Saturday, September 08, 2012

ಸಮಾಜ ಒಡೆಯುವ ಹುನ್ನಾರ

 * ಡಾ. ಸಿದ್ರಾಮ ಕಾರಣಿಕ
ಏಜಾಜ್ ಆಶ್ರಫ್ ಅವರು ತುಂಬ ಓದಿಕೊಂಡಿರಬಹುದು. ಹಲವಾರು ವಿಷಯಗಳನ್ನು ತಿಳಿದುಕೊಂಡಿರಬಹುದು. ಆದರೆ ಭಾರತೀಯ ಮನೋಸ್ಥಿತಿಗಳ ನಿಜವಾದ ಅರಿವು ಇಟ್ಟುಕೊಳ್ಳದೇ ಲೇಖನಿಯನ್ನು ಆಡಿಸುವ, ಹಾದಿ ತಪ್ಪಿಸುವ ವಿಚಾರವನ್ನು ಇಟ್ಟುಕೊಂಡಿರುವುದಂತೂ ಸ್ಪಷ್ಟ ! ವಿಜಯ ಕರ್ನಾಟಕ ದಿನಪತ್ರಿಕೆಯ ಶುಕ್ರವಾರ ದಿನಾಂಕ : 31-08-2012 ರಂದು ಪತ್ರಕರ್ತ ಏಜಾಜ್ ಆಶ್ರಫ್ ಅವರು ವಿ.ಪಿ.ಸಿಂಗ್ ಮತ್ತು ಮಹಾನ್ ಭಾರತೀಯರು' ಎಂಬ ಶೀರ್ಷಿಕೆಯಲ್ಲಿ ಬರೆದ ಲೇಖನವು ತುಂಬ ಮಾರ್ಮಿಕವಾಗಿ ಮೂಡಿ ಬಂದಿದೆ. ಆದರೆ ವಿಷಯವನ್ನು ವಿಶ್ಲೇಷಣೆ ಮಾಡುವಾಗ ಬರಹಗಾರ ಯಾವುದನ್ನೋ ಮನಸ್ಸಿನಲ್ಲಿ ಗುಪ್ತವಾಗಿಟ್ಟುಕೊಂಡು, ತಲೆ ಕೆಡಿಸಿಕೊಂಡು ಲಂಗು-ಲಗಾಮಿಲ್ಲದೆ ತಮ್ಮ ವಿಚಾರ ಲಹರಿಯನ್ನು ಹರಿಯ ಬಿಟ್ಟಿದ್ದಾರೆ.

ಸಿಎನ್‌ಎನ್-ಐಬಿಎನ್, ಹಿಸ್ಟರಿ ಟಿವಿ 18, ಔಟ್‌ಲುಕ್ ಕೈಗೊಂಡ ಮಹಾತ್ಮಾ ಗಾಂಧಿಯ ನಂತರ ಅತಿಮಾನ್ಯ ಭಾರತೀಯ' ಎಂಬ ಹುಡುಕಾಟದಲ್ಲಿ ಮೊಟ್ಟ ಮೊದಲು ಹೆಸರು ಇರುವುದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರದು. ಹಾಗೇ ನೋಡಿದರೆ, ಗಾಂಧಿಗಿಂತ ಒಂದು ಕೈ ಮೇಲಾಗಿಯೇ ಸಾಧನೆ ಮಾಡಿದವರು ಅಂಬೇಡ್ಕರ್. ಸ್ವತಂತ್ರ ಭಾರತದ ಅತಿಮಾನ್ಯ ಭಾರತೀಯ' ಎಂದು ಹೆಸರು ನೀಡಿ ಹುಡುಕಾಟ ನಡೆಸಿದ್ದರೂ ಅಂಬೇಡ್ಕರ್ ಅವರೇ ಮೊದಲಿಗರಾಗಿ ಇರುತ್ತಿದ್ದರು. ಆದರೆ ತಿಳಿಯಲಾರದವರು ಮಾಡಿದ ಅಥವಾ ತಿಳಿದೂ ತಿಳಿದು ಮಾಡಿದ ಮಹಾನ್ ಶೋಧ ಇದು ಎಂದು ಭಾವಿಸಿಕೊಂಡಿರುವ ಏಜಾಜ್ ಆಶ್ರಫ್ ಅವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನೇ ಗುರಿಯಾಗಿಸಿಕೊಂಡು ಈ ಲೇಖನ ಬರೆದಿರುವಂತೆ ತೋರುತ್ತದೆ. ಇಲ್ಲಿ ಅವರೇ ಹೇಳುವ ಹಾಗೆ ಸಾಧಾರಣವಾಗಿ ರಾಜಕೀಯ ಪೂರ್ವಾಗ್ರಹಗಳು ಕಾಣಿಸುತ್ತವೆ !'

ಇಡೀ ಲೇಖನದಲ್ಲಿ ವಿ.ಪಿ. ಸಿಂಗ್ ಅವರನ್ನು ನೆನಪಿಸಿಕೊಳ್ಳುತ್ತಲೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಪ್ರತ್ಯೇಕಿಸುವ ಕೆಲಸವನ್ನು ಲೇಖನದಲ್ಲಿ ಮಾಡಲಾಗಿದೆ. 'ನೂರು ಗಣ್ಯ ವ್ಯಕ್ತಿಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮೊದಲಿಗರಾದರು. ಗಣ್ಯ ವ್ಯಕ್ತಿಗಳನ್ನು ಜಾತಿ ಮಸೂರದಲ್ಲಿ ನೋಡದಿದ್ದರೂ ಸಹ ಅಂಬೇಡ್ಕರ್ ಜನಪ್ರಿಯ ಅನುಮೋದನೆಯನ್ನು ಶ್ಲಾಘಿಸಿ ಸಮರ್ಥಿಸಿಕೊಳ್ಳಬಹುದು' ಎಂದು ಆರಂಭದಲ್ಲಿ ಹೇಳುವ ಲೇಖಕರು, ಆನಂತರದಲ್ಲಿ ಸಮಕಾಲೀನ ರಾಷ್ಟ್ರೀಯ ಸಂದರ್ಭದಲ್ಲಿ ಯಾವುದೇ ಪ್ರಮಾಣದಲ್ಲಾಗಲೀ, ಅಂಬೇಡ್ಕರ್‌ರಿಗೆ ಭಾರತ ರತ್ನ' ಪ್ರಶಸ್ತಿಯನ್ನು ಮರಣೋತ್ತರವಾಗಿ ಕೊಡುವ ಮೂಲಕ ಅವರನ್ನು ದಲಿತರ ದೇವತೆಯನ್ನಾಗಿ ಮಾಡಿದ ವಿಪಿ ಸಿಂಗ್ ಅವರ ಹೆಸರನ್ನು ಸಿಎನ್‌ಎನ್ ಐಬಿಎನ್ ಸಿದ್ಧಪಡಿಸಿದ ನೂರು ಜನರ ಪಟ್ಟಿಯಲ್ಲಿ ಸೇರಿಸದೇ ಇರುವುದು ದೊಡ್ಡ ವಿಪರ್ಯಾಸ' ಎನ್ನುತ್ತಾರೆ. ಅಷ್ಟೇ ಅಲ್ಲ ಇಂದು ನಾವು ವಿಪಿ ಸಿಂಗ್ ಅವರನ್ನು ರಾಜಕೀಯವಾಗಿ ಒಪ್ಪಿಕೊಳ್ಳುವುದಕ್ಕಿಂತ ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳುವುದು ಅನುಕೂಲಕರವಿರಬಹುದೇ ?' ಎಂಬುದಾಗಿ ಪ್ರಶ್ನೆ ಎಸೆದಿದ್ದಾರೆ !

ಏಜಾಜ್ ಆಶ್ರಫ್ ಅವರ ಒಟ್ಟು ಲೇಖನದಲ್ಲಿ ವಿಪಿ ಸಿಂಗ್ ಅವರನ್ನು ಮರೆತ ಬಗ್ಗೆ ಖೇದವಿದೆ. ಸಿಂಗ್ ಅವರ ಕಾರ್ಯ ವೈಖರಿಯನ್ನು ಸಾಧ್ಯಂತವಾಗಿ ಅವರು ಬಿಡಿಸಿ ಇಟ್ಟಿದ್ದಾರೆ. ಯಾವುದೇ ಸಂದರ್ಭದಲ್ಲಿ ವಿಪಿ ಸಿಂಗ್ ಅವರನ್ನು ನಾವು ವಿರೋಧಿಸಲು ಕಾರಣಗಳೇ ಇಲ್ಲ. ರಾಜಕೀಯದಲ್ಲಿ ಇಡೀ ದೇಶ ಮೆಚ್ಚುವ ಕೆಲಸ ಮಾಡಿದವರು ಸಿಂಗ್. ಅವರ ಬಗ್ಗೆ ಗೌರವವಿದೆ. ಆದರೆ ಏಜಾಜ್ ಅವರಂಥವರು ಪರೋಕ್ಷವಾಗಿ ಆ ಭೇದಗಳನ್ನು ಹುಟ್ಟು ಹಾಕುವಂತಿದೆ. ಅವರು ಇನ್ನುಳಿದ ಯಾರ ಹೆಸರನ್ನಾದರೂ ತೆಗೆದುಕೊಂಡು ಚರ್ಚೆ ಮಾಡಬಹುದಿತ್ತು. ಸಮಾಜವನ್ನು ಸೂಕ್ಷ್ಮವಾಗಿ ಒಡೆಯುವ ಹುನ್ನಾರ ಏಜಾಜ್ ಅವರ ಮನದಲ್ಲಿ ಮನೆ ಮಾಡಿರುವುದು ಮೇಲುನೋಟಕ್ಕೆ ಕಂಡುಬರುವ ಸತ್ಯ.

ವಿಪಿ ಸಿಂಗ್ ಅವರ ಆಡಳಿತಾವಧಿಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ' ದೊರೆತದ್ದು, ಕೆ.ಆರ್. ನಾರಾಯಣನ್ ಅವರು ರಾಷ್ಟ್ರಪತಿಯಾದುದ್ದನ್ನು ತಳಕು ಹಾಕಿ ನೋಡಿರುವ ಕ್ರಮವಂತೂ ಏಜಾಜ್ ಅವರ ಕೆಳಮಟ್ಟದ ವಿಚಾರ ಸರಣಿಯೇ ಆಗಿದೆ ಎಂಬುದನ್ನು ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ.

ಗುಪ್ತ ಗುಲಾಮಗಿರಿಯಲ್ಲಿ ಇನ್ನೂ ಇರಬೇಕೆಂಬ ಮಾತು ಅವರ ಇಡೀ ಲೇಖನ ಪ್ರತಿನಿಸುತ್ತದೆ. ಪರಿಪೂರ್ಣವಾಗಿ ಅಂಬೇಡ್ಕರ್ ಅವರನ್ನು ಅರಿತುಕೊಳ್ಳದೇ ಮನಸ್ಸಿಗೆ ಬಂದುದನ್ನು ಗೀಚುವ ಮೂಲಕ ಒಂದೀಡಿ ಸಮಾಜದ ದಿಕ್ಕೂ ತಪ್ಪಿಸುವ ಏಜಾಜ್ ಅವರ ಪರಿಕ್ರಮ ನಿಜಕ್ಕೂ ವಿಪರ್ಯಾಸ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.