Sunday, June 10, 2012

ಇದು ದಲಿತರ ಭದ್ರತೆಯ ಬದುಕೆ !?




- ಸುಭಾಶ್‌ ಗಟಾದೆ

ಇದು ದಲಿತರ ಭದ್ರತೆಯ ಬದುಕೆ!?
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ಹಾಗೂ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಹಾಲಿ ಅಧ್ಯಕ್ಷ ನ್ಯಾ.ಕೆ.ಜಿ. ಬಾಲಕೃಷ್ಣನ್ ನಿವೃತ್ತಿಯ ಬಳಿಕ ತಪ್ಪು ಕಾರಣಗಳಿಗಾಗಿ ಈಗಾಗಲೇ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಗುಜರಾತ್‌ಗೆ ಭೇಟಿ ನೀಡುವ ಮೂಲಕ ಅವರು ತನ್ನ ಟೀಕಾಕಾರರಿಗೆ ಮತ್ತಷ್ಟು ಗ್ರಾಸ ಒದಗಿಸಿ ದರು. ದಲಿತರ ಏಳಿಗೆಗಾಗಿ ಗುಜರಾತ್ ಸರಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಅವರು ಪ್ರಶಂಸೆಯ ಸುರಿಮಳೆಗೈದರು. ಅಷ್ಟೇ ಅಲ್ಲ, ಇತರ ಹಲವಾರು ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್‌ನಲ್ಲಿ ದಲಿತರ ಭವಿಷ್ಯ ಭದ್ರವಾಗಿದೆ ಎಂದು ಗುಣಗಾನ ಮಾಡಿದರು. ಆದರೆ, ಇದು ದಲಿತ ಚಿಂತಕರನ್ನು ಕೆರಳಿಸಿದೆ. ಇದು 2002ರ ಗುಜರಾತ್ ಹಿಂಸಾಚಾರದ ಹಿನ್ನೆಲೆಯಲ್ಲಿ ಹಲವಾರು ವಿವಾದಗಳಲ್ಲಿ ಸಿಲುಕಿಕೊಂಡಿರುವ ರಾಜ್ಯ ಸರಕಾರಕ್ಕೆ ಕ್ಲೀನ್‌ಚಿಟ್ ನೀಡುವ ಹಾಗೂ ಅದರ ಕಳಂಕವನ್ನು ತೊಡೆದುಹಾಕುವ ಕ್ರವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯಗಳ ಬಗ್ಗೆ ಬಹಿರಂಗ ವಿಚಾರಣೆ ನಡೆಸುವ ಆಯೋಗದ ಕಾರ್ಯಕ್ರಮದ ಅಂಗವಾಗಿ ಬಾಲಕೃಷ್ಣನ್ ಗುಜರಾತ್‌ಗೆ ಎರಡು ದಿನಗಳ (ಮಾರ್ಚ್ 14-15) ಭೇಟಿ ನೀಡಿದ್ದರು. ಇದು ಕೆ. ಬಿ. ಸಕ್ಸೇನ ಸಮಿತಿಯ ಮಹತ್ವದ ಶಿಫಾರಸುಗಳ ಪೈಕಿ ಒಂದಾಗಿದೆ.

ಕೆಲವು ವರ್ಷಗಳ ಹಿಂದೆ ಸಮಿತಿಯು ದೇಶದಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ವರದಿಯೊಂದನ್ನು ಸಲ್ಲಿಸಿತ್ತು.ಕೆಲವು ಸಮಯದ ಹಿಂದೆ ಆಯೋಗ ಈ ಮಾದರಿಯ ತನ್ನ ಮೊದಲ ಬಹಿರಂಗ ವಿಚಾರಣೆಯನ್ನು ಒಡಿಶಾದಲ್ಲಿ ನಡೆಸಿತ್ತು.ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ನ್ಯಾ.ಬಾಲಕೃಷ್ಣನ್ ಗುಜರಾತ್ ಸರಕಾರದ ಮೇಲೆ ಪ್ರಶಂಸೆಗಳ ಸುರಿಮಳೆಯನ್ನೇ ಹರಿಸಿದರು.ಆದರೆ, ದಲಿತರ ನೈಜ ಬದುಕು ಬೇರೆಯದೇ ಆದ ಚಿತ್ರಣ ನೀಡಿತು.ಗುಜರಾತ್‌ನ ವಿವಿಧ ಭಾಗಗಳಿಂದ ಬಂದಿದ್ದ ದಲಿತರು ದೂರುಗಳ ಮಹಾಪೂರವನ್ನೇ ಹರಿಸಿದರು. ದೂರು ಸಲ್ಲಿಸುವ ವೇಳೆ ಪೊಲೀಸರಿಂದ ಅಸಹಕಾರ, ಸರಕಾರಿ ಅಧಿಕಾರಿಗಳ ನಿರ್ಲಕ್ಷ, ಪುನರ್ವಸತಿಯ ಕೊರತೆ ಮುಂತಾದವುಗಳತ್ತ ಅವರು ಬೆಟ್ಟು ಮಾಡಿದರು.

ಗ್ರಾಮಾಧಿಕಾರಿಯಾಗಿರುವ ಸಾನಂದ್ ಸಮೀಪದ ಕುಂಡ್ಲ ಗ್ರಾಮದ ನಿವಾಸಿ ಹಾಗೂ ದಲಿತ ಸುರೇಶ್ ಜಾದವ್, 2009ರಲ್ಲಿ ತನ್ನ ಗ್ರಾಮದಲ್ಲಿ ದೇವಸ್ಥಾನವೊಂದು ನಿರ್ಮಾಣಗೊಂಡ ಬಳಿಕ ತಾನು ಯಾವ ರೀತಿಯ ಸಾಮಾಜಿಕ ಬಹಿಷ್ಕಾರ ಎದುರಿಸಿದೆ ಎಂಬುದನ್ನು ವಿವರಿಸಿದರು.ಸಾರ್ವಜನಿಕ ಸ್ಥಳದಲ್ಲಿ ದೇವಸ್ಥಾನ ವನ್ನು ನಿರ್ಮಿಸಲಾಗಿತ್ತು.ದೇವಸ್ಥಾನ ನಿರ್ಮಾಣಕ್ಕೆ ಎಲ್ಲರಂತೆ ಸುರೇಶ್ ಜಾದವ್ ಕೂಡ ದೇಣಿಗೆ ನೀಡಿದ್ದರು. ಆದರೆ, ದೇವಸ್ಥಾನ ಆರಂಭಗೊಂಡ ಬಳಿಕ ಅದನ್ನು ಪ್ರವೇಶಿಸಲು ಜಾದವ್‌ಗೆ ಅನುಮತಿ ನೀಡಲಿಲ್ಲ. ಅದನ್ನು ಪ್ರತಿಭಟಿಸಿದಾಗ ಅವರು ಹಾಗೂ ಅವರ ಕುಟುಂಬದ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಲಾಯಿತು.
ಅಹ್ಮದಾಬಾದ್‌ನಿಂದ 100 ಕಿ.ಮೀ. ದೂರ ದಲ್ಲಿರುವ ಸಬರ್‌ಕಾಂತ ಜಿಲ್ಲೆಯ ತಾಜುಪುರ ಗ್ರಾಮದಲ್ಲಿ ಎಪ್ರಿಲ್‌ನಲ್ಲಿ ದಲಿತ ಕುಟುಂಬ ವೊಂದರಲ್ಲಿ ಮದುವೆಯಿತ್ತು.ಕುಟುಂಬವು ಮದುವೆ ಮೆರವಣಿಗೆ ನಡೆಸಲು ಮುಂದಾ ದಾಗ ಇತರ ಸಮುದಾಯಗಳ ಜನರು ತಡೆಯೊಡ್ಡಿದರು.ಪೊಲೀಸ್ ರಕ್ಷಣೆಯ ಹೊರತಾಗಿಯೂ ಮೆರವಣಿಗೆ ಮೇಲೆ ಆಕ್ರಮಣ ನಡೆಸಲಾಯಿತು ಹಾಗೂ ಕಲ್ಲು ತೂರಲಾಯಿತು.‘‘ದೂರು ನೀಡುವಾಗ ಪೊಲೀಸರು ಮೇಲ್ಜಾತಿಯವರ ಪರವಾಗಿ ನಿಂತರು’’ ಎಂದು ದಲಿತ ಕಾರ್ಯಕರ್ತ ಸಂಜಯ್ ಪಾರ್ಮರ್ ಆರೋಪಿಸಿದರು.

1,589 ಗ್ರಾಮಗಳಲ್ಲಿ ತಾನು ನಡೆಸಿದ ಸಮೀಕ್ಷೆಯ ಫಲಿತಾಂಶವನ್ನು ಸ್ವಯಂಸೇವಾ ಸಂಘಟನೆ ‘ನೌಸರ್ಜನ್’ನ ಪ್ರತಿನಿಧಿಯೊಬ್ಬರು ಹಂಚಿಕೊಂಡರು. ಸಮೀಕ್ಷೆ ನಡೆಸಲಾದ ಗ್ರಾಮಗಳ ಪೈಕಿ 98 ಶೇ. ಗ್ರಾಮಗಳಲ್ಲಿ ಅಸ್ಪಶತೆ ಆಚರಣೆ ಇನ್ನೂ ಜಾರಿಯಲ್ಲಿದೆ ಎಂದು ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯ ಪ್ರಕಾರ,ದಲಿತ ಸಮುದಾಯಗಳಿಗೆ ಸಂಬಂಧಿಸಿದ ಪ್ರಕರಣಗಳ ಉಸ್ತುವಾರಿಯನ್ನು ರಾಜ್ಯ ಮಟ್ಟದ ಸಮಿತಿಯೊಂದು ನಡೆಸಬೇಕು. ಹಾಗೂ ಸಮಿತಿಯು ವರ್ಷಕ್ಕೆ ಎರಡು ಬಾರಿ ಸಭೆ ಸೇರಬೇಕು. ವರ್ಷಕ್ಕೆ ಎರಡು ಸಭೆಗಳನ್ನು ಬಿಡಿ, ಸಮಿತಿ ಕಳೆದ 17 ವರ್ಷಗಳಲ್ಲಿ ಕೇವಲ ಆರು ಬಾರಿ ಸಭೆ ಸೇರಿದೆ. ದಲಿತ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ಒಂದು ವಿಶೇಷ ನ್ಯಾಯಾಲಯ ಮತ್ತು ಒಂದು ವಿಶೇಷ ಪಬ್ಲಿಕ್ ಪ್ರಾಸಿ ಕ್ಯೂಟರ್ ನೇಮಿಸಬೇಕೆಂದು ಈ ಕಾಯ್ದೆ ಹೇಳುತ್ತದೆ. ಆದರೆ, ಇದಕ್ಕೆ ತನ್ನ ಬಳಿ ಹಣವಿಲ್ಲ ಎಂದು ಸರಕಾರ ಹೇಳುತ್ತದೆ.

2006ರಲ್ಲಿ ಬನಸ್ಕಾಂತ ಜಿಲ್ಲೆಯಲ್ಲಿ ತಾನು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ದೌರ್ಜನ್ಯ) ಆಗಿದ್ದಾಗ ದಲಿತರ ವಿರುದ್ಧದ 1,000ಕ್ಕೂ ಅಧಿಕ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದಾಗ ಹಿರಿಯ ಅಧಿಕಾರಿಗಳು ತನಗೆ ಹೇಗೆ ಕಿರುಕುಳ ನೀಡಿದರು ಎಂಬುದನ್ನು ಅಮಾನತುಗೊಂಡ ಡಿಎಸ್‌ಪಿ ಎಸ್.ಕೆ.ಮಕ್ವಾನ್ ಬಹಿರಂಗ ವಿಚಾರಣೆಯ ವೇಳೆ ನ್ಯಾಯಾಧೀಶರಿಗೆ ಹೇಳಿದರು.ತಾನು ಕರ್ತವ್ಯ ನಿರ್ವಹಿಸುವುದರಿಂದ ಹಾಗೂ ಆರೋಪಿಗಳನ್ನು ಹಿಡಿಯುವುದರಿಂದ ತನ್ನನ್ನು ಪ್ರತಿ ಬಂಧಿಸಲಾಯಿತು ಎಂದು ಅವರು ವಿವರಿಸಿದರು.

ಸ್ಥಳೀಯ ಅಧಿಕಾರಿಗಳ ಕುರಿತು ಮಾಹಿತಿ ಕೇಳಿ ಮಾಹಿತಿ ಹಕ್ಕು ಕಾಯ್ದೆಯನ್ವಯ ಅರ್ಜಿ ಸಲ್ಲಿಸಿದ ಏಕೈಕ ಕಾರಣಕ್ಕಾಗಿ ಪೊಲೀಸರು ತನಗೆ ಯಾವ ರೀತಿ ಕಿರುಕುಳ ನೀಡಿದರು ಎಂಬ ಬಗ್ಗೆ ಭಾವ ನಗರದ ಲಾಲ್‌ಜಿ ಮಕ್ವಾನ ಎನ್‌ಎಚ್‌ಆರ್‌ಸಿ ಸಮಿತಿಗೆ ವಿವರಿಸಿದರು. ತನ್ನ ಗಂಡ ಮೇಲ್ಜಾತಿಯ ಜನರಿಂದ ಕೊಲೆ ಯಾಗಿದ್ದು ಪೊಲೀಸರು ಈ ಬಗ್ಗೆ ನಿರ್ಲಕ್ಷ ವಹಿಸಿ ದ್ದಾರೆ ಎಂದು ರಜುಲಾ ತಾಲೂಕಿನ ಮೀನಾಬೆನ್ ಮಕ್ವಾನ ಹೇಳಿದರು.
ಗೋರಜ್ ಮತ್ತು ರೆತಾಲ್ ಗ್ರಾಮಗಳಲ್ಲಿ ದಲಿತರನ್ನು ಬಲವಂತವಾಗಿ ವಲಸೆ ಹೋಗುವಂತೆ ಮಾಡಲಾಗುತ್ತಿದೆ ಹಾಗೂ ಅವರ ವಿರುದ್ಧ ಸಾಮಾಜಿಕ ಬಹಿಷ್ಕಾರ ವಿಧಿಸಲಾಗುತ್ತಿದೆ. ಆದರೆ ಈ ಬಗ್ಗೆ ದೂರು ನೀಡಿದರೂ ಅಹ್ಮದಾಬಾದ್ ಗ್ರಾಮೀಣ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಾನಂದ್ ಗ್ರಾಮದ ದಲಿತರು ದೂರಿದರು. ಸಮುದಾಯದ ವ್ಯಕ್ತಿ ಯೊಬ್ಬನ ಹತ್ಯೆಯಾದಾಗ ಅದರ ವಿರುದ್ಧ ತಾನು ಜನರನ್ನು ಸಂಘಟಿಸಿದುದಕ್ಕಾಗಿ ತನ್ನನ್ನು ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಿಲುಕಿಸಲಾಯಿತು ಎಂದು ಸಾನಂದ್ ಗ್ರಾಮದ ದಲಿತ ಸಮುದಾಯದ ನಾಯಕ ಬಾಬು ವನಿಯಾ ಆರೋಪಿಸಿದರು.ಕಳೆದ 10 ವರ್ಷಗಳಲ್ಲಿ ಗುಜರಾತ್‌ನಲ್ಲಿ 167 ಸ್ವಚ್ಛತಾ ಕಾರ್ಮಿಕರ ಸಾವು ಸಂಭವಿಸಿದೆ ಎಂದು ರಾಜ್ಯದಲ್ಲಿ ಸ್ವಚ್ಛತಾ ಕೆಲಸಗಾರರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪುರುಷೋತ್ತಮ್ ವೇಲಾ ಹೇಳಿದರು. ಆದಾಗ್ಯೂ, ರಾಜ್ಯದಲ್ಲಿ ಭೂಗತ ಚರಂಡಿಗಳನ್ನು ಸ್ವಚ್ಛ ಮಾಡುವುದಕ್ಕಾಗಿ ಮ್ಯಾನ್‌ಹೋಲ್‌ಗಳಿಗೆ ಕಾರ್ಮಿಕರನ್ನು ಇಳಿಸುವ ವ್ಯವಸ್ಥೆ ಈಗಲೂ ಮುಂದುವರಿದಿದೆ ಎಂದರು.

ಪೂರ್ವ ತಯಾರಿಯ ಕೊರತೆ
ಬಹಿರಂಗ ವಿಚಾರಣೆಯನ್ನು ಏರ್ಪಡಿಸುವ ಭರದಲ್ಲಿ ಆಯೋಗ ಪೂರ್ವ ತಯಾರಿ ಮಾಡದಿರುವುದು ಎದ್ದು ಕಾಣುತ್ತಿತ್ತು. ಆಯೋಗದ 2009ರ ವರದಿಯೇ ಹೇಳು ವಂತೆ, ದೇಶಾದ್ಯಂತ ದಾಖಲಾದ ಒಟ್ಟು 94,559 ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ಪೈಕಿ 3,813 ಗುಜರಾತ್ ರಾಜ್ಯದಲ್ಲೇ ಘಟಿಸಿವೆ. ಗುಜರಾತ್ ಈ ಪಟ್ಟಿಯಲ್ಲಿ ಉತ್ತರಪ್ರದೇಶ ಮತ್ತು ದಿಲ್ಲಿಗಳಿಗಿಂತ ಮಾತ್ರ ಕೆಳಗಿದೆ.ರಾಜ್ಯದ ಸಾಮಾಜಿಕ ನ್ಯಾಯ ಇಲಾಖೆಯು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಕಾನೂನು ಇಲಾಖೆಗೆ ಸಲ್ಲಿಸಿದ 23 ಪುಟಗಳ ರಹಸ್ಯ ವರದಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳನ್ನು ಕುಲಗೆಡಿಸಿದ ಹಲವಾರು ದೃಷ್ಟಾಂತಗಳನ್ನು ನೀಡಿದೆ. ಈ ಕಾಯ್ದೆಯನ್ವಯ ರಾಜ್ಯದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾದ ಪ್ರಮಾಣ ಕೇವಲ 2.5 ಶೇ. ಹಾಗೂ ದೋಷಮುಕ್ತರಾದವರ ಪ್ರಮಾಣ 97.5 ಶೇ.

ಇದು ಪೊಲೀಸರು ತನಿಖೆಯನ್ನು ಯಾವ ರೀತಿ ನಡೆಸುತ್ತಾರೆ ಹಾಗೂ ವಿಚಾರಣೆಗಳ ಸಮಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಹೇಗೆ ಪ್ರತಿಕೂಲವಾಗಿ ವರ್ತಿಸುತ್ತಾರೆ ಎಂಬು ದನ್ನು ಸೂಚಿಸುತ್ತದೆ.ಈ ಕಾಯ್ದೆಯಡಿಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ವಿಚಾರಣೆ ಯನ್ನು ಡಿವೈಎಸ್‌ಪಿ ದರ್ಜೆಗಿಂತ ಕೆಳಗಿನ ಅಧಿಕಾರಿಗಳು ಮಾಡುವಂತಿಲ್ಲ. ಆದರೆ, 4,000ಕ್ಕೂ ಅಧಿಕ ಇಂಥ ಪ್ರಕರಣಗಳ ವಿಚಾರಣೆಯನ್ನು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಅಥವಾ ಸಬ್ ಇನ್ಸ್‌ಪೆಕ್ಟರ್‌ಗಳು ನಡೆಸಿದ್ದಾರೆ. ಸಂತ್ರಸ್ತರನ್ನು ಎಸ್‌ಸಿ/ಎಸ್‌ಟಿ ಸಮುದಾಯದ ಸದಸ್ಯರು ಎಂದು ಗುರುತಿಸದ ಹಿನ್ನೆಲೆಯಲ್ಲಿ ಆರೋಪಿಗಳು ದೋಷ ಮುಕ್ತರಾಗುತ್ತಿದ್ದಾರೆ.

ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳಲ್ಲಿ ಸಂತ್ರಸ್ತರ ಜಾತಿ ಪ್ರಮಾಣಪತ್ರಗಳನ್ನು ಲಗತ್ತಿಸದಿರುವುದೇ ಕಾರಣವಾಗಿದೆ.ದಲಿತ ದೌರ್ಜನ್ಯ ಕಾಯ್ದೆಯಲ್ಲಿ ಅವಕಾಶವಿಲ್ಲದಿದ್ದರೂ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲಾಗುತ್ತಿದೆ.ದಲಿತ ದೌರ್ಜನ್ಯ ಕಾಯ್ದೆ ಪ್ರಕಾರ ಸುಳ್ಳು ದೂರು ದಾಖಲಿಸುತ್ತಿರುವುದೇ ಆರೋಪಿಗಳ ಭಾರೀ ಪ್ರಮಾಣದ ದೋಷಮುಕ್ತಿಗೆ ಕಾರಣ ಎಂಬುದಾಗಿ ಸಾರ್ವಜನಿಕವಾಗಿ ವ್ಯಾಖ್ಯಾನಿಸಲಾಗುತ್ತಿದೆ.ಆದರೆ, ಈ ಬಗ್ಗೆ ಅಧ್ಯಯನ ನಡೆಸಿದ ಸಾಮಾಜಿಕ ನ್ಯಾಯ ಸಮಿತಿಯ ಕಾರ್ಯದರ್ಶಿ ವಜಿಭಾಯ್ ಪಟೇಲ್, ವಿಚಾರಣೆ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಹಲವು ಲೋಪದೋಷಗಳತ್ತ ಬೆಟ್ಟು ಮಾಡಿದೆ.

ಸರಕಾರದ ಶಾಮೀಲಾತಿಯೇ ಪ್ರಕರಣಗಳು ವಿಫಲವಾಗಲು ಕಾರಣ ಎಂಬುದಾಗಿ ಅದು ಸಾಧಿಸಿ ತೋರಿಸಿದೆ. ಇದಕ್ಕಾಗಿ ವಜಿಭಾಯ್ 400 ತೀರ್ಪುಗಳ ವ್ಯವಸ್ಥಿತ ಅಧ್ಯಯನ ನಡೆಸಿದ್ದರು.ಅವರ ಅಧ್ಯಯನದ ಮುಖ್ಯಾಂಶಗಳನ್ನು ‘ಕಮ್ಯುನಲಿಸಂ ಕಾಂಬ್ಯಾಟ್’ನಲ್ಲಿ ಬರೆದ ಲೇಖನವೊಂದರಲ್ಲಿ (ಮಾರ್ಚ್ 2005) ತೀಸ್ತಾ ಸೆಟಲ್ವಾದ್ ಹೀಗೆ ನೀಡಿದ್ದಾರೆ.

• 95 ಶೇಕಡಕ್ಕೂ ಅಧಿಕ ಪ್ರಕರಣಗಳಲ್ಲಿ ತನಿಖೆ ಮತ್ತು ಪ್ರಾಸಿಕ್ಯೂಶನ್ ಅವಧಿಯ ಲ್ಲಿನ ತಾಂತ್ರಿಕ ದೋಷದಿಂದಾಗಿ ಆರೋಪಿಗಳ ದೋಷಮುಕ್ತಿಯಾಗುತ್ತಿದೆ. ಉಳಿದ 5 ಶೇ. ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶಗಳನ್ನು ಸರಕಾರ ಉಲ್ಲಂಘಿಸುತ್ತಿದೆ.ಹೆಚ್ಚಿನ ಸಂದರ್ಭಗಳಲ್ಲಿ ಐಪಿಸಿಯಡಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುತ್ತಿದೆ. ಆದರೆ, ದಲಿತ ದೌರ್ಜನ್ಯ ಪ್ರಕರಣಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳು ಸಾಬೀತಾಗುತ್ತಿಲ್ಲ. ಹಾಗಾಗಿ, ಈ ಕಾಯ್ದೆಯ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಮುಂದುವರಿಯುವಲ್ಲಿ ವ್ಯವಸ್ಥಿತ ಪಕ್ಷಪಾತ ಎದ್ದು ಕಾಣುತ್ತಿದೆ.

•ರಾಜ್ಯ ಪೊಲೀಸರು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಮನೋಭಾವದ ಪರಿಣಾಮವಾಗಿ ದಲಿತ ದೌರ್ಜನ್ಯ ಕಾಯ್ದೆಯಡಿ ಕೊಲೆ ಮತ್ತು ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿಗಳು ಬಿಡುಗಡೆ ಗೊಳ್ಳುತ್ತಿದ್ದಾರೆ.

•ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಹೆಚ್ಚುತ್ತಿರುವ ಆರೋಪಿಗಳ ದೋಷಮುಕ್ತಿಯ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಇದೇ ಕಾಯ್ದೆಯಡಿಯಲ್ಲಿ ಸ್ಥಾಪನೆಗೊಂಡ ವಿಶೇಷ ನ್ಯಾಯಾಲಯಗಳ ಹಲವು ತೀರ್ಪುಗಳು ಪೊಲೀಸರು ಮತ್ತು ಪ್ರಾಸಿಕ್ಯೂಟರ್‌ಗಳ ನಿರ್ಲಕ್ಷದ ವಿರುದ್ಧ ಛೀಮಾರಿ ಹಾಕಿವೆ ಹಾಗೂ ಕ್ರಮ ಜಾರಿ ವರದಿಯನ್ನು ನಿರ್ದಿಷ್ಟ ಸಮಯದಲ್ಲಿ ಸಲ್ಲಿಸುವಂತೆಯೂ ಸೂಚಿಸಿವೆ.

• ಕಾಯ್ದೆಯ 4ನೆ ಪರಿಚ್ಛೇದದ ಪ್ರಕಾರ, ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರದ ಯಾವುದೇ ಸರಕಾರಿ ಸೇವಕನೊಬ್ಬ ಈ ಕಾಯ್ದೆಯ ಪ್ರಕಾರ ತಾನು ಮಾಡಬೇಕಾದ ಕರ್ತವ್ಯವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದರೆ ಅಂಥ ನೌಕರನಿಗೆ ಆರು ತಿಂಗಳ ಸೆರೆಮನೆ ವಾಸ (ಇದನ್ನು ಒಂದು ವರ್ಷಕ್ಕೂ ವಿಸ್ತರಿಸಬಹುದು) ವಿಧಿಸಬೇಕು ಎಂದು ಕಾಯ್ದೆ ಹೇಳುತ್ತದೆ. ನ್ಯಾಯಾಲಯಗಳು ನೀಡಿರುವ 95 ಶೇಕಡ ತೀರ್ಪುಗಳು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾಯ್ದೆಯ 4ನೆ ಪರಿಚ್ಛೇದದ ಪ್ರಕಾರ ಛೀಮಾರಿ ಹಾಕಿವೆ. ಆದರೆ, ಗುಜರಾತ್ ಸರಕಾರ ಇಂಥ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಶಿಕ್ಷಿಸುವ ಬದಲು ಭಡ್ತಿ ನೀಡಿ ಗೌರವಿಸುತ್ತಿದೆ.

ಹಲವು ವಿಧಗಳು
ಸರಕಾರಿ ಯಂತ್ರ ಆರೋಪಿಗಳೊಂದಿಗೆ ಹಲವು ವಿಧಗಳಲ್ಲಿ ಶಾಮೀಲಾಗಿ ಅವರು ದೋಷಮುಕ್ತಗೊಳ್ಳುವಂತೆ ಮಾಡುತ್ತಿದೆ. ಅವುಗಳೆಂದರೆ-
• ಪ್ರಕರಣಗಳನ್ನು ಕೆಳದರ್ಜೆಯ ಅಧಿಕಾರಿಗಳು ನಡೆಸಿದ ಕಾರಣಕ್ಕಾಗಿ ಆರೋಪಿಗಳ ದೋಷಮುಕ್ತಿ: 1995ರ ಈ ಕಾಯ್ದೆಯನ್ವಯ ದಾಖಲಾದ ದೂರುಗಳನ್ನು ಡಿವೈಎಸ್‌ಪಿ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಅಧಿಕಾರಿಗಳು ನಡೆಸಬೇಕು. ತಮ್ಮ ವರದಿಗಳನ್ನು ಅವರು ನೇರವಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ರವಾನಿಸಬೇಕು. ಪ್ರಕರ ಣದ ತನಿಖೆಯನ್ನು ಡಿವೈಎಸ್‌ಪಿ ದರ್ಜೆಯ ಅಧಿಕಾರಿಗಿಂತ ಕೆಳ ದರ್ಜೆಯ ಅಧಿಕಾರಿಗಳು ನಡೆಸಿದ್ದಾರೆ ಎಂಬ ಕಾರಣ ಕ್ಕಾಗಿಯೇ 95 ಶೇ. ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆಯಾಗುತ್ತದೆ.

• ಪೊಲೀಸರು ಜಾತಿ ಪ್ರಮಾಣಪತ್ರವನ್ನು ಲಗತ್ತಿಸಿಲ್ಲ ಎನ್ನುವ ಕಾರಣಕ್ಕಾಗಿ ಖುಲಾಸೆ: ದಲಿತ ದೌರ್ಜನ್ಯ ಕಾಯ್ದೆ ಯ ಪ್ರಕಾರ ದಾಖಲಾದ ದೂರಿಗೆ ಸಂಬಂಧಿಸಿದಂತೆ ಸೂಕ್ತ ಪ್ರಾಧಿಕಾರ ನೀಡುವ ದೂರುದಾರನ ಜಾತಿ ಪ್ರಮಾಣಪತ್ರ ವನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ದೂರುದಾರನ ಜಾತಿ ಪ್ರಮಾಣಪತ್ರವನ್ನು ತನಿಖಾಧಿಕಾರಿ ಲಗತ್ತಿಸಿಲ್ಲ ಎಂಬ ಕಾರಣಕ್ಕಾಗಿ ಹಲವು ಅತ್ಯಾಚಾರ ಪ್ರಕರಣದ ಆರೋಪಿಗಳು ಖುಲಾಸೆಗೊಂಡಿದ್ದಾರೆ.

• ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನಿರ್ಲಕ್ಷ:ಈ ಪ್ರಕರಣಗಳಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕ ಕಡ್ಡಾಯ. ಆದರೆ, ಈ ಪ್ರಾಸಿಕ್ಯೂಟರ್‌ಗಳು ದೂರುದಾರ ರಿಗೆ ಪ್ರತಿಕೂಲವಾಗಿ ವರ್ತಿಸುತ್ತಿರುವುದು ಮೊಕದ್ದಮೆಗಳು ಬಿದ್ದು ಹೋಗಲು ಕಾರಣವಾಗಿದೆ.ಇಂಥ ಪ್ರಾಸಿಕ್ಯೂಟರ್ ಗಳ ತಂತ್ರಗಾರಿಕೆಯಿಂದಾಗಿ ಮೊಕದ್ದಮೆಯೊಂದು ವಿಚಾರಣೆಯ ಹಂತ ತಲುಪುವಾಗ ವರ್ಷಗಳೇ ಉರುಳುತ್ತವೆ. ಸಂತ್ರಸ್ತ/ದೂರುದಾರ ಸಾಕ್ಷ ನುಡಿಯಲು ಕಟಕಟೆಗೆ ತಲುಪುವಾಗ ಅವರಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಯಾರೆಂಬುದೇ ಗೊತ್ತಿರುವುದಿಲ್ಲ.

ಕಾಯ್ದೆಯ ವಿಶೇಷ ವಿಧಿಗಳನ್ನು ಜಾರಿ ಗೊಳಿಸುವುದನ್ನು ತಡೆಯಲು ಹಾಗೂ ಆ ಮೂಲಕ ಮೊಕದ್ದಮೆಗಳನ್ನು ದುರ್ಬಲ ಗೊಳಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ನಡೆಸುವ ಉದ್ದೇಶಪೂರ್ವಕ ಪ್ರಯತ್ನಗಳನ್ನು ನ್ಯಾಯಾಲಯಗಳು ಹಲವು ಪ್ರಕರಣಗಳಲ್ಲಿ ಖಂಡಿಸಿವೆ.

ಈ ಕಾಯ್ದೆಯ ಬಗ್ಗೆ ಗುಜ ರಾತ್ ಸರಕಾರ ನಿರಾಸಕ್ತಿ ಹೊಂದಿ ರುವುದು ಹಾಗೂ ಅದರನ್ವಯ ದಾಖಲಾದ ದೌರ್ಜನ್ಯಗಳ ಆರೋಪಿಗಳನ್ನು ಶಿಕ್ಷಿಸಲು ಇಚ್ಛಾಶಕ್ತಿಯ ಕೊರತೆ ಹೊಂದಿರುವುದು ಕಾಯ್ದೆಯನ್ನು ಅರ್ಥಹೀನಗೊಳಿಸಿದೆ. ಅದೂ ಅಲ್ಲದೆ, ದಲಿತರು ಮತ್ತು ಆದಿವಾಸಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ರಚಿಸಲಾಗಿರುವ ರಾಜ್ಯ ಸರಕಾರದ ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಯಲ್ಲಿ ಹಲವಾರು ಮಹತ್ವದ ಹುದ್ದೆಗಳು ಖಾಲಿ ಯಾಗಿವೆ. ಹಾಗಾಗಿ, ಸಾಮಾಜಿಕ ನ್ಯಾಯ ಕ್ರಮಗಳನ್ನು ಜಾರಿಗೊಳಿಸುವುದು ಭಾರೀ ಸವಾಲಿನ ಸಂಗತಿಯಾಗಿದೆ. ಇಲಾಖೆಯಲ್ಲಿ 300 ಹುದ್ದೆಗಳು ಖಾಲಿಯಾಗಿವೆ.

ದಲಿತರ ಬಗ್ಗೆ ಅನಾದರ
ಬೃಹತ್ ಸ್ವರೂಪದ ಕಾನೂನು ವ್ಯವಸ್ಥೆ ಮತ್ತು ಕಾನೂನುಗಳ ಸರಮಾಲೆ ಇರುವ ಹೊರತಾಗಿಯೂ ನ್ಯಾಯ ಮರೀಚಿಕೆಯಾಗಿರುವುದು ದಲಿತರನ್ನು ಸಮಾಜ ಹೇಗೆ ಕಾಣುತ್ತಿದೆ ಹಾಗೂ ಅವರ ಹಕ್ಕುಗಳಿಗೆ ಯಾವ ರೀತಿಯ ಗೌರವ ನೀಡುತ್ತಿದೆ ಎಂಬುದನ್ನು ಸೂಚಿಸುತ್ತದೆ.ಇಲ್ಲಿ ದಲಿತರು ಭಾರೀ ಪ್ರಮಾಣದ ತಾರತಮ್ಯ ಎದುರಿಸುತ್ತಿರುವುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ. ಅವರಿಗೆ ಶ್ಮಶಾನ ಜಾಗವನ್ನು ನಿರಾಕರಿಸಲಾಗುತ್ತದೆ, ಹೊರವಲಯದಲ್ಲಿ ಪ್ರತ್ಯೇಕವಾಗಿ ವಾಸಿಸುವಂತೆ ಬಲವಂತಪಡಿಸಲಾಗುತ್ತದೆ ಹಾಗೂ ಮೀಸಲಾತಿ ಕಾರ್ಯಕ್ರಮಗಳ ಸೌಲಭ್ಯಗಳನ್ನು ನಿರಾಕರಿಸಲಾಗುತ್ತದೆ. ಅನುದಾನರಹಿತ ಶಾಲೆಗಳಿಗೆ ದಲಿತರನ್ನು ಶಿಕ್ಷಕರಾಗಿ ನೇಮಿಸುತ್ತಿಲ್ಲ ಎನ್ನುವುದು ಚರ್ಚಾರ್ಹ ವಿಷಯವಾಗಿದೆ. ಗುಜರಾತ್ ರಾಜ್ಯ ಸೆಕೆಂಡರಿ ಮತ್ತು ಹಯರ್ ಸೆಕೆಂಡರಿ ಶಿಕ್ಷಣ ಮಂಡಳಿಯ ವೆಬ್‌ಸೈಟ್ ಪ್ರಕಾರ, ರಾಜ್ಯದಲ್ಲಿ 3255 ಅನುದಾನರಹಿತ ಶಾಲೆಗಳಿವೆ. 

ಈ ಶಾಲೆಗಳ ನಡುವೆ ಹಲವಾರು ಸಾಮ್ಯತೆ ಗಳಿರಬಹುದು.ಆದರೆ, ಎದ್ದು ತೋರುವಂಥ ಒಂದು ಸಾಮ್ಯತೆಯೆಂದರೆ ಇವುಗಳು 1972ರ ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿ ಸುತ್ತಿವೆ.ಶಿಕ್ಷಣ ಕಾಯ್ದೆಯ ವಿಧಿಗಳನ್ನು ಪಾಲಿ ಸುವುದು ಕಡ್ಡಾಯವಾಗಿದ್ದರೂ ಯಾವುದೇ ಶಾಲೆಗಳು ಇದನ್ನು ಪಾಲಿ ಸುವ ಗೊಡವೆಗೆ ಹೋಗುತ್ತಿಲ್ಲ.ಈ ಕಾಯ್ದೆಯ ಪ್ರಕಾರ, ಅನು ದಾನಿತ ಹಾಗೂ ಅನುದಾನ ರಹಿತ ಎಲ್ಲ ಶಾಲೆಗಳು ನೇಮಕಾತಿಯ ವೇಳೆ ಮೀಸಲಾತಿ ನಿಯಮಗಳನ್ನು ಅನುಸರಿಸಬೇಕು. ಈ ಶಾಲೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ದಲಿತ ಶಿಕ್ಷಕರಿದ್ದಾರೆ.

ಶಿಕ್ಷಣ ಕಾಯ್ದೆಯ ವಿಧಿಗಳನ್ನು ಉಲ್ಲಂಘಿಸುವ ಶಾಲೆಗಳ ಮಾನ್ಯತೆ ರದ್ದುಪಡಿಸ ಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ, ಆಶ್ಚರ್ಯದ ಸಂಗತಿಯೆಂದರೆ, ಈ ಶಾಲೆಗಳಿಗೆ ಅನುದಾನ ನೀಡುತ್ತಿಲ್ಲ ವಾದುದರಿಂದ ಮೀಸಲಾತಿಯನ್ನು ಅನುಸರಿಸುವಂತೆ ಅವುಗಳನ್ನು ಬಲವಂತಪಡಿಸುವ ಹಾಗಿಲ್ಲ ಎಂದು ಸರಕಾರ ಹೇಳುತ್ತದೆ.

ದಲಿತ ಸೊಸೈಟಿಗಳು
ನಗರಗಳಲ್ಲಿ ದಲಿತರ ವಿರುದ್ಧ ‘ಒಂದು ರೀತಿಯ ವರ್ಣಭೇದ ನೀತಿ’ಯನ್ನು ಅನುಸರಿಸುತ್ತಿರುವುದು ಎಲ್ಲ ಮಟ್ಟಗಳಲ್ಲಿ ಗೋಚರಿಸುತ್ತಿದೆ. ವಿವಿಧ ವರ್ಗಗಳ ಜನರು ವಾಸಿಸುವ ಸ್ಥಳಗಳಲ್ಲಿ ದಲಿತನೊಬ್ಬ ಮನೆ ಮಾಡುವುದು ಬಹುತೇಕ ಅಸಾಧ್ಯವಾಗಿದೆ. ದಲಿತನೊಬ್ಬ ಮನೆಗಾಗಿ ಮೇಲ್ಜಾತಿಯ ಬಿಲ್ಡರ್‌ನನ್ನು ಸಂಪರ್ಕಿಸಿದರೆ ಒಂದೋ ಆತನಿಗೆ ನೇರವಾಗಿ ಇಲ್ಲ ಎಂದು ಹೇಳಲಾಗುತ್ತದೆ, ಇಲ್ಲವೇ ಪರೋಕ್ಷವಾಗಿ ನಿರಾಕರಿಸಲಾಗುತ್ತದೆ. ಮನೆ ಹುಡುಕುವ ದಲಿತನ ಹಣಕಾಸು ಹಿನ್ನೆಲೆ ಉತ್ತಮವಾಗಿದ್ದರೂ ಹೀಗೆ ಮಾಡಲಾಗುತ್ತದೆ. ಒಂದೇ ಒಂದು ದಲಿತ ಕುಟುಂಬಕ್ಕೆ ಆಸ್ತಿ ಮಾರಿದರೂ ಅದು ಬಿಲ್ಡರ್‌ಗಳು ಅಥವಾ ರಿಯಲ್ ಎಸ್ಟೇಟ್ ಏಜೆಂಟ್‌ಗಳ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಬಹುಶಃ ಇದು ಸಮಾಜದಲ್ಲಿ ಆಳವಾಗಿ ಬೇರೂರಿರುವ ವರ್ಣ/ಜಾತಿ ಮನೋಭಾವದ ಸೂಚನೆಯಾಗಿದೆ. 2002ರ ಗುಜರಾತ್ ಹತ್ಯಾಕಾಂಡ ಬಳಿಕ ಈ ಮನೋಭಾವ ಪುನರುಜ್ಜೀವನಗೊಂಡಿದೆ ಎಂಬಂತೆ ಭಾಸವಾಗುತ್ತಿದೆ. ಉದಾಹರಣೆಗೆ, ಅಹ್ಮದಾಬಾದ್‌ನಲ್ಲಿ ಈಚೆಗೆ ‘ದಲಿತರಿಗಾಗಿ ಮಾತ್ರ ರೆಸಿಡೆನ್ಶಿಯಲ್ ಸೊಸೈಟಿ’ಗಳು ತಲೆಯೆ ತ್ತುತ್ತಿವೆ. ಈ ಮಾದರಿಯ 300 ಸೊಸೈಟಿಗಳು ಸ್ಥಾಪನೆಯಾ ಗಿವೆ. ಇದು ಆಯ್ಕೆಯಲ್ಲ, ಅನಿವಾರ್ಯ ಎಂದು ‘ಇಂಡಿ ಯನ್ ಎಕ್ಸ್‌ಪ್ರೆಸ್’ (ಜೂನ್ 17, 2007)ನ ವರದಿ ಯೊಂದು ಹೇಳುತ್ತದೆ.

‘‘ಮೇಲ್ಜಾತಿಯ ಜನರು ವಾಸಿಸುವ ಸ್ಥಳಗಳಲ್ಲಿ ಮನೆ ಖರೀದಿಸಲು ದಲಿತನೊಬ್ಬನಿಗೆ ಸಾಮರ್ಥ್ಯವಿದ್ದರೂ, ಹೆಚ್ಚಿನ ಸಂದರ್ಭಗಳಲ್ಲಿ ಬಿಲ್ಡರ್‌ಗಳು ಮತ್ತು ಮಾರಾಟಗಾರರು ಅವರಿಗೆ ಮನೆಗಳನ್ನು ನಿರಾಕರಿಸುತ್ತಾರೆ’’ ಎಂದು ನಿವೃತ್ತ ಐಎಎಸ್ ಅಧಿಕಾರಿ ಪಿ.ಕೆ. ವಲೇರ ಹೇಳುತ್ತಾರೆ.ಅವರು ರಾಮ್‌ದೇವ್‌ನಗರದ ದಲಿತ ಸೊಸೈಟಿಯೊಂದರಲ್ಲಿ ವಾಸಿಸುತ್ತಿದ್ದಾರೆ.ಈ ಪ್ರವೃತ್ತಿ 1982ರಲ್ಲಿ ನಡೆದ ಮೀಸಲಾತಿ ವಿರೋಧಿ ಚಳವಳಿಯ ಬಳಿಕ ಆರಂಭವಾಯಿತು ಎಂದು ಕೆಲವು ಸಮಾಜ ವಿಜ್ಞಾನಿಗಳು ಹೇಳುತ್ತಾರೆ.ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಜಾತಿ ಮತ್ತು ವರ್ಗ ತಾರತಮ್ಯ ಹೆಚ್ಚಿನ ತೀವ್ರತೆ ಪಡೆದುಕೊಂಡಿದೆ ಎಂಬುದನ್ನು ಅವರು ಒಪ್ಪುತ್ತಾರೆ. ಈ ಪ್ರವೃತ್ತಿಯನ್ನು ಅಹ್ಮದಾಬಾದ್‌ನ ಭವ್ಯ ಪ್ರದೇಶಗಳಾದ ಪಶ್ಚಿಮ ಅಹ್ಮದಾಬಾದ್‌ನ ಸೆಟಲೈಟ್, ವಸ್ತ್ರಪುರ, ಬೊದಕ್‌ದೆವ್, ಅಂಬವಾಡಿ ಮುಂತಾದ ಪ್ರದೇಶಗಳಲ್ಲೂ ಕಾಣಬಹುದು.

‘‘ನಗರದಲ್ಲಿ 300ಕ್ಕೂ ಅಧಿಕ ದಲಿತ ಸೊಸೈಟಿಗಳಿವೆ. ಚಾಂದ್‌ಖೇಡವೊಂದರಲ್ಲೆ 200 ಸೊಸೈಟಿಗಳಿವೆ. ಅವುಗಳ ಪೈಕಿ ಹೆಚ್ಚಿನವು 2002ರ ಹತ್ಯಾಕಾಂಡದ ಬಳಿಕ ಸ್ಥಾಪನೆ ಯಾದವು. ಗಲಭೆಯ ಸಂದರ್ಭದಲ್ಲಿ ಜನರು ಗೋಮತಿಪುರ, ಬಾಪುನಗರ್ ಮತ್ತು ದಾನಿಲಿಮ್ಡ ಪ್ರದೇಶಗಳಿಂದ ಹೊರ ಹೋಗಿದ್ದು ಈಗ ಸಾಮೂಹಿಕವಾಗಿ ಸೊಸೈಟಿಗಳಲ್ಲಿ ವಾಸಿಸುತ್ತಿದ್ದಾರೆ.ಇಲ್ಲಿ ದಲಿತ ಸೊಸೈಟಿಗಳನ್ನು ಮಾತ್ರ ನಿರ್ಮಿಸುವ ಗುತ್ತಿಗೆದಾರನ್ನೂ ಕಾಣಬಹುದಾಗಿದೆ’’ ಎಂದು ಸಾಮಾಜಿಕ ರಾಜಕೀಯ ಕಾರ್ಯಕರ್ತ ಅಚ್ಯುತ್ ಯಾಗ್ನಿಕ್ ಹೇಳುತ್ತಾರೆ.

‘ಹಿಂದೂ ರಾಷ್ಟ್ರ’ದಲ್ಲಿ ಜೀವಂತವಿರುವ ದಲಿತರಿಗೆ ಘನತೆಯಿಂದ ಬದುಕುವ ಸ್ಥಳವೇ ಇಲ್ಲದಿರುವಾಗ, ಸತ್ತವರ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ.2001ರಲ್ಲಿ ನರೇಶ್ ಸೋಳಂಕಿಯ ಅಕ್ಕನ ಎರಡೂವರೆ ವರ್ಷದ ಮಗು ಮೃತಪಟ್ಟಿತು. ಬಣಸ್‌ಕಾಂತ ಜಿಲ್ಲೆಯ ಪಾಲನ್‌ಪುರ ಬ್ಲಾಕ್‌ನ ಹುಡ ಗ್ರಾಮದಲ್ಲಿ ವಾಸಿಸುವ ಕುಟುಂಬವು ಸಮುದಾಯದ ಸ್ಮಶಾನದಲ್ಲಿ ಮಗುವನ್ನು ದಫನ ಮಾಡಿತು. ಆದರೆ, ಅದೇ ಗ್ರಾಮದ ಪಟೇಲ್ ಸಮುದಾ ಯದ ವ್ಯಕ್ತಿಯೊಬ್ಬ ಟ್ರಾಕ್ಟರ್ ಮೂಲಕ ಮಗುವಿನ ಮೃತ ದೇಹವನ್ನು ಅಗೆದು ತೆಗೆದನು ಎಂಬ ಸುದ್ದಿ ದುಃಖತಪ್ತ ಕುಟುಂಬ ಮನೆ ತಲುಪುವ ಮೊದಲೆ ತಿಳಿದುಬಂತು. ಅದಕ್ಕೆ ಕಾರಣವೆಂದರೆ, ಆ ವ್ಯಕ್ತಿ ಶ್ಮಶಾನಕ್ಕೆ ಸಮೀಪದ ಭೂಮಿ ಯನ್ನು ಅತಿಕ್ರಮಿಸಿದ್ದ. ಶ್ಮಶಾನದಲ್ಲಿ ಮಗುವಿನ ಹೆಣ ದಫನ ಮಾಡಿದುದಕ್ಕಾಗಿ ಆತ ಆಕ್ರೋಶಿತನಾಗಿದ್ದ.

ಈ ಘಟನೆ ನಡೆದು ಸುದೀರ್ಘ 11ವರ್ಷಗಳೇ ಕಳೆದರೂ ಶ್ಮಶಾನ ಸ್ಥಳಕ್ಕಾಗಿ ಹೂಡ ಗ್ರಾಮದ ದಲಿತರು ಇನ್ನೂ ಕಾಯುತ್ತಿದ್ದಾರೆ.ಆದರೆ, ಅವರಿಗೆ ಜಾಗ ನೀಡಲು ಜಿಲ್ಲಾಧಿಕಾರಿ ಮತ್ತು ಗ್ರಾಮ ಪಂಚಾಯತ್ ಇನ್ನೂ ಮನಸ್ಸು ಮಾಡಿಲ್ಲ. ಕಳೆದ ವರ್ಷ ವೃದ್ಧನೊಬ್ಬ ಸತ್ತಾಗ ದೇಹವನ್ನು ಪಕ್ಕದ ಹಳ್ಳಿಗೆ ಹೊತ್ತುಕೊಂಡು ಹೋಗಿ ದಫನ ಮಾಡಬೇಕಾಯಿತು. ಅದೃಷ್ಟವಶಾತ್ ಅಲ್ಲಿ ಪ್ರತ್ಯೇಕ ಶ್ಮಶಾನವಿತ್ತು.

ಗುಜರಾತ್ ರಾಜ್ಯ ಗ್ರಾಮಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಮಂಚ ನಡೆಸಿದ ಸಮೀಕ್ಷೆಯ ಪ್ರಕಾರ, ಗುಜರಾತ್‌ನ 657 ಗ್ರಾಮಗಳ ಪೈಕಿ 397 ಗ್ರಾಮಗಳಲ್ಲಿ ದಲಿತರಿಗೆ ಅಧಿಕೃತ ಶ್ಮಶಾನಗಳಿಲ್ಲ. ಅದೂ ಅಲ್ಲದೆ, ಶ್ಮಶಾನ ಕ್ಕಾಗಿ ಭೂಮಿ ಲಭಿಸಿದ 260 ಗ್ರಾಮಗಳ ಪೈಕಿ 94 ಗ್ರಾಮ ಗಳಲ್ಲಿ ಶ್ಮಶಾನ ಭೂಮಿಯನ್ನು ಮೇಲ್ಜಾತಿಯ ಬಲಿಷ್ಠ ಜಾತಿಗಳ ಜನರು ಅತಿಕ್ರಮಿಸಿಕೊಂಡಿದ್ದಾರೆ. 26ಗ್ರಾಮಗಳಲ್ಲಿನ ಶ್ಮಶಾನ ತಗ್ಗು ಸ್ಥಳಗಳಲ್ಲಿದೆ ಹಾಗಾಗಿ,ಮಳೆಗಾಲದಲ್ಲಿ ಜಲಾವೃತವಾಗಿರುತ್ತದೆ.

ಮುಸ್ಲಿಮರದೂ ಅದೇ ಸಮಸ್ಯೆ
ಮೃತರನ್ನು ದಫನಗೊಳಿಸುವ ವಿಷಯ ಬಂದಾಗ ಗುಜರಾತ್‌ನಲ್ಲಿ ದಲಿತರು ಮತ್ತು ಮುಸ್ಲಿಮರು ಸಮಾನ ದುಃಖಿಗಳು. ಇಲ್ಲಿ ದಲಿತ ರಂತೆ ಮುಸ್ಲಿಮರ ದಫನ ಭೂಮಿಗಳನ್ನೂ ಪ್ರಭಾವ ಶಾಲಿ ಜಾತಿಗಳ ಜನರು ಆಕ್ರಮಿಸಿಕೊಳ್ಳುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಗುಜರಾತ್ ಹೈಕೋರ್ಟ್, ಪಟಾನ್‌ನಲ್ಲಿರುವ ಮುಸ್ಲಿಮರ ದಫನ ಭೂಮಿ ಯನ್ನು ಅತಿಕ್ರಮಣದಾರ ರಿಂದ ರಕ್ಷಿಸಲು ಪೊಲೀಸರನ್ನು ನಿಯೋಜಿಸುವಂತೆ ಆದೇಶ ನೀಡಿದ್ದನ್ನು ಸ್ಮರಿಸಬಹುದಾಗಿದೆ.

ನೈಜ ಪರಿಸ್ಥಿತಿ
ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಬಹಿರಂಗ ವಿಚಾರಣೆಯ ಕೊನೆಯ ವೇಳೆಗೆ ‘ಭವ್ಯ ಗುಜರಾತ್ (ವೈಬ್ರಾಂಟ್ ಗುಜರಾತ್)’ನ ಅಸಲಿ ಮುಖ ಹೊರಬಿತ್ತು. ರಾಜ್ಯ ಸರಕಾರದ ದೊಡ್ಡ ದೊಡ್ಡ ಹೇಳಿಕೆಗಳ ಹೊರತಾಗಿಯೂ ಇಲ್ಲಿ ಹೆಚ್ಚಿನ ಸಂಖ್ಯೆಯ ದಲಿತರು ಎರಡನೆ ದರ್ಜೆ ಪ್ರಜೆಗಳಾಗಿ ಬದುಕುತ್ತಿದ್ದಾರೆ.

ಕೃಪೆ : ವಾರ್ತಾಭಾರತಿ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.