Wednesday, September 05, 2012

ಸಿನೆಮಾ ಮುಗಿದಮೇಲೆ ಚೇತನಾ ಬರೆದದ್ದು

                                      ಚೇತನಾ ತೀರ್ಥಹಳ್ಳಿ 

ಅಗೋ ಅಲ್ಲಿ.. !
ಕೆಂಪುಕೋಟೆಯ ಮೇಲೆ ಹೀಗೊಬ್ಬ ಪಾಪ!
ಹೆಜ್ಜೆ ಮುಂದೆ ಹೆಜ್ಜೆ ಇಟ್ಟು ನಡೆಯುತ್ತಿದ್ದ. ‘ಘೋಷ’ದ ತಾಳಕ್ಕೆ ತಪ್ಪಬಾರದ ಕಾಳಜಿ ಜೊತೆಗೆ! ಅವನ ಕೈಲೊಂದು ಕಮಲದ ಹೂವು.
‘ಗರ್ದೀ’, ‘ದರ್ದೀ’... ‘ಗರ್ದೀ’, ‘ದರ್ದೀ’... ಎಂದೆನ್ನುತ್ತ ಒಂದೊಂದೆ ಪಕಳೆಗಳನ್ನು ಕೆಳಗೆಸೆಯುತ್ತಿದ್ದ. ಕೋಟೆ ಮೇಲಿನ ಕಾಂಪೌಂಡು ಮುಗಿಯುವ ಹೊತ್ತಿಗೆ ಉದುರಿಸುವ ಪಕಳೆ ‘ಗರ್ದೀ’ಯಾಗಿದ್ದರೆ ತನಗೆ ಖುರ್ಚಿ ಗ್ಯಾರೆಂಟಿ!
‘ಇಲ್ಲವಾದರೆ?’- ಯೋಚಿಸುವ ಉಸಾಬರಿಗೇ ಹೋಗಿರಲಿಲ್ಲ...

ಹಾಗೆ ಪಕಳೆ ಬೀಳಿಸುತ್ತ, ನಡೆಯುತ್ತ ನಡೆಯುತ್ತ ಕಾಂಪೌಂಡು ಇನ್ನೂ ಅಷ್ಟುದ್ದ ಇದೆ ಅನ್ನುವಾಗ...
ಕೈಯಲ್ಲಿನ ಕಮಲ ದಳವೇ ಖಾಲಿ!!
ಆತ ತ್ರಿಶಂಕುವಿನ ಹಾಗೆ ನಿಂತುಬಿಟ್ಟ...

******

ಇನ್ನೊಂಚೂರು ಈಚೆ... ಸ್ವಲ್ಪ ಆಚೆ...
ಸರ್ಕಸ್ ಕಂಪೆನಿಯೊಂದು ಗುಡಾರ ಹೂಡಿತ್ತು. ಕೆಂಪು ಟೀಶರ್ಟಿನ ರಿಂಗ್ ಮಾಸ್ಟರ್, ಆನೆಗೆ ‘ಸಿಟ್’ ‘ಸ್ಟ್ಯಾಂಡ್’ ಕಸರತ್ತು ಮಾಡಿಸಲು ಹೆಣಗಾಡುತ್ತಿದ್ದ. ಅವನ ಪರದಾಟಕ್ಕೆ ನಗಲು ತೋಚದ ಜೋಕರ್, ಗಡದ್ದು ಉಂಡು ಮಲಗಿಬಿಟ್ಟಿದ್ದ.

ಈ ಆನೆಯೋ! ಒಂದಕ್ಕೆ ಹನ್ನೊಂದು ಮಾಡುತ್ತ, ನಖರಾ ಆಡುತ್ತ, ಬೇಕೆಂದೇ ಕಾಡುತ್ತ ಹೈರಾಣು ಮಾಡಿತ್ತು. ತಾನು ರೇಸಿಗೆ ಸೇರಿದ್ದೇ ಸಾಧನೆಯೆನ್ನುತ್ತ ಬೀಗತೊಡಗಿತ್ತು. ರಿಂಗ್ ಮಾಸ್ಟರನ್ನ ಕಾಡಲಂತಲೇ ಸಿಟ್ ಅಂದಾಗ ಸ್ಟ್ಯಾಂಡಾಗಿ, ಸ್ಟ್ಯಾಂಡ್ ಅಂದಾಗ ‘ಸಿಟ್ಟು’ಕೊಂಡು ದೊಂಬರಾಟ ನಡೆಸಿತ್ತು.

ತಾಲೀಮು ನಡೆದಿದ್ದಾಗಲೇ ಧಬಾರನೆ ಕಿವಿ ಹಾರುವ ಸದ್ದು!
ಆನೆ ಕನಸಿನ ಖುರ್ಚಿ ಮುರಿದುಬಿದ್ದಿತ್ತು...

******

ಈ ಎಲ್ಲ ಸಂತೆಯಿಂದ ಹೊರಗೆ, ಅಲ್ಲಿ ಅಮ್ಮಾಯಿಯೊಬ್ಬಳು ಹಣೆಗೆ ಲಾಲ್ ಗಂಧ ತೀಡುತ್ತ ಕುಂತಿದ್ದಳು. ಮ್ಯೂಸಿಕಲ್ ಛೇರಿನಲ್ಲಿ ಮೈಹೊತ್ತು ಓಡಲಾಗದ ಸಂಕಟ ಅವಳಿಗೆ. ಆದರೇನು? ತನ್ನ ದಾಳದ ಪಾಳಿಗಾಗಿ ಕಾದುಕೊಂಡಿದ್ದಳು.

ಆ ದಿನಕ್ಕೆ ತಾನು ಯಾವ ಸೀರೆ, ಯಾವ ಚಪ್ಪಲಿ, ಯಾವ ಪರ್ಫ್ಯೂಮು, ಯಾವ ವ್ಯಾನಿಟಿ...
ಆಯ್ದುಕೊಳ್ಳುವ ಗಲಿಬಿಲಿಯಲ್ಲಿ ಪಗಡೆಹಾಸು ಎತ್ತಿಟ್ಟಿದ್ದು ಅವಳಿಗೆ ಗೊತ್ತೇ ಆಗಲಿಲ್ಲ!

********

ಇನ್ನೀಗ ಅಂವ ಕೆಂಪು ಕೋಟೆಯಿಂದಿಳಿದು ಬಂದ. “ಕಡಿಮೆ ದಳದ ಕಮಲ ಸರಬರಾಜಾಗಿದ್ದು ಗುಜರಾತಿನಿಂದ"- ಇಂಟೆಲಿಜೆನ್ಸ್ ರಿಪೋರ್ಟು!
ನಗು ಹೊತ್ತ ಮುಖವಾಡಗಳು ಹಾದಿಗುಂಟ ಬಿದ್ದಿದ್ದವು. ಇಕ್ಕೆಲದ ಇಟ್ಟಿಗೆ ಸಾಲು ಸಾಲು, ಉಳಿದ ಕಮಲ ದಂಟಿಗೆ ಸ್ಮಾರಕ ಕಟ್ಟಲು ಕಾಯ್ತಿದ್ದವು...

ಇತ್ತ ಸರ್ಕಸ್ ಕಂಪೆನಿಯ ಕಂಬ ಉರುಳಿಬಿದ್ದಿತ್ತು. ಆಟ ಬರಖಾಸ್ತುಗೊಂಡು ಎಲ್ಲರೂ ತಂತಮ್ಮ ಗಂಟು ಕಟ್ಟತೊಡಗಿದರು.
ಜೋಕರ್ ಮಾತ್ರ, “ಇನ್ನೂ ಐದು ವರ್ಷ ಇಲ್ಲೇ ಮಲಗಬೇಕಲ್ಲ?" ಅನ್ನುತ್ತಾ ಚಾಪೆ ಕೊಡವಿಕೊಂಡ...

******

ಅಲ್ಲಿ, ನಂ.೧೦, ಜನಪಥದ ರಾಣೀವಾಸದಲ್ಲಿ ಸಂಭ್ರಮವೋ ಸಂಭ್ರಮ. ರಾಣಿಯ ಕಿರೀಟ ಭದ್ರ ನಿಂತಿತ್ತು. ಮಹಾಮಂತ್ರಿಯ... ಅಲ್ಲಲ್ಲ... ಪ್ರಧಾನ ಮಂತ್ರಿಯ ಸಾಧನೆ, ಕೋಟೆ ಉಳಿಸಿಕೊಟ್ಟಿತ್ತು.

ಅದರಲ್ಲಿನ್ನು ಯುವ ರಾಜ ಸುಭದ್ರ. ಮಹರಾಜನಾಗುವವರೆಗೆ ಎಲ್ಲವೂ ನಿರುಮ್ಮಳ!

******

ಈ ಚೂರು ಚೂರು ಚಿತ್ರಗಳನ್ನ ತೇಪೆ ಹಾಕಿ ಅವನೊಬ್ಬ ಸಿನೆಮಾ ತೆಗೆದ. ಎಲ್ಲ ಮುಗಿದು, ಮೇಕಪ್ಪು ತೊಟ್ಟಿದ್ದವರು ಮುಖ ತೊಳೆದುಕೊಂಡರು. ಬಣ್ಣಗಳು ಕರಗಿ ಕೊಚ್ಚೆಯಾಗಿ ಹರಿಯಿತು.
ಕಾಯ್ದಿಟ್ಟ ಟಿಕೀಟುಗಳಲ್ಲಿ ಅರ್ಧ ಮಾತ್ರ ತುಂಬಿ, ಎಲ್ಲ ಖಾಲಿ ಖಾಲಿ...

ನೋಡ ಬಂದವರು ಬಟ್ಟೆ ಹರಕೊಂಡು ಓಡಿಹೋದರು. ಹಾಗೇ ಉಳಿದವರು ಹುಚ್ಚು ಹತ್ತಿ ತಲೆ ಚಚ್ಚಿಕೊಂಡರು.

ಥಿಯೇಟರಿನತ್ತ ಮುಖ ಮಾಡದವರು ಮಾತ್ರ ಯಾವತ್ತಿನ ಹಾಗೆ ಹರಟುತ್ತ, ಉಗಿದ ಚೂಯಿಂಗಮ್ಮು ಜಗಿಯುತ್ತ ಕುಳಿತುಬಿಟ್ಟರು !

ಕೃಪೆ : ಕೆಂಡಸಂಪಿಗೆ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.