Thursday, May 10, 2012

ಡಬ್ಬಿಂಗ್ ಮತ್ತು ವಾದಗಳು !



ಆರಂಭದಲ್ಲಿ ಕೆ.ವಿ.ತಿರುಮಲೇಶ್ ಬರೆದ ಲೇಖನ

ಭಾಷೆ ಯಾವುದೇ ಇರಲಿ, ಅಮೀರ್ ಖಾನ್ ಚರ್ಚೆಗೆ ತಂದ ವಿಷಯ ನಮಗೆ ಮುಖ್ಯವಾಗಬೇಕು. ನಮ್ಮಲ್ಲಿ ಹಲವರಿಗೆ ಕನ್ನಡದ ಜತೆ ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳು ಬರ್ತವೆ; ಆದ್ದರಿಂದ ಅಮೀರ್ ಖಾನನ ಪ್ರೋಗ್ರಾಮನ್ನ ಅಥವಾ ಡಿಸ್ಕವರಿ ಚಾನಲಿನ ಪ್ರೋಗ್ರಾಮನ್ನ ಆಯಾ ಭಾಷೆಗಳಲ್ಲಿ ಕೇಳಿ ಅರ್ಥಮಾಡಿಕೊಳ್ಳುವುದು ಸಾಧ್ಯ. ಆದರೆ ಕರ್ನಾಟಕದಲ್ಲಿ ಕನ್ನಡ ಮಾತ್ರವೇ ಗೊತ್ತಿರುವ ಬಹುಸಂಖ್ಯೆಯ ಜನರಿದ್ದಾರೆ. ಅವರಿಗೆ ಈ ಪ್ರೋಗ್ರಾಮುಗಳು ಕನ್ನಡದಲ್ಲಿ ಸಿಗಬೇಕು. ಸದ್ಯ ಅದಕ್ಕಿರುವ ಮಾರ್ಗ ಡಬ್ಬಿಂಗ್ ಒಂದೇ. ಅದಲ್ಲ ಎಂದಾದರೆ ಇದನ್ನು ವಿರೋಧಿಸುವ ಜನರು ಮೂಲಕನ್ನಡದಲ್ಲೇ ಇಂಥ ಪ್ರೋಗ್ರಾಮುಗಳನ್ನು ಕೊಡಬೇಕು. ಹಾಗೆ ಕೊಡುವುದು ಸಾಧ್ಯವಿಲ್ಲ ಎಂದಾದರೆ ತೆಪ್ಪಗಿರಬೇಕು.

ಯಾವುದಾದರೊಂದು ಚಾನೆಲ್ ನಲ್ಲಿ ಅಮೀರ್ ಖಾನನ ಅಥವಾ ಡಿಸ್ಕವರಿ ಚಾನೆಲಿನ ಪ್ರೋಗ್ರಾಮುಗಳು ಡಬ್ಬಿಂಗ್ ಆಗಿ ಬಂದರೆ ಕನ್ನಡ ಚಿತ್ರ ನಿರ್ಮಾಪಕರಿಗೆ ಭಯ ಯಾಕೆ? ಅವುಗಳ ಜತೆ ಸ್ಪರ್ಧಿಸಬಲ್ಲ ಪ್ರೋಗ್ರಾಮುಗಳನ್ನು ನೀಡಿರಿ. Or else you will be a dog in the manger!

ಅಮೀರ್ ಖಾನ್ ಗೆ ಕೆಲವೊಂದು ಟಾಪಿಕ್ಸ್ ನೀಡಲು ಈ ಮೂಲಕ ಇಚ್ಛಿಸುತ್ತೇನೆ:

೧. ಪರೀಕ್ಷೆಗಳಲ್ಲಿ ಫೇಲ್ ಆಗುವ ವಿದ್ಯಾರ್ಥಿಗಳ ಬಗ್ಗೆ ಸಮಾಜ ಅನ್ಯಾಯ ಮಾಡುತ್ತಿದೆಯೇ?

೨. ಸ್ತ್ರೀಯರ ಮೇಲಣ ಅತ್ಯಾಚಾರ ತದೆಗಟ್ಟುವುದು ಹೇಗೆ?

೩. ಅಣು ಇಂಧನದ ವಿನಾ ಲೋಕ ತನ್ನ ಭವಿಷ್ಯವನ್ನು ಕಲ್ಪಿಸುವುದು ಸಾಧ್ಯವೇ?

೪. ಕಾನೂನು ಇದ್ದರೂ ಬಾಲ ಕಾರ್ಮಿಕ ಪದ್ಧತಿ ಯಾಕೆ ನಿಂತಿಲ್ಲ?

೫. ಪ್ರತಿಭೆ ಎನ್ನುವ ವಸ್ತುವೊಂದು ಇದೆಯೇ? ಅಥವಾ ಅವಕಾಶದ ಉಪಯೋಗವೇ ಇದರ ಹಿಂದೆ ಇರುವಂಥದೇ?

೬. ಜಾತೀಯತೆಯನ್ನು ತೊಡೆದು ಹಾಕುವುದು ಸಾಧ್ಯವೇ? ಹೇಗೆ?

೭. ಸಂಸ್ಕೃತಿ ಎಂದರೆ ನಿಜಕ್ಕೂ ಏನು?

೮. ಅಮೇರಿಕ, ಇಂಗ್ಲೆಂಡ್, ಯುರೊಪ್ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳನ್ನು ತೆಗಳುತ್ತಲೇ ಜನ ಯಾಕೆ ಅಲ್ಲಿಗೆ

ಹೋಗಲು, ಅಲ್ಲೇ ನೆಲಸಲು ಬಯಸುತ್ತಾರೆ?

೯. ಮರಣದಂಡನೆಯನ್ನು ಕಿತ್ತುಹಾಕಬೇಕೇ? ರೇಪ್ ಮಾಡಿ ಶಿರ ತುಂಡರಿಸುವ, ಆಸಿಡ್ ಎರಚಿ ಹೆಂಗಸರ ಭವಿಷ್ಯವನ್ನೇ

ನಾಶಮಾಡುವ ಕ್ರಿಮಿನಲುಗಳಿಗೂ ಮರಣದಂಡನೆ ಬೇಡವೇ?

೧೦. ನಮ್ಮ ಸಿನೆಮಾಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿವೆಯೇ? ಉದಾಹರಣೆಗೆ, ಪ್ರೀತಿ ಮಾಡಲು ಒತ್ತಾಯಿಸುವುದು,

ಸ್ತ್ರೀಯರ ಹಿಂದೆ ಬೀಳುವುದು, ಗುರಿ ಸಾಧಿಸಲು ಏನು ಮಾಡಲೂ ಸಿದ್ಧರಾಗುವುದು.

೧೧. ನಮ್ಮ ಕೃಷಿ ಉದ್ಯಮೀಕರಣಕ್ಕೆ ಒಳಗಾಗಬೇಕೇ? (ದೊಡ್ಡ ಹಿಡುವಳಿಗಳು)

೧೨. ನೀರಿನ ಸಮಸ್ಯೆಯನ್ನು ನೀಗಿಸುವುದು ಹೇಗೆ?

೧೩. ಅಂಗದುರ್ಬಲರನ್ನು ಸಮಾಜ ಹೇಗೆ ನೋಡುತ್ತದೆ?

೧೪. ಸೆಕ್ಸ್ ವರ್ಕರ್ಸ್ ಎಂದು ವೇಶ್ಯೆಯರನ್ನು ನಾಮಕರಣ ಮಾಡುವುದರಿಂದ ವೇಶ್ಯಾಪದ್ಧತಿಯನ್ನು ತಡೆಗಟ್ಟುವುದು ಸಾಧ್ಯವೇ? ಅಥವಾ ತಡೆಗಟ್ಟುವುದೇ ಬೇಡವೇ?!

೧೫. ಪ್ರಜಾಪ್ರಭುತ್ವ ಮತ್ತು ವೋಟ್ ಬ್ಯಾಂಕ್- ಈ ವಿರೋಧಾಭಾಸಕ್ಕೆ ಯಾವ ಪರಿಹಾರ?

ಇಂಥ ಹಲವಾರು ಸಮಸ್ಯೆಗಳು ನಮ್ಮ ಮುಂದಿವೆ. ಇವನ್ನು ನೀವೂ ಸೂಚಿಸಬಹುದು, ಯೋಚಿಸಬಹುದು, ಇವುಗಳ ಕುರಿತು ಬರೆಯಬಹುದು. ಅಮೀರ್ ಖಾನಿಗೂ ತಿಳಿಸಬಹುದು.

ಡಬ್ಬಿಂಗ್ ನಿಂದ ಕನ್ನಡವೇನೂ ಹಾಳಾಗುವುದಿಲ್ಲ. ಲೋಕದ ಅನೇಕ ಭಾಷೆಗಳಲ್ಲಿ ಅನುವಾದಗಳು, ಡಬ್ಬಿಂಗ್, ಸಬ್-ಟೈಟಲಿಂಗ್ ನಡೀತಿವೆ. ಅವು ಯಾವುದಕ್ಕೂ ಇಲ್ಲದ ಭಯ ಕನ್ನಡಕ್ಕೆ ಯಾಕೆ? ಅದೂ ಅಲ್ಲದೆ ರಕ್ಷಣಾತಂತ್ರದಿಂದ, ದಿಗ್ಭಂಧನದಿಂದ ಯಾವ ಭಾಷೆಯೂ ಯಾವ ಕಲೆ-ವಿಜ್ಞಾನವೂ ಬೆಳೆಯವು. ಕನ್ನಡ ಮೊಲೆಹಾಲಿನಲ್ಲಿ ಎಷ್ಟು ಕಾಲ ಇರಬೇಕು?
ಈ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು

 Sandesh S says: excellent 1 ಪ್ರತಿಭೆ ಎನ್ನುವ ವಸ್ತುವೊಂದು ಇದೆಯೇ? ಅಥವಾ ಅವಕಾಶದ ಉಪಯೋಗವೇ ಇದರ ಹಿಂದೆ ಇರುವಂಥದೇ?

    ನಮ್ಮ ಕೃಷಿ ಉದ್ಯಮೀಕರಣಕ್ಕೆ ಒಳಗಾಗಬೇಕೇ? (ದೊಡ್ಡ ಹಿಡುವಳಿಗಳು)

    ನಮ್ಮ ಸಿನೆಮಾಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿವೆಯೇ?
    ಅಮೇರಿಕ, ಇಂಗ್ಲೆಂಡ್, ಯುರೊಪ್ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳನ್ನು ತೆಗಳುತ್ತಲೇ ಜನ ಯಾಕೆ ಅಲ್ಲಿಗೆ ಹೋಗಲು, ಅಲ್ಲೇ ನೆಲಸಲು ಬಯಸುತ್ತಾರೆ?
    ಸಂಸ್ಕೃತಿ ಎಂದರೆ ನಿಜಕ್ಕೂ ಏನು? everyone should think about these
  
 Veena Bhat says : ನಿಜ ಸರ್…,ಇಲ್ಲಿ ಭಾಷೆಗಿಂತ ವಿಷಯವೇ ಮುಖ್ಯ.ಈ ಸಮಸ್ಯೆ ಒಂದು ಭಾಷೆಯ ಜನರಿಗೆ ಸೀಮಿತವಾಗಿಲ್ಲ.ಇದು ಇಡೀ ದೇಶ ಎದುರಿಸುತ್ತಿರುವ ಸಮಸ್ಯೆ .ವಿದೇಶೀ ಸಿನಿಮಾಗಳ ,ವಿದೇಶೀ ಸಂಸ್ಕೃತಿಯ ಎಲ್ಲಾ ಕೆಟ್ಟದ್ದನ್ನು ಅನುಕರಣೆ ಮಾಡುವ ನಮ್ಮ ಸಿನೆಮಾಗಳು ಮತ್ತು ವಾಹಿನಿಗಳು ಯಾವ ರೀತಿಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತಿವೆ ?
    ನನ್ನ ಕೆಲವು ಪಾಯಿಂಟ್ಸ್ ಗಳನ್ನು ಇದರೊಂದಿಗೆ ಸೇರಿಸಲು ಇಷ್ಟಪಡುತ್ತೇನೆ ..
    ೧.ಭ್ರಷ್ಟಾಚಾರ ನಿರ್ಮೂಲನ ಸಾಧ್ಯವೇ..?
    ೨.ಲಿವ್ ಇನ್ ರಿಲೇಶನ್ ಶಿಪ್ ನ್ನು ಒಪ್ಪಿಕೊಳ್ಳಬೇಕೆ..?
    ೩.ಸ್ತ್ರೀ ಸಮಾನತೆ ಹೇಗೆ ಸಾಧ್ಯ ?
    ೪ .ಸಲಿಂಗ ವಿವಾಹ ನಮ್ಮ ಸಂಸ್ಕೃತಿಗೆ ವಿರೋಧ ಅಲ್ಲವೆ ? ಇದು ಕುಟುಂಬ ವ್ಯವಸ್ಥೆಗೆ ಮಾರಕ ಅಲ್ಲವೆ ?
    ೫.ಸರಕಾರದ ಯೋಜನೆಗಳು ಜನರಿಗೆ ತಲುಪುವಂತೆ ಮಾಡುವುದು ಹೇಗೆ ? [ಹೆಚ್ಚಿನವು ಕಡತಗಳಲ್ಲೇ ಉಳಿಯುತ್ತವೆ ]
    ೬.ಬಿಕ್ಷುಕರ ಸಮಸ್ಯೆ -ಬಿಕ್ಷಾಟನೆ ಯನ್ನು ತಡೆಯುವುದು ಹೇಗೆ ?

    ವಸುಧೇಂದ್ರ says: ಪ್ರಿಯ ತಿರುಮಲೇಶ್,
    ನಿಮ್ಮ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ. ಸ್ಪರ್ಧೆಯಿಲ್ಲದ ಯಾವುದೇ ಚಟುವಟಿಕೆಯೂ ಕಾಲಕ್ರಮೇಣ ಗುಣಮಟ್ಟದಲ್ಲಿ ಕುಸಿಯುತ್ತದೆ. ಕನ್ನಡ ಸಿನಿಮಾ ಎಂಬ ‘ಹುಲಿಮರಿ’ಯನ್ನು ಬೆಕ್ಕಿನಂತೆ ಮನೆಯಲ್ಲಿ ಹಾಲು-ಅನ್ನ ಕೊಟ್ಟು ಸಾಕಿದ್ದು ಸಾಕು. ಈ ಮನೆಪ್ರೀತಿ ಇನ್ನೂ ಮುಂದುವರೆದರೆ ಅದು ತನ್ನ ಶಿಕಾರಿಯ ಶಕ್ತಿಯನ್ನೇ ಮರೆತುಬಿಟ್ಟೀತು. ಅದಕ್ಕೀಗ ಸ್ವಾತಂತ್ರ್ಯ ಕೊಡೋಣ. ಕಾಡಿನಲ್ಲಿ ಎಲ್ಲ ಪ್ರಾಣಿ ಸಂಕುಲದ ಮಧ್ಯೆ ಅದು ಘರ್ಜಿಸಲಿ. ತನ್ನ ಶಕ್ತಿಯನ್ನು ಮೆರೆಯಲಿ.

    ಮನೆಯಲ್ಲಿ ಅಕ್ಕ ಅತ್ಯಂತ ಪ್ರೀತಿಯಿಂದ ಡಿಸ್ಕವರಿ, ಹಿಸ್ಟರಿ ಛಾನಲ್ಗಳನ್ನು ನೋಡುತ್ತಾಳೆ. ಗಳಿಗೆಗೊಮ್ಮೆ ಅದರ ಆಂಗ್ಲ ವರದಿ ಅರ್ಥವಾಗದೆ ‘ಏನಂತೋ?’ ‘ಏನಂತೋ’ ಎಂದು ನನ್ನನ್ನು ಕೇಳಿದಾಗ, ಕನ್ನಡದಲ್ಲಿ ಅದನ್ನು ನಾವು ಕೊಡುತ್ತಿಲ್ಲವಲ್ಲಾ ಎಂದು ಬೇಸರವಾಗುತ್ತದೆ. ಕಲೆಯ ಆಸ್ವಾದನೆಗೆ ಸೀಮೆಗಳನ್ನು ಒಡ್ಡುವುದು ಅಮಾನವೀಯ. ಒಂಚೂರು ವಿಶಾಲ ಮನೋಭಾವದಿಂದ ಜಗತ್ತನ್ನು ನೋಡೋಣ. ದೇಶ-ವಿದೇಶಗಳಲ್ಲಿ ಎಂತೆಂಥಹ ಅದ್ಭುತ ಸಿನಿಮಾಗಳಿವೆ! ಅವುಗಳನ್ನು ನಮ್ಮವರು ನೋಡುವುದು ಬೇಡವೆ? ವಿದ್ಯಾವಂತರು ಮಾತ್ರ ಆಂಗ್ಲ ಸಬ್-ಟೈಟಲ್ ಹಾಕಿಕೊಂಡು ನೋಡಿಬಿಟ್ಟರೆ ಸಾಕೆ? ನಮ್ಮವರ ಸಿನಿಮಾ ಗ್ರಹಿಕೆ ಗುಣಮಟ್ಟ ಹೆಚ್ಚುವುದು ಯಾವಾಗ? ಲಾಂಗು-ಮಚ್ಚು ಹಿಡಿದುಕೊಂಡು ರಕ್ತ ಚೆಲ್ಲಾಡುವ ನಮ್ಮವರ ಸಿನಿಮಾಗಳು ಬಹು ಕೆಳಮಟ್ಟದಲ್ಲಿವೆ. ಬೇರೆ ರಾಜ್ಯದ ಗೆಳೆಯರ ಮುಂದೆ ಮಾತನಾಡುವಾಗ ನಮ್ಮಲ್ಲಿ ಒಳ್ಳೆಯ ಸಿನಿಮಾಗಳೇ ಇತ್ತೀಚೆಗೆ ಬಂದಿಲ್ಲವೆಂಬ ಕಟು ಸತ್ಯ ನನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತದೆ. ನಾವು ದೇಶದ ಉಳಿದ ರಾಜ್ಯಗಳವರ ಜೊತೆಗೆ ಎದೆಯುಬ್ಬಿಸಿ ಮಾತನಾಡುವಂತಹ ಸಿನಿಮಾಗಳು ನಮಗೆ ಕನ್ನಡದಲ್ಲಿ ಬೇಕು. ಸ್ಪರ್ಧೆಯನ್ನು ಒಡ್ಡದೆ ಅದನ್ನು ಸಾಧಿಸುವುದು ಆಗುವದಿಲ್ಲ.

    ಜಗತ್ತಿನ ಸಕಲೆಂಟು ನುಡಿಯ ಪುಸ್ತಕಗಳನ್ನು ಅನುವಾದ ಮಾಡಿಕೊಂಡರೂ ಕನ್ನಡದ ಸಾಹಿತ್ಯಕ್ಕೆ ಯಾವ ಕೊರೆತೆಯೂ ಆಗಿಲ್ಲ ಅಥವಾ ಅದರಿಂದ ಕನ್ನಡ ಸಂಸ್ಕೃತಿ ನಶಿಸಿಯೂ ಇಲ್ಲ. ದೇಶದಲ್ಲಿ ಹೆಮ್ಮೆಯಿಂದ ತಲೆ ಎತ್ತುವಂತೆ ಈವತ್ತಿಗೂ ನಮ್ಮ ಸಾಹಿತ್ಯವಿದೆ. ಎಂಟು ಜ್ಞಾನಪೀಠಗಳನ್ನು ಪಡೆದಿದೆ. ಹಾಗಿದ್ದ ಮೇಲೆ ಸಿನಿಮಾ ರಂಗದಲ್ಲೇಕೆ ಕಳವಳ? ಗಟ್ಟಿ ಕಾಳುಗಳು ಖಂಡಿತಾ ಉಳಿದು ಕೊಳ್ಳುತ್ತವೆ. ಡಬ್ಬಿಂಗ್ ಅನುಮತಿ ಸಿಕ್ಕರೂ ಗಿರೀಶ್ ಕಾಸರವಳ್ಳಿಯವರ ಸಿನಿಮಾಗಳು ದೇಶ-ವಿದೇಶ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯುತ್ತಲೇ ಹೋಗುತ್ತವೆನ್ನುವದರಲ್ಲಿ ನನಗೆ ಅನುಮಾನವಿಲ್ಲ. ಜೊಳ್ಳುಗಳು ಹಾರಿ ಹೋದರೆ ನನಗೆ ಬೇಸರವೇನೂ ಇಲ್ಲ ಬೇಗನೆ ಡಬ್ಬಿಂಗ್ ಬರಲಿ. ಬೇಕಿದ್ದರೆ ಯಾವ ಸಿನಿಮಾ, ಯಾವ ಕಾರ್ಯಕ್ರಮಗಳನ್ನು ಕನ್ನಡಕ್ಕೆ ತರಬಹುದೆಂಬುದನ್ನು ನಿರ್ಧರಿಸುವ ಒಂದು ‘ಪ್ರಾಮಾಣಿಕ’ ಜನರ ಗುಂಪನ್ನು ಮಾಡೋಣ.
 Ahdithcya Kjeevaratmna says: Superb figurative sense.” ಕನ್ನಡ ಸಿನಿಮಾ ಎಂಬ ‘ಹುಲಿಮರಿ’ಯನ್ನು ಬೆಕ್ಕಿನಂತೆ ಮನೆಯಲ್ಲಿ ಹಾಲು-ಅನ್ನ ಕೊಟ್ಟು ಸಾಕಿದ್ದು ಸಾಕು. ಈ ಮನೆಪ್ರೀತಿ ಇನ್ನೂ ಮುಂದುವರೆದರೆ ಅದು ತನ್ನ ಶಿಕಾರಿಯ ಶಕ್ತಿಯನ್ನೇ ಮರೆತುಬಿಟ್ಟೀತು”

        shama, nandibetta says: beautiful vasudhendra sir…. hats off….
     
 ಸಂದೀಪ್ ಕಾಮತ್ says: mir Khan has planned for only 13 episodes friends!
 
  prathibha nandakumar says: sir i agree with you but plse get me ONE slot on any kannada channel i will give you 100% better programme than satyameva jayathe. plse get me one slot plse.. plse… i will do it at half the cost…plse get me one slot… do you get the point? protest dubbing and give a chance for kannada talent.
   

  Dhananjaya says: ello. It is very good to know that you can make a good program compare to SMJ. Who stopped you. you are always to free to make your program. It all depends on your self confidence finally. 
Ananda Prasad says:  ಸತ್ಯಮೇವ ಜಯತೇ ತರಹದ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡುವುದಕ್ಕಿಂತಲೂ ನಮ್ಮ ಸ್ವಂತ ಚಿಂತನೆಯಲ್ಲೇ ಅದೇ ತರಹದ ಕಾರ್ಯಕ್ರಮಗಳನ್ನು ಅದಕ್ಕಿಂತಲೂ ಚೆನ್ನಾಗಿ ಮಾಡಲು ಸಾಧ್ಯವಿದೆ. ಅದಕ್ಕೆ ಹಣದ ಹಿಂದೆ ಬಿದ್ದಿರುವ ನಮ್ಮ ಟಿವಿ ವಾಹಿನಿಗಳು ಅವಕಾಶ ಕೊಡುವುದಿಲ್ಲ ಅಷ್ಟೇ. ಅದುವೇ ಅಂಥ ಕಾರ್ಯಕ್ರಮಗಳು ಕನ್ನಡದಲ್ಲಿ ಬರದೆ ಇರಲು ಪ್ರಧಾನ ಕಾರಣ. ಕನ್ನಡ ಟಿವಿ ವಾಹಿನಿಗಳು ಮೂಢ ನಂಬಿಕೆಗಳನ್ನು ಬೆಳೆಸುವುದರಲ್ಲಿ ಆಸಕ್ತವಾಗಿವೆಯೇ ಹೊರತು ಜ್ಞಾನ, ವಿಜ್ಞಾನ, ಚಿಂತನೆ ಬೆಳೆಸಲು ಶೇಕಡಾ ಒಂದರಷ್ಟೂ ಪ್ರಯತ್ನಿಸುತ್ತಿಲ್ಲ, ಅದು ಅವುಗಳಿಗೆ ಬೇಕಾಗಿಯೂ ಇಲ್ಲ.
 harsha says: ee thara slot kelodu badalu, youtube nalli nimma show na video upload.. aamir khan video in kannada has 28,000+ views, try to get more views that that.. aga jana yarige support madtha idare antha channel avarige torisa bahudu..adu bittu ee thara slot ge pleading madodu beda!! prove ur talent rather than asking for a chance to showcase it.. 

shivaprakash says: Madam, Getting a slot is purely depend on commercial sense of channels. If our own kannada channels are stupidly telecasting 70% Cinema related bakwaas and nonsense news, do you expect us to watch?…..No way.

Other languages like Tamil and Telugu become popular in the normal life of bengaluru, hubli, shivamogga in last 25-30 years….the reason is hungry audience are running behind creativity…..so they watched creativity and learned other languages, adopted their culture,started forgetting kannada, unfortunately started insulting kannada movies….

You wrote a sentence for Ravi belagere’s mandovi…..”Markwez hindenduu kannadakke ee mattige bandiralilla…”….what does it mean?…do u call it as remake?dubbing?translation?….everything is same….U might have observed by this time…My english is not so good, so i read mandoovi 3-4 times and enjoyed it. So u want me to buy original Markwez, learn english(or any parent language) or Mandovi?….What do u say?
Please dont kill kannada, kannadiga and karnataka by opposing dubbing.

ವಸಂತ says: ಸತ್ಯ ಮೇವ ಜಯತೇ ಮತ್ತು ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿ ಅನ್ನುವ ಪರಿಹಾರ !

    ಸತ್ಯ ಮೇವ ಜಯತೇ ಅನ್ನುವ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡದಂತೆ ಸುವರ್ಣ ವಾಹಿನಿಯನ್ನು ಕೆಲವು ಖಾಸಗಿ ಸಂಸ್ಥೆಗಳು ತಡೆದರು. ಅದರ ಬೆನ್ನಲ್ಲೇ ಜಗತ್ತಿನ ಜ್ಞಾನ, ಮನರಂಜನೆಯೆಲ್ಲವನ್ನು ಕನ್ನಡದಲ್ಲೇ ಪಡೆಯುವುದು ಕನ್ನಡ ಪರವೂ, ಗ್ರಾಹಕರಾಗಿ ಅದು ಕನ್ನಡಿಗರ ಹಕ್ಕು ಎಂಬ ಕೂಗು ಬಲು ದೊಡ್ಡ ದನಿಯಲ್ಲೇ ಕಳೆದೆರಡು ವಾರದಲ್ಲಿ ಸಾಮಾಜಿಕ ಸಂಪರ್ಕ ತಾಣಗಳು, ಪತ್ರಿಕೆಗಳು, ಸುದ್ದಿವಾಹಿನಿಗಳು ಸೇರಿದಂತೆ ಹಲವೆಡೆ ಪ್ರತಿಧ್ವನಿಸಿವೆ. ಇದರ ಫಲವೆಂಬಂತೆ ಯಾವುದೇ ಪಾಳೇಗಾರರ ಅಂಕೆಗೆ ಇನ್ನೂ ಸಿಲುಕದ ಯೂ ಟ್ಯೂಬ್ ನಂತಹ ತಾಣದಲ್ಲಿ ಈ ಕಾರ್ಯಕ್ರಮದ ಕನ್ನಡ ಆವೃತ್ತಿಯನ್ನು ನೋಡಲಾಗುವಂತಹ ಬದಲಾವಣೆಯನ್ನು ಎಚ್ಚೆತ್ತ ಕನ್ನಡದ ಗ್ರಾಹಕರು ತಂದು ಕೊಂಡಿದ್ದಾರೆ ಅನ್ನಬಹುದು. ಈ ಗೆಲುವು ಕೊಟ್ಟಿರುವ ಸಂದೇಶವೊಂದಿದೆ. ಹೆಚ್ಚೆಚ್ಚು ಮಾರುಕಟ್ಟೆ ಆಧಾರಿತ ವ್ಯವಸ್ಥೆಯತ್ತ ನಮ್ಮ ಸಮಾಜ ಮುಂದಡಿಯಿಡುತ್ತಿರುವಾಗ ಮತ್ತು ಆ ಬದಲಾವಣೆ ಕನ್ನಡ ನುಡಿಯ ಮುಂದೆ ಹಲವಾರು ಸವಾಲುಗಳನ್ನು ತರುತ್ತಿರುವಾಗ ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯ ಪಾತ್ರ ಅತ್ಯಂತ ಹಿರಿದಾಗಿದೆ ಅನ್ನುವುದು.

ಮಾರುಕಟ್ಟೆ ಅನ್ನುವುದು ಗ್ರಾಹಕ ಪಕ್ಷಪಾತಿ 
1991ರಲ್ಲಿ ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಇತರೆಡೆಯಂತೆ ಕನ್ನಡ ಸಮಾಜದಲ್ಲೂ ಹಲವಾರು ಬದಲಾವಣೆಗಳಾಗಿವೆ. ಅರ್ಥ ವ್ಯವಸ್ಥೆಯ ಎಲ್ಲ ಹಂತಗಳನ್ನು ಸರ್ಕಾರವೇ ನಿಯಂತ್ರಿಸುತ್ತಿದ್ದ ದಿನಗಳಿಂದ ಸಾಕಷ್ಟು ಹೊರ ಬಂದು ಮಾರುಕಟ್ಟೆ ಆಧಾರಿತ ವ್ಯವಸ್ಥೆಯೆಡೆಗೆ ಹೆಜ್ಜೆ ಹಾಕಿದ್ದೇವೆ. ಅದರ ಒಳಿತು-ಕೆಡಕುಗಳ ಬಗ್ಗೆ ಇಲ್ಲಿ ಚರ್ಚಿಸುವುದು ಬೇಡ. ಇಲ್ಲಿ ಗಮನಿಸಬೇಕಿರುವುದು ಏನೆಂದರೆ ಈ ಬದಲಾವಣೆ ನಿಲ್ಲದು. ಮುಂದಿನ ದಿನಗಳಲ್ಲಿ ಅರ್ಥ ವ್ಯವಸ್ಥೆಯ ಹೆಚ್ಚಿನ ಮಝಲುಗಳು ಮಾರುಕಟ್ಟೆ ಆಧಾರಿತವಾಗುತ್ತವೆ. ಇದರ ಪರಿಣಾಮವಾಗಿ ಹೆಚ್ಚಿನ ವಲಸೆ,ಹಲ ಸಂಸ್ಕೃತಿಗಳ ದಾಳಿಯಂತಹ
    ಕೆಲ ಸಮಸ್ಯೆಗಳು ಮುಂದೆಯೂ ಇರುತ್ತವೆ, ಅಷ್ಟೇ ಏಕೆ, ಕೆಲ ಮಟ್ಟಿಗೆ ಅವು ಹೆಚ್ಚಲೂ ಬಹುದು. ಈಗ, ಕನ್ನಡದ ಮುಂದಿರುವ ಸವಾಲು ಇದನ್ನು ಎದುರಿಸುವುದು ಹೇಗೆ? ಎಂಬುದು. ನನ್ನ ಪ್ರಕಾರ ಯಾವ ಸರ್ಕಾರ, ಸಾಮಾಜಿಕ ಸಂಘಟನೆಗಳು ಇದಕ್ಕೆ ಪೂರ್ತಿ ಪರಿಹಾರ ಕೊಡಲಾರರು. ಮಾರುಕಟ್ಟೆ ಅನ್ನುವುದು ಗ್ರಾಹಕ ಪಕ್ಷಪಾತಿ. ಗ್ರಾಹಕನೊಬ್ಬನೇ ಅದನ್ನು ಬಗ್ಗಿಸಬಲ್ಲ. ಗ್ರಾಹಕನೊಬ್ಬನೇ ಅದನ್ನು ತನಗೆ ಬೇಕಾದಂತೆ ರೂಪಿಸಿಕೊಳ್ಳಬಲ್ಲ. ಕನ್ನಡ ಸಮಾಜದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು, ಈ ವ್ಯವಸ್ಥೆಯ ಎಲ್ಲ ಹಂತದಲ್ಲೂ ಕನ್ನಡ ನೆಲೆ ಕಾಣಬೇಕು ಅನ್ನುವುದಾದರೆ ಈ ಗ್ರಾಹಕನಿಗೂ ಕನ್ನಡಕ್ಕೂ ಒಂದು ಕಡಿಯದ ನೆಂಟು ಬೆಸೆಯಬೇಕು. ಕನ್ನಡದ ಸುತ್ತ, ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯನ್ನು ರೂಪಿಸುವುದೊಂದೇ ಮುಕ್ತ ಮಾರುಕಟ್ಟೆ ಆಧಾರಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಅಡುಗೆಮನೆಯ ಭಾಷೆಯಾಗದಂತೆ ತಡೆಯುವ ಪರಿಹಾರ ಅನ್ನುವುದು ನನ್ನ ಗಟ್ಟಿ ನಂಬಿಕೆಯಾಗಿದೆ.

    ಕನ್ನಡ ಕೇಂದ್ರಿತವಾದ ಗ್ರಾಹಕ ಚಳುವಳಿಯೇ ಪರಿಹಾರ
ನೀವು ಕೇಳಬಹುದು ಅದು ಹೇಗೆ ಎಂದು. ಕಳೆದ ಕೆಲ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಹಲವು ಬದಲಾವಣೆಗಳನ್ನು ನೀವು ಸುಮ್ಮನೆ ಗಮನಿಸಿ. 2005ರಲ್ಲಿ ಎಫ್.ಎಮ್ ವಾಹಿನಿಗಳು ಶುರುವಾಗಿ ಕನ್ನಡವನ್ನೇ ಕೈ ಬಿಟ್ಟು ನಡೆಯುತ್ತಿದ್ದಾಗ, ಇಂದಿನ ಯುವಕರಿಗೆ ಹಿಂದಿ,ಇಂಗ್ಲಿಷೇ ಬೇಕು ಅನ್ನುವ ತಪ್ಪು ನಿಲುವಲ್ಲಿದ್ದಾಗ, ಅವರಿಗೆ ಕನ್ನಡಕ್ಕಿರುವ ಮಾರುಕಟ್ಟೆ ವ್ಯಾಪ್ತಿಯನ್ನು ದೊಡ್ಡ ಸಂಖ್ಯೆಯಲ್ಲಿ ಮನವರಿಕೆ ಮಾಡಿ ಕೊಟ್ಟದ್ದು ಕನ್ನಡದ ಗ್ರಾಹಕರೇ. ಇಂದು ಹಲವಾರು ಖಾಸಗಿ ಬ್ಯಾಂಕುಗಳ ಎಟಿಎಮ್, ಐವಿಆರ್, ಕಚೇರಿಗಳಲ್ಲಿ ಹಂತ ಹಂತವಾಗಿ ಕನ್ನಡ ನೆಲೆ ಕಂಡಿದ್ದರೆ ಅದರ ಹಿಂದೆ ಕೆಲಸ ಮಾಡಿದ್ದು ಕನ್ನಡದ ಗ್ರಾಹಕರೇ. ಮಲ್ಟಿಪ್ಲೆಕ್ಸುಗಳಲ್ಲಿ, ಮಾಲುಗಳಲ್ಲಿ, ವಿಮಾನದಲ್ಲಿ, ಮೆಟ್ರೊದಲ್ಲಿ ಹೀಗೆ ಎಲ್ಲೆಲ್ಲಿ ಕನ್ನಡ ಮೂಲೆಗುಂಪಾಗಿತ್ತೋ ಅಲ್ಲೆಲ್ಲ ಅದನ್ನು ತಕ್ಕ ಮಟ್ಟಿಗೆ ಸರಿ ಮಾಡಿದ್ದು ಮತ್ತದೇ ಕನ್ನಡದ ಗ್ರಾಹಕರು. ಸರ್ಕಾರದ ನೂರು ನಿಯಮಗಳಿದ್ದಾಗಲೂ ಆಗದ ಬದಲಾವಣೆಯನ್ನು ತಕ್ಕ ಮಟ್ಟಿಗೆ ಮಾಡಿಕೊಳ್ಳಲಾಗಿದ್ದು ಕನ್ನಡ ಗ್ರಾಹಕನ ಹಕ್ಕೊತ್ತಾಯವೊಂದರಿಂದಲೇ. ಇನ್ನೂ ನೂರಾರು ಉದಾಹರಣೆಗಳನ್ನು ಕೊಡಬಲ್ಲೆ. ಹಾಗಿದ್ರೆ ಎಲ್ಲ ಸರಿ ಹೋಗಿದೆಯಾ ಎಂದು ಕೇಳಿದರೆ ನನ್ನ ಉತ್ತರ “ಇಲ್ಲ, ಎಲ್ಲವೂ ಸರಿ ಹೋಗಿಲ್ಲ. ಆದರೆ ಸರಿ ಹೋಗಿರುವ ಬಹುತೇಕ ವಿಷಯಗಳು ಕನ್ನಡದಲ್ಲಿ ಸೇವೆಗೆ ಆಗ್ರಹಿಸಿದ ಗ್ರಾಹಕನ ಒತ್ತಾಯದಿಂದಲೇ ಆಗಿದ್ದು” ಅನ್ನುವುದಾಗಿದೆ. ಕನ್ನಡ ಕೇಂದ್ರಿತವಾದ ಒಂದು ಗಟ್ಟಿ ಗ್ರಾಹಕ ಚಳುವಳಿಯನ್ನು ರೂಪಿಸುವುದೇ ಮುಂದಿನ ದಿನದಲ್ಲಿ ಕನ್ನಡವನ್ನು ಮಾರುಕಟ್ಟೆಯ ನುಡಿಯಾಗಿ ಉಳಿಸಿಕೊಳ್ಳುವ ಏಕೈಕ ಹಾದಿ. ಈ ಆಯಾಮದಲ್ಲಿ ನೋಡಿದಾಗ ಮಾತ್ರವೇ ಡಬ್ಬಿಂಗ್ ನಿಷೇಧ ಗ್ರಾಹಕನ ಹಕ್ಕಿನ ಉಲ್ಲಂಘನೆ ಅನ್ನುವ ಹಲವು ಕನ್ನಡ ಗ್ರಾಹಕರ ವಾದದ ತಿರುಳು ಅರ್ಥವಾದೀತು.
ಕೊನೆಹನಿ: ಕೊಟ್ಟಿದ್ದನ್ನು ತಗೊಂಡು ಬಿದ್ದಿರು ಅನ್ನುವ ಚಿತ್ರೋದ್ಯಮದ ಹಲವರ ಧೋರಣೆಯ ವಿರುದ್ದ ಸಿಡಿದೆದ್ದು ಸಂಘಟಿತರಾದ ಕನ್ನಡಿಗರು ತಮ್ಮ ಗ್ರಾಹಕ ಅನ್ನುವ ಗುರುತನ್ನು ಒತ್ತಿ ಹೇಳುತ್ತಿರುವುದು ಮತ್ತು ಜಗತ್ತಿನ ಒಳ್ಳೆಯದೆಲ್ಲವನ್ನು ಕನ್ನಡದಲ್ಲೇ ಪಡೆಯುವುದು ಗ್ರಾಹಕನಾಗಿ ತನ್ನ ಹಕ್ಕು ಎಂದು ಮಾತನಾಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ದುಡ್ಡು ಕೊಟ್ಟು ಮನರಂಜನೆ ಬಯಸುವವನು ಗ್ರಾಹಕನಲ್ಲ ಅವನು ಪ್ರೇಕ್ಷಕ ಅನ್ನುವ ವಿತಂಡವಾದ ಮಾಡುವ ಚಿತ್ರರಂಗದ ಕೆಲ “ಬುದ್ದಿಜೀವಿಗಳು” ಇದನ್ನು ಅರ್ಥ ಮಾಡಿಕೊಂಡು ಗ್ರಾಹಕನ ಬಗ್ಗೆ ತಾತ್ಸಾರದಿಂದ ಮಾತನಾಡುವುದನ್ನು ನಿಲ್ಲಿಸದೇ ಹೋದರ ಕನ್ನಡ ಗ್ರಾಹಕನ ಉರಿಗಣ್ಣಿಗೆ ಬಲಿಯಾಗಿ ಮನೆ ಸೇರುವುದು ಖಂಡಿತ.
   
ರವಿ ಮೂರ್ನಾಡು, ಕ್ಯಾಮರೂನ್. says: ನಾನು ಬಾಲ್ಯದಿಂದಲೇ ಹಲವು ಭಾಷಾ ಚಲನಚಿತ್ರಗಳನ್ನು ನೋಡುತ್ತಿದ್ದೇನೆ.ಕನ್ನಡ ಚಿತ್ರಗಳನ್ನು ಇತರ ಭಾಷೆಗಳಲ್ಲಿ ನೋಡಿದ್ದೇನೆ. ಇತರ ಭಾಷಾ ಚಿತ್ರಗಳನ್ನು ಕನ್ನಡದಲ್ಲಿ ಡಬ್ ಆಗಿದ್ದನ್ನು ನೋಡಿದ್ದೆನೆ. ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿರುವ ಕೊಂಡು- ಕೊಡಾವಳಿ ಸಂಸ್ಕೃತಿ ಯಾವುದನ್ನೂ ಕಡೆಗಣಿಸಿಲ್ಲ . ಆದರೆ ಸಿನೇಮಾ ಮಾಧ್ಯಕ್ಕೆ ತೆಗೆದುಕೊಂಡಾಗ ವ್ಯಾಪಾರೀಕರಣ ದೃಷ್ಟಿಯಲ್ಲಿ ಹಲವಷ್ಟು ಕೀಳು ಅಭಿರುಚಿಯ ಚಿತ್ರಗಳು ಕನ್ನಡವನ್ನು ಕೆಳದರ್ಜೆಗೆ ತಳ್ಳಿತು ಅಂತ ಹೇಳುವುದಲ್ಲಿ ಸತ್ಯವಿದೆ.
ಅಷ್ಟಾಗಿಯೂ "ಸತ್ಯ ಮೇವ ಜಯತೇ" ಮಾನ್ಯ ಅಮೀರ್ ಖಾನರ ಚಿತ್ರದಲ್ಲಿ ಏನಿದೆ ಅನ್ನುವುದರ ಪರಾಮರ್ಶೆ ನಡೆಯಬೇಕು. ಸಮಾಜವನ್ನು ಬೊಟ್ಟು ಮಾಡಿ ತೋರಿಸುವ ಸಾಮಾಜಿಕ ದೌರ್ಬಲ್ಯಗಳು ಅಲ್ಲಿವೆಯೇ?ಅದಕ್ಕೊಂದು ಸ್ಪಂದನೆ ಇದೆಯೇ? ಇದು ಜನರಿಗೆ ಗೊತ್ತಾಗಬೇಕು.ಏಕಾ ಏಕಿ ” ಡಬ್ಬಿಂಗ್” ಬೇಡ ಅನ್ನುವ ಸಾಮಾಜಿಕ ಪ್ರತಿಷ್ಠೆಯ ಮಾತುಗಳ ಅಗತ್ಯ ಕಾಣುತ್ತಿಲ್ಲ. ಮಾನ್ಯ ಅಮೀರ್ ಖಾನರು ಭ್ರೂಣಹತ್ಯೆಯ ಖಡಕ್ ಸತ್ಯವನ್ನು ಬಿಂಭಿಸುವಾಗ ಅದರ ಬಗ್ಗೆ ಸ್ವಲ್ಪ ಆಲೋಚಿಸಬೇಕು. ರಾಷ್ಟ್ರಕ್ಕೆ ಇದರ ಬಗ್ಗೆ ಸಂದೇಶ ರವಾನಿಸುವಾಗ ಇದು ಜಗತ್ತಿನ ಸಾಮಾಜಿಕ ಕಳಕಳಿ. ಈ ಸಮಸ್ಯೆ ಕರ್ನಾಟಕದಲ್ಲಿ ಜನತೆಗೆ ಕಳಕಳಿಯ ಸಂದೇಶವಾಗಲಾರದೆ?
ಇಲ್ಲಿ ಮಾನ್ಯ ಪ್ರತಿಭಾ ನಂದಕುಮಾರ್ ಅವರು ಕನ್ನಡದಲ್ಲಿ ಅಮೀರ್ ಖಾನರ ” ಸತ್ಯ ಮೇವ ಜಯತೇ” ಚಿತ್ರವೊಂದನ್ನೇ ಡಬ್ಬಿಂಗ್ ಮಾಡುವುದು ಬೇಡ ಅನ್ನುತ್ತಿದ್ದಾರೆಯೇ ಅಥವಾ ಮುಂಬರುವ ಎಲ್ಲಾ ಚಿತ್ರಗಳು ಆ ರೀತಿ ಆಗುವುದು ಬೇಡ ಅನ್ನುತ್ತಿದ್ದಾರೆಯೇ ಅನ್ನುವುದು ಪ್ರಶ್ನೆ. ” ಸತ್ಯಮೇವ ಜಯತೇ” ಚಿತ್ರವೊಂದೇ ಆ ರೀತಿ ಆಗುವುದಾದರೆ , ಅಲ್ಲಿರುವ ಭ್ರೂಣಹತ್ಯೆಯ ಸಾಮಾಜಿಕ ಕಳಕಳಿಯ ಸಂದೇಶ ಕನ್ನಡಿಗರಿಗೆ ರವಾನೆಯಾಗುವುದು ಬೇಡವೇ? ಈ ಭ್ರೂಣಹತ್ಯೆ ನಮ್ಮ ಇತರ ಭಾಷೆ ಗೊತ್ತಿಲ್ಲದ ಕನ್ನಡಿಗರಿಗೆ ಅವಶ್ಯವಾಗಿ ಆಗಬೇಕಿತ್ತು. ಏಕೆಂದರೆ , ವಿದ್ಯಾವಂತರು ಎನ್ನುವ ಹಣೆಪಟ್ಟಿ ಕಟ್ಟಿಕೊಂಡ ಸಮಾಜದ ಹಳ್ಳಿಗಳಲ್ಲಿ ಇದರ ಸ್ಪಷ್ಟತೆ ಇನ್ನೂ ಅಂಧಾಕರದಲ್ಲೇ ಇದೆ. ಅದು ಅವರಿರುವಲ್ಲಿಗೆ ತಲುಪಲಿ. ನಾವು ಬೀದಿಯ ಕಸ ಗುಡಿಸುವ ಮೊದಲು ನಮ್ಮ ಮನೆಯ ಕಸವನ್ನು ಗುಡಿಸುವ. ಸೃಜನಶೀಲತೆ, ಬದಲಾವಣೆ,ಸಂದೇಶ ನಮಗೆ ಅವಶ್ಯವಾಗಿ ಬೇಕು. ಅದು ಮಾಧ್ಯಮವಾದರೂ ಸರಿ, ತರಗತಿಯ ಪಾಠವಾದರೂ ಸರಿ, ಅನುಭವವಾದರೂ ಸರಿ.

ಉಷಾ ಕಟ್ಟೆಮನೆ says:  ಸರ್, ನೀವು ಹೇಳಿರುವ ವಿಚಾರಗಳಿಗೆ ನನ್ನ ಸಂಪೂರ್ಣ ಸಹಮತವಿದೆ. ಇದಕ್ಕೆಲ್ಲಾ ಅಮಿರ್ ಖಾನ್ ಯಾಕೆ ಸರ್? ನಮ್ಮ ಕನ್ನಡ ಸಿನೇಮಾ ಇಂಡಸ್ಟ್ರಿಯಲ್ಲಿ ಅಭಿಜಾತ ಪ್ರತಿಭೆಗಳಿಗೇನು ಕೊರತೆಯೇ?
ಈಗ ಡಬ್ಬಿಂಗ್ ವಿರೋಧಿಸುತ್ತಿರುವವರು ನೀವು ಕೊಟ್ಟಿರುವ ಟಾಪಿಕ್ ಗಳನ್ನು ಕೈಗೆತ್ತಿಕೊಂಡು ಕಾರ್ಯಕ್ರಮಗಳನ್ನು ಮಾಡಬಹುದು. ಕನ್ನಡದ ಚಾನಲ್ ಗಳು ಹಳ್ಳಿಹುಡುಗರು ಪ್ಯಾಟೆಗೆ ಬಂದ್ರು, ಇನ್ಯಾರೋ ವಿದೇಶಕ್ಕೆ ಹೋದರು, ಅಲ್ಲಿ ಭೂತಗಳಿವೆಯೇ…? ಅವರ..ಇವರ ಖಾಸಗಿ ಬದುಕು ಹೀಗಂತೆ…. ಹಾಗಂತೆ…! ಎನ್ನುವುದನ್ನೆಲ್ಲಾ ಬಿಟ್ಟು ಸಾಮಾಜಿಕ ಸಮಸ್ಯೆಗಳತ್ತಲೂ ಇಣುಕಿ ನೋಡಬಹುದು… ಆದರೇನು ಮಾಡೋಣ..ಸಾಮಾಜಿಕ ಹೊಣೆಗಾರಿಕೆ ಎಂಬುದು ಈಗ ಪುಸ್ತಕದ ಬದನೆಕಾಯಿಯಾಗಿದೆ..! ಅದು ಸಿನೇಮಾರಂಗಕ್ಕೂ ಬೇಡ…ಚಾನಲ್ ಗಳಿಗೂ ಬೇಡ
   
Ahdithcya Kjeevaratmna says:  Prathibha Nandakumar is partly right. But she must also reckon what happens if Priya Hassan wants the role offered Pakistani actor Veena Malik in a Kannada cinema, or Kannada Dancer’s Association says they will not let mumbai dancers to dance in any Kannada film. Or any senior artist wants to host “Neena Naana” instead of Lakshmi, or wants to do the role offered to Ambika in a Kannada soap. Can Prathibha Nandakumar or Priya Hassan or anybody say for that matter can stop them in our democratic land?

So we should stop counting the chickens before they are hatched.

   
Gubbachchi Sathish says:  idakke nannadondu votide.

ಸಂದೀಪ್ ಕಾಮತ್ says: ಭಾರತದಲ್ಲಿ ಏನು ಹೇಳಿದರು ಅನ್ನೋದಕ್ಕಿಂತ ಮುಖ್ಯ ಯಾರು ಹೇಳಿದರು ಅನ್ನೊದು. ಶಂಖದಿಂದ್ರೇನೇ ಬಂದ್ರೆ ತೀರ್ಥ ಅನ್ನೋ ಹಾಗೆ ! ಆಮೀರ್ ಹೊಸತನ್ನು ಏನೂ ಹೇಳಿಲ್ಲ, ಹೇಳುತ್ತಾನೆ ಅನ್ನೋ ಭರವಸೆಯೂ ನನಗಿಲ್ಲ. ಆದರೆ ಹೇಳಿರೋದು ಆಮೀರ್ ಅನ್ನೋದೆ ಮುಖ್ಯ ಆಗುತ್ತೆ.

ಕೃಪೆ : ಅವಧಿ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.