Sunday, December 11, 2011

ಮಡೆ ಮಡೆ ಸ್ನಾನ ಮತ್ತು ಸರಕಾರದ ಕೆಲಸ !

  • ಮಡೆಸ್ನಾನ, ಪಾದೋದಕ ಪ್ರಸಾದ ಪದ್ಧತಿಗೆ ಕಡಿವಾಣ ಅಗತ್ಯ
    • Udayavani | Dec 10, 2011
      ಬೆಂಗಳೂರು: ಮಡೆಸ್ನಾನದ ಜೊತೆಗೆ ಲಿಂಗಾಯಿತ ಜಂಗಮರ ಸಮುದಾಯದಲ್ಲಿರುವ ಪಾದೋದಕ ಪ್ರಸಾದವನ್ನು ಕುಡಿಯುವ ಪದ್ಧತಿಗೂ ಕಡಿವಾಣ ಹಾಕಬೇಕು ಎಂದು ನಿಡುಮಾಮಿಡಿ ಮಹಾಸಂಸ್ಥಾನಮಠ ಮತ್ತು ಮಾನವಧರ್ಮಪೀಠದ ಅಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.

      ನಿಡುಮಾಮಿಡಿ ಮಹಾಸಂಸ್ಥಾನ ಮಠ ಮತ್ತು ಮಾನವಧರ್ಮಪೀಠದ ವತಿಯಿಂದ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಮತ್ತು ಮಾನವತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

      ವರ್ಣವ್ಯವಸ್ಥೆ ಆಚರಣೆ ಸಂವಿಧಾನ ವಿರೋಧಿಯಾಗಿದ್ದು ವರ್ಣವ್ಯವಸ್ಥೆಯನ್ನು ಸ್ವೀಕರಿಸುವ ಪಂಕ್ತಿ ಭೇದ ನಿಷೇಧ ಆಗಬೇಕು. ಇಂತಹ ಆಚರಣೆಗಳನ್ನು ಸರ್ಕಾರ ಆಮೂಲಾಗ್ರವಾಗಿ ನಿಷೇಧ ಮಾಡಬೇಕು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಮಲಹೊರುವ ಪದ್ಧತಿ ಆಚರಣೆಯಲ್ಲಿರುವುದು ದುರಂತ ಎಂದ ಅವರು ಮಾನವ ಹಕ್ಕುಗಳ ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರ ಮತ್ತು ಸಮಾಜದ ಮೇಲಿದೆ ಎಂದರು.

      ಮಾನವ ಹಕ್ಕುಗಳ ಆಶಯಗಳು ಅತ್ಯಂತ ಪ್ರಾಚೀನವಾದುದು. ಜಗತ್ತಿನ ಎಲ್ಲ ಕ್ರಾಂತಿಕಾರಿಗಳು ಈ ಬಗೆಗೆ ಧ್ವನಿ ಎತ್ತಿದ್ದಾರೆ. ಆದರೆ ಭಾರತದಲ್ಲಿನ ವ್ಯವಸ್ಥೆ ಮಾನವ ಹಕ್ಕುಗಳ ವಿರೋಧವಾಗಿರುವಂತೆ ಕಾಣುತ್ತದೆ. ವ್ಯವಸ್ಥೆಯೊಳಗಿನ ಹಲವು ಅಮಾನವೀಯ ಆಚರಣೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂದರು.

      ಎಲ್ಲ ಧರ್ಮಗಳಲ್ಲಿನ ಪುರೋಹಿತಶಾಹಿ ವರ್ಗ ಜನರನ್ನು ಭಯದಲ್ಲಿಟ್ಟಿದೆ. ಶೇ. 95 ರಷ್ಟು ಧಾರ್ಮಿಕ ನಾಯಕರು ಹಾಗು ಜನಪ್ರತಿನಿಧಿಗಳು ಜನರನ್ನು ಮೋಸ ಮಾಡುತ್ತಿದ್ದಾರೆ. ಮಡೆಸ್ನಾನವನ್ನು ಸಮರ್ಥಿಸಿಕೊಂಡ ಸಚಿವರ ಧೋರಣೆ ಕೌರ್ಯವನ್ನು ಸೂಚಿಸುತ್ತದೆ. ಇದು ಬೌದ್ಧಿಕ ಗುಲಾಮಗಿರಿಯ ಸಂಕೇತ ಎಂದರು.

      ಉನ್ನತ ಶಿಕ್ಷಣ ಸಚಿವರಾದ ವಿ ಎಸ್‌ ಆಚಾರ್ಯರವರು ಎಂಜಲು ಎಲೆಗಳ ಮೇಲೆ ಹೊರಳಾಡುವುದು ಅವರವರ ನಂಬಿಕೆಗೆ ಬಿಟ್ಟ ವಿಷಯವೆಂದು ಹೇಳಿಕೆ ನೀಡುತ್ತಾರೆ . ಉನ್ನತ ಸ್ಥಾನಮಾನದಲ್ಲಿರುವವರು ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಚಿಂತಕ ಡಾ ಕೆ ಮರುಳಸಿದ್ಧಪ್ಪ ಹೇಳಿದರು.

      ವಿದೇಶಿ ಬಂಡವಾಳ ಕೃಷಿ ಇಲಾಖೆಗೆ ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿದೆ. ಆದರೂ ಪ್ರತಿದಿನ ರೈತರು ಸಾವಿಗೀಡಾಗುತ್ತಿದ್ದಾರೆ. ಇಲ್ಲಿಯವರೆಗೆ 35,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ವಿದೇಶಿ ಬಂಡವಾಳಕ್ಕೆ ಮಣೆ ಹಾಕಿದರೆ ರೈತ ಸಮುದಾಯ ಕೃಷಿಯಿಂದ ವಿಮುಖ ಆಗುತ್ತದೆ. ಈ ಬೆಳವಣಿಗೆಯಿಂದ ರೈತರ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದರು.

      ಮಾನವ ಹಕ್ಕುಗಳ ಉಲ್ಲಂಘನೆ ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಆಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಡಿ ಎಸ್‌ ವೀರಯ್ಯ ತಿಳಿಸಿದರು. ಸಂಪ್ರದಾಯದ ಹೆಸರಿನಲ್ಲಿ ಶೋಷಣೆ ಮಾಡುವುದು ಇಂದಿಗೂ ರೂಢಿಯಲ್ಲಿದೆ ಎಂದರು. ಪುರೋಹಿತಶಾಹಿಗಳು ಹಾಗು ಜಾತಿವಾದಿಗಳು ಅನಾಗರೀಕ ಸಮಾಜ ನಿರ್ಮಾಣವಾಗುವುದಕ್ಕೆ ಕಾರಣ ಎಂದರು.

      ಕಾನೂನಿನಲ್ಲಿ ಕಠಿಣತೆ ಇಲ್ಲ ಮತ್ತು ಕಠಿಣತೆ ಇದ್ದರೂ ಕೂಡ ಕಾನೂನನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸುವ ವ್ಯಕ್ತಿಗಳಿಲ್ಲದಿರುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದೆ ಎಂದರು. ಇದನ್ನು ವಿಚಾರಿಸುವ ಮನಸ್ಥಿತಿ ನಮ್ಮದಾಗುವುದರ ಮೂಲಕ ವೈಚಾರಿಕ ಸಮಾಜವನ್ನು ನಿರ್ಮಿಸಬಹುದು. ಮಾನಸಿಕ ಪರಿವರ್ತನೆ ಹಾಗು ಸಾಮಾಜಿಕ ಪರಿವರ್ತನೆಯಿಂದ ಮಾತ್ರ ಮಾನವ ಹಕ್ಕುಗಳ ಉಲ್ಲಂಘನೆಯ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.