Wednesday, July 18, 2012

ಬಡವರ “ಕೊಳಚೆ” ಉಳಿದವರ “ಶುದ್ಧತೆ”


-      ಡಾ ಅಶೋಕ್ ಕೆ ಆರ್
 
ಸನ್ಮಾನ್ಯ ಶ್ರೀ ಶ್ರೀ ಶ್ರೀ ಪೇಜಾವರ ಸ್ವಾಮಿಗಳಿಗೆ ಸೆಡ್ಡು ಹೊಡೆಯಲು ಮತ್ತೊಬ್ಬ ಹುಟ್ಟಿದ್ದಾನೆ. ಶ್ರೀಗಳು ಮಾಂಸಾಹಾರಿಗಳ ಪಕ್ಕ ಕುಳಿತು ಊಟ ಮಾಡಿದರೆ ಸಸ್ಯಾಹಾರಿ ಬ್ರಾಹ್ಮಣರೂ ಮಾಂಸಾಹಾರಿಗಳಾಗಿ ಬಿಡುತ್ತಾರೆಂದು ಗಾಬರಿಗೊಂಡಿದ್ದರು. ನಂತರ ತಮ್ಮ ಹೇಳಿಕೆಯ ಬಗ್ಗೆ ಸಮಜಾಯಿಷಿಗಳನ್ನೂ ಕೊಟ್ಟಿದ್ದರು. ಇಂದು ಕರ್ನಾಟಕ ಅನುದಾನರಹಿತ ಶಾಲೆಗಳ ಸಂಘ ಕುಸ್ಮಾದ ಅಧ್ಯಕ್ಷ ಜಿ.ಎಸ್. ಶರ್ಮರವರು ಶಿಕ್ಷಣ ಹಕ್ಕು ಕಾಯ್ದೆಯನ್ನು ವಿರೋಧಿಸುತ್ತ “ಸಮುದ್ರಕ್ಕೆ ಕೊಳಚೆ ನೀರು ಬಂದು ಸೇರಿದರೆ ಇಡೀ ಸಮುದ್ರವೇ ಕೊಳಚೆಯಾಗುತ್ತದೆ. ನೀರು ಯಾವಾಗಲೂ ಶುದ್ಧ ಆಗಿರಬೇಕು. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸಂಸ್ಕೃತಿ ವಿಭಿನ್ನ. ಬಡ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡ ಮರುದಿನವೇ ಉಳಿದ ಪೋಷಕರು ಬಂದು ಮಕ್ಕಳ ವರ್ಗಾವಣೆಗೆ ಪತ್ರ ಕೇಳುವ ಅಪಾಯವಿದೆ. ಆದ್ದರಿಂದ ಕುಸ್ಮಾ ಶಾಲೆಗಳಲ್ಲಿ ಆರ್.ಟಿ.ಐ ಕಾಯ್ದೆ ಅನುಷ್ಠಾನ ಸಾಧ್ಯವಿಲ್ಲ” ಎಂದು ‘ಅಮೋಘ ವಿವೇಕಭರಿತವಾದ’ ಹೇಳಿಕೆಯನ್ನಿತ್ತಿದ್ದಾರೆ. ಈ ಹಾಳು ವಿಚಾರವಂತರು, ಪ್ರಗತಿಪರರು ಈ ಹೇಳಿಕೆಗೂ ವಿರೋಧ ವ್ಯಕ್ತಪಡಿಸುತ್ತಾರಲ್ಲ ! ಎಂಥ ಕೆಟ್ಟ ಮನಸ್ಥಿತಿಯವರಿರಬೇಕು ಇವರೆಲ್ಲ?!

ಒಂದಷ್ಟು ಹಿಂದೆ ಸಾಗಿ ನೋಡಿದಾಗ 

          ನನ್ನ ಶಾಲಾ ದಿನಗಳನ್ನು ಮೆಲಕುಹಾಕಿದಾಗ ಸನ್ಮಾನ್ಯ ಶರ್ಮರವರ ಹೇಳಿಕೆ ಎಷ್ಟು ಸತ್ಯವೆಂದು ಮನದಟ್ಟಾಗುತ್ತದೆ. ಬಡ ವರ್ಗಕ್ಕೆ ಸೇರದ ಕುಟುಂಬದವನಾದ ಕಾರಣ ಸರಕಾರಿ “ಕೊಳಚೆ” ಶಾಲೆಗಳಿಗೆ ಹೋಗದೆ “ಶುದ್ಧ” ಕಾನ್ವೆಂಟ್ ಶಾಲೆಯಲ್ಲಿ ಓದಿದೆ. ಆದರೆ ಆ ಹಾಳು ಕಾನ್ವೆಂಟಿಗರಿಗೆ ಶುದ್ಧತೆಯ ಪರಿಕಲ್ಪನೆ ಇರಲಿಲ್ಲವೇನೋ. ನಮ್ಮಂಥ “ಶುದ್ಧ” ಮಕ್ಕಳ ಜೊತೆಗೆ “ಕೊಳಚೆ”ಯವರನ್ನೂ ಸೇರಿಸಿಬಿಟ್ಟಿದ್ದರು. ಇದರ ಅನಾಚಾರಗಳ ಅರಿವಾಗಿದ್ದು ಕುಸ್ಮಾದ ಅಧ್ಯಕ್ಷರ ವಿಚಾರವಾಣಿಯನ್ನು ಇಂದು ಓದಿದಾಗಲೇ! ಆ “ಕೊಳಚೆ”ಯವರಿಂದಲೇ ಅಲ್ಲವೇ ನಾನು ಸೂಳೆಮಗ, ಬೋಳಿಮಗ ಎಂಬ ಕೊಳಕು ಪದಗಳನ್ನು ಕಲಿತು ಆ ಪದಗಳನ್ನು ಉಳಿದ “ಶುದ್ಧ”ವಂತರಿಗೂ ಕಲಿಸಿದ್ದು?! ಆ “ಕೊಳಕಿನಿಂದ” ಹೊರಬಂದ ನಂತರವಷ್ಟೇ ಸಿರಿವಂತರ ಸಹವಾಸ ಮಾಡಿ shit man, fuck off ಎಂಬ “ಶುದ್ಧ” ಪದಗಳನ್ನು ಕಲಿತು ನಾನೂ ಒಂದಷ್ಟು ಪರಿಶುದ್ಧತೆ ಪಡೆದಿದ್ದು!

ವ್ಯಂಗ್ಯದಾಚೆಗೆ 

          ಮೇಲಿನ ವ್ಯಂಗ್ಯಭರಿತ ಸಾಲುಗಳನ್ನು ಪಕ್ಕಕ್ಕಿರಿಸೋಣ. ನಮ್ಮದೇ ನಾಡಿನ ವಿದ್ಯಾವಂತನೊಬ್ಬ ಧನಾಧಾರಿತ ವರ್ಗವನ್ನು ಪ್ರತಿಪಾದಿಸುತ್ತಾನೆಂದರೆ ನಮ್ಮ ಶಿಕ್ಷಣ ಪದ್ಧತಿಯಲ್ಲಿಯೇ ದೋಷವಿದೆಯಲ್ಲವೇ? ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದ್ದು ಸರ್ವರಿಗೂ ಸಮಾನವಾದ ಶಿಕ್ಷಣ ದೊರೆಯಬೇಕೆಂಬ ಅಭಿಲಾಷೆಯಿಂದ. ಆದರಿದು ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ ರೀತಿ ಹಾಗಿದೆ. ಖಾಸಗೀಕರಣ, ಜಾಗತೀಕರಣದ ಪ್ರಭಾವಳಿಯಿಂದ ಶೈಕ್ಷಣಿಕ ಕ್ಷೇತ್ರವೂ ಹೊರಗುಳಿದಿಲ್ಲ. ಹಳೆಯ ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಯನ್ನು ಸರ್ವ ರೀತಿಯಲ್ಲೂ ಬೆಳೆಸುವುದರಲ್ಲಿ ಆಸಕ್ತಿಯಿತ್ತು. ಆದರೆ ಇಂದಿನ ಬಹುತೇಕ ಖಾಸಗಿ ಶಾಲೆಗಳು ಹಣ ಮಾಡುವ ಉದ್ದಿಮೆಗಳಷ್ಟೇ. ಹಣ ಮಾಡುವುದನ್ನು ಮರೆತು ಸೇವೆ ಮಾಡಿ ಎಂದರೆ ಅವರು ಅಷ್ಟು ಸುಲಭವಾಗಿ ಒಪ್ಪುತ್ತಾರೆಯೇ? ನೇರವಾಗಿ ಹಣದ ಬಗ್ಗೆ ಮಾತನಾಡಲಾಗದೆ ತಮ್ಮ “ಶುದ್ಧ” ಜನರ ಪರವಾಗಿ ಮಾತನಾಡಿ ಕಾಯ್ದೆಯ ವಿರುದ್ಧ ಜನಾಭಿಪ್ರಾಯ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಹಣದ ಮಾನದಂಡದಿಂದಷ್ಟೇ ಬಡವರೆನ್ನಿಸಿಕೊಂಡವರ ಬಗ್ಗೆ ನಮ್ಮ ಕೆಲ ‘ವಿದ್ಯಾವಂತ ಮುಂದುವರಿದವರ’ ಮನದ ಮಾತನ್ನು ಶರ್ಮ ಆಡಿಬಿಟ್ಟಿದ್ದಾರೆ.

ಸರಕಾರ, ಉದ್ದಿಮೆ, ಖಾಸಗೀಕರಣ

          ಇಲ್ಲಿ ಮತ್ತೊಂದು ವಾಸ್ತವವನ್ನು ಗಮನಿಸದಿದ್ದರೆ ಅಪೂರ್ಣ ಸತ್ಯವನ್ನಷ್ಟೇ ತಿಳಿದಂತಾಗುತ್ತದೆ. ಕೈಯಲ್ಲಿ ಹಣವಿರುವ ಬಹುತೇಕ ಮಂದಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವುದಿಲ್ಲ, ಆರೋಗ್ಯ ತಪ್ಪಿದಾಗ ಸರಕಾರಿ ಆಸ್ಪತ್ರೆಗಳಿಗೆ ಓಡುವುದಿಲ್ಲ [ನವೋದಯ ಶಾಲೆ, ಸರಕಾರಿ ವೈದ್ಯಕೀಯ ಕಾಲೇಜುಗಳು, ಏಮ್ಸ್, ನಿಮ್ಹಾನ್ಸ್ ನಂತಹ ಕೆಲವು ಸಂಸ್ಥೆಗಳನ್ನು ಹೊರತುಪಡಿಸಿ]. ಯಾಕೆ? ಸರಕಾರೀ ವ್ಯವಸ್ಥೆಯೆಂದರೆ ಕಳಪೆ ಎನ್ನುವ ಭಾವನೆ ಬೆಳೆದಿದ್ದ್ಯಾವಾಗ? ಸರಕಾರ ತನ್ನ ಶಾಲೆಗಳ ಗುಣಮಟ್ಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಜೊತೆಗೆ ಅಂಕೆ ಮೀರಿ ಖಾಸಗಿ ಶಾಲೆಗಳಿಗೆ ಅನುಮತಿ ಕೊಡುತ್ತದೆ. ಖಾಸಗಿ ಶಾಲೆಗಳ ಶಿಕ್ಷಣ ‘ಉತ್ತಮ’ವೆಂಬ ಭಾವನೆಯನ್ನು ಜನರ ಮನದಲ್ಲಿ ಬಿತ್ತುವಲ್ಲಿ ಸಫಲವಾಗುತ್ತದೆ. ನಂತರ ಮಕ್ಕಳ ಸಂಖ್ಯೆ ಕಡಿಮೆ ಎಂಬ ನೆಪವೊಡ್ಡಿ ಶಾಲೆಗಳನ್ನು ಮುಚ್ಚುತ್ತ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿ ಮಾಡಿ ಉಚಿತ ಶಿಕ್ಷಣ ಕೊಡಬೇಕಾದ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಣ ವ್ಯವಸ್ಥೆಯನ್ನು ಸರಕಾರ ಕೂಡ ‘ಉದ್ದಿಮೆ’ಯ ‘ಲಾಭ – ನಷ್ಟ’ದ ದೃಷ್ಟಿಯಲ್ಲಿ ನೋಡುವುದೇ ಆಗಿದೆ. ಕರ್ನಾಟಕದ ಉದಾಹರಣೆಯನ್ನೇ ನೋಡುವುದಾದರೆ ಸರಕಾರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಾವುದೇ ಖಾಸಗಿ ಸಂಸ್ಥೆಗಿಂತ ಹೆಚ್ಚು ದಕ್ಷವಾಗಿ ಕೆಲಸ ಮಾಡುತ್ತ ‘ಲಾಭ’ ಮಾಡುತ್ತಿದೆ. ಬಸ್ಸಿನ ಸಂಸ್ಥೆಯನ್ನು ಉದ್ಧರಿಸಲು ಅಪಾರ ಆಸಕ್ತಿ ತೋರುವ ಸರಕಾರಗಳು ಶೈಕ್ಷಣಿಕ ಕ್ಷೇತ್ರದ ಬಗ್ಗೆ ಇಷ್ಟೊಂದು ಉದಾಸೀನತೆ ತೋರುವುದ್ಯಾಕೆ? ‘ಲಾಭ – ನಷ್ಟಕ್ಕೆ’ ಹಣವೊಂದೇ ಮಾನದಂಡವಾಗಬೇಕಾ?
       
ಕೃಪೆ : ಹಿಂಗ್ಯಾಕೆ (ಬ್ಲಾಗ್)

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.