Sunday, July 22, 2012

ಮರಾಠಿ ಹಿರಿಯ ಬರಹಗಾರ ಉತ್ತಮ ಕಾಂಬಳೆ

ಡಾ. ಸಿದ್ರಾಮ ಕಾರಣಿಕ

(ಮರಾಠಿಯ ಶ್ರೇಷ್ಟ ಹಿರಿಯ ಸಾಹಿತಿ, ವಿಚಾರವಾದಿ, ವಿಮರ್ಶಕ ಉತ್ತಮ ಕಾಂಬಳೆಯವರ 'ದೇವದಾಸಿ ಮತ್ತು ಬೆತ್ತಲೆ ಸೇವೆ' ಕೃತಿಯನ್ನು ಮರಾಠಿಯಿಂದ ಅನುವಾದ ಮಾಡಿದಾಗ ನಾನು ಬರೆದ ಮೊದಲ ಮಾತುಗಳು)


“ಹಲೋ ಸರ್... ನಾನು, ಧಾರವಾಡದಿಂದ ಡಾ. ಸಿದ್ರಾಮ ಕಾರಣಿಕ’”
“ಹೇಳ್ರಿ ಸಿದ್ರಾಮ, ಆರಾಮಾಗಿದ್ದೀರಿ ?”
“ಆರಾಮಾಗಿದ್ದೇನ್ರಿ ಸರ್. ನಿಮಗ ಅಭಿನಂದನೆಗಳು ಸರ್”
“ಥ್ಯಾಂಕ್ಸ್... ಭಾಳ ಸಂತೋಷ ಆತು”
“ಇದು ನಮಗೆ ಸಂದ ಜಯ ಸರ್”
“ಹೌದ... ಹೌದ್ರಿ... ಥ್ಯಾಂಕ್ಯೂ ಥ್ಯಾಂಕ್ಯೂ ... ಏಳನೇ ತಾರೀಕಕ ನಾ ಬೆಳಗಾಂವಕ ಬರಾಕತ್ತೇನಿ. ಸಾಧ್ಯ ಆದ್ರ ಬರ್ರಿ”
“ಬರತೇನ್ರಿ ಸರ್. ತಮ್ಮ ಪುಸ್ತಕದ ಅನುವಾದ ಮುಗಿದಿದೆ ಸರ್. ಡಿಸೆಂಬರ್ದೊಳಗ ಬಿಡುಗಡೆ ಆಗ್ತೇತಿ.”
“ಹೌದಾ ! ಭಾಳ ಖುಷಿ ಆತು ಥ್ಯಾಂಕ್ಯೂ ...”
“ಸರ್, ಮತ್ತೊಮ್ಮಿ ನಿಮಗ ಅಭಿನಂದನೆಗಳು”
“ಥ್ಯಾಂಕ್ಯೂ ಥ್ಯಾಂಕ್ಯೂ ...”
*****
ಇದು ಉತ್ತಮ ಕಾಂಬಳೆಯವರು ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಅವರೊಂದಿಗೆ ನಾನು ಮಾತನಾಡಿದ ಪ್ರಸಂಗ. ಹೌದು ಉತ್ತಮ ಕಾಂಬಳೆಯವರು ತುಂಬ ಎತ್ತರದ ವ್ಯಕ್ತಿತ್ವ ಉಳ್ಳವರು. ತಕ್ಷಣವೇ ಆತ್ಮೀಯರಾಗಿ ಬಿಡುತ್ತಾರೆ. ಮರಾಠಿ ಸಾಹಿತ್ಯದಲ್ಲಿ ತುಂಬ ಹೆಸರು ಮಾಡಿರುವ ಅವರ ನಯ-ವಿನಯ, ಆತ್ಮೀಯತೆ, ವಿಚಾರಶೀಲತೆ, ತೀವ್ರವಾದ ವೈಚಾರಿಕತೆ ದಂಗು ಬಡಿಸುವಂಥದ್ದು.
ಸುಮಾರು ತಿಂಗಳಗಳ ಹಿಂದೆ ಉತ್ತಮ ಕಾಂಬಳೆಯವರ ‘ದೇವದಾಸಿ ಆಣೀ ನಗ್ನಪೂಜಾ’ ಎಂಬ ಸಂಶೋಧನಾತ್ಮಕ ಕೃತಿಯನ್ನು ನಾನು ಅನುವಾದ ಮಾಡತೊಡಗಿದ್ದೆ. ಆಗಲೂ ಅವರೊಂದಿಗೆ ಮಾತನಾಡಿದ್ದೆ. ನನ್ನ ಆಗ್ರಹದಿಂದ ತಮ್ಮ ಫೋಟೋವನ್ನೂ, ಬಯೋಡಾಟಾವನ್ನೂ ನನಗೆ ಕಳುಹಿಸಿ ಕೊಟ್ಟರಲ್ಲದೇ ಮುಂಬಾಯಿಯ ಪ್ರಕಾಶನದ ವತಿಯಿಂದ ಮತ್ತೊಂದು ಕೃತಿಯ ಪ್ರತಿಯನ್ನೂ ಚಿತ್ರಗಳನ್ನು ಒಳಗೊಂಡ ಸಿ.ಡಿ.ಯನ್ನೂ ಕಳುಹಿಸಿಕೊಟ್ಟರು. ಅವರ ಆತ್ಮೀಯತೆಗೆ, ಸಹಕಾರಕ್ಕೆ ಬರೆಯಬೇಕೆಂದರೂ ಪದಗಳು ದಕ್ಕುವುದಿಲ್ಲ !
ಮೂಲತಃ ಕರ್ನಾಟಕದವರೇ ಆದ ಉತ್ತಮ ಕಾಂಬಳೆಯವರು ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗುಪ್ಪಿ ಎಂಬ ಗ್ರಾಮ ಅವರ ಹುಟ್ಟೂರು. ತೀರ ಬಡತನದ ಕುಟುಂಬ ಶಾಲೆ ಕಲಿಯಬೇಕೆಂಬ ಅವರಿಗೆ ಆರ್ಥಿಕ ಅಡಚಣೆ ತುಂಬ ಇತ್ತು. ಕೆಲವು ದಿನ ಹಮಾಲಿ ಮಾಡಿದರು ; ಕೆಲವು ದಿನ ಗೋಡೆ ಕಟ್ಟುವ ಗೌಂಡಿಗಳ ಕೈ ಕೆಳಗೆ ಆಳಾಗಿ ದುಡಿದರು ; ದಿನಪತ್ರಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ದೊಡ್ಡದಾಗಿ ಒದರುತ್ತ ಮಾರುವ ಹುಡುಗ ಆಗಿದ್ದರು ! ಸೇಲ್ಸ್ಮನ್ ಆಗಿದ್ದವರು ; ಕೆಲವೊಂದಿಷ್ಟು ದಿನ ಯಾವುದೋ ಡಾಕ್ಟರರಲ್ಲಿ ಕಂಪೌಂಡರ್ ಆಗಿ ಕೆಲಸ ಮಾಡಿದ್ದೂ ಇದೆ ! ಇಷ್ಟೆಲ್ಲ ಮಾಡುತ್ತಲೇ ಶಿಕ್ಷಣ ಪೂರೈಸಿದ ಉತ್ತಮ ಕಾಂಬಳೆಯವರ ಬದುಕು ಹೋರಾಟದ ಹಾದಿ. ಅವರು ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಾಗ ಅನುಭವಿಸಿದ ಆನಂದ ಹೇಳತೀರದಷ್ಟು ! ಯಾಕೆಂದರೆ ಅವರ ಮನೆತನದಲ್ಲಿಯೇ ಶಾಲೆ ಕಲಿತ ವೊದಲ ವ್ಯಕ್ತಿ ಅವರು !
ಬದುಕಿನ ಹಾದಿಯನ್ನು ಕಂಡುಕೊಳ್ಳಬೇಕಾದ ಸಂದರ್ಭದಲ್ಲಿ ಒಂದು ದಿನಪತ್ರಿಕೆಯ ಸಾಮಾನ್ಯ ವರದಿಗಾರರಾಗಿ ಕೆಲಸಕ್ಕೆ ಸೇರಿಕೊಂಡ ಉತ್ತಮ ಕಾಂಬಳೆಯವರು ಇಂದು ಮರಾಠಿಯ ಪ್ರಮುಖ ದಿನಪತ್ರಿಕೆ `ಸಕಾಳ’ ಸಮೂಹದ ಪ್ರಧಾನ ಸಂಪಾದಕರಾಗಿದ್ದಾರೆ ! ಹತ್ತು ಪೈಸೆ ಕಮಿಶನ್ ಸಿಗುತ್ತದೆ ಎಂದು ಪತ್ರಿಕೆಗಳ ಕಟ್ಟನ್ನು ಹಿಡಿದು ಒದರುತ್ತ ಪತ್ರಿಕೆ ಮಾರುತ್ತಿದ್ದ ಹುಡುಗನೊಬ್ಬ ಇಂದು ಪ್ರಮುಖ ಪತ್ರಿಕೆಯೊಂದ ಮುಖ್ಯಸ್ಥನಾಗುತ್ತಾನೆ ಎಂದರೆ ಅದಕ್ಕೆ ಆತನ ಪ್ರಯತ್ನ, ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯನ್ನು ಸಾಧಿಸುವ ಛಲವೇ ಕಾರಣ. ಇದು ಉತ್ತಮ ಕಾಂಬಳೆಯವರ ಬದುಕಿನ ಪರಿ. ಅಷ್ಟೇ ಅಲ್ಲ ಸಾಹಿತ್ಯ ಕ್ಷೇತ್ರದಲ್ಲೂ ಅವರ ಕೃಷಿ ಬಹುದೊಡ್ಡದು. ಇದೀಗ  81ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರೆ ಅವರ ಕಾರ್ಯವ್ಯಾಪ್ತಿ ಕಣ್ಮುಂದೆ ಸುಳಿಯಬಲ್ಲದು.
ಇಲ್ಲಿಯವರೆಗೆ ಎರಡು ಕಾದಂಬರಿಗಳು, ಐದು ಕಥಾಸಂಕಲನಗಳು, ಐದು ಸಂಶೋಧನಾತ್ಮಕ ಕೃತಿಗಳು, ಎರಡು ಕಾವ್ಯ ಸಂಕಲನಗಳು, ಏಳು ಸಂಪಾದಿತ ಕೃತಿಗಳು, ತಮ್ಮ ಆತ್ಮಕತೆಯನ್ನೇ ಹೊಂದಿರುವ ಮೂರು ಕೃತಿಗಳು ಹೀಗೆ ಸುಮಾರು ಐವತ್ತಕ್ಕಿಂತಲೂ ಹೆಚ್ಚು ಕೃತಿಗಳನ್ನು ಉತ್ತಮ ಕಾಂಬಳೆಯವರು ರಚಿಸಿದ್ದಾರೆ ಎಂದರೆ ಬರವಣಿಗೆಯ ಅಗಾಧತೆ ಅರಿವಿಗೆ ನಿಲುಕುತ್ತದೆ.
ಪತ್ರಕರ್ತನಾಗಿ 23 ಮತ್ತು ಸಾಹಿತಿಯಾಗಿ 30 ಒಟ್ಟು ನಲವತ್ಮೂರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಸಧ್ಯ ಮಹಾರಾಷ್ಟ್ರದ ನಾಶಿಕದಲ್ಲಿ `ಚಾರ್ವಾಕಾಶಯ’ ಹೆಸರಿನ ಮನೆಯಲ್ಲಿ ವಾಸವಾಗಿರುವ ಉತ್ತಮ ಕಾಂಬಳೆಯವರು ಸವ್ಮೋಹಕ ವ್ಯಕ್ತಿತ್ವದವರಾಗಿದ್ದಾರೆ.

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.