Monday, January 30, 2012

ಪ್ರಖರ ವಿದ್ವಾಂಸ ಎಲ್.ಬಸವರಾಜು ನಿಧನ

ಮೈಸೂರು: ಹಿರಿಯ ಸಾಹಿತಿ ಲಿಂಗಪ್ಪ ಬಸವರಾಜು (93) ಭಾನುವಾರ ರಾತ್ರಿ ಇಲ್ಲಿ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ಕೋಲಾರ ಜಿಲ್ಲೆ ಇಡಗೂರು ಗ್ರಾಮದವರಾದ ಅವರು 1919ರಲ್ಲಿ ಜನಿಸಿದ್ದರು. 40ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರು ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

1977ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, 1994ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2000ರಲ್ಲಿ ಭಾಷಾಂತರಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ, 2005ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾ ಸಮ್ಮಾನ್, ಬಸವ ಪುರಸ್ಕಾರ, ನಾಡೋಜ ಪ್ರಶಸ್ತಿ, ಪಂಪ ಪ್ರಸಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳಿಗೆ ಅವರು ಪಾತ್ರರಾಗಿದ್ದರು.


ಮೈಸೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 32 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಎಲ್.ಬಸವರಾಜು ಅವರು, ವಚನಗಳ ಸಂಶೋಧನೆ, ಗ್ರಂಥಸಂಪಾದನೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.


ಇಡಗೂರು, ಸಿದ್ದಗಂಗೆ ಮತ್ತು ಬೆಂಗಳೂರುಗಳಲ್ಲಿ ಹೈಸ್ಕೂಲುವರೆಗಿನ ಶಿಕ್ಷಣ ಪಡೆದ ನಂತರ ವಿಶೇಷ ವ್ಯಾಸಂಗಕ್ಕಾಗಿ ಮೈಸೂರಿಗೆ ತೆರಳಿದ ಎಲ್.ಬಸವರಾಜು, 1946 ರಲ್ಲಿ ಬಿಎ ಆನರ್ಸ್ ಮತ್ತು 1951 ರಲ್ಲಿ ಎಂ.ಎ. ಪದವಿ ಪಡೆದರು. ಸ್ವಲ್ಪ ಕಾಲ, ದಾವಣಗೆರೆ ಮತ್ತು ಮೈಸೂರಿನ ಯುವರಾಜ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನಂತರ, ಬಸವರಾಜು ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯನ್ನು ಸೇರಿದರು.(1967) 1979 ರಲ್ಲಿ ಸೇವೆಯಿಂದ ನಿವತ್ತರಾದರು.


ಎಲ್.ಬಸವರಾಜು ಅವರು ಗ್ರಂಥಸಂಪಾದನೆಯ ಕ್ಷೇತ್ರದಲ್ಲಿ, ಅನೇಕ ಹೊಸ ಆವಿಷ್ಕಾರಗಳನ್ನು ಮಾಡಿದ್ದಾರೆ; ವಿಶಿಷ್ಟವಾದ ದೃಷ್ಟಿಕೋನಗಳನ್ನು ಅಳವಡಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದ ಅಭಿಜಾತ ಕೃತಿಗಳು ಮತ್ತು ಜ್ಞಾನದ ಆಕರಗಳನ್ನು, ಪಂಡಿತರೇನೂ ಅಲ್ಲದ ಜನಸಾಮಾನ್ಯರ ಅಳವಿಗೆ ನಿಲುಕುವಂತೆ ನೀಡಬೇಕೆನ್ನುವುದೇ ಅವರ ಗುರಿ.


ಆದ್ದರಿಂದಲೇ ಅವರು ಅನೇಕ ಮಹಾಕಾವ್ಯಗಳ ಸರಳವಾದ ಗದ್ಯರೂಪಗಳನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಪ್ರಾಚೀನ ಕಾವ್ಯಗಳಲ್ಲಿ ಬರುವ ಪದ್ಯಗಳನ್ನು, ಬಿಡಿ ಪದಗಳಾಗಿ ಒಡೆದು, ಗದ್ಯಸಮೀಪವಾದ ವಾಕ್ಯರಚನೆಯಲ್ಲಿ ಮರುಜೋಡಣೆ ಮಾಡುವ ಪ್ರಯತ್ನವನ್ನೂ ಅವರು ಮಾಡಿದ್ದಾರೆ. ಅಗತ್ಯವಿರುವ ಕಡೆಗೆ ಸೂಕ್ತವಾದ ಲೇಖನಚಿಹ್ನೆಗಳನ್ನು ಕೊಟ್ಟಿದ್ದಾರೆ.
ಈ ರೀತಿಯ ಪ್ರಯೋಗಗಳಲ್ಲಿ ತೊಡಗಿಕೊಳ್ಳುವುದಕ್ಕಿಂತ ಮುಂಚಿತವಾಗಿಯೂ ಅವರು ಪರಿಶ್ರಮ ವಹಿಸಿ ಗ್ರಂಥಸಂಪಾದನೆ ಮಾಡಿದ್ದರು. ಓಲೆಗರಿಗಳು ಮತ್ತು ಕಾಗದದ ಹಸ್ತಪ್ರತಿಗಳ ನೆರವಿನಿಂದ ಮೂಲಪಠ್ಯವನ್ನು ಗುರುತಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಬಸವರಾಜು ಅವರು ಸಂಪಾದನೆ ಮಾಡಹೊರಡುವ ಕತಿಗಳ ಆಯ್ಕೆಯಲ್ಲಿ ಜಾತ್ಯತೀತವಾದ ಧೋರಣೆಯನ್ನು ಹೊಂದಿದ್ದಾರೆ.

`ಆದಿಪುರಾಣ`ದಂತಹ ಜೈನ ಕೃತಿ, `ಬುದ್ಧಚರಿತ`ದಂತಹ ಬೌದ್ಧಕೃತಿ, `ತೊರವೆಯ ರಾಮಾಯಣ`, `ಶಬ್ದಮಣಿದರ್ಪಣ` ಯಾವುದೂ ಅವರ ಅನಾದರಕ್ಕೆ ಗುರಿಯಾಗಿಲ್ಲ. ತಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ ಮಂಡಿಸಲು ಅವರು ಯಾವಾಗಲೂ ಹಿಂಜರಿದಿಲ್ಲ.


`ಬಸವೇಶ್ವರರ ವಚನಗಳು` `ಅಲ್ಲಮನ ವಚನಚಂದ್ರಿಕೆ`  `ಶಿವದಾಸ ಗೀತಾಂಜಲಿ`,     `ಬಸವ ವಚನಾಮೃತ`,  `ಅಕ್ಕನ ವಚನಗಳು`, `ಅಲ್ಲಮನ ವಚನಗಳು` ಇವು ಬಸವರಾಜು ಅವರು ಸಂಪಾದಿಸಿರುವ ಕೆಲವು ಪ್ರಮುಖ ಗ್ರಂಥಗಳು.
ಕೃಪೆ : ಪ್ರಜಾವಾಣಿ 

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.