Thursday, June 07, 2012

ದಾರಿ ತಪ್ಪುತ್ತಿರುವ ಅಣ್ಣಾ !

ಭ್ರಷ್ಟಾಚಾರದಿಂದ ರೋಸಿಹೋಗಿದ್ದ ದೇಶದ ಜನರ ಮನದಲ್ಲಿ ಅಣ್ಣಾ ಹಜಾರೆ ತಂಡ ನಿರೀಕ್ಷೆಯ ಬುಗ್ಗೆಗಳನ್ನೆಬ್ಬಿಸಿದ್ದು ನಿಜ. ಆದರೆ ಅದೇ ತಂಡ ಈಗ ಸ್ವಯಂಕೃತ ಅಪರಾಧಗಳ ಮೂಲಕ ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವುದು ವಿಷಾದನೀಯ. 

ಕಳೆದ ಕೆಲವು ದಶಕಗಳಿಂದ ಮಹಾರಾಷ್ಟ್ರದ ರಾಳೆಗಣಸಿದ್ದಿಯಲ್ಲಿ ಗ್ರಾಮೀಣ ಅಭಿವೃದ್ದಿಯ ಚಟುವಟಿಕೆಗಳ ಜತೆ ಭ್ರಷ್ಟರ ವಿರುದ್ದ ಹೋರಾಟವನ್ನೂ ನಡೆಸುತ್ತಾ ಬಂದಿದ್ದ ಅಣ್ಣಾಹಜಾರೆ ಟೀಕಾತೀತರಾಗಿದ್ದರು. ಅವರ ವಿರುದ್ದ ಯಾವ ಸಂದರ್ಭದಲ್ಲಿಯೂ ರಾಜಕೀಯ ಪೂರ್ವಗ್ರಹದ ಆರೋಪ ಕೇಳಿಬಂದಿರಲಿಲ್ಲ. 


ಕಾಂಗ್ರೆಸ್, ಬಿಜೆಪಿ,ಶಿವಸೇನೆ ಎನ್ನದೆ ಎಲ್ಲ ಪಕ್ಷಗಳಲ್ಲಿರುವ ಭ್ರಷ್ಟರು ಅವರ ದಾಳಿಗೆ ಈಡಾಗಿದ್ದರು. ಹೋರಾಟದ ಶಿಬಿರ ದೆಹಲಿಗೆ ಸ್ಥಳಾಂತರಗೊಂಡ ನಂತರದ ದಿನಗಳಲ್ಲಿ ಅದೇ ಹಳೆಯ ಪ್ರಶ್ನಾತೀತ, ಪಕ್ಷಾತೀತ ಮತ್ತು ವಿವಾದಾತೀತ ಅಣ್ಣಾಹಜಾರೆಯಾಗಿ ಅವರು ಉಳಿದಿಲ್ಲ.


ಪ್ರಾರಂಭದ ದಿನಗಳಲ್ಲಿ  ವ್ಯಕ್ತವಾದ ಜನಬೆಂಬಲದಲ್ಲಿ ತೇಲಿಹೋದ ಅಣ್ಣಾತಂಡ ಹೋರಾಟದ ಗೊತ್ತು-ಗುರಿಗಳನ್ನು ವಿಸ್ತರಿಸುತ್ತಲೇ ಹೋಗಿದ್ದು ಇದಕ್ಕೆ ಕಾರಣ ಇರಬಹುದು. ಲೋಕಪಾಲ ಮಸೂದೆ ಜಾರಿಗಾಗಿ ಪ್ರಾರಂಭಗೊಂಡ ಚಳವಳಿ ಈಗ ಕಪ್ಪುಹಣ, ಚುನಾವಣಾ ಪ್ರಚಾರ, ಪ್ರಧಾನಿ ಮತ್ತು ಸಚಿವರ ಭ್ರಷ್ಟಾಚಾರವೂ ಸೇರಿದಂತೆ ಕಣ್ಣೆದುರು ಕಾಣುವ ಎಲ್ಲ ಸಂಗತಿಗಳ ಬಗ್ಗೆ ಪ್ರತಿಕ್ರಿಯಿಸತೊಡಗಿ ತಾನೇ ಗೊಂದಲಕ್ಕೀಡಾದಂತೆ ಕಾಣುತ್ತಿದೆ. 

ಅವರ ಸಂಗಾತಿಗಳು ತಮ್ಮ ನಡೆ-ನುಡಿಗಳ ಮೂಲಕ ದಿನಕ್ಕೊಂದು ವಿವಾದವನ್ನು ಸೃಷ್ಟಿಸಿ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ.  ದೇಶದ ನೂರುಕೋಟಿ ಜನರ ಚುನಾಯಿತ ಪ್ರತಿನಿಧಿಗಳು ತಾವು ಎಂಬಂತೆ ಹಮ್ಮಿನಿಂದ ವರ್ತಿಸತೊಡಗಿದ್ದಾರೆ. ಇದರ  ಫಲವಾಗಿಯೇ ದೇಶಕ್ಕೆ ಹೊಸ ದಿಕ್ಕು ತೋರಿಸುವವರಂತೆ ಕಂಡಿದ್ದ ಅಣ್ಣಾತಂಡ ತಾನೇ ದಿಕ್ಕುತಪ್ಪಿಸಿಕೊಂಡವರಂತೆ ಕಾಣುತ್ತಿದೆ.

 ವಿವಾದಾತ್ಮಕ ಯೋಗಗುರು ಬಾಬಾ ರಾಮ್‌ದೇವ್ ಜತೆಯಲ್ಲಿ ಸೇರಿಕೊಳ್ಳುವ ಮೂಲಕ ಅಣ್ಣಾತಂಡ ಅನಗತ್ಯವಾಗಿ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ರಾಮ್‌ದೇವ್ ನಡವಳಿಕೆಯನ್ನು ಸಮರ್ಥಿಸಿಕೊಳ್ಳುವುದು ತಂಡದ ಸದಸ್ಯರಿಗೂ ಕಷ್ಟವಾಗುತ್ತಿದೆ.

ಕೆಲವೇ ವರ್ಷಗಳ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದನೆ ಮಾಡಿರುವ ರಾಮ್‌ದೇವ್ ವಿರುದ್ದ ತೆರಿಗೆ ವಂಚನೆ, ಭೂ ಒತ್ತುವರಿಯೂ ಸೇರಿದಂತೆ ಹಲವಾರು ಆರೋಪಗಳಿವೆ. ಕಳೆದ ವರ್ಷ ದೆಹಲಿಯ ರಾಮಲೀಲಾ ಮೈದಾನದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೆಣ್ಣುವೇಷ ಧರಿಸಿ ಪಲಾಯನಗೈದ ನಂತರ ರಾಮ್‌ದೇವ್ ಹಿಂದಿನಷ್ಟು ಜನಪ್ರಿಯರಲ್ಲ.

ಸಾರ್ವಜನಿಕ ಹಿತಾಸಕ್ತಿಗಿಂತಲೂ ಹೆಚ್ಚಾಗಿ ವೈಯಕ್ತಿಕ ಸೇಡು ತೀರಿಸಿಕೊಳ್ಳುವವರಂತೆ ಇತ್ತೀಚಿನ ದಿನಗಳಲ್ಲಿ ಮಾತನಾಡುತ್ತಿರುವ ರಾಮ್‌ದೇವ್ ಅವರ ಸಂಘ ಪರಿವಾರದ ಮೇಲಿನ ಒಲವು ಕೂಡ ರಹಸ್ಯವೇನಲ್ಲ. ಮೊನ್ನೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಮರುಗಳಿಗೆಯಲ್ಲಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ರಾಮ್‌ದೇವ್ ಕಾಲುಮುಟ್ಟಿ ಬೆಂಬಲ ಘೋಷಿಸಿದ್ದಾರೆ.


ಪಕ್ಷದೊಳಗಿನ ಭ್ರಷ್ಟಾಚಾರವನ್ನು ನಿಯಂತ್ರಿಸಲಾಗದಿರುವುದಕ್ಕೆ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಂದಲೇ ಟೀಕೆಗೆ ಗುರಿಯಾದವರು ಗಡ್ಕರಿ. ಇಂತಹವರನ್ನು ಜತೆಯಲ್ಲಿ ಕಟ್ಟಿಕೊಂಡ ನಂತರ ತಮ್ಮದು ಪಕ್ಷಾತೀತ ಹೋರಾಟ ಎಂದು ಅಣ್ಣಾತಂಡ ಹೇಳುವ ಹಾಗಿಲ್ಲ. ವಿಶ್ವಾಸಾರ್ಹತೆ ಎನ್ನುವುದು ಒಂದು ಚಳವಳಿಯ ಪ್ರಾಣವಾಯು. ಅಣ್ಣಾ ಚಳವಳಿ ಅದನ್ನೇ ಕಳೆದುಕೊಳ್ಳುತ್ತಿದೆ.
ಕೃಪೆ : ಪ್ರಜಾವಾಣಿ ಸಂಪಾದಕೀಯ : 06-06-2012

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.