Saturday, March 09, 2013

ಕತೀ ಬರಿಯೂ ಮೊದಲ .... !

ಡಾ. ಸಿದ್ರಾಮ ಕಾರಣಿಕ

ಪೆನ್ನು-ಹಾಳೆ ಎರಡೂ ಮುಂದ ಅದಾವು. ಮಂದಿಯ ಮಾತುಗಳೂ ತಲೆಯೊಳಗ ಗುಂಯ್ಞ ಅನ್ನಾಕತ್ತಾವು. ಒಮ್ಮೊಮ್ಮೆ ಬರೀಬೇಕಾಗಿರೋದು ಏನ ಅನ್ನೋದ ಮರ್ತ ಹೋದಾಂಗ ಅನ್ನಿಸಾಕತ್ತೀತು. ನಡು ನಡುವ ನೆನಪುಗೋಳು ಹದ್ದು ಬಂದು ತಲಿ ಮ್ಯಾಲ ಕುಂತ ಕಿರುಚಿ, ಕುಕ್ಕಾಕತ್ತಿತ್ತು ! ಕತೀ ಬರೀಬೇಕು ಅನ್ನಿಸಿತು. ಹಂಗಾರ ಹೆಂಥಾ ಕತಿ ಬರಿಯೂದು ... ? ಮುಂದ ಇತ್ತಲ್ಲ ಗರಿಗರಿ ಮಡಿಕಿ ಹಾಕಿದ  ಪತ್ರಿಕೆ. ಹೆಣ್ಮಕ್ಕಳ ಮ್ಯಾಲ ಅತ್ಯಾಚಾರ ... ದಿನಕ್ಕೊಂದು ಹಿಂತಾವು ನಡಿಯಾಕ ಹತ್ತ್ಯಾವು. ಅವುನ್ನ ದಿನ್ನಾ ಓದುತ್ತ ಓದುತ್ತ ಇರುವಾಗ ಟೀವ್ಯಾಗ ಹಂಥದ್ದ ಘಟನಾ ಮರಕಳಿಸಿದ ಬಗ್ಗಿ ಸುದ್ದಿ ಬಿತ್ತರ ಆಗ್ತೇತಿ. ಇದನ್ನ ಇಟ್ಟುಕೊಂಡ ಕತಿ ಬರದರ ಹ್ಯಾಂಗ್ ? ಜ್ವಲಂತ ವಿಷಯಾನೂ ಆಗ್ತೇತಿ. ಅವಾರ್ಡ್ ಬಂದ್ರೂ ಬರಬೋದಲಾ ? ಹಂಗಾರ ಎಲ್ಲಿಂದ ಸುರು ಮಾಡ್ಲಿ ? ಹುಡುಗ-ಹುಡುಗಿ, ಕಾಲೇಜು, ಪ್ರೇಮ, ವೈರ ಹೊಡೆದಾಟ, ಅತ್ಯಾಚಾರ, ಕೊಲೆ ... ? ಇದೆಲ್ಲ ಹಳಸಲು ಸಿನೇಮಾ ಕತಿ ಹಾಂಗ ಅನ್ನಿಸ್ತೇತ್ಯಲಾ !  ಬ್ಯಾಡಾ, ಹೀಂಗ ಬರೀಬಾರದ್ ನಾ.... ಮತ್ತೇ ? ಅಪ್ಪ-ಅವ್ವ, ವಾತ್ಸಲ್ಯ ವಂಚಿತ ವಿದ್ಯಾರ್ಥಿ, ಕಾಲೇಜು, ಪ್ರೇಮ, ಹೊಸ ಬದುಕಿನ ಆಸೆ ಆನಂತರ ... ... ... ನಂಬಿಕೀ ದ್ರೋಹ ! ಇದೂ ಚರ್ವಿತ ಚರ್ವಣನ ಅನ್ನಿಸೂದಿಲ್ಲ !
ಹಂಗಾರ ಬರಿಯೂದಾದ್ರೂ ಏನ ಮತ್ತ ? ಈ ಕತೆ ಬರಿಯೋ ಗೋಜಲ ಬ್ಯಾಡಂತ ಬಿಟ್ಟ ಬಿಡ್ಲಿ.
ಆಕೀನೂ ಹೀಂಗ ಹೇಳಿದ್ಳಲಾ ? ‘ನಮ್ಮ ಬದುಕ ಕತಿ ಆಗಬಾರ್ದು. ದೋಖಾ ಅಂತ ಅಲ್ಲಾ. ಮನಿಯೊಳಗಿನ ಪರಿಸ್ಥಿತೀನ ಹಂಗ ಏತಿ. ನಂದ ಹೆಂಗಾರ ನಡಿತೇತಿ. ನೀ ಮೊದಲ ಬದುಕ ಕಟ್ಕೋ’ ಎಷ್ಟು ಸಹಜವಾಗಿ ಹೇಳಿದ್ದಳಲ್ಲ ಆಕೆ ! ಆಕೆಯ ತಪ್ಪಾದರೂ ಏನು ... ನಾನೇ ಒಂದಿಷ್ಟು ಎಡಬಿಡಂಗಿ ಥರಾ ವರ್ತಿಸಿಬಿಟ್ಟಿದ್ದೀನಲ್ಲ ! ಹೋಗ್ಲಿ...  ಆ ಸುದ್ದಿ ಈಗ್ಯಾಕ ? ಒಂದ ಕತೀ ಬರಿಬೇಕ ಅಷ್ಟ. ನಾ ಸಣ್ಣಾಂವ ಇದ್ದಾಗ ಸಾಲೀಗಿ ಹೋಗ್ತೇನ ಅಂತ ಹಟಾ ಹಿಡದ ಗೆದ್ದದ್ದು, ಹೆಂಗೋ ಏನೋ ಮಾಡಿಕೊಂಡು ಕಾಲೇಜು ಮೆಟ್ಟಿಲು ತುಳದದ್ದು... ... ಛೇ ! ಇಲ್ಲಿ ನಾ ಆತ್ಮ ಚರಿತ್ರಾ ಬರ್ಯಾಕತ್ತೇನೇನು ?
ಬ್ಯಾಡ ಬಿಡು ; ಈ ಬರಿಯೋದ ಅಂದ್ರ... ಯಾಕೋ ತ್ರಾಸಿನ ಕೆಲಸ !
ಯಾಕಂದ್ರ ನಾವ್ ಬರಿದದ್ದ ನೋಡಾವ್ರು ಇರ್ತಾರೇನೋ ಖರೆ ; ಮೆಚ್ಕೊಳ್ಳಾವ್ರೂ ಇರ್ತಾರು. ಆದ್ರ ಬರಿಯೂ ಬರಹದಾಗೂ ರಾಜಕೀ ಮಾಡಿ ಮ್ಯಾಲ-ಕೆಳಗ ಮಾಡ್ತಾರಲ್ಲ ...
ಅದಕ್ಕ ...
ಬರಿಯೋದ ಬ್ಯಾಡ ಅನ್ನಿಸ್ತೇತಿ !
ನೀವ್ ಏನಂತೀರಿ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.