, 2011

ಹೊಸ ವರ್ಷ ; ಒಂದು ದಿನದ ತೆವಲು ! (ಕವಿತೆ )

- ಡಾ. ಸಿದ್ರಾಮ ಕಾರಣಿಕ
(ಬಹಳ ವರ್ಷಗಳ ಹಿಂದೆ 1997-98 ರ ಆಸುಪಾಸಿನಲ್ಲಿ ಬರೆದ ಈ ಕವಿತೆ 2003 ರಲ್ಲಿ ಪ್ರಕಟವಾದ ನನ್ನ'ಮೋಡ ಕಟ್ಟೇತಿ' ಕವನ ಸಂಕಲನದಲ್ಲಿದೆ. ಅದನ್ನು ಯಥಾವತ್ತಾಗಿ ಇಲ್ಲಿ ನೀಡುತ್ತಿದ್ದೇನೆ.)
ಅಂಕಿ ಬದಲಾದೊಡೆ
ಅಂಕ ತಪ್ಪಿದ ಮಂಗನ ತೆರದಿ
ಜಿಗಿಯುವ ಚಪಲ ಯಾಕೋ ?

ಹಾಡು ಹಳೆಯದೇ
ರಾಗವೂ ಹಳೆಯದೇ
ಹೊಸ ಬಾಟ್ಲಿಯ ಹಳೇ ಸೆರೆ
ಕುಡ್ದು ಮತ್ತಿನ ಕುಣಿತ ಯಾಕೋ ?


ಅಂಕಿ ಬದಲಾದೊಡೆ
ಚಳಿಯಲಿ ನಡುಗಿ ಬಿಸಿಲಲಿ ಬೆಂದು
ಮಳೆಯಲಿ ತೋಯ್ದು ಚಿಪ್ಪಾಡಿಯಾಗೋ
ಫೂಟ್ ಪಾತವಾಸಿಗಳಿಗೆ
ಆಸರೆಯಾಗಿ ಸೂರು ಸಿಗುವುದೇ ?


ಅಂಕಿ ಬದಲಾದೊಡೆ
ಹೊಟ್ಟೆ ಹೊರೆದುಕೊಳ್ಳಲು
ಕಾಮಾಂಧರ ತೆಕ್ಕೆಯಲಿ
ಉಸಿರುಗಟ್ಟಿ ಸಾಯುವ ಸೂಳೆಯ
ಬಾಳು ಹಸನಾಗಬಲ್ಲದೇ ?


ಅಂಕಿ ಬದಲಾದೊಡೆ
ತುತ್ತಿಗಾಗಿ ದುಡಿದು ಕಮರುವ
ಕೂಸುಗಳ ಕನಸುಗಳು
ಹೂವಾಗಿ ಅರಳಿ ನಿಲ್ಲಬಹುದೇ ?

ಅಂಕಿ ಬದಲಾದೊಡೆ
ರೈತ ಕಾರ್ಮಿಕರ ರಕ್ತ
ಬೆವರಾಗುವುದು ನಿಲ್ಲಬಲ್ಲದೇ ?
ಶೋಷಕರ ವ್ಯಗ್ರಮುಖವರಳಿ
ಒಂದು ನಗೆಹೂ ಅರಳಬಹುದೇ ?

ಅಂಕಿ ಬದಲಾದೊಡೆ
ಭ್ರಷ್ಟರ ಆಟ-ಪುಂಡಾಟ
ಪರಿಸಮಾಪ್ತಿಯಾಗಿ ಶಾಂತಿ-ಸಹನೆಯ
ತಂಗಾಳಿ ಹೊರಸೂಸಬಲ್ಲದೇ ?

ಅಂಕಿ ಬದಲಾದೊಡೆ
ಮನದೊಳಗೆ ಅಡಗಿರುವ
ಭೇದ-ಭಾವದ ಭೂತ ತೊಲಗಿ
ಸಮತೆಯ ದೀಪ ಬೆಳಗಬಲ್ಲದೇ ?

ಇಲ್ಲ ಗೆಳೆಯ ಇಲ್ಲ
ಇದು ಒಂದು ದಿನದ ತೆವಲು ಅಷ್ಟೆ !
ಬರೀ ಚರ್ವಿತ ಚರ್ವಣ
ಮರುದಿನ ಮತ್ತೆ ಅದೇ ಗೋಳು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.