Sunday, February 10, 2013

ರಾವಣಾಯನ

ಬಷೀರ್ ಬಿ.ಎಂ.
1

ಮೂಗು, ಕಿವಿ, ಹೃದಯ ಹರಿದುಕೊಂಡು
ಆಕ್ರಂದನವಿಡುತ್ತಿದ್ದ
ವಿಧವೆ ಶೂರ್ಪನಖಿಯ
ನೋಡಿ ನಕ್ಕಳು ಸೀತೆ
ಅದಕ್ಕಾಗಿ ತೆತ್ತ ಬೆಲೆ
ರಾಮಾಯಣ!

2
ಯಾರು ಹೇಳಿದರು
ರಾಮಾಯಣ ಹುಟ್ಟಿದ್ದು
ವಾಲ್ಮೀಕಿಯ ‘ಮಾನಿಷಾದ’
ಎಂಬ ವಿಷಾದದೊಂದಿಗೆ ಎಂದು...?

ರಾಮಾಯಣ ಹುಟ್ಟಿದ್ದು
ಶೂರ್ಪನಖಿಯ ‘ಅಣ್ಣಾ...’
ಎಂಬ ಆಕ್ರಂದನದೊಂದಿಗೆ

ಶೂರ್ಪನಖಿಯ ಶೋಕ
ರಾಮಾಯಣದ ಶ್ಲೋಕವಾಯಿತು

3
‘ಅಣ್ಣಾ...’ ಎಂಬ ಆಕ್ರಂದನಕ್ಕೆ
ರಾವಣ ‘ಏನಾಯ್ತು ಬಂಗಾರ...?’
ಎಂದು ಧಾವಿಸಿದ
ಕಿವಿ, ಮೂಗು, ಮುಖ ಕಳೆದುಕೊಂಡ
ತಂಗಿಯ ಕಣ್ಣಲ್ಲಿ ಕಣ್ಣೀರಿನಂತೆ
ರಕ್ತ ಸುರಿಯುತ್ತಿತ್ತು!

‘ಇದೇನಿದು ಬಂಗಾರ...’
ರಾವಣ ಮಡಿಲಲ್ಲಿಟ್ಟು ಕೇಳಿದ
‘ನಾಡಿನಿಂದ ಬಂದವರು
ಈ ಸ್ಥಿತಿಗೆ ತಂದರು’
ಶೂರ್ಪನಖಿ ಗಳಗಳನೆ ಅತ್ತಳು
‘‘ನೀನೇನು ತಪ್ಪು ಮಾಡಿದೆ’’
‘‘ನಾನವರ ಇಷ್ಟ ಪಟ್ಟೆ’’

ಅಷ್ಟೇ...
ಮುಂದೆ ರಾಮಾಯಣ ನಡೆಯಿತು
ತಂಗಿಗಾಗಿ ಪ್ರಾಣ ಕೊಟ್ಟ
ಅಣ್ಣನ ಕತೆ
ಜನಮನದಲ್ಲಿ ಹಾಡಾಯಿತು....!!

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.