Monday, March 18, 2013

ಡಾ. ಕಂಬಾರರಿಗೆ : ‘ಹೇಳತೇನಿ ಕೇಳು’ ಅಲ್ಲ : ‘ಕೇಳತೇನಿ ಹೇಳ್ರಿ !’

ಡಾ. ಸಿದ್ರಾಮ ಕಾರಣಿಕ

ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದೊಡ್ಡವರೆನಿಸಿಕೊಂಡವರು, ವಿದ್ವಾಂಸರು ಎಂಬ ಬಿರುದಾಂಕಿತರು ಹೇಳಿಕೆಗಳನ್ನು ನೀಡಬೇಕಾದರೆ ಸಾವಿರ ಸಲ ಯೋಚಿಸಬೇಕು. ತಕ್ಷಣದ ಅನುಭವ ಅಥವಾ ಮಾತಿನ ಭರದಲ್ಲಿ ಬೇಕಾಬಿಟ್ಟಿಯಾಗಿ ವಿಚಾರ ಲಹರಿಗಳನ್ನು ಹರಿಯಬಿಡವುದು ಸೂಕ್ತವಲ್ಲ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡುತ್ತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ವಿಶ್ವವಿದ್ಯಾಲಯಗಳಿಂದ ಕೆಟ್ಟ ವಿಮರ್ಶಕರ ಸೃಷ್ಟಿಯಾಗಿದೆ ಎಂಬ ಆರೋಪವನ್ನು ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ (ವಿ.ಕ. 13-03-2013).
ಕಂಬಾರರು ಒಂದು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದವರು. ಒಂದೇ ವಿಷಯ ಮತ್ತು ಪರಿಸರವನ್ನು ಇಟ್ಟುಕೊಂಡು ಹಲವಾರು ಪುಸ್ತಕಗಳನ್ನು ಬರೆದವರು. ನಡುನಡುವೆ ವಿಲಕ್ಷಣವಾದ ಹೇಳಿಕೆಗಳನ್ನು ನೀಡುತ್ತ ತಾವು ಪ್ರಬುದ್ಧರು ಎಂಬುದನ್ನು ಸಾಬೀತುಪಡಿಸಲು ಮುಂದಾದವರು. ಇವರು ಈಗ ಹೀಗೆ ಹೇಳುತ್ತಿರವುದನ್ನು ಕಂಡಾಗ ಇದನ್ನು ಅವರು ತಮ್ಮ ಅನುಭವದಿಂದಲೇ ಅವರು ಹೇಳಿರಬಹುದು ಎನಿಸುತ್ತದೆ.
ವಿಶ್ವವಿದ್ಯಾಲಯಗಳು ಇಂದು ಮೊದಲಿನ ವಾತಾವರಣವನ್ನು ಉಳಿಸಿಕೊಂಡಿಲ್ಲ ಎಂಬುದೇನೋ ನಿಜ. ಆದರೆ ಅದನ್ನೇ ಮುಂದಿಟ್ಟುಕೊಂಡು ತಮ್ಮ ಹಿರಿತನದ ಜಾಡ್ಯವನ್ನು ಬಿತ್ತುವುದು ಸರಿಯಾದ ಕ್ರಮವಲ್ಲ. ‘ಬ್ರಿಟಿಷರಿಂದ ನಮಗಾದ ದೊಡ್ಡ ಲಾಭವೆಂದರೆ ಅವರು ಶಿಕ್ಷಣವನ್ನು ಸಾರ್ವಜನಿಕಗೊಳಿಸಿದ್ದು. ಅದು ಐತಿಹಾಸಿಕ ಅನಿವಾರ್ಯ. ಆದರೆ ನಮ್ಮ ಮನಸು ಶಿಕ್ಷಿತವಾದದ್ದು ಪಾಶ್ಚಾತ್ಯ ರೀತಿಯಲ್ಲಿ. ವಿದ್ಯೆಗಳನ್ನು ಕಲಿಸಲು ಹೇಳಿಕೊಟ್ಟ ವಿಧಾನಗಳನ್ನೇ ಬಳಸಿದೆವು. ಕನ್ನಡ ಮತ್ತು ಸಂಸ್ಕೃತದಂಥ ವಿಷಯಗಳನ್ನೂ ಅವರ ವಿಧಾನದಲ್ಲಿಯೇ ಓದಿದೆವು’ ಎಂಬ ಕಂಬಾರರ ಹೇಳಿಕೆ ಅರ್ಧ ಸತ್ಯದಿಂದ ಕೂಡಿದೆ. ನಾವು ಪಾಶ್ಚಾತ್ಯರ ಮಾದರಿಯಲ್ಲಿ ವಿದ್ಯಾದಾನದ ವಿಧಾನಗಳನ್ನು ಇಂದಿಗೂ ಅನುಸರಿಸುತ್ತಿಲ್ಲ. ಪಾರಂಪರಿಕವಾದ ಗುರುಕುಲಗಳಲ್ಲಿ ಇದ್ದ ಶಿಕ್ಷಣ ಮಾದರಿಯೇ ಇಂದಿಗೂ ನಮ್ಮ ನಡುವೆ ಇದೆ. ಒಂದು ಬದಲಾವಣೆ ಎಂದರೆ ಎಲ್ಲ ಜಾತಿ-ಜನಾಂಗದವರಿಗೆ ಶಿಕ್ಷಣದ ಅವಕಾಶ ಇಂದು ನಮಗಿದೆ ಅಷ್ಟೆ. ಇದು ಕಂಬಾರರು ಹೇಳಿದಂತೆಯೇ ಬ್ರಿಟಿಷರಿಂದ ಆದ ಬದಲಾವಣೆ. ಮುಂದೆ ಶಿಕ್ಷಣದ ಪಠ್ಯಕ್ರಮವನ್ನು ಒಂದಿಷ್ಟು ನೋಡಿದರೆ ಕಂಬಾರರು ತಮ್ಮ ಮಾತುಗಳನ್ನು ಹಿಂತೆಗೆದುಕೊಳ್ಳುತ್ತಾರೇನೋ ! ಯಾಕೆಂದರೆ ಇಂದಿಗೂ ದೇವರು, ಧರ್ಮ ಮೊದಲಾದ ವಿಷಯಗಳೇ ಪಠ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿವೆ. ಅದೂ ಒಂದೇ ಧರ್ಮಕ್ಕೆ ಸಂಬಂಧಿಸಿದಂತೆ ! ಹಾಗಾದರೆ ಇದನ್ನು ಪಾಶ್ಚಾತ್ಯರ ಅನುಕರಣೆ ಎನ್ನೋಣವೆ ?
ಈ ದೇಶದಲ್ಲಿ ಯಂತ್ರ ಪದವೀಧರರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ. ಕನ್ನಡ ಶಾಲೆಯಲ್ಲಿಯೇ ಕಲಿತು ಅದೇ ಬದಲಾವಣೆಯಿಲ್ಲದ ಪಠ್ಯದ ಮೂಲಕ ಒಂದಿಷ್ಟು ಓದು ಬರಹ ಕಲಿತ ಅಸಂಖ್ಯಾತ ಜನ ಇಂದಿಗೂ ಸರಿಯಾದ ಬದುಕಿನ ನೆಲೆ ಕಾಣದೆ ಕಂಗಾಲಾಗಿದ್ದಾರೆ. ಗ್ರಾಮೀಣ ಭಾಗದಿಂದ ಬಂದ ಕಂಬಾರರು ಇದನ್ನು ಕಂಡಿಲ್ಲವೆ ? ಸಾಮಾನ್ಯ ಜನರ ಬದುಕು ಈ ಸಾಂಪ್ರದಾಯಿಕ ಶಿಕ್ಷಣದಿಂದ ಏನೇನೂ ಬದಲಾವಣೆ ಆಗಿಲ್ಲ. ಹೀಗೆ ಹೇಳಿದ ತಕ್ಷಣ ಡಾ. ಕಂಬಾರರು ತಮ್ಮ ಹಳೆಯ ಮಾತನ್ನು ಉಚ್ಚರಿಸಬಹುದು. ಅವರ ಪ್ರಕಾರ ಜನಪದ ಬದುಕು ಬದಲಾಗಬಾರದು ; ಇದರಿಂದ ಜಾನಪದ ಸಂಸ್ಕೃತಿಯೊಂದು ಅಳಿಯುತ್ತದೆ. ಕಾಡಿನಲ್ಲಿ ಇದ್ದವರಿಗೆ ಶಿಕ್ಷಣ ನೀಡುವ ಅಗತ್ಯವಿಲ್ಲ. ಹಾಗೆ ಮಾಡಿದರೆ ಅವರ ಸಂಸ್ಕೃತಿ ಹಾಳಾಗುತ್ತದೆ ! ಹಾಗಾದರೆ ಯಾರು ಎಲ್ಲಿ ಇರುತ್ತಾರೋ ಅಲ್ಲಿಯೇ ಇರಬೇಕು ಎಂಬ ಮಾನಸಿಕ ಜಾಡ್ಯ ನಮ್ಮ ದೇಶದ ಬಹುಪಾಲು ವಿದ್ವಾಂಸರಲ್ಲಿದೆ ಎಂಬ ಅರ್ಥವಲ್ಲವೆ ?
ಇನ್ನು ಕನ್ನಡದ ಬಗ್ಗೆ ಕಂಬಾರರು ಎಲ್ಲಿ ಹೋದಲ್ಲಿ ಮಾತನಾಡುತ್ತಾರೆ. ಅವರು ಒಂದು ವಿಷಯವನ್ನು ಅರಿತುಕೊಳ್ಳಬೇಕು. ಯಾವುದೇ ಭಾಷೆಯಾದರೂ ಅದು ಬದುಕು ನೀಡಬೇಕು. ಬದುಕು ನೀಡದ ಭಾಷೆಯನ್ನು ಕಲಿಯುವುದರಿಂದ ಆಗುವ ಪ್ರಯೋಜನವಾದರೂ ಏನು ? ಹಾಗಾಗಿ ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಕಂಬಾರರು ಅಥವಾ ಅವರಂಥವರು ಹೇಳುವ ಅವಶ್ಯಕತೆಯೇ ಆಗ ಇರವುದಿಲ್ಲ. ಜನ ತಾವಾಗಿಯೇ ಕನ್ನಡವನ್ನು ಕಲಿಯಲು ಮುಂದೆ ಬರುತ್ತಾರೆ ; ಕನ್ನಡ ಕಲಿಯಲು ಪೈಪೋಟಿ ನಡೆಯುತ್ತದೆ. ಉನ್ನತ ಸ್ಥಾನಗಳಲ್ಲಿ ಇರುವ ಕನ್ನಡ ಪರ ಮಾತುಗಳನ್ನು ಉದರಿಸುವವರು ಸರಕಾರದ ಮುಂದೆ ಇಂಥ ಪ್ರಸ್ತಾಪವೇನಾದರೂ ಇಟ್ಟಿದ್ದಾರೆಯೇ ? ಇಟ್ಟಿದ್ದರೆ ಅವು ಕಾರ್ಯರೂಪಕ್ಕೆ ಬರಲು ಏನು ಹೋರಾಟ ಮಾಡಿದ್ದಾರೆ ? ಬರೀ ಹೇಳಿಕೆಗಳನ್ನು ಕೊಡುವುದರಿಂದಲೇ ತಾವು ಬಹುದೊಡ್ಡ ವಿದ್ವಾಂಸ ಎನಿಸಿಕೊಳ್ಳುತ್ತೇವೆ ಎಂದರೆ ತಪ್ಪಾಗುವುದಿಲ್ಲವೆ ?
*****

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.