Sunday, March 17, 2013

ಜಾತೀಯತೆ ಎಂಬ ಪ್ರಿಸಮ್ !

ಆಗ ಬೆಂಗಳೂರಿನ ಪೊಲೀಸ್ ಕಮಿಷನರ್ ನಿವೃತ್ತ ರಾಗುವ ಸಮಯ ಬಂದಿತ್ತು. ಮುಂದೆ ಯಾರನ್ನು ಕಮಿಷನರ್ ಆಗಿ ನೇಮಿಸಬೇಕು ಎಂಬ ಬಗ್ಗೆ ಮುಖ್ಯ ಮಂತ್ರಿ ಶ್ರೀ ದೇವರಾಜ ಅರಸು ಅವರ ಜತೆ ಚರ್ಚೆ ನಡೆಯುತ್ತಿತ್ತು. ನನಗೆ ಆಗ ಅಷ್ಟು ಅನುಭವ ಇರಲಿಲ್ಲ. ಒಬ್ಬ ಅಧಿಕಾರಿಯ ಹೆಸರನ್ನು ನಾನು ಸೂಚಿಸಿದೆ. ವರಿಷ್ಠತೆಯ ಪ್ರಕಾರ ಆ ಅಧಿಕಾರಿ ಆಯುಕ್ತ ರಾಗಬೇಕಿತ್ತು. ಆಗ ಲಿನ್ ಸಾಹೇಬರು ''ಇಲ್ಲ, ಅವರು ''ಈ'' ಜಾತಿಗೆ ಸೇರಿದವರು. ಮಹಾನಿರ್ದೇಶಕರು ಮತ್ತು ಗೃಹ ಕಾರ್ಯ ದರ್ಶಿಯವರು ಕೂಡ ಅದೇ ಜಾತಿಗೆ ಸೇರಿ ದವರು. ಮೂರು ಜನ ಪೋಲಿಸ್ ಮೇಲಧಿಕಾರಿಗಳು ಒಂದೇ ಜಾತಿ ಯವರಾಗಿರಬಾರದು'' ಎಂದು ಹೇಳಿದರು. ಆಮೇಲೆ ಸರಿ ಯಾದ ಜಾತಿಯ ಒಬ್ಬ ಅಧಿಕಾರಿಯನ್ನು ಆಯ್ಕೆ ಮಾಡಲಾ ಯಿತು. ಉಪವಿಭಾಗಾಧಿಕಾರಿಯ ಹುದ್ದೆಯಿಂದ ನಾನು ನೇರ ವಾಗಿ ಮುಖ್ಯಮಂತ್ರಿಯವರ ಕಚೇರಿಗೆ ಉಪಕಾರ್ಯ ದರ್ಶಿ ಯಾಗಿ ನೇಮಕಗೊಂಡಿದ್ದೆ. ಅರಸು ಅವರು ಮುಖ್ಯಮಂತ್ರಿ ಆದ ನಂತರ ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿ ಎಂಬ ಎರಡು ಹುದ್ದೆಗಳ ರಚನೆ ಆಯಿತು. ಅದ ಕ್ಕಿಂತ ಮೊದಲು ಈ ಹುದ್ದೆಗಳು ಇರಲಿಲ್ಲ. ಮುಖ್ಯಮಂತ್ರಿ ಅವರ ಆಪ್ತಕಾರ್ಯದರ್ಶಿ ಹುದ್ದೆ ಮಾತ್ರ ಇತ್ತು. ಉಪಕಾರ್ಯ ದರ್ಶಿಯವರ ಹುದ್ದೆಯ ರಚನೆ ಆದ ನಂತರ, ಅಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ದಿವಂಗತ ಆರ್.ಜೆ.ರೆಬೆಲ್ಲೊ ಅವರು ಅರಸು ಅವರ ಬಳಿ, ''ಈಗ ಈ ಹುದ್ದೆ ರಚಿಸಲಾಗಿದೆ. ನೀವು ಅದಕ್ಕೆ ಯಾರನ್ನು ನೇಮಕ ಮಾಡಲು ಇಷ್ಟ ಪಡುತ್ತೀರಿ?'' ಎಂದು ಕೇಳಿದ್ದರು. ಅದಕ್ಕೆ ಅರಸು ಅವರು, ''ನನಗೆ ಇಲ್ಲಿನ ಜಾತಿಯ ಅಧಿಕಾರಿ ಬೇಡ. ಯಾರಾದರೂ ಹೊರಗಡೆಯಿಂದ ಬಂದವ ರನ್ನು ಕೊಡಿ'' ಎಂದು ಕೇಳಿದ್ದರು. ಹಾಗಾಗಿ ರೆಬೆಲ್ಲೊ ಅವರು ನನ್ನನ್ನು ಆ ಸ್ಥಾನಕ್ಕೆ ನೇಮಕ ಮಾಡಿದರು. ಅವತ್ತಿನಿಂದ ಇವತ್ತಿನ ವರೆಗೆ ಆಗಿರುವ ವ್ಯತ್ಯಾಸ ಎಂದರೆ ಈಗ ಸಚಿವರು ಸಾಮಾನ್ಯವಾಗಿ ತಮ್ಮ ಜಾತಿಯ ಅಧಿಕಾರಿಗಳನ್ನು ಆಯ್ಕೆ ಮಾಡುತ್ತಾರೆ. ನಾಡಿನಲ್ಲಿ ಜಾತಿ ಪ್ರಭಾವ ಹೆಚ್ಚಾಗುವ ಒಂದು ಉದಾಹರಣೆ ಇದು.

ಯಾವುದೇ ಒಂದು ಜಾತಿಯ ಪ್ರಾಬಲ್ಯ ಆಡಳಿತದಲ್ಲಿ ಇರಬಾರದು ಎನ್ನುವ ಕಾರಣಕ್ಕಾಗಿ ಇಲ್ಲಿ ಪೊಲೀಸ್ ಆಯುಕ್ತರ ನೇಮಕಾತಿಯ ವಿಷಯ ಹೇಳಬೇಕಾಯಿತು. ಆದರೆ ಈಗ ನಾವು ನೋಡುತ್ತಿರುವ ಹಾಗೆ ಚುನಾವಣೆಗಳು ಜಾತಿಯ ಆಧಾರದ ಮೇಲೆ ನಡೆಯುತ್ತವೆ. ಇದು ವಿಚಿತ್ರ. ಏಕೆಂದರೆ ಒಬ್ಬ ವೈದ್ಯ, ದರ್ಜಿ, ವಾಸ್ತುಶಿಲ್ಪಿ, ಲೆಕ್ಕಿಗ ಅಥವ ಇತರ ಯಾವುದೇ ತಜ್ಞರ ಬಳಿ ಹೋಗುವಾಗ ನಾವು ಅವರ ಪ್ರವೀಣತೆಯನ್ನು ನೋಡು ತ್ತೇವೆಯೇ ಹೊರತು ಜಾತಿಯನ್ನು ನೋಡುವುದಿಲ್ಲ. ಆದರೆ ಚುನಾವಣೆಯ ಅಭ್ಯರ್ಥಿಗಳ ವಿಷಯ ಬಂದಾಗ ಜನರು ಜಾತಿಯನ್ನು ವಿಶೇಷವಾಗಿ ಪರಿಗಣಿಸುತ್ತಾರೆ.

ಪಂಜಾಬಿನಿಂದ ಬಂದ ನಂತರ, ಇಲ್ಲಿಯ ನಿತ್ಯ ಜೀವನದಲ್ಲಿ ಜಾತೀಯತೆಯ ಪ್ರಭಾವ ನೋಡಿ ನನಗೆ ಆಶ್ಚರ್ಯ ಆಯಿತು. ಇಲ್ಲಿಯ ಊಟದ ರುಚಿ ಜಾತಿ ಪ್ರಕಾರ ಹೋಗುತ್ತದೆ. ಅಲ್ಲಿ ಪಂಜಾಬಿ ಊಟ ಅಂದರೆ ಪಂಜಾಬಿ ಊಟ ಅಷ್ಟೆ. ಇಲ್ಲಿ ಊಟ ಆದ ನಂತರ ನಾನು ಕೇಳಿದ ಕೆಲವು ಟಿಪ್ಪಣಿಗಳು ಹೀಗಿವೆ: ''ಅಹಾ! ಇದು ಶುದ್ಧ ಅಯ್ಯಂಗಾರ್ ಊಟ; ಇದು ಮಾಧ್ವರ ಊಟ; ಇದು ಲಿಂಗಾಯತರ ಊಟ; ಇದು ಮುಲಕ್‌ನಾಡು ಊಟ; ಇದು ಕುರುಬರ ಊಟ; ಇದು ಒಕ್ಕಲಿಗರ ಊಟ'' ಇತ್ಯಾದಿ. ಈಗ ನಾನು ಕೂಡ ರುಚಿಯಿಂದ ಊಟದ ಜಾತಿಯನ್ನು ಗುರುತಿಸಬಲ್ಲೆ. ಒಂದು ಕಡೆ ಚಕ್ಕೆ, ಜೀರಿಗೆ, ಲವಂಗ ಮುಖ್ಯ ವಾದರೆ, ಇನ್ನೊಂದು ಕಡೆ ಇಂಗು, ಸಾಸಿವೆ, ಮೆಂತೆಕಾಳು; ಲಿಂಗಾ ಯ ತರಿಗೆ ಬೆಳ್ಳುಳ್ಳಿ ಇಷ್ಟವಾದರೆ, ಒಕ್ಕಲಿಗರಿಗೆ ಈರುಳ್ಳಿ. ಲಿಂಗಾ ಯತರಲ್ಲಿ ಮತ್ತು ಬ್ರಾಹ್ಮಣೇತರ ಜಾತಿಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯ ಹೆಚ್ಚು ಬಳಕೆ ಬಹುಶಃ ಬ್ರಾಹ್ಮಣರಿಂದ ತಮ್ಮ ಪ್ರತ್ಯೇಕತೆಯನ್ನು ತೋರಿಸಲು ಆಗಿದೆ. ಸ್ಮೃತಿಗಳಲ್ಲಿ ಬೆಳ್ಳುಳ್ಳಿ, ಈರುಳ್ಳಿಯ ನಿಷೇಧ ಮಾಡಿರುವುದಕ್ಕೆ ಪ್ರತಿಕ್ರಿಯೆಯಾಗಿ ಕೂಡ ಇದನ್ನು ಮಾಡಿರಬಹುದು. ಆದರೆ ಕಾರಣ ಏನೇ ಇರಲಿ, ಈಗ ಬ್ರಾಹ್ಮಣರ ಮಜ್ಜಿಗೆಯಲ್ಲಿ ಇಂಗು, ಲಿಂಗಾಯಿತರ ಮಜ್ಜಿಗೆಯಲ್ಲಿ ಬೆಳ್ಳುಳ್ಳಿ ಮತ್ತು ಒಕ್ಕಲಿಗರ ಮಜ್ಜಿಗೆಯಲ್ಲಿ ಈರುಳ್ಳಿ ಇರುತ್ತದೆ. ಬಡ ಜಾತಿಯವರಿಗೆ ಏನು ಸಿಕ್ಕುತ್ತೋ ಅದೇ ನಡೆಯುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯ ದುರ್ವಾಸನೆಗೋಸ್ಕರ ಅವುಗಳನ್ನು ತಿನ್ನಬಾರದು ಅಂತ ಸ್ಮೃತಿಕಾರರು ಹೇಳಿರಬಹುದು. ಆದರೆ 'ಇದರ ಪರ್ಯಾಯವಾಗಿ ಅವರು ಅಷ್ಟೇ ದುರ್ವಾಸನೆಯುಳ್ಳ ಇಂಗನ್ನು ಹುಡುಕಿಬಿಟ್ಟರು' ಎಂದು ಸ್ವಾಮಿ ವಿವೇಕಾನಂದರು ಒಂದು ಕಡೆ ಬರೆದಿದ್ದಾರೆ. ಒಂದು ಕಾಲದಲ್ಲಿ ಮನುವಾದವನ್ನು ತಿರಸ್ಕರಿಸಿ, ಮಜ್ಜಿಗೆ ಮತ್ತು ಚಟ್ನಿಯಲ್ಲಿ ಬೆಳ್ಳುಳ್ಳಿ ಹಾಕುವ ಲಿಂಗಾ ಯತರು ಕೂಡ ಈಗ ಒಂದು ಜಾತಿ ಆಗಿಬಿಟ್ಟಿದ್ದಾರೆ. ನಾನು ಬೆಳಗಾವಿಯಲ್ಲಿ ವಿಭಾಗಾಧಿಕಾರಿಯಾಗಿದ್ದಾಗ ನನ್ನ ಮುಂದೆ ಜಾತಿ ಪ್ರಮಾಣ ಪತ್ರದ ಬಗ್ಗೆ ಒಂದು ಮೇಲ್ಮನವಿ ಬಂದಿತ್ತು. ಮೇಲ್ಮನವಿದಾರರಿಗೆ 'ಲಿಂಗಾಯಿತ' ಎಂದು ಜಾತಿ ಪ್ರಮಾಣ ಪತ್ರ ಬೇಕಿತ್ತು. ನನ್ನ ತೀರ್ಪಿನಲ್ಲಿ, 'ಲಿಂಗಾಯಿತ ಎಂದರೆ ಜಾತಿಯ ನಿರಾಕರಣೆ. ಅದು ಜಾತಿ ಅಲ್ಲ' ಎಂದು ನಾನು ಹೇಳಿದೆ.

ಊಟದ ಅಥವ ಉಡುಪುಗಳ ವ್ಯತ್ಯಾಸಗಳನ್ನು ಸಾಂಸ್ಕೃತಿಕ ವಿವಿಧತೆಯ ದೃಷ್ಟಿಯಿಂದ ನೋಡಿದರೆ ಅದು ಮಳೆಬಿಲ್ಲಿನ ಹಾಗೆ ವರ್ಣಮಯ ಎಂದನ್ನಿಸುತ್ತದೆ. ಆದರೆ ಶೇಖ್ ರೀದ್‌ಜೀ ಹೇಳಿದಂತೆ, ''ಈ ಕುಸುಬಿಯನ್ನು ಮುಟ್ಟಬಾರದು. ಇದು ಕೈಯನ್ನು ನೋಯಿಸುತ್ತದೆ.'' ಜಾತೀಯತೆ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ ಜನ ಎಲ್ಲವನ್ನೂ ಜಾತೀಯತೆಯ ಪ್ರಿಸಮ್‌ನಿಂದಲೇ ನೋಡುತ್ತಾರೆ. ಭೀಮ್‌ಸೇನ್ ಜೋಶಿಯ ವರು ವಚನಗಳನ್ನು ಹಾಡಲಿಲ್ಲ; ಮಲ್ಲಿಕಾರ್ಜುನ ಮನ್ಸೂರ್ ಅವರು ದಾಸರ ಪದಗಳನ್ನು ಹಾಡಲಿಲ್ಲ. ರಾಮರಾವ್ ನಾಯಕ್ ಅವರು ಮಲ್ಲಿಕಾರ್ಜುನ ಮನ್ಸೂರ್ ಅವರನ್ನು ಬಿಟ್ಟರೆ ಉಳಿದ ಉತ್ತರ ಕರ್ನಾಟಕದ ಸಂಗೀತವನ್ನು 'ಬೆಳ್ಳುಳ್ಳಿ ಹಾಡುಗಾರಿಕೆ' ಎಂದು ಅಣಕಿಸುತ್ತಿದ್ದರು.

ಕುಲ ಕುಲ ಎಂದು ಹೇಳುವವರ ಸಂಖ್ಯೆಯೇನೂ ಕಡಿಮೆ ಆಗುತ್ತಿಲ್ಲ. ಆಧುನಿಕ ಶಿಕ್ಷಣದ ಪ್ರಭಾವ ಹೆಚ್ಚಾಗುವುದರಿಂದ, ಈ ಕುಲ ಕುಲ, ಜಾತಿ ಜಾತಿ ಭಾವನೆ ಕ್ರಮೇಣ ಕ್ಷೀಣವಾಗಬಹುದು ಎಂಬ ನಂಬಿಕೆ ಇತ್ತು. ಆದರೆ ನಾವೀಗ ನೋಡುತ್ತಿರುವುದು ಇದಕ್ಕೆ ವಿರುದ್ಧವಾದದ್ದು. ಶಿಕ್ಷಿತರಿಂದಲೇ ಜಾತೀಯತೆಗೆ ಹೆಚ್ಚು ಪ್ರಚೋದನೆ ಸಿಗುತ್ತಿದೆ, ವಿಶೇಷವಾಗಿ ಚುನಾವಣೆಯ ಕಾಲದಲ್ಲಿ. ಚುನಾವಣೆ ಹತ್ತಿರ ಬರುತ್ತಿರುವಾಗ ನಾವು ಜಾತೀಯತೆಯ ತಾಂಡವವನ್ನು ನೋಡಬಹುದು.

ಅವಿಭಕ್ತ ಕುಟುಂಬಗಳು ಕೊನೆಗೊಳ್ಳುತ್ತಿರುವುದರಿಂದ ಮತ್ತು ಸಣ್ಣ ಕುಟುಂಬಗಳು ಹೆಚ್ಚಾಗುತ್ತಿರುವುದರಿಂದ ಬಹುಶಃ ಜನರು ಜಾತಿಯಲ್ಲಿ ಸುರಕ್ಷತೆಯನ್ನು ಹುಡುಕುತ್ತಿದ್ದಾರೆ. 1970ರಲ್ಲಿ ನಾನು ಬಳ್ಳಾರಿಯ ಮೋಕ ಗ್ರಾಮದಲ್ಲಿ ಒಂದು ತಿಂಗಳು ವಾಸ ವಿದ್ದೆ. ಬೇಸಿಗೆಯ ರಜದಲ್ಲಿ ಮೋಕದ ಶಾಲೆ ನನ್ನ ವಾಸಸ್ಥಾನ ವಾಗಿತ್ತು. ಒಂದು ದಿನ ನಾನು ಅಲ್ಲಿಯ ಕರಣಂ (ಶಾನುಭೋಗ)ರಾದ ದಿವಂಗತ ಭುಜಂಗರಾವ್ ದೇಸಾಯಿಯವರಲ್ಲಿ, 'ಈ ಊರಿನ ಎಲ್ಲರಿಗಿಂತ ಬಡ ಕುಟುಂಬದ ಮನೆಗೆ ಹೋಗಬೇಕು' ಎಂದು ಹೇಳಿದೆ. ಅವರು ನನ್ನನ್ನು ಮೋಕ ಗ್ರಾಮದ ಅತಿ ಬಡವನೊಬ್ಬನ ಗುಡಿಸಲಿಗೆ ಕರೆದುಕೊಂಡು ಹೋದರು. ಹೆಂಡತಿಯನ್ನು ಕಳೆದುಕೊಂಡಿದ್ದ ಆತನಿಗೆ ಇಬ್ಬರು ಮಕ್ಕಳಿದ್ದರು. ಹಿರಿಯವನಿಗೆ ಸುಮಾರು ಒಂಬತ್ತು ವರ್ಷವಾಗಿದ್ದರೆ, ಕಿರಿಯವನಿಗೆ ಸುಮಾರು ಆರು ವರ್ಷ ವಯಸ್ಸಾಗಿತ್ತು. ಒಂದು ತಿಂಗಳಿನಲ್ಲಿ ಆತನಿಗೆ ಸರಾಸರಿ ಇಪ್ಪತ್ತು ಅಥವ ಇಪ್ಪತ್ತೈದು ದಿನ ಕೆಲಸ ಸಿಗುತ್ತಿತ್ತು. ''ಕೆಲಸ ಸಿಗದೆ ಇರುವ ದಿನಗಳಲ್ಲಿ ನಿಮಗೆ ಊಟ ಎಲ್ಲಿಂದ ಸಿಗುತ್ತದೆ?'' ಎಂದು ನಾನು ಅವನನ್ನು ಕೇಳಿದೆ. ಅದಕ್ಕೆ ಆತ, ''ಅವತ್ತು ನಾನು ನೀರು ಕುಡಿದು ಉಪವಾಸ ಇದ್ದು ಬಿಡುತ್ತೇನೆ. ನನ್ನ ಮಕ್ಕಳಿಗೆ ನಮ್ಮ ಜಾತಿಯವರು ಊಟ ಕೊಡು ತ್ತಾರೆ'' ಎಂದು ಹೇಳಿದ. ಇದು ಜಾತಿಯ ಸಾಮಾಜಿಕ ಭದ್ರತೆ.

ಜಾತಿಯ ದೃಷ್ಟಿಯಿಂದ ಒಬ್ಬ ಮನುಷ್ಯನನ್ನು ನೋಡುವುದು ಎಂದರೆ ಮನುಷ್ಯತ್ವವನ್ನು ಕಿರಿದುಗೊಳಿಸಿದಂತೆ. ಒಮ್ಮೆ ಮಾಸ್ತಿಯವರು ಮಾತನಾಡುತ್ತಾ, ''ನಾನು ಕುವೆಂಪುಗೆ ನೀವು ಮಾನವತೆಯ ಕವಿಯಾಗಬೇಕು. ಒಕ್ಕಲಿಗರ ಕವಿ ಮಾತ್ರ ಆಗಬೇಡಿ ಎಂದು ಹೇಳಿದೆ'' ("I told Kuvempu, 'Ayya, be a poet for the humanity. Don't be a poet for the Vokkaligas alone'') ಎಂದು ನನ್ನ ಬಳಿ ಹೇಳಿದರು. ಕುವೆಂಪು ಅವರಿಗೆ ಆ ಮಾತನ್ನು ಹೇಳುವುದು ಮಾಸ್ತಿ ಅವರಿಗೆ ಮಾತ್ರ ಸಾಧ್ಯ ಇತ್ತು. ಈಗ ಇಂತಹ ಸಲಹೆಯನ್ನು ನಾಡಿನ ಜನತೆಗೆ ಕೊಡುವವರು ಯಾರಿದ್ದಾರೆ? ಈಗ ಸಾಹಿತ್ಯ ಮತ್ತು ಸಾಹಿತ್ಯದ ವಿಮರ್ಶೆಯನ್ನು ಕೂಡ ಜಾತೀಯತೆಯ ದೃಷ್ಟಿಯಿಂದ ನೋಡಲಾಗುತ್ತದೆ.

ಪ್ರಿಸಮ್‌ನಿಂದ ಹೊರಡುವ ಪ್ರಕಾಶ ಮಳೆ ಬಿಲ್ಲಿನ ಏಳು ಬಣ್ಣಗಳಲ್ಲಿ ವಿಭಕ್ತವಾಗುತ್ತದೆ. ಜಾತೀಯತೆಯ ಪ್ರಿಸಮ್‌ನಿಂದ ನೋಡಿದರೆ ಎಲ್ಲವೂ ವಿಭಕ್ತವಾದ ವರ್ಣಗಳಾಗಿ ಕಾಣಿಸುತ್ತವೆ. ಆದರೆ ಬಹಳ ಹೊತ್ತು ಆ ಪ್ರಿಸಮ್ ಅನ್ನು ಕಣ್ಣಮುಂದೆ ಇಟ್ಟರೆ ತಲೆನೋವು ಬರಬಹುದು. ಈ ತಲೆನೋವಿಗೆ ಉಪಚಾರ ಇಲ್ಲ.

ಕೃಪೆ : ವಿಜಯ ಕರ್ನಾಟಕ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.