Friday, March 30, 2012

ಸದ್ದಿಲ್ಲದೆ ಸಾಮಾಜಿಕ ಕ್ರಾಂತಿ : ಪ್ರಸನ್ನ ಅವರ ಪರಿಶ್ರಮ

ರವಿ ಕೃಷ್ಣಾರೆಡ್ಡಿ


ಸಾಗರದ ಬಳಿಯ ಹೆಗ್ಗೋಡು ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ಪರಿಚಿತವಾದ ಸ್ಥಳವೇ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ಲಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿಯೇ ಸದ್ದಿಲ್ಲದೆ ಸಾಮಾಜಿಕ ಕ್ರಾಂತಿಯೊಂದು ಜರುಗುತ್ತಿದೆ. ಅದು “ಚರಕ” ಸಂಸ್ಥೆಯ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ರೂಪದಲ್ಲಿ.
ಹಿರಿಯ ರಂಗಕರ್ಮಿ, ಲೇಖಕ, ನಾಟಕಕಾರ ಪ್ರಸನ್ನರ ಪ್ರಯತ್ನ ಇದು. ಹತ್ತಿಯ ನೂಲಿಗೆ ಬಣ್ಣ ಹಾಕಿ ಖಾದಿ ಬಟ್ಟೆ ನೇಯುವುದರಿಂದ ಹಿಡಿದು ವಿವಿಧ ದಿರಿಸುಗಳನ್ನು ಹೊಲಿದು ಮಾರುಕಟ್ಟೆಗೆ ತಲುಪಿಸುವ ತನಕ “ಚರಕ” ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಲ್ಲಿ ಮೂರ್ನಾಲ್ಕು ಕಡೆ ಅದು ತನ್ನದೇ ಆದ “ದೇಸಿ” ಹೆಸರಿನ ಅಂಗಡಿಗಳ ಮೂಲಕ ಈ ರೆಡಿಮೇಡ್ ದಿರಿಸುಗಳನ್ನು ಮಾರಾಟ ಮಾಡುತ್ತದೆ.
ವಾರ್ಷಿಕ ಒಂದು ಕೋಟಿ ಆದಾಯವಿರುವ ಈ “ಚರಕ” ಸಹಕಾರ ಸಂಘ ನಡೆಯುತ್ತಿರುವುದೆಲ್ಲ ಅಲ್ಲಿ ಕೆಲಸ ಮಾಡುವ ಸ್ಥಳೀಯ ಹೆಣ್ಣು ಮಕ್ಕಳ ಆಡಳಿತ ಮಂಡಳಿಯಿಂದಲೆ. ಅಲ್ಲಿ ಕೆಲಸ ಮಾಡುವ ಯಾರು ಬೇಕಾದರೂ ಆಡಳಿತ ಮಂಡಳಿಯ ಸದಸ್ಯರಾಗಬಹುದು. ಅವರನ್ನು ಆಯ್ಕೆ ಮಾಡುವುದು ಪ್ರಜಾಸತ್ತಾತ್ಮಕವಾಗಿ; ಅಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳೆ ತಮ್ಮಲ್ಲಿಯ ಹಲವರನ್ನು ಅಧ್ಯಕ್ಷೆ, ಕಾರ್ಯದರ್ಶಿ, ಇತ್ಯಾದಿಯಾಗಿ ಆರಿಸಿಕೊಳ್ಳುತ್ತಾರೆ.
ಮತ್ತೆ “ಚರಕ” ಕೇವಲ ನೌಕರಿ ನೀಡುವ ಸಂಸ್ಥೆ ಮಾತ್ರವಲ್ಲ. ಅದೊಂದು ಸಾಂಸ್ಕೃತಿಕ ಸಂಘಟನೆ ಸಹ. ಅಲ್ಲಿ ವರ್ಷಕ್ಕೊಮ್ಮೆ ಚರಕ ಉತ್ಸವ ನಡೆಯುತ್ತದೆ. ಇದೇ ಹೆಣ್ಣುಮಕ್ಕಳು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ವೈಚಾರಿಕವಾಗಿ ಅವರನ್ನು ಬೆಳೆಸುವ ಪರಿಸರ ಅದು.
ಅಲ್ಲಿಗೆ ನಾನು 2009ರ ಮಾರ್ಚ್‌ನಲ್ಲಿ ಭೇಟಿ ಕೊಟ್ಟಿದ್ದೆ; ಹಿರಿಯ ಮಿತ್ರರಾದ ಡಿ.ಎಸ್.ನಾಗಭೂಷಣ್ ಮತ್ತು ಸವಿತಾ ನಾಗಭೂಷಣ್‌ರೊಂದಿಗೆ. ಅಂದು “ಚರಕ”ದ ಆ ವರ್ಷದ ಅಧ್ಯಕ್ಷೆ ಮತ್ತು ಕಾರ್ಯದರ್ಶಿಯವರೊಡನೆ ಅನೌಪಚಾರಿಕವಾಗಿ ಎಂಬಂತೆ ಮಾತನಾಡುತ್ತ ಅವರ ಮಾತುಗಳನ್ನು ವಿಡಿಯೊ ರೆಕಾರ್ಡ್ ಮಾಡಿದ್ದೆ. ಇಷ್ಟು ದಿನ ಅದನ್ನು ಎಡಿಟ್ ಮಾಡಿ ಅಪ್‌ಲೋಡ್ ಮಾಡಲು ಆಗಿರಲಿಲ್ಲ. ಇತ್ತೀಚೆಗಷ್ಟೆ ಸಾಧ್ಯವಾಯಿತು. ಈ ವಿಡಿಯೊ ಬಹುಶಃ ನಿಮಗೆ “ಚರಕ”ದ ಬಗ್ಗೆ ಒಂದಷ್ಟು ವಿಭಿನ್ನ ಮಾಹಿತಿ ನೀಡಬಹುದು ಎನ್ನಿಸುತ್ತದೆ.
ಕೃಪೆ : ವರ್ತಮಾನ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.