Friday, January 13, 2012

ಮಹಾರಾಷ್ಟ್ರ: ಕೇವಲ ರೂ. 5,000ಕ್ಕಾಗಿ ದಲಿತನ ಜೀವಂತ ದಹಿಸಿ ಹತ್ಯೆ !

ಮಹಾರಾಷ್ಟ್ರದ ಚಿಂಚೋಲಿ ಸಿಂದ್‌ಪಾನ  ಎಂಬಲ್ಲಿ ದಲಿತ ಕಬ್ಬು ಬೆಳೆ ಕಾರ್ಮಿಕನೊಬ್ಬನನ್ನು ಜೀವಂತ ದಹಿಸಿ ಹತ್ಯೆಗೈದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಇಂದು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

 32ರ ಹರೆಯದ ದಲಿತ ಕಬ್ಬು ಬೆಳೆ ಕಾರ್ಮಿಕ ಸಹದೇವ್ ತಯಾಡ್‌ನನ್ನು ಆರೋಪಿ ವಶಿಷ್ಟ್ ಧಕೆ ಎಂಬಾತ ಜೀವಂತ ದಹಿಸಿ ಹತ್ಯೆಗೈದಿರುವ ಬಗ್ಗೆ ಆರೋಪಿಸಲಾಗಿದೆ. ಬೀಡ್‌ನ ಜೋವೊರೈ ತಾಲೂಕಿನ ಚಿಂಚೋಲಿ ಸಿಂದ್‌ಪಾನ ಗ್ರಾಮದಲ್ಲಿ ರವಿವಾರ ಈ ಘಟನೆ ನಡೆದಿದ್ದು, ಆರೋಪಿ ಧಕೆಯು ತಯಾಡ್‌ನನ್ನು ಕೇವಲ ರೂ. 5,000 ನೀಡಲಿಲ್ಲ ಎಂಬ ಕಾರಣ ಕ್ಕಾಗಿ ಜೀವಂತ ದಹಿಸಿದನೆಂದು ಹೇಳಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಕಲಂ 302 ಮತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
  
ತಯಾಡ್ ತನ್ನ ಪತ್ನಿ ಮತ್ತು ನಾಲ್ಕು ಮಂದಿ ಮಕ್ಕಳು, ಹೆತ್ತವರು, ವಿಧವೆ ಸಹೋದರಿ ಮತ್ತು ಆಕೆಯ ಮೂರು ಮಂದಿ ಮಕ್ಕಳೊಂದಿಗೆ ವಾಸಿಸುತ್ತಿದ್ದನು. ಆತನ ನಿಧನದಿಂದಾಗಿ ಕುಟುಂಬದಲ್ಲಿ ದುಡಿಯುತ್ತಿದ್ದ ಕೈಗಳು ಕಡಿಮೆಯಾಗಿದ್ದು, ಇದೀಗ ಆತನ ಪತ್ನಿ ಮತ್ತು ಸಹೋದರಿ ಮಾತ್ರ ದುಡಿಯುವ ಸ್ಥಿತಿಯಲ್ಲಿದ್ದಾರೆ. ಮರಾಠ ಭೂ ಮಾಲಕರು ಪ್ರಬಲರಾಗಿರುವ ಪ್ರದೇಶದಲ್ಲಿ ತಯಾಡ್‌ನಂತಹ ಬಡವರು ಕಾರ್ಮಿಕರಾಗಿ ದುಡಿಯುತ್ತಾರೆ. ಧಕೆ ಮರಾಠ ಸಮುದಾಯದವನಾಗಿದ್ದು, ತನಗೆ ನೀಡಲು ಬಾಕಿಯುಳಿದಿದ್ದ ರೂ. 5,000ಕ್ಕಾಗಿ ತಯಾಡ್‌ನನ್ನು ಜೀವಂತವಾಗಿ ದಹಿಸಿ ಹತ್ಯೆ ನಡೆಸಿದ್ದಾನೆ ಎಂದು ಆಪಾದಿಸಲಾಗಿದೆ.
ತನ್ನ ಮಗನನ್ನು ಮೊದಲು ಥಳಿಸಲಾಯಿತು. ಬಳಿಕ ಆತನನ್ನು ಜೀವಂತ ದಹಿಸಿ ಹತ್ಯೆ ಮಾಡಲಾಯಿತು ಎಂದುತಯಾಡ್‌ನ ತಂದೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ''ಪ್ರತಿಯೊಬ್ಬರೂ ತಮಾಶೆ ನೋಡಿವಂತೆ ನೋಡಿದರು. ಧಕೆ ನನ್ನ ಮಗನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದನು. ನಾನು ಓಡಿ ಹೋಗಿ ಹೊದಿಕೆಯೊಂದನ್ನು ಆತನ ಮೇಲೆ ಹಾಕಿ ಬೆಂಕಿಯನ್ನು ನಂದಿಸಲು ಯತ್ನಿಸಿದೆನು'' ಎಂದು ಮೃತನ ತಂದೆ ಮ್ಹಾಸ ತಯಾಡ್ ತಿಳಿಸಿದ್ದಾರೆ.

                                                                                     ಕೃಪೆ : ವಾರ್ತಾಭಾರತಿ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.