Tuesday, December 13, 2011

ಆಲದ ಮರ ಪಾಟೀಲ ಪುಟ್ಟಪ್ಪನವರ ಕುರಿತು.......

                               - ಡಾ. ಎನ್. ಜಗದೀಶ್ ಕೊಪ್ಪ
ಹುಬ್ಬಳ್ಳಿ ಧಾರವಾಡ ನಗರಕ್ಕೆ ಬಂದು ದಶಕವೇ ಕಳೆದು ಹೋಯಿತು. ಇಲ್ಲಿಗೆ ಬಂದ ಮೇಲೆ ನನಗೆ ಜಿಗುಪ್ಸೆ ಮೂಡಿಸಿದ ಇಬ್ಬರು ವ್ಯಕ್ತಿಗಳೆಂದರೆ, ಒಬ್ಬರು, ವಾಮನ ಬೇಂದ್ರೆ. ಮತ್ತೊಬ್ಬರು ಪಾಟೀಲ ಪುಟ್ಟಪ್ಪ.
ಕನ್ನಡದ ಅನನ್ಯ ಕವಿ ಬೇಂದ್ರೆಯವರ ಸಾಹಿತ್ಯವನ್ನು ಯಾರಿಗೂ ಕೊಡದೆ, ಈ ತಲೆಮಾರಿಗೆ ಬೇಂದ್ರೆಯವರ ಕವಿತೆ ಸಿಗದ ಹಾಗೆ ನೋಡಿಕೊಂಡ ಅವಿವೇಕಿ ವಾಮನ ಬೇಂದ್ರೆ.  ಬೇಂದ್ರೆಯವರ ಕವಿತೆಗಳನ್ನ ಕಲಸು ಮೆಲೋಗರ ಮಾಡಿ, ಔದಂಬರ ಗಾಥೆ ಹೆಸರಿನಲ್ಲಿ ಬೇಂದ್ರೆ ಕುಟುಂಬದ ವಂಶವೃಕ್ಷ ಸಹಿತ ಪ್ರಕಟಿಸಿ ಅದನ್ನು ಮೈಸೂರು ಒಂಟಿ ಕೊಪ್ಪಲು ಪಂಚಾಗ ಮಾಡಿದ ಪುಣ್ಯ ಪುರುಷನೀತ, ಶತಮಾನದ ಕವಿತೆಗಳ ಸಂಕಲನಕ್ಕೂ ಸಹ  ಕವಿತೆ ಕೊಡಲಿಲ್ಲ. ಅಷ್ಟೇ ಅಲ್ಲ, ನನ್ನೆದುರಿಗೆ ಹಂಪಿ ವಿ.ವಿ. ಉಪಕುಲಪತಿಯಾಗಿದ್ದ ಎಂ.ಎಂ. ಕಲುಬುರ್ಗಿ ಹಾಗು ಮಲ್ಲೇಪುರಂ ವೆಂಕಟೇಶ್ ’ಸಮಗ್ರ ಕಾವ್ಯ ತರುತ್ತೇವೆ,’ ಎಂದು ಹೇಳಿ 5 ಲಕ್ಷ ಗೌರವ ಸಂಭಾವನೆ ನೀಡಲು ಹೋದಾಗ ತಿರಸ್ಕರಿಸಿದ ಮಹಾಶಯ ಈತ.
ಇನ್ನು ಪಾಪು ಹೆಸರಿನ ಪುಟ್ಟಪ್ಪನವರದೇ ಒಂದು ದೊಡ್ಡ ವೃತ್ತಾಂತ. 1967 ರಿಂದ ಧಾರವಾಡದ ಕನ್ನಡದ ಶಕ್ತಿ ಕೇಂದ್ರವಾದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಅದನ್ನು 1940 ರ ದಶಕದ ತಾಲ್ಲೂಕು ಕಚೇರಿಯಂತೆ ಮಾಡಿದ ಕೀರ್ತಿ ಇವರದು. 93 ವರ್ಷವಾಗಿದ್ದರೂ, ಇನ್ನೂ ಅಧಿಕಾರ ಬಿಟ್ಟು ಕೊಟ್ಟಿಲ್ಲ. ಜೊತೆಗೆ ಹಾವೇರಿಯಲ್ಲಿರುವ ವಿ.ಕೃ. ಗೋಕಾಕ್ ಟ್ರಸ್ಟ ನ ಅಧ್ಯಕ್ಷಗಿರಿ ಬೇರೆ. ಕಳೆದ 5 ವರ್ಷದಿಂದ  ಇದುವರೆಗೆ ಹಾವೇರಿಯಲ್ಲಿ ಸಭೆ ನಡೆದಿಲ್ಲ. ಸದಸ್ಯರು, ಸಂಸ್ಕೃತಿ ಇಲಾಖೆಯ ಅಧಿಕಾರಿ ಪುಟ್ಟಪ್ಪನವರ ಮನೆಗೇ ಬಂದು ಸಭೆ ನಡೆಸಿ ಹೋಗುತ್ತಾರೆ.
ಇಂತಹ ಚರಿತ್ರೆಯ ಪುಟ್ಟಪ್ಪ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ “ಚಂದ್ರಶೇಖರ ಕಂಬಾರ ಪ್ರಶಸ್ತಿಗೆ ಯೋಗ್ಯರಲ್ಲ, ಈ ಪ್ರಶಸ್ತಿ ಬೈರಪ್ಪನವರಿಗೆ ಬರಬೇಕಾಗಿತ್ತು,” ಎಂದಿದ್ದಾರೆ. ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಿರಲಿ ವಯಸ್ಸಾದ ನಂತರ ತೆರೆಯ ಹಿಂದಕ್ಕೆ ಸರಿದು ತಾನು ತನ್ನ ಜೀವಿತದಲ್ಲಿ ಸಂಪಾದಿಸಿದ ಘನತೆ, ಗೌರವಗಳನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ, ಆತನ ಚಟುವಟಿಕೆಗಳನ್ನು ಬಾಲ ಲೀಲೆಗಳು ಎಂದು ಸಮಾಜ ಗುರುತಿಸಿಬಿಡುತ್ತದೆ.
ಕಳೆದ ಎರಡು ವರ್ಷದ ಹಿಂದೆ ನನ್ನನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿ ಎಂದು ಬಿ.ಜೆ,ಪಿ. ಸರ್ಕಾರದ ಬೆನ್ನು ಹತ್ತಿದ್ದರು. ಕಡೆಗೆ ಇವರ ಲೇಖನಗಳ ಪ್ರಕಟನೆಗೆ 50 ಲಕ್ಷ ರೂ ನೀಡಿ ಯಡಿಯೂರಪ್ಪ ಕೈ ತೊಳೆದುಕೊಂಡರು.
ಬಹುಶ: ಇವರ ಇಂತಹ ವರ್ತನೆಗಳನ್ನು ಮುಂಜಾಗ್ರತವಾಗಿ ಗ್ರಹಿಸಿ ನಮ್ಮ ಕನ್ನಡನಾಡು ಇವರಿಗೆ ಪಾಪು ಎಂದು ಹೆಸರಿಟ್ಟಿರಬೇಕು.
ಕೃಪೆ : ವರ್ತಮಾನ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.