Tuesday, March 04, 2014

ವಡ್ಡರ ವೇದನೆಯ ಎರಡು ಪ್ರಸಂಗಗಳು

ವಡ್ಡರ ವೇದನೆ (ಕಾದಂಬರಿ)
ಮೂಲ ಮರಾಠಿ : ಲಕ್ಷ್ಮಣ ಗಾಯಕವಾಡ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
---------------------------------------------
ದಿನಗಳು ಉರುಳುತ್ತಲೇ ಇದ್ದವು. ಈಗಾಗಲೆ ಅವರಿಬ್ಬರೂ ಪರಸ್ಪರ ನೋಡದಿದ್ದರೆ ಒಬ್ಬರಿಗೂ ನೆಮ್ಮದಿ ಎನಿಸುತ್ತಿರಲಿಲ್ಲ. ಒಂದು ದಿನ ಕ್ಲಾಸುಗಳೆಲ್ಲ ಮುಗಿದಿದ್ದವು. ತುಕಾರಾಮನನ್ನು ಭೇಟಿಯಾದ ಆಕೆ ತನಗೆ ಲೆಕ್ಕವೊಂದು ಬರುತ್ತಿಲ್ಲ ; ತಿಳಿಸಿಕೊಡಬೇಕು ಎಂದಳು. ಕಾಲೇಜಿನ ಬೆಲ್ ಆಗಿ ಅಳಿದುಳಿದವರು ಹೋದ ಮೇಲೆ ತುಕಾರಾಮ ಕ್ಲಾಸ್ ರೂಮಿನ ಕೊನೆಯ ಬೆಂಚಿನ ಮೇಲೆ ಅಭ್ಯಾಸ ಮಾಡುತ್ತಿರುವನಂತೆ ನಟಿಸುತ್ತ ಕುಳಿತ. ಎಲ್ಲ ಗೆಳತಿಯರ ಕಣ್ಣು ತಪ್ಪಿಸಿ ಸುನೀತಾ ಅಲ್ಲಿಗೆ ಬಂದು ತುಕಾರಾಮ ಹಿಡಿದುಕೊಂಡಿದ್ದ ಪುಸ್ತಕವನ್ನು ಕಿತ್ತಿಸೆದಳು. “ಯಾಕೋ ತುಕಾರಾಮ, ಯಾರ ಹಾದಿ ಕಾಯಕತ್ತಿ ?” ಎಂದು ನಕ್ಕಳು. ಆತ ಕೂಡ ನಗುತ್ತಲೆ, “ಅಲ್ಲss ನಿನ್ನ ಬಿಟ್ಟ ನಾ ಬ್ಯಾರೆ ಯಾರ್ ಹಾದಿ ಕಾಯ್ಲಿ ಹೇಳಲಾ ? ನಿನ್ನ ಆದೇಸ ಪಾಲ್ಸಾಕ ನಿನ್ನss ಕಾಯ್ಕೋತ ಕುಂತ್ಯಾನ ನೋಡ” ಎಂದ. ಕ್ಲಾಸ್ ರೂಮಿನ ಬಾಗಿಲು ಮುಂದೆ ಮಾಡಿ, ಕಿಟಕಿಗಳನ್ನೆಲ್ಲ ಬಂದ್ ಮಾಡಿ ಇಬ್ಬರೂ ಹಿಂದಿನ ಬೆಂಚಿನಲ್ಲಿ ಹೋಗಿ ಕುಳಿತರು. ಯಾರಾದರೂ ಬಂದರೆ ಅಭ್ಯಾಸ ಮಾಡುತ್ತಿರುವಂತೆ ಇರಬೇಕೆಂದು ಗಣಿತದ ಪುಸ್ತಕ, ವಹಿ, ಪೆನ್ನು ತೆಗೆದು ಬೆಂಚಿನ ಮೇಲೆ ಇಟ್ಟರು !
ಇಡೀ ಕಾಲೇಜು ಸ್ಮಶಾನದಂತೆ ಮೌನವಾಗಿತ್ತು. ಇಬ್ಬರೂ ಕೈಕೈ ಹಿಚುಕುತ್ತ, ಕಾಲನ್ನು ಕಾಲಿನಿಂದ ಕೆರೆಯುತ್ತ ಕುಳಿತುಕೊಂಡಿದ್ದರು ! “ತುಕಾರಾಮಾ, ನೀ ಭಾssಳ ಮಸ್ತ ಅದಿ. ಕಲ್ಲಿನಂಥಾ ನಿನ್ನ ಮೈಯ್ಯಿ, ಗಟ್ಟಿಮುಟ್ಟಾಗಿರೋ ನಿನ್ನ ತೋಳು ನಂಗ ಭಾssಳ ಹಿಡಿಸ್ಯಾವು” ಎಂದ ಆಕೆ ಮೆಲ್ಲಗೆ ತನ್ನ ತುಟಿಯನ್ನು ಮುಂದೆ ತಂದು ಆತನ ಗಲ್ಲಕ್ಕೆ ಒತ್ತಿದಳು. ಆತನ ಮೈಯೆಲ್ಲ ಕರೆಂಟ್ ಹೊಡೆದಂತಹ ಅನುಭವವಾಯಿತು. ಆತ ತಡೆದುಕೊಳ್ಳದೇ ಆಕೆಯನ್ನು ಬಿಗಿಯಾಗಿ ತಬ್ಬಿಕೊಂಡು, “ಸುನೀತಾ, ನಿನ್ನ ಮೈ, ಬಿಡಿಸಿಟ್ಟ ಹತ್ತಿಗತೇ ಎಟ್ಟ ಮೆತ್ತಗ ಏತ್ಯೇ ? ನಿನ್ನ ಹೊಗಳಾಕ ನಂಗ ಬರೂದುಲ್ಲ. ಜಗತ್ತಿನ್ಯಾಗಿನ ಎಲ್ಲಾ ಚೆಲುವ ನಿನ್ನೊಳಗss ತುಂಬಕೊಂಡೇತಿ’ ಎಂದ
ಪ್ರೇಮದ ಕಾವು ಏರಿ ಕಾಮವಾಗಿ ಕೈ ಬೀಸಿ ಕರೆಯತೊಡಗಿತ್ತು ! ಆತ ಮೆಲ್ಲಗೆ ಆಕೆಯ ಮೊಲೆಗಳ ಮೇಲೆ ಕೈ ಇಟ್ಟು ಸವರಿದ ! ಗುಂಡುಗುಂಡಾಗಿದ್ದ ಅವು ಭೂಗೋಳದಲ್ಲಿ ಹೇಳುವ ಗೋಲಾಕಾರದ ಸಣ್ಣ ಸಣ್ಣ ಭೂಮಿಯಂತಿವೆ ಎಂದೆನಿಸಿತು. ಮೊಲೆಗಳನ್ನು ಸವರುತ್ತಿದ್ದವನು ಮೆಲ್ಲಗೆ ಒಳ ಕೈ ಹಾಕಿ ಹಿಚುಕತೊಡಗಿದ ! ಆಕೆಯ ಮೊಲೆಗಳ ಸ್ಪರ್ಷದ ಅಮಲಿನಲ್ಲಿ ಆತ ತನ್ನನ್ನೇ ಮರೆತುಬಿಟ್ಟ ! ಸುನೀತಾಳನ್ನು ಮೇಲೆಳೆದುಕೊಂಡು ಬಿಗಿಯಾಗಿ ತಬ್ಬಿಕೊಂಡ. ಆತನ ಕೈಗಳು, ಕೈ ಬೆರಳುಗಳು ಆಕೆಯ ಪ್ರತಿಯೊಂದು ಅಂಗವನ್ನು ತಡಕಾಡುತ್ತ, ಮುಟ್ಟುತ್ತ, ಹಿಚುಕುತ್ತ ಜಗ್ಗುತ್ತ ಆನಂದವನ್ನು ಅನುಭವಿಸುತ್ತಿದ್ದವು !
ತುಕಾರಾಮ ಮತ್ತು ಸುನೀತಾ ಪ್ರೇಮ-ಕಾಮದ ಪಾಕದಲ್ಲಿ ಎಷ್ಟೊಂದು ಮೈ ಮರೆತ್ತಿದ್ದರೆಂದರೆ ಕಾಲೇಜಿನ ಸಿಪಾಯಿ ಬಂದು ಕ್ಲಾಸ್ ರೂಮಿನ ಬಾಗಿಲಿಗೆ ಕೀಲಿ ಜಡಿದು ಹೋದದ್ದು ಕೂಡ ಅವರಿಗೆ ಗೊತ್ತಾಗಲಿಲ್ಲ. ಅವರಿಬ್ಬರೂ ಸಮಯ, ಸಮಾಜ, ಸಂಬಂಧಗಳೆಲ್ಲವನ್ನೂ ಮರೆತು, ಪ್ರಕೃತಿಯ ಇಚ್ಚೆಗೆ ಬದ್ಧರಾಗಿ ಪ್ರೇಮ-ಕಾಮದ ಆನಂದ ಪಡೆಯುವ ಉತ್ತುಂಗ ಶಿಖರವನ್ನೇರ ತೊಡಗಿದ್ದರು !

*****
ಶಂಕರ ದಯನೀಯವಾಗಿ, ಪರಿಪರಿಯಿಂದ ವಿನಂತಿ ಮಾಡಿಕೊಂಡ. “ಮಾಸ್ತರ, ನಮ್ಮ ಹುಡ್ಗ್ನ ಕಡಿಂದ ತಪ್ಪಾಗಿದ್ರ ಹೊಟ್ಟ್ಯಾಗ ಹಾಕ್ಕೋರ್ರಿ. ಹಕನಾಕss ಅಂವ್ನ ಬದ್ನಾಮಿ ಮಾಡಬ್ಯಾಡ್ರಿ. ಅಂವ್ಯಾನಭೀ ತಪ್ಪss ಮಾಡಿಲ್ಲssತ ನಾ ಹೇಳೂದುಲ್ರಿ ... ಅಲ್ರಿ ಮಾಸ್ತರ, ಅಂವ್ನ ಜೋಡಿ ಇದ್ದ ಪೋರಿನ ಯಾಕ ಕರಿಸಿಲ್ರಿ ನೀವಾ ? ಇದ್ಯಾನ ಬರೋಬ್ಬರಿ ಅಲ್ಲ ತೆಗಿರಿ... ನಾವ ಹೊಟ್ಟಿ-ಬಟ್ಟಿ ಅನೂಲಿ ಮಾಡಕೊಂದ ನನ್ನ ಮಗ್ಗ ಸಾಲಿ ಕಲ್ಸತೇವ್ರಿ…. ಯ್ಯಾನರೇ ಇರ್ಲಿ ಬಿಡ್ರಿ ... ... ಇದೊಂದು ಸತೀ ನನ್ನ ಮಗನ ಮಾಫ ಮಾಡ್ರಿ. ನನ್ನ ಮಗ್ಗ ಕಾಲೇಜ್ ಕಲ್ಯಾಕ ಅನವ ಮಾಡ್ಯಕೊಡ್ರಿ... ...“ ಎಂದು ಬಾಯಿಗೆ ಬಂದುದ್ದನೆಲ್ಲ ಶಂಕರ ಮಾತನಾಡುತ್ತಲೇ ಇದ್ದ.
ನಡುವೆಯೇ ಬಾಯಿ ಹಾಕಿದ ಪ್ರಿನ್ಸಿಪಾಲ್, “ನೋಡ್ರಿ, ಮೀಟಿಂಗನ್ಯಾಗ ಎಲ್ಲಾ ಡಿಸ್ಕಸ್ ಮಾಡಿ ತೀರ್ಮಾನ ಮಾಡೇ ನಿಮ್ಮ ಮಗನ ಕಡೀ ತಪ್ಪದ ಮಾಡಬಾರ್ದಂಥಾ ದೊಡ್ಡ ಗುನ್ಹಾ ಅದು. ಅಂವ್ಗ ದಂಡಾ ಹಾಕಿ, ಶಿಕ್ಷಾ ಕೊಡಲಿಲ್ಲಂದ್ರ ನಮ್ಮ ಕಾಲೇಜನ್ಯಾಗ ಶಿಸ್ತ ಅನ್ನೂದss ಉಳಿಯುದಿಲ್ಲ. ದಂಡಾ ತುಂಬ್ರ್ರಿ ; ಇಲ್ಲಂದ್ರ ಮಗನ ಕರ್ಕೊಂಡ ಮನಿಗಿ ಹೋಗ್ರಿ” ಎಂದು ದಬಾಯಿಸತೊಡಗಿದ. ಹೊರಗೆ ಕಿಟಕಿ ಸುತ್ತೆಲೆಲ್ಲ ವಿದ್ಯಾರ್ಥಿಗಳು ಮುತ್ತಿಕೊಂಡು ಒಳಗೆ ನಡೆದಿರುವ ಪ್ರಸಂಗವನ್ನು ಕುತೂಹಲದಿಂದ ನೋಡುತ್ತಿದ್ದರು. ತುಕಾರಾಮ ಕೂಡ ಬಾಗಿಲ ಹೊರಗೆ ಚಿಂತೆಯಲ್ಲಿ ನಿಂತಿದ್ದ !
ಪ್ರಿನ್ಸಪಾಲ್‍ನ ಮಾತು ಕೇಳಿ ಶಂಕರನ ಸಿಟ್ಟು ನೆತ್ತಿಗೇರುತ್ತಿತ್ತು. ಅದನ್ನು ತಡೆದುಕೊಳ್ಳುವ ಪ್ರಯತ್ನದಲ್ಲಿಯೇ ಆತ, “ಮಾಸ್ತರ್ರ, ಹಲ್ಕಟ್ ಕೆಲ್ಸಾ ಮಾಡಿದ ಅಪವಾದ ಹೊರ್ಸಿ ನನ್ನ ಮಗ್ಗ ಆssಟ ಯಾಕ ದಂಡಾ ಹಾಕ್ತೇರಿ ? ... ಮಾಸ್ತರ್ರss ಶಾರದಾಗಿನ ಹಿಕ್ಮತ್ ನಂಗೂ ಗೊತ್ತೇತಿ... ಈಗ್ಯಾನ ... ಐದನೂರಾ ಐವತ್ತೊಂದ ರುಪಾಯಿ ತುಂಬಾಕss ಬೇಕssತ ನಿಣ್ರ್ಯಾ ಮಾಡೇರಿ ?...” ಎಂದಾಗ ಪ್ರಿನ್ಸಿಪಾಲ್, “ಹೌದರಿ, ಅದss ಕೋನಿ ನಿರ್ಣಯಾ. ದಂಡಾ ಕಟ್ಟೂಲ್ಲದ ನಿಮ್ಮ ಹುಡುಗ ಕ್ಲಾಸಿಗೀ ಕುಂತಕೊಳ್ಳು ಹಾಂಗಿಲ್ಲ” ಎಂದ.
“ನೋಡ್ರಿ ಮಾಸ್ತರ್ರ, ನಾ ನಿಮ್ಮಗತೆ ಕಲ್ತಾಂವೂ ಅಲ್ಲ ; ತಿಳಿದಾಂವೂ ಅಲ್ಲ. ನಾ ಒಬ್ಬ ಬಡುವ ವಡ್ರ ಅಡಾನಿ ಮನಿಸ್ಯಾ. ಆದರ ನಂಗ ಯ್ಯಾನಭೀ ಹೇಳಿದರ ನಡಿತೇತಿ ಅssತ ತಿಳ್ಕೂಬ್ಯಾಡ್ರಿ. ನಂಗೂ ಎಲ್ಲಾ ಗೊತ್ತೇತಿ... ಹೋಗ್ಲಿ ಬಿಡ್ರಿ, ನಾ ದಂಡಾ ತುಂಬಾಕ ಕಬೂಲಿ ಅದ್ಯಾನ... ಆದರ ನನ್ನ ಮಗ್ಗ ನೀವೆಲ್ಲಾರೂ ಸೇರಿ ಅರ್ಧೂಟ್ ಮಾಡೇರಿ ! ಅದಕ್ಕ ಯ್ಯಾನ ಮಾಡ್ತೇರಿ ?” ಎಂದು ಶಂಕರ ದಿಟ್ಟತನದಿಂದಲೇ ಹೇಳಿದ. ಪ್ರಿನ್ಸಿಪಾಲ್‍ನಿಗೆ ಏನೊಂದೂ ತಿಳಿಯದೇ “ಅರ್ಧೂಟ ಅಂದ್ರ ಏನ್ರಿ ? ಈ ನಿಮ್ಮ ಭಾಷಾ ನಮಗ ಆರ್ಥ ಆಗೂದಿಲ್ಲ. ಒಂದೀಸ ತಿಳಿಯಾಂಗ ಹೇಳ್ರಿ” ಎಂದ.
“ಮಾಸ್ತರ್ರss ನಾವ ಎತ್ತಕ ನೀರ ಕುಡಸಾಕ ಹೋಳಿಗೆ ಕರ್ಕೋಂಡ್ ಹೋಗತ್ಯಾವರಿ ! ಹೊಳ್ಯಾಗ ಇಳ್ದ ನೀರಡಿಸಿದ ಎತ್ತಾ ನೀರಡಿಕಿ ಇಂಗೂತಕಾ ಕುಡಿತೇತಿ. ಆಗ ಯಾರರೆ ನೀರಾಗ ಕಲ್ಲ ಒಗದ್ರ, ಗದ್ಲಾ ಮಾಡ್ಯರ ಎತ್ತಾ ಅಂಜಿಕಿಸಿ ನೀರ ಕುಡ್ಕೋದ ಬಿಟ್ಟ ಓಡಿ ಹೋತೇತ್ರಿ. ಅದರ ನೀರಡಿಕೀ ಇನ್ನಾ ಇಂಗಿರುದುಲ್ಲ. ನಾವ ಮತ್ತ ಅದನ ಜುಲುಮಿಲೆ ಕರ್ಕೊಂಡ್ ಬಂದ ನೀರ ಕುಡ್ಸಬೇಕಾತೇತಿ. ಅದ ನೀರ ಕುಡ್ಯಾಗ, ಯಾರರೇ ಮತ್ತss ನೀರಾಗ ಕಲ್ಲ ಒಗಿದಾಂಗ, ಗದ್ಲಾ ಮಾಡದಾಂಗ ಕಾಯ್ಬೇಕಾತೇತಿ. ಆವಾಗ ಎತ್ತಾ ಹೊಟ್ತುಂಬ ನೀರ ಕುಡ್ದ, ತನ್ನಿಂತಾನss ಹೊಳಿ ಬಿಟ್ಟ ಮ್ಯಾಗ ಬರ್ತೇತಿ. ಎತ್ತಗ ಹೆಂಗ ಬುಚಕುಳಾ (ಅರ್ಧೂಟ್) ಆಗತೇತ್ಯಲಾ ಹಂಗ ನಮ್ಮ ಹುಡಗ್ಗss ಆಗೇತಿ. ನಮ್ಮ ಹುಡ್ಗ ಮತ್ತ ಆ ಪೋರಿ ಒಳಗ ಇರಬೇಕಾರ ನೀವ ಬಾಕ್ಲಾ ತಗ್ದ ಅಡ್ಡಗಾಲ ಹಾಕಿ, ನನ್ನ ಮಗ್ಗ ಬುಚಕುಳಾ ಮಾಡೇರಿ. ಅದಕ್ಕ ಐದ್ನೂರಾ ಐವತ್ತೊಂದು ರುಪಾಯಿ ದಂಡಾ ಕಟ್ಟ ಅಂತಿರಿ ! ನನ್ನ ಮಗಾ ಹೇಳ್ತಾನು, ತಾ ಪೋರಿ ಸಂಗಾಟ ಯ್ಯಾನಭೀ ಮಾಡಲ್ಲಿssತ ! ನೀವಂತಿರೀ ಅಂವಾ ಮಾಡ್ಯಾನ ದಂಡಾ ಕಟ್ರಿ ಅssತ ! ಮಾಸ್ತರ್ರ, ನಾ ತಿಳಿದಾಂವ ಅಲ್ಲ, ಆದ್ರಭಿ ನನ್ನ ಅನುನಕೀ ಹಿಂಗೇತ್ಯಲಾ, ನನ್ನ ಮಗಾ ಯ್ಯಾನಭೀ ಮಾಡೂಲ್ಲದss ಆ ಪೋರಿ ಸಂಗಾಟ ಖೋಲ್ಯಾಗ ಇರಾನಾ ದಂಡಾ ಹಾಕ್ಕ್ಯರಲಾ ? ಒಂದ್ ಸಲಾ ಖೋಲ್ಯಾಗ ಇರಾಕss ನೀವ ಅssಟ್ ದಂಡಾ ಹಾಕತೇರ್ಯಲಾ ? ಹಂಗಾರ ನಾ ಹೇಳ್ಕೇಳಿ ವಡ್ರ ಮನಸ್ಯಾ, ಮಾಯಲೇ ಬಂದ್ರ ತಲಿಮ್ಯಾಗಿನ ಪಟಗಾ ಸುದ್ದಾ ಕುಡತ್ಯಾನ ! ನಾವ್ ಒಮ್ಮೀ ಜಿದ್ದಿಗಿ ಬಿದ್ದ್ಯೂ ಅಂದ್ರ ಏಕ್ ಮಾರ್ ದೋ ತುಕಾಡಾ ! ನೋಡ್ರಿ ಮಾಸ್ತರ, ನಾ ಇನ್ನಾ ಐದ್ನೂರಾ ಐವತ್ತೊಂದ ರುಪಾಯಿ ಹೆಚ್ಚss ಕುಡತ್ಯಾನ ತುಗೋರಿ ! ಆದರ ಇನ್ನೊಮ್ಮಿ ಆ ಪೋರಿ ಮತ್ತ ನನ್ನ ಮಗನ್ನ ಅದss ಖೋಲ್ಯಾಗ ಬಿಟ್ಟ ಕೀಲಿ ಹಾಕ್ರಿ ! ಮಗಾ ಯ್ಯಾನಾ ಮಾಡೋದೇತಿ ಅದ್ನ ಮಾಡಿ ಸಮಾಧಾನ್ರೇ ಆಗ್ಲಿ ! ಆದದ್ದss ಇನ್ನೊಮ್ಮಿ ಆಗ್ಲಿ. ನಾ ಡಬಲ್ ರೊಕ್ಕಾ ಕುಡಾಕ ತಯಾರಿದ್ಯಾನ. ಆದ್ರ ಸುಮ್ಮ ಸುಮ್ಮ ಯ್ಯಾನೂ ಮಾಡೂಲ್ಲದss ನಮ್ಮ ಮಗನ ಮಯ್ ಮ್ಯಾಲ ಹೇಲ ಚಲ್ಲೂದಕ ನಾ ಬಿಡು ಪೈಕಿಯಲ್ಲ” ಎಂದು ಒಂದೇ ಸಮನೇ ಮಾತನಾಡಿದ.

ಈ ಮಾತು ಕೇಳಿ ಸಭೆಯಲ್ಲಿ ಇದ್ದವರ ಬುಡ ಬೆದರಿದವು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.